30 ಡಿಸೆಂಬರ್ 2009

ಸಾವಲ್ಲ ಅದು ಹುಟ್ಟು . . .



ಅನೇಕರಿಗೆ ಸಾವೆಂದರೆ ಅದು ಬದುಕಿನ ಸಾವು. ಆ ನಂತರ ಅಲ್ಲಿ ಉಳಿಯುವಂತಹದ್ದು ಏನೂ ಇಲ್ಲ.ಆದರೆ ಇನ್ನೂ ಕೆಲವರಿಗೆ ಸಾವೆಂದರೆ ಅದು ಇನ್ನೊಂದು ಹುಟ್ಟು.ಹೊಸತರ ಆರಂಭ. ಆ ಬಳಿಕ ಅವರ ಸಾಧನೆಗಳೆಲ್ಲವೂ ನೆನಪಾಗುತ್ತದೆ.ಅತಹ ಎರಡು ಸಾವುಗಳು ಎರಡು ದಿನ ಕಂಡಿದೆ.ಖ್ಯಾತ ಗಾಯಕ ಅಶ್ವತ್ಥ್ , ಇನ್ನೊಬ್ಬ ಹಿರಿಯ ನಟ ವಿಷ್ಣುವರ್ಧನ್. ಇವರ ಬದುಕಿನ ಎಲ್ಲಾ ಸಾಧನೆಗಳು ಈ ಮೊದಲು ಅದೆಲ್ಲೋ ದಾಖಲಾಗುತ್ತಲೇ ಬಂದಿತ್ತು.ಇಂದು ಅದೆಲ್ಲವೂ ತೆರೆದಿದೆ. ಈ ಎರಡು ಸಾವುಗಳನು ನೋಡಿದಾಗ ನಿಜಕ್ಕೂ ಮನುಷ್ಯನ ಸಾವೆಂದರೆ ಅದು ಹೀಗಿರಬೇಕು ಅಂತ ಅನ್ಸುತ್ತೆ.ಅದೆರಡೂ ಸಾವು ಕನ್ನಡ ನಾಡಿಗೆ ತುಂಬಲಾರದ ನಷ್ಟ ಅಂದಂತೂ ಒಪ್ಪಿಕೊಳ್ಳಲೇ ಬೇಕು. ಆದರೆ ಅದರ ಹೊರ ಬಂದು ನೋಡಿದಾಗ ಆ ಸಾವು ನೆನಪುಗಳ ಹುಟ್ಟಿಗೆ ಕಾರಣವಾಗಿದೆ.ಇದುವರೆಗೆ ಅವರ ಎಲ್ಲಾ ಸಾಧೆನೆಗಳು ಒಂದೆಡೆ ಶೇಖರಣೆಯಾಗಿತ್ತು.ಈಗ ಅದು ಮತ್ತೆ ಮತ್ತೆ ನೆನಪಾಗುತ್ತಲೇ ಇದೆ. ಅವರ ಹಾಡುಗಳು , ಚಿತ್ರಗಳು ಇಂದಿಗೂ ನಮ್ಮ ಮುಂದೆ ಕಾಣುತ್ತಲೇ ಇದೆ.ಸತ್ರೂ ಅವರು ಜೀವಂತವಿದ್ದಂತೆ.

ಆದರೆ ಅದು ಯಾರಿಗೆ ಸಾಧ್ಯ. ರಾಜಕಾರಣಿಗಳಿಗೆ...? ಇಲ್ಲ ಅಂತಹ ರಾಜಕಾರಣಿಗಳು ನಮ್ಮಲ್ಲಿ ಯಾರಿದ್ದಾರೆ..?. ಸಮಾಜ ಸೇವಕರಿಗೆ....? ಇಲ್ಲ ಅದೂ ಕಾಣುತ್ತಿಲ್ಲ. ನನ್ನ ಪ್ರಕಾರ ಅದು ಕಲಾವಿದರಿಗೆ ಮಾತ್ರಾ ಸಾಧ್ಯ.ಅವರ ಬದುಕಿಗೆ ಮಾತ್ರಾ ಅಂತಹ ಅಭಿಮಾನಿಗಳು, ಪ್ರೇಮಿಗಳು ಮುತ್ತಿಕೊಳ್ಳಲು ಸಾಧ್ಯ. ನಮಗೂ ಒಮ್ಮೊಮ್ಮೆ ಅನಿಸುವುದಿದೆ. ಸುಮ್ಮನೆ ಬ್ಲಾಂಕ್ ಆಗಿ ನಮ್ಮ ಸಾಧನೆಯಯ ಬಗ್ಗೆ ಯೋಚಿಸುತ್ತಾ ಹಿಂದೆ ಹೋದರೆ ಏನೇನೂ ಕಾಣಿಸುತ್ತಿಲ್ಲ.ಅದೇನೋ ಒಂದಷ್ಟು ಕೆಲಸ ಮಾಡುತ್ತೇವೆ.ಸಮಾಜದ ಡೊಂಕನ್ನು ಸರಿಪಡಿಸುತ್ತೇವೆ ಎಂಬ ಭಾವನೆ ಇದೆ.( ಒಂದರ್ಥದಲ್ಲಿ ಅಹಂ) ಆದರೆ ಈಗೀಗ ಅನಿಸುತ್ತಿದೆ ಅದೆಲ್ಲವೂ ನಮ್ಮ ಭ್ರಮೆಯೋ ಏನೋ ಎಂದು. ಹಾಗಾಗಿ ಮುಂದೆಯೂ ಅದೇನೋ ಸಾಧನೆಯ ಗುರಿ ಹಾಕಿಕೊಂಡಾಗಿದೆ.ಜೀವಿತದ ಕೊನೆಯಲ್ಲಾದರೂ ಅಲ್ಲಿಗೆ ತಲಪಿಬಿಡಬೇಕು ಎಂಬ ಇಚ್ಚೆ ಇದೆ. ಹೀಗಾಗಿ ನಮ್ಮ ಜೀವಿತದ ಅದೆಷ್ಟೋ ದಿನಗಳು ಇದುವರೆಗೆ ಕಳೆದುಹೋಗಿದೆ. ಮತ್ತೆಂದೂ ಬಾರದ ಸಮಯ ಅದಾಗಿದೆ ಪ್ರತಿಕ್ಷಣವೂ ಹೊಸದಿನವಾಗಿದೆ..ಹಾಗಾಗಿ ಅಂತಹ ಎಲ್ಲಾ ಸಮಯಗಳನ್ನು ಕಳೆದುಕೊಂಡು ಮುಂದೆ ಸಾವಿನ ನಂತರದ ಹುಟ್ಟು ನಮ್ಮದಾಗಬೇಕು ಎಂಬ ಇಚ್ಚೆಯೊಂದಿದೆ.ಹಾಗಾಗಿ ಈ ಬದುಕಿನಲ್ಲಿ ಉಳಿದುಕೊಳ್ಳುವುದು ಅದೇ ಪ್ರೀತಿ, ಸ್ನೇಹ, ಮತ್ತು ಇಂತಹ ಸಾಧನೆಗಳು ಅಲ್ವೇ.?.ಹಾಗಾಗಿ ಅದರ ನಡುವೆಯೇ ಸಾಧನೆಯ ಶಿಖರವನ್ನೂ ಏರಬೇಕಾಗಿದೆ.

14 ನವೆಂಬರ್ 2009

ಬದುಕೇ ಇವರಿಗೆ ಉತ್ಸಾಹ . . . .



13 ನೇ ವರ್ಷದಲ್ಲಿ ಕಣ್ಣು ಮಸುಕಾಗಿದೆ, 14 ನೇ ವರ್ಷವಾಗುತ್ತಿದ್ದಂತೆಯೇ ಹೊರಜಗತ್ತು ಕಾಣುವುದಿಲ್ಲ.. ಸೂರ್ಯನ ಬೆಳಕೂ ಕಾಣುವುದಿಲ್ಲ..ಬದುಕೆ ಅಂಧಕಾರ.. ಎಂದು ನಾವೆಲ್ಲಾ ಒಂದೇ ವಾಕ್ಯದಲ್ಲಿ ಹೇಳಿ ಮುಗಿಸುತ್ತೇವೆ. ಆದರೆ ಇಲ್ಲೊಬ್ಬರನ್ನು ನಾನು ಇಂದು ಬೇಟಿಯಾಗಿದ್ದೆ. ಅವರಿಗೆ ಬದುಕು ಆರಂಭವಾಗಿದ್ದೇ 13 ವರ್ಷದಿಂದ..!!. ಹೌದು ಅವರು ನಿಜಕ್ಕೂ ಎಲ್ಲರಿಗೂ ಮಾದರಿ.. ಎಲ್ಲರಿಗೂ ಆತ್ಮವಿಶ್ವಾಸವನ್ನು ತುಂಬುತ್ತಾರೆ....

ಅದು ಕುಕ್ಕೆ ಸುಬ್ರಹ್ಮಣ್ಯದಿಂದ ಆರಂಭವಾಗುವ ಮ್ಯಾರಾಥಾನ್ ಓಟ. ಎಲ್ಲರೂ ಇದು ಸಾಮಾನ್ಯ ಅಂತ ಮಾತನಾಡಿಕೊಳ್ಳುತ್ತಿದ್ದರು.ನಾವು ಕೂಡಾ ಅದೇ ಮೂಡ್‌ನಲ್ಲಿದ್ದರೆ ಅಲ್ಲೊಬ್ಬರು ಬಂದರು. ಕಣ್ಣು ಕಾಣಿಸುವುದಿಲ್ಲ , ಅವರ ವಯಸ್ಸು 53. ಅವರ ಬನಿಯನ್‌ನಲ್ಲಿ ನಾಮ ಫಲಕ , ಕ್ರಮಸಂಖ್ಯೆಯೂ ಕಾಣುತ್ತಿರುವಾಗಲೇ ಅವರೊಬ್ಬ ಓಟಗಾರ ಎಂದು ಸಾರಿ ಹೇಳಿತ್ತು.ವಿಚಾರಿಸಿದಾಗ ಅವರು ಮುಂಬಯಿಯ ಅಮರೀಂದರ್ ಸಿಂಗ್ ಎಂಬುದು ಗೊತ್ತಾಯಿತು. ಈಗ ಅವರು 21 ಕಿಲೋ ಮೀಟರ್ ದೂರ ಮ್ಯಾರಾಥಾನ್ ಓಟಕ್ಕೆ ಸಿದ್ದವಾಗಿ ಬಂದಿದ್ದಾರೆ.ನಿಜಕ್ಕೂ ಅಚ್ಚರಿ ಅವರ ವಯೋಮಾನದ ಪ್ರಕಾರ ಅವರು 5ಕಿಲೋಮೀಟರ್ ಓಡಬೇಕಾಗಿತ್ತು.ಆದರೆ ಅವರು ತೆಗೆದುಕೊಂಡ ಸವಾಲು 21 ಕಿಲೋ ಮೀಟರ್ ಅಂದರೆ 30 ವಯೋಮಾನಕ್ಕೆ ಸರಿಸಾಟಿ. ಎಲ್ಲರೂ ಮಾತನಾಡಿದ್ದು ಅವರು ಪೂರ್ತಿಗೊಳಿಸಿಯಾರೇ..?. ಆಧರೆ ಈ ಅಂಧನಿಗೊಬ್ಬ ಜೊತೆಗಾರನಿರುತ್ತಾರೆ.ಅವರು ಒಂದು ಕೋಲನ್ನು ಸಮಾನಾಂತಾರವಾಗಿ ಹಿಡಿದುಕೊಂಡು ಓಡುತ್ತಾರೆ.ಹೀಗೆ ಜೊತೆಗಾರನೊಂದಿಗೆ ಓಡಿದ ಅಮರೀಂದರ್ ಸಿಂಗ್ ಬಹುಮಾನ ಗೆಲ್ಲಲಿಲ್ಲ. ಆದರೆ ಸವಾಲನ್ನು ಗೆದ್ದಿದ್ದಾರೆ.ಒಂದೆಡೆ ಬಿದ್ದು ಎದ್ದು ಸುಧಾರಿಸಕೊಂಡು ಓಡಿದ ಅಮರೀಂದರ್ ಸಿಂಗ್ ಈ ಹಿಂದೆಯೂ ಹೀಗೇ ಓಡಿದ್ದಾರೆ. ಹಿಮಾಲಯ ಏರಿದ ಮೊದಲ ಅಂಧ ಎಂಬ ಖ್ಯಾತಿಯೂ ಇವರಿಗಿದೆ. ಅದರಾಚೆಗೆ ಹೋದರೆ ಈಜಿನಲ್ಲಿ ಚಿನ್ನದ ಪದಕವನ್ನೂ ಗೆದ್ದಿದ್ದಾರೆ.

ಹೀಗೆ ಸಾಧನೆಗಳ ಮೇಲೆ ಸಾಧನೆಯನ್ನು ಮಾಡಿರುವ ಅಮರೀಂದರ್ ಸಿಂಗ್ ಬೆಳಕು ಕಾಣುವ ಜನರಿಗೂ ಮಾದರಿಯಾಗಿದ್ದಾರೆ.ಇಷ್ಟು ವರ್ಷ ಕಂಡ ಬೆಳಕಿಗಿಂತ ಅಮರೀಂದರ್ ಹರಿಸಿದ ಬೆಳಕು ಇಂದು ಹೆಚ್ಚು ಪ್ರಖರವಾಗಿತ್ತು.ನಮಗೆಲ್ಲಾ ಕತ್ತಲಿನಿಂದ ಹೊರಬರುವಂತೆ ಮಾಡಿತ್ತು.

06 ಸೆಪ್ಟೆಂಬರ್ 2009

ನೇಗಿಲಯೋಗಿಯ ಕತೆಯ ಕೇಳಿಲ್ಲಿ . .. . .



ಆತ ರೈತ .
ದೇಶದ ಬೆನ್ನೆಲುಬು.. ಅನ್ನ ನೀಡುವ ಅನ್ನದಾತ . . .ಪ್ರಾಣ ರಕ್ಷಕ ಹೀಗೆ ಏನೆಲ್ಲಾ ವಿಶೇಷಣಗಳನ್ನು ಆತನಿಗೆ ನೀಡಬಹುದೋ ಅದೆಲ್ಲವೂ ಆತನಿಗೆ ನೀಡಬಹುದು. ಆದರೆ ಆತನ ಜೀವನ ಮಟ್ಟ ಸುಧಾರಿಸದು.. ಹಾಗಾದ್ರೆ ಏನು ಮಾಡಬಹುದು ..? ಆತನಿಗಾಗಿ ಏನನ್ನು ಯೋಚಿಸಬಹುದು..? ಏನನ್ನೂ ಇಲ್ಲ..! ನಿಜಕ್ಕೂ ಇದು ಸತ್ಯ. ಅಂತಹ ಒಂದು ಘಟನೆಯೊಂದು ಇದೆ. ಇದಕ್ಕೂ ಮುನ್ನ ಒಂದು ಸಂಗತಿ.ಈಗಿನಂತೆ ಆಹಾರ ಬೆಳೆಯ ಕೊರತೆಯಾದರೆ 2050 ರವೇಳೆಗೆ ಏಷ್ಯಾದ ಅನೇಕ ಕಡೆಗಳಲ್ಲಿ ಆಹಾರದ ಸಮಸ್ಯೆ ತೀವ್ರವಾಗಿ ಕಾಡಲಿದೆ ಎಂಬ ವರದಿಯೊಂದು ಬಂದಿದೆ.ಆಗ ರೈತ ನೆನಪಾಗುತ್ತಾನೆ. ಆದರೆ ಆಗ ಆತನೇ ಇರುವುದಿಲ್ಲವಂತೆ...!!

ಮೊನ್ನೆ ರೈಲಲ್ಲಿ ಹೋಗುತ್ತಿದ್ದೆವು. ಯಾರೋ ಒಬ್ಬರು ಪ್ರಯಾಣಿಕರು ಮಾತನಾಡುತ್ತಿದ್ದರು. ಅವರು ಹೇಳುತ್ತಿದ್ದ ವಿಚಾರ ರೈತನದ್ದಾಗಿತ್ತು. ನಿಜಕ್ಕೂ ಅವರು ಹೇಳುತ್ತಿರುವ ಸಂಗತಿಯ ಒಳಹೋದರೆ ಅದು ಕಾನೂನು ಪರಿಧಿಯೊಳಗೆ ಸರಿಯಿತ್ತು. ಆದರೆ ಅದರ ಹೊರತಾಗಿ ಅಂದರೆ ದೇಶದ ವ್ಯವಸ್ಥೆಯ ಒಳಗೆ ನೋಡಿದಾಗ ಹಾಗಾಗಬಾರದಿತ್ತು ಅಂತ ಅನ್ಸುತ್ತೆ.ಆತ ರೈತ, ಸುಮಾರು 60 ರಿಂದ 70 ವರ್ಷದ ಒಳಗಿನ , ಹೊಲದಲ್ಲಿ ಕೆಲಸ ಮಾಡಿದ ಜೀವ. ಆತನಿಗೆ ಹಾಸನಕ್ಕೆ ಬರುವುದಕ್ಕಿತ್ತು. ರೈಲಲ್ಲಿ ಟಿಕೆಟ್ ಪಡೆದಿದ್ದ. ಆತನಿಗೆ ಯಾರೋ ಹೇಳಿದರಂತೆ ನೀವ್ಯಾಕೆ ಆ ರೈಲಲ್ಲಿ ಹೋಗುತ್ತೀರಿ. ನೋಡಿ ಈ ರೈಲಲ್ಲಿ ಹೋಗಿ. ಇದು ನಿಮಗೆ ಹತ್ತಿರವಾಗುತ್ತದೆ ಎಂದರಂತೆ. ಹಾಗಾಗಿ ಆತ ಈ ರೈಲ್ಲನ್ನು ಏರಿದ. ಹಾಗೆ ರೈಲು ಮುಂದೆ ಹೋಯಿತು. ಟಿಕೆಟ್ ಚಕ್ಕಿಂಗ್‌ಗೆ ಅಧಿಕಾರಿ ಬಂದ. ಈ ರೈತ ಟಿಕೆಟ್ ನೀಡಿದ್ದೇ ತಡ. ನೀವ್ಯಾಕೆ ಈ ರೈಲಲ್ಲಿ ಬಂದದ್ದು ..ಇಳೀರಿ..ಇಳೀರಿ.. ಇಲ್ಲಿಂದ 45 ರುಪಾಯಿ ಕೊಟ್ಟು ಬಸ್ಸು ಏರಿ ಅಲ್ಲಿಗೇ ಹೋಗಿ ...ಇನ್ನೊಂದು ರೈಲಲ್ಲಿ ಬನ್ನಿ ಎಂದು ಗದರಿಸತೊಡಗಿದ. ಕಂಗಾಲಾದ ರೈತ ಹೇಳಿದ ನೋಡಿ ಸ್ವಾಮಿ ನಾನು ಟಿಕೆಟ್ ಮಾಡಿದ್ದೇನೆ. ನಂಗೊತ್ತಿಲ್ಲ ಯಾರೋ ಹೇಳಿದ್ರು ಇದರಲ್ಲಿ ಹೋಗಿ ಅಂತ. ಇನ್ನು ನನ್ನಲ್ಲಿ ಇರುವುದು 20 ರುಪಾಯಿ ನಾನು ಹೇಗೆ ಹೋಗಲಿ ಅಂತ ಕೇಳಿದ. ಆದರೆ ರೈಲು ಅಧಿಕಾರಿ ಕೇಳಲೇ ಇಲ್ಲ. ಆಗ ಜನ ಸೇರಿದರು. ಆದರೂ ರೈಲು ಅಧಿಕಾರಿ ಕೇಳಲೇ ಇಲ್ಲ. ಅಂತೂ 50 ರುಪಾಯಿ ದಂಡ ಕಟ್ಟಲೇ ಬೇಕಾಯಿತು. ಅದನ್ನು ಯಾರೋ ಒಬ್ಬರು ಕೊಟ್ಟರು. ಅಲ್ಲಿಗೆ ಪ್ರಕರಣ ಸುಖಾಂತ್ಯ ಕಂಡಿತು. ಆದರೆ ವಿಷಯ ಅದಲ್ಲ..

ಈ ದೇಶ ರೈತನಿಗಾಗಿ ಹಲವಾರು ಯೋಜನೆಗಳನ್ನು ಹಾಕಿಕೊಂಡಿದೆ ...

ಈ ರಾಜ್ಯದಲ್ಲಿ ರೈತ ಗೀತೆ ಬಂದಿದೆ .. ನೇಗಿಲ ಯೋಗಿಯ ನೋಡಲ್ಲಿ ಅನುರಣಿಸುತ್ತಿದೆ...

ಶೇಕಡಾ 3 ರ ದರದಲ್ಲಿ ಸಾಲವಿದೆ.. ಉಚಿತ ವಿದ್ಯುತ್ ಇದೆ . . .

ಸಾವಯವ ಕೃಷಿಗೆ ಇನ್ನೂ ಸವಲತ್ತಿದೆ....

..... ಹೀಗೇ ಒಂದಲ್ಲ ಹತ್ತಾರು ಯೋಜನೆಗಳು ಸರಕಾರಗಳು ರೈತರಿಗಾಗಿ ಹಾಕಿಕೊಳ್ಳುತ್ತಿದೆ.
ಯಾಕಾಗಿ...?. ಪ್ರಚಾರಕ್ಕಂತೂ ಅಲ್ಲ. ಓಟಿಗಾಗಿಯೂ ಇರಬಹುದು. ಆಧರೆ ಅದಕ್ಕಿಂತಲೂ ಹೆಚ್ಚು ಈ ದೇಶದ ಅನ್ನದಾತ ಆತ.ಒಂದು ವೇಳೆ ಆತ ಮಾರಾಟವನ್ನು ನಿಲ್ಲಿಸಿ ಸ್ವಂತಕ್ಕಾಗಿ ಮಾತ್ರವೇ ಅಕ್ಕಿ ತಯಾರಿಸಿದ ಎಂದು ಇಟ್ಟುಕೊಳ್ಳಿ ದೇಶದ ಸ್ಥಿತಿ ಏನಾದೀತು..? ಒಂದು ಕ್ಷಣ ಯೋಚಿಸಿ..? ಹಾಗಿದ್ದರೂ ಈ ಅಧಿಕಾರಿಗೆ ಕೊಂಚವಾದರೂ ಮಾನವೀಯತೆ ಬೇಡವೇ ಎಂಬುದು ಒಂದು ಪ್ರಶ್ನೆ. ಸರಕಾರ ನಿಜಕ್ಕೂ ರೈತನ ಪ್ರಯಾಣಕ್ಕೆ ವಿಶೇಷವಾದ ವ್ಯವಸ್ಥೆ ಮಾಡಲಿ. ಎಲ್ಲಾ ಯೋಜನೆಗಳಂತೆ ಇದೂ ಕೂಡಾ ಆತನಿಗೆ ಸಿಗಲಿ. ಅಲ್ಲಿ ಅನಗತ್ಯವಾಗಿ ಮಂತ್ರಿಗಳ ಪ್ರಯಾಣಕ್ಕೆ ಖರ್ಚು ಮಾಡುವ ಸರಕಾರ ನೇಗಿಲಯೋಗಿಗೆ ನೀಡಲಿ.ಅಥವಾ ವರ್ಷಕ್ಕೆ ಒಂದಿಷ್ಟು ಉಚಿತ ಪ್ರಯಾಣ ವ್ಯವಸ್ಥೆ ಮಾಡಲಿ.ಅದು ಬಿಟ್ಟು ಏನೂ ಅರಿಯದ ಟಿಕೆಟ್ ಪಡೆದಿದ್ದ ಆ ರೈತನ ಮೇಲೆ ದಂಡ ಕಟ್ಟು ಎಂದು ಹೇಳುವ ಆ ಅಧಿಕಾರಿಗೆ ಒಂದು ದಿನದ ಅನ್ನದ ಹಿಂದಿನ ಕಷ್ಠದ ಅರಿವು ಆಗಬೇಕು. ಆತನಿಗೆ 20 - 25 ರುಪಾಯಿಗೆ ಅಕ್ಕಿ ಸಿಗುತ್ತಲ್ಲಾ ಅದರ ಹಿಂದಿರುವ ದುಡಿಮೆ ಆತನಿಗೆ ಅರಿವಿಲ್ಲ. ತನಿಗೆ ಏನಿದ್ದರೂ ಇಲ್ಲಿ ರೈಲಲ್ಲಿ ಹೋಗಿ 20 - 25 ಸಾವಿರ ಎಣಿಸಿಯೇ ಗೊತ್ತು ವಿನಹ: ಒಂದು ತುತ್ತು ಅನ್ನದ ಹಿಂದಿರುವ ಕನಿಷ್ಠ ಗೊತ್ತಿಲ್ಲ. ಹಾಗಾಗಿ ಆತ ರೈತನಿಗೆ ದಂಡ ಕಟ್ಟಲು ಹೇಳಿದ್ದು.. . .

ಬಿಡಿ ಒಂದು ತುತ್ತು ಅನ್ನದ ಹಿಂದೆ ಎಷ್ಟು ಕಷ್ಟವಿದೆ ಎಂದು ಒಂದು ಕ್ಷಣ ಯೋಚಿಸಿನೋಡಿ. ಆದರೂ ನಾವು ಕೊಡುವುದು 20 - 27 ರುಪಾಯಿ. ಅದಲ್ಲ ಈ ಬೆಲೆ ಇನ್ನೂ ಏರಲಿದೆಯಂತೆ. ಏಕೆಂದರೆ ರೈತರ ಸಮಸ್ಯೆ ಕಡಿಮೆಯಾಗುತ್ತಿದೆ. ಒಂದು ಸಮೀಕ್ಷೆಯ ಪ್ರಕಾರ ವರ್ಷದಿಂದ ವರ್ಷಕ್ಕೆ ಅಕ್ಕಿಯ ಉತ್ಪಾದನೆ ಕಡಿಮೆಯಾಗುತ್ತಿದೆ. ಹೀಗೆ ಮುಂದುವರಿದರೆ 2050 ರ ವೇಳೆಗೆ ಆಹಾರದ ಸಮಸ್ಯೆ ಎದುರಾಗಲಿದೆ.ಇದಕ್ಕಾಗಿ ಈಗಲೇ ಕ್ರಮ ಕೈಗೊಳ್ಳದಿದ್ದಲ್ಲಿ ಭಾರೀ ಸಮಸ್ಯೆ ಎದುರಿಸಬೇಕಾದೀತು ಎಂದು ವರದಿ ಹೇಳಿದೆ. ಅದು ಬಿಡಿ ಈ ಬಾರಿ ಪ್ರಕೃತಿ ಮುನಿದ ಪರಿಣಾಮವಾಗಿ ಬಿಹಾರ, ಉತ್ತರಪ್ರದೇಶ , ಅಸ್ಸಾಂ, ಸೇರಿದಂತೆ ರಾಜ್ಯದ ವಿವಿದೆಡೆ ಭತ್ತದ ಉತ್ಪಾದನೆ ಶೇಕಡಾ 15 ರಷ್ಟು ಕುಸಿಯುವ ಸಾಧ್ಯತೆ ಇದೆ. ಹೀಗಾಗಿ ಈ ೧೧೦ ಕೋಟಿ ಜನರ ಹೊಟ್ಟೆ ತುಂಬಿಸುವ ಚಿಂತೆ ಎದುರಾಗಲಿದೆ.

ಇದೆಲ್ಲದರ ನಡುವೆಯೇ ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಉಪನ್ಯಾಸ ನೀಡುತ್ತಿದ್ದವರೊಬ್ಬರು ಹೇಳುತ್ತಿದ್ದರು. ನಮ್ಮ ಹಿರಿಯರು ನಮಗೆ ಗದ್ದೆಗೆ ಇಳಿಯುದಕ್ಕೆ ಕಲಿಸಲಿಲ್ಲ ಕಂಪ್ಯೂಟರ್ ಗುಂಡಿಯನ್ನು ಅದುಮಲು ಹೇಳಿಕೊಟ್ಟರು ..., ನಮ್ಮ ಹಿರಿಯರು ಮನಗೆ ಮಣ್ಣಿನ ವಾಸನೆ ತೋರಿಸಿಲ್ಲ .. ,ನಮಗೆ ನಗರದ ವಾಸನೆ ತೋರಿಸಿದರು..., ಹೀಗಾಗಿ ಇಂದು ನಗರದಲ್ಲಿ ದಿಕ್ಕು ಕಾಣದಾದರೆ ಹಳ್ಳಿಗೆ ಬರಲೂ ಆಗದೆ ಸಂದಿಗ್ದ ಪರಿಸ್ಥಿತಿಯಲ್ಲಿ ನಾವಿದ್ದೇವೆ ಎನ್ನುತ್ತಾ.. ಇಂದಿನ ಆರ್ಥಿಕ ಸಂಕಷ್ಠದಲ್ಲಿ ನಗರದಲ್ಲಿ ಉದ್ಯೋಗ ಕಳೆದುಕೊಂಡರೆ ಹಳ್ಳಿಯಲ್ಲಿ ಬದುಕಲಾದ ಸ್ಥಿತಿ ಬಂದಿದೆ ಎಂದು ಅವರು ಹೇಳುತ್ತಿದ್ದಾಗ ಹಿಂದೆ ಕುಳಿತಿದ್ದ ಅಜ್ಜ ಹೌದು ಎಂದು ತಲೆದೂಗುತ್ತಿದ್ದರು. ಇನ್ನೊಬ್ಬರು ಹೇಳುತ್ತಿದ್ದರು ಕೃಷಿ ಇಂದು ಯಾಂತ್ರೀಕರಣವಾದಾಗ ಮಾತ್ರಾ ಕೃಷಿ , ರೈತ ಉಳಿದುಕೊಳ್ಳಲು ಸಾಧ್ಯ. ಆದರೆ ಇಂದು ನ್ಯಾನೋ ಕಾರು ಬರುತ್ತದೆ ಎಂದಾಗ ಭಾರೀ ಪ್ರಚಾರ ಸಿಗುತ್ತದೆ. ರೈತರೂ ಸೇರಿ ಎಲ್ಲರೂ ಕ್ಯೂನಲಿ ನಿಂತು ಕಾರಿಗೆ ಬುಕ್ ಮಾಡುತ್ತಾರೆ. ಆದರೆ ಕೃಷಿ ಉಪಕರಣವೊಂದು ಕಂಡುಹುಡುಕಿದರೆ ಅದನ್ನು ಕೇಳುವವರೇ ಇರುವುದಿಲ್ಲ. ಬುಕ್ ಮಾಡಿ ಎಂದರೆ ಜನರೇ ಬರುವುದಿಲ್ಲ ಎನ್ನುತ್ತಾರೆ.

ಇವೆರಡು ಸಂಗತಿಗಳ ನಡುವೆ ಗಿರಕಿಹೊಡೆಯುತ್ತಾ ಮುಂದೆ ಸಾಗಿದರೆ ಸರಕಾರ ಅನೇಕ ಯೋಜನೆಗಳನ್ನು ರೈತರಿಗಾಗಿ ಕೊಡುತ್ತದೆ. ಆದರೆ ಯಾವುದೂ ಆತನಿಗೆ ಸರಿಯಾಗಿ ತಲಪುವುದಿಲ್ಲ. ಆತನಿಗೆ ಯಾವಾಗಲೂ ಹೀಗೆಯೇ ಬಸ್ಸಲ್ಲಿ , ರೈಲಲ್ಲಿ ದಂಡ ಕಟ್ಟಿಯೇ ಪ್ರಯಾಣಿಸಬೇಕು.... ಸಾಲ ಮಾಡಿಯೇ ಸಾಲ ತೀರಿಸಬೇಕು... ತನಗೆ ನಷ್ಠ ಮಾಡಿಯೇ ಜನರ ಹೊಟ್ಟೆ ತುಂಬಿಸಬೇಕು..... ಆದರೂ ನೇಗಿಲಯೋಗಿಯ ನೋಡಲ್ಲಿ .. . .. . ..!

03 ಸೆಪ್ಟೆಂಬರ್ 2009

ಇದು ಪಶ್ಚಿಮದ ಸ್ವರ್ಗ . . . .




ಇಲ್ಲಿ ಬೆಟ್ಟಗಳು ಅಣಕಿಸುತ್ತವೆ , ನಾನೇರಿದೆತ್ತರಕ್ಕೆ ನೀನೇರಬಲ್ಲೆಯಾ ..? ಜಲಪಾತಗಳು ಹೇಳುತ್ತವೆ ನೀನಿಲ್ಲಿಗೆ ಬರಬಲ್ಲೆಯಾ..? ಮಂಜು ಕೇಳುತ್ತದೆ ನೀ ನನ್ನೊಂದಿಗೆ ಬರಬಲ್ಲೆಯಾ..?.ಹೀಗೆ ಇಲ್ಲಿ ಎಲ್ಲವೂ ಸವಾಲುಗಳೇ..ಪ್ರಶ್ನೆಗಳೇ ಅಂಟಿಕೊಂಡಿವೆ.. ಇಂತಹ ಸವಾಲುಗಳನ್ನು ದಾಟುತ್ತಾ ನಮ್ಮೊಳಗಿನ ಎಲ್ಲಾ ಇಗೋಗಳಿಗೆ ಉತ್ತರ ಹುಡುಕುವ ಈ ದಾರಿ ಯಾವುದಯ್ಯಾ ಅಂತ ಯೋಚಿಸುತ್ತಿದ್ದರೆ, ಅದಕ್ಕೆಲ್ಲಾ ಇಲ್ಲಿದೆ ದಾರಿ. ರೋಚಕತೆಯ ದಾರಿಯಿದು .. ಇದು ಕಾಣುವ ಸ್ವರ್ಗದ ದಾರಿ...

ಅಬ್ಬಾ ಈಗ ವನವಾಸ ಮುಗಿದಿದೆ. ಹಾಗಾಗಿ ನಾವೀಗ ವನದ ನಡುವಿನ ಸೀಳು ಹಾದಿಯಲ್ಲಿ ಗಿರಿಶಿಖರಗಳನ್ನು ಸೀಳಿಕೊಂಡು ಪ್ರವಾಸ ಮಾಡಬಹುದಾಗಿದೆ.ಅಂದರೆ ಮಂಗಳೂರಿನಿಂದ ಬೆಂಗಳೂರಿಗೆ ಹಗಲು ವೇಳೆ ಪ್ರಯಾಣಿಸಬಹುದಾಗಿದೆ.ಇಲ್ಲಿ ಗಗನವೇ ಹತ್ತಿರ ಬಂದಂತೆ . . ದೂರದ ಬೆಟ್ಟದ ತುಂಬೆಲ್ಲಾ ಮಂಜು ಮುತ್ತಿಕ್ಕಿದಂತೆ . . ಹಾಲ್ನೊರೆಯಂತೆ ಧುಮ್ಮುಕಿ ಹರಿಯುವ ಜಲಪಾತ... ಹಚ್ಚ ಹಸಿರಿನ ಸೀರೆಯನ್ನುಟ್ಟ ಆ ಪ್ರಕೃತಿ ಸೊಬಗು . . ಹೌದು ಈ ಸೊಬಗನ್ನು ವರ್ಣನೆ ಮಾಡುತ್ತಾ ಹೋದರೆ ದೂರದ ಅದೆಲ್ಲೋ ಇರುವ ಊಟಿ , ಕೊಡೈಕಾನಲ್‌ನಂತಹ ಪ್ರದೇಶದ ವರ್ಣನೆಯಂತೆ ಭಾಸವಾಗುತ್ತದೆ. ಅಲ್ಲವೇ ಅಲ್ಲ. ನಮ್ಮದೇ ಕರುನಾಡಿನ ಹೆಮ್ಮೆಯ ಪ್ರದೇಶದ ಅದ್ಭುತ ಮೈಮಾಟದ ಸಿರಿಬಾಗಿಲಿನಿಂದ ಎಡಕುಮೇರಿ - ಸಕಲೇಶಪುರದವರೆಗಿನ ಪ್ರದೇಶ. ಈ ಸುಂದರ ಸೊಬಗನ್ನು ನೋಡುವುದಕ್ಕೆ ನಮಗೆ 14 ವರ್ಷ ಬೇಕಾದುವಾ..? ಎನ್ನುವ ಪ್ರಶ್ನೆ ಮನದೊಳಗೆ ಮೂಡಿಯೇ ಮೂಡುತ್ತೆ . ಹೌದು ಈಗ ಹಗಲು ರೈಲು ಓಡಾಟ ಶುರುವಾಗಿದೆ.

ಸುಬ್ರಹ್ಮಣ್ಯದಿಂದ ಸಕಲೇಶಪುರವರೆಗಿನ ಸುಮಾರು 2 ರಿಂದ 3 ಗಂಟೆಯ ಈ ಪ್ರಯಾಣ ಅವಿಸ್ಮರಣೀಯ. ಪ್ರಕೃತಿ ಪ್ರಿಯರ ಸ್ವರ್ಗ.ಅಲ್ಲಿ ಸಾಗುತ್ತಿದ್ದಂತೆಯೇ ಉದ್ಗಾರಗಳು ಕೇಳತೊಡಗುತ್ತದೆ.. ಅದೋ . . ಅಲ್ಲಿ ಗಿರಿ ಶಿಖರಗಳಿಗೆ ಮುತ್ತಿಕ್ಕುವ ಹಿಮರಾಶಿಗಳು , ಸ್ವಲ್ಪ ಆಚೆ ನೋಡಿದರೆ ಗಗನಕ್ಕೆ ಚುಂಬಿಸ ಹೊರಟ ಹಸಿರು ಹಾಸಿದ ಶಿಖರಗಳು .. ಇಲ್ಲಿ ನೋಡಿ ಹಾಲ್ನೊರೆಯಂತೆ ಧುಮ್ಮಿಕ್ಕುವ ಜಲಪಾತ.. ಅಗೋ ಕೆಳಗಡೆ ತಿರುಗಿ ... ಭಾರೀ ಪ್ರಪಾತ... ಅಷ್ಟೇ ಅಲ್ಲ ಆಗಾಗ ಕೈಗೆ ಸಿಕ್ಕು ಮಾಯವಾಗಿವ ಬೆಳ್ಳಿ ಮೋಡಗಳು.. ಅಬ್ಬಾ ಅದೇನು ಸುರಂಗದೊಳಗೆ ನುಸುಳಿ ಹೊರಡುವ ಬೋಗಿಗಳು .... ಅಯ್ಯೋ.. ಸಮಯ ಮುಗಿದೇ ಹೋಯಿತು. ಇಲ್ಲ ಸಾಲದು.. ಇನ್ನೂ ಈ ರೈಲು ಇಲ್ಲೇ ಸಾಗಲಿ ಎಂದು ಭಾವಿಸುವಷ್ಟರಲ್ಲೇ ಅದು ಸಕಲೇಶಪುರ ತಲಪಿ ಬಿಡುತ್ತದೆ. ಈ ಅನುಭವನ್ನು ಪ್ರಯಾಣಿಕರು ಹೇಳುವುದು ಹೀಗೆ .

ಹಲವು ವರ್ಷದ ಹೋರಾಟದ ಬಳಿಕ ಮತ್ತೆ ಹಗಲು ರೈಲು ಓಡಾಟ ಕಂಡಿದೆ. ಈಗ ಪ್ರಕೃತಿ ಪ್ರಿಯರಿಗೆ ಸಂತಸದ ಹೊನಲೇ ಹರಿದಿದೆ. ಮಂಗಳೂರಿನ ಅಡಿಕೆ . ಗದ್ದೆಗಳ ಸಂದಿನಿಂದ ಹೊರಡುವ ಈ ರೈಲು ಹಾಗೆಯೇ ಸಾಗುತ್ತಾ ಸುಬ್ರಹ್ಮಣ್ಯ , ಧರ್ಮಸ್ಥಳಕ್ಕೆ ಬಂದ ಭಕ್ತಾದಿಗಳನ್ನು ಹೊತ್ತೊಯ್ಯುತ್ತಾ ಸಾಗಿ ಸಿರಿಬಾಗಿಲು, ಎಡಕುಮೇರಿಯತ್ತ ಸಾಗುವಾಗ ಪ್ರಕೃತಿಯ ರಮಣೀಯತೆ ಗೋಚರಿಸಲು ತೊಡಗುತ್ತದೆ.ಗುಪ್ತಗಾಮಿನಿಯಾಗಿ ಹರಿಯುವ ನದಿಗಳ ಭೋರ್ಗರೆತ , ಕಿವಿಕಡಚಿಕ್ಕುವ ರೈಲು ಹಾರ್ನ್‌ಗೆ ಸಾತ್ ನೀಡುವ ಜೀರುಂಡೆಗಳ ಸದ್ದು , ಹಾಗೆಯೇ ಸುರಂಗದೊಳಗೆ ಪ್ರಯಾಣಿಸುವ ವೇಳೆ ಪ್ರಯಾಣಿಕರ ಸಂತಸದ ಕಿರುಚಾಟ ಹೀಗೆ ನಿಗೂಢವಾಗಿ ಕಾನನವನ್ನು ಸೀಳುತ್ತಾ ಸಾಗುವ ರೈಲಿನ 12 ಬೋಗಿಗಳು ಎಡಕುಮೇರಿ ನಂತರ ಅಲ್ಲಿನ ಕಾಫಿ ತೋಟ , ಗದ್ದೆಗಳ ಸವಿಯನ್ನು ಉಣ ಬಡಿಸುತ್ತಾ ಸಕಲೇಶಪುರ ತಲಪುವ ವೇಳೆ 57 ಸುರಂಗಗಳು , 110 ತಿರುವುಗಳು , ಹಾಗೂ 241 ಸೇತುವೆಗಳನ್ನು ದಾಟಿ ಬಂದಿರುತ್ತದೆ. ಈ ಅನುಭವವನ್ನು ಪ್ರತಿಯೊಬ್ಬ ಕನ್ನಡಿಗನೂ ಅನುಭವಿಸಲೇ ಬೇಕು.





ಹಾಗೆ ನೋಡಿದರೆ ಮಂಗಳೂರಿಗೆ ಮೊದಲು 1907 ರ ಸುಮಾರಿಗೆ 6 ಬೋಗಿಗಳ ಉಗಿಬಂಡಿ ಆರಂಭವಾಗಿತ್ತು. ಮಂಗಳೂರು - ಬೆಂಗಳೂರು ರೈಲನ್ನು ಗಮನಿಸಿದರೆ 1962 ರಲ್ಲಿ ಮೀಟರ್ ಗೇಜ್ ಕಾರ್ಯ ಆರಂಭಗೊಂಡು ,1979 ರಲ್ಲಿ ಮಂಗಳೂರು- ಬೆಂಗಳೂರು ನಡುವೆ ಮೀಟರ್‌ಗೇಜ್ ರೈಲು ಸಂಚಾರ ಆರಂಭವಾಗಿ 1996 ರಿಂದ ಗೇಜ್ ಪರಿವರ್ತನೆಯ ಕಾರಣಕ್ಕಾಗಿ ಬಂದ್ ಆಗಿದ್ದ ರೈಲು ಹಗಲು ರೈಲು ನಂತರ 2003 ರಲ್ಲಿ ಬ್ರಾಡ್ ಗೇಜ್ ಕಾರ್ಯ ಮುಗಿದಿದ್ದರೂ ಬೆಂಗಳೂರಿಗೆ ರೈಲು ಸಂಚಾರ ಆರಂಭವಾಗಿರಲಿಲ್ಲ. ಆದರೆ 2007 ರಲ್ಲಿ ರಾತ್ರಿ ವೇಳೆ ರೈಲು ಆರಂಭಗೊಂಡಿದ್ದರೂ ಹಗಲು ರೈಲಿನ ಬೇಡಿಕೆ ಹಾಗೆಯೇ ಉಳಿದುಕೊಂಡಿತ್ತು. ಈಗ ವನವಾಸ ಮುಗಿದಿದೆ.ಕನಸೂ ಈಡೇರಿದೆ. ಆದರೆ ಸದ್ಯ ವಾರಕ್ಕೆ 3 ದಿನ ಮಾತ್ರಾ. ಅದಲ್ಲ ವಾರದ ಎಲ್ಲಾ ದಿನ ಓಡಾಡ ಬೇಕು, ಕರ್ನಾಟಕದ ಹೆಮ್ಮೆಯ ಈ ಸುಂದರ ಪ್ರಕೃತಿಯ ಸೊಬಗು ಎಲ್ಲರಿಗೂ ಕಾಣಸಿಗಲು ಪ್ರತೀ ದಿನ ಓಡಾಡಬೇಕು ಎಂಬದು ಎಲ್ಲರ ಬೇಡಿಕೆಯಾಗಿದೆ.


ಇಲ್ಲಿನ ರೈಲು ಯಾನವು ಉಳಿದ ಎಲ್ಲಾ ರೈಲು ಯಾನಕ್ಕಿಂತ ಭಿನ್ನ. ಏಕೆಂದರೆ ಪ್ರಕೃತಿಯ ರುದ್ರತೆಯನ್ನು ಪ್ರದರ್ಶಿಸುತ್ತಾ ಸುಮಾರು 1.5 ಕಿ ಮೀ ದೂರದ ಸುರಂಗದ ಒಳಹೊಕ್ಕು ಹೊರಬರುತ್ತದೆ. ಅತ್ಯಂತ ಕಡಿದಾದ ಬಂಡೆಗಳನ್ನು ಸೀಳಿಹೋಗಿರುವ ಇಲ್ಲಿನ ರೈಲು ಹಳಿ ನಿರ್ಮಾಣ ಕಾರ್ಯವೇ ಎಲ್ಲರಿಗೆ ಅಚ್ಚರಿಗೆ ತರುವಂತಾಗುತ್ತದೆ. ಇಂತಹ ಗಿರಿಶಿಖರದ ಮಧ್ಯೆಯೇ ರೈಲು ಓಡಾಡುತ್ತಿದೆ. ಈ ಘಾಟಿ ಪ್ರದೇಶದಲ್ಲಿ ರೈಲು ಸುಮಾರು 15 ರಿಂದ 20 ಕಿಲೋಮೀಟರ್ ವೇಗದಲ್ಲಷ್ಟೇ ಸಾಗುತ್ತದೆ, ಮಾತ್ರರವಲ್ಲ ಅಲ್ಲಿಲ್ಲಿ ನಿಲ್ಲಿಸುತ್ತಾ ಭದ್ರತೆಯನ್ನು ಪರಿಶೀಲಿಸುತ್ತಾ ಸಾಗುತ್ತದೆ. ಹೀಗಾಗಿ ಇಲ್ಲಿನ ರೋಚಕತೆ ಎಲ್ಲರಿಗೂ ಖುಷಿಕೊಡುತ್ತದೆ.


ಒಟ್ಟಿನಲ್ಲಿ ಕವಿ ಅಂದು ಹೇಳಿದ್ದರು ಜೀವನದಲ್ಲಿ ಒಮ್ಮೆಯಾದರೂ ಜೋಗದ ಗುಂಡಿಯನ್ನು ನೋಡಬೇಕು ಎಂದು. ಇದನ್ನೇ ಕೊಂಚ ಬದಲಾಯಿಸಿ ಜೀವನದಲ್ಲಿ ಒಮ್ಮೆಯಾದರೂ ಕನಾಟಕದ ಈ ಸೊಬಗನ್ನು ನೋಡಲೇಬೇಕು. ರೈಲು ಕೂಡಾ ಅದನ್ನೇ ಹೇಳುತ್ತಾ ಸಾಗಿದರೆ ಬೆಟ್ಟಗಳು ನಾನೇರಿದೆತ್ತರಕ್ಕೆ ನೀನೇರಬಲ್ಲೇಯಾ ಎಂದು ಮತ್ತೂ ಅಣಕಿಸುತ್ತಲೇ ಇರುತ್ತವೆ. ಇಂತಹ ಸವಾಲುಗಳಿಗೆ ಉತ್ತರ ಹುಡುಕ ಹೊರಟ ತಂತ್ರಜ್ಞರಿಗೆ ಹ್ಯಾಟ್ಸ್ ಆಫ್ ಹೇಳಲೇಬೇಕು. ಅದಕ್ಕೂ ಮುನ್ನ ನೀವೂ ಒಮ್ಮೆ ಈ ರೈಲ್ಲಿ ಹೋಗಿ ಬನ್ನಿ ಹಸಿರಿನ ಗಿರಿಗಳ ಮಾಲೆಯನ್ನು ತೊಟ್ಟಿರುವ ಪ್ರಕೃತಿಯನ್ನೊಮ್ಮೆ ನೋಡಿ ಬನ್ನಿ.....

29 ಆಗಸ್ಟ್ 2009

ಒಂದು ಘಟನೆಯ ಹಿಂದೆ. . . .

ನಿಜಕ್ಕೂ ಈ ಘಟನೆ ನನ್ನನ್ನು ಒಂದು ಕ್ಷಣ ವಿಚಲಿತನಾಗುವಂತೆ ಮಾಡಿತ್ತು.ಮತ್ತು ಹತ್ತಾರು ಅನುಭವಕ್ಕೆ ಕಾರಣವಾಯಿತು. ಅಷ್ಟಕ್ಕೂ ಈ ಘಟನೆ ಒಂದರ್ಥದಲ್ಲಿ ಕ್ಷುಲ್ಲಕ. ಆದರೆ ಅಲ್ಲಿಯ ವರ್ತನೆ ಮಾತ್ರಾ ಹಾಗೆ ಹೇಳಲು ಸಾಧ್ಯವರಲಿಲ್ಲ. ಯಾಕೆಂದರೆ ಆತ ಒಬ್ಬ ಸೆಕ್ಯುರಿಟಿ ಗಾರ್ಡ್. ಆತನ ಕೆಲಸ ನಿಜಕ್ಕೂ ಸೆಕ್ಯರಿಟಿಯೇ. ಆದರೆ ಎಲ್ಲಿ ಎಚ್ಚರ ವಹಿಸಬೇಕಾಗಿತ್ತೋ ಅಲ್ಲಿ ವಹಿಸಿಲ್ಲ.ಮತ್ತ ಹೇಗೆ ಆತ ನಡೆದುಕೊಳ್ಳಬೇಕಿತ್ತೋ ಹಾಗೆ ಆತ ನಡೆದುಕೊಳ್ಳಲಿಲ್ಲ.

ಇಂದು ನಮ್ಮ ರಾಜ್ಯದ ಅತ್ಯಂತ ಶ್ರೀಮಂತ ಹಾಗೂ ಪ್ರಸಿದ್ದ ದೇವಸ್ಥಾನವಾದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಿಶೇಷವಾದ ಪೂಜಾ ಕಾರ್ಯಕ್ರಮವಿತ್ತು.ಬಹುಶ: ಇಂತಹ ಕಾರ್ಯಕ್ರಮ ಇತರ ಯಾವ ದೇವಸ್ಥಾನದಲ್ಲೂ ನಡೆಯುವುದಿಲ್ಲ.ಹಾಗಾಗಿ ಈ ಬಗ್ಗೆ ಸಾರ್ವಜನಿಕರ ಮಾಹಿತಿ ಮತ್ತು ಅವರ ಕರೆಯ ಮೇರೆಗೆ ಆಸಕ್ತಿಯಿಂದ ವಿಶೇಷವಾದ ವರದಿಯನ್ನು ತಯಾರಿಸುದಕ್ಕಾಗಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬೆಳಗ್ಗೆ 7.30 ರ ಸುಮಾರಿಗೆ ಹೋಗಿದ್ದೆ ಅವಾಗಿನಿಂದಲೇ ದೇವಸ್ಥಾನದ ಹೊರ ಆವರಣದಲ್ಲಿ ಅಗತ್ಯ ಚಿತ್ರಗಳ್ನು ದಾಖಲಿಸುತ್ತಲಿದ್ದೆ.ಹಾಗೇ ಸುಮಾರು 9.30 - 10 ರ ಸುಮಾರಿಗೆ ಅಲ್ಲೇ ಹೊರ ಆವರಣಕ್ಕೆ ಬಂದಂತಹ ಒಬ್ಬ ಸೆಕ್ಯುರಿಟಿ ಗಾರ್ಡ್ ಪ್ರಶ್ನಿಸಿದ್ದೇ ಹೀಗೆ ... ನೀವ್ಯಾರು...? ನೀವ್ಯಾಕೆ ... ಫೋಟೋ ತೆಗೀತೀರಿ...?? ನಿಮ್ಗೆ ಪರ್ಮಿಶನ್ ಕೊಟ್ಟೋರ್‍ಯಾರು...?? ಹಾಗೆಲ್ಲ ಇಲ್ಲಿ ಆಗಲ್ಲ... ಎಂದು ಹೇಳುತ್ತಾ ದರ್ಪದಿಂದ ಬಂದ ... ನಾನು ಎಲ್ಲದಕ್ಕೂ ಒಂದೇ ಉತ್ತರ ಕೊಟ್ಟೆ ನಾನು ಪರ್ಮೀಶನ್ ತೆಗೆದೇ ಚಿತ್ರೀಕರಣ ಮಾಡುತ್ತಿದ್ದೇನೆ... ಅಷ್ಟಕ್ಕೂ 15 ವರ್ಷಗಳಿಂದ ಕುಕ್ಕೆಗೆ ಆಗಮಿಸುತ್ತಿದ್ದೇನೆ.. ದೇವಳದ ಹೊರಾಂಗಣದಲ್ಲಿ ಯಾರು ಬೇಕಾದ್ರೂ ಫೋಟೋ ತೆಗೀ ಬಹುದಲ್ಲಾ ಎಂದು ಹೇಳಿದೆ ಮಾತ್ರವಲ್ಲ ಇಲ್ಲೂ ತೆಗೀಬಾರ್‍ದು ಅಂತಾದ್ರೆ ಇಲ್ಲೊಂದು ಬೋರ್ಡ್ ಹಾಕ್ಬೇಕು ಎಂದೆ... ಆತ ಅಷ್ಟರಲ್ಲಿ ನನ್ನ ಕ್ಯಾಮಾರಾ ಕಸಿದುಕೊಂಡ... ನಂತರ ನಾನು ಮಾಧ್ಯಮದ ಪ್ರತಿನಿಧಿ ಅಂತ ಆತನಿಗೂ ತಿಳೀತು ಕ್ಯಾಮಾರ ಕೊಟ್ಟ.... ಆ ಬಳಿಕ ನಾನು ಆತ ಕ್ಯಾಮಾರ ಕಸಿದುಕೊಂಡ ಬಗ್ಗೆ ಏನು ಮಾಡಬೇಕೋ ಅದನ್ನು ಮಾಡಿದೆ.

ನೋಡಿ ಆತ ಕೆಲಸ ಮಾಡುವುದು ದೇವಸ್ಥಾನದಲ್ಲಿ ಆತನೇ ಪೊಲೀಸರ ಮುಂದೆ ಒದರಿದ್ದು ಸುಳ್ಳುಗಳ ಕಂತೆ.... ಆತನ ವಿರುದ್ದ ನಾನೇ ರ್‍ಯಾಶ್ ಆದೆನಂತೆ... ಆತನ ಮೈಮೇಲೆ ಕೈಮಾಡಿದೆನಂತೆ... ನಾನು ದೇವಳದ ಒಳಾಂಗಣಕ್ಕೆ ನುಗ್ಗಲು ಯತ್ನಿಸಿದೆನಂತೆ..... ಕಳೆದ ಒಂದೂವರೆ ವರ್ಷಗಳಿಂದ ಅಲ್ಲಿ ಕೆಲಸ ಮಾಡುವ ಆತನಿಗೆ ನನ್ನ ಪರಿಚಯವೇ ಇಲ್ಲವಂತೆ... ಹೀಗೆ ಹೇಳುತ ಸಾಗಿದ... ಆದರೆ ನನ್ನ ಆತ್ಮಸಾಕ್ಷಿ ಹೇಳಿದ್ದೇನೆಂದರೆ ಇಂದು ಸತ್ಯಕ್ಕೆ ಬೆಲೆ ಇಲ್ಲದ ... ನಮ್ಮ ಮೌನಕ್ಕೆ ಬೆಲೆ ಇಲ್ಲದ ಇದನ್ನೇ ದೌರ್ಬಲ್ಯ ಎಂದು ತಿಳಿಯುವ ಈ ಸಮಾಜದಲ್ಲಿ ಇದನ್ನೆಲ್ಲಾ ಸಮರ್ಥಿಸ ಹೊರಟರೆ ಹೇಗೆ..? ನಮ್ಮ ಆಯಸ್ಸಿನ ಬಹುಪಾಲು ಇಲ್ಲೇ ಕಳೆದುಹೋಗಬಹುದು. ಅದೂ ಯಾವನೋ ಒಬ್ಬ ದೇವರ ಹಣವನ್ನು ರಕ್ಷಣೆಯ ಹೆಸರಿನಲ್ಲಿ ಹೊಟ್ಟೆಯುರೆಯಲು ಉಪಯೋಗಿಸಿಕೊಳ್ಳುತ್ತಿರುವವನ ಜೊತೆ ಕಾಲಹರಣ ಮಾಡಿದರೆ ಹೇಗೆ ಆಂತ ಅನಿಸಿತು. ಇಂತಹ ಕ್ಷೇತ್ರಕ್ಕೆ ಹೆಚ್ಚು ಪ್ರಚಾರವನ್ನು ನೀಡಿ ಇನ್ನಷ್ಟು ಜನ ಇಲ್ಲಿಗೆ ಬರುವಂತಾಗಿ ಹೊಟ್ಟೆ ಹೊರೆಯುವ ಮಂದಿ ಅಮಾಯಕ ಭಕ್ತರನು ವಂಚಿಸಿ ಅವರಿಗೂ ದರ್ಪ ತೋರಿ ತಮ್ಮ ಪೌರುಷವನ್ನು ತೋರುವಂತೆ ಮಾಡುತ್ತೇವಲ್ಲಾ ನಿಜಕ್ಕೂ ನಾವು ಮೂರ್ಖರು ಅಂತ ನನಗೆ ಅನ್ನಿಸಿದ್ದು ಸತ್ಯ. ದೇವರ ಮುಂದೆ ನಾವೆಲ್ಲಾ ಸಣ್ಣವರು ಅಂತ ಹಿರಿಯರು ಹೇಳಿದ್ದನು ನಾವು ಕೇಳಿದರೆ ಇವರಿಗೆಲ್ಲಾ ದೇವರಿಗಿಂತ ನಾವೇ ದೊಡ್ಡವರು ಎಂಬುದನ್ನು ಕಲಿಯಬೇಕಾಗಿದೆ. ಹಾಗಾಗಿ ದೇವರು ಸರ್ವಾಂತರ್ಯಾಮಿ ಅಂತಲೂ ನಮಗೆ ಹಿರಿಯರು ಹೇಳಿದ್ದಾರಲ್ಲಾ ನಿಜಕ್ಕೂ ಇಂದು ಇದುವೇ ಸತ್ಯ.ಇಂದಿಗೆ ಇದುವೇ ಉತ್ತಮ.

ಕುಕ್ಕೆಯಲ್ಲಿ ನಿಜ್ಕಕೂ ಸೆಕ್ಯರಿಟಿ ಗಾರ್ಡ್‌ಗಳು ಬೇಕಾ ಬೇಡವಾ ಅಂತ ಯೋಚಿಸುವುದು ಇಂದಿನ ಅನಿವಾರ್ಯತೆ. ನಿಜಕ್ಕೂ ಅಲ್ಲಿ ಆ ಬಗ್ಗೆ ಜನ ಮಾತನಾಡುತ್ತಿದ್ದರು, ಅಲ್ಲಿ ಅಮಾಯಕ ಭಕ್ತರನ್ನು ಗದರಿಸುವುದಕ್ಕೆ ಮಾತ್ರಾ ಈ ಸೆಕ್ಯರಿಟಿ ಗಾರ್ಡ್‌ಗಳನ್ನು ನೇಮಕ ಮಾಡಿದಂತಾಗಿದೆ... ಭದ್ರತೆ ಹೆಸರಿಗೆ ಮಾತ್ರಾ ಎಂಬ ಮಾತು ಇಲ್ಲಿ ಕೇಳುತ್ತಿತ್ತು...

ಅದಿರಲಿ ದೇವಸ್ಥಾನಗಳೆಲ್ಲವೂ ಹೀಗೆಯಾ...?? ಅಲ್ಲಿ ದೇವರ ಹೆಸರಿನಲ್ಲಿ ದೇವರಾಗುವವರೇ ಹೆಚ್ಚಾ ಅಲ್ಲ ಭೂತಗಳಾಗುವವರು ಹೆಚ್ಚಾ ಎಂಬುದೇ ಒಂದು ಪ್ರಶ್ನೆ..??. ನಿಜಕ್ಕೂ ದೇವರಿದ್ದರೆ ಇದೆಲ್ಲಾ ಆತನಿಗೆ ಏಕೆ ಗೊತ್ತಾಗುತ್ತಿಲ್ಲ. ..?

23 ಆಗಸ್ಟ್ 2009

ಗುಹೆಯೊಳಗೆ ಜಲಪಾತ .......




ಪ್ರಕೃತಿಯೊಳಗಿನ ವೈಚಿತ್ರ್ಯವನ್ನು ಬಲ್ಲವರು ಯಾರೂ ಇಲ್ಲ. ಅದರೊಳಗೆ ಏನೆಲ್ಲಾ ಹುದುಗಿರಬಹುದು ಎಂಬುದು ಕಲ್ಪನೆಗೂ ನಿಲುಕುವುದಿಲ್ಲ. ಅಂತಹ ವೈಚಿತ್ರ್ಯವೊಂದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಬಳಿಯ ಅನಂತಾಡಿಯಲ್ಲಿದೆ . ಇಲ್ಲಿನ ಗುಹೆಯೊಳಗೆ ಜಲಪಾತವೊಂದಿದೆ. ಇದನ್ನು ಪೂಜ್ಯ ಭಾವನೆಯಿಂದ ಕಾಣಲಾಗುತ್ತದೆ. ಈ ಗುಹೆಯೊಳಗೆ ಭಕ್ತರು ತೀರ್ಥ ಸ್ನಾನ ಮಾಡಿ ಪಾವನರಾಗುತ್ತಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಬಳಿ ಅನಂತಾಡಿಯ ಸನಿಹದಲ್ಲಿ ಸುಳ್ಳಮಲೆ ಎಂಬ ಪ್ರದೇಶವಿದೆ. ದಟ್ಟ ಕಾನನದ ನಡುವೆ ಇರುವ ಈ ಪ್ರದೇಶವು ಈಗ ಜನರ ಆಕರ್ಷಣೆಯ ಮತ್ತು ಪೂಜ್ಯ ಭಾವನೆಯ ಪ್ರದೇಶವಾಗಿದೆ. ಇಲ್ಲಿರುವ ಗುಹೆಯೇ ಈ ಆಕರ್ಷಣೆಗೆ ಪ್ರಮುಖ ಕಾರಣವಾಗಿದೆ. ಮನುಷ್ಯ ಯಾವಾಗಲೂ ನಂಬಿಕೆ, ವಿಶ್ವಾಸದ ಮೇಲೆಯೇ ಬದುಕುತ್ತಾನೆ.ಹಾಗಾಗಿ ಅಲ್ಲಿ ಪರಿಶುದ್ದತೆ ಇರುತ್ತದೆ.ಕೆಲವೊಮ್ಮೆ ಆ ನಂಬಿಕೆಗಳು ಹುಸಿಯಾಗುವುದೂ ಇದೆ. ಆದರೆ ಇಲ್ಲಿ ಹಾಗಾಗುವುದಿಲ್ಲ. ಅಂತಹ ನಂಬಿಕೆಗಳು ಇಲ್ಲಿ ದೊಡ್ಡದಾಗಿ ಬೆಳೆಯುತ್ತದೆ ಮತ್ತು ಬೆಳೆದಿದೆ. ಅದು ಇಲ್ಲಿ ಗುಹೆಯ ರೂಪದಲ್ಲಿ ಕಾಣಿಸುತ್ತದೆ. ಸುಳ್ಳ ಮಲೆಯ ಈ ಪ್ರದೇಶದಲ್ಲಿರುವ ಗುಹೆಯ ಒಳಗಡೆ ಕಿರು ಜಲಪಾತವೊಂದು ಧಮುಕುತ್ತದೆ. ಈ ಜಲಪಾತದಲ್ಲಿ ಸ್ನಾನ ಮಾಡಿದರೆ ಎಲ್ಲಾ ವ್ಯಾಧಿಗಳು ನಿವಾರಣೆಯಾಗಿ ಪಾವನವಾಗುತ್ತದೆ ಎಂಬ ನಂಬಿಕೆ ಇದೆ. ವರ್ಷದಲ್ಲಿ ಕೇವಲ 4 ದಿನ ಮಾತ್ರಾ ಇಲ್ಲಿ ತೀರ್ಥ ಸ್ನಾನ ಮಾಡಬಹುದಾಗಿದೆ. ಉಳಿದ ಸಮಯದಲ್ಲಿ ಇಲ್ಲಿಗೆ ಪ್ರವೇಶವಿರುವುದಿಲ್ಲ. ಶ್ರಾವಣ ಮಾಸದ ಅಮವಾಸ್ಯೆಯಿಂದ ಆರಂಭಗೊಂಡು ಗಣೇಶ ಚೌತಿಯವರೆಗೆ ಇಲ್ಲಿ ಗುಹೆಯೊಳಗಡೆ ಪ್ರವೇಶವಿರುತ್ತದೆ. ದಕ್ಷಿಣ ಭಾರತದ ಏಕೈಕ ಮತ್ತು ಅತ್ಯಂತ ಹೆಸರುವಾಸಿಯಾದ ಈ ಪ್ರದೇಶದಲ್ಲಿ ಕಾರಣಿಕ ಪುರುಷರು ವಾಸಿಸುತ್ತಿದ್ದರು ಎಂದು ನಂಬಲಾಗಿದೆ.ಅನೇಕ ಪವಾಡಗಳು ಇಲ್ಲಿ ನಡೆದಿದೆ ಎಂದೂ ಹೇಳಲಾಗುತ್ತದೆ. ಶ್ರಾವಣ ಮಾಸದ ಅಮವಾಸ್ಯೆಯಂದು ಇಲ್ಲಿ ಸ್ಥಳಿಯ ಮನೆತನದವರು ಬಂದು ಪೂಜೆ ಮಾಡುತ್ತಾರೆ. ಮಾತ್ರವಲ್ಲ ಅಂದು ಇನ್ನೊಂದು ಮನೆತನದವರು 16 ಗಂಟಿನ ಬಿದಿರಿನ ಏಣಿಯನ್ನೂ ಕೂಡಾ ತಯಾರಿಸುತ್ತಾರೆ. ಇದರ ಮೂಲಕ ಗುಹೆಯೊಳಗಡೆ ಇಳಿಬೇಕಾಗುತ್ತದೆ.ಈ ಗುಹೆಯೊಳಗಡೆ “ಗೋವಿಂದಾ...” ಎನ್ನುವ ಘೋಷಣೆಯೊಂದಿಗೆ ಇಳಿಯುತ್ತಾರೆ.

ಈ ಗುಹೆಯೊಳಗಡೆ ತೀರಾ ಕತ್ತಲು ಆವರಿಸಿರುತ್ತದೆ. ಕೃತಕವಾಗಿ ವ್ಯವಸ್ಥೆ ಮಾಡಿಕೊಂಡ ಬೆಳಕೇ ದಾರಿ ದೀಪವಾಗುತ್ತದೆ. ಗುಹೆಯುದ್ದಕ್ಕೂ ನೀರಿನ ಹನಿಗಳು ಮುತ್ತಿಕ್ಕುವ ಇಲ್ಲಿ ಬೆನ್ನು ಬಗ್ಗಿಸಿಕೊಂಡೇ ಸಾಗಬೇಕು. ಅರ್ಧ ದಾರಿಯಲ್ಲಿ 16 ಗಂಟಿನ ಬಿದಿರಿನ ಏಣಿ ಸಿಗುತ್ತದೆ ಅದರಲ್ಲಿ ಇಳಿದು ಕೆಳಗಡೆ ಇಳಿದ ಬಳಿಕ ಅತ್ಯಂತ ಕಿರು ದಾರಿಯಲ್ಲಿ ಅಂದರೆ ಒಬ್ಬ ಮಾತ್ರಾ ಹೋಗಬಹುದಾದ ಹಾದಿಯಲ್ಲಿ ಒಳಸಾಗಿದಾಗ ಅಲ್ಲಿ ಜಲಪಾತ ಬೀಳುತ್ತಿರುತ್ತದೆ. ಅದರೊಳಗಡೆ ಸ್ನಾನ ಮಾಡಿದಾಗ ಪಾವನರಾಗುತ್ತಾರೆ ಎಂಬ ನಂಬಿಕೆ ಭಕ್ತರದ್ದು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿವಿದೆಡೆ ತೀರ್ಥ ಸ್ನಾನದ ಕ್ಷೇತ್ರಗಳಿವೆ. ಆದರೆ ಈ ಪ್ರದೇಶವು ಅದೆಲ್ಲಕ್ಕ್ಕಿಂತ ಭಿನ್ನವಾಗಿದೆ ಪ್ರಕೃತಿಯ ನಡುವೆ ಇರುವ ಈ ಪ್ರದೇಶಕ್ಕೆ ದುರ್ಗಮವಾದ ಹಾದಿಯಿದೆ. ಅದೆಲ್ಲವನ್ನೂ ಕ್ರಮಿಸಿ ಮುಂದೆ ಸಾಗಿದಾಗ ಗುಹೆಯಿರುವ ಪ್ರದೇಶ ಸಿಗುತದೆ. ಇಲ್ಲಿಗೆ ಮಹಿಳೆಯರು - ಪುರುಷರೆನ್ನದೆ ಅನೇಕರು ಈ ೪ ದಿನಗಳ ಕಾಲ ಆಗಮಿಸಿ ಗುಹೆಯೊಳಗಡೆ ಸಾಗಿ ಸ್ನಾನವನ್ನು ಮಾಡುತ್ತಾರೆ. ಈ ತೀರ್ಥವು ಉತ್ತರದ ಕಾಶಿಯಿಂದ ಇಳಿದು ಬರುತ್ತದೆ ಎನ್ನುವ ನಂಬಿಕೆ ಕೂಡಾ ಇದೆ.ಗುಹೆಯ ಬಳಿಯಿರುವ ಬಿಳಿ ಬಣ್ಣದ ಹೂವುಗಳು ಕೂಡಾ ಆಕರ್ಷಕವಾಗಿ ಕಾಣುತ್ತದೆ.ಈ ಪ್ರದೇಶವು ಗುಡ್ಡ ಪ್ರದೆಶದಲ್ಲಿದೆ. ಆದರೆ ಇಲ್ಲಿ ಗುಹೆಯೊಳಗೆ ಇರುವ ಜಲಪಾತ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ. ಇಲ್ಲಿನ ಜಲಪಾತದ ನೀರು ಈ ಪ್ರದೆಶದಲ್ಲಿ ಎಲ್ಲೂ ಹರಿಯದೆ ಸುಮಾರು 3ಕಿಲೋ ಮೀಟರ್ ದೂರದಲ್ಲಿ ಮೇಲೇಳುತ್ತದೆ. ಈ ನಡುವೆ ಇಲ್ಲಿ ತೀರ್ಥ ಸ್ನಾನ ಮಾಡುವ ಭಕ್ತರು ಗೋವಿಂದಾ.. ಎನ್ನುವ ಘೋಷಣೆ ಜೋರಾಗಿ ಹಾಕಿದರೆ ನೀರು ಕೂಡಾ ಹೆಚ್ಚಾಗಿ ಬರುತ್ತದೆ ಎನ್ನುತ್ತಾರೆ ಮಾತ್ರವಲ್ಲ ಇಲ್ಲಿ ಸ್ನಾನದ ವೇಳೆ ಭಕ್ತರು ಬಿಡುವ ವೀಳ್ಯದೆಲೆ ಹಾಗೂ ಅಡಕೆಯನ್ನು ಜಲಪಾತದ ಬಳಿ ಬಿಟ್ಟು ಬರುತ್ತಾರೆ. ಈ ವಸ್ತುಗಳೂ ಸುಮಾರು 3 ಕಿಲೋ ಮೀಟರ್ ದೂರದಲ್ಲಿ ನೀರಿನಿಂದ ಮೇಲೆ ಬರುತ್ತದೆ ಎಂದು ಹೇಳುತ್ತಾರೆ ಸ್ಥಳೀಯರು. ಹೀಗೆ ತೀರ್ಥ ಸ್ನಾನ ಮಾಡಿದ ಬಳಿಕ ಇಲ್ಲಿರುವ ದೇವರ ಕಲ್ಲುಗಳಿಗೆ ಪೂಜೆಯನ್ನು , ಪ್ರಾರ್ಥನೆಯನ್ನು ಮಾಡುತ್ತಾರೆ.

ಮೊನ್ನೆ ನಾವು ಕೂಡಾ ಈ ಪ್ರದೇಶಕ್ಕೆ ಹೋಗಿದ್ದೆವು. ಅತ್ಯಂತ ಉತ್ಸಾಹದಲ್ಲಿ ಹೋಗಿದ್ದೆವು.ಅಲ್ಲಿ ತಲಪಿದ ಬಳಿಕ ಒಂದಷ್ಟು ಜನರ ತಂಡ ಆ ಗುಹೆಯೊಳಗಡೆ ಹೋಗಿ ಬಂದರ. ನಂತರ ನಮ್ಮನ್ನೂ ಅಲ್ಲಿಯ ಜನ ಒಳಹೋಗಲು ಒತ್ತಾಯಿಸಿದರ.ಹಾಗೆ ನಾವು ಸ್ವಲ್ಪ ಆತಂಕದ ನಡುವೆಯೇ... ಮುಂದಡಿ ಇಟ್ಟೆವು... ಮುಂದೆ ಸಾಗಿ... ಏಣಿ ಇಳಿದು ಕೊಂಚ ಸಾಗಿದಾಗ ಕಡಿದಾದ ದಾರಿ... ಅಲ್ಲೂ ಸಾಗಿ ಒಳಹೋಗಾದ ಜಲಪಾತ ಕಂಡಿತು... ಅದರೊಳಗೆ ಆಮ್ಲಜನಕದ ಕೊರತೆ ಆಗ ಕಾಣುತ್ತಿತ್ತು... ಆದರೂ ನಮ್ಮೊಂದಿಗೆ ಇದ್ದವರು ಮಾತ್ರಾ ಬಿಡಲಿಲ್ಲ.. ನಾವೂ ತೀರ್ಥ ಸ್ನಾನ ಮಾಡುವಂತೆ ಮಾಡಿದರು... ಹಾಗೆ ಆಮ್ಲಜನಕದ ಕೊರತೆಯ ಪರಿಣಾಮ ..ನಮ್ಮನ್ನೂ ಗೋವಿಂದಾ...ಗೋವಿಂದಾ ಎನ್ನುವಂತೆ ಮಾಡಿತು... ಬೇಗ ಬೇಗ ಗೋವಿಂದ ಹಾಕಿ ಹೊರಬಂದಾಗ ಅಬ್ಬಾ..ಗೋವಿಂದಾ ಎಂದೆನಿಸಿತು... ಅದುವರೆಗೆ ನೆನಪಾಗದ ಗೋವಿಂದರುಗಳೆಲ್ಲಾ ಆಗ ನೆನಪಾದ್ದು ನಂತರ ನಮಗೆ ನಾವೇ ಹೇಳಿಕೊಂಡು ನಗುವಂತೆ ಮಾಡಿತು. ಆದರೆ ಆ ಕಾರ್ಯಕ್ರಮ ಮಾತ್ರಾ ಖುಷಿ ನೀಡಿತ್ತು. ಹೊಸತೊಂದು ಅನುಭವ ನೀಡಿತ್ತು. ಪ್ರಕೃತಿಯ ಅಚ್ಚರಿಯನ್ನು ಕಾಣುವಂತೆ ಮಾಡಿತ್ತು,......


ಇಲ್ಲಿ ಕಾಲೆಳೆಯುವುದೇ ಸರಿಯಂತೆ...!!



ಮೊನ್ನೆ ಹಾಗೇ ಸುಮ್ಮನೆ ಯೋಚಿಸುತ್ತಿದೆ. ನಿನ್ನೆಯವರೆಗೆ ಅದಾವ ರೀತಿಯಲ್ಲಿ ಮಾತನಾಡುತ್ತಿದ್ದವ ಇಂದು ಬದಲಾಗಿದ್ದಾನೆ. ಆತ ಅದೇನೋ "ದೊಡ್ಡ " ಹುದ್ದೆಯಲಿದ್ದ. ಆದರೆ ನಾನು ಅಷ್ಟರ ಮಟ್ಟಿಗೆ ಇರಲಿಲ್ಲ ಎಂಬುದೂ ನನಗೆ ತಿಳಿದಿತ್ತು. ಒಂದಂತೂ ಸತ್ಯವಾಗಿತ್ತು. ನನ್ನ ಹುದ್ದೆ "ದೊಡ್ಡ"ದಲ್ಲದಿದ್ದರೂ ವ್ಯಾಪ್ತಿ ದೊಡ್ಡದಾಗಿತ್ತು ಹೀಗಾಗಿ ಅನೇಕ ಕೆಲಸಗಳು ಕೆಲವೊಮ್ಮೆ ಸಲೀಸಾಗಿ ಬಿಡುತ್ತಿತ್ತು. ಈ ಕಾರಣಕ್ಕಾಗಿ ಅನೇಕರು ನನ್ನ ಸಹಾಯ ಪಡೆಯುತ್ತಿದ್ದರು. ಅಲ್ಲೂ ಹಾಗೆತೇ ಆಯಿತು. ಆತ ದಿನಂಪ್ರತಿ ನನಗೆ ಫೋನಾಯಿಸುತ್ತಿದ್ದ . ಅದೇನಾಯಿತು.. ಅದು ಹೀಗೆ.. ಇದು ಹೀಗೆ ಅಂತ ವಿವಿದ ಲೋಕಾಭಿರಾಮ ಬಿಡುತ್ತಲಿದ್ದ. ಹಾಗೇ ಆತನ ಕೆಲಸವೂ ಮುಗಿಯಿತು. ಕೆಲ ಸಮಯದ ಬಳಿಕ ನನಗೂ ಆತನಿರುವಲ್ಲಿ ಕೆಲವೊಂದು ಆಗಬೇಕಿತ್ತು. ಆತ ಫೋನೇ ತೇಗೀಲಿಲ್ಲ. ಒಂದಷ್ಟು ಸಮಯದ ಬಳಿಕ ಆತ ಫೋನು ಮಾಡಿವನೇ ಹೇಳಿದ ನಾನು ಸ್ವಲ್ಪ ಬ್ಯುಸಿ...!!. ಕೆಲಸದ ಬಗ್ಗೆ ಹೇಳಿದಾಗ ಇಲ್ಲ ನನಗೆ ಅವರನ್ನು ಪರಿಚಯವೇ ಇಲ್ಲ. ಅಂದ...!! ಅದು ಬಿಡಿ ಕೆಲಸ ಆಗುತ್ತಾ ಎಂದಾಗ ಇಲ್ಲ ಆಗಲ್ಲ ಎಂದು ಹೇಳಿಯೇ ಬಿಟ್ಟ.....!! ಇಲ್ಲೂ ಒಂದು ವಿಷಯ ಇತ್ತು. ಏನೆಂದರೆ ಆತ ಅನೇಕ ಬಾರಿ ಇಲ್ಲಿ ಆತನ ಕೆಲಸಕ್ಕಾಗಿ ಓಡಾಡಿದ್ದ. ಆದರೆ ಕೆಲಸ ಆಗಿರಲಿಲ್ಲ. ಆದರೆ ನಾನು ಮಾತನಾಡಿದ ಆ ಕೆಲಸ ತಕ್ಷಣವೇ ಆಗಿತ್ತು. ಹಾಗಾಗಿ ಆತನಲ್ಲಿ ಒಳಗಿನ ಮತ್ಸರ ಹೆಚ್ಚುತ್ತಿತ್ತು ಎಂದು ಆತನ ಮಾತುಗಳೇ ಹೇಳುತ್ತಿತ್ತು. ಅದರ ಪ್ರತೀಕಾರ ನನಗೆ ಸಿಕ್ಕಿದ್ದು ಇಲ್ಲಿ.ಸರಿ ಯಾಕೆಂದರೆ ನಾವು ಯಾವ ಕೆಲಸವನ್ನೂ ಸ್ವಾರ್ಥದ ದೃಷ್ಠಿಯಿಂದ ಮಾಡಬಾರದು ಮತ್ತು ಪ್ರತಿಫಲಾಪೇಕ್ಷೆಯಿಲ್ಲದೇ ಮಾಡಬೇಕು ಎಂಬ ಮಾತನ್ನು ನಂಬಿದವರು. ಮತ್ತು ಆ ವಾಕ್ಯವನ್ನು ಆವಾಗ‌ಆವಾಗ ನೆನಪಿಸಿಕೊಳ್ಳುತ್ತಲೇ ಇರುವವರು. ಮತ್ತು ಓದುತ್ತಲೂ ಇರುವವರು. ಹಾಗಾಗಿ ತಲೆಕೆಡಿಸಿಕೊಂಡಿಲ್ಲ. ಮತ್ತು ಬೇರೆ ದಾರಿ ಹಿಡಿಯುವುದು ಅನಿವಾರ್ಯವೂ ಆಗಿತ್ತು. ಕೆಲಸವೂ ಆಗಿತ್ತು. ಅದಲ್ಲ ನಾನು ಯೋಚಿಸುತ್ತ ಸಾಗಿದ್ದು ಮತ್ತು ಈ ಸಮಾಜದ ಅನೇಕ ಸಂಗತಿಗಳನ್ನು ನೋಡಿದಾಗ ಮತ್ತು ಪುಸ್ತಕ ಓದಿದಾಗ ತಿಳಿಯುವುದು ಏನೆಂದರೆ ಏಕೆ ಮನುಷ್ಯ ಹೀಗೆ.. ಮತ್ಸರದಲ್ಲೇ ಮತ್ತು ಕಾಲೆಳೆಯುವದರಲ್ಲೇ ಕಾಲ ಕಳೆಯುವುದೇತಕ್ಕೆ...???

ಇದು ನನ್ನ ಒಬ್ಬನ ಮಾತಲ್ಲ.ಇತ್ತೀಚೆಗೆ ಪತ್ರಿಕೆಯೊಂದರ ಸಂಪಾದಕೀಯದಲ್ಲಿ ಮಿತ್ರರೊಬ್ಬರು ಈ ಮಾತನ್ನು ಉಲ್ಲೇಖಿಸಿದ್ದರು. ಮನುಷ್ಯನ ಗುಣ ಹುಟ್ಟಿನಿಂದಲೇ ಬರುತ್ತದೆ. ಮೊನ್ನೆ ಬಬ್ರು ಹೇಳುತ್ತಲಿದ್ದರು. ಮಗು ಬೆಳೆಯುತ್ತಾ ಅದಕ್ಕೆ ಜೇಬು ಇರುವ ಅಂಗಿ ಹಾಕುತ್ತಲೇ ಅದಕ್ಕೆ ಮತ್ಸರಗಳು ಆರಂಭಗೊಳ್ಳುತ್ತದೆ. ಆ ಜೇಬಿನಲ್ಲಿ ಏನೆಲ್ಲ ಆ ಹಾಕಿಕೊಳ್ಳಬಹುದು ಮತ್ತು ಇನ್ನೊಂದು ಮಗು ಏನನ್ನೆಲ್ಲಾ ಹಾಕಿಕೊಳ್ಳುತ್ತದೆ ಎನ್ನುವುದನ್ನು ಅದು ನೋಡುತ್ತಲೇ ಇರುತ್ತದೆ. ಮತ್ತು ಅದಕ್ಕಿಂತ ಹೆಚ್ಚಿನದನು ಆ ಜೇಬಲ್ಲಿ ಹಾಕಿಕೊಳ್ಳುವುದಕ್ಕೆ ಪ್ರಯತ್ನಿಸುತ್ತದೆ. ಹಾಗಾಗಿ ಆ ಜೇಬಿನ ಬದಲಾವಣೆಗೆ ಸಾಧ್ಯವಿಲ್ಲ. ಏಕೆಂದರೆ ಜೂಬು ಬೇಕಲ್ಲ... ಅದು ತಿಳಿದಿದ್ದರೂ ಇಲ್ಲಿ ದಾಖಲಿಸುವುದು ನನ್ನ ಸಮಾಧಾನಕ್ಕಾಗಿ ಮಾತ್ರವೇ..

ನಾವು ಮಾಡುವ ಎಲ್ಲಾ ಹೆಲ್ಪ್‌ಗಳು ಮತ್ತೆ ಸಿಗುತ್ತವೆ ಎಂದಲ್ಲ. ಅದು ಮಿತ್ರತ್ವದ ಕಾರಣಕ್ಕಾಗಿ ಮತ್ತು ಸಂಬಂಧವನ್ನು ಗಟ್ಟಿಗೊಳಿಸುವುದಕ್ಕಾಗಿ. ಆದರೆ ಇಂದು ಅದೇನೋ ದೊಡ್ಡ ಹುದ್ದೆ ಸಿಕ್ಕ ತಕ್ಷಣ ತನಗೆ ಎಲ್ಲವೂ ಆಯಿತು ಎನ್ನುವ ಹುಂಬತನಕ್ಕೆ ಯಾರು ಏನೂ ಹೇಳಲಾಗದು. ಮತ್ತು ಅಂತಹವರು ಕೇವಲ ಸ್ವಂತ ಲಾಭಕ್ಕಾಗಿ ನಮ್ಮನ್ನು ದುಡಿಸಿಕೊಳ್ಳುತ್ತಾರೆಯೇ ಹೊರತು ಸಂಬಂಧಗಳು ಅವರಿಗೆ ಬೇಕಾಗಿಲ್ಲ. ನಾವಾದರೂ ನಮ್ಮ ಕೆಲಸ ಬಿಟ್ಟು ಆ ಮಿತ್ರತ್ವಕ್ಕಾಗಿ ಸಂಬಂದಕ್ಕಾಗಿ ಏನಾದರೂ ಮಾಡಿ ಬಿಡುತ್ತವೆ. ಆದರೆ ಅದರ ನೆನಪಾದರೂ ಇರಬೇಕಿತ್ತು ಅಂತ ನಾವು ಯೋಚಿಸುತ್ತೇವೆ. ಹಾಗೆಂದು ಆತ ನಮ್ಮ ಗುಲಾಮನಾಗಿರ ಬೇಕು ಎಂಬುದೂ ಅಲ್ಲ.

ಅದಕ್ಕಿಂಲೂ ಇನ್ನೊಂದು ನೋವಿನ ಸಂಗತಿ ಎಂದರೆ ನಮ್ಮಿಂದ ಪ್ರಯೋಜನ ಪಡೆದ ಮಂದಿಯೇ ಮತ್ತೆ ನಮ್ಮನ್ನು ಅಪಹಾಸ್ಯ ಮಾಡುವುದು.. ನಮ್ಮ ಬಗ್ಗೆ ಇನ್ನಿಲ್ಲದ ಪ್ರಚಾರ ಹಬ್ಬಿಸಿಬಿಡುವುದು ಮತ್ತು ಹಾಸ್ಯ ವಸ್ತುವಾಗಿ ಕಾಣುವುದು. ನಿಜಕ್ಕೂ ಇಂತಹವರ್‍ನ ಕಂಡಾಗ ಮೈಯಿಡೀ ಉರಿಯುತ್ತದೆ. ಇನ್ನೂ ಕೆಲವರು ಬೇರೊಬ್ಬರ ಮೂಲಕ ನಮ್ಮ ದಾರಿಗೆ ಅಡ್ಡಗಾಲು ಹಾಕುವುದು.. ಇನ್ನೊಂದರ್ಥದಲ್ಲಿ ಕಾಲೆಳೆಯುವುದು...!!
ಬೇಕಿತ್ತಾ ಮನಗೆ ವಿಷ ಸರ್ಪಗಳೆಗೆ ಹಾಲೆರೆಯುವ ಕೆಲಸ ಅಂತ ನನಗೂ ಒಂದೊಂದು ಸಾರಿ ಅನಿಸಿದ್ದಿದೆ... ಆದೆರೆ ಅವುಗಳೆಲ್ಲಾ ಮೊದಲು ಇಲಿಯಾಗಿ ಬಂದು ಹಾವಿನ ರೂಪ ಪಡೆಯುವುದೇ ಒಂದು ವಿಚಿತ್ರ. ಈ ಸಮಾಜವೇ ಹಾಗೆ. ನಮ್ಮಲ್ಲೂ ಒಂದು ಶಕ್ತಿಯಿದೆ, ನಮ್ಮ ಸಾಧನೆಯಲ್ಲೂ ಶಕ್ತಿಯಿದೆ ಎಂದು ಅರಿಯುವುದೇ ತಡ ಅಲ್ಲಿಗೆ ಜನ ಬರಲು ಆರಂಭಿಸುತ್ತಾರೆ.. ಕೊನೆಗೆ ನಮ್ಮದೇ ಕಾಲೆಳೆಯಲು ಪ್ರಯತ್ನಿಸುತ್ತಾರೆ. ಕೆಲವರು ಅದರಲ್ಲಿ ಸಫಲರಾಗುತ್ತಾರೆ. ಖುಷಿ ಪಡುತ್ತಾರೆ..ಇದಕ್ಕೆ ಉದಾಹರಣೆಗಳು ಒಂದಲ್ಲ. ನೂರಾರು ಇದೆ ಈ ಸಮಾದಲ್ಲಿ.. ಹಾಗಾಗಿ ಮೊನ್ನೆ ಒಬ್ರು ಹೇಳುತ್ತಿದ್ದರು.. ಮನುಷ್ಯರೆಂದರೆ ಉಣ್ಣಿಯ ಹಾಗೆ ..ಏಕೆ ಗೊತ್ತಾ..? ದನದ ಅಥವಾ ಒಂದು ಪ್ರಾಣಿ ಜೀವಂತವಿದ್ದಾಗ ಅದರ ದೇಹದಲ್ಲಿರುವ ರಕ್ತ ಹೀರಲು ಸಾಲು ಸಾಲಗಿ ಬರುತ್ತವೆ.. ಒಂದು ವೇಳೆ ಆ ಪ್ರಾಣಿ ಸತ್ತರೆ ಎಲ್ಲವೂ ಹಾಗೇ ಸಾಲು ಸಾಲಾಗಿ ಇಳಿದು ಹೋಗುತ್ತದೆ....!!! ಇನ್ನೊಂದು ಪ್ರಾಣಿಯ ಅರಸಿಕೊಂಡು....!! ಮನುಷ್ಯನೂ ಹಾಗಂತೆ...!!.

ಇದು ವಿಷಾದವಲ್ಲ...ಇಲ್ಲಿ ಕಾಲ್ಪನಿಕ ...ಆದರೆ ಸತ್ಯ ಘಟನೆ....!!!

15 ಆಗಸ್ಟ್ 2009

ಹಳ್ಳಿಯಿಂದ ರಾಜಧಾನಿವರೆಗೆ ಗಿಡ ಬೆಳೆಸುವ ರಾಷ್ಟ್ರೀಯ ಹಬ್ಬ. . . .




ಸ್ವಾತಂತ್ರ್ಯದ ದಿನ ಎಲ್ಲೆಡೆ ಧ್ವಜಾರೋಹಣ ... ಸಿಹಿ ಹಂಚುವುದು ..ಒಂದಷ್ಟು ಭಾಷಣ... ಕೊನೆಗೆ ಜನಗಣ ಮನ ... ವಂದನಾರ್ಪಣೆ.... ಡಿಸ್‌ಪಸ್... ಇದಿಷ್ಟು ದಿನದ ಕಾರ್ಯಕ್ರಮ.ಇಂದಲ್ಲ ಅನೇಕ ವರ್ಷಗಳಿಂದ ನಡೆದುಕೊಂಡು ಬಂದ ಸಂಗತಿ.ಅದರ ಹೊರತಾಗಿ ಏನೋ ಯಾವುದೂ ಆಗುವುದೂ ಇಲ್ಲ. ಆದರೆ ಇಲ್ಲೊಂದು ಶಾಲೆಯಿದೆ ಇದು ಮಾತ್ರಾ ಇದಕ್ಕಿಂತ ಭಿನ್ನವಾಗಿ ಯೋಚಿಸಿದೆ.ರಾಷ್ಟ್ರೀಯ ಹಬ್ಬವೆಂದರೆ ಅದು ಸಿಹಿ ಹಂಚುವುದಕ್ಕೆ ಮಾತ್ರಾ ಸೀಮಿತವಲ್ಲ. ಅದರಾಚೆಗೂ ಆಲೋಚಿಸಿದೆ ಮತ್ತು ಅನುಷ್ಠಾನಕ್ಕೆ ಕೂಡ ತಂದಿದೆ.ಸಾಮಾಜಿಕ ಕಳಕಳಿಯನ್ನು ಮೈಗೂಡಿಸಿದೆ.ರಾಷ್ಟ್ರೀಯ ಹಬ್ಬದಂದು ಇಡೀ ಊರನ್ನೇ ಸ್ವಚ್ಚಗೊಳಿಸುವ ಕೆಲಸಕ್ಕೆ ಮುಂದಾಗಿದೆ ಮಾತ್ರವಲ್ಲ ರಾಜಧಾನಿಯವರೆಗೆ ಗಿಡ ಬೆಳೆಸಬೇಕು ಎನ್ನುವ ಯೋಜನೆ ಹಾಕಿಕೊಂಡಿದೆ. ಹಾಗೆಂದ ಕೂಡಲೇ ಇದು ಖಾಸಗೀ ಶಾಲೆಯಲ್ಲ. 1 ನೇ ತರಗತಿಯಿಂದ 1o ನೇ ತರಗತಿಯವರೆಗೆ ಕ್ಲಾಸ್‌ಗಳಿರುವ ಕೊಠಡಿಗಳು ಸರಿಯಾಗಿಲ್ಲದ ಸರಕಾರಿ ಶಾಲೆ. ಈ ಶಾಲೆಯ ಹೆಸರು “ಸೂರ್ಯ”. ನಿಜಕ್ಕೂ ಇಲ್ಲಿ ಹೊಸ ಚಿಂತನೆಯ “ಸೂರ್ಯ” ಉದಯಿಸಿದ್ದಾನೆ. ಆದರೆ ಅದರ ಬೆಳಕು ಇನ್ನಷ್ಟೇ ಹರಿಯಬೇಕಿದೆ.

ಇದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಚಿಕ್ಕ ಹಳ್ಳಿ ಸೂರ್ಯ. ಊರು ಚಿಕ್ಕದಾಧರೂ ಸೂರ್ಯನಷ್ಟೇ ಪ್ರಖರವಾದ ಬೆಳಕು ಚೆಲ್ಲಬಹುದಾದ ಸಂಗತಿ ಇಲ್ಲಿದೆ.ಇಲ್ಲಿನ ಸರಕಾರಿ ಶಾಲೆಯೊಂದು ಇಡೀ ರಾಜ್ಯಕ್ಕೆ ಮಾದರಿಯಾಗುವ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದೆ. ಸೂರ್ಯದ ಈ ಸರಕಾರಿ ಶಾಲೆಯಲ್ಲಿ ರಾಷ್ಟ್ರೀಯ ಹಬ್ಬದಂದು ಶಾಲಾ ಮಕ್ಕಳು ಊರ ತುಂಬೆಲ್ಲ ತುಂಬಿಕೊಂಡಿರುವ ಕಸಗಳನ್ನು , ಪ್ಲಾಸ್ಟಿಕ್‌ಗಳನ್ನು ಹೆಕ್ಕುತ್ತಾರೆ ಮತ್ತು ಇಡೀ ಊರನ್ನು ಸ್ವಚ್ಛಗೊಳಿಸುತ್ತಾರೆ.ಮಾತ್ರವಲ್ಲ ಊರ ಜನ ಸಂಗ್ರಹಿಸಿಡುವ ಪ್ಲಾಸ್ಟಿಕ್‌ಗಳನ್ನು ವಿದ್ಯಾರ್ಥಿಗಳು ಹೆಕ್ಕಿ ತರುತ್ತಾರೆ.ಊರ ಜನ ಕೂಡಾ ಶಾಲೆಯನ್ನು ಪ್ರೀತಿಯಿಂದ ಕಾಣುತ್ತಾರೆ.ಅದಕ್ಕಾಗಿ ಶಾಲೆಯ ಎದುರೇ “ ಇದು ನಮ್ಮ ಶಾಲೆ, ನಮ್ಮೂರ ಸೂರ್ಯ ಶಾಲೆ” ಎಂದೇ ಸ್ವಾಗತಿಸಲಾಗುತ್ತದೆ. ಹಾಗಾಗಿ ಮಕ್ಕಳಿಗೂ ಊರ ಜನರಿಗೂ ನಂಟು ಬೆಳೆದಿದೆ.ಊರ ಜನ ಕೂಡಾ ಈ ಪ್ಲಾಸ್ಟಿಕ್ ಅಭಿಯಾನದಲ್ಲಿ ಸಹಕರಿಸುತ್ತಾರೆ. ಮಕ್ಕಳು ಹೀಗೆ ಊರಿನಿಂದ ತಂದ ಪ್ಲಾಸ್ಟಿಕ್‌ಗಳನ್ನು ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳ ಹೆಸರಿನಲ್ಲಿ ದಾಖಲಿಸಲಾಗುತ್ತದೆ. ಆ ಬಳಿಕ ಅತೀ ಹೆಚ್ಚು ಪ್ಲಾಸ್ಟಿಕ್ ಹೆಕ್ಕಿದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ನೀಡುವ ಮೂಲಕ ಮಕ್ಕಳ ಕೆಲಸಕ್ಕೆ ಉತ್ತೇಜನ ನೀಡಲಾಗುತ್ತದೆ.ಶಾಲಾ ಅಭಿವೃದ್ದಿ ಸಮಿತಿಯು ಹೀಗೆ ಸಂಗ್ರಹವಾದ ತ್ಯಾಜ್ಯವನ್ನು ಮಂಗಳೂರಿನ ತ್ಯಾಜ್ಯ ಘಟಕ್ಕೆ ನೀಡಿ ಮರು ಬಳಕೆಗೆ ಉಪಯೋಗಿಸಲಾಗುತ್ತದೆ. ಹೀಗಾಗಿ ಇಂದು ಸೂರ್ಯ ಎನ್ನುವ ಪುಟ್ಟ ಊರು ಸ್ವಚ್ಚವಾಗಿ ಕಂಗೊಳಿಸುತ್ತಿದೆ. ಸರಕಾರವು ನಿರ್ಮಲ ನಗರ ಯೋಜನೆ ಅನುಷ್ಠಾನಕ್ಕಾಗಿ ಕೋಟ್ಯಂತರ ರುಪಾಯಿ ವ್ಯಯಿಸಿದರೆ ಇಲ್ಲಿ ಖರ್ಚಿಲ್ಲದೆ ಹಮ್ಮಿಕೊಂಡಿರುವ ಈ ಮಹತ್ವಾಕಾಂಕ್ಷಿ ಯೋಜನೆ ಯಶಸ್ಸಿನ ಹಾದಿಯಲ್ಲಿದೆ.




ಇದೇ ಸಂದರ್ಭದಲ್ಲಿ ಇನ್ನೊಂದು ಯೋಜನೆಯನ್ನು ಇದೇ ಶಾಲೆ ಹಮ್ಮಿಕೊಂಡಿದೆ.ಇದು ಕೂಡಾ ಅದೇ ರಾಷ್ಟ್ರೀಯ ಹಬ್ಬದಂದು ಗಿಡ ನೆಡುವ ಯೋಜನೆ. ಅಂದರೆ ಕಾಟಾಚಾರಕ್ಕಾಗಿ ಇಲ್ಲಿ ಗಿಡ ನೆಡುವುದಲ್ಲ. ಪ್ರತೀ ತರಗತಿಯ ಹೆಸರಿನಲ್ಲಿ ರಸ್ತೆ ಬದಿಯಲ್ಲಿ ಗಿಡ ನೆಡುತ್ತಾರೆ. ಅಂದರೆ ಒಂದು ರಾಷ್ಟ್ರೀಯ ಹಬ್ಬಕ್ಕೆ ೧೦ ಗಿಡ ನೆಡುತ್ತಾರೆ.ವರ್ಷದಲ್ಲಿ ಕನಿಷ್ಠ ೪ ಹಬ್ಬಗಳನ್ನು ಆಚರಿಸುತ್ತಾರೆ. ಹೀಗೆ ನೆಡುವ ಗಿಡ ರಾಜಧಾನಿಯವರೆಗೂ ತಲುಪಬೇಕು ಎನ್ನುವುದು ಈ ಶಾಲೆಯ ಸಂಕಲ್ಪ. ಅಂದರೆ ಇವರ ಯೋಜನೆಗೆ ಉಳಿದ ಶಾಲೆಗಳು, ಅರಣ್ಯ ಇಲಾಖೆ ಮತ್ತು ಸಾರ್ವಜನಿಕರು ಕೈಜೋಡಿಸಬೇಕು ಎನ್ನುವುದು ಶಾಲಾಭಿವೃದ್ದಿ ಸಮಿತಿಯ ಆಶಯ. ಹೀಗೆ ನೆಡುವ ಗಿಡವನ್ನು ಶಾಲಾ ಮಕ್ಕಳೇ ಆರೈಕೆ ಮಾಡುತ್ತಾರೆ. ಹಾಗೆಂದು ಇಲ್ಲಿ ಉಪಯೋಗಕ್ಕೆ ಬಾರದ ಗಿಡ ನೆಡಲಾಗುವುದಿಲ್ಲ. ಯಾವುದಾದರೂ ಹಣ್ಣಿನ ಗಿಡವನ್ನು ನೆಡಲಾಗುತ್ತದೆ. ಇದರಿಂದ ಮಕ್ಕಳಿಗೂ ಮುಂದೆ ಬಾಯಿ ಸಿಹಿ ಮಾಡಬಹುದಾಗಿದೆ ಎನ್ನವುದು ಯೋಜನೆಯ ಉದ್ದೇಶ.




ಇಲ್ಲಿ ಶಾಲಾ ಪಾಠದೊಂದಿಗೆ ಬಿಡುವಿನ ವೇಳೆಯಲ್ಲಿ ಪಾಠೇತರ ಚಟುವಟಿಕೆ , ಪರಿಸರದ ಬಗ್ಗೆಯೂ ಮಕ್ಕಳಿಗೆ ಹೇಳಲಾಗುತ್ತದೆ. ಇನ್ನು ರಾಷ್ಟ್ರೀಯ ಹಬ್ಬದಂದು ಪರಿಸರ , ವಿಜ್ಞಾನ ಇನ್ನಿತರ ವಿಚಾರಗಳ ಬಗ್ಗೆ ಸಂವಾದ ಕಾರ್ಯಕ್ರಮವನ್ನು ಕೂಡಾ ಆಯೋಜಿಸಲಾಗುತ್ತದೆ. ಆ ಮೂಲಕ ಮಕ್ಕಳಲ್ಲಿ ಇನ್ನಷ್ಟು ಪರಿಸರ ಜಾಗೃತಿ ಮತ್ತು ಪ್ರಶ್ನೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವ ಪ್ರಯತ್ನ ಮಾಡಲಾಗುತ್ತದೆ ಎನ್ನುತ್ತಾರೆ ಶಾಲಾ ಮುಖ್ಯೋಪಾಧ್ಯಾಯ.

ಶಾಲೆಯ ಇಂತಹ ಚಟುವಟಿಕೆಯಿಂದಾಗಿ ವಿದ್ಯಾರ್ಥಿಗಳು ಈಗ ಪರಿಸರದ ಜಾಗೃತಿ ಬಗ್ಗೆ ಹಾಗೂ ಪರಿಸರ ಉಳಿಸುವ ಬಗ್ಗೆ ಹಿರಿಯರನ್ನೂ ನಾಚಿಸುವ ಹಾಗೆ ಮಾತನಾಡಬಲ್ಲರು. ಒಂದೇ ಉಸಿರಿನಲ್ಲಿ ನಮಗೆ ಇಂತಹ ಯೋಜನೆಗಳು ಬೇಕು ಎನ್ನುತ್ತಾರೆ. ಈ ಶಾಲೆಯಿಂದ ತುಂಬಾ ಕಲಿತಿದ್ದೇವೆ ಎನ್ನುತ್ತಾರೆ ಮಕ್ಕಳು.

ಒಟ್ಟಿನಲ್ಲಿ ಇಂದು ಪರಿಸರ ಜಾಗೃತಿ ಮತ್ತು ಪರಿಸರದ ಉಳಿವಿಗಾಗಿ ಎಳವೆಯಿಂದಲೇ ಜಾಗೃತಿ ಮೂಡಿಸಬೇಕಾದ ಅನಿವಾರ್ಯತೆಯಿದೆ. ಆ ನಿಟ್ಟಿನಲ್ಲಿ ಸೂರ್ಯದ ಈ ಸರಕಾರಿ ಶಾಲೆಯಲ್ಲಿ ಸ್ಥಳೀಯರ ಮುಂದಾಳುತ್ವದಲ್ಲಿ ಆಯೋಜಿಸುವ ಇಂತಹ ಕಾರ್ಯಕ್ರಮಗಳೂ ಇಡೀ ರಾಜ್ಯಕ್ಕೆ ವ್ಯಾಪಿಸಬೇಕಾದ ಅಗತ್ಯವಿದೆ. ಆ ಮೂಲಕ ರಾಷ್ಟ್ರೀಯ ಹಬ್ಬಗಳು ಸಾರ್ಥಕತೆಯನ್ನು ಪಡೆಯಬೇಕಾಗಿದೆ. ಸೂರ್ಯದಂತಹ ಶಾಲೆಯಲ್ಲಿ ಉದಯಗೊಂಡ ಇಂತಹ ಯೋಜನೆಯ ಬೆಳಕು ಇಡೀ ರಾಜ್ಯಕ್ಕೆ ವ್ಯಾಪಿಸಲು ಶಿಕ್ಷಣ ಸಚಿವರು ಹಾಗೂ ಶಿಕ್ಷಣ ಇಲಾಖೆ ಗುರುತಿಸಬೇಕಾದ ಅಗತ್ಯವೂ ಇದೆ.

03 ಆಗಸ್ಟ್ 2009

ಹರಳು ಕಲ್ಲೆಂಬ ಕುಲ ನಾಶಕ . . . .

ಮನುಷ್ಯನ ಅತಿಯಾಸೆಗೆ ಬಲಿಯಾಗದ್ದು ಯಾವುದು ಹೇಳಿ. ಹೆಣ್ಣಿನಿಂದ ಹಿಡಿದು ಮಣ್ಣಿನವರೆಗೆ ಎಲ್ಲವೂ ಅದರೊಳಗೆ ಬೀಳುತ್ತದೆ.ಇಲ್ಲೊಂದು ಅಂತಹುದೇ ಘಟನೆ ಇದೆ. ನೂರಾರು ಎಕ್ರೆ ಪ್ರದೇಶದ ಅರಣ್ಯ ಬರಿದಾಗುವ ಎಲ್ಲಾ ಸೂಚನೆಗಳು ಇವೆ. ಆದರೂ ಕೂಡಾ ಇಲಾಖೆ , ಸರಕಾರ ಕಣ್ಣು ಮುಚ್ಚಿ ಕುಳಿತಿದೆ ಎಂದರೆ ಇದರ ಅರ್ಥ ಎಲ್ಲರಿಗೂ ಆಗೇ ಆಗುತ್ತದೆ. ಅಲ್ಲಿ ಮಾಮೂಲು ನಡೆಯುತ್ತೆ ಅಂತ. ಆಧರೂ ನಾವು ನಿಸ್ಸಾಹಕರು ಎಂದರೆ ಏನಿದರ ಅರ್ಥ...???

ಅದು ಸುಳ್ಯ ತಾಲೂಕಿನ ಗಡಿಭಾಗ. ಕೊಲ್ಲಮೊಗ್ರ ಪ್ರದೇಶ. ಇಲ್ಲಿ ಬೆಲೆಬಾಳುವ ಹರಳು ಇದೆ ಎನ್ನುವ ಸಂಗತಿ ಇಂದು ನಿನ್ನೆಯಲ್ಲ ಸರಿಸುಮಾರು 20 ವರ್ಷಗಳಿಂದ ಪ್ರಚಲಿತದಲ್ಲಿದೆ. ಆ ಹರಳು ಕಲ್ಲಿಗೆ ಬೆಲೆಯೂ ಇದೆ ಅಂತ ಊರ ಮಂದಿಯೆಲ್ಲಾ ಹೇಳುತ್ತಾರೆ. ಹಾಗಾಗಿ ಅದರ ಉತ್ಖನನಕ್ಕೂ ತಂಡೋಪ ತಂಡವಾಗಿ ಜನ ಹೋಗುತ್ತಾರೆ. ಎಲ್ಲಿಗೆ ಹೋಗುತ್ತಾರೆ..? ಅದೇ ಮೀಸಲು ಅರಣ್ಯಕ್ಕೆ. ಅಲ್ಲಿನ ಒಂದು ಹುಲ್ಲು ಕಡ್ಡಿ ಅಲುಗಾಡುವುದಕ್ಕೂ ಅರಣ್ಯು ಇಲಾಖೆಯ ಪರ್ಮೀಶನ್ ಬೇಕು ಎನ್ನುವಾಗ ಇಲಿನ ಜನ ಅದ್ಹೇಗೆ ಅದರೊಳಗೆ ಗಂಟೆ ಗಟ್ಟಲೆ ಅಲ್ಲಿ ಹರಳು ಕಲ್ಲಿಗಾಗಿ ಅಗೆಯುತ್ತಾರೆ.? ಅದರಲ್ಲೇ ಇರುವುದು ಕುತೂಹಲ. ನನಗೆ ಆ ಪ್ರದೇಶಕ್ಕೆ ಹೋದಾಗ ಅಲ್ಲಿನ ಗಾಳೀ ಸುದ್ದಿಯ ಮೂಲಕ ತಿಳಿದ ವಿಷಯವೆಂದರೆ ಈ ಹರಳು ಕಲ್ಲಿನ ಪ್ರಮುಖ ದಂಧೆಕೋರರು ಇಲಾಖೆಗೆ ಮತ್ತು ಅಧಿಕಾರಿ ವರ್ಗಕ್ಕೆ 17 ಲಕ್ಷ ರುಪಾಯಿಯನ್ನು ನೀಡಿದ್ದರಂತೆ. ಹಾಗಗಿ ಅಧಿಕಾರಿಗಳು ಕಣ್ಣು ಈಗ ಕುರುಡಾಗಿದೆ ಅಂತ ಸುದ್ದಿಯ ಮೇಲೆ ಸುದ್ದಿ ಬರುತ್ತಿತ್ತು. ವಿಷಯದ ಒಳಹೊಕ್ಕಾಗ ಆ ಗಾಳಿ ಸುದ್ದಿಗೆ ಜೀವ ಬಂದದ್ದಂತೂ ಸತ್ಯ. ಹೀಗೆ ಹರಳು ಕಲ್ಲು ದಂದೆ ನಡೆಯುತ್ತಿರುವುದು ಸರಿ ಸುಮಾರು 20 ವರ್ಷಗಳಾಗಬಹುದು. ಆದರೂ ಇದುವರೆಗಿನ ಸರಕಾರ ಯಾವುದೇ ರೀತಿಯಲ್ಲಿ ಅದನ್ನು ಉಳಿಸಿಕೊಳ್ಲುವ ಪ್ರಯತ್ನ ಮಾಡಿಲ್ಲ. ಅದಕ್ಕೂ ಕಾರಣವಿದೆ.ಸರಕಾರದ ಪ್ರಕಾರ ಅದು ಬೆಲೆಬಾಳುವ ಕಲ್ಲು ಅಲ್ಲವಂತೆ. ಹಾಗಾಗಿ ಈ ಪ್ರದೇಶದತ್ತ ಗಮನ ಹರಿಸಿಲಲ್ಲ. ದುರಂತವೆಂದರೆ ಈಗ ಇಲ್ಲಿ ಕಲ್ಲು ಅಗೆಯುವ ಜನಕ್ಕೆ ಪ್ರತೀ ಕೆಜಿಗೆ 2 ರಿಂದ 3 ಸಾವಿರ ಸಿಗುತ್ತಂತೆ. ಅದರಾಚೆಗೆ ಈ ಕಲ್ಲು ತಲುಪಿದರೆ 15 ಸಾವಿರದವರೆಗೆ ಸಿಗುತ್ತಂತೆ.

ಈಗಾಗಲೇ ಕಲ್ಲು ಅಗೆತದಿಂದ ನೂರಾರು ಎಕ್ರೆ ಅರಣ್ಯ ಪ್ರದೇಶಕ್ಕೆ ಹಾನಿಯಾಗಿದೆ.ಕಾಡಿನ ನಡುವೆ ಅಲ್ಲಲ್ಲಿ ಹೊಂಡಗಳು ಇದೆ.ಆ ಹೊಂಡಗಳು ಮಳೆಗಾಲದಲ್ಲಿ ಕುಸಿತಗೊಂಡು ಮರಗಳೂ ನಾಶವಾಗುತ್ತದೆ.ಇದು ಹೀಗೆ ಇನ್ನು ಒಂದು ೫ ವರ್ಷ ನಡೆದರೆ ಇಡೀ ಕಾಡು ನಾಶವಾದರೆ ಅಚ್ಚರಿಯಿಲ್ಲ. ಆದರೂ ನಮ್ಮ ಸರಕಾರಗಳು ಇತ್ತ ಗಮನಹರಿಸಿಲ್ಲ ಎನ್ನುವುದೇ ದುರಂತದ ಸಂಗತಿಯಾಗಿದೆ.

ಇಲ್ಲಿನ ಪತ್ರಿಕೆಗಳು ಅದೆಷ್ಟೋ ಬಾರಿ ಈ ಕರ್ಮಕಾಂಡಗಳ ಬಗ್ಗೆ ವರದಿ ಪ್ರಕಟಿಸಿದೆ. ಆದರೂ ಕೂಡಾ ಎಲುಬಿಲ್ಲದೆ ಇಲಾಖೆಗಳು ಒಂದೇ ಒಂದು ಬಾರಿ ಕೂಡಾ ಈ ದಂಧೆಯನ್ನು ನಿಲ್ಲಿಸಲು ಪ್ರಯತ್ನ ಪಟ್ಟಿಲ್ಲ. ಇನ್ನೂ ಒಂದು ಅಂಶವೆಂದರೆ ಇಲ್ಲಿರುವ ಅಧಿಕಾರಿಗಳೆಲ್ಲರೂ ನಿವೃತ್ತಿ ಅಂಚಿನಲ್ಲಿರುವವರು. ಸರಿಯಾದ , ದಕ್ಷ ಅಧಿಕಾರಿಯೂ ಇಲ್ಲಿಗೆ ವರ್ಗ ಮಾಡದೇ ಇರುವುದು ಕೂಡಾ ಇಲಾಖೆಯ ಇನ್ನೊಂದು ಗಟ್ಟಿನತ. ಆದುದರಿಂದ ಈ ಕಲ್ಲಿನ ದಂದೆ ಹೇಗೆ ತಡೆಯಲು ಸಾಧ್ಯವಾದೀತು..?.

27 ಜುಲೈ 2009

ಬಂದೇ ಬರುತಾನ ಅವ..



ಅಂದು ಸಂಜೆಯಿಂದ ಇಡೀ ಸಂಚಲನ... ಸಚಿನ್ ಬರ್ತಾರಾ.... ಸಚಿನ್ ತೆಂಡೂಲ್ಕರ್ ಬರ್ತಾರಾ..ಅಂತ ಫೋನಿನ ಮೇಲೆ ಫೋನು.. ನಂಗೂ ಅದೇ ಕೆಲ್ಸ ಅಲ್ಲಿ - ಇಲ್ಲಿ ಫೋನ್ ಮಾಡಿ ಮಾಹಿತಿ ಸಂಗ್ರಹಿಸುವುದೇ ಕೆಲಸವಾಗಿತ್ತು. ಅಂತೂ ರಾತ್ರಿ ೧೧ ರ ವರೆಗ ಅದೇ ಕೆಲಸ. ಏಕೆಂದರೆ ... ಅವರು.. ಇವರು.. ಆಗಲೇ ಸುಬ್ರಹ್ಮಣ್ಯ ತಲಪಿಯಾಗಿತ್ತು. ಆಧರೆ ಕೊನೆಯ ಮಾಹಿತಿಯೊಂದು ಸಿಕ್ಕಿತ್ತು. ಅದೆಲ್ಲಾ ಸುಳ್ಳೇ... ಸುಳ್ಳು ಅಂತ. ಆದರೂ ಒಂದು ಸಂಶಯ...

ಬೆಳಗ್ಗೆ 6 ಗಂಟೆಗೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೊರಡಬೇಕು ಅಂದು ಕೊಂಡವನಿಗೆ ಎಚ್ಚರವಾದ್ದೇ 6 ಗಂಟೆಗೆ. ಏಕೆಂದರೆ ಮುಂಜಾನೆ 4 ಗಂಟೆಗೆ ಅದೇ ವಿಚಾರದಲ್ಲಿ ಬಂದ ಮಿತ್ರನ ಕರೆಯನ್ನು ಸ್ವೀಕರಿಸಿ ಮಲಗಿದ ಕಾರಣ ಎಚ್ಚರವಾಗುವಾಗ ತಡವಾಗಿತ್ತು. ಅಂತೂ 6.30 ಕ್ಕೆ ಕುಕ್ಕೆಗೆ ಹೊರಟು ವೇಗದಲ್ಲಿ ಸಾಗಿ 6.45 ಕ್ಕೆ ತಲಪಿಯಾಗಿತ್ತು. ಅಲ್ಲಿ ಅದಾಗಲೇ ಒಂದಷ್ಟು ಜನ ಮಿತ್ರರು ಸೇರಿದ್ದರು. ಕಾಯುತ್ತಾ ಕುಳಿತಿದ್ದರು. ಯಾರಿಗೆ ...? ಅದೇ ಸಚಿನ್‌ಗೆ..!!!. ಸರಿ ಎಲ್ಲರೂ ಅವರವರ ಕತೆ ಹೇಳುತ್ತಿದ್ದರು.. ಬೆಳಗ್ಗೆ 3 ಗಂಟೆಗೆ ಎದ್ದು ಹೊರಟವರಿದ್ದರು ಅಲ್ಲಿ...!!! . ಕಾಫಿ ತಿಂಡಿಯಾಗದವರೂ ಇದ್ದರು.. ಎಲ್ಲರೂ ದೇವಸ್ಥಾನದ ಗೋಪುರದ ಎದುರು ಕುಳಿತದ್ದೇ ಕುಳಿತದ್ದು... ಕುಕ್ಕೆಯಲ್ಲಿರುವ ಪರಿಚಯದವರೆಲ್ಲಾ ಏನು ಎಲ್ಲಾ ಇದ್ದೀರಿ ಅಂಥ ಸಣ್ಣಗೆ ಕೇಳುತ್ತಿದ್ದರು. ಹಾಗೆ 8 ಕಳೆಯಿತು... ಒಂದು ಕಾರು ಬಂದರೂ ಎಲ್ಲರ ಕ್ಯಾಮಾರ ರೆಡಿಯಾಗುತ್ತಿತ್ತು... ಎಲ್ಲರೂ ಎಲರ್ಟ್...!!. ಅಂತೂ ಗಂಟೆ 9 ಕಳೆಯಿತು... ಸುದ್ದಿಯಿಲ್ಲ.. ಸ್ಪಷ್ಟ ಮಾಹಿತಿಯೂ ಇಲ್ಲ..!! ಆದರೂ ಕುಳಿತಿತು... ಒಬ್ಬೊಬ್ಬರು ಒಂದೊಂದು ಅಭಿಪ್ರಾಯಕ್ಕೆ ಬರತೊಡಗಿದರು.. 9.15 ರ ನಂತರ ಇನ್ನು ಹೋಗೋಣ ಅಂತ ಮಾತನಾಡಲು ತೊಡಗಿದರು.. ಆಧ್ರೆ ಯಾರೂ ಕದಲುವುದಿಲ್ಲ.. ಏಕೆಂದರೆ ಎಲ್ಲಾದರೂ ಆತ ಬಂದರೆ...!!!.. ಸರಿ 9.30 ಕ್ಕೆ ದೇವಸ್ಥಾನದ ಒಳಗೆ ಹೋಗಿ ಪೂಜೆಯ ಚಿತ್ರ ತೆಗೆದು ಹೊರಬಂದು ಎಲ್ಲರೂ ಹಿಂತಿರುಗುವ ಯೋಚನೆ ಮಾಡಿದರು. ಮತ್ತೆ ಒಬ್ಬೊಬ್ಬರು ವಿಚಾರಣೆಗೆ ತೊಡಗಿದರು. ಆತ ನೇರವಾಗಿ ಮುಂಬೈಗೆ ಹೋಗ್ತಾನಂತೆ 11 ಗಂಟೆಗೆ ಫ್ಲೈಟಂತೆ.. ಹಾಗಾಗಿ ಸುಬ್ರಹ್ಮಣ್ಯಕ್ಕೆ ಬರುವುದಿಲ್ಲ ಎಂಬ ಮಾಹಿತಿ ಬಂತು.. ಎಲ್ಲರೂ ಅತ್ತಿತ್ತ ಹೋಗಿ ಮಾಯವಾದರು.

ಆದರೂ ಮತ್ತೆಮತ್ತೆ ಕರೆ ಬರುತ್ತಿತ್ತು.. ಇಲ್ಲ ಶೇ.99 ಅವರು ಬಂದೇ ಬರ್ತಾರೆ... ಮಾತ್ರಾ, ಗುಪ್ತವಾಗಿದೆ ಅಂತ..!! ಆದರೆ ಸಚಿನ್ ಅದಾಗಲೇ ಬಜ್ಪೆ ವಿಮಾನ ನಿಲ್ದಾಣದಲ್ಲಿದ್ದನ್ನು ಖಚಿತ ಪಡಿಸಿಕೊಂಡ ನಾವು ..ಸರಿ ಬಂದ್ರೆ ಹೇಳಿ ನಾವಿಲ್ಲೇ ಇದ್ದೇವೆ ಅಂತ ಹೇಳಿ ನಾವೂ ಮಾಯವಾದೆವು...

ಕೊನೆಗೂ ಸಚಿನ್ ಬರಲಿಲ್ಲ...!!.. ಇದೆಲ್ಲಾ ಗೊಂದಲ ಆದ್ದು ಯಾರಿಂದ ಸುದ್ದಿ ಮಾಡಿದ್ದು ಯಾರು.. ಎಂಬ ಕಣ್ಣ ಎದುರಿನ ಪ್ರಶ್ನೆಗೆ ಉತ್ತರ ಅಲ್ಲೇ ಇತ್ತು....!!!..

ನಮಗೆ ಮಾತ್ರಾ ಅಲ್ಲಿ ಕಾದದ್ದು ಒಂದು ಅನುಭವವಾಗಿತ್ತು..

10 ಜುಲೈ 2009

ಮಾತು...ಮುಗಿದ ಮೇಲೆ...


ಮಾತೆಲ್ಲಾ ಮುಗಿದ ಮೇಲೆ.. ಮನದೊಳಗೆ ಮೌನದ ಕೋಣೆ....

ಹೋದಲ್ಲೆಲ್ಲಾ ಮಾತು-ಕತೆ.. ಅದರಲ್ಲಿ ಹುರುಳೆಷ್ಟು..? ಪುಕ್ಕಟೆ ಎಷ್ಟು...? ಬಡಾಯಿ ಎಷ್ಟು...? ಮಾತಿಗಾಗಿ ಮಾತೆಷ್ಟು...? ಅಂತ ಒಂದು ಕ್ಷಣ ಯೋಚಿಸಿದರೆ, ಹುರುಳು ಎಷ್ಟು ಸಿಕ್ಕಾವು ಹೇಳಿ...? ಸುಮ್ಮನೆ ದಿನವಿಡೀ .. ಮಾತು.. ಮಾತು ... ಮಾತು... ಹಾಗೆ ಮಾತನಾಡುವಾಗ ನಾವು ಕೆಲವೊಮ್ಮೆ ನೇರವಾಗಿ[ ಕಣ್ಣಿಗೆ ಕೈ ಹಾಕಿದ ಹಾಗೆ] ಹೇಳಿ ಬಿಡುತ್ತೇವೆ... ಎದುರಿನಾತನಿಗೆ ಏನಾಗುತ್ತದೆ... ಅದರ ಪರಿಣಾಮ ಏನು ಎನ್ನವುದರ ಬಗ್ಗೆ ಆ ಕ್ಷಣ ಯೋಚಿಸುವುದಿಲ್ಲ ಮಾತು ಮಾತಾಗಿ ಹೋಗುತ್ತದೆ.. ಪರಿಣಾಮ ನಂತರ.... ಆದರೆ ಅದು ತಪ್ಪಾಗಿದ್ದರೂ ಮತ್ತೆ ಉಳಿಯುವುದು ಸಮರ್ಥನೆಯೊಂದೇ ದಾರಿ.. ಹೀಗಾಗಿ ಅದೆಷ್ಟೂ ಸಂಬಂಧಗಳೂ ಕಡಿದುಹೋಗಿವೆ.

ಇದ್ಯಾಕೆ ನೆನಪಾಯಿತೀಗ.. ??

ಮೊನ್ನೆ ನಾವು ಸುದ್ದಿಯೊಂದನ್ನು ಮಾಡುವುದಕ್ಕಾಗಿ 3 ಜನ ಮಿತ್ರರು ಒಂದು ಪ್ರತಿಷ್ಠಿತ ಶಾಲೆಗೆ ಹೋಗಿದ್ದೆವು. ಅಲ್ಲಿನ ಪ್ರಮುಖ ಅಧ್ಯಾಪಕರೊಬ್ಬರು 2 ವಾರದಿಂದ ದೂರವಾಣಿ ಮೂಲಕ ಹೇಳುತ್ತಲೇ ಇದ್ದರು. ಹಾಗಾಗಿ ಬಿಡುವು ಮಾಡಿ ಅಲ್ಲಿಗೆ ತೆರಳಿದ್ದಾಯಿತು. ಮೊದಲು ಹೋದವರೇ ಪ್ರಾಂಶುಪಾಲರ ಕೊಠಡಿಗೆ ಹೋಗಿ ಮಾತನಾಡಲು ಆರಂಭಿಸಿದೆವು. ಅಲ್ಲಿನ ವಿಚಾರ “ಲೋಕ”ದ ವಿಚಾರವೂ ಮಾತಿನ ನಡುವೆ ಬಂತು. ಆಗ ಅಲ್ಲಿಗೆ ನಮಗೆ ದೂರವಾಣಿ ಮೂಲಕ ಸುದ್ದಿ ಹೇಳಿದ ಅಧ್ಯಾಪಕರೂ ಬಂದರು. ನಮ್ಮ ಪರಿಚಯವನ್ನೂ ನಾವು ಹೇಳಿದೆವು. ಅವರು ಮತ್ತೆ ನನ್ನಲ್ಲಿ ಕೇಳಿದರು.... ನಿಮ್ಗೆ ಈ ವಿಷ್ಯ ಹೇಗೆ ಗೊತ್ತಯ್ತಾ ಅಂತ.. ನಾನಂದೆ ನೀವೇ 2 ವಾರದಿಂದ ಫೋನು ಮಾಡ್ತಿದ್ದೀರಲ್ಲಾ ಅಂತ.. ಆಗ ಅವರಂದ್ರು .. ನಿಮ್ಗೆ ಫೋನು ಮಾಡಿಲ್ಲ .. ನಾನು ಇವರಿಗೆ [ ನನ್ನೊಂದಿಗೆ ಬಂದ ನನ್ನ ಮಿತ್ರ] ಮಾತ್ರಾ ಫೋನು ಮಾಡಿದ್ದು ಎಂದು ಹೇಳಿದ್ರು. ಆಗ ನಂಗಂತೂ ಒಮ್ಮೆ ಶಾಕ.. ಮೌನ... ಮತ್ತೆ ಸಡನ್ ಆಗಿ ಕೇಳಿದೆ.. “ ಹಾಗಿದ್ರೆ ನಾನು ಬಂದಿದ್ದು ತಪ್ಪಾಯ್ತು ಅಂತೀರಾ” ಅಂತ ಹೇಳಿ ಬಿಟ್ಟೆ.. ಮತ್ತೆ ಒಮ್ಮೆ ಮೌನ.. ಕೂಡಲೇ ಪ್ರಾಂಶುಪಾಲರು ಹೇಳಿದ್ರು ಅಲ್ಲ ನಿಮ್ಗೆ ಹೇಗೆ ಗೊತ್ತಾಯ್ತು ಅಂತ ಕ್ಯೂರಿಯಾಸಿಟಿ ಅಂತ..... ಸರಿ ಸಂತ ನಾವು ಸುದ್ದಿಯತ್ತ ಹೋದೆವು.. ಆ ವಿಷಯ ಅಲ್ಲಿಗೇ ಬಿಟ್ಟು.. ಆದ್ರೆ ಮತ್ತೆ ಆ ಅಧ್ಯಾಪರು ಹೇಳಿದ್ರು .. ಅಲ್ಲ ನಿಮ್ಗೆ ಆಗ ನಾನು ಹಾಗೆ ಹೇಳಿದ್ದು ಬೇಸರ ಆಯ್ತಾ ಅಂತ ಕೇಳಿದ್ರು.. ಇಲ್ಲ ಇಲ್ಲ ಅಂತ ನಾನು ಆಗಲೇ ಆ ವಿಷಯ ಬಿಟ್ಟಾಯ್ತು ಅಂತ ಹೇಳಿದೆ.......

