14 ಆಗಸ್ಟ್ 2010

“ಅನ್ನ”ದ “ಸ್ವಾತಂತ್ರ್ಯ”ಕ್ಕಾಗಿ ಹೋರಾಟ . . .!!

ಮೊನ್ನೆ ಒಬ್ರು ಕೇಳಿದ್ರು.ಒಬ್ಬ ಮನುಷ್ಯನಿಗೆ ದಿನಕ್ಕೆ ಎಷ್ಟು ಕೇಜಿ ಅಕ್ಕಿ ಬೇಕು ಅಂತ. .?. ಏ. . .!!, ಅದೇನು ಒಂದರ್ಧ ಕೇಜಿ ದಿನಕ್ಕೆ, ಅಂತ ನಾವು ಅಂದಾಜು ಲೆಕ್ಕ ಬಿಟ್ಟೆವು.ಆದ್ರೆ ಅವ್ರು ಒಂದು ಲೆಕ್ಕ ಹೇಳಿದ್ರು.ಒಬ್ಬ ವ್ಯಕ್ತಿ ಅರ್ಧ ಕೇಜಿ ದಿನಕ್ಕೆ ಅಕ್ಕಿ ಬಳಸಿದ್ರೆ ತಿಂಗಳಿಗೆ ಎಷ್ಟು . . ?.ಸುಮಾರು 15 ಕೆಜಿ, ವರ್ಷಕ್ಕೆ ಎಷ್ಟಾಯಿತು. . ? ಸುಮಾರು 180 ಕೆಜಿ, ಅಂದಾಜು ಆತ 60 ವರ್ಷ ಬದುಕಿದ್ರೆ ಎಷ್ಟು ಬೇಕು . .?, ಸುಮಾರು 10,800 ಕೆಜಿ. . . !!. ಹೀಗೇ ಸಾಗಿದ ಅವರ ಲೆಕ್ಕ ನಮ್ಮ ಕುಟುಂಬ , ತಾಲೂಕು, ರಾಜ್ಯಕ್ಕೆ ಎಷ್ಟು ಅಕ್ಕಿ ಬೇಕು ದಿನಕ್ಕೆ ಅಂತ ಪ್ರಶ್ನೆ ಸಾಗಿತು. ಇಷ್ಟಲ್ಲಾ ಅಕ್ಕಿ ಬೇಕಾಗೋವಾಗ ಇಲ್ಲಿನ ಬೆಳೆ ಎಷ್ಟು. . .?. ನಿಜ ಅಲ್ವಾ ನಮ್ಮಲ್ಲಿ ಅನ್ನದ ಸ್ವಾತಂತ್ರ್ಯ ಇದೆಯಾ. . ?. ಅದನ್ನೇ ಯೋಚನೆ ಮಾಡ್ತಿರಬೇಕಾದ್ರೆ ಸುಳ್ಯದಲ್ಲೊಂದು ಕಾರ್ಯಕ್ರಮ ಹಮ್ಮಿಕೊಂಡಿದ್ರು.


ಅಲ್ಲಿ ಇದ್ದದ್ದು ಲೆಕ್ಕ ಮಾಡಿ 132 ಜನ.ಅವರ ಹೋರಾಟ ಅದೇ ಅನ್ನದ ಸ್ವಾತಂತ್ರ್ಯಕ್ಕಾಗಿ. ಹೋರಾಟ ಅಂದಾಗ ಅಲ್ಲೇನು ಉಪವಾಸ, ಸತ್ಯಾಗ್ರಹ , ಪ್ರತಿಭಟನೆ ಇದ್ದಿರಲೇ ಇಲ್ಲ.ಇದ್ದದ್ದು ಒಂದಷ್ಟು ಮನಸ್ಸು , ಇನ್ನೊಂದು ಚೂರು ಉತ್ಸಾಹ ಮಾತ್ರಾ. ಈ ಹೋರಾಟದಲ್ಲಿ ಅನ್ನದಾತರ ಜೊತೆ ಕೈಜೋಡಿಸಿದವರು ಹವಾನಿಯಂತ್ರಿತ ಕೊಠಡಿಯಲ್ಲಿ ದುಡಿಯುವ ದೇಹಗಳು. ಇವರಿಗೆಲ್ಲಾ ಲೀಡರ್ ಆಗಿದ್ದುದ್ದು ಒಬ್ಬ ಆಧ್ಯಾತ್ಮ ಗುರು.ಅವರು ನಿತ್ಯಾನಂದ.





ಅಂದು ದೇಶಕ್ಕೆ ಸ್ವಾತಂತ್ರ್ಯ ಬೇಕು ಅಂತ ಸಾವಿರಾರು ಮಂದಿ ಹೋರಾಟ ಮಾಡಿದ್ರು , ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು. ಇಂದು ಅದೇ ಕೈಗಳು ಅನ್ನದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸುತ್ತಿವೆ. ಅದಕ್ಕೇನು ದೊಡ್ಡ ಪ್ರಚಾರವಿಲ್ಲ. ಅದು ಪ್ರಚಾರಕ್ಕೆ ಮಾಡಿದ ಕಾರ್ಯಕ್ರಮವೂ ಅಲ್ಲ. ಆದರೆ ಅದು ಅನಿವಾರ್ಯದ ಹೋರಾಟ. ಅನ್ನದ ದಾಸ್ಯ ಬಂದರೆ ಈ ದೇಶದ ಕತೆ ಮುಗಿಯಿತು ಎನ್ನುವುದು ಈ ಕಾರ್ಯಕ್ರಮದ ಒಟ್ಟಾರೆ ಸಂದೇಶವಾಗಿತ್ತು.


ಅದು ಸುಳ್ಯದ ದೊಡ್ಡ ಗದ್ದೆ.ಇಲ್ಲಿನ ಚನ್ನಕೇಶವ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ.ಹರಪ್ರಸಾದ ಅವರ ಭೂಮಿ.ಆದರೆ ಕಳೆದ ಕೆಲವು ವರ್ಷಗಳಿಂದ ನಾನಾ ಕಾರಣಗಳಿಂದ ಇಲ್ಲಿ ಬೇಸಾಯ ನಡೀತಾ ಇರಲಿಲ್ಲ.ಈ ಗದ್ದೆ ಸುಮಾರು 10 ಎಕ್ರೆ ವಿಸ್ತಾರವಾಗಿದೆ.ಕಳೆದ ಕೆಲವು ವರ್ಷಳಿಂದ ಹಾಗೇ ಸುಮ್ಮನೆ ಕೃಷಿ ಇಲ್ಲದೆ ಪಾಳು ಬಿದ್ದಿರುವುದನ್ನು ಇಲ್ಲೇ ಸಮೀಪದ ಅರಂಬೂರಿನ ತ್ರೈಂಬಕ ಆಶ್ರಮದ ಗುರು ನಿತ್ಯಾನಂದ ಅವರ ಕಿವಿಗೂ ಬಿತ್ತು. ಮೂಲತ: ಆಂದ್ರ ಪ್ರದೇಶದ ಇವರು ತಮ್ಮ ಯೋಜನೆಗಳ ಮೂಲಕ ನಾನಾ ಕಡೆ ಹಲವಾರು ಭಕ್ತರನ್ನು ಹೊಂದಿದ್ದರು. ಕರ್ನಾಟಕದಲ್ಲಿ ಚಿಕ್ಕಮಗಳೂರು , ಮೂಲ್ಕಿ , ಸುಳ್ಯದಲ್ಲಿ ಆಶ್ರಮ ಇದೆ. ಗುಜರಾತ್‌ನಲ್ಲಿ ಕಾಲಭೈರವೇಶ್ವರ ಟ್ರಸ್ಟ್ ಎಂಬ ಪ್ರದಾನ ಕಚೇರಿಯೂ ಇದೆ.ಇದೆಲ್ಲದರ ಪ್ರಮುಖ ರುವಾರಿ ಈ ನಿತ್ಯಾನಂದರು.ಈಗಾಗಲೇ ವಿವಿದ ರಾಜ್ಯಗಳಲ್ಲಿ ಅಲ್ಲಿನ ಮುಖ್ಯ ಆಹಾರ ಬೆಳೆಗಳಿಗೆ ಉತ್ತಜನ ನೀಡಿ ತಾವು ಕೂಡಾ ಸ್ವತ: ಉಳುಮೆ ಮಾಡಿ ಜನರನ್ನು ಆಹಾರ ಬೆಳೆಗಳನ್ನು ಬೆಳೆಯಲು ಪ್ರೋತ್ಸಾಹಿಸದವರೂ ಹೌದು.ಭಾರತದಾದ್ಯಂತ ಒಟ್ಟು 6000 ಎಕ್ರೆ ಪ್ರದೇಶದಲ್ಲಿ ಆಹಾರ ಬೆಳೆಗಳನ್ನು ಇವರು ಬೆಳೆಸುತ್ತಿದ್ದಾರೆ.4500 ಗೋವುಗಳನ್ನು ಸಾಕುತ್ತಿದ್ದಾರೆ.


