05 ನವೆಂಬರ್ 2022

ಅಡಿಕೆ ಹಳದಿ ಎಲೆರೋಗದ ಸಭೆ | ಕಾರಣಗಳನ್ನು ಹುಡುಕುತ್ತಲೇ ಹೋದರೆ ಹೇಗೆ ? | ಒಂದು ಹೆಜ್ಜೆ ಮುಂದೆ ಹೋಗುವುದು ಯಾವಾಗ ? |

 


ಕ್ಯಾಂಪ್ಕೋ ನೇತೃತ್ವದಲ್ಲಿ ನಡೆದ ಅಡಿಕೆ ಹಳದಿ ಎಲೆರೋಗ ಹಾಗೂ ಎಲೆಚುಕ್ಕೆ ರೋಗದ ಬಗ್ಗೆ ನಡೆದ ಸೆಮಿನಾರ್‌ನಲ್ಲಿ ಅಡಿಕೆ ಬೆಳೆಗಾರರ ಸಂಘದ ಕಾರ್ಯದರ್ಶಿ ನೆಲೆಯಲ್ಲಿ ಭಾಗವಹಿಸಿದೆ. ಮೊದಲ ಬಾರಿಗೆ ಈ ವಿಷಯಕ್ಕೆ ಸಂಬಂಧಿಸಿ ಕೃಷಿ ತಜ್ಞರು, ಎಲ್ಲಾ ಇಲಾಖೆಯ ವಿಜ್ಞಾನಿಗಳು ಜೊತೆಯಾದರು. ಕೆಲವು ವಿಭಾಗವು ಹಳದಿ ಎಲೆರೋಗಕ್ಕೆ ಪೈಟೋಪ್ಲಾಸ್ಮಾ ಎಂಬ ವೈರಸ್‌ ಕಾರಣ ಎಂದಿದ್ದರು, ಅದನ್ನೇ ಈಗಲೂ ಹೇಳಲಾಗುತ್ತಿದೆ. ಈ ನಡುವೆಯೇ ಫೈಟೋಪ್ಲಾಸ್ಮಾ ಒಂದೇ ಕಾರಣವಲ್ಲ, ಗೊಬ್ಬರ ನಿರ್ವಹಣೆ, ಕೃಷಿ ನಿರ್ವಹಣೆಯೂ ಕಾರಣವಾಗುತ್ತದೆ ಎಂಬ ಅಭಿಪ್ರಾಯವೂ ವ್ಯಕ್ತವಾಯಿತು. ಇದೆರಡೂ ಅಭಿಪ್ರಾಯಗಳು ಇನ್ನು ಒಂದಾಗಿ ಮುಂದೆ ಸಾಗಬೇಕಿದೆ. ಈ ಕೆಲಸ ಎಂದೋ ಆಗಬೇಕಿತ್ತು. ಫೈಟೋಪ್ಲಾಸ್ಮಾಕ್ಕೆ ಪರಿಹಾರ ರೋಗ ನಿರೋಧಕ ತಳಿ ಅಭಿವೃದ್ಧಿ ಮಾತ್ರಾ. ಇದರ ಜೊತೆಗೆ ಗೊಬ್ಬರ ನಿರ್ವಹಣೆಯೂ ಅಗತ್ಯವಾಗಿದೆ.  ಈ ದಿಕ್ಕಿನಲ್ಲಿ ಎಲ್ಲಾ ಚಿಂತನೆಗಳು ಒಂದೇ ವೇದಿಕೆ ಅಡಿಗೆ ಈಗ ಬಂದವು. ಇದಕ್ಕಾಗಿ ಕ್ಯಾಂಪ್ಕೋಗೆ ಧನ್ಯವಾದ ಹೇಳಬೇಕು.

ಈಗ ಇರುವ ಪ್ರಶ್ನೆ ಎಂದರೆ, ಅಡಿಕೆ ಎಲೆಚುಕ್ಕಿ ರೋಗದಲ್ಲಿಯೂ ವಿಜ್ಞಾನಿಗಳು ಕಾರಣ ಪತ್ತೆ ಮಾಡಿದ್ದಾರೆ, ಅದಕ್ಕೆ ಬೇಕಾದ ಔಷಧಿಯನ್ನೂ ಹೇಳಿದ್ದಾರೆ. ಹಳದಿ ಎಲೆರೋಗದಲ್ಲಿಯೂ ಈಗ ಕಾರಣ ಸಿಕ್ಕಿದೆ, ಅದಕ್ಕೆ ಬೇಕಾದ ಪರಿಹಾರ ಮಾರ್ಗಗಳು ಇನ್ನೂ ಸಿಕ್ಕಿಲ್ಲ. ದಾರಿಗಳು ಇದೆ, ಅವು ದೀರ್ಘ ಕಾಲಿಕ.  ಆದರೆ ಇದುವರೆಗೂ ಈ ದಾರಿ ಚಾಲನೆಗೆ ಬಂದಿಲ್ಲ. ವಿಜ್ಞಾನಿಗಳ ಕೆಲಸ ರೋಗದ ಪತ್ತೆ ಹಾಗೂ ಅದಕ್ಕೆ ಪರಿಹಾರ ಮಾರ್ಗ. ಪರಿಹಾರಗಳನ್ನು ಅನುಷ್ಟಾನ ಮಾಡುವ ಕೆಲಸ ಸಂಸ್ಥೆಗಳಿಗೆ, ಸರ್ಕಾರಗಳಿಗೆ, ಆಡಳಿತಕ್ಕೆ.

ಅಡಿಕೆ ಬೆಳೆಗಾರರಿಗೆ ಈಗ ಬೇಕಾದ್ದು ಅಡಿಕೆ ಹಳದಿರೋಗಕ್ಕೆ ಪರಿಹಾರ ಇದೆಯೋ ಇಲ್ಲವೋ ? ಇದ್ದರೆ ಏನು ಮಾಡಬಹುದು ? ಇಲ್ಲದೇ ಇದ್ದರೆ ಬದುಕಿಗೆ ಪರ್ಯಾಯ ಏನು ? ಇದಿಷ್ಟೇ ಈಗ ರೈತರು ಬಯಸುವುದು. ಇದರಲ್ಲಿ ವಿಳಂಬ ಆದಷ್ಟು ಕೃಷಿಕರಿಗೇ ಸಮಸ್ಯೆಯಾಗುತ್ತದೆ. ಹೀಗಾಗಿ ಯಾವ ಸಭೆಗಳು ನಡೆದರೂ ಅತಿ ಶೀಘ್ರದಲ್ಲಿಯೇ ಉತ್ತರವೂ ಸಿಗಬೇಕಿದೆ. ಮುಂದೆ ಅಡಿಕೆ ಸಮಸ್ಯೆಯ ಬಗ್ಗೆ ಇಷ್ಟರಲ್ಲೇ ಚರ್ಚಿಸುತ್ತಾ, ಸಂಶೋಧನೆ ಮಾಡುತ್ತಾ ಕೂತರೆ ಹೇಗೆ ? ಅಡಿಕೆ ಹಾನಿಕಾರಕ, ಅಡಿಕೆ ಆಮದು, ಅಡಿಕೆ ಬೆಳೆ ವಿಸ್ತರಣೆ, ಅಡಿಕೆ ಭವಿಷ್ಯ ಹೀಗೇ ಹಲವಾರು ಸಂಗತಿಗಳು ಮುಂದಿನ ದಿನಗಳಲ್ಲಿ ಚರ್ಚೆಯ ವಿಷಯ ಆಗಲಿದೆ. ಈ ಬಗ್ಗೆ ಸಾಮಾಹಿಕ ಚಿಂತನೆ, ಚರ್ಚೆ ನಡೆಯಬೇಕಾಗುತ್ತದೆ. ಇದರ ಜೊತೆಗೇ ಅಡಿಕೆ ಭವಿಷ್ಯದ ಬಗ್ಗೆಯೇ ಗಂಭೀರವಾದ ಚಿಂತನೆ ಅಗತ್ಯ ಇದೆ. 

ನಾವು ಅನೇಕ ಕಾರ್ಯಕ್ರಮದಲ್ಲಿ ಭಾಗವಹಿಸಿದಾಗಲೂ ಇದೆಲ್ಲಾ ಪಿಪಿಟಿ ನೋಡಿ, ಕೇಳಿ ಸಾಕಾಗಿದೆ. ಆದರೆ ಅದಕ್ಕಿಂತ ಆಚೆಗೆ ಯಾವ ಫಲಿತಾಂಶವೂ, ಪ್ರಯೋಗದ ಫಲಿತಾಂಶವೂ ಲಭ್ಯವಾಗುತ್ತಿಲ್ಲ. ಇನ್ನೂ ಸಂಶೋಧನೆಯ ಹಾದಿಯಲ್ಲಿಯೇ ಉಳಿದುಕೊಂಡರೆ ಹೇಗೆ? ಹಳದಿ ಎಲೆರೋಗ ಕಾಣಿಸಿಕೊಂಡು ವರ್ಷಗಳು ಅನೇಕ ಉರುಳಿದರೂ ಪರಿಹಾರ ಕಾಣದೇ ಇರುವುದು  ಈ ದೇಶ ಗಂಭೀರ ವಿಷಯ ಆಗಬೇಕು. ಪ್ರತೀ ಬಾರಿಯೂ ನಾವು ಹಳದಿ ಎಲೆರೋಗದ ಪಿಪಿಟಿ ನೋಡಿ, ಕಾರಣ ಪೈಟೋಪ್ಲಾಸ್ಮಾ ಎಂದು ತಿಳಿದುಕೊಂಡು ಬಂದರೆ ಹೇಗೆ? ಇನ್ನು ಒಂದು ಹೆಜ್ಜೆಯಾದರೂ ಮುಂದೆ ಹೋಗಬೇಕು. ನಿನ್ನೆಯ ಸಭೆಯಲ್ಲೂ ಕಾರಣಗಳನ್ನು ಎಲ್ಲರೂ ಹೇಳಿದರು. ಪರಿಹಾರದ ಕಡೆಗೆ ಬರುವಾಗ ಮೌನವಾಗುತ್ತದೆ, ಚರ್ಚೆ ಹೆಚ್ಚಾಗುತ್ತದೆ, ಟೀಕೆ, ವಿರೋಧ, ಅಸಮಾಧಾನಗಳು ಕಾಣುತ್ತದೆ. ಇನ್ನು ಅನುದಾನಗಳು ಸಿಗುತ್ತವೆ ಎಂದಾಗ ಇನ್ನೊಂದಿಷ್ಟು ಪ್ರಾಜೆಕ್ಟ್‌ ಗಳು ತಯಾರು ಮಾಡುವವರು ಇದ್ದಾರೆ. ಇದರಿಂದ ಕೃಷಿಕರಿಗೇ ಸಮಸ್ಯೆ ಹೊರತು ಬೇರೆ ಪ್ರಯೋಜನವೇ ಇಲ್ಲ. ಎಲ್ಲಾ ಪರಿಹಾರ ಮಾರ್ಗಗಳೂ ದೀರ್ಘ ಕಾಲಿಕ, ಕೊರೋನಾ ಮಾದರಿಯಲ್ಲಿ ತಕ್ಷಣದ ಪರಿಹಾರಗಳು ಇಲ್ಲವೇ ಇಲ್ಲ.  

