20 ಆಗಸ್ಟ್ 2011

ಯಾರು ಭ್ರಷ್ಟಾಚಾರಿ . . ?


ಆತನೊಬ್ಬ ಪದವೀಧರ. ಸಣ್ಣ ನೌಕರಿಯಲ್ಲೂ ಇದ್ದಾನೆ. ಭ್ರಷ್ಟಾಚಾರ ನಿರ್ಮೂಲನೆಯಾಗಬೆಕು ಅಂತಾನೆ.ಅದರ ಬಗ್ಗೆ ಪ್ರತಿ ದಿನವೂ ಮಾತನಾಡುತ್ತಾನೆ. ಈಗಂತೂ ಯಾವಾಗಲೂ ಅದೇ ಮಾತು. ಆದರೆ . . ಆತನೇ ಹೇಳಿದ ಸಂಗತಿಯೊಂದು,

ಇತ್ತೀಚೆಗೆ ಒಂದು ಘಟನೆ ನಡೆಯಿತು. ಆತನಿಗೊಂದು ಜನ್ಮ ದಿನಾಂಕದ ದೃಢೀಕರಣ ಪತ್ರ ಬೇಕಾಯಿತು. ಅದಕ್ಕಾಗಿ ಆತ ಸುಮಾರು 60 ಕಿಲೋಮೀಟರ್ ಹೋಗಬೇಕು. ಬೆಳಗ್ಗೆ ಬಸ್ಸಲ್ಲಿ ಹೋದರೆ ಆತ ಬರುವಾಗ ಹೆಚ್ಚೂಕಮ್ಮಿ ಸಂಜೆಯಾಗುತ್ತದೆ. ಅದೂ ಅಲ್ಲದೆ ಆತನ ಒಂದು ದಿನ ರಜೆಯೂ ಹಾಕಬೇಕಾಗುತ್ತದೆ.

ಹಾಗೇ ಆತ ಅಂದೊಂದು ದಿನ ಹೊರಟೇ ಬಿಟ್ಟ. ಅದು ಪುರಸಭೆ. ಹೋದವನೇ ತನ್ನ ದಾಖಲೆ ಬೇಕೆಂದು ಕೇಳಿದ. ಕುಳಿತುಕೊಳ್ಳಿ ಸ್ವಲ್ಪ, ಎಂಬ ಉತ್ತರ ಆ ಅಧಿಕಾರಿಯದ್ದು. ಸ್ವಲ್ಪ ಹೊತ್ತಾದ ಮೇಲೆ ಒಂದು ಅರ್ಜಿ ಕೊಡಿ ಎಂದು ಹೇಳಿದ ಅಧಿಕಾರಿ. ಅದನ್ನೂ ಬರೆದುಕೊಟ್ಟಾಯಿತು. ಎರಡು ದಿನ ಬಿಟ್ಟು ಬನ್ನಿ ಎಂದು ಹೇಳಿದ ಅಧಿಕಾರಿ. ಇವತ್ತಿಗೆ ಆಗೋದಿಲ್ಲ ಎಂದ.

ಸ್ವಲ್ಪ ಯೋಚಿಸಿದ , ಇವತ್ತೇ ಕೊಟ್ಟರೆ ಒಳ್ಳೆಯದು ಎಂದು ಮತ್ತೆ ವಿನಂತಿಸಿದಾಗ . . ಇಲ್ಲ ಎನ್ನುವ ಉತ್ತರ.

ಇನ್ನೂಮ್ಮೆ, ಸ್ವಲ್ಪ ಇವತ್ತೇ.. . ಅಂತ ಕಿಸೆಗೆ ಕೈ ಹಾಕಿದಾಗ, ಅತ್ತ ಕಡೆಯಿಂದ ಡ್ರಾವರ್ ಹಿಂದಕ್ಕೆ ಬಂತು. ಈತನಿಂದ 100 ರೂಪಾಯಿ ತಟ್ಟೆಗೆ ಬಿತ್ತು.

ತಕ್ಷಣವೇ ಪ್ಲೇಟು ಬದಲಾಯಿತು. ಈಗಲೇ ಕೊಡುತ್ತೇನೆ . .!.

ಅಂತೂ 10 ನಿಮಿಷದಲ್ಲಿ ಸಿಕ್ಕೇಬಿಟ್ಟಿತು ಇವನಿಗೆ ಬೇಕಾದ ದಾಖಲೆ.

***************

ಈ ಘಟನೆಯ ನಂತರ ಆತ ಹೇಳುತ್ತಾನೆ ,

ನನಗೆ 100 ರೂಪಾಯಿ ಪ್ರಶ್ನೆ ಅಲ್ಲ. ನೋಡಿ ನನಗೆ ಬಸ್ಸಿಗೆ ಹೋಗಿ ಬರಲು 70 ರೂಪಾಯಿ ಬೇಕು. ಅದರ ಜೊತೆಗೆ ಇತರ ಖರ್ಚು ಅಂತ 30 ರೂಪಾಯಿ ಆಗುತ್ತೆ. ಇನ್ನು ಒಂದು ದಿನ ರಜೆ ಬೇರೆ ಅದಕ್ಕೆ ಕನಿಷ್ಟ 230 ರೂಪಾಯಿ ಲಾಸ್ ಆಗುತ್ತದೆ. ಹಾಗಿರುವಾಗ ನಾನು 100 ರೂಪಾಯಿ ಆತನಿಗೆ ಕೊಟ್ಟರೆ ಏನಾಯಿತು. ಇನ್ನೊಮ್ಮೆ ಹೋಗಲು ಉಳಿಯಿತಲ್ಲಾ , ಹಣವೂ, ಶ್ರಮವೂ ಉಳಿಯತಲ್ಲಾ ಅಂತ ಹೇಳುತ್ತಾನೆ ಆತ.

ಈಗ ಭ್ರಷ್ಟಾಚಾರಿ ಯಾರು ?.ಇದೆಲ್ಲವನ್ನೂ ತೊಡೆದು ಹಾಕೋದೆ ಹೇಗೆ?.

ಈಗ ನನಗೆ ನೆನೆಪಾಗುತ್ತದೆ , ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿಗಳು ಇತ್ತೀಚೆಗೆ ಹೇಳಿದರು , ಕೊಡುವ ಕೈಗಳು ಕಡಿಮೆಯಾದಾಗ ಕೊಳ್ಳುವ ಕೈಗಳು ಕಡಿಮೆಯಾಗುತ್ತದೆ. ಕೊನೆಗೇ ಅದೇ ಇಲ್ಲವಾಗುತ್ತದೆ. ಹಾಗಾಗಿ ಇಂದು ಎಲ್ಲೆಡೆ ನಡೆಯುತ್ತಿರುವ ಧರಣಿ ಜೊತೆಗೆ ನಮ್ಮೊಳಗೇ ಕೂಡಾ ಧರಣಿಯಾಗಬೇಕು ಎಂದು ಹೇಳಿದ್ದು ಅನುರಣಿಸುತ್ತಲೇ ಇದೆ.