29 ಡಿಸೆಂಬರ್ 2010

ಹಳ್ಳಿ ಚುನಾವಣೆ

ಈಗಂತೂ ಹಳ್ಳಿಯಲ್ಲಿ ಸ್ವಲ್ಪ ನೆಮ್ಮದಿ. ಮೈಕಾಸುರುನ ಅಬ್ಬರ ಇಲ್ಲ.ಕಣ್ಣಿಗೆ ಕುಕ್ಕುವ ಬ್ಯಾನರುಗಳು ಇಲ್ಲವೇ ಇಲ್ಲ.ರಸ್ತೆಯಲ್ಲಿ ಚಿತ್ತಾರಗಳು ಕಾಣೋದೇ ಇಲ್ಲ. ಹೀಗಾಗಿ ಈಗ ಚುನಾವಣೆ ನಡೆಯುತ್ತೋ ಇಲ್ಲವೋ ಅಂತಾನೇ ಗೊತ್ತಾಗಲ್ಲ. ಒಳ್ಳೇದೇ ಆಯ್ತು ಬಿಡಿ ಅಂತ ರಸ್ತೆ ಬದಿಯಲ್ಲಿ ಒಂದಷ್ಟು ಜನ ಮಾತಾಡ್ತಾ ಇರಬೇಕಾದ್ರೆ ,ಅಲ್ಲಾರೀ , ಕೇರಳದಷ್ಟು ಇಲೆಕ್ಷನ್ ಅಬ್ಬರ ಇಲ್ಲಿ ಇಲ್ಲಾರೀ , ಇದೆಂತಾ ಇಲೆಕ್ಷನ್ ಬರೀ ಸಪ್ಪೆ ಸಪ್ಪೆ ಅನ್ನೋರೂ ಅದೇ ರಸ್ತೆ ಬದಿಯಲ್ಲಿ ಕಾಣ್ತಾರೆ.

ಅದೇನೇ ಇರ್‍ಲಿ. ಈಗಂತೂ ನಮ್ಮ ಮಟ್ಟಿಗೆ ಹೇಳೋದಾದ್ರೆ ಆಯೋಗ ಒಳ್ಳೆ ಕೆಲ್ಸನೇ ಮಾಡಿದೆ. ಚುನಾವಣೆ ಸೈಲೆಂಟ್. ಆದ್ರೆ ಈ ರಾಜಕಾರಣಿಗಳು , ರಾಜಕೀಯ ಪಕ್ಷಗಳು ಮಾತಗ್ರ ಬಿಡಬೇಕಲ್ಲ , ಮೀಡಿಯಾಗಳನ್ನು ಬಳಸಿಕೊಂಡು ಆರೋಪ , ಪ್ರತ್ಯಾರೋಪ. ಅಲ್ಲೆಲ್ಲಾದರು ಒಂದೆರಡು ರಾಜಕೀಯ ಚುನಾವಣಾ ಭಾಷಣ , ಅಲ್ಲೂ ಆ ಪಕ್ಷ ಈ ಪಕ್ಷವನ್ನು ದೂರೋದು , ಈ ಪಕ್ಷ ಆ ಪಕ್ಷವನ್ನು ದೂರೋದು. ಆ ನಂತ್ರ ಒಂದೆರಡು ರೋಡ್ ಶೋ. ಜೊತೆ ಜೊತೆಗೆ ಮನೆ ಮನೆ ಭೇಟಿ. ಆಗ ಜನ ಏನಾದ್ರೂ ಹೇಳೀದ್ರೆ ಅದು ಹಾಗಲ್ಲ ಹೀಗೆ. ಆ ಪಕ್ಷದ ಕ್ಯಾಂಡಿಡೇಟ್ ಸರಿ ಇಲ್ಲ. ನಮ್ಮವರೇ ಬೆಸ್ಟ್ ಯಾಕಂದ್ರೆ ಅವರು ಹೀಗೆ ಮಾಡಿದ್ದಾರೆ, ಆ ಪಕ್ಷ ದೊಡ್ಡ ಹೆಗ್ಗಣ, ಅಲ್ಲಿ ಇಷ್ಟು ತಿಂದಿದೆ ಇಲ್ಲಿ ತಿಂದಿದೆ , ಅವರು ಹಾಗೆ ಇವರು ಹೀಗೆ ಅಂತ ಮನೆಗೆ ಬಂದಿರೋ ಐದಾರು ಜನ ಒಬ್ಬರ ಹಿಂದೆ ಒಬ್ಬರಂತೆ ಮಾತಾಡ್ತಾರೆ. ಇಲ್ಲಿ ಮನೆಯಲ್ಲಿ ಮಾತನಾಡೋ ಒಬ್ಬ ವ್ಯಕ್ತಿಗೆ ಗೊಂದಲ. ಯಾಕಂದ್ರೆ ನಿನ್ನೆ ಪೇಪರಲ್ಲೂ ಅದು ಇತ್ತು , ಆ ಲೀಡರ್ ಹೀಗೆ ಹೇಳಿದ್ದಾನೆ. ನಾನು ಮೊನ್ನೆ ಅದೇ ಪೇಪರಲ್ಲಿ ಹಾಗೆ ಓದಿದ್ದು ಹೌದು ಅಂತ ಮನಸ್ಸಲ್ಲೇ ನೆನೆದು . ಓಕೆ ಓಕೆ ಅಂತಾನೆ. ಮರುದಿನ ಇನ್ನೊಂದು ಪಕ್ಷದ ಕಾರ್ಯಕರ್ತರು ಬಂದು ಇವರದ್ದು ಅದೇ ಕ್ಯಾಸೆಟ್. ಆದ್ರೆ ಅದು ಮಾತ್ರಾ ಬಿ ಸೈಡ್. ಆಗಲೂ ಮತ್ತೆ ಮತದಾರನಿಗೆ ಗೊಂದಲ. ಯಾಕಂದ್ರೆ ಪೇಪರು , ಟಿವಿ ನೋಡಿದ್ರೆ ಇದ್ಯಾವುದೂ ಅರ್ಥ ಆಗಲ್ಲ. ಒಂದೊಂದು ದಿನ ಒಂದೊಂದು ಥರಾ ಇರುತ್ತೆ.ಹಾಗಾಗಿ, ಯಾವುದಾದರೇನು ಒಂದಕ್ಕೆ ಒತ್ತಿದರೆ ಆಯ್ತು ಅಂತ ಹೋಗ್ತಾನೆ ಓಟು ಹಾಕಿ ಬರ್‍ತಾನೆ. ಇದು ಹಳ್ಳಿ ಕತೆ.

ಇಲ್ಲಿ ಅಭಿವೃದ್ದಿ ಬಗ್ಗೆ ಮಾತಾಡೋ ಹಾಗಿಲ್ಲ. ಎಲ್ಲಾನು ಆಗಿದೆ ಅಂತದೆ ಆಡಳಿತ ನಡೆಸಿದ ಪಕ್ಷ. ಇಲ್ಲಾ ಆಗಿಲ್ಲ ಅನ್ನುತ್ತೆ ವಿರೋಧ ಪಕ್ಷ.ಆಗಿದೆ ಬೇಕಿದ್ರೆ ನೋಡಿ ಅಂತಾರೆ ಆಡಳಿತ ಮಾಡಿರೋರು , ಹಾಗಿದ್ರೆ ತೋರ್‍ಸಿ ಅನ್ನುತ್ತೆ ವಿರೋಧ ಪಕ್ಷ.. . ಹೀಗೆ ಮಾತಿನ ಸಮರ ಮಾಧ್ಯಮದ ಮೂಲಕ ನಡೆಯುತ್ತೆ.ಎಲ್ಲೂ ಮುಖಾಮಿಖಿ ಆಗೋದೇ ಇಲ್ಲ. ಇದೆಲ್ಲಾ ಯಾವಾಗ ಚರ್ಚೆ ನಡೆಯೋದು ಗೊತ್ತಾ ಎಲೆಕ್ಷನ್ ಡಿಕ್ಲೇರ್ ಆಗಿ ಕ್ಯಾಂಡಿಡೇಟ್ ಸೆಲೆಕ್ಟಟ್ ಆದ ಬಳಿಕ ಪ್ರಚಾರ ಶುರು ಆದ ಮೇಲೆ. ಅಷ್ಟು ಸಮಯ ಸುಮ್ಮನಿದ್ದು ಚುನಾವಣೆ ಬಂದಾಗ ಇದೆಲ್ಲಾ ನೆನಪಾಗುತ್ತೆ. ಜನರನ್ನು ಗೊಂದಲ ಗೊಂದಲ ಮಾಡಿ ಹಾಕುತ್ತೆ. ಅದೇ ಹಳ್ಳಿ ಜನ ಬೆಳೆದ ಬೆಳೆಗಳಿಗೆ ಬೆಲೆ ಸಿಗಬೇಕು ಅನ್ನೋ ವಿಚಾರದಲ್ಲಿ ಒಬ್ಬನೇ ಒಬ್ಬ ಮಾತಾಡೋಲ್ಲ. ಮಾತನಾಡಿದರೂ ಎಲೆಕ್ಷನ್ ಮುಗಿದ ಮೇಲೆ ಮರೆತೇ ಹೋಗಿರುತ್ತೆ.

ಇನ್ನು ನೋಡಿ ಈಗೀಗ ಹಳ್ಳಿ ಜನಾನು ಸ್ವಲ್ಪ ಸ್ವಾರ್ಥ ನೋಡ್ತಾರೆ. ನೋಟು ಸಿಕ್ರೆ ಫೀಲ್ಡ್ , ಇಲ್ಲಾಂದ್ರೆ ಇಲ್ಲ.

ಆವತ್ತು ಕಾಲೇಜು ದಿನಗಳಲ್ಲಿ ಒಂದು ಇಂಟೆರೆಸ್ಟ್ ಇತ್ತು. ಫೀಲ್ಡ್ ಹೋಗೋದು ನಮಗೂ ಒಂದು ಖುಷಿ. ತಲೆಗೆ ಪಕ್ಷದ ಟೊಪ್ಪಿ ಹಾಕಿ ಉರಿಬಿಸಿಲಿನಲ್ಲೂ ಪಕ್ಷಕ್ಕಾಗಿ ಕೆಲಸ ಮಾಡುವುದೇ ಖುಷಿ. ಈಗ ಹಾಗಲ್ಲ. ಸ್ವಲ್ಪ ಯೋಚನೆ ಮಾಡಿದಾಗ ಓಟು ಹಾಕೋ ಕಾಲ. ಮೊನ್ನೆ ಹೀಗೇ ಸುಮ್ಮನೆ ಒಂದು ಪಾರ್ಟಿಯವರೊಂದಿಗೆ ಮಾತನಾಡುತ್ತಾ ಇದ್ದೆ. ಆಗ ಅಲ್ಲೊಬ್ಬ ಬಂದ. ಸ್ವಾಮೀ ಓಟು ಬಂತು ಇಂಥವರು ನಮ್ಮ ಕ್ಯಾಂಡಿಡೇಟ್ , ನಮಗೇ ಓಟು ಹಾಕಿ ಅಂದ್ರು. ಆಗ ಅವನಂದ , ನೋಡಿ ನನಗೆ ಆವತ್ತು ನಿಮ್ಮ ಈ ಕ್ಯಾಂಡಿಡೇಟ್ ನನ್ನ ಒಂದು ಕೇಸಲ್ಲಿ ಹೆಲ್ಪ್ ಮಾಡಿಲ್ಲ. ಹಾಗಾಗಿ ನಾನು ಅವರಿಗೆ ಓಟು ಹಾಕೋದಿಲ್ಲ ಅಂದ. ಮಾತು . . ಸಮಾಧಾನ . . ಓಲೈಕೆ ಎಲ್ಲಾ ನಡೀತು . ಕೊನೆಗೆ ಸರಿ ಆತ ಮುಂದೆ ಹೋದ. ಆ ನಂತರ ವಿಚಾರಿಸಿದಾಗ ತಿಳೀತು, ಆತ ಇನ್ನೊಂದು ಜಾಗವನ್ನು ಕಬಳಿಸಿ ಬೇಲಿ ಹಾಕಿದ್ದ. ಅದೊಂದು ಅಕ್ರಮ ಕೆಲಸ.ಇದಕ್ಕೆ ಸಪೋರ್ಟ್ ಮಾಡಿಲ್ಲ ಅಂತ ಈಗ ಓಟು ಹಾಕೋದಿಲ್ಲ ಅಂತ ಆತ ಹೇಳ್ತಿದ್ದಾನೆ ಅಂತ ಗೊತ್ತಾಯ್ತ. ನಾವು ಯಾವುದು ಅನ್ಯಾಯ , ಭ್ರಷ್ಠಾಚಾರ ಅಂತ ನಾವು ಹೇಳ್ತೆವೆಯೋ ಅದೇ ಕೆಲವೊಮ್ಮೆ ಹಳ್ಳಿ ಚುನಾವಣೆಯ ಇಶ್ಯೂ ಆಗುತ್ತೆ. ಅಲ್ಲಿ ಆತನ ಪ್ರಭಾವದಲ್ಲಿ ಐವತ್ತು ಓಟು ಇದೆ ಎಂದಾದರೆ ಯಾವ ರಾಜಕೀಯ ಪಕ್ಷ , ರಾಜಕಾರಣಿ ಅದೇ ಅನ್ಯಾಯಕ್ಕೆ ಸಹಕರಿಸೋದಿಲ್ಲ ಹೇಳೀ. ಅಂದು ಹಾಗೆ ಸಹಕರಿಸದೇ ಇದ್ದದ್ದು ಇಂದು ತೊಂದರೆಯಾಗಿದೆ. ಹಳ್ಳಿ ರಾಜಕೀಯದಲ್ಲಿ ಒಂದು ಓಟು ಕೂಡಾ ಮುಖ್ಯವಾಗುವ ಸಮಯದಲ್ಲಿ ಇಂತಹ ಸಂಗತಿಗಳು ಕೂಡಾ ಮುಖ್ಯವಾಗುತ್ತವೆ.

ಹಾಗಾಗಿ ಈ ಭ್ರಷ್ಠಾಚಾರ , ಅನ್ಯಾಯ , ಮೋಸ , ವಂಚನೆಗಳು ಹೇಗೆ ಆರಂಭವಾಯಿತು? ಹೇಗೆ ಮುಗಿಯುತ್ತೆ?.

ಇದೆಲ್ಲಾ ಹಳ್ಳಿ ರಾಜಕೀಯದ ತಲೆಬಿಸಿ.

26 ಡಿಸೆಂಬರ್ 2010

ನಂಬಿಕೆಯ ಪಾಠ . .

ಈ ವಿಶಾಲವಾದ ಆಗಸ , ಹರಿಯುವ ನೀರು , ಜಗದ ಸತ್ಯ, ಮನುಷ್ಯನ ಆದಿ-ಅಂತ್ಯ, ಸೂರ್ಯ-ಚಂದ್ರರ ಉದಯ, . . . ಹೀಗೇ ಎಲ್ಲದಕ್ಕೂ ಕೂಡಾ ಒಂದು ನಾಶ ಅಂತ ಇದೆಯಾ?.ಅಂತ್ಯ ಅಂತ ಇದೆಯಾ?. ಇದನ್ನು ಕಂಡವರಿದ್ದಾರಾ?,ಇದಕ್ಕೆಲ್ಲಾ ಸಾವು ಅಂತ ಇದೆಯಾ?,ಇದೆಲ್ಲಾ ಹೇಗೆ ಸೃಷ್ಠಿಯಾಯಿತು ?. ಹೀಗೇ ಪ್ರಶ್ನೆಗಳ ಮೇಲೆ ಪ್ರಶ್ನೆಗಳು ಹುಟ್ಟುತ್ತಾ ಸಾಗಿದಂತೆ ಉತ್ತರವಿಲ್ಲ. ಮೌನವೇ ಕೊನೆಗೆ ಉತ್ತರ. ಆ ಮೌನದ ಹಿಂದೆ ನಿಂತಿರುವುದೇ ಆ ನಂಬಿಕೆ. ನಾವು ಎಲ್ಲಾ ವಾದಗಳನ್ನು ಮಾಡುತ್ತಾ ಹೋಗುವುದರ ಹಿಂದೆ ಕೂಡಾ ಅದೇ ನಂಬಿಕೆ ಇದೆ. ನಾವು ಈಗ ಹೇಳುತ್ತಿರುವ ವೈಜ್ಞಾನಿಕ ಸತ್ಯಗಳನ್ನು ನಾವು ಕಂಡಿಲ್ಲ.ನಮ್ಮ ಹಿಂದಿನ ಅದ್ಯಾರೋ ಕಂಡುಹಿಡಿದರಂತೆ , ಅದನ್ನು ದಾಖಲಿಸಿದ್ದಾರಂತೆ ಅನ್ನುವುದು ಬಿಟ್ಟು ಬೇರೇನನ್ನು ಹೇಳುವುದಕ್ಕೆ ನಾವು ಈಗ ಅಸಮರ್ಥರು. ಯಾಕೆಂದರೆ ನಾವು ನೋಡಿಲ್ಲ , ಕಂಡಿಲ್ಲ. ಹೀಗಂತೆ ಎನ್ನವುದರ ಹಿಂದೊಂದು ನಂಬಿಕೆ ಮಾತ್ರಾ. ಹಾಗಾಗಿ ಆ ನಂಬಿಕೆ ಅನ್ನೋದೇ ಮನುಷ್ಯನನ್ನು ಇಷ್ಟು ಬೆಳೆಸಿದೆ.ಬೆಳೆಸುತ್ತಿದೆ.

ಅಂತಹ ನಂಬಿಕೆಗಳು ಇರುವವರೆಗೆ ಈ ಜಗತ್ತು ಇರುತ್ತದೆ.ಅದೇನೇ ಆಗಲಿ “ಆ ಶಕ್ತಿ” ನಮ್ಮ ಜೀವಕ್ಕೆ ಧೈರ್ಯ ತುಂಬುತ್ತದೆ.ಬದುಕಿಗೆ ಸ್ಪೂರ್ತಿ ನೀಡುತ್ತದೆ. ಒಂದು ಆಸ್ಪತ್ರೆ ಹೋಗೋವಾಗಲೂ ಅಲ್ಲಿ ನಂಬಿಕೆ ಮುಖ್ಯ. ದೇವರು ಅನ್ನೋ ಒಂದು ನಂಬಿಕೆ ಮತ್ತು ವೈದ್ಯ ಅನ್ನೋ ಮನುಷ್ಯನ ಮೇಲಿನ ನಂಬಿಕೆ. ಇದೆರಡೂ ಇಲ್ಲದೇ ಹೋದರೆ ಆ ಕಾಯಿಲೆ ವಾಸಿಯಾಗೋದೂ ಕಡಿಮೆ.

ಇಂತಹ ಸನ್ನಿವೇಶದಲ್ಲಿ ದೇವರು ಅನ್ನೋ ನಂಬಿಕೆಯ ಮೇಲೆ ಹೊಡೆತ ನೀಡೋ ಮಂದಿ ಈ ಮನುಷ್ಯ ಕುಲದ ಮೇಲೆ ಹೊಡೆತ ಕೊಡುತ್ತಿದ್ದಾರೆ ಅಂತಾನೇ ಅರ್ಥ ಅಂತ ಹಿರಿಯರೊಬ್ಬರು ಮೊನ್ನೆ ಮೊನ್ನೆ ಉಸುರುತ್ತಿದ್ದರು. ಅದು ನಿಜಾನೂ ಹೌದು.ಯಾಕಂದ್ರೆ ಇಲ್ಲಿ ನಂಬಿಕೆಯೇ ಅಡಗಿಯೋಯಿತೆಂದರೆ ಕುರುಡು ಬದುಕಾಗುತ್ತದೆ.ಅಂತಹ ಕುರುಡು ಪ್ರಪಂಚ ಏನು ಮಾಡಬಲ್ಲುದು ಮತ್ತು ಏನನ್ನು ಸಾಧಿಸಬಲ್ಲುದು?. ಹಾಗಾಗಿ ಒಂದು ನಂಬಿಕೆಯ ಮೇಲೆ ಅಟ್ಯಾಕ್ ಮಾಡೋವಾಗ ಯೋಚಿಸಬೇಕಲ್ಲಾ?. ಹಾಗಂತ ಮನುಷ್ಯನೇ ಮಾಡಿಕೊಂಡ ಕೆಲವು ಕಟ್ಟುಪಾಡುಗಳು , ಅದರ ಹಿಂದಿರುವ ದುರುದ್ದೇಶಪೂರಿತ ಯೋಜನೆಗಳು , ಹಿಡನ್‌ಅಜೆಂಡಾಗಳ ಬಗ್ಗೆ ಯಾವತ್ತೂ ಜಾಗೃತವಾಗಿರಬೇಕಾಗುತ್ತದೆ.ಆದರೆ ಇವತ್ತು ಇಂತಹವುಗಳ ಬಗ್ಗೆ ನಾವು ಮಾತಾಡೊಲ್ಲ.ನಮ್ಮದೇ ದೃಷ್ಠಿಕೋನವನ್ನು ಇನ್ನೊಬ್ಬನ ಮೇಲೆ ಹೇರುವ ಪ್ರಯತ್ನ ಮಾಡುತ್ತಿದ್ದೇವೆ.

ಹೀಗೇ ನಂಬಿಕೆಯ ಬಗ್ಗೆ ಮಾತಾಡೋವಾಗ ನನಗೆ ನನ್ನ ಆತ್ಮೀಯರೊಬ್ಬರು ನೆನಪಾಗುತ್ತಾರೆ.ಅವರು ಉದ್ಯೋಗ ಮಾಡುತ್ತಿರುವ ಕ್ಷೇತ್ರವನ್ನು ಅತ್ಯಂತ ಪ್ರೀತಿಯಿಂದ ಕಂಡವರು.ಅಲ್ಲಿ ಸೇವೆ ಮಾಡುವ ಎಲ್ಲರನ್ನೂ ಪ್ರೀತಿಯಿಂದ ಕಂಡವರು , ಎಲ್ಲರಲ್ಲೂ ನಂಬಿಕೆ ಇರಿಸಿದವರು.ಆದರೆ ಯಾಕೋ ಏನೋ ಅವರು ನಂಬಿಕೆ ಇರಿಸಿಕೊಂಡ ಮನುಷ್ಯರೇ ಅವರಿಗೇ ತಿರುಗುಬಾಣವಾದರು.ನಂಬಿದ ಮನುಷ್ಯರೇ ಒಳಗೊಳಗೇ ಕತ್ತಿ ಮಸೆದರು. ಕೊನೆಗೆ ಅವರು ಅಲ್ಲಿಂದ ಹೊರಬರಲೇಬೇಕಾಯಿತು. ಆದರೂ ತನ್ನ ಕ್ಷೇತ್ರದ ಮೇಲಿನ ನಂಬಿಕೆ ಬಿಟ್ಟಿರಲಿಲ್ಲ, ಪ್ರೀತಿ ಇತ್ತು ಆ ಕ್ಷೇತ್ರದಲ್ಲಿ. ಸತ್ಯ , ಪ್ರಾಮಾಣಿಕರಾಗಿಯೇ ಉಳಿದರು.

ಆ ನಂಬಿಕೆ ಅನ್ನೋ ಶಕ್ತಿ ಮತ್ತೆ ಕಣ್ತೆರೆಯಿತು , ಸತ್ಯಕ್ಕೆ ಗೆಲುವಾಯಿತು.ಈಗ ಮತ್ತೆ ಅವರು ಅದೇ ಕ್ಷೇತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನನ್ನ ಪ್ರಕಾರ ಇದೂ ಕೂಡಾ ನಂಬಿಕೆಗೆ ಸಿಕ್ಕ ಜಯ. ಒಂದು ವೇಳೆ ಈ “ಮನುಷ್ಯ” ಬುದ್ದಿಯಿಂದಾಗಿ ಅವರು ಆ ಕ್ಷೇತ್ರದ ಮೇಲೆ ನಂಬಿಕೆಯೇ ಕಳಕೊಂಡಿದ್ದರೆ? , ಅವರಲ್ಲಿ ದ್ವೇಷ ಹುಟ್ಟಿಕೊಂಡಿದ್ದರೆ?. ಆದರೆ ಹಾಗಾಗಿಲ್ಲ ಪ್ರೀತಿ ಮತ್ತು ನಂಬಿಕೆ ಇವೆರಡೂ ಕೂಡಾ ಇಂದು ಅವರನ್ನು ಮತ್ತೆ ಕರೆಯಿಸಿಕೊಂಡಿದೆ. ಹೀಗಾಗಿ ನಂಬಿಕೆ ಅನ್ನೋ ಶಕ್ತಿ ನಿಜಕ್ಕೂ ಶಕ್ತಿಶಾಲಿ.

ಬೆಲೆ ಬಿಸಿ . . ತಲೆ ಬಿಸಿ .

ಒಂದು ಕೇಜಿ ಈರುಳ್ಳಿ ಕೊಳ್ಳೋ ಹಾಗಿಲ್ಲ.ಏನು ರೇಟು. .?. ಈ ಕಡೆ ಬಂದು ಬೇಳೆ ರೇಟು ನೋಡಿದ್ರೆ ಅಬ್ಬಾ. . !. ಅದೆಲ್ಲಾ ಇರ್ಲಿ ಗಾಡಿಗೆ ಒಂದು ಲೀಟರ್ ಪೆಟ್ರೋಲ್ ಹಾಕೋಣವೆಂದ್ರೆ ಬರೋಬ್ಬರಿ 62 ರುಪಾಯಿ , ಡೀಸೆಲ್‌ಗೆ 42 ರುಪಾಯಿ . ಸದೂ ಅಲ್ಲ ಇನ್ನೂ ಏರುತ್ತಂತೆ ರೇಟು . . ಹೀಗೆ ರೋಡಿಗಿಳಿದ್ರೆ ಬೆಲೆ ಏರಿಕೆಯ ಮಾತು ಕೇಳಿಬರುತ್ತಲೇ ಇದೆ.

ಇದೆಲ್ಲಾ ಮೊನ್ನೆ ಮೊನ್ನೆ ಎಲ್ಲಾ ಮೀಡಿಯಾದಲ್ಲೂ , ಎಲ್ಲಾ ಜನರ ಬಾಯಲ್ಲೂ ಇಶ್ಯೂ ಆಗಿತ್ತು, ಆಗುತ್ತಲೇ ಇತ್ತು. ಇದೇ ವೇಳೆ ಅಲ್ಲಿ ಒಂದು ಕಡೆ ರೈತರು ಕೂಡಾ ಬೊಬ್ಬೆ ಹಾಕಿದ್ರು.ನಮ್ಗೆ ಬೆಲೆನೇ ಸಿಕ್ತಿಲ್ಲ , ಈರುಳ್ಳಿ ಎಲ್ಲಾ ನಾಶ ಆಯ್ತು , ಬೆಳೆನೇ ಇಲ್ಲಾ ಅಂತೆಲ್ಲಾ ಬೊಬ್ಬೆ ಹಾಕ್ತಿದ್ದಂತೇ ದೂರದ ಪಾಕಿಸ್ತಾನದಿಂದ ಈರುಳ್ಳಿ ಬಂತು. ನಮ್ಮಲ್ಲಿ ಈರುಳ್ಳಿ ಬೆಲೆ ಕೊಂಚ ಇಳೀತು. ಇಷ್ಟೆಲ್ಲಾ ಆಗುತ್ತಿರುವಾಗ ಅಲ್ಲಿ ರೈತರ ಕೂಗು ಕೇಳಿಸಲೇ ಇಲ್ಲ. ರೈತರು ಒಂದಿಷ್ಟು ಈರುಳ್ಳಿ ರಸ್ತೆಗೆ ಚೆಲ್ಲಿ ನಷ್ಠ ಮಾಡಿದ್ದು ಮಾತ್ರಾ ಬಂತು. ಬೆಲೆ ಏರಿಕೆಯ ಸುದ್ದಿಯಾದಷ್ಟು ದೊಡ್ಡ ಸುದ್ದಿಯೇ ಆಗಿಲ್ಲ , ಇಶ್ಯೂ ಕೂಡಾ ಆಗಿಲ್ಲ. ರೈತ ಬೆಳೆದ್ರೆ ಮಾತ್ರಾ ಅದು ನಗರದ ಗೂಡಂಗಡಿಯಲ್ಲೋ , ಮಾಲ್‌ಗಳಲ್ಲೋ ಸಿಗೋದು ಅಂತ ಗೊತ್ತಿಲ್ವೋ ಏನೋ. .?.ಇವತ್ತು ಸಮಸ್ಯೆ ಆಗಿರೋದೇ ಇಲ್ಲಿ.ಎಲ್ಲಿಯ ಸಮಸ್ಯೆ ಇಶ್ಯೂ ಆಗಬೇಕಿತ್ತೋ ಅದು ಆಗಿಲ್ಲ.ಅನಾವಶ್ಯಕವಾದ ಕೆಲ ಸಂಗತಿಗಳು ದೊಡ್ಡ ಸುದ್ದಿಯಾಗುತ್ತಿವೆ. ರೈತರ ಸಮಸ್ಯೆಗಳ ಬಗ್ಗೆ ಈ ಮೊದಲೇ ಸುದ್ದಿಯಾಗುತ್ತಿದ್ದರೆ ಈರುಳ್ಳಿ ಬೆಲೆ ಏರಿಕೆಯಂತಹ ಸಮಸ್ಯೆಗಳು ಆಗುತ್ತಿರಲಿಲ್ಲ. ಇಲ್ಲಿ ಆದದ್ದು ಅದೇ. ಈರುಳ್ಳಿ ಬೆಳೆದ ರೈತರು ಕಡಿಮೆ ಬೆಲೆಗೆ ಮಾರಾಟಮಾಡಿಯಾಗಿತ್ತು.ಆದರೆ ಅಲ್ಲಿ ಲಾಭ ಮಾಡಿಕೊಂಡದ್ದು ಮಧ್ಯವರ್ತಿಗಳು.ರೈತರಿಗೆ ಮಾತ್ರಾ ಪಂಗನಾಮ. ಇಂತಹ ಸಂಗತಿಗಳು ಹೊರಬರುವಾಗ ಬೆಲೆ ಗಗನಕ್ಕೇರಿತ್ತು.ಯಾರಿಂದಲೂ ಏನೂ ಮಾಡಲಾಗದ ಸ್ಥಿತಿ.

ಹೀಗೇ ಇಂದು ರೈತರೆಲ್ಲಾ ನಗರಕ್ಕೆ ವಲಸೆ ಹೋಗುತ್ತಿದ್ದಾರೆ ತಡೀಬೇಕು ನೀವು ಇಲ್ಲೇ ಇರಿ ಎಂದೆಲ್ಲಾ ಭಾಷಣ ಮಾಡೋ ಜನರಿದ್ದಾರೆ. ಆದರೆ ಹೇಗೆ ತಡೆಯೋದು , ಸಮಸ್ಯೆಗೆ ಪರಿಹಾರ ಹೇಗೆ?. ಉತ್ತರವಿಲ್ಲ. ಇಂತಹ ಭಾಷಣ ಮಾಡಿದ ವ್ಯಕ್ತಿಯೊಬ್ಬರು ಅಂದು ನನಗೊಮ್ಮೆ ಸಿಕ್ಕಿದ್ದರು. ಆಗ ಇದೇ ಬೆಲೆ ಏರಿಕೆ ಬಗ್ಗೆ ಸ
ಅವರು ಮಾತನಾಡಿದ್ದರು. ಭಾಷಣದಲ್ಲಿ ರೈತರ ಬೆಳೆಗಳಿಗೆ ಬೆಲೆ ಸಿಗಲೇಬೇಕು ಎಂದೆಲ್ಲಾ ಹೆಳಿದ್ದರು. ಆ ಬಳಿಕ ಖಾಸಗಿಯಾಗಿ ಮಾತನಾಡಿದ ಅವರು, ಕೊಳ್ಳೋ ಕೈಗಳು ಹೆಚ್ಚಿವೆ , ಬೆಳೆಯೋ ಕೈಗಳು ಕಡಿಮೆ ಇವೆ. ಕೊಳ್ಳೋರ ಓಟು ಹೆಚ್ಚಿದೆ , ಕೊಡೋರ ಓಟು ಕಡಿಮೆ ಇದೆ. ಹೀಗಾಗಿ ಬೆಳೆಯೋರ ನಡುವೆ ಮತ್ತು ಕೊಳ್ಳೋರ ನಡುವೆ ವ್ಯತ್ಯಾಸ ಕಂಡುಬರುತ್ತಿದೆ ಅಂತಾರೆ ಅವರು. ಉದಾಹರಣೆಗೆ , ಹಳ್ಳಿಗಳಲ್ಲಿ ಈಗ ಹೈನುಗಾರರ ಸಂಖ್ಯೆ ಕಡಿಮೆ ಇದೆ.ಅದಕ್ಕಾಗಿ ಹೈನುಗಾರರ ಸಂಖ್ಯೆ ಹೆಚ್ಚಾಗಬೇಕೆಂದು ಹಾಲಿನ ದರ ಏರಿಕೆ ಮಾಡಬೇಕು ಅಂತ ಸಲಹೆ ಕೊಡಬಹುದು.ಆದ್ರೆ ಅದು ಸಾಧ್ಯಾನಾ?.ಒಂದು ಲೀಟರ್‌ಗೆ ಹಾಲು ಖರೀದಿಗೆ ಒಂದು ರುಪಾಯಿ ಹೆಚ್ಚು ಮಾಡಿದ್ರೆ , ಮಾರಾಟದ ಬೆಲೆಯಲ್ಲಿ ಎರಡು ರುಪಾಯಿ ಏರಿಕೆಯಾಗುತ್ತೆ. ಹೈನುಗಾರರು ಇರೋದು ಒಂದು ಲಕ್ಷವಾದರೆ ಕೊಳ್ಳೋರು ಹತ್ತು ಲಕ್ಷ ಜನ ಇದ್ದಾರೆ. ಆಗ ಧ್ವನಿ ಯಾರದ್ದು ಕೇಳಿಸುತ್ತೆ?. ಹಾಲಿನ ದರ ಏರಿಕೆಯ ಬಿಸಿ . . , ಹಾಲು ದುಬಾರಿ . . , ನಿಮ್ಗೆ ಏನ್ಸತ್ತೆ . .? ಎಂದೆಲ್ಲಾ ನಾಳೆ ಬರುತ್ತೆ. ಅದೇ ಹೈನುಗಾರನಿಗೆ ಒಂದು ಲೀಟರ್ ಹಾಲಿನ ಖರ್ಚು ಎಷ್ಟು ಅಂತ ಎಲ್ಲಾದರೂ , ಯಾರಾದರೂ ಕೇಳಿದ್ದು. .?.

ಹಾಗಾಗಿ ಈಗ ಇದೇ ಸಮಸ್ಯೆ ಕೊಡೋನು ಯಾವತ್ತೂ ಕೋಡಂಗಿಯೇ. ಕೊಳ್ಳೋನು ಮಾತ್ರಾ ಜಾಣ.

ಇದು ಬದಲಾಗಿ ಕೊಳ್ಳೋನು ಕೊಡೋನು ಇಬ್ಬರೂ ಜಾಣರಾಗಬೇಕು ಅಷ್ಟಾದರೆ ಪುಣ್ಯ.

21 ಡಿಸೆಂಬರ್ 2010

ಚಳಿ ಚಳಿ. . . .

ಚಳಿ ಶುರುವಾಯ್ತು ಮಾರಾಯ್ರೆ ಚಳಿ ಏನು ಚಳಿ. ಮನೆಗಿಂದ ಹೊರಗಡೆ ಇಳಿಯೋದಿಕ್ಕಾಗಲ್ಲ.ಏನು ಅವಸ್ಥೆ . ಮಾರಾಯ್ರೆ?.

ಮೊನ್ನೆ ಮೊನ್ನೆ ಏನು ಬಿಸಿಲು ಅಂತ ಹೇಳಿದ್ದವರು , ಅಯ್ಯೋ ಮಳೆ ಮಳೆ ಅಂತ ಕೂಗಿದರು ಈಗ ಏನು ಚಳಿ ಮಾರಾಯ್ರೆ ಅಂತಿದಾರಲ್ಲಾ?. ಹಾಗಿದ್ರೆ ಯಾವುದು ಬೇಕು ಮಾರಾಯ್ರೆ?, ಚಳಿಯೋ , ಮಳೆಯೋ , ಬಿಸಿಲೋ. ಅದೆಲ್ಲಾ ನಮ್ಮ ಅನುಕೂಲಕ್ಕೆ ತಕ್ಕಂತೆ ಬಿಡಿ ಮಾರಾಯ್ರೆ ಅಂತಾರೆ ಅವ್ರು. ಅದಲ್ಲ ಈ ಚಳಿ ಎಷ್ಟು ಜೋರು ಗೊತ್ತಾ?. ಗಡಗಡ ಅಂತ ಎದೆಯನ್ನೇ ನಲುಗಿಸಿ ಬಿಡುತ್ತೇರಿ ಅದು. ಅದ್ಕೇ ಬೆಚ್ಚನೆ ಬೇಕು ಅನ್ಸುತ್ತೆ. ಆ ಬಿಸಿ ಸಿಕ್ಕಾಗ್ಲೆ ಚಳಿ ಮೈ ಕೊಡವಿಕೊಂಡು ಆಚೆ ಮನೆಗೆ ಹೋಗುತ್ತಂತೆ ಮಾರಾಯ್ರೆ..!.

ಈ ಚಳಿಯ ಸುತ್ತ ಏನೆಲ್ಲಾ ಇದೆ . .!

ಅಜ್ಜಿ , ಅಜ್ಜಂದಿರ ಕತೆ ಏನು ಮಜಾ ಇದೆ ನೋಡ್ರಿ. ಅವ್ರು ಮಾಡೋ ಸ್ಟೈಲ್ ಸಕತ್ ಮಜಾ. ಅಯ್ಯೋ ಈ ಚಳಿಗಾಗಿ ಅವ್ರು ಒಂದೆರಡು ರಗ್ಗು , ಕಂಬಳಿ ಪರ್ಚೇಸ್ ಮಾಡಿ ತಂದಿರ್ತಾರೆ. ಈ ಕಂಬಳೀ ಅನ್ನೋವಾಗ ನೆನಪಾಗೋದು ನಮ್ಮೂರು ಮತ್ತು ಸುಬ್ರಹ್ಮಣ್ಯ. ಯಾಕೆ ಗೊತ್ತಾ ಇಲ್ಲಿ ಷಷ್ಠಿ ಜಾತ್ರೆಗೆ ಬಂತೆಂದರೆ ಅಲ್ಲಿಗೆ ಕಂಬಳಿಯೂ ಬರುತ್ತೆ. ಒಳ್ಳೆ ವ್ಯಾಪಾರನೂ ನಡೆಯುತ್ತೆ.ಕಂಬಳಿ ಬೇಕೇ ಕಂಬಳಿ ಅಂತ ಕೂಗುತ್ತಾರೆ. ಕೊನೆಗೆ ಕಿರುಷಷ್ಠಿ ಮುಗಿದು ಅವ್ರ ಊರಿಗೆ ಹೋಗ್ತಾರೆ.

ಈ ಕಂಬಳಿ ವ್ಯಾಪಾರಿಗಳು ದೂರದ ಶಿರಾದಿಂದ ಸುಬ್ರಹ್ಮಣ್ಯಕ್ಕೆ ಬರ್ತಾರೆ. ಯಾವಾಗ?. ಕುಲ್ಕುಂದ ಜಾತ್ರೆ ಶುರುವಾದಾಗ. ಅಲ್ಲಿ ಬಂದು ಟೆಂಟ್ ಹಾಕ್ತಾರೆ. ಆ ನಂತ್ರ ಹಾಗೇ ಸುಬ್ರಹ್ಮಣ್ಯ ಪೇಟೆಗೆ ಶಿಫ್ಟ್ ಆಗ್ತಾರೆ.ಷಷ್ಠಿ ಬರುತ್ತೆ ವ್ಯಾಪಾರ ಆಗುತ್ತೆ ಮತ್ತೂ ಒಂದು ತಿಂಗಳೂ ‍ಇರ್ತಾರೆ ಕಿರುಷಷ್ಠಿ ಬರುತ್ತೆ ಇದೆಲ್ಲಾ ಮುಗಿದ ನಂತ್ರ ಅವ್ರ ಊರಿಗೆ ಹೋಗ್ತಾರೆ.ಇಲ್ಲಿ ಕಂಬಳಿ ವ್ಯಾಪಾರ ಜೋರಾಗೇ ಇರುತ್ತೆ. ಹಿಂದೆಲ್ಲಾ ಈ ಕಂಬಳಿ ಖರೀದಿ ಮಾಡೋಕೆ ಕೇರಳದಿಂದ ಅನೇಕ ಜನ ಬರ್ತಾ ಇದ್ರು.ಆಗೆಲ್ಲಾ ಒಂದು ಕಂಬಳಿಗೆ 200 ರಿಂದ ಒಂದು ಸಾವಿರದವರೆಗೆಗೂ ಇರ್‍ತಾ ಇತ್ತಂತೆ. ನನ್ನ ಅಜ್ಜಿಯೂ ಒಂದೆರಡು ಕಂಬಳಿ ಖರೀದಿ ಮಾಡಿದ್ದು ನನಗಿನ್ನೂ ನೆನಪಿದೆ. ಆದ್ರೆ ಈಗ ನೋಡಿ ಯಾರಿಗೂ ಕಂಬಳಿ ಬೇಡ.ಎಲ್ಲ ರಗ್ಗು ಹಾಕೊತ್ತಾರೆ. ಹಾಗಾಗಿ ಕಂಬಳಿ ವ್ಯಾಪಾರಿ ಸೋಮಣ್ಣ ಮೊನ್ನೆ ಬೊಬ್ಬೆ ಹೋಡೀತಾ ಇದ್ದ, ಇಲ್ಲಿ ರಥಬೀದಿ ತುಂಬಾ ನಾವೇ ಇದ್ದೀವಿ ಸಾರ್ ಆವತ್ತು.ಇಂದು ನೋಡಿದ್ದದ್ರೆ ನಾವು ಎರಡೇ ಪಾರ್ಟಿ ಇಲ್ಲಿಗೆ ಬರೋದು.ಜನಾನೇ ಬರ್ತಾ ಇಲ್ಲ. ಯಾರಿಗೂ ಕಂಬಳಿ ಬೇಡ. 300 ರುಪಾಯಿ ಹೇಳಿದರೆ ಅಬ್ಬ ಅಂತಾರೆ. ನಾವೇನೋ ಈಗ ಬರ್ತಾ ಇದ್ದೀವಿ ಅಂತ ಹೇಳ್ತಾನೆ ಆತ. ಹೀಗೇ ಆಗಿ ಆಗಿ ಇನ್ನೋ ಕೆಲ ಕಾಲ ಕಳೆಯುವ ಹೊತ್ತಿಗೆ ಇಲ್ಲಿ ಕಂಬಳೀ ವ್ಯಾಪಾರಾನೇ ನಿಂತ್ರೂ ನಿಲ್ಲಬಹುದು. ಮತ್ತೆ ಕಂಬಳಿ ಬೇಕಂದ್ರೂ ಎಲ್ಲಿಗೆ ಹೋಗೋಣ. ಆ ದೂರದ ಶಿರಾಕ್ಕೋ ಅಥವಾ ಬೇರೆಲ್ಲಿಗೋ?. ಕಂಬಳಿ ಕೂಡಾ ಹಾಗೆನೇ ದೇಹಕ್ಕೆ ಒಳ್ಳೆದಂತೆ. ವಾತ ಕಡಿಮೆಯಾಗುತ್ತಂತೆ.ನನ್ನಜ್ಜಿ ಕಂಬಳಿ ಹೊದೆಯಲು ಹಾಸಲೂ ಬಳಸುತ್ತಿದ್ದದ್ದು ನನಗೆ ನೆನಪಿದೆ. ಹೀಗೆಲ್ಲಾ ಔಷಧಿಯುಕ್ತ ಕಂಬಳಿ ಈಗ ನೆನಪಾಗುತ್ತೆ.ಮುಂದೆ ಇದೇ ನೆನಪಾಗಿ ಉಳಿಯಲೂ ಬಹುದು. ಚಳಿ ಬಂತಲ್ಲಾ ಚಳಿ.

ಇಷ್ಟಲ್ಲಾ ಚಳಿ ಇದ್ರೂ ನಾನು ಮಾತ್ರಾ ಕಂಬಳೀ ಹೊದೆಯೋದೇ ಇಲ್ಲ . .! ಹೇಗೂ ರಗ್ಗು ಇದೆಯಲ್ಲಾ. . !.

20 ಡಿಸೆಂಬರ್ 2010

ನಂಬಿಕೆಗೆ ಪೆಟ್ಟು . !

ಜಗತ್ತು ಪ್ರಳಯವಾಗಿ ಮುಳುಗುತ್ತಂತೆ , ಅದ್ಯಾವುದೋ ಒಂದು ಆಕಾಶ ಕಾಯ ಭೂಮಿಗೆ ಅಪ್ಪಳಿಸಿ ಇಲ್ಲಿರೋ ಜನರೆಲ್ಲಾ ಸಾಯುತ್ತಾರಂತೆ. . . ಹೀಗೇ ಅಂತೆ ಕಂತೆಗಳ ನಡುವೆಯೂ ಇಲ್ಲಿ ಬದುಕು ಕಟ್ಟಿಕೊಂಡವರು ಅದೆಷ್ಟೋ ಮಂದಿ. ಆದರೆ ಅಲ್ಲಿ ಧೈರ್ಯ ನೀಡೋದು ನಂಬಿಕೆ.ಇದು ಪರಶುರಾಮ ಸೃಷ್ಠಿ, ಇಲ್ಲಿಗೇನು ಆಗದು ಅನ್ನೋ ಬಲವಾದ ನಂಬಿಕೆ.ಹಾಗಾಗಿ ಇಲ್ಲಿ ಎಷ್ಟೇ ಮಳೆ ಬರಲಿ , ಬಿಸಿಲಿರಲಿ, ಗಾಳಿ ಇರಲಿ ಮನಸಿನ ಮೂಲೆಯಲ್ಲಿರೋ ಆ ನಂಬಿಕೆ ಊರನ್ನೇ ಗಟ್ಟಿಯಾಗಿಸಿದೆ. ಅಂತಹದ್ದೊಂದು ಸೃಷ್ಠಿ ಇತ್ತಾ , ಇಲ್ವಾ ಅನ್ನೋದು ಮತ್ತಿನ ಪ್ರಶ್ನೆ. ಆದರೆ ಆ ಒಂದು ನಂಬಿಕೆ ಮನಸ್ಸನ್ನು ಗಟ್ಟಿಗೊಳಿಸಿದೆ.ಧೈರ್ಯ ತುಂಬಿದೆ.ಅಂತಹ ನಂಬಿಕೆಗಳು ಅದೆಷ್ಟೋ ಇಲ್ಲಿ ಇವೆ.ಈ ಭೂಮಿಯಲ್ಲಿರೋ ಸಮಸ್ತ ಜೀವಿಗಳೂ ಅದೇ ನಂಬಿಕೆಯ ತಳಹದಿಯಲ್ಲಿ ಬದುಕಿವೆ. ಆದರೆ ಆ ನಂಬಿಕೆಯನ್ನೇ ಬುಡಮೇಲು ಮಾಡಹೊರಟರೆ ಹೇಗೆ?. ಅಂತಹುದರ ಬಗ್ಗೆ ಯೋಚಿಸಬೇಕಾಗುತ್ತದೆ. ಯೋಚಿಸಲೇಬೇಕಾಗಿದೆ.ಯಾಕೆಂದರೆ ಇದು ಇಂದಿನ ಪ್ರಶ್ನೆಯಲ್ಲ ನಾಳೆಯ ಪ್ರಶ್ನೆ.

ನಂಬಿಕೆ ಅನ್ನೋದು ಹುಟ್ಟಿನಿಂದಲೇ ಆರಂಭವಾಗುತ್ತದೆ.ಅದು ಅಪ್ಪ ಎಂದು ಕರೆಯುವಲ್ಲಿಂದ ತೊಡಗಿ ಇಂದು ಮಾಡುವ ಎಲ್ಲಾ ಕೆಲಸಗಳ ಹಿಂದೆಯೂ ಅದೇ ನಂಬಿಕೆ ಅಡಗಿಕೊಂಡಿದೆ. ಅದೇ ನಂಬಿಕೆ ಕಳೆದುಕೊಂಡೆವೆಂದರೆ ನಮ್ಮೊಳಗೇ ಅಪಧೈರ್ಯ, ಅದರ ಜೊತೆಗೆ ಹೆದರಿಕೆ ಹೋಗಿ ವಂಚನೆಯ ಮುಖವಾಡ ಬೆಳೆದುಕೊಳ್ಳುತ್ತದೆ.ಆತ್ಮವಂಚನೆ ಹೆಚ್ಚಾಗುತ್ತದೆ. ಹಾಗೆಂದು ಇಂದು ಎಲ್ಲಾ ಕಡೆ ನಾವು ಸ್ವತಂತ್ರರು. ಅಷ್ಟು ಮಾತ್ರಕ್ಕೆ ನಮ್ಮ ಅಭಿಪ್ರಾಯವನ್ನು ಇನ್ನೊಬ್ಬನ ಮೇಲೆ ಹೇರುವ ಹಕ್ಕು ನಮಗಿಲ್ಲ. ಆದರೆ ಇಂದು ಇದೆಲ್ಲಾ ನಡೆಯುತ್ತದೆ.ಅಂತಹ ನಂಬಿಕೆಗಳ ವಿರುದ್ದ ಕತೆ ಕಟ್ಟಿ ಮಸಾಲೆ ಹಾಕಿ ಒಂದು ಇಶ್ಯೂ ಮಾಡಿ ದೊಡ್ಡ ಸಂಗತಿಯಾಗಿ ಲೋಕದ ಮುಂದೆ ಪ್ರಚುರ ಪಡಿಸಲಾಗುತ್ತದೆ.ನಂಬಿಕೆಯ ಮೇಲೆ ಹೊಡೆತ ಕೊಡಲಾಗುತ್ತಿದೆ.ಅನವಶ್ಯಕವಾಗಿ ತಲೆತಲಾಂತರದ ಕೊಂಡಿಗಳನ್ನು ಕಳಚುವ ಪ್ರಯತ್ನವಾಗುತ್ತಿದೆ. ಭವಿಷ್ಯದ ದೃಷ್ಠಿಯಿಂದಲೂ ಇದು ಯೋಚಿಸಲೇಬೇಕಾಗುತ್ತದೆ.

ದೇವರಿದ್ದಾನಾ ಇಲ್ಲವೋ ಅನ್ನೋದು ಸೆಕಂಡರಿ. ಆದರೆ ಅದರ ಹೆಸರಿನ ನಂಬಿಕೆ ಜನರನ್ನು ಗಟ್ಟಿಗೊಳಿಸಿದೆ, ಆತ್ಮವಿಶ್ವಾಸ ತುಂಬಿಸಿದೆ.ಅದೊಂದು ಥರಾ ಪೆಟ್ರೋಲ್ ಇದ್ದ ಹಾಗೆ.ಮನುಷ್ಯನ ಮನಸ್ಸಿಗೆ ಆಗಾಗ ಆತ್ಮವಿಶ್ವಾಸ ತುಂಬಿಸುತ್ತದೆ. ಆದರೆ ದೇವರು , ನಂಬಿಕೆಗಳ ಹೆಸರಿನಲ್ಲಿ ಇನ್ನೊಬ್ಬರಿಗೆ ಹಾನಿ ಇಲ್ಲದ ಕೆಲವೊಂದು ಮೌಢ್ಯಗಳು ಇರಬಹುದು. ಒಂದು ವೇಳೆ ಅಂತಹ ಮೌಢ್ಯದಿಂದ ಇಡೀ ಸಮಾಜಕ್ಕೆ ತೊಂದರೆಯಾಗುತ್ತಿದೆಯೇ ?, ಸಮಾಜದ ಸ್ವಾಸ್ಥ್ಯಕ್ಕೆ ಧಕ್ಕೆಯಾಗುತ್ತದೆಯೇ ಎಂದಾದರೆ ಅದೊಂದು ನಿಷೇಧಕ್ಕೆ ಒಳಗಾಗಬೇಕು.ಆದರೆ ಅಂತಹ ಅದ್ಯಾವುದೇ ತೊಂದರೆಯಾಗದೆ ಇದ್ದರೂ ಆ ನಂಬಿಕೆಯ ಮೇಲೆ ಪ್ರಹಾರ ಏಕೆ?. ಆ ನಂಬಿಕೆ ಒಬ್ಬ ಮನುಷ್ಯನನ್ನು ಗಟ್ಟಿಗೊಳಿಸುತ್ತದೆ ಎಂದಾದರೆ ಅದರ ವಿರುದ್ದ ದನಿ ಯಾಕೆ?. ಇದರಲ್ಲಿ ಮೀಡಿಯಾಗಳು ಮೂಗು ತೂರಿಸುವುದೇಕೆ?. ಅದು ಹಾಗಲ್ಲ ಹೀಗೆ, ಕಂದಾಚಾರ , ಮೌಢ್ಯ ಅಂತ ಮೀಡಿಯಾ ಯಾಕೆ ತೀರ್ಪು ಕೊಡಬೇಕು?. ಅದ್ಯಾರು ಬೇಕಾದರೂ ಪ್ರತಿಭಟಿಸಲು ಅದರ ಬಗ್ಗೆ ಮುಕ್ತವಾಗಿ ಚರ್ಚೆಯಾಗಲಿ.ಅದು ಬಿಟ್ಟು ಒಂದು ಇಶ್ಯೂ ಬೇಕು ಎಂಬ ಒಂದೇ ಒಂದು ಕಾರಣಕ್ಕೆ ಜನರ ನಂಬಿಕೆಯ ಮೇಲೆ ಪ್ರಹಾರ ಮಾಡುವುದು ಯಾವ ಕಾರಣಕ್ಕೆ?. ಇದೆಲ್ಲವೂ ಕೂಡಾ ಸಮಾಜದಲ್ಲಿ ಇನ್ನೂ ಜಾತಿ ವ್ಯವಸ್ಥೆ ಉಳಿದುಕೊಳ್ಳಬೇಕು ಹಾಗೂ ಜಾತಿಗಳ ನಡುವೆ ಇನ್ನಷ್ಟು ದ್ವೇಷ ಉಂಟುಮಾಡೋ ಕುತಂತ್ರ. ಒಂದು ವೇಳೆ ಜನರ ನಂಬಿಕೆಯ ಮೇಲೆ ಹೊಡೆತ ಕೊಟ್ಟರೆ ಭವಿಷ್ಯದ ಜನ ಹೇಗಿರಬಹುದೆಂದು ಯೋಚಿಸಿ ನೋಡಿ. ಹುಟ್ಟಿಸಿದಾತನ ಮೇಲೇ ಅನುಮಾನ ಬಂದರೂ ಬರಬಹುದು.ಇಂದು ಕೆಲ ಜನರು ಮತ್ತು ಅವರಿಗೆ ಸಾತ್ ನೀಡುವ ಕೆಲವು ಮೀಡಿಯಾಗಳು ಅದನ್ನೇ ಮಾಡಹೊರಟಿವೆ ಅಂತ ಅನ್ನಿಸುತ್ತಿದೆ.

ಇತ್ತೀಚೆಗೆ ಕರಾವಳಿಯಲ್ಲಿ ಅಂತಹ ನಂಬಿಕೆಗಳ ಮೇಲೆ ಪ್ರಹಾರ ಶುರುವಾಗಿದೆ.ಅದು ಕಂದಾಚಾರ ಅಂತ ತಾವೇ ಸ್ವಯಂಘೋಷಿತವಾಗಿ ಹೇಳುವ ಬುದ್ದಿಗೇಡಿಗಳು ಮತ್ತು ಅವರಿಗೆ ಬೆಂಬಲ ನೀಡುತ್ತಾ ಒಂದು ಇಶ್ಯೂ ಸೃಷ್ಠಿ ಮಡುವ ಬೆರಳೆಣಿಕೆಯ ಮೀಡಿಯಾದ ಮಂದಿಗಳಿಂದಾಗಿ ಭವಿಷ್ಯದ ದಾರಿ ತಪ್ಪುತ್ತಿದೆ , ಸಮಾಜವನ್ನು ಅತಂತ್ರ ಮಾಡುವ ಪ್ರಯತ್ನ ನಡೀತಾ ಅಂತ ಒಂದು ಯೋಚನೆ ಶುರುವಾಗಿದೆ.ಈ ಬಗ್ಗೆ ಚರ್ಚೆಯೂ ಆಗುತ್ತಿದೆ.ನಿಜಕ್ಕೂ ಒಂದೊಳ್ಳೇ ಅಂತ್ಯವಾಗಲಿ ಅನ್ನೋದೇ ಹಾರೈಕೆ.ದುರಂತ ಅಂದರೆ ಅದೇ ಮಂದಿ ಒಂದೊಳ್ಳೇ ಇಶ್ಯೂ ಕ್ರಿಯೇಟ್ ಮಾಡೋದಿಲ್ಲ.ಒಳ್ಳೆಯ ಚರ್ಚೆಗೆ ಅವಕಾಶ ಸೃಷ್ಠಿ ಮಾಡೋದೇ ಇಲ್ಲ.

ವೆರಿ ಸ್ಯಾಡ್. .

28 ನವೆಂಬರ್ 2010

ದೇವಸ್ಥಾನವೂ ಉದ್ಯೋಗವೂ. . !

ಮೊನ್ನೆ ಯಾವುದೋ ಕೆಲಸದ ನಿಮಿತ್ತ ಪ್ರಮುಖ ದೇವಸ್ಥಾನಕ್ಕೆ ಹೋಗಿದ್ದೆ. ಹೀಗೇ ರಥಬೀದಿಯಲ್ಲಿ ನನ್ನ ಒಂದೆರಡು ಪರಿಚಿತರೊಂದಿಗೆ ಮಾತನಾಡುತ್ತಾ ಇದ್ದೆ. ಆಗ ಬೈಕ್‌ನಲ್ಲೊಬ್ಬ ಬಂದು ಅದೇನು ಅಂಗಡಿಯಿಂದ ಖರೀದಿಸುತ್ತಿದ್ದ. ಆತನನ್ನು ನಾನು ಮೊದಲೇ ನೋಡಿದ್ದೆ ಆತನ ಪರಿಚಯವೂ ಇತ್ತು. ನನ್ನ ಪರಿಚಿತರಲ್ಲಿ ಆತನ ಕೆಲಸ ಏನು ಎಂದಾಗ ಅವರು ಈಗ ಆತ ಬ್ಯಸಿನೆಸ್ ಮ್ಯಾನ್ ಅಂದ್ರ.ಅಲ್ಲಾ ಇದೊಂದು ದೊಡ್ಡ ಬ್ಯುಸಿನೆಸ್ ಸೆಂಟರ್ ಮಾರಾಯ ಅಂದ್ರು.

ಹೌದು.ದೇವಸ್ಥಾನವೊಂದು ನಂಬಿಕೆಯ ತಾಣವೂ ಹೌದು ಜೊತೆಗೆ ಉದ್ಯೋಗ ನೀಡೋ ಕಂಪನಿಯೂ ಆಗಿದೆ !.

ಆ ವ್ಯಕ್ತಿ ಈ ಊರವನೇ ಅಲ್ಲ.ದೂರದ ಅದ್ಯಾವುದೋ ಊರಿನಿಂದ ಖಾಲಿ ಕೈಯಲ್ಲಿ ಬಂದವನು. ದೇವಸ್ಥಾನದ ಈ ವಠಾರಕ್ಕೆ ಬಂದು ಹತ್ತಿಪ್ಪತ್ತು ವರ್ಷ ಆಗಿರಬಹುದು.ಈಗ ಆತನಿಗೆ ಸ್ವಂತದ್ದೊದು ಸೈಟು ಅಲ್ಲಿದೆ ,ಒಳ್ಳೆಯ ಮನೆ ಕಟ್ಟಿದ್ದಾನೆ ,ಎರಡು ಬೈಕ್ ಇದೆ.ನೆಮ್ಮದಿಯ ಬದುಕು. ಹಿಂದೆ ಪೇಪರ್ ಹಾಕಲೆಂದು ಆತ ಈ ದೇವಸ್ಥಾನದ ಊರಲ್ಲಿರೋ ಅಂಗಡಿಗೆ ಬಂದದ್ದು.ಇವತ್ತು ಈ ಮಟ್ಟಕ್ಕೆ ಬಂದಿದ್ದಾನೆ ಎಂದು ಅಲ್ಲಿನ ಪರಿಸ್ಥಿತಿ ವಿವರಿಸುತ್ತಾ ಹೋಗ್ತಿದ್ದರು ನನ್ನ ಪರಿಚಯಸ್ಥರು. ಎಂತ ಮಾರಾಯ ಇವತ್ತು ಇಲ್ಲಿನ ಅರ್ಚಕರು ತಿಂಗಳಿಗೆ ಲಕ್ಷ ಎಣಿಸುತ್ತಾರೆ , ಇನ್ನು ರೂಂ ಕರೆಯುವವರೂ ಕೂಡಾ ಕನಿಷ್ಠ 3 ಸಾವಿರ ಎಣಿಸುತ್ತಾರೆ ಅಂದ್ರು ಅವರು . . ಇದು ಹತಾಶೆಯಲ್ಲ.ಸತ್ಯದ ಮಾತು.

ಅದೊಂದು ಪ್ರಸಿದ್ದ ದೇವಸ್ಥಾನ ಅಂತಂದ್ರೆ ಅಲ್ಲಿ ಎಷ್ಟು ಜನರಿಗೆ ಉದ್ಯೋಗವಾಗುತ್ತೆ ಅಂತ ಲೆಕ್ಕ ಹಾಕಿ. ಒಂದು ಹತ್ತು ಐವತ್ತು ಜನ ಬ್ರಾಹ್ಮಣರಿಗೆ ಕೆಲಸ. ಇನ್ನು ಒಂದು ಐವತ್ತು ನೂರು ಜನರಿಗೆ ಕ್ಲೀನಿಂಗ್ , ರಶೀದಿ ಕೊಡಲು , ಆಫೀಸು ಕೆಲಸ , ಚಪ್ಪಲು ಸ್ಟಾಂಡ್ , ಅದೂ ಇದೂ ಅಂತ ದೇವಸ್ಥಾನದಲ್ಲಿ ಕೆಲಸ. ಇನ್ನು ಒಂದಷ್ಟು ಜನರಿಗೆ ಅಲ್ಲೇ ಎಲ್ಲಾದರೂ ಅಂಗಡಿ ಇರಿಸಿದರೆ ಅಲ್ಲೂ ಕೆಲಸ , ಆ ಅಂಗಡಿಯಲ್ಲಿ ಕೆಲಸ ಮಾಡೋರು ಇನ್ನೂ ಅನೇಕ ಮಂದಿ.ಇನ್ನು ವಸತಿ ವ್ಯವಸ್ಥೆಗೆ ಬಂದರೆ ರೂಂ ಕಟ್ಟಿದರೆ ಅಲ್ಲೂ ಕೆಲಸ , ಇನ್ನು ರೂಂಗೆ ಜನ ಮಾಡೋ ಕೆಲಸ ಮಾಡಿಕೊಂಡರೂ ಅಲ್ಲೂ ಉದ್ಯೋಗ . . .ಹೀಗೇ ಮುಂದುವರಿಯುತ್ತಲೇ ಹೋಗುತ್ತದೆ ಕೆಲಸಗಳ ಪಟ್ಟಿ.ಇದೆಲ್ಲವೂ ಒಂದು ದೇವಸ್ಥಾನದಲ್ಲಿ ಸಿಗೋ ಉದ್ಯೋಗಾವಕಾಶ..!.

ಆವತ್ತೊಂದು ದಿನ ಹಾಗೇ ಆಗಿತ್ತು.

ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಾಗದೋಷ ನಿವಾರಣೆಗೆ ಹೆಚ್ಚಿನ ಮಹತ್ವ. ಹೀಗಾಗಿ ಮಾತು ಮಾತಿಗೂ ನಾಗದೋಷ, ಎಲ್ಲಾ ಜಾತಕದಲ್ಲೂ ನಾಗದೋಷ. ಇದನ್ನೇ ಒಂದು ಬ್ಯುಸಿನೆಸ್ ಮಾಡಿಕೊಂಡವರು ಹಲವಾರು ಜನ. ಕೊನೆ ಕೊನೆಗೆ ನದಿ ಪಕ್ಕದಲ್ಲಿ ಅದ್ಯಾರೋ ಎಲ್ಲಾ ನಗರದಿಂದ ಭಕ್ತರನ್ನು ಕರಕೊಂಡು ಬಂದು ಹದಿನೈದೋ ಇಪ್ಪತ್ತೋ ಸಾವಿರ ಪಡೆದು ಅದೇನೋ ಹೋಮ ಶಾಂತಿ ಅಂತ ಮಾಡಿಸಿದರು. ಹೀಗೆಲ್ಲಾ ದುಡ್ಡು ಮಾಡೋದು ದೇವರಿಗೂ ಸರಿಕಂಡಿಲ್ಲ ಅಂತ ಅನಿಸುತ್ತೆ.ಊರ ಜನರೆಲ್ಲಾ ಇದಕ್ಕೆ ಆಕ್ಷೇಪಿಸಿದರು. ನಂತರ ಈ ಪದ್ದತಿ ನಿಂತೇ ಹೋಯಿತು.ಮತ್ತೆ ಇನ್ನೊಂದು ಹೊಸ ಅವತಾರ ಪಡಕೊಂಡರು. ಹೀಗೇ ಒಂದಲ್ಲ. . ಇನ್ನೊಂದು . .!. ಯಾಕಂದ್ರೆ ಅದೆಲ್ಲಾ ನಾಗದೋಷದ ಎಫೆಕ್ಟ್ . .!.

ಹೀಗೇ ಇಂತಹದ್ದೆಲ್ಲಾ ಕಾರಣಕ್ಕೆ ದೇವಸ್ಥಾನದಲ್ಲಿ ಇದೆಲ್ಲಾ ಸ್ಟ್ರಿಕ್ಟ್ ಆಯಿತು.ಆಗ ಗೊತ್ತಾಯಿತು ಅಲ್ಲಿ ಎಷ್ಟು ಜನರಿಗೆ ಉದ್ಯೋಗ ಸಿಕ್ಕಿತ್ತು ಅಂತ. ಈಗ ಸರಿಸುಮಾರು 130 ಜನ ಬ್ರಾಹ್ಮಣರಿಗೆ ಈ ನಾಗದೋಷ ನಿವಾರಣೆಯ ವಿಧಿವಿಧಾನ ಮಾಡೋ ಕೆಲಸ ಇದೆ. ಹತ್ತು ಐವತ್ತು ಜನರಿಗೆ ಅಲ್ಲಿ ಕ್ಲೀನಿಂಗ್ ಮಾಡುವ ಐದಾರು ಜನರಿಗೆ ಮಾರ್ಗದರ್ಶನ ಮಾಡೋ ಕೆಲಸ ಇದೆಯಂತೆ ಈಗ. ಇನ್ನು ಇನ್‌ಕಂ ಲೆಕ್ಕಾಚಾರ ಬೇಡ.


ದೇವರೆಂದರೆ ಬಹುಶ: ಇದೆ. ಜನರಿಗೆ ಒಳ್ಳೆಯದು ಮಾಡುವುದೇ ಅವನ ದಿನಿತ್ಯದ ಕೆಲಸ. ಪಾಪ ತೊಳೆಯೋದು , ಪುಣ್ಯ ಕೊಡೋದೇ ಅವನ ಕೆಲಸ. ಅಂದರೆ ದಾನ ಮಾಡುವುದೇ ದೇವರ ಸಮೀಪಕ್ಕೆ ಹೋಗೋ ದಾರಿ. ಹಾಗಾಗಿಯೇ ದೇವಸ್ಥಾನಕ್ಕೆ ಹೋದಾಗ ಅಲ್ಲಿನ ಅಂಗಡಿಗಳಿಂದ ಏನಾದರೊಂದು ನಾವು ಖರೀದಿಸದೇ ಹೋಗೋದಿಲ್ಲ. ಅಲ್ಲಿ ಖರೀದಿಸುವ ವಸ್ತುಗಳಿಗೆ ಚರ್ಚೆಯೂ ಮಾಡೋಲ್ಲ.ಹೇಳಿದಷ್ಟು ರೇಟು ಕೊಟ್ಟು ರೈಟ್ ಹೇಳೋದೇ. ಅದಕ್ಕೊಂದು ಎಕ್ಸಾಂಪಲ್ , ಇತ್ತೀಚೆಗೆ ನನ್ನ ಸಂಬಂಧಿಕರೊಬ್ಬರು ದೇವಸ್ಥಾನದ ಅಂಗಡಿಯಿಂದ ಆಟಿಕೆ ಖರೀದಿಸಿದ್ದರು.ಅದರಲ್ಲಿ ಎಂಆರ್ಪಿ ರೇಟ್ 40 ರುಪಾಯಿ ಇತ್ತು. ಆದರೆ ಅವರು ಕೊಟ್ಟ ರೇಟು ಬರೋಬ್ಬರಿ 170 ರುಪಾಯಿ. ನೋ ಚರ್ಚೆ. ದೇವಸ್ಥಾನದಲ್ಲಲ್ಲಾ ಹೋಗಲಿ , ದೇವರಿದ್ದಾನಲ್ಲ, ಎಲ್ಲಾದ್ರೂ ಕೊಡ್ತಾನೆ ,ಅಂತಾರೆ ಅವರು. ಅಂದರೆ ಆ ವಠಾರದಲ್ಲಿ ಇರೋವರಿಗೆ ಅದೆಲ್ಲಾ ದೇವರ ವರ ಅಷ್ಟೆ. ತಪ್ಪೇನಿಲ್ಲ. ಅಧರ್ಮದ ದುಡ್ಡು ಅದಲ್ಲ. ಯಾಕೆಂದರೆ ದೇವಸ್ಥಾನಕ್ಕೆ ಬರೋದು ಪಾಪ ಕಳೆಯೋದಿಕ್ಕಲ್ಲಾ , ಹಾಗಾಗಿ ದುಡ್ಡಿಗೆ ಲೆಕ್ಕ ಮಾಡೋದಿಲ್ಲ ಅಂದ್ರು ನನ್ನ ಆ ಸಂಬಂಧಿಕರು.


ಅಬ್ಬಾ . !. ದೇವಸ್ಥಾನ ಊರಿಗೊಂದು ಇದ್ದರೆ ಆ ಊರು ಎಷ್ಟು ಡೆವಲೆಪ್‌ಮೆಂಟ್ ಆಗಬಹುದಲ್ಲಾ . !. ಊರಿನ ಜನರೆಲ್ಲಾ ಈ ಕೃಷಿ , ಈ ಆಫೀಸು ಅಂತೆಲ್ಲಾ ಓಡಾಡ್ಬೇಕಾ?. ಅದಕ್ಕೇ ಹೇಳಿರಬೇಕು ಊರಿಗೊಂದು ದೇವಸ್ಥಾನವಿದ್ದರೆ ಅದೊಂದು ನಂದನವನ ಅಂತ . .!.

ಓ ದೇವರೇ ನೀನೆಷ್ಟು ಕರುಣಾಮಯಿ . . ನೀನೆಷ್ಟು ಬುದ್ದಿವಂತ . . ಅದಕ್ಕೇ ನೀನು ದೊಡ್ಡವನು . .

24 ನವೆಂಬರ್ 2010

"ಜಾತೀ"ಯತೆ. . !

* ಒಳಗೆ ಬನ್ನಿ . ., ಆದರೆ . . ನಿಮ್ಮ ಜಾತಿ ಯಾವುದು . .?,

* ಅದೊಂದು ಸರಕಾರೀ ಅರ್ಜಿ ಫಾರ್ಮ್.ಅದರಲ್ಲಿ ನಿಮ್ಮ ಹೆಸರು , ನಿಮ್ಮ ಭಾಷೆ , ನಿಮ್ ರಾಜ್ಯ, ನಿಮ್ಮ ದೇಶ , ನಿಮ್ಮ ರಾಷ್ಟ್ರೀಯತೆ .. . ಇದೆಲ್ಲಾ ಜಾತಕದ ಬಳಿಕ ಕಟ್ಟ ಕಡೆಯ ಪ್ರಶ್ನೆ ನಿಮ್ಮ “ಜಾತಿ . . .”?.

* ಅಬ್ಬಾ . . !. ಅವ ನಮ್ಮವ.. . ! ಇವನ್ಯಾರವ. . ?. ಅವನೇತಕೆ ಇಲ್ಲಿ . . ?

ನಿಮ್ಮದು ಬ್ರಾಹ್ಮಣ ಸಮಾಜವಾದರೆ ಅದಕ್ಕೊಬ್ಬ ಸ್ವಾಮೀಜಿ , ಲಿಂಗಾಯತರಾದರೆ ಅದಕ್ಕೆ ಇನ್ನೊಬ್ಬ , ಗೌಡರಾದರೆ ಅಲ್ಲಿ ಮತ್ತೊಬ್ಬರು . . . . . ಹೀಗೇ ಜಾತಿಗೊಬ್ಬ ಸ್ವಾಮೀಜಿ. ಆ ಜಾತಿಯನ್ನು ಹಿಡಿದಿಟ್ಟುಕೊಳ್ಳುವುದೇ ಆ ಸ್ವಾಮೀಜಿಯ ಕಾಯಕ. ಅಷ್ಟೇ ಅಲ್ಲ , ಆ ಜಾತಿಯೊಳಗೆ ಇನ್ನೂ ಹಲವಾರು ವಿಘಟನೆ. ಯಾವುದರಲ್ಲಿ ಇಲ್ಲ ನೋಡಿ , ಬ್ರಾಹ್ಮಣರೊಳಗೆ ಒಂದಷ್ಟು , ಲಿಂಗಾಯತರಲ್ಲಿ ಇನ್ನೂ ಹಲವಾರು, ಗೌಡರಲ್ಲಿ ಹಲವು ಬಗೆ , ಶೆಟ್ಟರಲ್ಲಿ ಇನ್ನೂ ಒಂದೆರಡು ಪಂಗಡ , ಅದೂ ಅಲ್ಲ ಮುಸಲ್ಮಾನರಲ್ಲಿ , ಕ್ರೈಸ್ತರಲ್ಲೂ ಬಗೆ ಬಗೆ . . !.ಇದೆಕ್ಕೆಲ್ಲಾ ಒಬ್ಬೊಬ್ಬ , ಎರಡೆರಡು ಸ್ವಾಮೀಜಿಗಳು.ಅವರೊಳಗೆ ಪ್ಯಪೋಟಿ . .!. ಒಂದು ಜಾತಿಯನ್ನು ನೋಡಿದರೆ ಇನ್ನೊಂದಕ್ಕೆ ಕಸಿವಿಸಿ , ಆ ಜಾತಿಯೊಳಗೆ ಡಿಶುಂ ಡಿಶುಂ. ಜಾತಿಯ ಹುದ್ದೆಯಲ್ಲಿ ಮೇಲೇರಿದರೆ ಇನ್ನೊಬ್ಬನಿಗೆ ಕೆಂಗಣ್ಣು , ಆಗ ಅಲ್ಲೊಂದು ಹಾವು ಏಟಿ ಆಟ ಶುರು.

ಅಬ್ಬಾ. . . . ! ಏನೆಲ್ಲಾ ಇದೆ,ಇಲ್ಲಿ . . .!

ಹಾಗೊಂದು ವೇಳೆ ನಾವೇನಾದರೂ ಈ ಜಾತಿ ಸಂಘಟನೆಯ ಒತ್ತಡಕ್ಕೆ ಮಣಿಯದೇ ಅಥವಾ ಅವರ ನಿಲುವಿನ ವಿರೋಧ ಹೋದೆವೆಂದರೆ ಇನ್ನು ಕತೆಯೇ ಬೇರೆ. ಆಗ ನಾವು ಮಾತಾಡಿದ್ದೆಲ್ಲಾ ಇಶ್ಯು. ಹೇಳಿದ್ದೆಲ್ಲಾ ಸುದ್ದಿ. ಕೊನೆಗೆ ಆ ಜಾತಿ ಸಂಘಟನೆಯ ಸ್ವಾಮೀಜಿಗೇ ವಿರೋಧ ಎನ್ನುವಷ್ಟು ದೊಡ್ಡ ಸುದ್ದಿಯಾಗುತ್ತದೆ.ಒಂದರ್ಥದಲ್ಲಿ ಆ ಸಂಘಟನೆಯ ಅಡಿಯಾಳಾಗಿರಬೇಕೆಂಬುದು ಅದರ ಒಟ್ಟಾರೆ ಔಟ್‌ಲೈನ್. ಆದರೆ ಕೆಲವೊಮ್ಮೆ ಈ ಜಾತಿ ಸಂಘಟನೆಗಳೇ ಕೆಲವರಿಗೆ ಆಧಾರವಾಗುತ್ತದೆ.ಮೊನ್ನೆ ನೋಡಿ ಮುಖ್ಯಮಂತ್ರಿಗಳಿಗೆ ಆಧಾರವಾದ್ದು ಯಾವುದು?. ಹಾಗೆಯೇ ಅನೇಕರಿಗೆ ಇದೊಂದು ವರವೂ ಆಗಿಬಿಡುತ್ತದೆ.

ನಿಜಾರ್ಥದಲ್ಲಿ ಮನೆಯ ನಾಲ್ಕು ಗೋಡೆಯ ಹೊರಗೆ ಈ ಜಾತಿಯ ಗೋಡೆಯನ್ನು ಕೆಡವಿ ಹಾಕಬೇಕಾಗಿದೆ. ಯಾಕೆಂದರೆ ಈ ಜಾತಿ ಸಂಘಟನೆಗಳು ನಾಲ್ಕು ಗೋಡೆಯ ಹೊರಗಡೆ ಮಾಡಿದ್ದೇನೂ ಇಲ್ಲ. ಮಾಡೋದು ಇಲ್ಲ. ಅದಕ್ಕೊಂದು ಉದಾರಣೆ ಇದೆ. ನಮ್ಮೂರ ಪಕ್ಕದಲ್ಲಿ ಒಬ್ಬ ಯುವಕ ಇತ್ತೀಚೆಗೆ ಕೊಂಚ ಮಾನಸಿಕ ಅಸ್ವಸ್ಥನಾಗಿದ್ದಾನೆ. ಆತ ಈಗ ಪ್ರತಿದಿನ ಬೆಳಗ್ಗೆ ೭ ಗಂಟೆಗೆ ಪೇಟೆಗೆ ಬರುತ್ತಾನೆ.ದಿನವಿಡೀ ಪೇಟೆಯಲ್ಲಿ ಮೇಲೆ ಕೆಳಗೆ ಹೋಗುತ್ತಲೇ ಇರುತ್ತಾನೆ.ಸಿಕ್ಕಸಿಕ್ಕವರಲ್ಲಿ ಬೀಡಿ ಕೇಳುತ್ತಾನೆ.ರಾತ್ರಿಯಾದರೆ ಮತ್ತೆ ಮನೆಗೆ ಹೋಗುತ್ತಾನೆ ಇಲ್ಲವಾದರೆ ಅಲ್ಲೇ ಎಲ್ಲಾದರೂ ಇರುತ್ತಾನೆ.ಪೇಟೆಗೆ ಬರೋವರೆಲ್ಲಾ ಆತನನ್ನು ನೋಡಿಕೊಂಡು ಛೇ . . ! ಅಂತ ಮರುಕಪಡುತ್ತಾರೆ. ಇತ್ತೀಚೆಗೊಬ್ಬರು ಹೇಳಿದರು , ನಿಮ್ಮ ಜಾತಿಯವರು ಯಾರೂ ಇಲ್ಲವಾ?. ಅಂತ. ಆದರೂ ಜಾತಿ ಮುಖಂಡರು ನೋಡಿಲ್ಲ. ಪಾಪ ಆ ಯುವಕನ ಮನೆಯಲ್ಲಿರೋ ಆತನ ಹೆಂಡತಿಗೆ ವಿವಿದ ಜವಾಬ್ದಾರಿಗಳು. ನಾನೇನು ಮಾಡಲಿ ಅಂತ ಆ ಹೆಂಗಸು ಗೋಗರೆಯುತ್ತದೆ. ಆದರೆ ಯಾವೊಬ್ಬ ಜಾತಿ ಲೀಡರ್ ಆ ಮನೆಗೆ ಬೇಟಿ ಕೊಟ್ಟು ಪರಿಸ್ಥಿತಿ ಹೇಗಿದೆ, ನಾವೇನು ಮಾಡ್ಬೇಕು ಅಂತ ವಿಚಾರಿಸಿಲ್ಲ. ಆತ ದಿನವೂ ಹಾಗೆ ಪೇಟೆಗೆ ಬರುತ್ತಿದ್ದಾನೆ.ಇತ್ತೀಚೆಗೆ ನಾನೊಬ್ಬ ಕ್ರೈಸ್ತ ಮುಖಂಡರನ್ನು ಭೇಟಿಯಾಗಿ ನಮ್ಮೂರಿನ ಈ ಯುವಕನ ಬಗ್ಗೆ ಹೇಳಿದ್ದೆ.ಅವರು ತಕ್ಷಣವೇ ಒಪ್ಪಿಕೊಂಡರು. ಆ ನಂತರ ಹೇಳಿದರು , ನಮ್ಮ ಜಾತಿ ಬೇರೆ ಆ ಹುಡುಗನ ಜಾತಿ ಬೇರೆ.ಒಂದು ವೇಳೆ ನಾವೆಲ್ಲಾದರೂ ಚಿಕಿತ್ಸೆ ಕೊಡಿಸಿದರೆ ಅದೇ ಒಂದು ಇಶ್ಯು ಆದ್ರೆ..? ಸ್ವಲ್ಪ ದಿನ ನೋಡೋಣ ಅಂದ್ರು. ಹೀಗಾಗಿ ನಮ್ಮ ಪ್ರಯತ್ನ ಠುಸ್. ಆದ್ರೂ ನಿರೀಕ್ಷೆ ಠುಸ್ ಆಗಿಲ್ಲ.ಕಾದು ನೋಡಬೇಕು.ಇನ್ನು ನಾನೊಬ್ಬನೇ ಚಿಕಿತ್ಸೆ ನೀಡುವಷ್ಟು ಶ್ರೀಮಂತನಲ್ಲ.

ಹಾಗಾಗಲ್ಲ ಎಂದು ಧೈರ್ಯವಾಗಿ ಹೇಳಲು ನನಗೆ ಆಗಿಲ್ಲ.ಯಾಕೆಂದರೆ ನಾಳೆ ಇಡೀ ಜಾತಿ ಎದ್ದು ನಿಂತರೆ?. ಆ ಹುಡುಗನಿಗೆ ಚಿಕಿತ್ಸೆ ಆರಂಭವಾದ ಮೇಲೆ ಲಬೋ ಲಬೋ ಎಂದು ಈ ಮೌನವಾಗಿದ್ದವರೆಲ್ಲಾ ಎದ್ದು ನಿಂತರೆ?. ಹೀಗಾಗಿ ಸದ್ಯ ಸುಮ್ಮನಿದ್ದಾರೆ. ಹೀಗೇ ಮುಂದುವರಿದು ಆ ಹುಡುಗನ ಭವಿಷ್ಯವೇ ಕಮರಿ ಹೋಗಲಿರುವುದಂತೂ ಸತ್ಯ. ಇದು ಜಾತಿ ಎಫೆಕ್ಟ್ . . !.ಮನೆ ಮನೆಯಿಂದ ಚಂದಾ , ವಿವಿದ ರೀತಿಯ ಕಲೆಕ್ಷನ್ ಮಾಡುವ ಈ ಜಾತಿ ಸಂಘಟನೆಗಳು ಆ ಮನೆಗೆ ಸಂಕಷ್ಠ ಬಂದಾಗ ಸ್ಪಂದಿಸಬೇಡವೇ?.

ಇದೆಲ್ಲಾ ಜಾತಿ ಎಫೆಕ್ಟ್ . . . .!.

16 ನವೆಂಬರ್ 2010

ಶುರುವಾಗಿದೆಯಂತೆ ಪ್ರಳಯ - 2012

ಪ್ರಳಯ ಶುರುವಾಗಿದೆಯಂತೆ . .!.

2012 ಕ್ಕೆ ಪ್ರಳಯವಾಗುತ್ತದೆ ಅಂತ ಕಳೆದ ವರ್ಷದಿಂದಲೇ ಸುದ್ದಿ ಶುರುವಾಗಿತ್ತು. ಅದಲ್ಲ ಆಗೋದಿಲ್ಲ ಅಂತ ಕೆಲವರು , ಆಗುತ್ತೆ ಅಂತ ಇನ್ನೂ ಕೆಲವರು ವಾದಿಸಿದ್ದರು. ಈ ನಡುವೆ ಇದಕ್ಕಾಗಿಯೇ ಒಂದು ಸಮ್ಮೇಳನವು ಕೂಡಾ ನಡೆಯುವುದರಲ್ಲಿತ್ತು.ಆದರೆ ಅದೇಕೋ ಏನೋ ಆ ಸಮ್ಮೇಳನ ಕೂಡಾ ಪ್ರಳಯವಾಗೋ ಮುನ್ನವೇ ಸದ್ದಿಲ್ಲದೆ ನಿಂತೇ ಹೋಯಿತು. ಆದರೆ ಈಗಂತೂ ಪ್ರಳಯ ಶುರುವಾಗಿದೆಯಂತೆ , ಹಾಗಂತ ಹಳ್ಳಿ ಜನ ಮಾತನಾಡುತ್ತಿದ್ದಾರೆ. ಯಾಕೆ ಗೊತ್ತಾ?. ಕಾರಣವಿದೆ.ಅವರು ಹೇಳುವುದರಲ್ಲೂ ಹುರುಳಿದೆ.

ಎಂತ ಮಾರಾಯ್ರೆ ಮಳೆಯೇ ನಿಲ್ಲುತ್ತಿಲ್ಲ , ಏನು ಅವಸ್ಥೆ ಈ ವರ್ಷದ್ದು , ಮಳೆ ನಿಲ್ಲದೇ ಇದ್ದರೆ ಹೇಗೆ?.ಇರುವ ಭತ್ತ ನೆಲಕ್ಕೆ ಬಿದ್ದು , ನಾಟಿ ಕೊಳೆಯುತ್ತಿದೆ , ಊಟಕ್ಕೆ ಏನು ಮಾಡೋದು? ಎಂದು ರೈತ ಕೇಳುತ್ತಿದ್ದಾನೆ.

ಅಲ್ಲಾ ಮಾರಾಯ್ರೆ , ಮಳೆ ಬರ್ತಾ ಇದೆ, ಅಡಿಕೆ ಬೀಳುತ್ತಾ ಇದೆ , ಅಂಗಳದಲ್ಲಿ ಹಾಕಿದ ಅಡಿಕೆ ಕೊಳೆಯುತ್ತಿದೆ , ಕೆಲವು ಕಡೆ ಅಂಗಳದಲ್ಲೇ ಅಡಿಕೆ ಹುಟ್ಟಿದೆ.ಏನು ಮಾಡೋದೇ ಗೊತ್ತಾಗ್ತಾ ಇಲ್ಲ , ರೋಗವೂ ಮತ್ತೆ ಶುರುವಾಗಿದೆ ಅಂತಾನೆ ಅಡಿಕೆ ಬೆಳೆಗಾರ.

ಅಲ್ಲಾ ಸ್ವಾಮಿ , ಹೀಗೆ ಮಳೆ ಬಂದ್ರೆ ಹೇಗೆ , ರಬ್ಬರ್‌ಗೆ 200 ರುಪಾಯಿ ದಾಟಿದೆ.ಆದ್ರೆ ಏನು ಟ್ಯಾಪಿಂಗ್ ಮಾಡೋದಾದ್ರೂ ಹೇಗೆ.ರೇಟಿದೆ ನಮ್ಗೆ ಮಾತ್ರಾ ಸಿಕ್ತಾ ಇಲ್ಲ ಅಂತಾನೆ ರಬ್ಬರ್ ಬೆಳೆಗಾರ.

ಅಯ್ಯೋ ಏನು ಮಳೆ. ಕೆಲಸ ಮಡೋದಾದ್ರೂ ಹೇಗೆ ಅಂತಾನೆ ಕೂಲಿ ಕಾರ್ಮಿಕ.

ಇದೆಲ್ಲಾ ಪ್ರತಿದಿನವೂ ಹಳ್ಳಿಯಲ್ಲಿ ಕೇಳೋ ಮಾತು.ಹಿಂದೆಲ್ಲಾ ದೀಪಾವಳಿಯ ಹೊತ್ತಿಗೆ ಮಳೆ ಕಡಿಮೆಯಾಗಿ ಚಳಿ ಶುರುವಾಗುವ ಹೊತ್ತು.ಅಂತಹದ್ದರಲ್ಲಿ ಇಂದು ಕೂಡಾ ಸಂಜೆ ಭಾರೀ ಮಳೆ ಬರುತ್ತಿದೆ.

ಬೆಳಗ್ಗೆ ಹಿಮ ಬಿದ್ದರೆ , ಇನ್ನು ಮಳೆ ದೂರ ಹೋಯಿತು ಅನ್ನೋ ವಾಡಿಕೆ ಹಿಂದೆಲ್ಲಾ ಇತ್ತು.ಆದರೆ ಈಗ ಆ ವಾಡಿಕೆ ಇಲ್ಲವೇ ಇಲ್ಲ.ಬೆಳಗ್ಗೆ ಹಿಮ , ಮಧ್ಯಾಹ್ನ ಸುಡುಬಿಸಿಲು , ಸಂಜೆ ಭಾರೀ ಮಳೆ.ಒಂದೇ ದಿನ 3 ಕಾಲ.ಮನುಷ್ಯನಿಗೆ ಈಗ ಅರ್ಜೆಂಟಲ್ವಾ ಹಾಗೇ ಈ ಕಾಲಗಳಿಗೂ ತುರ್ತು ಶುರುವಾಗಿದೆ. ಇನ್ನು ಈ ಕಾಲ ಮಾನ ಬದಲಾಗೋ ಹಾಗೆ ಕಾಣುತ್ತಿಲ್ಲ. ಇದು ಬದಲಾದ ಕಾಲಮಾನ.ಇನ್ನು ಬದಲಾಗೋ ಲಕ್ಷಣ ಇಲ್ಲ.ಪ್ರಕೃತಿಗೆ ಘಾಸಿಯಾಗಿದೆ.ಇನ್ನು ಪ್ರತೀ ವರ್ಷ ಹೀಗೇನೆ ಅಂತಾರೆ ಹಿರಿಯರು. ಯಾಕಂದ್ರೆ ಇದುವೇ ಒಂದು ಪ್ರಳಯ.ಕಲಿ ಕಾಲದಲ್ಲಿ ಮಾತ್ರಾ ಹೀಗಾಗುತ್ತೆ.ಈ ರೀತಿಯಾಗಿ ನಾಶವಾಗುತ್ತೆ.ಇದನ್ನ ಪ್ರಳಯ ಅಂತಾರೆ ಹಳ್ಳಿ ಜನ.

ಆಗ ಯಾರೋ ಒಬ್ಬರು ಹೇಳಿದರು , ಮುಂದಿನ ವರ್ಷ ಹೀಗೇ 10 ತಿಂಗಳು ಮಳೆ ಇರುತ್ತಂತೆ ಅಂತ. ಹೀಗೆ 10 ತಿಂಗಳು ಮಳೆ ಬಂದ್ರೆ ಕೃಷಿಯೆಲ್ಲಾ ನೀರು ಪಾಲು. ಅಡಿಕೆ ಸಿಂಗಾರವೇ ಕರಟುತ್ತೆ , ಭತ್ತದ ನಾಟಿಯೇ ಅಸಾಧ್ಯ. ಅದೇ ಒಂದು ನಾಶ. ಅದನ್ನೇ ಪ್ರಳಯ ಅಂತ ಕರೆಯೋದು ಅಲ್ವಾ?. ಈ ರೀತಿ ಮಳೆ ಬಂದ್ರೆ ಕೃಷಿ ನಾಶ. ಕೃಷಿ ನಾಶವಾದ್ರೆ ಅನ್ನ ನಾಶ. ಅನ್ನ ನಾಶವಾದ್ರೆ ?. ಸ್ಟಾಕ್ ತೆಗೆಯೋದು . . . ಇದು ಎಷ್ಟು ದಿನ. . ?. ಆಗ ಬೆಲೆ ಏರಿಕೆ ಕಾಡುತ್ತೆ. ಇದರ ನಿಯಂತ್ರಣ ಹೇಗೆ?. ಇದುವೇ ಪ್ರಳಯ ಅಂತಾರೆ ಆ ಜನ.

ಏನೇ ಇರಲಿ.ಇಂದು ಕಾಲ ಮಾನ ಬದಲಾಗಿದೆ.ಮಳೆ ಬರೋ ಕಾಲಕ್ಕೆ ಮಳೆ ಬರೋದಿಲ್ಲ.ಮಳೆ ನಿಲ್ಲೋ ಸಮಯದಲ್ಲಿ ಮಳೆ ನಿಲ್ಲೋದಿಲ್ಲ , ಚಳಿ ಕಾಲದಲ್ಲಿ ಚಳಿಯೇ ಮಾಯ.ಬಿಸಿಲು ಎಂದರೆ ಸುಡು ಬಿಸಿಲು. ಹೀಗೆ ಈ ಬದಲಾದ ಕಾಲವನ್ನು ಸಹಿಸಿಕೊಳ್ಳಬೇಕಾಗಿದೆ.ಎದುರಿಸಬೇಕಾಗಿದೆ.ಅದಕ್ಕಾಗಿ ಮಾನಸಿಕವಾಗಿ ಸಿದ್ದವಾಗಬೇಕಾಗಿದೆ.ಅದೊಂದೇ ದಾರಿ.ಸವಾಲುಗಳಿಗೆ ಎದೆಯೊಡ್ಡಿ ನಡೆಯಲೇಬೇಕಾಗಿದೆ ಅಷ್ಟೇ.

ಪ್ರಕೃತಿಯ ಮುಂದೆ ನಾವೆಲ್ಲಾ ಏನು . .?. ತಂತ್ರಜ್ಞಾನಗಳಿಂದ ಇದನ್ನೇನಾದರೂ ತಡೆಯಲು ಸಾಧ್ಯವೇ. .?. ಏನಾದರೂ ಪ್ರಯೋಗ ಮಾಡಲು ಆದೀತೇ . .?.ಕಾಲವೇ ಉತ್ತರ ಹೇಳಬೇಕು. . . .

ಜಗವು ನಿನ್ನ ಪ್ರೀತಿಸದು . !

“ಜಗವು ನಿನ್ನ ಪ್ರೀತಿಸಲಿಲ್ಲವೆಂದು ಹಳಿಯಬೇಡ , ನೀನು ಹೆತ್ತವರಿಗೆ ಮಗುವಾಗಿರಬಹುದು , ಆದರೆ ಜಗಕೆ ನೀನೂ ಒಬ್ಬ ಸ್ಪರ್ಧಿಯೇ. .!”.

ಮೊನ್ನೆ ಮನೆಯ ಕವಾಟಿನಲ್ಲಿ ಅದ್ಯಾವುದೋ ಪುಸ್ತಕ ಹುಡುಕುತ್ತಿದ್ದೆ , ಆಗ ಮಂಕುತಿಮ್ಮನ ಕಗ್ಗದ ಪುಸ್ತಕ ಕೈಗೆ ಸಿಕ್ತು. ಆವತ್ತು ಯಾವಾಗಲೋ ಅದನ್ನು ಖರೀದಿಸಿ ಅರ್ಧ ಓದಿ ಹಾಗೆಯೇ ಇರಿಸಿದ್ದೆ.ಮೊನ್ನೆ ಕೈಗೆ ಪುಸ್ತಕ ಸಿಕ್ಕಿದಾಗ ಸುಮ್ಮನೆ ನಿರಾಯಾಸವಾಗಿ ಓದುತ್ತಾ ಹೋದೆ.ನಿಜಕ್ಕೂ ಇಂದಿಗೆ ಮಂಕುತಿಮ್ಮನ ಕಗ್ಗ ಪ್ರಸ್ತುಕ ಅಂತ ಅನ್ನಿಸಿತು , ಮತ್ತೆ ಓದುತ್ತಾ ಹೋದಾಗ ಇದು ಸಾರ್ವಕಾಲಿಕ ಸತ್ಯ ಅಂತ ನಿರ್ಧರಿಸಿದೆ.


