20 ನವೆಂಬರ್ 2017

ಏರುವ ಬಿಪಿ..... ಕಾಣುವ ಸತ್ಯ.....





ಸುಮಾರು 35 ವರ್ಷ. ಇದ್ದಕ್ಕಿದ್ದಂತೆ ಆರೋಗ್ಯದ ತಪಾಸಣೆ ಮಾಡಬೇಕು ಎನಿಸಿತು. ವೈದ್ಯಕೀಯ ತಪಾಸಣೆಗೆ ಮುನ್ನ ಸಾಮಾನ್ಯ ವ್ಯಕ್ತಿಯಾಗಿದ್ದರೆ  ಬರುವಾಗ ಸ್ವಲ್ಪ ಬಿಪಿ ಹೆಚ್ಚಿದೆ....!. ಹಾಗಂತ ಯಾವುದೇ ಟ್ಯಾಬ್ಲೆಟ್ ಬೇಡ, ಸುಧಾರಿಸಿಕೊಳ್ಳಬೇಕು...

ಬೆಳಗ್ಗೆ ನನ್ನ ಪುಟಾಣಿಗಳನ್ನು ಶಾಲೆಗೆ ಬಿಡುವ ಹೊತ್ತು. ದೈನಂದಿನ ತುರ್ತು ಕೆಲಸಗಳ ಮುಗಿಸಿ ಬೈಕ್ ಹತ್ತಿ ಹೋಗುವಾಗ ಪುಟಾಣಿ ಹೇಳುತ್ತಾನೆ, ಇಂದು ಎಲ್ಲೂ ಹೋಗಬೇಡ, ಶಾಲೆ ಬಿಟ್ಟು ಬರೋವಾಗ ನೀನಿರಬೇಕು. ಆಟವಾಡಲು ಇದೆ...!. ಸರಿ.. ಸರಿ...... ಅಂದರೂ ಆ ಹೊತ್ತು "ಕಾಣೆ...".

ಇಂದು ತೋಟದ ನಡುವೆ ಹಲವು ಕೆಲಸಗಳು ಇವೆ. ಅದೆಲ್ಲಾ ಇಂದೇ ಮುಗಿಸಬೇಕು. ನಾಳೆ ಹೊಸದೊಂದು ಗಿಡ ನೆಡುವುದಕ್ಕೆ ಇದೆ, ಕೃಷಿ ಕಾರ್ಯದ ಸಹಾಯಕ್ಕೆ ಇಂದು 5 ಜನ ಬರುವರು ಎಂದು ಅಪ್ಪ ಹೇಳಿದಾಗಲೂ, ಸರಿ ಸರಿ ಎನ್ನುತ್ತಾ ಜನ ಬರುವ ಹೊತ್ತಿಗೆ "ನಾಪತ್ತೆ...."

ಬೇಗನೆ ಕಾಫಿ ಕುಡಿಯಬೇಕು. ಒಬ್ಬೊಬ್ಬರೇ ಬಂದರೆ ಆಗದು. ಬೇರೆ ಕೆಲಸವೂ ಇದೆ. ಬೇಗ ಊಟ ಮುಗಿಸಬೇಕು,... ಸರಿ ಸರಿ ಎನ್ನುತ್ತಾ ಸಂಗಾತಿಯ ಮುಂದೆಯೂ "ಕಾಣೆ..."

