16 ನವೆಂಬರ್ 2017

ಕೃಷಿ ಸುಲಭಕ್ಕೆ "ಯಂತ್ರ" ಕಟ್ಟುವ ನಮ್ಮೂರ ತಂತ್ರಜ್ಞರು...!



                                                              ( ಸಾಂದರ್ಭಿಕ ಚಿತ್ರ)


ಕೃಷಿಕ ಗೋವಿಂದ ರಾವ್ ಸುಮಾರು 10 ವರ್ಷಗಳ ಹಿಂದೆ ರಿಕ್ಷಾವನ್ನು ವಿನ್ಯಾಸಗೊಳಿಸಿ ಅಡಿಕೆ ತೋಟದ ಒಳಗೆ ಹೋಗುವಂತೆ ಮಾಡಿಕೊಂಡರು. ಇದಕ್ಕಾಗಿ ಪ್ರತ್ಯೇಕ ರಸ್ತೆಯೂ ತೋಟದಲ್ಲಿ ಸಿದ್ದವಾಯಿತು. ಈ ವ್ಯವಸ್ಥೆ ಬಗ್ಗೆ ಅಂದು ಚರ್ಚೆಯಾಯಿತು. ಬಹುತೇಕ ಕೃಷಿಕರು "ಇದಾಗದು" ಎಂದರು...!. ಗೋವಿಂದ ರಾವ್ ಸೊಪ್ಪು ಸಾಕಲಿಲ್ಲ. ಅವರು 10 ವರ್ಷಗಳ ನಂತರದ ಸ್ಥಿತಿಯ ಬಗ್ಗೆಯೇ ಯೋಚನೆ ಮಾಡಿದ್ದರು.
ವಿದೇಶಗಳಲ್ಲಿ ಕಾಣುತ್ತಿದ್ದ ,ಟಿವಿಗಳಲ್ಲಿ  ನೋಡುತ್ತಿದ್ದ ಕಳೆ ಕೊಚ್ಚುವ ಯಂತ್ರ ಭಾರತದಲ್ಲಿ ಕಾಣಿಸಿತು. ಕೃಷಿಕರ ತೋಟಕ್ಕೂ ಇಳಿಯಿತು. ಆಗಲೂ ಚರ್ಚೆಯಾಯಿತು. ಅನೇಕರು ಕೃಷಿಕರು "ಇದು ನಮಗೆ ಆಗದು" ಎಂದರು...!. ಹೊಸ ಸಮಸ್ಯೆಗಳನ್ನೇ ಹೇಳಿಕೊಂಡರು, ಸವಾಲು ಸ್ವೀಕರಿಸಲು ಒಪ್ಪಲಿಲ್ಲ.

ಇಂದು ಬಹುತೇಕ ಎಲ್ಲಾ ಕೃಷಿಕರ ತೋಟದಲ್ಲಿ ಇಣುಕಿದರೆ ಯಂತ್ರಗಳ ಸದ್ದು ಕೇಳುತ್ತದೆ. ತೋಟದ ಒಳಗಡೆ ಅಟೋದ ಬದಲಾಗಿ ಸುಧಾರಿತ ಯಂತ್ರಗಳು ಕಾಣುತ್ತದೆ, ಮಿನಿ ಜೆಸಿಬಿ ಮಣ್ಣು ಅಗೆಯುತ್ತದೆ, ಮಣ್ಣನ್ನು ಹೊನ್ನು ಮಾಡುವುದು  ಕಾಣುತ್ತದೆ. ಇದೆಲ್ಲಾ ಕೇವಲ 10 ವರ್ಷದ ಬದಲಾವಣೆಯಷ್ಟೇ...! ಇಲ್ಲಿ ಸವಾಲುಗಳನ್ನು ಸ್ವೀಕರಿಸಲೇಬೇಕಾದ ಅನಿವಾರ್ಯತೆ ಬಂದಿತು. ಹಾಗಿದ್ದರೂ ಸವಾಲುಗಳಿಗೆ ಉತ್ತರ ನೀಡುವಷ್ಟು ಯಂತ್ರಗಳ ಬಳಕೆ, ಆವಿಷ್ಕಾರದ ವೇಗ ಕಾಣುತ್ತಿಲ್ಲ. ನಿರೀಕ್ಷೆಗಳು ಮಾತ್ರವೇ ಹೆಚ್ಚಾಗುತ್ತಿದೆ.