ಇವರು ಸುಳ್ಯದಲ್ಲೂ ಕೃಷಿ ಮಾಡುವುದಕ್ಕೆ ಮುಂದಾದಾಗ ಹರಪ್ರಸಾದ ಮತ್ತು ಇತರ ಎಲ್ಲರೂ ಸಹಕರಿಸಿದರು.ಹಾಗಾಗಿ ಒಂದು ಆಂದೋಲನವೇ ಇಲ್ಲಿ ನಡೆಯಿತು.ಈ ನಿತ್ಯಾನಂದರಿಗೆ ಇಲ್ಲಿ ಬೆಳೆದ ಅಕ್ಕಿ ಬೇಕಾಗಿಲ್ಲ.ಅದೆಲ್ಲವೂ ಇಲ್ಲಿನ ಜನರಿಗೆ ಸೇರುತ್ತದೆ.ಆದರೆ ಹುಲ್ಲು ಮಾತ್ರಾ ಬೇಕಂತೆ.ಯಾಕೆಂದ್ರೆ ಅವರ ಗೋವುಗಳಿಗೆ ಊಟಕ್ಕೆ.ಅವರ ಪ್ರಕಾರ ಇಲ್ಲಿ 10 ಎಕ್ರೆಯಲ್ಲಿ ಬೆಳೆದ ಅಕ್ಕಿಯು 100 ಕುಟುಂಬಗಳಿಗೆ ಸಾಕಂತೆ. ಇಂದು ಎಲ್ಲಾ ಇದೆ ಅನ್ನದ ಸ್ವಾತಂತ್ರ್ಯ ಮಾತ್ರಾ ಇನ್ನೂ ಇಲ್ಲ ಎಂಬುದು ಇವರ ವಾದ.ಅನ್ನದ ದಾಸ್ಯ ಬಂದರೆ ದೇಶ ಸರ್ವನಾಶವಾಗುತ್ತದೆ ಎಂಬ ಕಾರಣಕ್ಕಾಗಿ ಈ ಜಾಗೃತಿ ಮಾಡಲಾಗುತ್ತಿದೆ ಎನ್ನುವ ನಿತ್ಯಾನಂದರು ಇದಕ್ಕಾಗಿ ತನ್ನ ಅನುಯಾಯಿಗಳನ್ನು ಬರಹೇಳುತ್ತಾರೆ.ಹಾಗಾಗಿ ಇಂಜಿನಿಯರ್ಗಳು , ಬ್ಯಾಂಕ್ ಉದ್ಯೋಗಿಗಳು ಎಲ್ಲರೂ ಗದ್ದೆಗೆ ಇಳಿದು ಅನ್ನದಾತರೊಂದಿಗೆ ಕೈಜೋಡಿಸುತ್ತಾರೆ.ಈ ಮೂಲಕ ಸೇವೆ ಎಂಬ ಯಜ್ಞ ನಡೆಯುತ್ತದೆ.





ನಿಜಕ್ಕೂ ನಿತ್ಯಾನಂದರು ಒಬ್ಬ ಸಮಾಜದ ಗುರು ಅಂತ ನನಗನ್ನಿಸುತ್ತದೆ.ಯಾಕೆಂದ್ರೆ ಇವರು ಥಿಯರಿಟಿಕಲ್ ಆಗಿಲ್ಲ , ಪ್ರಾಕ್ಟಿಕಲ್ ಮಾತ್ರಾ ಆಗಿದ್ದಾರೆ.ಯಾಕೆಂದ್ರೆ ಇಂದು ಅನೇಕ ಮಠಗಳು , ಕೆಲ ನಾಯಕರು ಬಾಯಲ್ಲಿ ಸ್ವದೇಶಿ . . ಸಾವಯವ , ನಮ್ಮ ಆಹಾರ ನಮಗೇ . . , ನಾವೇ ತಯಾರಕರು . . ನಾವೇ ಉತ್ಪಾದಕರು ಅಂತೆಲ್ಲಾ ಹೇಳುತ್ತಾರೆ.ಆದ್ರೆ ಕೃತಿ ರೂಪಕ್ಕೆ ಇಲ್ಲವೇ ಇಲ್ಲ.ಇಲ್ಲಿ ಹಾಗಲ್ಲ ಸ್ವತ: ನಿತ್ಯಾನಂದರೇ ಗದ್ದೆಗೆ ಇಳಿಯುತ್ತಾರೆ.ಅವರನ್ನು ಜನ ಸ್ವಾಮೀಜಿ ಅಂತಾರೆ ಆದ್ರೆ ನಿತ್ಯಾನಂದರು ಅಂತಾರೆ ನಾನು ಸ್ವಾಮಿಯಲ್ಲ , ಸಂಸಾರಿ ಅಂತಾರೆ.ನಾನೇ ಸ್ವತ: ಕೇಳಿದೆ ನಿಮ್ಮನ್ನು ಸ್ವಾಮಿ ಅಂತ ಕರಿಲಾ ಅಂದ್ರೆ . . ನೀವ್ ಏನ್ ಬೇಕಾದ್ರೂ ಕರೀರಿ, ನಂಗೇನು ಅಡ್ಡಿಯಿಲ್ಲ . . ಆದ್ರೆ ನಾನು ಮಾತ್ರಾ ನಾನೇ ಅಂತಾರೆ..!