ಇದೊಂದು ಚಿಕ್ಕ ಘಟನೆ...

ಆದ್ರೆ ನಂಗೆ ಮತ್ತೆ .. ಮತ್ತೆ ಆ ವಿಷಯ ದಿನವಿಡೀ ಕಾಡುತ್ತಲೇ ಇತ್ತ... ನಾನು ಹಾಗೆ ಅಲ್ಲಿ ಹೇಳಿದ್ದು ಸರಿಯಾ .. ತಪ್ಪಾ... ನನ್ನನ್ನು ನಾನು ಸಮರ್ಥಿಸಿಕೊಳ್ಳುವುದು ಇದ್ದದ್ದೇ ... ಹಾಗಾಗಿ ಆ ಬಗ್ಗೆ 3 ನೇ ವ್ಯಕ್ತಿಯಾಗಿ ಚರ್ಚಿಸಿದೆ.. ಮಿತ್ರರೊಂದಿಗೆ ಆ ಬಗ್ಗೆ ಮಾತಾಡಿದೆ... 2 ರೀತಿಯ ಅಭಿಪ್ರಾಯ ಬಂತು.... ಆದರೂ ನನಗೆ ಸಮಾಧಾನ ತಾರದ ವಿಷಯ ಅದಾಯಿತು.

ಆ ಬಳಿಕ ಆದರೆ ನಂಗನಿಸಿತು .. ನನ್ನೊಳಗೆ ಅದೆಲ್ಲೋ ಅಹಂ ಆಗ ಕುಳಿತಿತ್ತಾ..?? ನಿಜಕ್ಕೂ ಅಧ್ಯಾಪಕ ಹೇಳಿದ ರೀತಿ ಯಾವುದು ಎಂಬುದರ ಬಗ್ಗೆ ನಾನು ಯಾಚಿಸದೆ ಆ ಕ್ಷಣದ ನನ್ನ ಪ್ರತಿಕ್ರಿಯಿಂದ ಅವರಿಗೂ ನೋವಾಗಿದೆ. ಅಂತ ನನಗೆ ಅನಿಸಿತು.. ನನಗೂ ಅವರ ಮಾತು ಆ ಕ್ಷಣಕ್ಕ ನೋವು ತಂದದ್ದೂ ಅಷ್ಟೇ ಸತ್ಯ. ಯಾಕೆಂದರೆ ನಾನು ಕೆಲಸ ಮಾಡುವ ಸಂಸ್ಥೆ ನನಗೆ ದೊಡ್ಡದೇ.... ಹಾಗಾಗಿ ಮತ್ತೊಮ್ಮೆ ನನ್ನೊಳಗೆ ನಾನು ಸಮರ್ಥಿಸಿಕೊಂಡೆ...

ಆದರೆ ಅನೇಕ ಸಲ ನನಗೆ ಅನಿಸಿದ್ದಿದೆ.. ಅದೆಲ್ಲೋ ಅಹಂ ಎನ್ನುವುದು ನನ್ನೊಳಗೆ ಸೇರಿಕೊಂಡಿದೆಯಾ..? ಹಾಗಾಗಿ ನನ್ನೊಳಗಿನಿಂದ ಕೆಲ ಮಾತುಗಳು ಹಾಗೆ ಹೇಳಿಸಿದೆಯಾ..? ಇಲ್ಲ ಹಾಗಾಗದಂತೆ ಎಚ್ಚರಿಕೆ ವಹಿಸಬೇಕು...

ಏಕೆಂದರೆ ಮಾತು ಅನ್ನುವುದು ಆಡಿದರೆ ಮುಗಿಯಿತು... ಅದು ದಾಖಲಾಗಿ ಬಿಡುತ್ತದೆ... ಮತ್ತೆ ಹಿಂದೆ ಸರಿಯಬಾರದು.... ಸರಿಯಲೂ ಆಗದು... ಅದು ನೇರವಾಗಿ ಇರಬೇಕು... ಮಾತಿಗೆ ಇಷ್ಟವಿಲ್ಲದಿದ್ದೆ ಮೌನವೇ ಉತ್ತರವಾಗಬೇಕು... ಹಾಗಾಗಿಯೇ ಅಂದು ನಾನು ಮೌನಿಯಾದ್ದು....

ಹಾಗಾಗಿ... ಮಾತು ಮುತ್ತು .. ಮೌನ ಬಂಗಾರ....!!!

06 ಜುಲೈ 2009

ಇಲ್ಲಿ ಡಿಗ್ರಿ ಓದಿದವರು ಇಬ್ಬರೇ....!!




ಒಂದು ಕಡೆ ನಾಗಾಲೋಟದಿಂದ ಓಡುವ ನಗರಗಳು.ಇನ್ನೊಂದು ಕಡೆ ಅಭಿವೃದ್ದಿಯ ಹೆಸರಿನಲ್ಲಿ ಬದಲಾವಣೆಯನ್ನು ಕಾಣುವ ಸಮಾಜ.ಇದೆಲ್ಲದರ ಭ್ರಮೆಯಲ್ಲಿ ಇಡೀ ಜಗತ್ತು ಬದಲಾಗಿದೆ ಎನ್ನುವ ತಲೆಭಾರ... ಆದರೆ ನಿಜಕ್ಕೂ ಪರಿಸ್ಥಿತಿ ಹಾಗಿದೆಯಾ.?.

ಅದರಾಚೆಗೆ ಬಂದು ನೋಡಿದಾಗಲೂ ಕಾಣುವುದು ಅದೇ ಬದಲಾವಣೆ..ಅದೇ ಅಭಿವೃದ್ದಿಯ ಮಂತ್ರ.

ಇತ್ತೀಚೆಗೆ ಹಿರಿಯ ಅಧಿಕಾರಿಗಳೊಬ್ಬರ ಜೊತೆ ಮಾತನಾಡುತ್ತಿದ್ದಾಗ ಇದೇ ಅಭಿವೃದ್ದಿಯ ಅದರಲ್ಲೂ ನಗರದ ಸುಂದರ ಕಲ್ಪನೆ ಮತ್ತು ಅದರ ಬದಲಾವಣೆಯ ಬಗ್ಗೆ ಕೇಳುತ್ತಿದ್ದಾಗ ಅವರು ಇನ್ನೊಂದು ಮಗ್ಗುಲಲ್ಲಿ ಅದನ್ನು ಯೋಚಿಸುವ ದಾರಿ ತೋರಿಸಿದರು.ನಂತರ ಅವರು ವಿವರಿಸಿದರು ನಗರವೊಂದರ ರಸ್ತೆ ಅಗಲೀಕರಣ ಉದಾಹರಣೆಯನ್ನು ಕೊಡುತ್ತಾ ನಗರದ ರಸ್ತೆ ಅಗಲೀಕರಣದಿಂದಾಗಿ ಸಲ್ಲಿರುವ ಹತ್ತಾರು ಗೂಡಂಗಡಿಗಳು ಮಾಯವಾಗುತ್ತದೆ. ರಸ್ತೆ ಅಗಲವಾತ್ತದೆ. ಪಾರ್ಕಿಂಗ್‌ಗೆ ಜಾಗವಾಗುತ್ತದೆ. ವಾಹನಗಳ ಸುಲಭ ಸಂಚಾರವಾಗುತ್ತದೆ. ಇದರಿಂದಾಗಿ ಸಾಮಾನ್ಯ ಜನರಿಗೆ, ಹಳ್ಳಿ ಜನರಿಗೆ ಏನು ಪ್ರಯೋಜನ..?. ಅಲ್ಲಿ ಮತ್ತೆ ದುಪ್ಪಟ್ಟು ವ್ಯಾಪಾರವಾಗುವುದು ಅದೇ ಶ್ರೀಮಂತ ವ್ಯಾಪಾರಿಗೆ. ಬಡ ಗೂಡಂಗಡಿ ವ್ಯಾಪಾರಿಗೆ ಏನು ಗತಿ..? ಹಾಗೆಂದು ರಸ್ತೆ ಅಗಲೀಕರಣವಾಗಲಿ, ನಗರ ಅಭಿವೃದ್ದಿ ಆಗಬಾರದು ಎನ್ನುವ ಧೋರಣೆ ಇದಲ್ಲ. ನಿಜಕ್ಕೂ ನಗರದ ಅಭಿವೃದ್ದಿ ಇಂದು ಅಗತ್ಯಕ್ಕಿಂತ ಹೆಚ್ಚಾಗಿ ನಡೆದರೆ ಅದೇ ಒಂದು ಹಳ್ಳಿಯ , ಒಂದು ಗ್ರಾಮದ ಅಭಿವೃದ್ದಿ ಅದೇ ವೇಗದಲ್ಲಿ ನಡೆಯುತ್ತಿಲ್ಲ. ಆದರೂ ನಾವು ಅದೇ ನಗರದ ಅಭಿವೃದ್ದಿ ನೋಡಿ ಭಾರತ ಅಭಿವೃದ್ದಿಯ ಪಥದಲ್ಲಿದೆ ಅಂತ ಕರೀತೇವೆ. ಆದರೆ ನಿಜಕ್ಕೂ ಪರಿಸ್ಥಿತಿ ಹಾಗಿದೆಯಾ..?

ಅದಕ್ಕೆ ಒಂದು ಹಳ್ಳಿಯ ಕಡೆಗೆ ಹೋಗ ಬೇಕು. ಆಗ ಅಲ್ಲಿನ ಸತ್ಯ ದರ್ಶನವಾಗುತ್ತದೆ. ಇಂದಿಗೂ ಅದೆಷ್ಟೂ ಹಳ್ಳಿಗಳು ಬೆಳಕನ್ನೇ ಕಂಡಿಲ್ಲ.ಅಂತಹ ಹಳ್ಳಿಯೊಂದರ ಕತೆ ಇಲ್ಲಿದೆ.

ಅದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಗಡಿಭಾಗದಲ್ಲಿರುವ ಕೊಂಬಾರು ಹಾಗೂ ಸಿರಿಬಾಗಿಲು ಗ್ರಾಮ.ಪುತ್ತೂರಿನಿಂದ ಸರಿಸುಮಾರು 60 ರಿಂದ 70 ಕಿಲೋ ಮೀಟರ್ ದೂರದಲ್ಲಿದೆ. ಹಾಗೆ ನೋಡಿದರೆ ಈ ಗ್ರಾಮಗಳು ಸೌಲಭ್ಯಗಳಿಂದಲೂ ದೂರವೇ ಇದೆ. ಈ ಗ್ರಾಮದಲ್ಲಿನ ಬಾರ್ಯ, ಬೊಟ್ಟಡ್ಕ ಪ್ರದೇಶದಲ್ಲಿ 30 ಮನೆಗಳಿವೆ. ಇವರಿಗೆ ಅಭಿವೃದ್ದಿ ಎಂಬುದು ಮರೀಚಿಕಯೇ ಸರಿ.ಸ್ವಾತಂತ್ರ್ಯ ಬಂದು ೬ ದಶಕಗಳೇ ಕಳೆದರೂ ಈ ಭಾಗ ಇನ್ನೂ ಬೆಳಕು ಕಂಡಿಲ್ಲ. ಅದು ಮಾತ್ರವಲ್ಲ ವ್ಯವಸ್ಥಿತವದ ರಸ್ತೆ ಸಂಪರ್ಕ, ಸೇತುವೆಗಳೂ ಈ ಗ್ರಾಮಕ್ಕಿಲ್ಲ.ಇಲ್ಲಿನ ಜನರ ಬದುಕೇ ಒಂದು ಸರ್ಕಸ್.ಇವರು ಅರ್ಜೆಂಟಾಗಿ ಪೇಟೆಗೆ ಹೋಗಬೇಕು ಅಂದ್ರೆ ಇಲ್ಲಿನ ಜನ ಐದಾರು ಕಿಲೋಮೀಟರ್‌ಗಳಷ್ಟು ದೂರ ನಡೆದೇ ಸಾಗಬೇಕು. ಮೊಬೈಲ್ ಸಂಪರ್ಕವಂತೂ ಇಲ್ವೇ ಇಲ್ಲ.ದೂರವಾಣಿಯೂ ಇಲ್ಲಿಗೆ ದೂರವಾಗಿದೆ. ಅದು ಬಿಡಿ ಮಳೆಗಾಲವಂತೂ ಇವರ ಬದುಕು ದ್ವೀಪದಂತಾಗುತ್ತದೆ. ಬಾರ್ಯವನ್ನು ಸಂಪರ್ಕಿಸುವ ನಿಡ್ಯಮೇರು ಎಂಬ ಹೊಳೆ ತುಂಬಿ ಹರಿಯುವ ಕಾರಣದಿಂದ ಇರುವ ರಸ್ತೆ ಸಂಪರ್ಕವೇ ಕಡಿದುಹೋಗುತ್ತದೆ. ಆಗ ತಾತ್ಕಾಲಿಕವಾಗಿ ನಿರ್ಮಿಸಿದ ಕಾಲುಸಂಕದಲ್ಲಿ “ಸರ್ಕಸ್” ಮಾಡಿ ಅನಿವಾರ್ಯವಾಗಿ ಸಾಗಬೇಕು. ಹೀಗಾಗಿ ಹೊರ ಜಗತ್ತಿನ ಸಂಪರ್ಕವೇ ಅವರಿಗಿಲ್ಲ.ಇನ್ನು ಜೀಪು ಹೊರತು ಪಡಿಸಿ ಬೇರಾವ ವಾಹನಗಳು ಇಲ್ಲಿ ಓಡಾಡಲ್ಲ. ಹಾಗಾಗಿ ಜೀಪಿನ ಹೊರತಾಗಿ ಬೇರೆ ವಾಹನದ ಪ್ರಯಾಣ ಇಲ್ಲಿ ಇವರಿಗೆ ಕನಸೇ ಸರಿ.ಅದು ಬಿಡಿ ನಗರದಲ್ಲಿರುವಂತೆ ಮನೆಗೆರಡರಂತೆ ಇಲ್ಲಿ ವಾಹನವೇ ಇಲ್ಲ.ಈ ಬಾಗದಲ್ಲಿ ಸ್ವಂತ ವಾಹನ ಇರುವವರೇ ಇಲ್ಲ. ಎಲ್ಲರಿಗೂ ಕಾಲುಗಳೇ ಆಧಾರ.ಅಲ್ಲಿಂದ ನಂತರ ಗ್ರಾಮಕ್ಕೆ ಬರುವ ಒಂದೆರಡು ಸರಕಾರಿ ಬಸ್ಸು....!!. ಇನ್ನು ಇಲ್ಲಿನ 30 ಮನೆಗಳಲ್ಲಿ ಪದವಿ ಶಿಕ್ಷಣ ಪಡೆದವರು ಕೇವಲ ಇಬ್ಬರು. .4ಮಂದಿ ಪಿಯುಸಿ ಶಿಕ್ಷಣ ಪಡೆದರೆ ಇನ್ನು ಬಹುತೇಕರು ಎಸ್.ಎಸ್.ಎಲ್.ಸಿಯಲ್ಲಿ ಶಾಲೆ ಬಿಡಬೇಕಾದ ಸಂದರ್ಭವೇ ಹೆಚ್ಚು.


ಬೌಗೋಳಿಕವಾಗಿ ನೋಡಿದರೆ ಕೊಂಬಾರು ಹಾಗೂ ಸಿರಿಬಾಗಿಲು ಗ್ರಾಮವು ಒಟ್ಟು 17,118 ವಿಸ್ತೀರ್ಣವಿದೆ.ಇದರಲ್ಲಿ ಬಹುಪಾಲು ಅರಣ್ಯ ಪ್ರದೇಶ. ಹಾಗಾಗಿ ಈ ಗ್ರಾಮ ವಿಸ್ತಾರವಾಗಿದ್ದರೂ ಗ್ರಾಮ ಪಂಚಾಯತ್‌ಗೆ ಆದಾಯ ಕಡಿಮೆಯೇ. ಹಾಗೆಂದು ಸರಕಾರಕ್ಕೆ ಹಾಗೂ ಜನಪ್ರತಿನಿಧಿಗಳಿಗೆ ಇಲ್ಲಿನ ಸಮಸ್ಯೆಯನ್ನು ವಿವರಿಸಿದರೆ ಅರ್ಥವೂ ಆಗುತ್ತಿಲ್ಲ. ಇದುವರೆಗೆ ಒಬ್ಬ ಜನಪ್ರತಿನಿಧಿ ಮಾತ್ರಾ ಈ ಭಾಗಕ್ಕೆ ಭೇಟಿ ಕೊಟ್ಟು ಸಮಸ್ಯೆ ಆಲಿಸಿದ್ದು ಬಿಟ್ಟರೆ ಬೇರಾವ ಜನನಾಯಕರೂ ಇತ್ತ ಬೇಟಿ ಕೊಟ್ಟಿಲ್ಲ. ಅಧಿಕಾರಿಗಳಂತೂ ತಲೆಹಾಕಿಲ್ಲ. ಅಭಿವೃದ್ದಿಯ ಕೆಲಸವೂ ಆಗಿಲ್ಲ. ಗ್ರಾಮ ಪಂಚಾಯತ್ ಕೂಡಾ ಇಲ್ಲಿನ ಅಭಿವೃದ್ದಿಯ ಬಗ್ಗೆ ಯೋಚಿಸುತ್ತದೆ ಆದರೆ ಶಕ್ತಿ ಇಲ್ಲದೆ ದಿಕ್ಕೆಟ್ಟು ಕೂತಿದೆ.


ಒಟ್ಟಿನಲ್ಲಿ ಹಳ್ಳಿಯೊಂದರ ಕತೆ ಹೀಗಿರುವಾಗ ಅಭಿವೃದ್ದಿಯ ಮಂತ್ರ ಪಠಿಸುವ ಜನನಾಯಕರಿಗೆ ಇದೆಲ್ಲವೂ ಅರ್ಥವಾಗುತ್ತಿಲ್ಲವೇ ಅಥವಾ ಅಭಿವೃದ್ದಿಯ ನಾಟಕವಾಡುತ್ತಿದ್ದಾರೆಯೇ ಎಂದು ಸಂಶಯ ಹುಟ್ಟಿಸುತ್ತದೆ.ಗ್ರಾಮೀಣ ಭಾಗದ ಅದೆಷ್ಟೂ ಹಳ್ಳಿಗಳು ಇಂದು ಇದೇ ರೀತಿಯಾಗಿ ಮೂಲಭೂತ ಸೌಲಭ್ಯದಿಂದ ವಂಚಿತವಾಗಿವೆ.ಕೆಲವು ಕಡೆ ಸರಿಯಾದ ಬಸ್ಸುಗಳ ವ್ಯವಸ್ಥೆಯಿಲ್ಲ. ಶಾಲಾ ಮಕ್ಕಳು ಸಂಜೆ ಮನೆಗೆ ತಲಪುವಾಗ ದೀಪ ಉರಿಸುವ ಹೊತ್ತಾಗಿರುತ್ತದೆ. ಮರಿದಿನ ಬೆಳಗ್ಗೆ ಮತ್ತೆ ದೀಪ ಆರುವ ಮುನ್ನವೇ ಮನೆಯಿಂದ ಹೊರಬೀಳಬೇಕು ಇಲ್ಲವಾದ್ರೆ ಶಿಕ್ಷಣವೂ ಇಲ್ಲದೆ ಕತ್ತಲಲ್ಲಿರಬೇಕಾಗುತ್ತದೆ. ಎಂತಹ ಅಜಗಜಾಂತರ ...!!. ಒಂದೆಡೆ ಮನೆಬಾಗಿಲಿಗೆ ಮಕ್ಕಳನ್ನು ತಂದು ಬಿಡುವ ಶಿಕ್ಷಣ ಇನ್ನೊಂದು ಕಡೆ ಶಾಲೆಯ ಬಾಗಿಲನ್ನು ಅರಸಿಕೊಂಡು ಹೋಗುವ ಶಿಕ್ಷಣ. ಇಂತಹ ಸಂದಿಗ್ದ ಪರಿಸ್ಥಿತಿ ಇಲ್ಲಿದೆ. ಆದರೂ ಭಾರತ ಶ್ರೀಮಂತ ದೇಶ. ಸುಖೀ ದೇಶ.ನೆಮ್ಮದಿ ಇಲ್ಲಿದೆ.ಏಕೆಂದರೆ ಇದ್ದುದರಲ್ಲೇ ಸಂತೋಷ ಪಡುವ ಸಮಾಜ ನಮ್ಮದು. ಇರುವ ಸಮಸ್ಯೆಯನ್ನು ಹಾಗೆಯೇ ಸ್ವೀಕರಿಸುವ ಗುಣ ನಮ್ಮದು. ಹಾಗಾಗಿ ಸಮಸ್ಯೆಗಳು ಹಾಗೆಯೇ ಉಳಿದುಕೊಂಡು ಬಿಡುತ್ತದೆ. ಅದುವೇ ಒಂದು ಅಭ್ಯಾಸವಾಗಿಬಿಡುತ್ತದೆ.

23 ಜೂನ್ 2009

ಸಿಡಿಲಿನ ಮಾಯೆ.. .



ಒಂದು ಪ್ರದೇಶಕ್ಕೆ ಒಂದೆರಡು ಬಾರಿ ಸಿಡಿಲು ಬೀಳುವುದನ್ನು ಕೇಳಿದ್ದೇವೆ. ಆದರೆ ಇಲ್ಲೊಂದು ಪ್ರದೇಶದಲ್ಲಿ ಕಳೆದ 10 ವರ್ಷಗಳಿಂದ ನಿರಂತರವಾಗಿ ಸಿಡಿಲು ಬೀಳುತ್ತಲೇ ಇದೆ.ಈಗಾಗಲೇ ಈ ಕೃಷಿ ಭೂಮಿಯಲ್ಲಿ 20 ಕ್ಕೂ ಅಧಿಕ ತೆಂಗಿನ ಮರಗಳು ಸಾವನ್ನಿಪ್ಪಿವೆ. ಮಾತ್ರವಲ್ಲ ಕಳೆದ ವರ್ಷ ಇಲ್ಲೇ ಸಿಡಿಲಿಗೆ ಇಬ್ಬರು ಬಲಿಯಾಗಿದ್ದಾರೆ ಕೂಡಾ. ಹಾಗಾದ್ರೆ ಇದೇ ಪ್ರದೇಶದಲ್ಲಿ ಏಕೆ ಸಿಡಿಲು ಬೀಳುತ್ತಿದೆ ಎನ್ನುವ ಕುತೂಹಲ ಇಲ್ಲಿನ ಗ್ರಾಮಸ್ಥರಲ್ಲಿದೆ.

ಕಳೆದ 10 ವರ್ಷಗಳಿಂದ ಒಂದೇ ಪ್ರದೇಶಕ್ಕೆ ಸಿಡಿಲು ಬೀಳುತ್ತಲೇ ಇದೆ ಕಾರಣವೇನು ಎಂಬ ಕುತೂಹಲದ ಪ್ರಶ್ನೆ ಇದೆ.ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪಟ್ರಮೆ ಗ್ರಾಮದಲ್ಲಿ ಮೂಡಿಬಂದಿರುವ ಪ್ರಶ್ನೆ ಇದು.ಇಲ್ಲಿನ ಉಳಿಯಬೈಲಿನ ಅಜಿತ್ ಕುಮಾರ್ ಎಂಬವರಿಗೆ ಸೇರಿದ ಗದ್ದೆ ಹಾಗೂ ಅಡಿಕೆ ತೋಟದ ಪ್ರದೇಶದಲ್ಲಿ ನಿರಂತರವಾಗಿ ಸಿಡಿಲು ಬಡಿಯುತ್ತಿದೆ. ಹೀಗೆ ಸಿಡಿಲು ಬಡಿದ ಪರಿಣಾಮವಾಗಿ ವರ್ಷ ಕನಿಷ್ಠ ಒಂದು ತೆಂಗಿನಮರ ಸಾಯುತ್ತಿದೆ.ಇದುವರೆಗೆ 20 ಕ್ಕೂ ಅಧಿಕ ತೆಂಗಿನ ಮರ ಸತ್ತಿದೆ.ಹೀಗೆ ಸಿಡಿಲು ಬಡಿಯಲು ಕಾರಣವೇನು ಎಂಬ ಪ್ರಶ್ನೆಗೆ ಇದುವರೆಗೆ ಉತ್ತರ ಸಿಕ್ಕಿಲ್ಲ.

ಕೆಲವರು ಈ ಪ್ರದೇಶದಲ್ಲಿ ಖನಿಜಾಂಶ ಇರಬಹುದು ಎಂದರೆ ಇನ್ನೂ ಕೆಲವರು ಇಲ್ಲಿ ನೀರಿನ ಓಳಹರಿವು ಹೆಚ್ಚಿರಬೇಕು ಎನ್ನುತ್ತಾರೆ.

ಕಳೆದ ವರ್ಷ ಇದೇ ಪ್ರದೇಶದಲ್ಲಿ ಜೊತೆಯಾಗಿ 5 ಜನ ಕೆಲಸ ಮಾಡುತ್ತಿರುವಾಗ ಜೋರಾಗಿ ಗುಡುಗು , ಸಿಡಿಲು, ಮಳೆ ಬಂದಾಗ ಆಶ್ರಯಕ್ಕಾಗಿ ಸಮೀಪದ ತೆಂಗಿನ ಮರದ ಬುಡದಲ್ಲಿ ನಿಂತಿರುವಾಗ ಹಠಾತ್ ಆಗಿ ಸಿಡಿಲು ಬಡಿದು 2 ಜನ ಮೃತ ಪಟ್ಟರೆ ಇತರ ೩ ಜನರಿಗೆ ಗಾಯವಾಗಿತ್ತು.

ಒಟ್ಟಿನಲ್ಲಿ ಇದೊಂದು ಕೌತುಕವೋ ಅಥವಾ ಪ್ರಕೃತಿಯ ಮುನಿಸೋ ಅಥವಾ ಖನಿಜಾಂಶದ ಪರಿಣಾವೋ ಎಂಬುದು ಇನ್ನಷ್ಠೇ ಪತ್ತೆಯಾಗಬೇಕಿದೆ.ಅದುವರೆಗೆ ಈ ತೋಟದ ಮಾಲಿಕರಿಗೆ ಪ್ರತೀ ವರ್ಷದ ಮಳೆಗಾಲವೆಂದರೆ ಆತಂಕವೇ ಆಗಿದೆ.

13 ಜೂನ್ 2009

ಇಲ್ಲಿ ಕಣ್ಣೀರು ಬತ್ತಿ ಹೋಗಿದೆ..



ಆ ತಾಯಿಯ ಕಣ್ಣೀರು ಬತ್ತಿ ಹೋಗಿತ್ತು.. ಮುಖದಲ್ಲಿ ಒಣ ನಗು.. ಹೃದಯದಲ್ಲಿ ಭಾರವಾದ ನೋವು... ಆದರೂ ಬದುಕು ಅನಿವಾರ್ಯ ಏಕೆಂದರೆ ಆ ಮಕ್ಕಳು ಇದ್ದಾರಲ್ಲ... ಇದು ಕತೆಯಲ್ಲ ನಿಜ ಜೀವನದ ಒಂದು ತುಣುಕು ಅಷ್ಟೇ.. ನಿಜಕ್ಕೂ ಭಯಾನಕವೆನಿಸುತ್ತದೆ... ಮನಸ್ಸು ಕರಗಿಹೋಗುತ್ತದೆ... ಆ ಎಲ್ಲಾ ಘಟನೆಗಳನ್ನು ಕೇಳುತ್ತಾ ಮನಸ್ಸಿಗಾದ ಅನುಭವವನ್ನು ಇಲ್ಲಿ ದಾಖಲಿಸಬೇಕು ಎಂದೆನಿಸಿತು....

ಪೂರ್ವ ನಿಗದಿಯಂತೆ ಇಂದು ಮುಂಜಾನೆ ಕೊಕ್ಕಡ ಬಳಿಯ ಪಡ್ರಮೆ ಕಡೆಗೆ ಹೋಗುವುದಕ್ಕಿತ್ತು. ಆಗಲೇ ಅಲ್ಲಿ ಎಂಡೋಸಲ್ಫಾನ್ ಇಲ್ಲಿಯ ಗೇರು ತೋಟಕ್ಕೆ ಕಳೆದ ೨೦ ವರ್ಷ ಹಿಂದೆ ಸಿಂಪಡಿಸಿದ್ದರ ಪರಿಣಾಮವನ್ನು ಇಂದು ಅಲ್ಲಿಯ ಜನ ಅನುಭವಿಸುತ್ತಿರುವುದರ ಬಗ್ಗೆ ಸ್ಥಳಿಯರು ಹಾಗೂ ಅಲ್ಲಿನ ಮಿತ್ರರು ಹೇಳಿದ್ದರು. ಹಾಗಾಗಿ ಆ ಬಗ್ಗೆ ಕುತೂಹಲವಿತ್ತು. ಈ ಮೊದಲು ಚಿತ್ರದಲ್ಲಿ ಅಂತಹವುಗಳನ್ನು ಓದಿದ್ದೆನೇ ಹೊರತು ನೋಡಿರಲಿಲ್ಲ.

ನಾವು ಮೊದಲಿಗೆ ಹೋದದ್ದು ಒಂದು ಶಾಲೆಗೆ.. ಅಲ್ಲಿ ಮಕ್ಕಳು ಕುಣಿದು ಕುಪ್ಪಳಿಸಬೇಕಾಗಿತ್ತು. ಆಧರೆ ಕೆಲವರಿಗೆ ಬುದ್ದಿ ಭ್ರಮಣೆ.. ಇನ್ನೂ ಕೆಲವರಿಗೆ ಗಂಭಿರತೆ ಇಲ್ಲ... ಮುಂದೆ ಸಾಗಿತು ನಮ್ಮ ತಂಡ.. ಅಲ್ಲಿನ ಪರಿಸ್ಥಿತಿ ಕಂಡಾಗ ಮನಸ್ಸು ಕರಗಿತು.. ಆತ ೨೧ ವರ್ಷದ ಹುಡುಗ... ಏಳಲಾಗದು.... ಕೂರಲಾಗದು... ಅದೂ ಬಿಡಿ ಅತ್ಯಂತ ವಿಕಾರವಾಗಿ ಮಲಗಿಕೊಂಡಿರುವ ಸ್ಥಿತಿ... ಆತನ ತಾಯಿಯಿಂದಲೇ ಎಲ್ಲಾ ಆರೈಕೆ.. ಸರಿಯಾಗಿ ನೋಡಿದರೆ ಮನೆಯವರ ಜವಾಬ್ದಾರಿಯನ್ನು ಹೊರಬೇಕಾದ ಪ್ರಾಯ.... ಇನ್ನೂ ಮುಂದೆ ಹೋದಾಗ ಅದು ಇನ್ನೂ ಭೀಕರ ಅಲ್ಲಿ ಮಾನಸಿಕ ಅಸ್ವಸ್ಥರಾದ ಮನೆ ಮಂದಿ... ಏನೇನೋ ಕತೆ.. ಅಲ್ಲಿಂದಲೂ ಮುಂದೆ ಹೋದಾಗ.... ಕರುಳು ಹಿಂಡುವ ದೃಶ್ಯ.. ಅದಿನ್ನೂ ಒಂದೂವರೆ ವರ್ಷದ ಬಾಲೆ.. ಅದರ ಬೆಳವಣಿಗೆ ಕುಂಠಿತ.. ಪಾಪ ಆ ಮುಗ್ದ ಬಾಲೆ ಈ ಲೋಕಕ್ಕೆ ಏನು ಅನ್ಯಾಯ ಮಾಡಿತ್ತು...? ಸರಿ ಅಲ್ಲಿಂದಲೂ ಮುಂದೆ ಹೋದಾಗ ವಿಕಾರವಾಗಿ ನಗುವ ಮುಖ ... ಮಲಗಿದಲ್ಲಿಂದ ಏಳಲಾಗದ ಸ್ಥಿತಿ... ಅಬ್ಬಾ ಇದಿಷ್ಟು ನೋಡಿದಾಗಲೇ ಸಾಕೆನಿಸಿತು.. ಆದರೆ ಇನ್ನೂ ಆ ಗ್ರಾಮದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಜನ ಇಂತಹ ವಿವಿದ ಕಾಯಿಲೆಗಳಿಂದ ಇದ್ದರು.. ಆದರೆ ಮನಸ್ಸು ಆಗಲೇ ಸಂಪೂರ್ಣ ಕರಗಿಹೋಯಿತು....

ನನ್ನೊಂದಿಗೆ ಹೋರಾಟಗಾರರಿದ್ದರು.. ಅವರು ಹೇಳಿದ ಮಾತು ಕೇಳಿ ನಾನು ಮೂಕನಾದೆ.... ನಮ್ಮ ಸಾಧನೆಯೇನೂ ಇಲ್ಲ ಎನಿಸಿತು.. ಮಾತ್ರವಲ್ಲ ಮಾಧ್ಯಮಗಳು ಇಂದು ಪ್ರಭಾವ ಶಾಲಿಯಲ್ಲವೇ ಎಂದು ಮನದೊಳಗೆ ಪ್ರಶ್ನೆ ಮೂಡಿತು..

ಇವರ ಕತೆ ಕೇಳಿ.. ಈ ವ್ಯಕ್ತಿ ಇಲ್ಲಿನ ಸ್ಥಿತಿಯನ್ನು ಸಂಪೂರ್ಣ ಚಿತ್ರೀಕರಿಸಿ ಮಂತ್ರಿಗಳಿಗೆ ತೋರಿಸಲು ರಾಜಧಾನಿಗೆ ಹೋಗಿದ್ದರಂತೆ.. ಆದರೆ ಅಲ್ಲಾದ ಅನುಭವ ಅವರಲ್ಲಿದ್ದ ಎಲ್ಲಾ ಆಸೆಗಳಿಗೆ ತಣ್ಣೀರು ಬಿತ್ತಂತೆ.. ಹಾಗೆ ಪತ್ರಿಕಾಗೋಷ್ಠಿ ಮಾಡೋಣ ಎಂದರೆ ಅವರ ಕಿಸೆಯಲ್ಲಿದ್ದುದು ಕೇವಲ ಒಂದುಸಾವಿರವಂತೆ.. ಹಾಗಿದ್ದರೂ ಅವರು ಮತ್ತೆ ಊರಿಗೆ ಬಂದು ಹೋರಾಟ ಆರಂಭಿಸಿದರು. ಸ್ವತ: ಈ ವ್ಯಕ್ತಿಯೇ ರೋಗ ಪೀಡಿತ.. ಒಂದು ಕಣ್ಣು ದೃಷ್ಠಿ ಕಳಕೊಂಡಿದೆ ಇನ್ನೊಂದು ಶೇಕಡಾ ೨೫ ಮಾತ್ರಾ ಕಾಣುತ್ತದೆ ಇದು ಯಾವಾಗ ಮಂದವಾಗುತ್ತದೆ ಅಂತ ಗೊತ್ತಿಲ್ಲ ಎನ್ನುವ ಈ ವ್ಯಕ್ತಿಗೆ ಇದರಿಂದ ಏನೂ ಪ್ರಯೋಜನವಿಲ್ಲ.ಈ ಹೋರಾಟ ಮಾಡುವುದರಿಂದ ಫಲ ಸಿಕ್ಕುತ್ತದೆ ಎನ್ನುವ ವಿಶ್ವಾಸ ಇಲ್ಲದಿದ್ದರೂ ಅವರ ಮನೆಯಲ್ಲಿರುವ ಅವರ ತಾಯಿ ಸುಮ್ಮನಿದ್ದರೆ ಕೇಳುತ್ತಾರಂತೆ .. ಇಂದು ಅವನಿಗೆ ಕಣ್ಣು ಕಾಣುವುದಿಲ್ಲ ಅಂತ.. ಹಾಗಾಗಿ ಮನೆಯವರ ಸಮಾಧಾನ ಮತ್ತು ಆತನ ಆತ್ಮ ತೃಪ್ತಿಗಾಗಿ ಈ ಹೋರಾಟ ಮಾಡುತ್ತಾರಂತೆ.. ಏಕೆಂದರೆ ಇಂದಿನ ಜನಪ್ರತಿನಿಧಿಗಳು ಈ ಸಮಾಜಕ್ಕೆ ನಾಲಾಯಕ್ಕು.. ನಾವು ಆರಿಸಿ ಕಳಿಸುತ್ತೇವಲ್ಲಾ ನಾವೇ ಮೂರ್ಖರು..

ಅಲ್ಲಿ ಶ್ರೀಮಂತ ದೇವರುಗಳಿಗೆ ಕೋಟಿ ಕೋಟಿ ಸುರಿಯುವ ನಾಯಕರು ಒಂದೆಡೆ.... ಇನ್ನೊಂದೆಡೆ ನಾಯಾಲಕ್ಕು ಎಂದು ಮಾಧ್ಯಮದ ಮಂದಿಗೆ ಬರೆಯುವ ಮಂತ್ರಿಗಳು ಇನ್ನೊಂದು ಕಡೆ . ಇಂತಹವರು ಒಮ್ಮೆಯಾದರೂ ಈ ಪ್ರದೇಶಕ್ಕ ಭೇಟಿ ನೀಡಿ ಕನಿಷ್ಠ ಸಾಂತ್ವಾನವನ್ನಾದರೂ ಹೇಳುವ ಸೌಜನ್ಯ ಇವರಲ್ಲಿದೆಯಾ..? ಕೇವಲ ಅಲ್ಲಿಕೂತು ಕುರ್ಚಿ ಕಾಯುವ ಕೆಲಸ ಮಾಡುವ ನಾಯಕರಿಂದ ಏನನ್ನು ಬಯಸಬಹುದು ಹೇಳಿ...? ಅದೇ ಕೆರಳದ ಸರಕಾರ ಎಲ್ಲಾ ಎಂಡೋಸಲ್ಫಾನ್ ಪೀಡಿತರಿಗೆ ಉಚಿತ ಚಿಕಿತ್ಸೆ ನೀಡಿದೆ... ಆದರೆ ಇಲ್ಲಿ ನಮ್ಮ ನಾಯಕರ ಗಮನಕ್ಕೇ ಬಂದಿಲ್ಲ ಕೇಳಿದರೆ ಕೋಟಿ ಲೆಕ್ಕ... ಅತಿ ಶೀಘ್ರದಲ್ಲಿ ಪರಿಹಾರ.. ಎನ್ನುವ ಬೊಗಳೆ...
ಆದರೂ ಇಲ್ಲಿಯ ಜನ ಕಣ್ಣೀರು ಬತ್ತಿ ಹೋದರೂ ಬದುಕು ಸಾಗಿಸುತ್ತಿದ್ದಾರಲ್ಲಾ.. ಅದು ಗ್ರೇಟ್... ದೇವರಿದ್ದಾನೆ ಎಂದಾದರೆ ಅಂತಹವರಿಗೆ ಒಲಿಯಬೇಕು. ಅದು ಬಿಟ್ಟು ಶ್ರೀಮಂತರನ್ನು ಮಾತ್ರಾ ಕಾಯುವ ಕೆಲಸ ಮಾಡಬೇಡ ದೇವಾ....


10 ಜೂನ್ 2009

ಇದು ಸುದ್ದಿಯಾಗಿಲ್ಲ....

ಇಂದು ಹುಡುಗರೆಲ್ಲಾ ಕೃಷಿಯಿಂದ ವಿಮುಖರಾಗುತ್ತಿದ್ದಾರೆ ಅಂತ ಬೊಬ್ಬಿಡುವ ನಾವು ನಿಜಕ್ಕೂ ಕೃಷಿ ಬಗೆಗಿನ ಒಳ್ಳೆಯ ವಿಚಾರಗಳಿಗೆ ಏಕೆ ಪ್ರಚಾರ ಕೊಡುತ್ತಿಲ್ಲ ಎನ್ನುವ ಸಂಗತಿಯೊಂದು ಮೊನ್ನೆ ತಲೆಯಲ್ಲಿ ತಿರುಗಾಡುತ್ತಿತ್ತು. ಪ್ರತೀ ದಿನ ಭಾಷಣದಲ್ಲಿ , ಪತ್ರಿಕೆಗಳಲ್ಲಿ , ಮಾಧ್ಯಮಗಳಲ್ಲಿ ಹೇಳುವುದು ಮತ್ತು ಬರೆಯುವುದು ಒಂದೇ ವಿಚಾರ ಇಂದು ಕೃಷಿ ಬಡವಾಗುತ್ತಯಿದೆ. ಯುವಕರು ನಗರದ ಹಾದಿ ಹಿಡಿಯುತ್ತಿದ್ದಾರೆ. ... ಇದೇ ರೀತಿಯ ಹತ್ತು ಹಲವು ವಿಚಾರಗಳನ್ನು ಹೇಳುತ್ತಲೇ ಇರುವು ನಾವು ಯಾಕೆ ಈ ವಿಷಯಗಳಿಂದ ಹೊರಬಂದು ಇಲ್ಲಿರುವ ಕೃಷಿಕರಿಗೆ ಜೀವ ತುಂಬುವ ಮತ್ತು ಪ್ರೋತ್ಸಾಹ ಕೊಡುವ ಕೆಲಸ ಮಾಡಬಾರದು. ಆಗ ನಗರದ ಕೆಲಸದಿಂದ ಬೇಸತ್ತ ಒಂದಷ್ಟು ಯವಕರಾದರೂ ಹಳ್ಳಿಗೆ ಬರಬಹುದಲ್ವಾ ಅಂತ ಯೋಚನೆ ಮಾಡುತ್ತಿರಬೇಕಾದರೆ ಮೊನ್ನೆ ಅಂತಹುದ್ದೇ ಸಂಗತಿಯೊಂದು ನಡೆಯಿತು,.