ಅಡಿಕೆಯ ಹಳದಿ ಎಲೆರೋಗದ ಬಗ್ಗೆ 2000 ಇಸವಿಯ ನಂತರ ಯಾವ ಸಂಶೋಧನೆಗಳು ನಡೆದಿಲ್ಲ ಎನ್ನುವುದು ನಿನ್ನೆಯ ಸಭೆಯಲ್ಲಿ ಕೊಟ್ಟ ಮಾಹಿತಿ ಪತ್ರದಲ್ಲಿ ಉಲ್ಲೇಖ ಇತ್ತು. ಈಚೆಗೆ ಸರ್ಕಾರವೂ ಅಡಿಕೆ ಎಂದರೆ ಕಡತಗಳನ್ನು ಬದಿಗೆ ಸರಿಸುತ್ತಿದೆ.ಏಕೆಂದರೆ ಅಡಿಕೆ ಹಾನಿಕಾರಕ ಎಂಬ ಕಾರಣದಿಂದ. 

ಈಗ ನಡೆದ ಸಭೆಯಲ್ಲೂ ಎಲ್ಲಾ ವಿಜ್ಞಾನಿಗಳು ಪಿಪಿಟಿ ಮೂಲಕ ಮಾಹಿತಿ ಕೊಟ್ಟಿದ್ದಾರೆ. ಇದುವರೆಗೆ ನೀಡಿದ ಎಲ್ಲಾ ಮಾಹಿತಿಗಳನ್ನೂ ಮತ್ತೆ ಹೇಳಿದ್ದಾರೆ.   ಇನ್ನು ಅದರ ಫಾಲೋಅಪ್‌ ಮಾಡುವ ಕೆಲಸ ಮಾತ್ರಾ. ಅದರ ನೇತೃತ್ವ ಇರುವುದು ಈಗ ಅಷ್ಟೇ.

ಇದರ ಜೊತೆಗೆ ಈಚೆಗೆ ನನಗೆ ಅನಿಸುತ್ತಿದೆ, ಅಡಿಕೆ ಹಳದಿ ಎಲೆರೋಗ, ಅಡಿಕೆ ಎಲೆಚುಕ್ಕಿ ರೋಗ ಸೇರಿದಂತೆ ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ಕೃಷಿಕರೆಲ್ಲಾ ಸಂಘಟಿತರಾಗಲೇಬೇಕಿದೆ. ಇಲ್ಲದಿದ್ದರೆ ಇನ್ನೂ ಈ ಸಮಸ್ಯೆಗೆ ಪರಿಹಾರ ಸಾಧ್ಯವಿಲ್ಲ. ಈಗಾಗಲೇ ಸಂಘಟನೆಯ ನೆಲೆಯಲ್ಲಿ ನಾವೂ ಒಂದು ಹೆಜ್ಜೆ ಮುಂದಕ್ಕೆ ಯೋಚಿಸುತ್ತಿದ್ದೇವೆ. ಎಲ್ಲರೂ ಜೊತೆಯಾದರೆ ಪರಿಹಾರ ಬೇಗನೆ ಸಾಧ್ಯವಿದೆ. ಚಿಂತನೆಗಳಲ್ಲಿ ವ್ಯತ್ಯಾಸ ಇರಬಹುದು, ಟೀಕೆಗಳು ಇರಬಹುದು, ಖಾರವಾಗಿ ಹೇಳುವವರೂ ಇದ್ದಾರೆ, ವಿಷಾದಿಸುವವರೂ ಇರುತ್ತಾರೆ, ಹತಾಶೆಗೆ ಒಳಗಾದವರೂ ಇದ್ದಾರೆ. ಇವರೆಲ್ಲರೂ ಜೊತೆ ಇದ್ದರೆ ಮಾತ್ರವೇ ಬಹುಬೇಗನೆ ಪರಿಹಾರದ ಮಾರ್ಗ ಸಾಧ್ಯವಿದೆ.




02 ನವೆಂಬರ್ 2022

100 ಕಿಮೀ ದೂರದಿಂದ "ಪ್ರೀತಿ"ಯ ಹೋಳಿಗೆ ಬಂತು...!

 

ಸುಮಾರು 100 ಕಿಮೀ ದೂರದಿಂದ ನಮ್ಮ ಮನೆಗೆ 20 ಹೋಳಿಗೆ ಹಾಗೂ 4 ತಿರುಪತಿ ಲಾಡು ಬಂತು..!.‌ , ವಿಷಯ ಹೋಳಿಗೆಯದ್ದು ಅಲ್ಲ ಲಾಡಿನದ್ದೂ ಅಲ್ಲ. ಅದು ಪ್ರೀತಿಯದ್ದು, ಸ್ನೇಹದ್ದು. ಹೀಗಾಗಿ ಈ ಸಂಬಂಧಗಳನ್ನು, ಸ್ನೇಹವನ್ನು ನಾವು ಯಾವ ಲೆಕ್ಕದಲ್ಲಿಯೂ ಅಳೆಯುವುದಕ್ಕೆ ಸಾಧ್ಯವಿಲ್ಲ.

ವಿಷಯ ಇಷ್ಟು....., ಇಂದು ಪತ್ನಿಯ ತವರು ಮನೆಯಿಂದ ಮಾವ ಹೋಳಿಗೆಯನ್ನು ಪ್ಯಾಕ್‌ ಮಾಡಿ ಕಳುಹಿಸಿದರು. ಇದು ವಿಷಯ ಅಲ್ಲ. ಎಲ್ಲರಿಗೂ ಇಂತಹ ಅನುಭವವಿದೆ. ನಾವೂ ಕೂಡಾ ಇದನ್ನೇ ಮಾಡುತ್ತೇವೆ, ಮಾಡಿದ್ದೇವೆ ಕೂಡಾ. ನನ್ನ ಅಮ್ಮನಿಗೂ ಇದೆಲ್ಲಾ ಬಹಳ ಅಚ್ಚುಮೆಚ್ಚು.  ಬಂದವರಿಗೆ ಹಪ್ಪಳ, ಜೇನು, ಹಲಸಿನ ಹಣ್ಣು, ರಂಬುಟಾನ್‌.... ಹೀಗೇ....!. ಮನೆಯಲ್ಲಿ ಏನಿದೆಯೋ ಅದು ಕೊಡುತ್ತಿದ್ದರು. ಕೆಲವು ಸಲ 4 ರಂಬುಟಾನ್‌ ನನ್ನ ತಂಗಿಯ ಮನೆಗೆ ನನ್ನ ಬಳಿ ಕೊಟ್ಟು ಕಳುಹಿಸಿದ್ದೂ ಇದೆ. ಅದು ಪ್ರೀತಿ ಅಷ್ಟೇ. ಇದರ ಹಿಂದಿರುವ ಭಾವದ ಬಗ್ಗೆ ಧ್ವನಿಸಬೇಕು.

ಇಲ್ಲಿ ಒಂದು ಸಂಬಂಧ, ಒಂದು ಪ್ರೀತಿ, ಒಂದು ಸ್ನೇಹದ‌  ವಿಷಯಗಳು ಹೆಚ್ಚು ಮಹತ್ವ ಪಡೆಯುತ್ತವೆ. ಇಲ್ಲಿ ಹೋಳಿಗೆ ದುಡ್ಡು ಕೊಟ್ಟರೆ ಖರೀದಿ ಮಾಡಬಹುದು, ಆದರೆ ಪ್ರೀತಿಯನ್ನು, ಸ್ನೇಹವನ್ನು ಖರೀದಿಸಲು ಸಾಧ್ಯವಿಲ್ಲ ಎಂಬುದು ಅರ್ಥವಾಗಬೇಕಾದ ವಿಷಯ ಅಷ್ಟೇ. 

ಕಳೆದ ಬಾರಿ ಪುತ್ತೂರಿಗೆ ಹೋಳಿಗೆಯನ್ನು ಮಾವ  ಕಳುಹಿಸಿದ್ದರು, ನಾನು  ಆ ದಿನ ಪುತ್ತೂರಿನಲ್ಲಿ ಯಾವ ಕೆಲಸ ಇಲ್ಲದಿದ್ದರೂ ಕಾರಿನಲ್ಲಿ ಹೋಗಿ 15 ಹೋಳಿಗೆಯ ಪಾರ್ಸೆಲ್ ಪಡೆದು ಹೋಟೆಲ್‌ನಲ್ಲಿ ಚಹಾ ಕುಡಿದು ವಾಪಾಸ್‌ ಮನೆಗೆ ಬಂದು ಹೋಳಿಗೆ ಸವಿದಿದ್ದೆವು. ಇದರ ಖರ್ಚು ಲೆಕ್ಕ ಹಾಕಿದರೆ ಒಂದು ಹೋಳಿಗೆಯ ಅಸಲು 50 ರೂಪಾಯಿಗಿಂತ ಹೆಚ್ಚು ಆದೀತು. ಆದರೆ ಆ ಹೋಳಿಗೆಯ ಹಿಂದೆ ಇರುವ ಭಾವ ಹಾಗೂ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. 

ಅನೇಕ ಸಲ ಇಂತಹದ್ದಕ್ಕೆಲ್ಲಾ ಬೆಲೆ ಇಲ್ಲದೆಯೇ ಕೇವಲ ಹಣ ಹಾಗೂ ಹಣದ ಹಿಂದಿನ ದಾರಿಗಳ ಬಗ್ಗೆ ಮಾತ್ರವೇ ಯೋಚನೆ ಮಾಡಿದರೆ, ಯಾವ ಭಾವವೂ ಇಲ್ಲದೆ ಶುಷ್ಕವಾಗಿರಬೇಕಾಗುತ್ತದೆ. ಇದು ಇಡೀ ಸಂಬಂಧದಲ್ಲಿ ಸೃಷ್ಟಿ ಮಾಡುವ ತಲ್ಲಣ ಬಹುದೊಡ್ಡದು. ‌ಅನೇಕ ಸಲ ಈ ತಲ್ಲಣಗಳನ್ನು ಮೌನವಾಗಿ ಎದುರಿಸಬೇಕಾಗುತ್ತದೆ. ಏಕೆಂದರೆ ಭಾವವೇ ಇಲ್ಲದ ಶುಷ್ಕದ ಜೊತೆ ಗುದ್ದಾಡಿ ಏನು ಪ್ರಯೋಜನ?. 

ಅತೀ ಹತ್ತಿರದವರಿಂದ ಎಲ್ಲರೂ ಬಯಸುವುದು  ಸ್ನೇಹ ಹಾಗೂ ಪ್ರೀತಿ ಅಷ್ಟೇ. ಅದು ಶುಷ್ಕವಾಗುತ್ತಾ ಹೋದಂತೆಯೇ ಬದುಕು ಸಡಿಲವಾಗುತ್ತದೆ. ಒಂಟಿಯಾಗಬೇಕಾಗುತ್ತದೆ. ಸ್ನೇಹ, ಸಂಬಂಧ ಎಂಬುದು  ದಿನವೂ ಮಾತನಾಡಿಕೊಳ್ಳುವ ವಿಷಯವೂ ಅಲ್ಲ, ಆದರೆ ಆಪತ್ಕಾಲದಲ್ಲಿ ನೆರವಾಗುವ, ನೆರವಿಗೆ ಧ್ವನಿಯಾಗುವ , ಪ್ರತಿಧ್ವನಿಯಾಗುವ ವಿಷಯ ಅಷ್ಟೇ. ಎಲ್ಲಾ ಬಾರಿಯೂ ಎಲ್ಲಾ ಸಂದರ್ಭದಲ್ಲಿಯೂ ನೆರವಿಗೆ ಬಯಸುವುದೂ ಸರಿಯಲ್ಲ. ಅದು ಸಾಧ್ಯವೂ ಇಲ್ಲ. ಇದುವೇ ಪ್ರೀತಿ. ಪ್ರೀತಿ, ಸಂಬಂಧ ಎಂದರೆ ಅಧಿಕಾರವೂ ಅಲ್ಲ, ದುರ್ಬಳಕೆಯೂ ಅಲ್ಲ, ಬಳಕೆಯೂ ಅಲ್ಲ.

ಸ್ನೇಹ ಎಂದರೆ ಹೀಗೆ ಎಂದೂ ವಿವರಿಸುವುದು  ಕಷ್ಟ. ಆದರೆ ಹಣದ ನಡುವೆ, ಲೆಕ್ಕಾಚಾರದ ನಡುವೆ ಸಂಬಂಧ ಬೆಸೆಯದೆ ಎನ್ನುವುದನ್ನು  ಹೇಳಬಹುದು. ಯಾವ ಎಣಿಕೆಯೂ ಇಲ್ಲದೆಯೇ ಹೋಳಿಗೆ ತಲುಪಿಸಲೇ ಪುತ್ತೂರಿಗೆ ಬಂದ ಮಾವ, ಹೋಳಿಗೆ ತಲುಪಿಸಲು ಪಟ್ಟ ಸಾಹಸ... ಮನೆಯಲ್ಲಿ ಕಾತರದಿಂದ ಕಾಯುವ ಅವರ ಮಗಳು...ನನ್ನ ಪತ್ನಿ.....!  ಇದೆರಡೂ ಇರುವುದು  ಹಣದ ಮೇಲಲ್ಲ, ಪ್ರೀತಿಯ ಮೇಲೆ.... , ಮಗಳ ಮೇಲಿನ ಅವರ ಪ್ರೀತಿಗೆ ನಾನ್ಯಾಕೆ ಕೊಂಕು, ಅಡ್ಡಿ ಮಾಡಲಿ, ನಾನೂ ಸಹಕಾರಿಯಾದೆ. ಹೋಳಿಗೆಗೆ ಆಗುವ ಖರ್ಚು ನೋಡಲಿಲ್ಲ, ಪ್ರೀತಿಯನ್ನು ದಾಟಿಸಿದೆ ಅಷ್ಟೇ.

ಈ ಬಾರಿ 50 ಕಿಮೀ ದೂರ ಬಂದ ಮಾವ ಪುತ್ತೂರಿನಿಂದ ಪ್ಯಾಕ್‌ ಮಾಡಿ ಪಾರ್ಸೆಲ್‌ ಹಾಕಿದರು, ನಾನು ಬಸ್ಸಿನಿಂದ ಪಡೆದುಕೊಂಡೆ. ಈ ಹೋಳಿಗೆ ಒಂದು ಸಂಬಂಧ ಸ್ಥರವನ್ನು ಎತ್ತಿ ತೋರಿಸಿತು ಅಷ್ಟೇ. ಮನುಷ್ಯ ಬದುಕಿನಲ್ಲಿ ಬೇಕಾದ್ದು ಹಾಗೂ ಉಳಿಯುವುದು ಇದೇ ತಾನೆ..

ಪರಮಮಿತ್ರ ವೇಣುಗೋಪಾಲ ಶೇರ ಹೇಳುತ್ತಾರೆ, ಮಾರಾಯ  ಸ್ನೇಹ ಎನ್ನುವುದು ಬಳಕೆಗೂ ಅಲ್ಲ, ದುರ್ಬಳಕೆಗೂ ಅಲ್ಲ.. ಅದು ಅನುಭವಿಸಲು ಬದುಕಿನ ಸಂತಸ ಹೆಚ್ಚಿಸಲು...