13 ಏಪ್ರಿಲ್ 2018

ಈ ಸಂಘರ್ಷ ಭವಿಷ್ಯದ ಅಪಾಯ...




                                                                 ( ಅಂತರ್ಜಾಲ ಚಿತ್ರ )

ಇತ್ತೀಚೆಗೆ ಯಾಕೋ ಭಯ ಶುರುವಾಗಿದೆ. ಹೀಗಿರಲಿಲ್ಲ ಈ ವ್ಯವಸ್ಥೆ. ಜಾತಿ ಮೂಲಕ ಗುರುತಿಸದೇ ಇದ್ದರೂ ಅದರೊಳಗೇ ತಂದು ದೂಡುವ ಸ್ಥಿತಿ ಬಂದಿದೆ. ಯಾವುದೋ ಒಂದು ಆದರ್ಶ, ಸಿದ್ಧಾಂತ , ತತ್ತ್ವ ನಂಬಿ ಬಹುದೂರ ಬಂದ ಬಳಿಕ ಈ ಆತಂಕ ಶುರುವಾಗುತ್ತಿದೆ. ಅದೂ ಈ ಚುನಾವಣೆಗೇ ಮುಗಿದರೆ ಅಡ್ಡಿ ಇಲ್ಲ, ಅಲ್ಲದೇ ಇದ್ದರೆ ಭವಿಷ್ಯದಲ್ಲಿ ಧರ್ಮ ಸಂಘರ್ಷದ ಜೊತೆಗೆ ಜಾತಿ ಸಂಘರ್ಷದ ಭಯ ಕಾಡಿದೆ.
ಕಳೆದ ಅನೇಕ ವರ್ಷಗಳಿಂದ ಚುನಾವಣೆಯ ನೋಡುವ, ಮತ ಚಲಾವಣೆ ಮಾಡುವ ಅವಕಾಶ ಸಿಕ್ಕಿದೆ. ಆದರೆ ಈ ಬಾರಿಯ ಚುನಾವಣೆ ಹೊಸತೊಂದು ಸಂಘರ್ಷದ ವಾತಾವರಣವನ್ನು ಸದ್ದು ಗದ್ದಲವಿಲ್ಲದೆ  ತೆರೆದಿಟ್ಟಿದೆ. ಇದು ಅತ್ಯಂತ ಅಪಾಯಕಾರಿ ಎಂದು ಭಾವಿಸಲೇಬೇಕಾಗುತ್ತದೆ. ಇಂತಹ ಸಂಘರ್ಷ ಇಲ್ಲವೆಂದು ಮಾತಿನ ನಡುವೆ ಹೇಳಿಕೊಳ್ಳಬಹುದು. ಆದರೆ ಅಂತರ್ಯದಲ್ಲಿ ಚರ್ಚೆ ಶುರುವಾಗಿದೆ.
ವಿಶೇಷವಾಗಿ ಕರಾವಳಿ ಜಿಲ್ಲೆಯಲ್ಲಿ ಧರ್ಮ-ಮತ ಸಂಘರ್ಷ ಹಾಗೂ ಇದೇ ಸೂಕ್ಷ್ಮ ಸಂಗತಿಯಾಗಿ ಚುನಾವಣೆಯಲ್ಲಿ ಕಂಡುಬಂದು ಮತ ಗಳಿಕೆಯ ದಾರಿಯೂ ಆಗಿದ್ದರೆ ಈ ಬಾರಿ ಜಾತಿಯೂ ಸೇರಿಕೊಂಡಿದೆ. ಇತ್ತೀಚೆಗಂತೂ ಇದು ವಿಪರೀತವಾಗುತ್ತಿದೆ. ಭವಿಷ್ಯದಲ್ಲಿ ಈ ರಾಜಕೀಯ ವ್ಯವಸ್ಥೆ ಧರ್ಮ ಸಂಘರ್ಷದ ಜೊತೆಗೆ ಜಾತಿ ಸಂಘರ್ಷವನ್ನೂ ತಂದಿಡುವುದು ನಿಶ್ಚಿತ. ಇದ್ದಂತಹ ಕೆಲವು ಆಶಾಕಿರಣಗಳು, ಸಮಾಜವನ್ನು ಸುಧಾರಣೆ ಮಾಡುವ ಬೆಳ್ಳಿ ರೇಖೆಗಳೂ ಮಸುಕಾಗುತ್ತದೆ. ಎಲ್ಲೇ ಸುತ್ತಾಡಿದರೂ ಅದು ಕೊನೆಗೆ ಬಂದು ನಿಲ್ಲುವುದು , ನಿಲ್ಲಿಸುವುದು  ಅದೇ ಜಾತಿ ವ್ಯವಸ್ಥೆ ಸುತ್ತ. ಹೀಗಾಗಿ ಈ ಜಾತಿ ಸಂಘರ್ಷ  ಭವಿಷ್ಯದಲ್ಲಿ ಸಣ್ಣ ಸಣ್ಣ ಜಾತಿಗಳು ತಮ್ಮ ಅಸ್ತಿತ್ವಕ್ಕಾಗಿ ಹೋರಾಟ ಮಾಡಲೇಬೇಕಾದ ಅನಿವಾರ್ಯತೆ ಬಂದಬಹುದು. ಇಂತಹ ಸನ್ನಿವೇಶ ರಾಜ್ಯದ ಬೇರೆ ಕಡೆಗಳಲ್ಲಿ ಕಂಡುಬಂದಿತ್ತು. ಆದರೆ ಇದೀಗ ಕರಾವಳಿ ಜಿಲ್ಲೆಯಲ್ಲೂ ಕಾಣುತ್ತಿದೆ.

ಕೆಲವು ಸಮಯಗಳ ಹಿಂದೆ ರಾಜ್ಯದಲ್ಲಿ ಲಿಂಗಾಯತ ಧರ್ಮದ ಬಗ್ಗೆ ಪರ-ವಿರೋಧ ಅಭಿಪ್ರಾಯ ಬಂದಾಗ  ಧರ್ಮವನ್ನು ವಿಭಜನೆ ಮಾಡಲಾಗುತ್ತಿದೆ, ಈ ಸರಕಾರ ಹಿಂದೂ ವಿರೋಧಿ ಎಂಬೆಲ್ಲಾ ಅಭಿಪ್ರಾಯ ಬಂದವು. ಈ ಅಭಿಪ್ರಾಯ ಸತ್ಯವಾಗಿಯೂ ಕಂಡಿತ್ತು. ಹಾಗೆ ನೋಡಿದರೆ ಧರ್ಮ, ಮತ ಸಂಘರ್ಷ ಈ ಹಿಂದೆಯೂ ಇತ್ತು. ಆದರೆ ಈಗ ಜಾತಿ ಸಂಘರ್ಷದ ಜೊತೆಗೆ ಜಾತಿಯ ಒಳಗೆ ಸಂಘರ್ಷ ಉಂಟು ಮಾಡಿರುವುದು  ಈ ರಾಜಕೀಯ ವ್ಯವಸ್ಥೆ.  ಇಡೀ ರಾಜ್ಯದಲ್ಲಿಯೇ ಜಾತಿ ರಾಜಕಾರಣ ಹೆಚ್ಚುತ್ತಲೇ ಇದೆ. ಒಂದು ಧರ್ಮ ಅದರೊಳಗೆ ಇರುವ ಜಾತಿ ವ್ಯವಸ್ಥೆ ಹೊಗಲಾಡಿಸಬೇಕು ಎಂದು ಒಂದು ಕಡೆ ಜಾಗೃತಿ ಮೂಡಿಸುತ್ತಿದ್ದರೆ ಈ ಕಡೆಗೆ ಅದಕ್ಕಿಂತ 10 ಪಟ್ಟು ವೇಗದಲ್ಲಿ ಜಾತಿ ಆಧಾರಿತ ಟಿಕೆಟ್ ಕೊಡಲಾಗುತ್ತಿದೆ.