ಅದು ವಿದೇಶದ ಕೃಷಿನೊಬ್ಬ ನಗರಕ್ಕೆ ಆಗಮಿಸಿ ಪರ್ಯಾಯ ಕೃಷಿಯತ್ತ ವಿವರ ನೀಡುತ್ತಿದ್ದ. ಅದಕ್ಕಾಗಿ ಭಾಷೆಯ ತರ್ಜುಮೆಯಯನ್ನೂ ವ್ಯವಸ್ಥೆ ಮಾಡಲಾಗಿತ್ತು. ಒಂದಷ್ಡು ಉತ್ಸಾಹಿ ಕೃಷಿಕರು ಬಂದಿದ್ದರು. ಅವರಲ್ಲಿ ತಲೆ ಹಣ್ಣಾದವರೇ ಜಾಸ್ತಿ ಅಂತ ನಾವು ಒಳಗೊಳಗೇ ಹೇಳುವ ಬದಲು ಅವರೆರೆಲ್ಲರೂ ಉತ್ಸಾಹೀ ಯುವಕರೇ ಅಂತ ಕರೆದು ಬಿಡೋಣ . ಆದರೆ ನಮ್ಮ ದುರಾದೃಷ್ಠ ಎಂಬಂತೆ ಈ ಕಾರ್ಯಕ್ರಮಕ್ಕೆ ನಿರೀಕ್ಷಿತ ಮಟ್ಟದಲ್ಲಿ ಪ್ರಚಾರವೇ ಸಿಕ್ಕಿಲ್ಲ. ನಿಜವಾಗಲೂ ಇಂತಹ ಕಾರ್ಯಕ್ರಮಕ್ಕೆ ಪ್ರಚಾರ ಅವಶ್ಯಕತೆಯಿದೆ. ಅಲ್ಲಿ ವಿದೇಶಿ ಕೃಷಿಕನಿಗೆ ಅಲ್ಲ. ಅವನ ವಿಚಾರಕ್ಕೆ ಪ್ರಚಾರ ಬೇಕಿತ್ತು. ಹೇಗೆ ಅಲ್ಲಿನ ಕೃಷಿಕರು ಕಾಫಿ ಬೆಳೆಯಲ್ಲಿ ಸೋತು ಹೋಗಿದ್ದರೂ ಅವರು ಅದನ್ನು ಸರಿದೂಗಿಸಿ ಕೃಷಿಯಲ್ಲಿ ಬೆಳೆದು ಬಂದರು ಎಂಬುದು ಮುಖ್ಯವಾಗುತ್ತದೆ. ಆದರೆ ಅಂತಹ ಕಾರ್ಯಕ್ರಮದ ಒಂದು ತುಣುಕು ಕೂಡಾ ಲೀಡ್ ಆಗಲೇ ಇಲ್ಲ. ನಮ್ಮಲ್ಲೊಂದು ಪೂರ್ವಾಗ್ರಹವಿದೆ. ನಮಗೂ ಆತನಲ್ಲಿ ಆಗೋಲ್ಲ , ಆತನಿಗೂ ನಮ್ಮಲ್ಲಿ ಆಗೋಲ್ಲ ಎಂದರೆ ವಿಚಾರಗಳಿಗೆ ಬ್ರೇಕ್ ಹಾಕುವುದರ ಪರಿಣಾಮವಾಗಿ ಒಂದಷ್ಟು ಉತ್ಸಾಹಿತರಿಗೆ ವಿಚಾರವೇ ತಲಪುವುದಿಲ್ಲ. ಹಾಗಾಗಿ ಕೃಷಿ ಸಂಬಂಧಿ ಕಾರ್ಯಕ್ರಮಗಳಿಗೆ ಹೆಚ್ಚು ಪ್ರಚಾರ ಬೇಕು. ಏಕೆಂದರೆ ಯುವಕರು ಕೃಷಿಯತ್ತ ಬರುತ್ತಿಲ್ಲ ಎನ್ನುವ ನಾವು , ಕೃಷಿ ಬೇಕು ಎನ್ನುವ ನಾವು ಅದಕ್ಕೆ ಸಂಬಂಧಿತ ಒಳ್ಳೆಯ ಕಾರ್ಯಕ್ರಮ , ಅಲ್ಲಿರುವ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲದಿದ್ದರೆ ಹೇಗೆ..? ಅದು ಮಾತ್ರವಲ್ಲ ಇಂದು ಕೃಷಿಯಲ್ಲಿ ಹೊಸ ಆವಿಷ್ಕಾರಗಳು ಮತ್ತು ಬದಲಾವಣೆ ಬೇಕು. ತಂತ್ರಜ್ಞಾನಗಳು ಬೇಕು. ಹಾಗಿದ್ದರೆ ಒಂದಷ್ಡು ಹುಡುಗರು ಇಲ್ಲಿ ಉಳಿಯ ಬಲ್ಲರು. ಅದಲ್ಲದೇ ಹೋದರೆ ಅಜ್ಜ ನೆಟ್ಟ ಆಲದ ಮರವಾದರೆ ಸುತ್ತು ಬಂದು ಸುಸ್ತಾಗಿ ದೂರ ಹೋಗುವುದು ಖಂಡಿತಾ. ಆದ ಕಾರಣ ಇಂತಹ ಹೊಸ ಆವಿಷ್ಕಾರಗಳು , ಬದಲಾವಣೆಗೆಳು, ಚಿಂತನೆಗೆಳು ಜನಸಾಮಾನ್ಯರಿಗೂ ತಲುಪಬೆಕಾಗದ್ದು ಅಗತ್ಯವಾಗಿದೆ. ಏನೇ ಆಗಲಿ ಆ ಕಾರ್ಯಕ್ರಮ ಸಂಘಟನೆ ಚೆನ್ನಾಘಿತ್ತು. ಒಳ್ಳೆಯ ಕಾರ್ಯಕ್ರವೂ ಆಗಿತ್ತು.

ಅದೇ ಕೇರಳದಲ್ಲಿ ಈ ಸುದ್ದಿ ಎಲ್ಲಾ ಮಾದ್ಯಮಗಳಲ್ಲಿ ಕವರ್ ಸ್ಟೋರಿಯಾಗಿ ಬಂದಿತ್ತು ಅಂತ ನಿನ್ನೆ ಮಾತನಾಡುತ್ತಿದ್ದ ಮಿತ್ರರೊಬ್ಬರು ಹೇಳಿದರು.........

25 ಮೇ 2009

ಇವರೆಲ್ಲಾ ಎಲ್ಲೋಗ್ತಾರೆ..??

ಇಂದು ಪ್ರಸ್ ಕ್ಲಬ್‌ನಲ್ಲಿ ಕುಳಿತು ಹರಟುತ್ತಿರುವಾಗ ನಮ್ಮ ಮಧ್ಯೆ ಪ್ರಶ್ನೆಯೊಂದು ಬಂತು.ಇದೊಂದು ಬಾಲಿಶ ಅಂತ ಅನ್ನಿಸಬಹುದು ಆದರೆ ಅದರ ಆಳ ಗಂಭೀರವಾಗಿ ಯೋಚಿಸಬೇಕಾದದ್ದು ಅಂತ ನನಗನ್ನಿಸತು. ಮಿತ್ರರೂ ಅದನ್ನೇ ಮೆಲುಕು ಹಾಕುತ್ತಿದ್ದರು.

ಮೊನ್ನೆ sslc ಫಲಿತಾಂಶ ಬಂತು.ಅದೂ ಉತ್ತಮ ಫಲಿತಾಂಶವಾಗಿತ್ತು.ಎಲ್ಲರೂ ನಿರೀಕ್ಷಿಸುವುದು ನನಗೆ "ಫಸ್ಟ್ ಕ್ಲಾಸ್" ಬರಲಿ ಅಂತನೇ. ಅದಕ್ಕಾಗಿ ದೇವರಿಗೆ ಹರಕೆ ಹೊರುವವರೂ ಇದ್ದಾರೆ ಬಿಡಿ. ಈಗಿರುವುದು ವಿಷಯ ಅದಲ್ಲ. ಹಾಗೆ ಹರಿಕೆ ಹೊತ್ತು.. ಏನೆಲ್ಲ್ಲಾ ಪರದಾಡಿ ಪಾಸಾಗ್ತಾರಲ್ಲ. ಅಷ್ಟು ಸಾಕು.

ಆದರೆ ಈಗ ನಮ್ಮ ಯೋಚನೆ ಅದಲ್ಲ. ಈ ಬಾರಿ ಏನಿಲ್ಲವೆಂದರ 1.5 ಲಕ್ಷ ವಿದ್ಯಾರ್ಥಿಗಳ SSLC ಪಾಸಾಗಿ ಪಿಯುಸಿ ಶಿಕ್ಷಣದತ್ತ ಮುಖ ಮಾಡಿದ್ದಾರೆ, ಇಂದು ರಾಜ್ಯದಲಿ ಪ್ರೌಢ ಶಿಕ್ಷಣ ಸಂಸ್ಥೆಗಳಿದ್ದಷ್ಟು ಉನ್ನತ ಶಿಕ್ಷಣ ಸಂಸ್ಥೆಗಳಿಲ್ಲ. SSLC ಪಾಸಾದ ವಿದ್ಯಾರ್ಥಿಗಳಿಗೆಲ್ಲಾ ಪಿಯಿಸಿಯಲ್ಲಿ ಸೀಟು ಸಿಗುತ್ತಾ..? ಸಿಗದೇ ಇರುವವರೆಲ್ಲಾ ಏನಾಗುತ್ತಾರೆ..? ಅಂತಹದ್ದೊಂದು ಪ್ರಶ್ನೆಯ ಹಿಂದೆ ಹೋದಾಗ ಗಂಭೀರವಾದ ಉತ್ತರಗಳು ಸಿಗುತ್ತವೆ..

ಒಂದು ತಾಲೂಕನ್ನು ಮಾದರಿಯಾಗಿಸಿ ಈ ಅವಲೋಕನವನ್ನು ಮಾಡಿದಾಗ ಅಲ್ಲಿ ಸುಮಾರು 20 ಸಾವಿರ ವಿದ್ಯಾರ್ಥಿಗಳು SSLC ಬರೆದಿದ್ದಾರೆ. ಅದರಲ್ಲಿ ಸುಮಾರು 15 ಸಾವಿರ ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಈ ಪಾಸಾದ ವಿದ್ಯಾರ್ಥಿಗಳೆಲ್ಲಾ ಕಾಲೇಜನ್ನ ಅರಸುತ್ತಾ ಹೋಗುತ್ತಾರೆ. ತಾಲೂಕಿನ ಒಂದಷ್ಟು ಕಾಲೇಜುಗಳಿಂದ ಅರ್ಜಿ ತರುತ್ತಾರೆ. ಆ ತಾಲೂಕಿನಲ್ಲಿ ಇರುವುದು 8 ಕಾಲೇಜು. ಅದರಲ್ಲಿ ಈ 15 ಸಾವಿರ ಮಂದಿಗೆ ಅವಕಾಶ ಇರುವುದಿಲ್ಲ. ಏನಿಲ್ಲವೆಂದರೂ 4 ರಿಂದ 5 ಸಾವಿರ ವಿದ್ಯಾರ್ಥಿಗಳಿಗೆ ಮಾತ್ರಾ ಅವಕಾಶ. ಎಲ್ಲಾ ಕಾಲೇಜುಗಳೂ ಅತ್ಯಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಮೊದಲು ತೆಗೆದುಕೊಳ್ಳುತ್ತದೆ. ಅಂದರೆ "ಫಸ್ಟ್ ಕ್ಲಾಸ್" ಮಾತ್ರಾ. ಆಗಲೇ ತರಗತಿಯ ಶೇಕಡಾ 75 ಭಾಗ ಫುಲ್.. ಸರಕಾರಿ ಕಾಲೇಜುಗಳು ಮಾತ್ರಾ ಸೆಕೆಂಡ್ ಕ್ಲಾಸ್ ಮತ್ತು ಅದಕ್ಕಿಂತ ಹೆಚ್ಚಿನ ಅಂಕ ಪಡೆದವರನು ಸೇರಿಸಿಕೊಳ್ಳುತ್ತದೆ. ಹಾಗಾದರೆ ತೃತೀಯ ಶ್ರೇಣಿಯಲ್ಲಿ ಪಾಸದ ಮತ್ತು ಜಸ್ಟ್ ಪಾಸಾದ ವಿದ್ಯಾರ್ಥಿಗಳಿಗೆ ಸೀಟು ಎಲ್ಲಿ ಸಿಗುತ್ತದೆ..? ಅವರ ಭವಿಷ್ಯ ಏನಾಗುತ್ತದೆ. ಯಾಕೆಂದರೆ ಇಂದು ಸೆಕೆಂಡ್ ಕ್ಲಾಸ್ ಮತ್ತು ಅದಕ್ಕಿಂತ ಕಡಿಮೆ ಇರುವ ಕೆಲವರು ಐಟಿ‌ಐ ಯತ್ತ ಮುಖ ಮಾಡಿದರೆ ಅಲ್ಲೂ ಭರ್ತಿಯಾಗಿರುತ್ತದೆ. ಹಾಗಿದ್ದರೆ ಅಂತಹ ವಿದ್ಯಾರ್ಥಿಗಳ ಪಾಡು ಏನು?. ಅವರು ಏನಾಗುತ್ತಾರೆ?. ಪಿಯುಸಿ ಆದ ಬಳಿ ಅವಕಾಶಗಳು ಬೇಕಾದಷ್ಟು ಇದೆ. ಆದರೆ SSLC ಆದ ತಕ್ಷಣ ಅವಕಾಶಗಳು ಇಲ್ಲವೇ ಇಲ್ಲ ಅನ್ನಬಹುದು. ಹಾಗಾಗಿ ಅಂತಹ ವಿದ್ಯಾಥಿಗಳು ಇಂದು ದಿಕ್ಕು ಕಾಣದೆ ಕುಳಿತಿರುವ ಸ್ಥಿತಿ ಇದೆ. ಇದಕ್ಕೆ ಕಾರಣವೇನು?. ಅವರಲ್ಲಿರುವ ಪ್ರತಿಭೆಯ ಕೊರತೆಯೇ..? ಅಥವಾ ವ್ಯವಸ್ಥೆಯ ಲೋಪವೋ..? ಅಥವಾ ಅವರು ದಡ್ಡರೋ..? ಎಲ್ಲರೂ ಸಮಾನರಾಗಲು ಸಾಧ್ಯವೇ ಇಲ್ಲ ಅಲ್ವೇ.......!!

ಅದಕ್ಕೇ ಹೇಳಿರ‍ಬೇಕು..

Servival Of fittest....!!!

11 ಮೇ 2009

ಬದುಕೆಂಬ ಪ್ರಯೋಗ ಶಾಲೆಯಲ್ಲಿ. . .




ಮುಂಜಾನೆಯ ಫ್ರೆಶ್ ಮೂಡ್‌ನಲ್ಲಿರುವಾಗ ಸಂದೇಶವೊಂದು ಬಂದಿತು. ಅಲ್ಲಿ ಒಂದೇ ಕುಟುಂಬದ ೩ ಜನ ಆತ್ಮಹತ್ಯೆ ಮಾಡಿದ್ದಾರಂತೆ. ಎಂಬ 2 ನಿಮಷದ ದೂರವಾಣಿ ಕರೆ. ಅದೆಲ್ಲೋ ಶುಭ ಕಾರ್ಯಕ್ಕೆ ಹೊರಟು ಸಿದ್ದವಾಗಿದ್ದಾಗ ಅದೇ ಮೂಡ್‌ನಲ್ಲಿ ಸ್ಥಳಕ್ಕೆ ಹೋದಾಗ ಘಟನೆ ಮನಕಲಕುವಂತಿತ್ತು. ಒಂದು ವರ್ಷದ ಮಗು ಕೂಡಾ ಸತ್ತು ಬಿದ್ದಿತ್ತು. ಮನೆಯಲ್ಲೆಲ್ಲಾ ಹೊರಳಾಡಿದ ದೃಶ್ಯ ಕಾಣುತ್ತಿತ್ತು.ಹಾಗೆ ಸಾಯುವುದಕ್ಕಿಂತ ಮುನ್ನ ಆತ ಫೋಟೋ ಇರಿಸಿ ಪೂಜೆ ಮಾಡಿದ್ದ ಎನ್ನುವುದಕ್ಕೂ ಅಲ್ಲಿ ಪುರಾವೆ ಇತ್ತು. ಆ ಬಳಿಕ ದಂಪತಿಗಳು ಹಸುಳೆ ಸಹಿತ ಸತ್ತು ಕೊಂಡಿದ್ದಾರೆ ಎಂಬುದು ಎಫ್‌ಐ‌ಆರ್. ಇಲ್ಲಿ ದಂಪತಿಗಳು ತೀರ್ಮಾನಿಸಿಯೇ ಈ ನಿರ್ಧಾರ ಕೈಗೊಂಡಿದ್ದಾರಾ ಅಥವಾ ಪತ್ನಿಗೆ ಬಲಾತ್ಕಾರವಾಗಿ ವಿಷ ಉಣಿಸಿದ್ದಾನಾ ಅನ್ನುವದಕ್ಕೂ ಮುನ್ನ ಆತನ ನಿರ್ಧಾರ ಮೊದಲೇ ಆಗಿತ್ತು.ಏಕೆಂದರೆ ಆತ ದಿನಕ್ಕೂ ಮುನ್ನ ಆಸುಪಾಸಿನ ಮನೆಗಳಿಗೆ ಭೇಟಿ ನೀಡಿದ್ದ , ಸಂಬಧಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದ , ತನ್ನ ಸಹೋದರನ್ನು ಮರುದಿನ ಬೆಳಗ್ಗೆ ಬರಲೂ ಹೇಳಿದ್ದ. ಹಾಗಗಿ ಆತನದ್ದು ಪೂರ್ವಯೋಜಿತವೇ ಅಂತ ತಿಳಿಯುತ್ತದೆ. ಆದರೆ ಆ ಮುಗ್ದ ಮಗು..?. ಅದೃಷ್ಠವಶಾತ್ ಇನ್ನಿಬ್ಬರು ಮಕ್ಕಳು ಅಜ್ಜಿ ಮನೆಗೆ ಹೋದ ಕಾರಣ ಬದುಕುಳಿದಿದ್ದಾರೆ. ಇಂತಹ ಸಾವಿಗೆ ಕಾರಣ ಅನಾರೋಗ್ಯ..!!. ಅದು ಒಂದೇ ಕಾರಣ ಆಗಿರಲಾರದು ಬಹುಶ: ಆರ್ಥಿಕ ಮುಗ್ಗಟ್ಟು ಕೂಡಾ ಇರಬಹುದು ಅಂತ ಸ್ಥಳೀಯರು ಹೇಳಿಕೊಳ್ಳುತ್ತಾರೆ. ಆದರೆ ಆ 3 ಜೀವಗಳು ಇನ್ನಿಲ್ಲವಾಗಿದೆ. ಇದು ಒಂದು ಕುಟುಂಬದ ಆತ್ಮಹತ್ಯೆ ಪ್ರಕರಣ...

ಬದುಕು ಭಾರವಾದಾಗ ಹೀಗೂ ಅಂತ್ಯವಾಗಬಹುದು.... ಇಂತಹ ಬಹುತೇಕ ಪ್ರಕರಣಗಳಲ್ಲಿ ಅದೆಲ್ಲವೂ ಒಂದು ಕ್ಷಣದ ನಿರ್ಧಾರ. ಆದರೆ ಕೆಲವೊಮ್ಮೆ ಅದು ಪೂರ್ವಯೋಜಿತವೂ ಆಗಿರುತ್ತದೆ......... ಎಂದು ಅದೇ ಗುಂಗಿನಲ್ಲಿರುವಗ ಸುದ್ದಿಯೊಂದು ಬರುತ್ತಿತ್ತು. ಅದೆಲ್ಲೋ ನಗರದಲ್ಲಿ ದಯಾ ಮರಣಕ್ಕೆ ಅರ್ಜಿ ಹಾಕ್ತಿದ್ದಾರಂತೆ ಅದಕ್ಕಾಗಿ ಕೋರ್ಟ್‌ಗೂ ಹೋಗ್ತಾರಂತೆ. ಇದೂ ಒಂದರ್ಥದಲ್ಲಿ ಆತ್ಮಹತ್ಯೆ. ಇಲ್ಲೂ ಒಂದು ಕಾರಣವಿದೆ. “ಬದುಕು ಬೇಡ”ವೆನಿಸಿದೆ. ಕಾರಣ ವಯಸ್ಸಾಗಿದೆ..... ಯಾರಿಗೂ ಹೊರೆಯಾಗಬರದು ಎನ್ನುವುದು ಇವರ ನಿರ್ಧಾರ.. ಕೆಲ ಸಮಯದ ಹಿಂದೆ ಮತ್ತೊಂದು ಸುದ್ದಿಯಿತ್ತು. ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬ “ನನಗೂ ಸಾವು ಬೇಕು” ಅಂದಿದ್ದ ಆದರೆ ಆತನಿಗೂ ಇಚ್ಚಿಸಿದ ಸಾವುಸಿಕ್ಕಿಲ್ಲ.

ಈ ಜೀವ ಸಾವನ್ನು ಏಕೆ ಇಚ್ಚಿಸುತ್ತದೆ...?. “ಆತ್ಮ” ಏಕೆ “ಹತ್ಯೆ” ಮಾಡಿಕೊಳ್ಳಬೇಕು ಅಂತ ಯೋಚಿಸುತ್ತೆ. ಒಂದೋ ಸಮಾಜಕ್ಕೆ ಹೆದರಿ..... ಜೀವನಕ್ಕೆ ಹೆದರಿ.... ಸಮಸ್ಯೆಗೆ ಸೋತು..... ಇವೆಷ್ಟೇ ಕಾರಣ ಮೇಲ್ನೋಟಕ್ಕೆ ಕಾಣುತ್ತದೆ. ಇದು ನಾಳೆ ಯಾರ ಬದುಕಿನಲಿ ಬರೋದಿಲ್ಲ ಅನ್ನೋ ಗ್ಯಾರಂಟಿ ಏನು..?.ಯಾಕೆಂದ್ರೆ ಇಂದು ಅತ್ಯಂತ ಸಂತೋಷದಿಂದ ಸಮಾತನಾಡಿದ ವ್ಯಕ್ತಿ, ಧೈರ್ಯದಿಂದಿದ್ದ ವ್ಯಕ್ತಿ ಯಾವುದೋ ಕ್ಷುಲ್ಲಕ ಕಾರಣಕ್ಕಾಗಿ ಬದುಕಿಗೆ ಅಂತ್ಯ ಹಾಡುತ್ತಾನೆ. ಅಂತಹ ಅದೆಷ್ಟೋ ಘಟನೆಗಳು ಇಲ್ಲಿ ನಡೆದಿದೆ.ಅದಕ್ಕೆಲ್ಲಾ ಕಾರಣ ಮೇಲಿನ ೩ ರಲ್ಲಿ ಯಾವುದಾರೊಂದು..!!

ಬದುಕೆನ್ನುವುದು ಒಂದು ಪ್ರಯೋಗ ಶಾಲೆಯಂತೆ ಎಂದು ಹೇಳುತ್ತಿದ್ದರು ಹಿರಿಯರು.ಇಲ್ಲಿ ಎಲ್ಲ ಪ್ರಯೋಗಗಳು ನಡೆಯಬೇಕು. ಅಂತಹ ಪ್ರಯೋಗಗಳು ನಡೆಯುತ್ತಲೇ ಇರುವಾಗ ಕೆಲವೊಮ್ಮೆ “ನಮ್ಮ ಸತ್ಯ”ಗಳೂ ನಮಗೆ ಮುಳುವಾಗಬಹುದು , ವಿಶಾಲ, ತೆರೆದ ಹೃದಯವೂ ನಮ್ಮ ಹಿನ್ನಡೆಗೆ ಕಾರಣವಾಗಬಹುದು.. ಒಂದರ್ಥದಲ್ಲಿ ಶಸ್ತ್ರ ರಹಿತ ಯುದ್ದದಂತೆ..... ಆದರೆ ಈ ಪ್ರಯೋಗ ಶಾಲೆಯಲ್ಲಿ ನಡೆಯುವ ಒಂದೊಂದು ಪ್ರಯೋಗಗಳೂ ಹೊಸತೊಂದು “ರಿಸಲ್ಟ್ “ ಕೊಡುತ್ತವೆ. ಹಾಗಗಿ ಆ ರಿಸಲ್ಟ್‌ಗಳ ಆಧಾರದಲ್ಲಿ ಬದುಕನ್ನು ರೂಪಿಸುತ್ತಾ ಬೆಳೆಯಬೇಕು ಅಂತ ಎಲ್ಲೋ ಓದಿದ ಮತ್ತು ಇನ್ನೂ ಕೆಲವರ ಅನುವಭದ ಮಾತು. ಆದರೆ ಇಂದು ಈ ಪ್ರಯೋಗ ಶಾಲೆಯಲ್ಲಿ ಕ್ಷಣಿಕ ಸುಖದ ಬಗ್ಗೆ ಯೋಚಿಸುವ ಜನ ಹೆಚ್ಚಿದ್ದಾರೆ. ಹಾಗಾಗಿ ಯಾವುದೇ ಪ್ರಯೋಗಗಳಾದರೂ ಅದರ ರಿಸಲ್ಟ್ ಕೂಡಾ ಕ್ಷಣದಲ್ಲೇ ಸಿಗಬೇಕು ಮತ್ತು ಹೇಳಬೇಕು. ಮತ್ತು ಆ ರಿಸಲ್ಟ್ ಗೆಲುವೇ ಆಗಬೇಕು ಎನ್ನುವ ನಿರ್ಧಾರ ಮಾನಸಿಕವಾಗಿರುತ್ತದೆ. ಕೆಲವೊಮ್ಮೆ ಅಂತಹ ಯೋಚನೆಗಳೇ ನಮ್ಮನ್ನು ದಾರಿ ತಪ್ಪಿಸಿ ಬಿಡುತ್ತವೆ. ಆಗ ಯೋಚನೆಯ ದಾರಿಯೂ ತಪ್ಪಿಬಿಡುತ್ತದೆ. ಹಾಗಗಿ ಇಂದು ಪ್ರಯೋಗ ಶಾಲೆಯಲ್ಲಿ ಯಾವಗಲೂ ಗೆಲುವಾಗುತ್ತದೆ ಎನ್ನವ ಭ್ರಮೆಯಲ್ಲಿರದೆ ಸೋಲೂ ಇರುತ್ತದೆ ಎನ್ನುವ ವಾಸ್ತವವನ್ನು ಅರಿತು ಆ ಸೋಲೇ “ಸವಾಲಾದಾಗ” ಮುಂದೆ ಗೆಲುವು ಇದ್ದೇ ಇರುತ್ತದೆ ಎನ್ನುವ ಮನಸ್ಥಿತಿ ಬರಬೇಕು......

ಹಾಗಗಿ ಆತ್ಮಹತ್ಯೆ.. ಮತ್ತು ಸಾವಿಗಾಗಿ ಅರ್ಜಿ ಹಾಕುವುದು ಬಿಟ್ಟು ಸಾವು ಬರುವವರೆಗೆ ಸಾಧಿಸುವುದು ಒಳ್ಳೆಯದಲ್ವೇ.....?.

07 ಮೇ 2009

ಸತ್ಯವು ಕಹಿಯಂತೆ....

ನಾವು ಅಂದುಕೊಂಡಂತೆ ಜಗತ್ತು ಇರುವುದಿಲ್ಲ. ಹಾಗೆಂದು ಯೋಚಿಸುವುದು ಕೂಡಾ ತಪ್ಪು ಅಂತ ನನ್ನ ಮಿತ್ರನೊಬ್ಬ ಹೇಳುತ್ತಾ ಇರುತ್ತಿದ್ದ . ಅದು ಹೌದು ಕೂಡಾ. ಅಂತಹ ಅದೆಷ್ಟೂ ಘಟನೆಗಳು ನಮ್ಮ ಮುಂದೆಯೇ ನಡೆಯುತ್ತದೆ. ಆದರೂ ನಾವು ಆ ಬಗ್ಗೆ ಯೋಚಿಸುವುದಿಲ್ಲ . ಆದರೆ ಅದು ನಮಗೇ ಅನುಭವಾದಾಗ ಮಾತ್ರಾ ಅರಿವಾಗುತ್ತದೆ.

ಇತ್ತೀಚೆಗೆ ಒಬ್ಬ ವೈದ್ಯರೊಬ್ಬರು ನಮ್ಮನ್ನು ಹುಡುಕಿಕೊಂಡು ಬಂದಿದ್ದರು...ಬಳಿಕ ಅವರು ವಿವರಿಸಿದ ಕತೆ ಹೀಗಿದೆ. ಅದಕ್ಕೂ ಮೊದಲು ಇದರ ಸಾರಾಂಶ ಹೀಗಿದೆ. ಸತ್ಯ ಹೇಳಬಾರದು.. ಸತ್ಯ ಹೇಳಿದರೆ ಅದನು ಜಗತ್ತು ಮತ್ತು ವ್ಯಕ್ತಿಗಳು ಒಪ್ಪುವುದಿಲ್ಲ.. ಸುಳ್ಳೇ ಹೇಳಬೇಕು.. ಎನ್ನುವುದು ಇದರ ಮೊದಲ ಪ್ಯಾರಾ...

ಅವರು ಒಂದು ಪುಸ್ತಕ ಬರೆದಿದ್ದರು. ಅದರಲಿ ಕೆಲ ವಿಚಾರಗಳು ನೇರವಾಗಿದ್ದವು ಮತ್ತು ವಾಸ್ತವವನ್ನು ಬಿಂಬಿಸುತ್ತಿದ್ದವು. ಇದು ಬಿಡುಗಡೆಯಾದ್ದೇ ತಡ. ಹಿರಿಯರಿಂದ ಬಂತು ಕಿರಿ ಕಿರಿ.. ಹಾಗಾಗಿ ಕ್ಷಮೆಯನ್ನು ಕೇಳಿದರು.. ನಂತರ ಯೋಚಿಸಿದ ಅವರು ಮಾತನಾಡಿದ್ದು ಹೀಗೆ.. ಈ ಸಮಾಜ ಹೀಗೂ ಇರುತ್ತೆ.. ಆ ಪುಸ್ತಕದಲ್ಲಿ ನಾನು ಸತ್ಯವನ್ನು ಪ್ರತಿಪಾದಿಸಿದೆ.. ಜಗತ್ತು ಸತ್ಯವನ್ನು ಹೇಳಬೇಕು ಅಂತ ಹೇಳುತ್ತೆ.... ಹಾಗೆ ಒಂದು ವೇಳೆ ಸತ್ಯವನ್ನೇ ಬರೆದರೆ ಇಡೀ ಜಗತ್ತು ಒಂದಾಗಿ ಕ್ಷಮೆ ಕೇಳಬೇಕು ಅಂತಲೂ ಒತ್ತಾಯಿಸುತ್ತದೆ ಎನ್ನುತ್ತಾ ಮಾತನ್ನು ಮುಂದುವರಿಸುತ್ತಾರೆ...ಇದು ಯುವ ಸಾಹಿತಿಯೊಬ್ಬರ ಮಾತು ಕೂಡಾ ಹೌದು.. ಇದೆಂಥಾ ವಿಪರ್ಯಾಸ ಎಂದು ಅವರು ಹಲುಬುತ್ತಿದ್ದರು...

ಆದರೆ ನಿಜಕ್ಕೂ ಇಂದು ಜಗತ್ತು ಸತ್ಯವನ್ನು ಒಪ್ಪಿಕೊಳ್ಳುತ್ತಿಲ್ಲ. ಮತ್ತು ಅದು ಕಹಿಯೂ ಆಗುತ್ತೆ.. ಅದು ಪಥ್ಯವೂ ಆಗುವುದಿಲ್ಲ.. ನಾನು ಕೂಡಾ ವೈದ್ಯರ ಆ ಮಾತನ್ನು ನನ್ನ ಇದುವರೆಗಿನ ಬದುಕಿನ ಅನಭವದ ಆಧಾರದಲ್ಲಿ ಕೊನೆಗೆ ಒಪ್ಪಿಕೊಂಡೆ... ಇಲ್ಲಿ ಅನುಭವ ಹಾಗೂ ಮುಕ್ತವಾದ ಸತ್ಯ ಮುಖ್ಯವಾಗುವುದಿಲ್ಲ... ಮುಕ್ತವಾದ ಮನ .. ಬರಹ ಮುಖ್ಯವಾಗುವುದಿಲ್ಲ... ಇಲ್ಲಿ ಮುಖ್ಯವಾಗುವುದು ಮನೆ.. ಹಣ... ಅಂತಸ್ತು... ಅಧಿಕಾರ... ಮತ್ತು.. ದರ್ಪ.. ಹಾಗಾಗಿ ವೈದ್ಯರು ಹೇಳುತ್ತಿದ್ದರು ಇಲ್ಲಿ ಸಜ್ಜನಿಕೆಗೆ.. ನಿರ್ಮಲ ಮನಸ್ಸಿಗೆ , ಬೆಳೆಯುವ ಮನಸ್ಸುಗಳಿಗೆ ಅವಕಾಶವಿಲ್ಲ ಅಂತ.ಆದರೂ ಮತ್ತೆ ಮಾತನಾಡುತ್ತಾ....... ನಾವು ಸತ್ಯದ ಪ್ರತಿಪಾದನೆಯಿಂದ ಬರುವ ಮಾತುಗಳನ್ನು ಕೇಳಿ ಸುಳ್ಳನ್ನು ಪ್ರತಿಪಾದನೆ ತೊಡಗುವುದರಿಂದ ಯಾವುದೇ ಪ್ರಯೋಜನವಿಲ್ಲ.... ನಾವು ಬೆಳೆಯುತ್ತಾ ಟೀಕಿಸುವವರಿಗೆ ಮತ್ತು ನಮ್ಮನ್ನು ಇಷ್ಟಪಡದವರಿಗೆ ಅಸೂಯೆಯಾಗುವಂತೆ ಬರೆಯಬೇಕು ಮತ್ತು ಬದುಕಬೇಕು..... ಅಂತ ಹೇಳಿದ್ದು ನಿಜಕ್ಕೂ ಹೊಸತೊಂದು ತಿರುವು ಕಂಡಿತು.. ಒಂದು ಸುದ್ದಿಯೂ ಆಯಿತು...

03 ಮೇ 2009

ಹೃದಯ ತೆರೆದಾಗ. . . .




ಅನೇಕ ದಿನಗಳಿಂದ ನಾಳೆಯ ಬಗ್ಗೆ ಮನಸ್ಸಿನೊಳಗೇ ಸುತ್ತಾಡುತ್ತಿದ್ದ ಹಲವು ಯೋಚನೆಗಳು , ಯೋಜನೆಗಳನ್ನು, ಕೇವಲ 15 ನಿಮಿಷದಲ್ಲಿ ನಿರ್ಭಯವಾಗಿ ,ನಿಸ್ಸಂಕೋಚವಾಗಿ ,ಯಾವುದೇ ಮುಜುಗರವಿಲ್ಲದೇ ಹೇಳಿಕೊಂಡಾಗ ಮನಸೆಷ್ಟು ಹಗುರವಾಗಿ ಬಿಡುತ್ತದೆ...!! ಆ ಬಳಿಕ ಮನಸ್ಸಿಗೆ ಏನೋ ಉಲ್ಲಾಸ .... ಅದರೆ ಅದು ಕೇವಲ 15 ನಿಮಿಷದಲ್ಲಿ ಮುಗಿದು ಹೋಗುವಂತದ್ದಲ್ಲ.. ಅದರ ಪ್ರೋಸೆಸ್ ದೀರ್ಘ ಕಾಲ... ಏಕೆಂದರೆ ಈ ಬದುಕು 3 ದಿನವಾದರೂ ಅದರೊಂದಿಗಿರುವ ಸಮಯ ಹೆಚ್ಚಿದೆಯಲ್ಲಾ.. ಆದರೂ ಮತ್ತೆ ಮನಸ್ಸಿನೊಳಗೆ ಒಮ್ಮೆ ಕಾಡಿತ್ತು.. ಬದುಕಿನ ಪುಟಗಳನ್ನು ತೆರೆದಿಡಬೇಕಿತ್ತಾ..? ಮನಸ್ಸು ಮತ್ತೆ ಹೇಳಿತ್ತು... ಆ ಪುಟಗಳು ಮುಂದಿನ ದಾರಿಗೆ ರಹದಾರಿಯಾಗಬಲ್ಲದು... ಹಾಗಾಗಿ
ಅದು ಅನಿವಾರ್ಯ ಮತ್ತು ಆ ಪುಟಗಳು ಮುಂದಿನ ದಾರಿಯನ್ನು ನಿರ್ಧರಿಸಬಲ್ಲುದು , ನಾಳೆ ಮನಸ್ಸು ಇನ್ನಷ್ಟು ಹಗುರವಾಗಲು ಕಾರಣವಾಗಬಹುದು ಎಂಬ ಯೋಚನೆ ನಂದು. ಹಾಗಾಗಿ ಬದುಕಿನ ಹಿಂದಿನ ಪುಟಗಳು ಎಳೆ ಎಳೆಯಾಗಿ ತೆರೆಯುತ್ತಾ ಸಾಗಿದಂತೆ ಮನಸ್ಸಿಗೆ ಖುಶಿಯಾಯಿತು. ಆ ಪುಟಗಳು ಮಾಸಿರಲಿಲ್ಲ.. ಒಂದೊಂದು ಪುಟವೂ ನನಗೆ ಮತ್ತೆ ಉತ್ಸಾಹವನ್ನು ನೀಡುವಂತಿತ್ತು.. ಮತ್ತೆ ಬಾಲ್ಯವನ್ನು ನೆನಪಿಸಿ, ಈಗಿನ ವರೆಗಿನ ಬದುಕನ್ನು ನೆನಪಿಸಿ ಬಿಟ್ಟಿತು. ಹಾಗಾಗಿ ಮನಸ್ಸು ಕೂಡಾ ಹಗುರವಾಗಿತ್ತು.

ಈ ಹೃದಯವನ್ನು ಮತ್ತು ಅದರೊಳಗಿನ ಪುಟವನ್ನು ತೆರೆಯಲೂ ಕಾರಣವಿತ್ತು..ಕಾರಣವಿಲ್ಲದೆ ಅದೆಲ್ಲವನ್ನೂ ನೆನಪಿಸಿಕೊಂಡಿರಲಿಲ್ಲ. ಬದುಕಿನ ಒಂದು ಹಂತದ ಗಡಿಯನ್ನು ದಾಟಿ ಇನ್ನಷ್ಟು "ಜವಾವ್ದಾರಿ"ಯ ಕಾಲ ಘಟ್ಟಕ್ಕೆ ಬಂದಾಗ ಹಿಂದಿನ ದಾರಿ ಮತ್ತು ಮುಂದಿನ ಗುರಿ ಮತ್ತು ಅದೆರೆಡೆಗಿನ ದಾರಿಯನ್ನು ಯೋಚಿಸಬೇಕು ಎಂಬ ಕಾರಣಕ್ಕೆ ಬದುಕಿನ ಪುಟವನ್ನು ತೆರೆಯಬೇಕಾಯಿತು.

ಆದರೆ ಆ ಪುಟಗಳಲ್ಲಿರುವ ವಿಚಾರವು ಮತ್ತು ಹೃದಯದ ಒಳಗಿನ ಸಂಗತಿಯು "ಸ್ವಗತ"ವಾಗಿಲ್ಲ... ಕೇಳುವ ಹತ್ತು ಮನಸ್ಸಿತ್ತು..... ಹಾಗಾಗಿ "ನನಗಂತೂ ಖುಷಿ"ಯಾಗಿತ್ತು.. ಮನಸ್ಸು ಹಗುರವಾಗಿತ್ತು.... ನನ್ನ ದೈನಂದಿನ ಕೆಲಸಕ್ಕೆ ಇನ್ನಷ್ಟು ಹುರುಪು ಬಂದಿದೆ... ಏಕೆಂದರೆ ತೊಳಲಾಟವಿಲ್ಲ......

20 ಏಪ್ರಿಲ್ 2009

ಅಫಘಾತ ಮತ್ತು ಮಾನವೀಯತೆ. . .

ಇಂದು ಮನೆಯ ದಾರಿಯತ್ತ ಬರುತ್ತಿರಬೇಕಾದರೆ ಸಕತ್ತಲು ಆವರಿಸಿತ್ತು.ಒಂದೆಡೆ ವಾಹನಗಳು ಸಾಲು ನಿಂತಿದ್ದವು. ಅವುಗಳನ್ನು ದಾಟಿ ಮುಂದಕ್ಕೆ ಬಂದಾಗ ಅಲ್ಲೊಂದು ಬೈಕ್ ಮಗುಚಿ ಬಿದ್ದಿತ್ತು.. ಯುವಕನೊಬ್ಬ ಅಲ್ಲೇ ಪಕ್ಕದಲ್ಲಿ ಬಿದ್ದಿದ್ದ. ಆಚೀಚೆ ನೋಡಿದಾಗ ಅಲ್ಲಿ ಯಾರೊಬ್ಬರೂ ಸುಳಿದಾಡುವುದು ಕಂಡುಬಂದಿರಲಿಲ್ಲ.ಪಕ್ಕದಲ್ಲಿ ಇನ್ನೊಬ್ಬ ಗಾಯಗಳೊಂದಿಗೆ ಸುಮ್ಮನೆ ನಿಂತಿದ್ದ .ವಾಹನಗಳ ಸಾಲು ಹೆಚ್ಚಿತು. ಒಬ್ಬೊಬ್ಬರೇ ಬಂದಿಳಿದು ನೋಡಿದಾಗ ಒಬ್ಬ ಅಂದ ಇವನ ನನಗೆ ಗುರುತಿದೆ.. ತಕ್ಷಣ ಆ ಯುವಕನ ಮೇಲೆತ್ತುವ ಪ್ರಯತ್ನ ನಡೆಯಿತು.ಮುಖ ತುಂಬಾ ಗಾಯಗಳಾಗಿತ್ತು. ಮತ್ತೆ ಮತ್ತೆ ವಿಚಾರಿಸಿದಾಗ ಆತ ಅಮಲು ಸೇವಿಸಿ ವಾಹನ ಚಲಾಯಿಸುತ್ತಿದ್ದ ವಿಷಯ ತಿಳಿಯಿತು.. ಹಾಗಾಗಿ ಒಬೊಬ್ಬರೇ ಹೊರಟರು.ಇನ್ನೊಬ್ಬರು ವಾಹನ ಗೊತ್ತು ಪಡಿಸಿ ಆಸ್ಪತ್ರೆಗೆ ಕೊಂಡೊಯ್ಯಲು ಹೋದರು. ನಿಜವಾಗೂ ಅವರು ಹೋಗಬೇಕಾದ ದಾರಿ ಅದಾಗಿರಲಿಲ್ಲ. ಕುಡಿತದ ಅಮಲಿನಲಿ ಅವರು ಈ ದಾರಿಯಾಗಿ ಬಂದಿದ್ದರು.

ಈ ಘಟನೆಯ ನಂತರ ದಾರಿಯಲ್ಲಿ ಬರುವಾಗ ನೆನಪಾದ ಒಂದು ಘಟನೆ ..

ಒಂದು ಕಡೆ ದಂಪತಿಗಳು ಕಾರ್ಯಕ್ರಮವೊಂದಕ್ಕೆ ಹೊರಟಿದ್ದರು. ಅವರ ವಾಹನ ಹೆದ್ದಾರಿ ತಲಪಿ ಅಲ್ಲಿಂದ ಮುಂದೆ ಸಾಗುತ್ತಿತ್ತು. ಈ ರಕ್ಕಸ ಲಾರಿಗಳಿಗೆ ಜೀವಗಳ ಬೆಲೆಗೊತ್ತಿಲ್ಲ ಅದರ ಚಾಲಕರೂ ಹಾಗೆ ಯಾವಾಗಲೂ ಕುಡಿಯುತ್ತಲೇ ವಾಹನ ಚಲಾಯಿಸುವುದು ಎನ್ನುವ ರೂಢಿಯೂ ಇದೆ.ಇಲ್ಲಿ ಅದೇ ಆಯಿತು. ವಾಹನಕ್ಕೆ ಲಾರಿ ಡಿಕ್ಕಿ ಹೊಡೆಯಿತು. ಅದರಲ್ಲಿದ್ದ ಇಬ್ಬರಿಗೂ ಗಾಯವಾಯಿತು.. ಹೆಂಡತಿ ವಾಹನದ ಅಡಿಯಲ್ಲಿ ಸಿಲುಕಿ ಚೀರಾಡುತ್ತಿದ್ದಾಳೆ.. ಗಂಡ ತೀವ್ರ ಗಾಯಗೊಂಡು ದೂರದಲ್ಲಿ ಬಿದ್ದಿದ್ದಾನೆ.. ಹೆಂಡತಿಯನ್ನು ರಕ್ಷಿಸಲಾಗದೆ ತೊಳಲಾಡುತ್ತಿದ್ದಾನೆ.. ಸಹಾಯಕ್ಕೆ ಕರೆದರೆ ಯಾರೊಬ್ಬರೂ ಬರುತ್ತಿಲ್ಲ.ಕಣ್ಣೆದುರೇ ಹೆಂಡತಿ ಸತ್ತು ಹೋದಳು..

ಇನ್ನೊಂದು ಘಟನೆ..

ಅವರು ತುರ್ತು ಕಾರ್ಯ ನಿಮಿತ್ತ ಬೆಂಗಳೂರಿಗೆ ರಾತ್ರಿ ತೆರಳಿದ್ದರು. ಒಂದೆಡೆ ವಾಹನದ ಚಾಲಕ ತೂಕಡಿಸಿದ ಕ್ಷಣಾರ್ಧದಲ್ಲಿ ವಾಹನ ಮರಕ್ಕೆ ಡಿಕ್ಕಿ ಹೊಡೆಯಿತು. ಅದರಲ್ಲಿದ್ದ ಒಂದಿಬ್ಬರಿಗೆ ತೀವ್ರ ಗಾಯವಾಯಿತು.ಅದು ರಾತ್ರಿ ವೇಳೆ ಬೇರೆ ಯಾವುದೇ ಒಂದು ವಾಹನ ನಿಲ್ಲಿಸಿಲ್ಲ. ವಾಹನದಲ್ಲಿದ್ದ ಸಣ್ಣ ಪುಟ್ಟ ಗಾಯಳುಗಳೂ ರಸ್ತೆಯಲ್ಲಿ ಸಾಗುತ್ತಿದ್ದ ವಾಹನ ನಿಲ್ಲಿಸಿ ಗಂಭೀರ ಗಾಯಗೊಂಡವರನ್ನು ಆಸ್ಪತ್ರೆಗೆ ಸೇರಿಸುವುದಕ್ಕಾಗಿ ಹೆಣಗಾಡಿದರು.ಯಾವುದೊಂದು ವಾಹನವೂ ನಿಲ್ಲಿಸಿಲ್ಲ. ಹಾಗಾಗಿ ಸಕಾಲ ಚಿಕಿತ್ಸೆ ಕೊಡಿಸಲಾಗದೆ ಇಬ್ಬರು ಕಣ್ಣಮುಂದೆಯೇ ಸತ್ತು ಹೋದರು..

ಇವೆರಡು ಅಪಘಾತದ ಸ್ಯಾಂಪಲ್‌ಗಳು. ವಾಹನದಲ್ಲಿ ವೇಗವಾಗಿ ಹೋಗುವಾಗ ನಮಗೆ ಆನಂದವೋ ಆನಂದ .. ಆದರೆ ಅಲ್ಲೇನಾದರೂ ಆಕಸ್ಮಿಕ ನಡೆದರೆ ನಮ್ಮನ್ನು ನೋಡುವ ಜನರೇ ಇಲ್ಲ.ಎಲ್ಲಾದರೂ ನಮ್ಮ ಪರಿಚಿತರಿದ್ದರೆ ಬದುಕುಳಿಯ ಬಲ್ಲುದೋ ಏನೋ.. ಹಾಗಾಗಿ ಒಂದು ಅಪಘಾತದಲ್ಲಿ ಗಾಯಗೊಂಡವರಿದ್ದರೆ ಅವರಿಗೆ ಮಾನವೀಯ ನೆಲೆಯಲ್ಲಿ ನಾವು ಸಹಾಯ ಮಾಡಬೇಕು.. ನಾಳಿನ ನಮ್ಮ ಚಿಂತೆಯಲ್ಲಿ.. ಅದಕ್ಕೂ ಮುನ್ನ ಅಪಘಾತವಾಗದಂತೆ ಎಚ್ಚರ ವಹಿಸುವುದು ಸೂಕ್ತ ಅಲ್ವಾ..

19 ಏಪ್ರಿಲ್ 2009

ಇದು ಬದುಕಿನ ಶಿಬಿರ. . .



ಯಾವತ್ತೂ ಭಾವನಾತ್ಮಕ ವಿಚಾರ ಬಂದಾಗ ಅದರಲ್ಲೂ ಮನಸ್ಸಿಗೆ ಸಂಬಂಧಿಸಿದ ವಿಚಾರಗಳು ಬಂದಾಗ ನಾನು ಸಂಪೂರ್ಣವಾಗಿ ಸಣ್ಣವನಾಗಿ ಬಿಡುತ್ತೇನೆ. ಆದರೆ ಇವತ್ತು ನಾನು ದಾಖಲಿಸುವ ವಿಚಾರದಲ್ಲಿ ಸಂಪೂರ್ಣವಾಗಿ ಸೋತು ಹೊಗಿದ್ದೆ ಮನಸ್ಸು ಮತ್ತೆ ಮತ್ತೆ ಅದೇ ವಿಚಾರವನ್ನು ನೆನಪಿಸುತ್ತಿದೆ... ನಾನೂ ಕೂಡಾ ಹಾಗಾಗಬೇಕು ಅಂತ ಹೇಳುತ್ತದೆ.. ಆದರೆ ಆ ಕಾಲ ಮಿಂಚಿದೆ ಎನ್ನುವ ಸತ್ಯವೂ ನನಗೆ ತಿಳಿದಿದೆ..

ಮಧ್ಯಾಹ್ನದ ಸಮಯ.... ಸುಳ್ಯದ ಕಡೆಗೆ ಹೋಗಿದ್ದವನು ರಂಗ ನಿರ್ದೇಶಕ ಜೀವನ್ ರಾಂ ನೇತೃತ್ವದಲ್ಲಿ ನಡೆಯುವ ಮಕ್ಕಳ ಶಿಬಿರ ಅಂದರೆ ಸಮ್ಮರ್ ಕ್ಯಾಂಪ್‌ಗೆ ಹೋಗಿದ್ದೆ. ಜೀವನ್ ಹಾಗೂ ಮಿತ್ರ ಗಂಗಾಧರ ಶಿಬಿರದ ಬಗ್ಗೆ ಒಂದು ವಾರದಿಂದ ಹೇಳುತ್ತಿದ್ದರು .. ಒಂದು ದಿನ ಬನ್ನಿ ಸ್ಟೋರಿಗಾಗಿ ಅಲ್ಲ.. ಹೀಗೇ ಸುಮ್ಮನೆ ಬನ್ನಿ ಅಂತ ಹೇಳಿದ್ದರು.. ಇತರ ಕೆಲಸಗಳ ಮಧ್ಯೆ ಶಿಬಿರಕ್ಕೆ ಹೋಗಲು ಆಗಿರಲಿಲ್ಲ. ಹಾಗಾಗಿ ಕೊನೆಯ ದಿನ ಶಿಬಿರಕ್ಕೆ ಹೋದಾಗ ಅಲ್ಲಿ ಮಕ್ಕಳೆಲ್ಲಾ ಹಾಡಿ ಕುಣಿಯುತ್ತಿದ್ದರು.. ಅವರನ್ನು ನೋಡಿದಾಗ ಇದೇನು ಅಂತ ಅನ್ನಿಸಿತ್ತು.. ಆದರೆ ಜೀವನ್‌ರ ರಂಗಮನೆಯೊಳಗೆ ಹೋದ ಬಳಿಕ ಅಲ್ಲಿ ಜೀವನ್‌ರೊಂದಿಗೆ ಮಕ್ಕಳು ಹೆಜ್ಜೆ ಹಾಕಲು ಆರಂಭಿಸಿದಾಗ ನಿಜಕ್ಕೂ ನನ್ನ ಮನಸ್ಸು ಪುಳಕಿತಗೊಂಡಿತು... ಯಾಕೆಂದರೆ ನಾನು ಹಲವು ಶಿಬಿರಗಳಿಗೆ ಹೋಗಿದ್ದೆ ಅಲ್ಲೆಲ್ಲಾ ಕಾಣದ ಸಂಗತಿಗಳು ಕಂಡಿದೆ .. ಮತ್ತೂ ಸ್ವಲ್ಪ ಹೊತ್ತು ಕಳೆದಾಗ ಮಕ್ಕಳ ಕ್ರಿಯಾಶೀಲತೆಯನ್ನು ನೋಡಿ ನನ್ನ ಮನಸ್ಸು ನಿಜಕ್ಕೂ ಸೋತಿತು.. ನನ್ನ ಕಲ್ಪನೆಗೂ ಮೀರಿದ ಸಂತೋಷವನ್ನು ಆ ಶಿಬಿರದಲ್ಲಿ ಕಂಡಿದ್ದೆವು... ಒಟ್ಟು ೧೦೦ ಕ್ಕೂ ಅಧಿಕ ಮಕ್ಕಳ ಕೇಕೆ .. ಹಾಡು.. ವಿವಿಧ ಮುಖವರ್ಣಿಕೆಗಳ ತಯಾರಿ.. ನಾಟಕ .. ಹೀಗೆ ಎಲ್ಲದರಲ್ಲೂ ಅವರು ಎತ್ತಿದ ಕೈ..

ಇಲ್ಲಿ ನಾನು ಗಮನಿಸಿದಂತೆ , ಮಕ್ಕಳಿಗೆ ಸ್ವಾತಂತ್ರ್ಯ ಸಿಕ್ಕಿದೆ.. ಹಾಗಾಗಿ ಅವರೊಳಗಿರುವ ಕಲ್ಪನೆಗೆ , ಚಿಂತನೆಗೆ ರೂಪ ಸಿಕ್ಕಿದೆ.. ಆ ಕಾರಣದಿಂದಾಗಿಯೇ ಮಕ್ಕಳು ಅಷ್ಟೊಂದು ಕ್ರಿಯಾಶೀಲರಾಗಲು ಕಾರಣ.. ಅಸೂಯೆಯಾಗಬೇಕು ಅಂತಹ ಅಧ್ಘುತವಾದ ಪ್ರತಿಭೆ ಆ ಮಕ್ಕಳಲ್ಲಿದೆ.. ಯಾರನ್ನೇ ಅಲ್ಲಿ ಕೇಳಿದರೆ.. ಹೇಗೆ ಬೇಕಾದರೂ ಮಾತನಾಡಬಲ್ಲರು.. ವೇದಿಕೆಯಲ್ಲಿ ಪಟ ಪಟನೆ ಮಾತನಾಡುತ್ತಾರೆ.. ನಿಜಕ್ಕೂ ನಮಗೆ ನಾಚಿಕೆಯಾಗಬೇಕು.. ಇಂದಿಗೂ ವೇದಿಕೆಯಲ್ಲಿ ಮಾತನಾಡುವಾಗ ಹಿಂದೆ ಮುಂದೆ ನೋಡಬೇಕಾಗುತ್ತದೆ.. ಆದರೆ ಆ ಮಕ್ಕಳು..!!
ಜೀವನ್ ಅಲ್ಲೊಂದು ಸ್ಲೋಗನ್ ಹಾಕಿದ್ದರು “ ಯಾವ ಮಗು ಕೂಡಾ ದಡ್ಡನಲ್ಲ.. ಎಲ್ಲಾ ಮಗುವಿನಲ್ಲೂ ಪ್ರತಿಭೆಯಿದೆ..” ಬಹುಶ: ಅಲ್ಲಿ ಸೇರಿದ್ದ ಎಲ್ಲಾ ಮಕ್ಕಳ ಮನಸ್ಸಿಗೆ ಈ ಮಾತು ಚೈತನ್ಯ ತುಂಬಿರಬೇಕು... ಇಲ್ಲಿ ಜೀವನ್ ಉಚಿತವಾಗಿ ಈ ಶಿಬಿರವನ್ನು ಮಾಡುತ್ತಿಲ್ಲ . ಏಕೆಂದರೆ ಶಿಬಿರ ಎಂದಾಕ್ಷಣ ಖರ್ಚು ಇದ್ದೇ ಇದೆ.ಹಾಗಾಗಿ ಹೊರೆಯಾಗದಂತೆ ಶುಲ್ಕವನ್ನೂ ಇರಿಸಿದ್ದಾರೆ.ಇಲ್ಲಿ ಹಣವಲ್ಲ ಆ ಮಕ್ಕಳ ಮನಸ್ಸಿನೊಳಗೊಂದು ಪರಿವರ್ತನೆ, ಆತ್ಮವಿಶ್ವಾಸ ತುಂಬುತ್ತಲ್ಲಾ ಅದಕ್ಕೆ ಏನು ಬೆಲೆ ಕಟ್ಟೋಣ ಹೇಳಿ..? ಹಾಗಾಗಿ ಶುಲ್ಕದ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ.. ಅದರ ಔಟ್‌ಪುಟ್ ಬಗ್ಗೆ ಮಾತ್ರಾ ಆಲೋಚಿಸಬೇಕಾಗಿದೆ.

ಯಾವತ್ತೂ ನನಗೆ ಮಕ್ಳಳ ಮನಸ್ಸು ಇಷ್ಟ. ಅಂತಹ ಮನಸ್ಸು ನಮಗೇಕೆ ಇಲ್ಲ.. ಎನ್ನುವ ಪ್ರಶ್ನೆ ನನ್ನನ್ನು ಯಾವಾಗಲೂ ಕಾಡುತ್ತಲೇ ಇದೆ. ಆ ಮುಗ್ದ ಮಕ್ಕಳ ಮಾತುಗಳು.. ಅವರ ಪ್ರಶ್ನೆಗಳು.. ಮಾತನಾಡಿದ ತಕ್ಷಣದಿಂದ ನಾವು “ ಮಾಮ” ನಾಗುವುದು.. ಛೇ..!! ಅದನ್ನೆಲ್ಲಾ ಹೇಗೆ ವಿವರಿಸುವುದು ..?. ನಾನು ನಿಜಕ್ಕೂ ತಡಮಾಡಿದ್ದೆ ಯಾಕೆಂದರೆ ಒಂದು ದಿನವಿಡೀ ಆ ಮಕ್ಕಳ ಜೊತೆ ಕಳೆಯಬೇಕಿತ್ತು.. ಯಾಕೆಂದರೆ ಅವರಿಂದ ಕಲಿಯುವುದು ಸಾಕಷ್ಠಿದೆ.. ಆ ಮಕ್ಕಳ ಮುಂದೆ ನಾವೇನೂ ಅಲ್ಲ... ನನ್ನ ಮನಸ್ಸು ಕೂಡಾ ಮಕ್ಕಳ ಮನಸ್ಸಿನಂತೆ ಒಂದು ದಿನ ಇರುತ್ತಿತ್ತು.. ಮುಂದಿನ ಬಾರಿ ಜೀವನ್‌ಗೆ ನೆನಪಿಸಬೇಕು.. ನಾನೂ ಒಬ್ಬ ಶಿಬಿರಾರ್ಥಿ...!!!....

ಕಲಿಯುವ ಹುಡುಗ.. ಮನಸ್ಸು ಬದಲಾಗಲಿ..

18 ಏಪ್ರಿಲ್ 2009

ಇದು ಶಕ್ತಿ..!!

ಒಂದು ಚಾಕೋಲೇಟ್ ಇಬ್ಬರ ನಡುವೆ ಫ್ರೆಂಡ್‌ಶಿಪ್‌ಗೂ ಕಾರಣವಾಗಬಲ್ಲುದು.. ದ್ವೇಷಕ್ಕೂ ಕಾರಣವಾಗಬಲ್ಲುದು.. ಇದು ಒಂದು ಸೂಕ್ಷ್ಮ ವಿಷಯ ಅಂತ ಅನಿಸಬಹುದು.ಆದರೆ ಇದರ ಒಳನೋಟಗಳು ಅಧ್ಘುತವಾಗಿದೆ.... ಈ ವಿಷಯದ ಒಳಹೋದರೆ ಎಂತಹಾ ಲೋಕವಿದೆ... ಅಂತ ಸುಮ್ಮನೆ ಯೋಚಿಸುತ್ತಾ ನೋಡಿ.. ಅಬ್ಬಾ....ಆ ಲೋಕ ಎಂತಹ ಸುಂದರ .... ಅದು ಎರಡು ಜೀವಗಳನ್ನು ಹೇಗೆ ಹಿಡಿದಿಡುತ್ತದೆ....

ಒಂದು ಮನೆಗೆ ಸುಮ್ಮನೆ ಬೇಟಿ.. ಅಲ್ಲಿ ಪುಟ್ಟ ಮಗು.. ತುಂಬಾ ಚೂಟಿ.. ಆದರೆ ಮಗು ಕರೆದರೆ ಹತ್ತಿರ ಬರುವುದಿಲ್ಲ.. ದೂgದಲ್ಲೇ ನಿಂತು ಮಾತನಾಡುತ್ತೆ.. ಆಗ ಒಂದು ಚಾಕೋಲೇಟ್ ಕಿಸೆಯಿಂದ ತೆಗೆಯಿರಿ.. .. ಮಗು ತಾನಾಗೇ ಬರುತ್ತದೆ .. ಹತ್ತಿರವಾಗುತ್ತದೆ.. ನಾಳೆಯೂ ನೆನಪಿಸಿಕೊಳ್ಳುತ್ತದೆ ಒಂದು ಬಾಂದವ್ಯ ಬೆಸೆಯುತ್ತದೆ.. ಇದಕ್ಕೆ ಕಾರಣವಾದ್ದು ಒಂದು ಚಾಕೋಲೇಟ್ ಮಾತ್ರಾ.. ಹಾಗೆಂದು ಇದು ಆಮಿಷವಲ್ಲ.. ಪ್ರೀತಿಯ ದ್ಯೋತಕ ಅಷ್ಟೇ..

ಬೇಡ ಅದಕ್ಕಿಂತ ಆಚೆ ಬನ್ನಿ .. ನಾನಿಂದು ಮಿತ್ರನ ಮನೆಗೆ ಬರುತ್ತೇನೆ ಅದೂ ಮಧ್ಯಾಹ್ನ ಊಟಕ್ಕೆ ನಿಮ್ಮಲ್ಲಿಗೆ ಅಂತ ಹೇಳಿ ನೋಡಿ.. ಕೆಲಸದ ನಿಮಿತ್ತ ತಡವಾಗಿರುತ್ತದೆ. ಆದರೆ ಆ ಮನೆಯ ಮಂದಿಯೆಲ್ಲಾ ಕಾದುಕುಳಿತಿರುತ್ತಾರೆ. ಇಷ್ಟರು ಬಂದ ಬಳಿಕವೇ ಜೊತೆಯಾಗಿ ಊಟ.. ಕಾಫಿ.. ತಿಂಡಿ.. ಹಾಗಾದ್ರೆ ಇದಕ್ಕೆ ಕಾರಣ ಏನು..? ಸ್ನೆಹವಲ್ಲವೇ..? ಆ ಒಂದು ಊಟಕ್ಕೆ ಏನೊಂದು ಶಕ್ತಿ. ಉದರಕ್ಕೆ ಬೇಕಾಗಿರುವುದು ಒಂದು ಹಿಡಿ ಅನ್ನ.ಆದರೆ ಅದಕ್ಕಾಗಿ ಗಂಟೆಗಟ್ಟಲೆ ಮಿತ್ರನ ಬರುವಿಕೆಗೆ ಆತನ ಜೊತೆ ಊಟ ಮಾಡವುದಕ್ಕಾಗಿ ಕಾಯಲು ಸಿದ್ದರಿರುತ್ತವೆ.... ಅಂತಹ ಕಾಯಿಸುವ ಮತ್ತು ಪ್ರೀತಿಸುವ ಶಕ್ತಿಯೊಂದಿದ್ದರೆ ಅದು ಊಟಕ್ಕೆ ಮಾತ್ರಾ..

ಬೇಡ ಅದಕ್ಕಿಂತಲೂ ಆಚೆ ಬನ್ನಿ ಮಗನಿಗಾಗಿ ಕಾಯುವ ಅಮ್ಮ... ಪ್ರಿಯತಮನಿಗಾಗಿ ಕಾಯುವ ಪ್ರಿಯತಮೆ.... ಹುಡುಗಿಗಾಗಿ ಕಾಯುವ ಹುಡುಗ..... ಗಂಡನಿಗಾಗಿ ಕಾಯುವ ಹೆಂಡತಿ... ಹೀಗೆ ಕಾಯುವವರ ಸಂಖ್ಯೆ ಇದ್ದೇ ಇರುತ್ತದೆ. ಗಂಡ ಉದ್ಯೋಗಿ..ಹೆಂಡತಿ ಹೋ ಮಿನಿಷ್ಟ್ರು ಅಂತಾದರೆ .. ಅವರ ಊಟ , ಕಾಫಿ ಜೊತೆಯಲ್ಲೇ ಇರುತ್ತೆ ಬೇಕಾದ್ರೆ ನೋಡಿ.. ಗಂಡ ತುಸು ತಡವಾದರೂ ಹೆಂಡತಿ ಕಾಯುತ್ತಾಳೆ.. ಈಗ.. ಮತ್ತೆ .. ಅಂತ ದಾರಿ ನೋಡಿ ಕೊನೆಗೆ ಎಲ್ಲಿದ್ದೀರಿ ಅಂತ ಕೇಳೇ ಕೇಳುತ್ತಾಳೆ..ಅದು ಬಾಂಧವ್ಯ..

ನನ್ನ ಪರಿಚಯದವರೊಬ್ಬರು ಎಷ್ಡೇ ಗಮ್ಮತ್ತಿನ ಊಟವಿರಲಿ ಅವರು ಊಟ ಮಾಡುವುದು ಮಾತ್ರಾ ಮನೆಯಲ್ಲಿ ಕಾರಣ ಕೇಳಿದರೆ .. ಅಲ್ಲಿ ಹೆಂಡತಿ ಕಾಯುತ್ತಿರುತ್ತಾಳೆ ಅಂತಾರೆ.. ಇದೂರೀ ಊಟದ .. ಅನ್ನದ ಮಹಿಮೆ.. ಆ ಅನ್ನಕ್ಕೆ ಒಂದುಗೂಡಿಸುವ .. ಕಾಯಿಸುವ ಶಕ್ತಿಯಿದೆ..ಹಾಗಾಗಿ ಆ ಗೆಳೆತನ.. .. ಬಾಂಧವ್ಯವೆಂಬುದು ಕೇವಲ ಮಾತಿನಲ್ಲಿ ಅಲ್ಲ ಅದು ಇಂತಹ ಅವ್ಯಕ್ತ ಭಾವನೆಗಳಲ್ಲೂ ಇರುತ್ತದೆ....

16 ಏಪ್ರಿಲ್ 2009

ಸುಳ್ಯದಿಂದ ಕನ್ಯಾಕುಮಾರಿವರೆಗೆ...



ಅನೇಕ ದಿನಗಳ ಬಳಿಕ ನೆನಪಾಯಿತು.....

ಮೊನ್ನೆ ಇದ್ದಕ್ಕಿದ್ದಂತೆ ನಾನು ಮತ್ತು ನನ್ನ ಮಿತ್ರರ ತಂಡ ಕನ್ಯಾಕುಮಾರಿಗೆ ತೆರಳಿತ್ತು... ಕಾರಣ ಏನಿಲ್ಲಾ ಸುಮ್ಮನೆ ಟ್ರಿಪ್... ನಾನು ಮಿತ್ರರಿಗೆ ಮೊದಲೇ ಹೇಳಿದ್ದೆ ಬಿಡುವಿಲ್ಲ ಅಂತ... ತುರ್ತು ಕೆಲಸದ ಬೇರೆ... ಆದರೂ ಮಿತ್ರರು ರೈಲು ಟಿಕೆಟ್ ಮಾಡಿದ್ದರು... ಹಾಗಾಗಿ ನನಗೆ ಮಿತ್ರರ ನಂಟನ್ನು ಬಿಡಲಾಗಲಿಲ್ಲ... ಸರಿ ಸಂಜೆ 6.30ಕ್ಕೆ ಮಂಗಳೂರಿನಿಂದ ತಿರುವನಂತಪುರಂಗೆ ಹೋಗುವ "ಮಾವೇಲಿ ಎಕ್ಸ್‌ಪ್ರೆಸ್" ರೈಲಿಗೆ ಕಾಸರಗೋಡಿನಲ್ಲಿ ನಾವು 15 ಜನ ಮಿತ್ರರು ಜೊತೆಯಾದೆವು.

ಮುಂಜಾನೆ ತಿರುವನಂತಪುರಂ ಇಳಿದ ನಾವು ಅಲ್ಲೇ ಇದ್ದ ಪೇ ಬಾತ್ ರೂಂನೊಳಗೆ ಹೊಕ್ಕು ಫ್ರಶ್ ಆಗಿ ಗೆಳೆಯನೊಬ್ಬನ ಮೂಲಕ ವಾಹನವೊಂದನ್ನು ಗೊತ್ತು ಮಾಡಿ ಮುಂದಕ್ಕೆ ಹೋದದ್ದು ತಿರುವನಂತಪುರದ ಪ್ರಸಿದ್ದ ದೇವಸ್ಥಾನ ಪದ್ಮಣಾಭನ ಗುಡಿಗೆ.ನಂತರ ಅಲ್ಲೇ ಇರುವ ರಾಜ ರಾಮವರ್ಮನ ಪ್ಯಾಲೇಸ್‌ಗೆ. ಆಗಲೇ ಸೂರ್ಯ ನೆತ್ತಿಗೇರುವ ಹೊತ್ತು ಸನ್ನಿಹಿತವಾಗಿತ್ತು.ನಡೆ ಮುಂದಕ್ಕೆ.. ಎಂದು ಹೊರಟದ್ದು ಭಗವತೀ ದೇವಸ್ಥಾನಕ್ಕೆ... ಇದು ಕೇರಳದ ಮಹಿಳೆಯರ ಶಬರಿಮಲೆ ಎಂಬ ಪ್ರಸಿದ್ದಿಗೆ ಪಾತ್ರವಾಗಿದೆ. ಈ ದೇಗುಲವ ನೋಡಿದಾಗಲೇ ಸೂರ್ಯ ನೆತ್ತಿಗೇರಿದ್ದ... ಇಲ್ಲಿ ಚಿಕ್ಕ ಮಕ್ಕಳು ಅದು ಇದು ಅಂತ ಮಾರಾಟ ಮಾಡಿಕೊಂಡು ಬರುತ್ತಿದ್ದರು ಸಾರ್.. ಇದು ಎಡ್ಕಿ.. ಅದು ಎಡ್ಕಿ.. ಅಂತ ಮಲೆಯಾಳದಲ್ಲಿ ಹೇಳುತ್ತಾ ನಮ್ಮನ್ನು ಹಿಂಬಾಲಿಸುತ್ತಿದ್ದರೆ ನಾವು ಫೋಟೋ ತೆಗೆಯಲು ಮುಂದಾದಾಗ ಎಂದೆ ಸಾರ್ ಅಂತ ಮುಖ ಮುಚ್ಚಿಕೊಳ್ಳುತ್ತಿದ್ದರು ಈ ಬಾಲಕ/ಬಾಲಕಿಯರು...

ಸರಿ ನಮ್ಮ ತಂಡ ಮುಂದೆ ಸಾಗಿತು.... ನಂತರ ನೇರವಾಗಿ ಸಾಗಿದ್ದೇ ಕನ್ಯಾಕುಮಾರಿಯ ಕಡೆಗೆ... ಅಲ್ಲಿ ತಲಪುವಾಗ ಸಂಜೆಯಾಗಿತ್ತು..ಅದಾಗಲೇ ಸೂರ್ಯ ಸಮುದ್ರದಲ್ಲಿ ಲೀನವಾಗುವ ಹೊತ್ತು ಸನ್ನಿಹಿತವಾಗಿತ್ತು...ಅಬ್ಬಾ ಏನು ಆನಂದ.... ಅತ್ತ ಕಡೆ ಅರಬ್ಬೀ ಸಮುದ್ರ... ಇತ್ತ ಬಂಗಾಳಕೊಲ್ಲಿ.. ಅದೋ ಅಲ್ಲಿ ಹಿಂದೂಮಹಾಸಾಗರ... ಈ ಎಲ್ಲದರ ನಡುವೆ ಲೀನವಾಗುತ್ತಿರುವ ನೇಸರ... ಏನು ಆನಂದ.... .. ಅಬ್ಬಾ ದಿನ ಮುಗಿಯಿತೇ ಎನ್ನುವ ಸಂದೇಹ...!!

ಮುಂಜಾನೆ 5 ಗಂಟೆಯ ಹೊತ್ತು ಪಕ್ಕದ ಕೊಣೆಯಿಂದ ಗೆಳೆಯರು ಬಂದು ಬಾಗಿಲು ಬಡಿದು ಎಬ್ಬಸಿದರು ಬನ್ರೀ ಸನ್‌ರೈಸ್ ನೋಡೋಣ.. ಆದ್ರೆ ನಮ್ಮ ಕೋಣೆಯಲ್ಲಿದ್ದವರೆಲ್ಲಾ "ಸೂರ್ಯ ವಂಶ"ದವರಾದ್ದರಿಂದ ಆಗ ಸೂರ್ಯ ಉದಯವಾಗಿಲ್ಲದ ಕಾರಣ ಮಿತ್ರರಿಗೆ ಅರಿವಾಯಿತು...ಅವರು ಮುಂದೆ ಹೋದರು... ಸಂಜೆ ಸಮುದ್ರದಲ್ಲಿ ಲೀನವಾಗಿದ್ದ ನೇಸರನ ಉದಯದ ಸವಿಯನ್ನುಂಡರು... ಅದಾದ ಬಳಿಕ ನಾವು ಹೊರಟದ್ದು ದೇಶದ ನಿಜವಾದ ನಾಯಕ ಯುವಕರ ಸ್ಫೂರ್ತಿ "ವಿವೇಕಾನಂದ"ರ ಸ್ಮಾರಕಕ್ಕೆ. ಅಲ್ಲಿಗೆ ತೆರಳಲು ಬೋಟ್ ಮೂಲಕ ಪಯಣಿಸಬೇಕು.. ಈ ಅನುಭವ ಅವಿಸ್ಮರಣೀಯ.. ಅಬ್ಬಾ ..!! ಸ್ಮಾರಕದ ಬಳಿ ಬೋಟ್‌ನಿಂದ ಇಳಿದಾಗಲೇ ಒಂದು ರೋಮಾಂಚನ.. ಅದರೊಳಗೆ ನಡೆಯುತ್ತಾ ಸಾಗುವಾಗ ಏನೋ ಒಂದು ಅವ್ಯಕ್ತವಾದ ಸಂತಸ... ಹಾಗೇ ನಡೆದಾಡುತ್ತಾ ಅಲ್ಲಿರುವ ಧ್ಯಾನ ಮಂದಿರದೊಳಗೆ ಕುಳಿತು ಒಂದು ಕ್ಷಣ ಧ್ಯಾನಿಸಿದರೆ ಅಲ್ಲಿಂದ ಹೊರಡಲು ಮನಸ್ಸೇ ಬರುವುದಿಲ್ಲ.... ಆದರೆ ಸಮಯದ ಕೊರತೆಯಿದೆ... ಅಲ್ಲಿಂದ ನೆನಪಿನ ಬುತ್ತಿಯನ್ನು ಕಟ್ಟಿಕೊಂಡು ಮುಂದೆ ಬಂದದ್ದು ಸುಚೀಂದ್ರ ದೇವಸ್ಥಾನಕ್ಕೆ ಅದು ತಿರುವನಂತಪುರಂನ ಸನಿಹದಲ್ಲೇ ಇದೆ. ಈ ನಡುವೆ ದಣಿವಾರಿಸಲು ಕುಡಿಯುವ ಎಳನೀರು.. ನೀರು... ಕಾಫಿ, ... ಇತ್ಯಾದಿಗಳಿಗೆ ಲೆಕ್ಕವೇ ಇಲ್ಲ.. ಅಂತೂ ನಾವು ತಿರುವಂತಪುರಂಗೆ ತಲಪಿದೆವು.. ಅಲ್ಲಿಂದ ಮುಂದೆ ಹೋದದ್ದು ಕೋವಳಂ ಬೀಚ್‌ಗೆ .. ಬೀಚ್ ಸನಿಹಕ್ಕೆ ಹೋದಾಗಲೇ ಅಲ್ಲಿ ವಿದೇಶಿಯರೂ ಸುತ್ತಾಡುವುದು ಕಂಡಿತು.. ಇನ್ನು ಮುಂದೆ ವಿವರಿಸುವ ಅಗತ್ಯವಿಲ್ಲ ಎಂದು ಅಂದುಕೊಂಡಿದ್ದೇನೆ.. ನಮ್ಮಂತ ಪಡ್ಡೇ ಹುಡುಗರಿಗೆ ಮಜಾವೇ ಮಜ..!!..ಹಾಗೆ ಅಲ್ಲೆಲ್ಲಾ ಸುತ್ತಾಡಿದ ನಾವು ಊಟ ಮುಗಿಸಿ ಮತ್ತೆ "ಮಾವೇಲಿ ರೈಲು " ಹತ್ತಿದೆವು.. ಹೊರಡುವ ವೇಳೆ ತಿರುವನಂತಪುರಂನಲ್ಲಿ ಮಳೆರಾಯನ ಧೋ.. ಎಂದು ಸುರಿಯುತ್ತಿದ್ದ .. ದೂರದಲ್ಲಿದ್ದ ಸಿಡಿಲು ಹತ್ತಿರದಲ್ಲೇ ಕಾಣುತ್ತಿತ್ತು..... ರೈಲು.. ಸದ್ದು ಕೇಳುತ್ತಲಿತ್ತು.. ಒಂದು ಕ್ಷಣ ಗೆಳೆಯರೆಲ್ಲಾ ಒಂದಾಗಿ ಕುಳಿತು ನೆನಪುಗಳನ್ನು ಮರುಕಳಿಸಿಕೊಂಡೆವು.. ಹಾಗೇ ರೈಲು ಮುಂದೆ ಸಾಗುತ್ತಿತ್ತು.. ಒಬ್ಬೊಬ್ಬರೇ ಕಂಪಾರ್ಟ್ ಮೆಂಟ್ ಏರಿದರು.. ಮರುದಿನ ಬೆಳಗ್ಗೆ ಕಾಸರಗೋಡಿನಲಿ ಮತ್ತೆ ಬೇರೆ ಬೇರೆಯಾದ ಗೆಳೆಯರಿಗೆಲ್ಲಾ ಇಂದು ಅದೆಲ್ಲವೂ ನೆನಪು.. ಸವಿ ನೆನಪು.. ಮತ್ತೆ ಮುಂದಿನ ವರ್ಷ ಒಂದಾಗುವ ಹಂಬಲ...




ಇದೇ ಅಲ್ಲವೇ , ಗೆಳೆತನವೆಂಬ ಹೊಳೆಯಲ್ಲಿ ಪಯಣ...ಅದರೊಳಗಿದ್ದರೆ ಈ ಹನಿಯೂ ಕಡಲು ಸೇರಬಲ್ಲುದು ಇಲ್ಲದಿದ್ದಲ್ಲಿ ಆ ಹನಿ ಭುವಿಯೊಳಗೆ ಲೀನವಾಗಬಲ್ಲುದಲ್ಲವೇ...

ಇವಿಷ್ಟು 2 ದಿನದ ವಿಹಾರದ ನೆನಪುಗಳಾದರೆ ಇನ್ನೊಂದು ವಿಚಾರದ ಬಗ್ಗೆ ನನಗೆ ಆಗಾಗ ಕಾಡುತ್ತಲೇ ಇದೆ.. ಅದನ್ನು ನಾನು ಇಲ್ಲಿ ದಾಖಲಿಸಿಡಲೇ ಬೇಕು.. ಯಾಕೆಂದರೆ ನನ್ನನ್ನು ಹಲವು ಮಂದಿ ಆ ವಿಚಾರದಲ್ಲಿ ಪ್ರಶ್ನಿಸಿದ್ದರು.. ಅದಕ್ಕೆ ಕಾರಣ ಹೇಳಿದ್ದೆ..

ಯಾವತ್ತೂ ಒಂದು ವಿಷಯದ ಬಗ್ಗೆ .. "ಒಂದು ವಿಚಾರ"ದ ಬಗ್ಗೆ.... ಒಬ್ಬ ವ್ಯಕ್ತಿಯ ಬಗ್ಗೆ ನನಗೆ.. ನನಗೆ ಪೂರ್ವಾಗ್ರಹವಿಲ್ಲ.. ಹಾಗೆ ಇಟ್ಟುಕೊಂಡೇ ಬದುಕುವುದೂ ಇಲ್ಲ. ಇದನ್ನು ಹೇಳಲು....ಇಲ್ಲಿ ದಾಖಲಿಸಲು ಕಾರಣವಿದೆ.. ಇತ್ತೀಚೆಗೆ ನಾನು ಒಂದು ವಿಚಾರದ ಬಗ್ಗೆ ಮಾತನಾಡಿದ್ದೆ ಅದು ಸತ್ಯದ ಸಂಗತಿ.. ಮುಜುಗರದ ಸಂಗತಿ.. ಯಾಕೆಂದರೆ ಇಡೀ ಸಮಾಜ ಆ ವಿಚಾರವನ್ನು ನೋಡುತ್ತಿತ್ತು .. ಕೇಳುತ್ತಿತ್ತು.. ಹಾಗಾಗಿ ಆ ವಿಚಾರದ ಬಗ್ಗೆ ನನ್ನ ಮಿತ್ರ ಮಾತೊಂದನ್ನು ಹೇಳಿದ್ದ .. ನಾನು ಅದಕ್ಕೆ ಸಾಥ್ ನೀಡಿದ್ದೆ.... ಆ ಬಗ್ಗೆ ಭಾರೀ ಚರ್ಚೆ ನಡೆದಿತ್ತು.. ಆದರೆ ಆ ಸತ್ಯದ ವಿಚಾರವು ಅನೇಕರಿಗೆ ಕಹಿಯಾಗಿತ್ತು.. ಆದರೆ ನಾನು ಆ ವಿಚಾರದಲ್ಲಿ ಸ್ಫಷ್ಠವಾಗಿದ್ದೇನೆ.. ಅದು "ಆ " ವಿಚಾರಕ್ಕೆ ಮಾತ್ರವಲ್ಲ ಸತ್ಯದ ಎಲ್ಲಾ ವಿಚಾರದಲ್ಲೂ ನನ್ನ ನಿರ್ಧಾರ ಯಾವಾಗಲೂ ಅಚಲ.. ಯಾಕೆಂದರೆ ನಾನು ಸತ್ಯಕ್ಕೆ ಹತ್ತಿರವಾಗೇ ಇರಲು ಹೆಚ್ಚು ಇಚ್ಚಿಸುತ್ತೇನೆ....

26 ಮಾರ್ಚ್ 2009

ಯುಗಾದಿ ಶುಭವಾಗಲಿ



ಯುಗಾದಿ... ಹೊಸತನದ ಸಂಕೇತ....

ಎಲ್ಲರಿಗೂ ತರಲಿ ಶುಭ...ಆಗಲಿ ಅದು ಜೀವನದ ಹೊಸಬೆಳಕು..

ಸಂವತ್ಸರದಂತೆ ಬದಲಾಗಲಿ...ಮನವು ಕೂಡಾ...

ಬೆಳೆಯಲಿ ಪ್ರೀತಿ.. .. ಬೆಳೆಯಲಿ ಹೃದಯದ ನಡುವಿನ ಸಂಬಂಧ....

ಎಲ್ಲರಿಗೂ ಶುಭವಾಗಲಿ.....

21 ಮಾರ್ಚ್ 2009

God is Great.. I am "....."

ದೇವರು ಎಂಬ ಮೂರಕ್ಷರದ ಬಗ್ಗೆ ಜನ ಮೂವತ್ತು ಕೋಟಿ ಮಾತನಾಡಬಲ್ಲರು.ಆದರೆ ತನ್ನ ಮನೆಯ ಪಕ್ಕದಲ್ಲೇ ಇರುವ ಒಬ್ಬ ವ್ಯಕ್ತಿಯ ಬಗ್ಗೆ 3 ಶಬ್ದವನ್ನೂ ಮಾತನಾಡಲಾರರು. ಹಾಗೊಂದು ವೇಳೆ ಮಾತನಾಡಿದರೂ ಅದು ಆತನ ವಿರುದ್ದ ತೆಗಳುವ, ಟೀಕಿಸುವ, ಅವನ ಉನ್ನತಿಯ ಸಹಿಸದ ಕುಹಕದ ಮಾತುಗಳೇ ಆಗಿರುತ್ತದೆ.ಇದು ಯಾಕೆ ಹೀಗೆ..? ಪಕ್ಕದ ಮನೆಯಾತನಾದರೂ ಪರೋಪಕಾರಿಯಾದಾನೂ ದೇವರು..?

ದೇವರು ಎನ್ನುವ ಶಬ್ದಕ್ಕೆ ನಾನು ಹೀಗೆ ವ್ಯಾಖ್ಯಾನಿಸುತ್ತೇನೆ...ಪ್ರೀತಿ,.. ಸ್ನೇಹ....ವಾತ್ಸಲ್ಯ.... ಪ್ರೇಮಮಯಿ... ಕರುಣೆ..... ಹೃದಯವಂತಿಕೆ....

ಆದರೆ ಇಂದು ನಂಬುವ ದೇವರು ಇದೆಲ್ಲವನ್ನೂ ಸೇರಿಸಿಕೊಂಡು ಸರ್ವಶಕ್ತನಾಗಿದ್ದಾನೆ ಹಾಗಾಗಿ ಆತ ಬೇಡಿದ್ದನ್ನು ಕರುಣಿಸುತ್ತಾನೆ. ಆ ನಂಬಿಕೆಯಿಂದ ಆತನಲ್ಲಿ ಬೇಡುವುದು ನನಗೆ ಒಳ್ಳೆಯದು ಮಾಡು.... ಪಕ್ಕದ ಮನೆಯವನ ತೋಟದಲ್ಲಿ ನೀರು ಕಡಿಮೆ ಆಗುವಂತೆ ಮಾಡು.. ಅವನ ಉದ್ಯೋಗಕ್ಕೆ ಹಿನ್ನಡೆಯಾಗಲಿ.... ಹೀಗೆಯೇ ಸ್ವಾರ್ಥದ “ದೇವರು” ಸಮಾಜದಲ್ಲಿ ಕಾಣಿಸಿಕೊಳ್ಳುತ್ತಿದ್ದಾನೆ.ಪುರಾಣಗಳ ಕತೆಗಳನ್ನು ನೋಡಿದರೆ ಯಾವುದೇ ದೇವರು ನನಗೆ ಪೂಜೆ ಮಾಡು ... ನಿನಗೆ ಒಳ್ಳೆಯದು ಮಾಡುತ್ತೇನೆ ಎನ್ನಲಿಲ್ಲ. ನೀನು ಒಳ್ಳೆಯದು ಮಾಡು ನೀನು ಒಳ್ಳೆಯದಾಗುತ್ತಿ ಎನ್ನುವ ಸಂದೇಶವನ್ನು ನೀಡಿದ್ದಾನೆ. ನನ್ನ ಕೆಲಸದ ಒಳ್ಳೆಯ ಅಂಶವನ್ನು ನೀನು ಕೂಡಾ ಸಮಾಜಕ್ಕೆ ಮಾಡು ಎಂದಿದ್ದಾನೆ.ಆತನ ಸಾಮಾಜಿಕ ಕೆಲಸಗಳು ಇಂದು ಪೂಜೆಗೆ ಕಾರಣವಾಗಿದೆ.ಹಾಗಾಗಿ ಭಗವಂತನ ಕರ್ಮಕ್ಕೆ ಸ್ಥಾನಕ್ಕೆ ನೆಲೆ,ಬೆಲೆ ಸಿಕ್ಕಿದೆ. ಆದರೆ ಇಂದು ಆತ ಮಾಡಿದ ಕೆಲಸವನ್ನು ನಾವು ಮಾಡಲು ಸಿದ್ದರಿಲ್ಲ.ಬದಲಾಗಿ ಆತನ್ನು ಪೂಜೆ ಮಾಡಿ ಮನಸ್ಸಿನಲ್ಲಿ ಕೇಡನ್ನು ಮಾತ್ರಾ ತುಂಬಿಸಿ ಕೊಳ್ಳುತ್ತೇವೆ. ಇನ್ನೂ ಒಂದು ಕತೆ ಕೇಳಿ.... ದೇವಸ್ಥಾನದಲ್ಲಿ ಪೂಜೆ ಮಾಡುವ ಅರ್ಚಕ. ಯಾವಾಗಲೂ ಭಗವಂತನ ಬಳಿ ಇರುವವ.ಆತ ಮಾತನಾಡುವುದು ಹೇಗೆ ಗೊತ್ತಾ..? ಹೆ.. ಹೋಗಾ... ಓ... ಬಾರಾ.. ..!!.

ಇದು ಅರ್ಚಕನ ಸಂಸ್ಕೃತಿ.. ಹಾಗಾದರೆ ಆತನಿಗೆ ದೇವರ ಬಗ್ಗೆ ಏನು ಗೊತ್ತು ಮತ್ತು ಎಷ್ಟು ಗೊತ್ತು..? ಆತನಿಗೆ ಹಣದ ಮೋಹ ಮಾತ್ರ ಎಂದು ಇಲ್ಲೇ ತಿಳಿಯುತ್ತದೆ. ಇನ್ನೂ ಒಂದು ಕತೆಯಿದೆ.. ದೇವಸ್ಥಾನಗಳಿಗೆ ಹೋಗಿ ಅಲ್ಲೆ ಜಗಳ ಕಾಯುವವರೂ ಇದ್ದಾರೆ. ಹಾಗಾದ್ರೆ ದೇವರು ಅಂದ್ರೆ ಒಂದು ಫ್ಯಾಷನ್....?. ಗೊತ್ತಿಲ್ಲ ಬಿಡಿ..

ಹಾಗೆಂದು ನಾನು ದೇವಸ್ತಾನಕ್ಕೆ ಹೋಗಲ್ಲ ಅಂತಲ್ಲ. ಹೋಗ್ತೇನೆ. ಅಂತಹ hifiದೇವಸ್ಥಾನಗಳಿಗೆ ಹೋಗಲ್ಲ.. ನನಗೆ “ಮನಸ್ಸೇ” ದೇವರು.. “ಕರ್ಮ”ವೇ ದೇವರು. ಹಾಗೊಂದು ವೇಳೆ ದೇವಸ್ಥಾನಕ್ಕೆ ಹೋದರೂ ಮೌನದಿಂದ ಸುತ್ತು ಹಾಕಿ ಬರುತ್ತೇನೆ. ಇದಕ್ಕಾಗಿಯೇ ನನ್ನನ್ನು ಮನೆ ಮಂದಿ ಬೈತಾರೆ.. ಈಗ "ಶನಿ" ಕಾಟವಿದೆ.. ದೇವಸ್ಥಾನಕ್ಕೆ ಹೋಗಲೇ ಬೇಕು ಅಂತಾರೆ.. ನನಗನ್ನಿಸುತ್ತದೆ , ನನಗೆ ಕಾಡುವ ಶನಿಗಿಂತ ದೊಡ್ಡದು ಅಲ್ಲೆ ಇದೆ..!!

ಇದೆಲ್ಲಾ ಏಕೆ ನೆನಪಾಯಿತೆಂದರೆ ಒಂದು ಪ್ರಸಿದ್ದ ದೇವಸ್ಥಾನದ ಕತೆಯನ್ನು ಮಿತ್ರನೊಬ್ಬ ವಿವರಿಸಿದ್ದ. ಅದನ್ನು ಕೇಳಿದಾಗ ನನ್ನ ಒಳಗಿನ ಭಾವವು ವ್ಯಕ್ತವಾಯಿತು.ಸರಿಯೋ ತಪ್ಪೋ ಗೊತ್ತಿಲ್ಲ.ಎಲ್ಲರದ್ದೂ ಒಂದೇ ಅಭಿಪ್ರಾಯ ಇರಬೇಕು ಎಂದೇನೂ ಇಲ್ಲವಲ್ಲ.

15 ಮಾರ್ಚ್ 2009

ಇದು ದೋಸೆ ಜಾತ್ರೆ. . . .




ಬೆಳಗ್ಗೆ ಪ್ಲಾನ್ ಹಾಕಿ ಹೊರಡೋಣ ಅಂದುಕೊಂಡಾಗಲೇ ಮನೆಯಿಂದ ಆದೇಶವಾಗಿತ್ತು. ಅದೊಂದು ದೈವಸ್ಥಾನಕ್ಕೆ ಹೋಗಬೇಕು.. ಆ ನಂತ್ರವೇ ಇತರ ಕೆಲಸ.... ಸರಿ ಇಲ್ಲ ಅನ್ನುವುದಕ್ಕಾಗಲಿಲ್ಲ.ಪ್ಲಾನ್ ಉಲ್ಟಾ ಹೊಡೆಯಿತೋ ಅಂದುಕೊಂಡು ಕಾರಿನಲ್ಲಿ ಹೋಗುವಾಗಲೇ ಮಿತ್ರರಿಗೆ ದೂರವಾಣಿ ಮೂಲಕ ನನ್ನ ಪ್ರೋಗ್ರಾಂ ಮತ್ತು ಯಾವಾಗ ಮುಗಿದೀತು ಅಂತ ಕೇಳಿದೆ.ಬನ್ನಿ ಸಿಗುತ್ತೆ ನೆಗೆಟಿವ್ ಚಿಂತನೆ ಬೇಡ ಫಾಸಿಟವ್ ಆಗಿಯೇ ಬನ್ನಿ ಅಂದ. ಸರಿ ಸುಳ್ಯದಿಂದ ಹೊರಟಾಗಲೇ ಗಂಟೆ 12.. ಆದ್ರೂ ಒಳಗೆ ಅನುಮಾನ.. ಸಂಪಾಜೆ ಬಂದಾಗ ಇನ್ನೂ ಅನುಮಾನ... ಡಾಮರು ರಸ್ತೆ ಬಿಟ್ಟು ಒಳ ಹೋಗಬೇಕು ಅಂದರು ಮಿತ್ರ... ರಸ್ತೆ ನೋಡಿದ್ರೆ ಅಯ್ಯೋ ಅನಿಸಿತ್ತು. ಕಾರು ಓಲಾಡುತ್ತಾ ಸಾಗಿತು.. ಮುಂದೆ... 7 ಕಿ ಮೀ ಒಳಗೆ ಕಾಡಿನಲ್ಲಿ ಹೋದಾಗ ಅಬ್ಬಾ.... ಬಂತು ಆ ಸ್ಟೋರಿಯ ಪ್ರದೇಶ.... ...ಮುಗೀತೋ ಇಲ್ವೋ...?? ಅಬ್ಬಾ ಇದೆ... ಕೊನೆಯ 10 ನಿಮಿಷ......

ಅಲ್ಲಿ ಜಾತ್ರೆ...!!


ಸುಳ್ಯದ ಸಂಪಾಜೆ ಸಂಪಾಜೆಯಿಂದ ತಿರುಗಿ ಸುಮಾರು 7 ಕಿಮೀ ದೂರ ಕಾನನದ ನಡುವೆ ಸಂಚರಿಸುತ್ತಾ ಸಾಗಿದಾಗ ಕೊಡಗಿನ ಗಡಿಭಾಗದ ದಟ್ಟ ಕಾನನದ ಪ್ರದೇಶದಲ್ಲಿ ಅರೆಕಲ್ ಎಂಬ ಪ್ರದೇಶವಿದೆ. ಹಕ್ಕಿಗಳ ಇಂಚರ ಬಿಟ್ಟರೆ ಬೇರೆ ಯಾವುದೇ ಸದ್ದು ಗದ್ದಲಗಳಿಲ್ಲದ ಈ ಭಾಗದಲ್ಲಿ ಅಯ್ಯಪ್ಪ ದೇವರ ಗುಡಿಯಿದೆ. ಇಲ್ಲಿನ ಜಾತ್ರೆಯ ಸಂದರ್ಭದಲ್ಲಿ ದೋಸೆ ಎರೆಯುವ ಆಚರಣೆ ನಡೆಯುತ್ತದೆ.ಊರಿನ ಮಹಿಳೆಯರೆಲ್ಲಾ ಸೇರಿಕೊಂಡು ಸಾಮೂಹಿಕವಾಗಿ ದೋಸೆಯನ್ನು ಎರೆದು ನಂತರ ಸಂಜೆಯ ವೇಳೆಗೆ ಅದನ್ನು ಪ್ರಸಾದ ರೂಪವಾಗಿ ಸ್ವೀಕರಿಸುತ್ತಾರೆ.ಅದಕ್ಕಾಗಿ ದೇವಸ್ಥಾನದಿಂದ ಅಕ್ಕಿ ಹಾಗೂ ಎಣ್ಣೆಯನ್ನು ಕೊಡುತ್ತಾರೆ.

ಅಯ್ಯಪ್ಪ ಸ್ವಾಮಿಯು ಹುಲಿ ಹಾಲಿಗಾಗಿ ಕಾಡಿಗೆ ಬಂದಿದ್ದ ಸಂದರ್ಭದಲ್ಲಿ ವಿಶ್ರಮಿಸಿದ ಸ್ಥಳ ಇದಾದ್ದರಿಂದ ಇಲ್ಲಿ ಅಯ್ಯಪ್ಪನ ಗುಡಿ ನಿರ್ಮಿಸಲಾಗಿದೆ ಎಂಬುದು ಇಲ್ಲಿನ ಇತಿಹಾಸ.ಅದರ ಹೊರತಾಗಿ ಬೇರಾವುದೇ ಪುರಾಣಗಳು , ಕಥೆಗಳು ಇಲ್ಲಿ ಅಲಭ್ಯ. ಆದರೆ ಈ ದೇವಸ್ಥಾನವು ಮಲೆಕುಡಿಯ ಹಾಗೂ ಕೊಡಗಿನ ಪಾಂಡೀರ ಜನಾಂಗದ ಸಂಪ್ರದಾಯವನ್ನು ಪ್ರತಿಬಿಂಬಿಸುತ್ತದೆ.ಅದಕ್ಕಿಂತಲೂ ಹೆಚ್ಚಾಗಿ ಬಡವರ ನಂಬಿಕೆಯ ಕೇಂದ್ರ ಪರಿಸರದ ಆರಾಧನೆಯ ತಾಣ. ಇಲ್ಲಿಗೆ ಮಲೆಕುಡಿಯರು ಸಂಪಾಜೆ ಹಾಗೂ ಇನ್ನಿತರ ಕಡೆಗಳಿಂದ ಆಗಮಿಸಿದರೆ ಪಾಂಡೀರ ಜನಾಂಗದವರು ಕೊಡಗಿನ ಮಡಿಕೇರಿಯ ಗಾಳಿಬೀಡಿನಿಂದ ಬರುತ್ತಾರೆ.ಅತ್ಯಂತ ಶ್ರದ್ಧಾ ಭಕ್ತಿಯಿಂದ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. ಒಂದರ್ಥದಲ್ಲಿ ಇಲ್ಲಿ ಜಾತ್ರೆ ಎಂದರೆ ವೃತ. ಜಾತ್ರೆಯ ದಿನ ಈ ದೇವಸ್ಥಾನಕ್ಕೆ ಸಂಬಂಧ ಪಟ್ಟ 18 ಕುಂಟುಂಬದವರು ಬೆಳಗಿನಿಂದಲೇ ಉಪವಾಸವಿರುತ್ತಾರೆ. ಅಂದರೆ ವೃತದಲ್ಲಿರುತ್ತಾರೆ. ಅವರಿಗೆ ಸಂಜೆಯ ವೇಳೆಗೆ ಫಲಹಾರ ಅಥವಾ ದೋಸೆಯ ಆಹಾರವೊಂದೇ ಆ ದಿನದ ಊಟ. ಮಾತ್ರವಲ್ಲ ಅವರು ಆ ದಿನವಿಡೀ ಬಾಳೆ ಎಲೆಯಲ್ಲಿ ಊಟ ಮಾಡುವಂತಿಲ್ಲ. ಅದಕ್ಕಾಗಿ ಕಾಡಿನಲ್ಲಿ ದೊರೆಯುವ ಎಲೆಯೊಂದನ್ನು ತಂದು ಅದರಲ್ಲಿ ದೋಸೆಯನ್ನು ತಿನ್ನುತ್ತಾರೆ.ಈ ಉಪವಾಸವನ್ನು ಪಟ್ನಿ ಅಂತ ಕರೆಯಲಾಗುತ್ತದೆ.ದೇವರ ಸೇವೆಗಾಗಿ ಇಲ್ಲಿ ಉಪವಾಸ ಆಚರಿಸಲಾಗುತ್ತದೆ.ಈ ಉಪವಾಸಕ್ಕಾಗಿಯೇ ದೋಸೆ ತಯಾರಾಗಬೇಕು.ವಿಶೇಷ ಇರುವುದು ಇಲ್ಲಿ. ಕೇವಲ 18 ಕುಟುಂಬಗಳ ಉಪವಾಸದ ವೃತಕ್ಕೆ ದೇವಸ್ಥಾನದಿಂದ ಕೊಡಮಾಡುವ ಅಕ್ಕಿ ಹಾಗೂ ಎಣ್ಣೆಯನ್ನು ಊರಿನ ಎಲ್ಲಾ ಮಹಿಳೆಯರು ಮನೆಗೆ ಕೊಂಡೊಯ್ದು ಹಿಟ್ಟನ್ನು ತಯಾರಿಸಿ ನಂತರ ದೇವಸ್ಥಾನದ ವಠಾರಕ್ಕೆ ಬಂದು ಸಾಮೂಹಿಕವಾಗಿ ದೋಸೆಯನ್ನು ಎರೆಯುವ ಕೆಲಸವನ್ನು ಮಾಡುತ್ತಾರೆ.ಹೀಗೆ ದೋಸೆ ಎರೆಯುವ ಸಂದರ್ಭದಲ್ಲೇ ಇರಬಹುದು ಅಥವಾ ಇನ್ನಿತರ ಕೆಲಸ ಮಾಡುವ ವೇಳೆ ಮಾತನಾಡುವ ಹಾಗಿಲ್ಲ.ಅದಕ್ಕಾಗಿ ಮುಖಕ್ಕೆ ಬಟ್ಟೆಯನ್ನು ಕಟ್ಟಿಕೊಳ್ಳಬೇಕು ಎನ್ನುವ ಪದ್ದತಿ ಇಲ್ಲಿದೆ.ಹೀಗೆ ತಯಾರಾದ ದೋಸೆಯನ್ನು ಇಲ್ಲೇ ಮುಚ್ಚಿಡಲಾಗುತ್ತದೆ. ನಂತರ ರಾತ್ರಿ ವೇಳೆ ದೇವರ ಪೂಜೆಯ ಬಳಿಕ 18 ಕುಟುಂಬಸ್ಥರಿಗೆ ಹಾಗೂ ಊರ ಮಂದಿಗೆ ಪ್ರಸಾದ ರೂಪದಲ್ಲಿ ವಿತರಿಸಲಾಗುತ್ತದೆ. ಈ ಆಚರಣೆಯಿಂದ ಮಹಿಳೆಯರು ತೀರಾ ಸಂತಸವನ್ನು ಪಡುತ್ತಾರೆ.ಇನ್ನೊಂದು ಅಂಶವೆಂದರೆ ಇಲ್ಲಿ ಜಾತ್ರೆಯ ವೇಳೆ ಊಟಕ್ಕೆ ಹಲಸಿನ ಗುಜ್ಜೆ , ಹುರುಳಿ ಬಿಟ್ಟರೆ ಬೇರೆ ಪದಾರ್ಥಗಳನ್ನೂ ಮಾಡುವಂತಿಲ್ಲ.

ಈ ದೇವಸ್ಥಾನದ ಜಾತ್ರೆ ಆರಂಭವಾಗುವ ಮುನ್ನ ಗಾಳಿಬೀಡಿನಿಂದ ಅಂದರೆ ಸುಮಾರು 5 ರಿಂದ 10 ಕಿ ಮೀಗಳಷ್ಡು ದೂರ ದೇವಸ್ಥಾನಕ್ಕೆ ಸಂಬಂಧಪಟ್ಟವರು ಅಂದರೆ ತಕ್ಕಮಖ್ಯಸ್ಥರು ಕಾಲ್ನಡಿಗೆಯಲ್ಲಿ ಸಾಗಿ ಭಂಡಾರ ತಂದು ಪೂಜೆ ಮಾಡಲಾಗುತ್ತದೆ.ಇಲ್ಲಿನ ವಿಶೇಷವಾದ ಇನ್ನೊಂದು ಸಂಪ್ರದಾಯವೆಂದರೆ ಫಲಕ್ಕೆ ನಿಲ್ಲವುದು.ಅಂದರೆ ಮಕ್ಕಳಾಗದೇ ಇರುವವರು ಇಲ್ಲಿ ಬಂದು ಹರಕೆ ಹೇಳಿ ಸಿಂಗಾರದ ಎಸಳಿನ ಮೂಲಕ ಹರಕೆ ಹೇಳುವುದು. ಅದು ಈಡೇರುತ್ತದೋ ಇಲ್ಲವೋ ಎಂಬುದನ್ನು ಹೇಳಿಕೊಳ್ಳಲಾಗುತ್ತದೆ.ಮಾತ್ರವಲ್ಲ ಇಲ್ಲಿ ಸುಮಾರು 600 ರಿಂದ 900 ದಷ್ಟು ಕೋಳಿಗಳು ಹರಕೆ ರೂಪದಲ್ಲಿ ಬರುತ್ತದೆ.ರಾತ್ರಿ ವೇಳೆ ಕೊಡಗಿನ ಸಾಂಪ್ರದಾಯಿಕ ನೃತ್ಯಗಳು ಕೂಡಾ ನಡೆಯುತ್ತದೆ.ಈ ಎಲ್ಲಾ ಆಚರಣೆ ಮುನ್ನ ನಡೆಯುವ ಸಾಮೂಹಿಕ ದೋಸೆ ಎರೆಯುವ ಕಾರ್ಯಕ್ರಮಕ್ಕೆ ಊರಿನ ಜನರೆಲ್ಲಾ ಅತ್ಯಂತ ಶ್ರಧ್ದಾ ಭಕ್ತಿಯಿಂದ ಪಾಲ್ಗೊಳ್ಳುತ್ತಾರೆ.ಹೀಗೆ ದೋಸೆ ಎರೆಯುವ ಮಹಿಳೆಯರಿಗೆ ದೇವಸ್ಥಾನದ ಒಳಗೆ ಪ್ರವೇಶವಿಲ್ಲ.

ಇಲ್ಲಿ ದೇವರ ಬಗ್ಗೆಯಾಗಲಿ , ಆಚರಣೆಯ ಬಗ್ಗೆಯಾಗಲಿ ಮಾತನಾಡುವುದು ಬೇಡ. ಜಗತ್ತು ನಂಬಿಕೆಯ ಆಧಾರದಲ್ಲಿ ನಡೆಯುತ್ತದೆ. ದೇವರೂ ಹಾಗೆಯೇ ಅದೊಂದು ನಂಬಿಕೆ, ಶ್ರದ್ದೆ. ಗುಡಿಯೊಳಗೆ ಪೂಜೆ ಮಾಡಿ , ಇತ್ತ ಕಡೆ ಮಾಡುವ ಮೋಸ , ವಂಚನೆ, ಡೋಂಗಿಗಳ ಬದಲಾಗಿ ಬಡವರು ಆಚರಿಸುವ ಇಂತಹ ಆಚರಣೆಗಳು ಸಂಘಜೀವನವನ್ನು ಹೇಳಿಕೊಡುತ್ತದೆ ಮಾತ್ರವಲ್ಲ ಮಾನವೀಯ ಸಂಬಂಧಗಳನ್ನು ಹೇಳಿಕೊಡುತ್ತವೆ.ಇದು ಒಂದಿಷ್ಟು ಹಳ್ಳಿಗಳಲ್ಲಿ ಸಂಬಂಧಗಳು ಉತ್ತಮವಾಗಿ ಉಳಿಯಲು ಕೂಡಾ ಕಾರಣವಾಗಿವೆ. ಹಾಗಾಗಿ ಇಂತಹ ಕೆಲವು ಹಳ್ಳಿಗಳು ಇಂದು ನಗರದ ಬದುಕಿಗೆ ಕೂಡಾ ಉತ್ತಮ ಸಂದೇಶವನ್ನು ಕೊಡಬಲ್ಲುದು

ಇಂದು ಅಲ್ಲಲ್ಲಿ ಗಲಭೆಗಳು ನಡೆಯುತ್ತದೆ.ಜನಾಂಗದ ನಡುವೆ, ಧರ್ಮದ ನಡುವೆ ಅನಗತ್ಯ ಕಲಹಗಳು ನಡೆಯುತ್ತಲ್ಲಾ ಅವಕ್ಕೆಲ್ಲಾ ಏಕೆ ಈ ಜಾತ್ರೆಯೊಂದು ಆದರ್ಶವಾಗುವುದಿಲ್ಲ.?. ಎನ್ನವ ಪ್ರಶ್ನೆಯನ್ನು ನನ್ನೊಳಗೆ ಹಾಕಿಕೊಳ್ಳುತ್ತಾ ನಾವಲ್ಲಿಂದ ಹೊರಟು ಬಂದೆವು.

04 ಮಾರ್ಚ್ 2009

ಬೆಂಬಲವೂ ಇಲ್ಲ . . ಬೆಲೆಯೂ ಇಲ್ಲ...!!

ಮೊನ್ನೆ ಯಡಿಯೂರಪ್ಪನವರು ಅಡಿಕೆ ಬೆಂಬಲ ಬೆಲೆ ಅಂದಾಗ ಕೃಷಿಕರಿಗೆ ಅಬ್ಬಾ ,ಖುಶಿಯೋ ಖುಷಿ. ಮದುವೆ , ಪೂಜೆ . ರಸ್ತೆಯಲ್ಲಿ ಹೀಗೆ ಸಿಕ್ಕ ಸಿಕ್ಕಲ್ಲಿ ಮಾತನಾಡಿ ಸಂತಸಪಟ್ಟರು. ಹೇ ...ಅಡಿಕೆಗೆ ಬೆಂಬಲ ಬೆಲೆಯಂತೆ ಕೆ.ಜೆಗೆ 95ಅಂತೆ.. ಅದು ಯಾವುದಕ್ಕಂತೆ ಹಳತಿಗೋ..?? ಹೊಸತಕ್ಕೋ .. .?? ಹೀಗೆ ಕೇಳಿದವರೇ ಹೆಚ್ಚು. ಕೆಲವರಂತೂ ನಮ್ಮ ಸಮಸ್ಯೆ ಮುಗಿಯಿತು ಅಂತ ಹಿಗ್ಗಿದ್ದರು.ಆದ್ರೆ ಯಾರು ಕೂಡಾ ಇದು ನಮ್ಮಲ್ಲಿಗೆ ಅನ್ವಯವಾಗುವುದಿಲ್ಲ ಅಂತ ಯೋಚಿಸಿಲ್ಲ.

ಹೆಚ್ಚಿನ ಸಂದರ್ಭಗಳಲ್ಲಿ ಶ್ರೀಮಂತರಿಗೆ ಮಾತ್ರಾ ಈ ಬೆಂಬಲ ಬೆಲೆಯ ಸುಖ ಸಿಗುವುದು.ಬಡವರಿಗೆ ಗೋಲಿ ಮಾತ್ರಾ . ಆ ಕಾರಣದಿಂದಲೂ ಈಗ ಬೇಗನೆ ಬೆಂಬಲೆ ಸಿಕ್ಕರೆ ಮಾತ್ರಾ ಎಲ್ಲರಿಗೂ ಪ್ರಯೋಜನ ಇಲ್ಲಾಂದ್ರೆ ಶ್ರೀಮಂತರು ಮಾತ್ರಾ ಕೊಳ್ಳೆ ಹೊಡೆಯುತ್ತಾರೆ.ಅವರಿಗೆ ಎಷ್ಟು ಸಿಕ್ಕರೂ ಸಾಲುವುದಿಲ್ಲ ಬಿಡಿ.ಆದ್ರೆ ಸರಕಾರ ಮಾತ್ರಾ ಕೃಷಿಕರನ್ನು ಮಂಗ ಮಾಡುವ ಪ್ರಯತ್ನ ಮಾಡಿದೆ.ಏಕೆಂದ್ರೆ ಓಟು ಬಂತಲ್ಲಾ...!!


ಮಲೆನಾಡಿನ ಪ್ರಮುಖ ಬೆಳೆಯಾದ ಅಡಿಕೆಯು ಒಂದಿಲ್ಲೊಂದು ಸಂಕಷ್ಟವನ್ನು ಎದುರಿಸಿತ್ತಿದೆ. ಒಂದೆಡೆ ಹಳದಿರೋಗ ಇನ್ನೊಂದೆಡೆ ಬೇರುಹುಳದ ಬಾದೆ ಕಾಡುತ್ತಿದೆ.ಹೀಗಾಗಿ ಈ ಬೆಳೆಗೆ ಬೆಂಬಲ ಬೆಲೆ ನೀಡಿ ಮಾರುಕಟ್ಟೆಯನ್ನು ಸ್ಥಿರೀಕರಿಸಬೇಕು ಎಂಬುದು ರೈತರ ಬೇಡಿಕೆಯಾಗಿತ್ತು.ಈ ಎಲ್ಲಾ ಕಾರಣಗಳಿಂದಾಗಿ ಈ ಬಾರಿ ಮುಖ್ಯಮಂತ್ರಿ ಯಡಿಯೂರಪ್ಪ ಅಡಿಕೆಗೆ 9500 ರು ಬೆಂಬಲ ಬೆಲೆ ಘೋಷಿಸಿದಾಗ ಮಲೆನಾಡಿನ ಅಡಕೆ ಬೆಳೆಗಾರರರಿಗೆ ಸಂತಸವಾಗಿತ್ತು. ಈ ಬೆಲೆ ಘೋಷಣೆಯಾದಾಗಲೇ ಕರಾವಳಿ ಜಿಲ್ಲೆಯ ಕೃಷಿಕರಿಗೆ ಅಚ್ಚರಿಯಾಗಿತ್ತು. ಏಕೆಂದರೆ ಈ ಬೆಲೆ ಯಾವ ಅಡಿಕೆಗೆ ಎಂದು ಮಾತನಾಡಿಕೊಳ್ಳುತ್ತಿದ್ದರು. ಕರಾವಳಿಯಲ್ಲಿ ಹೇಳುವಂತೆ ಹಳತು ಅಡಿಕೆಗೋ ಅಥವಾ ಹೊಸ ಅಡಿಕೆಗೋ ಎಂದುಕೇಳುತ್ತಿದ್ದರು.ಆದರೆ ಎರಡು ದಿನಗಳ ಬಳಿಕ ದೊರೆತ ಮಾಹಿತಿ ಎಂದರೆ ಈ ಬೆಂಬಲ ಬೆಲೆ ಕರಾವಳಿಯಲ್ಲಿ ಬೆಳೆಯುವ ಚಾಲಿ ಅಡಿಕೆಗೆ ಅಲ್ಲ ಇದು ಕೇವಲ ಶಿವಮೊಗ್ಗದ ಹಾಗೂ ಆ ಭಾಗದಲ್ಲಿ ಬೆಳೆಯುವ ಕೆಂಪಡೆಗೆ ಮಾತ್ರಾ.ಇದರಿಂದಾಗಿ ಕರಾವಳಿಯ ರೈತರು ತೀರಾ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.ಅಡಕೆ ಬೆಳೆ ಮಾತ್ರವಲ್ಲ ರೈತರು ಬೆಳೆಯುವ ಯಾವುದೇ ಉತ್ಪನ್ನವಿರಬಹುದು ಅದಕ್ಕೆ ತಮ್ಮ ಉತ್ಪಾದನಾ ವೆಚ್ಚದ ಶೇಕಡಾ 7ರಷ್ಟು ಲಾಭವಿರಿಸಿ ಬೆಂಬಲ ಬೆಲೆಯನ್ನು ಸರಕಾರವು ನಿಗದಿಪಡಿಸಬೇಕು ಎಂದು ಹೇಳುತ್ತಾರೆ ರೈತರು. ಆದರೆ ಸರಕಾರ ಮಾತ್ರಾ ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಎಂಬ ನ್ಯಾಯವನ್ನು ಹೊಂದಿರುವುದು ಸರಿಯಲ್ಲ.

ರಾಜ್ಯದಲ್ಲಿ ಬೆಳೆಯುವ ಅಡಿಕೆಯಲ್ಲಿ ಶೇಕಡಾ 70 ರಿಂದ 75 ರಷ್ಟು ಚಾಲಿ ಅಡಿಕೆಯನ್ನು ಸಂಸ್ಕರಿಸಿದರೆ ಶೇಕಡಾ 25 ರಿಂದ 30 ರಷ್ಟು ಕೆಂಪಡಗೆ ಸ್ಥಾನವಿದೆ ಎಂದು ಅಂಕಿ ಅಂಶ ಹೇಳುತ್ತದೆ. ಈಗ ಸರಕಾರ ನೀಡಿರುವ ಬೆಂಬಲ ಬೆಲೆ ಶೇಕಡಾ ೩೦ ರಷ್ಟಿರುವ ಕೆಂಪಡಕೆಗೆ ಮಾತ್ರಾ. ಅಂದು ಅಡಿಕೆಗೆ ಬೆಂಬಲ ಬೆಲೆಗಾಗಿ ಹೋರಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಡಿ.ವಿ.ಸದಾನಂದ ಗೌಡರು ಈಗ ಈ ಬಗ್ಗೆ ಯಾವ ಪ್ರತಿಕ್ರಿಯೆ ನೀಡುತ್ತಾರೆ.ಮಾತ್ರವಲ್ಲ ಈಗ ಕರಾವಳಿಯ ಅಡಕೆ ಬೆಳೆಗಾರರು ಬೇರು ಹುಳ, ಹಳದಿ ರೋಗ ಸೇರಿದಂತೆ ಇನ್ನಿತರ ಸಮಸ್ಯೆಯಿಂದ ಬಳಲುತ್ತಿರುವ ಈ ಸಂದರ್ಭದಲ್ಲಾದರೂ ಸರಕಾರ ಗಮನಹರಿಸಬೇಕಿದೆ.

02 ಮಾರ್ಚ್ 2009

ಭಕ್ತಿಯ ಸೇತುವೆ





ಈ ಸುದ್ದಿ ನನಗೆ ಮುಖ್ಯ ಅನಿಸಿತ್ತು.ಯಾಕೆಂದ್ರೆ ನಾವು ಯಾವಾಗಲೂ ಸಮಸ್ಯೆಗಳತ್ತಲೇ ಸುಳಿಯುತ್ತಿರುವವರು.ಹಾಗೆಂದು ಇಲ್ಲಿ ಸಮಸ್ಯೆಯೇ ಇಲ್ಲ ಎಂದಲ್ಲ.ಸಮಸ್ಯೆಯ ಕಾರಣದಿಂದಲೇ ಈ ಸೇತುವೆ ರಚನೆಯಾದದ್ದು.ಆದರೆ ಇಲ್ಲೊಂದು ಸಮಾಧಾನವಿದೆ. ಸೇತುವೆ ನಿರ್ಮಾಣದ ಅಷ್ಟು ಸಮಯದಲ್ಲಾದರೂ ಶಕ್ತಿಯ ಸದ್ಭಳಕೆಯಾಯಿತಲ್ಲಾ..ಸ್ವತಹ ಭಗವಂತನೇ ಮೆಚ್ಚುವ ಕೆಲಸ ಮಾಡಿದ್ದಾರಲ್ಲಾ. ಕೆಲದಿನಗಳವರೆಗೆಯಾದರೂ ನೆನಪಿಸುವಂತೆ ಮಾಡಿದ್ದಾರಲ್ಲಾ. ಹಾಗಾಗಿ ಇಂತಹ ಕೆಲಸಗಳಾಗುತ್ತಿದ್ದರೆ ಇನ್ನಷ್ಟು ದೇವಸ್ಥಾನಗಳು ಸಭಿವೃದ್ದಿಯಾಗಲಿ ಎಂದು ಆಶಿಸುವವನು ನಾನು.ಅದಿಲ್ಲವಾದರೆ ನೋಡಿ ಅದೆಷ್ಟೋ ದೇವಸ್ಥಾನಗಳು ಇತ್ತೀಚೆಗೆ ಜೀರ್ಣೋದ್ದಾರ ಆಗಿವೆ. ಅಭಿವೃದ್ಧಿಯಾಗಿವೆ.ಹೊಸದಾಗಿ ನಿರ್ಮಾಣವೂ ಆಗಿದೆ. ಆದರೆ ಈಗ ಅಂತಹ ದೇವಸ್ಥಾನಗಳಿಗೆ ಒಮ್ಮೆ ಹೋಗಿ ನೋಡಿ.ಅಲ್ಲಿ ಒಳಜಗಳ, ಪಾಳು ಬಿದ್ದಿರುವ ವಸ್ತುಗಳು, ಅತೃಪ್ತ ಪುರೋಹಿತ, ಕಲ್ಮಶಯುಕ್ತ ಆಡಳಿತ ವರ್ಗ ಹೀಗೇ ಎಲ್ಲವೂ ಇರುವ ದೇವಾಲಯವಾಗಿರುತ್ತದೆ. ಅಂದು ವೈಭವಯುತವಾಗಿ ಕಾರ್ಯಕ್ರಮ ನಡೆದದ್ದು ಇಲ್ಲೇ ಅಂತ ಮನಸ್ಸಿನೊಳಗೆ ಪ್ರಶ್ನೆ ಹಾಕುವಂತೆ ಮಾಡುತ್ತದೆ.ನಿಜವಾದ ಬ್ರಹ್ಮಕಲಶವಾಗಬೇಕಾದ್ದು ದೇವಸ್ತಾನಕ್ಕಲ್ಲ ನಮ್ಮ ಹೃದಯಕ್ಕೆ.ಯಾಕೆಂದ್ರೆ ಎಲ್ಲವೂ ಇಲ್ಲೇ ಇದೆ. ಅದು ಮಾತ್ರವಲ್ಲ ಗರ್ಭಗುಡಿಯಲ್ಲಿ ಪ್ರತಿಷ್ಠೆಯಾದಂತೆ ನಮ್ಮೊಳಗಿನ ಪ್ರತಿಷ್ಠೆ ಇಲ್ಲವಾಗಬೇಕು ಎಂಬುದು ನನ್ನ ಅನಿಸಿಕೆ.ಆದರೆ ಈ ದೇವಸ್ಥಾನ ಹೇಗೆ ಅಂತ ಗೊತ್ತಿಲ್ಲ.ಆದರೆ ಈಗಂತೂ ಒಳ್ಳೆಯ ಕೆಲಸವನ್ನು ಇಲ್ಲಿನನ ಜನ ಮಾಡಿದ್ದಾರೆ. ಜೀರ್ಣೋದ್ದಾರದ ಸಮಯದಲ್ಲಿ ಊರಿನ ಅಭಿವೃದ್ದಿಗೂ ಕಾರಣವಾಗಿದ್ದಾರೆ.


ಅಂದು ಲಂಕೆಗೆ ಹೋಗಲು ರಾಮನ ಮೇಲಿನ ಭಕ್ತಿಯಿಂದ ವಾನರ ಸೇನೆಯು ಸೇತುವೊಂದನ್ನು ರಾಮೇಶ್ವರದಿಂದ ಲಂಕೆಗೆ ನಿರ್ಮಿಸಿದರು ಎಂದು ರಾಮಾಯಣದಲ್ಲಿ ಕೇಳಿದ್ದೇವೆ.ಆ ಬಗ್ಗೆ ಇತ್ತೀಚೆಗೆ ವಿವಾದವಾದ್ದನ್ನೂ ಕೂಡಾ ವಾನು ತಿಳಿದಿದ್ದೇವೆ. ಆದರೆ ಇಲ್ಲೊಂದು ಸೇತುವೆಯನ್ನು ಭಕ್ತರು ನಿರ್ಮಿಸಿದ್ದಾರೆ.ಇದು ಕೂಡಾ ಭಕ್ತಿಯ ಕಾರಣದಿಂದ ರಚನೆಯಾದ ಸೇತುವೆ.ಈ ಸೇತುವೆ ರಚನೆಯಾದದ್ದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಅಡೆಂಜ ಎಂಬಲ್ಲಿ.

ನೂಜಿಬಾಳ್ತಿಲದ ಕಲ್ಲುಗುಡ್ಡೆ ಪ್ರದೇಶದಲ್ಲಿರುವ ಮಹಾಗಣಪತಿ ಹಾಗೂ ಪಂಚಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶ ಮಹೋತ್ಸವವು ನಡೆಯುವುದಕ್ಕೆ ಸಿದ್ದತೆ ನಡೆಯುತ್ತಿದೆ. ಈ ದೇವಸ್ಥಾನದ ಪಕ್ಕದಲ್ಲಿ ಗುಂಡ್ಯ ಹೊಳೆಯು ಹರಿಯುವ ಕಾರಣ ನದಿಯ ಅ ಕಡೆ ಇರುವ ಭಕ್ತರಿಗೆ ನದಿ ದಾಟಲು ಅನಾದಿ ಕಾಲದಿಂದಲೂ ಅಸಾಧ್ಯವಾಗಿತ್ತು. ಹೀಗಾಗಿ ಇವರು ದೇವಸ್ಥಾನಕ್ಕೆ ಬರಬೇಕಾದರೆ ಸುಮಾರು 6 ರಿಂದ 15 ಕಿ ಮೀ ದೂರ ಸುತ್ತು ಬಳಸಿ ಅಥವಾ ದೋಣಿಯಲ್ಲಿ ಬರಬೇಕಾಗಿತ್ತು. ದೇವಸ್ಥಾನದ ಬ್ರಹ್ಮಕಲಶದ ಈ ಸಂದರ್ಭದಲ್ಲಿ ಭಕ್ತರ ಓಡಾಟ ಹೆಚ್ಚಾಗಿರುವುದರಿಂದ ಮತ್ತು ತುರ್ತು ಕೆಲಸಗಳಿಗೆ ತೀರಾ ತೊಂದರೆಯಾಗಿತ್ತು. ಇದಕ್ಕಾಗಿ ಭಕ್ತರ ೧೮ ಜನರ ಸಮಿತಿಯೊಂದನ್ನು ರಚನೆ ಮಾಡಿ ಅವಿರತವಾಗಿ ಶ್ರಮದಾನದ ಮೂಲಕ ದುಡಿದು ಸೇತುವೆಯನ್ನು ರಚನೆ ಮಾಡಿದರು.ಇದರಿಂದಾಗಿ ನಡೆದಾಟಲು ಮತ್ತು ದ್ವಿಚಕ್ರ ಓಡಿಸಲು ಈಗ ಸಾಧ್ಯವಾಗಿದೆ. ಹೀಗಾಗಿ ಈಗ ಸ್ಥಳಿಯ ಭಕ್ತರಿಗೆ ಮಾತ್ರವಲ್ಲ ಅನ್ಯರಿಗೂ ತೀರಾ ಅನುಕೂಲವಾಗಿದೆ.




ಈ ಸೇತುವೆ ರಚನೆಗೆ ಭಕ್ತಿ ಹಾಗೂ ದೇವರ ಸೇವೆ ಮಾಡುವ ತವಕವೇ ಕಾರಣವೆಂದು ಇಲ್ಲಿನ ಭಕ್ತರು ಹೇಳುತ್ತಾರೆ. ಸೇತುವೆ ರಚನೆ ಸಮಿತಿಯ ೧೮ ಜನ ಹಾಗೂ ಇನ್ನಿತರೂ ಸೇತುವೆ ರಚನೆಗೆ ದುಡಿದಿದ್ದಾರೆ.ಸುಮಾರು 150 ರಿಂದ 200 ಮೀಟರ್ ಅಗಲ ಇರಬಹುದಾದ ಈ ಗುಂಡ್ಯ ನದಿಗೆ 20 ರಿಂದ 25 ದಿನಗಳಲ್ಲಿ ಸೇತುವನ್ನು ನಿರ್ಮಿಸಿದ್ದಾರೆ. ಈಗ ಈ ಬಗ್ಗೆ ಅವರಿಗೆ ಸಂತಸವಿದೆ.ಭಕ್ತಿಯೇ ಸೇತುವೆಗೆ ಮೂಲ ಕಾರಣ ಎನ್ನುತ್ತಾರೆ. ಸೇತುವೆಯ ನಿರ್ಮಾಣದಿಂದ ಅನೇಕ ಮಂದಿಗೆ ಉಪಕಾರವಾಗಿದೆ.