ಹೊಸ ಹೊಸ ವಿಷಯದ ಕಸನು ಹೊತ್ತು, ಅದ್ಯಾವುದೋ ಗ್ರಾಮದ ಸಮಸ್ಯೆಗೆ ಬೆಳಕು ನೀಡಬೇಕು, ಆ ಊರಿನ ಜನರಿಗೆ ನೆಮ್ಮದಿ ಸಿಗಬೇಕು. ಅದ್ಯಾರೋ ಬಡವನಿಗೆ ಆದ ಸಂಕಷ್ಟ ರಾಜ್ಯದ ದೊರೆಯ ಗಮನಕ್ಕೆ ಬರಬೇಕು, ಪರಿಹಾರ ಸಿಗಬೇಕು ಎಂದು ಕಂಪ್ಯೂಟರ್ ಮುಂದೆ ಕುಳಿತು ಮಾಡಿದ ಸುದ್ದಿಯೂ ಮರುದಿನ ಕಾಣೆ....!. ಕಾರಣ ಇನ್ನೇನೋ....!. ಹಾಗೊಂದು ವೇಳೆ ಬಂದರೂ, ವಾಸ್ತವವಾದರೂ  ಅದಕ್ಕೆ ಇನ್ನೊಂದಿಷ್ಟು "ಉಪ್ಪು-ಹುಳಿ-ಖಾರ".

ಇಡೀ ದಿನ ಹೀಗೇ ಕಳೆಯುತ್ತಾ ಸುಮಾರು 10 ವರ್ಷ ಕಳೆದು ಹೋದವು....!. ಈಗ ಸಾಧನೆಯ ಕಾರ್ಡ್ ನೋಡಿದರೆ "ಬಿಪಿ".

ಇತ್ತೀಚೆಗೆ ದೇಹಕ್ಕೆ ಶಕ್ತಿ ನೀಡುವ , ಚೈತನ್ಯ ತುಂಬುವ, ಮೆದುಳನ್ನು  ರಿಲ್ಯಾಕ್ಸ್ ಮಾಡುವ ಕೆಲಸದಲ್ಲಿ ತೊಡಗಿಸಿಕೊಂಡಾಗ ಅನಿಸಿದ್ದು , ಭೂತಕಾಲದ ಎಲ್ಲಾ ಸನ್ನಿವೇಶಗಳು, ಘಟನೆಗಳು ಅನುಭವಗಳಾದರೆ. ವ್ಯಕ್ತಿಗಳಿಂದ ತೊಡಗಿ ವಸ್ತುಗಳವರೆಗೆ, ಆಹಾರದಿಂದ ತೊಡಗಿ ವಿಹಾರದವರಗೆ , ಎಲ್ಲದರ ಒಂದು ಮುಖ ತಿಳಿದಿದೆ.  ಭವಿಷ್ಯದ ಬದಲಾವಣೆ, ಘಟನೆಗಳು ತಿಳಿದಿಲ್ಲ. ಹಾಗಾಗಿ ವರ್ತಮಾನದಲ್ಲಿ ಬದುಕುವ ಪ್ರಯತ್ನ ನಡೆಯುತ್ತಿದೆ. ಒಮ್ಮಿದೊಮ್ಮೆಲೇ ಇದೆಲ್ಲಾ ಕಷ್ಟ, ಆದರೂ ಸುಲಭ..!.

ಈಗ ಹೇಳಲು ಹೊರಟದ್ದು, ಬದುಕಿನ ಅನಗತ್ಯ ಒತ್ತಡ.
ಬೆಳಗ್ಗೆ ಪುಟಾಣಿಗಳ ಜೊತೆ ಶಾಲೆಗೆ ಹೊರಡುವ, ಅವರನ್ನು ಶಾಲೆಗೆ ಬಿಡುವ ಖುಷಿ, ಉಲ್ಲಾಸ ,ನಂತರ ಸಮಯ ಏರುತ್ತಿದ್ದಂತೇ ಬದಲಾಗುತ್ತಾ ಹೋಗುತ್ತದೆ. ಅದೇ ಒತ್ತಡ. ಸಂಜೆ ಪುಟಾಣಿ ಬಂದು ಆಟಕ್ಕೆ ಕರೆದಾಗ ಬೆಳಗಿನ ಖುಷಿಯೇ ಸಿಟ್ಟಾಗಿರುತ್ತದೆ, ಆ ಪುಟಾಣಿಗೆ ಇದೆಲ್ಲಾ ಹೇಗೆ ಗೊತ್ತು...? . ಹೀಗಾಗಿ ಯಾವುದಕ್ಕೂ ಪ್ರಯೋಜನಕ್ಕೆ ಬಾರದ ಒತ್ತಡ ಅದು. ಇದುವೇ ಆರೋಗ್ಯದ ಮೇಲೆ ಪರಿಣಾಮ. ಸವಾಲುಗಳು ಬೇಕು ನಿಜ, ಸವಾಲು ಇಲ್ಲದ ಬದುಕು ಇಲ್ಲ.  ಆದರೆ ಅದರ ಪರಿಣಾಮ ಹಾಗೂ ಅದರಿಂದ ಸ್ವಂತಕ್ಕಾಗಿ ಸಿಗುವ ಸುಖ  ಎಷ್ಟು ಎಂಬುದರ ಮೇಲೆ ಸವಾಲು ಸ್ವೀಕಾರವಾಗಬೇಕು.  ಹೆಚ್ಚಿನ ಸಂದರ್ಭ ಅಂತಹ ಸವಾಲು ಅನಗತ್ಯ. ವ್ಯರ್ಥವಾದ ಹೋರಾಟ..!. ಇದಕ್ಕಾಗಿ ಇಂತಹ ಹೋರಾಟಗಳಿಂದ ಹಿಂದೆ ಬರುವ ಬದಲು ತಟಸ್ಥವಾಗುವ ಮೂಲಕ ದೇಹದ ಆರೋಗ್ಯ ಸುಧಾರಣೆ. ಮಾತನಡುವ ಬದಲು ಮೌನವಾಗುವುದು ಹೆಚ್ಚು ಸೂಕ್ತ. ಇದು ನಮ್ಮೊಳಗಿನ ದೊಡ್ಡ ಗೆಲುವು. ನಮ್ಮೊಳಗಿನ ಖುಷಿ.

ಒಂದು ಶಕ್ತಿಯ, ಒಂದು ಸತ್ಯವ, ಒಂದು ಸಿದ್ದಾಂತವನ್ನು ನಂಬುವ ಕಾರಣದಿಂದ ಅನೇಕ ಬಾರಿ ಈ ನಂಬಿಕೆಯೇ ದಾರಿ ತೋರಿಸುತ್ತದೆ. ಸತ್ಯ ಎತ್ತಿ ಹೇಳುತ್ತದೆ, ಅರಿವು ಮೂಡಿಸುತ್ತದೆ. ಘಟನೆಯ ಹಿಂದೆ ಇರುವ ಮತ್ತೊಂದು ಮುಖದ ಅನಾವರಣ ಮಾಡಿಸುತ್ತದೆ. ಆಗ ಬೆಳಕು ಕಾಣುತ್ತದೆ. ದಾರಿ ಸ್ಪಷ್ಟವಾಗುತ್ತದೆ.
ಈಗಲೂ ಕಾಣುವುದು ಸ್ಪಷ್ಟವಾದ ದಾರಿ. ಈಗ ಮಬ್ಬು ಕವಿದಿದೆ. ವರ್ತಮಾನದಲ್ಲಿ ಯೋಚನೆ ನಡೆದಿದೆ. ಮುಂದೆ ಸಾಗುತ್ತಿದ್ದಾಗ, ದೂರದಲ್ಲಿ ಇನ್ನೊಂದು ಬೆಳಕು ಕಾಣಿಸುತ್ತಿದೆ. ಹತ್ತಿರವಾಗುತ್ತಿದೆ.  ಅದು ಯಶಸ್ಸು. ಅದು ಗುರಿ.
ಈಗ ಪುಟಾಣಿ ಜೊತೆ ಹರಟಲು ಖುಷಿಯಾಗುತ್ತಿದೆ, ನಿತ್ಯವೂ ಆಟವಾಡಲು ಖುಷಿಯಾಗುತ್ತಿದೆ...!.


ಕಾಮೆಂಟ್‌ಗಳಿಲ್ಲ: