21 ಡಿಸೆಂಬರ್ 2017

ಹೊಲದಲ್ಲಿ ಟ್ರಾಕ್ಟರ್ ಓಡಿಸುವುದು ಕೀಳಲ್ಲ...!




ಅನೇಕರು ಅಂದುಕೊಳ್ಳುತ್ತಾರೆ, ಹೊಲದಲ್ಲಿ ಮಣ್ಣು ಮೆತ್ತಿಸಿಕೊಂಡು ಟ್ರಾಕ್ಟರ್ ಓಡಿಸುವುದು ಬದುಕಿನ ಸೋಲು, ಇದು ಸೋಲಿನ ಜೀವನ ಎಂದು ಬಿಂಬಿಸುತ್ತಾರೆ. ಈ ಮನಸ್ಥಿತಿಯಿಂದ ಹುಡುಗರು ಹೊರಬರಬೇಕು ಎಂದು ಕೃಷಿಕ ಲಕ್ಷ್ಮಣ ದೇವಸ್ಯ ಹೇಳುತ್ತಿರುವಾಗ ಅವರ ಮನಸ್ಸಿನಲ್ಲಿ ಉತ್ಸಾಹ ಕಂಡುಬರುತ್ತಿತ್ತು.ಕಾರಣ ಇಷ್ಟೇ, ಅವರು ಇಂಜಿನಿಯರ್ ಆಗಿ ಅನೇಕ ವರ್ಷಗಳ ಕಾಲ ಕೆಲಸ ಮಾಡಿ ವಿದೇಶದಲ್ಲೂ ಇದ್ದು ಈಗ ತೋಟದಲ್ಲಿ ಕೆಲಸ ಮಾಡುತ್ತಿದ್ದಾರೆ. ಯಶಸ್ವೀ ಬದುಕು ಸಾಗಿಸುತ್ತಿದ್ದಾರೆ.

ಹಳ್ಳಿಯಿಂದ ಬೆಂಗಳೂರು ಬಸ್ಸು ಹತ್ತುವ ಹುಡುಗನ ಮನಸ್ಸಿನಲ್ಲಿರುವ ಯೋಚನೆ ಒಂದೇ, ಲಕ್ಷ ಹಣ ಎಣಿಸಬೇಕು, ಸುಂದರವಾದ ಮನೆಯೊಂದನ್ನು ನಗರದ ನಡುವೆ ಕಟ್ಟಬೇಕು..!. ಅದರಾಚೆಗಿನ ಬದುಕು ಆಗ ಕಾಣಿಸುವುದಿಲ್ಲ. ದಿನ ಕಳೆದಂತೆ, ಇದೆಲ್ಲಾ ಕನಸು ಈಡೇರಿದ ನಂತರ ಏನು ಎಂಬ ಪ್ರಶ್ನೆ ಉಳಿದು ಬಿಡುತ್ತದೆ. ಹೊಸತೊಂದು ಸಾಧನೆ ಇಲ್ಲವಾಗುತ್ತದೆ. ಇದಕ್ಕಾಗಿಯೇ ದೊಡ್ಡ ಉದ್ಯೋಗ ಬಿಟ್ಟು ಹಳ್ಳಿಗೆ ಬಂದ ಯುವಕ ಲಕ್ಷ್ಮಣ ದೇವಸ್ಯ ಎಲ್ಲಾ ಯುವಕರಿಗೂ ಮಾದರಿಯಾಗುತ್ತಾರೆ.
ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ದೇವಸ್ಯ ಎಂಬಲ್ಲಿ ಕೃಷಿ ಭೂಮಿ ಹೊಂದಿರುವ ಲಕ್ಷ್ಮಣ, ಬೆಂಗಳೂರಿನಲ್ಲಿ ಎಚ್‍ಎಎಲ್‍ನಲ್ಲಿ ಇಂಜಿನಿಯರ್ ಆಗಿದ್ದರು. ನಂತರ ಕೆನಡಾದಲ್ಲಿ ಉದ್ಯೋಗ ಮಾಡಿಕೊಂಡಿದ್ದರು. ಇದೆಲ್ಲಾ ಬದುಕು ಕೆಲವೇ ದಿನ ಎಂದು ಆವಾಗ ಅನಿಸಿತೋ, ಅಂದೇ ಹಳ್ಳಿಯ ತಮ್ಮ ಕೃಷಿ ಭೂಮಿಗೆ ಕುಟುಂಬ ಸಮೇತರಾಗಿ ಬರಲು ನಿರ್ಧರಿಸಿ  ಕೃಷಿಯಲ್ಲಿ ತೊಡಗಿಸಿಕೊಂಡರು. ಆದರೆ ಮತ್ತೆ ಒಂದು ವರ್ಷದ ಬಳಿಕ ಅಮೇರಿಕಾದಲ್ಲಿ ಕೆಲಸ ಮಾಡಿದರು, ಈಗ ಮತ್ತೆ ಹಳ್ಳಿಯ ಕೃಷಿ ಭೂಮಿಯಲ್ಲಿ ಟ್ರಾಕ್ಟರ್ ಓಡಿಸುತ್ತಿದ್ದಾರೆ.

ಕೃಷಿಗೆ ಇಳಿದು ಒಂದು ವರ್ಷದ ಬಳಿಕ ಮತ್ತೆ ಅಮೇರಿಕಾದಲ್ಲಿ ಕೆಲಸ ಮಾಡಿದ ಅನುಭವವೂ ಲಕ್ಷ್ಮಣ ಚೆನ್ನಾಗಿ ವಿವರಿಸುತ್ತಾರೆ. ರಾಜಧಾನಿಯಿಂದ ಕೃಷಿಗೆ ಬಂದಾಗ ಅನೇಕ ಕೃಷಿಕರು ನೆಗೆಟಿವ್ ಆಗಿಯೇ ಮಾತನಾಡಿದರು. ಕೃಷಿ ಯಶಸ್ಸಿನ ಬಗ್ಗೆ ದಾರಿ ತೊರಿಸಲಿಲ್ಲ, ಬದಲಾಗಿ ಮಣ್ಣು ಮೆತ್ತಿಸಿಕೊಳ್ಳುವುದೇ ಸೋಲು ಎಂದೇ ಆಗಾಗ ಹೇಳಿದರು. ಈ ಎಲ್ಲದರೂ ನಡುವೆಯೂ ತಾನು ನಂಬಿದ ಬದುಕನ್ನು ಬಿಡದೆ ನಡೆದು ಬಂದ ಛಲಗಾರ. ಹೊಸ ಮಾದರಿಯ ಹಟ್ಟಿಯೊಂದನ್ನು ನಿರ್ಮಾಣ ಮಾಡಿದರು, ದೊಡ್ಡ ದೊಡ್ಡ ಕನಸು ಇಟ್ಟುಕೊಂಡರೂ ಕೃಷಿಯ ಆರ್ಥಿಕ ನೆರವು ಸಾಕಾಗಾದಾಗ ಮತ್ತೆ ಕುಟುಂಬ ಸಮೇತರಾಗಿ ಅಮೇರಿಕಾಕ್ಕೆ ತೆರಳಿ ಇನ್ನೊಂದು ಕಂಪನಿಯಲ್ಲಿ ಕೆಲಸ ಮಾಡಿ ಒಂದಷ್ಟು ಆದಾಯ ಗಳಿಸಿ ಈಗ ಮತ್ತೆ ಕೃಷಿ ಭೂಮಿಗೆ ಇಳಿದಿದ್ದಾರೆ. ಈಗ ಹಳೆಯ ಎಲ್ಲಾ ಸೋಲುಗಳನ್ನೂ ಎದುರಿಸಿ ಸಮರ್ಥವಾಗಿ ಕೃಷಿ ಮಾಡುತ್ತಿದ್ದಾರೆ. ಯಶಸ್ಸು ಕಾಣುತ್ತಿದ್ದಾರೆ. ಹಾಗಂತ ಸಾಫ್ಟ್‍ವೇರ್ ಬದುಕು ಬದುಕೇ ಅಲ್ಲ ಎಂದು ಎಲ್ಲೂ ಲಕ್ಷ್ಮಣ ಹೇಳುತ್ತಿಲ್ಲ. ದೇಶದ ಪ್ರಗತಿಗೆ, ಕೃಷಿ ಪ್ರಗತಿಗೆ ಅದೂ ಬೇಕು. ಆದರೆ ಹೊಲ ಬಿಟ್ಟು, ಕೃಷಿ ಬಿಟ್ಟು ಕಷ್ಟ ಎನ್ನುವುದಷ್ಟೇ ನನ್ನ ಉದ್ದೇಶ ಎನ್ನುತ್ತಾರೆ.
ಮುಂದೇನು ಎಂಬ ಕಲ್ಪನೆಯನ್ನೂ ಚೆನ್ನಾಗಿ ಇರಿಸಿಕೊಂಡಿದ್ದಾರೆ.  ಕೃಷಿಕರದ್ದೇ ನೆಗೆಟಿವ್ ಸಂಗತಿಗಳಿಗೆ ಬೆಲೆ ಕೊಡದೇ ತನ್ನದೇ ಮಾದರಿಯಲ್ಲಿ ಕೃಷಿ ನಡೆಸಿ ಮಾದರಿಯಾಗುತ್ತಿದ್ದಾರೆ. ಇಬ್ಬರು ಮಕ್ಕಳನ್ನು ಕೃಷಿ ಜೊತೆಗೆ ಆಟವಾಡುತ್ತಾ ಪಾಠ ಕಲಿಯುವ ಮತ್ತು ಪರೀಕ್ಷೆ ಬರೆಸುವ ಉದ್ದೇಶ ಹೊಂದಿದ್ದಾರೆ. ನಗರದಲ್ಲಿದ್ದ ಅವರ ಪತ್ನಿಯೂ ಕೃಷಿಯ ಕೆಲಸಕ್ಕೆ ಸಹಕಾರ ನೀಡುತ್ತಿದ್ದಾರೆ.
ಮುಂದೇನು ಎಂಬ ಯೋಚನೆಗೆ ಉತ್ತರ "ವಿಗತಂ ವಿನೋದಂ" ಎಂಬ ಫ್ಯಾಕ್ಟರಿ ನಿರ್ಮಾಣ. ಈ ಕಂಪನಿಯನ್ನು ತನ್ನ ಕೃಷಿ ಭೂಮಿಯಲ್ಲಿ ನಿರ್ಮಾಣ ಮಾಡಲು ಭೂಮಿಕೆ ಸಿದ್ದ ಪಡಿಸಿದ್ದಾರೆ. ಇದರ ಉದ್ದೇಶ ಸ್ಪಷ್ಟವಾಗಿದೆ, ವಿಜ್ಞಾನ-ಗಣಿತ-ತಂತ್ರಜ್ಞಾನದ ಸಹಕಾರದಿಂದ ವಿನೋದವಾಗಿ ಮಕ್ಕಳಿಗೆ ಪಾಠ ಹೇಳಿಕೊಡುವ ವಿವಿಧ ವಸ್ತುಗಳ ತಯಾರಿ, ಮಕ್ಕಳನ್ನು  ಕ್ರಿಯೇಟಿವ್ ಆಗಿ ಬೆಳೆಸುತ್ತಾ ಹಳ್ಳಿಯ ಬದುಕಿಗೆ ಆದ್ಯತೆ ನೀಡುವುದರ ಜೊತೆಗೆ ಮಣ್ಣು ಮೆತ್ತಿಸಿಕೊಳ್ಳುವುದು ಸೋಲಿನ ಬದುಕಲ್ಲ, ಅದುವೇ ಮನುಷ್ಯ ಬದುಕಿನ ಮೊದಲ ಮೆಟ್ಟಿಲು ಎಂಬ ಪಾಠ ಮಾಡಲು ಸಿದ್ದ ಮಾಡಿಕೊಂಡಿದ್ದಾರೆ. ಇದೆಲ್ಲಾ ಈ ಬಾರಿ ಮಾಡಿಯೇ ತೀರುತ್ತೇನೆ ಎಂದು ಲಕ್ಷ್ಮಣ ಜಿದ್ದಿಗೆ ಬಿದ್ದಿದ್ದಾರೆ.
ಅನೇಕ ಯುವಕರು ಕೃಷಿ ಭೂಮಿ ಬಿಟ್ಟು ನಗರದ ವಾಸನೆ ಹಿಡಿದಾಗಲೇ ಹಳ್ಳಿ ವೃದ್ಧಾಶ್ರಮವಾಗುವ ಈ ಹೊತ್ತಿನಲ್ಲಿ, ವಿವಿಧ ಸವಾಲುಗಳನ್ನು  ಎದುರಿಸಲಾಗದೆ ಕೃಷಿಕರೇ  ತಮ್ಮ ಮಕ್ಕಳಿಗೆ ಮಣ್ಣಿನ ಬದುಕೇ ಬೇಡವೆನ್ನುವ ಮನೋಸ್ಥಿತಿ ಬೆಳೆಸುವ ಈ ಕಾಲದಲ್ಲಿ ಮಣ್ಣಿನ ಬಗ್ಗೆ, ಕೃಷಿ ಬದುಕಿನ ಬಗ್ಗೆ ಪಾಠ ಮಾಡುವ ಇಂತಹ ಮನಸ್ಸುಗಳಿಗೆ ಬೆಂಬಲ ನೀಡದೇ ಇದ್ದರೂ ನೆಗೆಟಿವ್ ಹೇಳದಿದ್ದರೆ ಸಾಕು ಅಷ್ಟೆ...!. ಅಮೇರಿಕಾದಲ್ಲಿ ಉದ್ಯೋಗದಲ್ಲಿರುವ ವ್ಯಕ್ತಿಯೊಂದಿಗೂ, ನಮ್ಮದೇ ಭೂಮಿಯಲ್ಲಿ ಕೃಷಿ ಮಾಡಿ ಬದುಕುವ ವ್ಯಕ್ತಿಯೊಂದಿಗೂ ಇಲ್ಲಿರುವ ಮಂದಿ ಮಾತನಾಡಿಸುವ ಶೈಲಿ ಸಮಾನವಾಗಿದ್ದರೆ ಸಾಕು.
ಕೃಷಿಯ ಬಗ್ಗೆ ಅನಾದಾರ ತೋರುವ ಮಂದಿ , ಕೃಷಿ ವೃತ್ತಿಪರತೆಯ ಬಗ್ಗೆಯೂ ಅದೇ ದಾಟಿಯಲ್ಲಿ ಮಾತನಾಡಲಾರರು. ವಿದೇಶದ ಕೃಷಿಯಲ್ಲಿ ಕಾಣುವ ವೃತ್ತಿಪರತೆ, ದಕ್ಷತೆ ಇಲ್ಲಿ ಕಾಣದು. ಅನೇಕ ಬಾರಿ ಈ ಬಗ್ಗೆ ಬೇಸರ ತಂದಿದೆ. ಕ್ವಾಲಿಟಿ, ಬದ್ಧತೆಯಲ್ಲಿ ವಿದೇಶಗಳಿಂದ ನಾವು ತುಂಬಾ ಹಿಂದಿದ್ದೇವೆ. ಕೃಷಿ ಮಾತ್ರಾ ಬೇಡ ಎನ್ನುವ ನಾವು, ಕೃಷಿ ಬದ್ಧತೆಯ ಬಗ್ಗೆ ಮಾತನಾಡುವುದಿಲ್ಲ ಎಂದು ಲಕ್ಷ್ಮಣ ಹೇಳುವಾಗ ಕೃಷಿ ಇಲ್ಲಿ ಏಕೆ ಸೋಲುತ್ತಿದೆ ಎನ್ನುವುದು  ಸ್ಪಷ್ಟವಾಗುತ್ತದೆ. ಇದಕ್ಕಾಗಿಯೇ ಹಳ್ಳಿಯ ಮಣ್ಣಿನಲ್ಲಿ ಯಶಸ್ಸು ಕಾಣಲು ಯುವ ಮನಸ್ಸುಗಳು ಕಾಣಬೇಕು, ಕೃಷಿ ಬದ್ಧತೆ ಹೆಚ್ಚಾಗಬೇಕು.

( ಹೊಸದಿಗಂತ - ಭೂಮಿಗೀತ - ಮಣ್ಣಿಗೆ ಮೆಟ್ಟಿಲು - 20 -12 - 2017 )


06 ಡಿಸೆಂಬರ್ 2017

ಹಳ್ಳಿಯಲ್ಲಿ ಸೋಲು ಕಾಣುವುದಿಲ್ಲ , ಹೊಲದಲ್ಲಿ ಸಾಲವೂ ಇಲ್ಲ....!