ಹೀಗಾಗಿ ಒಂದು ಸಿದ್ದಾಂತದ ಮೂಲಕ ರಾಜಕೀಯ ವ್ಯವಸ್ಥೆ ಶುದ್ದೀಕರಣವಾಗುತ್ತದೆ ಎಂಬ ಭಾವ ಇತ್ತು. ಅದೀಗ ಮರೆಯಾಗುತ್ತಿದೆ.  ರಾಜಕೀಯ ಕ್ಷೇತ್ರ ಏಕೆ  ಶುದ್ದೀಕರಣವಾಗಬೇಕು ಎಂದರೆ , ಮುಂದೆ ಆಳುವ ಮಂದಿ ಅದೇ ಜಾತಿ ವ್ಯವಸ್ಥೆಯಿಂದ ದೂರವಾಗಲೇಬೇಕಾದರೆ ಬಿತ್ತುವ  ಬೀಜವೇ ಶುದ್ದವಾಗಬೇಡವೇ ? ಧರ್ಮ - ಜಾತಿಯ ವಿಷ ಬೀಜವೇ ಬಿತ್ತಿದರೆ ಫಲವೂ ಅದೇ ಸಿಗುವುದು ಖಚಿತ. ಹೀಗಾಗಿ ರಾಜಕೀಯ ಕ್ಷೇತ್ರದ ಶುದ್ದೀಕರಣದ ಹಂತದಲ್ಲಿ ಗೆಲುವೇ ಮುಖ್ಯವೆಂದು ಮತ್ತೆ ಜಾತಿಯ ನಡುವೆ ಬಿದ್ದರೆ ಈ ಸಮಾಜದ ಉಳಿವು ಹೇಗೆ ಎಂಬ ಪ್ರಶ್ನೆ ಕಾಡುತ್ತಿದೆ. ಹೀಗಾಗಿ ಭವಿಷ್ಯದಲ್ಲಿ ಆತಂಕ ಇದೆ. ಈ ಸಂಘರ್ಷ , ಈ ಕಂದಕ ಇನ್ನಷ್ಟು ಹೆಚ್ಚಾಗುವುದು ನಿಶ್ಚಿತ.

ಕೆಲವು ಸಮಯದ ಹಿಂದೆ ಮನಸ್ಸು ಓಡುತ್ತದೆ.
ಒಂದು ಚಿಂತನೆಯ ಅಡಿಯಲ್ಲಿ ಬೆಳೆಯುತ್ತಾ ಅದೇ ಸತ್ಯವೆಂದು ನಂಬಿದ್ದಾಯಿತು. ಅದೇ ಕಾರಣದಿಂದ ಪ್ರಮುಖವಾದ ಮೆಟ್ಟಿಲಿನಿಂದ ಇಳಿದದ್ದೂ ಆಯಿತು. ಸಂಘರ್ಷ ಮಾಡಿದ್ದೂ ಆಯಿತು. ಅನೇಕರಿಂದ ಕೇಳಿಸಿಕೊಂಡದ್ದೂ ಆಯ್ತು. ಮಗುವಿನ ಓದಿಗೂ ಅದೇ ಚಿಂತನೆಯ ದಾರಿ ಹಿಡಿದದ್ದೂ ಆಯಿತು. ಸಾಮಾಜಿಕ ಕೆಲಸದಲ್ಲೂ ಅದೇ ದಾರಿಯನ್ನೂ ಹಿಡಿದಾಯಿತು. ಎಲ್ಲಾ ಆಗಿ ಕೊನೆಗೆ ಬಂದು ನಿಂತಿರುವುದು ದೂರದಲ್ಲಿ. ಮಾತನಾಡಿದ್ದೇ ತಪ್ಪಾಯ್ತೇ ಎಂಬಷ್ಟರ ಮಟ್ಟಿಗೆ ವ್ಯವಸ್ಥೆ ಬಂದು ನಿಂತಿತು. ಯಾವುದು ಸತ್ಯವೆಂದು ಭಾವಿಸಿದ್ದೆವೋ ಅದೇ ನಾವಾಗಲಿಲ್ಲ...!. ನಾವು ನಾವಾಗಲೂ ಇಲ್ಲ...!. ಅವಕಾಶವಾದಿಗಳು ಮೇಲೆದ್ದು ಬಿಟ್ಟರು, ಜಾತಿ ಹಿಡಿದರು ಗೆದ್ದರು..!. ಸತ್ಯ ಸೋತಿತು....!.