ಒಟ್ಟಾರೆ ನೋಡಿದ್ರೆ ಇವತ್ತು ಈ ಆಂದೋಲನ ಅಗತ್ಯವಾಗಿದೆ.ನಮ್ಮೂರಲ್ಲೇ ನೋಡಿದ್ರೆ . . ಮೊನ್ನೆ ಗದ್ದೆ ಇದ್ದ ಜಾಗದಲ್ಲಿ ಇವತ್ತು ರಬ್ಬರ್ ಕಾಣಿಸುತ್ತಿದೆ. . ಮೊನ್ನೆ ಮೊನ್ನೆ ಅಡಿಕೆ ತೋಟ ಕಾಣಿಸುತ್ತಿತ್ತು.ಇಂದು ಅಲ್ಲೇ ಇನ್ನೊಂದು ಬೆಳೆ ಬಂದಿದೆ.ಎಲ್ಲೂ ಕೂಡಾ ಹೊಸದಾದ ಗದ್ದೆಗಳು ಇಲ್ವೇ ಇಲ್ಲ. ಅದು ಅಸಲಾಗೋದಿಲ್ಲ ಅನ್ನೋದು ಎಲ್ಲರ ಬಾಯ್ಲಲೂ ಇರೋ ಮಾತು.ಇನ್ಯಾವುದಾದರೂ ಲಾಭದಾಯಕ ಕೃಷಿ ಮಾಡಿ ಅಕ್ಕಿ ತಂದರಾಯಿತು ಅನ್ನೋದು ಎಲ್ಲರ ಅಭಿಪ್ರಾಯ.ಆದ್ರೆ ಹಸಿವಾಗುತ್ತೆ ಅಂತ ದುಡ್ಡನ್ನೋ , ಅಡಿಕೆಯನ್ನೋ , ರಬ್ಬರ್ ಅನ್ನೋ ತಿನ್ನೋದಕ್ಕೆ ಆಗೋಲ್ಲ ಅಲ್ವಾ. . ?.ಹಸಿದ ಹೊಟ್ಟೆಗೆ ಅನ್ನ , ಗೋಧಿ , ಜೋಳವೇ ಬೇಕಲ್ವಾ. .?. ಹಾಗಾಗಿ ಉಳಿದ ಬೆಳೆಗಳು ನಮ್ಮ ಆರ್ಥಿಕ ಸಾಮರ್ಥ್ಯಕ್ಕಾಗಿ , ಬಲಿಷ್ಠತೆಗಾಗಿ ಅದೂ ಇರಲಿ.ಅದರ ಜೊತೆಗೆ ಒಂದರ್ಧ ವರ್ಷಕ್ಕೆ ಬರೋವಷ್ಟು ಅಕ್ಕಿಯನ್ನು ನಾವೇ ಬೆಳೆದರೆ ಹೇಗೆ.. .? .


ನಮ್ಮಲ್ಲೂ ಹಾಗೆಯೇ , ನಮ್ಮ ಮನೆ ಜಮೀನಿನಲ್ಲಿ ಅಡಿಕೆ , ರಬ್ಬರ್ ಫಸಂದಾಗಿದೆ. ಒಂಚೂರು ಖಾಲಿ ಜಾಗ ಇನ್ನೂ ಇದೆ.ಹಾಗಾಗಿ ಒಂದು ಐಡಿಯಾ ಹಾಕಿದೀವಿ. ಜನ ಸಿಗೋಲ್ಲ ಎಂಬ ಕೂಗಿದೆ.ಇದ್ದವರಿಗೆ ನಾಟಿ ಗೊತ್ತಿಲ್ಲ. ಏನಾದ್ರೂ ಮಾಡಿ ಅನ್ನದ ಸ್ವಾತಂತ್ರ್ಯ ಪಡೀಬೇಕು ಅನ್ನೋ ಛಲ ಇದೆ.ಅದಕ್ಕಾಗಿ ಪ್ರಯತ್ನ ನಡೀತಾ ಇದೆ.

ಮನಸ್ಸಿನಲ್ಲಿದ್ದ ಈ ಯೋಚನೆಗಳಿಗೆ ಇನ್ನಷ್ಟು ಶಕ್ತಿ ತುಂಬಿರೋರು ಈ ನಿತ್ಯಾನಂದರು ಅಂದರೆ ತಪ್ಪಲ್ಲ.ಏನೇ ಆಗ್ಲಿ ಇನ್ನೊಂದು ಹತ್ತೋ ಹದಿನೈದು ವರ್ಷದೊಳಗೆ ಈ ಸಂಗ್ರಾಮ ಅನಿವಾರ್ಯವಾಗ್ಲೂ ಬಹುದು . . . .

07 ಆಗಸ್ಟ್ 2010

ಇಲ್ಲಿನ ಹಲಸಿನ ಹಣ್ಣು ಸ್ವೀಟ್ ಇದೆ . . . !!



ಅದು ಮಂಗಳೂರು - ಬೆಂಗಳೂರು ಹೆದ್ದಾರಿ.ಅಲ್ಲಿ ಧರ್ಮಸ್ಥಳದ ಕ್ರಾಸ್ ರೋಡ್.ಒಂದು ಕ್ಷಣ ನಮ್ಮ ಗಾಡಿ ಸ್ಲೋ ಆದ್ರೆ ಸಾಕು , ಅಲ್ಲೊಬ್ಬ ಓಡಿ ಬಂದು ಸಾರ್ ಹಲಸಿನ ಹಣ್ಣು ಬೇಕಾ.. . ? ಸಾರ್ . . ಸ್ವೀಟ್ ಇದೆ ಅಂತಾನೆ.ನಾವು ಬೇಕಿದ್ರೆ ತಗೊಂಡ್ರಾಯ್ತು.ಇಲ್ಲಾಂದ್ರೆ ನಮ್ಮ ಪಾಡಿಗೆ ಹೋಗ್ತಾ ಇದ್ರಾಯ್ತು. ಸರಿಯಾಗಿ ನೋಡಿದ್ರೆ ನಿರುದ್ಯೋಗ ಸಮಸ್ಯೆಗೆ ಇದೂ ಒಂದು ಪರಿಹಾರ ಅಲ್ವೇ. .?. ಯಾಕೆ ಗೊತ್ತಾ. .?. ಸೂರ್ಯ ಮುಳುಗುವ ಹೊತ್ತಿನವರೆಗೆ ಹೀಗೆ ಮಾರಾಟದಿಂದ ಇವರು ಸಂಪಾದಿಸುವ ಹಣ ಸರಿಸುಮಾರು 600 ರಿಂದ 700 . .!!.

ಆತನ ಹೆಸರು ಮಹಮ್ಮದ್.ಊರು ನೆಲ್ಯಾಡಿ.ಆತನ ಕಾಯಕ ಹಲಸಿನ ಹಣ್ಣು ಮಾರೋದು. ಜೂನ್‌ನಿಂದ ಅಬ್ಬಬ್ಬಾ ಅಂದರೆ ಸಪ್ಟಂಬರ್‌ವರೆಗೆ ಈ ಕೆಲಸ.ಉಳಿದ ಸಮಯದಲ್ಲಿ ಇನ್ಯಾವುದಾದರೂ ಹಣ್ಣುಗಳ ಮಾರಾಟ.ಆದರೆ ಆತನಿಗೆ ಇಂಥದ್ದೇ ಅಂತ ಅಂಗಡಿ ಇಲ್ಲ.ರಸ್ತೆಯೇ ಈತನಿಗೆ ಎಲ್ಲವೂ.ಹಾಗಂತ ಈತ ಬೀದಿ ವ್ಯಾಪಾರಿಯಲ್ಲ. ಮಂಗಳೂರು - ಬೆಂಗಳೂರು ಹೆದ್ದಾರಿಯಲ್ಲಿ ಧರ್ಮಸ್ಥಳದ ಕ್ರಾಸ್‌ನ ಪೆರಿಯಶಾಂತಿಯಲ್ಲಿ ಈತ ಹಲಸಿನ ಹಣ್ಣುಗಳನ್ನು ರೆಡಿ ಪ್ಯಾಕೇಟ್ ಮಾಡಿ ನಿಲ್ಲುತ್ತಾನೆ.ಬೆಳಗ್ಗೆ ಸೂರ್ಯ ಉದಯಿಸಿ ಇನ್ನೇನು ನೆತ್ತಿಗೆ ಬರುತ್ತಾನೆ ಅನ್ನುವಷ್ಟರಲ್ಲಿ ಈ ಮಹಮ್ಮದ್ ಪೆರಿಯಶಾಂತಿಯಲ್ಲಿ ಉದಯಿಸಿಕೊಳ್ಳುತ್ತಾನೆ.ಅಲ್ಲಿಂದ ಆತನ ಕಾಯಕ ಶುರು.ಅದೆಲ್ಲಿಂದಲೇ ವಾಹನ ಬರಲಿ ಹಲಸಿನ ಹಣ್ಣಿನ ಪ್ಯಾಕೇಟ್ ತೋರಿಸುತ್ತಾನೆ.ಸಾರ್ ಸ್ವೀಟ್ ಇದೆ ಅಂತ ಬೊಬ್ಬಿಡುತ್ತಾನೆ. ದೂರದ ಊರಿನ ಜನ ಗಾಡಿ ನಿಲ್ಲಿಸ್ತಾರೆ.ರೇಟ್ ಎಷ್ಟಪ್ಪಾ ಅಂತಾರೆ. ಸಾರ್ , ಹತ್ತು ಅಂತಾನೆ. ಏನ್ಪಪ್ಪಾ ಈ ಚಿಕ್ಕ ಪ್ಯಾಕೇಟ್‌ಗೆ ಹತ್ತು ರುಪಾಯಿಯಾ ಅಂತಾರೆ.ಅಲ್ಲಾ ಸಾರ್ ಹತ್ತು ರುಪಾಯಿಗೆ ಎರಡು ಪ್ಯಾಕೇಟ್ ಅಂತಾನೆ ಈ ಚಾಲಕಿ ಮಹಮ್ಮದ್. ಇನ್ನು ಊರ ಜನರಿಂದ ಏನಾದ್ರು ತಪ್ಪಿ 5 ರುಪಾಯಿ ಹೆಚ್ಚು ಬಂದ್ರೂ ಈತನಿಗೆ ಅದೇನೋ ಕಿರಿಕಿರಿ. ಛೇ . . ಛೇ ಅವ್ರಿಗೆ ಲಾಸ್ ಆಯ್ತು.ಅವ್ರು ನಮ್ಮ ಊರಿನೋರೇ ಅಂತಾನೆ.

ಅದೆಲ್ಲಾ ಸರಿ.
ಮಹಮ್ಮದ್ ಇದನ್ನು ಹೇಗೆ ತಯಾರು ಮಾಡ್ತಾನೆ ಮತ್ತು ಮಾರ್ಕೇಟಿಂಗ್ ಹೇಗೆ ಅಂತ ಆತನಲ್ಲಿ ಕೇಳಿದ್ರೆ ಆತ ವಿವರಿಸ್ತಾ ಹೋಗ್ತಾನೆ.ನೆಲ್ಯಾಡಿಯ ಆಸುಪಾಸಿನ ಕೃಷಿಕರ ತೋಟದಲ್ಲಿ ಹಲಸಿನ ಹಣ್ಣು ಇದೆಯಾ ಅಂತ ವಿಚಾರಿಸಿದ ಬಳಿಕ ಒಂದು ಹಣ್ಣಿಗೆ 30 ರುಪಾಯಿಯಂತೆ ನೀಡಿ ಅದನ್ನು ಪಡೆಯುತ್ತಾನೆ.ಇನ್ನು ಈ ಹಣ್ಣನ್ನು ಮರದಿಂದ ಕೀಳಲು ಮರವೇರುವ ಕಾರ್ಮಿಕನಿಗೆ ಒಂದು ಹಣ್ಣಿಗೆ 5 ರಿಂದ 10 ರುಪಾಯಿ ಕೊಡಬೇಕು.ಇದಾದ ನಂತರ ಈ ಎಲ್ಲಾ ಹಣ್ಣುಗಳನ್ನು ಮನೆಗೆ ಕೊಂಡೊಯ್ದು ಅದನ್ನು ಹದ ಮಾಡಿದ ಬಳಿಕ ಚಿಕ್ಕ ಚಿಕ್ಕ ಪ್ಯಾಕೇಟ್ ಮಾಡಲಾಗುತ್ತದೆ. ಒಂದು ಪ್ಯಾಕೇಟ್‌ನಲ್ಲಿ ಇಷ್ಟೇ ಹಣ್ಣು ಅಂತೇನಿಲ್ಲ. ಪ್ಯಾಕೇಟ್‌ನ ಅರ್ಧದಷ್ಟು. ಇದೆಲ್ಲಾ ಆದ ಮೇಲೆ ಮಾರಾಟಕ್ಕೆ ಸಿದ್ದವಾಗುತ್ತದೆ.ಇದಾಗುವ ವೇಳೆ ಒಂದು ಹಲಸಿನ ಹಣ್ಣಿನ ಅಸಲು 40 ರಿಂದ 50 ರುಪಾಯಿ ಆಗಿರುತ್ತದೆ.

ಬೆಳಗ್ಗೆ 11 ಗಂಟೆಯ ನಂತರ ಪೆರಿಯಶಾಂತಿ ಕ್ರಾಸ್‌ನಲ್ಲಿ ಮಹಮ್ಮದ್ ಬಂದು ನಿಲ್ಲುತ್ತಾನೆ.ಹಲಸಿನ ಹಣ್ಣುಗಳ ವ್ಯಾಪಾರ ಶುರುಮಾಡುತ್ತಾನೆ.ಬೆಳಗ್ಗೆ ಹದ ಮಾಡಿದ ಹಣ್ಣು ಮಧ್ಯಾಹ್ನದ ವೇಳೆಗೆ ಮುಗಿಯಬೇಕು ಎನ್ನುವುದು ಈ ವ್ಯಾಪಾರಿಯ ಟಾರ್ಗೆಟ್.ಯಾಕೆ ಗೊತ್ತಾ ಆ ಮೇಲೆ ಹಣ್ಣಿನ ಒರಿಜಿನಲ್ ಸ್ಮೆಲ್ ಹೋಗುತ್ತದೆ.ಒಂದು ಹಣ್ಣಿನಲ್ಲಿ ಸಾಮಾನ್ಯ ದಿನಗಳಲ್ಲಿ 150 ರುಪಾಯಿವರೆಗೂ ಮಾಡುತ್ತಾನಂತೆ.ಇನ್ನು ಮಧ್ಯಾಹ್ನದ ಊಟವೂ ಪೆರಿಯಶಾಂತಿ ಕ್ರಾಸ್‌ಗೇ ಬರುತ್ತದೆ.ಅದರ ಜೊತೆಗೆ ಇನ್ನೊಂದು ಹಲಸಿನ ಹಣ್ಣಿನ ಪ್ಯಾಕೇಟ್‌ಗಳು ಕೂಡಾ.ಮತ್ತೆ ವ್ಯಾಪಾರ ಶುರು.ಇನ್ನು ವಾರಾಂತ್ಯದ ದಿನಗಳಲ್ಲಿ ದಿನಕ್ಕೆ 5 -6 ಹಲಸಿನ ಹಣ್ಣು ಮುಗಿಯುತ್ತಂತೆ.ಒಂದು ಪ್ಯಾಕೇಟ್‌ಗೆ 5 ರುಪಾಯಿಯ ಹಾಗೆ ಮಾರಾಟ.ಹೀಗೇ ಸೀಸನ್‌ನಲ್ಲಿ , ವಾರಾಂತ್ಯದ ಸಮಯದಲ್ಲಿ ದಿನಕ್ಕೆ 600 ರಿಂದ 700 ರುಪಾಯಿ ಸಿಗುತ್ತಂತೆ ಈ ಮಹಮ್ಮದ್‌ಗೆ.ಇನ್ನು ಹಲಸಿನ ಹಣ್ಣು ಹೆಚ್ಚಾಗಿರುವ ಸಂದರ್ಭದಲ್ಲಿ ಇಡೀ ಹಣ್ಣು ಕೂಡಾ ಮಾರಾಟವಾಗುತ್ತದೆ.ಅದಕ್ಕೆ ೧೫೦ ರುಪಾಯಿ , ೨೦೦ ರುಪಾಯಿ ದರ ಇರುತ್ತೆ.ಬೇಡಿಕೆಗೆ ಅನುಗುಣವಾಗಿ ರೇಟ್ ಕೂಡಾ ಹೆಚ್ಚು ಕಮ್ಮಿ ಆಗುತ್ತೆ.ಸಂಜೆ ಸುಮಾರು ೬ ಗಂಟೆಯವರೆಗೆ ಈ ವ್ಯಾಪಾರ ನಡೆಯುತ್ತದೆ.

ಆತ ಅಂತಾನೆ , ಇಲ್ಲಿ ನಾನೋಬ್ನೇ ಮಾರೋದಲ್ಲ ಕೆಲವೊಂದು ದಿನ ೪-೫ ಜನವೂ ಇರ್‍ತಾರೆ ಹಾಗಾಗಿ ಒಂದೊಂದು ದಿನ ತುಂಬಾ ಲಾಭವಾಗುತ್ತದೆ.ಇನ್ನೂ ಒಂದೊಂದು ದಿನ ನಷ್ಟವೂ ಆಗುತ್ತದೆ.ಹಲಸಿನ ಹಣ್ಣು ಪ್ಯಾಕೇಟ್ ಉಳಿಯುತ್ತದೆ.ಕೊನೆಗೆ ಅದನ್ನು ಕಾಡಿನ ಮಂಗಗಳಿಗೆ ಎಸೆದು ಹೋಗೋದು ಅಂತಾನೆ ಮಹಮ್ಮದ್. ಎಲ್ಲಾದ್ರೂ ಪ್ರವಾಸಿಗರ ವಾಹನ ನಿಲ್ಸಿದ್ರೆ ಬಂಪರ್ ಎಂದು ಖುಷಿ ಪಡ್ತಾನೆ.ಇನ್ನು ಪೆರಿಯಶಾಂತಿ ಒಂದು ಸ್ವಲ್ಪ ಕಾಡಿನ ಪ್ರದೇಶವಾದ್ದರಿಂದ ಕೆಲವು ವಾಹನದೋರು ನಿಲ್ಸೋದೇ ಇಲ್ಲ.ಹೆದರಿಕೆಯೂ ಆಗುತ್ತಲ್ಲ ಅಂತಾನೆ.ಒಟ್ಟಾರೆ ಹೇಳೋದಾದ್ರೆ ಲಾಭ ಇದೆ.ಹಲಸಿನ ಹಣ್ಣು ಮುಗಿದ ಮೇಲೆ ಅನಾನಸು ಇದೆ , ಮತ್ತೆ ಇನ್ಯಾವುದಾದ್ರೂ ಹಣ್ಣು ಸಿಗುತ್ತೆ , ಬೇಸಗೆಯಲ್ಲಾದ್ರೆ ಕಬ್ಬಿನ ಜ್ಯೂಸ್ ಕೂಡಾ ಇಲ್ಲೇ ಮಾಡ್ತೀವಿ.ಕಾಡಿನ ನಡುವೆ ಅಲ್ವಾ ಖುಷಿ ಇರುತ್ತೆ ಅಂತಾನೆ.

ಒಂದು ಕೆಲಸದಲ್ಲಿ ಸವಾಲುಗಳು ಇದ್ದೇ ಇರ್‍ತವೆ ಬಿಡಿ.ಅದೆಲ್ಲವನ್ನೂ ಮೆಟ್ಟಿ ನಿಂತಾಗಲಷ್ಟೇ ಯಶಸ್ಸು ಸಾಧ್ಯ.ಅಂತಹದ್ದರಲ್ಲಿ ಏನೂ ಕೆಲಸವೇ ಸಿಕ್ತಿಲ್ಲ ಅನ್ನೋ ಜನರಿಗೆ, ಇದನ್ನೊಂದು,ಅಂದರೆ ಹಲಸಿನ ಹಣ್ಣು ವ್ಯಾಪಾರ ಮಾಡೋದು ಕೂಡಾ ಒಂದು ಉದ್ಯಮವಾಗಬಹುದಲ್ವಾ. .? ಹೀಗೇ ರಸ್ತೆಬದಿ ಮಾರಾಟ ಮಾಡಬೇಕೆಂದೇನಿಲ್ಲ.ನಗರದ ಮಾರುಕಟ್ಟೆ ಹಿಡಿಬಹುದಲ್ವಾ. .?. ಮನಸ್ಸಿದ್ದರೆ , ಸವಾಲು ಸ್ವೀಕರಿಸಬಹುದಾದರೆ ಎಲ್ಲವೂ ಸಾಧ್ಯ ಅಲ್ವೇ. . .? ಅದಕ್ಕೆ ಈ ಮಹಮ್ಮದ್ ಒಬ್ಬ ಸಾಕ್ಷಿ ಅಷ್ಟೆ.