03 ಜುಲೈ 2018

ಘಟನೆ ನಾಲ್ಕು ........ ಬದುಕಿಗೆ ನೂರು ಪಾಠ.....!!




ಘಟನೆ 1:
ಅವರಿಗೆ ಅಂದು ರಾಜ್ಯದಲ್ಲೇ ಅತ್ಯುನ್ನುತ ಹುದ್ದೆ ದಕ್ಕಿತ್ತು. ಇಡೀ ರಾಜ್ಯದಲ್ಲಿ ಅಂತಹ ಅವಕಾಶ ಸಿಕ್ಕಿದ್ದು ಕೇವಲ ಇಬ್ಬರಿಗೆ. ಅದರಲ್ಲಿ ಇವರೂ ಒಬ್ಬರು.  ಅದಾಗಿ ಸರಿಯಾಗಿ 4 ವರ್ಷ ಕಳೆದಿತ್ತು. ಅವರದು ಕೃಷಿ ಕುಟುಂಬ. ಅವರ ತಂದೆಗೆ ಅನಾರೋಗ್ಯ ಕಾಡಿತು. ಕೃಷಿ ನೋಡಲು, ಕೆಲಸ ಮಾಡಿಸಲು ಜನರಲಿಲ್ಲ.  ಇಬ್ಬರು ಸಹೋದರರಲ್ಲಿ ಯಾರೂ ಮನೆ ನಡೆಸಲು ಒಪ್ಪಲಿಲ್ಲ. ತಂದೆಯ ಬಳಿಗೆ ಬರಲು ಸಿದ್ಧರಿರಲಿಲ್ಲ. ಒಂದು ವಾರ ಕಾದರು. ಆ ಅತ್ಯುನ್ನತ ಹುದ್ದೆಗೆ ರಾಜೀನಾಮೆ ನೀಡಿದರು. ಕೃಷಿ ನಡೆಸಿದರು. ತಂದೆ-ತಾಯಿಯ ಅಂತ್ಯ ಕಾಲದವರೆಗೂ ಚೆನ್ನಾಗಿ ನೋಡಿಕೊಂಡರು. ಸಮೃದ್ಧ ಕೃಷಿ ನಡೆಸಿದರು. ಇಂದಿಗೂ ಕೃಷಿಯಲ್ಲಿ ಯಶಸ್ಸು ಕಂಡಿದ್ದಾರೆ. ಸದ್ಯ ಅದೇ ಸ್ಥಿತಿ ಇದೆ.
ಈಗ ಈ ತಂದೆ ವೃದ್ಧರಾಗುತ್ತಿದ್ದಾರೆ. ಮಕ್ಕಳು ಸದ್ಯ ನಗರದಲ್ಲಿದ್ದಾರೆ. ಈ ಮಕ್ಕಳಿಗೆ ತಮ್ಮ ತಂದೆಯ ಕತೆ ತಿಳಿದಿದೆ. ಸಾಧನೆ ತಿಳಿಸಿದೆ. ಈಗ ಆದರ್ಶವಾಗಬೇಕಾದ್ದು ಯಾವುದು? ಎಂಬ ಬಹುದೊಡ್ಡ ಪ್ರಶ್ನೆ ಈಗ ಮುಂದಿದೆ....!. ಸಾಮಾಜಿಕ ಪರಿಸ್ಥಿತಿ ಈಗ ಕಣ್ಣಮುಂದೆ ಇದೆ.

ಘಟನೆ 2:
ಗ್ರಾಮೀಣ ಭಾಗವಾದರೂ ಎಲ್ಲಾ ಸೌಲಭ್ಯ ಹೊಂದಿದ ಕೃಷಿ ಭೂಮಿ ಇದೆ. ಮನೆಯಲ್ಲೇ ಎಲ್ಲಾ ವ್ಯವಸ್ಥೆ ಮಾಡಿಸಿದ್ದಾರೆ. ಮಕ್ಕಳಿಗೆ ಯಾವುದೂ ಕಡಿಮೆಯಾಗಬಾರದು ಎಂದು ಸಣ್ಣವರಿಂದಲೇ ಬೆಳೆಸಿದ್ದಾರೆ. ಮಕ್ಕಳು ಕಲಿತು ದೊಡ್ಡವರಾಗಿ ಹೆಸರಿನಿಂದ ಮುಂದೆ ಡಿಗ್ರಿ ಸೇರಿಸಿಕೊಂಡು ನಗರ ಸೇರಿದರು. ದೂರವಾದರು.
ಈಗ ತಂದೆ ಹಾರ್ಟ್ ಪೇಶೇಂಟ್ , ಶುಗರ್ ಇದೆ. ಸರಿಯಾಗಿ ಮನೆಯಿಂದ ಹೊರಗೆ ಬರಲು ಆಗುತ್ತಿಲ್ಲ. ತಾಯಿಗೂ ಅನಾರೋಗ್ಯ ಇದೆ. ಇತ್ತೀಚೆಗೆ ತಾಯಿಗೆ ತನ್ನ ತಾಯಿಯ ವೈಕುಂಠ ಸಮಾರಾಧನೆಗೆ ಹೋಗಬೇಕಿತ್ತು. ಹಾಗೋ ಹೀಗೋ ಪೇಟೆಗೆ ಬಂದರು. ಯಾರದ್ದೋ ಕಾರಲ್ಲಿ ಏರಿದರು. ಮಕ್ಕಳ ಬಗ್ಗೆ ಹೇಳುತ್ತಾ.... ಅವನು ದೊಡ್ಡ ಕೆಲಸದಲ್ಲಿ ಇದ್ದಾನೆ ಎಂದೂ ಹೇಳುತ್ತಿದ್ದರು. ಮನೆಯ ಸುದ್ದಿ ಹೇಳುತ್ತಾ, ಸಂಜೆಯವರೆಗೆ "ಅವರನ್ನು" ನೋಡಲು ಪಕ್ಕದ ಮನೆಗೆ ಹೇಳಿದ್ದೇನೆ ಎಂದೂ ಹೇಳಿಕೊಂಡರು. ಆಗಾಗ ಏನೋ  ತನ್ನ ಸಂಕಟ ಹೇಳಿಕೊಂಡರು, ಮಕ್ಕಳಿದ್ದರೂ ಯಾರದೋ ಬೇರೆಯವರ  ಜೊತೆ....... !

ಘಟನೆ 3:
ಅದು ಕೃಷಿ ಕುಟುಂಬ. ಆತ ಉನ್ನತ ವ್ಯಾಸಾಂಗ ಮಾಡಿ ತಂದೆಯ ಜೊತೆಗೆ ಕೃಷಿಗೆ ಇಳಿದ. ಸಾಕಷ್ಟು ಭೂಮಿ, ಕೃಷಿಯೂ ಇತ್ತು. ಕೃಷಿಯಲ್ಲಿ ಆಧುನಿಕತೆಗೆ ಒತ್ತು ನೀಡಿದ. ಅದೃಷ್ಠವಶಾತ್  ವಿದ್ಯಾವಂತ ಹುಡುಗಿಯೊಂದಿಗೆ ಮದುವೆಯೂ ಆಯ್ತು. ಇಬ್ಬರಿಗೂ ಒಪ್ಪಿಗೆ ಇತ್ತು. ಎರಡೂ ಮನೆಯವರೂ ಈ ಬಗ್ಗೆ ಸಾಕಷ್ಟು ಮಾತುಕತೆ ಮಾಡಿಯೂ ಆಗಿತ್ತು. ಸ್ವತ: ಹುಡುಗಿಯ ತಂದೆ, ತಾಯಿ ಹಾಗೂ ಹುಡುಗಿಯ ಜೊತೆ ಮಾತುಕತೆ ನಡೆಸಿ,  ಕೃಷಿಯೇ ನನ್ನ ಬದುಕು ಎಂದೂ ಆ ಹುಡುಗ ಹೇಳಿದ. ಎಲ್ಲವೂ ಓಕೆ ಆದ ಬಳಿಕ ಮದುವೆಯೂ ಆಗಿತ್ತು.
ಈಗ ಎಲ್ಲಾ ಕಾರ್ಯಕ್ರಮಕ್ಕೆ ಹೋದಾಗ, ಜನರೆಲ್ಲಾ ಕೇಳುತ್ತಿದ್ದ ಪ್ರಶ್ನೆ..." ಇಷ್ಟು ಓದಿ ನೀನ್ಯಾಕೆ ಹಳ್ಳಿಗೆ ಬಂದೆ..." , " ಹಳ್ಳಿಯಾ..." , "ಕೃಷಿ ಕಷ್ಟ ಆಗಲ್ವಾ..." , " ಇನ್ನು ಯಾರಿಗೆ ಈ ಕೃಷಿ...".....!.  ಹೀಗೇ ಹತ್ತಾರು ಪ್ರಶ್ನೆಯ ನಂತರವೂ ಆ ಹುಡುಗಿ ಧೈರ್ಯಗೆಡಲಿಲ್ಲ. ತಾನು ನಂಬಿ ಬಂದ ಕೃಷಿಯನ್ನೇ , ಕೃಷಿಕನನ್ನೇ ನೆಚ್ಚಿಕೊಂಡಳು.