ಈ ಬದಲಾವಣೆಯ ಹಿಂದೆ, ಯಂತ್ರಗಳ ಆವಿಷ್ಕಾರದ ಹಿಂದೆ ನಮ್ಮದೇ ಊರಿನ ತಂತ್ರಜ್ಞರ ಕೈವಾಡ ಇರುತ್ತದೆ. ನಮ್ಮದೇ ತೋಟದ ನಡುವೆ ಓಡಾಡಿದ ಹುಡುಗರ ಶ್ರಮ ಇರುತ್ತದೆ. ಯುವಕರ ಪ್ರಯತ್ನ ಇರುತ್ತದೆ. ಬಹುತೇಕ ಕೃಷಿಕರ ಮಕ್ಕಳು ಓದುತ್ತಾ ಓದುತ್ತಾ ಕೃಷಿ ಬಿಡುತ್ತಾರೆ, ಹಳ್ಳಿ ಬಿಟ್ಟು, ಕೃಷಿ ಬಿಟ್ಟು ರಾಜಧಾನಿ ಸೇರುತ್ತಾರೆ ಎಂದೇ ಚರ್ಚೆಯಾಗುತ್ತದೆ. ಆದರೆ ಇಲ್ಲೂ ಮಣ್ಣಿನ ಮೇಲೆ ಪ್ರೀತಿ ಇರುವ, ಕೃಷಿ ಮೇಲೆ ಬದುಕು ಕಟ್ಟುವ ಆಸೆಯುಳ್ಳ ಯುವ ಮನಸ್ಸುಗಳು ಸದ್ದಿಲ್ಲದೆ ಪ್ರಯತ್ನ ಮಾಡುತ್ತಿದ್ದಾರೆ. ಕೃಷಿ ಸಮಸ್ಯೆಯನ್ನ ಸ್ವತ: ಮನಗಂಡು ಅವುಗಳ ನಿವಾರಣೆಗೆ ನಗರದಲ್ಲೋ, ಹಳ್ಳಿಯಲ್ಲೂ ಕುಳಿತು ಪ್ರಯತ್ನ ಮಾಡುತ್ತಿದ್ದಾರೆ. ಇದಕ್ಕಾಗಿಯೇ ಸುಲಭ ಯಂತ್ರಗಳನ್ನು ಕಟ್ಟುವ ಕೆಲಸ ನಮ್ಮೂರಿನ ತಂತ್ರಜ್ಞರು ಮಾಡುತ್ತಿದ್ದಾರೆ. ಆದರೆ ಇಲ್ಲಿಯ ಕೊರತೆ ಎಂದರೆ ಪ್ರೋತ್ಸಾಹ...!.
ಯಂತ್ರಮೇಳ ಅಥವಾ ಕೃಷಿ ಮೇಳಗಳಲ್ಲಿ ನಮ್ಮ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಅಥವಾ ಕೃಷಿಕರೇ ಅಭಿವೃದ್ಧಿ ಪಡಿಸಿದ ವಿವಿಧ ಯಂತ್ರಗಳು ಇರುತ್ತದೆ. ಮೇಳದಲ್ಲಿ ಹೊಸ ಆವಿಷ್ಕಾರದ ಬಳಿ ಬಂದಾಗ, ಎರಡೇ ಸಿದ್ಧ ಪ್ರಶ್ನೆ ಇರುತ್ತದೆ. "ಇದೆಲ್ಲಿ ಸಿಗುತ್ತದೆ" , "ಇದು ಹೇಗೆ ಕೆಲಸ ಮಾಡುತ್ತದೆ...?" ಇದರ ಜೊತೆಗೇ "ಇದು ನಮಗೆ ಆಗದು...." , "ಮಾರ್ಕೆಟ್‍ನಲ್ಲಿ ಸಿಗದ ಮೇಲೆ ಏಕೆ ನೋಡುವುದು...."...!.ಇಂತಹ ಮನಸ್ಥಿತಿಯಿಂದಲೇ ಬಹುತೇಕ ಯುವಕರ ಕೃಷಿ ಸಂಶೋಧನೆಗಳು ಅರ್ಧಕ್ಕೆ ನಿಂತಿದೆ. ಕೃಷಿಕರೇ ಅಭಿವೃದ್ಧಿಪಡಿಸಿದ ವಿವಿಧ ಯಂತ್ರಗಳು ಮೂಲೆಗುಂಪಾಗಿದೆ. ಹೀಗಾಗಿ ಆಗಬೇಕಾದ್ದು ಎರಡೇ ಎರಡು ಪ್ರೋತ್ಸಾಹದ ಮಾತು, ಜೊತೆಗೆ ನಮಗೆ ಹೇಗೆ ಬೇಕು ಎಂಬುದರ ಸಲಹೆ. ಇದೆರಡು ಸಿಕ್ಕಿದರೆ ಸಂಶೋಧನೆಗಳೇ ಮುಂದೆ ಯಂತ್ರಗಳಾಗಿ ಸಿಗುತ್ತದೆ. ಅಂತಹದ್ದು ಒಂದಲ್ಲ, ಎರಡಲ್ಲ..!

ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಅಡಿಕೆಯೇ ಪ್ರಮುಖ ಕೃಷಿ. ಇಲ್ಲಿ ಸಮಸ್ಯೆಯೇ ಹೆಚ್ಚು.ಅಡಿಕೆ ಕೊಳೆರೋಗಕ್ಕೆ ಔಷಧಿ ಸಿಂಪಡನೆ, ಕೊಯ್ಲು ಮಾಡುವುದು , ಮರ ಏರುವುದು  ಇತ್ಯಾದಿಗಳು ಇಲ್ಲಿ ದೊಡ್ಡ ತಲೆನೋವು. ಕಾರ್ಮಿಕರದ್ದೇ ಸಮಸ್ಯೆ. ಇದಕ್ಕಾಗಿ ವಿವಿಧ ಯಂತ್ರಗಳ ಅಭಿವೃದ್ಧಿಯಾಗಿದೆ.

ಶಿವಮೊಗ್ಗದ ಗಾಜನೂರು ಪ್ರದೇಶದಲ್ಲಿರುವ ಶೆರ್ವಿನ್ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿಧರ. ಇವರ ಕುಟುಂಬಕ್ಕೆ ಅಡಿಕೆ ಕೃಷಿಯೇ ಆಧಾರ. ಕೃಷಿ ಸಮಸ್ಯೆ ಹತ್ತಿರದಿಂದ ಬಲ್ಲ ಇವರು ಅಡಿಕೆ ಕೊಯ್ಲು ಮಾಡಲು ಯಂತ್ರವೊಂದನ್ನು ಸಿದ್ದಪಡಿಸಿದರು. ಅದಕ್ಕೆ ಬೀಟಲ್‍ನಟ್ ರ್ಯಾಪರ್ ಅಂತ ಕರೆದರು. ಈ ಯಂತ್ರಕ್ಕೆ ಚಿಕ್ಕ ಇಂಜಿನ್ ಅಳವಡಿಸಲಾಗಿದೆ. ಎರಡು ಚಕ್ರಗಳ ಮೂಲಕ ಅಡಿಕೆ ಮರವನ್ನು ಏರಿ ಯಂತ್ರದ ಮುಂಭಾಗದಲ್ಲಿ ಅಳವಡಿಸುವ ಬ್ಲೇಡ್ ಮೂಲಕ ಅಡಿಕೆ ಗೊನೆ ಕತ್ತರಿಸಿ ಅಡಿಕೆ ಸಹಿತ ಕೆಳಗೆ ಇಳಿಯುತ್ತದೆ.

ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ  ಯಲ್ಲಪ್ಪರವಿ ಎಂಬ ಎಂಟೆಕ್ ವಿದ್ಯಾರ್ಥಿ ಭತ್ತದ ಗದ್ದೆಗೆ ಔಷಧಿ ಸಿಂಪಡಣೆಗೆ ಡ್ರೋನ್ ಮಾದರಿಯ ಯಂತ್ರ ಅಭಿವೃದ್ಧಿ ಪಡಿಸಿದ್ದಾರೆ. ವಿದೇಶಗಳಲ್ಲಿ ಇಂತಹ ಯಂತ್ರ ಕಂಡುಬಂದರೂ ದೇಶದಲ್ಲಿ ಇದರ ಅಭಿವೃದ್ಧಿ ಆಗಿರಲಿಲ್ಲ. ಈ ವಿದ್ಯಾರ್ಥಿ ಭತ್ತದ ಬೆಳೆಗೆ ಉಪಯೋಗವಾಗುವ ಮಾದರಿಯಲ್ಲಿ ಅಭಿವೃದ್ಧಿಪಡಿಸಿ ಪ್ರಾಯೋಗಿಕ ಯಶಸ್ಸು ಕಂಡಿದ್ದಾರೆ. ಇವರಿಗೆ ಕಾಲೇಜು ಹಾಗೂ ಕೃಷಿಕರು ಪ್ರೋತ್ಸಾಹ ನೀಡಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಅಡಿಕೆ ಕೊಳೆರೋಗಕ್ಕೆ ಔಷಧಿ ಸಿಂಡಪಣೆಗೆ ಧರ್ಮಸ್ಥಳ ಬಳಿಯ ನಿಡ್ಲೆಯ ಅಡಿಕೆ ಬೆಳೆಗಾರ ಕುಟುಂಬದಿಂದ ಬಂದ ಇಂಜಿನಿಯರ್ ಅವಿನಾಶ್ ರಾವ್ ಎಂಬವರು ಡ್ರೋನ್ ಮಾದರಿಯ ಯಂತ್ರ ತಯಾರು ಮಾಡಿದ್ದಾರೆ. ಈಗ ಬಹುತೇಕ ಯಶಸ್ಸು ಕಂಡಿದೆ. ಕೊಳೆರೋಗಕ್ಕೆ ಔಷಧಿ ಸಿಂಪಡಣೆ ಇನ್ನು ಸಿಲಭವಾಗಲಿದೆ. ಈಗಾಗಲೇ ಅಂತಿಮ ಹಂತ ತಲಪಿದ ಈ ಯಂತ್ರವನ್ನು ನವೆಂಬರ್ ತಿಂಗಳಲ್ಲಿ  ಧರ್ಮಸ್ಥಳದಲ್ಲಿ ಪ್ರದರ್ಶನಗೊಂಡು ಉದ್ಘಾಟನೆಗೊಳ್ಳಲಿದೆ. 2008 ರಿಂದ ಈ ಪ್ರಯತ್ನ ಮಾಡುತ್ತಿದ್ದ ಅವರಿಗೆ ಕ್ಯಾಂಪ್ಕೋ ಪ್ರೋತ್ಸಾಹ ನೀಡಿತ್ತು.
ಇನ್ನು ಶಿವಮೊಗ್ಗದ ಯುವಕರ ತಂಡ, ತಮಿಳುನಾಡಿನ ಕೃಷಿಕ, ಸುಳ್ಯದ ಕೃಷಿಕ ಗಣಪ್ಪಯ್ಯ ಅವರ ಪ್ರಯೋಗ..... ಹೀಗೇ ವಿವಿಧ ಕೃಷಿ ಯಂತ್ರಗಳ ಅಭಿವೃದ್ಧಿಯಾಗಿದೆ.
ಇದನ್ನೆಲ್ಲಾ ಪಾಸಿಟಿವ್ ಆಗಿ ತೆಗೆದುಕೊಂಡು ಪ್ರೋತ್ಸಾಹ ನೀಡಬೇಕಾದ್ದು ಅಗತ್ಯ. ಇಂದಲ್ಲ, ಮುಂದಿನ 10 ವರ್ಷಗಳ ನಂತರದ ಕೃಷಿಯ ಸ್ಥಿತಿಯ ಬಗ್ಗೆ ಯೋಚನೆ ನಡೆಯಬೇಕು. ಲೋಪಗಳೇ ಯಂತ್ರದ ಸೋಲಿನ ಕಾರಣವಾಗಬಾರದು, ಆ ಲೋಪಗಳೇ ಸುಧಾರಣೆಯಾಗಿ ಭವಿಷ್ಯದ ಸುಭದ್ರ ಕೃಷಿಗೆ ನಾಂದಿಯಾಗಬೇಕು. ನಮ್ಮದೇ ಊರಿನ ಯಂತ್ರ ಕಟ್ಟುವ ತಂಡಕ್ಕೆ ನಾವೇ ಬೆಂಗಾವಲಾಗಬೇಕು. ಅಂದು ಕೃಷಿಕ ಗೋವಿಂದ ರಾವ್ ರಿಕ್ಷಾವನ್ನು ವಿನ್ಯಾಸಗೊಳಿಸಿ ಮುಂದಡಿ ಇರಿಸಿದ್ದರಿಂದ ಅವರಿಗೆ ಇಂದು ಕಾರ್ಮಿಕರ ಸಮಸ್ಯೆ ತಲೆದೋರಿಲ್ಲ, ಕಳೆಕೊಚ್ಚುವ ಯಂತ್ರ ಬಳಕೆ ಮಾಡಿದ್ದರ ಪರಿಣಾಮ ನಿಗದಿತ ಸಮಯದಲ್ಲೇ ಕೃಷಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ಅಂದು ಅವರೂ ಹಿಂದೇಟು ಹಾಕುತ್ತಿದ್ದರೆ ಇಂದಿಗೂ ಕೃಷಿ ಯಂತ್ರಗಳು ಅವರತ್ತ ಬರುತ್ತಿರಲಿಲ್ಲ...!. ಮಣ್ಣು ಹಸನಾಗುತ್ತಿರಲಿಲ್ಲ...ಸಮಸ್ಯೆಗಳಿಗೆ ಉತ್ತರ ಸಿಗುತ್ತಿರಲಿಲ್ಲ.

(  ಮಣ್ಣಿಗೆ ಮೆಟ್ಟಿಲು - ಹೊಸದಿಗಂತ - 8-11-2017 )




ಕಾಮೆಂಟ್‌ಗಳಿಲ್ಲ: