29 ಡಿಸೆಂಬರ್ 2008

ಇಲ್ಲಿ ನೋವಿದೆ....




ಇದು ನಾವಿಬ್ಬರೇ ನಮಗಿಬ್ಬರೇ ಯ ಜಾಹೀರಾತಲ್ಲ... ಈ ಚಿತ್ರದ ಹಿಂದೆ ಆಳವದ ನೋವಿದೆ... ದು:ಖವಿದೆ... ನಗುವೆಂಬ ಅಕ್ಷರ ಇಲ್ಲಿ ಸಿಗದು... ಏನಿದು..?

ಅಬ್ಬಾ ನಾವು ನೆಮ್ಮದಿಯ ಬದುಕು ಕಟ್ಟಿಕೊಂಡಿದ್ದೇವೆ.


ನಮಗೆ ದಿನ ಬೆಳಗಾದರೆ ,ನಮ್ಮ ಪ್ರತಿಷ್ಠೆ, ದುಡ್ಡು ... ಬಿಟ್ಟರೆ ಅದರಾಚೆಗೆ ಗೊತ್ತಿಲ್ಲ. ಈ ಜಗತ್ತಿನಲ್ಲಿ ಏನೆಲ್ಲ ಸಂಕಟವನ್ನು ಅನುಭವಿಸುವ ಜನ ಇದ್ದಾರೆ..? ನನಗೆ ಅನ್ನಿಸುತ್ತದೆ ,ನಾವು ಅನುದಿನವೂ ನಮ್ಮ ಬಗ್ಗೆಯೇ ಚಿಂತಿಸಿವುದರ ಜೊತೆಗೆ ಇನ್ನೊಬ್ಬನನ್ನು ದೂರುವುದರ ಬದಲು ನಮ್ಮ ನಡುವಿನ ಆರ್ತರಿಗೆ ಸ್ವಲ್ಪ ಸ್ಪಂದಿಸಿದರೆ ಏನು ಕಮ್ಮಿಯಾಗುತ್ತದೆ. ?? ಆದರೆ ಹಾಗೆ ಮಾಡುತ್ತಿಲ್ಲ.. ..ಮಾಡುವುದೂ ಇಲ್ಲ. ..


ನನಗೆ ಹೀಗೆ ಅನ್ನಿಸಲು ಕಾರಣವಿದೆ. ಈ ಚಿತ್ರದಲ್ಲಿ ಕಾಣಿಸುತ್ತಿದ್ದಾರಲ್ಲಾ.. ಇವರು ಪುತ್ತೂರು ಬಳಿಯ ಕಲ್ಲಮೆ ಪ್ರದೇಶದ ಬಡ , ಕೂಲಿ ಮಾಡಿ ಬದುಕುವ ಕುಟುಂಬ. ದಿನಕ್ಕೆ ಹೆಚ್ಚೆಂದರೆ 200 ರೂ ಸಂಬಳ.. ಇವರಿಗೆ 4 ಜನ ಮಕ್ಕಳು ಇದ್ದರು. ಆದರೆ ಈಗ ಇರುವುದು 2 ಮಂದಿ ಮಾತ್ರಾ. ಇಬ್ಬರು ಮಕ್ಕಳು ತೀರಿಕೊಂಡದ್ದು ತಲಸ್ತೇನಿಯಾ ಎನ್ನುವ ರೋಗದಿಂದ. ಅಂದರೆ ದೇಹದಲ್ಲಿ ಕೆಂಪನೆಯು ರಕ್ತ ಕಡಮೆಯಾಗುವುದು. ಇದಕ್ಕಾಗಿ ತಿಂಗಳಿಗೋ ಅಥವಾ ಎರಡು ತಿಂಗಳಿಗೊಮ್ಮೆ ಹೊಸ ರಕ್ತ ನೀಡಬೇಕು.ಅದಲ್ಲದೆ ಆ ಮಕ್ಕಳ ರಕ್ತವು ಅಪರೂಪದ್ದು.ಹೀಗಾಗಿ 2 ಜನ ಮಕ್ಕಳು ಸತ್ತಿದ್ದಾರ್. ಉಳಿದ 2 ಜನರಿಗೆ ಆ ಕಾಯಿಲೆ ಇದೆ. ತುಂಬ ನಿತ್ರಾಣ, ವಾಂತಿ.. ,ನಿಲ್ಲಲಾಗದೇ ಇರುವುದು ,ಈ ರೋಗದ ಪ್ರಾರಂಭದ ಕ್ಷಣ. ಒಮ್ಮೆ ರಕ್ತ ನೀಡಿದರೆ ಕೆಲ ಸಮಯದವರೆಗೆ ನೆಮ್ಮದಿ ಆದರೆ ಯಾವಾಗ ಬೇಕಾದರೂ ಮತ್ತೆ ಕಾಣಿಸಬಹುದು. ಇಲ್ಲಿ ಒಬ್ಬ ಅಜ್ಜಿಯೂ ಮಕ್ಕಳ ಆರೈಕೆಗೆ ಇದ್ದಾರೆ. ತಂದೆ ತಾಯಿ ಕೂಲಿಗೆ ಹೋದರೆ ಮಕ್ಕಳ ಆರೈಕೆ ಅಜ್ಜಿಗೆ. ಹಾಗೆಂದು ಹೆತ್ತವರು ಕೂಲಿಗೆ ಹೋದರೂ ಮಕ್ಕಳ ಚಿಂತೆ. ಯಾವಾಗ ಬೇಕಾದರೂ ರೋಗ ಉಲ್ಪಣಿಸಬಹುದು.ಈಗಾಗಲೇ ಲಕ್ಷಗಟ್ಟಲೆ ವ್ಯಯಿಸಿದ್ದಾರೆ. ಅದೂ ಸಾಲ ಮಾಡಿ. ಆದರೂ ಮಕ್ಕಳಿಬ್ಬರೂ ಬದುಕುಳಿದಿಲ್ಲ. ಈಗ ಇರುವ ಮಕ್ಕಳ ಜೀವ ಉಳಿಸಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದಾರೆ. ಆದರೆ ಭವಿಷ್ಯ ಬಲ್ಲವರಾರು?.

ಈ ವಿಚಾರ ತಿಳಿದ ನಮ್ಮ ಜನಪ್ರತಿನಿಧಿಗಳು ಅಲ್ಲಿಗೆ ತೆರಳಿ ಕಿಂಚಿತ್ ಪರಿಹಾರ ನೀಡಿದರು.ಭರವಸೆಗಳ ಮಹಾಪೂರ ಹರಿಸಿ ಬಡವನಿಗೆ ಆಶಾಗೋಪುರವನ್ನು ಕಟ್ಟಿಸಿದರು. ಈ ಬಡ ಕುಟುಂಬಕ್ಕೆ ಈ ಭರವಸೆ ಭಗವಂತನೇ ಒಲಿದಂತೆ ಕಂಡುಬಂತು.. ಮಾಧ್ಯಮಗಳಲ್ಲೂ ಅದು ಪ್ರಕಟವಾಯಿತು. ಆದರೆ ಜನ ನೋಡಿ ಎಂಥಾ ಕುತ್ಸಿತರಿರುತ್ತಾರೆ ಅಂತ . ಪತ್ರಿಕೆಗಳಲ್ಲಿ ಜನಪ್ರತಿನಿಧಿಗಳು ಸಹಾಯ ಮಾಡಿದ್ದು ಸುದ್ದಿ ಬಂದದ್ದು ಅರಿತದ್ದೇ ತಡ ಸಾಲ ಹಿಂದಿರುಗಿಸಲು ಒತ್ತಾತಿಸಿದರು. ಅವರು ನೀಡಿದ್ದು ಕಿಂಚಿತ್.. ಆದರೆ ಜನ ನಂಬಿದ್ದು ತುಂಬಾ...!!. ಸರಿ .. ಜನಪ್ರತಿನಿಧಿಗಳಾದರೂ ಸರಿಯಾಗಿ ಸ್ಪಂದಿಸಿದ್ದಾರಾ?. ಅದೂ ಇಲ್ಲ. ಆಸ್ಪತ್ರೆಗೆ ಕರೆದೊಯ್ದಿಲ್ಲ...ಔಷಧಿಯೂ ಆಗಿಲ್ಲ. ..ಈಗ ಪರದಾಟ ನಡೆಸುತ್ತಿದೆ ಈ ಕುಟುಂಬ.
ನಾವೂ ಅವರ ಭೇಟಿಗೆ ಹೋಗಿದ್ದೆವು. ಅದೂ ಬೇರೆ ಬೇರೆಯಾಗಿ. ಆ ಅಳುವಿನ , ನೋವಿನ ನಡುವೆ ನಮ್ಮ ಲೋಗೋ ನಿಂತಿತು.. ಮನಕಲಕುವ ಮಾತುಗಳು ... ಮಹಿಳೆಯ ... ಹೆತ್ತಕರುಳಿನಿಂದ ಬಂದಿತ್ತು.... ಒಂದೆರಡು ಮಾತು ಬಂದಾಕ್ಷಣ ನನ್ನ ಕ್ಯಾಮಾರಾ ಬಂದ್ ಆಗಿತ್ತು. ಕೊನೆಗೆ ಬರುವ ವೇಳೆ ನಾನು ಹಾಗೂ ನನ್ನ ಮಿತ್ರ ಜೊತೆಯಾಗಿ ಒಂದಿಷ್ಟು ಸಹಾಯವನ್ನು ನೀಡಿಬಂದೆವು. ಆದರೆ ಅದು ಅವರ ಮಟ್ಟಿಗೆ ಅಂದರೆ ಅವರು ಮಾಡಿದ ಖರ್ಚಿಗೆ ಪುಡಿಗಾಸು ... ಆದರೆ ನಮ್ಮ ಕೈಲಾದ ಸಹಾಯ ಮಾಡಿದ್ದೇವಲ್ಲಾ ಎನ್ನುವ ಸಂತೃಪ್ತಿ ನಮಗಿತ್ತು. ಎಲ್ಲೋ ಕಾಣಿಕೆ ಹುಂಡಿಯಲ್ಲಿ ಹಾಕಿದ್ದಕ್ಕಿಂತ ಹೆಚ್ಚಿನ ನೆಮ್ಮದಿ ಇಲ್ಲಿ ಸಿಕ್ಕಿತ್ತು..

ಆ ಮಕ್ಕಳು ಬದುಕಲಿ.... ರೋಗ ವಾಸಿಯಾಗಲಿ... ಎಂದು ಕಾಣದ ದೇವರಲ್ಲಿ ಬೇಡುವೆ.

ನಿಮಗೆಲ್ಲಾದರೂ ಇವರಿಗೆ ಸಹಾಯ ಮಾಡಬೇಕು ಅನ್ನಿಸಿದರೆ ನನಗೆ Email ಮಾಡಿ ನಾನು ವಿಳಾಸ ನೀಡುವೆ. ಅಥವಾ ಸಾಂತ್ವಾನವನ್ನಾದರೂ ಹೇಳಿ... ನೊಂದ ಹೃದಯಗಳಿಗೆ ಅದುವೇ ದೊಡ್ಡ ಗ್ಲುಕೋಸ್....


puchhappady@yahoo.co.in

25 ಡಿಸೆಂಬರ್ 2008

ಜೀವಕ್ಕೆ ಬೆಲೆ ....??



ಇದು ನ್ಯಾಯವೇ....?. ಇಂತಹ ಸಾವಿಗೆ ನ್ಯಾಯವಿದೆಯೇ..?.. ಜೀವಗಳಿಗೆ ಬೆಲೆಯೇ ಇಲ್ಲವೇ...?. ಇಂತಹದ್ದೊಂದು ಪ್ರಶ್ನೆ ನನಗೆ ಕಾಡಲು ಶುರುವಾದದ್ದು ನಿನ್ನೆಯಿಂದ . ಕಾರಣ ಕೇಳಿ....

ಒಂದು ಹೊಸ ಚಿಂತನೆ ನಡೆದಿದೆ.. ಗೋವು ಇಂದು ವಿವಾದದ ವಸ್ತುವಾಗಿದೆ. ಕಾರಣ ಗೊತ್ತೇ ಇದೆ. ಅದನ್ನು ಭಕ್ಷಣೆ ಮಾಡುವುದಕ್ಕಾಗಿ ಕೊಲ್ಲಲಾಗುತ್ತಿದೆ.ಹಾಗಾಗಿ ಇಂದು ವಿವಾದಗಳು ಹೆಚ್ಚಾಗಿವೆ.ಕೆಲವೊಮ್ಮೆ ಅಶಾಂತಿಗೂ ಕಾರಣವಾಗಿದೆ. ಇದನ್ನು ತಡೆಯಲು ಇನ್ನಿಲ್ಲದ ಪ್ರಯತ್ನ ನಡೆಯುತ್ತಿದೆ. ಆದರೆ ಇಲ್ಲೊಂದು ಸಂಘಟನೆ ಹೊಸತೊಂದು ಯೋಚನೆ ನಡೆಸಿದೆ.ಗೋ ಮಾಂಸ ಭಕ್ಷಣೆ ಮಾಡುತ್ತಿರುವುದು ಇಂದು ಅದು ಕಡಿಮೆ ದರದಲ್ಲಿ ಸಿಗುತ್ತದೆ ಎನ್ನುವ ಕಾರಣಕ್ಕಾಗಿ. ಆದರೆ ಅದನ್ನು ಹೆಚ್ಚಾಗಿ ತಿನ್ನುವವರು ಮುಸ್ಲಿಂಮರು , ಹಾಗಾಗಿ ಆ ಮಾಂಸಕ್ಕೆ ಪರ್ಯಾಯವಾಗಿ ಆಡಿನ ಮಾಂಸವನ್ನು ತರಬೇಕು ಎನ್ನುವುದು ಸಂಘಟನೆಯ ಉದ್ದೇಶ. ಆ ಕಾರಣಕ್ಕಾಗಿ ಇಂದು ಕೆಲ ಶರ್ತಗಳ ಮೂಲಕ ಮುಸ್ಲಿಂ ಕುಟುಂಬಗಳಿಗೆ 2 ಆಡನ್ನು ನೀಡುವುದು ಸಂಘಟನೆಯ ಚಿಂತನೆ. ಇದರಿಂದಾಗಿ ಈಗ ಆಡಿನ ಮಾಂಸಕ್ಕೆ 2೦೦ ರೂಗಳವರೆಗೆ ಇದೆ. ಅದು ಕಡಿಮೆಯಾಗಬಹುದು ದನ ತಿನ್ನುವವರೆಲ್ಲಾ ಆಡನ್ನು ತಿನ್ನುತ್ತಾರೆ ಎಂದು ಸಂಘಟಕರು ನಂಬಿದ್ದಾರೆ.ಅಲ್ಲದೆ ಇದಕ್ಕೀಂತಲೂ ಒಂದು ಹೆಜ್ಜೆ ಮುಂದೆ ಬಂದು ಮುಸ್ಲಿಂಮರಿಗೆ ಬರ್ಕತ್ ನಲ್ಲಿ ಆಡನ್ನೇ ತಿಳಿಸಿದ್ದಾರೆ ಹಾಗಾಗಿ ಆಡು ಅವರ ಆಹಾರ ಎನ್ನುತ್ತದೆ ಈ ಸಂಘಟನೆ. ಇದಿಷ್ಟು ವಿಷಯ.

ಗೋವಿಗೆ ಇಂದು ಪೂಜ್ಯ ಭಾವನೆ ಇದೆ ನಿಜ, ಎಲ್ಲರೂ ಅದನ್ನು ಒಪ್ಪಬಹುದು ಅಂತನೇ ಇಟ್ಟುಕೊಳ್ಳೋಣ. ಹಾಗಾಗಿ ಅದನ್ನು ಕೊಲ್ಲಬಾರದು ಎನ್ನುವ ಭಾವನೆ ಇರುವುದೂ ನಿಜವೇ. ಆದರೆ ಇಂದು ಗೋಹತ್ಯೆ ನಿಲ್ಲಬೇಕು ಎನ್ನುವ ಕಾರಣಕ್ಕೆ ಇನ್ನೊಂದು ಪ್ರಾಣಿಯನ್ನು ಬೆಳೆಸುವುದು ಎಷ್ಟು ಸರಿ. ಅದೂ ಒಂದು ಜೀವವಿರುವ ಪ್ರಾಣಿಯಲ್ಲವೇ?. ಅದರಲ್ಲೂ ಔಷಧೀಯ ಗುಣವಿದೆಯಲ್ಲಾ?.ಗೋವು ಪೂಜ್ಯ ಎನ್ನುವ ಒಂದೇ ಕಾರಣಕ್ಕೆ ಅದನ್ನು ಹತ್ಯೆ ಮಾಡಬಾರದು ಎನ್ನುವುದರ ಜೊತೆಗೆ ಇನ್ನೊಂದು ಪ್ರಾಣಿಯ ಹತ್ಯೆಯೂ ಆಗಬಾರದು ಎನ್ನುವ ಬಾವನೆಯನ್ನು ಇಂದು ಬೆಳೆಸಿಕೊಳ್ಳಬೇಕಾದ ಅನಿವಾರ್ಯತೆಯಿದೆ. ಗೋಹತ್ಯೆ ನಿಷೇಧಕ್ಕೆ ಸರಿಯಾದ ದಾರಿಯಲ್ಲಿ ಪ್ರಯತ್ನಿಸಬೇಕು.

ಒಂದು ಪ್ರಾಣಿ ಇನ್ನೊಂದು ಪ್ರಾಣಿಯ ಆಹಾರದ ವಸ್ತುವಾಗುವುದು ಪ್ರಕೃತಿ ನಿಯಮ.

ಆದರೆ ಬುದ್ದಿವಂತನಿಗೂ ಜೀವಂತ ಪ್ರಾಣಿ ಆಹಾರಕ್ಕೆ ಬೇಕಾದರೆ ಆತ ಯಾವುದಕ್ಕೆ ಸಮಾನ.? ಈ ಬುದ್ದಿವಂತನಿಗೆ ಬದುಕಲು ಅದುವೇ ಆಗಬೇಕು ಎಂದಿಲ್ಲವಲ್ಲ. ಅದೆಲ್ಲವೂ ಬಾಯಿ ಚಪಲ ಮತ್ತು ನಾಲಗೆಯನ್ನು ತಣಿಸಲು ಎಂಬುದು ನನ್ನ ಚಿಂತನೆ.

ಎಲ್ಲರೂ ಇದನ್ನು ಒಪ್ಪಬೇಕು ಎಂದಿಲ್ಲ.


22 ಡಿಸೆಂಬರ್ 2008

ನಾನು ಮಾಡಿದ ಒಳ್ಳೆಯ ಕೆಲಸಗಳು...




ಇದೇನು, ನಾವು ಯಾರಾದರೂ ಕೆಟ್ಟ ಕೆಲಸಗಳನ್ನು ಮಾಡಿದ್ದಿದೆಯಾ?. ಅವರವರ ಮಟ್ಟಿಗೆ ಅವರು ಮಾಡುವ ಎಲ್ಲಾ ಕೆಲಸಗಳು ಒಳ್ಳೆಯ ಕೆಲಸಗಳೇ.ಇನ್ನೊಬ್ಬ ಮಾಡುವ ಕೆಲಸಗಳು ಮಾತ್ರಾ ಕೆಟ್ಟ ಕೆಲಸಗಳಾಗಿರುತ್ತದೆ.ನಮ್ಮ ದೃಷ್ಠಿ ಹಾಗಿರುತ್ತದೆ, ನಮ್ಮ ಕಣ್ಣಿನ ನೇರಕ್ಕೆ ಮಾತ್ರಾ ಯೋಚಿಸುವುದು.ಅದೇ ಸರಿ ಎನ್ನುವುದು ನಮ್ಮ ಹಕ್ಕು ಅಂತ ಭಾವಿಸಿದ್ದೇವೆ. ಸೂಕ್ಷವಾಗಿ ನಮ್ಮ ಅಂತರ್ಯವನ್ನು ಗಮನಿಸುವ ಗೋಜಿಗೆ ಹೋಗುವುದಿಲ್ಲ. ಆತ ಹೇಳುವುದನ್ನು ಕೇಳುವುದಿಲ. ನಮ್ಮ ನಿರ್ಧಾರವನ್ನು ಅದಕ್ಕೂ ಮೊದಲೇ ಪ್ರಕಟಿಸಿಯಾಗಿರುತ್ತದೆ.ಹಾಗಾಗಿ ಅಲ್ಲಿ , ಆತನ ಕೆಲಸಗಳೆಲ್ಲವೂ ಕೆಟ್ಟದ್ದಾಗಿಯೇ ಕಾಣುತ್ತದೆ. ಅಥವಾ ನನ್ನ ನೇರಕ್ಕೆ ಆತ ಇಲ್ಲ ಎಂದಾದಲ್ಲಿ ಆತನ ಬರಹ , ಆತನ ಕೆಲಸ ಎಲ್ಲವೂ ತಪ್ಪು.ಅದೊಂದು ಪೂರ್ವಾಗ್ರಹ ಪೀಡಿತವಾದ ಯೋಚನೆ.

ಇಷ್ಟಕ್ಕೂ ಈ ಒಳ್ಳೆಯ ಕೆಲಸಗಳು ನನಗೆ ನೆನಪಾದದ್ದು ಯಾಕೆ ಗೊತ್ತಾ?.ಮೊನ್ನೆ ಮನೆಯಲ್ಲಿ ಯಾವುದೋ ಪುಸ್ತಕವನ್ನು ಹುಡುಕಾಡುತ್ತಿದ್ದೆ. ಅದು ನನ್ನ ಮೆಚ್ಚಿನ ಪುಸ್ತವಾಗಿತ್ತು. ಆಗ ನನಗೆ ಇನ್ನೊಂದು ನನ್ನ ಕೈಬರಹದ ಪುಸ್ತಕ ಸಿಕ್ಕಿತ್ತು. ಅದು ನಾನು ೪ ನೇ ತರಗತಿಯಲ್ಲಿ ಬರೆಯುತ್ತಿದ್ದ ಹೋಂವರ್ಕ್ ಪುಸ್ತಕ ಅದರ ಮೊದಲ ಪುಟದಲ್ಲಿ ಬರೆದಿತ್ತು . ನಾನು ಮಾಡಿದ ಒಳ್ಳೆಯ ಕೆಲಸಗಳು. ಇದರ ಶೀರ್ಷಿಕೆ ನೋಡಿದಾಗ ನನಗೆ ಆಸಕ್ತಿ ಹೆಚ್ಚಿತು. ನನ್ನ ನೆನಪುಗಳೆಲ್ಲವೂ ಬಾಲ್ಯದ ಕಡೆಗೆ ಓಡಿತು. ಆಗ ನಮಗೆ ಪ್ರತಿದಿನ ಹೋಂವರ್ಕ್ ನೊಂದಿಗೆ ಆ ದಿನ ಮಾಡಿದ ಒಂದು ಒಳ್ಳೆಯ ಕೆಲಸದ ಬಗ್ಗೆ ಆ ಪುಸ್ತಕದಲ್ಲಿ ಬರೆಯಬೇಕಾಗಿತ್ತು. ಹಾಗೆ ದಾಖಲಿಸಿದ್ದ ಪುಸ್ತಕ ಅದು. ಅಬ್ಬಾ ೩೬೦ ಒಳ್ಳೆಯ ಕೆಲಸ ನಾನು ಮಾಡಿದ್ದೆ... ನಾನು ಮಾತ್ರವಲ್ಲ ನನ್ನ ಅಂದಿನ ಎಲ್ಲಾ ಮಿತ್ರರು ಮಾಡಿದ್ದಾರೆ. ಬಹುಶ: ಈಗ ಆ ಒಳ್ಳೆಯ ಕೆಲಸಗಳನ್ನು ದಾಖಲಿಸುವ ಪರಿಪಾಠವಿಲ್ಲ. ಆಗಲೇ ಸುಮ್ಮ ಸುಮ್ಮನೆ ಒಳ್ಳೆಯ ಕೆಲಸ ನಾವು ಮಾಡುತ್ತಿದ್ದೆವು..ಈಗ ಕತೆ ಕೇಳುವುದೇ ಬೇಡ. ಶ್ರೀರಾಮಚಂದ್ರ ಮಾಡದ್ದನ್ನು ಮಾಡುತ್ತಾರೆ. ಅದಿರಲಿ ನಾವು ಪ್ರತಿದಿನ ಬರೆಯುತ್ತಿದ್ದ ಒಳ್ಳೆಯ ಕೆಲಸದ ಒಂದು ಸ್ಯಾಂಪಲ್ ಹೇಳುತ್ತೇನೆ . ನಾನು ಇಂದು ರಸ್ತೆಯಲ್ಲಿದ್ದ ಮುಳ್ಳನ್ನು ಹೆಕ್ಕಿದ್ದೇನೆ , ನಾನು ಇಂದು ಮನೆಯಲ್ಲಿ ಕಸ ಗುಡಿಸಿದ್ದೇನೆ , ನಾನು ಇಂದು ನೀರು ತಂದಿದ್ದೇನೆ... ನಾನು ಇಂದು ಪಾಠ ಓದಿದ್ದೇನೆ ...... ಹೀಗೆ ಮುಂದುವರಿಯುತ್ತದೆ. ಆಗ ಅದುವೇ ದೊಡ್ದ ಕೆಲಸ ಅಂತ ನಮ್ಮ ತಲೆಯಲ್ಲಿ. ಆದರೆ ಅದನ್ನೂ ಮಾಡುತ್ತಿದ್ದೆವಾ ಅನ್ನುವುದು ಮತ್ತಿನ ಪ್ರಶ್ನೆ. ಆದರೂ ಪುಸ್ತಕದಲ್ಲಿ ಒಳ್ಳೆಯ ಕೆಲಸವಾಗುತ್ತಲೇ ಇತ್ತು. ಇಂತಹ ಒಳ್ಳೆಯ ಕೆಲಸಗಳ ದಾಖಲಾತಿ ಕೆಲ ಅವಾಂತರಕ್ಕೂ ಕಾರಣವಾಗುತ್ತಿತ್ತು. ಎರಡು ದಿನಕ್ಕೊಮ್ಮೆ ಅದೇ ಕೆಲಸ. ಒಮ್ಮೆ ನನ್ನ ಮಿತ್ರನ ತಂದೆ ಶಾಲೆಗೆ ಬಂದಿದ್ದರು ಶಾಲೆ ಟೀಚರ್ ಮಿತ್ರನ ತಂದೆಯಲ್ಲಿಕೇಳಿದರು ನಿಮ್ಮ ಮಗ ಇವತ್ತು ಮನೆಯನ್ನು ಗುಡಿಸಿದ್ದಾನಾ? ತಕ್ಷಣ ಇಲ್ಲ ಎನ್ನುವ ಉತ್ತರ ಮಿತ್ರನ ತಂದೆಯದ್ದು. ಟೀಚರ್ ಒಳ್ಳೆಯ ಕೆಲಸದ ಪುಸ್ತಕವನ್ನು ತೋರಿಸಿ ನೋಡಿ ನಿಮ್ಮ ಮಗ ಏನೆಲ್ಲಾ ಕೆಲಸ ಮಾಡಿದ್ದಾನೆ ಎನ್ನಬೇಕೇ... ಇದೆಲ್ಲಾ ಶುದ್ದ ಸುಳ್ಳು ಅಂತಲೂ ಮಿತ್ರನ ತಂದೆ ಹೇಳಿದರು. ಮಾತ್ರವಲ್ಲ ಹೀಗೆ ಸುಳ್ಳು ಬರೆದರೆ ಎರಡೆರಡು ಕೊಡಿ ಟೀಚರ್ ಎಂದರು. ನಂತರ ನಮಗೆಲ್ಲಾ ಗಡ .. ಗಡ... ಕೆಲಸ ಒಳ್ಳೆಯದೇ... ಆದರೆ ,,,?? ಒಳ್ಳೆಯ್ ಕೆಲಸ ಮಾಡಲು, ಬರೆಯಲು ಹೆದರಿಕೆ. ಮನೆಯಿಂದ ಆಕಸ್ಮಿಕವಾಗಿ ಶಾಲೆಗೆ ಬಂದರೆ ...? ಎಂಬ ಭಯ ಅನುದಿನವೂ ಕಾಡುತ್ತಿತ್ತು. ಅಂತೂ ೪ ನೆ ತರಗತಿ ಕಳೆದಿತ್ತು.. ನಾನಂತೂ ಬಚಾವ್ ಆಗಿದ್ದೆ. ಒಳ್ಳೆಯ ಕೆಲಸಗಳನ್ನೇ ಮಾಡಿದ್ದೆ....!!!!????. ಈಗ ಅಂತಹ ಒಳ್ಳೆಯ ಕೆಲಸಗಳಿಲ್ಲ ... ಒಳ್ಳೆಯದೇ ಆಯಿತು....

ಒಂದು ವೇಳೆ ಅಂತಹ ಹೋಂವರ್ಕ್ ಇರುತ್ತಿದ್ದರೆ ಇಂದಿನ ಪುಟಾಣಿಗಳು ಏನನ್ನು ಬರೆಯುತ್ತಿದ್ದರು ಎನ್ನುವುದಕ್ಕೆ ಸ್ಯಾಂಪಲ್ .. ನಾನು ಇಂದು ಮೊಬೈಲ್ ಚಾರ್ಜ್ ಮಾಡಿದೆ , ನಾನು ಇಂದು ಟಿ.ವಿಯನ್ನು ಆನ್ ಮಾಡಿದೆ , ನಾನು ಇಂದು ಫೋನ್ ರಿಸೀವ್ ಮಾಡಿದೆ, ನಾನು ಇಂದು ಕಾರಿನ ಡೋರ್ ತೆಗೆದೆ , ನಾನು ಇಂದು ಹೋಂವರ್ಕ್ ಮಾಡಿದೆ ....... ... ಹೀಗೆ ದಾಖಲಾಗುತ್ತಿತ್ತೋ ಏನೋ..?? ಅಥವಾ ಹಿರಿಯರೇ ಅವರು ಮಾಡಿದ ಕೆಲಸಗಳನ್ನು ಬರೆದುಕೊಡುತ್ತಿದ್ದರೋ ಗೊತ್ತಿಲ್ಲ....

ಅಂತೂ ಒಮ್ಮೆ ನನ್ನ ಬಾಲ್ಯದ ಒಳ್ಳೆಯ ಕೆಲಸಗಳು ನೆನಪಾಯಿತು.

21 ಡಿಸೆಂಬರ್ 2008

ನಾಗದೋಷವಂತೆ....





ರಾಹುಲ್ ದ್ರಾವಿಡ್‌ಗೆ ನಾಗದೋಷವಿದೆಯೇ?.ಹೀಗೊಂದು ಪ್ರಶ್ನೆ ಈಗ ಎದ್ದಿದೆ. ಇದಕ್ಕೆ ಪುಷ್ಠಿ ನೀಡುವಂತೆ ದ್ರಾವಿಡ್ ಕುಟುಂಬವು ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಾಗದೋಷ ನಿವಾರಣೆಗೆ ಪೂಜೆ ಸಲ್ಲಿಸಿದ್ದಾರೆ.ಸದ್ದಿಲ್ಲದೆ ಆಗಮಿಸಿದ ದ್ರಾವಿಡ್ ಕುಟುಂಬವು ಪೂಜೆ ನಡೆಸಿ ತೆರಳಿದೆ.

ಟೀಂ ಇಂಡಿಯಾದ ಆಟಗಾರ ರಾಜ್ಯದ ಹೆಮ್ಮೆಯ ಕ್ರೀಡಾಪಟು ರಾಹುಲ್ ದ್ರಾವಿಡ್ ಅವರಿಗೆ ನಾಗದೋಷವಿದೆಯೇ ಎನ್ನುವ ಪ್ರಶ್ನೆ ಈಗ ಎದ್ದಿದೆ. ರಾಹುಲ್ ಅವರಿಗೆ ಕ್ರಿಕೆಟ್ ರಂಗದಲ್ಲಿನ ಸಾಧನೆಗೆ ನಾಗದೋಷ ಅಡ್ಡಿಯಾಗಿದೆಯಂತೆ.ಈ ನಾಗದೋಷ ನಿವಾರಣೆಗೆ ರಾಹುಲ್ ಕುಟುಂಬವು ಕುಕ್ಕೆಗೆ ಆಗಮಿಸಿದ ಶ್ರೀ ದೇವಳದಲ್ಲಿ ತುಲಾಭಾರ ಸೇವೆ , ಆಶ್ಲೇಷ ಬಲಿ ಸೇರಿದಂತೆ ವಿವಿಧ ಸೇವೆಯನ್ನು ನಡೆಸಿದೆ.1 ದಿನದ ಕಾಲ ಸುಬ್ರಹ್ಮಣ್ಯದಲ್ಲೆ ಉಳಿದಿದ್ದ ರಾಹುಲ್ ಕುಟುಂಬವು ಈ ವಿಚಾರವನ್ನು ಗುಪ್ತವಾಗಿಟ್ಟಿತ್ತು.ಮುಂದೆ ರಾಹುಲ್ ದ್ರಾವಿಡ್ ಅವರು ಕುಕ್ಕೆ ಸುಬ್ರಹ್ಮಣ್ಯಕ್ಕೆ ಖುದ್ದಾಗಿ ಆಗಮಿಸಿ ಇನ್ನೊಮ್ಮೆ ಸೇವೆ ಸಲ್ಲಿಸಲಿದ್ದಾರೆ ಎಂಬ ಮಾಹಿತಿಯೊಂದು ಲಭ್ಯವಾಗಿದೆ. ಹಿಂದೆ ಸಚಿನ್ ತೆಂಡೂಲ್ಕರ್ ಅವರಿಗೆ ನಾಗದೋಷವಿದ್ದಾ ಗ ಅವರು ಕುಟುಂಬ ಸಮೇತರಾಗಿ ಕುಕ್ಕೆಗೆ ಆಗಮಿಸಿ ಸರ್ಪಂಸ್ಕಾರ ಸೇವೆಯನ್ನು ಮಾಡಿದ್ದರು.ಹೀಗಾಗಿ ನಂತರದ ಅವರ ಕ್ರಿಕೆಟ್ ಜೀವನವು ಉತ್ತಮವಾಗಿತ್ತು ಎನ್ನುವ ನಂಬಿಕೆಯಿದೆ.ಅಂತೆಯೇ ರಾಬಿನ್ ಉತ್ತಪ್ಪ ಕೂಡಾ ಕುಕ್ಕೆಗೆ ಆಗಮಿಸಿ ಪೂಜೆ ಸಲ್ಲಿಸಿದ್ದರು.ಅದೇ ರೀತಿ ಈಗ ರಾಹುಲ್ ಅವರಿಗೂ ನಾಗದೋಷದ ಕಾಟ ಆರಂಭವಾದ ಹಿನ್ನೆಲೆಂiಲ್ಲಿ ಅವರ ಕುಟುಂಬವು ಈಗ ಪ್ರಾರಂಭಿಕ ಹಂತದಲ್ಲಿ ಆಗಮಿಸಿ ಸೇವೆ ಸಲ್ಲಿಸಿದೆ.ಬೆಂಗಳೂರಿನ ಜ್ಯೊತಿಷಿಯೊಬ್ಬರ ಅಣತಿಯಂತೆ ಅವರ ಕುಟುಂಬ ಸುಬ್ರಹ್ಮಣ್ಯಕ್ಕೆ ಆಗಮಿಸಿದೆ.

ಇನ್ನು ಇನ್ನೊಂದು ಪ್ರಶ್ನೆ ಎದ್ದಿದೆ.ಯಾಕೆ ಈ ನಾಗದೊಷ ಪ್ರಸಿದ್ಧ ಕ್ರೀಡಾಪಟುಗಳನ್ನು ಹಿಡಿದುಕೊಳ್ಳುತ್ತದೆ. ಇನ್ನೊಂದು ಸಮಾಧಾನ. ಬಡವರಿಗೆ ಮಾತ್ರವಲ್ಲ ದಿಗ್ಗಜರನ್ನೂ ಕಾಡುತ್ತದೆ ಇಂತಹ ಸಮಸ್ಯೆಗಳು ಅಂತಾಯಿತು.ಇಂತಹ ಸಮಸ್ಯೆಗಳನ್ನು ಹೇಳಲು ಅಂತಲೇ ಜನ ಇರುತ್ತಾರೆ. ಅವರಿಗೆ ಕೆಲಸವೇ ಅದು. ನಿಮಗೆ ಆ ದೋಷ ... ಈ ದೊಷ... ಅಂತ ಹೇಳುತ್ತಾ.... ಎಣಿಸುತ್ತಾರ್‍.ಜನಕ್ಕೆ ಮೊದಲೇ ಮಾನಸಿಕವಾದ ನೆಮ್ಮದಿಯಿಲ್ಲ. ಅತ್ತಿಂದಿತ್ತ ಇನ್ನಿಲ್ಲದ ಕ್ಷೇತ್ರಗಳಿಗೆ ಅಲೆದಾಟ ಮಾಡುತ್ತಾರೆ.ಹರಕೆಯನ್ನು ತೀರಿಸುತ್ತಾರೆ.ಅಲ್ಲಿಯೂ ವ್ಯಾಪಾರ ನಡೆಯುತ್ತದೆ. ಅದಕ್ಕೆಂದೇ ಅಲ್ಲಿ ಇರುವವರು ದೋಚುತ್ತಾರೆ.

ಈಗ ಇಂತಹ ಕ್ಷೇತ್ರಗಳಿಗೆ ವಿವಿಐಪಿಗಳು ಬಂದರೆ ಅವರ ಕುಟುಂಬವು ಬಂದರೆ ಅನೇಕರಿಗೆ ಲಾಭವಿದೆ. ಮಾಧ್ಯಮಗಳಿಗೆ ಬ್ರೇಕಿಂಗ್ ನ್ಯೂಸ್ , ಮುಖಪುಟ ವರದಿ, ಅಲ್ಲಿನ ಅರ್ಚಕರಿಗೆ ದುಡ್ಡಿನ ಮರ, ಇತರರಿಗೆ ಕಾಣಿಕೆ, ಹೋಟೇಲ್ ಗಳಿಗೆ ಹೊಸರುಚಿ, ಅಭಿಮಾನಿಗಳಿಗೆ ಮುಖ ದರ್ಶನ......

19 ಡಿಸೆಂಬರ್ 2008

ನೀ ನಿಲ್ಲದೆ ....



ನೀ ನಿಲ್ಲದೆ .... ಮನಸೆಲ್ಲಾ ಕಲ್ಲಾಗಿದೆ.... ಇದು ಹಾಡಿನ ಒಂದು ಸಾಲು... ಆದರೆ ಇದೇನು ನನ್ನ ವಿಷಾದ ಗೀತೆಯಲ್ಲ...

ಮೊನ್ನೆ ಹುಣ್ಣಿಮೆಯ ರಾತ್ರಿ.ಮನೆಯ ಅಂಗಳಕ್ಕೆ ಇಳಿದಾಗ ಬಾನಿನಲ್ಲಿ ಚಂದಿರ ಚಿತ್ತಾರವನ್ನು ಬಿಡಿಸಿಟ್ಟಿದ್ದ.ಮೋಡಗಳ ಸಂದಿನಲ್ಲಿ ಕಣ್ಣರೆಪ್ಪೆ ಮಿಟುಕಿಸುವಂತೆ ಆಗೊಮ್ಮೆ ಈಗೊಮ್ಮೆ ಕಾಣುತ್ತಲಿದ್ದ.ನಕ್ಷತ್ರಗಳು ಮೋಡದ ಒಳಗೆ ಅತ್ತಿಂದಿತ್ತ ಓಡಾಡುತ್ತಿದ್ದ್ವು. ನಾನು ನಿಜ ಹೇಳಬೇಕೆಂದರೆ ಚಿಕ್ಕವನಿದ್ದಾಗ ಚಂದಿರನನ್ನು ನೋಡಿದ್ದು ಬಿಟ್ಟರೆ ಚಂದಿರನನ್ನು ಸೂಕ್ಷವಾಗಿ ಅದರಲ್ಲೇ ಲೀನವಾಗಿ ಚಂದಿರನಂಗಳಕ್ಕೆ ಇಳಿದದ್ದಿಲ್ಲ. ಆದರೆ ಮೊನ್ನೆ ಏನೆನೆನಿತೋ ಏನೋ ಅಂಗಳಕ್ಕೆ ಇಳಿದಾಗ ಚಂದಿರನ ಬೆಳಕು ಕಂಡಿತು. ಆ ಪ್ರಕಾಶವನ್ನೇ ದಿಟ್ಟಿಸಿ ನೋಡಬೇಕು ಎನಿಸಿತು.ತೋಟಕ್ಕೆ ಇಳಿಯದೆ ವಾರಗಳೇ ಕಳೆದಿತ್ತು.ಹಾಗಾಗಿ ರನ್ ಅಂಗಳಕ್ಕೆ ಇಳಿಯಲು ಮನಸ್ಸು ರೆಡಿಯಾಗಿತ್ತು. ಪ್ರತಿದಿನ ರಾತ್ರಿ ಕಂಪ್ಯೂಟರ್ ಪರದೆಯ ಮುಂದೆ ಗಂಟಗಟ್ಟಲೆ ಕುಳಿತು ಹುಡುಕಾಡುವುದು ಮತ್ತು ಕೆಲಸದ ದಾರಿಗೆ ರೂಪು ಕೊಡುವುದರಲ್ಲೇ ಮಗ್ನನಾದಾಗಿ ಗಂಟೆ ನೋಡುವ ಹೊತ್ತಿಗೆ ೧೧ ಕಳೆದಿರುತ್ತದೆ ಹಾಗಾಗಿ ಅಂದು ಯಾವುದೇ ಲೆಕ್ಕಾಚಾರವಿಲ್ಲದೆ ಸುಮ್ಮನೆ ಮನೆಯಂಗಳದಲ್ಲಿ ಆಗಸಕ್ಕೆ ನೋಡುತ್ತಾ ನಿಂತಿದ್ದಂತೆ ಒಮ್ಮೆ ಶುಭ್ರ ಆಗಸದಲ್ಲಿ ಹೊಳೆಯುವ ಚಂದಿರ ಇನ್ನೊಮ್ಮೆ ಮೋಡಗಳೆಂಬ ಮೋಡಗಳು ಚಂದಿರನ ಪ್ರಕಾಶಕ್ಕೆ ಅಡ್ಡ ಬರುತ್ತಿತ್ತು. ನಕ್ಷತ್ರಗಳು ಬಲುದೂರ ಸಾಗುತ್ತಿದ್ದವು. ಆಗ ಸೊಯ್ ಎಂಬ ಚಳಿಗಾಳಿ ಸುತ್ತಲೂ ಬೀಸುತ್ತಲಿತ್ತು. ಮನಸ್ಸು ಎಲ್ಲೋ ದೇಹವೆಲ್ಲೂ ಸುತ್ತುತ್ತಾ ಆ ಚಂದಿರನ ಪ್ರಕಾಶದ ಭ್ರಮೆಯಲ್ಲಿ ತೇಲುತ್ತಲೇ ಇತ್ತು. ಮನಸ್ಸಿಗೆ ಆಹ್ಲಾದ ಒದಗುತ್ತಿತ್ತು. ಆಗ ದೂರದಲ್ಲಿ ಎಲ್ಲೋ ಕರ್ಕಶವಾದ ಸದ್ದು , ನಾಯಿಯ ಕೂಗಿನ ಸದ್ದು, ಮರದಿಂದ ನೀರ ಹನಿ ಬೀಳುವ ಟಪ್ ಸದ್ದು ಎಲ್ಲವೂ ಸೂಕ್ಷ ಮನಸ್ಸಿನ ಒಳಗೆ ಕೇಳಲಾರಂಭಿಸಿತು.ಜಾಗೃತವಾದ ಮನಸ್ಸು ಆ ಕಡೆಗೂ ಹಮನಹರಿಸಿತು. ಸದ್ದುಗಳು ಹತ್ತಿರ ಹತ್ತಿರವಾದಂತೆ ಅನಿಸತೊಡಗಿತು..... ಅದೇನು ಅನ್ನುವ ಕುತೂಹಲ ಬರತೊಡಗಿತು. ಆಗ ಆ ಸತ್ಯದ ಅನ್ವೇಷಣೆಯಲ್ಲಿ ಸಿಕ್ಕಿದ್ದು ಅಂತಹ ಸದ್ದುಗಳೆಲ್ಲವೂ ನಮ್ಮ ಭ್ರಮೆಯಲ್ಲ ಸತ್ಯವೂ ಅಲ್ಲ ನಂಬುವಂತಹುದೂ ಅಲ್ಲ. ಆದರೆ ಅದರ ಬಗ್ಗೆ ನಿಗಾ ಇರಬೇಕು.ಅದೆಲ್ಲವೂ ಪ್ರಕಾಶದ ಹಿಂದಿರುವ ಮೋಡಗಳು. ಆ ಮೋಡಗಳು ಪಕ್ಕದಲ್ಲಿರುವ ನಕ್ಷತ್ರಗಳನ್ನು ಓಡಿಸುತ್ತಾ ಸಾಗುತ್ತದೆ. ಇದೆಲ್ಲವನ್ನೂ ಸಮಾಜದೊಂದಿಗೆ ಸಮೀಕರಿಸುತ್ತಾ ಸಾಗಿದಾಗ ರಾತ್ರಿ ಪಂಪ್ ಚಾಲೂ ಮಾಡುವ ಹೊತ್ತು ಬಂದಿತ್ತು. ಆಗ ರಾತ್ರಿ ಗಂಟೆ ೧೨. ಪಂಪ್ ಚಾಲೂ ಮಾಡಿ ಬಂದು ಹಾಸಿಗೆ ಬಿಡಿಸುವ ವೇಳೆಗೆ ನಿದ್ರೆಯು ಕಣ್ಣನ್ನು ಆವರಿಸಿತ್ತು.

ಇದೆಲ್ಲವೂ ಇಂದಿನ ಸಮಾಜದಲ್ಲಿ ಕಾಣುತ್ತೇವೆ ನಾವು?. ಚಂದಿರ , ಅವನ ಪ್ರಕಾಶ , ಆ ಪ್ರಕಾಶವನ್ನು ಅಡ್ಡಗಟ್ಟುವ ಮೋಡಗಳು, ಓಡುವ ನಕ್ಷತ್ರಗಳು, ಮತ್ತೆ ಬೆಳಕು ಕಾಣುವ ಚಂದಿರ ಹತ್ತಿರ ಕಾಣುವ ನಕ್ಷತ್ರಗಳು.... ಇದೆಲ್ಲವೂ ನಿಜವಾ?. ಅಷ್ಟಕ್ಕೂ ಚಂದಿರನೇ ಪರಾವಲಂಬಿಯಲ್ವೇ?. ಆತನು ಬೆಳಕು ನೀಡುವುದು ಸೂರ್ಯನಿಂದ ತಾನೆ?.

ಅದಕ್ಕಾಗಿ ನೀ ನಿಲ್ಲದೆ ಮನಸಿಲ್ಲ... ಮನಸೇ ಎಲ್ಲಾ

ಎಲ್ಲವೂ ಗೋಜಲು.... ಗೋಜಲು....

08 ಡಿಸೆಂಬರ್ 2008

ಸಂಸ್ಕೃತ ಮತ್ತು ಪುನರುತ್ಥಾನ....

ನನಗೆ ಪಾಠಕ್ಕೆ ಇರಲಿಲ್ಲ ಆದರೆ ಗುರುಗಳು ಅಂತ ಹೇಳಬಹುದು .. ಹಿತೈಷಿ ಅಂತಅನ್ನಲೂ ಬಹುದು ... ಮಿತ್ರ ಅಂತ ಹೇಳಲೂಬಹುದಾದ , ನಾನು ಅತ್ಯಂತ ಹೆಚ್ಚು ಗೌರವಿಸುವ ಮತ್ತು ಪ್ರೀತಿಸುವವರಲ್ಲಿ ಒಬ್ಬರಾದ ಸುಬ್ರಹ್ಮಣ್ಯದ ಮಂಜುನಾಥ ಭಟ್ ಸಂಸ್ಕೃತದ ಬಗ್ಗೆ ಲೇಖನವೊಂದನ್ನು ಯಾವುದೋ ಸಂಚಿಕೆಗೆ ಬರೆದಿದ್ದರು. ಅದು ನನಗೆ ಹೆಚ್ಚು ಆಪ್ಯಾಯಮಾನವೆನಿಸಿತ್ತು. ಅದರ ಪಡಿಯಚ್ಚು ಇಲ್ಲಿದೆ....

ಭಾರತದ ಇತಿಹಾಸದಲ್ಲಿ ಸಂಸ್ಕೃತವು ಒಂದು ಭಾಷೆಯಾಗಿ, ದೇಶದ ಸಮಗ್ರತೆಯ ಬಹುದೊಡ್ಡ ಸಂಕೇತವಾಗಿ ಕಾರ್ಯನಿರ್ವಹಿಸಿದೆ. ಋಷಿಮುನಿಗಳ ಧ್ವನಿಯಾಗಿ, ಮಾನವನ ಬದುಕಿನ ಉನ್ನತಿಯ ಮೌಲ್ಯಗಳ ರೂವಾರಿಯಾಗಿ ಸಂಸ್ಕೃತ ಈ ದೇಶದ ಜೀವನಾಡಿಯಾಗಿತ್ತು. ಬುದ್ಧಿಜೀವಿಗಳ ಹಾಗು ವಿದ್ವಾಂಸರ ಆಧ್ಯಾತ್ಮಿಕ ಸಂವಾದ ಸಂಸ್ಕೃತದಲ್ಲಿಯೇ ನಡೆಯುತ್ತಿತ್ತು. ಅದು ಜವಸಾಮಾನ್ಯರ ಆಡುಮಾತಿನ ಮಾಧ್ಯಮವಾಗಿ ದೇಶದ ಉದ್ದಗಲಕ್ಕೂ ಅಪಾರ ಪ್ರಭಾವ ಬೀರಿದೆ. ಭಾರತದ ಎಲ್ಲ ಭಾಷೆಗಳ ಬೆಳವಣಿಗೆಯಲ್ಲಿ ಸಂಸ್ಕೃತದ ಕೊಡುಗೆ ಗಣನೀಯವಾಗಿದೆ. ಹೊಸ ಪದಗಳ ಸೃಷ್ಟಿಗೆ ಹಾಗು ವಿಜ್ಞಾನ ಸಾಹಿತ್ಯ ನಿರ್ಮಾಣಕ್ಕೆ ಇಂದಿಗೂ ಸಂಸ್ಕೃತ ಸ್ಪೂರ್ತಿಯಾಗಿದೆ.

ಐದಾರು ಸಾವಿರ ವರ್ಷಗಳ ಅಸ್ತಿತ್ವವಿರುವ ಸಂಸ್ಕೃತ ಭಾಷೆ ಮತ್ತು ಸಾಹಿತ್ಯ ಭಾರತೀಯರ ಜೀವನ ಪರಂಪರೆಯಲ್ಲಿ ಹಾಸುಹೊಕ್ಕಾಗಿ ಸೇರಿಹೋಗಿದೆ. ಅದು ನಮ್ಮ ಭಾರತೀಯ ಸಂಸ್ಕೃತಿಯ ಪ್ರತೀಕ. ಭಾರತೀಯತೆಗೆ ಪೂರಕ ಸಂಸ್ಕೃತ ಜ್ಞಾನ ಮತ್ತು ಸಂಸ್ಕೃತ ಶಿಕ್ಷಣ ಎಂಬುದು ನಿರ್ವಿವಾದ. ಈ ಕುರಿತು ಕನ್ನಡ ವಿದ್ವಾಂಸರು, ದೇಶದ ನೇತಾರರು ಹಾಗು ಪಾಶ್ಚಾತ್ಯ ವಿದ್ವಾಂಸರು ಅಲ್ಲಲ್ಲಿ ಕಾಲಾನುಕಾಲಕ್ಕೆ ವ್ಯಕ್ತಪಡಿಸಿದ ಅಭಿಪ್ರಾಯಗಳು ಸಾಕ್ಷಿಯಾಗಿ ನಿಲ್ಲುತ್ತವೆ. ಉದಾ;- ಸಂಸ್ಕೃತ ಬಲ್ಲವನೇ ಸುಸಂಸ್ಕೃತ ಎನ್ನುವಷ್ಟರ ಮಟ್ಟಿಗೆ ಆ ಭಾಷೆಯಲ್ಲಿ ಜ್ಞಾನನಿಧಿಯಡಗಿದೆ - ದ.ರಾ.ಬೇಂದ್ರೆ.

ಭಾರತವರ್ಷದ ಸಂಸ್ಕೃತಿಗೆ ಸಂಸ್ಕೃತವು ತಾಯಿಬೇರು. ಇತರ ಭಾಷೆಗಳಿಗೆ ಹೇಗೋ ಹಾಗೆಯೇ ಕನ್ನಡದ ಬೆಳವಣಿಗೆಗೆ ಸಂಸ್ಕೃತವು ಕೇವಲ ಅವಶ್ಯಕ.-ಮಾಸ್ತಿ ವೆಂಕಟೇಶ ಅಯ್ಯಂಗಾರ.

The eduction of any Hindu child is incomplete, unless he has got some knowledge of Sanskrit. — Gandiji. ಇತ್ಯಾದಿ.

ಆದ್ದರಿಂದಲೇ ಭಾರತಸ್ಯ ಪ್ರತಿಷ್ಠೇ ದ್ವೇ, ಸಂಸ್ಕೃತಂ ಸಂಸ್ಕೃತಿಸ್ತಥಾಸಂಸ್ಕೃತ ಭಾಷೆ ಮತ್ತು ಭಾರತೀಯ ಸಂಸ್ಕೃತಿ ಭಾರತದ ಎರಡು ಪ್ರತಿಷ್ಠೆಗಳು ಎಂಬ ಮಾತು ಜನಜನಿತವಾಗಿದೆ.
ಸಂಸ್ಕೃತ ಪಾಣಿನಿಯ ವ್ಯಾಕರಣದಿಂದ ಸಂಸ್ಕಾರಗೊಂಡ ಮೇಲೆ ಇದಕ್ಕೆ ಸಂಸ್ಕೃತ ಎಂಬ ಹೆಸರು ಬಂದಿದ್ದಾಗಿ ತಿಳಿದುಬರುತ್ತದೆ. ವಿಸ್ತೃತವಾದ ವ್ಯಾಕರಣದಿಂದಲೇ ಅತ್ಯಂತ ಕಡಿಮೆ ವಿಕಾರಕ್ಕೊಳಗಾದ ಭಾಷೆ ಎಂಬುದೂ ಅಷ್ಟೆ ಸತ್ಯ.ಇಂದಿನ ಅವಸರದ ಯುಗದಲ್ಲಿ ಈ ವ್ಯಾಕರಣವೇ ಸಂಸ್ಕೃತ ಕಲಿಕೆ ಕುಸಿತಕ್ಕೆ ಒಂದು ಕಾರಣ ಎಂದರೆ ತಪ್ಪಾಗಲಾರದು.

ಸಂಸ್ಕೃತಿ ಎಂಬ ಶಬ್ದದ ಅರ್ಥಕೂಡಾ ಬಹುಮುಖವಾದದ್ದು ಮತ್ತು ನಮ್ಮ ಜೀವನಕ್ಕೆ ಬಹುಮುಖ್ಯ ವಾದದ್ದು. ನಿಘಂಟಾಗಲಿ, ವಿಶ್ವಕೋಶವಾಗಲಿ ಪ್ರಾಚೀನ ಸಾಹಿತ್ಯಕೃತಿಗಳಾಗಲಿ ಸಂಸ್ಕೃತಿ ಎಂಬ ಶಬ್ದದ ಅರ್ಥ ವಿವರಣೆಯನ್ನ ಪೂರ್ತಿಯಾಗಿ ನೀಡಿಲ್ಲ. ಬದಲಾಗಿ ಇದಕ್ಕೆ ಸಂವಾದಿಯಾದ ಸಂಸ್ಕಾರ ಎಂಬ ಪದ ನಮ್ಮ ಪೂರ್ವಿಕರ ಪ್ರಯೋಗದಲ್ಲಿದೆ. ಷೋಡಷ ಸಂಸ್ಕಾರ, ಬುದ್ದಿಸಂಸ್ಕಾರ ಇತ್ಯಾದಿಯಾಗಿ. ಈ ಶಬ್ದಕ್ಕೆ ಪರಿಭಾಷೆ ನೀಡುವಾಗ ಸಂಸ್ಕಾರೋ ನಾಮ ಸ ಭವತಿ, ಯಸ್ಮಿನ್ ಜಾತೇ ಪದಾರ್ಥೋ ಭವತಿ ಯೋಗ್ಯಃ ಕಸ್ಯಚಿದರ್ಥಸ್ಯ ಯಾವುದರಿಂದ ಒಂದು ಪದಾರ್ಥಕ್ಕೆ ಅಥವಾ ವ್ಯಕ್ತಿಗೆ ಯೋಗ್ಯತೆ ಅಥವಾ ಅರ್ಹತೆ ಒದಗಿ ಬರುತ್ತದೋ ಅದು ಸಂಸ್ಕಾರ ಎಂದರು. ಇಂತಹ ಒಳ್ಳೆಯ ಸಂಸ್ಕಾರ ಪಡೆದವ ಸುಸಂಸ್ಕೃತ. ಈ ಸುಸಂಸ್ಕೃತನ ಗುಣಸಂಪತ್ತು ಸಂಸ್ಕೃತಿ.
ಸಂಸ್ಕೃತಿ ಎಂಬ ಪದಕ್ಕೆ ಸಮನಾರ್ಥಕ ಪದ ಲ್ಯಾಟಿನ್ ಮೂಲದ ಕಲ್ಟ್ (cult) ಕಲ್ಟಸ್(cultus)
ನಿಂದಾದ ಕಲ್ಚರ್. ಇದು ಕೃಷಿ ಅಥವಾ ಉಳುಮೆ ಎಂಬರ್ಥ ಕೊಡುವ ಭೂವಾಚಕ ಶಬ್ದ (ಅಗ್ರಿಕಲ್ಚರ್, ಹಾರ್ಟಿಕಲ್ಚರ್) ಈ ಅರ್ಥದಿಂದ ನೋಡಿದಾಗ ಸಂಸ್ಕೃತಿ ನಮ್ಮ ಮನಸ್ಸಿನ ಕೃಷಿ, ಬುದ್ಧಿಯ ವ್ಯವಸಾಯ, ಅಂತರಂಗದ ಸಂಸ್ಕಾರ, ಸಾಹಿತ್ಯ, ಸಂಗೀತ, ಶಿಲ್ಪ, ಚಿತ್ರ, ಮೊದಲಾದ ಕಲೆಗಳ ಮೂಲಕ ಉಂಟಾಗುವ ಉತ್ತಮ ಸಂಸ್ಕಾರವೇ ಕಲ್ಚರ್ ಅಥವಾ ಸಂಸ್ಕೃತಿ. ಒಬ್ಬ ವ್ಯಕ್ತಿಗೆ, ಸಮಾಜಕ್ಕೆ ಒಂದು ಸಂಸ್ಕೃತಿ ಇರುವಂತೆ, ದೇಶಕ್ಕೂ ಒಂದು ಸಂಸ್ಕೃತಿ ಇರುತ್ತದೆ. ಭಾರತಕ್ಕೆ ಅಂತಹ ಸಂಸ್ಕೃತಿಯನ್ನು ಒದಗಿಸಿದ ಭಾಷೆ ಸಂಸ್ಕೃತ. ಈ ಸಂಸ್ಕೃತಿಯನ್ನು ಉಳಿಸಿ ಬಳಸಿ ಬೆಳೆಸಬೇಕಾದರೆ ಅದರ ಕುರಿತು ಸರಿಯಾದ ಅರಿವು ಬೇಕು. ಈ ಹಿನ್ನೆಲೆಯಲ್ಲಿ ಸಂಕ್ಷಿಪ್ತವಾಗಿ ಸಂಸ್ಕೃತದ ಹೂರಣದ ಕುರಿತು ಸ್ವಲ್ಪ ಮಾಹಿತಿ.

ಸಂಸ್ಕೃತ ಎಂದೊಡನೆ ದೇವರ ಪೂಜೆ, ಯಜ್ಞ ಹವನಗಳಿಗೆ ಬೇಕಾದ ಮಂತ್ರದ ಭಾಷೆಯೆಂದೋ, ಕಾಳಿದಾಸ ಭಾಸಾದಿಗಳ ಸಾಹಿತ್ಯದ ಭಾಷೆಯೆಂದೋ ಅಥವಾ ದೇವ ಭಾಷೆಯೆಂದೊ ಭಾವಿಸುವ ಪರಿ ಸಾಮಾನ್ಯವಾಗಿ ಕಾಣುತ್ತೇವೆ. ಸಂಸ್ಕೃತದಲಿ ಗಣಿತ, ಖಗೋಲ, ಭೌತಶಾಸ್ತ್ರ, ರಸಾಯನಶಾಸ್ತ್ರ, ವೈದ್ಯಕೀಯ ಶಾಸ್ತ್ರ ಹಾಗು ಪ್ರಕೃತಿ ವಿಜ್ಞಾನದೊಂದಿಗೆ ಸಾಮರಸ್ಯದ ಬದುಕಿಗೆ ಬೇಕಾದ ವಿಚಾರದ ಧಾರ್ಮಿಕೇತರ ಸಾಹಿತ್ಯವು ಸಾಕಷ್ಟಿವೆ.

ವಸುಧೈವ ಕುಟುಂಬಕಂ ಎಂಬ ಭಾವವನ್ನ ನಿಜವಾದ ಅರ್ಥದಲ್ಲಿ ಬೆಳೆಸುವ ಈ ಭಾಷೆಯ ಅಧ್ಯಯನ, ಅಧ್ಯಾಪನ ಹಾಗು ಸಂಶೋಧನೆಗಳು ಜಗತ್ತಿನ ಹೆಚ್ಚಿನ ದೇಶಗಳಲ್ಲಿ ಪ್ರಾರಂಭವಾಗುತ್ತಿದೆ. ಇತ್ತೀಚಿನ ಕೆಲವು ವಿಶ್ವ ಸಂಸ್ಕೃತ ಸಮ್ಮೇಳನಗಳು ಟೊರಿನೋ, ಪ್ಯಾರಿಸ್, ಫಿಲಿಡಲ್ಫಿಯಾ, ಲೈಡನ್, ವಿಯನ್ನ ಗಳಲ್ಲಿ ನಡೆದಾಗ ಅಲ್ಲಿ ಭಾರತೀಯ ವಿದ್ವಾಂಸರಿಗಿಂತ ವಿದೇಶಿ ವಿದ್ವಾಂಸರೇ ಹೆಚ್ಚಿದ್ದದ್ದು ಅದಕ್ಕೊಂದು ಉದಾಹರಣೆ. ಆದರೆ ಸಂಸ್ಕೃತದ ಜನ್ಮಭೂಮಿಯಾದ ಭಾರತದಲ್ಲಿ ಜಾತಿ, ಮತ, ಓಟ್ ಬ್ಯಾಂಕ್ ಹಾಗು ರಾಜಕೀಯ ಒತ್ತಡಗಳ ಕಾರಣದಿಂದ ಸಿಗಬೇಕಾದ ಪ್ರಾಶಸ್ತ್ಯ ಸಿಗದಿರುವುದು ಬೇಸರದ ಸಂಗತಿ.

ಇಂದಿನ ವೈಜ್ಞಾನಿಕ ಯುಗಕ್ಕೂ ಉಪಯುಕ್ತವೆನಿಸುವ ಗ್ರಂಥಗಳು ಸಂಸ್ಕೃತದಲ್ಲಿವೆ. ರಾಮಾಯಣ, ಮಹಾಭಾರತಗಳು ಜಾಗತಿಕ ಸಾಹಿತ್ಯದಲ್ಲಿ ಮುನ್ನಡೆ ಪಡೆದ ಮೇರುಕೃತಿಗಳು. ಭUವದ್ಗೀತೆ ಧಾರ್ಮಿಕ ಅಂಶದೊಂದಿಗೆ ಇಂದಿನ ಕಾರ್ಯನಿರ್ವಹಣಾ ಕೌಶಲ್ಯವನ್ನು ತಿಳಿಸುತ್ತದೆ. ಪಾಣಿನಿ, ಪತಂಜಲಿಯಂತಹ ಭಾಷಾವಿಜ್ಞಾನಿಗಳು ಜಗತ್ತಿನಲ್ಲಿ ಬೇರಿಲ್ಲ. ಮನುಸ್ಮೃತಿ, ಯಾಜ್ಞವಲ್ಕ್ಯ ಸ್ಮೃತಿ, ದೇವಲಸ್ಮೃತಿಗಳು ಧರ್ಮದ ಜೊತೆಗೆ ಸಮಯೋಚಿತ ಪರಿವರ್ತನೆಯಬಗೆಗೆ ಭಾರತೀಯರ ಕಾಳಜಿಗೆ ಸಾಕ್ಷಿ. ಕೌಟಿಲ್ಯನ ಅರ್ಥಶಾಸ್ತ್ರ, ಕಾಮಂದಕಿ ನೀತಿಶಾಸ್ತ್ರಗಳು ರಾಜಕೀಯ, ಆಡಳಿತ, ಕಲೆ, ಸಂಸ್ಕೃತಿಗಳಿಗೆ ಮಾರ್ಗದರ್ಶಕ. ವಾಸ್ಸ್ಯಾಯನನ ಕಾಮಸೂತ್ರಕ್ಕೆ ಸರಿಯಾದ ವೈಜ್ಞಾನಿಕ ಕಾಮಶಾಸ್ತ್ರ ಇನ್ನೊಂದಿಲ್ಲ. ಕಾವ್ಯನಾಟಕಾದಿಗಳಲ್ಲಿ ಭರತನ ನಾಟ್ಯಶಾಸ್ತ್ರ, ಕಾಳಿದಾಸ, ಭಾಸ, ಭವಬೂತಿ ಮುಂತಾದವರ ಸಾಹಿತ್ಯ ಕೃತಿಗಳು ಗಮನಾರ್ಹ. ಪಂಚತಂತ್ರ, ಹಿತೋಪದೇಶಗಳಂತಹ ಶಿಶುಸಾಹಿತ್ಯಗಳು ಅನ್ಯತ್ರ ದುರ್ಲಭ.

ವೈಜ್ಞಾನಿಕ ತಳಹದಿ ಹೊಂದಿದ ಈ ಭಾಷೆಯ ಶಬ್ದ ಸಂಪತ್ತು, ವ್ಯಾಕರಣ ತೀರಾ ವಿಶಿಷ್ಟವಾದದ್ದು. ಇಡೀ ಶಬ್ದಕೋಶವನ್ನ ಕಂಠಪಾಠ ಮಾಡುವ ವ್ಯವಸ್ಥೆ ಸಂಸ್ಕೃತದಲ್ಲಿದೆ. ವ್ಯಾಕರಣದಲ್ಲಿ ಸ್ವರ, ವ್ಯಂಜನ, ಅನುನಾಸಿಕ, ಅನುಸ್ವಾರ ಮತ್ತು ವಿಸರ್ಗಗಳ ಉತ್ಪತ್ತಿ ಸ್ಥಾನ ಮತ್ತು ಉಚ್ಚರಿಸಲು ಮಾಡಬೇಕದ ಪ್ರಯತ್ನವನ್ನು ಕ್ರಿಸ್ತಪೂರ್ವ ದಲ್ಲಿಯೇ ಪಾಣಿನಿ ತನ್ನ ಅಷ್ಟಾಧ್ಯಾಯಿಯಲ್ಲಿ ನಿಖರವಾಗಿ ಹೇಳಿದ್ದಾನೆ. ಇದು ಉಚ್ಚಾರದೋಷ ನಿವಾರಣೆಗೆ ಅತ್ಯಂತ ಸಹಾಯಕ. ವೈಜ್ಞಾನಿಕ ಕ್ರಮಾನುಸಾರ ಭಾಷೆಯೊಂದರ ಒಂದು ರೀತಿಯ ರಾಸಾಯನಿಕ ವಿಶ್ಲೇಷಣೆ ಯನ್ನ ನಾವಿಲ್ಲಿ ಕಾಣುತ್ತೆವೆ.
ಭಾರತದ ವೈಜ್ಞಾನಿಕ ಇತಿಹಾಸದಲ್ಲಿ ಅಗ್ರಸ್ಥಾನ ವರಹಾಮಿಹಿರನದು. ಸೂರ್ಯ ನಮ್ಮ ಗ್ರಹಮಾಲೆಯ ಮತ್ತು ಚರಾಚರಸೃಷ್ಟಿಯ ಆಧಾರ ಎಂಬ ವೈಜ್ಞಾನಿಕ ಸಿದ್ಧಾಂತವನ್ನು ಕೋಪರ್ನಿಕಸ್‌ಗಿಂತ ಸಾವಿರಾರು ವರ್ಷ ಮೊದಲೇ ಪ್ರತಿಪಾದಿಸಿದಾತ. ಅವನ ಬೃಹತ್ ಸಂಹಿತೆಯು ಖಗೋಳ, ಸಸ್ಯ, ಪ್ರಾಣಿ, ಕೃಷಿ, ರಸಾಯನ, ಭೂಗೋಳ, ಛಂದಸ್ಸು, ಶಿಲ್ಪ, ಶರೀರ, ಔಷಧ, ಮನಃಶಾಸ್ತ್ರಾದಿ ಸಕಲ ವಿದ್ಯೆಗಳನ್ನೊಳಗೊಂಡ ಒಂದು ವಿಶ್ವಕೋಶ. ಸೂರ್ಯ ಆತ್ಮಾ ಜಗತಸ್ತಸ್ಥುಷಶ್ಚ ಎಂಬ ಮಂತ್ರ ಇದನ್ನೇ ದೃಢೀಕರಿಸುತ್ತದೆ. ಖಗೋಳಶಾಸ್ತ್ರಜ್ಞರು ಆಕಾಶಗಂಗೆಯ ಪರಿಘವಾಗಿಯೂ ಸೌರಮಾಲೆಯ ಕೇಂದ್ರವಾಗಿ ಇರುವುದು ಒಂದು ಗೆಲೆಕ್ಸಿ. ಇಂತಹ ಅಸಂಖ್ಯಾತ ಗೆಕ್ಸಿಗಳಿವೆ ಎಂದಿರುವುದನ್ನು ಹಿಂದೆಯೆ ಅನೇಕ ಕೋಟಿ ಬ್ರಹ್ಮಾಂಡ ಭಗವಂತ ಇದರ ನಾಯಕ ಎಂದ ಹಿರಿಯರು ಸೂರ್ಯಗ್ರಹಣ ಮತ್ತು ಚಂದ್ರಗ್ರಹಣಗಳನ್ನು ನಿಖರವಾಗಿ ಹೇಳುತ್ತಾ ಬಂದಿರುವುದು ಸಂಸ್ಕೃತದಲ್ಲಿರುವ ಖಗೋಳಜ್ಞಾನದ ಹರಹನ್ನು ತಿಳಿಸುತ್ತದೆ.

ವಿಜ್ಞಾನದ ಮೂಲವಾದ ಗಣಿತದ ಬೆಳವಣಿಗೆಗೆ ಸಂಸ್ಕೃತದ ಕೊಡುಗೆ ಅಪಾರವಾದದ್ದು. ಇಂದು ಪ್ರಪಂಚದಲ್ಲಿ ಉಪಯೋಗಿಸುವ ಅಂಕಿಗಳು (೧,೨,೩) ಹಾಗು ಶೂನ್ಯ (೦),ದಶಮಾನ ಪದ್ದತಿ ಭಾರತೀಯರ ಅನ್ವೇಷಣೆ. ಈ ಪದ್ದತಿ ಅರಬರ ಮೂಲಕ ಯೂರೋಪ್ ತಲುಪಿದ್ದರಿಂದ ಅದನ್ನು ಅರೇಬಿಯ ಪದ್ದತಿ ಎನ್ನುತ್ತಾರೆ. ಈ ದಿಸೆಯಲ್ಲಿ ಖ್ಯಾತ ಗಣಿತ ಮತ್ತು ಖಗೋಳಶಾಸ್ತ್ರಜ್ಞ ಆರ್ಯಭಟ, ಬ್ರಹ್ಮಸ್ಪುಟ ಸಿದ್ದಾಂತ ದ ಬ್ರಹ್ಮಗುಪ್ತ, ಲೀಲಾವತಿ ಮತ್ತು ಬೀಜಗಣಿತದ ಕೊಡುಗೆಯಿತ್ತ ಭಾಸ್ಕರಾಚಾರ್ಯ, ಸಮಕೋನ, ವೃತ್ತ ಮತ್ತು ಚತುರ್ಭುಜಗಳ ವಿವರಣೆ ನೀಡುವ ಶುಲ್ಪ ಸೂತ್ರ ಗಳನ್ನು ಗಮನಿಸಲೇ ಬೇಕು.

ವೇzಗಳ ಮೂಲವುಳ್ಳ ಆಯುರ್ವೇದ, ಯುದ್ದದಲ್ಲಿ ಕತ್ತರಿಸಿಹೋದ ಅವಯವಗಳನ್ನು ಪುನ: ಜೋಡಿಸುವ ಪ್ಲಾಸ್ಟಿಕ್ ಸರ್ಜರಿಯಂತಹ ಶಸ್ತ್ರಚಿಕಿತ್ಸೆಯ ಜೊತೆಗೆ ದೇಹ ಮತ್ತು ಮನ:ಸ್ವಾಸ್ಥ್ಯದೊಂದಿಗೆ ಆರೋಗ್ಯಪೂರ್ಣ ಸಾಮಾಜಿಕ ಬೆಳವಣಿಗೆಗೆ ಬೇಕಾದ ವ್ಯಕ್ತಿಗತ ವಿವರಗಳನ್ನು ನೀಡುವ ಚರಕ,ಸುಶ್ರುತ, ಹಾಗು ವಾಗ್ಭಟರ ಗ್ರಂಥಗಳಾಗಲಿ, ಪತಂಜಲಿಯ ಯೋಗ ಸೂತ್ರಗಳಾಗಲಿ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಸರ್ವರೂ ಗಮನಿಸಬೇಕಾದ ಗ್ರಂಥಗಳು.

ಸಸ್ಯಶಾಸ್ತ್ರ ಮತ್ತು ಕೃಷಿವಿಜ್ಞಾನದ ಕುರಿತು ಪರಾಶರ ಮುನಿಗಳು ಬರೆದಿರುವ ಗ್ರಂಥಗಳು ಧಾರಾಳ ಇವೆ. ಅಗ್ನಿಪುರಾಣ ಮತ್ತು ಬೃಹತ್ಸಂಹಿತೆಯಲ್ಲಿ ವೃಕ್ಷಾಯುರ್ವೇದದ ಅಮುಲ್ಯ ವಿವರಗಳಿವೆ. ಮಾನಸಾರ, ಕಶ್ಯಪ ಶಿಲ್ಪಂ, ಪ್ರತಿಮಾಲಕ್ಷಣ, ಮಯಮಿತಂ, ಸಮರಾಂಗಣ ಸೂತ್ರಧಾರ ಇವೆಲ್ಲ ಬಗೆಬಗೆಯ ಕಟ್ಟಡಗಳು, ದೇವಸ್ಥಾನಗಳು, ಗ್ರಾಮ ಮತ್ತು ನಗರಗಳ ವಿನ್ಯಾಸಗಳ ತಾಂತ್ರಿಕತೆ ಮತ್ತು ಶಿಲ್ಪ ವೈಭವವನ್ನು ಕುರಿತು ವಿವರಿಸುತ್ತವೆ. ಅಭಿಲಷಿತಾರ್ಥ ಚಿಂತಾಮಣಿ, ತಿಲಕ ಮಂಜರಿ ಚಿತ್ರಕಲೆಯನ್ನು ತಿಳಿಸುತ್ತವೆ. ಶಾರ್ಙದೇವನ ಸಂಗೀತ ರತ್ನಾಕರ, ದಾಮೋದರನ ಸಂಗೀತ ದರ್ಪಣ, ಹರಪಾಲನ ಸಂಗೀತ ಸುಧಾ ಮೊದಲಾದವು ಸಂಗೀತ ಶಾಸ್ತ್ರದ ಪ್ರಸಿದ್ದ ಗ್ರಂಥಗಳು. ನಾರಾಯಣ ಪಂಡಿತನ ನವರತ್ನಪರೀಕ್ಷಾ ಪ್ರತಿಯೊಂದು ರತ್ನದ ಮೂಲಸ್ಥಾನ, ಅಪ್ಪಟತನ, ಬೆಲೆ, ಬಣ್ಣ ಮೊದಲಾದವನ್ನ ನಿರ್ಧರಿಸಲು ಬೇಕಾದ ಮಾಹಿತಿ ನೀಡುತ್ತದೆ. ಕೌಟಿಲ್ಯನ ಅರ್ಥಶಾಸ್ತ್ರವು ಸಮಾಜಶಾಸ್ತ್ರ ಹಾಗು ರಾಜಕೀಯ ಶಾಸ್ತ್ರಗಳನ್ನೊಳಗೊಂಡ ಒಂದು ಮೇರು ಕೃತಿ. ಇವುಗಳ ಜೊತೆಗೆ ರಸಾಯನ ಶಾಸ್ತ್ರ, ಭೌತಶಾಸ್ತ್ರ, ಆಗಮಶಾಸ್ತ್ರ, ತಂತ್ರಶಾಸ್ತ್ರ ಮುಂತಾದ ವಿಜ್ಞಾನದ ಬೇರೆ ಬೇರೆ ಕವಲುಗಳಿಗೆ ಸಂಬಂಧಪಟ್ಟ ಗ್ರಂಥಗಳೂ ಸಂಸ್ಕೃತದಲ್ಲಿ ಹೇರಳವಾಗಿವೆ.

ಇಂತಹ ಒಂದು ಸಮೃದ್ಧ ಭಾಷೆ ಇಡೀ ಜಗತ್ತಿಗೇ ಪಸರಿಸಬೇಕಾದದ್ದು ಕೇವಲ ನಿರ್ಧಿಷ್ಟ ಜಾತಿ ಮತ್ತು ವೃತ್ತಿಗೆ ಸೀಮಿತವಾಗಿ ಪೌರೋಹಿತ್ಯ ಮತ್ತು ಪ್ರವಚನಗಳಿಗೆ ಮಾತ್ರ ಮಿತಿಗೊಂಡಿದೆ. ಕೇಂದ್ರ ಸರಕಾರ ಪಾರಂಪರಿಕ ಭಾಷೆ ಎಂಬ ಶಾಸ್ತ್ರೀಯ ಭಾಷೆಯ ಸ್ಥಾನಮಾನ ನೀಡಿದ್ದರೂ ಮೃತಭಾಷೆ ಎಂಬ ಹಣೆಪಟ್ಟಿ ತೆಗೆಯಲು ಸಾಧ್ಯವಾಗಿಲ್ಲ. ಸಂಸ್ಕೃತಕ್ಕೆ ಎರಡನೆ ತವರುಮನೆಯಾದ ಜರ್ಮನಿಯಂತಹ ಪಾಶ್ಚಾತ್ಯ ದೇಶ ಈ ಭಾಷೆಯ ಅಧ್ಯಯನಕ್ಕೆ ವಿಶೇಷ ಒತ್ತು ನೀಡಿದ್ದರೂ, ಕಂಪ್ಯೂಟರ್‌ಗೆ ಸೂಕ್ತಭಾಷೆ ಎಂಬ ಹೆಗ್ಗಳಿಕೆಯಿದ್ದರೂ ಭಾಷೆಯ ಬಗೆಗಿನ ಅಭಿಮಾನವನ್ನು ನಾವು ಕೇವಲ ಮೌಖಿಕವಾಗಿಯಷ್ಟೇ ವ್ಯಕ್ತಪಡಿಸುತ್ತಿದ್ದೆವೆ.

ಈ ಭಾಷೆಯಲ್ಲಿನ ಸತ್ವ ಜನೋಪಯೋಗಿಯಾಗಬೇಕಾದರೆ ಸರಳ ವಿಧದ ಕಲಿಕೆಯೊಂದಿಗೆ ಸಂಸ್ಕೃತ ಅಧ್ಯಯನ ಪ್ರಾಥಮಿಕ ಹಂತದಿಂದಲೇ ಪ್ರಾರಂಭವಾಗಬೇಕು. ಭಾಷೆಯ ಸಾಧ್ಯತೆ ವಿಸ್ತರಿಸಬೇಕು. ಸಾಕಷ್ಟು ಉದ್ಯೋಗಾವಕಾಶಗಳು ಹೆಚ್ಚಬೇಕು. ವ್ಯವಹಾರದಲ್ಲಿ ಬಳಕೆಯಾಗದ ಭಾಷೆಗಳಲ್ಲಿ ಉದ್ಯೋಗ ಸೃಷ್ಟಿಸುವ ಕೆಲಸ ಕಷ್ಟ. ಹಾಗಾಗಿ ಹೆಚ್ಚು ಹೆಚ್ಚು ವ್ಯವಹಾರದಲ್ಲಿ ಬಳಕೆಯಾಗಬೇಕು. ಯಾವುದೇ ಕ್ಷೇತ್ರದ ಅಧ್ಯಯನಕ್ಕೆ ಸಮರ್ಥವಾದ ಈ ಭಾಷೆಯನ್ನು ಬಳಸಿಕೊಂಡು ಬದುಕಿಗೆ ಬೇಕಾದ ಕ್ಷೇತ್ರವನ್ನು ಆಯ್ದುಕೊಳ್ಳುವ ಅವಕಾಶ ಸೃಷ್ಟಿಯಾಗಬೇಕು.ಸಂಸ್ಕೃತ ಮತ್ತು ಇತರ ವಿಭಾಗಗಳ ಅಂತರ್‌ವಿಷಯ ಅಧ್ಯಯನ ಕ್ರಮ (Inter disciplinary studies) ಸಂಸ್ಕೃತ ಕಲಿಯ ಬೇಕೆಂಬ ವಾತಾವರಣ ಸರಕಾರದಿಂದ ಸೃಷ್ಟಿ, ವೃತ್ತಿಯಾಧಾರಿತ ಉದ್ಯೋಗ ಕೈಗೊಳ್ಳಲು ಸಂಸ್ಕೃತ ಅಧ್ಯಯನ ಮಾಡಿದವರಿಗೆ ಹೆಚ್ಚಿನ ಅವಕಾಶಗಳು, ಭಾಷೆಯ ಬಗೆಗಿನ ಮಡಿವಂತಿಕೆ ದೂರವಾಗಿ ಬಳಸುವವರಿಗೆ ಅನಿರ್ಬಂಧಿತ ಪ್ರೋತ್ಸಾಹ ದೊರೆಯಬೇಕು.

ಸರಳ ಸಂಸ್ಕೃತ ಪ್ರಚಾರ ಮತ್ತು ಬೆಳವಣಿಗೆಗೆ ಸಂಸ್ಕೃತ ಭಾರತಿ ಸಾಕಷ್ಟು ಕೆಲಸ ಮಾಡುತ್ತಿದೆ. ಅದಕ್ಕೆ ಸರಕಾರದ ಹೆಚ್ಚಿನ ಬೆಂಬಲವೂ ದೊರೆಯಬೇಕು. ಹಾಗಾದಾಗ ನಮ್ಮ ದೃಷ್ಟಿಕೋನ ಬದಲಿಸಬಲ್ಲ ಅಪೂರ್ವ ಶಕ್ತಿಯಿರುವ, ಯೋಚನೆ, ಭಾವನೆ, ಹೃದಯ, ಮನಸ್ಸು ಎಲ್ಲ ಒಂದಾಗಲಿ ಎಂಬ ಆಶಯವಿರುವ ಸಂಸ್ಕೃತ ಭಾಷೆಯ ಪುನರುತ್ಥಾನವಾಗಿ ಜಗತ್ತು ಲವಲವಿಕೆಯಿಂದ ಕೂಡಿದ ಒಂದು ಹಕ್ಕಿಯ ಗೂಡಾಗುವುದರಲ್ಲಿ ಸಂಶಯವಿಲ್ಲ.

----ಶುಭಂ ಭವತು----

ಮಂಜುನಾಥ ಭಟ್, ಕುಕ್ಕೆಸುಬ್ರಹ್ಮಣ್ಯ

06 ಡಿಸೆಂಬರ್ 2008

ನಾವೆಷ್ಟು ಮುಂದುವರಿಯಬೇಕಿದೆ ..?




ಹದ್ದಿನ ಕಣ್ಣು ಅಂತ ನಾವು ಮೊನ್ನೆ ಮೊನ್ನೆಯವರೆಗೆ ಹೇಳಿಕೊಂಡು ಬಂದಿದ್ದೆವು.ಈಗ ನೋಡಿದರೆ ಹದ್ದೇ ನಮ್ಮ ದೇಶದ ಮೇಲೆ ಕಣ್ಣಿಟ್ಟ ಸುದ್ದಿ ಬಯಲಾಗಿದೆ.ಇದೇನು ಅಂತ ವಿವರಿಸಬೇಕಾಗಿಲ್ಲ. ಮೊನ್ನೆ ಕಾಶ್ಮೀರದಲ್ಲಿ ಹದ್ದೊಂದನ್ನು ನಮ್ಮ ಸೈನಿಕ ಬಳಗವು ಹಿಡಿದಾಗ ಅದರ ರೆಕ್ಕೆಯಲ್ಲಿ ಟ್ರಾನ್ಸ್ ಮಿಟರ್ ಅಳವಡಿಕೆಯಾದದ್ದು ತಿಳಿದಿದೆ.ಈ ಹಿಂದೆಯೂ ಇಂತಹ ಒಂದು ಸಂಗತಿ ಬೆಳಕಿಗೆ ಬಂದಿತ್ತು.ಆದರೆ ಅದನ್ನು ಅಷ್ಟು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಇಗ ಮಾತ್ರಾ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಾದ ಅನಿವಾರ್ಯತೆಯಿದೆ. ಅತ್ತ ಪಾಕ್ ನಿಂದ ಛೂ.... ಬಿಡುತ್ತಿರುವ ಭಯೋತ್ಪಾದನೆಯ ವಿಷ ಬೀಜ. ಇಲ್ಲಿ ಮತಾಂಧತೆಯ ಬಹುದೊಡ್ಡ ಹಾಸಿಗೆಯಿದೆ. ಇವುಗಳೆಲ್ಲದರ ನಡುವೆ ನಮ್ಮ ಹೆಮ್ಮೆಯ ಯೋಧರು ಹೋರಾಡಬೆಕಾದ ಅನಿವಾರ್ಯತೆಯಿದೆ. ಇದರೊಂದಿಗೆ ನಮ್ಮ ಆತಂರಿವಾಗಿ ನಡೆಯುವ ರಾಜಕೀಯದ ಭಯೋತ್ಪಾದಕರ ಕಾಟವು ನಿರಂತರವಿದೆ. ಹೀಗೆ ಸವಾಲುಗಳ ನಡುವೆ ಇರುವ ಭಾರತದಲ್ಲಿ ಈಗ ಹದ್ದುಗಳ ಮೂಲಕವೂ ಪಾಕ್ ಅಥವಾ ಉಗ್ರ ಸಂಘಟನೆಗಳು ಮಾಹಿತಿಯನ್ನು ಕಲೆಹಾಕುವ ಯತ್ನ ನಡೆಸುತ್ತಿವೆ ಎಂದರೆ ತಪ್ಪಾಗದು. ಆದುದರಿಂದ ಈ ದೇಶಕ್ಕೆ ಇನ್ನೂ ಭದ್ರತೆ ಬೇಕು. ಪ್ರತಿಯೊಬ್ಬನೂ ಕೂಡಾ ತನ್ನ ಭದ್ರತೆಯ ಬಗ್ಗೆ ಯೋಚಿಸದೆ ನಮ್ಮ ಮನೆಯ ಬಗ್ಗೆ ಚಿಂತಿಸಬೆಕಾದ ಅನಿವಾರ್ಯತೆಯಿದೆ. ಆದರೆ ನಮ್ಮ ರಾಜಕಾರಣಿಗಳ ಮನಸ್ಥಿತಿ ನೋಡಿದರೆ ಅಸಹ್ಯವೆನಿಸುತ್ತದೆ. " ನಮಗೆ ಭದ್ರತೆ ಕೊಡಿ" ಅಂತ ದುಂಬಾಲು ಬೀಳುತ್ತಾರಲ್ಲಾ. ಇತ್ತ ದೇಶಕ್ಕೆ ದೇಶವೇ ನಲುಗುತ್ತಿದೆ. ಭದ್ರತೆ ಸಾಕಾಗುವುದೇ ಇಲ್ಲ. ಕಟ್ಟೆಚ್ಚರ ವಹಿಸಿದಷ್ಟು ಕಣ್ಣು ತಪ್ಪಿಸುವ ಚತುರರಿದ್ದಾರೆ. ಆದರೆ ರಾಜಕಾರಣಿಗಳಿಗೆ ಚಿಂತೆ ಅವರದ್ದು ಮತ್ತು ಓಟಿನ ಲೆಕ್ಕ ಮಾತ್ರಾ.ಎಂತಹ ದುರಂತ ನಮ್ಮದು. ಅಂತಹ ರಾಜಕಾರಣಿಗಳಿಲ್ಲದೆ ಈ ದೇಶ ಬದುಕಬಲ್ಲದು. ಒಂದರ್ಥದಲ್ಲಿ ದೇಶ ಇನ್ನಷ್ಟು ಬಲಿಷ್ಠವೂ ಆದೀತು , ಸರ್ವಶಕ್ತವು ಆದೀತು. ಅಂತಹ ನಾಯಕರಿಲ್ಲದೆ ದೇಶವನ್ನು ಆಳುವ ಜನರು ಇದ್ದಾರೆ. ಮನೆಗೆ ಬೆಂಕಿ ಬಿದ್ದಾಗ ಹಾಸಿಗೆಯನ್ನು ರಕ್ಷಿಸಲು ಹೊರಟಂತೆ ನಮ್ಮ ನಾಯಕರು ಇಂದು ಹದ್ದುಗಳ ಮೂಲಕವೂ ಟ್ರಾನ್ಸ್ ಮಿಟರ್ ನಲ್ಲಿ ಇಲ್ಲಿನ ವ್ಯವಸ್ಥೆಗಳನ್ನು ಗಮನಿಸುವ ಹಂತಕ್ಕೆ ಬಂದು ನಿಂತಿದ್ದಾರೆ. ಆದರೆ ಅದೆಲ್ಲವನ್ನೂ ತಿಳಿಯದ ಅರಿಯದ ತಿಳಿಗೇಡಿ ನಾಯಕರು ಕಪಟ ರಾಜಕಾರಣಿಗಳು ತಮ್ಮ ಬಗ್ಗೆಯೆ ಚಿಂತಿಸುತ್ತಾರಲ್ಲಾ. ಅಲ್ಲಲ್ಲಿ ರಾಜಕೀಯ ಮಾಡುತ್ತಾರಲ್ಲಾ .. ಮನಸ್ಸು ರೋಷದಿಂದ ಕುದಿಯುತ್ತದೆ. ಆದರೆ ಏನು ಮಾಡೋಣ ... ಏನೂ ಮಾಡುವ ಹಾಗಿಲ್ಲ..... ಎನ್ನುವ ಬೇಸರವಿದೆ.

ಇಂದು ನಮ್ಮ ದೇಶದ ಎಲ್ಲಾ ರಾಜಕೀಯ ಪಕ್ಷಗಳು ಹಾಗೂ ಬಹುತೇಕ ಎಲ್ಲಾ ನಾಯಕರು [ಕೆಲವರನ್ನು ಬಿಟ್ಟು] ಇಲ್ಲಿನ ಆಂತರಿಕ ಭದ್ರತೆ ಯ ಬಗ್ಗೆಯಾಗಲಿ ಅದೆಷ್ಟೋ ಅಮಾಯಕರು ಪ್ರತಿದಿನ ಬಾಂಬ್ ಸ್ಫೋಟದಲ್ಲಿ ಬದುಕು ಕಳಕೊಳ್ಳುವವರ ಬಗ್ಗೆಯಾಗಲಿ. ಜೀವದ ಹಂಗು ತೊರೆದು ದೇಶವನ್ನೇ ಕಾಪಾಡುವ ಯೋಧರ ಬಗ್ಗೆಯಾಗಲಿ ಇವರು ಒಂದು ಕ್ಷಣ ಚಿಂತಿಸಿದ್ದಾರಾ.? ಏನಿದ್ದರೂ ಓಟಿನ ಬೇಟೆ .. ಹಣದ ಹೊಳೆಯ ಬಗ್ಗೆಯೇ ಚಿಂತೆ. ಇನ್ನು ಚುನಾವಣೆ ಹತ್ತಿರ ಬಂತು. ಮೊನ್ನೆಯ ಸ್ಫೋಟಕ್ಕೆ ಬೇರೊಬ್ಬ ರಾಜಕಾರಣಿಯ ತಲೆದಂಡದ ಮೂಲಕ ಇಡೀ ಪ್ರಕರಣಕ್ಕೆ ತೆರೆ ಎಳೆಯುವ ಯತ್ನ ಮಾಡಿ ಮತ್ತೆ ಓಟನ್ನು ಪಡೆಯುವ ಹಪಾಹಪಿ ಇವರಿಗಿದೆಯಲ್ಲಾ... ... ಇವರು ಒಂದು ಕ್ಷಣವಾದರೂ ನಮ್ಮ ಯೋಧರಿಗೆ ಅತ್ಯುತ್ತಮವಾದ ಸಲಕರಣೆಗಳ ಒದಗಣೆಯ ಚಿಂತನೆ ಮಾಡಿದ್ದಾರೆ... ಅಲ್ಲಿ ಪಾಕ್ ನಿಂದ ಹದ್ದಿನ ಮೂಲಕವೂ ಇಲ್ಲಿನ ವಿಚಾರಗಳನು ತಿಳಿಯುವ ಪ್ರಯತ್ನ ಮಾಡುತ್ತಾರೆ. ಅದಕ್ಕೆ ಏನಿಲ್ಲವೆಂದರೂ ೩ ರಿಂದ ೫ ಲಕ್ಷ ಖರ್ಚಾಗಬಹುದಾಗಿದೆ. ಇಂತಹ ಎಷ್ಟು ಹದ್ದುಗಳು ದೇಶದೊಳಕ್ಕೆ ಬಂದಿದೆಯೋ ಭಗವಂತನೆನ್ನುವ ಭಗವಂತನೇ ಬಲ್ಲ. ಇದುವರೆಗೆ ಉಗ್ರರ ನುಸುಳುವಿಕೆಯ ಬಗ್ಗೆ ಮಾತ್ರಾ ಎಚ್ಚರ ವಹಿಸಬೇಕಾಗಿದ್ದ ಯೋಧರು ಈಗ ಹದ್ದುಗಳು , ಹಕ್ಕಿಗಳ ಬಗ್ಗೆಯೂ ಎಚ್ಚರ ವಹಿಸಬೇಕು. ಇಂತಹ ಹಲವಾರು ಸಮಸ್ಯೆಗಳು ಅನುದಿನವೂ ಎದುರಾಗುತ್ತಲೇ ಇದೆ. ಅದಕ್ಕೆಲ್ಲಾ ಪರಿಹಾರವನ್ನು ರಾಜಕಾರಣಿಗಳು ಮಾಡಬೇಕೆನ್ನುವ ಪರಿಜ್ಞಾನವನ್ನು ಬೆಳೆಸಿಕೊಳ್ಳಲಿ.

ಇನ್ನು ಇದಕ್ಕೆ ಹೊರತಾಗಿ ಹೇಳುವುದಾದರೆ ನಮ್ಮ ಪೊಲೀಸ್ ವ್ಯವಸ್ಥೆ. ಇದು ನಮ್ಮ ರಾಜಕಾರಣಿಗಳ ತರನೇ ಇರುವ ಇನ್ನೊಂದು ವ್ಯವಸ್ಥೆ. ಚಿಕ್ಕ ಪುಟ್ಟ ಕಳ್ಳರನ್ನು ಹಿಡಿಯುವುದಕ್ಕೆ ಸೀಮಿತವೋ ಏನೋ. ಅವರಿಗೂ ಅಧಿಕಾರವಿಲ್ಲ. ಕೈಯಲ್ಲಿ ಗನ್ನು ಇದ್ದರೂ ಸುಮ್ಮನೆ ಅದು ಬೆದರುಗೊಂಬೆ.. ಕೆಲವು ಪೊಲೀಸರಿಗೆ ಪೊಲೀಸ್ ಎಂಬ ಅಹಂ ಬೇರೆ. ಅವರನ್ನು ಬಿಟ್ಟವರು ಬೇರೆ ಇಲ್ಲ ಎನ್ನುವ ದರ್ಪ. ಮಾತನಾಡಿದರೆ ಏರು ಸ್ವರವೇ. ಸೌಜನ್ಯದ ಪದವೇ ಅವರ ಡಿಕ್ಚನರಿಯಲ್ಲಿ ಇಲ್ಲ.ಖಾಕಿ ತೊಟ್ಟ ತಕ್ಷಣ ಅದರಲ್ಲೇನೋ ಇದೆ ಎನ್ನುವ ಮೆಂಟಾಲಿಟಿ. ಏಕೆಂದರೆ ನನಗೂ ಒಬ್ಬ ಪೊಲೀಸ್ ಕಾನ್ಸ್ಟೇಬಲ್ ನಿಂದ ಅನುಭವವೊಂದು ಆಗಿತ್ತು. ಹಾಗೆಂದು ಎಲ್ಲರಿಗೂ ಆ ಪಟ್ಟ ಕಟ್ಟಲಾಗುವುದಿಲ್ಲ. ಹಾಗೆ ಅಹಂ ಇರುವ ಪೊಲೀಸರಿಂದಲೇ ಅನೇಕ ಘಟನೆಗಳು ಹಿಡಿಯಲಾಗುವುದಿಲ್ಲ. ಎಲ್ಲಾ ಮುಗಿದ ಬಳಿಕ ಆ ಜಾಗಕ್ಕೆ ತೆರಳುತ್ತಾರೆ. ಉದಾಹರಣೆಗೆ ಬಾಂಬ್ ಸ್ಪೋಟಗಳು. ಮೊದಲೆ ಸೂಚನೆ ಇದ್ದಿರುತ್ತದೆ ಆದರೆ ಪೊಲೀಸ್ ನಿಷ್ಕ್ರ್‍ಇಯವಾಗಿರುತ್ತದೆ. ಹಾಗಾಗಿ ಅಂತಹ ಇಲಾಖೆಗಳಿಂದಲೂ ಭದ್ರತೆ ಕನಸಿನ ಮಾತು.ತಮಾಷೆ ನನ್ನ ಮಿತ್ರರೊಬ್ಬರು ಹೇಳುತ್ತಿದ್ದರು ಇದುವರೆಗಿನ ಎಲ್ಲಾ ಘಟನೆಗಳನ್ನು ನೋಡಿದರೆ ಅವರ [ಭಯೋತ್ಪಾದಕರ] ಅಂತ್ಯ ನಮ್ಮವರ [ ಪೊಲೀಸರ] ಆರಂಭ. ಅಂದರೆ ಅವರ ಕೆಲಸ ಮುಗಿದು ಸ್ಫೋಟದ ನಂತರ ಪೊಲೀಸರಿಗೆ ಕೆಲಸ ಆರಂಭವಾಗುತ್ತದೆ. ಅದು ಸತ್ಯವೂ ಆಗಿದೆ.

ಇದೆಲ್ಲವನ್ನೂ ಗಮನಿಸಿದಾಗ ನಾವೆಷ್ಟು ಮುಂದುವರಿಯಬೇಕಾಗಿದೆ... ಮುಂದುವರಿಯಲಿದೆ ....?. ಗುರಿ ತಲುಪಬಲ್ಲೆವೇ...??????. ಇಂದಿನ ಈ ಕಾಲಘಟ್ಟದಲ್ಲಿ ಇದು ಸಾಧ್ಯವೇ...??? ಏನೋ ಗೊತ್ತಿಲ್ಲ. ಅಂತೂ ನಮ್ಮ ಯೋಧರಿಗೆ ಎಲ್ಲಾ ಸೌಲಭ್ಯಗಳು ಸಿಗಲಿ... ಬಲಿದಾನವಾದೆ ಹೋರಾಡಿ ದೇಶದ ಗೌರವನ್ನು ಎತ್ತಿ ಹಿಡಿಯಲಿ...

ಜೈ ಜವಾನ್ ....

04 ಡಿಸೆಂಬರ್ 2008

ನಡೆದ ಹಾದಿಯ ನೆನಪು...



ನನ್ನ ಅಜ್ಜಿ ಇತ್ತೀಚೆಗೆ ತೀರಿಕೊಂಡರು.ಅವರಿಗೆ 83 ವರ್ಷ ಪ್ರಾಯವಾಗಿತ್ತು.ಸಾಯುವ ಪ್ರಾಯ ಅಂತ ಹೇಳಲಾಗದು. ಏಕೆಂದರೆ ಅವರು ಸಾಯುವ ಒಂದು ಕ್ಷಣ ಮುಂದೆ ಚೆನ್ನಾಗೇ ಇದ್ದರು. ಆರೋಗ್ಯವಾಗಿಯೇ ಇದ್ದರು. ಆದರೂ ಜವರಾಯ ಅಲ್ಲೆ ಬಂದು ಕಾದುಕುಳಿತಂತಿತ್ತು.

ಇರಲಿ ಸಾವು ನಿಶ್ಚಿತ. ಬದುಕು ಎಂದಾದರೂ ಒಂದು ದಿನ ಸ್ಕೊನೆ ಕಾಣಲೇಬೇಕು. ಇರುವಷ್ಟು ದಿನ ಹೇಗಿರುತ್ತೇವೋ ಅದು ಸ್ನಮ್ಮನ್ನು ಮತ್ತೆ ಜೀವಂತವಾಘಿರುಸುತ್ತದೆ.ಇಲ್ಲವಾದರೆ ಹತ್ತರಲ್ಲಿ ಒಬ್ಬ.ಅಥವಾ ಹನ್ನೊಂದನೆಯ ವ್ಯಕ್ತಿ. ಬದುಕಿನಲ್ಲಿ ಒಂದಿಷ್ಟಾದರೂ ಸೊಳ್ಳೆಯದನ್ನು ಮಾಡಿದರೆ ಜನ ನೆನಪಿಸಿಕೊಳ್ಳುತ್ಟಾರೆ. ಕೇವಲ ಹಣದ ಹಿಂದಿನ ಓಟವಾದರೆ ಉಸಿರು ನಿಂತ ಮೇಲೆ ಅದೆಲ್ಲವೂ ಮಾತಿಗೆ ಬರದು.ಹಾಗಾಗಿ ನಾವು ಇತರರಿಗೆ ಮಾದರಿಯಾಗಿ ಬದುಕ ಬೇಕೆಂದೇನೂ ಇಲ್ಲ ಆದರೆ ಬದುಕಿದ್ದಷ್ಟು ಕಾಲ ಇನ್ನೊಬರಿಗೆ ನೋವನ್ನು ಕೊಡದೆ ಹೀಯಾಳಿಸದೆ, ಅಹಂ ಪ್ರದರ್ಶಿಸದೆ ಬದುಕುವುದು ಮೇಲೆಂದು ನಾನಂದುಕೊಂಡಿದೇನೆ. ಈ ನನ್ನ ಚಿಂತನೆಗೆ ಮಾದರಿ ಎನಿಸಿದವರು ಅಜ್ಜಿ.ಮತ್ತು ಈ ವಿಚಾರದಲ್ಲಿ ನಾನು ಅಜ್ಜಿಯನ್ನು ಗೌರವಿಸುತ್ತಿದ್ದೆ. ಹಾಗಾಗಿ ನನಗೆ ಅಜ್ಜಿ ಸತ್ತಾಗ ತಕ್ಷಣ ಅವರ ವಿಚಾರಗಳು ಮೂದಿಬಂದಿತ್ತು. ಅವರ ಬದುಕಿನ ಹಾದಿ ಹೀಗಿತ್ತು ಅಂತ ಯೋಚಿಸಿದೆ......

ಅಜ್ಜ ಸಾಮಾಜಿಕ ಮುಂದಾಳುತ್ವ ವಹಿಸಿದವರು. ಆಗ ಮನೆಯ ಸ್ಥಿತಿ ಅಷ್ಟು ಚೆನ್ನಾಗಿದ್ದಿರಲಿಲ್ಲವಂತೆ. ಆರ್ಥಿಕವಾಗಿ ನಮ್ಮ ಕುಟುಂಬ ತೀರಾ ಸಂಕಷ್ಟದಲ್ಲಿತ್ತಂತೆ. ಈ ಸಂದರ್ಭದಲ್ಲಿ ಅಜ್ಜನಿಗೆ ಸಾಮಾಜಿಕವಾದ ಕಾರ್ಯದಲ್ಲಿ ಅನಿವಾರ್ಯವಾಗಿ ಕೈಜೋಡಿಸಬೇಕಾದ ಅನಿವಾರ್ಯತೆ ಇತ್ತು. ಆದರೆ ಇಂದಿನಂತೆ ಆಗ ಪ್ರಚಾರದ ಹುಚ್ಚು ಇದ್ದಿರಲಿಲ್ಲ. ಅಂತಹ ಸೇವೆಯಿಂದ ಅದೇನೋ ಮಾನಸಿಕ ನೆಮ್ಮದಿ ಇತ್ತು.ಇತ್ತ ನಮ್ಮದು ಕೃಷಿ ಕುಟುಂಬ. ಒಂದಷ್ಟು ಎಕ್ರೆ ಭೂಮಿ.ಇಲ್ಲಿ ಮನೆಯ ಸಂಪೂರ್ಣ ಜವಾಬ್ದಾರಿಯನ್ನು ಅಜ್ಜಿ ನಿಭಾಯಿಸಬೇಕಿತ್ತು. ಆ ಕಾಲದ ದಿನಗಳನ್ನು ಒಮ್ಮೆ ಅಜ್ಜಿ ಹೇಳುತ್ತಿದ್ದರು, ಕೈಯಲ್ಲಿ ಕಾಸಿಲ್ಲ.. ಸ್ವಂತ ದುಡಿಮೆ .., ಹುಲ್ಲಿನ ಹರಕಲು ಮನೆ... ದೂರದ ಊರಿಗೆ ಕಾಲ್ನಡಿಗೆಯ ಯಾತ್ರೆ... ಹೀಗೆ ಹಲವು ಸಮಸ್ಯೆಗಳು. ಇಂದು ನೋಡಿದರೆ ಇದೆಲ್ಲವೂ ಸಮಸ್ಯೆಯೆ ಅಲ್ಲ ಬಿಡಿ.. ಅಂದಿನ ಕಾಲದ ಸಂಗತಿಗಳೊಂದಿಗೆ ತಾಳೆ ಹಾಕುತ್ತಾ ಸಾಗಿದರೆ ನಾವಿಂದು ದೇವಲೋಕದಲ್ಲಿದ್ದೇವೆ. ತೀವ್ರ ಸಂಕಷ್ಟದ ದಿನಗಳ ನಂತರ ಇಡೀ ನಮ್ಮ ಕುಟುಂಬ ಚೇತರಿಕೆ ಕಂಡಿತು. ಅಂದರೆ ಆ ಹುಲ್ಲಿನ ಮನೆಗಳು,.. ಹಣಕ್ಕಾಗಿ ಪರದಾಟ.. ಇದೆಲ್ಲವೂ ನನಗೆ ನೆನಪು ಬರುವವ ಸಮಯದಲ್ಲೇ ನಡೆದೇ ಇತ್ತು. ಆದರೆ ಇಂದು ನಾವು ಮತ್ತು ನಮ್ಮ ಕುಟುಂಬ ಆ ಪರಿಸ್ಥಿತಿಯಲ್ಲಿಲ್ಲ. ಇದಕ್ಕೆಲ್ಲಾ ಕಾರಣ ನನ್ನ ಅಜ್ಜಿ , ಅಜ್ಜ ಹಾಗೂ ನಮ್ಮ ಹಿರಿಯರ, ಹೆತ್ತವರ ಶ್ರಮ.ಹಾಗಾಗಿ ನಾವಿಂದು ಈ ಪರದೆಯ ಮೇಲೆ ನೆಲೆ ಕಂಡುಕೊಳ್ಳಲು ಸಾಧ್ಯವಾಯಿತು. ಅದಕ್ಕಾಗಿ ನಾನು ಇನ್ನೊಮ್ಮೆ ಅಜ್ಜಿಯನ್ನು ನೆನಪಿಸುತ್ತೇನೆ. ಹಿರಿಯರನ್ನು , ಹೆತ್ತವರು ನಡೆದ ದಾರಿಯನ್ನು ಗಮನಿಸುತ್ತೇನೆ.

ಯಾಕೆಂದರೆ ಇತ್ತೀಚೆಗೆ ಧರ್ಮಸ್ಥಳದಲ್ಲಿ ಮಿತ್ರರೊಂದಿಗೆ ಹೋಟೇಲ್ ಒಂದರಲ್ಲಿ ಬೆಳಗಿನ ಕಾಫಿ ಕುಡಿಯಲು ಕುಳಿತಿದ್ದೆವು.ಅಲ್ಲೆ ನಮ್ಮ ಪಕ್ಕದ ಇನ್ನೊಂದು ಟೇಬಲ್ ನಲ್ಲಿ 2 ಮಹಿಳೆಯರು ಮತ್ತು ಒಂದು ಚಿಕ್ಕ ಮಗು ಕುಳಿತಿತ್ತು. ಸಪ್ಲಯರ್ ಬಂದಾಗ ಆ ಮಹಿಳೆ ಕೇಳಿತು ನೋಡಣ್ಣಾ ನಮ್ಮಲ್ಲಿ ಹಣವಿರುವುದು ಇಷ್ಟು ಇದಕ್ಕಾಗುವ ಇಡ್ಲಿ ಕೊಡಿ ಅಂದಿತು. ಪಾಪ ಮತ್ತೆ ಲೆಕ್ಕ ಹಾಕುತ್ತಿತ್ತು ಆ ಹೆಂಗಸು ಇನ್ನು ಬಸ್ಸಿಗೆ ಇಷ್ಟು ಹಣಬೇಕು..... ಆದರೆ ಅವರ ಹೊಟ್ಟೆ ..???.
ಇಂತಹ ಬಡತನವೂ ಇಲ್ಲಿದೆ.ಅಂತಹುದರಲ್ಲಿ ನಾವೆಷ್ಟು ಸುಖಿಗಳು..? . ಬೆಳಗ್ಗಿನಿಂದ ಹಿಡಿದು ಸಂಜೆಯವರೆಗೆ ಏನು ಮಜಾ...? ಸಮಾಜದಲ್ಲಿ ಇನ್ನೊಂದು ಮುಖವಿರುತ್ತದೆ. ಅಂತಹ ಮುಖವನ್ನು ನನ್ನ ಅಜ್ಜಿ ನನ್ನ ಹಿರಿಯರು ಅನುಭವಿಸಿದ್ದರು. ಆದರೆ ಅವರು ಆ ನೋವುಗಳನ್ನು ಮರೆತು ಇಂದಿನ ಹೊಸ ಬದುಕಿನಲ್ಲಿದ್ದಾರೆ. ಕಾರು ಚಲಾಯಿಸಬಲ್ಲರು.. ಮೊಬೈಲ್ ನಲ್ಲಿ ಗಂಟೆಗಟ್ಟಲೆ ಮಾತನಾಡಬಲ್ಲರು... ಅದು ಬದಲಾವಣೆ...
ಆ ಎಲ್ಲಾ ಬದಲಾವಣೆಗಳ ಹಿಂದೆ ... ಇನ್ನೊಂದು ಕತೆಯಿರುತ್ತದೆ.

ಹಾಗಾಗಿ ನನಗೆ ಅಜ್ಜಿಯ ನಿಧನದ ಸುದ್ದಿ ದೂರದಲ್ಲಿದ್ದ ನನಗೆ ಕೇಳಿದ ನಂತರ ಮನೆಗೆ ಬರುವಾಗ ಈ ಎಲ್ಲಾ ನೋಟಗಳನ್ನು ತಿರುವುತ್ತಾ ಬಂದೆ. ಬದುಕಿನ ಮಜಲುಗಳನ್ನು ಅವಲೋಕಿಸುತ್ತಾ ಸಾಗಿದೆ. ಮನೆ ತಲಪಿತು... ಅಜ್ಜಿ ನೆನಪಾಗಿ ಉಳಿದರು... ದೇಹ ಮಣ್ಣಿನಲ್ಲಿ ಲೀನವಾಯಿತು.....

ಅಜ್ಜಿಯ ಬಗ್ಗೆ ಮಾತ್ರಾ ದಾಖಲಿಸಬೇಕು ಅಂದುಕೊಂಡಿದ್ದೆ ಆದರೆ ಎಲ್ಲೆಲ್ಲಿಗೋ ಹೋಗಿ ಬಂದಿತು