“ಹಲಸು” ಕೇರಳ ರಾಜ್ಯದ ಹಣ್ಣು. . . ರೈತನಿಗೆ ಸಂದ ಗೌರವ !





ರಾಜ್ಯದಲ್ಲಿ ರೈತರ ಸರಣಿ ಆತ್ಮಹತ್ಯೆ ನಡೆಯುತ್ತಿದ್ದರೆ, ಎಲ್ಲಾ ರಾಜಕೀಯ ಪಕ್ಷಗಳು, ಆತ್ಮಹತ್ಯೆಯ ಹಿಂದೆ ಬಿದ್ದಿದ್ದರು. ದೂರದ ಇಸ್ರೇಲ್‍ನಲ್ಲಿ ಅದರ ತದ್ವಿರುದ್ಧ. ಎಲ್ಲರೂ ಯಶೋಗಾಥೆಯ ಹಿಂದೆ ಬಿದ್ದರು. ಆತ್ಮಹತ್ಯೆ ತಡೆಗೆ ಏನು ಮಾಡಬಹುದು ಎಂದು  ತಂಡ ರಚನೆ ಮಾಡಿದರು. ರೈತರು ಬೆಳೆಯುವ ಕೆಲವು ಉತ್ಪನ್ನಗಳನ್ನು ಕಡ್ಡಾಯ ಬಳಕೆ ಮಾಡಬೇಕು ಎಂದರು. ರೈತರೂ ಗೆದ್ದರು, ಆತ್ಮಹತ್ಯೆಯೂ ಕಡಿಮೆಯಾಯಿತು. ಪಕ್ಕದ ಕೇರಳವೂ ಅದೇ ಹಾದಿಯಲ್ಲಿದೆ. ಹಲಸು ತನ್ನ ರಾಜ್ಯದ ಹಣ್ಣು ಎಂದು ಘೋಷಿಸಿದರು. ರೈತರೂ ಈ ಹಣ್ಣಿನ ಮೂಲಕ ಆದಾಯ ಸೃಷ್ಠಿ ಮಾಡಿಕೊಂಡರು.
ಇಡೀ ದೇಶದಲ್ಲಿ ಆಗಾಗ ಸುದ್ದಿಯಾಗುವ ಸಂಗತಿ ರೈತರ ಆತ್ಮಹತ್ಯೆ. ಆದರೆ ಪಕ್ಕದ ಕೇರಳದಲ್ಲಿ ಇಂತಹ ಸುದ್ದಿಗಳೇ ಅಪರೂಪ. ಇಲ್ಲವೇ ಇಲ್ಲ ಎಂದಲ್ಲ. ರೈತರ ಆತ್ಮಹತ್ಯೆಯ ಸರಾಸರಿ ತೆಗೆದರೆ ತೀರಾ ಕಡಿಮೆ. ಏಕೆ ಹೀಗೆ ಎಂದು ಪಾಸಿಟಿವ್ ಆಗಿ ಯೋಚಿಸಿದರೆ ಇಲ್ಲಿನ ಸರಕಾರಗಳು ಯಾವುದೇ ಬರಲಿ ರೈತರ ಬೇಡಿಕೆಗೆ ತಕ್ಷಣವೇ ಸ್ಪಂದಿಸುತ್ತವೆ, ರೈತ ಪರವಾದ ಯಾವುದೇ ಹೋರಾಟಕ್ಕೆ, ನ್ಯಾಯಯುತ ಬೇಡಿಕೆಗೆ ಪಕ್ಷಬೇಧವಿಲ್ಲದೆ ಹೋರಾಟ ನಡೆಯುತ್ತದೆ, ಸರಕಾರ ಸ್ಪಂದಿಸುತ್ತದೆ. ಅದರ ಜೊತೆಗೆ ಹೊಸ ಸಾಧ್ಯತೆಯತ್ತಲೂ ಸರಕಾರ ಹೇಳುತ್ತದೆ. ಈಗಲೂ ಅಂತಹದ್ದೇ ಪ್ರಯತ್ನ ಕೇರಳದಲ್ಲಾಗಿದೆ. ಹಲಸಿನ ಹಣ್ಣನ್ನು ರಾಜ್ಯದ ಹಣ್ಣು ಎಂದು ಸರಕಾರ ಘೋಷಿಸಿದೆ. ಅನೇಕ ಸಮಯಗಳಿಂದ ಹಲಸಿನ ಬಗ್ಗೆ ಕೇರಳದಲ್ಲಿ ಆಂದೋಲನ, ಚಳುವಳಿಯೇ  ನಡೆಯುತ್ತಿತ್ತು. ರಬ್ಬರ್, ತೆಂಗು ಮೊದಲಾದ ಕೃಷಿಯಿಂದಲೇ ಕಂಗೊಳಿಸುತ್ತಿದ್ದ ಕೇರಳದಲ್ಲಿ ಹಲಸಿನ ಆಂದೋಲನ ಶುರುವಾಗಿ ಸುಮಾರು 10 ವರ್ಷಗಳಾಗಿದೆ. ಹಲಸು ಮೇಳದಿಂದ ತೊಡಗಿ ವಿವಿಧ ಚಳುವಳಿ ನಡೆಯಿತು. ಇದರ ಪರಿಣಾಮ ವಿವಿಧ ಸಣ್ಣ ಸಣ್ಣ ಉದ್ಯಮಗಳು ಹುಟ್ಟಿಕೊಂಡಿದೆ.ಈಗ ಹಲಸು ಬೆಳೆಸುವ ಮೂಲಕ ರೈತನಿಗೆ ಆದಾಯ ತರಲು ಸಾಧ್ಯವಿದೆ ಎಂದು ಅನಿಸಿದೆ. ಹೀಗಾಗಿ ಕೇರಳದ ಸರಕಾರವೇ ರೈತರ ನೆರವಿಗೆ ಬಂದಿದೆ. ಕೇರಳದ ಕೃಷಿ ಸಚಿವರು ಈ ಬಗ್ಗೆ ಕಳೆದ ಕೆಲವು ಸಮಯಗಳಿಂದ ಅಧ್ಯಯನ ಮಾಡಿದರು, ಸಾಧ್ಯತೆ ಹಾಗೂ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿದರು. ಇಡೀ ರಾಜ್ಯದಲ್ಲಿ ಸರಕಾರದ ವತಿಯಿಂದ ಹಲಸಿನ ವಾಹನ ಓಡಿಸಿದರು. ಜನರಲ್ಲಿ, ಕೃಷಿಕರಲ್ಲಿ ಜಾಗೃತಿ ಮೂಡಿಸಿದರು. ಹೊಸ ಹೊಸ ತಳಿಯ ಹಲಸನ್ನು ಪರಿಚಯಿಸಿದರು. ಇದೀಗ ಹಲಸು ರಾಜ್ಯದ ಹಣ್ಣು ಎಂಬ ಘೋಷಣೆ ಮಾಡಿದರು. ಇಡೀ ಕೇರಳದ ರೈತರಿಗೆ ಇಷ್ಟು ಸಾಕು. ಈಗ ಹಲಸಿನ ಮೂಲಕವೂ ಆದಾಯವನ್ನು ಹೆಚ್ಚಿಸಿಕೊಳ್ಳಲು, ಉಪಬೆಳೆಯಾಗಿ ಬೆಳೆಯಲೂ, ಉದ್ಯಮಗಳು ಬೆಳೆಯಲು ಸಾಧ್ಯವಾಯಿತು.
ಹಾಗೆ ನೋಡಿದರೆ ಕೇರಳ ಮಾತ್ರವಲ್ಲ ಕರ್ನಾಟಕದಲ್ಲೂ ಹಣ್ಣು ಬೆಳೆಯುವ ಅನೇಕ ಕೃಷಿಕರು ಇದ್ದಾರೆ. ಆದರೆ ಮಾರುಕಟ್ಟೆ ಸಮಸ್ಯೆಯ ಕಾರಣದಿಂದ , ಈ ಬಗ್ಗೆ ಸಾಕಷ್ಟು ಜಾಗೃತಿ ಅರಿವು ಇಲ್ಲದ ಕಾರಣದಿಂದ ಸರಕಾರದ ಸಹಾಯವೇ ಇಲ್ಲದ ಕಾರಣದಿಂದ ಸೊರಗುತ್ತಿರುವುದು  ಕಂಡುಬರುತ್ತದೆ. ಮೂಲತ: ಕೇರಳದವರಾಗಿ ಪುತ್ತೂರು ತಾಲೂಕಿನ ಕಬಕ ಬಳಿಯ ನರ್ಸರಿ ನಡೆಸುತ್ತಿರುವ ಅನಿಲ್ ಪ್ರತೀ ವರ್ಷ ಸುಮಾರು 75 ಸಾವಿರದಿಂದ 1 ಲಕ್ಷ ಹಲಸು ಗಿಡವನ್ನು ಮಾಡಿ ದೇಶದ ವಿವಿದೆಡೆಗೆ ಮಾರಾಟ ಮಾಡುತ್ತಾರೆ.ಕೇರಳದಲ್ಲಿ ಹಲಸಿನ ಜಾಗೃತಿ ಆರಂಭವಾದ ಬಳಿಕ ಪ್ರತೀ ವರ್ಷ ಗಿಡಗಳಿಗೆ ಬೇಡಿಕೆ ವ್ಯಕ್ತವಾಯಿತು. ಇಂದಿಗೂ ಈ ಬೇಡಿಕೆ ಕಡಿಮೆಯಾಗಿಲ್ಲ. ಇದರ ಪ್ರಭಾವ ಪಕ್ಕದ ತಮಿಳುನಾಡಿನಲ್ಲೂ ಕಂಡಿತು. ಹೀಗಾಗಿ ಹಲಸಿನ ಗಿಡಕ್ಕೆ ಬೇಡಿಕೆ ಹೆಚ್ಚಾದಾಗ ಹೊಸತಂತ್ರವನ್ನು ಅನಿಲ್ ಕಂಡುಕೊಂಡರು. ಈಗ ಸಾಕಷ್ಟು ಗಿಡ ಮಾರಾಟಕ್ಕೂ ಅನಿಲ್ ಶಕ್ತವಾದರು. ಇದು ಅನಿಲ್ ಒಬ್ಬರ ಕತೆಯಲ್ಲ ಕೇರಳದಲ್ಲಿ ಸಾಕಷ್ಟು ನರ್ಸರಿಗಳಲ್ಲಿ ಇಂದು ಹಲಸಿನ ಗಿಡಕ್ಕೆ, ಹೊಸ ಹೊಸ ತಳಿಯ ಗಿಡಕ್ಕೆ ಬೇಡಿಕೆ ವ್ಯಕ್ತವಾಗುತ್ತಲೇ ಇದೆ.
 ಕೇರಳದ ಮೂಲದಿಂದ ಆಗಮಿಸಿ ಸುಮಾರು 5 ಎಕ್ರೆಯಲ್ಲಿ ಜಾರ್ಜ್ ಎಂಬ ಕೃಷಿಕ ರಂಬುಟಾನ್ ಹಣ್ಣಿನ ತೋಟ ಮಾಡುತ್ತಾರೆ. ರಂಬುಟಾನ್ ಬೇಡಿಕೆಯನ್ನು ಗಮನಿಸಿ 5 ಎಕ್ರೆ ಜಾಗ ಖರೀದಿ ಮಾಡಿ ಅಲ್ಲಿ ಸಂಪೂರ್ಣವಾಗಿ ಹಣ್ಣಿನ ಗಿಡವನ್ನು  ಬೆಳೆಸಿದರು. ಈಗ ಹಣ್ಣು ಕಟಾವು ಮಾಡುತ್ತಿದ್ದಾರೆ. ಹೀಗೆ ಹತ್ತಾರು ಮಂದಿ ಹಣ್ಣಿನ ತೋಟ ಮಾಡಿ ಕೇರಳದಲ್ಲೇ ಮಾರುಕಟ್ಟೆ ಹುಡುಕುತ್ತಾರೆ.
ಕರ್ನಾಟಕದಲ್ಲೇ ಇರುವ ಅನೇಕರು ಹಣ್ಣಿನ ತೋಟ ಮಾಡಿ ಮಾರುಕಟ್ಟೆಗಾಗಿ ಪರದಾಟ ಮಾಡುತ್ತಾರೆ. ಎಲ್ಲೋ ಕೆಲವರು ಸಾಹಸಪಟ್ಟು ಮಾರುಕಟ್ಟೆ ಸೃಷ್ಟಿಸಿಕೊಳ್ಳುತ್ತಾರೆ. ಹಣ್ಣಿನ ತೋಟವೂ ಆದಾಯ ತರಬಲ್ಲುದು ಎಂಬ ಕಲ್ಪನೆ ಇದ್ದರೂ ಇಂದಿಗೂ ತೋಟಗಾರಿಕಾ ಬೆಳೆಯಾಗಿ ಸಾಕಷ್ಟು ಪ್ರೋತ್ಸಾಹ ರಾಜ್ಯದಲ್ಲಿ ಸಿಗುವುದಿಲ್ಲ. ಮಾವು ಸೇರಿದಂತೆ ಇನ್ನಿತರ ತೋಟಗಾರಿಕಾ ಬೆಳೆಗಳೂ ಸಾಕಷ್ಟು ಇದ್ದರೂ ರಾಜ್ಯದ ಹಣ್ಣು ಎಂಬ ಘೋಷಣೆ ಇಲ್ಲಿಲ್ಲ. ಇದ್ದರೂ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಾಣುತ್ತಿಲ್ಲ. ಹೀಗಾಗಿ ರೈತನಿಗೆ ಆದಾಯ ಹೆಚ್ಚುವುದು ಕೂಡಾ ಕಷ್ಟವಾಗಿದೆ, ಯಶೋಗಾಥೆಗಳು ಕಾಣಿಸುತ್ತಿಲ್ಲ. ರಾಜ್ಯದಲ್ಲಿ ವಿವಿಧ ತಳಿಯ ಮಾವು ಬೆಳೆಯಲಾಗುತ್ತದೆ, ಹೊಸ ಬಗೆಯ ಕಲ್ಲಂಗಡಿ ಬೆಳೆಯಲಾಗುತ್ತದೆ. ರೈತನಿಗೆ ಯಾವತ್ತೂ ಉಪಬೆಳೆಗಳು ಆದಾಯ ದ್ವಿಗುಣಕ್ಕೆ ಕಾರಣವಾದರೆ, ಸರಕಾರದ ಸಣ್ಣ ಪ್ರೋತ್ಸಾಹ ಕೂಡಾ ದೊಡ್ಡದಾಗಿ ಕಾಣುತ್ತದೆ. ರಾಜ್ಯದಲ್ಲೂ ಯಾವುದಾದರೊಂದು ಹಣ್ಣನ್ನು ರಾಜ್ಯದ ಹಣ್ಣು ಎಂದು ಘೋಷಿಸಿದರೆ ಸಹಜವಾಗಿಯೇ ಮಾರುಕಟ್ಟೆ ಹೆಚ್ಚುತ್ತದೆ, ಹೊಸ ಮಾರುಕಟ್ಟೆ ಸೃಷ್ಟಿಯಾಗುತ್ತದೆ, ರೈತನಿಗೂ ಆದಾಯ ಹೆಚ್ಚಾಗುತ್ತದೆ. ಸರಕಾರಗಳು ಈ ದಿಸೆಯಲ್ಲಿ ಏಕೆ ಆಲೋಚಿಸಬಾರದು ಇಲ್ಲಿ ?. ಇಂತಹ ಸಣ್ಣ ಸಣ್ಣ ಮೆಟ್ಟಿಲುಗಳೇ ರೈತನ ಆದಾಯಕ್ಕೆ ದೊಡ್ಡ ಮೆಟ್ಟಿಲುಗಳೇ ಆಗುತ್ತದೆ.