ಅದು ಮಹಾರಾಷ್ಟ್ರದ ಪುಟ್ಟ ಹಳ್ಳಿ. ಬರಗಾಲದಿಂದ ತತ್ತರಿಸಿ ಹೋಗಿದ್ದ ಊರು ಅದು. ಯಾವುದೇ ಕೃಷಿ ಮಾಡಿದರೂ ಕೈಗೆ ಸಿಗದ ಕಾಲ. ಆದರೆ ಈಗ ಕೃಷಿ ಯಶಸ್ಸು ಕಂಡಿದೆ, ಅಲ್ಲಿನ ಯುವಕನೊಬ್ಬ ಮಾಡಿರುವ ಪ್ರಯತ್ನ ಇಂದು ಉಳಿದೆಲ್ಲಾ ಕೃಷಿಕರಿಗೆ ಮಾದರಿಯಾಗಿದೆ...!. ನಮ್ಮ ನಾಡಿನ ಹುಬ್ಬಳ್ಳಿ ಸಮೀಪದ ಹನುಮನಹಳ್ಳಿ, ರಾಮಪುರ ಮೊದಲಾದ ಪ್ರದೇಶದಲ್ಲಿ ಕೂಡಾ ಬರಗಾಲದಿಂದ ಕೃಷಿಯೇ ಸೋಲುತ್ತಿದೆ ಎನ್ನುವ ಕೂಗು. ಇಲ್ಲೂ ಈಗ ಕಾಲ ಬದಲಾಗಿದೆ. ಇಡೀ ನಾಡಿಗೆ ಮಾದರಿಯಾಗಿದೆ. ಕೃಷಿಗೆ , ಕೃಷಿಕನಿಗೆ ಸೋಲು ಇಲ್ಲ ಎಂಬ ಸಂದೇಶ ಇದೆರಡೂ ಹಳ್ಳಿಗಳು ನೀಡಿವೆ. ಇದೆರಡೂ ಹಳ್ಳಿಯಲ್ಲಿ ಬದಲಾವಣೆಗೆ ಕಾರಣವಾದ್ದು ಸಾವಯವ ಪದ್ಧತಿಯ ಕೃಷಿ ಹಾಗೂ ಬದಲಾವಣೆಯ ಕೃಷಿ ಪದ್ದತಿ.

ನಾಡಿನಲ್ಲಿ ರೈತ ಆತ್ಮಹತ್ಯೆ ಪ್ರಕರಣಗಳು ಮೇಲಿನಿಂದ ಮೇಲೆ ಕೇಳುತ್ತಿದೆ. ಇದಕ್ಕೆ ಕಾರಣ ಕೇಳಿದರೆ ಬೆಳೆ ನಷ್ಟ ಹಾಗೂ ಸಾಲವೇ ಉತ್ತರವಾಗಿ ಕಾಣುತ್ತದೆ. ಇಂತಹ ಸಂದರ್ಭದಲ್ಲಿ ಬರಗಾಲವನ್ನೂ ಮೆಟ್ಟಿ ನಿಂತ ಉದಾಹರಣೆಗಳು ಸಾಕಷ್ಟು ಬಂದರೂ ರೈತರ ಮಾನಸಿಕ ಸ್ಥಿತಿ ಬದಲಾಗುತ್ತಿಲ್ಲ. ಬರಗಾಲಕ್ಕೆ, ನೀರಿನ ಕೊರತೆಗೆ ಸರಿಹೊಂದುವ ಬೆಳೆಯತ್ತ, ಕೃಷಿ ಪದ್ದತಿಯಲ್ಲಿ ಬದಲಾವಣೆಯ ಬಗ್ಗೆ ಚಿಂತನೆ ನಡೆಸದೇ ಇರುವುದು ತಿಳಿಯುತ್ತದೆ. ಭವಿಷ್ಯದಲ್ಲಿ ಸಮಸ್ಯೆ ಇರಬಹುದಾದರೂ ಏಕಬೆಳೆಯನ್ನೇ ಬಹುತೇಕ ರೈತರು ನೆಚ್ಚಿಕೊಂಡಿದ್ದಾರೆ. ಅದು ಬದಲಾಗಬೇಕಿದೆ.
ಅದು 2012 ರ ಸಮಯ ಹುಬ್ಬಳ್ಳಿಯ ವಿವಿದೆಡೆ ಬರಗಾಲದ ಛಾಯೆ ಕಂಡುಬಂದಿತ್ತು. ಅನೇಕ ರೈತರು ಕಂಗಾಲಾಗಿದ್ದರು. ಅನೇಕ ವರ್ಷಗಳಿಂಲೂ ಪರಂಪರಾಗತವಾಗಿ ಬೆಳೆದುಕೊಂಡು ಬಂದಿದ್ದ ರಾಗಿಯನ್ನೇ ಬೆಳೆಯುತ್ತಿದ್ದರು. ಬಹುಪಾಲು ರೈತರು ಪ್ರತೀ ವರ್ಷವೂ ಸೋಲುತ್ತಿದ್ದರು. ಬೆಳೆ ನಷ್ಟ ಅನುಭವಿಸುತ್ತಿದ್ದರು. ಆದರೆ ಆ ಊರಿನ ಕೆಲ ರೈತ ಮಾತ್ರ ಅತ್ಯುತ್ತಮ ಇಳುವರಿಯನ್ನು ತಂದರು. ಇದು ಉಳಿದೆಲ್ಲಾ ರೈತರಿಗೆ ಅಚ್ಚರಿ ಕಾದಿತ್ತು, ಇದಕ್ಕೆ ಕಾರಣ ಹುಡುಕಲು ತೊಡಗಿದರು. ಆಗ ಸಿಕ್ಕಿದ ಉತ್ತರ ಉಳಿದ ರೈತರಿಗೂ ಸೋಲಿನಿಂದ  ಹೊರಬರಲು ಕಾರಣವಾಯಿತು. ಬರಗಾಲಕ್ಕೆ ಉತ್ತರ ನೀಡಲು ಸಾಧ್ಯವಾಯಿತು.
ಅದುವರೆಗೆ ಉತ್ತಮ ಇಳುವರಿ ಬರಲು ರೈತರು ಸಾಕಷ್ಟು ರಾಸಾಯನಿಕ ಬಳಸಿ ಇಳುವರಿ ಪಡೆಯಲು ಪ್ರಯತ್ನ ಮಾಡುತ್ತಿದ್ದರು. ಆದರೆ ಮಳೆಯ ಕೊರತೆಯಿಂದ ಸಾಕಷ್ಟು ಫಸಲು ಇದ್ದರೂ ಕೈಗೆ ಬಾರದೆ ನಷ್ಟ ಅನುಭವಿಸುವ ಸ್ಥಿತಿ ಅದಾಗಿತ್ತು. ಪರಿಸ್ಥಿತಿ ಹೀಗಿರುವಾಗ, ಆಗ ರಾಜ್ಯದಲ್ಲಿ ಸಾವಯವ ಕೃಷಿಯ ಬಗ್ಗೆ ಜೋರಾದ ಚಳುವಳಿ ಇತ್ತು, ಸರಕಾರವೇ ಇದಕ್ಕಾಗಿ ಯೋಜನೆಯನ್ನೂ ಮಾಡಿತ್ತು. ಈ ಯೋಜನೆ ಹುಬ್ಬಳ್ಳಿ ಪರಿಸರದಲ್ಲೂ ಜಾರಿಯಾಯಿತು. ಸಾವಯವ ಸಂಘಗಳು ಹುಟ್ಟಿಕೊಂಡವು. ಇದರ ಪರಿಣಾಮವಾಗಿ ಅನೇಕ ರೈತರು ಸಂಪೂರ್ಣ ಸಾವಯವ ಕೃಷಿಯತ್ತ ಆಕರ್ಷಿತರಾದರು. ಸಾವಯವ ಕೃಷಿ ಕಡೆಗೆ ಬರುವ ರೈತರಿಗೆ ಆರ್ಥಿಕ ನೆರವು, ವರ್ಮಿ-ಕಾಂಪೆÇೀಸ್ಟ್ ಮಾಡುವ ವಿಧಾನ ಇತ್ಯಾದಿಗಳ ಬಗ್ಗೆ ಮಾಹಿತಿ ನೀಡುತ್ತಾ ಮಣ್ಣನ್ನು ಸಂರಕ್ಷಿಸುವ ಕೆಲಸ ನಡೆಯಿತು. ಇದರ ಫಲವಾಗಿ ಸಹಜವಾದ, ಸಮೃದ್ಧವಾದ ಕೃಷಿಯಾಯಿತು. ಮಣ್ಣು ಫಲವತ್ತಾಯಿತು, ಬರಗಾಲದ ನಡುವೆಯೂ ಇಳುವರಿ ಉಳಿಯಿತು. ಹೊಲದಲ್ಲಿ ಸಾಲವಿಲ್ಲ, ಸೋಲೂ ಇಲ್ಲ ಎಂಬ ಮನವರಿಕೆಯಾಯಿತು. ಈಗ ಅವರು ಬೆಳೆಯುತ್ತಿರುವ ರಾಗಿ ಹೊಸದಾದ ಯಾವುದೇ ಬೆಳೆ ಅಲ್ಲ ಬದಲಾಗಿ ಸಹಜ, ರಾಸಾಯನಿಕ ಮುಕ್ತವಾದ ಕೃಷಿಗೆ ತಿರುಗಿದ್ದಾರೆ ಅಷ್ಟೇ. ಇದೊಂದೇ ಸಾಕಿತ್ತು, ಆ ಹಳ್ಳಿಯ ರೈತರ ಬದುಕಿಗೆ ಬೆಳಕು ನೀಡಲು. ಹಿಂದೆಲ್ಲಾ ಕೀಟನಾಶಕ ಮತ್ತು ಬಿಟಿ-ಹತ್ತಿ, ಸೋಯಾ ಮತ್ತು ಮೆಕ್ಕೆಜೋಳದಂತಹ ನೀರಿನ ಆಶ್ರಯದ ಬೆಳೆಯ ಕೇಂದೀೀಕರಿಸುವ ಬದಲಾಗಿ ರಾಗಿಯ ಕಡೆಗೇ ಮನಸ್ಸು ಹೊರಳಿದೆ ಎನ್ನುವುದು ಯಶಸ್ಸಿನ ಸಂಕೇತ. ಕಳೆದ ವರ್ಷ ಸುಮಾರು 50 ಟನ್‍ಗಳಷ್ಟು ಬೆಳೆ ಮಾರಾಟ ಮಾಡಿದರೆ ಈ ಬಾರಿ ಅದಕ್ಕಿಂತ 4 ಪಟ್ಟು ಹೆಚ್ಚಳದ ನಿರೀಕ್ಷೆಯಲ್ಲಿದ್ದಾರೆ ಎಂದರೆ ಸಾವಯವ ಕೃಷಿಪದ್ದತಿ ಹಾಗೂ ಮಣ್ಣಿನ ಫಲವತ್ತತೆಯ ಬಗ್ಗೆ ಈಗ ಯೋಚಿಸಬೇಕಾದ ಸಮಯ.

ಮಹಾರಾಷ್ಟ್ರದ ಜಲ್ಗಾಂವ್ ಪ್ರದೇಶದ ವೈದ್ಯಕೀಯ ವಿಭಾಗದಲ್ಲಿ ಓದುತ್ತಿದ್ದ ಯುವಕ ಸಂದೇಶ್ ತನ್ನ ಓದು ನಿಲ್ಲಿಸಿ ಹೊಸಸವಾಲನ್ನು ತೆಗೆದುಕೊಂಡು ಕೃಷಿಗೆ ಇಳಿದ. ಅನೇಕ ವರ್ಷಗಳಿಂದ ಬರಗಾಲದಿಂದ ಈಗಾಗಲೇ ಬೆಳೆಯುತ್ತಿದ್ದ ಬಾಳೆಹಣ್ಣು ಮತ್ತು ಹತ್ತಿ  ಕೃಷಿಯಿಂದ ನಷ್ಟವಾಗುತ್ತಿರುವ ಕಾರಣ ಕೃಷಿ ಪದ್ದತಿ ಬದಲಾಗಬೇಕು ಹಾಗೂ ಹಣವೂ ಲಭ್ಯವಾಗಬೇಕು ಎಂದು ಅಂತರ್ಜಾಲದಲ್ಲಿ ತಡಕಾಡಿ ಮಾಹಿತಿ ಪಡೆದು ಕೊನೆಗೆ ಕಾಶ್ಮೀರದ ಹವಾಮಾನದಲ್ಲಿ ಬೆಳೆಯುವ ಕೇಸರಿ ಕೃಷಿಗೆ ಇಳಿದ. ಇದಕ್ಕಾಗಿ ವಿವಿಧ ಪ್ರಯೋಗ ಮಾಡಿದ. ಆರಂಭದಲ್ಲಿ ಅನೇಕರು ಈ ಯುವಕನ ಪ್ರಯತ್ನಕ್ಕೆ ತಣ್ಣೀರು ಎರಚಿದರು. ಹಾಗಿದ್ದರೂ ಪ್ರಯತ್ನ ಬಿಡದೆ ಯಶಸ್ಸು ಸಾಧಿಸಿದ. ಈ ಅಪರೂಪದ ಬೆಳೆಯಿಂದ ಉತ್ತಮ ಆದಾಯ ಗಳಿಸಿದ. ಈಗ ಆ ಇಡೀ ಊರಿಗೆ ಹೊಸ ಕೃಷಿಯೊಂದು ಸಿಕ್ಕಿದೆ, ಬರಗಾಲಕ್ಕೆ ಉತ್ತರವನ್ನೂ ನೀಡಿದ್ದಾರೆ.

ಮಲೆನಾಡು ಭಾಗದಲ್ಲೂ ಇಂತಹದ್ದೇ ಮತ್ತೊಂದು ಸಮಸ್ಯೆ ಅಡಿಕೆ ಬೆಳೆಗಾರರದ್ದು. ಅಡಿಕೆ ಬಗ್ಗೆ ವಿಶ್ವದಾದ್ಯಂತ ಅಪಪ್ರಚಾರವಾಗುತ್ತಿರುವಾಗಲೂ ಅಡಿಕೆಯ ಭವಿಷ್ಯದ ಬಗ್ಗೆ ಇನ್ನೂ ಚಿಂತನೆಯನ್ನೇ ಶುರು ಮಾಡಿಲ್ಲ. ಇದರ ಜೊತೆಗೆ ಪರ್ಯಾಯ ಏನು ಎಂಬುದರ ಬಗ್ಗೆಯೂ ಯೋಚನೆ ನಡೆದಿಲ್ಲ. ಇಂದಿಗೂ ಅಡಿಕೆ ಧಾರಣೆಯ ಸುತ್ತಲೇ ಸುತ್ತುತ್ತಿರುವಾಗಲೇ ಕೆಲವು ರೈತರು, ಯುವಕರು ಅಡಿಕೆಯ ಪರ್ಯಾಯ ಬಳಕೆಯತ್ತ ಹಾಗೂ ಇನ್ನೂ ಕೆಲವು ರೈತರು ಪರ್ಯಾಯ ಬೆಳೆಯತ್ತ ಯೋಚನೆ ಮಾಡುತ್ತಿರುವುದು ನಿರೀಕ್ಷೆಯ ಮೆಟ್ಟಿಲು. ಯಾವತ್ತೂ ಕೃಷಿ ಸೋಲುವುದಿಲ್ಲ, ಆದರೆ ಕೃಷಿ ಪದ್ದತಿ ಹಾಗೂ ಮಾರುಕಟ್ಟೆಯ ವಿಧಾನದಲ್ಲಿ ರೈತನಿಗೆ ಯಶಸ್ಸು ದೂರವಾಗುತ್ತದೆ ಎನ್ನುವುದನ್ನು ಹುಬ್ಬಳ್ಳಿಯ ಪಟ್ಟ ಊರು ಹಾಗೂ ಮಹಾರಾಷ್ಟ್ರದ ಯುವಕ ಸಂದೇಶ ನೀಡುತ್ತಾನೆ.



 ( ಹೊಸದಿಗಂತ - ಮಣ್ಣಿಗೆ ಮೆಟ್ಟಿಲು - 6 - 12 - 2017 )



 


24 ನವೆಂಬರ್ 2017

ದೇಸೀ ಗೋವು ಬದಲಿಸಿದ ಕೃಷಿ......




ಗೋವು....!. ಈ ಎರಡಕ್ಷರ ಇಂದು ಸಂಚಲನದ ವಿಷಯ. ವಾಸ್ತವಾಗಿ ಇದು ಮಣ್ಣಿನ ಉಳಿವಿನ ಪ್ರಶ್ನೆ. ಗೋವು ಇದ್ದರೆ ಮಣ್ಣಿನ ಉಸಿರು, ಮಣ್ಣಿನ ಉಸಿರಿದ್ದರೆ ಹಸಿರು. ಎಲ್ಲರೂ ಗೋವಿನ ಹಾಲಿನ ಬಗ್ಗೆಯೇ ಮಾತನಾಡುತ್ತಾರೆ. ಆದರೆ ಗೋವಿನ ಸೆಗಣಿ ಬಗ್ಗೆಯೂ ಮಾತನಾಡುವವರು ಇದ್ದಾರೆ. ಈ ಮೂಲಕವೇ ಮಣ್ಣನ್ನು ಹಸನಾಗಿಸಿದವರು ಇದ್ದಾರೆ. ನಳನಳಿಸುವ ಕೃಷಿಯನ್ನು ಕಂಡು ಖುಷಿಪಟ್ಟವರಿದ್ದಾರೆ.

ಎಲ್ಲಾ ಕೃಷಿಕರು, ಗೋಸಾಕಾಣಿಕೆ ಮಾಡುವ ಮಂದಿಯೂ ಮಾತನಾಡುವುದು ದನದ ಹಾಲಿನ ಬಗ್ಗೆಯೇ. ದನ ಹಾಲೆಷ್ಟು ನೀಡುತ್ತದೆ? ಲಾಭವೋ ನಷ್ಟವೋ?, ದನದ ಖರ್ಚು ಸರಿದೂಗಿಸುವುದೇ ಕಷ್ಟ... ಇದೆರಡೇ ಪ್ರಶ್ನೆ. ಆದರೆ ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ವಳಲಂಬೆ ಬಳಿಯಲ್ಲಿರುವ ಮಹಾಬಲೇಶ್ವರ ಭಟ್ಟರು ದನದ ಹಾಲಿನ ಬಗ್ಗೆ ಮಾತನಾಡುವುದು ,ಈ ಬಗ್ಗೆ ಕೇಳುವುದು ಎರಡನೇ ಪ್ರಶ್ನೆ. ಅವರ ಮೊದಲ ಪ್ರಶ್ನೆ, ದನ ಎಷ್ಟು ಸೆಗಣಿ ಹಾಕುತ್ತದೆ? ನಮ್ಮ ಮನೆಯ ಎರಡು ದನ ದಿನಕ್ಕೆ ಹಾಕುವ ಸೆಗಣಿ 17 ಕೆಜಿ..!. ಇಲ್ಲಿಂದಲೇ ಅವರ ಮಾತು ಶುರುವಾಗುತ್ತದೆ. ಹಾಗೆ ಮಾತನಾಡುತ್ತಾ ಸಾಗಿದಂತೆ ಅಲ್ಲಿ ಮಣ್ಣು ಉಸಿರಾಡುವುದು ಗೊತ್ತಾಗುತ್ತದೆ  ಎದುರಲ್ಲೇ ನಳನಳಿಸುವ ಕಾಳುಮೆಣಸಿನ ಬಳ್ಳಿ ಸಿಗುತ್ತದೆ, ಅಡಿಕೆ ಮರದ ಸೋಗೆ ಆರೋಗ್ಯವಾಗಿರುವುದು ಕಾಣುತ್ತದೆ. ಮಹಾಬಲೇಶ್ವರ ಭಟ್ಟ ಮುಖದಲ್ಲಿ ಮಂದಹಾಸ, ಸಂತೃಪ್ತ ಭಾವ.

ದೇವಸ್ಥಾನದ ಅರ್ಚಕರಾದ ಮಹಾಬಲೇಶ್ವರ ಭಟ್ಟರು ಅನೇಕ ವರ್ಷಗಳಿಂದಲೂ ಸಾವಯವ ಕೃಷಿಕರೇ ಆಗಿದ್ದರು. ಅರ್ಚಕ ವೃತ್ತಿಯ ಜೊತೆಗೆ ಅಡಿಕೆಯೇ ಪ್ರಮುಖ ಬೆಳೆ. ಅದರ ಜೊತೆಗೆ ಕೊಕೋ, ಕಾಳುಮೆಣಸು, ಬಾಳೆ. ಇದೆಲ್ಲಾ ಕೃಷಿ ಇದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಯಶಸ್ಸು ಕಾಣುತ್ತಿರಲಿಲ್ಲ. ಮಣ್ಣಿನಲ್ಲೂ ಅಂತದ್ದೇನೂ ಬದಲಾವಣೆ ಇದ್ದಿರಲಿಲ್ಲ. ತೋಟದ ನಡುನಡುವೆ ಅಡಿಕೆ ಮರದ ಸೋಗೆ ಕೆಂಪಾಗಿದ್ದು ಕಾಣುತ್ತಿತ್ತು. ಪರಿಹಾರ ಎಲ್ಲೆಲ್ಲೂ ಸಿಕ್ಕಿರಲಿಲ್ಲ. ಈಗ ನೋಡಿದರೆ ಅದೇ ತೋಟದ ಮಣ್ಣಿನಲ್ಲಿ ಬದಲಾವಣೆ ಕಂಡಿತು, ಹಸಿರು ನಳನಳಿಸುತ್ತಿದೆ. ಇಡೀ ತೋಟದಲ್ಲಿ ಕಾಳುಮೆಣಸು ಸಹಿತ ಇತರೆಲ್ಲಾ ಕೃಷಿಗಳಿಗೆ ಮರುಜೀವ ಬಂದಿದೆ. ಇಂತಹ ಬದಲಾವಣೆ ಕಂಡದ್ದು, ಮಣ್ಣು ಉಸಿರಾಡಿದ್ದು ಗೋವಿನ ಮೂಲಕ. ಅದೂ ದೇಸೀ ಗೋವಿನ ಕಾರಣದಿಂದ.

ತಮ್ಮ ಅಡಿಕೆ ತೋಟದ ಸುಮಾರು 380 ಅಡಿಕೆ ಮರಗಳಿಗೆ ಅನೇಕ ವರ್ಷಗಳಿಂದ ಕಂಪನಿಗಳಿಂದ ಸಾವಯವ ಗೊಬ್ಬರ ಖರೀದಿ ಮಾಡಿ ಹಾಕುತ್ತಿದ್ದರು. 17 ವರ್ಷಗಳಿಂದ ಇದೇ ರೀತಿ ಮಾಡುತ್ತಲೇ ಬಂದಿದ್ದರೂ ಸಮಾಧಾನ ಇರಲಿಲ್ಲ, ನಿರೀಕ್ಷಿತ ಫಲಿತಾಂಶ ಸಿಗಲಿಲ್ಲ. ಅದೊಂದು ದಿನ ಕೃಷಿ ಋಷಿ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಅಲ್ಲಿಂದ ನಂತರ ವಿವಿಧ ಪ್ರಯೋಗ ಮಾಡುತ್ತಲೇ ಇದ್ದರು. ಬಳಿಕ ನೆಕ್ಕರಕಳೆಯ ಸುಬ್ರಹ್ಮಣ್ಯ ಪ್ರಸಾದ್ ಎಂಬ ಕೃಷಿಕರು  ನೀಡಿದ ಮಾಹಿತಿ ಆಧಾರದಲ್ಲಿ ತಾವೇ ಸ್ವತ: ಗೊಬ್ಬರ ತಯಾರು ಮಾಡಲು ಶುರು ಮಾಡಿದರು. ಅದಕ್ಕಾಗಿಯೇ ದೇಸೀ ಗೋವನ್ನು ಸಾಕಲು ಆರಂಭಿಸಿದರು. ಅದುವರೆಗೆ ಇದ್ದ ವಿವಿಧ ತಳಿಯ ಗೋವುಗಳ ಸಾಕಾಣಿಗೆ ದೂರ ಮಾಡಿ ದೇಸೀ ತಳಿಯ ಗೋವನ್ನು ಸಾಕಿದರು. ಅದುವರೆಗೆ ಇದ್ದ ಗೋಬರ್ ಗ್ಯಾಸ್ , ಸ್ಲರಿ ಪದ್ದತಿ ಬಿಟ್ಟರು. ಕೇವಲ ದೇಸೀ ಗೋವಿನ ಸೆಗಣಿ ಸಂಗ್ರಹಿಸಿ ಅದರ ಮೂಲಕವೇ ಗೊಬ್ಬರ ತಯಾರು ಮಾಡಿ ಅಡಿಕೆ ಮರ ಸಹಿತ ತಮ್ಮೆಲ್ಲಾ ಕೃಷಿಗೆ ಹಾಕಿದರು. ಕೆಲವೇ ಸಮಯದಲ್ಲಿ ಬದಲಾವಣೆ ಕಂಡರು. ಈಗ ಹಾಲಿಗಾಗಿ ಅಲ್ಲ ಸೆಗಣಿಗಾಗಿಯೇ ಗೋವನ್ನು ಸಾಕಲು ಶುರು ಮಾಡಿದ್ದಾರೆ. ದನ ಹಾಲು ಕೊಡುವುದಕ್ಕಾಗಿಯೇ ಇರುವುದು ಎಂಬ ಭಾವವೇ ಇಲ್ಲ. ಹಾಲಿನಿಂದಲೇ ಲಾಭ ಅಲ್ಲ ಎಂಬ ಮನೋಭಾವ ಬೆಳೆಸಿದ್ದಾರೆ. ಹಾಗಂತ ತುಂಬಾ ನಿರೀಕ್ಷೆ ಇರಿಸಿ ಅವರ ತೋಟಕ್ಕೆ, ಗೋವುಗಳನ್ನು ನೋಡಲು ಹೋದರೆ ನಿಮಗೇನೂ ಕಾಣಲು ಸಿಗದು. ಜ್ಞಾನದ, ಅನುಭವದ ಮಾತುಗಳ ಸರಕು ಲಬ್ಯವಾದೀತು, ಪ್ರತೀ ಗಿಡದಲ್ಲಿನ ಬದಲಾವಣೆಯನ್ನು ಅವರು ವಿವರಣೆ ನೀಡಲು ಶಕ್ತರು.

ಹಾಗಿದ್ದರೆ ದನದ ಸೆಗಣಿ ಹೇಗೆ ಲಾಭ ಎಂಬುದನ್ನೂ ಅವರೇ ವಿವರಿಸುತ್ತಾರೆ, ಅವರ 2 ದನಗಳು ದಿನಕ್ಕೆ 17 ಕೆಜಿ ಸೆಗಣಿ ಹಾಕುತ್ತದೆ. ಇದೆಲ್ಲಾ ಸಂಗ್ರಹ ಮಾಡುತ್ತಾ ಸುಮಾರು 700 ಕೆಜಿ ಸೆಗಣಿ ಸಂಗ್ರಹವಾದ ಬಳಿಕ ಅದಕ್ಕೆ ಜೀವಾಮೃತ ಸಿಂಪಡಣೆ ನಂತರ 2 ತಿಂಗಳ ಕಾಲ ಮುಚ್ಚಿಡುತ್ತಾರೆ. ನಂತರ 700 ಕೆಜಿಗೆ ತಲಾ ಶೇ30 ರಂತೆ ಹೊಂಗೆ, ಹರಳಿಂಡಿ, ಬೇವಿನಹಿಂಡಿ ಹಾಗೂ ರಾಕ್‍ಪಾಸ್ಪೇಟ್‍ನೊಂದಿಗೆ ಮಿಶ್ರಣ ಮಾಡಿ ಗೋಣಿಯಲ್ಲಿ ತುಂಬಿ ಕೃಷಿಗೆ ಅಳವಡಿಸುತ್ತಿದ್ದಾರೆ. ಇದರ ಪರಿಣಾಮ ಮಣ್ಣಿಗೆ ಉಸಿರು ಸಿಕ್ಕಿತು. ಹಸಿರು ನಳನಳಿಸಿತು. ಈಗ ಅಡಿಕೆ ಮರದ ಸೋಗೆ ಉದ್ದ ಬರುತ್ತಿದೆ, ಹಿಂಗಾರ ಉದ್ದ ಬರುತ್ತಿದೆ, ಹಳದಿಯಾಗಿಯೇ ಇರುತ್ತಿದ್ದ ಅಡಿಕೆ ಮರದ ಸೋಗೆ ಹಸಿರಾಗಿದೆ. ಇನ್ನೊಂದು ಪ್ರಮುಖವಾದ ಅಂಶವೆಂದರೆ ಬೇಸಗೆಯಲ್ಲಿ ನೀರಿನ ಸಮಸ್ಯೆ ಇವರ ತೋಟಕ್ಕೆ ಇದೆ.ಆದರೆ ಈ ಬಾರಿ ನೀರು ಕಡಿಮೆಯಾದರೂ ತೊಂದರೆಯಾಗಿಲ್ಲ. ಕಳೆದ 8 ವರ್ಷಗಳಿಂದ ಅಡಿಕೆ ನಳ್ಳಿ ಬೀಳುತ್ತಿತ್ತು, ಈಗ ನಳ್ಳಿ ಬೀಳುವುದು ಕಡಿಮೆಯಾಗಿದೆ ಎಂದು ಹೇಳುವಾಗ ಮಹಾಬಲೇಶ್ವರ ಭಟ್ಟ ಮುಖದಲ್ಲಿ ಸಾರ್ಥಕತೆ ಕಾಣುತ್ತದೆ. ಈಗ 2 ಗೋವಿನ ಮೂಲಕ ವರ್ಷಕ್ಕೆ 2 ಬಾರಿ 4 ಕೆಜಿ ಗೊಬ್ಬರ ನೀಡಲು ಸಾಧ್ಯವಾಗುತ್ತದೆ. ಈಗ ಮಣ್ಣಿನಲ್ಲಿ ಬದಲಾವಣೆ ಕಂಡಿದೆ. ಎರೆಹುಳಗಳು ಸಾಕಷ್ಟು ಇವೆ. ಕಾಳುಮೆಣಸು ಬಳ್ಳಿಗೆ ಬರುವ ರೋಗ ನಿಯಂತ್ರಣದಲ್ಲಿದೆ ಎನ್ನುತ್ತಾ ಗೋವಿನ ಮೂಲಕ ಆದ ಕೃಷಿ ಬದಲಾವಣೆ, ಮಣ್ಣು ಜೀವ ಪಡೆದ ಬಗೆಯನ್ನು ಹೇಳುತ್ತಾರೆ.
ಗೋವು ಬರಿಯ ಹಾಲಿಗೆ ಮಾತ್ರಾ, ಹೋರಿ ಯಾಕಾಗಿ ಸಾಕುವುದು  ಎಂಬ ಕೂಗು, ಕೊರಗು ಅನೇಕರಲ್ಲಿದೆ. ಆದರೆ ಮಹಾಬಲೇಶ್ವರ ಭಟ್ಟರು ಹೇಳುವುದು ಕೇವಲ ಹಾಲಿಗಾಗಿ ದೇಸೀ ದನ ಸಾಕುವುದಲ್ಲ, ಆ ಭಾವವೇ ಬೇಡ. ನಾವು ಸೆಗಣಿಗಾಗಿ ಸಾಕುವುದು, ಮಣ್ಣು ಉಳಿಸಲು ಗೋವು ಸಾಕುವುದು  ಎನ್ನುವ ಮನೋಭಾವ ಬೆಳೆಸಿದ್ದಾರೆ. ಹಾಗಾಗಿ ದೇಸೀ ಗೋವು ಅವರಿಗೆ ಮಣ್ಣಿನ ಸಂರಕ್ಷಕ...!.

ಕೃಷಿ ಕ್ಷೇತ್ರದಲ್ಲಿ, ಬಹುತೇಕ ತೋಟದಲ್ಲಿ ಇಂದು ಮಣ್ಣು ಉಸಿರಾಡುವುದು ಕಡಿಮೆಯಾಗಿದೆ. ರಾಸಾಯನಿಕದ ಪರಿಣಾಮ ಫಲವತ್ತತೆ ಕಡಿಮೆಯಾಗುತ್ತಿದೆ. ಹೀಗಾಗಿ ಭೂಮಿಯ ಮೇಲಿನ ಹಸಿರೂ ಸತ್ವ ಕಳೆದಕೊಂಡಿದೆ. ಇಂತ ಸಂದರ್ಭದಲ್ಲಿ ಅವುಗಳಿಗೆಲ್ಲಾ ಪರಿಹಾರವಾಗಿ , ಮಣ್ಣಿಗೆ ಮೆಟ್ಟಿಲಾಗಿ ಗೋವು ನಿಂತಿದೆ. ಹಾಲಿಗಾಗಿಯೇ ಅಲ್ಲ, ಸೆಗಣಿಗಾಗಿಯಾದರೂ ಗೋವು ಸಾಕಾಣಿಗೆ ನಡೆಯಲಿ.ಸೆಗಣಿಗೂ ಈಗ ಬೆಲೆ ಇದೆ...!. ( ಮಹಾಬಲೇಶ್ವರ ಭಟ್ ಸಂಪರ್ಕಕ್ಕೆ - 9448659751 )







20 ನವೆಂಬರ್ 2017

ಏರುವ ಬಿಪಿ..... ಕಾಣುವ ಸತ್ಯ.....





ಸುಮಾರು 35 ವರ್ಷ. ಇದ್ದಕ್ಕಿದ್ದಂತೆ ಆರೋಗ್ಯದ ತಪಾಸಣೆ ಮಾಡಬೇಕು ಎನಿಸಿತು. ವೈದ್ಯಕೀಯ ತಪಾಸಣೆಗೆ ಮುನ್ನ ಸಾಮಾನ್ಯ ವ್ಯಕ್ತಿಯಾಗಿದ್ದರೆ  ಬರುವಾಗ ಸ್ವಲ್ಪ ಬಿಪಿ ಹೆಚ್ಚಿದೆ....!. ಹಾಗಂತ ಯಾವುದೇ ಟ್ಯಾಬ್ಲೆಟ್ ಬೇಡ, ಸುಧಾರಿಸಿಕೊಳ್ಳಬೇಕು...

ಬೆಳಗ್ಗೆ ನನ್ನ ಪುಟಾಣಿಗಳನ್ನು ಶಾಲೆಗೆ ಬಿಡುವ ಹೊತ್ತು. ದೈನಂದಿನ ತುರ್ತು ಕೆಲಸಗಳ ಮುಗಿಸಿ ಬೈಕ್ ಹತ್ತಿ ಹೋಗುವಾಗ ಪುಟಾಣಿ ಹೇಳುತ್ತಾನೆ, ಇಂದು ಎಲ್ಲೂ ಹೋಗಬೇಡ, ಶಾಲೆ ಬಿಟ್ಟು ಬರೋವಾಗ ನೀನಿರಬೇಕು. ಆಟವಾಡಲು ಇದೆ...!. ಸರಿ.. ಸರಿ...... ಅಂದರೂ ಆ ಹೊತ್ತು "ಕಾಣೆ...".

ಇಂದು ತೋಟದ ನಡುವೆ ಹಲವು ಕೆಲಸಗಳು ಇವೆ. ಅದೆಲ್ಲಾ ಇಂದೇ ಮುಗಿಸಬೇಕು. ನಾಳೆ ಹೊಸದೊಂದು ಗಿಡ ನೆಡುವುದಕ್ಕೆ ಇದೆ, ಕೃಷಿ ಕಾರ್ಯದ ಸಹಾಯಕ್ಕೆ ಇಂದು 5 ಜನ ಬರುವರು ಎಂದು ಅಪ್ಪ ಹೇಳಿದಾಗಲೂ, ಸರಿ ಸರಿ ಎನ್ನುತ್ತಾ ಜನ ಬರುವ ಹೊತ್ತಿಗೆ "ನಾಪತ್ತೆ...."

ಬೇಗನೆ ಕಾಫಿ ಕುಡಿಯಬೇಕು. ಒಬ್ಬೊಬ್ಬರೇ ಬಂದರೆ ಆಗದು. ಬೇರೆ ಕೆಲಸವೂ ಇದೆ. ಬೇಗ ಊಟ ಮುಗಿಸಬೇಕು,... ಸರಿ ಸರಿ ಎನ್ನುತ್ತಾ ಸಂಗಾತಿಯ ಮುಂದೆಯೂ "ಕಾಣೆ..."

ಹೊಸ ಹೊಸ ವಿಷಯದ ಕಸನು ಹೊತ್ತು, ಅದ್ಯಾವುದೋ ಗ್ರಾಮದ ಸಮಸ್ಯೆಗೆ ಬೆಳಕು ನೀಡಬೇಕು, ಆ ಊರಿನ ಜನರಿಗೆ ನೆಮ್ಮದಿ ಸಿಗಬೇಕು. ಅದ್ಯಾರೋ ಬಡವನಿಗೆ ಆದ ಸಂಕಷ್ಟ ರಾಜ್ಯದ ದೊರೆಯ ಗಮನಕ್ಕೆ ಬರಬೇಕು, ಪರಿಹಾರ ಸಿಗಬೇಕು ಎಂದು ಕಂಪ್ಯೂಟರ್ ಮುಂದೆ ಕುಳಿತು ಮಾಡಿದ ಸುದ್ದಿಯೂ ಮರುದಿನ ಕಾಣೆ....!. ಕಾರಣ ಇನ್ನೇನೋ....!. ಹಾಗೊಂದು ವೇಳೆ ಬಂದರೂ, ವಾಸ್ತವವಾದರೂ  ಅದಕ್ಕೆ ಇನ್ನೊಂದಿಷ್ಟು "ಉಪ್ಪು-ಹುಳಿ-ಖಾರ".

ಇಡೀ ದಿನ ಹೀಗೇ ಕಳೆಯುತ್ತಾ ಸುಮಾರು 10 ವರ್ಷ ಕಳೆದು ಹೋದವು....!. ಈಗ ಸಾಧನೆಯ ಕಾರ್ಡ್ ನೋಡಿದರೆ "ಬಿಪಿ".

ಇತ್ತೀಚೆಗೆ ದೇಹಕ್ಕೆ ಶಕ್ತಿ ನೀಡುವ , ಚೈತನ್ಯ ತುಂಬುವ, ಮೆದುಳನ್ನು  ರಿಲ್ಯಾಕ್ಸ್ ಮಾಡುವ ಕೆಲಸದಲ್ಲಿ ತೊಡಗಿಸಿಕೊಂಡಾಗ ಅನಿಸಿದ್ದು , ಭೂತಕಾಲದ ಎಲ್ಲಾ ಸನ್ನಿವೇಶಗಳು, ಘಟನೆಗಳು ಅನುಭವಗಳಾದರೆ. ವ್ಯಕ್ತಿಗಳಿಂದ ತೊಡಗಿ ವಸ್ತುಗಳವರೆಗೆ, ಆಹಾರದಿಂದ ತೊಡಗಿ ವಿಹಾರದವರಗೆ , ಎಲ್ಲದರ ಒಂದು ಮುಖ ತಿಳಿದಿದೆ.  ಭವಿಷ್ಯದ ಬದಲಾವಣೆ, ಘಟನೆಗಳು ತಿಳಿದಿಲ್ಲ. ಹಾಗಾಗಿ ವರ್ತಮಾನದಲ್ಲಿ ಬದುಕುವ ಪ್ರಯತ್ನ ನಡೆಯುತ್ತಿದೆ. ಒಮ್ಮಿದೊಮ್ಮೆಲೇ ಇದೆಲ್ಲಾ ಕಷ್ಟ, ಆದರೂ ಸುಲಭ..!.

ಈಗ ಹೇಳಲು ಹೊರಟದ್ದು, ಬದುಕಿನ ಅನಗತ್ಯ ಒತ್ತಡ.
ಬೆಳಗ್ಗೆ ಪುಟಾಣಿಗಳ ಜೊತೆ ಶಾಲೆಗೆ ಹೊರಡುವ, ಅವರನ್ನು ಶಾಲೆಗೆ ಬಿಡುವ ಖುಷಿ, ಉಲ್ಲಾಸ ,ನಂತರ ಸಮಯ ಏರುತ್ತಿದ್ದಂತೇ ಬದಲಾಗುತ್ತಾ ಹೋಗುತ್ತದೆ. ಅದೇ ಒತ್ತಡ. ಸಂಜೆ ಪುಟಾಣಿ ಬಂದು ಆಟಕ್ಕೆ ಕರೆದಾಗ ಬೆಳಗಿನ ಖುಷಿಯೇ ಸಿಟ್ಟಾಗಿರುತ್ತದೆ, ಆ ಪುಟಾಣಿಗೆ ಇದೆಲ್ಲಾ ಹೇಗೆ ಗೊತ್ತು...? . ಹೀಗಾಗಿ ಯಾವುದಕ್ಕೂ ಪ್ರಯೋಜನಕ್ಕೆ ಬಾರದ ಒತ್ತಡ ಅದು. ಇದುವೇ ಆರೋಗ್ಯದ ಮೇಲೆ ಪರಿಣಾಮ. ಸವಾಲುಗಳು ಬೇಕು ನಿಜ, ಸವಾಲು ಇಲ್ಲದ ಬದುಕು ಇಲ್ಲ.  ಆದರೆ ಅದರ ಪರಿಣಾಮ ಹಾಗೂ ಅದರಿಂದ ಸ್ವಂತಕ್ಕಾಗಿ ಸಿಗುವ ಸುಖ  ಎಷ್ಟು ಎಂಬುದರ ಮೇಲೆ ಸವಾಲು ಸ್ವೀಕಾರವಾಗಬೇಕು.  ಹೆಚ್ಚಿನ ಸಂದರ್ಭ ಅಂತಹ ಸವಾಲು ಅನಗತ್ಯ. ವ್ಯರ್ಥವಾದ ಹೋರಾಟ..!. ಇದಕ್ಕಾಗಿ ಇಂತಹ ಹೋರಾಟಗಳಿಂದ ಹಿಂದೆ ಬರುವ ಬದಲು ತಟಸ್ಥವಾಗುವ ಮೂಲಕ ದೇಹದ ಆರೋಗ್ಯ ಸುಧಾರಣೆ. ಮಾತನಡುವ ಬದಲು ಮೌನವಾಗುವುದು ಹೆಚ್ಚು ಸೂಕ್ತ. ಇದು ನಮ್ಮೊಳಗಿನ ದೊಡ್ಡ ಗೆಲುವು. ನಮ್ಮೊಳಗಿನ ಖುಷಿ.

ಒಂದು ಶಕ್ತಿಯ, ಒಂದು ಸತ್ಯವ, ಒಂದು ಸಿದ್ದಾಂತವನ್ನು ನಂಬುವ ಕಾರಣದಿಂದ ಅನೇಕ ಬಾರಿ ಈ ನಂಬಿಕೆಯೇ ದಾರಿ ತೋರಿಸುತ್ತದೆ. ಸತ್ಯ ಎತ್ತಿ ಹೇಳುತ್ತದೆ, ಅರಿವು ಮೂಡಿಸುತ್ತದೆ. ಘಟನೆಯ ಹಿಂದೆ ಇರುವ ಮತ್ತೊಂದು ಮುಖದ ಅನಾವರಣ ಮಾಡಿಸುತ್ತದೆ. ಆಗ ಬೆಳಕು ಕಾಣುತ್ತದೆ. ದಾರಿ ಸ್ಪಷ್ಟವಾಗುತ್ತದೆ.
ಈಗಲೂ ಕಾಣುವುದು ಸ್ಪಷ್ಟವಾದ ದಾರಿ. ಈಗ ಮಬ್ಬು ಕವಿದಿದೆ. ವರ್ತಮಾನದಲ್ಲಿ ಯೋಚನೆ ನಡೆದಿದೆ. ಮುಂದೆ ಸಾಗುತ್ತಿದ್ದಾಗ, ದೂರದಲ್ಲಿ ಇನ್ನೊಂದು ಬೆಳಕು ಕಾಣಿಸುತ್ತಿದೆ. ಹತ್ತಿರವಾಗುತ್ತಿದೆ.  ಅದು ಯಶಸ್ಸು. ಅದು ಗುರಿ.
ಈಗ ಪುಟಾಣಿ ಜೊತೆ ಹರಟಲು ಖುಷಿಯಾಗುತ್ತಿದೆ, ನಿತ್ಯವೂ ಆಟವಾಡಲು ಖುಷಿಯಾಗುತ್ತಿದೆ...!.


16 ನವೆಂಬರ್ 2017

ಕೃಷಿ ಸುಲಭಕ್ಕೆ "ಯಂತ್ರ" ಕಟ್ಟುವ ನಮ್ಮೂರ ತಂತ್ರಜ್ಞರು...!



                                                              ( ಸಾಂದರ್ಭಿಕ ಚಿತ್ರ)


ಕೃಷಿಕ ಗೋವಿಂದ ರಾವ್ ಸುಮಾರು 10 ವರ್ಷಗಳ ಹಿಂದೆ ರಿಕ್ಷಾವನ್ನು ವಿನ್ಯಾಸಗೊಳಿಸಿ ಅಡಿಕೆ ತೋಟದ ಒಳಗೆ ಹೋಗುವಂತೆ ಮಾಡಿಕೊಂಡರು. ಇದಕ್ಕಾಗಿ ಪ್ರತ್ಯೇಕ ರಸ್ತೆಯೂ ತೋಟದಲ್ಲಿ ಸಿದ್ದವಾಯಿತು. ಈ ವ್ಯವಸ್ಥೆ ಬಗ್ಗೆ ಅಂದು ಚರ್ಚೆಯಾಯಿತು. ಬಹುತೇಕ ಕೃಷಿಕರು "ಇದಾಗದು" ಎಂದರು...!. ಗೋವಿಂದ ರಾವ್ ಸೊಪ್ಪು ಸಾಕಲಿಲ್ಲ. ಅವರು 10 ವರ್ಷಗಳ ನಂತರದ ಸ್ಥಿತಿಯ ಬಗ್ಗೆಯೇ ಯೋಚನೆ ಮಾಡಿದ್ದರು.
ವಿದೇಶಗಳಲ್ಲಿ ಕಾಣುತ್ತಿದ್ದ ,ಟಿವಿಗಳಲ್ಲಿ  ನೋಡುತ್ತಿದ್ದ ಕಳೆ ಕೊಚ್ಚುವ ಯಂತ್ರ ಭಾರತದಲ್ಲಿ ಕಾಣಿಸಿತು. ಕೃಷಿಕರ ತೋಟಕ್ಕೂ ಇಳಿಯಿತು. ಆಗಲೂ ಚರ್ಚೆಯಾಯಿತು. ಅನೇಕರು ಕೃಷಿಕರು "ಇದು ನಮಗೆ ಆಗದು" ಎಂದರು...!. ಹೊಸ ಸಮಸ್ಯೆಗಳನ್ನೇ ಹೇಳಿಕೊಂಡರು, ಸವಾಲು ಸ್ವೀಕರಿಸಲು ಒಪ್ಪಲಿಲ್ಲ.

ಇಂದು ಬಹುತೇಕ ಎಲ್ಲಾ ಕೃಷಿಕರ ತೋಟದಲ್ಲಿ ಇಣುಕಿದರೆ ಯಂತ್ರಗಳ ಸದ್ದು ಕೇಳುತ್ತದೆ. ತೋಟದ ಒಳಗಡೆ ಅಟೋದ ಬದಲಾಗಿ ಸುಧಾರಿತ ಯಂತ್ರಗಳು ಕಾಣುತ್ತದೆ, ಮಿನಿ ಜೆಸಿಬಿ ಮಣ್ಣು ಅಗೆಯುತ್ತದೆ, ಮಣ್ಣನ್ನು ಹೊನ್ನು ಮಾಡುವುದು  ಕಾಣುತ್ತದೆ. ಇದೆಲ್ಲಾ ಕೇವಲ 10 ವರ್ಷದ ಬದಲಾವಣೆಯಷ್ಟೇ...! ಇಲ್ಲಿ ಸವಾಲುಗಳನ್ನು ಸ್ವೀಕರಿಸಲೇಬೇಕಾದ ಅನಿವಾರ್ಯತೆ ಬಂದಿತು. ಹಾಗಿದ್ದರೂ ಸವಾಲುಗಳಿಗೆ ಉತ್ತರ ನೀಡುವಷ್ಟು ಯಂತ್ರಗಳ ಬಳಕೆ, ಆವಿಷ್ಕಾರದ ವೇಗ ಕಾಣುತ್ತಿಲ್ಲ. ನಿರೀಕ್ಷೆಗಳು ಮಾತ್ರವೇ ಹೆಚ್ಚಾಗುತ್ತಿದೆ.

ಈ ಬದಲಾವಣೆಯ ಹಿಂದೆ, ಯಂತ್ರಗಳ ಆವಿಷ್ಕಾರದ ಹಿಂದೆ ನಮ್ಮದೇ ಊರಿನ ತಂತ್ರಜ್ಞರ ಕೈವಾಡ ಇರುತ್ತದೆ. ನಮ್ಮದೇ ತೋಟದ ನಡುವೆ ಓಡಾಡಿದ ಹುಡುಗರ ಶ್ರಮ ಇರುತ್ತದೆ. ಯುವಕರ ಪ್ರಯತ್ನ ಇರುತ್ತದೆ. ಬಹುತೇಕ ಕೃಷಿಕರ ಮಕ್ಕಳು ಓದುತ್ತಾ ಓದುತ್ತಾ ಕೃಷಿ ಬಿಡುತ್ತಾರೆ, ಹಳ್ಳಿ ಬಿಟ್ಟು, ಕೃಷಿ ಬಿಟ್ಟು ರಾಜಧಾನಿ ಸೇರುತ್ತಾರೆ ಎಂದೇ ಚರ್ಚೆಯಾಗುತ್ತದೆ. ಆದರೆ ಇಲ್ಲೂ ಮಣ್ಣಿನ ಮೇಲೆ ಪ್ರೀತಿ ಇರುವ, ಕೃಷಿ ಮೇಲೆ ಬದುಕು ಕಟ್ಟುವ ಆಸೆಯುಳ್ಳ ಯುವ ಮನಸ್ಸುಗಳು ಸದ್ದಿಲ್ಲದೆ ಪ್ರಯತ್ನ ಮಾಡುತ್ತಿದ್ದಾರೆ. ಕೃಷಿ ಸಮಸ್ಯೆಯನ್ನ ಸ್ವತ: ಮನಗಂಡು ಅವುಗಳ ನಿವಾರಣೆಗೆ ನಗರದಲ್ಲೋ, ಹಳ್ಳಿಯಲ್ಲೂ ಕುಳಿತು ಪ್ರಯತ್ನ ಮಾಡುತ್ತಿದ್ದಾರೆ. ಇದಕ್ಕಾಗಿಯೇ ಸುಲಭ ಯಂತ್ರಗಳನ್ನು ಕಟ್ಟುವ ಕೆಲಸ ನಮ್ಮೂರಿನ ತಂತ್ರಜ್ಞರು ಮಾಡುತ್ತಿದ್ದಾರೆ. ಆದರೆ ಇಲ್ಲಿಯ ಕೊರತೆ ಎಂದರೆ ಪ್ರೋತ್ಸಾಹ...!.
ಯಂತ್ರಮೇಳ ಅಥವಾ ಕೃಷಿ ಮೇಳಗಳಲ್ಲಿ ನಮ್ಮ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಅಥವಾ ಕೃಷಿಕರೇ ಅಭಿವೃದ್ಧಿ ಪಡಿಸಿದ ವಿವಿಧ ಯಂತ್ರಗಳು ಇರುತ್ತದೆ. ಮೇಳದಲ್ಲಿ ಹೊಸ ಆವಿಷ್ಕಾರದ ಬಳಿ ಬಂದಾಗ, ಎರಡೇ ಸಿದ್ಧ ಪ್ರಶ್ನೆ ಇರುತ್ತದೆ. "ಇದೆಲ್ಲಿ ಸಿಗುತ್ತದೆ" , "ಇದು ಹೇಗೆ ಕೆಲಸ ಮಾಡುತ್ತದೆ...?" ಇದರ ಜೊತೆಗೇ "ಇದು ನಮಗೆ ಆಗದು...." , "ಮಾರ್ಕೆಟ್‍ನಲ್ಲಿ ಸಿಗದ ಮೇಲೆ ಏಕೆ ನೋಡುವುದು...."...!.ಇಂತಹ ಮನಸ್ಥಿತಿಯಿಂದಲೇ ಬಹುತೇಕ ಯುವಕರ ಕೃಷಿ ಸಂಶೋಧನೆಗಳು ಅರ್ಧಕ್ಕೆ ನಿಂತಿದೆ. ಕೃಷಿಕರೇ ಅಭಿವೃದ್ಧಿಪಡಿಸಿದ ವಿವಿಧ ಯಂತ್ರಗಳು ಮೂಲೆಗುಂಪಾಗಿದೆ. ಹೀಗಾಗಿ ಆಗಬೇಕಾದ್ದು ಎರಡೇ ಎರಡು ಪ್ರೋತ್ಸಾಹದ ಮಾತು, ಜೊತೆಗೆ ನಮಗೆ ಹೇಗೆ ಬೇಕು ಎಂಬುದರ ಸಲಹೆ. ಇದೆರಡು ಸಿಕ್ಕಿದರೆ ಸಂಶೋಧನೆಗಳೇ ಮುಂದೆ ಯಂತ್ರಗಳಾಗಿ ಸಿಗುತ್ತದೆ. ಅಂತಹದ್ದು ಒಂದಲ್ಲ, ಎರಡಲ್ಲ..!

ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಅಡಿಕೆಯೇ ಪ್ರಮುಖ ಕೃಷಿ. ಇಲ್ಲಿ ಸಮಸ್ಯೆಯೇ ಹೆಚ್ಚು.ಅಡಿಕೆ ಕೊಳೆರೋಗಕ್ಕೆ ಔಷಧಿ ಸಿಂಪಡನೆ, ಕೊಯ್ಲು ಮಾಡುವುದು , ಮರ ಏರುವುದು  ಇತ್ಯಾದಿಗಳು ಇಲ್ಲಿ ದೊಡ್ಡ ತಲೆನೋವು. ಕಾರ್ಮಿಕರದ್ದೇ ಸಮಸ್ಯೆ. ಇದಕ್ಕಾಗಿ ವಿವಿಧ ಯಂತ್ರಗಳ ಅಭಿವೃದ್ಧಿಯಾಗಿದೆ.

ಶಿವಮೊಗ್ಗದ ಗಾಜನೂರು ಪ್ರದೇಶದಲ್ಲಿರುವ ಶೆರ್ವಿನ್ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿಧರ. ಇವರ ಕುಟುಂಬಕ್ಕೆ ಅಡಿಕೆ ಕೃಷಿಯೇ ಆಧಾರ. ಕೃಷಿ ಸಮಸ್ಯೆ ಹತ್ತಿರದಿಂದ ಬಲ್ಲ ಇವರು ಅಡಿಕೆ ಕೊಯ್ಲು ಮಾಡಲು ಯಂತ್ರವೊಂದನ್ನು ಸಿದ್ದಪಡಿಸಿದರು. ಅದಕ್ಕೆ ಬೀಟಲ್‍ನಟ್ ರ್ಯಾಪರ್ ಅಂತ ಕರೆದರು. ಈ ಯಂತ್ರಕ್ಕೆ ಚಿಕ್ಕ ಇಂಜಿನ್ ಅಳವಡಿಸಲಾಗಿದೆ. ಎರಡು ಚಕ್ರಗಳ ಮೂಲಕ ಅಡಿಕೆ ಮರವನ್ನು ಏರಿ ಯಂತ್ರದ ಮುಂಭಾಗದಲ್ಲಿ ಅಳವಡಿಸುವ ಬ್ಲೇಡ್ ಮೂಲಕ ಅಡಿಕೆ ಗೊನೆ ಕತ್ತರಿಸಿ ಅಡಿಕೆ ಸಹಿತ ಕೆಳಗೆ ಇಳಿಯುತ್ತದೆ.

ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ  ಯಲ್ಲಪ್ಪರವಿ ಎಂಬ ಎಂಟೆಕ್ ವಿದ್ಯಾರ್ಥಿ ಭತ್ತದ ಗದ್ದೆಗೆ ಔಷಧಿ ಸಿಂಪಡಣೆಗೆ ಡ್ರೋನ್ ಮಾದರಿಯ ಯಂತ್ರ ಅಭಿವೃದ್ಧಿ ಪಡಿಸಿದ್ದಾರೆ. ವಿದೇಶಗಳಲ್ಲಿ ಇಂತಹ ಯಂತ್ರ ಕಂಡುಬಂದರೂ ದೇಶದಲ್ಲಿ ಇದರ ಅಭಿವೃದ್ಧಿ ಆಗಿರಲಿಲ್ಲ. ಈ ವಿದ್ಯಾರ್ಥಿ ಭತ್ತದ ಬೆಳೆಗೆ ಉಪಯೋಗವಾಗುವ ಮಾದರಿಯಲ್ಲಿ ಅಭಿವೃದ್ಧಿಪಡಿಸಿ ಪ್ರಾಯೋಗಿಕ ಯಶಸ್ಸು ಕಂಡಿದ್ದಾರೆ. ಇವರಿಗೆ ಕಾಲೇಜು ಹಾಗೂ ಕೃಷಿಕರು ಪ್ರೋತ್ಸಾಹ ನೀಡಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಅಡಿಕೆ ಕೊಳೆರೋಗಕ್ಕೆ ಔಷಧಿ ಸಿಂಡಪಣೆಗೆ ಧರ್ಮಸ್ಥಳ ಬಳಿಯ ನಿಡ್ಲೆಯ ಅಡಿಕೆ ಬೆಳೆಗಾರ ಕುಟುಂಬದಿಂದ ಬಂದ ಇಂಜಿನಿಯರ್ ಅವಿನಾಶ್ ರಾವ್ ಎಂಬವರು ಡ್ರೋನ್ ಮಾದರಿಯ ಯಂತ್ರ ತಯಾರು ಮಾಡಿದ್ದಾರೆ. ಈಗ ಬಹುತೇಕ ಯಶಸ್ಸು ಕಂಡಿದೆ. ಕೊಳೆರೋಗಕ್ಕೆ ಔಷಧಿ ಸಿಂಪಡಣೆ ಇನ್ನು ಸಿಲಭವಾಗಲಿದೆ. ಈಗಾಗಲೇ ಅಂತಿಮ ಹಂತ ತಲಪಿದ ಈ ಯಂತ್ರವನ್ನು ನವೆಂಬರ್ ತಿಂಗಳಲ್ಲಿ  ಧರ್ಮಸ್ಥಳದಲ್ಲಿ ಪ್ರದರ್ಶನಗೊಂಡು ಉದ್ಘಾಟನೆಗೊಳ್ಳಲಿದೆ. 2008 ರಿಂದ ಈ ಪ್ರಯತ್ನ ಮಾಡುತ್ತಿದ್ದ ಅವರಿಗೆ ಕ್ಯಾಂಪ್ಕೋ ಪ್ರೋತ್ಸಾಹ ನೀಡಿತ್ತು.
ಇನ್ನು ಶಿವಮೊಗ್ಗದ ಯುವಕರ ತಂಡ, ತಮಿಳುನಾಡಿನ ಕೃಷಿಕ, ಸುಳ್ಯದ ಕೃಷಿಕ ಗಣಪ್ಪಯ್ಯ ಅವರ ಪ್ರಯೋಗ..... ಹೀಗೇ ವಿವಿಧ ಕೃಷಿ ಯಂತ್ರಗಳ ಅಭಿವೃದ್ಧಿಯಾಗಿದೆ.
ಇದನ್ನೆಲ್ಲಾ ಪಾಸಿಟಿವ್ ಆಗಿ ತೆಗೆದುಕೊಂಡು ಪ್ರೋತ್ಸಾಹ ನೀಡಬೇಕಾದ್ದು ಅಗತ್ಯ. ಇಂದಲ್ಲ, ಮುಂದಿನ 10 ವರ್ಷಗಳ ನಂತರದ ಕೃಷಿಯ ಸ್ಥಿತಿಯ ಬಗ್ಗೆ ಯೋಚನೆ ನಡೆಯಬೇಕು. ಲೋಪಗಳೇ ಯಂತ್ರದ ಸೋಲಿನ ಕಾರಣವಾಗಬಾರದು, ಆ ಲೋಪಗಳೇ ಸುಧಾರಣೆಯಾಗಿ ಭವಿಷ್ಯದ ಸುಭದ್ರ ಕೃಷಿಗೆ ನಾಂದಿಯಾಗಬೇಕು. ನಮ್ಮದೇ ಊರಿನ ಯಂತ್ರ ಕಟ್ಟುವ ತಂಡಕ್ಕೆ ನಾವೇ ಬೆಂಗಾವಲಾಗಬೇಕು. ಅಂದು ಕೃಷಿಕ ಗೋವಿಂದ ರಾವ್ ರಿಕ್ಷಾವನ್ನು ವಿನ್ಯಾಸಗೊಳಿಸಿ ಮುಂದಡಿ ಇರಿಸಿದ್ದರಿಂದ ಅವರಿಗೆ ಇಂದು ಕಾರ್ಮಿಕರ ಸಮಸ್ಯೆ ತಲೆದೋರಿಲ್ಲ, ಕಳೆಕೊಚ್ಚುವ ಯಂತ್ರ ಬಳಕೆ ಮಾಡಿದ್ದರ ಪರಿಣಾಮ ನಿಗದಿತ ಸಮಯದಲ್ಲೇ ಕೃಷಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ಅಂದು ಅವರೂ ಹಿಂದೇಟು ಹಾಕುತ್ತಿದ್ದರೆ ಇಂದಿಗೂ ಕೃಷಿ ಯಂತ್ರಗಳು ಅವರತ್ತ ಬರುತ್ತಿರಲಿಲ್ಲ...!. ಮಣ್ಣು ಹಸನಾಗುತ್ತಿರಲಿಲ್ಲ...ಸಮಸ್ಯೆಗಳಿಗೆ ಉತ್ತರ ಸಿಗುತ್ತಿರಲಿಲ್ಲ.

(  ಮಣ್ಣಿಗೆ ಮೆಟ್ಟಿಲು - ಹೊಸದಿಗಂತ - 8-11-2017 )




30 ಅಕ್ಟೋಬರ್ 2017

ಗಿಡ ಸಹವಾಸದಿಂದ "ಸಮೃದ್ಧ" ಕೃಷಿ....!, ಗಿಡಗೆಳೆತನದಿಂದ ಸಸ್ಯವೈವಿಧ್ಯ...!




"ಮನುಷ್ಯರ ಗೆಳೆತನಕ್ಕಿಂತ ಗಿಡಗೆಳೆತನ ಎಷ್ಟೂ ನೆಮ್ಮದಿ" ಅಂತ ಹಿಂದೊಮ್ಮೆ ಕೀರ್ತಿಶೇಷ ಕಾಂತಿಲ ವೆಂಕಟ್ರಮಣ ಜೋಯಿಸರು ನೆನಪಿಸಿಕೊಳ್ಳುತ್ತಿದ್ದರು. ಹಾಗೆ ನೋಡಿದರೆ ವೆಂಕಟ್ರಮಣ ಜೋಯಿಸರ ಮನೆಯಲ್ಲಿ ನೂರಾರು ಬಗೆಯ ಸಸ್ಯ ವೈವಿಧ್ಯವಿತ್ತು, ಸಮೃದ್ಧ ಕೃಷಿ ಇತ್ತು. ಹೊಸ ಹೊಸ ಬಗೆಯ ಹಣ್ಣಿನ ಗಿಡಗಳು, ವಿನೂತನ ಬಗೆಯ ಸಸ್ಯಗಳು ಕಾಣಸಿಗುತ್ತಿತ್ತು. ಇದೆಲ್ಲಾ"ಸಮೃದ್ಧಿ"ಯಿಂದ ತಂದದ್ದು ಎಂದು ಅವರು ಆಗಾಗ ಹೇಳುತ್ತಿದ್ದರು. ಆದರೆ ಸಮೃದ್ಧಿ ಎಂದರೆ ಏನು ಎಂದು ತಿಳಿಯಲು ಅನೇಕ ವರ್ಷಗಳೇ ಬೇಕಾದವು. ಈಗ ಆ ಸಮೃದ್ಧಿಗೆ ರಜತ ಸಂಭ್ರಮ. 

"ಕೃಷಿ ಎಂದರೆ ಮಣ್ಣು ಹದ ಮಾಡುವುದು  ಮಾತ್ರವಲ್ಲ. ವೈವಿಧ್ಯತೆಯ ಕೃಷಿ, ಗಿಡಗಳ ಬೆಳೆಸುವುದೂ ಇರಬೇಕು. ಇದೆಲ್ಲಾ ಕೃಷಿಗೆ ಪೂರಕ" ಎಂದು ಸುಬ್ರಾಯ ಭಟ್ಟರು ಹೇಳುತ್ತಿದ್ದರು. ಈ ವೈವಿಧ್ಯತೆ ತರುವುದು ಅಷ್ಟು ಸುಲಭವಲ್ಲ. ಇದಕ್ಕಾಗಿಯೇ ಒಂದು ತಂಡ , ಒಂದೇ ರೀತಿಯ ಮನಸ್ಸು ಇರಬೇಕು. ಆಗ ಮಾತ್ರವೇ ವೈವಿಧ್ಯತೆಯ ಕೃಷಿಗೆ ಪೂರಕ ವಾತಾವರಣ ಸೃಷ್ಠಿಯಾಗಬಲ್ಲುದು. ಇಂತಹ ಮನಸ್ಸುಗಳನ್ನು ಕಟ್ಟಿದ್ದು 1993 ರಲ್ಲಿ. ಪುತ್ತೂರಿನಿಂದ ಪ್ರಕಟವಾಗುವ ಕೃಷಿಕ ಪರ ಮಾಧ್ಯಮ ಅಡಿಕೆ ಪತ್ರಿಕೆ ಇದಕ್ಕೆ ದಾರಿ ತೋರಿಸಿತು. ಅದುವೇ "ಸಮೃದ್ಧಿ". ಅಂದಿನಿಂದ ಇಂದಿನವರೆಗೂ ಗಿಡಗೆಳೆತನವನ್ನು ಸಮೃದ್ಧಿ ಹೇಳಿಕೊಟ್ಟಿದೆ. ವಿವಿಧ ಹೊಸ ಹೊಸ ಗಿಡಗಳನ್ನು ಮಲೆನಾಡಿಗೆ ಪರಿಚಯಿಸಿದೆ. ಸಮೃದ್ಧಿ ಬಳಗದ ಸದಸ್ಯರ ನಡುವೆ ಯಾವಾಗಲೂ ಹೊಸ ಸಸ್ಯಗಳ ವಿವರ, ಇನ್ನೂ ಹೊಸದರ ಶೋಧ, ಈ ಗಿಡಗಳ ಗುಣವಿಶೇಷಗಳ ಈ ಬಗ್ಗೆಯೇ ಚರ್ಚೆ. ಹೊಸ ತೋಟಗಳ ವೀಕ್ಷಣೆ. 
"ಸಾವಯವ ಕೃಷಿಯ ಬಗ್ಗೆ ಮಾತ್ರ ಆಸಕ್ತಿಯಿದ್ದ ನನಗೆ ಸಮೃದ್ಧಿಯ ಸಂಪರ್ಕದಿಂದ ಸಸ್ಯವೈವಿಧ್ಯದ ಬಗ್ಗೆಯೂ ಆಸಕ್ತಿ ಮೂಡಿತು, ವಿನಿಮಯವಾಗಿ ಬಂದ ಹಲವು ಗಿಡಗಳು ಈಗ ನನ್ನ ತೋಟದಲ್ಲಿ ಬೆಳೆದಿವೆ. ತರಕಾರಿಯಲ್ಲೂ ಸ್ವಾವಲಂಬಿ ಯಾಗಿದ್ದೇನೆ ಎಂದು ಪುತ್ತೂರಿನ ಕೃಷಿಕ ಎ.ಪಿ.ಸದಾಶಿವ ನೆನೆದರೆ, ಕರಿಂಗಾಣದ ಡಾ.ಕೆ.ಎಸ್.ಕಾಮತ್‍ರ ತೋಟದಲ್ಲಿ ಅವರೊಂದಿಗೆ ಸುತ್ತಿದರೆ ಆಗಾಗ ಸಮೃದ್ಧಿಯ ಬಗ್ಗೆ ಹೇಳುತ್ತಲೇ ಇರುತ್ತಾರೆ. ಬನಾರಸ್ ನೆಲ್ಲಿ,  ಹುಣಸೆ, ಪಾಲೂರ್ - ವನ್ ಹಲಸು, ಇದು ಕಾಂಚಿಕೇಳ ಬಾಳೆ.. ಇವೆಲ್ಲಾ ಸಮೃದ್ಧಿ ಮೂಲಕವೇ ಬಂದಿವೆ ಎಂದು ನೆನಪಿಸಿಕೊಳ್ಳುತ್ತಾರೆ.

ಹಾಗಿದ್ದರೆ ಸಮೃದ್ಧಿಯ ಬಗ್ಗೆ ಈಗ ಆಸಕ್ತಿ ಮೂಡುತ್ತದೆ. ಇದು ಗಿಡ ಗೆಳೆತನದ ಒಂದು ಪುಟ್ಟ ಕೂಟ ಅಷ್ಟೇ. ಚಿಂತನೆ ಮಾತ್ರಾ ದೊಡ್ಡದು. ವೆನಿಲ್ಲಾದ ಕಾಲ ಅದು, ಎಲ್ಲಾ ಕಡೆ ವೆನಿಲ್ಲಾ ಬಗ್ಗೆ ಭಾರೀ ಬೇಡಿಕೆ ಬಂದಿದ್ದರೆ ಸಮೃದ್ಧಿಯ ಸದಸ್ಯರಿಗೆ ಈ ಚಿಂತೆ ಅಂದು ಇದ್ದಿರಲಿಲ್ಲ. ಅವರೆಲ್ಲಾ ಅದಕ್ಕೂ ಮುನ್ನವೇ ಗಿಡ ನೆಟ್ಟಿದ್ದರು. ಆದರೆ ಗೆಳೆತನಕ್ಕಾಗಿ. ಹಣಕ್ಕಾಗಿ ಆಗಿರಲಿಲ್ಲ...!. ಇದರ ಉದ್ದೇಶವೇ ಅದು, ತರಕಾರಿ, ಅಲಂಕಾರಿಕ ಹೂವಿನ ಸಸ್ಯಗಳು, ಹಣ್ಣಿನ ಮರಗಳು ಮತ್ತು ಔಷಧೀಯ ಗಿಡಗಳ ಬಗ್ಗೆ ಅರಿವು, ವಿನಿಮಯ ಮಾಡಿಕೊಂಡು ಸಂರಕ್ಷಿಸಿ, ಹವ್ಯಾಸಕ್ಕಾಗಿ ಬೆಳೆಸುವುದು ಮುಖ್ಯ ಲಕ್ಷ್ಯ. ಕಳೆದ 25 ವರ್ಷಗಳಿಂದಲೂ ಇದೇ ಕೆಲಸ ಮಾಡಿಕೊಂಡು ಸಮೃದ್ಧಿ ಬರುತ್ತಿದೆ. 
ಇದು ಹುಟ್ಟಿಕೊಳ್ಳುವುದಕ್ಕೂ ಕಾರಣವಿದೆ, ಸುಮಾರು 1990 ರ ಕಾಲದಲ್ಲಿ ಅಡಿಕೆ ಧಾರಣೆ ಏರಿಕೆ ಕಂಡಿತು, ತೋಟಗಳು ಬೆಳೆಯತೊಡಗಿತು. ಇಂತಹ ಸಂದರ್ಭದಲ್ಲೂ ತರಕಾರಿ, ಹಣ್ಣು, ಗಿಡಗಳ ಬಗ್ಗೆ ಆಸಕ್ತಿಹೊಂದಿದ್ದ ಸಾಕಷ್ಟು ಕೃಷಿಕರಿದ್ದರು. ಇವರದೇ ಒಂದು ಕೂಟ ಏಕೆಮಾಡಬಾರದು ಎಂದು ಅಡಿಕೆ ಪತ್ರಿಕೆ ಚಿಂತಿಸಿತು. ಸಸ್ಯಪ್ರೇಮಿಗಳನ್ನು ಒಗ್ಗೂಡಿಸುವ ಗಿಡಗೆಳೆತನದ 'ಸಮೃದ್ಧಿ' ಹುಟ್ಟಿತು. ಪುತ್ತೂರು, ಬಂಟ್ವಾಳ, ಕಾಸರಗೋಡು ತಾಲೂಕುಗಳ ಹಲವು ಕೃಷಿಕರು ಸಮೃದ್ಧಿಯ ಅಡಿಯಲ್ಲಿ ಸೇರಿಕೊಂಡರು. ತಮ್ಮ ತೋಟದ ಅಪರೂಪದ ಸಸ್ಯಗಳೋ, ಬೀಜಗಳ ಕುರಿತಾಗಿ ಮಾತ್ರ  ಕಾಳಜಿ ವಹಿಸಿದವರು ವಿನಿಮಯಕ್ಕೂ ಶುರು ಮಾಡಿದರು. ತಮಗೆ ಪರಿಚಯವಿಲ್ಲದ ಬೀಜ, ಸಸ್ಯಗಳನ್ನು ಅನುಭವಿಗಳಿಗೆ ತೋರಿಸಿ ಅದರ ಪರಿಚಯ ಮಾಡಿಕೊಳ್ಳುವುದು, ಅಪರೂಪದವುಗಳನ್ನು ಸಮೃದ್ಧಿ ಸಭೆಗೆ ತಂದು ಇತರರಿಗೆ ವಿವರಿಸುವ ಪ್ರಕ್ರಿಯೆಗೆ ಚಾಲನೆ ಸಿಕ್ಕಿತು.  ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಈ ರೀತಿ ವಿನಿಮಯ ರೂಪದಿಂದ ವಿಶೇಷ ಜಾತಿಯ ಗಿಡಗಳು ಹರಡಿಕೊಂಡಿತು. ಇದರ ಜೊತೆಗೆ ಮಾಸಿಕ ಪ್ರವಾಸ, ವಿಶೇಷ ಕೃಷಿಕರ ಭೇಟಿ ಇತ್ಯಾದಿ ಕಾರ್ಯಕ್ರಮ ಆರಂಭವಾದವು. ಈ ಸಂದರ್ಭ ಕೃಷಿ ಮಾಹಿತಿ ವಿನಿಮಯ, ಹೊಸಪ್ರಯೋಗ, ಶ್ರಮ ಉಳಿಸಲು ಮಾಡಿದ ಜಾಣ್ಮೆಗಳ ಬಗ್ಗೆ ಚರ್ಚಿಸುತ್ತಾರೆ. ಈಗಲೂ ಅದು ಮುಂದುವರಿದಿದೆ. ಆರಂಭದ ದಿನಗಳಲ್ಲಿ ಅಮ್ಚಿಕಾಯಿ, ಹನುಮಫಲ, ಭೀಮಫಲ, ಮುಳ್ಳುಸೀತಾಫಲ, ಹಾವು ಬದನೆ, ಬಂಟಕೇಪುಳು, ರುದ್ರಾಕ್ಷಿಯಂತಹ ಅಪರೂಪದ ಗಿಡಗಳನ್ನು ಕಾಂತಿಲ ವೆಂಕಟ್ರಮಣ ಜೋಯಿಸರು ಪರಿಚಯಿಸಿದ್ದನ್ನು ಇಂದಿಗೂ ಹಲವಾರು ಮಂದಿ ನೆನಪಿಸಿಕೊಳ್ಳುತ್ತಾರೆ. ಅನಂತ ಭಟ್ಟನ ಅಪ್ಪೆಮಿಡಿ ತಳಿಯು ಸಮೃದ್ಧಿಯ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿನಿಮಯವಾಗಿದೆ. ಸಿಹಿಹುಣಸೆ, ರುದ್ರಾಕ್ಷಿ, ಚಳ್ಳೇಹಣ್ಣು, ಕನಕಚಂಪಕ, ಅಗರ್, ಕರ್ಪೂರ ಗಿಡ, ಜಂಬುನೇರಳೆ, ಆಫ್ರಿಕನ್ ಚಿಕ್ಕು, ಎಗ್‍ಫ್ರುಟ್, ರೆಕ್ಕೆಬದನೆ, ಕಾಂಚಿಕೇಳ ಬಾಳೆ, ನೀರುಹಲಸು, ಏಲಕ್ಕಿ ತುಳಸಿ. ಹೀಗೆ ಅಸಂಖ್ಯ ತಳಿಗಳು ಸಮೃದ್ಧಿಯ ಮೂಲಕ ಬಂದಿವೆ. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಈ ರೀತಿ ವಿನಿಮಯ ರೂಪದಿಂದ ವಿಶೇಷ ಜಾತಿಯ ಅಸಂಖ್ಯ ಗಿಡಗಳು ಹರಡಿ ಹೋಗಿವೆ. 
ಈಗ ಪ್ರತೀ ತಿಂಗಳ ಎರಡನೇ ಅಥವಾ ಮೂರನೇ ಶನಿವಾರ ಸಭೆ. ಸದಸ್ಯರು ಬರುವಾಗ ತಮ್ಮಲ್ಲಿಂದ ಗಿಡ, ಬೀಜಗಳನ್ನು ವಿನಿಮಯಕ್ಕಾಗಿ ತರುತ್ತಾರೆ. ಹಂಚಿಕೊಳ್ಳುತ್ತಾರೆ. ಈಗ ಸುಮಾರು ಐವತ್ತಕ್ಕೂ ಮಿಕ್ಕಿ ಸದಸ್ಯರಿದ್ದಾರೆ. ಈಚೆಗೆ ಬೇರೆ ಜಿಲ್ಲೆಗಳ ಕೃಷಿಕರಲ್ಲಿಗೆ ಪ್ರವಾಸವನ್ನು ಸೇರಿಸಿಕೊಂಡಿದೆ. ಇದರಿಂದಾಗಿ ಹೊರ ಊರಿನ ಕೃಷಿಕರೊಂದಿಗೆ ಸಂವಹನ ಬೆಳೆದುಕೊಂಡಿದೆ. ವರ್ಷಕ್ಕೊಮ್ಮೆ ಸಮಿತಿ ಬದಲಾಗುತ್ತದೆ. ಸದ್ಯ ಸಂಘದ ಅಧ್ಯಕ್ಷರಾಗಿ ಭಾಸ್ಕರ ಆರ್. ಕೆ  ಹಾಗೂ ಕಾರ್ಯದರ್ಶಿಯಾಗಿ ರಾಮ್‍ಪ್ರತೀಕ್ ಕರಿಯಾಲ ಮತ್ತು ಕೋಶಾಧಿಕಾರಿಯಾಗಿ ಎ ಪಿ ಸದಾಶಿವ ಸಮೃದ್ಧಿಯನ್ನು ನಡೆಸುತ್ತಿದ್ದಾರೆ. ಈ ಬಾರಿ ರಜತ ಸಂಭ್ರಮವನ್ನು ಅ.29 ರಂದು ಸುಳ್ಯ ತಾಲೂಕು ಕೋಟೆಮುಂಡುಗಾರಿನ ಕಳಂಜ-ಬಾಳಿಲ ಪಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಸಭಾಭವನದಲ್ಲಿ ಬೆಳಿಗ್ಗೆ ಗಂಟೆ 9ರಿಂದ ಸಂಜೆ ನಾಲ್ಕರ ತನಕ ಆಚರಿಸಲಿದೆ.
ಆಸಕ್ತಿಯೇ ಒಂದು ಸಂಘವಾಗಿ ಗಿಡಗೆಳೆತನದ ಮೂಲಕ ಕೃಷಿ ಸಮೃದ್ಧಗೊಳಿಸುವ ಹಾಗೂ ಬೆಳೆಸುವ ಕಾರ್ಯದಿಂದ ಮಣ್ಣನ್ನು ಹಸಿರಾಗಿಸುವ ಹಾಗೂ ಹಸಿರು ಹಸಿರಾಗಿಯೇ ಇರಿಸುವ ಇಂತಹ ಸಂಘ ಗ್ರಾಮ ಗ್ರಾಮಗಳಲ್ಲಿ ಮೊಳಕೆಯೊಡಬೇಕು ಎಂದು ಅಂದು ಕಾಂತಿಲ ವೆಂಟಕ್ರಮಣ ಜೋಯಿಸರು ಹೇಳುತ್ತಿದ್ದುದು ಇಂದಿಗೂ ಪ್ರಸ್ತುತವಾಗಿದೆ.

( ಹೊಸದಿಗಂತ - ಮಣ್ಣಿಗೆ ಮೆಟ್ಟಿಲು )

17 ಅಕ್ಟೋಬರ್ 2017

ಹಸಿರಿನ ಉಸಿರಿಗೆ ಬಣ್ಣದ ಲೇಪನ .....!

ಸರಕಾರಿ ಶಾಲೆಯ ಸುವರ್ಣ ಮಹೋತ್ಸವ ಸಂಭ್ರಮ.......

ಈ ಸಡಗರವನ್ನು ಹಸಿರಿನ ಮೂಲಕ ಸಾರಬೇಕು, ಶಾಲೆಯ ಚರಿತ್ರೆಯಲ್ಲಿ ಹಸಿರೇ ದಾಖಲಾಗಬೇಕು ಎಂದು ಸರಕಾರಿ ಶಾಲೆಯ ಶಿಕ್ಷಕ ರಮೇಶ್ ಉಳಯ ಹೇಳುತ್ತಿದ್ದರು. ಇದು ಹೇಗೆ ಸಾಧ್ಯ ಎಂದು ಆ ಸರಕಾರಿ ಶಾಲೆಯ ಅಭಿವೃದ್ಧಿ ಸಮಿತಿಯ ಸದಸ್ಯರೂ ಸೇರಿದಂತೆ ಊರಿನ ಮಂದಿ ಯೋಚನೆ ಮಾಡಿದ್ದರು. ಸರಕಾರಿ ಶಾಲೆಯಲ್ಲಿ ಇದೆಲ್ಲಾ ಸಾಧ್ಯವೇ ? ಎಂದೂ ಪ್ರಶ್ನೆ ಮಾಡಿದರು. ಎಲ್ಲಾ ಪ್ರಶ್ನೆಗಳ ನಡುವೆಯೂ ವಿವಿದೆಡೆಯ 40 ಕ್ಕೂ ಹೆಚ್ಚು ಚಿತ್ರಕಲಾ ಶಿಕ್ಷಕರು ಶಾಲೆಗೆ ಬಂದರು. ಹಸಿರಿಗೆ ಬಣ್ಣದ ಹೊಳಪು ನೀಡಿದರು...!.



ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ತೀರಾ ಗ್ರಾಮೀಣ ಭಾಗದಲ್ಲಿದೆ ತೆಗ್ಗು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ. ಈ ವರ್ಷ ಸುವರ್ಣ ಮಹೋತ್ಸವ ಆಚರಣೆ ಮಾಡುತ್ತಿದೆ. ಸುವರ್ಣ ಮಹೋತ್ಸವ ಎಂದಾಗ ಕಾಂಕ್ರೀಟು ಕಟ್ಟಡಗಳು ಸೇರಿದಂತೆ ವಿವಿಧ ಯೋಜನೆ ಸಿದ್ದವಾಗುತ್ತದೆ. ಆದರೆ ಇಲ್ಲಿ ಅಂತಹ ಯೋಜನೆಯ ಬದಲಾಗಿ ಹಸಿರು ಉಳಿಸುವ ಹಾಗೂ ಬೆಳೆಸಲು ಮತ್ತು ಸಂದೇಶ ಸಾರುವ ಯೋಜನೆ ಸಿದ್ದವಾಯಿತು. ಶಾಲೆಯ ಸುತ್ತಲೂ ಸುಮಾರು 2.5 ಎಕ್ರೆ ಜಾಗ ಇದೆ. ಇದರಲ್ಲಿ ಸುಮಾರು ಒಂದೂವರೆ ಎಕರೆ ಜಾಗದಲ್ಲಿ ಕೃಷಿ ಸಿದ್ದವಾಯಿತು. ಮಕ್ಕಳಿಗೆ ಮಣ್ಣಿನ ಪಾಠವನ್ನು ಹೇಳಿಕೊಡುತ್ತಾ ಊರಿನ ಮಂದಿ ಈ ಜಾಗದಲ್ಲಿ ಅಡಿಕೆ ಗಿಡ ನೆಟ್ಟರು, ಶಾಲೆಗಾಗಿ ಕೃಷಿ ಮಾಡಿದರು. ಉಳಿದ ಜಾಗದಲ್ಲಿ ಕಾಡು ಇದೆ, ಅದರ ಸಂರಕ್ಷಣೆ ನಡೆಯುತ್ತದೆ. ಇದರ ಜೊತೆಗೆ, ಇಡೀ ನಾಡಿಗೆ ಹಸಿರು ಉಳಿಸುವ ಸಂದೇಶ ನೀಡಲು "ಪರ್ಣದ ಉಳಿವಿಗೆ ವರ್ಣದ ಕಾಣಿಕೆ" ಎಂಬ ಯೋಜನೆ ಸಿದ್ದವಾಯಿತು. ಜಿಲ್ಲೆಯ ವಿವಿಧ ಶಾಲೆಗಳ ಸುಮಾರು 40 ಚಿತ್ರಕಲಾ ಶಿಕ್ಷಕರನ್ನು ತೆಗ್ಗು ಶಾಲೆಗೆ ಕರೆಯಿಸಿ ಶಾಲೆಯಲ್ಲೇ ಪರಿಸರ ಜಾಗೃತಿ ಸಂದೇಶ ನೀಡುವ ಹಾಗೂ ಕೃಷಿ ಉಳಿಸುವ ಸಂದೇಶದ ಉತ್ತಮ ಚಿತ್ರವನ್ನು ರಚನೆ ಮಾಡಿಸಲಾಯಿತು. ಈ ಎಲ್ಲಾ ಚಿತ್ರಗಳನ್ನು ಜಿಲ್ಲೆಯ ವಿವಿಧ ಕಡೆಗಳಲ್ಲಿ ಪ್ರದರ್ಶನ ಮಾಡಿ "ಹಸಿರು" ಸಂದೇಶವನ್ನು ಶಾಲೆಗಳ ಮೂಲಕ, ಮಕ್ಕಳ ಮೂಲಕ ಸಮಾಜಕ್ಕೆ ನೀಡುವ ಕೆಲಸ ತೆಗ್ಗು ಶಾಲೆಯ ಸುವರ್ಣ ಮಹೋತ್ಸವ ವರ್ಷದ ಪೂರ್ತಿ ಮಾಡುತ್ತದೆ.

ದೇಶದ ತುಂಬೆಲ್ಲಾ ಇಂದು ಕೇಳಿಬರುತ್ತಿರುವ ಮಾತು ಪರಿಸರ ಸಂರಕ್ಷಣೆ.....ಪರಿಸರ ಸಂರಕ್ಷಣೆ. ಆದರೆ ಹೇಗೆ ? ಎಲ್ಲಿ ಎಂಬ ಪ್ರಶ್ನೆಗೆ ಮಾತ್ರಾ ಉತ್ತರವೇ ಇಲ್ಲ. ಅಭಿವೃದ್ಧಿಯ ಹೆಸರಿನಲ್ಲಿ ಪರಿಸರದ ನಾಶ ನಡೆಯುತ್ತಿದೆ ಎಂದು ಮತ್ತೆ ಮತ್ತೆ ಹೇಳಬೇಕಾಗಿಲ್ಲ. ಶಿರಾಡಿ ಘಾಟಿ ರಸ್ತೆ ಅಭಿವೃದ್ಧಿಯ ಸಂದರ್ಭ ಸುಮಾರು 10 ಸಾವಿರ ಮರಗಳ ನಾಶವಾಗಲಿದೆ. ಇಡೀ ಹೆದ್ದಾರಿ ಅಭಿವೃದ್ಧಿಯಾಗುವ ವೇಳೆಗೆ ಸುಮಾರು 15 ಸಾವಿರ ಮರಗಳ ಹನನವಾಗುತ್ತದೆ. ರಸ್ತೆ ಅಭಿವೃದ್ಧಿಯ ಸಂದರ್ಭ ಇದೆಲ್ಲಾ ಅನಿವಾರ್ಯವೇ ಆದರೂ ಮುಂದೆ ಇರುವ ಬಗ್ಗೆ ಯೋಚಿಸಿದವರು ಯಾರು? ಇಷ್ಟೂ 15 ಸಾವಿರ ಮರಗಳು ಒಮ್ಮೆಲೇ ಹನನವಾಗುವ ಹೊತ್ತಿಗೆ ಪರಿಸರದ ಮೇಲಾಗುವ ದೊಡ್ಡ ಪರಿಣಾಮದ ಬಗ್ಗೆ ಯೋಚಿಸಿದವರು ಯಾರು?. 15 ಸಾವಿರ ಮರಗಳು ಇನ್ನು ಅದೇ ಪ್ರಮಾಣದಲ್ಲಿ ಬೆಳೆಯಬೇಕಾದರೆ ತಗಲುವ ಸಮಯ ಎಷ್ಟು ?. ಮತ್ತೊಂದು ಕಡೆ ಎತ್ತಿನ ಹೊಳೆ ಯೋಜನೆಯ ಕಾರಣಕ್ಕಾಗಿ ಇನ್ನೂ 10 ಸಾವಿರ ಮರಗಳ ನಾಶವಾಗುತ್ತಿದೆ. ಇಷ್ಟೆಲ್ಲಾ ದೊಡ್ಡ ಹೊಡೆತ ಪಶ್ಚಿಮ ಘಟ್ಟದ ಮೇಲಾಗುವ ಸಂದರ್ಭದಲ್ಲೇ ಹವಾಮಾನದಲ್ಲಿ ವೈಪರೀತ್ಯ ಕಾಣುತ್ತಿದೆ. ಪಶ್ಚಿಮ ಘಟ್ಟದಲ್ಲಿ ಸಾಕಷ್ಟು ಮಳೆಯಾಗುತ್ತಿಲ್ಲ. ಎಲ್ಲಿ ಮಳೆ ಬೇಕೋ, ಅಲ್ಲಿ ಮಳೆಯಾಗದೇ ಎಲ್ಲಿ ಅಗತ್ಯವಾಗಿ ಬೇಡವೋ ಅಲ್ಲಿ ಮಳೆಯಾಗುತ್ತಿದೆ. ಅದಕ್ಕಿಂತ ದೊಡ್ಡ ಪ್ರಶ್ನೆ ಎಂದರೆ, ವರ್ಷದ ಮಳೆ ದಾಖಲೆ ಪ್ರಕಾರ ಸಾಕಷ್ಟು ಮಳೆಯಾಗಿದೆ ಎಂದು ದಾಖಲೆ ಇದ್ದರೂ ಈಗಾಗಲೇ ಹವಾಮಾನದ ವೈಪರೀತ್ಯದ ಕಾರಣಕ್ಕೆ ಪಶ್ಚಿಮ ಘಟ್ಟದಲ್ಲಿ ಸಾಕಷ್ಟು ಮಳೆಯಾಗುತ್ತಿಲ್ಲ ಎಂಬುದು ಈಗಾಗಲೇ ತಿಳಿದ ಸತ್ಯ. ಹೀಗಾಗಿ ಕೋಟಿಕೋಟಿ ಯೋಜನೆಯಾದ ಎತ್ತಿನಹೊಳೆ ಯೋಜನೆಯ ಮೂಲಕ ನೀರಿನ ಪಥ ಬದಲಾಯಿಸಿ ತಲಪುವಲ್ಲಿಗೆ ತಲಪೀತೇ ? ಇಷ್ಟೂ ಪ್ರಮಾಣದಲ್ಲಿ ಮರಗಳ ಹನನವಾಗಿ, ಪರಿಸರ ನಾಶವಾಗಿ ಕೋಟಿಕೋಟಿ ಯೋಜನೆ ವ್ಯರ್ಥವಾಗದೇ ಎಂಬ ಬಹುದೊಡ್ಡ ಪ್ರಶ್ನೆ ಇದೆ.
ಇಷ್ಟೆಲ್ಲಾ ಪರಿಸರ ನಾಶವಾಗುತ್ತಿದ್ದರೂ ಕೃಷಿಕರು ಒಂದಷ್ಟು ಅರಣ್ಯ ಉಳಿಸುವ, ಪರಿಸರ ಸಂರಕ್ಷಿಸುವ ಕೆಲಸವನ್ನು ತಮ್ಮ ಜಮೀನಿಗೆ ಹೊಂದಿಕೊಂಡಿದ್ದ ಕಾನ, ಬಾಣೆ, ಕುಮ್ಕಿ, ಜುಮ್ಮಾ ಇತ್ಯಾದಿಗಳ ಮೂಲಕ ಮಾಡುತ್ತಿದ್ದರು. ತಲೆತಲಾಂತರದಿಂದ ಈ ಕಾಡುಗಳ ರಕ್ಷಣೆಯಾಗುತ್ತಲೇ ಬಂದಿತ್ತು. ಆದರೆ ಈಗ ಅದರ ಮೇಲೂ ಕಣ್ಣು ಬಿದ್ದ ಪರಿಣಾಮ ಅತ್ತ ಕೃಷಿಕರಿಗೂ ಕಾಡು ಉಳಿಸಲು ಬಿಡದ ವ್ಯವಸ್ಥೆ ಕಂಡು ಬಂದಿದೆ. ಇರುವ ಅರಣ್ಯ ಅಭಿವೃದ್ಧಿಗೆ ನಾಶವಾದರೆ ಕೃಷಿಕರ ಬಳಿಯಿದ್ದ ಕಾಡೂ ಇನ್ನೊಂದಷ್ಟು ಅಭಿವೃದ್ಧಿಗೆ ಬಳಸಿಕೊಳ್ಳುವ ಯೋಚನೆ ನಡೆಯುತ್ತಿದೆ ಎಂಬುದು ಇನ್ನೊಂದು ಮಾರಕ ಹೊಡೆತ.
ನಿಜವಾಗೂ ಆಗಬೇಕಿರುವುದು ಪರಿಸರ ಸಂರಕ್ಷಣೆಯ ಕಾರ್ಯ ಎಂಬುದು ಮತ್ತೆ ಮತ್ತೆ ಹೇಳುವ ಸಂಗತಿ. ಅದಕ್ಕಿಂತಲೂ ಮೊದಲ ಈಗ ಆಗಬೇಕಾದ್ದು ಜಾಗೃತಿ. ಇರುವ ಪರಿಸರ ನಾಶ ಮಾಡಿ ನೀರನ್ನು ಸಾಗಿಸುವ ಬದಲಾಗಿ, ಎಲ್ಲಿ ಮಳೆ ಬೇಕೋ, ನೀರು ಬೇಕೋ ಅಲ್ಲಿ ಹಸಿರು ಮಾಡಿ ಉಸಿರು ನೀಡುವ ಕೆಲಸ ಮಾಡಬೇಕಾಗಿತ್ತು. ಇದಕ್ಕಾಗಿ ಯೋಜನೆ ಸಿದ್ದವಾಗಬೇಕಿತ್ತು. ಇದಕ್ಕಾಗಿ ಜಾಗೃತಿಯಾಗಬೇಕಿತ್ತು. ತಕ್ಷಣದ ಪರಿಹಾರಕ್ಕಿಂತ ಶಾಶ್ವತ ಪರಿಹಾರ ಮುಖ್ಯವಾಗಿತ್ತು.

ಇದೆಲ್ಲದರ ಪರಿಣಾಮ ಭವಿಷ್ಯದಲ್ಲಿ ನೀರು, ಗಾಳಿ ಎರಡೂ ವಿಚಾರದಲ್ಲಿ ರಾಜ್ಯ ಸಂಕಷ್ಟಕ್ಕೆ ಒಳಗಾಗಲಿದೆ. ಇಂತಹ ಕಾಲಘಟ್ಟದಲ್ಲಿ  ಪರಿಸರ ಉಳಿವಿನ ಹಾಗೂ ಕೃಷಿ ಉಳಿವಿನ ಕಡೆಗೆ ಜಾಗೃತಿ ಆಗಬೇಕಾಗಿತ್ತು. ಇದು ನಡೆಯಬೇಕಾದ್ದು ಯುವಪೀಳಿಗೆಯ ನಡುವೆ ಎಂಬುದು ಅರಿವಿನ ಸಂಗತಿ. ಭವಿಷ್ಯದಲ್ಲಿ ಹಸಿರಿಗೆ ಭಾಷ್ಯ ಬರೆಯುವ ಮಂದಿ ಪುಟಾಣಿಗಳೇ ಆದ್ದರಿಂದ ಒಂದು ಶಾಲೆಯ ಸುವರ್ಣ ಮಹೋತ್ಸವದ ಸಂದರ್ಭ ಹಸಿರಿಗೆ ಉಸಿರುವ ನೀಡುವ , ಮಕ್ಕಳಿಗೆ ಮಣ್ಣಿನ ಪಾಠ ಹೇಳುವ ಕಾರ್ಯವೊಂದು ಆರಂಭವಾಗಿದೆ. ಇಡೀ ಜಿಲ್ಲೆಯಲ್ಲಿ ಹಸಿರು ಹಸಿರಾಗಿಯೇ ಉಳಿಯಲು ಜೀವ ತುಂಬುವ ಕೆಲಸಕ್ಕೆ ಹಳ್ಳಿಯ ಶಾಲೆಯೊಂದು ದೊಡ್ಡ ಕೊಡುಗೆ ನೀಡುತ್ತಿದೆ. ಇದಕ್ಕಾಗಿ ಈ ಕಾರ್ಯ ರಾಜ್ಯಕ್ಕೆ ಮಾದರಿ.

( ಹೊಸದಿಗಂತ - ಮಣ್ಣಿಗೆ ಮೆಟ್ಟಿಲು)


06 ಅಕ್ಟೋಬರ್ 2017

ಕೆಸರು ಮೆತ್ತುವಷ್ಟೇ ಉಳಿಸಿಕೊಳ್ಳುವುದೂ ಸುಲಭವಾಗಬೇಕಲ್ಲ...



ಅಂದು ಬೆಂಗಳೂರು ಬಸ್ಸು ಏರುವ ತವಕ. ಅದೇ ಸಮಯಕ್ಕೆ ಇಬ್ಬರು ಯುವಕರು ಬಸ್ಸಿನ ಬಾಗಿಲ ಬಳಿ ಚರ್ಚೆ ಮಾಡುತ್ತಿದ್ದರು. ಸಾಕಾಗಿ ಹೋಯ್ತು. ನಾಳೆ ಇನ್ನು ಅದೇ ಟ್ರಾಫಿಕ್, ಅದೇ ಆಫೀಸು, ಅದೇ ಒತ್ತಡ. ಸಾಕಾಗಿ ಹೋಯ್ತು, ಒಮ್ಮೆ ಈ ಕಡೆ ಬಂದರೆ ಸಾಗಿತ್ತು. ಅವರಿಬ್ಬರ ಚರ್ಚೆಯ ಸಾರಾಂಶ ತಿಳಿಯಲು ಹೆಚ್ಚು ಹೊತ್ತು ಬೇಕಾಗಿರಲಿಲ್ಲ. ಇಬ್ಬರದೂ ಒಂದೇ ವಿಚಾರ, ನಗರದ ಬದುಕು ಸಾಕಾಯ್ತು. ಹಳ್ಳಿ ಬದುಕು ಇಷ್ಟವಾಯ್ತು...!. ಆದರೆ ಇಲ್ಲೊಂದು ಅಪಾಯವೂ ಜೊತೆ ಜೊತೆಗೇ ಕಂಡಿತು. ಇದು ಇಷ್ಟ ಪಟ್ಟ ಹಳ್ಳಿ ಬದುಕಲ್ಲ...!. ಅಲ್ಲಿನ ಒತ್ತಡಕ್ಕೆ ಕೃಷಿ, ಹಳ್ಳಿ ಬದುಕು ಈಗಷ್ಟೇ ಖುಷಿ.

ಇಂದು ಹಳ್ಳಿಯಿಂದ ಹೋದ, ಪಾರಂಪರಿಕ ಕೃಷಿ ಬದುಕಿನಿಂದ ದೂರವಾದ ಬಹುತೇಕ ಕುಟುಂಬಗಳ ಯುವಕರಲ್ಲಿ ಈಗ ಕೃಷಿ ಹಾಗೂ ನಗರದ ಬದುಕಿನ ನಡುವೆ ತೊಳಲಾಟ ಇದೆ. ಅದೋ.. ಇದೋ ಎಂಬ ಗೊಂದಲ ಇದೆ. ಇನ್ನೂ ಕೆಲವು ಯುವಕರು  ಏಕಾಏಕಿ ನಗರದ ಉದ್ಯೋಗ ಬಿಟ್ಟು ಕೃಷಿ ಬದುಕು ಆರಂಭ ಮಾಡುತ್ತಾರೆ. ಮಣ್ಣು ಮೆತ್ತಿಕೊಂಡು ಕೆಲಸ ಮಾಡುತ್ತಾರೆ, ಸತತ ದುಡಿಯುತ್ತಾರೆ. ಆದರೆ ಇಲ್ಲಿ ಥಿಯರಿಗಿಂತ ಪ್ರಾಕ್ಟಿಕಲ್ ಭಿನ್ನವಾಗಿರುತ್ತದೆ. ಮತ್ತೆ ಮಣ್ಣು ತೊಳೆದು ಹೊರಟು ಬಿಡುತ್ತಾರೆ. ಇದಕ್ಕೆ ಅಪವಾದವಾಗಿ ಕೆಲವರು ಇದ್ದಾರೆ. ಹಾಗಂತ ಈ ಪ್ರಮಾಣ ಕಡಿಮೆಯಾಗಿದೆಯಷ್ಟೇ. ಅಮೇರಿಕಾದಲ್ಲಿ ಉದ್ಯೋಗದಲ್ಲಿದ್ದು ಬಳಿಕ ಬೆಂಗಳೂರಲ್ಲಿ ಉನ್ನತ ಉದ್ಯೋಗದಲ್ಲಿದ್ದ ಯುವಕನೊಬ್ಬ ತನ್ನೂರಿಗೆ ಬಂದು ಕೃಷಿ ಮಾಡಿದ. ಎಲ್ಲಾ ಮೀಡಿಯಗಳೂ ಸೇರಿದಂತೆ ಅವನ ಮಿತ್ರರು ಶ್ಲಾಘಿಸಿದರು. ಆತನ ಕನಸುಗಳು ದೊಡ್ಡದೇ ಇದ್ದವು. ಕೈಯಲ್ಲಿ ಹಣವೂ ಇತ್ತು. ತನ್ನ ಕನಸುಗಳನ್ನು ಹಳ್ಳಿ ತನ್ನ ತೋಟದ ಮಣ್ಣಿನಲ್ಲಿ ಬಿತ್ತಿದ. ಊರ ಇತರ ಕೃಷಿಕರು ಸಹಕರಿಸಿಲ್ಲ, ಅನುಭವದ ಮಾತು ಹೇಳಿಲ್ಲ. ಆತ ಸೋಲುವುದನ್ನು ಅವರಿಗೆ ನೋಡಬೇಕಿತ್ತು. ನಿಧಾನವಾಗಿ ಅವನ ಯೋಜನೆ ಕುಸಿಯ ತೊಡಗಿತು. ಕೈಯಲ್ಲಿದ್ದ ಕಾಸು ಕರಗಿತು. ಕೃಷಿಯ ಆದಾಯ ಕಡಿಮೆಯಾಯಿತು. ಮತ್ತೆ ಬೆಂಗಳೂರು ಬಸ್ಸು ಏರಿ ಅಲ್ಲಿಂದ ವಿಮಾನವನ್ನೂ ಹಿಡಿದು ಒಂದು ವರ್ಷಗಳ ಕಾಲ ಕೃಷಿ ಬದುಕಿನಿಂದ ದೂರ ಇರಬೇಕಾಯಿತು. ವರ್ಷ ದುಡಿದು ಒಂದಷ್ಟು ಸಂಪಾದನೆ ಮಾಡಿ ಮತ್ತೆ ಮಣ್ಣು ಮೆತ್ತಿಕೊಂಡ , ಈಗ ಸವಾಲು ಸ್ವೀಕರಿಸಿ, ಸೋಲಿನ ಪಾಠ ಕಲಿತು ಭೂಮಿಯಲ್ಲಿ ಬೆಳೆ ಬಿತ್ತಿದ್ದಾನೆ ಯಶಸ್ಸಿನ ಫಸಲು ಸಿಗಬೇಕಿದೆ. ಹಾಗಂತ ಆತ ಸೋಲನ್ನು ಹೇಳಿಕೊಂಡಿಲ್ಲ,  ಸೋಲನ್ನು ಸವಾಲಾಗಿ ಸ್ವೀಕರಿಸಿದ ಮತ್ತೆ ಮಣ್ಣಿಗೇ ಬಂದ. ಆದರೆ ಇದೂ ಅಪವಾದವಷ್ಟೇ. ಮಣ್ಣು ತೊಳೆದು ಹೊರಟವರು  ಮತ್ತೆ ಬರುವರೇ ಎಂಬ ಪ್ರಶ್ನೆಯೂ ಮುಂದೆ ಇದೆ. ಹಾಗಿದ್ದರೆ ಏನು?.

