06 ಸೆಪ್ಟೆಂಬರ್ 2009

ನೇಗಿಲಯೋಗಿಯ ಕತೆಯ ಕೇಳಿಲ್ಲಿ . .. . .



ಆತ ರೈತ .
ದೇಶದ ಬೆನ್ನೆಲುಬು.. ಅನ್ನ ನೀಡುವ ಅನ್ನದಾತ . . .ಪ್ರಾಣ ರಕ್ಷಕ ಹೀಗೆ ಏನೆಲ್ಲಾ ವಿಶೇಷಣಗಳನ್ನು ಆತನಿಗೆ ನೀಡಬಹುದೋ ಅದೆಲ್ಲವೂ ಆತನಿಗೆ ನೀಡಬಹುದು. ಆದರೆ ಆತನ ಜೀವನ ಮಟ್ಟ ಸುಧಾರಿಸದು.. ಹಾಗಾದ್ರೆ ಏನು ಮಾಡಬಹುದು ..? ಆತನಿಗಾಗಿ ಏನನ್ನು ಯೋಚಿಸಬಹುದು..? ಏನನ್ನೂ ಇಲ್ಲ..! ನಿಜಕ್ಕೂ ಇದು ಸತ್ಯ. ಅಂತಹ ಒಂದು ಘಟನೆಯೊಂದು ಇದೆ. ಇದಕ್ಕೂ ಮುನ್ನ ಒಂದು ಸಂಗತಿ.ಈಗಿನಂತೆ ಆಹಾರ ಬೆಳೆಯ ಕೊರತೆಯಾದರೆ 2050 ರವೇಳೆಗೆ ಏಷ್ಯಾದ ಅನೇಕ ಕಡೆಗಳಲ್ಲಿ ಆಹಾರದ ಸಮಸ್ಯೆ ತೀವ್ರವಾಗಿ ಕಾಡಲಿದೆ ಎಂಬ ವರದಿಯೊಂದು ಬಂದಿದೆ.ಆಗ ರೈತ ನೆನಪಾಗುತ್ತಾನೆ. ಆದರೆ ಆಗ ಆತನೇ ಇರುವುದಿಲ್ಲವಂತೆ...!!

ಮೊನ್ನೆ ರೈಲಲ್ಲಿ ಹೋಗುತ್ತಿದ್ದೆವು. ಯಾರೋ ಒಬ್ಬರು ಪ್ರಯಾಣಿಕರು ಮಾತನಾಡುತ್ತಿದ್ದರು. ಅವರು ಹೇಳುತ್ತಿದ್ದ ವಿಚಾರ ರೈತನದ್ದಾಗಿತ್ತು. ನಿಜಕ್ಕೂ ಅವರು ಹೇಳುತ್ತಿರುವ ಸಂಗತಿಯ ಒಳಹೋದರೆ ಅದು ಕಾನೂನು ಪರಿಧಿಯೊಳಗೆ ಸರಿಯಿತ್ತು. ಆದರೆ ಅದರ ಹೊರತಾಗಿ ಅಂದರೆ ದೇಶದ ವ್ಯವಸ್ಥೆಯ ಒಳಗೆ ನೋಡಿದಾಗ ಹಾಗಾಗಬಾರದಿತ್ತು ಅಂತ ಅನ್ಸುತ್ತೆ.ಆತ ರೈತ, ಸುಮಾರು 60 ರಿಂದ 70 ವರ್ಷದ ಒಳಗಿನ , ಹೊಲದಲ್ಲಿ ಕೆಲಸ ಮಾಡಿದ ಜೀವ. ಆತನಿಗೆ ಹಾಸನಕ್ಕೆ ಬರುವುದಕ್ಕಿತ್ತು. ರೈಲಲ್ಲಿ ಟಿಕೆಟ್ ಪಡೆದಿದ್ದ. ಆತನಿಗೆ ಯಾರೋ ಹೇಳಿದರಂತೆ ನೀವ್ಯಾಕೆ ಆ ರೈಲಲ್ಲಿ ಹೋಗುತ್ತೀರಿ. ನೋಡಿ ಈ ರೈಲಲ್ಲಿ ಹೋಗಿ. ಇದು ನಿಮಗೆ ಹತ್ತಿರವಾಗುತ್ತದೆ ಎಂದರಂತೆ. ಹಾಗಾಗಿ ಆತ ಈ ರೈಲ್ಲನ್ನು ಏರಿದ. ಹಾಗೆ ರೈಲು ಮುಂದೆ ಹೋಯಿತು. ಟಿಕೆಟ್ ಚಕ್ಕಿಂಗ್‌ಗೆ ಅಧಿಕಾರಿ ಬಂದ. ಈ ರೈತ ಟಿಕೆಟ್ ನೀಡಿದ್ದೇ ತಡ. ನೀವ್ಯಾಕೆ ಈ ರೈಲಲ್ಲಿ ಬಂದದ್ದು ..ಇಳೀರಿ..ಇಳೀರಿ.. ಇಲ್ಲಿಂದ 45 ರುಪಾಯಿ ಕೊಟ್ಟು ಬಸ್ಸು ಏರಿ ಅಲ್ಲಿಗೇ ಹೋಗಿ ...ಇನ್ನೊಂದು ರೈಲಲ್ಲಿ ಬನ್ನಿ ಎಂದು ಗದರಿಸತೊಡಗಿದ. ಕಂಗಾಲಾದ ರೈತ ಹೇಳಿದ ನೋಡಿ ಸ್ವಾಮಿ ನಾನು ಟಿಕೆಟ್ ಮಾಡಿದ್ದೇನೆ. ನಂಗೊತ್ತಿಲ್ಲ ಯಾರೋ ಹೇಳಿದ್ರು ಇದರಲ್ಲಿ ಹೋಗಿ ಅಂತ. ಇನ್ನು ನನ್ನಲ್ಲಿ ಇರುವುದು 20 ರುಪಾಯಿ ನಾನು ಹೇಗೆ ಹೋಗಲಿ ಅಂತ ಕೇಳಿದ. ಆದರೆ ರೈಲು ಅಧಿಕಾರಿ ಕೇಳಲೇ ಇಲ್ಲ. ಆಗ ಜನ ಸೇರಿದರು. ಆದರೂ ರೈಲು ಅಧಿಕಾರಿ ಕೇಳಲೇ ಇಲ್ಲ. ಅಂತೂ 50 ರುಪಾಯಿ ದಂಡ ಕಟ್ಟಲೇ ಬೇಕಾಯಿತು. ಅದನ್ನು ಯಾರೋ ಒಬ್ಬರು ಕೊಟ್ಟರು. ಅಲ್ಲಿಗೆ ಪ್ರಕರಣ ಸುಖಾಂತ್ಯ ಕಂಡಿತು. ಆದರೆ ವಿಷಯ ಅದಲ್ಲ..

