13 ಜೂನ್ 2014

ಇದೆಲ್ಲದರ ನಡುವೆ ನಮ್ಮೊಳಗೊಬ್ಬ ಮೋದಿ ಬೆಳೆಯದಿದ್ದರೆ ಹೇಗೆ ?


ಕಳೆದ ಅನೇಕ ದಿನಗಳಿಂದ ನನ್ನನ್ನು  ಕಾಡುತ್ತಲೇ ಇತ್ತು. ಇಂದು ಇಡೀ ದೇಶಕ್ಕೆ ದೇಶವೇ ನರೇಂದ್ರ ಮೋದಿ ಅವರ ಕಾರ್ಯವೈಖರಿಯನ್ನು  ಹೊಗಳುತ್ತಿದೆ. ಇಷ್ಟೇ ಆದರೆ ಸಾಕೇ ? ದೇಶ ನಂ.1 ಆಗಲು ಸಮರ್ಥವಾಗಿ ತಲೆ ಎತ್ತಲು ಮೋದಿ ಅವರ ಶ್ರಮ ಮಾತ್ರಾ ಸಾಕಾ ? ನಾವು ದಿನವೂ ಮೋದಿ ಅವರನ್ನು  ಹೊಗಳಿಕೊಂಡೇ ಇದ್ದರೆ ಸಾಕೇ ?, ಅಂತ ಅನಿಸುತ್ತಲೇ ಇದೆ.ಹಾಗಾದರೆ ನಾನೇನು ಮಾಡಬಹುದು ?, ನಾನೇಕು ಮಾಡಬೇಕು ಎಂದು  ಯೋಚಿಸಿದಾಗ ನನಗನ್ನಿಸಿದ್ದು , ಮೋದಿ ಅವರ ದಿನ ಚಟುವಟಿಕೆಗೆ ಶೇ.30 ರಷ್ಟು ನನ್ನ  ಬದುಕಿನಲ್ಲೂ ಅಳವಡಿಸಿಕೊಳ್ಳಬೇಕು. ಅಷ್ಟು ಸಾಕು. .

                                                                                                    (ಚಿತ್ರ - ಅಂತರ್ಜಾಲ )
                                                     
ಮೋದಿ ಅವರು ಎಷ್ಟು ಪ್ರಭಾವಿಯಾಗಿ ಬೆಳೆದರು ಎಂದರೆ ಪ್ರತಿಯೊಬ್ಬರಲ್ಲೂ ಅವರಿಗೆ ತಿಳಿಯಂದಂತೆಯೇ ಸೇರಿಕೊಂಡಿದ್ದರು,
ಆತ ಅನೇಕ ವರ್ಷಗಳಿಂದ ಮನೆಗೆ ಬಂದಿರಲಿಲ್ಲ, ತನ್ನ ಬೆಳವಣಿಗೆಯ ನಡುವೆ ತಾಯಿಯ ಆಶೀರ್ವಾದ ಪಡೆಯಲೇ ಇಲ್ಲ.ಆದರೆ ಇದ್ದಕ್ಕಿದ್ದಂತೆಯೇ ಆತ ಮನೆಗೆ ಬಂದು ತಾಯಿಯ ಆಶೀರ್ವಾದ ಪಡೆದ.ನಂತರ ಹೇಳಿದ ದೇಶದ ಪ್ರಧಾನಿ ನರೇಂದ್ರ ಮೋದಿ ಪಕ್ಷದ ಗೆಲುವು, ತನ್ನ ಅಭೂತಪೂರ್ವ ಗೆಲುವಿನ ನಂತರ ತನ್ನ ತಾಯಿಯ ಆಶೀರ್ವಾದ ಪಡೆದರು, ಆದರೆ ನಾನು ಇದೆಲ್ಲಾ ಮರೆತೇ ಹೋಗಿದ್ದೆ, ಈಗ ಮೋದಿ ಪ್ರೇರಣೆಯಾದರು ಎಂದು ಭಾವಪರವಶನಾದ. .!. ಟೀಕೆಗಳೂ ಏನೇ ಇರಲಿ, ಒಬ್ಬ ವ್ಯಕ್ತಿಯನ್ನು ಧನಾತ್ಮಕವಾಗಿ ಬದಲಿಸಲು ಸಾಧ್ಯವಾಗಿದೆ ಎಂದರೆ ಇಡೀ ದೇಶದ ಮಟ್ಟಿಗೆ ಅದೊಂದು ಒಳ್ಳೆಯ ಬೆಳವಣಿಗೆ.ದೇಶದ ಪ್ರಧಾನಿ ನರೇಂದ್ರ ಮೋದಿ ಕೇವಲ ಪ್ರಧಾನಿಯಾಗಿಲ್ಲ, ಪ್ರತಿಯೊಬ್ಬರ ಬದುಕಿಗೆ ಪ್ರೇರಣೆಯನ್ನೂ ನೀಡುವವರಾಗಿದ್ದಾರೆ.ಬಹುಶ: ದೇಶದ ಇತಿಹಾಸದಲ್ಲೇ ಇದು ಮೊದಲು.

ದೇಶದ ಚುನಾವಣೆ ಮುಗಿದು ಅಭೂತಪೂರ್ವ ಗೆಲುವು ಬಿಜೆಪಿ ಪಡೆದುಕೊಂಡಿತು.ಇದರ ಹಿಂದಿನ ಶಕ್ತಿಯಾಗಿ ನರೇಂದ್ರ ಮೋದಿ ಕಾಣಿಸಿಕೊಂಡರು. ದೇಶದ ಪ್ರಧಾನಿಯಾಗಿಯೂ ಆಯ್ಕೆಯಾದರು.ಚುನಾವಣಾ ಪೂರ್ವದಿಂದಲೇ ಸಾಕಷ್ಟು ನಿರೀಕ್ಷೆ ಇರಿಸಿಕೊಂಡೇ ಬಂದಿದ್ದ ನರೇಂದ್ರ ಮೋದಿ ಸೋಶಿಯಲ್ ಮೀಡಿಯಾದ ಮೂಲಕವೂ ತನ್ನ ಛಾಪನ್ನು  ಬೆಳೆಸಿದರು.ಅಲ್ಲಿ ಜನರ ಸಲಹೆ, ಚರ್ಚೆಯಲ್ಲೂ ಭಾಗವಹಿಸಿದರು.ಹೀಗಾಗಿ ಯುವ ಸಮೂಹವನ್ನು  ತನ್ನೆಡೆಗೆ ಸೆಳೆದುಕೊಂಡರು.ಪರಿಣಾಮ ಇಡೀ ದೇಶದಲ್ಲಿ ಮೋದಿ ಹವಾ ಹೆಚ್ಚಾಯಿತು.ಇಂದು  ಪ್ರತೀ ಉತ್ಪನ್ನದ ಹಿಂದೆಯೂ ಮೋದಿ ಬ್ರಾಂಡ್ ಶುರುವಾಗಿದೆ.ಒಬ್ಬ  ವರ್ತಕರು ಇತ್ತೀಚೆಗೆ ಹೇಳುತ್ತಿದ್ದರು, ಮೋದಿ ಹೆಸರಿನ ಸೋಪು ಅನೇಕ ವರ್ಷಗಳಿಂದ ಹಿಂದಿನಿಂದಲೇ ಇತ್ತು, ಆದರೆ ಇದೀಗ ಈ ಸೋಪಿಗೆ ತೀರಾ ಬೇಡಿಕೆ ಬಂದಿದೆ ಎಂದು.ಅದರ ಜೊತೆಗೆ ಪೇಸ್ಟ್‌ಗಳು, ಬಟ್ಟೆಗಳು, ದೇಶೀ ಉಡುಪು, ಆಹಾರ ಕ್ರಮಗಳು ಸೇರಿದಂತೆ ವಿವಿಧ ರೀತಿಯಲ್ಲಿ ಮೋದಿ, ಬದುಕಿನ ಭಾಗವಾಗಿದ್ದಾರೆ.ಅಂದರೆ ಪ್ರತೀ ವ್ಯಕ್ತಿಯ ಒಳಗಡೆ ಮೋದಿ ಸೇರಿಕೊಂಡಿದ್ದಾರೆ.ಬಹುಶ: ದೇಶದ ಪ್ರಧಾನಿಯೊಬ್ಬ ಇಷ್ಟೊಂದು ಪ್ರಭಾವಿಯಾಗಿ ಬೆಳೆದದ್ದು ಇದೇ ಮೊದಲು.ದೇಶದ ಪ್ರಧಾನಿ ಬಗ್ಗೆ ಮಾಧ್ಯಮಗಳೂ ಈಗ ಅತ್ಯಂತ ಎಚ್ಚರಿಕೆಯಿಂದ ಗಮನಹರಿಸುತ್ತಿವೆ, ದಿನಕ್ಕೆ ಕನಿಷ್ಟ ೫೦ ರಿಂದ ೧೦೦ ಸುದ್ದಿಗಳು ನರೇಂದ್ರ ಮೋದಿ ಅವರಿಗೆ ನೇರವಾಗಿ ಹಾಗೂ ಪರೋಕ್ಷವಾಗಿ ಸಂಬಂಧಿಸಿದ್ದು  ಇದ್ದೇ ಇರುತ್ತವೆ.ಅಂದರೆ ಮೋದಿ ಅವರು  ಅಷ್ಟು ಕ್ರಿಯಾತ್ಮಕವಾಗಿ ಕೆಲಸ ಮಾಡುತ್ತಿದ್ದಾರೆ, ಘಟನೆಯ ಬಗ್ಗೆ ತಕ್ಷಣ ಟ್ವೀಟ್, ಪೇಸ್‌ಬುಕ್ ಮೂಲಕ ಪ್ರತಿಕ್ರಿಯೆ ನೀಡುತ್ತಾರೆ.ಹೀಗಾಗಿ ಮಾಧ್ಯಮಗಳೂ ಸದಾ ಕ್ರಿಯಾಶೀಲವಾಗಿರಬೇಕಾಗಿದೆ,ಸುದ್ದಿಗಳನ್ನು  ಅನಿವಾರ್ಯವಾಗಿ ನೀಡಬೇಕಾಗಿದೆ.ಅಧಿಕಾರಿಗಳೂ ಕೆಲಸ ಮಾಡಲೇಬೇಕಾಗುತ್ತದೆ.ಹಿಂದಿನ ಪ್ರಧಾನಿ ಅತ್ಯಂತ ಮೌನವಾಗಿದ್ದರಿಂದ ಇದೆಲ್ಲಾ ಸಮಸ್ಯೆಯೇ ಇದ್ದಿರಲಿಲ್ಲ.. .!.ಹೀಗಾಗಿ ಮಾಧ್ಯಮ ವಲಯದ ಪ್ರತಿಯೊಬ್ಬನಲ್ಲೂ ಮೋದಿ ಅವರ ಕ್ರಿಯಾಶೀಲತೆ ಬೆಳೆಯಬೇಕಾಗುತ್ತಿದೆ, ಫಾಲೋ ಮಾಡಲೇಬೇಕಾಗಿದೆ.

ನರೇಂದ್ರ ಮೋದಿ ಅವರು ಗೆಲುವು ಕಂಡ ತಕ್ಷಣವೇ ಮೊದಲು  ಆಶೀರ್ವಾದ ಪಡೆಯುವುದು ಮತ್ತು  ಪಡೆದದ್ದು  ಅವರ ತಾಯಿ ಹಿರಾಬೆನ್ ಅವರದ್ದು. ಇದಕ್ಕೆ ಕೂಡಾ ಕೆಲವರು ಟೀಕೆ ಮಾಡಿದರು, ಈ ಹಿಂದೆ ಯಾವಾಗ ಭೇಟಿ ನೀಡಿದ್ದಾರೆ ಮತ್ತು  ಇನ್ನು ಯಾವಾಗ ಭೇಟಿ ನೀಡುತ್ತಾರೆ ಎಂದು  ಚುಚ್ಚಿದರು.ಇರಲಿ, ಟೀಕೆಗೆ ಮೋದಿ ಅವರು  ಉತ್ತರಿಸುವುದಿಲ್ಲ,ಉತ್ತರಿಸಬೇಕಾಗಿಯೂ ಇಲ್ಲ. ಆದರೆ ಇಲ್ಲಿ  ಗಮನಿಸಬೇಕು, ಇಂದಿಗೂ ತಾಯಿಯ ಆಶೀರ್ವಾದ ಪಡೆಯದೇ ಎಷ್ಟೋ ಮಂದಿ ಇದ್ದಾರೆ, ತಾಯಿಯನ್ನು  ಮನೆಯಿಂದ ದೂಡಿದವರು ಸೇರಿದಂತೆ ಅನೇಕರಿಗೆ ಮೋದಿ ಸ್ಫೂರ್ತಿಯಾದರು.ಈ ಆ ಚಿತ್ರ ನೋಡಿದ ಅನೇಕರು  ತಾಯಿಯ ಭೇಟಿಗೆ ಉತ್ಸುಕರಾದರು.ಸ್ವತ: ಪಾಕಿಸ್ತಾನದ ಪ್ರಧಾನಿ ಕೂಡಾ ಭಾವಪರವಶರಾದರು.ಇಂದು ಇದೇ ಒಂದು ಘಟನೆಯಿಂದಾಗಿ  ತಾಯಿಯ ಮಹತ್ವವನ್ನು  ಇಡೀ ಜಗತ್ತಿಗೆ ಸಾರಿದ ಮೊದಲ ಪ್ರಧಾನಿಯಾದರು , ಅನೇಕರ ಮೇಲೂ ಪ್ರಭಾವ ಬೀರಿದರು.ಒಬ್ಬ ಜನನಾಯಕನಿಂದ ಸಮಾಜಕ್ಕೆ ಆಗಬೇಕಾಗಿರುವುದು ಇಂತಹ ಧನಾತ್ಮಕ ಪ್ರಭಾವ ಅಲ್ಲದೇ ಮತ್ತಿನ್ನೇನು.?.

ಪ್ರತಿಯೊಬ್ಬನ ಬದುಕಿಗೂ ,ಪ್ರತೀ ವಿಚಾರದಲ್ಲೂ ಪ್ರಭಾವ ಬೀರುವ, ಸಂದೇಶವನ್ನೂ ನೀಡುವ ಮೋದಿ ನಮಗರಿವಿಲ್ಲದೆಯೇ ನಮ್ಮೊಳಗೆ ಬೆಳೆಯಬೇಕು, ಬೆಳೆಯುತ್ತಿದ್ದಾನೆ. ನರೇಂದ್ರ ಮೋದಿ ಅವರ ದಿನಚರಿ ಅನೇಕರ ಮೇಲೆ ಪ್ರಭಾವ ಬೀರಿದೆ.ಬೆಳಗ್ಗೆ 4.30 ರಿಂದ ರಾತ್ರಿ 11 ಗಂಟೆಯವರೆಗೆ ಬಿಡುವಿಲ್ಲದ ಕೆಲಸ ದಿನಚರಿ  ಪ್ರತೀ ವ್ಯಕ್ತಿಯ ಬದುಕಿನ ಭಾಗವಾಗಬೇಕು, ಮೋದಿ ಬ್ರಾಂಡ್ ಖರೀದಿ ಮಾಡಿದಂತೆಯೇ ಅವರ ಜೀವನ ಕ್ರಮವೂ ಬದುಕಿನ ಜೊತೆ ಸೇರಿಕೊಳ್ಳಬೇಕು. ಸಾಮಾಜಿಕವಾಗಿ ಕೆಲಸ ಮಾಡುವ ಪ್ರಮುಖರು ಹೇಗೆ ಮಾಡೆಲ್ ಆಗಿರಬೇಕು ಎಂಬುದಕ್ಕೆ ನರೇಂದ್ರ ಮೋದಿ ಸಾಕ್ಷಿ.ಸಾರ್ವಜನಿಕ ಬದುಕಿನಲ್ಲಿ ಭ್ರಷ್ಟಾಚಾರ ರಹಿತ ಆಡಳಿತ ನಡೆಸುವುದಕ್ಕೆ ಮೋದಿ ಅವರೇ ಆದರ್ಶ. ಗುಜರಾತ್‌ನಿಂದ ದೆಹಲಿಗೆ ತೆರಳುವ ವೇಳೆ ತನ್ನಲ್ಲಿದ್ದ ಹಣವನ್ನು ವಾಹನ ಚಾಲಕರ ಮಕ್ಕಳ ವಿಧ್ಯಾಭ್ಯಾಸಕ್ಕೆ ನೀಡಿದ್ದಾರೆ, ಭ್ರಷ್ಟಾಚಾರದ ಸೋಂಕಿಲ್ಲ, ಇಲ್ಲಿ  ಮೋದಿ ಬಗ್ಗೆ ಭಾಷಣ ಮಾಡುವ ಎಲ್ಲಾ ರಾಜಕಾರಣಿಗಳೂ ಸೇರಿದಂತೆ ಪ್ರತಿಯೊಬ್ಬರ ಬದುಕಿನಲ್ಲೂ ಮೋದಿ ಪ್ರಭಾವ ಅಳವಡಿಸಿಕೊಳ್ಳಬೇಕು, ಆಗ ಭ್ರಷ್ಟಾಚಾರ ರಹಿತ ದೇಶ ನಿರ್ಮಾಣ ಸಾಧ್ಯ.ಇದಕ್ಕಾಗಿ ಇನ್ನೊಂದು ಪಕ್ಷದ ಅಗತ್ಯವೇ ಇಲ್ಲ.ಅಧಿಕಾರಿಗಳಿಗೆ ನಿಜವಾದ ಅಧಿಕಾರ ನೀಡಬೇಕು, ಜನರಿಗೆ ಮತ್ತು  ಅಧಿಕಾರಿಗಳ ನಡುವೆ ಜನಪ್ರತಿನಿಧಿಗಳು ಸಂಪರ್ಕ ಸೇತುವಾಗಬೇಕು. ಅಧಿಕಾರ ಪಡೆದ ನಂತರ ಇತರ ಪಕ್ಷಗಳನ್ನು  ಅನಗತ್ಯವಾಗಿ ಟೀಕೆ ಮಾಡದೆ  ಅಭಿವೃಧ್ಧಿ, ಸೇವೆ ಬಗ್ಗೆಯೇ ಮಾತನಾಡಬೇಕು ಎಂಬ ಮೋದಿ ಅವರ ನಿಲುವು ಎಲ್ಲರಲ್ಲೂ ಬೆಳೆಯಬೇಕು. ಇದೆಲ್ಲಾ ಕನಿಷ್ಟ ಅಂಶಗಳು ನಮ್ಮೊಳಗೆ ಬೆಳೆಯುತ್ತಾ ಸಾಗಿದಂತೆ ನಮ್ಮೊಳಗೇ ಒಬ್ಬ ಮೋದಿ ಬೆಳೆಯುತ್ತಾ ಸಾಗುತ್ತಾನೆ, ದೇಶ 5 ವರ್ಷದಲ್ಲೇ ವಿಶ್ವಮಟ್ಟದಲ್ಲಿ  ಪ್ರಭಾವಿಯಾಗಿ ಬೆಳೆದು ವಿಶ್ವವಂದ್ಯವಾಗಬಹುದು.ಇದಕ್ಕೆ ನಾವು ಸಜ್ಜಾಗೋಣ. ನಮ್ಮೊಳಗೊಬ್ಬ ಮೋದಿಯನ್ನು ಇಲ್ಲಿ ಬೆಳೆಸೋಣ.ಪ್ರಧಾನಿ ನರೇಂದ್ರ ಮೋದಿ ಅಭಿಮಾನದ ಜೊತೆಗೆ ಅವರ ಆಡಳಿತಕ್ಕೆ ಈ ಮೂಲಕ ಸಹಕಾರ ನೀಡೋಣ.

ಇಂತಹ ದೊಡ್ಡ ಸಹಕಾರ ಇಲ್ಲದೇ ಹೋದರೆ ಮೋದಿ ಅವರನ್ನು ಹೊಗಳುತ್ತಾ, ಸಂಸತ್ತಿನಲ್ಲಿ  ಅತ್ಯಂತ ಕನಸಿನ ಭಾರತ , ದೇಶದ ಗುರಿಯ ಬಗ್ಗೆ ಮೋದಿ ಅವರು ಮಾತನಾಡುವ ವೇಳೆ ಹಿಂದಿನ ಸಾಲಿನಲ್ಲಿ  ಮಲಗಿದರೆ ಏನು ಪ್ರಯೋಜನ ?

---------------