ಕೃಷಿ ಬದುಕು ನೆಮ್ಮದಿ ನಿಜ. ಹಾಗಂತ ಸವಾಲುಗಳೇ ಇಲ್ಲ, ಸಮಸ್ಯೆಗಳೇ ಇಲ್ಲ ಎಂದಲ್ಲ. ನಿತ್ಯವೂ ಸವಾಲು, ಅನುಭವಗಳೇ ಇಲ್ಲಿ ಪಾಠ. ಮಣ್ಣಿನ ನಂಟು ಬಿಟ್ಟು ಬೆಂಗಳೂರು ಬಸ್ಸು ಏರಿ ಮತ್ತೆ ಮಣ್ಣು ಮೆತ್ತಿಕೊಳ್ಳುವೆಂಬ ಭ್ರಮೆ ಮೊದಲು ಬಿಡಬೇಕು. ಅದರ ಬದಲಾಗಿ ಮಣ್ಣಿನ ನಂಟಿನ ಜೊತೆಗೆ ಸಣ್ಣ ನೌಕರಿ ಮಾಡಿಕೊಂಡು ಸವಾಲು ಎದುರಿಸಲು ಕಷ್ಟವೇನಲ್ಲ. ಕೃಷಿ ಬದುಕೆಂದರೆ ನಿತ್ಯವೂ ಗಿಡದ ಜೊತೆ ಮಾತನಾಡಬೇಕಾದ ಬದುಕು. ಇಂತಹ ಬದುಕು ಹೊಸಪೀಳಿಗೆ ಬೆಳೆಸಿಕೊಂಡರೆ ಕೃಷಿಗೆ ಆಕ್ಸಿಜನ್ ಸಿಗುವುದರಲ್ಲಿ ಸಂದೇಹ ಇಲ್ಲ. ಇಂದು ಆಸಕ್ತರಿದ್ದಾರೆ ನಿಜ, ಆದರೆ ಯಶಸ್ಸು ಕಂಡವರು ಎಷ್ಟು ಮಂದಿ ಎಂಬ ಪ್ರಶ್ನೆಯನ್ನೂ ಜೊತೆಗೇ ಹಾಕಿಕೊಳ್ಳಬೇಕು. ನಗರದ ಉದ್ಯೋಗ ಹೋಗುವ ಮುನ್ನವೇ ಯೋಚನೆ ಬೇಕು, ಕೃಷಿ ಉಳಿವಿಗೆ ಸಣ್ಣ ನೌಕರಿ ಇಲ್ಲೇ ಏಕೆ ಮಾಡಲಾಗದು ?. ಈ ಒಂದು ಪ್ರಶ್ನೆ ಕೃಷಿ ಉಳಿವಿಗೆ, ದೇಶದ ಕೇಷಿ ಬೆಳವಣಿಗೆಗೆ ಸಹಕಾರಿ. ಇಂದು ಕೃಷಿ ಕಷ್ಟವೇನಲ್ಲ, ಎಲ್ಲವೂ ಯಾಂತ್ರೀಕರಣವಾಗುತ್ತಿರುವ ವೇಳೆ ಕೃಷಿಯೂ ಅದನ್ನು ಹೊರತಾಗಿಲ್ಲದ ಕಾರಣ ಶ್ರಮಕ್ಕಿಂತ ಐಡಿಯಾ ಇಲ್ಲಿ ಮುಖ್ಯವಾಗುತ್ತದೆ. ಯಶೋಗಾಥೆಗಿಂತ ಅನುಭವದ ಪಾಠವೇ ಇಲ್ಲಿ ಮುಖ್ಯವಾಗುತ್ತದೆ. ಆತ ಯಶಸ್ವಿಯಾದರೂ ಅದೇ ತಂತ್ರ ಇಲ್ಲಿ ಯಶಸ್ವಿಯಾಗದೇ ಇರಬಹುದು. ಹೀಗಾಗಿ ಅನುಭವದ ಪಾಠ ಕೃಷಿಗೆ ಹೆಚ್ಚು ಸೂಕ್ತವಾಗಿದೆ. ಇದಿಲ್ಲದೇ ಹೋದರೆ ಮಣ್ಣಿಗೆ ಬಂದಾಗ ನಗರದ ಕಚೇರಿ ಬದುಕು ಅಂದವಾಗುತ್ತದೆ , ನಗರದ ಬದುಕಿಗೆ ಹೋದಾಗ ಕೃಷಿ ಬದುಕು ಇಷ್ಟವಾಗುತ್ತದೆ ಅಷ್ಟೇ.

ಇತ್ತೀಚೆಗಿನ ಅಧ್ಯಯನದ ಪ್ರಕಾರ ನಗರದ ಬಹುತೇಕ ಯುವಕರು  ಕೃಷಿಯತ್ತ ಆಸಕ್ತರಾಗಿದ್ದಾರೆ. ಪೇಸ್‍ಬುಕ್‍ನ  ಅಗ್ರಿಕಲ್ಚರಿಸ್ಟ್ ಎಂಬ ಗ್ರೂಪಿನ ಮಾಹಿತಿ ಪ್ರಕಾರ, ಈ ಗುಂಪಿನ ಸುಮಾರು 1.10 ಲಕ್ಷ ಸದಸ್ಯರ ಪೈಕಿ ಶೇ.86 ರಷ್ಟು ಗಂಡಸರು ಹಾಗೂ ಶೇ.14 ರಷ್ಟು ಮಹಿಳೆಯರು ಇಲ್ಲಿ ಚರ್ಚೆ ಮಾಡುತ್ತಾರೆ. ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಶೇ.36 ರಷ್ಟು ಮಂದಿ 25 ರಿಂದ 34 ವಯೋಮಾನದ ಯುವಕರು ಈ ಗುಂಪಿನ ಸಕ್ರಿಯ ವೀಕ್ಷಕರು ಹಾಗೂ ಕೃಷಿಯ ಬಗ್ಗೆ ಮಾತನಾಡುವ ಸದಸ್ಯರು. ಶೇ.20 ರಷ್ಟು 18 ರಿಂದ 24 ವಯೋಮಾನದವರು. ಇನ್ನೂ ಒಂದು ಗಮನಿಸುವ ಅಂಶವೆಂದರೆ ಶೇ.60 ರಷ್ಟು ಅಂದರೆ ಈ ಗುಂಪಿನ ಸುಮಾರು 65 ಸಾವಿರ ಬೆಂಗಳೂರ ನಗರವಾಸಿಗಳು...!. ಇದರ ಅರ್ಥ ಇಷ್ಟೂ ಮಂದಿ ಕೃಷಿ ಕಡೆಗೆ ಆಸಕ್ತರಾಗಿದ್ದಾರೆ ಎಂಬುದು ಇಲ್ಲಿ ತಿಳಿಯಲ್ಪಡುತ್ತದೆ.

ಅಂದರೆ ಈಗಿನ ಯುವ ಸಮೂಹ ಕೃಷಿಯತ್ತ ಆಸಕ್ತವಾಗಿದೆ. ಇದಕ್ಕೆ ಒತ್ತಡದ ನಡುವಿನ ಉದ್ಯೋಗವೂ ಕಾರಣವಾಗಿದೆ. ಇದೆಲ್ಲಾ ಇಷ್ಟ ಪಟ್ಟು ಕೃಷಿಯತ್ತ ಬರುವವರಲ್ಲ. ಹೀಗಾಗಿ ಕೃಷಿ ಕ್ಷೇತ್ರದಲ್ಲಿ ಉನ್ನತ ವ್ಯಾಸಾಂಗ ಮಾಡಿದವರೂ ಕಾಣಲಿ, ಹಳ್ಳಿ ಬದುಕಿನ ಜೊತೆಗೆ ಇಲ್ಲೇ ಸಣ್ಣದೊಂದು ಉದ್ಯೋಗ, ಉದ್ಯಮ ಮಾಡಲಿ. ಕೆಸರು ಮೆತ್ತುವಷ್ಟೇ ಉಳಿಸಿಕೊಳ್ಳುವುದೂ ಸುಲಭವಾಗಬೇಕು.

( ಹೊಸದಿಗಂತ - ಮಣ್ಣಿಗೆ ಮೆಟ್ಟಿಲು -1 )

24 ಜನವರಿ 2017

ಈಗ ಕನಸುಗಳಿಗೆ ಜೀವ ತುಂಬುವ ಸಮಯ . . .


ಕಾರು ನಿಧಾನವಾಗಿ ಸಾಗುತ್ತಿತ್ತು.........

 ಒಂದು ಕೈಯಲ್ಲಿ ಸ್ಟೇರಿಂಗ್, ಮತ್ತೊಂದು ಕೈಯಲ್ಲಿ ಗೇರ್ ಲಿವರ್. ಕಿವಿಯಲ್ಲಿ ಇಯರ್ ಫೋನ್. ಕಿಸೆಯಲ್ಲಿ ಮೊಬೈಲ್ ಫೋನು. ಪಕ್ಕದಲ್ಲಿ ನನ್ನ ಮಗು. ಕಾರು ಕಿಲೋ ಮೀಟರ್ ಕಲ್ಲುಗಳನ್ನು ದಾಟಿ ಮುಂದೆ ಸಾಗುತ್ತಿತ್ತು. ಆಗಾಗ ಮೊಬೈಲ್ ರಿಂಗಾಗುತ್ತಿತ್ತು, ಕೆಲವು ಕಾಲ್ ಮಾಡುತ್ತಿದ್ದೆ. ಪಕ್ಕದಲ್ಲೇ ಇದ್ದ ಮಗು ತನ್ನದೇ ಕೆಲವು ಕತೆ ಹೇಳುತ್ತಿತ್ತು.
ಸುಮಾರು 15 ಕಿಮೀ ದೂರ ಕ್ರಮಿಸಿತು. ಇನ್ನು  ನಾನು ಕತೆ ಹೇಳಲ್ಲ, ನೀನು ಕತೆಯೇ ಕೇಳಲ್ಲ, ಯಾರಲ್ಲೋ ಮಾತಾಡುತ್ತಿ, ಮತ್ಯಾರಿಗೆ ನಾನು ಕತೆ ಹೇಳಲಿ ಅಂತ ಮಗು ಹೇಳಿತು . .
ಇಲ್ಲ ಹೇಳು,  ಅಂದಾಗ.......  ಮಗು ಅಂದಿತು , ಮೊಬೈಲ್ ಪಕ್ಕಕ್ಕಿಡು. .
ಸರಿ ಅದೂ ಆಯಿತು. .
ಕತೆ ಶುರು ಮಾಡಿತು. .
ಅದು ಕತೆಯಲ್ಲ ಪ್ರಶ್ನೆಗಳು. .  ಮಗುವಿನ ಪ್ರಶ್ನೆ.  . ಕನಸು ಸೃಷ್ಟಿಸುವ ಪ್ರಶ್ನೆ. . ಆ ಪ್ರಶ್ನೆಗಳ  ಒಳಗೆ ನಾನೂ ಮಗುವಾಗಿ   ಹೋಗಬೇಕಿತ್ತು. .  ಪ್ರಶ್ನೆಯ ಆಳ ಅರಿವಾಗುತ್ತಿತ್ತು, ಯಾರಿಗೆ ಗೊತ್ತು .. ಮುಂದೆ, ಮಗುವಿಗೆ ಅದೇ ಅಧ್ಯಯನದ ವಸ್ತುವಾಗಿ ಬಿಡಬಹುದು.
ಆ ಪ್ರಶ್ನೆಗಳ ಒಳಗೆ ನಾನೂ ಹೋಗುತ್ತಿದ್ದಂತೆ , ಉತ್ತರ ನೀಡುತ್ತಿದ್ದಂತೆ ಹೊಸ ಹೊಸ ಪ್ರಶ್ನೆಗಳು, ಉತ್ತರಗಳ ಮೇಲೆ ಮತ್ತೆ ಪ್ರಶ್ನೆ ಮುಂದುರಿಯುತ್ತಾ , ಸುಮಾರು 15 ಕಿಲೋ ಮೀಟರ್ ಸಾಗಿತು. ಕನಸು ತೆರೆದುಕೊಂಡಿತು. . ಸಂದೇಹಗಳಿಗೆ ಕೆಲವೊಮ್ಮೆ ಉತ್ತರವೇ ಇಲ್ಲ ಎನಿಸಿತು.., ಮಗುವಿನ ಜೊತೆ ಆ ಕ್ಷಣ ಮಗುವಾದೆ , ಕುತೂಹಲದ  ಆ ಕಣ್ಣುಗಳು ಮತ್ತೇನೋ ನಿರೀಕ್ಷೆ ಮಾಡುತ್ತಿತ್ತು. . ಎಳೆಯ ಮನಸ್ಸು ಅರ್ಥವಾಯಿತು.

                                         ****

ಅನೇಕ ದಿನಗಳಿಂದ ಮನೆಗೆ ತಲಪುವಾಗ ರಾತ್ರಿಯಾಗುತ್ತಿತ್ತು. ಮಗು ಅದಾಗಲೇ ಮಲಗುತ್ತಿತ್ತು. ಅಂದು ಮನೆಯಲ್ಲಿದ್ದೆ. ಸಂಜೆಯವರೆಗೆ ಅಂಗಳದಲ್ಲಿ ಆಟವಾಡುತ್ತಿದ್ದ ಮಗು ಮನೆಯೊಳಗೆ ಸೇರಿದಾಕ್ಷಣ ನಾನೂ ಮಗುವಾದೆ. ಕಳ್ಳ ಪೊಲೀಸ್, ಮರ ಗಿಡ  ಸೇರಿದಂತೆ ಅನೇಕ ಆಟ ಆಡಿದೆ. ಅಂದು ಮಗು ಅಂದಿತು. .  ದಿನವೂ ಇದೇ ಹೊತ್ತಿಗೆ ಮನೆಯಲ್ಲಿರು. . .
ಎಳೆಯ ಮನಸ್ಸು ಅರ್ಥವಾಯಿತು.

                                 *****

ಪ್ರತೀ ದಿನ ಶಾಲೆಗೆ ಹೋಗಿ ಬರುವ ಮಗು , ಶಾಲೆಯ ಕೆಲಸ ಸಂಜೆಯೇ ಮಾಡಿ ಮುಗಿಸಿತ್ತು. ಅಂದು ನಾನೂ ಮಗುವಿನ ಜೊತೆ ಬರೆಯುವ ವೇಳೆ ಕುಳಿತೆ. ಇದು ಅದಲ್ಲ, ಇದು ಹಾಗೆಯೇ  , ಟೀಚರ್ ಹೇಳಿದ್ದಾರೆ ಎಂದು ವಾದ ಮಾಡಿತು.
ಮಗುವಿನ ಮನಸ್ಸು ಅರ್ಥವಾಯಿತು.

                          ******

ಮಗುವಿನ ಮನಸ್ಸಿನಲ್ಲಿ  ಅದೆಷ್ಟು ಕನಸುಗಳು ಇವೆ. ನನಗದು ಅರ್ಥವೇ ಆಗಿರಲಿಲ್ಲ. ನನಗೆ ಸಂಬಂಧವೇ ಪಡದ ಅನೇಕ ವಿಚಾರಗಳಲ್ಲೇ ಮನಸ್ಸು ಓಡಿಸುತ್ತಿದ್ದೆ. ಮಗುವಿನ ಜೊತೆ ಮಗುವಾಗದೇ ಇದ್ದ ನನಗೆ, ಆ ಕನಸುಗಳು ಅರ್ಥವೇ ಆಗಿರಲಿಲ್ಲ. ಈಗ ಅರ್ಥವಾಯಿತು.. . ! ಆ ಕನಸುಗಳಿಗೆ , ಆ ಪ್ರಶ್ನೆಗಳಿಗೆ ಉತ್ತರ ನೀಡದೇ ಹೋದರೆ ಕನಸುಗಳೇ ಬೆಳೆಯಲಾರದು, ಕನಸು ಬೆಳೆಯದೇ ಇದ್ದರೆ ಮನಸ್ಸು ಅರಳದು.
ಈಗ ಅರ್ಥವಾಯಿತು, ಎಲ್ಲೆಲ್ಲೋ ನನ್ನ ಬಗ್ಗೆ ಯಾರೋ ಮಾತನಾಡುತ್ತಿದ್ದರೆ, ನಾನೂ ಯಾರ್ಯಾರೋ ಜೊತೆ ಮಾತನಾಡುತ್ತಿದ್ದರೂ , ಇಲ್ಲಿ  ನನ್ನ ಮಗುವಿನ  ಜೊತೆ  ನಾನು ಮಾತನಾಡದೇ ಇದ್ದರೆ ಕನಸುಗಳು ಅರಳದು.