ಈ ದೇಶ ರೈತನಿಗಾಗಿ ಹಲವಾರು ಯೋಜನೆಗಳನ್ನು ಹಾಕಿಕೊಂಡಿದೆ ...

ಈ ರಾಜ್ಯದಲ್ಲಿ ರೈತ ಗೀತೆ ಬಂದಿದೆ .. ನೇಗಿಲ ಯೋಗಿಯ ನೋಡಲ್ಲಿ ಅನುರಣಿಸುತ್ತಿದೆ...

ಶೇಕಡಾ 3 ರ ದರದಲ್ಲಿ ಸಾಲವಿದೆ.. ಉಚಿತ ವಿದ್ಯುತ್ ಇದೆ . . .

ಸಾವಯವ ಕೃಷಿಗೆ ಇನ್ನೂ ಸವಲತ್ತಿದೆ....

..... ಹೀಗೇ ಒಂದಲ್ಲ ಹತ್ತಾರು ಯೋಜನೆಗಳು ಸರಕಾರಗಳು ರೈತರಿಗಾಗಿ ಹಾಕಿಕೊಳ್ಳುತ್ತಿದೆ.
ಯಾಕಾಗಿ...?. ಪ್ರಚಾರಕ್ಕಂತೂ ಅಲ್ಲ. ಓಟಿಗಾಗಿಯೂ ಇರಬಹುದು. ಆಧರೆ ಅದಕ್ಕಿಂತಲೂ ಹೆಚ್ಚು ಈ ದೇಶದ ಅನ್ನದಾತ ಆತ.ಒಂದು ವೇಳೆ ಆತ ಮಾರಾಟವನ್ನು ನಿಲ್ಲಿಸಿ ಸ್ವಂತಕ್ಕಾಗಿ ಮಾತ್ರವೇ ಅಕ್ಕಿ ತಯಾರಿಸಿದ ಎಂದು ಇಟ್ಟುಕೊಳ್ಳಿ ದೇಶದ ಸ್ಥಿತಿ ಏನಾದೀತು..? ಒಂದು ಕ್ಷಣ ಯೋಚಿಸಿ..? ಹಾಗಿದ್ದರೂ ಈ ಅಧಿಕಾರಿಗೆ ಕೊಂಚವಾದರೂ ಮಾನವೀಯತೆ ಬೇಡವೇ ಎಂಬುದು ಒಂದು ಪ್ರಶ್ನೆ. ಸರಕಾರ ನಿಜಕ್ಕೂ ರೈತನ ಪ್ರಯಾಣಕ್ಕೆ ವಿಶೇಷವಾದ ವ್ಯವಸ್ಥೆ ಮಾಡಲಿ. ಎಲ್ಲಾ ಯೋಜನೆಗಳಂತೆ ಇದೂ ಕೂಡಾ ಆತನಿಗೆ ಸಿಗಲಿ. ಅಲ್ಲಿ ಅನಗತ್ಯವಾಗಿ ಮಂತ್ರಿಗಳ ಪ್ರಯಾಣಕ್ಕೆ ಖರ್ಚು ಮಾಡುವ ಸರಕಾರ ನೇಗಿಲಯೋಗಿಗೆ ನೀಡಲಿ.ಅಥವಾ ವರ್ಷಕ್ಕೆ ಒಂದಿಷ್ಟು ಉಚಿತ ಪ್ರಯಾಣ ವ್ಯವಸ್ಥೆ ಮಾಡಲಿ.ಅದು ಬಿಟ್ಟು ಏನೂ ಅರಿಯದ ಟಿಕೆಟ್ ಪಡೆದಿದ್ದ ಆ ರೈತನ ಮೇಲೆ ದಂಡ ಕಟ್ಟು ಎಂದು ಹೇಳುವ ಆ ಅಧಿಕಾರಿಗೆ ಒಂದು ದಿನದ ಅನ್ನದ ಹಿಂದಿನ ಕಷ್ಠದ ಅರಿವು ಆಗಬೇಕು. ಆತನಿಗೆ 20 - 25 ರುಪಾಯಿಗೆ ಅಕ್ಕಿ ಸಿಗುತ್ತಲ್ಲಾ ಅದರ ಹಿಂದಿರುವ ದುಡಿಮೆ ಆತನಿಗೆ ಅರಿವಿಲ್ಲ. ತನಿಗೆ ಏನಿದ್ದರೂ ಇಲ್ಲಿ ರೈಲಲ್ಲಿ ಹೋಗಿ 20 - 25 ಸಾವಿರ ಎಣಿಸಿಯೇ ಗೊತ್ತು ವಿನಹ: ಒಂದು ತುತ್ತು ಅನ್ನದ ಹಿಂದಿರುವ ಕನಿಷ್ಠ ಗೊತ್ತಿಲ್ಲ. ಹಾಗಾಗಿ ಆತ ರೈತನಿಗೆ ದಂಡ ಕಟ್ಟಲು ಹೇಳಿದ್ದು.. . .

ಬಿಡಿ ಒಂದು ತುತ್ತು ಅನ್ನದ ಹಿಂದೆ ಎಷ್ಟು ಕಷ್ಟವಿದೆ ಎಂದು ಒಂದು ಕ್ಷಣ ಯೋಚಿಸಿನೋಡಿ. ಆದರೂ ನಾವು ಕೊಡುವುದು 20 - 27 ರುಪಾಯಿ. ಅದಲ್ಲ ಈ ಬೆಲೆ ಇನ್ನೂ ಏರಲಿದೆಯಂತೆ. ಏಕೆಂದರೆ ರೈತರ ಸಮಸ್ಯೆ ಕಡಿಮೆಯಾಗುತ್ತಿದೆ. ಒಂದು ಸಮೀಕ್ಷೆಯ ಪ್ರಕಾರ ವರ್ಷದಿಂದ ವರ್ಷಕ್ಕೆ ಅಕ್ಕಿಯ ಉತ್ಪಾದನೆ ಕಡಿಮೆಯಾಗುತ್ತಿದೆ. ಹೀಗೆ ಮುಂದುವರಿದರೆ 2050 ರ ವೇಳೆಗೆ ಆಹಾರದ ಸಮಸ್ಯೆ ಎದುರಾಗಲಿದೆ.ಇದಕ್ಕಾಗಿ ಈಗಲೇ ಕ್ರಮ ಕೈಗೊಳ್ಳದಿದ್ದಲ್ಲಿ ಭಾರೀ ಸಮಸ್ಯೆ ಎದುರಿಸಬೇಕಾದೀತು ಎಂದು ವರದಿ ಹೇಳಿದೆ. ಅದು ಬಿಡಿ ಈ ಬಾರಿ ಪ್ರಕೃತಿ ಮುನಿದ ಪರಿಣಾಮವಾಗಿ ಬಿಹಾರ, ಉತ್ತರಪ್ರದೇಶ , ಅಸ್ಸಾಂ, ಸೇರಿದಂತೆ ರಾಜ್ಯದ ವಿವಿದೆಡೆ ಭತ್ತದ ಉತ್ಪಾದನೆ ಶೇಕಡಾ 15 ರಷ್ಟು ಕುಸಿಯುವ ಸಾಧ್ಯತೆ ಇದೆ. ಹೀಗಾಗಿ ಈ ೧೧೦ ಕೋಟಿ ಜನರ ಹೊಟ್ಟೆ ತುಂಬಿಸುವ ಚಿಂತೆ ಎದುರಾಗಲಿದೆ.

ಇದೆಲ್ಲದರ ನಡುವೆಯೇ ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಉಪನ್ಯಾಸ ನೀಡುತ್ತಿದ್ದವರೊಬ್ಬರು ಹೇಳುತ್ತಿದ್ದರು. ನಮ್ಮ ಹಿರಿಯರು ನಮಗೆ ಗದ್ದೆಗೆ ಇಳಿಯುದಕ್ಕೆ ಕಲಿಸಲಿಲ್ಲ ಕಂಪ್ಯೂಟರ್ ಗುಂಡಿಯನ್ನು ಅದುಮಲು ಹೇಳಿಕೊಟ್ಟರು ..., ನಮ್ಮ ಹಿರಿಯರು ಮನಗೆ ಮಣ್ಣಿನ ವಾಸನೆ ತೋರಿಸಿಲ್ಲ .. ,ನಮಗೆ ನಗರದ ವಾಸನೆ ತೋರಿಸಿದರು..., ಹೀಗಾಗಿ ಇಂದು ನಗರದಲ್ಲಿ ದಿಕ್ಕು ಕಾಣದಾದರೆ ಹಳ್ಳಿಗೆ ಬರಲೂ ಆಗದೆ ಸಂದಿಗ್ದ ಪರಿಸ್ಥಿತಿಯಲ್ಲಿ ನಾವಿದ್ದೇವೆ ಎನ್ನುತ್ತಾ.. ಇಂದಿನ ಆರ್ಥಿಕ ಸಂಕಷ್ಠದಲ್ಲಿ ನಗರದಲ್ಲಿ ಉದ್ಯೋಗ ಕಳೆದುಕೊಂಡರೆ ಹಳ್ಳಿಯಲ್ಲಿ ಬದುಕಲಾದ ಸ್ಥಿತಿ ಬಂದಿದೆ ಎಂದು ಅವರು ಹೇಳುತ್ತಿದ್ದಾಗ ಹಿಂದೆ ಕುಳಿತಿದ್ದ ಅಜ್ಜ ಹೌದು ಎಂದು ತಲೆದೂಗುತ್ತಿದ್ದರು. ಇನ್ನೊಬ್ಬರು ಹೇಳುತ್ತಿದ್ದರು ಕೃಷಿ ಇಂದು ಯಾಂತ್ರೀಕರಣವಾದಾಗ ಮಾತ್ರಾ ಕೃಷಿ , ರೈತ ಉಳಿದುಕೊಳ್ಳಲು ಸಾಧ್ಯ. ಆದರೆ ಇಂದು ನ್ಯಾನೋ ಕಾರು ಬರುತ್ತದೆ ಎಂದಾಗ ಭಾರೀ ಪ್ರಚಾರ ಸಿಗುತ್ತದೆ. ರೈತರೂ ಸೇರಿ ಎಲ್ಲರೂ ಕ್ಯೂನಲಿ ನಿಂತು ಕಾರಿಗೆ ಬುಕ್ ಮಾಡುತ್ತಾರೆ. ಆದರೆ ಕೃಷಿ ಉಪಕರಣವೊಂದು ಕಂಡುಹುಡುಕಿದರೆ ಅದನ್ನು ಕೇಳುವವರೇ ಇರುವುದಿಲ್ಲ. ಬುಕ್ ಮಾಡಿ ಎಂದರೆ ಜನರೇ ಬರುವುದಿಲ್ಲ ಎನ್ನುತ್ತಾರೆ.

ಇವೆರಡು ಸಂಗತಿಗಳ ನಡುವೆ ಗಿರಕಿಹೊಡೆಯುತ್ತಾ ಮುಂದೆ ಸಾಗಿದರೆ ಸರಕಾರ ಅನೇಕ ಯೋಜನೆಗಳನ್ನು ರೈತರಿಗಾಗಿ ಕೊಡುತ್ತದೆ. ಆದರೆ ಯಾವುದೂ ಆತನಿಗೆ ಸರಿಯಾಗಿ ತಲಪುವುದಿಲ್ಲ. ಆತನಿಗೆ ಯಾವಾಗಲೂ ಹೀಗೆಯೇ ಬಸ್ಸಲ್ಲಿ , ರೈಲಲ್ಲಿ ದಂಡ ಕಟ್ಟಿಯೇ ಪ್ರಯಾಣಿಸಬೇಕು.... ಸಾಲ ಮಾಡಿಯೇ ಸಾಲ ತೀರಿಸಬೇಕು... ತನಗೆ ನಷ್ಠ ಮಾಡಿಯೇ ಜನರ ಹೊಟ್ಟೆ ತುಂಬಿಸಬೇಕು..... ಆದರೂ ನೇಗಿಲಯೋಗಿಯ ನೋಡಲ್ಲಿ .. . .. . ..!

03 ಸೆಪ್ಟೆಂಬರ್ 2009

ಇದು ಪಶ್ಚಿಮದ ಸ್ವರ್ಗ . . . .




ಇಲ್ಲಿ ಬೆಟ್ಟಗಳು ಅಣಕಿಸುತ್ತವೆ , ನಾನೇರಿದೆತ್ತರಕ್ಕೆ ನೀನೇರಬಲ್ಲೆಯಾ ..? ಜಲಪಾತಗಳು ಹೇಳುತ್ತವೆ ನೀನಿಲ್ಲಿಗೆ ಬರಬಲ್ಲೆಯಾ..? ಮಂಜು ಕೇಳುತ್ತದೆ ನೀ ನನ್ನೊಂದಿಗೆ ಬರಬಲ್ಲೆಯಾ..?.ಹೀಗೆ ಇಲ್ಲಿ ಎಲ್ಲವೂ ಸವಾಲುಗಳೇ..ಪ್ರಶ್ನೆಗಳೇ ಅಂಟಿಕೊಂಡಿವೆ.. ಇಂತಹ ಸವಾಲುಗಳನ್ನು ದಾಟುತ್ತಾ ನಮ್ಮೊಳಗಿನ ಎಲ್ಲಾ ಇಗೋಗಳಿಗೆ ಉತ್ತರ ಹುಡುಕುವ ಈ ದಾರಿ ಯಾವುದಯ್ಯಾ ಅಂತ ಯೋಚಿಸುತ್ತಿದ್ದರೆ, ಅದಕ್ಕೆಲ್ಲಾ ಇಲ್ಲಿದೆ ದಾರಿ. ರೋಚಕತೆಯ ದಾರಿಯಿದು .. ಇದು ಕಾಣುವ ಸ್ವರ್ಗದ ದಾರಿ...

ಅಬ್ಬಾ ಈಗ ವನವಾಸ ಮುಗಿದಿದೆ. ಹಾಗಾಗಿ ನಾವೀಗ ವನದ ನಡುವಿನ ಸೀಳು ಹಾದಿಯಲ್ಲಿ ಗಿರಿಶಿಖರಗಳನ್ನು ಸೀಳಿಕೊಂಡು ಪ್ರವಾಸ ಮಾಡಬಹುದಾಗಿದೆ.ಅಂದರೆ ಮಂಗಳೂರಿನಿಂದ ಬೆಂಗಳೂರಿಗೆ ಹಗಲು ವೇಳೆ ಪ್ರಯಾಣಿಸಬಹುದಾಗಿದೆ.ಇಲ್ಲಿ ಗಗನವೇ ಹತ್ತಿರ ಬಂದಂತೆ . . ದೂರದ ಬೆಟ್ಟದ ತುಂಬೆಲ್ಲಾ ಮಂಜು ಮುತ್ತಿಕ್ಕಿದಂತೆ . . ಹಾಲ್ನೊರೆಯಂತೆ ಧುಮ್ಮುಕಿ ಹರಿಯುವ ಜಲಪಾತ... ಹಚ್ಚ ಹಸಿರಿನ ಸೀರೆಯನ್ನುಟ್ಟ ಆ ಪ್ರಕೃತಿ ಸೊಬಗು . . ಹೌದು ಈ ಸೊಬಗನ್ನು ವರ್ಣನೆ ಮಾಡುತ್ತಾ ಹೋದರೆ ದೂರದ ಅದೆಲ್ಲೋ ಇರುವ ಊಟಿ , ಕೊಡೈಕಾನಲ್‌ನಂತಹ ಪ್ರದೇಶದ ವರ್ಣನೆಯಂತೆ ಭಾಸವಾಗುತ್ತದೆ. ಅಲ್ಲವೇ ಅಲ್ಲ. ನಮ್ಮದೇ ಕರುನಾಡಿನ ಹೆಮ್ಮೆಯ ಪ್ರದೇಶದ ಅದ್ಭುತ ಮೈಮಾಟದ ಸಿರಿಬಾಗಿಲಿನಿಂದ ಎಡಕುಮೇರಿ - ಸಕಲೇಶಪುರದವರೆಗಿನ ಪ್ರದೇಶ. ಈ ಸುಂದರ ಸೊಬಗನ್ನು ನೋಡುವುದಕ್ಕೆ ನಮಗೆ 14 ವರ್ಷ ಬೇಕಾದುವಾ..? ಎನ್ನುವ ಪ್ರಶ್ನೆ ಮನದೊಳಗೆ ಮೂಡಿಯೇ ಮೂಡುತ್ತೆ . ಹೌದು ಈಗ ಹಗಲು ರೈಲು ಓಡಾಟ ಶುರುವಾಗಿದೆ.

ಸುಬ್ರಹ್ಮಣ್ಯದಿಂದ ಸಕಲೇಶಪುರವರೆಗಿನ ಸುಮಾರು 2 ರಿಂದ 3 ಗಂಟೆಯ ಈ ಪ್ರಯಾಣ ಅವಿಸ್ಮರಣೀಯ. ಪ್ರಕೃತಿ ಪ್ರಿಯರ ಸ್ವರ್ಗ.ಅಲ್ಲಿ ಸಾಗುತ್ತಿದ್ದಂತೆಯೇ ಉದ್ಗಾರಗಳು ಕೇಳತೊಡಗುತ್ತದೆ.. ಅದೋ . . ಅಲ್ಲಿ ಗಿರಿ ಶಿಖರಗಳಿಗೆ ಮುತ್ತಿಕ್ಕುವ ಹಿಮರಾಶಿಗಳು , ಸ್ವಲ್ಪ ಆಚೆ ನೋಡಿದರೆ ಗಗನಕ್ಕೆ ಚುಂಬಿಸ ಹೊರಟ ಹಸಿರು ಹಾಸಿದ ಶಿಖರಗಳು .. ಇಲ್ಲಿ ನೋಡಿ ಹಾಲ್ನೊರೆಯಂತೆ ಧುಮ್ಮಿಕ್ಕುವ ಜಲಪಾತ.. ಅಗೋ ಕೆಳಗಡೆ ತಿರುಗಿ ... ಭಾರೀ ಪ್ರಪಾತ... ಅಷ್ಟೇ ಅಲ್ಲ ಆಗಾಗ ಕೈಗೆ ಸಿಕ್ಕು ಮಾಯವಾಗಿವ ಬೆಳ್ಳಿ ಮೋಡಗಳು.. ಅಬ್ಬಾ ಅದೇನು ಸುರಂಗದೊಳಗೆ ನುಸುಳಿ ಹೊರಡುವ ಬೋಗಿಗಳು .... ಅಯ್ಯೋ.. ಸಮಯ ಮುಗಿದೇ ಹೋಯಿತು. ಇಲ್ಲ ಸಾಲದು.. ಇನ್ನೂ ಈ ರೈಲು ಇಲ್ಲೇ ಸಾಗಲಿ ಎಂದು ಭಾವಿಸುವಷ್ಟರಲ್ಲೇ ಅದು ಸಕಲೇಶಪುರ ತಲಪಿ ಬಿಡುತ್ತದೆ. ಈ ಅನುಭವನ್ನು ಪ್ರಯಾಣಿಕರು ಹೇಳುವುದು ಹೀಗೆ .

ಹಲವು ವರ್ಷದ ಹೋರಾಟದ ಬಳಿಕ ಮತ್ತೆ ಹಗಲು ರೈಲು ಓಡಾಟ ಕಂಡಿದೆ. ಈಗ ಪ್ರಕೃತಿ ಪ್ರಿಯರಿಗೆ ಸಂತಸದ ಹೊನಲೇ ಹರಿದಿದೆ. ಮಂಗಳೂರಿನ ಅಡಿಕೆ . ಗದ್ದೆಗಳ ಸಂದಿನಿಂದ ಹೊರಡುವ ಈ ರೈಲು ಹಾಗೆಯೇ ಸಾಗುತ್ತಾ ಸುಬ್ರಹ್ಮಣ್ಯ , ಧರ್ಮಸ್ಥಳಕ್ಕೆ ಬಂದ ಭಕ್ತಾದಿಗಳನ್ನು ಹೊತ್ತೊಯ್ಯುತ್ತಾ ಸಾಗಿ ಸಿರಿಬಾಗಿಲು, ಎಡಕುಮೇರಿಯತ್ತ ಸಾಗುವಾಗ ಪ್ರಕೃತಿಯ ರಮಣೀಯತೆ ಗೋಚರಿಸಲು ತೊಡಗುತ್ತದೆ.ಗುಪ್ತಗಾಮಿನಿಯಾಗಿ ಹರಿಯುವ ನದಿಗಳ ಭೋರ್ಗರೆತ , ಕಿವಿಕಡಚಿಕ್ಕುವ ರೈಲು ಹಾರ್ನ್‌ಗೆ ಸಾತ್ ನೀಡುವ ಜೀರುಂಡೆಗಳ ಸದ್ದು , ಹಾಗೆಯೇ ಸುರಂಗದೊಳಗೆ ಪ್ರಯಾಣಿಸುವ ವೇಳೆ ಪ್ರಯಾಣಿಕರ ಸಂತಸದ ಕಿರುಚಾಟ ಹೀಗೆ ನಿಗೂಢವಾಗಿ ಕಾನನವನ್ನು ಸೀಳುತ್ತಾ ಸಾಗುವ ರೈಲಿನ 12 ಬೋಗಿಗಳು ಎಡಕುಮೇರಿ ನಂತರ ಅಲ್ಲಿನ ಕಾಫಿ ತೋಟ , ಗದ್ದೆಗಳ ಸವಿಯನ್ನು ಉಣ ಬಡಿಸುತ್ತಾ ಸಕಲೇಶಪುರ ತಲಪುವ ವೇಳೆ 57 ಸುರಂಗಗಳು , 110 ತಿರುವುಗಳು , ಹಾಗೂ 241 ಸೇತುವೆಗಳನ್ನು ದಾಟಿ ಬಂದಿರುತ್ತದೆ. ಈ ಅನುಭವವನ್ನು ಪ್ರತಿಯೊಬ್ಬ ಕನ್ನಡಿಗನೂ ಅನುಭವಿಸಲೇ ಬೇಕು.





ಹಾಗೆ ನೋಡಿದರೆ ಮಂಗಳೂರಿಗೆ ಮೊದಲು 1907 ರ ಸುಮಾರಿಗೆ 6 ಬೋಗಿಗಳ ಉಗಿಬಂಡಿ ಆರಂಭವಾಗಿತ್ತು. ಮಂಗಳೂರು - ಬೆಂಗಳೂರು ರೈಲನ್ನು ಗಮನಿಸಿದರೆ 1962 ರಲ್ಲಿ ಮೀಟರ್ ಗೇಜ್ ಕಾರ್ಯ ಆರಂಭಗೊಂಡು ,1979 ರಲ್ಲಿ ಮಂಗಳೂರು- ಬೆಂಗಳೂರು ನಡುವೆ ಮೀಟರ್‌ಗೇಜ್ ರೈಲು ಸಂಚಾರ ಆರಂಭವಾಗಿ 1996 ರಿಂದ ಗೇಜ್ ಪರಿವರ್ತನೆಯ ಕಾರಣಕ್ಕಾಗಿ ಬಂದ್ ಆಗಿದ್ದ ರೈಲು ಹಗಲು ರೈಲು ನಂತರ 2003 ರಲ್ಲಿ ಬ್ರಾಡ್ ಗೇಜ್ ಕಾರ್ಯ ಮುಗಿದಿದ್ದರೂ ಬೆಂಗಳೂರಿಗೆ ರೈಲು ಸಂಚಾರ ಆರಂಭವಾಗಿರಲಿಲ್ಲ. ಆದರೆ 2007 ರಲ್ಲಿ ರಾತ್ರಿ ವೇಳೆ ರೈಲು ಆರಂಭಗೊಂಡಿದ್ದರೂ ಹಗಲು ರೈಲಿನ ಬೇಡಿಕೆ ಹಾಗೆಯೇ ಉಳಿದುಕೊಂಡಿತ್ತು. ಈಗ ವನವಾಸ ಮುಗಿದಿದೆ.ಕನಸೂ ಈಡೇರಿದೆ. ಆದರೆ ಸದ್ಯ ವಾರಕ್ಕೆ 3 ದಿನ ಮಾತ್ರಾ. ಅದಲ್ಲ ವಾರದ ಎಲ್ಲಾ ದಿನ ಓಡಾಡ ಬೇಕು, ಕರ್ನಾಟಕದ ಹೆಮ್ಮೆಯ ಈ ಸುಂದರ ಪ್ರಕೃತಿಯ ಸೊಬಗು ಎಲ್ಲರಿಗೂ ಕಾಣಸಿಗಲು ಪ್ರತೀ ದಿನ ಓಡಾಡಬೇಕು ಎಂಬದು ಎಲ್ಲರ ಬೇಡಿಕೆಯಾಗಿದೆ.


ಇಲ್ಲಿನ ರೈಲು ಯಾನವು ಉಳಿದ ಎಲ್ಲಾ ರೈಲು ಯಾನಕ್ಕಿಂತ ಭಿನ್ನ. ಏಕೆಂದರೆ ಪ್ರಕೃತಿಯ ರುದ್ರತೆಯನ್ನು ಪ್ರದರ್ಶಿಸುತ್ತಾ ಸುಮಾರು 1.5 ಕಿ ಮೀ ದೂರದ ಸುರಂಗದ ಒಳಹೊಕ್ಕು ಹೊರಬರುತ್ತದೆ. ಅತ್ಯಂತ ಕಡಿದಾದ ಬಂಡೆಗಳನ್ನು ಸೀಳಿಹೋಗಿರುವ ಇಲ್ಲಿನ ರೈಲು ಹಳಿ ನಿರ್ಮಾಣ ಕಾರ್ಯವೇ ಎಲ್ಲರಿಗೆ ಅಚ್ಚರಿಗೆ ತರುವಂತಾಗುತ್ತದೆ. ಇಂತಹ ಗಿರಿಶಿಖರದ ಮಧ್ಯೆಯೇ ರೈಲು ಓಡಾಡುತ್ತಿದೆ. ಈ ಘಾಟಿ ಪ್ರದೇಶದಲ್ಲಿ ರೈಲು ಸುಮಾರು 15 ರಿಂದ 20 ಕಿಲೋಮೀಟರ್ ವೇಗದಲ್ಲಷ್ಟೇ ಸಾಗುತ್ತದೆ, ಮಾತ್ರರವಲ್ಲ ಅಲ್ಲಿಲ್ಲಿ ನಿಲ್ಲಿಸುತ್ತಾ ಭದ್ರತೆಯನ್ನು ಪರಿಶೀಲಿಸುತ್ತಾ ಸಾಗುತ್ತದೆ. ಹೀಗಾಗಿ ಇಲ್ಲಿನ ರೋಚಕತೆ ಎಲ್ಲರಿಗೂ ಖುಷಿಕೊಡುತ್ತದೆ.


ಒಟ್ಟಿನಲ್ಲಿ ಕವಿ ಅಂದು ಹೇಳಿದ್ದರು ಜೀವನದಲ್ಲಿ ಒಮ್ಮೆಯಾದರೂ ಜೋಗದ ಗುಂಡಿಯನ್ನು ನೋಡಬೇಕು ಎಂದು. ಇದನ್ನೇ ಕೊಂಚ ಬದಲಾಯಿಸಿ ಜೀವನದಲ್ಲಿ ಒಮ್ಮೆಯಾದರೂ ಕನಾಟಕದ ಈ ಸೊಬಗನ್ನು ನೋಡಲೇಬೇಕು. ರೈಲು ಕೂಡಾ ಅದನ್ನೇ ಹೇಳುತ್ತಾ ಸಾಗಿದರೆ ಬೆಟ್ಟಗಳು ನಾನೇರಿದೆತ್ತರಕ್ಕೆ ನೀನೇರಬಲ್ಲೇಯಾ ಎಂದು ಮತ್ತೂ ಅಣಕಿಸುತ್ತಲೇ ಇರುತ್ತವೆ. ಇಂತಹ ಸವಾಲುಗಳಿಗೆ ಉತ್ತರ ಹುಡುಕ ಹೊರಟ ತಂತ್ರಜ್ಞರಿಗೆ ಹ್ಯಾಟ್ಸ್ ಆಫ್ ಹೇಳಲೇಬೇಕು. ಅದಕ್ಕೂ ಮುನ್ನ ನೀವೂ ಒಮ್ಮೆ ಈ ರೈಲ್ಲಿ ಹೋಗಿ ಬನ್ನಿ ಹಸಿರಿನ ಗಿರಿಗಳ ಮಾಲೆಯನ್ನು ತೊಟ್ಟಿರುವ ಪ್ರಕೃತಿಯನ್ನೊಮ್ಮೆ ನೋಡಿ ಬನ್ನಿ.....