ಘಟನೆ 4:
ಆ ಕುಟುಂಬದ ಏಕೈಕ ಗಂಡು ಆತ. ಸಾಕಷ್ಟು ಓದಿದ್ದಾನೆ. ಸದ್ಯ ನಗರದಲ್ಲಿ ಕೈತುಂಬಾ ಸಂಬಳವೂ ಪಡೆಯುತ್ತಾನೆ. ಇತ್ತ ಹತ್ತಾರು ಎಕರೆ ಕೃಷಿ ಭೂಮಿ ಇದೆ. ಮನೆಯಲ್ಲಿ ಎಲ್ಲಾ ಸೌಲಭ್ಯ ಇದೆ. ಎಲ್ಲಾ ನೆಟ್ವರ್ಕ್ ಲಭ್ಯವಿದೆ. ಇಂಟರ್ನೆಟ್ ಸಹಿತ ಕೇಬಲ್ ಟಿವಿ ವ್ಯವಸ್ಥೆಯೂ ಇದೆ. ಕೃಷಿ ವರಮಾನವು ಆತ ಪಡೆಯುವ ಸಂಬಳದಷ್ಟೇ ಇದೆ. ಈಚೆಗೆ ಆ ಹುಡುಗನಿಗೆ ಮದುವೆ ಮಾಡಿಸುವ ಪ್ರಯತ್ನಕ್ಕೆ ಮನೆಯವರು ಮುಂದಾದಾಗ ಬಂದ ಪ್ರಶ್ನೆ " ಆತ ಕೆಲ ವರ್ಷದ ನಂತರ ಕೃಷಿಗೆ ಬರುತ್ತಾನಾ " . ಸಹಜವಾಗಿಯೇ ಬಂದ ಉತ್ತರ "ಹೌದು, ಆತ ಒಬ್ಬನೇ ಇರುವುದು , ಇಲ್ಲೂ ಅಷ್ಟೇ ಆದಾಯ ಇದೆ.". ಅಲ್ಲಿಗೇ ಆ ಮದುವೆ ಪ್ರಸ್ತಾಪ ಮುರಿದು ಬಿತ್ತು.


                                                  ********

ಇದಿಷ್ಟು ಇಂದಿನ ವಾಸ್ತವ ಸಂಗತಿ.
ಈಗ ಇರುವ ಪ್ರಶ್ನೆ, ಪಾಠ ಮಾಡಬೇಕಿರುವುದು  ಯಾರಿಗೆ ?. ಎರಡು ಸಂಗತಿಗಳು ಇಂದು ಪ್ರಮುಖವಾಗಿ ಚರ್ಚೆಯಾಗಬೇಕು. ಬದುಕಿಗೆ ಶಿಕ್ಷಣ ನೀಡುವ ಒಂದು ಸರಿಯಾದ ಪಾಠ ಬೇಕು. ಅದು ಯಾರಿಗೆ ? ಈ ಸಮಾಜಕ್ಕಾ ? ಚಿಕ್ಕ ಮಕ್ಕಳಿಗಾ ?.
ಕೃಷಿ ಎಂದಾಗ, ಹಳ್ಳಿ ಎಂದಾಗ, ಗ್ರಾಮೀಣ ಭಾರತ ಎಂದಾಗ ಮಹಿಳೆಯರಲ್ಲಿ, ಹೆತ್ತವರಲ್ಲಿ ಇರುವ ಮನಸ್ಥಿತಿ ಏಕೆ ಅಷ್ಟೊಂದು ಕೀಳಾಗಿದೆ, ಏಕೆ ಬದಲಾಗಲಿಲ್ಲ ?  ಎಲ್ಲವೂ ಈಗ ಯಾಂತ್ರೀಕೃತ ಆಗಿರುವಾಗ ಕೆಲಸವೂ ಕಷ್ಟವೇನಿಲ್ಲ. ನನ್ನ ಮಕ್ಕಳು ಚೆನ್ನಾಗಿರಬೇಕು ಎಂಬ ಕಲ್ಪನೆ, ಯೋಚನೆ ಎಂದೂ , ಯಾರದ್ದೂ ತಪ್ಪಲ್ಲ. ಆದರೆ ಮೈಮುರಿಯದೇ ತಿನ್ನಬೇಕು ಎಂಬ ಮನಸ್ಥಿತಿ ದೂರವಾಗಲು ಪಾಠ ಬೇಕಿರುವುದು ಯಾರಿಗೆ ಎಂಬುದು ಪ್ರಶ್ನೆ. ಯಾವುದೋ ಒಬ್ಬ ಮಗಳು ಕೃಷಿಯ ಕಡೆಗೆ ಆಸಕ್ತರಾದರೆ ಇನ್ನೊಂದು ಮನೆಯವನಿಗೆ ಏಕೆ ಚಿಂತೆ ? ಎಂಬ ಬಗ್ಗೆಯೂ ಪ್ರಶ್ನೆಯಾಗಬೇಕು.
ಈ ಭೂಮಿ ಹಸಿರಾಗಿಯೇ ಇರಬೇಕಾದರೆ ಈಗಲೇ ಚಿಂತನೆ ನಡೆಯಬೇಕು. ಇಲ್ಲದೇ ಇದ್ದಲ್ಲಿ ಇಲ್ಲಿ ವೃದ್ಧಾಶ್ರಗಳೂ ಕಾಣಸಿಗದು....!