ನಿಮಿಷ ನಿಮಿಷಕ್ಕೆ ಬದಲಾಗುವ ಈ ಸಮಾಜದಲ್ಲಿ ನಾವೂ ಒಬ್ಬ ಸ್ಪರ್ಧಿಯಲ್ಲವೇ ,

ಮೊನ್ನೆ ಮಿತ್ರನೊಬ್ಬ ಹೇಳುತ್ತಲಿದ್ದ , ಆತ ಒಂದು ಉದ್ಯೋಗದಲ್ಲಿದ್ದ. ಆ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಅಂತ ಆ ಯೋಚಿಸುತ್ತದ್ದ. ಅದರ ಬೆನ್ನಿಗೇ ಇನ್ನೊಬ್ಬ ಆತನ ಸಹೋದ್ಯೋಗಿ ರಾಜೀನಾಮೆ ನೀಡಿದ. ಸಂಸ್ಥೆಯು ಖಾಲಿಯಾದ ಹುದ್ದೆಗೆ ಅರ್ಜಿ ಆಹ್ವಾನಿಸಿತು. ಆ ಒಂದು ಹುದ್ದೆಗೆ ಬಂದ ಅರ್ಜಿ ಬರೋಬ್ಬರಿ 280 . .!. ನನ್ನ ಮಿತ್ರನಿಗೇ ಅಚ್ಚರಿಯಾಯಿತಂತೆ. ನನ್ನ ಹುದ್ದೆಯ ಮೇಲೆ 280 ಜನರ ಕಣ್ಣು ಇದೆ. .!. ಹಾಗಿದ್ದರೆ ಈ ಹುದ್ದೆ ಬಿಟ್ಟರೆ ಹೇಗೆ .?. ಸ್ಪರ್ಧಿಸಬೇಕು . . ಗೆಲ್ಲಬೇಕು. ಎಂದು ಆತ ರಾಜೀನಾಮೆ ನಿರ್ಧಾರವನ್ನು ಬಿಟ್ಟನಂತೆ . !. ಹಾಗಾಗಿ ಈ ಜಗದಲ್ಲಿ ನಾವೂ ಒಬ್ಬ ಸ್ಪರ್ಧಿಯಲ್ಲದೆ ಮತ್ತಿನ್ನೇನು .?. ನಾವೊಬ್ಬನಲ್ಲ ನಮ್ಮಂತೆ ಇನ್ನೂ ಹಲವರಿದ್ದಾರೆ. ನಾವೇನೂ ಅಲ್ಲ.

ಇಂತಹದ್ದೇ ನನಗೆ ಖುಷಿಕೊಟ್ಟ ಕಗ್ಗಗಳು ;

“ಅಕ್ಕಿಯಿಂದ ಅನ್ನವನ್ನು ಮಾಡಲು ಮೊದಲು ಕಂಡವನು ಯಾರು ?,ಅಕ್ಷರದಿಂದ ಬರಹವನ್ನು ಆರಂಭಿಸಿದವನು ಯಾರು . .? ಆದರೂ ಎಲ್ಲವೂ ನಾನು ಮಾಡಿದ್ದು ಎನ್ನುವುದರಲ್ಲಿ ಅರ್ಥವೇನಿದೆ . .?”

“ನೀನು ಉದ್ದಾರವಾಗಬೇಕಾದರೆ ಹೆಸರಿನ ಹುಚ್ಚು ಬಿಡು , ಲೋಕದಲ್ಲಿ ಮಗುವಾಗು, ಹಸುವಾಗು, ಗಿಡವಾಗು, ಪೊರಕೆಯಾಗು ಆಗ ನೀನು ಉದ್ದಾರವಾಗುತ್ತಿ.”

“ಭಾವಾವೇಶಕ್ಕೆ ಒಳಗಾಗುವಾಗ ಮನಸ್ಸು ಕುದುರೆಯಾಗಲಿ , ಬುದ್ದಿ ಅದರ ಸವಾರನಾಗಲಿ.ಮನಸ್ಸು - ಬುದ್ದಿ ಎರಡೂ ಸತಿಪತಿಗಳಾಗಲಿ ಆಗ ಜೀವನವು ವಿಜಯಯಾತ್ರೆಯಂತಾಗುತ್ತದೆ”

15 ನವೆಂಬರ್ 2010

ಕೆಂಪು ಸಂಕ -6

. . . . ಆದರೆ ಸೋಮಪ್ಪ ಗೌಡರು ಮನೆಯಿಂದ ಕಮಿಲಕ್ಕೆ ಬರೋವಾಗ ಸ್ವಲ್ಪ ತಡವೇ ಆಗಿತ್ತು.ಗೌಡರು ಬಂದ ತಕ್ಷಣವೇ ಅಂಗಡಿ ಬಳಿ ಸೇರಿದ್ದ ಎಲ್ಲರೂ “ಗೌಡ್ರು ಬಂದ್ರು . . ಗೌಡ್ರು ಬಂದ್ರು”ಅಂತ ಎದ್ದು ನಿಂತರು. ಹಾಗೇ ಅಂಗಡಿ ಬಳಿ ಬಂದ ಗೌಡ್ರಿಗೆ ಎದುರು ಸಿಕ್ಕವನು ವಾಡ್ಯಪ್ಪ. “ಹ್ಹಾ. . , ಏನು ವಾಡ್ಯಪ್ಪ , ಏನ್ ಸಮಾಚಾರ “, ಎಂದುಕೊಂಡು ನೇರವಾಗಿ ಅಂಗಡಿಯೊಳಗೆ ಹೋಗಿ “ಏ , ಚನ್ನ ಒಂದು ಬೀಡ ಕೊಡು”, ಎಂದು ಬೀಡ ತೆಗೆದುಕೊಂಡು ಬಾಯಿಗೆ ಹಾಕಿ ಮೆಲ್ಲುತ್ತಾ , ಬಸ್ ಸ್ಟ್ಯಾಂಡ್ ಕಡೆಗೆ ಬಂದರು.ಆಗಲೇ ಸಮಯ ರಾತ್ರಿ ಎಂಟಾಗುತ್ತಾ ಬಂದಿತ್ತು.ಕಮಿಲ ಪೇಟೆಯಲ್ಲಿ ಅಷ್ಟಮಿ ಕಾರ್ಯಕ್ರಮಕ್ಕೆ ಜನಸೇರುವಂತೆ ಜನ ಸೇರಿದ್ದರು.ಎಲ್ಲರಿಗೂ ಒಂದೇ ಕುತೂಹಲ, ಕೆಂಪು ಸಂಕದ್ದು ಏನು ಕತೆ?.

* * * * * * * * * * * * * * * * * * * * *

ಸಭೆ ಶುರುವಾಯಿತು.

ಗೌಡ್ರು ಬಸ್ ಸ್ಟ್ಯಾಂಡ್ ಬಳಿಯಲ್ಲಿ ಒಂದು ಚೆಯರ್ ಹಾಕಿ ಕುಳಿತಿದ್ದರು. ಮುಂದುಗಡೆ ಎಲ್ಲರೂ ಕುತೂಹಲದಿಂದ ಕುಳಿತಿದ್ದರು. ಇನ್ನು ಸ್ವಾಗತ , ಪ್ರಸ್ತಾವನೆ ಎಲ್ಲಾ ಆಲ್ಲಿಲ್ಲ.ಊರಿನ ಮುಖಂಡರೂ , ಪ್ರಮುಖರೂ ಆದ್ದರಿಂದ ಅವರ ಮುಂದೆ ಮಾತನಾಡುವ ಧೈರ್ಯ ಇರೋರೇ ಸ್ವಲ್ಪ ಕಡಿಮೆ. ಅವರು ಹೇಳಿದ ಕೆಲಸ ಅಚ್ಚುಕಟ್ಟಾಗಿ ಮುಗಿಸೋರೇ ಅಲ್ಲಿದ್ದರು.ಹಾಗಾಗಿ ಗೌಡ್ರೇ ನೇರವಾಗಿ ಮಾತಿಗೆ ಶುರುವಿಟ್ಟರು.

“ ನಿಮಗೆಲ್ಲಾ ಗೊತ್ತಿರಬಹುದು , ನಾನು ಆಗ ಜೋಯಿಸರಲ್ಲಿಗೆ ಹೋಗಿ ಕೆಂಪುಸಂಕದ ಬಗ್ಗೆ ಕೇಳಿದ್ದೇನೆ.ಜೋಯಿಸರು ಹೇಳಿದ್ದಾರೆ , ಅಲ್ಲೊಂದು ಸಂಚಾರವಿದೆ , ಇದಕ್ಕೆ ನಿವೃತ್ತಿಯಾಗಬೇಕಂತೆ , ಅದಕ್ಕಾಗಿ ಶಾಂತಿ ಹೋಮ ಆಗಬೇಕಂತೆ, ಇಲ್ಲವಾದರೆ ಇಡೀ ಊರಿಗೆ ಅಪಾಯ ಉಂಟಂತೆ , ಈ ಶಾಂತಿ ಹೋಮ ಮಾಡಿಸದೇ ಇದ್ದರೆ , ಇನ್ನೂ ಒಂದೆರಡು ಜೀವಗಳು ಹೋಗಬಹುದೆಂದು ಜೋಯಿಸರು ಹೇಳಿದ್ದಾರೆ” ಎಂದು ಮಾತು ಮುಗಿಸುವ ಮುನ್ನವೇ , ಜಯರಾಮ ಕೇಳಿದ, “ ಅಲ್ಲ ಅದು ಯಾವುದರ ಸಂಚಾರವಂತೆ ?”.

“ಹ್ಹಾ. . , ಅದು ಸಂಚಾರ ಯಾವುದು ಅಂತ ಸ್ಪಷ್ಠ ಇಲ್ಲ , ಒಂದು ಭೂತ ಇದೆಯಂತೆ ಜೊತೆಗೆ ಒಬ್ಬ ಸತ್ತ ವ್ಯಕ್ತಿಯ ಪ್ರೇತವೂ ಇದೆಯಂತೆ ಹೀಗಾಗಿ ಸಮಸ್ಯೆಯಾಗಿದೆ ಎಂದಿದ್ದಾರೆ ಜೋಯಿಸರು” ಎಂದರು ಗೌಡ್ರು.

ಅಷ್ಟೊತ್ತಿಗೆ ಸುಂದರ ಕೇಳಿದ , “ಅಲ್ಲ ಈಗ ಈ ಹೋಮ ಮಾಡುವುದಾದರೆ ಎಲ್ಲಿ..?.”

“ಹೌದು , ಅದು ಎಲ್ಲಿ . . ಎಲ್ಲಿ ..” , ಎಂದು ಎಲ್ಲರೂ ಧ್ವನಿಗೂಡಿಸಿದರು ,

ಅದನ್ನೂ ಜೋಯಿಸರು ಹೇಳಿದ್ದಾರೆ , ಅದೇ ಕೆಂಪುಸಂಕದ ಬಳಿಯಲ್ಲಿ ಊರಿನ ಎಲ್ಲರೂ ಸೇರಿಕೊಂಡು ಮಾಡಬೇಕಂತೆ , ಇನ್ನು ಊರಿನ ಒಬ್ಬನಾದರೂ ಇದರಲ್ಲಿ ಪಾಲ್ಗೊಳ್ಳದೇ ಹೋದರೆ ಪ್ರಯೋಜನವಿಲ್ಲ ಅಂತ ಹೇಳಿದ್ದಾರೆ ಜೋಯಿಸರು ,ಅಂದ್ರು ಗೌಡ್ರು.

ಎಲ್ಲರೂ ಅವರ ಮಾತಿಗೆ ತಲೆದೂಗುತ್ತಿದ್ದರು. ಹೌದು ಆ ಶಾಂತಿ ಹೋಮ ಆಗಲೇಬೇಕು ಅಂತ ಎಲ್ಲರೂ ಮಾತನಾಡಿಕೊಂಡರು.

“ಹಾಗಿದ್ರೆ ಯಾವಾಗ ದಿನ ಇಂದೇ ನಿಶ್ಚಯ ಮಾಡುವ” ಎಂದು ಗಿರಿಯಪ್ಪ ಹೇಳಿದ.

“ಹೇಳಿ .. ನೀವೇ ಹೇಳಿ” ಅಂದ್ರು ಗೌಡ್ರು.

ತಕ್ಷಣ ವಿಜಯೇಶ ಹೇಳಿದ, “ಅಲ್ಲಾ ಅದು ಫಾರೆಸ್ಟ್ ಲ್ಯಾಂಡ್ ಅಲ್ವಾ. ?, ಅವರು ಬಿಡ್ತಾರ.? ಅಲ್ಲಿ ಹೋಮ ಮಾಡೋದಿಕ್ಕೆ?”. ,

ಗೌಡ್ರಿಗೆ ಸಿಟ್ಟು ಬಂತು , “ನಾನು ಕೇಳಿದ್ದು ಫಾರೆಸ್ಟ್‌ನವರು ಬಿಡ್ತಾರ ಅಂತ ಅಲ್ಲ , ಹೋಮಕ್ಕೆ ದಿನ ಹೇಳಿ ಅಂತ , ಅದೆಲ್ಲಾ ನಾನು ನೋಡ್ಕೊಳ್ಳುತ್ತೇನೆ ನಿಮಗೇನು ತಲೆಬಿಸಿ” ಅಂತ ಜೋರಾಗೇ ಹೇಳಿದರು.

ಸೋಮಪ್ಪ ಗೌಡರ ಈ ಮಾತಿಗೆ ಸಭೆಯಲ್ಲಿ ಸ್ವಲ್ಪ ವಿರೋಧ ಬಂತು. ವಿಜಯೇಶ ಜೊತೆಗಾರರಿಗೂ ಬಿಸಿಯಾಯಿತು.

“ಅಲ್ಲಾ ನೀವು ಹಾಗೆ ಹೇಳಿದರೆ ಹೇಗೆ ಗೌಡ್ರೆ , ನಾಳೆ ಹೋಮಕ್ಕೆ ಶುರುವ ಮಾಡಿದಾಗ ಫಾರೆಸ್ಟ್‌ನವನ್ರು ಬಂದು ಕಿರಿಕಿರಿ ಮಾಡಿದರೆ ಮತ್ತೆ ಏನು ಮಾಡುವುದು , ಅದಕ್ಕೆ ಈಗಲೇ ಏನಾದ್ರೂ ವ್ಯವಸ್ಥೆ ಮಾಡಬೇಕಲ್ಲ” ಅಂದ ಕುಶಾಲಪ್ಪ ,

ಗೌಡ್ರ ಸಿಟ್ಟೂ ಕಡಿಮೆಯಾಯಿತು. “ ಆಯಿತು . . ಆಯಿತು. . . ಅದಕ್ಕೆ ನಾನು ವ್ಯವಸ್ಥೆ ಮಾಡ್ತೇನೆ , ನಮ್ಮ ಪಾರೆಸ್ಟ್‌ವನರು ಏನೂ ಮಾಡ್ಲಿಕ್ಕಿಲ್ಲ. ಮಾತಾಡ್ತೇನೆ” . “ಈಗ ಹೋಮಕ್ಕೆ ದಿನ ಹೇಳಿ ಅಂದ್ರು”.

ಸೀನಪ್ಪ ಎದ್ದು ನಿಂತು ಹೇಳಿದ , “ಹೆಚ್ಚು ದಿನ ಹೋಗೋದು ಬೇಡ , ಮುಂದಿನ ತಿಂಗಳ 12 ರಂದೇ ಆದರೆ ಹೇಗೆ ?. ಮರುದಿನ ಅಮವಾಸ್ಯೆ ಬೇರೆ. ಅಮವಾಸ್ಯೆ ಹತ್ತಿರವಾಗೋವಾಗ ಈ ಪ್ರೇತಗಳೆಲ್ಲಾ ಹೆಚ್ಚು ಓಡಾಡ್ತವಲ್ಲಾ , ಹಾಗಾಗಿ ಆವತ್ತೇ ಆದರೆ ಹೇಗೆ ?”.

“ಹೇಗೆ . .” ಎಂದು ಸೋಮಪ್ಪ ಗೌಡ್ರು ಸಭೆಯ ಅಭಿಪ್ರಾಯ ಕೇಳಿದ್ರು.

ಸೂರಪ್ಪ ಹೇಳಿದ , “ಅಲ್ಲ ಅಮವಾಸ್ಯೆಯಂದೇ ಆದರೆ ಹೇಗೆ?.

“ಹೇಗೆ .. ಹೇಗೆ . . ಹೇಳಿ. . ಹೇಳಿ. . ” ಎಂದು ಗೌಡ್ರು ಸಭೆಯ ಮುಂದೆ ಕೇಳಿದ್ರು.

“ಅಮವಾಸ್ಯೆಯವತ್ತು ಬೇಡ . ಮುಂದಿನ ತಿಂಗಳು 12 ರಂದೇ ಆಗಬಹುದು” ಎಂದು ಸಭೆಯ ಎಲ್ಲರೂ ಹೇಳಿದರು.
“ ಹ್ಹಾ. . ಸರಿ ಹಾಗದ್ರೆ ಮುಂದಿನ ತಿಂಗಳು 12 ರಂದು ಕೆಂಪುಸಂಕದ ಬಳಿಯಲ್ಲಿ ಶಾಂತಿ ಹೋಮ”.

“ಇನ್ನು ದಿನ ಹೆಚ್ಚಿಲ್ಲ ಇವತ್ತು ತಾರೀಕು 28 ಆಯಿತು.13 ದಿನ ಇದೆ , ಸಾಕಲ್ಲ”ಅಂದ್ರು ಗೌಡ್ರು.

“ಹೋ. . ಅದು ಸಾಕು”. ಅಂದಿತು ಸಭೆ.

“ಹೋಮದ ಖರ್ಚು ಹೇಗೆ. . ?” ಎಂದು ಕೇಳಿದ ಸೂರಪ್ಪ ,

“ಹ್ಹಾ . ಅದಕ್ಕೆ ಊರಿನ ಎಲ್ಲರಿಂದಲೂ 20 ರುಪಾಯಿ ಪಡೆದರೆ ಹೇಗೆ”. ಕೇಳಿದ್ರು ಗೌಡ್ರು.

ಅಂದಿನ ಕಾಲದಲ್ಲಿ 20 ರುಪಾಯಿಯೆಂದರೆ ಅದೇ ದೊಡ್ಡದು.

ಅದಕ್ಕೆ “ಅದು ಜಾಸ್ತಿಯಾಯಿತು. 15 ರುಪಾಯಿ ಸಾಕು” ಎಂದ ಸೂರಪ್ಪ ,

ಸಭೆಯೂ ಸೂರಪ್ಪನ ಮಾತಿಗೆ ಧ್ವನಿಗೂಡಿಸಿತು.

“ಆಯಿತು ಹಾಗಾದ್ರೆ 15 ರುಪಾಯಿ ಸಂಗ್ರಹಿಸೋಣ” ಎಂದರು ಸೋಮಪ್ಪ ಗೌಡರು.

“ಸರಿ . . , ಹೋಮ ಮಾಡುವುದಕ್ಕೆ ಪುರೋಹಿತರು ಯಾರು ಆಗಬಹುದು” ಎಂದು ಮತ್ತೆ ಗೌಡ್ರು ಪ್ರಶ್ನೆ ಮಾಡಿದರು.

ಆಗ ಅಲ್ಲಿದ್ದವರು ಯಾರೋ ಹೇಳಿದರು , “ನೋಡಿ ಇಲ್ಲಿ ಸಭೆಯ ಪಕ್ಕದಲ್ಲೇ ಇದ್ದಾರಲ್ಲ ನಮ್ಮ ಬರ್ಲಾಯಬೆಟ್ಟು ಭಟ್ಟರು , ಅವರೇ ಆಹಬಹುದು. ಊರಿನ ಪ್ರಯುಕ್ತ ಶಾಂತಿ ಹೋಮ ಅಲ್ವಾ ಅವರೂ ಒಪ್ಪಬಹುದು” ಅಂದರು.

ಆಗ ಸಭೆಯಲ್ಲಿದ್ದ ಅವರ ಮಗ ಅನಂತ ಭಟ್ಟ ಹೇಳಿದ “ಆಗಬಹುದು ಅವರಿಗೆ ಪುರುಸೊತ್ತು ಉಂಟಾ ಇಲ್ವಾ ಗೊತ್ತಿಲ್ಲ , ಅವರು ಮಡಿಕೇರಿಯಲ್ಲೂ ಪೂಜೆಗೆ ಹೋಗ್ತಾರೆ , ಕೇಳಬೇಕಷ್ಟೆ”. ಎಂದರು.

“ಹ್ಹಾ. . ಸರಿ ಕೇಳಲು ನಾನು ಬ‍ರ್ತೇನೆ” ಅಂದರು ಸೋಮಪ್ಪ ಗೌಡರು.

“ಸರಿ ಹಾಗಾದ್ರೆ ಇನ್ನೇನಾದ್ರೂ ಕೇಳಲು ಉಂಟಾ ?” ಅಂತ ಕೇಳಿದ್ರು ಗೌಡ್ರು.

“ ಇಲ್ಲ . . ಇಲ್ಲ ..” ಅಂದ್ರು ಸಭೆಯ ಮಂದಿ.

ಆಗಲೇ ಗಂಟೆ ಒಂಭತ್ತಾಗಿತ್ತು.ಮೊದಲೇ ಕೆಂಪುಸಂಕದ ಹೆದರಿಕೆ , ಹಾಗಗಿ ಎಲ್ಲರೂ ಸಭೆಯ ಮುಗಿತಾಯಕ್ಕೆ ಬಂದರು.ಸಭೆ ಮುಗಿಯಿತು ಗೌಡ್ರು ಎದ್ದರು ಎಲ್ಲರೂ ಹೊರಟರು.

ಈ ವಿಜಯೇಶ ಮತ್ತು ಆತನ ಸಂಗಡಿಗರಿಗೆ ಮಾತ್ರಾ ಸ್ವಲ್ಪ ಅಸಮಾಧಾನವಿತ್ತು.ಅವರು ಎಲ್ಲರೂ ಹೋದ ಮೇಲೆ ಚರ್ಚೆ ಮಾಡಿದರು ,
“ ಇವತ್ತು ಸಭೆ ಕರೆದದ್ದು ಯಾಕೆ ?, ಎಲ್ಲರ ಸಂಶಯ ನಿವಾರಣೆ ಮಾಡಬೇಕು ಅಂತ ತಾನೆ?.ಆದರೆ ಇವರೇನು ಹಿಟ್ಲರ್ ಹಾಗೆ ವರ್ತನೆ ಮಾಡುತ್ತಾರೆ.ಅವರು ಹೇಳಿದ್ದು ಮಾತ್ರಾ ಕೇಳಬೇಕು ಅಂತ ಅವರದ್ದು ಯೋಚನೆಯಾ ?. ಸೋಮಪ್ಪ ಗೌಡ್ರು ಮುಖಂಡರು ಆಗಿರಬಹುದು , ಆದರೆ ಅವರ ಸರ್ವಾಧಿಕಾರಿ ಧೋರಣೆಗೆ ಎಲ್ಲಾ ಬೇಡ” ಎಂದು ಮಾತನಾಡುತ್ತಿದ್ದರು.

ಅಷ್ಟೊತ್ತಿಗೆ ದೂರದೆಲ್ಲೆಲ್ಲೋ ಒಂದು ವಿಕಾರದಲ್ಲಿ ಕೂಗಿದಂತೆ ಕೇಳತೊಡಗಿತು.

“ಅದೇನೋ ಸದ್ದು. .” ಅಂತ ವಿಜಯೇಶ ಕೇಳಿದ , ಒಂದು ಕ್ಷಣ ಮೌನ.

“ಹೌದು. . ಹೌದು. .” ಎಲ್ಲಿಂದ ಅದು . . ಮತ್ತೆ ಮೌನ. .

ಅದು “ಅದೇ ಬಳ್ಪ ಕಾಡಿನಿಂದ . .” ಅಂದ ಆ ಗುಂಪಿನ ಒಬ್ಬ.

“ಅದ್ಯಾವುದಾದರೂ ಹಕ್ಕಿ ಆಗಿರಬಹುದು. . .” ಅಂತ ಮತ್ತೆ ಟೀಕೆ ಮುಂದುವರಿಸಿದರು.

ವಿಕಾರ ಸದ್ದು ಮತ್ತೆ ಹತ್ತಿರ ಹತ್ತಿರವಾದಂತೆ ಕೇಳಿಸಿತು. ಗುಂಪಿನಲ್ಲಿದ್ದವರಿಗೂ ಸ್ವಲ್ಪ ತಳಮಳ ಶುರುವಾಯಿತು.

“ಸರಿ. . ನಾಳೆ ಮಾತಾಡೋಣ. .” ಎಂದು ಮಾತಾನಾಡುತ್ತಾ ಮುಂದೆ ಹೊರಟರು.

ಆಗಲೇ ಈ ಶಾಂತಿ ಹೋಮದ ವಿರುದ್ದ ಒಂದು ಅಪಸ್ವರ ಕಾಣಿಸಿಕೊಂಡಿತು.

* ** * * * * * * * * * * * * * * * * * * * * *

14 ನವೆಂಬರ್ 2010

ನಿನ್ನೆಯೂ ಹೀಗೆ . ನಾಳೆಯೂ ಹಾಗೇ. .

ಸುತ್ತಲ ಹಸಿರು ತೋರಣದ ನಡುವಿನಿಂದ ಭಾಸ್ಕರ ಏಳುತ್ತಲಿದ್ದ , ದೂರದ ಕಾಡಿನಿಂದ ಹನಿ ಹನಿ ಬಿಂದುಗಳು ಸೇರಿಕೊಂಡು ತೊರೆಯಾಗಿ, ಹಳ್ಳವಾಗಿ,ನದಿಯಾಗಿ ಓಡೋಡುತ್ತಾ ಕಡಲು ಸೇರಲು ತವಕದಿಂದ ಸಾಗಿ ಬರುತ್ತಿತ್ತು, ಈ ಎಲ್ಲದರ ನಡುವೆ ಮೆತ್ತನೆಯ ಗಾಳಿಯು ಮನಸ್ಸಿಗೆ ಹಿತ ಕೊಡುವಂತಿತ್ತು.ಇವೆಲ್ಲವೂ ಅನುದಿನವೂ ತನ್ನ ಕಾಯಕವನ್ನು ಮಾಡೇ ಇರುತ್ತದೆ.ಇದಕ್ಕೇನು ಆಜ್ಞೆ ಬೇಕಾಗಿಲ್ಲ, ಇದಕ್ಕಾಗಿ ಯಾರನ್ನೂ ಕಾಯುವುದೂ ಇಲ್ಲ.ಆಜ್ಞೆ ಮಾಡಿದಂತೆ ಮಾಡೋದೂ ಇಲ್ಲ ,ಹಗಲಿರಲಿ ರಾತ್ರಿ ಇರಲಿ ನಿರಂತರ ಕಾಯಕ. ನಿನ್ನೆಯೂ ಹೀಗೇ ನಾಳೆಯೂ ಹಾಗೆಯೇ.

ಈಗ ನನ್ನ ಸುತ್ತ ಇದೇ ನಿನ್ನೆ . . . ನಾಳೆಗಳು.!.

ನಾನೆಂಬ ಈ ಜೀವಗಳು ಹೇಗೆ?.

ನಿನ್ನೆ . . ಮತ್ತು . . ನಾಳೆಗಳ ಮಧ್ಯೆ ವ್ಯತ್ಯಸ್ಥ ಮನಸ್ಸುಗಳು.!. ನಿನ್ನೆ ನಾನಾಗಿದ್ದರೆ ನಾಳೆ ನಾವು. ನಾಳೆ ನಾವಾಗಬೇಕಾದರೆ ನಿನ್ನೆ ನಾನು.

ಯಾಕಂದ್ರೆ,
ನಾನು ಮಾಡಿದ ಕೆಲಸ ಎಂಬ ಭಾವ ಅಲ್ಲಿ ಕಾಣಿಸುತ್ತಿದ್ದರೆ , ಅದರ ಹಿಂದೆ ಅನೇಕ “ನಾವು”ಸೇರಿಕೊಂಡಿರುತ್ತದೆ.ಆದರೆ ಜಗದ ಕಣ್ಣಿಗೆ ಅಲ್ಲಿ ಕಾಣಿಸೋದು ಮತ್ತು ಪ್ರಕಾಶಿಸೋದು “ನಾನು” ಮಾತ್ರಾ.

ಇನ್ನೊಂದು ನೋಡಿ , ನಾಳೆ “ನಾವು”ಗಳಿಂದ ಕೆಲಸವಾಗಬೇಕಾದರೆ ಇಂದು “ನಾನು” ಎಂಬೊಂದು ಭಾವವು ಕೆಲಸ ಮಾಡಿ ನಾವುಗಳ ಮುಂದೆ ದೇನ್ಯ ಭಾವದಿಂದ ಕೆಲಸ ಮಾಡುತ್ತದೆ.ನಾಳೆಯ ನಂತರ ಮತ್ತೆ ಅದೇ ನಾನು. . !.

ಇದು ನಿನ್ನೆಯಲ್ಲ ನಾಳೆಯೂ ನಡೆಯುತ್ತದೆ.

ಬೇಕಿದ್ದರೆ ಗಮನಿಸಿ,
ನಾನು ಎಂಬುದು ಎಷ್ಟಿರುತ್ತದೆಂದರೆ , ಇನ್ನೊಬ್ಬನ ಮೇಲೆ ಹೇರುವಿಕೆಯವರೆಗೆ. ಅದೊಂದು ಪ್ರಭುತ್ವವೂ ಆಗಿರುತ್ತದೆ. ಹಾಗಾಗಿ ಅಲ್ಲಿ ವಿನಂತಿಯಿಲ್ಲ ಆಜ್ಞೆ ಇರುತ್ತದೆ. ಪೀತಿ ಇರೋದಿಲ್ಲ ದರ್ಪ ಕಾಣಿಸುತ್ತದೆ.ಹಾಗಾಗಿ ಎಷ್ಟೋ ಸಾರಿ ಈ ಆಜ್ಞೆಗಳಿಗೆ ಬೆಲೆ ಸಿಗೋದಿಲ್ಲ. ಅಲ್ಲೊಂದು ಶೀತಲ ಸಮರವಿರುತ್ತದೆ. ಆದರೆ ಈ ನಾವು ಎಂಬಲ್ಲಿ ಈ ಆಜ್ಞೆಗಳು ಇರೋದಿಲ್ಲ.ಎಲ್ಲವೂ ಪ್ರೀತಿಯಿಂದ ಮಾಡಿದ ಕೆಲಸವಾಗಿರುತ್ತದೆ. ಇನ್ನು ನಿಮ್ಮಲ್ಲೊಂದು ಶಕ್ತಿ ಇದ್ದರೆ ಅದಕ್ಕೆ ಬೆಂಬಲವಿಲ್ಲ , ಅದಕ್ಕೊಂದು ವ್ಯಂಗ್ಯವಿರುತ್ತದೆ. “ನಾನು”ವಿಗೆ ಲಾಭವಿದ್ದರೆ ಮುಖಸ್ತುತಿ ಇರುತ್ತದೆ.ಇಲ್ಲದಿದ್ದರೆ ಕುಹಕವಿರುತ್ತದೆ.

ಇದ್ಯಾಕೆ ಎಂದರೆ,
ಮೊನ್ನೆ ಒಂದು ಘಟನೆಯಾಗಿತ್ತು. ಇದೇ ನಾನೆಂಬ ಭಾವದಲ್ಲಿ ಇನ್ನೊಬ್ಬರು ಹೇರಿದ ಸಂಗತಿಯದು. ಆದರೆ ಅದಕ್ಕೆ ರೆಸ್ಪಾನ್ಸ್ ಕೊಟ್ಟಿರಲಿಲ್ಲ.ಹಾಗಾಗಿ ಅಪಪ್ರಚಾರದ ಬಾಣಕ್ಕೆ ತುತ್ತಾಗಬೇಕಾಯಿತು. ಆದರೂ ಪ್ರತಿಕ್ರಿಯೆ ಕೊಟ್ಟಿರಲಿಲ್ಲ.ಹೀಗಾಗಿ ಬಿಟ್ಟ ಬಾಣಗಳೆಲ್ಲವನ್ನೂ ಸಹಿಸಿಕೊಂಡಾಗ ಬಾಣ ಬೀಡೋರಿಗೂ ಸಾಕಾಯಿತು.ಸುಮ್ಮನಾದರು.ಇದೆಲ್ಲಾ ಮನಸ್ಸಿನೊಳಗೇ ಸುಳಿದಾಡುತ್ತಿತ್ತು. ಈ ಪ್ರಕೃತಿಯ ಒಳಗೇ ಇರೋ ನಾವು , ಪ್ರಕೃತಿ ಸೇರುವಾಗ ಏನೊಂದೂ ಇಲ್ಲದೆ , ಆ ನಂತರ ಎಲ್ಲವನ್ನೂ ಮೈಗೂಡಿಸಿಕೊಂಡ ನಾವುಗಳು ಮೆತ್ತಿಕೊಂಡ ಈ ದರ್ಪವಿದು. ನಾನೆಂಬ ಭಾವವನ್ನು ಈ ಪ್ರಕೃತಿ ಕೂಡಾ ಮಾಡಿದರೆ ಹೇಗೆ?. ಪ್ರಕೃತಿಯ ಮೇಲೆ ಏನೆಲ್ಲಾ ನಡೆಯೋದಿಲ್ಲಾ ಹೇಳಿ.

ಒಂದಂತೂ ಸತ್ಯ ಇತ್ತೀಚೆಗೆ ಪ್ರಕೃತಿಗೂ ಸಿಟ್ಟಾಗಿದೆ.ಮಳೆ ಬರಬಾರದ ಸಮಯಕ್ಕೆ ಮಳೆ ,ಒಮ್ಮಿಂದೊಮ್ಮೆಲೇ ಪ್ರವಾಹ, ಗಾಳಿ ಬಂದು ಇಡೀ ಸರ್ವನಾಶ , ಬೆಂಕಿಯ ಕೆನ್ನಾಲಿಗೆಗೆ ಇಡೀ ಭಸ್ಮವಾಗೋದು ಇದೆಲ್ಲಾ ಕೇಳಿದ್ದೇವೆ.ಇದೆಲ್ಲಾ ತಡೆಯೋದು “ನಾನು” ಎಂಬುದಕ್ಕೆ ಸಾಧ್ಯವಾಗಿದೆಯಾ?. ಸಾಧ್ಯವಾಗೋದೂ ಇಲ್ಲ. ಅಲ್ವಾ..?. ಇದು ಇಂದಲ್ಲ , ನಿನ್ನೆಯೂ ಹೀಗೆಯೇ ಇತ್ತು , ನಾಳೆಯೂ ಹೀಗೆಯೇ ಇರುತ್ತದೆ ಬಿಡಿ. ಯಾಕಂದ್ರೆ ನಾವು “ ನಾನು”ಗಳು. . !!.

22 ಅಕ್ಟೋಬರ್ 2010

ಕೆಂಪು ಸಂಕ - 5

. . . . . . . . . ಒಂದು ಕ್ಷಣ ಯೋಚಿಸಿದ ಸೋಮಪ್ಪ ಗೌಡರು , ತನ್ನ ನೆನಪಿನ ಬುತ್ತಿಯನ್ನು ಬಿಚ್ಚ ತೊಡಗಿದರು. ನೋಡಿ ಜೋಯಿಸರೇ , ನನಗೆ ಗೊತ್ತಿದ್ದ ಪ್ರಕಾರ ಅಂತ ಮಾತಿಗೆ ಶುರುವಿಟ್ಟರು , ಆವತ್ತು ಸುಮಾರು ಇಪ್ಪತ್ತು ವರ್ಷದ ಹಿಂದೆ ಗುತ್ತಿಗಾರಿನಿಂದ ಬಳ್ಪಕ್ಕೆ ಟಿಂಬರ್ ರಸ್ತೆ ಅಂತ ಇತ್ತು. ಊರು ಬೆಳೆಯುತ್ತಾ ಸಾಗಿದಾಗ ಈ ರಸ್ತೆಯೇ ಊರ ಜನರಿಗೆ ರಸ್ತೆಯಾಯಿತು. ಆ ನಂತ್ರ ಇದೂ ಟಾರು ರಸ್ತೆ ಆಗಬೇಕು ಎಂದೆನಿಸಿತು , ಹಾಗಾಗಿ ಊರ ಜನರ ಪ್ರಯತ್ನದಿಂದಾಗಿ ಟಿಂಬರು ರಸ್ತೆಯು ಟಾರು ರಸ್ತಯಾಗುವ ಎಲ್ಲಾ ಹಂತಗಳಿಗೂ ಬಂತು. ಆಗ ಬಳ್ಪದ ಈ ಕಾಡಿನಲ್ಲಿ ಇರುವ ಚಿಕ್ಕ ಚಿಕ್ಕ ಹೊಳೆಗಳಿಗೆ ಸೇತುವೆ ಕಟ್ಟಲಾಗಿತ್ತು. ಆದ್ರೆ ಜೋಯಿಸ್ರೇ . . . . ಎಂದು ಸೋಮಪ್ಪ ಗೌಡರು ಮಾತು ನಿಲ್ಲಿಸಿದರು. ಹ್ಹೂಂ . . ಎಂದ ಜೋಯಿಸರು, ಹ್ಹಾ. . ಹ್ಹಾ. . ಹೇಳಿ ಅಂತದ್ರು , ಮತ್ತೆ ಮುಂದುವರಿಸಿದ ಸೋಮಪ್ಪ ಗೌಡರು , ಈ ಕಾಡಲ್ಲಿ ಸೇತುವೆ ಕಟ್ಟುವ ವೇಳೆ ಅಲ್ಲೊಂದು ಕಡೆ ಒಬ್ಬ ಕೆಲಸದವನು ಸಂಕದಿಂದ ಬಿದ್ದು ಸತ್ತನಂತೆ , ಆಗ ಅದೇನೂ ಸೌಕರ್ಯ ಇದ್ದಿರಲಿಲ್ಲ ಅಲ್ವಾ , ಹಾಗಾಗಿ ಆತ ಅಲ್ಲೇ ಸತ್ತನಂತೆ.ಇದರಿಂದಾಗಿ ಕೆಲ ದಿನ ಸೇತುವೆ ಕೆಲಸ ನಿಂತಿತು. ಆ ನಂತ್ರ ಮತ್ತೆ ಅದೇ ಸೇತುವೆ ನಿರ್ಮಾಣವಾಯಿತಂತೆ.ಆಗ ಯಾವನೋ ಒಬ್ಬ ಮೇಸ್ತ್ರಿಗೆ ಅನ್ನಿಸಿತಂತೆ ಇದಕ್ಕೊಂದು ಕೆಂಪು ಬಣ್ಣದ ಬಳಿದ್ರೆ ಹೇಗೆ. ಹೇಗೂ ಇಲ್ಲೊಬ್ಬ ಸತ್ತಿದಾನೆ ಅಂತ ಇದಕ್ಕೆ ಕೆಂಪು ಬಣ್ಣ ಕೊಟ್ರು. ಆ ಕಾಡಿನ ನಡುವೆ ಅದೊಂದೇ ಕೆಂಪು ಬಣ್ಣದ ಸೇತುವೆ. ಇಷ್ಟು ಹೇಳುವಾಗ ಸೋಮಪ್ಪ ಗೌಡರ ಬಾಯಿ ಒಣಗಿತು. ಒಂದು ಒಣ ಕೆಮ್ಮು ಹಾಕಿ ಮತ್ತೆ ಮಾತು ಮುಂದುವರಿಸಿ ಜೋಯಿಸ್ರೇ , ಈ ಸೇತುವೆಗೆ ಕೆಂಪು ಬಣ್ಣ ಬಳಿದ ಕಾರಣದಿಂದಾಗಿ ಜನ ಇದನ್ನು ಕೆಂಪು ಸಂಕ ಅಂತ ಕರೀತಾರೆ. ಸಂಕ ಅಂದ್ರೆ ನಮ್ಮ ಭಾಷೆಯಲ್ಲಿ ಸೇತುವೆ ಅಂತಲ್ವಾ ?. ಹಾಗಾಗಿ ಇದೊಂದು ಕೆಂಪು ಸಂಕ ಅಂತ ಜನ ಕರೆದ್ರು. ನೋಡಿ ಜೋಯಿಸ್ರೇ “ಬೇರೆ ಎಲ್ಲಾದ್ರೂ ಕೆಂಪು ಬಣ್ಣ ಬಳಿದ ಸಂಕ ಇದೆಯಾ” ?. “ ಅದು ಇಲ್ಲ” ಅಂದರು ಜೋಯಿಸರು , ಕವಡೆಯ ಕಡೆ ನೋಡಿದರು. ಬಳಿಕ ಹ್ಹೂಂ . . . ಎಂದರು.

ಒಂದು ಕ್ಷಣ ಮೌನ ಇತ್ತು ಆಚಳ್ಳಿಯ ಮನೆಯಲ್ಲಿ. ಆ ಮೌನದ ನಡುವಿನಲ್ಲಿ ಶಿವರಾಮ ಜೋಯಿಸರು ಶಾಂತವಾಗಿ ಹೇಳಿದರು , ಇದಕ್ಕೆ ಸದ್ಯಕ್ಕೆ ಪರಿಹಾರ ಇಲ್ಲ. ಆದರೆ ಒಂದು ಮಾಡಬಹುದು ಊರ ಜನರೆಲ್ಲಾ ಸೇರಿ ಒಂದು ಶಾಂತಿ ಹೋಮವನ್ನು ಆ ಸಂಕದ ಪಕ್ಕದಲ್ಲಿ ಮಾಡಿದರೆ ಒಳ್ಳೆಯದು. ಇದರಿಂದಾಗಿ ಮುಂದೆ ಏನಾದರೂ ತೊಂದರೆ ಆಗಬಹುದಾದ್ದನ್ನು ತಪ್ಪಿಸಬಹುದು.ಇಲ್ಲಾಂದ್ರೆ ಇನ್ನೂ ಒಂದೆರಡು ಜೀವಗಳು , ಅಥವಾ ದೇಹಗಳು ಅದೇ ಕಾಡಿನಲ್ಲಿ ಅಥವಾ ಅದೇ ಸಂಕದ ಆಸುಪಾಸಿನಲ್ಲಿ ಬಿದ್ದರೂ ಬೀಳಬಹುದು ಅಂತ ಹೇಳಿದರು.

ಜೋಯಿಸರೇ , ಹಾಗಾದ್ರೆ ಅದು ಯಾವುದರ ಕಾಟ ?, ಎಂದು ಸೋಮಪ್ಪ ಗೌಡರು ಮೆಲ್ಲನೆ ಕೇಳಿದರು. ನೋಡಿ ಗೌಡ್ರೆ , ಅದು ಯಾವುದು ಅಂತ ಸರಿಯಾಗಿ ಹೇಳುವುದು ಕಷ್ಠ. ಯಾಕೆಂದ್ರೆ ಅಲ್ಲಿ ಏನೋ ಒಂದು ಸಂಚಾರ ಇದೆ , ಅದರ ಜೊತೆಗೆ ಭೂತವೂ ಸೇರಿಕೊಂಡಿದೆ , ಒಟ್ಟಿಗೆ ಆ ಸತ್ತ ವ್ಯಕ್ತಿಯ ಪ್ರೇತವೂ ಅಲ್ಲಿದೆ. ಇನ್ನು ವನದೇವಿಯ ಪ್ರದೇಶ ಬೇರೆ. ಹಾಗಾಗಿ ಇದರಿಂದೆಲ್ಲಾ ಒಟ್ಟಾಗಿ ಕಾಟ ಶುರುವಾಗಿದೆ. ಅಂತಂದ್ರು ಜೋಯಿಸರು. ಇದಕ್ಕೆಲ್ಲಾ ಮುಕ್ತಿ ಪಡೀಬೇಕಾದ್ರೆ ಸ್ವಲ್ಪ ಕಷ್ಠ ಅಂತ ಅನಿಸುತ್ತೆ. ಅದಕ್ಕಾಗಿ ಒಂದು ಹೋಮ ಮಾಡಿ ಅಷ್ಟೆ. ಆದ್ರೆ ಒಂದು ಸಂಗತಿ ಊರ ಜನರೆಲ್ಲಾ ಸೇರಬೆಕು.ಒಬ್ಬೊಬ್ಬನೇ ಮಾಡಿದರೆ ಪ್ರಯೋಜನ ಇಲ್ಲ ಅಂತನೂ ಹೇಳಿದ್ರು.

ಸರಿ, ಅಂತ ಸೋಮಪ್ಪ ಗೌಡರು ಶಿವರಾಮ ಜೋಯಿಸರಿಗೆ ಒಂದಿಷ್ಟು ಕಾಣಿಕೆ ಹಾಕಿ , ಬರ್ತೇನೆ ಅಂದರು. ಆಗ ಜೋಯಿಸರ ಪತ್ನಿ , ಹೋ . ಗೌಡ್ರೇ , ಬನ್ನಿ ಅಪರೂಪ. ಚಾ ಕುಡಿಯಿರಿ ಅಂದ್ರು. ಆಯ್ತು ಅಂತ ಚಾ ಕುಡಿದ ಸೋಮಪ್ಪ ಗೌಡರು , ಅಲ್ಲಿಂದ ಹೊರಡುವಾಗ ಮದ್ಯಾಹ್ನ ಆಗಿತ್ತು. ಊಟ ಮಾಡಿ ಹೋಗಿ ಗೌಡ್ರೆ ಅಂದಾಗ, ಬೇಡ ಅಂದ ಸೋಮಪ್ಪ ಬೇಗನೆ ಕಮಿಲದ ಕಡೆ ಹೆಜ್ಜೆ ಹಾಕಿದ್ರು.ಇಂದು ಸಂಜೆಯೇ ಈ ವಿಚಾರವನ್ನು ಊರ ಜನರಿಗೆ ಹೇಳಬೇಕು ಎಂದು ನಿರ್ಧಾರ ಮಾಡಿಯೇ ಬಂದರು ಅವರು.ಕಮಿಲಕ್ಕೆ ಬಂದವರೇ ಸಂಜೆ ಎಲ್ಲರೂ ಅಂಗಡಿ ಬಳಿ ಬರಬೇಕು ಎಂದು ಕಮಿಲದಲ್ಲಿ ಹೇಳಿದರು.ಒಬ್ಬರ ಬಾಯಿಯಿಂದ ಇನ್ನೊಬ್ಬರ ಬಾಯಿಗೆ ಸುದ್ದಿ ಹೋಯಿತು.ಇಂದು ಸಂಜೆ ಅಂಗಡಿ ಬಳಿ ಬರಬೇಕಂತೆ , ಗೌಡ್ರು ಜೋಯಿಸರ ಬಳಿಗೆ ಹೋಗಿದ್ದಾರೆ , ಕೆಂಪುಸಂಕದ ಬಗ್ಗೆ ಏನೋ ಕೇಳಿದ್ದಾರಂತೆ ಎಂದೆಲ್ಲಾ ಸುದ್ದಿ ಹರಡಿತು. ಸಂಜೆ ಐದು ಗಂಟೆ ಆಯಿತು.ಜನ ಒಬ್ಬೊಬ್ಬರೇ ಕಮಿಲದ ಕಡೆ ಹೆಜ್ಜೆ ಹಾಕಿದರು.ಅಂಗಡಿ ಬಳಿ ಆರು ಗಂಟೆಯ ಹೊತ್ತಿಗೆ ಸುಮಾರು 300 ಜನ ಸೇರಿದ್ದರು. ಗೌಡರು ಮನೆಯಿಂದ ಬರುವಾಗ ಸ್ವಲ್ಪ ತಡವೇ ಆಗಿತ್ತು. ಅಂಗಡಿ ಬಳಿಗೆ ಬಂದ ಎಲ್ಲರೂ ಮತ್ತೆ ಅದೇ ಕೆಂಪುಸಂಕದ ಬಗ್ಗೆಯೇ ಮಾತನಾಡುತ್ತಿದ್ದರು.

12 ಅಕ್ಟೋಬರ್ 2010

ಕೆಂಪು ಸಂಕ - 4

. . . ಹೀಗೇ ಕೆಂಪುಸಂಕದ ಬಗ್ಗೆ ಕತೆಗಳು ಹುಟ್ಟಿಕೊಂಡವು.ಎಲ್ಲವು ಕೂಡಾ ಭಯ ಹುಟ್ಟಿಸುವ ಕತೆಗಳೇ ಆಗಿದ್ದವು.ಆದರೆ ಅದೆಲ್ಲವೂ ಕತೆ ಅನ್ನಲೂ ಆಗುತ್ತಿಲ್ಲ.ಯಾಕೆಂದ್ರೆ ಎಲ್ಲವೂ ಕೆಂಪುಸಂಕದ ಆಸುಪಾಸಿನಲ್ಲಿ ಒಬ್ಬೊಬ್ಬರಿಗೆ ಆದ ಅನುಭವಗಳೇ ಆಗಿದ್ದವು. ಯಾರೊಬ್ಬರೂ ಕೂಡಾ ಸತ್ಯ ಏನು ಎಂಬುದರ ಬಗ್ಗೆ ಚರ್ಚಿಸುತ್ತಿರಲಿಲ್ಲ.ನಿನ್ನೆ ನಡೆದ ಸಂಗತಿಗಳ ಬಗ್ಗೆಯೇ ಕಮಿಲದ ಪೇಟೆಯಾದ್ಯಂತ ಮಾತನಾಡುತ್ತಲೇ ಇದ್ದರು. ನಾಳೆ ಏನು? ಎಂಬುದರ ಬಗ್ಗೆ ಅಲ್ಲಿ ಮಾತನಾಡುವವರ ಸಂಖ್ಯೆ ಕಡಿಮೆ ಇತ್ತು. ಕಮಿಲದಿಂದ ಬಳ್ಪಕ್ಕೆ ಹೋಗದೇ ಇರಲಾಗುವುದಿಲ್ಲ.ಏನಾದರೂ ಮನೆ ಸಾಮಾನುಗಳು , ದಿನಸಿಗಳು ಬೇಕಂದ್ರೆ ಬಳ್ಪಕ್ಕೆ ಹೋಗಲೇ ಬೇಕು. ಆಗ ಬಳ್ಪದ ಕಾಮತ್ತರ ಅಂಗಡಿಯೇ ದೊಡ್ಡ ಅಂಗಡಿ. ಹಾಗಾಗಿ ಬಳ್ಪ ಒಂದಿಲ್ಲೊಂದು ಕಾರಣಕ್ಕೆ ಅನಿವಾರ್ಯವಾಗಿತ್ತು ಕಮಿಲದ ಜನಕ್ಕೆ.ಇನ್ನು ಪುತ್ತೂರು , ಸುಬ್ರಹ್ಮಣ್ಯಕ್ಕೆ ಹೋಗಬೇಕಾದರೂ ಬಳ್ಪ ಕ್ರಾಸ್‌ವರೆಗೆ ಕಾಲ್ನಡಿಗೆ ಮಾಡಲೂ ಬೇಕಿತ್ತು. ಬಸ್ಸು , ಜೀಪುಗಳು ಇಲ್ಲವೇ ಇಲ್ಲ. ಹೀಗಾಗಿ ಕಮಿಲದ ಜನರಿಗೆ ಕೆಂಪುಸಂಕವು ಒಂದು ದೊಡ್ಡ ಸಮಸ್ಯೆಯಾಗಿತ್ತು.

* * * * * * * * * * * * * * * * * * * * * * * *

ಎಂದಿನಂತೆ ಅಂದು ಸಂಜೆ ಕೂಡಾ ಎಲ್ಲರೂ ಕಮಿಲದ ಅಂಗಡಿ ಬಳಿ ಕುಳಿತು ಇದೇ ಕೆಂಪುಸಂಕದ ಬಗ್ಗೆ ಮಾತನಾಡುತ್ತಾ ಇದ್ದರು.ಆಗ ಊರ ಗೌಡ ಸೋಮಪ್ಪ ಸೇರಿದಂತೆ ಇತರ ಕೆಲವರೂ ಅಲ್ಲಿಗೆ ಬಂದರು. ಎಲ್ಲರ ಮುಖದಲ್ಲಿ ಒಂದೇ ಚಿಂತೆ ಮುಂದೇನು ಅಂತ.?. ಅದೇ ಚಿಂತೆಯಲ್ಲಿ ಎಲ್ಲರೂ ಮೌನವಾಗಿದ್ದ ವೇಳೆ ಕಮಿಲದ ಊರ ಗೌಡ ಸೋಮಪ್ಪ ಹೇಳಿದ್ರು, ಹೀಗೆ ಕೂತರೆ ಆಗದು ಆವತ್ತು ಭಟ್ಟರಿಗೆ , ನಿನ್ನೆ ವೆಂಕಪ್ಪನಿಗೆ ಇವತ್ತು ಶಶಿಧರನಿಗೆ ನಾಳೆ ಇನ್ನೊಬ್ಬನಿಗೆ ಹೀಗೆ ಆದ್ರೆ ಹೇಗೆ ?, ಅದು ಏನಂತ ಗೊತ್ತಾಗಬೇಕು.ಹಾಗಾಗಿ ಒಂದು ನಿರ್ಧಾರ್‍ಕಕೆ ಬರೋಣ , ನಾಳೆ ನಾನು ಆಚಳ್ಳಿಗೆ ಹೋಗ್ತೇನೆ , ಎಲ್ಲರೂ ಆಯ್ತು , ನಾಳೆ ಸಂಜೆ ಮಾತನಾಡೋಣ ಎಂದು ಎಲ್ಲರೂ ಮನೆಗೆ ಹೋದರು.ಮರುದಿನ ಬೆಳಗ್ಗೆ ಸೋಮಪ್ಪ ಗೌಡರು ಆಚಳ್ಳಿ ಜೋಯಿಸರಲ್ಲಿಗೆ ಪ್ರಶ್ನೆ ಕೇಳಲು ಹೋದರು..ಏನಾದರೂ ಪ್ರಯೋಜ ಆದೀತಾ ಅಂತ ಅವರ ಭಾವನೆಯಾಗಿತ್ತು.

* * * * * * * * * * * * * * * * * * *

ಸೋಮಣ್ಣ ಗೌಡರು ಬೆಳಗ್ಗೆಯೇ ಮನೆಯಿಂದ ಆಚಳ್ಳಿ ಕಡೆಗೆ ಹೊರಟರು. ಕಮಿಲಕ್ಕೆ ಬಂದು ದೇವಸ್ಯ ಮಾರ್ಗವಾಗಿ ಆಚಳ್ಳಿಗೆ ಬಂದಾಗ ಶಿವರಾಮ ಜೋಯಿಸರು ಆಗ ತಾನೆ ಸ್ನಾನ ಮಾಡಿ ಕಾಫಿ ಕುಡಿದು ಹೊರ ಬಂದಿದ್ದರು. ಬೇರೆ ಊರಿನ ಒಂದೆರಡು ಜನ ಇದ್ದರು. ಅವರನ್ನೆಲ್ಲಾ ಬಿಟ್ಟ ನಂತರ , ಏನು ಸೋಮಪ್ಪ ಗೌಡರೇ ಬನ್ನಿ, ಅಂತ ಒಳ ಕರೆದ್ರು. ಏನಿಲ್ಲ , ಜೋಯಿಸರೇ ಒಂದು ಸಮಸ್ಯೆ ಇದೆ ಅಂತ ಹೇಳಿದರು ಸೋಮಪ್ಪ. ಬನ್ನಿ ಕುಳಿತುಕೊಳ್ಳಿ , ಅಂತ ತಮ್ಮ ಮುಂದೆ ಕುಳಿತುಕೊಳ್ಳಿಸಿ , ಸಮಸ್ಯೆ ಹೇಳಿ ಅಂತಂದ್ರು. ಅಲ್ಲಾ ಜೋಯಿಸರೇ ನಿಮಗೂ ಗೊತ್ತಿರಬಹುದು , ಕಮಿಲದಿಂದ ಮುಂದೆ ಆ ಕೆಂಪುಸಂಕ ಅಂತ ಇದೆಯಲ್ಲಾ ಅಲ್ಲಿ ಕೆಲವೊಂದು ಘಟನೆಗಳು ಆಗಿವೆ, ಅದು ಏನಂತ ಹೇಳಲು ಆಗೋದಿಲ್ಲ , ವಿಚಿತ್ರವಾದ ಘಟನೆಗಳು ಅಲ್ಲಿ ನಡೆಯುತ್ತದೆ , ಹಾಗಾಗಿ ಜನ ಬಳ್ಪದ ಕಡೆಗೆ ಹೋಗಲು ಹೆದರ್ತಾರೆ , ಅತ್ತ ಕಡೆ ಹೋಗದಿದ್ರೆ ಹೇಗೆ ? ನಮ್ ಜನರಿಗೆ ಏನಾದ್ರು ಬೇಕಾದ್ರೆ ಆ ಕಡೆಯೇ ಹೋಗ್ಬೇಕಲ್ಲಾ ?. ಈಗ ಅದಕ್ಕೇನು ಪರಿಹಾರ , ಏನದು . .?.


ಹ್ಹೂಂ. . . , ಅಂದ್ರು ಜೋಯಿಸರು.ನೋಡೋಣ , ಅದು ನನ್ನ ಪ್ರಕಾರ ಏನಾದ್ರು ಕಾಡು ಪ್ರಾಣಿ ಇರಬಹುದು. ಅಂತ ಮೇಲ್ನೋಟಕ್ಕೆ ಹೇಳಿದ್ರು. ಆದರೂ ಗೌಡರಿಗೆ ಅದು ಸಮಾಧಾನ ಆಗಲಿಲ್ಲ.ಸರಿ ಎಂದು ಕವಡೆ ತಿರುವಿದರು. ಅದೇನೋ ಮಂತ್ರ ಹೇಳುತ್ತಾ ಇನ್ನೊಮ್ಮೆ ಕವಡೆ ತಿರುವಿ ಒಂದಷ್ಟು ಕವಡೆ ತೆಗೆದು ಲೆಕ್ಕ ಹಾಕಿದರು. ಏಳನೇ ಮನೆಯಲ್ಲಿ ಶನಿ , ಎಂಟರಲ್ಲಿ ಶುಕ್ರ , ಐದರಲ್ಲಿ ಮಾಂದಿ . . . ಹೀಗೆ ಹೇಳುತ್ತಾ ಹೋದರು. ಗೌಡರಿಗೆ ಆತಂಕ ಹೆಚ್ಚಾಯಿತು. ಶನಿಯಿಂದ ದೋಷ . . . ಮಾಂದಿ ವಕ್ರ ದೃಷ್ಠಿ . . ಎಂದು ಅವರಷ್ಟಕ್ಕೇ ಹೇಳಿದರು. ಗೌಡರು ಮತ್ತೆ ಆತಂಕದಿಂದ ಜೋಯಿಸರ ಮುಖ ನೋಡುತ್ತಿದ್ದರು. ಹೂಂ . . ಹೂಂ ಹೂಂ. . ಎಂದ ಜೋಯಿಸರು, ಇಲ್ಲಾ . . ಏನೂ ಅತಹದ್ದೊಂದು ಕಾಣುತ್ತಿಲ್ಲ , ಆ. .ಆದ್ರೆ . . ಎಂದು ಮಾತು ನಿಲ್ಲಿಸಿ ಕವಡೆಯತ್ತ ನೋಡಿದ್ರು , ಗೌಡರ ಮುಖ ಬೆವರಿತು. ಹಾಗೆ ಹಣೆವರೆಸಿಕೊಂಡರು. ಸ್ವಲ್ಪ ಮೌನದ ನಂತರ ಜೋಯಿಸರು ಹೇಳಿದ್ರು , ಅಲ್ಲಿ ಒಂದು ಸಂಚಾರ ಇರುವುದು ಕಾಣುತ್ತದೆ , ಆ ಸಂಚಾರದ ಹೊತ್ತಲ್ಲಿ ಹೋಗುವಾಗ ಈ ರೀತಿಯ ಅನುಭವ ಆಗಬಹುದು , ಇದು ಹೀಗೇ ಇದ್ರೆ ಒಂದೆರಡು ಜೀವ ಹೋದೀತು , ಇಲ್ಲಾಂದ್ರೆ ಅಲ್ಲಿ ದೇಹವೊಂದು ಕಂಡೀತು. ಅದೂ ಅಲ್ಲದಿದ್ದರೆ ಮತ್ತೆ ಒಂದೆರಡು ದೇಹ ಅಲ್ಲಿ ಸಿಗ್ಬಹುದು ಅಂತಂದ್ರು ಅವರು. ಅದಕ್ಕಾಗಿ ಆ ಸಂಚಾರವನ್ನು ಬಂಧಿಸಬೇಕು.ಅದೊಂದು ಕ್ಷುದ್ರ ಶಕ್ತಿ ಅಂತ ಹೇಳಿದ್ರು ಜೋಯಿಸರು.

ಅಲ್ಲಾ ಗೌಡ್ರೇ , ಆ ಸಂಕ ಹೇಗೆ ಮಾಡಿದ್ದಾರೆ , ಯಾವಾಗ ಕಟ್ಟಿದ್ರು ಅನ್ನೋದು ನಿಮಗೆ ಗೊತ್ತಿದೆಯಾ ಎಂಬ ಪ್ರಶ್ನೆ ಹಾಕಿದ್ರು, ಜೋಯಿಸರು.

ಗೊತ್ತಿದೆ ಎಂದು ವಿವರಿಸಲು ತೊಡಗಿದರು ಸೋಮಪ್ಪ ಗೌಡರು. . . . .

* * * * * * * * * * * * * * * * * * * * * * * * * * *

11 ಅಕ್ಟೋಬರ್ 2010

ಕೆಂಪು ಸಂಕ - 3

ಅಂದು ಬೆಳಗ್ಗೆ ಮೋಡಗಳ ಸಂದಿನಿಂದ ಸೂರ್ಯ ಉದಯಿಸುತ್ತಾ ಇದ್ದ.ದೂರದ ಕುಮಾರಪರ್ವತದಲ್ಲಿ ಅದೇನೋ ಕೆಂಪು ಉಂಡೆಯ ಹಾಗೆ ಸೂರ್ಯ ಹೊಳೆಯುತ್ತಾ ಇದ್ದ. ಹಾಗಾಗಿ ಸೂರ್ಯನ ಬೆಳಕು ಹರಿಯುವಾಗಲೇ ಲೇಟಾಯಿತು.

ಯಾವಾಗಲೂ ನಸುಕಿನ ಹೊತ್ತಲ್ಲೇ ಹಾಸಿಗೆ ಬಿಡುವ ವೆಂಕಪ್ಪನಿಗೆ ಅಂದು ಮಾತ್ರಾ ಸೂರ್ಯರಶ್ಮಿ ಬಂದ್ದದ್ದು ಗೊತ್ತಾಗಲೇ ಇಲ್ಲ.ಹಾಸಿಗೆಯಿಂದ ಹಾಗೇ ಹೊರಗೆ ನೋಡುವಾಗ ಬೆಳಕು ಹರಿದಿತ್ತು. ತುರಾತುರಿಯಲ್ಲಿ ಎದ್ದ ವೆಂಕಪ್ಪನಿಗೆ ತಟ್ಟನೆ ನೆನಪಾದದ್ದು ನಿನ್ನೆ ರಾತ್ರಿ ನಡೆದ ಘಟನೆ. ಅದೇನು. . ? ಅದೇನು . .? ಎಂಬ ಭಯವಿಶ್ರಿತ ಕುತೂಹಲ. ಮತ್ತೊಮ್ಮೆ ಹಣೆ ವರೆಸಿಕೊಂಡ ವೆಂಕಪ್ಪ ಹಾಗೇ ಒಂದು ಬೀಡಿಯನ್ನೂ ಹಚ್ಚಿಕೊಂಡು ಮನೆಯ ಹೊರಗಿನ ಮಣ್ಣಿನ ಕಟ್ಟೆಯಲ್ಲಿ ಕುಳಿತುಕೊಂಡು ದೂರದ ಕಾಡಿನ ಕಡೆಗೆ ದೃಷ್ಠಿ ಹಾಯಿಸಿ ಯೋಚಿಸುತ್ತಾ ಕುಳಿತಿದ್ದ. ಸಮಯ ಹೋದದ್ದೇ ಗೊತ್ತಾಗಲಿಲ್ಲ. ವೆಂಕಪ್ಪನ ಪತ್ನಿ ಪಾರ್ವತಿ ಬಂದು, “ಏನ್ರೀ ಕೆಲಸಕ್ಕೆ ಹೋಗೋದಿಲ್ವಾ” ಅಂತ ಕೇಳಿದಾಲೇ ಸಮಯದ ಕಡೆಗೆ ಕಣ್ಣು ಹಾಯಿಸಿದ್ದು.

ಆಗ ಗಂಟೆ ಎಂಟು ಆಗುತ್ತಾ ಬಂದಿತ್ತು. ಛೆ . . ಇನ್ನು ಕೆಲಸಕ್ಕೆ ಹೋಗೋದು ಬೇಡ ಅಂತ ರಜೆ ಮಾಡಿದ.ಬೆಳಗಿನ ಕಾಫಿ ಕುಡಿದ ಮೇಲೆ ತೋಟದಲ್ಲೊಂದು ಸುತ್ತು ಹಾಕಿದ ವೆಂಕಪ್ಪ ಮನೆಗೆ ಬಂದಾಗ ಗಂಟೆ ಸುಮಾರು 10 ಆಗುತ್ತಾ ಬಂದಿತ್ತು. ಮತ್ತೆ ನಿನ್ನೆ ರಾತ್ರಿಯ ಘಟನೆಯನ್ನೇ ತಲೆಯಲ್ಲಿ ತುಂಬಿಕೊಂಡು ಕಮಿಲದ ಕಡೆಗೆ ಹೋದ.ಕಮಿಲದಲ್ಲಿ ಕೆಲಸವೇನೂ ಇದ್ದಿರಲಿಲ್ಲ.ಆದರೂ ಅತ್ತ ಕಡೆ ಹೆಜ್ಜೆ ಹಾಕಿದ.ಕಮಿಲದ ಪೇಟೆಯಲ್ಲಿ ಪೋಸ್ಟ್ ಆಫೀಸಿಗೆ ಹೋಗಿ , ಚನ್ನಣ್ಣನ ಅಂಗಡಿಯ ಬದಿಯ ಬಸ್ ಸ್ಟ್ಯಾಂಡಿನಲ್ಲಿ ಕುಳಿತಿದ್ದ.ಅಷ್ಟೊತ್ತಿಗೆ ಲಕ್ಷ್ಮಣನೂ ಬಂದ ಇನ್ನು ಸ್ವಲ್ಪ ಹೊತ್ತಿಗೆ ನೀಲಪ್ಪನೂ ಬಂದ. ಹೋ. . , ಕೆಲಸಕ್ಕೆ ಹೋಗಿಲ್ವಾ ಅಂತ ಮಾತನಾಡಿಕೊಂಡರು.ಮೂವರಿಗೂ ನಿನ್ನೆ ರಾತ್ರಿಯ ಘಟನೆಯಿಂದಾಗಿ ಬೆಳಗೆ ಏಳುವಾಗಲೇ ಲೇಟಾಗಿತ್ತು ಹಾಗಾಗಿ ಕೆಲಸಕ್ಕೆ ಹೋಗಿರಲೇ ಇಲ್ಲ.ಕಮಿಲಕ್ಕೆ ಬಂದು ಒಂದು ಪ್ಯಾಕೇಟು ಹಾಕಿ ಹೋಗೋಣ ಅಂತ ಯೋಚಿಸಿಯೇ ಎಲ್ಲರೂ ಕಮಿಲಕ್ಕೆ ಬಂದಿದ್ದರು.ಆದರೆ ಒಬ್ಬರಿಗೊಬ್ಬರು ಮಾತನಾಡಿಕೊಂಡಿರಲಿಲ್ಲ.ಆಗ ಎಲ್ಲಾ ಮನೆಗಳಲ್ಲಿ ಫೋನುಗಳೂ ಇದ್ದಿರಲಿಲ್ಲ, ಊರಲ್ಲಿ ಒಂದೆರಡು ಮನೆಯಲ್ಲಿ ಮಾತ್ರಾ ಫೋನು ಇತ್ತು.ಊರ ಜನ ಬೇಕಾದ್ರೆ ಅರ್ಜೆಂಟ್ ಇದ್ರೆ ಅಲ್ಲಿಗೆ ಹೋಗಿ ಮಾತನಾಡಿ ಬರಬೇಕು.

ಮತ್ತೆ ಕಮಿಲದಲ್ಲಿ ಎಲ್ಲರೂ ಜೊತೆಯಾದ್ರು. ಬಸ್‌ಸ್ಟ್ಯಾಂಡಿನಲ್ಲಿ ಕುಳಿತಿದ್ದಾಗ ಅಂಗಡಿಯ ಚನ್ನಣ್ಣ ವೆಂಕಪ್ಪನಲ್ಲಿ ಕೇಳಿದ , ಏನು ಇವತ್ತು ರಜೆಯಾ ? , ಕೆಲಸಕ್ಕೆ ಹೋಗಿಲ್ವಾ . ? ಅಂತ ಪ್ರಶ್ನೆ ಮಾಡಿದರು.ಇಲ್ಲ ಇವತ್ತು ರಜೆ ಅಂದ ವೆಂಕಪ್ಪ. ಅದಲ್ಲ ಏನು ಮೂರು ಜನಾ ಇದ್ದೀರಲ್ಲ ? ಏನಾದ್ರೂ ಇರಬಹುದು, ಅಂತ ಮಾಮೂಲಿ ತಮಾಷೆ ಭಾಷೆಯಲ್ಲಿ ಕೇಳಿದ ಚನ್ನಣ್ಣ , ಯಾಕೆಂದ್ರೆ ಎಲ್ಲಿಗೇ ಹೋಗಲಿ ಈ ಮೂವರೂ ಜೊತೆಯಾಗೇ ಹೋಗೋದು ಅನ್ನೋ ಮಾತೊಂದು ಕಮಿಲದಾದ್ಯಂತ ಆವತ್ತು ಸುದ್ದಿಯಲ್ಲಿದ್ದ ಸಂಗತಿ.ಹಾಗಾಗಿ ಕುತೂಹಲದಿಂದಲೇ ಕೇಳಿದ್ದ ಚನ್ನಣ್ಣ. ಹಾಗೇನಿಲ್ಲ . . ಹಾಗೇನಿಲ್ಲ. . . ಸುಮ್ಮನೆ . . .ಸುಮ್ಮನೆ . . .ಅಂತ ಹೇಳಿದ್ರು ಈ ಮೂವರು. ಹೀಗೆ ಕುಶಲೋಪರಿ , ತಮಾಷೆ ಎಲ್ಲಾ ಮಾತನಾಡುತ್ತಿದ್ದಂತೆಯೇ ಒಂದೆರಡು ಜನ ಬಸ್ ಸ್ಟ್ಯಾಂಡಿಗೆ ಬಂದ್ರು , ಗುತ್ತಿಗಾರಿಗೆ ಹೋಗುವವರು ಅವ್ರು.ಆಗ ಬಾಳುಗೋಡು ಬಸ್ಸು ಬರುವ ಹೊತ್ತಾಗಿತ್ತು. ಸಮಯ ಇದೆ ಎಂದು ಮಾತನಾಡುತ್ತಾ ಇರುವಂತೆ ಮಾತಿನ ನಡುವೆ ಕೆಂಪುಸಂಕದ ಬಗ್ಗೆಯೂ ಪ್ರಸ್ತಾಪವಾಯಿತು. ಅಲ್ಲಿ ಹೋಗೋದಿಕ್ಕೆ ಎಲ್ಲರೂ ಹೆದರ್ತಾರೆ ಅಂತ ಚನ್ನಣ್ಣ ಹೇಳಿದ. ಅಷ್ಟೊತ್ತಿಗೆ ನಿನ್ನೆ ರಾತ್ರಿ ತಮಗಾದ ಅನುಭವವನ್ನು ಬಿಚ್ಚಿಟ್ಟ ವೆಂಕಪ್ಪ ಅದಕ್ಕೆ ಧ್ವನಿ ಸೇರಿಸಿದ ಲಕ್ಷ್ಮಣ. ನೀಲಪ್ಪ ನಾನು ಬೊಬ್ಬಿಟ್ಟೆ ಅಂತ ಮೊಂಡು ಧೈರ್ಯ ಪ್ರದರ್ಶಿಸಿದ್ದನ್ನು ಚನ್ನಣ್ಣನ ಮುಂದೆ ಹೇಳಿಕೊಂಡ.ಚನ್ನಣ್ಣನಿಗೆ ಇದೆಲ್ಲಾ ಕೇಳುತ್ತಿದ್ದಂತೆ ಹಣೆಯಲ್ಲಿ ನೀರು ಜಿನುಗುವುದಕ್ಕೆ ಶುರುವಾಯಿತು.ಒಮ್ಮೆ ಮುಖ ಒರಸಿಕೊಂಡ ಚನ್ನಣ್ಣ, ಅಲ್ಲಾ ಮೊನ್ನೆ ಗಂಗಾ ಭಟ್ಟರು ಮತ್ತು ಚಂದ್ರ ಭಟ್ಟರು ಹೋಗುವಾಗ ನಡೆದ ಸಂಗತಿಯ ನಂತರ ಹೆದರಿಕೆಯಾಗುತ್ತಿತ್ತು ಈಗ ನಿಮಗೆ ಆದ ಅನುಭವ ಹೌದಾ ?. ಅಂತ ಆತಂಕದಿಂದಲೇ ಕೇಳಿದ. ನಿಜ . ನಿಜ .. ಅಂತ ಹೇಳುವಾಗ ಮೂವರ ಮಾತಿನಲ್ಲೂ ಆತಂಕ ಕಾಣುತ್ತಿತ್ತು. ಹಾಗಾದ್ರೆ ಅದೆಂತ ಮಾರಾಯಾ . ? ಅಂತ ಚನ್ನಣ್ಣ ಪ್ರಶ್ನೆ ಕೇಳುತ್ತಿದ್ದ , ಇದಕ್ಕೆ ಒಬ್ಬರು ಅದು “ಪ್ರೇತ” ಅಂದ್ರೆ ಇನ್ನೊಬ್ಬರು “ರಣ” ಅಂದ್ರು ಮತ್ತೊಬ್ಬರು ಅದು “ಬ್ರಹ್ಮರಾಕ್ಷಸ” ಅಂದ್ರು.ಅಂತೂ ಕೆಂಪು ಸಂಕದ ಬಗ್ಗೆ ಭಯ ಇನ್ನಷ್ಟು ಹೆಚ್ಚಾಯಿತು. ಅಷ್ಟೊತ್ತಿಗೆ ಬಾಳುಗೋಡು ಬಸ್ಸು ಬಂತು. ಬಸ್ ಸ್ಟ್ಯಾಂಡಿನಲ್ಲಿದ್ದವರೆಲ್ಲಾ ಗುತ್ತಿಗಾರಿಗೆ ಹೋದವರು.ಚನ್ನಣ್ಣನಿಗೂ ಅಂಗಡಿಗೆ ಜನ ಬಂದ್ರು. ಈ ಮೂವರು ಆಚೆ ಸೀತಣ್ಣನ ಅಂಗಡಿಗೆ ಹೋಗಿ ತೊಟ್ಟೆ ಬಿಸಿ ಏರಿಸಿ ಮನೆಗೆ ಬಂದರು. ಆದ್ರೆ ಚನ್ನಣ್ಣನಿಗೆ ಇದೊಂದು ಹೊಸ ವಿಷಯವಾಯಿತು.ಅಂಗಡಿಗೆ ಬಂದವರಿಗೆಲ್ಲಾ ಈ ಕೆಂಪುಸಂಕದ ಹೊಸ ವಿಷಯವನ್ನು ಹೇಳಿದ ಮತ್ತು ಅದು ಏನಾಗಿರಬಹುದೆಂಬ ಚರ್ಚೆ ಶುರುವಾಯಿತು.ಒಬ್ಬೊಬ್ಬರು ಒಂದೊಂದು ಉತ್ತರ ಹೇಳುತ್ತಿದ್ದರು.

* * * * * * * * * * * * * * * * * * * * * * * * * * * *

06 ಅಕ್ಟೋಬರ್ 2010

ಮಾನವಿಲ್ಲದವರು . !

ಇವರಿಗೆ ಬಳಸಬೇಕಾದ ಶಬ್ದಗಳು ಯಾವುದು ಅಂತಾನೇ ತಿಳೀತಿಲ್ಲ. ಛೀ . ಥೂ . . , ಅಂತ ಬೈದರೂ ಅವರಿಗೆ ಮಾನವಿಲ್ಲ , ಮರ್ಯಾದೆ ಮೊದಲೇ ಇಲ್ಲ. ಈ ಮಾತು ಅನ್ವಯಿಸೋದು ಯಾರಿಗೆ ಗೊತ್ತಾ ?. ನಮ್ಮ ರಾಜ್ಯದ ಕೆಟ್ಟ ರಾಜಕಾರಣಿಗಳಿಗೆ.ನಮ್ಮ ದುಡ್ಡಲ್ಲಿ ಇವರದ್ದೇನು ರೆಸಾರ್ಟ್ ರಾಜಕೀಯ, ಮಾನವಿಲ್ಲದವರು. ಇವರೇನು ನಮ್ಮ ರಾಜ್ಯವನ್ನು , ನಮ್ಮ ರೈತರನ್ನು , ನಮ್ಮ ಬಡ ಜನರನ್ನು , ನಮ್ಮ ರಾಜ್ಯದ ಮೂಲಭೂತ ಸೌಕರ್ಯವನ್ನು ಅಭಿವೃದ್ದಿ ಪಡಿಸೋರಾ?, ದರಿದ್ರರು. ಅಷ್ಟಕ್ಕೂ ಅವರಿಗೆ ಆಡಳಿತ ಕೊಟ್ಟೋರು ಯಾರು ?. ನಮಗೆ ನಾವೇ ಹೊಡೆದಂತಾಗಿದೆ ಈಗ. ಹಾಗಂತ ಎಲ್ಲರನ್ನೂ ದೂಷಿಸೋದಕ್ಕೂ ಆಗಲ್ಲ. ಕೆಲವರು ಅದರಲ್ಲಿ ಒಳ್ಳೆವರು, ಕಾಳಜಿ ಇರೋರು ಇದ್ದಾರೆ.

ಮೊನ್ನೆ ಈ ರೆಸಾರ್ಟ್ ರಾಜಕೀಯ ಶುರುವಾಗಿತ್ತು.ಭಿನ್ನಮತದ ಸದ್ದು ಮೊಳಗಿತ್ತು , ಟಿವಿಯಲ್ಲಿ ನಮ್ಮ ಮಿತ್ರರು ವಿಷುವಲ್ ಶೂಟ್ ಮಾಡಿ ಏರ್ ಮಾಡುತ್ತಿದ್ದರು. ನೋಡುತ್ತಿದ್ದಾಗ ನಮ್ಮದೇ ಸರಕಾರದ ಮಂತ್ರಿ ,ಸರಕಾರದ ಕಾರಿನಲ್ಲಿ ಕೆ‌ಎ 01 ಜಿ . .. . ನಂಬ್ರದ ಕೆಂಪು ಗೂಟದ ಕಾರು ಚೆನ್ನೈನ ರೆಸಾರ್ಟ್‌ನ ಒಳಗೆ ಹೋಗುತ್ತದೆ ಸರಕಾರದ ಕಾರು. ಆ ಬಳಿಕ ಒಂದೊಂದೇ ಸರಕಾರದ ಕಾರು ಅದರೊಳಗೆ ಹೋಗುತ್ತದೆ. ಅಲ್ಲಿಂದ ಶುರುಬಾಗುತ್ತದೆ ರಾಜಕೀಯದ , ಲಾಭದ , ಅಧಿಕಾರದ ಆಸೆಯ ಆಟಗಳು. ಇವರನ್ನೆಲ್ಲಾ ಆ ಕ್ಷೇತ್ರದ ಜನ ಗೆಲ್ಲಿಸಿ ಕಳುಹಿಸಿದ್ದು ಈ ರೀತಿ ರೆಸಾರ್ಟ್ ಕಾಯೋದಿಕ್ಕಾ, ಹೊಸಲು ರಾಜಕೀಯ ಮಾಡೋದಿಕ್ಕಾ?.

ನಮ್ಮ ದುಡ್ಡಿನ ಕಾರು ಅದು. ಹೋಗಲಿ ಬೇರೆಲ್ಲಾದರೂ ಹೋಗಲಿ, ರಾಜ್ಯದ ಹಿತಕ್ಕಾಗಿ , ಜನರ ಹಿತಕ್ಕಗಿ ಸರಕಾರದ ಕಾರು ಬಳಸಿ ಎಲ್ಲಿಗೆ ಬೇಕಾದರೂ ಹೋಗಲಿ.ಅದೆಷ್ಟೇ ಖರ್ಚಾದರೂ ಅಡ್ಡಿಯಿಲ್ಲ.ರಾಜ್ಯದ ಜನರ ಹಿತಕ್ಕಾಗಿ ಎಷ್ಟು ಬೇಕದರೂ ಆ ಕಾರನ್ನು ಓಡಿಸಲಿ.ಅದು ಬಿಟ್ಟು ಈ ಅಧಿಕಾರ ಆಸೆಗಾಗಿ , ರೆಸಾರ್ಟ್ ರಾಜಕೀಯ ಮಾಡಲು ಇವರಿಗೆ ಸರಕಾರದ ಕಾರು ಬೇಕಾ..?. ಯಾರದ್ದು ದುಡ್ಡು . .?. ನಾವೇನು ರಾಜ್ಯದ ಜನ ಪೆದ್ದರಾ.?. ಅಲ್ಲಿ ಮಾಡೋದನ್ನೆಲ್ಲಾ ಸುಮ್ಮನೆ ಕುಳಿತು ನೋಡುತ್ತೇವೆ ಅಂತ ಈ ರೀತಿಯ ವರ್ತನೆಯಾ..?. ಏನಿದು..?.ಇನ್ನು ಹಾಗಲ್ಲ ಯಾವ ಕ್ಷೇತ್ರದ ಶಾಸಕ ಈ ರೀತಿಯಾಗಿ ಮಾಡುತ್ತಾನೋ ಅವನನ್ನು ಮತ್ತೆ ಸ್ವ ಕೇತ್ರಕ್ಕೆ ಬರೋದಿಕ್ಕೆ ಜನಾನೇ ಬಿಡಬಾರದು. ಇದೂ ಅಲ್ಲ ಇನ್ನೊಂದು ಕಾನೂನು ಬರಬೇಕು ಹೀಗೆಲ್ಲಾ ರಾಜಕೀಯ ಮಾಡೋ ಶಾಸಕರನ್ನು ಅವರ ಕ್ಷೇತ್ರ ಜನರೇ ಇಳಿಸುವ ಹೊಸದಾದ ಯಾವುದಾದರೂ ಕಾನೂನು ಬೇಕು. ಒಮ್ಮೆ ಗೆಲ್ಲಿಸಿದ ಮೇಲೆ ಅವರನ್ನು ಇಳಿಸೋ ಯಾವೊಂದು ಸೂತ್ರವೂ ಆ ಕ್ಷೇತ್ರದ ಮತದಾರನಲ್ಲಿಲ್ಲ.ಹಾಗಾಗಿ ಐದು ವರ್ಷ ಆಡಿದ್ದೇ ಆಟ.ಮಾಡಿದ್ದೇ ಕೆಲಸ.ಇದಕ್ಕೆ ಎದ್ದೇಳ ಬೇಕಾದದ್ದು ಮತದಾರರೇ.

ಮೊನ್ನೆ ಮೊನ್ನೆ ಒಂದು ಇಂತಹದ್ದೇ ರೆಸಾರ್ಟ್ ರಾಜಕೀಯ ಮುಗಿದು ಅಬ್ಬ ಇನ್ನಾದರೂ ರಾಜ್ಯ ಅಭಿವೃದ್ದಿಯಾದೀತು , ರೈತರ ಬದುಕು ಹಸನಾದೀತು , ಬಡವರ ಕೆಲಸಗಳೆಲ್ಲಾ ನಡೆದೀತು ಅಂತ ಭಾವಿಸಿದ್ರೆ ಮತ್ತೆ ಶುರುವಾಯ್ತು ನೋಡಿ ಮತ್ತೆ ಅಧಿಕಾರಕ್ಕಾಗಿ ಲಾಬಿ. ಅದಕ್ಕೆ ಇಡೀ ಅಲ್ಲೋಲ ಕಲ್ಲೋಲ ಮಾಡಲು ಇವೆ ವಿಪಕ್ಷಗಳು.ಯಾರಿಗೂ ಇಲ್ಲಿ ಜನರ ಬಗ್ಗೆ ಕಾಳಜಿ ಇಲ್ಲ.ಎಲ್ಲರಿಗೂ ಅಧಿಕಾರ ಪಡೆಯೋದು , ಹಣ ಮಾಡೋದು ಬಿಟ್ಟರೆ ಇನ್ಯಾವುದೂ ಗೊತ್ತಿಲ್ಲ.ಮೊನ್ನೆ ಮೊನ್ನೆ ಕಚ್ಚಾಡಿಕೊಳ್ಳುತ್ತಿದ್ದವರು ಇಂದು ಹಸ್ತಲಾಘವ ಮಾಡುತ್ತಾರೆ. ಏನಿದು ಹೊಲಸು. ಅಧಿಕಾರ ಪಡೆದ ಮೇಲೆ ಮತ್ತೆ ಕಚ್ಚಾಡುತ್ತಾರೆ , ಜನರ ಬಳಿಗೆ ಹೋಗುತ್ತಾರೆ. ಮುಖದಲ್ಲಿ ಸಿಪ್ಪೆ ಇಲ್ಲದವರು . . ಛೀ . . ಇದೊಂದು ಉದ್ಯಮ ಅಂತ ತಿಳ್ಕೊಂಡಿದ್ದಾರೆ ಅವ್ರು. . ಥೂ . . ., ಇದೆಲ್ಲಾ ಮಾಡಿ ಮತ್ತೆ ಚುನಾವಣೆ ಆದ್ರೆ , ಅದ್ಕೆ ಖರ್ಚಾಗೋದು ಯಾರ ದುಡ್ಡು.. ?. ನಮ್ಮದೇ ಅಲ್ಲವೇ.?. ಅವರಿಗೇನು ಇಂತಹ ರಾಜಕೀಯ ಮಾಡೋದು , ಮತ್ತೆ ಚುನಾವಣೆ ನಡೆಯೋದು , ಮತ್ತೆ ಅಧಿಕಾರ ಪಡೆಯೋದು , ಅದೇ ಉದ್ಯೋಗ. ಆದ್ರೆ ಜನರ ಕತೆ. . ?. ಇದೆಲ್ಲಕ್ಕಿಂತ ಹಿಂದಿನಂತೆ ರಾಜಾಡಳಿತವೇ ಒಳ್ಳೇದು , ಅದಿಲ್ಲಾಂದ್ರೆ ರಾಜ್ಯಪಾಲರ ಆಡಳಿತವೇ ಬೆಸ್ಟ್.

ಹಾಗಂತ ಇದರಲ್ಲಿರೋರೊ ಎಲ್ಲರೂ ಕೆಟ್ಟವರು ಅಂತಲ್ಲ.ಇದ್ದಾರೆ ಒಂದು ಚೂರಾದರೂ ಜನಸೇವೆ ಮಾಡಬೇಕು ಅನ್ನೋ ತುಡಿತ ಇರೋರು , ಬಡವರ ಪರ ಕೆಲಸ ಮಾಡೋರು ಇದ್ದಾರೆ. ಆದರೆ ಅಂತಹವರ ಮಾತಿಗೆ ಬೆಲೆಯೇ ಇಲ್ಲ.ಅವರನ್ಯಾರು ಕ್ಯಾರೇ ಮಾಡಲ್ಲ.ಇದು ನಮ್ಮ ದುರಂತ.ಹಾಗಾಗೇ ಮೊನ್ನೆ ನಡೆದ ಇಲೆಕ್ಷನ್‌ನಲ್ಲಿ ಕಡಿಮೆ ಓಟಿಂಗ್ ಆಗಿದೆ.ಮುಂದೆ ಹಾಗಲ್ಲ ಇನ್ನೊಂದು ಕ್ರಾಂತಿಯಾಗಬೇಕು.

04 ಅಕ್ಟೋಬರ್ 2010

ಜಗವೇ ಬದಲಾದರೂ ?

ಅದು ಸರಕಾರಿ ಅಧಿಕಾರಿಯೊಬ್ಬರ ಕಚೇರಿ. ಅವರೊಬ್ಬ ದಕ್ಷ ಅಧಿಕಾರಿ. ಅದರಲ್ಲಿ ಎರಡು ಮಾತಿಲ್ಲ. ನೇರವಾಗಿ ಹೇಳುವ ,ಸರಕಾರದ ಎಲ್ಲಾ ಯೋಜನೆಗಳನ್ನು ಕಟ್ಟ ಕಡೆಯ ವ್ಯಕ್ತಿಗೆ ಮುಟ್ಟಿಸಬೇಕೆಂಬ ತುಡಿತವಿರೋ ಒಬ್ಬ ಒಳ್ಳೆಯ ಅಧಿಕಾರಿ. ಅವರ ಮುಂದೆ ಯಾವುದೋ ವಿಚಾರಕ್ಕೆ ಸಂಬಂಧಿಸಿ ಕುಳಿತುಕೊಂಡಿದ್ದೆ. ಅವರು ಯಾವತ್ತೂ ಹಾಗೆ ಮಾತನಾಡಿದವರಲ್ಲ , ಮಾತನಾಡೋದೂ ಇಲ್ಲ. ಯಾವತ್ತೂ ಆಶಾವಾದಿಯಾಗಿ ಮಾತಾಡೋರು.

ಆದ್ರೆ ಇಂದ್ಯಾಕೋ ಅವರಿಗೆ ಮೀಡಿಯಾಗಳ ಬಗ್ಗೆ ಬೇಜಾರಿತ್ತು. ಹಾಗಾಗಿ ಅವರು ಹೇಳಿದ್ದು, ಯಾಕ್ರೀ ಹೀಗೆ . .? ಅಂತ .ಅದಕ್ಕೆ ಉತ್ತರ ನಮ್ಮಲ್ಲಿ ಇದ್ದಿರಲಿಲ್ಲ. ಯಾಕೆಂದ್ರೆ 'ನಾನು ಹೀಗೆ' ಅಂತ ಹೇಳಬಹುದು , 'ನಾವೆಲ್ಲಾ ಹೀಗಿರ್ತೇವೆ 'ಅಂತ ಹೇಳಲು ಸಾಧ್ಯನಾ?.ಇಲ್ಲವೇ ಇಲ್ಲ. ಹಾಗಾಗಿ ಉತ್ತರವಿಲ್ಲದೆ ಅವರ ಮುಂದೆ ಕುಳಿತಿದ್ದೆವು.ಸಮರ್ಥಿಸುವುದೂ ಆತ್ಮಸಾಕ್ಷಿಗೆ ವಿರುದ್ದವಾಗುತ್ತದೆ.ಅವರು ಹೇಳುವ ವಿಚಾರವೂ ಅರ್ಥಪೂರ್ಣವಾಗಿತ್ತು. ಕೊನೆಗೆ ಅವರು ಹೇಳಿದ್ರು ನನಗೆ ಈ ಕೆಲಸವೇ ಬೇಡವಾಗಿತ್ತು. 'ನಿಮ್ಮಿಂದಾಗಿ'.ದೊಡ್ಡ ಸಮಸ್ಯೆಯಾಗಿದೆ.ಮಾತಾಡಿದ್ರೆ ನಾಳೆ ಅದೂ ತಪ್ಪಾಗುತ್ತೆ. ಜನ ಯಾರೂ ಏನೂ ಹೇಳಲ್ಲ.ನಿಮ್ಮದೇ ತೊಂದರೆ ಅಂತ ಹೇಳಿದ್ರು.ಅದಕ್ಕೆ ಕಾರಣವೂ ಇತ್ತು.

ಮೊನ್ನೆ ಅಘೋಷಿತವಾದ ಬಂದ್ ಆದ ಬಳಿಕ ಅಲ್ಯಾವುದೋ ಪ್ರಾರ್ಥನಾ ಮಂದಿರದ ನಾಮಫಲಕಕ್ಕೆ ಇನ್ಯಾರೋ ಹಾನಿ ಮಾಡಿದ್ದರು. ಈ ಸುದ್ದಿ ಇಡೀ ಊರಿಗೆ ಹಬ್ಬಿತು. ದೂರ ಮಂಗಳೂರಿಗೂ ಈ ಸುದ್ದಿ ಹೋಯಿತು.ಅಲ್ಲಿಂದ ಒಂದೆರಡು ಮೀಡಿಯಾವೂ ಹೊರಟಿತು. ಇದೆಲ್ಲಾ ಗೊತ್ತಾದ ಕೂಡಲೇ, ಎಲ್ಲಾ ಅಧಿಕಾರಿಗಳು , ಎಲ್ಲಾ ಮೀಡಿಯಾದವರಿಗೂ ರಿಕ್ವೆಸ್ಟ್ ಮಾಡಿದರು , ಈಗ ಪ್ಲೀಸ್ . ,.ಇದನ್ನು ಮಾಡ್ಬೇಡಿ , ಊರಿಗೇ ಕೊಳ್ಳಿ ಹಚ್ಚೋ ಕೆಲಸ ಬೇಡ ಅಂತಲೂ ವಿನಂತಿ ಮಾಡಿದ್ರು. ಆದ್ರೆ ಇದ್ಯಾವುದನ್ನೂ ಕ್ಯಾರೇ ಮಾಡದೇ ಅವರು ಆ ಸ್ಪಾಟ್ ಕಡೆಗೆ ಹೊರಟ್ರು. ಆಗಲೇ ಹಾನಿಯಾದ ಫಲಕವನ್ನು ಪೊಲೀಸರೇ ದುರಸ್ಥಿ ಮಾಡಿ ಸಂಭ್ಯಾವ್ಯ ಎಲ್ಲಾ ಅಶಾಂತಿಯ್ನನೂ ತಪ್ಪಿಸಿದ್ರು. ಆದ್ರೂ ಈ ಮೀಡಿಯಾಗಳು ಅಲ್ಲಿಗೆ ಹೋಗಿ ಸುದ್ದಿಯನ್ನೂ ಮಾಡಿದವು. ಅಧಿಕಾರಿಗಳು ಮಾಡಿದ ವಿನಂತಿ ಎಲ್ಲವೂ ಗಾಳಿಗೆ ತೂರಿ ಹೋಯಿತು. ಉಳಿದೆಲ್ಲಾ ಸಂದರ್ಭಗಳಲ್ಲಿ ಮೀಡಿಯಾದ ಎಲ್ಲಾ ಬೇಡಿಕೆಗಳಿಗೆ ಸ್ಪಂದಿಸುವ ಅಧಿಕಾರಿಗಳು ಊರಿಗೆ ಕೊಳ್ಳಿ ಹಚ್ಚೋ ಕೆಲಸ ಮಾಡಬೇಡಿ ಎಂದಾಗಲೂ ಅದನ್ನು ಕ್ಯಾರೇ ಮಾಡಿಲ್ಲ. ಹಾಗಾಗಿ ಮೀಡಿಯಾಗಳಿಗೆ ಬೇಕಾದ್ದು ಏನು ಎಂಬುದು ಆ ಅಧಿಕಾರಿಗಳ ಪ್ರಶ್ನೆ. ಇದರಿಂದ ಅವರು ಸಾಧಿಸಿದ್ದಾದರೂ ಏನು?.ಅಲ್ಲಿ ನಾಮಫಲಕಕ್ಕೆ ಹಾನಿ ಮಾಡಿದ್ದು ಸರ್ವಥಾ ಒಪ್ಪುವ ಕೆಲಸವಲ್ಲ.ಆದ್ರೆ ಆ ಸಂದರ್ಭದಲ್ಲಿ ಅದು ಸುದ್ದಿಯಾಗದೇ ಇರುವುದು ಒಳಿತು ಅಷ್ಟೆ. ಇದೊಂದೇ ಅಲ್ಲ ಅಂತಹದ್ದೇ ಎಷ್ಟೋ ಉದಾಹರಣೆ ಇದ್ದೇ ಇತ್ತು. ಹಾಗಂತ ಯಾವಾಗಲೂ ಅಧಿಕಾರಿಗಳ ಪರ ಇರಬೇಕು ಅಂತಲ್ಲ. ಕೆಲವೊಂದು ಸೂಕ್ಷ್ಮ ಪರಿಸ್ಥಿತಿಗಳಲ್ಲಿ ಮೀಡಿಯಾಗಳಿಗೂ ಜವಾಬ್ದಾರಿ ಇಲ್ಲವೇ ಎಂಬುದು ಇದರ ಒಳನೋಟ ಅಷ್ಟೆ.

ಅವೆಲ್ಲಾ ಇಲ್ಲಿಯ ಕತೆಯಾಯಿತು.

ಈಗಂತೂ ಇಡೀ ವಿಶ್ವವೇ ಬೆರಗುಗಣ್ಣಿನಿಂದ ನೋಡುತ್ತಿರುವ ಕಾಮನ್‌ವೆಲ್ತ್ ಕೀಡಾಕೂಟ ನಮ್ಮ ದೇಶದಲ್ಲಿ ನಡೀತಾ ಇದೆ. ಕಳೆದ ಸುಮಾರು ಆರುಮುಕ್ಕಾಲು ವರ್ಷಗಳಿಂದ ಅದಕ್ಕಾಗಿ ಕೆಲಸ ಮಾಡಿ ಈಗ ನಮ್ಮ ದೇಶದಲ್ಲಿ 19 ನೇ ಕಾಮನ್‌ವೆಲ್ತ್ ಕ್ರೀಡಾಕೂಟ ನಡೀತಾ ಇದೆ.ಇದರ ಸಿದ್ದತೆ , ವ್ಯವಸ್ಥೆ , ಅಚ್ಚುಕಟ್ಟು ಹೀಗೇ ಎಲ್ಲವನ್ನೂ ನಾವಲ್ಲ ದೇಶಕ್ಕೆ ಬಂದ ಕ್ರೀಡಾಪಟುಗಳು , ಗಣ್ಯಾತಿ ಗಣ್ಯರು ಹೇಳಿಹೊಗಳಿದ್ದಾರೆ.ಇದೆಲ್ಲವೂ ನಮ್ಮ ಕೆಲ ಪತ್ರಿಕೆಗಳಲ್ಲಿ ಬಂದಿದೆ.ಆದರೆ ನಮ್ಮವರ್ ‍ಯಾರು ಹೇಳಿಕೊಂಡಿಲ್ಲ. ಭೇಷ್ ಅನ್ನಲೇ ಇಲ್ಲ. ನಮ್ಮ ಸಿದ್ದತೆ ಹೀಗಿದೆ ಅಂತ ವಿದೇಕ್ಕೆ ಹೇಳಲೇ ಇಲ್ಲ. ನಮ್ಮ ಕ್ರೀಡಾ ಪಟುಗಳಿಗೆ ಇಂತಹದ್ದು ತಿಂದರೆ ,ಕುಡಿದರೆ ಒಳ್ಳೆತಯದಲ್ಲ ಇದು ಉದೀಪನಾ ಔಷಧಿಯಾಗುತ್ತದೆ ಅನ್ನಲೂ ಇಲ್ಲ , ಆದರೆ ವಿದೇಶದ ಒಂದು ಸಂಸ್ಥೆ ಕುಟುಕು ಕಾರ್ಯಾಚರಣೆ ನಡೆಸಿ ಎಲ್ಲವೂ ಅವ್ಯವಸ್ಥೆ ಎನ್ನುತ್ತದೆ , ನಾವೆಲ್ಲರೂ ಅದನ್ನು ಹೌದು ಎನ್ನುತ್ತೇವೆ. ಅದೇ ದೆಹಲಿಯ ಸೇತುವೆಯೊಂದು ಕೆಲವೇ ದಿನಕ್ಕೆ ಮುಂದೆ ಕುಸಿಯುತ್ತದೆ.ಆದರೆ ಮತ್ತೆ 10 ದಿನದಲ್ಲಿ ಅದು ಸಂಚಾರಕ್ಕೆ ಸಿದ್ದವಾಗುತ್ತದೆ.ನಮ್ಮ ಸೈನಿಕ ಬಳಗದ ಸಾಧನೆ ಅದು. ಆದರೆ ಯಾರೂ ಹೇಳಿಲ್ಲ.ಅಂತಹದ್ದೊಂದು ಸಾಧನೆ ಆಗಿದೆ ಅಂತ ಗೊತ್ತೇ ಇಲ್ಲ , ಲೈವ್ ಅಂತೂ ಇಲ್ಲವೇ ಇಲ್ಲ. ಇದೆಲ್ಲವೂ ನಮ್ಮಲ್ಲಿ ಮಾತ್ರಾ ಸಾಧ್ಯ.

ಹಾಗಾಗಿ ಈ ಜಗವೇ ಬದಲಾದರೂ ನಾವು ಬದಲಾಗೋದಿಕ್ಕೆ ಇದೆಯಾ?.

ಯಾಕೆಂದ್ರೆ ಇಲ್ಲಿ ಒಂದು ವಿಚಾರ ಹೇಳಿದಾಗಲೂ ಅದರ ನಡುವೆ ಜಾತಿ ಸಂಘಟನೆಗಳು , ಇನ್ನೊಂದು ಸಂಘಗಳು ಬಂದು , ಅದನ್ನು ಇನ್ನೊಂದು ರೀತಿಯಲ್ಲಿ ಪ್ರಚಾರ ಮಾಡಿ ಬಿಡುವ ಮನಸ್ಥಿತಿ ಇಲ್ಲಿಯ ಜನರದ್ದು.ಇನ್ನು ಅದೇ ಸಂಘಟನೆಯ ಅಡಿಯಲ್ಲಿ ಇನ್ನೊಬ್ಬನನ್ನು ತುಳಿದು ಸಂತಸ ಪಡೋ ಮಂದಿಯೇ ಇಲ್ಲಿದ್ದಾರೆ , ವಿಷಯವನ್ನು ಪರಾಮರ್ಶಿಸುವ ಗೋಜಿಗೇ ಹೋಗುವುದಿಲ್ಲ.ಒಳ್ಳೆಯದನ್ನು , ಸತ್ಯವನ್ನು ಒಪ್ಪಿಕೊಳ್ಳೋದೇ ಇಲ್ಲ.ಎಲ್ಲವೂ ನಮ್ಮ ಮೂಗಿನ ನೇರಕ್ಕೆ.

ಹೋ . . ಅಲ್ಲಿ ಆತ ಸರಕಾರದ ಆಸ್ಥಿ ಕಬಳಿಸಿದ ಅಂತ ಬೊಬ್ಬಿಡುತ್ತಾರೆ , ಯಾಕೆ ಗೊತ್ತಾ ?,ಇವನಿಗೆ ಮಾಡಲಾಗಿಲ್ಲವಲ್ಲಾ ಎಂಬ ಹೊಟ್ಟೆಕಿಚ್ಚಿನಿಂದ. ಇದಲ್ವಾ ನಮ್ಮಲಿ ನಡೀತಾ ಇರೋದು .?. ಆತ್ಮವಿಮರ್ಶೆಗಾಗಿ ಅಷ್ಟೆ.

02 ಅಕ್ಟೋಬರ್ 2010

"ಚೊಕ್ಕ"ಡಿಗೆ ಕೊಡುಗೆ . .

ಕೆಲವು ಸಂಘಟನೆಗಳಿವೆ ಪ್ರಚಾರವಿಲ್ಲದೆ ಕಾಯ್ರಕ್ರಮವೇ ಇಲ್ಲ. ಆ ನಂತ್ರ ಆ ಯೋಜನೆ ಬಿದ್ದು ಹೋದ್ರೂ ಪರವಾಗಿಲ್ಲ. ಅಂತೂ ಪ್ರಚಾರ ಬೇಕು. ಅಲ್ಲಿಗೆ ಕೊಡುಗೆ , ಇಲ್ಲಿಗೆ ಕೊಡುಗೆ , ಅಲ್ಲಿ ಶಾಲೆ ,ಇಲ್ಲಿ ಗೋಶಾಲೆ ಹೀಗೇ. . ಅದಕ್ಕೆಲ್ಲಾ ಪ್ರಚಾರ ಬೇಕು. ಆದ್ರೆ ಪ್ರಚಾರ ಆದ ಮೇಲೆ ಏನು ಕತೆ? ಗೊತ್ತಿಲ್ಲ. ಆದರೆ ಅಂತಹದ್ದರಲ್ಲಿ ಇವತ್ತು ನನ್ನ ಸಂಬಂಧಿಕರೊಬ್ಬರು ಒಂದು ಕಾರ್ಯಕ್ರಮವಿದೆ ನೀನು ಬಾ ಅಂದಿದ್ದರು. ಸುಮ್ಮನೆ ಹೋಗಿದ್ದೆ. .ಹೋಗಿ ನೋಡಿದಾಗ ಅಲ್ಲಿ ಒಂದಷ್ಟು ಜನ ಇದ್ರು. ಆ ಬಳಿಕ ಮಾತನಾಡಿದಾಗ ವಿಚಾರ ತಿಳೀತು.ಇಲ್ಲಿ ಯಾವೊಬ್ಬ ಮೀಡಿಯಾದವರಿಗೂ ಹೇಳಿರಲಿಲ್ಲ. ಅದರ ಪಾಠ ಇಲ್ಲಿದೆ.

* * * * * * * * * * * * * * * * * * * * * * *



ರಾಜ್ಯದ ವಿವಿದ ಕಡೆ ಗಾಂಧಿ ಜಯಂತಿ ಕಾರ್ಯಕ್ರಮ ನಡೆಯುತ್ತಿರಬೇಕಾದರೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಹಳ್ಳಿ ಪ್ರದೇಶದ ಚೊಕ್ಕಾಡಿಯ ಕಾಲನಿಯೊಂದರಲ್ಲಿ ತೀರಾ ಭಿನ್ನವಾಗಿ ಗಾಂಧಿಜಯಂತಿ ನಡೆಯುತ್ತಿತ್ತು.ಆದರೆ ಇದಕ್ಕೆ ಅಂತಹದ್ದನೂ ಪ್ರಚಾರವಿರಲೇ ಇಲ್ಲ. ಅದು ಬಿಡಿ, ಆಮಂತ್ರಣ ಪತ್ರಿಕೆಯೂ ಮುದ್ರಣಗೊಂಡಿರಲಿಲ್ಲ.ಅಲ್ಲಿದ್ದವರೇ ಉದ್ಘಾಟಕರು , ಅಲ್ಲಿಗೆ ಬಂದವರೇ ಗೆಸ್ಟ್‌ಗಳು. ಆ ಕಾಲನಿ ಜನರೇ ಸಭಿಕರು.ಅದೇನು ಅಂತಹ ವಿಶಿಷ್ಠ ಕಾರ್ಯಕ್ರಮ?. ಬೇರೇನೂ ಅಲ್ಲ ಕಾಲನಿಗೆ ಉಚಿತವಾಗಿ ಶೌಚಾಲಯದ ವಿತರಣೆ.






ಅದು ಚೊಕ್ಕಾಡಿಯ ಅಕ್ಕೋಜಿಪಾಲ್ ಕಾಲನಿ.ಅಲ್ಲಿ 22 ಮನೆಗಳಿವೆ.ಇದುವರೆಗೆ ಈ ಇಡೀ ಕಾಲನಿಗೆ ಎರಡೇ ಎರಡು ಶೌಚಾಲಯ ಇತ್ತು.ಈಗ ಎಲ್ಲಾ ಮನೆಗಳಿಗೆ ಒಂದೊಂದು ಶೌಚಾಲಯ ಒದಗಿದೆ.ಇದಕ್ಕೆ ಕಾರಣವಾದ್ದು ಕರ್ನಾಟಕದ ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳು.ಈ ಎಲ್ಲಾ ಶೌಚಾಲಯಗಳನ್ನು ಗಾಂಧಿಜಯಂತಿಯಂದು ಕಾಲನಿ ಜನರಿಗೆ ಹಸ್ತಾಂತರಿಸಿದರು.


ಕರ್ನಾಟಕದ ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳ ವತಿಯಿಂದ ಸತ್ಯಸಾಯಿಬಾಬಾ ಅವರ ೮೮ ನೇ ಹುಟ್ಟುಹಬ್ಬದ ಪ್ರಯುಕ್ತ ಈ ಯೋಜನೆ ಹಮ್ಮಿಕೊಳ್ಳಲಾಗಿದೆ. ಸಾಯಿಬಾಬಾ ಅವರ ೮೮ ನೇ ಹುಟ್ಟುಹಬ್ಬದ ಅಂಗವಾಗಿ ಗ್ರಾಮೀಣ ನೈರ್ಮಲ್ಯ ಯೋಜನೆಗಾಗಿ ಸತ್ಯಸಾಯಿ ಸೇವಾ ಸಮಿತಿಯು ರಾಜ್ಯದಲ್ಲಿ ೧೦೮ ಗ್ರಾಮಗಳನ್ನು ದತ್ತು ತೆಗೆದುಕೊಂಡಿದ್ದು ಅವುಗಳ ಪೈಕಿ ಚೊಕ್ಕಾಡಿಯಲ್ಲಿ ಪ್ರಥಮವಾಗಿ ಸತ್ಯಸಾಯಿ ಗ್ರಾಮೀಣ ಸಮಗ್ರತಾ ಯೋಜನೆಯಡಿಯಲ್ಲಿ ೨೨ ಶೌಚಾಲಯಗಳನ್ನು ಸುಮಾರು 2 ಲಕ್ಷ ಸಾವಿರ ರುಪಾಯಿ ವೆಚ್ಚದಲ್ಲಿ ನಿರ್ಮಿಸಿತ್ತು. ಈ ಯೋಜನೆಗೆ ರಾಜ್ಯದ ಸತ್ಯಸಾಯಿ ಸೇವಾ ಟ್ರಸ್ಟ್ 1.5 ಲಕ್ಷ ರುಪಾಯಿ ನೀಡಿದ್ದು ಜಿಲ್ಲಾ ಹಾಗೂ ಚೊಕ್ಕಾಡಿಯ ಸತ್ಯಸಾಯಿ ಭಕ್ತರು ಉಳಿದ ವೆಚ್ಚವನ್ನು ಭರಿಸಿ ಅಕ್ಕೋಜಿ ಪಾಲ್ ಕಾಲನಿಯಲ್ಲಿ ಶೌಚಾಲಯವನ್ನು ನಿರ್ಮಿಸಿದ್ದಾರೆ.ಒಂದು ಶೌಚಾಲಯಕ್ಕೆ ೯ ಸಾವಿರ ರುಪಾಯಿ ವೆಚ್ಚ ತಗಲಿದ್ದು ಇದಕ್ಕೆ ಬಳಸಿದ ಉತ್ಪನ್ನಗಳೆಲ್ಲವೂ ಪರಿಸರ ಸ್ನೇಹಿಯಾಗಿದೆ. ಈ ಯೋಜನೆಯು ಮುಂದೆ ಎಲ್ಲಾ ಜಿಲ್ಲೆಗಳಿಗೂ ವಿಸ್ತರಣೆಯಾಗಲಿದೆ. ಈಗಾಗಲೇ ಈ ಸೇವಾ ಸಂಸ್ಥೆಯು ಕುಡಿಯುವ ನೀರಿನ ಯೋಜನೆ , ವಸತಿ ಸೇರಿದಂತೆ ಇನ್ನಿತರ ಯೋಜನೆಗಳನ್ನು ಹಮ್ಮಿಕೊಂಡಿದೆ. ದೇಶದಾದ್ಯಂತ ಈ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ.


ಸುಳ್ಯದ ಚೊಕ್ಕಾಡಿಯ ಅಕ್ಕೋಜಿ ಪಾಲ್ ಕಾಲನಿಯಲ್ಲಿ ಇದುವರೆಗೆ ಶೌಚಾಲಯದ ವ್ಯವಸ್ಥೆ ಇಲ್ದದೆ ಮಹಿಳೆಯರು ಹಾಗೂ ಮಕ್ಕಳು ತೀರಾ ತೊಂದರೆ ಪಡುತ್ತಿದ್ದರು. ಸ್ಥಳೀಯ ಪಂಚಾಯತ್ ವತಿಯಿಂದಲೂ ಯಾವುದೇ ವ್ಯವಸ್ಥೆ ಆಗಿರಲಿಲ್ಲ.ಈಗ ಸತ್ಯಸಾಯಿ ಸೇವಾ ಸಂಸ್ಥೆಯು ತನ್ನ ಯೋಜನೆಯ ಮೂಲಕ ಶೌಚಾಲಯ ಹಸ್ತಾಂತರಿಸಿದ್ದು ಕಾಲನಿ ಜನರಿಗೆ ಖುಷಿ ನೀಡಿದೆ.ಮುಂದೆ ಈ ಶೌಚಾಲಯವನ್ನು ಚೆನ್ನಾಗಿ ನಿರ್ವಹಣೆ ಮಾಡುವುದಾಗಿ ಅವರು ಹೇಳುತ್ತಾರೆ.

ಸರಕಾರ ವಿವಿದ ಯೋಜನೆಗಳನ್ನು ಹಮ್ಮಿಕೊಂಡರೂ ಅದು ಜಾರಿಹಂತದಲ್ಲಿ ಅನೇಕ ಬಾರಿ ಎಡವಿಕೊಳ್ಳುತ್ತದೆ.ಆದರೆ ಇಂತಹ ಸ್ವಯಂಸೇವಾ ಸಂಸ್ಥೆಗಳು ಹಾಕಿಕೊಳ್ಳುವ ಯೋಜನೆಗಳು ಅತ್ಯಂತ ಪರಿಣಾಮಜಕಾರಿಯಾಗಿ ಯಶಸ್ವಿತಾಗಿ ಜಾರಿಗೊಳ್ಳುತ್ತವೆ ಮತ್ತು ಬಡಜನರನ್ನು ತಲಪುವುದರಲ್ಲಿ ಸಂದೇಹವೇ ಇಲ್ಲ.ಹೀಗಾಗಿ ಸರಕಾರದ ಯೋಜನೆಗಳನ್ನು ಇಂತಹ ಸಂಸ್ಥೆಗಳ ಮೂಲಕ ಜಾರಿ ಮಾಡುವಲ್ಲಿ ಚಿಂತಿಸಿದರೆ ಉತ್ತಮವಲ್ಲವೇ?. ಸತ್ಯಸಾಯಿ ಸೇವಾ ಸಂಸ್ಥೆಗಳು ,ವಿದ್ಯಾಸಂಸ್ಥೆ, ಆಧ್ಯಾತ್ಮಿಕ ಹಾಗೂ ಇನ್ನಿತರ ಸೇವೆಗಳ ಮೂಲಕ ಈಗಾಗಲೇ ಅನೇಕ ಬಡಜನರನ್ನು ತಲಪಿದೆ.ಈಗ ಮೂಲಭೂತ ವ್ಯವಸ್ಥೆಗಳ ಮೂಲಕವೂ ಜನರನ್ನು ತಲಪುತ್ತಿರುವುದು ಉತ್ತಮ ಬೆಳವಣಿಗೆ ಅಲ್ಲವೇ . .?.

30 ಸೆಪ್ಟೆಂಬರ್ 2010

ಕೃಷಿಕನ ಆತ್ಮಹತ್ಯೆ . . .

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೃಷಿಕರ ಆತ್ಮಹತ್ಯೆ ಮುಂದುವರಿದೆ.ಕಳೆದ ವಾರವಷ್ಟೇ ಸುಳ್ಯದಲ್ಲಿ ಅಡಿಕೆ ಬೆಳೆಗಾರನೊಬ್ಬ ಆತ್ಮಹತ್ಯೆ ಮಾಡಿದ ಸಂಗತಿ ಹಸಿಯಾಗಿರುವಾಗಲೇ ಸುಳ್ಯದ ಎಡಮಂಗದಲ್ಲಿ ಇನ್ನೊಬ್ಬ ಅಡಿಕೆ ಬೆಳೆಗಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಕುರುಡು ಸರಕಾರಕ್ಕೆ ಇದಾದರೂ ಕೇಳಿಸೀತೇ ?.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಎಡಮಂಗಲದಲ್ಲಿ ಮೂರು ಎಕ್ರೆ ಜಾಗ ಹೊಂದಿರೋ ಒಬ್ಬ ಸಾಮಾನ್ಯ ಕೃಷಿಕ ಶೇಷಪ್ಪ ಗೌಡ. ಇರೋ ಭೂಮಿಯಲ್ಲಿ ಒಂದೂವರೆ ಎಕರೆ ಅಡಿಕೆ ತೋಟ ಇದೆ.ತನ್ನ ಕೃಷಿ ಅಭಿವೃದ್ದಿ ಮಾಡುವುದಕ್ಕಾಗಿ 2006 - 07 ನೇ ಸಾಲಿನಲ್ಲಿ ಎಡಮಂಗಲದ ಸಹಕಾರಿ ಬ್ಯಾಂಕ್‌ನಿಂದ 4.90 ಲಕ್ಷ ಕೃಷಿ ಸಾಲ ಮಾಡಿದ್ದರು.ದುರದೃಷ್ಠವಶಾತ್ ಆ ವರ್ಷದಿಂದಲೇ ಅಡಿಕೆ ಬೆಲೆ ಕುಸಿಯಲಾರಂಭಿಸಿತು.ಸಾಲ ಮರುಪಾವತಿ ಕಷ್ಠವಾಯಿತು.ಆ ಸಾಲವನ್ನು ತೀರಿಸುವುದಕ್ಕೆ ಇನ್ನೊಂದು ಸಾಲ ಮಾಡಿದ.ಹೀಗೇ ಸಾಲ ಬೆಳೆದು 7 ಲಕ್ಷ ತಲಪಿತು.ಈಗ ಅದರ ಬಡ್ಡಿ ಸೇರಿ 11 ಲಕ್ಞ ರುಪಾಯಿ ಆಗಿದೆ. ಈ ಸಾಲವನ್ನು ಕೂಡಲೇ ಮರುಪಾವತಿ ಮಾಡಬೇಕೆಂದು ಸಹಕಾರಿ ಬ್ಯಾಂಕ್ ಶೇಷಪ್ಪ ಗೌಡರಿಗೆ ನೋಟೀಸ್ ಮಾಡಿತು.ಭೂಮಿ ಹರಾಜಿಗೂ ಮುಂದಾಯಿತು.ಡಿಕ್ರಿಯೂ ಆಯಿತು.ಈ ವರ್ಷ ಸಾಲ ಮರುಪಾವತಿ ಮಾಡಬೇಕೆಂಬ ನಿರ್ಧಾರಕ್ಕೂ ಬಂದಿದ್ದರು.ಆದ್ರೆ ಅಡಿಕೆ ಕೊಳೆ ರೋಗದಿಂದ ಬೆಳೆಯೂ ನಷ್ಠವಾಯಿತು. ಇದರಿಂದಾಗಿ ಮಾನಸಿಕವಾಗಿ ನೊಂದ ಶೇಷಪ್ಪ ಗೌಡ ಎರಡು ದಿನದ ಹಿಂದೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿದರು.ಈಗ ಮನೆಯಲ್ಲಿ ಪತ್ನಿ ಅವರ ಇಬ್ಬರು ಪುತ್ರರು ಶೇಷಪ್ಪ ಗೌಡರ ಸಾವಿನ ಚಿಂತೆಯಲ್ಲಿದ್ದಾರೆ.ಈಗ ಸಾಲದ ಹೊರೆ ಇವರ ಮೇಲೆ ಬಿದ್ದಿದೆ.

ಕಳೆದ ವಾರವಷ್ಟೇ ಸುಳ್ಯದ ಸಂಪಾಜೆಯಲ್ಲಿ ಅಡಿಕೆ ಬೆಳೆಗಾರನೊಬ್ಬ ಅಡಿಕೆ ಹಳದಿ ರೋಗದಿಂದ ಕೃಷಿ ನಾಶವಾಗಿ ಕೃಷಿಗೆ ಮಾಡಿದ ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದ.ಇದೇ ರೀತಿಯಾಗಿ ಇತ್ತೀಚಿನ ವರ್ಷಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು ೧೫ ಕೃಷಿಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ರೈತ ಸಂಘ ಹೇಳಿದೆ. ಕಳೆದ ಎರಡು ವರ್ಷದಿಂದ ಅಡಿಕೆ ಬೆಲೆ ಕುಸಿತವೇ ಇದಕ್ಕೆಲ್ಲಾ ಕಾರಣವಾಗಿರಬಹುದಾ?. ಅಂತೂ ಕೃಷಿಕರ ಆತ್ಮಹತ್ಯೆ ಮುಂದುವರಿಯುತ್ತಿದೆ ಅನ್ನೋದು ದು:ಖದ ಸಂಗತಿ.

ಒಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಕೃಷಿಕರ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ. ಆದುದರಿಂದ ಸರಕಾರ ಈ ಬಗ್ಗೆ ಎಚ್ಚೆತ್ತುಕೊಳ್ಳದೇ ಹೋದಲ್ಲಿ ಮುಂದಿನ ದಿನ ಇನ್ನಷ್ಟು ಪ್ರಕರಣಗಳು ದಾಖಲಾದರೂ ಅಚ್ಚರಿ ಇಲ್ಲ.

28 ಸೆಪ್ಟೆಂಬರ್ 2010

ಕೆಂಪು ಸಂಕ -2

ಕೆಂಪುಸಂಕವು ಮಳೆಯ ಅಬ್ಬರಕ್ಕೆ ಕಾಡಿನಿಂದ ಹರಿದು ಬರೋ ನೀರಿನಿಂದಾಗಿ ತುಂಬಿ ಹರಿಯುತ್ತಿತ್ತು.ಕಾಡಿನ ನಡುವಿನ ಆ ಹಾಳು ಡಾಮರು ರಸ್ತೆಯಲ್ಲಿ ಇರೋ ಈ ಸಂಕದ ಸುತ್ತಲೂ ಜೀರುಂಡೆಗಳ ಸದ್ದು ಹಾಗೆಯೇ ಇತ್ತು.ಅದೆಷ್ಟೂ ವಾಹನಗಳು ಆ ದಾರಿಯಾಗಿ ಸಾಗುತ್ತಲೇ ಇತ್ತು. ಅದರೊಳಗಿನ ಜನ ಮಾತ್ರಾ ಯಾವಾಗಲೂ ಭಯದಿಂದ ಸಾಗುತ್ತಲೇ ಇದ್ದರು.ಒಂದೊಂದು ವಿಚಾರ ನೆನಪು ಮಾಡುತ್ತಲೇ ಹೋಗುವಾಗಲೂ ಮತ್ತ ಮತ್ತೆ ಆ ಸಂಕ ನೆನೆಪಾಗುತ್ತಲೇ ಇತ್ತು.ಅಂತೂ ಕಮಿಲದಲ್ಲಿ ಮಾತೆತ್ತಿದರೆ ಅದೇ ಕೆಂಪು ಸಂಕದ ಸುದ್ದಿ. ಮೊನ್ನೆ ಅಲ್ಲಿ ಹೋಗೋವಾಗ ಅವರಿಗೆ ಹೀಗಾಗಿದೆಯಂತೆ ಹೌದಾ. .?.

* * * * * * * * * * * * * * * *

ಮೊನ್ನೆ ಗಂಗಾ ಭಟ್ಟರು ಮತ್ತು ಚಂದ್ರಾ ಭಟ್ಟರು ಪಂಜಕ್ಕೆ ಹೋಗುವಾಗ ಕೆಂಪು ಸಂಕದಲ್ಲಿ ನಡೆದ ಸಂಗತಿಯನ್ನು ಅವರು ಕಮಿಲದಲ್ಲಿ ಹೇಳಿರಲಿಲ್ಲ.ಆದರೆ ಅವರಿಗಾದ ಅನುಭವವನ್ನು ಅವರು ಮನೆಯಲ್ಲಿ ಬಂದು ಹೇಳಿದ್ದರು.ಮನೆಗೆ ಕೆಲಸಕ್ಕೆ ಬರೋ ಗಿರಿಯಪ್ಪ ,ಚಂದಪ್ಪನಲ್ಲೂ ಹೇಳಿದ್ದರು.ಅದು ಸಾಕಿತ್ತು,ಇಡೀ ಕಮಿಲದಲ್ಲಿ ಅದೊಂದು ಸುದ್ದಿ ಎರಡು ದಿನಗಳ ಕಾಲ ಹರಿದಾಡುತ್ತಲೇ ಇತ್ತು.

ಈ ಸುದ್ದಿಯನ್ನು ಕೇಳಿದ ನಂತರ ಆ ಕಾಡು ದಾರಿಯಾಗಿ ಕಮಿಲದ ಕೆಲ ಜನರನ್ನು ಬಿಟ್ಟು ಮತ್ಯಾರು ಅಲ್ಲಿ ಹೋಗುತ್ತಿರಲಿಲ್ಲ. ಆದರೂ ಕೆಲವೊಮ್ಮೆ ಅನಿವಾರ್ಯ ಹೋಗಲೇಬೇಕು.ಮನೆಗೆ ಬೇಕಾದ ದಿನಸಿ ಸಾಮಾಗ್ರಿ ಕಮಿಲದಲ್ಲಿ ಸಿಗದು ಹಾಗಾಗಿ ಬಳ್ಪಕ್ಕೆ ಹೋಗಲೇ ಬೇಕು.ಆದ್ದರಿಂದ ಕೆಲ ಜನರು ಸೇರಿಕೊಂಡು ಜೊತೆಯಾಗಿ ಬಳ್ಪಕ್ಕೆ ಹೋಗುತ್ತಿದ್ದರು. ಅಂದು ಕಮಿಲದಿಂದ ವೆಂಕಪ್ಪ ,ನೀಲಪ್ಪ , ಲಕ್ಷ್ಮಣ ಜೊತೆಯಾಗಿ ಬಳ್ಪಕ್ಕೆ ದಿನಸಿ ಸಾಮಾಗ್ರಿಗೆ ಹೋದರು, ಕೆಲಸ ಬಿಡುವಾಗಲೇ ಅವತ್ತು ಹೊತ್ತಾಗಿತ್ತು, ಕತ್ತಲೂ ಆವರಿಸಿತ್ತು.ಅಂದು ಅಮವಾಸ್ಯೆಯೂ ಬೇರೆ.ತಿಂಗಳ ಬೆಳಕೂ ಇಲ್ಲ.ದನಿಗಳ ಕೈಯಿಂದ 100 ರುಪಾಯಿ ಪಡಕೊಂಡಿದ್ದ ಮೂವರೂ ಅಕ್ಕಿ ತರಲು ಹೊರಟಿದ್ದಾರೆ.ಆಗಂತೂ ಅಕ್ಕಿಗೆ ಇದ್ದದ್ದು 3 ರುಪಾಯಿ. ರಾತ್ರಿಯಾದರೂ ಅಂದು ಅಕ್ಕಿ ತರದೆ ಉಪಾಯವೂ ಇಲ್ಲ. ಅಂತೂ ಮೊಂಡು ಧೈರ್ಯದಲ್ಲಿ ಈ ಮೂವರು ಹೊರಟಿದ್ದರು.ಹಾಗೇ ಕಮಿಲದಿಂದ ಸಾಗಿದ ಅವರು ಕಾಡಲ್ಲಿ ಬೊಬ್ಬೆ ಹಾಕುತ್ತಾ ಹೆಜ್ಜೆ ಹಾಕಿದರು.ಕೆಂಪು ಸಂಕವೂ ಬಂತು, ದಾಟಿ ಮುಂದೆಯೂ ಹೋದರು.ಏನೂ, ಸದ್ದೂ ಇಲ್ಲ ,ಮಣ್ಣೂ ಇಲ್ಲ.ಇದೆಲ್ಲಾ ಸುಮ್ಮನೆ ಆ ಭಟ್ರು ರೈಲು ಬಿಟ್ಟದ್ದು ಅಂತ ಮಾತಾಡಿಕೊಂಡು ಮುಂದೆ ಸಾಗಿ ಬಳ್ಪ ತಲಪಿ ಅಕ್ಕಿ , ಚಾಪುಡಿ, ಸಕ್ರೆ ಹೀಗೆ ಎಲ್ಲಾ ಕಾಮತ್ತರ ಅಂಗಡಿಯಿಂದ ಪಡೆದುಕೊಂಡು ಹೊರಡಲು ಅನುವಾದರು.ಕೈಯಲ್ಲಿ ಚಿಕ್ಕದಾದ ಮಿಣಿ ಮಿಣಿ ಲೈಟು ಅಷ್ಟೆ. ಇದೆಲ್ಲಾ ಹಿಡಿದುಕೊಂಡು ಹೊರಡುವಾಗ ನೀಲಪ್ಪನಿಗೆ ಕೊಂಚ ಬಿಸಿ ಮಾಡಿದ್ರೆ ಹೇಗೆ ಅಂತ ಅನಿಸಿತು.ಉಳಿದ ಇಬ್ಬರಲ್ಲೂ ಕೇಳಿದ, ಹಾಗೇ ಮೂವರೂ ಅಲ್ಲೇ ಇದ್ದ ಗಡಂಗ್‌ಗೆ ಹೋಗಿ ಎರಡೆರಡು ತೊಟ್ಟೆ ಏರಿಸಿ ಬಳ್ಪದಿಂದ ಹೆಜ್ಜೆ ಹಾಕಿದರು.ವಾಹನ ಹೇಗೂ ವಿರಳ.ಆಗ ಕೆಲ ಶ್ರೀಮಂತರಲ್ಲಿ ಮಾತ್ರಾ ಜೀಪು ಇತ್ತು.ಅವರು ಯಾರನ್ನೂ ಹತ್ತಿಸಿಕೊಳ್ಳುತ್ತಿರಲಿಲ್ಲ.ಆದುದರಿಂದ ವಾಹನಕ್ಕಾಗಿ ಕಾದು ಪ್ರಯೋಜನವಿಲ್ಲ. ಹಾಗಾಗಿ ಮತ್ತೆ ಕಾಲ್ನಡಿಯೇ ಗತಿ. ಮೂವರೂ ಊರಿನ ಒಂದೊಂದು ಸಂಗತಿಗಳ ಬಗ್ಗೆ ಮಾತನಾಡುತ್ತಾ ಬಳ್ಪ ಕ್ರಾಸ್ ಕಳೆದು ಕಾಡಿನ ದಾರಿಯತ್ತ ಹೆಜ್ಜೆ ಹಾಕಿದವರು.ಅದರಲ್ಲಿ ವೆಂಕಪ್ಪನಿಗೆ ದೂರದಲ್ಲಿ ಏನೋ ಸುಳಿದಾಡಿದಂತೆ ಭಾಸವಾಯಿತು. ಆದ್ರೂ ಹೇಳಲಿಲ್ಲ. ಎಲ್ಲರಿಗೂ ಹೀಗೆ ಒಂದೊಂದು ಅನುಭವವಾಯಿತು.ಆದರೂ ಯಾರೂ ಯಾರಿಗೂ ಹೇಳಲಿಲ್ಲ. ಒಂದು ಕ್ಷಣ ಮಾತು ನಿಲ್ಲಿಸಿ ಹಾಗೆ ಮೌನ ಹೆಜ್ಜೆ ಬಿಟ್ಟರೆ ಏನೂ ಇಲ್ಲ.ನಿಧಾನವಾಗಿ ಹೆಜ್ಜೆ ಮುಂದಕ್ಕೆ ಮುಂದಕ್ಕೆ ಹೋಯಿತು.ಹೇಗೂ ಸ್ವಲ್ಪ ಏರಿಸಿದ್ದರ ಪವರ್ ಕೂಡಾ ಇದೆ.ಹಾಗೆ ಕೆಂಪು ಸಂಕದ ಬಳಿ ಸಾಗುತ್ತಿದ್ದಾಗ ನೀರಿ ಸದ್ದಿನ ಜೊತೆಗೆ ದೂರದಿಂದ ಅದೇನೋ ಅಳುತ್ತಿರುವ ಸದ್ದು ಕೇಳಿತು.ವೆಂಕಪ್ಪ ಅಂದ ಅದೇನೋ ಸದ್ದು . . ! , ನೀಲಪ್ಪ ಸದ್ದು ಆಲಿಸಿದ . . ! , ಲಕ್ಷ್ಮಣ ಹೌದು . . ಹೌದು . . ಅಂತ ಹೇಳಿದ. ಏನದು . ? ಏನದು . ? ಎಲ್ಲರಲ್ಲೂ ಪ್ರಶ್ನೆ ಮೂಡಿತು. ನೀಲಪ್ಪ ತಕ್ಷಣವೇ ಅದಕ್ಕಿಂತ ದೊಡ್ಡದಾದ ಒಂದು ಸದ್ದು ಮಾಡಿದ.ಅತ್ತ ಕಡೆಯಿಂದ ಆ ಸದ್ದು ಕಡಿಮೆ ಆಗಲಿಲ್ಲ.ಇನ್ನಷ್ಟು ಜೋರಾಗಿ ಕೇಳಿತು. ಮೂವರಲ್ಲಿ ಮುಖದಲ್ಲಿ ಬೆವರ ಹನಿಗಳು ಕಾಣಿಸಿಕೊಂಡಿತು. ಎರಡು ದಿನಗಳ ಹಿಂದ ಕಮಿದಲ್ಲಿ ಮಾತನಾಡಿದ ಎಲ್ಲಾ ಸಂಗತಿಗಳು ನೆನಪಾದವು.ಸದ್ದು ಕೇಳುತ್ತಲೇ ಇದೆ.ಸರಿಯಾಗಿ ಆಲಿಸಿದರೆ ಕು0ಯ್ . . ಅನ್ನೋ ಸದ್ದು ಅದು.ಲೈಟು ಬೇರೆ ಸರಿ ಇಲ್ಲ.ಮೂವರಿಗೂ ಎದೆ ಬಡಿತ ಹೆಚ್ಚಾಯಿತು.ಬಳ್ಪದಲ್ಲಿ ಏರಿಸಿದ್ದ 2 ಪ್ಯಾಕೇಟ್‌ನ ಪವರ್ ಕಡಿಮೆ ಆಯಿತೇನೋ ಅಂತ ಅನ್ನಿಸಿತು.ಆದರೂ ಬಿಡಲಿಲ್ಲ . . ಜೋರಾಗಿ ಬೊಬ್ಬೆ ಹಾಕಿದರು ಇವರು. ಲಕ್ಷ್ಮಣ ಮತ್ತು ವೆಂಕಪ್ಪ ಹೇಳಿದರು ಅದು “ರಣ”. ಬೇಡ ಬೊಬ್ಬೆ ಹಾಕೋದು ಬೇಡ ಅದೆಲ್ಲಾದರು ಇತ್ತ ಬಂದರೆ ನಮ್ಮ ರಕ್ತವನ್ನು ಹೀರೀತು,ಕೊಂದೇ ಹಾಕಿತು , ಅದು ಹಕ್ಕಿಯಂತೆ ಹಾರಾಡುತ್ತಾ ಬರುತ್ತದೆ, ಹಾಗಾಗಿ ಸದ್ದಿಲ್ಲದೆ ನಾವೊಮ್ಮೆ ಬೇಗ ಹೋಗೋಣ ಎನ್ನುತ್ತಾ ಕೆಂಪು ಸಂಕ ದಾಟಿ ಮುಂದೆ ಬಂದರು. ಬೇಗ ಬೇಗ ಕಮಿಲದತ್ತ ಹೆಜ್ಜೆ ಹಾಕಿದರು.ಅಂತೂ ಸದ್ದೂ ಕಡಿಮೆಯಾಯಿತು. ಹಾಗೆ ಅವರು ಕಮಿಲಕ್ಕೆ ತಲಪುವಾಗ ಗಂಟೆ ರಾತ್ರಿ 9.30.ಕಮಿಲಕ್ಕೆ ಬಂದಾಗ ಇದ್ದ ಅಂಗಡಿಗಳೆಲ್ಲಾ ಬಂದ್ ಆಗಿದ್ದವು. ಜನವೂ ಇರಲಿಲ್ಲ. ಹಾಗಾಗಿ ಬಸ್ ಸ್ಟ್ಯಾಂಡಲ್ಲಿ ಕುಳಿತ ಈ ಮೂವರು ಅಬ್ಬಾ ಎನ್ನುತ್ತಾ ಹಣೆಯನ್ನು ಒಮ್ಮೆ ಒರಸಿಕೊಂಡ ಅವರು ನಾಳೆ ಮಾತನಾಡೋಣ ಅಂತ ಮನೆ ಕಡೆಗೆ ಹೆಜ್ಜೆ ಹಾಕಿದರು. ಆಗಲೂ ಈ ಮೂವರಿಗೆ ಕಾಡುತ್ತಿದ್ದುದು ಅದೇನು ಕೆಂಪು ಸಂಕದ ಬಳಿಯಲ್ಲಿ ಕೇಳಿಬಂದ ಸದ್ದು. ಈ ಸುದ್ದಿಯೂ ಹಾಗೆ ಮರುದಿನ ಕಮಿಲದಲ್ಲಿ ಸುದ್ದಿಯಾಯಿತು.

ಇನ್ನಷ್ಟು ರೆಕ್ಕೆ ಪುಕ್ಕಗಳು ಅಲ್ಲಿ ಹುಟ್ಟಿಕೊಂಡವು.ಇನ್ನಷ್ಟು ಸಂಗತಿಗಳು ಕೆಂಪುಸಂಕದಲ್ಲಿ ನಡೆದವು.

22 ಸೆಪ್ಟೆಂಬರ್ 2010

ಒಂದು ಸಾಲು . .

ಒಂದು ವಿಚಾರವನ್ನು ಮಾತಾಡೋವಾಗ , ಹೇಳೋವಾಗ ಅದನ್ನು ಪರಾವರ್ಶಿಸಿ ಮಾತಾಡ್ಬೇಕಂತೆ. ಅದನ್ನು ಅನುಸರಿಸೋದು ಕೂಡಾ ಅಗತ್ಯ ಇದೆ.ಅದು ಸತ್ಯ ಅಂತ ಗೊತ್ತಿದ್ದೂ , ಹಾಗಲ್ಲ . . ಹಾಗಲ್ಲ ಅಂತ ಸಮರ್ಥಿಸೋದು ರಾಜಕಾರಣಿಗಳು ಮಾತ್ರಾ.ಈಗೀಗ ಆ ಸಾಲಿಗೆ ಎಲ್ರೂ ಸೇರಿಕೊಂಡಿದಾರೆ ಅಂತ ನನಗನ್ನಿಸಿದೆ.ಅದಕ್ಕೆ ಕಾರಣಗಳೂ ಇದೆ.

ಅಂದ ಹಾಗೆ ನಾನೊಂದು ಸಂಗತಿ ಹೇಳಬೇಕಿದೆ , ಲೋಕದ ಸಂಗತಿಯನ್ನು , ನಾನು ಹೋದಲ್ಲಿ ಕಂಡದ್ದನ್ನು ಮತ್ತು ಸ್ವತ: ಆದ ಅನುಭವವನ್ನು ಇಲ್ಲಿ ದಾಖಲಿಸಿದ್ದೆ.ಅದೆಷ್ಟೋ ಒಳ್ಳೇ ಸಂಗತಿಗಳು ಇತ್ತು ಅಂತ ನನ್ನ ಮಿತ್ರರು ಹೇಳಿದ್ದಾರೆ.ಆದ್ರೆ ಅದ್ಯಾವುದನ್ನೂ ನೋಡದೇ ಇರೋರು.ಈಗಂತೂ ನೋಡಿದ್ದಾರೆ.
ನೋಡಿದ್ದು ಮಾತ್ರವಲ್ಲ ಅಲ್ಲಿ - ಇಲ್ಲಿ ಪ್ರತಿಕ್ರಿಯಿಸಿದ್ದಾರೆ. ಅಷ್ಟೂ ಅಲ್ಲ ಅವರಲ್ಲಿ - ಇವರಲ್ಲಿ ಹೇಳಿಸಿದ್ದಾರೆ. ಪರವಾಗಿಲ್ಲ.ಹಾಗಂತೆ . . ಹೀಗಂತೆ ಅಂತಲೂ ಹೇಳಿದಾರೆ. ನಾನು ಆ ಬಗ್ಗೆ ಏನನ್ನೂ ಹೇಳುವುದಿಲ್ಲ. ಯಾಕೆಂದ್ರೆ ಮಾತಾಡೋದೇ ತಪ್ಪಾ ಏನೋ . ?.ಗೊತ್ತಿಲ್ಲ. ಅಷ್ಟಕ್ಕೂ ಕುಂಬಳಕಾಯಿ ಕದ್ದವನ ಹೆಗಲಲ್ಲಿ ಬೂದಿ ಇರುತ್ತಾ. .?.

19 ಸೆಪ್ಟೆಂಬರ್ 2010

“ದೇಶದ ರೈತರೆಲ್ಲಾ ಆಹಾರದ ಬಗ್ಗೆ ಚಿಂತಿಸಿದರೆ ಪರಿಹಾರ “




ನಮ್ಮೂರಲ್ಲಿ ಕಿಸಾನ್ ಸಂಘದ ವತಿಯಿಂದ ಬಲರಾಮ ಜಯಂತಿಯನ್ನು ಆಚರಿಸಲಾಗಿತ್ತು. ಕೃಷಿಕರದ್ದೇ ಸಂಘಟನೆಯಾದ ಕಿಸಾನ್ ಸಂಘವು ವಿವಿದ್ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಇಡೀ ದೇಶದಾದ್ಯಂತ ಈ ಸಂಘಟನೆ ಇದೆ. ದತ್ತೋಪಂತ್ ಜೀ ಇದರ ಸಂಸ್ಥಾಪಕ.

ಈ ಕಾರ್ಯಕ್ರಮದ ವರದಿ . .

ಶೇಕಡಾ ೭೦ರಷ್ಟು ರೈತರೇ ಇರುವ ಭಾರತದಲ್ಲಿ ಆಹಾರದ ಸಮಸ್ಯೆಯನ್ನು ಎದುರಿಸುವುದು ದೊಡ್ಡ ಸಮಸ್ಯೆಯಾಗದು.ಆದರೆ ಎಂದೂ ಆತಂಕದಲ್ಲಿರುವ ರೈತರಿಗೆ ಆತ್ಮವಿಶ್ವಾಸ ತುಂಬುವ ಕೆಲಸ ಆಗಬೇಕಾಗಿದೆ ಎಂದು ಭಾರತೀಯ ಕಿಸಾನ್ ಸಂಘದ ಕರ್ನಾಟಕ ದಕ್ಷಿಣ ಪ್ರಾಂತದ ಪ್ರದಾನ ಕಾರ್ಯದರ್ಶಿ ವೆಂಕಟೇಶ್ ಪಣಕನಹಳ್ಳಿ ಹೇಳಿದರು.

ಅವರು ಭಾರತೀಯ ಕಿಸಾನ್ ಸಂಘ ಗುತ್ತಿಗಾರು- ನಾಲ್ಕೂರು ನೇತೃತ್ವದಲ್ಲಿ ಸುಳ್ಯ ತಾಲೂಕು , ಬಾಳಿಲ-ಮುಪ್ಪೇರ್ಯ ಮತ್ತು ಎಣ್ಮೂರು ವಲಯದ ಭಾರತೀಯ ಕಿಸಾನ್ ಸಂಘದ ಸಹಭಾಗಿತ್ವದೊಂದಿಗೆ ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ವಠಾರದಲ್ಲಿ ಭಾನುವಾರ ನಡೆದ ಬಲರಾಮ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ನಮ್ಮ ದೇಶದಲ್ಲಿ ಎಲ್ಲಾ ಕ್ಷೇತ್ರಗಳಿಗೆ ಬೇಕಾದ ಪೂರ್ವ ಸಿದ್ದತೆಗಳು ನಡೆಯುತ್ತದೆ ಆದರೆ ಆಹಾರದ ಸಮಸ್ಯೆ ಎದುರಿಸಲು ಬೇಕಾದ ಪೂರ್ವ ಸಿದ್ದತೆಗಳು ನಡೆಯುವುದಿಲ್ಲ.ರೈತರನ್ನು ಕಡೆಗಣಿಸುವುದೇ ಹೊರತು ಅವರಿಗೆ ಆತ್ಮವಿಶ್ವಾಸ ತುಂಬುವ ಕೆಲಸಗಳು ನಡೆಯುತ್ತಿಲ್ಲ, ಆದರೆ ಕಿಸಾನ್ ಸಂಘವು ಇಂದು ಈ ಕೆಲಸ ಮಾಡುತ್ತಿದೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಅಡ್ಡಂತಡ್ಕ ದೇರಣ್ಣ ಗೌಡ ಕೃಷಿಕರು ಸಂಘಟಿತರಾಗಬೇಕು ಎಂದರು.ಇದೇ ವೇಳೆ ಮುಖ್ಯ ಅತಿಥಿಗಳಾಗಿದ್ದ ಕ್ಯಾಂಪ್ಕೋ ನಿರ್ದೇಶಕ ರಾಧಾಕೃಷ್ಣ ಕೋಟೆ ವೈದ್ಯನಾಥನ್ ವರದಿ ಬಗ್ಗೆ ಮಾತನಾಡಿ, ಸಹಕಾರಿ ಸಂಘಗಳ ಬಲವರ್ಧನೆಗಾಗಿ ಈ ವರದಿ ಜಾರಿಗೆ ಬಂದಿದೆ ಆದರೆ ವರದಿ ಜಾರಿ ಹಂತದಲ್ಲಿ ತಿರುಚುವಿಕೆಯ ಕೆಲಸ ನಡೆಯುತ್ತಿದೆ ಇದು ಆಗಬಾರದು ಎಂದ ಅವರು ಸಹಕಾರಿ ಬ್ಯಾಂಕ್‌ಗಳಿಗೆ ಆರ್ಥಿಕ ಬ್ಯಾಂಕ್ ಪ್ರತಿನಿಧಿಗಳ ಅಗತ್ಯವಿಲ್ಲ ಎಂದು ಅವರು ಹೇಳಿದರು.

ಕಾನ , ಬಾಣೆ ಮತ್ತು ಕುಮ್ಕಿ ಹಕ್ಕಿನ ಬಗ್ಗೆ ಮಾತನಾಡಿದ ರಾಮಚಂದ್ರ ಭಟ್ ನೆಕ್ಕಿಲ , ವರ್ಗ ಸ್ಥಳಕ್ಕೆ ಪೂರಕವಾಗಿ ಇರುವ ೧೦೦ ಗಜ ಸರಕಾರಿ ಸ್ಥಳವೇ ಕಾನ , ಬಾಣೆಗಳು. ಇತ್ತೀಚೆಗಿನವರೆಗೆ ಈ ಜಾಗಗಳಿಗೆ ಕೃಷಿಕರು ತೆರಿಗೆ ಕಟ್ಟುತ್ತಿದ್ದರು ಇದನ್ನು ಹಿಂದೆ ಪಡೆಯುವ ಹಕ್ಕು ಸರಕಾರಕ್ಕಿಲ್ಲ ಎಂದ ಅವರು ಕೈಗಾರಿಕೆ , ಮನೆ ನಿವೇಶನಗಳಿಗೆ ಭೂಮಿ ನೀಡುವ ಸರಕಾರವು ಕೃಷಿಕರಿಗೆ ಮಾತ್ರಾ ಭೂಮಿ ನೀಡದೇ ಇರುವುದು ವಿಪರ್ಯಾಸ ಎಂದರು.

ವೇದಿಕೆಯಲ್ಲಿ ಭಾರತೀಯ ಕಿಸಾನ್ ಸಂಘ ಗುತ್ತಿಗಾರು- ನಾಲ್ಕೂರು ವಲಯದ ಅಧ್ಯಕ್ಷ ಗಂಗಾಧರ ಭಟ್ ಪುಚ್ಚಪ್ಪಾಡಿ, ಭಾರತೀಯ ಕಿಸಾನ್ ಸಂಘ ಬಾಳಿಲ-ಮುಪ್ಪೇರ್ಯ ಅಧ್ಯಕ್ಷ ಕರ್ವಂಕಲ್ಲು ಗೋಪಾಲಕೃಷ್ಣ ಭಟ್ , ಭಾರತೀಯ ಕಿಸಾನ್ ಸಂಘ ಎಣ್ಮೂರು ವಲಯದ ಅಧ್ಯಕ್ಷ ರಮೇಶ್ ಕೋಟೆ , ಭಾರತೀಯ ಕಿಸಾನ್ ಸಂಘ ಸುಳ್ಯ ತಾಲೂಕು ಅಧ್ಯಕ್ಷ ಬಾಲಕೃಷ್ಣ ರೈ ಉಪಸ್ಥಿತರಿದ್ದರು.

ಭಾರತೀಯ ಕಿಸಾನ್ ಸಂಘ ಗುತ್ತಿಗಾರು- ನಾಲ್ಕೂರು ವಲಯದ ಅಧ್ಯಕ್ಷ ಗಂಗಾಧರ ಭಟ್ ಪುಚ್ಚಪ್ಪಾಡಿ ಸ್ವಾಗತಿಸಿದರು. ತಾಲೂಕಿನ ಭಾರತೀಯ ಕಿಸಾನ್ ಸಂಘಗಳ ವರದಿಯನ್ನು ಗೋಪಾಲಕೃಷ್ಣ ಭಟ್ ,ಬಾಳಿಲದ ವರದಿಯನ್ನು ರಾಜಾರಾಮ ಸಿ.ವಿ , ಎಣ್ಮೂರು ವಲಯದ ವರದಿಯನ್ನು ಲೋಕನಾಥ ರೈ ಹಾಗೂ ಗುತ್ತಿಗಾರು ವರದಿಯನ್ನು ಕುಮಾರಸ್ವಾಮಿ ಮೇಲ್ತೋಟ ವಾಚಿಸಿದರು. ಬಿಟ್ಟಿ ನೆಡುನೀಲಂ ನಿರೂಪಿಸಿದ ಕಾರ್ಯಕ್ರಮದಲ್ಲಿ ಭಾರತೀಯ ಕಿಸಾನ್ ಸಂಘ ಗುತ್ತಿಗಾರು- ನಾಲ್ಕೂರು ವಲಯದ ಕೋಶಾಧಿಕಾರಿ ಜತ್ತಪ್ಪ ಗೌಡ ವಂದಿಸಿದರು. sಕಾರ್ಯಕ್ರಮದಲ್ಲಿ ಕೃಷಿ ಯಂತ್ರಗಳ ಪ್ರಾತ್ಯಕ್ಷಿಕೆ ಮತ್ತು ಗುತ್ತಿಗಾರು ಆರೋಗ್ಯ ವೈದ್ಯಾಧಿಕಾರಿ ಡಾ.ನಂದಕುಮಾರ್ ಅವರಿಂದ ಆರೋಗ್ಯ ಮಾಹಿತಿ ಕಾರ್ಯುಕ್ರಮ ನಡೆಯಿತು.

07 ಸೆಪ್ಟೆಂಬರ್ 2010

ಇದು ಹೆದ್ದಾರಿ . .!

ಅಯ್ಯಾ ಎಂದರೆ ಸ್ವರ್ಗ ; ಎಲವೋ ಎಂದರೆ ನರಕವಂತೆ , ಆದ್ರೆ ಈ ರಸ್ತೆಯಲ್ಲಿ ಹೋಗೋವಾಗ ಏನ್ ಹೇಳ್ಬೇಕೋ ಅಂತಾನೇ ಗೊತ್ತಾಗಲ್ಲ.ಇದು ನಮ್ಮ ಹೆದ್ದಾರಿ. ಎನ್‌ಎಚ್ 48, ಶಿರಾಡಿ ಘಾಟ್ !. ಘಾಟಿ ತುಂಬಾ ವಾಹನ ಚಾಲಕರು ಇನ್ನಿಲ್ಲದ ಪಡಿಪಾಟಲು ಅನುಭವಿಸಬೇಕಾಗಿದೆ ಈಗ.ಇಡೀ ರಸ್ತೆ ರಾಡಿ ಎದ್ದಿದೆ.ಮೊನ್ನೆ ಮೊನ್ನೆ ಕಾಮನ್‌ವೆಲ್ತ್ ಕ್ಲೀನ್ಸ್ ಬ್ಯಾಟನ್ ರಿಲೇ ಇದೇ ಮಾರ್ಗದಲ್ಲಿ ಬಂದಿತ್ತು. ಆ ಪ್ರಯುಕ್ತ ಗುಂಡ್ಯಕ್ಕೆ ಹೋಗಿದ್ದಾಗ ಶಿರಾಡಿಯತ್ತಲೂ ಹೆಜ್ಜೆ ಹಾಕಿದಾಗ ಇದೆಲ್ಲಾ ಕಂಡಿತು.






ರಾಷ್ಟ್ರೀಯ ಹೆದಾರಿ 48 ರ ಶಿರಾಡಿ ಘಾಟ್ ರಸ್ತೆಯು ಪ್ರತೀ ವರ್ಷದಂತೆ ಈ ಬಾರಿಯೂ ರಾಡಿಯಾಗಿದೆ. ಹೀಗಾಗಿ ವಾಹನ ಓಡಾಟ ತೀರಾ ತ್ರಾಸವಾಗಿದೆ. ಹಾಗಿದ್ದರೂ ತಕ್ಷಣದ ದುರಸ್ಥಿ ಇಲ್ಲಿ ನಡೆದೇ ಇಲ್ಲ. ಇದರಿಂದಾಗಿ ವಾಹನ ಪ್ರಯಾಣಿಕರು ಅಯ್ಯೋ. . ., ಅಂತ ಸೊಂಟಕ್ಕೆ ಕೈ ಹಿಡಿದರೆ ವಾಹನ ಮಾಲೀಕರು ತಲೆಗೇ ಕೈಹೊತ್ತು ಕೂರುವಂತಾಗಿದೆ


ರಾಷ್ಟ್ರೀಯ ಹೆದಾರಿ 48 ರಲ್ಲಿ ಬರೋ ಶಿರಾಡಿ ಘಾಟ್ ರಸ್ತೆ. ಹೇಳುವುದಕ್ಕೆ ಇದು ರಾಷ್ಟ್ರೀಯ ಹೆದ್ದಾರಿಯಾದರೂ ತೀರಾ ಲೋಕಲ್ ರಸ್ತೆಯ ಹಾಗಿದೆ ಇದರ ಅವಸ್ಥೆ.ಕೆಲವೊಮ್ಮೆ ಅದಕ್ಕಿಂತ ಹಳ್ಳಿ ರಸ್ತೇನಾದ್ರೂ ಪರವಾಗಿಲ್ಲ ಅಂತ ಅನಿಸುತ್ತದೆ. ಬೇಸಗೆಯಲ್ಲಿ ರಿಪೇರಿ , ಮಳೆಗಾಲದಲ್ಲಿ ಹೊಂಡ ಗುಂಡಿ ಇದು ಶಿರಾಡಿ ರಸ್ತೆಯ ಪ್ರತೀ ವರ್ಷದ ಬಯೋಡೇಟಾ. ಬದವಾಲವಣೆ ಇಲ್ಲ ಹೊಸ ಕೋರ್ಸ್‌ಗಳೂ ಇಲ್ಲ. ಏನಿದ್ದರೂ ಭರವಸೆಗಳು ಮಾತ್ರಾ. ಶಿರಾಡಿ ಮೂಲಕ ಮಂಗಳೂರು , ಬೆಂಗಳೂರು ಮಾತ್ರವಲ್ಲ ಪುಣ್ಯ ಕ್ಷೇತ್ರಗಳಾದ ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳಗಳಿಗೆ ಹೋಗುವ ನೂರಾರು ಪ್ರಯಾಣಿಕರಿಗೆ ಅನ್ಯ ಮಾರ್ಗವಿಲ್ಲ. ಇದೇ ಮಾರ್ಗದಲ್ಲೇ ಸಂಚರಿಸಬೇಕಿದೆ. ಮಾತ್ರವಲ್ಲ ನೂರಾರು ಘನವಾಹನಗಳು ಇದೇ ಮಾರ್ಗವಾಗಿ ಸಂಚರಿಸಲೇ ಬೇಕಾಗಿದೆ..ಆದ್ರೂ ಕೂಡಾ ತಾತ್ಕಾಲಿಕ ದುರಸ್ಥಿ ಕಂಡಿಲ್ಲ ಎಂಬುದು ಸಾರ್ವಜನಿಕರ ದೂರು.


ಕಳೆದ ಹಲವಾರು ವರ್ಷಗಳಿಂದ ನಾದುರಸ್ಥಿಯಲ್ಲಿದ್ದ ಈ ಶಿರಾಡಿ ಘಾಟ್ ರಸ್ತೆಯಲ್ಲಿನ 13 ತಿರುವುಗಳನ್ನು 3 ವರ್ಷದ ಹಿಂದೆ 42 ಕೋಟಿ ರುಪಾಯಿ ವೆಚ್ಚದಲ್ಲಿ ಹೊಂಡ ಗುಂಡಿಗೆ ಮೋಕ್ಷ ಕಲ್ಪಿಸುವ ಕೆಲಸ ಮಾಡಲಾಗಿತ್ತಾದರೂ , ಇದು ಒಂದೇ ವರ್ಷದಲ್ಲಿ ತಿರುವು ರಸ್ತೆ ಹೊರತುಪಡಿಸಿ ಉಳಿದವೆಲ್ಲಾ ನೀರುಪಾಲಾಗಿತ್ತು. ಒಟ್ಟು 36 ಕಿಲೋ ಮೀಟರ್ ಉದ್ದ ಘಾಟಿ ರಸ್ತೆಯಲ್ಲಿ ಈಗ ಉಳಿದ 26 ಕಿಲೋ ಮೀಟರ್ ರಸ್ತ್ತೆ ದುರಸ್ಥಿಗಾಗಿ 115 ಕೋಟಿ ರುಪಾಯಿಯ ಪ್ರಾಜೆಕ್ಟ್ ತಯಾರು ಮಾಡಲಾಗಿದೆ.ಇದರಲ್ಲಿ ಕಾಂಕ್ರೀಟ್ ರಸ್ತೆಗಾಗಿ 99.84 ಕೋಟಿ ರುಪಾಯಿಯ ನೀಲನಕಾಶೆ ತಯಾರಿಸಲಾಗಿದೆ.ಉಳಿದ ಮೊತ್ತದಲ್ಲಿ ರಸ್ತೆಯ ಚರಂಡಿ ವ್ಯವಸ್ಥೆ ತಯಾರಾಗಲಿದೆ. ಆದರೆ ಪ್ರತೀ ವರ್ಷದ ಮಳೆಗಾಲ ಶಿರಾಡಿ ರಾಡಿಯಾಗುವ ಈ ರಸ್ತೆಯಿಂದಾಗಿ ವಾಹನಗಳ ಓಡಾಟವೇ ಕಷ್ಟವಾಗಿದೆ.ಪ್ರತಿ ದಿನ ಇದೇ ರಸ್ತೆಯಲ್ಲಿ ಓಡಾಡುವ ಮಂದಿಗೆ ಇನ್ನೂ ಕಷ್ಟವಾಗಿದೆ ಅಂತಾರೆ ಜನ.ಹೀಗಾಗಿ ಈ ಘಾಟಿ ರಸ್ತೆಗೆ ಶಾಶ್ವತ ಪರಿಹಾರ ಶೀಘ್ರದಲ್ಲೇ ಸಿಗಬೇಕು.ವಾಹನ ಮಾಲೀಕರಂತೂ ಉಸ್ಸಪ್ಪ ಅಂತಾರೆ.ಲೋಡ್ ವಾಹನಗಳು ಒಂದು ಹೊಂಡಕ್ಕೆ ಬಿದ್ದು ಮೇಲೇಳುವಾಗ ಜೀವ ಹೋಗಿ ಬಂದಂತಾಗುತ್ತದೆ ಅಂತಾರೆ. ಲಾರಿ ಮೈಂಟೆನೆನ್ಸ್‌ಗೇ ಬಾಡಿಗೆ ಸಾಕಾಗೋಲ್ಲ ಅಂತಾರೆ ಅವ್ರು.







ಒಟ್ಟಿನಲ್ಲಿ ಹಲವು ವರ್ಷಗಳ ಈ ಸಮಸ್ಯೆಗೆ ಶಾಶ್ವತವಾದ ಪರಿಹಾರ ಇನ್ನೂ ಸಿಕ್ಕಿಲ್ಲ. ನೂತನ ಕಾಂಕ್ರೀಟ್ ರಸ್ತೆಗೆ ಅನುಮೋದನೆ ಸಿಕ್ಕಿದೆ ಎಂಬ ಭರವಸೆಗಳು ಸಿಗುತ್ತದೇ ವಿನಹ ಪರಿಹಾರ ಮಾತ್ರಾ ಸಿಕ್ಕಿಲ್ಲ. ಆದಷ್ಟು ಬೇಗನೆ ಕಾರ್ಯಗತವಾಗಲಿ ಎಂಬುದೇ ಎಲ್ಲರ ಆಶಯ.

05 ಸೆಪ್ಟೆಂಬರ್ 2010

ಇಲ್ಲಿ “ಗುರು”ಬಲವಿದೆ . . .

ಅವರು ಕೇವಲ ಮೇಷ್ಟ್ರು ಅಲ್ಲ.ಬದುಕನ್ನು ರೂಪಿಸುವ ಮೇಷ್ಟ್ರು ಅವರು.ಆ ಮೇಷ್ಟ್ರು ಎಲ್ಲೇ ಸಿಕ್ಲಿ ಅವ್ರಿಗೊಂದು ಗೌರವ ಬೇರೇನೇ. ಅದಕ್ಕೇ ಹೇಳಿದ್ದು "ಮುಂದೆ ಗುರಿ ಹಿಂದೆ ಗುರು "ಅಂತ.ಗುರುವಿನ ಬಲವಿದ್ದರೆ ಗುರಿ ಸಾಧಿಸಿಂದತೆಯೇ.ಹಾಗೇ ನನ್ನ ಬದುಕಿಗೆ ದಾರಿ ತೋರಿದ ಎಲ್ಲಾ ಗುರುಗಳನ್ನು ನೆನಪಿಸಿಕೊಂಡು ಅವರಿಗೊಂದು ಶುಭಾಶಯ.

ಅಂದ ಹಾಗೆ ನಾನು ಒಂದನೇ ತರಗತಿಯಿಂದ ನಾಲ್ಕನೇ ತರಗತಿಯವರೆಗೆ ಓದಿದ್ದು ಮನೆ ಪಕ್ಕದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕಮಿಲದಲ್ಲಿ.ಅಲ್ಲಿಂದ ನಂತ್ರ ಐದನೇ ಕ್ಲಾಸ್‌ನಿಂದ ಏಳನೇ ಕ್ಲಾಸ್‌ವರೆಗೆ ಮನೆಯಿಂದ ನಾಲ್ಕು ಕಿಲೋಮೀಟರ್ ದೂರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗುತ್ತಿಗಾರಿನಲ್ಲಿ. ಆ ನಂತರ ಹೈಸ್ಕೂಲಿಗೆ ಮನೆಯಿಂದ ಇಪ್ಪತ್ತು ಕಿಲೋ ಮೀಟರ್ ದೂರದ ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲೆ.ಈ ಶಾಲೆಯನ್ನು ಮಾತ್ರಾ ನಾನು ಯಾವಾಗಲೂ ನೆನಪಿಸಿಕೊಳ್ಳಲೇ ಬೇಕು.ಇಲ್ಲಿನ ಎಲ್ಲಾ ಮೇಷ್ಟ್ರುಗಳನ್ನೂ ಕೂಡಾ.ಇಲ್ಲಿ ನಾಲ್ಕು ಸಾಲು ಬರೆಯುವುದಕ್ಕೆ ಕಾರಣವಾಗಿದ್ದೇ ಈ ಶಾಲೆ.ಹಾಗಂತ ಉಳಿದ ಶಾಲೆ ಅಕ್ಷರ ಕಲಿಸಿಲ್ಲ ಅಂತ ಅಲ್ಲ.ಅಲ್ಲಿನ ಮೇಷ್ಟ್ರುಗಳೂ ತಿದ್ದಿದ್ದಾರೆ.( ಈ ಬಾರಿ ಬಾಳಿಲದಲ್ಲಿ ನನಗೆ ಕಲಿಸಿದ ಮೇಷ್ಟ್ರು ಪಿ.ಎನ್.ಭಟ್ಟರಿಗೆ ಉತ್ತಮ ಶಿಕ್ಷಕ ಪ್ರಶಸ್ತಿಯೂ ಸಿಕ್ಕಿದೆ.)
ಸುಬ್ರಹ್ಮಣ್ಯ , ವಿವೇಕಾನಂದ ಕಾಲೇಜುಗಳ ಮೆಟ್ಟಿಲು ಹತ್ತಿ ಇಳಿದಾಗಿದೆ.ಈಗ ಇಲ್ಲಿದ್ದೇನೆ. ಅಂತೂ ಎಲ್ಲಾ ಮೇಷ್ಟ್ರುಗಳನ್ನು ನೆನಪಿಸಿಕೊಂಡು ಅವರಿಗೊಂದು ಥ್ಯಾಕ್ಸ್ ಹೇಳಿದ ನಂತ್ರ ನಮ್ಮೂರ ಕಡೆ ನೋಡಿದಾಗ ಅಲ್ಲೊಂದು ಗ್ರಾಮದಲ್ಲಿ ಹೆಚ್ಚು ಸಂಖ್ಯೆಯ ಮೇಷ್ಟ್ರು ಇದ್ದಾರೆ ಅಂತ ಗೊತ್ತಾಯ್ತು. ಅವರು ಹಳ್ಳಿ ಮೇಷ್ಟ್ರಲ್ಲ . . ಅದು ಮೇಷ್ಟ್ರ ಹಳ್ಳಿ.ಈ ಹಳ್ಳಿಯಲ್ಲಿನ ಶಿಕ್ಷಕರ ಸಂಖ್ಯೆ 165 ಕ್ಕೂ ಹೆಚ್ಚು.

* * * * * * * * * * * * * * * * * * * *


ಅದು ಏನೇಕಲ್ ಎಂಬ ಪುಟ್ಟ ಗ್ರಾಮ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿರುವ ಈ ಗ್ರಾಮ ಹೇಳಿಕೊಳ್ಳುವುದಕ್ಕೆ ಪುಟ್ಟ ಗ್ರಾಮವಾದರೂ ಈ ಹಳ್ಳಿಯ ಕೊಡುಗೆ ದೊಡ್ಡದೇ.ಈ ಊರಿನಲ್ಲಿರುವ ಶಿಕ್ಷಕರ ಸಂಖ್ಯೆ 165 ಕ್ಕೂ ಹೆಚ್ಚು. ಸುಳ್ಯ ತಾಲೂಕು ಸೇರಿದಂತೆ ದಕ್ಷಿಣ ಕನ್ನಡ ಮತ್ತು ರಾಜ್ಯದ ವಿವಿದೆಡೆ ಶಿಕ್ಷಕರಾಗಿ ಇಂದು ದುಡಿಯುತ್ತಿದ್ದಾರೆ.ಅಷ್ಟೆ ಏಕೆ ವಿದೇಶದಲ್ಲೂ ಉಪನ್ಯಾಸಕರಾಗಿ ಕೆಲಸ ಮಾಡೋದ್ರಲ್ಲೂ ಇಲ್ಲಿನ ಜನ ಇದ್ದಾರೆ.ಈ ಊರಿಗೆ ದಿವಂಗತ ಪಿ.ಎಸ್.ರಾಮಣ್ಣ ಗೌಡರೇ ಮೊದಲ ಶಿಕ್ಷಕರು. ಆ ಬಳಿಕ ಇಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಕಾಲಿಡೋಕ್ಕೆ ಇಲ್ಲಿನ ಹೈದರು ಶುರುಮಾಡಿದರು.ಹಿರಿಯರ ಮಾದರಿಯ ಹೆಜ್ಜೆ , ಮುಂದಿನವರಿಗೆಲ್ಲಾ ದಾರಿದೀಪವಾಯಿತು.ಹಾಗಾಗಿ ಶಿಕ್ಷಕರಾಗುವವರ ಸಂಖ್ಯೆ ಇಲ್ಲಿ ಬೆಳೆಯುತ್ತಲೇ ಹೋಯಿತು.ಕಳೆದ 2 ವರ್ಷದ ಹಿಂದೆ ನಡೆಸಿದ ಸಮೀಕ್ಷೆಯ ಪ್ರಕಾರ ಈ ಹಳ್ಳಿಯಲ್ಲಿ 165 ಜನ ಶಿಕ್ಷಕರು ಪಟ್ಟಿಯಲ್ಲಿ ಸಿಕ್ಕಿದ್ದಾರೆ.

ಇದ್ಯಾಕೆ ಇಲ್ಲಿ “ಗುರು”ತ್ವಾಕರ್ಷಣ ಬಲ ? ಅಂತ ಕೇಳಿದ್ರೆ , ಹಿರಿಯರ ಮಾರ್ಗದರ್ಶನ ಮತ್ತು ಅವರ ಆದರ್ಶದ ಹೆಜ್ಜೆಗಳ ಪ್ರೇರೇಪಣೆ ಒಂದು ಕಡೆಯಾದ್ರೆ ಇಲ್ಲಿನ ಯುವಕ ಮಂಡಲದ ಪಾತ್ರವೂ ಮುಖ್ಯವಾಗಿದೆಯಂತೆ.ಯುವಕ ಮಂಡಲದಲ್ಲಿ ಯುವಕರು ಜೊತೆಯಾಗಿ ಸೇರಿದಾಗ ಮಾಹಿತಿ ನೀಡುವ ಕಾರ್ಯಕ್ರಮ ಹಾಗೂ ಹಿರಿಯರ ಪ್ರೋತ್ಸಾಹ ಇಲ್ಲಿನ ಯುವಕರಿಗೆ ಸ್ಫೂರ್ತಿಯಾಯಿತು ಅದರ ಜೊತೆಗೆ ಶಿಕ್ಷಣ ಕ್ಷೇತ್ರಕ್ಕೇ ಇರುವ ಭವಿಷ್ಯ ಮನಗಂಡು ಶಿಕ್ಷರಾದರು ಅಂತಾರೆ ಇವರು.ಇದರ ಜೊತೆಗೆ ಈ ಪುಟ್ಟ ಗ್ರಾಮವು ಆರ್ಥಿಕವಾಗಿಯೂ ಹಿಂದಿತ್ತು.ಹೀಗಾಗಿ ಉನ್ನತ ಶಿಕ್ಷಣವು ಕನಸಿನ ಮಾತಾಗಿತ್ತು.ಜೊತೆಗೆ ಬಹುತೇಕ ಮನೆಯವರು ಕೂಲಿ ಕೆಲಸ ಮಾಡುತ್ತಿದ್ದರು. ಹೀಗಾಗಿ ಓದಿದ ಮಂದಿಗೆ ಉದ್ಯೋಗವೂ ಬೇಗನೆ ಬೇಕಿತ್ತು. ಹೀಗಾಗಿ ಕಡಿಮೆ ವ್ಯಾಸಾಂಗ ಮಾಡಿ ಬೇಗನೆ ಉದ್ಯೋಗ ಗಿಟ್ಟಿಸಿಕೊಳ್ಳುವ ಅನಿವಾರ್ಯತೆಯೂ ಇತ್ತು.ಆಗ ಶಿಕ್ಷಣ ಕ್ಷೇತ್ರ ಇವರನ್ನು ಆಕರ್ಷಿಸಿದೆ.

ಈಗ ನೋಡಿದರೆ ಈ ಪುಟ್ಟ ಗ್ರಾಮ ಅಷ್ಟೊಂದು ಹಿಂದೆ ಉಳಿದಿಲ್ಲ. ಆದರೂ ಕೂಡಾ ಇಂದಿನ ಹೆಚ್ಚಿನ ಯುವಕರೂ ಶಿಕ್ಷಣ ಕ್ಷೇತ್ರದತ್ತಲೇ ಆಕರ್ಷಿತರಾಗಿದ್ದಾರೆ.ಮೊದಲಿನ ಸಮೀಕ್ಷೆಯಂತೆ 165 ಜನ ಶಿಕ್ಷಕರಿದ್ದರೆ ಆ ಬಳಿಕವೂ ಇದೇ ಕ್ಷೇತ್ರಕ್ಕೆ ಬರುವುದಕ್ಕೆ ಟ್ರೈನಿಂಗ್ ಮಾಡಿದವರು ಇದ್ದಾರೆ.ಇನ್ನು ಕಂಪ್ಯೂಟರ್ ತರಬೇತಿ ಶಿಕ್ಷಕರು ಇಲ್ಲಿದ್ದಾರೆ. ಇವರೆಲ್ಲಾ ಸೇರಿದಾಗ 250 ರ ಗಡಿ ದಾಡುತ್ತದೆ. ಇನ್ನೂ ಈ ಏನೇಕಲ್ಲಿನಲ್ಲಿ ವಿಶೇಷ ಅಂದ್ರೆ ಸುಮಾರು 50 ಕ್ಕೂ ಅಧಿಕ ಮಂದಿ ದೈಹಿಕ ಶಿಕ್ಷಣ ಶಿಕ್ಷಕರು ಇರೋದು ಗಮನಾರ್ಹವಾಗಿದೆ. 1984 ರ ಸುಮಾರಿಗೆ ಒಂದೇ ವರ್ಷದಲ್ಲಿ 22 ಜನರು ಶಿಕ್ಷಕರಾಗಿ ನೇಮಕವಾದದ್ದು ಇಲ್ಲಿನ ಹೆಮ್ಮೆಗೆ ಇನ್ನೊಂದು ಗರಿ.

ಹಾಗಂತ ಈ ಪುಟ್ಟ ಗ್ರಾಮದ ಜನಸಂಖ್ಯೆ ಸುಮಾರು 2000. ಇಲ್ಲಿನ ಮನೆ ಹಾಗೂ ಜನಸಂಖ್ಯೆ ಆಧಾರವನ್ನು ನೋಡಿದರೆ ಸರಾಸರಿ ಮನೆಗೊಬ್ಬರಂತೆ ಇಲ್ಲಿ ಶಿಕ್ಷಕರಿದ್ದಾರೆ. ಅದು ಮಾತ್ರ ಅಲ್ಲ, ಇನ್ನು ಸರಕಾರಿ ಕಚೇರಿಗಳಲ್ಲಿ ಉದ್ಯೋಗದಲ್ಲಿ , ಯೋಧರಾಗಿ , ಬ್ಯಾಂಕ್ ಅಧಿಕಾರಿಗಳಾಗಿ , ಪ್ರಾಂಶುಪಾಲರಾಗಿಯೂ ಸೇವೆ ಮಾಡೋವವರು ಈ ಊರಲ್ಲಿ ಇದ್ದಾರೆ.ಇನ್ನೂ ವಿಶೇಷ ಅಂದ್ರೆ ವಿದೇಶದಲ್ಲೂ ಉಪನ್ಯಾಸಕರಾಗಿ ಸೇವೆ ಮಾಡೋರು ಇದೇ ಏನೇಕಲ್ಲಿನ ಮಂದಿ ಇದ್ದಾರೆ.

ಉದ್ಯೋಗ ಅಂತ ಅಂದ್ರೆ ಸಾಫ್ಟ್‌ವೇರ್ ಅಂತ ತಿಳಿದಿರೋ ಇಂದಿನ ಕಾಲದಲ್ಲಿ ಪಾಠ ಹೇಳಲು , ಮಕ್ಕಳ ಭವಿಷ್ಯ ರೂಪಿಸುವ ಕೆಲಸಕ್ಕೆ ಜನ ಸಿಗದೇ ಇರೋ ಈ ವೇಳೆಯಲ್ಲಿ ಅದರಲ್ಲೂ ಕೆಲವು ವಿಷಯಗಳನ್ನು ಬೋಧಿಸಲು ಅಧ್ಯಾಪರುಗಳೇ ಸಿಗುತ್ತಿಲ್ಲವಾಗುತ್ತಿರುವ ಇಂದಿನ ದಿನದಲ್ಲಿ ಏನೇಕಲ್ ಎಂಬ ಪುಟ್ಟ ಗ್ರಾಮದ ಜನತೆ ಇಂದಿಗೂ ಶಿಕ್ಷಣ ಕ್ಷೇತ್ರವನ್ನು ಆರಿಸಿಕೊಂಡಿರುವುದು ನಿಜಕ್ಕೂ ಅಭಿನಂದನೀಯ. ಹ್ಯಾಟ್ಸ್ ಅಪ್ ಏನೇಕಲ್ ಪ್ಯೂಪಲ್ಸ್. ಶಿಕ್ಷಕರ ದಿನಾಚರಣೆಗೆ ನಿಜವಾದ ಅರ್ಥ ನೀಡುತ್ತಿರುವ ಈ ಗ್ರಾಮ ನಿಜಕ್ಕೂ ರಾಜ್ಯದ ಹೆಮ್ಮೆ.

. . . . . . . . . .

01 ಸೆಪ್ಟೆಂಬರ್ 2010

ಸಲಾಂ ಹಾಕಿದ್ರೆ ನೀವ್ ಪಾಸ್ !

ಅದೊಂದು ಕಚೇರಿ, ಅಲ್ಲೊಬ್ಬ ಅಧಿಕಾರಿ.

ಅದೊಂದು ಆಸ್ಪತ್ರೆ, ಅಲ್ಲೊಬ್ಬ ಡಾಕ್ಟರ್.

ಹೌದು ಆಸ್ಪತ್ರೆ ಇದ್ರೆ ಅಲ್ಲೊಬ್ಬ ಡಾಕ್ಟರ್ ಇಲ್ರೇ ಬೇಕು.ಇನ್ನು ಕಚೇರಿ ಅಂದಾಗ ಅಲ್ಲೊಬ್ಬ ಅಧಿಕಾರಿ ಇರಲೇ ಬೇಕು.ವಿಷಯ ಅದಲ್ಲ.ಅಲ್ಲಿ ಇನ್ನೂ ಒಬ್ಬ ಇರ್ತಾನಲ್ಲ. ಆತ ಯಾರು ಅಂತ ಎಲ್ಲರಿಗೂ ಗೊತ್ತು. ಯೋಚನೆ ಮಾಡೋದೆ ಬೇಡ.ಆತ ಗೇಟ್‌ಕೀಪರ್.ಅರ್ಥಾತ್ ಪಿ‌ಎ ಅಥವಾ ಎಟೆಂಟರ್. ಇಲ್ಲಿ ಈತನ ಪಾತ್ರ ಬಹುಮುಖ್ಯ.ಅಧಿಕಾರಿ ಆಗಿರಬಹುದು ಡಾಕ್ಟರ್ ಆಗಿರಬಹುದು ನಿಮಗೆ ಎಷ್ಟೇ ಕ್ಲೋಸ್ ಆಗಿದ್ರೂ ಇಲ್ಲಿ ಇವನ ಪಾತ್ರ ಮಾತ್ರಾ ಮುಖ್ಯ. ಇವನ ಪರ್ಮೀಶನ್ ಇದ್ರೆ ಮಾತ್ರಾ ಒಳಗೆ ಪ್ರವೇಶ , ಇಲ್ಲಾಂದ್ರೆ ಹೊರಗಿನ ಬೆಂಚ್ !.

ಹೌದು.ಒಂದು ಕಚೇರಿ ಮುಂದೆ ಇರೋ ಈತನ ಕೆಲಸವೂ ಅಷ್ಟೇ. ಯಾರನ್ನು ಒಳಗೆ ಬಿಡಬೇಕು ಯಾರನ್ನು ಬಿಡಬಾರದು, ಯಾರನ್ನು ಎಷ್ಟು ಹೊತ್ತಿಗೆ ಬಿಡಬೇಕು ಅಂತ ಆತನ ನಿರ್ಧರಿಸುತ್ತಾನೆ. ಒಬ್ಬ ಡಾಕ್ಟರ್ ಬಳಿಗೆ ನಾವು ಹೋದ್ವಿ ಅಂತ ಇಟ್ಟುಕೊಳ್ಳೋಣ.ಇಲ್ಲಿ ಕ್ಲೂ ಸಿಸ್ಟಮ್ ಇದೆ. ನಮ್ಮಿಂದ ನಂತ್ರ ಇನ್ನೊಬ್ಬ ಬರ್ತಾನೆ ಆತ ಈ ಗೇಟ್ ಕೀಪರ್ಗೆ ತೀರಾ ಪರಿಚಯಸ್ಥ ಹಾಗಾಗಿ ಆತನಿಗೆ ನಮಗಿಂತ ಮೊದಲು ಪ್ರವೇಶ. ಒಂದು ವೇಳೆ ನಾವು ಅದ್ಹೇಗೆ ಹಾಗಾಯಿತು? ಅಂದ್ರೆ ಅವರು ನಿಮಗಿಂತ ಮೊದಲೇ ಬುಕ್ ಮಾಡಿದಾರೆ ಅಂತಾನೆ. ನಾವು ಇನ್ನೂ ಗಲಾಟೆ ಮಾಡಿದ್ರೆ ಇನ್ನೂ ಇಬ್ರು ಇದ್ದಾರೆ ಅಂತಾನೆ .ನಾವು ಇನ್ನೂ ಪೆದ್ದು ಪೆದ್ದಾಗಿ ಕುಳಿತುಕೊಳ್ಳಲೇ ಬೇಕಷ್ಟೆ. ಅಬ್ಬಾ ಆತ ಏನು ಡಾಕ್ಟ್ರ ಕಚೇರಿ ಮುಂದೆ ಆ ಕಡೆ ಈ ಕಡೆ ಹೋಗ್ತಾನೆ.ನಾವು ಎಷ್ಟು ಹೊತ್ತಿಗೆ ಒಳಗೆ ಹೋಗೋದು ಅಂದ್ರೆ ನಿಲ್ಲಿ .. ನಿಲ್ಲಿ .. ಅಂತಾನೆ. ಅದೇ ನಾವು ಒಳಗಿನ ಡಾಕ್ಟರಿಗಿಂತ ಈ ಕೀಪರ್‌ಗೆ ಹೆಚ್ಚು ಮಸ್ಕಾ ಹೊಡೆದ್ರೆ , ಸಲಾಂ ಹೊಡೆದ್ರೆ ಮುಂದಿನ ಸಲ ನಾವು ಬಂದಾಗಲೇ ಒಳಗೆ ಪ್ರವೇಶ. ಈ ಉಸಾಬರಿ ಸಾಕಪ್ಪ ಡಾಕ್ಟರಿಗಿಂತ ದೊಡ್ಡ ವ್ಯಕ್ತಿ ಈ ಕೀಪರ್ ಆಗಿ ಬಿಟ್ನಾ ಅಂತ ಅನ್ಸುತ್ತೆ ಬಿಡಿ.ಅಂತಹದ್ದೇ ಒಂದು ಸಿಟ್ಟಿನಲ್ಲಿ ನಾನೊಮ್ಮೆ ಪರಿಚಯಸ್ಥ
ಡೆಂಟಿಸ್ಟ್ ಒಬ್ರಿಗೆ ನೇರವಾಗಿ ಫೋನು ಮಾಡಿ ನಂಗೆ ಅಪಾಯಿಂಟ್‌ಮೆಂಟ್ ಬೇಕು ಅಂದೆ.ಅವರು ಒಂದ್ನಿಶ ಅಂತ ಅದೇ ಕೀಪರ್‌ಗೆ ಫೋನು ಕೊಡ್ಬೇಕಾ. .?. ಅಂತೂ ಅವ್ನಿಗೇ ಸಲಾಂ ಹೋಡೀಬೇಕಾದ ಸಮಯ ಬಂತು. ಇದು ಆಸ್ಪತ್ರೆಯ ಕತೆಯಾದ್ರೆ ಇನನು ಕಚೇರಿಗಳ ಸ್ಟೈಲೇ ಬೇರೇ.


ಇವತ್ತು ಇಂತಹವರು ಬಂದ್ರೆ ಒಳಗೆ ಬಿಡಬೇಡ ಸಾಹೇಬ್ರು ಬ್ಯುಸಿ ಅಂತ ಹೇಳು ಅಂತ ಕಚೇರಿ ಒಳಗಿನಿಂದ ಕೀಪರ್‌ಗೆ ಮೆಸೇಜ್ ಬಂದ್ರೆ ಸಾಕು.ಅವತ್ತು ಅಂತಹ ಜನಗಳು ಬಂದ್ರೆ ನೋ ಎಂಟ್ರಿ. ಇನ್ನು ನೋಡಿ, ನಮ್ಮ ಕೆಲಸ ಬೇಗ ಆಗ್ಬೇಕು ಅಂದ್ರೆ ಸೀದಾ ಅಧಿಕಾರಿ ಬಳಿಗೆ ಹೋದ್ರೆ ಕೆಲಸ ಬೇಗನೆ ಆಗಲ್ಲ. ಅಲ್ಲೇ ಇರೋ ಕೀಪರ್ಗೆ ಮಸ್ಕಾ ಹಾಕಿ ಸಲಾಂ ಹೊಡೆದ್ರೆ ನೋಡಿ ಎಷ್ಟು ಬೇಕು ಕೆಲಸ ಆಗುತ್ತೆ ನೋಡಿ. ಸಾಹೇಬ್ರೇ ಇವರು ನಮ್ಮ ಜನ ಇದನ್ನೊಂದು ಮಾಡಿಕೊಡಿ ಸಾರ್.ಅಂತ ಒಳಗಡೆ ಹೋಗಿ ಅದೇನು ಬೇಕು ಅದೆಲ್ಲಾ ಮಾಡಿಕೊಂಡು ಬರ್‍ತಾನೆ.

ಆತನಿಗೆ ಲೆವೆಲ್‌ನಲ್ಲಿ ಚಿಕ್ಕ ಕೆಲಸ.ಆದ್ರೆ ನಮ್ಮ ಸಮಯ ಉಳಿಸುವಲ್ಲಿ ಆತನ ಕೆಲಸ ದೊಡ್ಡದೇ. ಹಾಗಾಗಿ ನೀವು ಎಲ್ಲೇ ಹೋಗಿ ಅಲ್ಲೊಬ್ಬ ಕೀಪರ್ ಇದ್ದಾನೆ ಅಂತದ್ರೆ ಅವನಿಗೊಂದು ಸಲಾಂ ಹಾಕಿ ನೊಡಿ ಹೇಗೆ ರಿಯಾಕ್ಟ್ ಮಾಡ್ತಾನೆ ಅಂತ.

14 ಆಗಸ್ಟ್ 2010

“ಅನ್ನ”ದ “ಸ್ವಾತಂತ್ರ್ಯ”ಕ್ಕಾಗಿ ಹೋರಾಟ . . .!!

ಮೊನ್ನೆ ಒಬ್ರು ಕೇಳಿದ್ರು.ಒಬ್ಬ ಮನುಷ್ಯನಿಗೆ ದಿನಕ್ಕೆ ಎಷ್ಟು ಕೇಜಿ ಅಕ್ಕಿ ಬೇಕು ಅಂತ. .?. ಏ. . .!!, ಅದೇನು ಒಂದರ್ಧ ಕೇಜಿ ದಿನಕ್ಕೆ, ಅಂತ ನಾವು ಅಂದಾಜು ಲೆಕ್ಕ ಬಿಟ್ಟೆವು.ಆದ್ರೆ ಅವ್ರು ಒಂದು ಲೆಕ್ಕ ಹೇಳಿದ್ರು.ಒಬ್ಬ ವ್ಯಕ್ತಿ ಅರ್ಧ ಕೇಜಿ ದಿನಕ್ಕೆ ಅಕ್ಕಿ ಬಳಸಿದ್ರೆ ತಿಂಗಳಿಗೆ ಎಷ್ಟು . . ?.ಸುಮಾರು 15 ಕೆಜಿ, ವರ್ಷಕ್ಕೆ ಎಷ್ಟಾಯಿತು. . ? ಸುಮಾರು 180 ಕೆಜಿ, ಅಂದಾಜು ಆತ 60 ವರ್ಷ ಬದುಕಿದ್ರೆ ಎಷ್ಟು ಬೇಕು . .?, ಸುಮಾರು 10,800 ಕೆಜಿ. . . !!. ಹೀಗೇ ಸಾಗಿದ ಅವರ ಲೆಕ್ಕ ನಮ್ಮ ಕುಟುಂಬ , ತಾಲೂಕು, ರಾಜ್ಯಕ್ಕೆ ಎಷ್ಟು ಅಕ್ಕಿ ಬೇಕು ದಿನಕ್ಕೆ ಅಂತ ಪ್ರಶ್ನೆ ಸಾಗಿತು. ಇಷ್ಟಲ್ಲಾ ಅಕ್ಕಿ ಬೇಕಾಗೋವಾಗ ಇಲ್ಲಿನ ಬೆಳೆ ಎಷ್ಟು. . .?. ನಿಜ ಅಲ್ವಾ ನಮ್ಮಲ್ಲಿ ಅನ್ನದ ಸ್ವಾತಂತ್ರ್ಯ ಇದೆಯಾ. . ?. ಅದನ್ನೇ ಯೋಚನೆ ಮಾಡ್ತಿರಬೇಕಾದ್ರೆ ಸುಳ್ಯದಲ್ಲೊಂದು ಕಾರ್ಯಕ್ರಮ ಹಮ್ಮಿಕೊಂಡಿದ್ರು.


ಅಲ್ಲಿ ಇದ್ದದ್ದು ಲೆಕ್ಕ ಮಾಡಿ 132 ಜನ.ಅವರ ಹೋರಾಟ ಅದೇ ಅನ್ನದ ಸ್ವಾತಂತ್ರ್ಯಕ್ಕಾಗಿ. ಹೋರಾಟ ಅಂದಾಗ ಅಲ್ಲೇನು ಉಪವಾಸ, ಸತ್ಯಾಗ್ರಹ , ಪ್ರತಿಭಟನೆ ಇದ್ದಿರಲೇ ಇಲ್ಲ.ಇದ್ದದ್ದು ಒಂದಷ್ಟು ಮನಸ್ಸು , ಇನ್ನೊಂದು ಚೂರು ಉತ್ಸಾಹ ಮಾತ್ರಾ. ಈ ಹೋರಾಟದಲ್ಲಿ ಅನ್ನದಾತರ ಜೊತೆ ಕೈಜೋಡಿಸಿದವರು ಹವಾನಿಯಂತ್ರಿತ ಕೊಠಡಿಯಲ್ಲಿ ದುಡಿಯುವ ದೇಹಗಳು. ಇವರಿಗೆಲ್ಲಾ ಲೀಡರ್ ಆಗಿದ್ದುದ್ದು ಒಬ್ಬ ಆಧ್ಯಾತ್ಮ ಗುರು.ಅವರು ನಿತ್ಯಾನಂದ.





ಅಂದು ದೇಶಕ್ಕೆ ಸ್ವಾತಂತ್ರ್ಯ ಬೇಕು ಅಂತ ಸಾವಿರಾರು ಮಂದಿ ಹೋರಾಟ ಮಾಡಿದ್ರು , ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು. ಇಂದು ಅದೇ ಕೈಗಳು ಅನ್ನದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸುತ್ತಿವೆ. ಅದಕ್ಕೇನು ದೊಡ್ಡ ಪ್ರಚಾರವಿಲ್ಲ. ಅದು ಪ್ರಚಾರಕ್ಕೆ ಮಾಡಿದ ಕಾರ್ಯಕ್ರಮವೂ ಅಲ್ಲ. ಆದರೆ ಅದು ಅನಿವಾರ್ಯದ ಹೋರಾಟ. ಅನ್ನದ ದಾಸ್ಯ ಬಂದರೆ ಈ ದೇಶದ ಕತೆ ಮುಗಿಯಿತು ಎನ್ನುವುದು ಈ ಕಾರ್ಯಕ್ರಮದ ಒಟ್ಟಾರೆ ಸಂದೇಶವಾಗಿತ್ತು.


ಅದು ಸುಳ್ಯದ ದೊಡ್ಡ ಗದ್ದೆ.ಇಲ್ಲಿನ ಚನ್ನಕೇಶವ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ.ಹರಪ್ರಸಾದ ಅವರ ಭೂಮಿ.ಆದರೆ ಕಳೆದ ಕೆಲವು ವರ್ಷಗಳಿಂದ ನಾನಾ ಕಾರಣಗಳಿಂದ ಇಲ್ಲಿ ಬೇಸಾಯ ನಡೀತಾ ಇರಲಿಲ್ಲ.ಈ ಗದ್ದೆ ಸುಮಾರು 10 ಎಕ್ರೆ ವಿಸ್ತಾರವಾಗಿದೆ.ಕಳೆದ ಕೆಲವು ವರ್ಷಳಿಂದ ಹಾಗೇ ಸುಮ್ಮನೆ ಕೃಷಿ ಇಲ್ಲದೆ ಪಾಳು ಬಿದ್ದಿರುವುದನ್ನು ಇಲ್ಲೇ ಸಮೀಪದ ಅರಂಬೂರಿನ ತ್ರೈಂಬಕ ಆಶ್ರಮದ ಗುರು ನಿತ್ಯಾನಂದ ಅವರ ಕಿವಿಗೂ ಬಿತ್ತು. ಮೂಲತ: ಆಂದ್ರ ಪ್ರದೇಶದ ಇವರು ತಮ್ಮ ಯೋಜನೆಗಳ ಮೂಲಕ ನಾನಾ ಕಡೆ ಹಲವಾರು ಭಕ್ತರನ್ನು ಹೊಂದಿದ್ದರು. ಕರ್ನಾಟಕದಲ್ಲಿ ಚಿಕ್ಕಮಗಳೂರು , ಮೂಲ್ಕಿ , ಸುಳ್ಯದಲ್ಲಿ ಆಶ್ರಮ ಇದೆ. ಗುಜರಾತ್‌ನಲ್ಲಿ ಕಾಲಭೈರವೇಶ್ವರ ಟ್ರಸ್ಟ್ ಎಂಬ ಪ್ರದಾನ ಕಚೇರಿಯೂ ಇದೆ.ಇದೆಲ್ಲದರ ಪ್ರಮುಖ ರುವಾರಿ ಈ ನಿತ್ಯಾನಂದರು.ಈಗಾಗಲೇ ವಿವಿದ ರಾಜ್ಯಗಳಲ್ಲಿ ಅಲ್ಲಿನ ಮುಖ್ಯ ಆಹಾರ ಬೆಳೆಗಳಿಗೆ ಉತ್ತಜನ ನೀಡಿ ತಾವು ಕೂಡಾ ಸ್ವತ: ಉಳುಮೆ ಮಾಡಿ ಜನರನ್ನು ಆಹಾರ ಬೆಳೆಗಳನ್ನು ಬೆಳೆಯಲು ಪ್ರೋತ್ಸಾಹಿಸದವರೂ ಹೌದು.ಭಾರತದಾದ್ಯಂತ ಒಟ್ಟು 6000 ಎಕ್ರೆ ಪ್ರದೇಶದಲ್ಲಿ ಆಹಾರ ಬೆಳೆಗಳನ್ನು ಇವರು ಬೆಳೆಸುತ್ತಿದ್ದಾರೆ.4500 ಗೋವುಗಳನ್ನು ಸಾಕುತ್ತಿದ್ದಾರೆ.


ಇವರು ಸುಳ್ಯದಲ್ಲೂ ಕೃಷಿ ಮಾಡುವುದಕ್ಕೆ ಮುಂದಾದಾಗ ಹರಪ್ರಸಾದ ಮತ್ತು ಇತರ ಎಲ್ಲರೂ ಸಹಕರಿಸಿದರು.ಹಾಗಾಗಿ ಒಂದು ಆಂದೋಲನವೇ ಇಲ್ಲಿ ನಡೆಯಿತು.ಈ ನಿತ್ಯಾನಂದರಿಗೆ ಇಲ್ಲಿ ಬೆಳೆದ ಅಕ್ಕಿ ಬೇಕಾಗಿಲ್ಲ.ಅದೆಲ್ಲವೂ ಇಲ್ಲಿನ ಜನರಿಗೆ ಸೇರುತ್ತದೆ.ಆದರೆ ಹುಲ್ಲು ಮಾತ್ರಾ ಬೇಕಂತೆ.ಯಾಕೆಂದ್ರೆ ಅವರ ಗೋವುಗಳಿಗೆ ಊಟಕ್ಕೆ.ಅವರ ಪ್ರಕಾರ ಇಲ್ಲಿ 10 ಎಕ್ರೆಯಲ್ಲಿ ಬೆಳೆದ ಅಕ್ಕಿಯು 100 ಕುಟುಂಬಗಳಿಗೆ ಸಾಕಂತೆ. ಇಂದು ಎಲ್ಲಾ ಇದೆ ಅನ್ನದ ಸ್ವಾತಂತ್ರ್ಯ ಮಾತ್ರಾ ಇನ್ನೂ ಇಲ್ಲ ಎಂಬುದು ಇವರ ವಾದ.ಅನ್ನದ ದಾಸ್ಯ ಬಂದರೆ ದೇಶ ಸರ್ವನಾಶವಾಗುತ್ತದೆ ಎಂಬ ಕಾರಣಕ್ಕಾಗಿ ಈ ಜಾಗೃತಿ ಮಾಡಲಾಗುತ್ತಿದೆ ಎನ್ನುವ ನಿತ್ಯಾನಂದರು ಇದಕ್ಕಾಗಿ ತನ್ನ ಅನುಯಾಯಿಗಳನ್ನು ಬರಹೇಳುತ್ತಾರೆ.ಹಾಗಾಗಿ ಇಂಜಿನಿಯರ್ಗಳು , ಬ್ಯಾಂಕ್ ಉದ್ಯೋಗಿಗಳು ಎಲ್ಲರೂ ಗದ್ದೆಗೆ ಇಳಿದು ಅನ್ನದಾತರೊಂದಿಗೆ ಕೈಜೋಡಿಸುತ್ತಾರೆ.ಈ ಮೂಲಕ ಸೇವೆ ಎಂಬ ಯಜ್ಞ ನಡೆಯುತ್ತದೆ.





ನಿಜಕ್ಕೂ ನಿತ್ಯಾನಂದರು ಒಬ್ಬ ಸಮಾಜದ ಗುರು ಅಂತ ನನಗನ್ನಿಸುತ್ತದೆ.ಯಾಕೆಂದ್ರೆ ಇವರು ಥಿಯರಿಟಿಕಲ್ ಆಗಿಲ್ಲ , ಪ್ರಾಕ್ಟಿಕಲ್ ಮಾತ್ರಾ ಆಗಿದ್ದಾರೆ.ಯಾಕೆಂದ್ರೆ ಇಂದು ಅನೇಕ ಮಠಗಳು , ಕೆಲ ನಾಯಕರು ಬಾಯಲ್ಲಿ ಸ್ವದೇಶಿ . . ಸಾವಯವ , ನಮ್ಮ ಆಹಾರ ನಮಗೇ . . , ನಾವೇ ತಯಾರಕರು . . ನಾವೇ ಉತ್ಪಾದಕರು ಅಂತೆಲ್ಲಾ ಹೇಳುತ್ತಾರೆ.ಆದ್ರೆ ಕೃತಿ ರೂಪಕ್ಕೆ ಇಲ್ಲವೇ ಇಲ್ಲ.ಇಲ್ಲಿ ಹಾಗಲ್ಲ ಸ್ವತ: ನಿತ್ಯಾನಂದರೇ ಗದ್ದೆಗೆ ಇಳಿಯುತ್ತಾರೆ.ಅವರನ್ನು ಜನ ಸ್ವಾಮೀಜಿ ಅಂತಾರೆ ಆದ್ರೆ ನಿತ್ಯಾನಂದರು ಅಂತಾರೆ ನಾನು ಸ್ವಾಮಿಯಲ್ಲ , ಸಂಸಾರಿ ಅಂತಾರೆ.ನಾನೇ ಸ್ವತ: ಕೇಳಿದೆ ನಿಮ್ಮನ್ನು ಸ್ವಾಮಿ ಅಂತ ಕರಿಲಾ ಅಂದ್ರೆ . . ನೀವ್ ಏನ್ ಬೇಕಾದ್ರೂ ಕರೀರಿ, ನಂಗೇನು ಅಡ್ಡಿಯಿಲ್ಲ . . ಆದ್ರೆ ನಾನು ಮಾತ್ರಾ ನಾನೇ ಅಂತಾರೆ..!


ಒಟ್ಟಾರೆ ನೋಡಿದ್ರೆ ಇವತ್ತು ಈ ಆಂದೋಲನ ಅಗತ್ಯವಾಗಿದೆ.ನಮ್ಮೂರಲ್ಲೇ ನೋಡಿದ್ರೆ . . ಮೊನ್ನೆ ಗದ್ದೆ ಇದ್ದ ಜಾಗದಲ್ಲಿ ಇವತ್ತು ರಬ್ಬರ್ ಕಾಣಿಸುತ್ತಿದೆ. . ಮೊನ್ನೆ ಮೊನ್ನೆ ಅಡಿಕೆ ತೋಟ ಕಾಣಿಸುತ್ತಿತ್ತು.ಇಂದು ಅಲ್ಲೇ ಇನ್ನೊಂದು ಬೆಳೆ ಬಂದಿದೆ.ಎಲ್ಲೂ ಕೂಡಾ ಹೊಸದಾದ ಗದ್ದೆಗಳು ಇಲ್ವೇ ಇಲ್ಲ. ಅದು ಅಸಲಾಗೋದಿಲ್ಲ ಅನ್ನೋದು ಎಲ್ಲರ ಬಾಯ್ಲಲೂ ಇರೋ ಮಾತು.ಇನ್ಯಾವುದಾದರೂ ಲಾಭದಾಯಕ ಕೃಷಿ ಮಾಡಿ ಅಕ್ಕಿ ತಂದರಾಯಿತು ಅನ್ನೋದು ಎಲ್ಲರ ಅಭಿಪ್ರಾಯ.ಆದ್ರೆ ಹಸಿವಾಗುತ್ತೆ ಅಂತ ದುಡ್ಡನ್ನೋ , ಅಡಿಕೆಯನ್ನೋ , ರಬ್ಬರ್ ಅನ್ನೋ ತಿನ್ನೋದಕ್ಕೆ ಆಗೋಲ್ಲ ಅಲ್ವಾ. . ?.ಹಸಿದ ಹೊಟ್ಟೆಗೆ ಅನ್ನ , ಗೋಧಿ , ಜೋಳವೇ ಬೇಕಲ್ವಾ. .?. ಹಾಗಾಗಿ ಉಳಿದ ಬೆಳೆಗಳು ನಮ್ಮ ಆರ್ಥಿಕ ಸಾಮರ್ಥ್ಯಕ್ಕಾಗಿ , ಬಲಿಷ್ಠತೆಗಾಗಿ ಅದೂ ಇರಲಿ.ಅದರ ಜೊತೆಗೆ ಒಂದರ್ಧ ವರ್ಷಕ್ಕೆ ಬರೋವಷ್ಟು ಅಕ್ಕಿಯನ್ನು ನಾವೇ ಬೆಳೆದರೆ ಹೇಗೆ.. .? .


ನಮ್ಮಲ್ಲೂ ಹಾಗೆಯೇ , ನಮ್ಮ ಮನೆ ಜಮೀನಿನಲ್ಲಿ ಅಡಿಕೆ , ರಬ್ಬರ್ ಫಸಂದಾಗಿದೆ. ಒಂಚೂರು ಖಾಲಿ ಜಾಗ ಇನ್ನೂ ಇದೆ.ಹಾಗಾಗಿ ಒಂದು ಐಡಿಯಾ ಹಾಕಿದೀವಿ. ಜನ ಸಿಗೋಲ್ಲ ಎಂಬ ಕೂಗಿದೆ.ಇದ್ದವರಿಗೆ ನಾಟಿ ಗೊತ್ತಿಲ್ಲ. ಏನಾದ್ರೂ ಮಾಡಿ ಅನ್ನದ ಸ್ವಾತಂತ್ರ್ಯ ಪಡೀಬೇಕು ಅನ್ನೋ ಛಲ ಇದೆ.ಅದಕ್ಕಾಗಿ ಪ್ರಯತ್ನ ನಡೀತಾ ಇದೆ.

ಮನಸ್ಸಿನಲ್ಲಿದ್ದ ಈ ಯೋಚನೆಗಳಿಗೆ ಇನ್ನಷ್ಟು ಶಕ್ತಿ ತುಂಬಿರೋರು ಈ ನಿತ್ಯಾನಂದರು ಅಂದರೆ ತಪ್ಪಲ್ಲ.ಏನೇ ಆಗ್ಲಿ ಇನ್ನೊಂದು ಹತ್ತೋ ಹದಿನೈದು ವರ್ಷದೊಳಗೆ ಈ ಸಂಗ್ರಾಮ ಅನಿವಾರ್ಯವಾಗ್ಲೂ ಬಹುದು . . . .

07 ಆಗಸ್ಟ್ 2010

ಇಲ್ಲಿನ ಹಲಸಿನ ಹಣ್ಣು ಸ್ವೀಟ್ ಇದೆ . . . !!



ಅದು ಮಂಗಳೂರು - ಬೆಂಗಳೂರು ಹೆದ್ದಾರಿ.ಅಲ್ಲಿ ಧರ್ಮಸ್ಥಳದ ಕ್ರಾಸ್ ರೋಡ್.ಒಂದು ಕ್ಷಣ ನಮ್ಮ ಗಾಡಿ ಸ್ಲೋ ಆದ್ರೆ ಸಾಕು , ಅಲ್ಲೊಬ್ಬ ಓಡಿ ಬಂದು ಸಾರ್ ಹಲಸಿನ ಹಣ್ಣು ಬೇಕಾ.. . ? ಸಾರ್ . . ಸ್ವೀಟ್ ಇದೆ ಅಂತಾನೆ.ನಾವು ಬೇಕಿದ್ರೆ ತಗೊಂಡ್ರಾಯ್ತು.ಇಲ್ಲಾಂದ್ರೆ ನಮ್ಮ ಪಾಡಿಗೆ ಹೋಗ್ತಾ ಇದ್ರಾಯ್ತು. ಸರಿಯಾಗಿ ನೋಡಿದ್ರೆ ನಿರುದ್ಯೋಗ ಸಮಸ್ಯೆಗೆ ಇದೂ ಒಂದು ಪರಿಹಾರ ಅಲ್ವೇ. .?. ಯಾಕೆ ಗೊತ್ತಾ. .?. ಸೂರ್ಯ ಮುಳುಗುವ ಹೊತ್ತಿನವರೆಗೆ ಹೀಗೆ ಮಾರಾಟದಿಂದ ಇವರು ಸಂಪಾದಿಸುವ ಹಣ ಸರಿಸುಮಾರು 600 ರಿಂದ 700 . .!!.

ಆತನ ಹೆಸರು ಮಹಮ್ಮದ್.ಊರು ನೆಲ್ಯಾಡಿ.ಆತನ ಕಾಯಕ ಹಲಸಿನ ಹಣ್ಣು ಮಾರೋದು. ಜೂನ್‌ನಿಂದ ಅಬ್ಬಬ್ಬಾ ಅಂದರೆ ಸಪ್ಟಂಬರ್‌ವರೆಗೆ ಈ ಕೆಲಸ.ಉಳಿದ ಸಮಯದಲ್ಲಿ ಇನ್ಯಾವುದಾದರೂ ಹಣ್ಣುಗಳ ಮಾರಾಟ.ಆದರೆ ಆತನಿಗೆ ಇಂಥದ್ದೇ ಅಂತ ಅಂಗಡಿ ಇಲ್ಲ.ರಸ್ತೆಯೇ ಈತನಿಗೆ ಎಲ್ಲವೂ.ಹಾಗಂತ ಈತ ಬೀದಿ ವ್ಯಾಪಾರಿಯಲ್ಲ. ಮಂಗಳೂರು - ಬೆಂಗಳೂರು ಹೆದ್ದಾರಿಯಲ್ಲಿ ಧರ್ಮಸ್ಥಳದ ಕ್ರಾಸ್‌ನ ಪೆರಿಯಶಾಂತಿಯಲ್ಲಿ ಈತ ಹಲಸಿನ ಹಣ್ಣುಗಳನ್ನು ರೆಡಿ ಪ್ಯಾಕೇಟ್ ಮಾಡಿ ನಿಲ್ಲುತ್ತಾನೆ.ಬೆಳಗ್ಗೆ ಸೂರ್ಯ ಉದಯಿಸಿ ಇನ್ನೇನು ನೆತ್ತಿಗೆ ಬರುತ್ತಾನೆ ಅನ್ನುವಷ್ಟರಲ್ಲಿ ಈ ಮಹಮ್ಮದ್ ಪೆರಿಯಶಾಂತಿಯಲ್ಲಿ ಉದಯಿಸಿಕೊಳ್ಳುತ್ತಾನೆ.ಅಲ್ಲಿಂದ ಆತನ ಕಾಯಕ ಶುರು.ಅದೆಲ್ಲಿಂದಲೇ ವಾಹನ ಬರಲಿ ಹಲಸಿನ ಹಣ್ಣಿನ ಪ್ಯಾಕೇಟ್ ತೋರಿಸುತ್ತಾನೆ.ಸಾರ್ ಸ್ವೀಟ್ ಇದೆ ಅಂತ ಬೊಬ್ಬಿಡುತ್ತಾನೆ. ದೂರದ ಊರಿನ ಜನ ಗಾಡಿ ನಿಲ್ಲಿಸ್ತಾರೆ.ರೇಟ್ ಎಷ್ಟಪ್ಪಾ ಅಂತಾರೆ. ಸಾರ್ , ಹತ್ತು ಅಂತಾನೆ. ಏನ್ಪಪ್ಪಾ ಈ ಚಿಕ್ಕ ಪ್ಯಾಕೇಟ್‌ಗೆ ಹತ್ತು ರುಪಾಯಿಯಾ ಅಂತಾರೆ.ಅಲ್ಲಾ ಸಾರ್ ಹತ್ತು ರುಪಾಯಿಗೆ ಎರಡು ಪ್ಯಾಕೇಟ್ ಅಂತಾನೆ ಈ ಚಾಲಕಿ ಮಹಮ್ಮದ್. ಇನ್ನು ಊರ ಜನರಿಂದ ಏನಾದ್ರು ತಪ್ಪಿ 5 ರುಪಾಯಿ ಹೆಚ್ಚು ಬಂದ್ರೂ ಈತನಿಗೆ ಅದೇನೋ ಕಿರಿಕಿರಿ. ಛೇ . . ಛೇ ಅವ್ರಿಗೆ ಲಾಸ್ ಆಯ್ತು.ಅವ್ರು ನಮ್ಮ ಊರಿನೋರೇ ಅಂತಾನೆ.

ಅದೆಲ್ಲಾ ಸರಿ.
ಮಹಮ್ಮದ್ ಇದನ್ನು ಹೇಗೆ ತಯಾರು ಮಾಡ್ತಾನೆ ಮತ್ತು ಮಾರ್ಕೇಟಿಂಗ್ ಹೇಗೆ ಅಂತ ಆತನಲ್ಲಿ ಕೇಳಿದ್ರೆ ಆತ ವಿವರಿಸ್ತಾ ಹೋಗ್ತಾನೆ.ನೆಲ್ಯಾಡಿಯ ಆಸುಪಾಸಿನ ಕೃಷಿಕರ ತೋಟದಲ್ಲಿ ಹಲಸಿನ ಹಣ್ಣು ಇದೆಯಾ ಅಂತ ವಿಚಾರಿಸಿದ ಬಳಿಕ ಒಂದು ಹಣ್ಣಿಗೆ 30 ರುಪಾಯಿಯಂತೆ ನೀಡಿ ಅದನ್ನು ಪಡೆಯುತ್ತಾನೆ.ಇನ್ನು ಈ ಹಣ್ಣನ್ನು ಮರದಿಂದ ಕೀಳಲು ಮರವೇರುವ ಕಾರ್ಮಿಕನಿಗೆ ಒಂದು ಹಣ್ಣಿಗೆ 5 ರಿಂದ 10 ರುಪಾಯಿ ಕೊಡಬೇಕು.ಇದಾದ ನಂತರ ಈ ಎಲ್ಲಾ ಹಣ್ಣುಗಳನ್ನು ಮನೆಗೆ ಕೊಂಡೊಯ್ದು ಅದನ್ನು ಹದ ಮಾಡಿದ ಬಳಿಕ ಚಿಕ್ಕ ಚಿಕ್ಕ ಪ್ಯಾಕೇಟ್ ಮಾಡಲಾಗುತ್ತದೆ. ಒಂದು ಪ್ಯಾಕೇಟ್‌ನಲ್ಲಿ ಇಷ್ಟೇ ಹಣ್ಣು ಅಂತೇನಿಲ್ಲ. ಪ್ಯಾಕೇಟ್‌ನ ಅರ್ಧದಷ್ಟು. ಇದೆಲ್ಲಾ ಆದ ಮೇಲೆ ಮಾರಾಟಕ್ಕೆ ಸಿದ್ದವಾಗುತ್ತದೆ.ಇದಾಗುವ ವೇಳೆ ಒಂದು ಹಲಸಿನ ಹಣ್ಣಿನ ಅಸಲು 40 ರಿಂದ 50 ರುಪಾಯಿ ಆಗಿರುತ್ತದೆ.

ಬೆಳಗ್ಗೆ 11 ಗಂಟೆಯ ನಂತರ ಪೆರಿಯಶಾಂತಿ ಕ್ರಾಸ್‌ನಲ್ಲಿ ಮಹಮ್ಮದ್ ಬಂದು ನಿಲ್ಲುತ್ತಾನೆ.ಹಲಸಿನ ಹಣ್ಣುಗಳ ವ್ಯಾಪಾರ ಶುರುಮಾಡುತ್ತಾನೆ.ಬೆಳಗ್ಗೆ ಹದ ಮಾಡಿದ ಹಣ್ಣು ಮಧ್ಯಾಹ್ನದ ವೇಳೆಗೆ ಮುಗಿಯಬೇಕು ಎನ್ನುವುದು ಈ ವ್ಯಾಪಾರಿಯ ಟಾರ್ಗೆಟ್.ಯಾಕೆ ಗೊತ್ತಾ ಆ ಮೇಲೆ ಹಣ್ಣಿನ ಒರಿಜಿನಲ್ ಸ್ಮೆಲ್ ಹೋಗುತ್ತದೆ.ಒಂದು ಹಣ್ಣಿನಲ್ಲಿ ಸಾಮಾನ್ಯ ದಿನಗಳಲ್ಲಿ 150 ರುಪಾಯಿವರೆಗೂ ಮಾಡುತ್ತಾನಂತೆ.ಇನ್ನು ಮಧ್ಯಾಹ್ನದ ಊಟವೂ ಪೆರಿಯಶಾಂತಿ ಕ್ರಾಸ್‌ಗೇ ಬರುತ್ತದೆ.ಅದರ ಜೊತೆಗೆ ಇನ್ನೊಂದು ಹಲಸಿನ ಹಣ್ಣಿನ ಪ್ಯಾಕೇಟ್‌ಗಳು ಕೂಡಾ.ಮತ್ತೆ ವ್ಯಾಪಾರ ಶುರು.ಇನ್ನು ವಾರಾಂತ್ಯದ ದಿನಗಳಲ್ಲಿ ದಿನಕ್ಕೆ 5 -6 ಹಲಸಿನ ಹಣ್ಣು ಮುಗಿಯುತ್ತಂತೆ.ಒಂದು ಪ್ಯಾಕೇಟ್‌ಗೆ 5 ರುಪಾಯಿಯ ಹಾಗೆ ಮಾರಾಟ.ಹೀಗೇ ಸೀಸನ್‌ನಲ್ಲಿ , ವಾರಾಂತ್ಯದ ಸಮಯದಲ್ಲಿ ದಿನಕ್ಕೆ 600 ರಿಂದ 700 ರುಪಾಯಿ ಸಿಗುತ್ತಂತೆ ಈ ಮಹಮ್ಮದ್‌ಗೆ.ಇನ್ನು ಹಲಸಿನ ಹಣ್ಣು ಹೆಚ್ಚಾಗಿರುವ ಸಂದರ್ಭದಲ್ಲಿ ಇಡೀ ಹಣ್ಣು ಕೂಡಾ ಮಾರಾಟವಾಗುತ್ತದೆ.ಅದಕ್ಕೆ ೧೫೦ ರುಪಾಯಿ , ೨೦೦ ರುಪಾಯಿ ದರ ಇರುತ್ತೆ.ಬೇಡಿಕೆಗೆ ಅನುಗುಣವಾಗಿ ರೇಟ್ ಕೂಡಾ ಹೆಚ್ಚು ಕಮ್ಮಿ ಆಗುತ್ತೆ.ಸಂಜೆ ಸುಮಾರು ೬ ಗಂಟೆಯವರೆಗೆ ಈ ವ್ಯಾಪಾರ ನಡೆಯುತ್ತದೆ.

ಆತ ಅಂತಾನೆ , ಇಲ್ಲಿ ನಾನೋಬ್ನೇ ಮಾರೋದಲ್ಲ ಕೆಲವೊಂದು ದಿನ ೪-೫ ಜನವೂ ಇರ್‍ತಾರೆ ಹಾಗಾಗಿ ಒಂದೊಂದು ದಿನ ತುಂಬಾ ಲಾಭವಾಗುತ್ತದೆ.ಇನ್ನೂ ಒಂದೊಂದು ದಿನ ನಷ್ಟವೂ ಆಗುತ್ತದೆ.ಹಲಸಿನ ಹಣ್ಣು ಪ್ಯಾಕೇಟ್ ಉಳಿಯುತ್ತದೆ.ಕೊನೆಗೆ ಅದನ್ನು ಕಾಡಿನ ಮಂಗಗಳಿಗೆ ಎಸೆದು ಹೋಗೋದು ಅಂತಾನೆ ಮಹಮ್ಮದ್. ಎಲ್ಲಾದ್ರೂ ಪ್ರವಾಸಿಗರ ವಾಹನ ನಿಲ್ಸಿದ್ರೆ ಬಂಪರ್ ಎಂದು ಖುಷಿ ಪಡ್ತಾನೆ.ಇನ್ನು ಪೆರಿಯಶಾಂತಿ ಒಂದು ಸ್ವಲ್ಪ ಕಾಡಿನ ಪ್ರದೇಶವಾದ್ದರಿಂದ ಕೆಲವು ವಾಹನದೋರು ನಿಲ್ಸೋದೇ ಇಲ್ಲ.ಹೆದರಿಕೆಯೂ ಆಗುತ್ತಲ್ಲ ಅಂತಾನೆ.ಒಟ್ಟಾರೆ ಹೇಳೋದಾದ್ರೆ ಲಾಭ ಇದೆ.ಹಲಸಿನ ಹಣ್ಣು ಮುಗಿದ ಮೇಲೆ ಅನಾನಸು ಇದೆ , ಮತ್ತೆ ಇನ್ಯಾವುದಾದ್ರೂ ಹಣ್ಣು ಸಿಗುತ್ತೆ , ಬೇಸಗೆಯಲ್ಲಾದ್ರೆ ಕಬ್ಬಿನ ಜ್ಯೂಸ್ ಕೂಡಾ ಇಲ್ಲೇ ಮಾಡ್ತೀವಿ.ಕಾಡಿನ ನಡುವೆ ಅಲ್ವಾ ಖುಷಿ ಇರುತ್ತೆ ಅಂತಾನೆ.

ಒಂದು ಕೆಲಸದಲ್ಲಿ ಸವಾಲುಗಳು ಇದ್ದೇ ಇರ್‍ತವೆ ಬಿಡಿ.ಅದೆಲ್ಲವನ್ನೂ ಮೆಟ್ಟಿ ನಿಂತಾಗಲಷ್ಟೇ ಯಶಸ್ಸು ಸಾಧ್ಯ.ಅಂತಹದ್ದರಲ್ಲಿ ಏನೂ ಕೆಲಸವೇ ಸಿಕ್ತಿಲ್ಲ ಅನ್ನೋ ಜನರಿಗೆ, ಇದನ್ನೊಂದು,ಅಂದರೆ ಹಲಸಿನ ಹಣ್ಣು ವ್ಯಾಪಾರ ಮಾಡೋದು ಕೂಡಾ ಒಂದು ಉದ್ಯಮವಾಗಬಹುದಲ್ವಾ. .? ಹೀಗೇ ರಸ್ತೆಬದಿ ಮಾರಾಟ ಮಾಡಬೇಕೆಂದೇನಿಲ್ಲ.ನಗರದ ಮಾರುಕಟ್ಟೆ ಹಿಡಿಬಹುದಲ್ವಾ. .?. ಮನಸ್ಸಿದ್ದರೆ , ಸವಾಲು ಸ್ವೀಕರಿಸಬಹುದಾದರೆ ಎಲ್ಲವೂ ಸಾಧ್ಯ ಅಲ್ವೇ. . .? ಅದಕ್ಕೆ ಈ ಮಹಮ್ಮದ್ ಒಬ್ಬ ಸಾಕ್ಷಿ ಅಷ್ಟೆ.

26 ಜುಲೈ 2010

ಇದೊಂದು ಅಚ್ಚರಿ . . . . .

ಅಲ್ಲೊಂದು ವಿಶೇಷ ಕಂಡಿದ್ದೇನೆ ನಾನು.

ನನ್ನ ಪರಿಚಿತರೊಬ್ಬರು ಫೋನ್ ಮಾಡಿ ಈ ವಿಶೇಷವನ್ನು ಹೇಳಿದ್ದರು. ಕ್ಯಾಮಾರಾ ಬಗಲಿಗೆ ಹಾಕಿಕೊಂಡು ಹೋಗಿ ನೋಡಿದಾಗ ಈ ಅಚ್ಚರಿ ಸಿಕ್ಕಿದೆ. ಅದೇನು ಅಂತ ನೋಡಿ . . . .




ಇದು ಮೂರು ಕೊಂಬಿನ ಹಸು. ಎರಡು ತಲೆಯಲ್ಲಾದರೆ. ಇನ್ನೊಂದು ಹಸುವಿನ ದೇಹದ ಹಿಂಭಾಗದಲ್ಲಿ ಮೂಡುತ್ತಿದೆ.

25 ಜುಲೈ 2010

ಮಳೆಗಾಲದ ಅತಿಥಿ ಬಂದಿದ್ದಾನೆ. . . . ..

ನಮ್ಮಲ್ಲೀಗ ಆಟಿ ತಿಂಗಳು.ಮಳೆ ಜೋರಾಗೇ ಬರಬೇಕಿತ್ತು.ಆದ್ರೆ ಕಾಲ ಬದ್ಲಾಗಿದೆ ಅಲ್ವಾ. ಅಷ್ಟೊಂದು ಜೋರಾದ ಮಳೆ ಇಲ್ಲ.ಮಳೆ ಆದ್ರೂ ನೀರ ವರತೆ ಇನ್ನೂ ಆಗಿಲ್ಲ.ಈ ನಡುವೆ ಆಟಿ ತಿಂಗಳ ಕೆಲ ಸಂಪ್ರದಾಯಗಳು ಮಳೆ ಹಾಗೇನೇ ಕಟಿಮೆ ಆಗ್ತಾ ಇದೆ.ಅಂತಹದ್ದರಲ್ಲಿ ಆಟಿ ಕಳೆಂಜವೂ ಒಂದು.ಅದೀಗ ನಮ್ಮೂರಲ್ಲೇನೋ ನಡೀತಾ ಇದೆ.ಅದರ ಸುತ್ತ ಕೆಲ ಹೊತ್ತು. . .






ಅಲ್ಲೆಲ್ಲಾ ಹೇಳುವ ಆಷಾಡ ಮಾಸವನ್ನು ನಮ್ಮೂರಲ್ಲಿ ಆಟಿ ತಿಂಗಳು ಅಂತ ಕರೀತಾರೆ. ಆಟಿ ತಿಂಗಳು ಅಂದ್ರೆ ತಂಗಳು ಅನ್ನಕ್ಕೂ ತತ್ತ್ವಾರದ ಸಮಯ.ಅಂದ್ರೆ ಅಷ್ಟೂ ಕಷ್ಟದ ಸಮಯ ಅಂತ ಹಿಂದೊಂದು ಕಾಲದಲ್ಲಿ ವಾಡಿಕೆ ಇತ್ತಂತೆ. ಹಿರಿಯರು ಆ ಬಗ್ಗೆ ಒಂದೊಂದು ಕತೆ ಹೇಳ್ತಾರೆ. ಕೆಲವು ಕಡೆ ಊಟ ಮಾಡದೇ ಕಾಡಲಲಿ ಸಿಗೋ ವಸ್ತುಗಳ್ಲಲೇ ಕಾಲ ಕಳೆದವ್ರೂ ಇದ್ರಂತೆ.ಇದ್ರ ಜತೆಗೆ ರೋಗಗಳ ಭಯ ಬೇರೆ.ಹೀಗಾಗಿ ಜನ ಹೆದರುವ ಕಾಲವಂತೆ ಅದು.ಅದಕ್ಕಾಗಿ ಈ ಆಟಿ ತಿಂಗಳಿನಲ್ಲಿ ವಿವಿದ ಆಚರಣೆಗಳು ಇರುತ್ತದೆ.ಒಂದು ಕಡೆ ಧೋ... ಸುರಿಯುವ ಮಳೆ ಇನ್ನೊಂದು ಕಡೆ ಸುಡು ಬಿಸಿಲು. ಇಂತಹ ಸಮಯದಲ್ಲಿ ಸಹಜವಾಗಿಯೇ ರೋಗಗಳು ಬಾಧಿಸುತ್ತದೆ. ಅದಕ್ಕಾಗಿ ಊರ ಮಾರಿ ಓಡಿಸುವುದು ಮತ್ತು ಊರಿನ ಮಾರಿ ಕಳೆಯಲು ಆಟಿ ಕಳೆಂಜ ಬರುತ್ತಾನೆ.ಈ ಮೂಲಕ ಮಾನಸಿಕ ನೆಮ್ಮದಿಯನ್ನು ಕಂಡುಕೊಳ್ಳಲಾಗುತ್ತಿತ್ತು.

ಆಟಿ ತಿಂಗಳಲ್ಲಿ ಕಾಡೋ ಆ ಭಯವನ್ನು ನಿವಾರಿಸಲು ಊರ ಮಾರಿ ಓಡಿಸುವ ಪದ್ದತಿ ಇತ್ತಂತೆ. ಊರ ಜನರೆಲ್ಲಾ ಒಂದೆಡೆ ಸೇರಿ ಊರಿಗೆ ಬಂದ ಮಾರಿಯನ್ನು ಓಡಿಸಲು ಒಂದು ದಿನ ನಿಗದಿ ಮಾಡುತ್ತಾರೆ. ಅಂದು ರಾತ್ರಿ ವೇಳೆ ಊರಿನ ಪ್ರತೀ ಮನೆಯಿಂದ ಒಬ್ಬೊಬ್ಬರಂತೆ ತೆಂಗಿನ ಗರಿಗಳಿಂದ ಮಾಡಿದ ಬಲಿಯನ್ನು ತರುತ್ತಾರೆ. ಹೀಗೆ ಮನೆಯಿಂದ ಬರುವ ಜನರೆಲ್ಲಾ ಊರ ರಸ್ತೆಯಲ್ಲಿ ರಾತ್ರಿ ವೇಳೆ ಜೊತೆಯಾಗಿ ಮಾರಿಯನ್ನು ಓಡಿಸಿ ಎಂದು ಬೊಬ್ಬಿಡುತ್ತಾ ಡಾಮರು ರಸ್ತೆಯಲ್ಲಿ ಸಾಗಿ ನಿಗದಿತ ಸ್ಥಳದಲ್ಲಿ ಅಂದರೆ ಊರಿನ ಗಡಿಯಲ್ಲಿ ಎಲ್ಲರೂ ತೆಂಗಿನ ಬಲಿಯಲ್ಲಿಟ್ಟು ಅಲ್ಲಿ ಪೂಜೆ ಮಾಡಲಾಗುತ್ತದೆ.ಇದೇ ವೇಳೆ ಕೆಲ ಜನ ತರುವ ಕೋಳಿಯನ್ನು ಅಲ್ಲೇ ಬಲಿ ನೀಡಲಾಗುತ್ತದೆ.. ನಂತರ ಈ ಊರಿನಿಂದ ಮುಂದಿನ ಊರಿಗೆ ಮಾರಿಯನ್ನು ಓಡಿಸಲಾಗುತ್ತದೆ.






ಇದು ಮಾತ್ರಾ ಅಲ್ಲ ಇದರ ಜೊತೆಗೆ ಊರಿನ ಮಾರಿಯನ್ನು ಕಳೆಯಲು ಆಟಿ ಕಳೆಂಜನೂ ಬರುತ್ತಾನೆ.ಮಳೆಗಾಲದಲ್ಲಿ ಸುರಿಯುವ ಅಗಾಧವಾದ ಮಳೆಯಿಂದ ಜನ ಮಾನಸಿಕವಾಗಿ ನೊಂದುಕೊಳ್ಳುವ ಈ ಸಮಯದಲ್ಲಿ ತುಳುನಾಡಿನಲ್ಲಿ ಆಟಿ ಕಳೆಂಜ ಮನೆ ಮನೆಗೆ ತೆರಳಿ ಜನರ ಭಯವನ್ನು ನಿವಾರಿಸುತ್ತಾನೆ. ತುಳು ನಾಡಿನಲ್ಲಿ ಮಳೆಗಾಲದಲ್ಲಿ ಎಡೆಬಿಡದೆ ಸುರಿಯುವ ಮಳೆಗೆ ಕೂಲಿಕಾರರಿಗೆ , ಕೃಷಿಕರಿಗೆ ಯಾವುದೇ ಕೆಲಸ ಮಾಡಲಾಗದೇ ಸಂಪಾದಿಸಲೂ ಸಾದ್ಯವಾಗದೇ ಇರುವ ಸಂದರ್ಭದಲ್ಲಿ ಬೇಸಗೆಯಲ್ಲಿ ಕೂಡಿಟ್ಟ ಆಹಾರ, ಧವಸ ಧಾನ್ಯಗಳೇ ಹೊಟ್ಟೆ ಹೊರೆಯಲು ಜೀವನಾಧಾರ.ಆದರೆ ಅದು ಕೂಡಾ ಈ ಆಟಿಯ ಸಮಯದಲ್ಲಿ ಮುಗಿಯಲು ಆರಂಭವಾಗುತ್ತದೆ. ಇದೇ ವೇಳೆ ಊರಿನಲ್ಲಿ ರೋಗರುಜಿನಗಳು ಕಾಣಿಸಿಕೊಳ್ಳುತ್ತವೆ.ಜನ ಭಯಭೀತರಾಗುತ್ತಾರೆ.ಒಟ್ಟಿನಲ್ಲಿ ಪ್ರಕೃತಿ ವಿಕೋಪದಿಂದಾಗಿ ಊರಿನಲ್ಲೆಲ್ಲಾ ಕಂಗಾಲಾಗಿರುವ ಈ ಸಮಯದಲ್ಲಿ ಜನರ ಕಷ್ಟವನ್ನು ನಿವಾರಿಸಲು ಜಾನಪದ ಆಚರಣೆಯ ಮೂಲಕ ಆಟಿ ಕಳೆಂಜ ಮನೆ ಮನೆಗೆ ಬಂದು ಮನೆಯಂಗಳದಲ್ಲಿ ಕುಣಿದು ಮನೆ ಒಡತಿ ನೀಡುವ ಹುಳಿ, ತೆಂಗಿನಕಾಯಿ, ಬಟ್ಟೆ, ತೆಂಗಿನ ಎಣ್ಣೆ ಇತ್ಯಾದಿಗಳನ್ನು ಪಡೆದು ತೋಟದಿಂದ ಫಲವಸ್ತುವನ್ನು ಪಡೆದು ಮನೆಗೆ ಬಂದ ಮಾರಿಯನ್ನು ಕಳೆಂಜ ಕಳೆಯುತ್ತಾನೆ ಎಂಬ ನಂಬಿಕೆಯಿದೆ.ಆಟಿ ಕಳೆಂಜಕ್ಕೆ ಕಿನ್ನಿ ಎಂಬ ಇನ್ನೊಂದು ವೇಷವೂ ಸಾಥಿಯಾಗುತ್ತದೆ. ಊರಿನಲ್ಲಿ ಭೂತ ನರ್ತನ ಮಾಡುವ ಕಲಾವಿದರು ಈ ಕಳೆಂಜ ವೇಷವನ್ನು ಹಾಕುತ್ತಾರೆ. ತೆಂಗಿನ ಸಿರಿ , ಸುಣ್ಣ , ಬಣ್ಣಗಳಿಂದ ಅಲಂಕಾರಗೊಂಡ ಬಳಿಕ ಊರಿನ ಮನೆ ಮನೆಗಳಿಗೆ ತೆರಳುತ್ತಾರೆ. ತೆಂಬರೆಯ ಹಿಮ್ಮೇಳಕ್ಕೆ ಆಟಿ ಕಳೆಂಜನು ಮನೆಯಂಗಳದಲ್ಲಿ ಛತ್ರಿಯನ್ನು ಕೈಯಲ್ಲಿ ಹಿಡಿದುಕೊಂಡು ತಿರುಗಿಸುತ್ತಾ ಕುಣಿಯುತ್ತಾನೆ.ಹಿಮ್ಮೇಳದವರು ಜಾನಪದ ಪಾಡ್ಡನವನ್ನು ಹೇಳುತ್ತಾ ಕಳೆಂಜನ ಇತಿಹಾಸವನ್ನು ವಿವರಿಸುತ್ತಾರೆ. ಕೊನೆಗೆ ತೋಟಕ್ಕೆ ತೆರಳಿ ಫಲ ವಸ್ತುವನ್ನು ಕೊಂಡೊಯ್ಯುವ ಪದ್ದತಿ ಇದೆ.ಇದರಿಂದಾಗಿ ಕೃಷಿಗೆ ತಟ್ಟಿದ ರೋಗಗಳೂ ಹೋಗುತ್ತವೆ ಎನ್ನುವ ನಂಬಿಕೆ ಇದೆ.ಇದೆಲ್ಲಾ ಒಂದು ಕತೆ.ಹೀಗೇ ಬೆಳೆದು ಬಂದ ಒಂದು ಆಚರಣೆ ಇಂದಿಗೂ ಜೀವಂತವಾಗಿ ಉಳಿದುಕೊಂಡಿದೆ.ಆದ್ರೆ ಆಧುನಿಕವಾದ ಈ ಕಾಲದಲ್ಲಿ ಅದೆಲ್ಲಾ ಮೂಲೆಗುಂಪಾಗುತ್ತಿರುವುದು ಒಪ್ಪಲೇ ಬೇಕಾದ ಸತ್ಯ.





ಅದರಲ್ಲೂ ನಮ್ಮೂರಲ್ಲಿ ಇನ್ನೂ ಈ ಆಟಿ ಕಳೆಂಜ ಉಳಿದುಕೊಂಡಿದೆ ಅನ್ನೋದೇ ನನಗೆ ಸಂತಸ.

24 ಜುಲೈ 2010

ಕಲ್ಲುಗಳು ತುಂಬಿದ ಆತ್ಮವಿಶ್ವಾಸ. . .




ಆ ಕಲ್ಲುಗಳಿಗೆ ಎಂಥಾ ಶಕ್ತಿರೀ . . ಆ ಕಲ್ಲುಗಳು ಕೈಯೊಳಗಿದ್ರೆ ಮುಸ್ಸಂಜೆಯಿಂದ ತೊಡಗಿ ರಾತ್ರಿವರೆಗೂ ಎಲ್ಲಿದೆಂಲ್ಲಿಗೂ ಹೋಗೋವಾಗ್ಲೂ ಭಯಾನೇ ಆಗಲ್ಲ. ಯಾವುದೇ ಕ್ಷುದ್ರ ಶಕ್ತಿಯೂ ನಮ್ಮತ್ರ ಬರೋದಿಲ್ಲ , ಗುಮ್ಮನ ಕಾಟವೂ ಇರೋದಿಲ್ಲ. ಹಾಗೊಂದು ನಂಬಿಕೆ ಇತ್ತು.ನಾವು ಚಿಕ್ಕವರಿರುವಾಗ. . .

ನಿಜಕ್ಕೂ ಆಗ ಅದೊಂದು ಅಚ್ಚರಿ ಸಂಗತಿ. ನನ್ನನ್ನೂ ಸೇರಿಸಿ ನಾವೆಲ್ಲಾ ಚಿಕ್ಕವರಿದ್ದಾಗ ಹೆದರು ಪುಕ್ಕಲ.ಆಗ ನಾವಿನ್ನೂ ಎರಡೋ ಮೂರೋ ಕ್ಲಾಸ್. ಅಲ್ಲಿ , ಇಲ್ಲಿ ಕತೆ ಪುಸ್ತಕ ಓದಿದಾಗ ಕಾಣೋ ಈ ಭೂತಗಳ , ಗುಮ್ಮನ ಚಿತ್ರಗಳು. ಅದರ ಸುತ್ತಲೂ ಮನಸ್ಸಿನೊಳಗೆ ಹೆಣೆದುಕೊಳ್ಳೋ ಇನ್ನಷ್ಟು ಕತೆಗಳು.ಆಗ ಮನಸ್ಸಿನೊಳಗೆ ಅದೇನೋ ಭಯ.ಹೀಗಾಗಿ ಸಂಜೆ ಕತ್ತಲು ಆವರಿಸಿದ್ರೆ ಸಾಕು. ನಾವೆಲ್ಲಾ ಗೂಡು ಸೇರಿ ಗುಬ್ಬಚ್ಚಿಯಂತೆ ಸುರುಟಿ ಬಿಡುತ್ತಿದ್ದೆವು.ಇನ್ನು ಮನೆಯ ಹೊರಗೆ ಬರಬೇಕಾದ್ರೆ ಇಬ್ಬಿಬ್ರು ಬಾಡಿ ಗಾರ್ಡ್ ಬೇಕೇ ಬೇಕು.ರಾತ್ರಿ ಬಹಿರ್ದೆಸೆಗೆ ಹೋಗೂ ಸುದ್ದಿನೇ ಇಲ್ಲ.ಎಲ್ಲಾನೂ ಬೆಳಗ್ಗೆ ಎದ್ದ ಮೇಲೇನೇ. ಇಂತಹ ಹೆದರು ಪುಕ್ಕಲು ಸಮಯ ಅದು.ಆದ್ರೆ ಅಂತಹ ಭಯಕ್ಕೆ ಒಂದು ಮದ್ದಿತ್ತು. ಕೇವಲ ಮೂರೇ ಮೂರು ಕಲ್ಲು.ಅದೆರಲ್ಲೇ ಧೈರ್ಯ ತುಂಬುತ್ತಿತ್ತು.ಅದಕ್ಕೆ ನನ್ನ ಅಮ್ಮ ಕಾರಣರಾಗಿದ್ದರು.ಆ ಕಲ್ಲಲ್ಲಿ ಬೇರೇನೂ ಇಲ್ಲ.ಕೇವಲ ಕಲ್ಲು‌ಅದು.ಆದ್ರೂ ಒಂದು ಶಕ್ತಿ ನಮ್ಮ ಮನಸ್ಸಿಗೆ ಬರುತ್ತಿತ್ತು.

ಸಂಜೆಯ ವೇಳೆಗೆ ಅಂದರೆ ಸೂರ್ಯ ಕಡಲು ಸೇರುವ ಸಮಯವದು.ನನಗೆ ಅನಿವಾರ್ಯವಾಗಿ ಆಚೆ ಮನೆಗೆ ಹೋಗಲೇ ಬೇಕು.ಬಾಡಿ ಗಾರ್ಡ್‌ಗಳು ಯಾರೂ ಇಲ್ಲ. ಅಮ್ಮನಿಗೆ ಮನೆಯಲ್ಲಿ ಕೆಲಸವಿದೆ.ಬೇರಾರೂ ಬರೋರಿಲ್ಲ.ತೋಟ ದಾಟಿ ಆಚೆ ಮನೆಗೆ ಹೋಗ್ಬೇಕು.ಮತ್ತೆ ಬರ‍ಬೇಕು.ಅಬ್ಬಾ . . . ಭಯ ಮೈಯನ್ನೇ ಆಗ್ಲೇ ಸುತ್ತಿಕೊಂಡಿತ್ತು.ಆಗ ಅಮ್ಮ ಒಂದು ಮಂತ್ರ ಹೇಳಿಕೊಟ್ಟರು. ನೆಲದಿಂದ ಮೂರು ದೇವರ ಹೆಸರು ಹೇಳಿ ಕಲ್ಲು ಹಿಡ್ಕೋ. ಅದನ್ನು ಗಟ್ಟಿಯಾಗಿ ಹಿಡ್ಕೋ. .ಎಲ್ಲೂ ಬೀಳಿಸಬೇಡ.ಆಚೆ ಮನೆ ಬಂದಾಗ ಅಲ್ಲೇ ಎಲ್ಲಾದ್ರೂ ಇಡು.ಮತ್ತೆ ಬರೋವಾಗ್ಲೂ ಹಾಗೇ ಮಾಡು.ಏನೂ ಆಗಲ್ಲ ಅಂತ ಅಂದ್ರು. ಓಕೆ. ಹಾಗೇನೇ ಮಾಡಿಯಾಯ್ತು. 3 ಕಲ್ಲು. ರಾಮ , ಲಕ್ಷ್ಮಣ , ಸೀತೆ. . ಕಲ್ಲು ಕೈಯೊಳಗೆ ಗಟ್ಟಿಯಾಯ್ತು.ನಡು ತೋಟದಲ್ಲಿ ಕುಯ್ . . ಅನ್ನೋ ಸದ್ದು . . ಕೈ ಗಟ್ಟಿಯಾಯ್ತು. . 3 ದೇವರ ನೆನಪಾಯ್ತು. . ಸದ್ದು ಮಾಯವಾಯ್ತು. . ಮತ್ತೆ ಮುಂದೆ ಹೋದಾಗ ಇನ್ನೊಂದು ಸದ್ದು . . ಮತ್ತೆ ಕೈಸುತ್ತಿಕೊಂಡಿತು.ಕಲ್ಲು ನೆನಪಾಯ್ತು ಜೊತೆಗೆ 3 ದೇವರು ಕೂಡಾ.. . . ಆ ಹೊತ್ತಿಗೆ ಮನೆ ಬಂತು. ಮತ್ತೆ ಅಲ್ಲಿಂದ ಹೊರಡೋವಾಗ್ಲೂ 3 ಕಲ್ಲು, ಅದೇ ದೇವರು . . ಅದೇ ಕಲ್ಲು . . ಯಾವುದೇ ಸದ್ದಿಲ್ಲ.ಸೀದಾ ಸೀದಾ ಮನೆಗೆ. ಅಬ್ಬಾ ಆ 3 ಕಲ್ಲಿಗೆ ಅದೆಂತಹಾ ಶಕ್ತಿ.. ಅಂತ ದೇವರನ್ನೂ ಜೊತೆಗೆ ನೆನೆದುಕೊಂಡು 3 ಕಲ್ಲನ್ನೂ ಎಸೆದಾಯ್ತು.ಮತ್ತೆಲ್ಲಿಗೂ ಹೋಗೋವಾಗ್ಲೂ ಅದೇ ಕಲ್ಲು . . ಅದೇ ದೇವರು . ಅದೇ ಶಕ್ತಿ. .. ಹಾಗಿದ್ರೆ ಅದ್ಯಾವ ಶಕ್ತಿ . . ಅಂತ ಆಗ ನನ್ನನ್ನು ಕಾಡ್ತಾ ಇತ್ತು.

ಮನಸ್ಸಿಗೆ ಧೈರ್ಯ ತುಂಬೋ ಒಂದೇ ಒಂದು ಎಳೆ ಸಿಕ್ರೂ ಸಾಕು ನಾವು ಏನು ಬೇಕಾದ್ರೂ ಮಾಡಬಹುದು.ಒಂದು ಕ್ಷಣ ಇದು ಸಾಧ್ಯವಿಲ್ಲ ಅಂತ ನಾವೇನಾದ್ರೂ ಯೋಚ್ನೆ ಮಾಡಿದ್ರೂ ಸಾಕು ಅದು ಸಾಧ್ಯನೇ ಇಲ್ಲ.ನಮ್ಗೂ ಹಾಗೆ.ಆ ಮೂರು ಕಲ್ಲು ಅಂದು ಶಕ್ತಿ ತುಂಬಿತ್ತು.ಇಂದಿಗೂ ಅಮ್ಮ ಹೇಳುವ ಸಂಗತಿ ಇರಬಹುದು , ಮಿತ್ರರು ಹೇಳೋ ಸಂಗತಿಗಳು ಇರಬಹುದು , ಅಥವಾ ಮನಸ್ಸು ಹೇಳೋ ಸಂಗತಿಗಳು ಕೂಡಾ ಅದೇ ಕಲ್ಲಿನಂತೆ.ಮನಸ್ಸಿಗೆ , ಕೈಗಳಿಗೆ , ಕಾಲುಗಳಿಗೆ , ದೇಹಕ್ಕೆ ಅದೊಂದು ಟಾನಿಕ್‌ನಂತೆ.ಕೆಲಸ ಮಾಡಿಸಿ ಬಿಡುತ್ತದೆ.ಅದೇ ನೀನು ದಡ್ಡ , ನಿನಗೇನು ಸಾಧ್ಯವಿಲ್ಲ ಅಂತ ಒಂದು ಮಾತು ಹೇಳಿದ್ರೆ , ಅದೇ ಮನಸ್ಸು ಸೋತು ಬಿಡುತ್ತದೆ.ಮಾತ್ರವಲ್ಲ ಮನಸ್ಸಿಗೂ ಇದು ಸಾಧ್ಯವಿಲ್ಲ ಅಂತ ಅನ್ಸಿದ್ರೂ ಕೂಡಾ. ಅದರ ಜೊತೆಗೆ ಮಾಡೋ ಕೆಲಸಕ್ಕೆ ಒಂದೇ ಒಂದು ಗುಟುಕು ಒಳ್ಳೇ ಮಾತು ಸಿಕ್ರೂ ಸಾಕು ಅದೂ ಕೂಡಾ ಡಬಲ್ ಶಕ್ತಿ ಕೊಡುತ್ತೆ.

ಹಾಗಾಗಿ ಆ ಮೂರು ಕಲ್ಲುಗಳು ನನಗೆ ಯಾವಾಗಲೂ ನೆನಪಾಗುತ್ತಲೇ ಇರುತ್ತದೆ.ಮೂರು ಕಲ್ಲುಗಳ “ಶಕ್ತಿ” ಇಡೀ ನನ್ನ ಕೆಲಸದಲ್ಲಿ ಯಾವಾಗಲೂ ನೆನಪಾಗುತ್ತದೆ.

16 ಜುಲೈ 2010

ಜಲಪಾತವಿದೆ , . . ಬನ್ನಿ . . .



ನಮ್ಮೂರಲ್ಲೊಂದು ಚಂದದ ಜಲಪಾತವಿದೆ. ನೋಡುತ್ತಾ ನಿಂತರೆ ಮನಸ್ಸು ತಣಿಯುತ್ತದೆ. ಒಂದೇ ಕಡೆ ಎರಡು ಜಲಪಾತ ಧುಮುಕುತ್ತದೆ. ಇದುವರೆಗೆ ದೊಡ್ಡ ಪ್ರಚಾರ ಈ ಜಲಪಾತಕ್ಕೆ ಸಿಕ್ಕಿಲ್ಲ. ಈ ಫಾಲ್ಸ್ ಗೆ ಹೆಸರಿಲ್ಲ. ಹಾಗಾಗಿ ನಾವೇ ಇದನ್ನು ಕಲ್ಲಾಜೆ ಜಲಪಾತ ಅಂತ ಕರೀತಾ ಇದೀವಿ. ಜೂನ್ ನಿಂದ ಸುಮಾರು ನವೆಂವರ್ ವರೆಗೆ ಈ ಜಲಪಾತದಲ್ಲಿ ನೀರು ಇರುತ್ತದೆ.

- ಇಲ್ಲಿಗೆ ಹೋಗಬೇಕೆಂದರೆ , ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದು ಅಲ್ಲಿಂದ ಸುಳ್ಯ ಮಾರ್ಗವಾಗಿ ಸುಮಾರು 12 ಕಿಲೋ ಮೀಟರ್ ಬಂದಾಗ ನಡುಗಲ್ಲು ಎಂಬೊಂದು ಊರು ಸಿಗುತ್ತದೆ. ಅಲ್ಲಿಂದ ತಿರುಗಿ ಕಲ್ಲಾಜೆ ಎಂಬ ಹಳ್ಳಿಗೆ ಸುಮಾರು 2 ಕಿಲೋ ಮೀಟರ್ ಮಡ್ ರೋಡ್ನಲ್ಲಿ ಹೋಗಬೇಕು.ಮತ್ತೆ ಸ್ವಲ್ಪ ಕಾಲ್ನಡಿಗೆ. ಹಾಗೆ ಈ ಊರಲ್ಲಿ ಕಲ್ಲಾಜೆ ಜಲಪಾತ ಎಲ್ಲಿ ಅಂದ್ರೆ ಯಾರೂ ಬೇಕಾದ್ರೂ ಹೇಳ್ತಾರೆ. ಆದ್ರೆ ಒಂದು ಎಚ್ಚರ ಇಲ್ಲಿ ತಿನ್ನೋದಕ್ಕೆ ಏನಾದ್ರೂ ನೀವು ತರ್ಲೇ ಬೇಕು. ಯಾಕಂದ್ರೆ ಇಲ್ಲಿ ಏನೂ ಸಿಗೋದೇ ಇಲ್ಲ. ಎಲ್ಲಾ ರೆಡಿಯಾಗಿ ಬನ್ನಿ. . . .

15 ಜುಲೈ 2010

ಒಂದು ರಹಸ್ಯದ ಸುತ್ತ . . . .

ಅದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಕಮಿಲ ಎಂಬ ಪುಟ್ಟ ಊರು. ಅಡಿಕೆ, ರಬ್ಬರ್ ಕೃಷಿಯಿಂದ ಬದುಕೋ ಜನ ಇಲ್ಲಿಯವ್ರು. ಕೊಲೆ ದರೋಡೆ ಅಂದ್ರೆ ಅಬ್ಬಾ . . !!. ಅಂತ ಹುಬ್ಬೇರಿಸುವ ಮುಗ್ದರು. ಅಂತಹ ಹಳ್ಳಿಯಿಂದ ಅದೇನೋ ಒಂದು ಭಯಾನಕ ಸುದ್ದಿಯೊಂದು ಹೊರಬಂತು.7 ವರ್ಷಗಳ ಕಾಲ ಊರೊಳಗೇ ಸುತ್ತಾಡುತ್ತಿದ್ದ ವ್ಯಕ್ತಿಗಳು ಈಗ ಕೊಲೆಗಾರರಾಗಿ ಕಂಡುಬಂದಿದ್ದಾರೆ.ನಿಜಕ್ಕೂ ಅದೊಂದು ರೋಚಕ ಕತೆ. . . .

ಮೊನ್ನೆ ಆ ಕಮಿಲದ ಹಳ್ಳಿಯಿಂದ ಭಯಾನಕ ಸುದ್ದಿಯೊಂದು ಕೇಳಿಬರುತ್ತಲೇ ಇತ್ತು ಅಲ್ಲಿನ ಜನ ಹಾಗಂತೆ. . ಹೀಗಂತೆ ಅಂತ ಮಾತಾಡ್ತಾ ಇದ್ರು.ಅದು ನಿಜವೂ ಆಯ್ತು. ಆ ಸುದ್ದಿ ಮಾತ್ರಾ ಕಮಿಲದ ಜನ್ರನ್ನು ಬೆಚ್ಚಿ ಬೀಳಿಸಿತ್ತು. ಯಾಕೆ ಗೊತ್ತಾ. . .? .ಅದು ಹಂತಕರ ಕತೆ. ಅವರಿಬ್ಬರು ಕೊಲೆ ಮಾಡಿದ್ದು ಇಂದಲ್ಲ , ನಿನ್ನೆಯಲ್ಲ. . . ಬರೋಬ್ಬರಿ 7 ವರ್ಷಗಳ ಹಿಂದೆ. ಕೊಂದ ಸುಳಿವು ಕೂಡಾ ಸಿಗದಂತೆ ಬಾಡಿಯನ್ನು ಫಿನಿಶ್ ಮಾಡಿದ್ದರು. ಅವರು ಆ ಕೊಲೆ ಮಾಡಿ ರಾಜಾರೋಷವಾಗಿ ಊರಿಡೀ ಸುತ್ತಾಡುತ್ತಿದ್ದರು. ಒಂದೇ ಒಂದು ಸಣ್ಣ ಕ್ಲೂ . . . ಕೂಡಾ ಅವರತ್ತ ಇದ್ದಿರಲಿಲ್ಲ. ಹಿಂದೊಮ್ಮೆ ಇವರೇ ಕೊಲೆಗಾರರು ಎಂಬ ಅನುಮಾನದಿಂದ ಪೊಲೀಸರು ಟಾಯ್ಲೆಟ್ ಗುಂಡಿ ತೆರೆದಿದ್ದರು , ಅದರಿಂದ ವಾಸನೆ ಬಂದದ್ದು ಬಿಟ್ಟರೆ ಬೇರೇನೂ ಸಾಕ್ಷಿ ಅಲ್ಲಿ ಸಿಕ್ಕಿರಲಿಲ್ಲ. ಆದರೆ ಆ ಕೊಲೆಗಾರರು ಮತ್ತೆ ಹೇಗೆ ಪೊಲೀಸರ ಬಲೆಗೆ ಬಿದ್ದರು ಎನ್ನುವುದೇ ಇಂಟೆರೆಸ್ಟಿಂಗ್. ಕೊಲೆಗೆ ಕಾರಣವೂ ಹಾಗೆ ಕೇವಲ ಒಂದು ಎಕ್ರೆ ಜಾಗದ ವಿಷಯ. ಅದೊಂದೇ ವಿಷ್ಯ ಹೌದೇ. . ? ಅಥವಾ ಇನ್ನೇನಾದರೂ ಕಾರಣ ಇತ್ತೇ ಎನ್ನುವುದು ಕೂಡಾ ಗೊತ್ತಿಲ್ಲ. ಅಂತೂ ಕೊಲೆಗಾರರು ಈಗ ಪೊಲೀಸರ ಅತಿಥಿಯಾಗಿದ್ದಾರೆ ಅನ್ನೋದು ಊರ ಜನ್ರಿಗೆ ಸಮಾಧಾನ.ಇಷ್ಠೇ ಅಲ್ಲ ಕೊಲೆಗಡುಕರಿಗೆ ಶಿಕ್ಷೆಯೂ ಆಗ್ಬೇಕು ಅಂತಾರೆ ಆ ಜನ.

* * * * * * * * * * * * * * *

ಅಂದು 2003 ಮೇ 2 ಅದೆಲ್ಲಿಗೋ ಹೋದ ಆ ಮನೆಯ "ಯಜಮಾನ" ಇದ್ದಕ್ಕಿದ್ದಂತೆ ನಾಪತ್ತೆಯಾಗ್ತಾನೆ.ಎಲ್ಲಿಗೆ ಹೋದ . . ಏನಾದ . . ?ಅನ್ನೋದೇ ನಿಗೂಢವಾಗುತ್ತದೆ. ಯಾರಿಗೂ ಗೊತ್ತಿಲ್ಲ. . . ಆ "ಯಜಮಾನನ" ಜೊತೆಗೆ ಹೋದ ಆತನ ಹೆಂಡತಿಯ "ಅಕ್ಕನ ಗಂಡ"ನೂ ನನಗೆ ಗೊತ್ತಿಲ್ಲ ಅಂತಾನೆ.ಆದ್ರೆ ಒಂದು ಕ್ಲೂ ಇದೆ.ಸಮೀಪದ ಗುತ್ತಿಗಾರಿನಿಂದ ಅವರಿಬ್ಬರೂ ಜೊತೆಯಾಗೇ ಅಟೋದಲ್ಲಿ ಬಂದಿದ್ದಾರೆ.ಆದ್ರೆ ಇಲ್ಲಿ ನೋಡಿದ್ರೆ ನನಗೆ ಗೊತ್ತಿಲ್ಲ ಅಂತಾನೆ "ಅಕ್ಕನ ಗಂಡ".ಸಂಶಯಗೊಂಡ "ಯಜಮಾನನ ಪತ್ನಿ " ಪೊಲೀಸರಿಗೆ ದೂರು ನೀಡಿ "ಪತಿ" ನಾಪತ್ತೆಯಾಗಿದ್ದಾರೆ. "ಭಾವ"ನ ಜತೆ ಗುತ್ತಿಗಾರಿನಿಂದ ಅವರ ಮನೆಗೆ ಹೋಗಿದ್ದಾರೆ ಎಂಬ ಸುದ್ದಿ ಇದೆ ಹಾಗಾಗಿ "ಭಾವ"ನನ್ನು ವಿಚಾರಣೆಯಾಗಬೇಕು ಎನ್ನುತ್ತಾರೆ. ಪೊಲೀಸ್ರೂ ಈ ಕುರಿತು "ಭಾವ"ನನ್ನು ಓರಲ್ ಆಗಿ ವಿಚಾರಣೆ ಮಾಡುವಾಗ ನನಗೆ ಏನೂ ಗೊತ್ತಿಲ್ಲ, ನನ್ನ ಮನೆಗೆ ಆತ ಆತ ಬಂದೇ ಇಲ್ಲ. ಕಮಿಲ ಪೇಟೆಗೆ ಹೋಗಲಿದೆ ಎಂದು ಹೋಗಿದ್ದಾರೆ ಎಂದು ಪೊಲೀಸರಿಗೆ ಹೇಳಿದ. ಇನ್ನು ಪೊಲೀಸರು ಹೆಚ್ಚಿನ ವಿಚಾರಣೆ ಮಾಡಿಲ್ಲ. ಇದೊಂದು ಫ್ಯಾಮಿಲಿ ಮ್ಯಾಟರ್ ಅಂತ ಅವರೂ ಸುಮ್ಮನಾದ್ರು. ದಿನ ಕಳೆದು ದಿನವಾಯಿತು .. . ಇದೂ ನಾಪತ್ತೆ ಪ್ರಕರಣದಡಿಗೆ ಸೇರಿಹೋಯಿತು.ವರ್ಷಗಳು ಉರುಳಿತು .. ಇನ್ನೊಂದು ವರ್ಷ ಕಳೆಯಿತು. . . "ಯಜಮಾನ"ನ ಸುದ್ದಿಯೇ ಇಲ್ಲ. .ಸುಳಿವೇ ಇಲ್ಲ. . ಹುಡುಕಾಟದ ಶಕ್ತಿಯೂ ಕುಂದಿತು. ಮಂತ್ರ, ದೇವರು , ಜ್ಯೋತಿಷ್ಯ ಹೀಗೆ ಎಲ್ಲವೂ ಮುಗಿಯಿತು.

ಈ ನಡುವೆ ನಾಪತ್ತೆಯಾದ 4 ವರ್ಷದ ಬಳಿಕ ಮತ್ತೊಂದು ಸುದ್ದಿ ಊರ ತುಂಬೆಲ್ಲಾ ಹರಡಿಕೊಂಡಿತು."ಭಾವ" ಮತ್ತು "ಇನ್ನೊಬ್ಬ" ಸೇರಿಕೊಂಡು "ಯಜಮಾನ"ನನ್ನು ಕೊಲೆ ಮಾಡಿ "ಭಾವ"ನ ಶೌಚಾಲಯ ಗುಂಡಿಗೆ ಹಾಕಿದ್ದಾರೆ ಎಂಬ ಸುದ್ದಿ ಹರಡಿಕೊಂಡಿದ್ದ ಕಾರಣ "ಯಜಮಾನನ ಪತ್ನಿ " ಮತ್ತೆ ಪೊಲೀಸರಿಗೆ ದೂರು ನೀಡಿ ತನ್ನ ಅನುಮಾನ ಪರಿಹರಿಸಬೇಕೆಂದು ಒತ್ತಾಯಿಸಿದರು.ಇದಕ್ಕೂ ಪೊಲೀಸರು ಮುಂದಾದರು. ಅಂದು 2007 ಜೂನ್ 25. . . . ಸುಳ್ಯದ ಆಗಿನ ತಹಶಿಲ್ದಾರ್ ಸಹಿತ ಊರ ಜನರ ಸಮ್ಮುಖದಲ್ಲಿ "ಭಾವ"ನ ಟಾಯ್ಲೆಟ್ ಪಿಟ್ ಅಗೆತವೂ ಶುರುವಾಯಿತು.ಆಗಲೂ "ಭಾವ"ನ ಮುಖದಲ್ಲಿ ಯಾವೊಂದು ಭಾವನೆಯೂ ಇರದೆ ತಾನೊಬ್ಬ ಕೊಲೆಗಾರ ಎಂಬ ಸಂಶಯ ಅಲ್ಲಿ ಸೇರಿದ್ದ ಯಾರಿಗೂ ಅರಿವಾಗದಂತೆ ಚೆನ್ನಾಗೇ ಫೋಸು ಕೊಟ್ಟ.ಒಳಗೊಳಗೆ ನಗುತ್ತಲೂ ಇದ್ದ.ಇನ್ನು ಪೊಲೀಸ್ನೋರು ಹಾಗೆ , ವಿಶೇಷ ವಿಚಾರಣೆ ಮಾಡಿಯೂ ಇಲ್ಲ. ಅಂತೂ ಟಾಯ್ಲೆಟ್ ಪಿಟ್ ಅಗೆತದ ಬಳಿಕ ಯಾವೊಂದು ಕುರುಹೂ ಸಿಗದ ಕಾರಣ ಮಣ್ಣು ಪರೀಕ್ಷೆಗೆ ಒಳಪಡಿಸಲಾಯಿತಾದರೂ ಫಲಿತಾಂಶ ಶೂನ್ಯ.

ಹೀಗೇ ಆಗ ಸುದ್ದಿಯಾಗಿದ್ದ ಈ ನಾಪತ್ತೆ ಪ್ರಕರಣ ಮತ್ತೆ ಹಾಗೇ ಸದ್ದಿಲ್ಲದೇ ಇತ್ತು. ಆರ್ಥಿಕವಾಗಿ ಅಷ್ಟೊಂದು ಗಟ್ಟಿಯಿಲ್ಲದ "ಯಜಮಾನನ ಪತ್ನಿ"ಗೆ ಈ ಪ್ರಕರಣ ಬೆನ್ನು ಹತ್ತಲು ಅಷ್ಟೊಂದು ಸುಲಭವೂ ಇದ್ದಿರಲಿಲ್ಲ. ಹಾಗಾಗಿ ಈ ನಾಪತ್ತೆ ಪ್ರಕರಣ ಹಾಗೆಯೇ ಉಳಿದುಕೊಂಡಿತು. ಫೈಲ್ ಕ್ಲೋಸ್ ಅಂತ ಊರ ಜನರೆಲ್ಲಾ ಮಾತನಾಡಿಕೊಳ್ಳುತ್ತಿದ್ದರು.

2003 ರ ನಾಪತ್ತೆ ಪ್ರಕರಣ 2007 ರಲ್ಲಿ ಜೀವಪಡೆದು ಸತ್ತಿತು ಎಂದು ಅಂದುಕೊಂಡಿರುವಾಗಲೇ ಕೊನೆಯ ಪ್ರಯತ್ನ ನಡೆಯಿತು. ಅವರು ನೇರವಾಗಿ ಈ ಕೇಸನ್ನು ಮಂಗಳೂರು ಅಪರಾಧ ಪತ್ತೆ ದಳಕ್ಕೆ ದೂರು ನೀಡಿ ತನ್ನ ಅನುಮಾನಗಳನ್ನೆಲ್ಲಾ ಪತ್ತೆದಳಕ್ಕೆ ತಿಳಿಸಿದರು. ಇದಾಗಿ ಕೆಲ ದಿನಗಳ ಬಳಿಕ ಮೊನ್ನೆ ಇದ್ದಕ್ಕಿದ್ದಂತೆ ಬಯಲಾಯಿತು.ನೈಜ ಆರೋಪಿ ಅದೇ "ಭಾವ "ಎಲ್ಲವನ್ನೂ ಪೊಲೀಸರಿಗೆ ತಿಳಿಸಿದ.ಕೊಲೆ ಮಾಡಿದ್ದು ಒಪ್ಪಿಕೊಂಡ.

* * * * * * * * * * * * * * *


ಅಂದ ಹಾಗೆ ಅವ್ರು ಕೊಲೆ ಮಾಡಿದ್ದು ಹೇಗೆ ಅನ್ನೋದೇ ಒಂದು ಇಂಟೆರೆಸ್ಟಿಂಗ್ .. .

ಪೊಲೀಸ್ ಠಾಣೆಯಿಂದ ಗುತ್ತಿಗಾರಿಗೆ ಆ "ಭಾವ " ಬಂದಾಗ ಅಲ್ಲಿ "ಇನ್ನೊಬ್ಬ" ಸಂಬಂಧಿ ಸಿಗ್ತಾನೆ. ಕುಶಲೋಪರಿ ಮಾತನಾಡಿ ಆ ದಿನದ ಘಟನೆಯನ್ನು ವಿವರಿಸುತ್ತಾ ಇಬ್ಬರೂ ಒಂದು ಸ್ಕೆಚ್ ರೂಪಿಸಿದರು. ಆಗಲೇ ಗುತ್ತಿಗಾರಿಗೆ ಬಂದಿದ್ದ "ಯಜಮಾನ"ನೂ ಸಿಗ್ತಾನೆ. ತಡ ಮಾಡದೆ 3 ಜನ ರಿಕ್ಷಾದಲ್ಲಿ "ಭಾವ"ನ ಮನೆಗೆ ಬಂದಾಗ ಸಂಜೆ ಗಂಟೆ ಸುಮಾರು 6.30. ಆ ಬಳಿಕ ಜೊತೆಯಾಗೇ ಟೀ ಕುಡಿದು "ಯಜಮಾನ"ನ ತಲೆಗೆ ಹೊಡೆದಾಗ ಆತ ಕೆಳಗುರುಳಿದ. ಸಾವು ಖಚಿತ ಪಡಿಸಿದ ಬಳಿಕ ಬೆಡ್ ಶೀಟ್‌ನಲ್ಲಿ ಮೃತ ದೇಹವನ್ನು ಸುತ್ತಿ ಮನೆಯ ಪಕ್ಕದ ಗುಡ್ಡದಲ್ಲಿಟ್ಟರು. ಸಮಯ ಉರುಳಿತು.. . . . ಆಗ ಗಂಟೆ ರಾತ್ರಿ ಸುಮಾರು 10 ಗಂಟೆ. ಮೃತ ದೇಹವನ್ನು ಉದ್ದದ ಮರದ ತುಂಡಲ್ಲಿ ಕಟ್ಟಿಕೊಂಡು ಇಬ್ರೂ ಹೊತ್ತುಕೊಂಡು ಮನೆಯ ಹಿಂಬದಿ ನಡೆದುಕೊಂಡು ನಿರ್ಜನ ರಕ್ಷಿತಾರಣ್ಯಕ್ಕೆ ಸುಮಾರು 4-5 ಕಿಲೋ ಮೀಟರ್ ದೂರ ಕಾಲ್ನಡಿಗೆಯಲ್ಲೇ ಹೊತ್ತುಕೊಂಡು ಸಾಗಿದರು. ಹೀಗೆ ಅರಣ್ಯಕ್ಕೆ ತಲುಪಿದಾಗ ಗಂಟೆ ರಾತ್ರಿ ಸುಮಾರು 12. ಅಲ್ಲಿ ಮೊದಲೇ ನೋಡಿದ್ದ ಕಾಡು ಹಂದಿ ವಾಸ ಮಾಡುವ ಗುಹೆಯೊಳಗೆ ದೇಹವನ್ನು ತುರುಕಿದರು. ಅಲ್ಲೇ ಇದ್ದ ಓಟೆಯ ಹಿಂಡಿನಿಂದ ಕೆಲ ಮರದ ತುಂಡುಗಳನ್ನು ಸೇರಿಸಿಕೊಂಡು "ಯಜಮಾನ"ನ ಚಪ್ಪಲಿ , ಬಟ್ಟೆ ಇತ್ಯಾದಿಗಳ ಜೊತೆಗೆ ದೇಹವನ್ನು ಕರಕಲು ಮಾಡಿ ಮಣ್ಣು ಸುರಿದು ಹಿಂತಿರುಗುವಾಗ ಮುಂಜಾನೆಯಾಗಿತ್ತು. ಆ ನಂತರ ಸುಮಾರು 10-15 ದಿನಗಳ ಬಳಿಕ ಮತ್ತೆ ಅದೇ ಗುಹೆಯ ಬಳಿಗೆ ಇಬ್ಬರೂ ರಾತ್ರಿ ಹೋಗಿ ಕೊಳೆತ ಶವದಿಂದ ಎಲ್ಲಾ ಎಲುಬುಗಳನ್ನು ಹೆಕ್ಕಿ ತೆಗೆದು ಗುಹೆಯಿಂದ ಸುಮಾರು 2 ಕಿಲೋ ಮೀಟರ್ ದೂರದ ಇನ್ನಷ್ಟು ದುರ್ಗಮ ಹಾದಿಯಲ್ಲಿ ಸಾಗಿ ನಿರ್ಜನ ಕಾಡಿನಲ್ಲಿ ಮರವೊಂದನ್ನು ಬೀಳಿಸಿ ಕಟ್ಟಿಗೆ ಮಾಡಿ ಶವದಿಂದ ಹೆಕ್ಕಿದ ಎಲುಬುಗಳನ್ನು ರಾಶಿ ಹಾಕಿ ಕಟ್ಟಿಗೆ ಇಟ್ಟು ಸೀಮೆಣ್ಣೆ ಸುರಿದು ಬೆಂಕಿ ಹಾಕಿದರು. ಹೀಗೇ ಎಲ್ಲವನ್ನೂ ಎಳೆ ಎಳೆಯಾಗಿ ವಿವರಿಸ್ತಿದ್ದ ಅವ್ರು ಮುಂದುವರಿಸ್ತಾ ಇದ್ರು . . . ಇಡೀ ಎಲುಬು ಹೊತ್ತಿ ಉರಿಯುವವರೆಗೆ ಕಾದು ಕುಳಿತರಂತೆ.ಆಗ ಕೋಳಿ ಕೂಗುವ ಹೊತ್ತಾಗ್ತಾ ಬಂತು.ಬೆಂಕಿಯ ಉರಿಯೂ ಕಡಿಮೆಯಾಗ್ತಾ ಬಂತು.ಈ ಆರೋಪಿಗಳು ಮನೆಗೆ ಹೋಗಿ ಮಲಕ್ಕೊಂಡ್ರು.ಎಲ್ಲಾ ಮುಗೀತು ಅಂತ ನೆಮ್ಮದಿಯಿಂದ 7 ವರ್ಷ ಕಾಲ ಕಳೆದ್ರು.ಯಾವೊಂದು ಪಾಪಪ್ರಜ್ಞೆ ಇಲ್ಲದೆಯೇ.. . .!!!

ಆದರೆ ಕಾಲ ಹಾಗೇ ಉಳಿಯೋದಿಲ್ಲ ಅಲ್ವಾ. . ?. ಕಾಲ ಕೂಡಿಬಂತು ಆರೋಪಿಗಳು ಅತಿಥಿಗಳಾದ್ರು. ಒಳ್ಳೆಯ ಸತ್ಕಾರ ಸ್ವೀಕರಿಸಿದ್ರು.ಕೊನೆಗೂ ಸತ್ಯ ಗೆದ್ದಿತು . . . ರಹಸ್ಯ ಹೊರಬಂತು

09 ಜುಲೈ 2010

ಮಿಸ್-ಕಾಲ್ ಮದುವೆ . . . .!!

.. ಈ ಮದುವೆ ಅನ್ನೋದು ಜನ್ಮಾಂತರದ ಅನುಬಂಧ ಅಂತ ದೇವ್ರರನ್ನ ನಂಬೋ ಜನ ಹೇಳ್ತಾರೆ. ಜನ್ಮಾಂತರದ ಅನುಬಂಧವೂ ಅಲ್ಲ ಏನೂ ಅಲ್ಲ . . . ಅದೊಂದು ಅಚಾನಕ್ ಕ್ರಿಯೆ, ಮನಸ್ಸುಗಳ ಪೂರ್ಣ ಒಪ್ಪಿಗೆ ,.. ಅಂತಾರೆ ದೇವ್ರನ್ನ ನಂಬದೇ ಇರೋ ಜನ.ಅದೇನೇ ಇರ್ಲಿ. ಇಲ್ಲೊಂದು ಮದುವೆ ಪ್ರಸಂಗ ನಡೆದಿದೆ.ಅದು ಮಿಸ್‌ಕಾಲ್ ಮದುವೆ. . .

(ನೆಟ್ ಫೋಟೋ).




. . . ಆತ ಕಾರುಗಳ ತಯಾರಿಕಾ ಕಂಪನಿಯಯಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್. ಪ್ರತಿದಿನ ಒಂದೊಂದು ಹೊಸ ಕಾರಿನಲ್ಲಿ ತಿರುಗಾಡುತ್ತಾನೆ.ಹೊಸ ಹೊಸ ಕಸ್ಟಮರ್ ಗಳನ್ನು ತನ್ನ ಬಲೆಗೆ ಹಾಕಿಕೊಳ್ಳುತ್ತಾನೆ.ಹಾಗೇ ದಿನವೂ ಹೊಸ ಕಾರಿನಲ್ಲಿ ಹೋಗುತ್ತಿರುವ ಆ ಚಂದದ ಹುಡುಗನ ನೋಡಿದ ಆ ಕಾಲೇಜಿನ ಹುಡುಗಿ. . ಎಂಥಾ . . ಶ್ರೀಮಂತ ಹುಡುಗ ಆತ . . ! ಅಂತ ಯೋಚ್ನೆ ಮಾಡ್ತಾ . . ಮಾಡ್ತಾ .. ಆತನೊಡನೆ ಅನುರಕ್ತಳಾಗ್ತಾಳೆ. ಆತನ ಸಂಚಾರಿ ದೂರವಾಣಿಯನ್ನು ಪಡೆದುಕೊಳ್ಳುತ್ತಾಳೆ. ಪ್ರತಿದಿನ ಮಿಸ್‌ಕಾಲ್ ಹೊಡೀತಾಳೆ. ಆತನೂ, ಅಬ್ಬಾ ಇವತ್ತೊಂದು ಹೊಸ ಪಾರ್ಟಿ ಸಿಕ್ತು ಅಂತ ಖುಷಿ ಪಡ್ತಾ ರಿಟರ್ನ್ ಕಾಲ್ ಮಾಡ್ತಾನೆ.ಆ ಕಡೆಯಿಂದ ಉತ್ತರವೇ ಇಲ್ಲ. ಛೇ. . ., ಅಂತ ಕಾಲ್ ಕಟ್ ಮಾಡ್ದ. ಮುಂದೆ ಹೋದ. ಯಾವಾಗ್ಲೂ ಅದೇ ನಂಬರ್‌ನಿಂದ ಬ್ಲ್ಯಾಂಕ್ ಕಾಲ್ ಬರ್‍ತಿತ್ತು.ಕೊನೆಗೊಂದು ದಿನ ಆ ಕಡೆಯಿಂದ ಹೆಣ್ಣು ಧ್ವನಿ ಕೇಳಿಸಿತು. ಆ ಧ್ವನಿ ಮತ್ತೆ ಯಾವಾಗ್ಲೂ ಕೇಳ್ತು. ಪ್ರೀತಿ , ಪ್ರೇಮ ಎಲ್ಲವೂ ಆಯ್ತು. ಪ್ರಪೋಸ್ ಕೂಡಾ ಆಯ್ತು.ಮನೆಗೂ ಗೊತ್ತಾಯ್ತು. ಮದುವೆನೂ ಮುಗೀತು. ಎಂಗೇಜ್‌ಮೆಂಟ್ ಆದ್ ಮೇಲೆ ಆಕೆಗೆ ಗೊತ್ತಾಗಿತ್ತು ನನ್ಗೆ ದಾರಿ ತಪ್ಪಿತ್ತು ಅಂತ.ಆದ್ರೆ ಅವ್ಳು ಹೇಳ್ತಾಳೆ.ನಂಗೆ ಇಷ್ಟವಾಯ್ತು ಹಾಗೆ ಮದುವೆ ಆದೆ ಅಂತ ಸುಧಾರಿಸಿ ಕೊಳ್ತಾಳೆ.

ಅದಿರ್ಲಿ. ಅವ್ರವ್ರ ಇಷ್ಟಕ್ಕೆ ಬಿಟ್ಟ ವಿಚಾರ.ಮದುವೆ ಅನ್ನೋದು ಸ್ವಂತ ವಿಚಾರ ಅಲ್ವೇ. .?.ನೋಡಿ ಮೊನ್ನೆ ಮೊನ್ನೆ ಸ್ವಾಮೀಜಿ ಅಂತಿದ್ದವರೇ ಮದ್ವೇ ಆಗಿಲ್ವೇ. .?.ಅದೂ ಅಲ್ಲ , ಅದೇ ಸ್ವಾಮೀಜಿಗೆ ಸಾಷ್ಟಾಂಗ ಬೀಳುತತಿದ್ದವರೇ ಇಂದು ಮನೆ ಮಗಳು ಅಂತ ಹೇಳ್ಲೇಬೇಕಲ್ವಾ. .?.
ಆದ್ರೂ ಒಂದು ವಿಷ್ಯ ಕೆಲವೊಮ್ಮೆ ಮದುವೆ ವಿಚಾರದಲ್ಲಿ ಸತ್ಯ ನುಡಿದ್ರೂ ಆಗಲ್ಲ. ಸುಳ್ಳು ಹೇಳಿ ನಂತ್ರ ಛೇ. . . ಅನ್ಸುಕೊಂಡ್ರೇ ಒಳ್ಳೇದು. ಅಂತಹವ್ರೇ ನಮ್ ಜನಕ್ಕೆ ಇಷ್ಟ ಆಗೋದು ಅಲ್ವಾ. .?.

ನಾವೂ ರಾಂಗ್ ಸೈಡಿಗೆ ಹೋಗ್ತಾ ಇದೀವಿ. ವಿಷ್ಯಕ್ಕೆ ಬರೋಣ.

ಈ ಮೊಬೈಲ್ ಮಿಸ್‌ಕಾಲ್ ಪುರಾಣ ಹೀಗೇ.ಅದೆಷ್ಟೋ ಕತೆಗಳನ್ನು ಜನ ಹೇಳ್ತಾನೇ ಇರ್ತಾರೆ. ಇನ್ಯಾರಿಗೋ ಅಂತ ಫೋನು ಮಾಡೋದು. ಆ ಕಡೆಯಿಂದ ಹೆಣ್ಣು ಧ್ವನಿ ಕೇಳ್ತು ಅಂದ್ರೆ ಮತ್ತೆ ಮತ್ತೆ ಕಾಲ್ ಮಾಡಿ ಆ ಮನಸ್ಸನ್ನು ಟರ್ನ್ ಮಾಡೋಕೆ ಟ್ರೈ ಮಾಡೋ ಉದಾಹರಣೆ ಇದೆ.ಮೊನ್ನೆ ಮೊನ್ನೆ ನಂಗೂ ಒಂದು ಪ್ರಾಬ್ಲಂ ಆಗಿತ್ತು.ಅದ್ಯಾರೋ ನಂಗೆ ಕೆಟ್‌ಕೆಟ್ಟದಾಗಿ ಮೆಸೇಜ್ ಕಳಿಸ್ತಾ ಇದ್ದಾ. ಆ ಕಡೆ ಫೋನು ಮಾಡಿದ್ರೆ ನೋ ಆನ್ಸರ್ . ಆದ್ರೆ “ಮೇಘ” ಸಂದೇಶ ಬರ್ತಾನೇ ಇತ್ತು. ಕಲಿಸ್ತೀನಿ ಅಂತ ಆ ಫೋನು ನಂಬರ್ನ ಎಡ್ರೆಸ್ ಕಲೆಕ್ಟ್ ಮಾಡಿ ನೋಡಿದ್ರೆ , ಮಿಸ್ . . . . ಅಂತ ಇದೆ.ಅದೆಲ್ಲೋ ರಾಜಧಾನಿಯದ್ದಂತೆ. ಇದ್ಯಾಕೆ ಹೀಗೆ ಅಂತ ನೋಡಿದ್ರೆ.. ? ಆ ನಂಬರನ್ನು ಇನ್ಯಾರೋ ಪಡ್ಕೊಂಡು ಈಗ ಕೀಟಲೆ ಮಾಡ್ತಾ ಇದ್ದಾರೆ. ಅವ್ರಿಗೆ ಈಗ ಎಚ್ಚರಿಕೆ ಸಿಕ್ಕಿದೆ. ಮುಂದೇನೋ ನೋಡ್ಬೇಕು. ಆದ್ರೆ ಈ ಮೊಬೈಲ್‌ಗಳು . . ಆ ಸಂದೇಶಗಳು . . ಆ “ಮಿಸ್-ಕಾಲ್” ಗಳು , . . . . ನೋ ಆನ್ಸರ್ ಕಾಲ್‌ಗಳು . . ಅಯ್ಯೋ . . ಎಚ್ರ ಸ್ವಾಮೀ ಎಚ್ಚರ . . ಎನ್‌ಬೇಕಾದ್ರೂ ಆಗ್ಬಹುದು . . . !!!. ನಮ್ “ಕಾಲೇ-ಮಿಸ್” ಆಗ್ಬಹುದು.

04 ಜುಲೈ 2010

ಇವರಿಗೆ ಇಲ್ಲಿ ಮಣ್ಣಿನ ಪಾಠ . . . . .

ಈ ಶಾಲೆ ಅದ್ಯಾಕೋ ಢಿಫರೆಂಟ್ . . ಅಲ್ಲಿ ಆಟ ಪಾಠದ ಜೊತೆಗೆ ಮಣ್ಣಿನ ಪಾಠವೂ ಇದೆ.ಅಲ್ಲಿ ಅನ್ನದಾತನೂ ಟೀಚರ್ ಆಗ್ತಾನೆ.ಮಕ್ಳು, ಅವ್ರ ಶಿಕ್ಷಕರೆಲ್ಲರೂ ಅಂದು ವಿದ್ಯಾರ್ಥಿಗಳಾಗುತ್ತಾರೆ.ನೇಗಿಲಯೋಗಿಯ ಪಾಠ ಕೇಳ್ತಾರೆ.





ಇವರು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ - ಕೊಡಗು ಗಡಿಭಾಗದ ಪೆರಾಜೆ ಕುಂಬಳಚೇರಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು. ಎಲ್ಲಾ ಶಾಲೆಗಳಲ್ಲಿ ಆಟ-ಪಾಠಗಳಂತೆ ಇಲ್ಲೂ ಅದರ ಜೊತೆಗೆ ಮಣ್ಣಿನ ಪಾಠವೂ ಇದೆ.ಆದ್ರೆ ಈ ಪಾಠ ಮಾಡುವುದಕ್ಕೆ ಶಿಕ್ಷಕನಾದ್ದು ಮಾತ್ರಾ ನೇಗಿಲಯೋಗಿ. ಬಹುಶ: ಇಡೀ ರಾಜ್ಯದಲ್ಲೇ ಇದೊಂದು ವಿಶೇಷ ಪ್ರಯೋಗ.ಈ ಮಕ್ಕಳಿಗೆ ಇದು ಸ್ಪೆಶಲ್ ಪ್ರಾಕ್ಟಿಕಲ್ ಶಿಬಿರ.ಬೆಳಗಿನಿಂದಲೇ ಶಾಲಾ ಮಕ್ಕಳು ಹೊಲಕ್ಕೆ ಆಗಮಿಸಿ ಭತ್ತದ ಪೈರನ್ನು ನೆಡುವ ಎಲ್ಲಾ ವಿವಿದ ಹಂತಗಳನ್ನು ತಿಳಿದುಕೊಂಡರು.ಇದ್ಯಾಕೆ ಅಂತ ಶಾಲಾ ಶಿಕ್ಷಕರಲ್ಲಿ ಕೇಳಿದ್ರೆ ಮಕ್ಳಿಗೆ ಈ ಮಣ್ಣಿನ ಪಾಠ ಕೂಡಾ ಬೇಕು ಅಂತಾರೆ.ಸ್ಥಳೀಯ ಜನ್ರೂ ಕೂಡಾ ಇದೊಳ್ಳೆಯ ಪಾಠ ಅಂತಾರೆ.ಎಲ್ಲಾ ಕಡೆಯೂ ಇದು ಬೇಕು ಅಂತಾನೂ ಹೇಳ್ತಾರೆ.

ಈ ಮಕ್ಳು ಹೊಲವನ್ನು ಊಳುವ ಟಿಲ್ಲರ್ ಹಿಂದೆಯೇ ಓಡುತ್ತಾ ರೈತನ ಒಡಲಿನಿಂದ ಮಾಹಿತಿ ಪಡೀತಾರೆ.ಹೇಗೆ ಹೊಲವನ್ನು ಹದ ಮಾಡುತ್ತಾರೆ ಅಂತ ಮಳೆಯಲ್ಲೂ ಖುಷಿಯಿಂದ ತಿಳೀತಾರೆ.ಅಷ್ಟಕ್ಕೆ ಮುಗಿದಿಲ್ಲ.ನಾಟಿ ಮಾಡೋದನ್ನೂ ನೋಡ್ತಾರೆ. ನೇಗಿಲಯೋಗಿಯ ಜೊತೆಗೆ ಹೆಜ್ಜೆ ಹಾಕುತ್ತಾ ಗದ್ದೆಯ ಒಳಗಡೆ ಇಳಿದು ಕೆಸರನ್ನು ಮೆತ್ತಿಕೊಂಡು ನಾಟಿನೂ ಮಾಡ್ತಾರೆ.ಅದೂ ಅಲ್ಲ ಪೈರನ್ನು ಕಿತ್ತು ಅದನ್ನು ಮತ್ತೆ ಹೇಗೆ ನಾಟಿ ಮಾಡ್ತಾರೆ ಅಂತನೂ ತಿಳ್ಕೋತಾರೆ ಈ ಶಾಲಾ ಮಕ್ಕಳು.ಇದಿಷ್ಟೇ ಆದ್ರೆ ಪರವಾಗಿಲ್ಲ.ಆ ಗದ್ದೆಯ ಕಿರುದಾದ ಓಣಿಯಲ್ಲಿ ಮೆಲ್ಲ ಮೆಲ್ಲನೆ ಹೆಜ್ಜೆ ಹಾಕುತ್ತಾ ಹೋಗ್ತಾರೆ ಈ ಮಕ್ಳು.ಈ ಎಲ್ಲಾ ತರಬೇತಿ ಮಕ್ಕಳಿಗಂತೂ ಖುಷಿ ನೀಡಿದೆ.ಹಳ್ಳಿ ಮಕ್ಳು ಇವ್ರಾದ್ರೂ ಇದುವರೆಗೆ ಗದ್ದೆಗೆ ಇಳಿಯದ ಈ ಮಕ್ಕಳು ಮೊದಲ ಬಾರಿ ಗದ್ದೆಗೆ ಇಳಿದು ನೇಗಿಲಯೋಗಿಯ ಪಾಠ ಕೇಳಿ ಸಂಭ್ರಮಿಸಿದರು.

ಶಾಲಾ ಮಕ್ಕಳು ಅದರಲ್ಲೂ ಚಿಕ್ಕ ಚಿಕ್ಕ ಮಕ್ಕಳು ಗದ್ದೆಗೆ ಇಳಿದು ಸಂಭ್ರಮಿಸಿ ನೇಗಿಲಯೋಗಿಯಿಂದ ಮಣ್ಣಿನ ಪಾಠ ಕೇಳಿದ ಮಕ್ಕಳ ಕುರಿತು ರೈತ ಖುಷಿಪಟ್ಟ. ಈ ಮಕ್ಳಾದ್ರೂ ಮಣ್ಣಿನ ಪಾಠ ಕೇಳೋದಿಕ್ಕೆ ಬಂದ್ರಲ್ಲಾ ಅಂತ ನಿಟ್ಟುಸಿರು ಬಿಟ್ಟ.ಯಾಕ್ ಗೊತ್ತಾ. .? ಇವ್ರೆಲ್ಲಾ ಹಳ್ಳಿ ಮಕ್ಳಾದ್ರೂ ಹೊಲ ಎಂದ್ರೇನೂ ಅಂತಾನೇ ಗೊತ್ತಿರೋದೇ ಇಲ್ಲ. ಮಾತ್ರವಲ್ಲ ಇಂದಿನ ಯಾವ ಮಕ್ಳಿಗೂ ಅಕ್ಕಿ ಎಲ್ಲಿ ಬೆಳೆಯುವುದು ಎಂತಾನೇ ಗೊತ್ತಿಲ್ಲದ ಈ ಸಮಯದಲ್ಲಿ ಇದೊಂದು ವಿಶೇಷವಾದ ಪಾಠ.ಭತ್ತ ಬೆಳೆಯುವ ಎಲ್ಲಾ ಹಂತಗಳನ್ನು ಮಕ್ಕಳಿಗೆ ಈ ರೈತ ತಿಳಿಸಿಕೊಟ್ಟ.ಹೀಗಾಗಿ ಇದೊಂದು ಅಪೂರ್ವವಾದ ಕೆಲಸ ಎಲ್ಲಾ ಮಕ್ಳಿಗೂ ಇದೊಂದು ನಿತ್ಯ ಪಾಠವಾಗಲಿ ಅಂತಾನೆ ರೈತ.

ಅಂತೂ ಈಗ್ಲಾದ್ರೂ ಶಾಲಾ ಮಕ್ಳಿಗೆ ಮಣ್ಣಿನ ಪಾಠ ಹೇಳೋದಿಕ್ಕೆ ಮೇಷ್ಟ್ರಾದ್ರೂ ಮುಂದಾದ್ರಲ್ಲಾ ಅನ್ನೋದೇ ಒಂದು ಖುಷಿ.ಇದೇ ದೊಡ್ಡ ಸಾಧನೆ ಅಂತಲ್ಲ.ಇದ್ರಿಂದಲ್ಲೇ ಜಗವೆಲ್ಲಾ ಬದಲಾಗುತ್ತೆ ಅಂತಲ್ಲ.ಅಂತೂ ಮಕ್ಳಿಗೆ ಇಷ್ಟಾದ್ರೂ ತಿಳಿತಲ್ಲಾ ಅನ್ನೋದೇ ಸಮಾಧಾನ. .