ಇಲ್ಲಿನ ಸಾರ್ವಜನಿಕರು ಈ ಭಾಗದಲ್ಲಿ ತೂಗು ಸೇತುವೆಯಾಗಬೇಕು ಎಂದು ಹಲವಾರು ವರ್ಷಗಳಿಂದ ಸರಕಾರವನ್ನು ಹಾಗೂ ಸಂಬಂಧಿತರನ್ನು ಒತ್ತಾಯಿಸುತ್ತಲೇ ಬಂದಿದ್ದರು. ಆದರೆ ಆ ಬೇಡಿಕೆ ಈಡೇರಿರಲಿಲ್ಲ.ಇಲ್ಲಿ ತೂಗು ಸೇತುವೆ ನಿರ್ಮಾಣವಾದರೆ ರಾಷ್ಟ್ರೀಯ ಹೆದ್ದಾರಿಯಿಂದಲೂ ಅತಿ ಸನಿಹದಿಂದ ಈ ದೇವಸ್ಥಾನ ಹಾಗೂ ನೂಜಿಬಾಳ್ತಿಲ , ಕಲ್ಲುಗುಡ್ಡೆ ಪ್ರದೇಶಕ್ಕೆ ಸಂಪರ್ಕ ಹೊಂದಬಹುದಾಗಿದೆ. ಆದುದರಿಂದ ಈಗ ರಚನೆಯಾದ ಭಕ್ತರ ಭಕ್ತಿ ಸೇತುವಿನಲ್ಲಿ ಮಳೆಗಾಲದ ವೇಳೆ ಸಂಚರಿಸಲು ಅಸಾಧ್ಯ.ಹಾಗಾಗಿ ಸರಕಾರವು ಇತ್ತ ಚಿತ್ತ ಹರಿಸಬೇಕಾಗಿದೆ.

ಒಟ್ಟಿನಲ್ಲಿ ಭಕ್ತಿ ಹಾಗೂ ಧರ್ಮದ ಮೇಲಿನ ಅಭಿಮಾನವು ಇಲ್ಲಿ ಅಂಧಾಭಿಮಾನವಾಗದೆ ಸಂಘಟಿತ ಕೆಲಸದ ಮೂಲಕ ಊರಿಗೆ ಉಪಕಾರವಾಗಿದೆ.ಆದುರಿಂದ ಅಂತಹ ಭಕ್ತಿಯು ಅಭಿವೃದ್ದಿಯತ್ತ ದೃಷ್ಠಿ ನೆಟ್ಟರೆ ಊರು ಅಭಿವೃದ್ದಿಯಾಗಲು ಸಾಧ್ಯ. ಗಲಭೆ, ದೊಂಬಿಗಳಿಗೂ ಕಡಿವಾಣ ಸಾಧ್ಯ ಎನ್ನುವುದು ನನ್ನ ಅನಿಸಿಕೆ. ಹೀಗೆ ಶಕ್ತಿಗಳ ಸದ್ಭಕೆಯಾದರೆ ದೇಶ....???

01 ಮಾರ್ಚ್ 2009

ಅಡಿಕೆ ಪತ್ರಿಕೆಗೆಧನ್ಯವಾದ...



ನನ್ನ ಬ್ಲಾಗ್ ಬಗ್ಗೆ ಮತ್ತು ಬ್ಲಾಗ್ ಬಗೆಗಿನ ನನ್ನ ಅಭಿಪ್ರಾಯವನ್ನು ಈ ತಿಂಗಳ ಅಡಿಕೆ ಪತ್ರಿಕೆಯಲ್ಲಿ ಪ್ರಕಟಿಸಲಾಗಿದೆ. ಈ ಬಗ್ಗೆ ಅಡಿಕೆ ಪತ್ರಿಕೆ ಬಳಗಕ್ಕೆ ಧನ್ಯವಾದಗಳು.ಬ್ಲಾಗ್ ಲೋಕದಲ್ಲಿ ನಾನು ಒಂದು ವರ್ಷದಿಂದ ವಿಹರಿಸುತ್ತಿದ್ದೇನೆ. ಇತ್ತೀಚೆಗೆ ಇದಕ್ಕೆ ಉತ್ತಮ ಪ್ರತಿಕ್ರಿಯೆ ಬರುತ್ತಿದೆ.ಅಡಿಕೆ ಪತ್ರಿಕೆಯಲ್ಲಿ ಈ ಬಗ್ಗೆ ಬಂದ ಬಳಿಕ ಅನೇಕರು ಮಾಹಿತಿಯನ್ನು ಕೇಳುತ್ತಿದ್ದಾರೆ.ಬ್ಲಾಗ್ ಅಂದರೇನು ಎಂಬುದರಿಂದ ಹಿಡಿದು ವಿಷಯವನ್ನು ಪೋಸ್ಟ್ ಮಾಡುವುದರವರೆಗೆ ಕೇಳುತ್ತಾರೆ. ನಾನು ಕೂಡಾ ಆರಂಭದಲ್ಲಿ ಹೀಗೆಯೇ ಕೇಳಿ ತಿಳಿದಿದ್ದೆ. ಆಗ ನನಗೆ ದಾರಿ ಹೇಳಿದವರು ಕುಂಟಿನಿಯವರು.

ನನಗೆ ಈಗ ಖುಷಿಯಾಗಿದೆ. ಕಾರಣ ಗೊತ್ತಾ ?. ನಾನು ಮೂಲತ: ಕೃಷಿ ಕುಟುಂಬದವನು.ಮುಂದೆಯೂ ಇದೇ ನನ್ನ ಜೀವನ.ಸದ್ಯ ಮಾಧ್ಯಮದ ಕ್ಷೇತ್ರದಲ್ಲಿ ಕೆಲಸ ಮಾಡಿತ್ತಿದ್ದೇನಾದರೂ ನನ್ನ ಮನಸ್ಸು ಕೃಷಿಯನ್ನು ಬಿಡಲಿಲ್ಲ. ಕೃಷಿ ಕ್ಷೇತ್ರದಲ್ಲಿ ಸಮಸ್ಯೆಗಳಿವೆ ಹುಡುಗರು ಇಲ್ಲಿ ಉಳಿಯುತ್ತಿಲ್ಲ , ಕೃಷಿಕ ಕೆಲಸವೆಂದರೆ ನಿಶ್ಪ್ರಯೋಜಕ ಎನ್ನುವ ಈ ಸಂದರ್ಭದಲ್ಲಿಯೂ ನಾನು ಕೃಷಿ ಕಡೆಗೆ ಮುಂದೆ ತೆರಳುವುದು ನಿಶ್ಚಿತ. ಆದರೆ ಕೆಲ ಕಾಲ ಮಾದ್ಯಮ ಕ್ಷೇತ್ರದಲ್ಲಿ ದುಡಿಯುವ ನಿರ್ಧಾರ.

ನನ್ನ ಈ ನಿರ್ಧಾರದಕ್ಕೆ ಇನ್ನಷ್ಟು ಉತೇಜನ ನೀಡಿದ್ದು ಕೃಷಿಕರ ಕೈಗೆ ಲೇಖನಿ ಎನ್ನುವ ಕಲ್ಪನೆಯಿಂದ ಪ್ರಕಟವಾಗುತ್ತಿರುವ ಅಡಿಕೆ ಪತ್ರಿಕೆಯಲ್ಲಿ ನನ್ನ ಅಭಿಪ್ರಾಯ ಪ್ರಕಟಿಸಿದ್ದಕ್ಕೆ ಮತ್ತು ನನ್ನ ಬ್ಲಾಗ್ ಬಗ್ಗೆ ತಿಳಿಸಿರುವುದು. ಇದು ನನಗೆ ತೀರಾ ಖುಷಿಯಾಗಿದೆ. ಹಾಗಗಿ ಈ ಬರಹವು ನನ್ನ ಮುಂದಿನ ಬದುಕಿಗೆ ಸ್ಫೂರ್ತಿ ನೀಡಲಿದೆ ಅಂತ ನಾನು ಅಂದುಕೊಂಡಿದ್ದೇನೆ. ಯಾಕೆಂದರೆ ಅದು ಅಡಿಕೆ ಪತ್ರಿಕೆಯಲ್ಲಿ ಪ್ರಕಟವಾಗಿದೆ.ಕೃಷಿಕರ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಹಾಗಾಗಿ ನನಗೆ ಖುಷಿ. ಈ ಮೊದಲು ಇನ್ನೊಂದು ಪತ್ರಿಕೆಯಲ್ಲೂ ನನ್ನ ಬ್ಲಾಗ್ ಬಗ್ಗೆ ಒಬ್ಬರು ಪ್ರಸ್ತಾಪಿಸಿದ್ದನ್ನು ಈಗ ನೆನಪಿಸಿಕೊಳ್ಳುತ್ತೇನೆ.

ಅಡಿಕೆ ಪತ್ರಿಕೆಯ ಮುಖಪುಟದ ಚಿತ್ರ ನಾ.ಕಾರಂತರ ಬ್ಲಾಗ್ ನಿಂದ ಪಡೆದದ್ದು. ಅವರ ಬ್ಲಾಗ್ ಹಸಿರುಮಾತು.

24 ಫೆಬ್ರವರಿ 2009

ಮನಿ... ಮನಿ...




“ನಾವು ಸಾಲ ಕೊಡುವುದಿಲ್ಲ ಆಗ ನಿಮಗೆ ಹುಚ್ಚು ಹಿಡಿಯುತ್ತದೆ ; ನಾವು ಸಾಲ ಕೊಟ್ಟೆವೆನ್ನಿ ನೀವು ಹಿಂದಿರುಗಿಸುವುದಿಲ್ಲ ಆಗ ನಮಗೆ ಹುಚ್ಚು ಹಿಡಿಯುತ್ತದೆ ; ಹಾಗಾಗಿ ಯಾರಿಗೂ ಹುಚ್ಚು ಹಿಡಿಯುವುದು ಬೇಡ...”

ಇದು ಅಂಗಡಿಯೊಂದರಲ್ಲಿ ಕಂಡು ಬಂದ “ನುಡಿ ಮುತ್ತು”. ಅಂಗಡಿಯಾತ ಈ ವಾಕ್ಯವನ್ನು ಎದುಗಡೆಯಲ್ಲಿ ದೊಡ್ಡದಾಗಿ ಹಾಕಿದ್ದಾನೆ. ಎಲ್ಲರೂ ನೋಡುತ್ತಾರೆ. ಮತ್ತೆ ಆ ಕಡೆ ಈ ಕಡೆ ನೋಡಿ ಸರ್, 1 ಸಾವಿರ ಕಡಿಮೆ ಇದೆ ನಾಳೆ ಕೊಡುತ್ತೇನೆ ಎಂದಾಗ ಅಂಗಡಿಯಾತ ಕಸಿವಿಸಿ ಮಾಡಿ ಸರಿ ಅಂತಾನೆ..

ಇಂತಹ ಅದೆಷ್ಟೋ ವಾಕ್ಯಗಳು ಅಲ್ಲಲ್ಲಿ ರಾರಾಜಿಸುತ್ತಿರುತ್ತದೆ. ಸರಕಾರಿ ಬಸ್ಸುಗಳಲ್ಲಂತೂ ಇಂತಹ ವಾಕ್ಯಗಳು ಬಸ್ಸಿನಲ್ಲಿಡೀ ಕಾಣಿಸುತ್ತದೆ. “ ಸತ್ಯ ಮೇವ ಜಯತೆ “ ಅಂತ ಒಂದೆಡೆ ಇದ್ದರೆ , ಟಿಕೆಟ್ ಕೇಳಿ ಪಡೆಯಿರಿ ಅಂತ ಇನ್ನೊಂದು ಕಡೆ ಇರುತ್ತದೆ. ಇಷ್ಟೆಲ್ಲಾ ಇದ್ದರೂ ಬಸ್ಸಿನಿಂದ ಇಳಿಯುವಾಗ ಕಂಡಕ್ಟರ್ ಚಿಲ್ಲರೆ ಕೊಟ್ಟಿಲ್ಲ ಅಂತ ಜಗಳ ಮಾಡಿಯೇ ಇಳಿಯ ಬೇಕಾಗುತ್ತದೆ. ಮಹಿಳಾ ಪ್ರಯಾಣಿಕರಿಗಾಗಿ ಪ್ರತ್ಯೇಕ ಆಸನ ಇರುತ್ತದೆ, ಅಂಗವಿಕಲರಿಗಾಗಿ, ಹಿರಿಯ ನಾಗರಿಕರಾಗಿ ಅಂತೆಲ್ಲ ಬೋರ್ಡ್‌ಗಳು ಆದರೆ ಕಂಡಕ್ಟರ್ ಬಂದು ಸರ್ ಆ ಬೋರ್ಡ್ ನೋಡಿ, ಅಂತ ನಮಗೆ ಹೇಳಬೇಕಾಗುತ್ತದೆ.

ತಪ್ಪಲ್ಲ ಇಂದಿನ ವ್ಯವಸ್ಥೆಯೇ ಹಾಗೆ.ನಾವು ಹೇಳುವ ಮಾತು, ವಿಚಾರಗಳು ನಮಗಲ್ಲ , ಅದು ಅವನಿಗೆ.ಅವನು ಅನುಸರಿಸಿದರೆ ಸರಿ, ಇಲ್ಲಾಂದ್ರೆ ನಮ್ಮಂತೆ ಅವನು ಕೂಡಾ. ಇತ್ತೀಚೆಗೆ ಒಬ್ರು ಹೇಳಿದ್ರು. ನಾವು ಎಲ್ಲವನ್ನೂ ಅವನಿಗಾಗಿ ಬಿಟ್ಟರೆ , ಬಸ್ಸಲ್ಲಿ ಸೀಟೇ ಸಿಗಲ್ಲ, ಮಾತ್ರವಲ್ಲ ಯಾರು ಕೂಡಾ ಬಸ್ಸೇರಲು ಸಾಧ್ಯವೇ ಇಲ್ಲ.ಬಸ್ಸು ಬಂದಾಕ್ಷಣ ಮೇಲೇರಲೆ ಬೇಕು...ರಷ್ ಮಾಡಲ್ ಬೇಕು. . ಸೀಟು ಸಿಗಲೇಬೇಕು.ಸಿಕ್ಕಿಲ್ಲಾಂದ್ರೆ ಇನ್ನೊಂದು ಬಸ್ಸಿನವರೆಗೆ ಕಾಯಬೇಕು.ಹಾಗಾಗಿ ಇಂತಹ "ನ್ಯಾಯ ಬದ್ದ "ಸಲಹೆಗಳು ಮೊದಲು ಅವನಿಗೆ, ಆಮೇಲೆ ನನಗೆ... ಅನ್ನುವುದೇ ಜಗದ ನಿಯಮ.ಏಕೆಂದ್ರೆ ಇದು ಹಣದಿಂದಲೇ ಅಳೆಯುವ ಸಮಾಜ ಸ್ವಾಮಿ. ನಿಮ್ಮಲ್ಲಿ ದುಡ್ಡಿದ್ರೆ ನೀವು ದೊಡ್ಡಪ್ಪ ಇಲ್ಲಾಂದ್ರೆ ಚಿಕ್ಕಪ್ಪ...!!??


ಆ ಒಂದು ವಾಕ್ಯ ಇಷ್ಟು ದೂರಕ್ಕೆ ಕರೆತಂದಿತು.


ಸತ್ಯ ಹೌದಲ್ವಾ..???

22 ಫೆಬ್ರವರಿ 2009

ದಿಕ್ಕಿಲ್ಲದ ಪರಿಹಾರ....




ಏನು ಪರಿಹಾರ....?????

ರೈತ ಪರ ಸರಕಾರ ಎಂದು ಹೇಳಿಕೊಳ್ಳುವ ಯಾವುದೇ ಸರಕಾರಗಳು ರೈತ ಪರ ಇರುವುದು ಸ್ಪಲ್ಪ ಕಡಿಮೆಯೇ.ಇರಲಿ ಈಗ ಆ ಬಗ್ಗೆ ಯೋಚಿಸುವ ,ದಾಖಲಿಸುವುದಕ್ಕೆ ಹೋಗುವುದಿಲ್ಲ.ಕಾರಣ ನಾನು ಹೇಳಬೇಕೆಂದಿದ್ದು ,ದಾಖಲಿಸಬೇಕೆಂದಿದ್ದು ಅದಲ್ಲ.ಆದರೂ ಮೊದಲಿಗೆ ಈ ಅಕ್ಷರ ದಾಖಲಿಸಬೇಕಾಗಿ ಬಂದಿದೆ ಕಾರಣ ಕೊನೆಗೆ ತಿಳಿಸುವೆ.

ನಾನು ಅಡಿಕೆ ಬೇರುಹುಳಕ್ಕೆ ಸಂಬಂಧಿಸಿದ ವಿಚಾರ ಸಂಕಿರಣವೊಂದಕ್ಕೆ ಹೋಗಿದೆ. ಅಲ್ಲಿ ರಾಜ್ಯದ ಪ್ರತಿಷ್ಠಿತ ಕೃಷಿ ವಿವಿಯ ವಿಜ್ಞಾನಿಗಳು ಕರಾವಳಿಯ ಪ್ರಮುಖ ಸಂಶೋಧನಾ ಕೇಂದ್ರದ "ಪ್ರಮುಖ" ವಿಜ್ಞಾನಿಗಳು ಬಂದಿದ್ದರು.ನಾವು ಯಾವಾಗಲೂ ಇಂತಹ ಕಾರ್ಯಕ್ರಮಕ್ಕೆ ಹೋಗುವಾಗ ಒಂದು ರೀತಿಯ ಪೂರ್ವಾಗ್ರಹ ಪೀಡಿತರಂತೆ ಭಾಗವಹಿಸುವುದು ಸಾಮಾನ್ಯ ಏಕೆಂದರೆ ಇಲ್ಲಿ ವಿಜ್ಞಾನಿಗಳ ಹೆಚ್ಚಿನವರು ವಿವರಿಸುವುದು ಪುಸ್ತಕದ ಒಳಗಿನ ಮತ್ತು ಹಳೆಯ ಕತೆಗಳನ್ನೇ.ಪ್ರಶ್ನೆ ಕೇಳಿದರೆ ನೀವು ಹಾಗೆಲ್ಲಾ ಮಾಡಿದರೆ ಆಗದು ಎಂದು ಗದರಿಸಿ ಸುಮ್ಮನಿರಿಸಿ ಬಿಡುತ್ತಾರೆ. ಆದರೆ ಇಂದು ನಾವು ಹೋದಾಗ ಪೂರ್ವಾಗ್ರಹ ಪೀಡಿತರಂತೆ ಹೋಗಲಿಲ್ಲ. ಬದಲಾಗಿ ಬ್ಲಾಂಕ್ ಆಗಿ ಹೋದೆವು. ಅದಕ್ಕೂ ಒಂದು ಕಾರಣವಿತ್ತು. ಅಲ್ಲಿ ಕಾರ್ಯಕ್ರಮ ಸಂಯೋಜಿಸುವವರು ಮಾಜಿ ರಾಷ್ಡ್ರಪತಿ ಎಜಿಜೆ ಕಲಾಂ ಅವರಿಗೆ ಇ ಮೈಲ್ ಬರೆದು ತಮ್ಮ ಸಮಸ್ಯೆಯನ್ನು ತೋಡಿಕೊಂಡಿದ್ದರು.ಹಾಗಾಗಿ ಈ ವಿಜ್ಞಾನಿಗಳಿಗೆ ಅನೇಕ ವರ್ಷದ ಹಿಂದಿನ ಸಮಸ್ಯೆ ಕೂಡಾ ಹೊಸದಾಗಿ ಕಂಡಿತು.ಅದೆಷ್ಟೋ ಮಾಧ್ಯಮಗಳು ಈ ಬಗ್ಗೆ ಗಮನಸೆಳೆದಿದ್ದರೂ ಎಚ್ಚರವಾಗಿರಲಿಲ್ಲ. ಈಗ ಕಲಾಂ ಅವರ ನಿರ್ದೇಶನದಂತೆ ಆ ವಿಜ್ಞಾನಿಗಳು ಬಂದಿದ್ದಾರೆ ಎಂಬ ದೃಷ್ಠಿ ಬೆಳೆಸಿಕೊಂಡು ನಾವು ಆಸಕ್ತಿಯಿಂದ ಕಾರ್ಯಕ್ರಮದಲ್ಲಿ ಒಬ್ಬರಾದೆವು.ಅಲ್ಲಿ ಆ ವಿಜ್ಞಾನಿ ವಿವರಿಸುತ್ತಿದ್ದರು , ನೂರಾರು ಬೆಳೆಗಾರರು , ಬೇರು ಹುಳದ ಸಮಸ್ಯೆಯ ಬಗ್ಗೆ ಮಾಹಿತಿಯನ್ನು ಪಡೆಯಲು ಬಂದಿದ್ದರು. ಕಾರ್ಯಕ್ರಮದ ಅರ್ಧದಲ್ಲಿ ನಮಗೂ ಅರಿವಾಗತೊಡಗಿತು ಇದು ಹಳೆಯ ಕ್ಯಾಸೆಟ್.ಹೊಸ ಟೋನ್...ಹೊಸತೇನೂ ಇಲ್ಲ.ಒಂದು ವಿಚಾರ ಮಾತ್ರಾ ಇಲ್ಲಿ ಖುಷಿ ಕೊಟ್ಟಿದ್ದೇನೆಂದರೆ ಈ ವಿಜ್ಞಾನಿ ರೈತರ ತೋಟಗಳಿಗೆ ಭೇಟಿ ನೀಡಿ ಅಧ್ಯಯನ ಮಾಡಿದ್ದಾರೆ. ಆದರೆ ಕೊನೆಯ ರಿಸಲ್ಟ್ ಮಾತ್ರಾ ಅದೇ ರಾಗ ಅದೇ ಹಾಡು.

ಈ ಮಾಹಿತಿಯ ಬಳಿಕ ನಾವು ಆ ವಿಜ್ಞಾನಿಯೊಂದಿಗೆ ಮಾತನಾಡಿದೆವು.ಅವರು ಮಾತನಾಡುವ ಆರಂಭದಲ್ಲಿ ನೀವು ಏನೇನಾದರೂ ಕೇಳಬೇಡಿ ಎಂದೇ ಮಾತು ಆರಂಭಿಸಿದರು. ಮೊನ್ನೆ ನಿಮ್ಮ ಚಾನೆಲ್‌ನವರು ಕೇಳಿದರು, ರೋಗ ಶುರುವಾಗಿ 10 ವರ್ಷವಾಯಿತು ನೀವೇನು ಮಾಡುತ್ತೀರಿ, ಎಂದು ಪ್ರಶ್ನೆ ಹಾಕಿದರು. ಅವರಿಗೆ ಏನು ಗೊತ್ತು ನಾವು ಅಧ್ಯಯನ ಮಾಡುತ್ತಲೇ ಇದ್ದೇವೆ, ಎಂದು ಹೇಳುತ್ತಾ ಮಾತು ಆರಂಭಿಸಿದರು. ತಕ್ಷಣ ನಾವು ಕೇಳಿದೆವು ಹಾಗಾದ್ರೆ ಈ ಬೇರು ಹುಳ ಶುರುವಾಗಿ ನಿಜಕ್ಕೂಎಷ್ಟು ವರ್ಷವಾಯಿತು ಸರ್ ಎಂದಾಗ, ಅದು ಅಡಿಕೆ ಬೆಳೆ ಶುರುವಾದಾಗಲೇ ಇದೆ ಅಂತಾರೆ. ಹಾಗಾದ್ರೆ ಅವರು ಕೇಳಿದ ಪ್ರಶ್ನೆಯಲ್ಲಿ ತಪ್ಪೇನಿದೆ ಎಂದಾಗ, ಇನ್ನೇನೋ ಉತ್ತರ. ಕೊನೆಗೆ ಈ ರೋಗಕ್ಕೆ , ಕೀಟಕ್ಕೆ ಪರಿಹಾರ ಏನು ಅಂದರೆ, ಇಂತದ್ದೇ ಅಂತ ಪರಿಹಾರ ಇಲ್ಲ.ತೋಟಗಳನ್ನು ಅಗೆದು, ಅಥವಾ ರಾತ್ರಿ ವೇಳೆ ಹುಳುಗಳನ್ನು ತೋಟಗಳಲ್ಲಿ ಹಿಡಿದು ಕೊಲ್ಲುವುದು ಒಂದೇ ದಾರಿ ಎಂದರು. [ ತಿಗಣೆ ಕೊಲ್ಲುವ ಜೋಕ್‌ನಂತೆ]..

ಇನ್ನು ಮಾತನಾಡಿ ಪ್ರಯೋಜನವಿಲ್ಲ ಅಂತ ನಾನು ಮಾತು ನಿಲ್ಲಿಸಿದೆ. ವಿಜ್ಞಾನ ಸೋತಿದೆಯೇ ಅಂತ ಮನದೊಳಗೆ ಹೇಳಿಕೊಂಡೆ.ಯಾಕೆಂದರೆ ಬೇರುಹುಳ ಶುರುವಾಗಿ ಅದೆಷ್ಟೋ ವರ್ಷವಾಯಿತು ಅಂತ ಹೇಳುತ್ತಾರೆ, ನಾವು ಕೆಲಸ ಮಾಡುತ್ತಿದ್ದೇವೆ ಅಂತಾರೆ. ಪರಿಹಾರ ಕೇಳಿದ್ರೆ ಹಿಡಿದು ಕೊಲ್ಲಿ ಅಂತಾರೆ.ಇದನ್ನು ಹೇಳು ಅವರು ಬೇಕಾ..?.ನಮ್ಮ ತೋಟದಲ್ಲೇ ಕೆಲಸ ಮಾಡುವ ಸೀನಪ್ಪನೂ ಹೇಳುತ್ತಾನೆ...!!. ಆದರೂ ಗೌರವ ...

ನನ್ನ ಮಿತ್ರ ಬಿಟ್ಟಿಲ್ಲ .ಆ ವಿಜ್ಞಾನಿಯನ್ನು ಕೇಳಿದ, ನೀವು ಈಗ ಇಲ್ಲಿನ ತೋಟಕ್ಕೆ ಬರುವುದಕ್ಕೆ ಏನು ಕಾರಣ ಅಂತ ಕೇಳಿದ. ಆಗ ,ನೀವು ಕಲಾಂ ಹೆಸರು ಹೇಳಬೇಕೆಂದರೆ ಆಗಲ್ಲ.ನಾವು ಈ ಕಡೆ ಹಿಂದೆಯೇ ಬಂದಿದ್ದೇವೆ ಆದರೆ "ಕಾಂಟ್ಯಾಂಕ್ಟ್‌"ಗೆ ಯಾರೂ ಸಿಕ್ಕಿರಲಿಲ್ಲ ಅಂತಾರೆ. ಮತ್ತೆ ಕಲಾಂ ಕಾರಣರಲ್ವಾ ಅಂದಾಗ , ಇಲ್ಲ.. ಇಲ್ಲ ಅಂದ್ರು.ಹಾಗಾದ್ರೆ ನೀವು ಇಷ್ಟು ಸಮಯ ಏನು ಮಾಡ್ತಿದ್ರಿ ಅಂತ ಕೇಳಿದಾಗ ,ಆ ವಿಜ್ಞಾನಿ ಸಿಡಿಮಿಡಿಯಾದ್ದು ಮಾತ್ರಾ ಅವರ ಮನಸ್ಥಿತಿಯನ್ನು ತಿಳಿಸಿತು.ಹೆಚ್ಚು ಬೇಡ ಅಂತ ಪ್ಯಾಕ್ ಮಾಡಿದೆವು.

ಇಲ್ಲಿ ಗಮನಿಸಬೇಕಾದ್ದು ಅಂದರೆ ಬಹುತೇಕ ಎಲ್ಲಾ ಇಂತಹ ಕೃಷಿ ಸಂಬಂಧಿ ವಿಚಾರ ಸಂಕಿರಣಗಳಲ್ಲಿ ವಿಜ್ಞಾನಿಗಳಿಗೆ ರೈತರ ಅನುಭವ ಮುಖ್ಯವಾಗುವುದಿಲ್ಲ.ವಿಜ್ಞಾನಿಗಳು ಏನು ಓದಿದ್ದಾರೆ ಅದನ್ನು ಹೇಳುತ್ತಾರೆ. ಆ ಬಗ್ಗೆ ಪ್ರಾಕ್ಟಿಕಲ್ ಆದ ವಿಶ್ಲೇಷಣೆ ಇರುವುದಿಲ್ಲ. ಅವರು ಏನಿದ್ರೂ ಆ ಕೆಮಿಕಲ್ ಇಷ್ಟು ಹಾಕಿ.. ಅಷ್ಟು ಹಾಕಿ ಎನ್ನುವ ಗಿಳಿ ಪಾಠ ಹೇಳಿಹೋಗುತ್ತಾರೆ. ನೋಡಿ ಅವರು ಹೇಳಿದ ಪರಿಹಾರ ಎಷ್ಟು ಪ್ರಾಕ್ಟಿಕಲ್ ಅಂತ ನಾವೇ ಆಲೋಚಿಸಬೇಕು.. ಬೇರು ಹುಳ ಕಾಣಿಸಿಕೊಂಡು ಅದೆಷ್ಟೋ ವರ್ಷವಾಯಿತು ಅಂತಾರೆ... ಕೃಷಿಭೂಮಿಯಲ್ಲಿ ಆ ಬಗ್ಗೆ ಅಧ್ಯಯನ ನಡೆದಿಲ್ಲ ಹಾಗಾಗಿಯೇ ಅದಕ್ಕೆ ಪರಿಹಾರವೂ ಸಿಕ್ಕಿಲ್ಲ. ಆದರೆ ಒಂದಂತೂ ಸತ್ಯ ಇಂತಹ ಸಂಕಿರಣಗಳಿಂದ ಒಂದಷ್ಟು ಎಚ್ಚರವಾಗುತ್ತದೆ.ಸರಕಾರಕ್ಕೂ ಅರಿವಾಗುತ್ತದೆ. ರೈತರೊಬ್ಬರ ಆ ಒಂದು ಸಂದೇಶ ಒಂದು ಹೊಸ ದಿಕ್ಕನ್ನು ತೋರಿಸಿದೆ ಅಂದರೆ ತಪ್ಪಾಗಲಾರದು.

ಇನ್ನು ರೈತ ಪರ ಸರಕಾರಗಳಿಗೆ ಇಂತಹ ಸಮಸ್ಯೆಗಳ ಅರಿವಾಗುವುದಿಲ್ಲ.ಸರಕಾರದ ಅಲ್ಲಿನ ಪ್ರತಿನಿಧಿಗಳಿಗೆ 10 ವರ್ಷಗಳಿಂದ ರೋಗವಿದ್ದರೂ ಸರಕಾರದ ಗಮನಸೆಳೆಯಲಾಗಲಿಲ್ಲ.ಇನ್ನು ಹಳದಿ ರೋಗ ಕೂಡಾ ಬಂದು ಸಂವತ್ಸರಗಳೇ ಉರುಳಿತು.ಹಲವಾರು ಮಂದಿ ಭೂಮಿ ಮಾರಿ ಹೋದರು. ಆದರೂ ಸರಕಾರದ ಗಮನವನ್ನು ಆ ಪ್ರತಿನಿಧಿ ಸೆಳೆಯಲೇ ಇಲ್ಲ.ಈಗ ಬಂದು ನಾಡಿದ್ದು ಅಧಿವೇಶನ ವೇಳೆಗೆ ಮಾತನಾಡುತ್ತೇನೆ ಅಂತಾರೆ.ಈ ರೋಗ ಶುರುವಾಗಿ ಇಷ್ಟು ವರ್ಷವಾಯಿತಲ್ಲಾ ತಾವ್ಯಾಕೆ ಮಾತನಾಡಿಲ್ಲ ಅಂದರೆ ಅದು ರೈತರದ್ದೂ ತಪ್ಪಿದೆ...ನಾನೂ ಕೃಷಿಕ ತೋಟಕ್ಕೆ ಸಾವಯವವೇ ಹಾಕಬೇಕು,.. ರಾಸಾಯನಿಕ ಹಾಕಬಾರದು .. ಎಂದು ಪೀಠಿಕೆ ಹಾಕಯತ್ತಾರೆ... ಹಾಗಾದ್ರೆ ಕೃಷಿಕರು ಯಾರತ್ರ ಮಾತನಾಡಬೇಕು... ಸಮಸ್ಯೆ ಯಾರಲ್ಲಿ ಹೇಳಬೇಕು..

ನಮ್ಮ ತಲೆಗೆ ನಮ್ಮದೇ ಕೈ ಅಂತಾರೆ ಹಾಗೆನಾ ಇದು...???


13 ಫೆಬ್ರವರಿ 2009

ಪ್ರೀತಿಗಾಗಿ..

ಪ್ರೀತಿಗಾಗಿ ಒಂದು ದಿನ.. ಇದು ಸಾಕಾ.. ಕೇವಲ ಒಂದು ದಿನದಲ್ಲಿ ಮುಗಿಯುವ ಪ್ರೀತಿ ನಮಗೆ ಬೇಕಾ ಎನ್ನುವ ನನ್ನ ವೈಯಕ್ತಿಕ ಪ್ರಶ್ನೆಗಳೊಂದಿಗೆ ಯೋಚಿಸುತ್ತಾ ಸಾಗುವಾಗ ದಾರಿ ಸಾಗಿದ್ದು ಹೀಗೆ...

ಪ್ರೀತಿ ಅದೊಂದು ಜೀವ ಸೆಲೆ.ಅದು ಯಾರೆಲ್ಲೇ ಸ್ಫುರಿಸಬಹುದು.ಹಾಗಾಗಿ ಅದು ನಿತ್ಯದ ಜೀವನದ ಜೊತೆಗೆ ಸಾಗುವ ಜೊತೆಗಾರ.ಹಾಗಾಗಿ ಅದನ್ನು ಬಿಟ್ಟಿರಲು ಯಾವುದೇ ಜೀವಕ್ಕೆ, ಹೃದಯಕ್ಕೆ ಸಾಧ್ಯವಿದೆಯೇ?.ಆದರೆ ಇಂದು ಅದೇ ಪ್ರೀತಿಯ ವಿರುದ್ಧ ಅಲೆಗಳು ಎದ್ದಿವೆ.ಅದು ಕೇವಲ ವಿರೋಧಕ್ಕಾಗಿ ಅಲ್ಲ. ನೈಜ ಪ್ರೀತಿಗೆ ಬೆಂಬಲವಿದೆ ಅಂತಲೂ ಮಾತು ಕೇಳಿಬರುತ್ತಿದೆ.ಅಂದರೆ ಇಲ್ಲಿ ನೈಜ ಹಾಗೂ ಕಪಟ ಪ್ರೀತಿ ಇದೆ ಎನ್ನುವುದು ಬಹಿರಂಗವಾದಂತಾಯಿತು. ಬಹುಶ: ಸಮಾಜ , ಅದರೊಳಗಿರುವ ,ಮನಸ್ಸುಗಳು ಇಂದು ಇಂತಹ ೨ ಮುಖಗಳನ್ನು ಹೊಂದಿರುವ ಕಾರಣದಿಂದಾಗಿಯೇ ಅರಳುವ ಕೆಂಗುಲಾಬಿಗಳು ಮುದುಡುವ ಹಂತಕ್ಕೆ ಬಂದಿದೆ.ಎಲ್ಲೆಲ್ಲೂ ದೊಂಬಿ, ಗಲಭೆ.. ದ್ವೇಷದ ಹೊಗೆ ಎದ್ದೇಳುತ್ತಿದೆ.ಒಂದಷ್ಡು ಹೊತ್ತು ಪ್ರೀತಿಯಿಂದ ಗೆಳೆಯಲ್ಲಿ ಮುಗ್ದವಾಗಿ ನಿಷ್ಕಲ್ಮಶವಾಗಿ ಮಾತನಾಡಲು ಸಮಯವೇ ಇಲ್ಲದಾಗಿದೆ.

ಮೊನ್ನೆ ದಾಳಿ ಮಾಡಿದ ಜನರಿಗೆ ಮೊದಲು ಪ್ರೀತಿ ಅಂದರೆ ಏನು?. ಅದರ ಮೂಲಕ ಏನನ್ನು ವಿವರಿಸಬಹುದು.. ಹೇಗೆ ಮನಸ್ಸನ್ನು ಬದಲಾಯಿಸಬಹುದು ಎನ್ನುವ ಪಾಠವನ್ನು ಇಂದು ವಿವರಿಸಬೇಕಾಗಿದೆ ಎಂದರೆ ತಪ್ಪಾಗಲಾರದು ಅಂತ ಮಿತ್ರನೊಬ್ಬ ಹೇಳುತ್ತಿದ್ದುದು ಸರಿ ಅಂತ ಅನ್ನಿಸಿತು.

ಪ್ರೀತಿ ಎಂದಾಕ್ಷಣ ಅದು ಯುವ ಮನಸ್ಸುಗಳ ನಡುವಣ ಭಾವನೆಗಳ ಕೊಂಡಿ ಎನ್ನುವ ಪರಿಭಾಷೆ ಬಂದುಬಿಡುತ್ತದೆ. ಈಗ ಪ್ರೀತಿಗೆ ಅದೊಂದೇ ಅರ್ಥವೇ ಎಂದು ನಂಬಬೇಕಾಗುತ್ತದೆ. ಗೆಳೆಯರ ನಡುವೆ, ಮಗುವಿನ ನಡುವೆ, ಅಮ್ಮನ ನಡುವೆ ಇರುವುದು ಏನು?.ಅದನ್ನು ಹೇಳಬೇಕಾದುದು ಏನು.? ಅಂತಹ ಪ್ರೀತಿಯನ್ನು ವ್ಯಕ್ತಪಡಿಸಲು ನಮಗೆ ದಿನವೊಂದು ಬೇಕೇ?. ಅನುದಿನವೂ ಅದೇ ಭಾವ ... ಅದೇ ಪ್ರೀತಿ.... ಹಾಗಾಗಿ ಅಂತಹ ಅಮರ ಪ್ರೀತಿಯನ್ನು ವ್ಯಕ್ತಪಡಿಸುಚುದಕ್ಕಾಗಿ ಮತ್ತು ಅದನ್ನು ಸಂಭ್ರಮಿಸಲು ದಿನ ಬೇಕು ಅಂತ ನನಗನ್ನಿಸುವುದಿಲ್ಲ. ನಮ್ಮ ಹಿಂದೆ ನೋಡಿದರೆ ದೇವತೆಗಳ ಕಾಲದಿಂದಲೂ ಪ್ರೀತಿಯ ದಾರಿಗಳೇ ಕಾಣುತ್ತವೆ. ಅದಕ್ಕಾಗಿ ಸ್ಮಾರಕಗಳೇ ಕಾಣುತ್ತವೆ. ದೇವತೆಗಳ ನಡುವೆ ಯುದ್ದ ನಡೆದ್ದನ್ನು ಕಾಣುತ್ತೇವೆ.ಆದರೂ ಅವರಾರು ಅದಕ್ಕೊಂದು ದಿನ ಅಂತ ಮಾಡಿಲ್ಲ. ಆದರೆ ಇದು ಈಗಿನ ಫ್ಯಾಷನ್. ಇತ್ತೀಚೆಗೆ ಅದು ಇನ್ನೂ ಫ್ಯಾಷನ್ ಆಗಿದೆ.
ಇತ್ತೀಚೆಗಿನ ಪ್ರೀತಿಗಳೆಲ್ಲವೂ ಕಾಲೇಜಿನಲ್ಲಿ ಹುಟ್ಟಿ ಅಲ್ಲಿಗೇ ಕೊನೆಗೊಳ್ಳುವ ಉದಾರಣೆಗಳೇ ಹೆಚ್ಚು.ಅಂದರೆ ಅಲ್ಲಿ ಪ್ರೀತಿ ಅಂದರೆ ಕಾಮದ ಅರ್ಥ ಬರುತ್ತದೆ, ಟೈಂಪಾಸ್ ರೂಪ ಸಿಗುತ್ತದೆ.. ಖರ್ಚು ಮಾಡಲು ಮತ್ತು ಮಾಡಿಸಲು ವೇದಿಕೆಯಾಗಿ ಬಿಡುತ್ತದೆ.ಹಾಗಾಗಿ ಅದಕ್ಕೊಂದು ದಿನ ಅಂತ ಇದ್ದರೆ ಇನ್ನೂ ಚೆನ್ನಾಗಿರುತ್ತದೆ ಹಾಗಾಗಿ ಈ ದಿನಕ್ಕೆ ಬಂತು ಬೇಡಿಕೆ.

ಆದರೆ ನಿಜವಾದ ನಿಷ್ಕಲ್ಮಶ ಪ್ರೀತಿಗೆ ದಿನವೊಂದು ಬೇಕಾ?.ಅದು ಸಹೃದಯದ ನಡುವಣ ಕೊಂಡಿಯಾಗಿರುವಾಗ ಅದಕ್ಕೊಂದು ದಿನ, ಆ ದಿನವೊಂದರಲ್ಲಿ ಸಂಭ್ರಮಿಸಿದರೆ ಸಾಕಾ?.ನಿತ್ಯ ಹಸಿರಾಗಿರುವ ಆ ಪ್ರೀತಿಯಲ್ಲಿ ದ್ವೇಷದ ಕಿಡಿ ಹೊತ್ತಿಸಬೇಕಾ ಎನ್ನುವ ಪ್ರಶ್ನೆಗಳಿಗೆ ಉತ್ತರದ ಹುಡುಕಾಟ.... ಅದು ಪ್ರೀತಿಯ ಹುಡುಕಾಟ..

11 ಫೆಬ್ರವರಿ 2009

ಒಂದೇ ದಿನದಲ್ಲಿ

ಇಂದು ಬಹುದೊಡ್ಡ ಚರ್ಚೆ ನಡೆಯುತ್ತಿದೆ. ಅವರು ನಾರಿಯರಿಗೆ ಸೀರೆ ಕೊಡ್ತಾರಂತೆ , ನಾರಿಯರು ಒಳ ಉಡುಪನ್ನು ನೀಡುತ್ತಾರಂತೆ.ಅವರು ಮಾನ ಮುಚ್ಚಿದರೆ ಇವರು ಮಾನ ತೆಗೀತಾರಂತೆ.... ಇದು ಚರ್ಚೆಯಾಗುವ ಸಂಗತಿ. ಅಸಲಿಗೆ ಇದು ಪ್ರತಿಭಟನೆಯೋ ಅಲ್ಲ ಮನರಂಜನೆಯೋ ಗೊತ್ತಿಲ್ಲ.ಆದರೂ ಸುದ್ದಿಯಾಗುತ್ತಿದೆ.

ಒಂದು ವರ್ಷದ ಹಿಂದೆ ಇದೇ ಸೇನೆಯಿಂದ ಫೆ.14 ಸುಮಾರಿಗೆ ಪ್ರೇಮಿಗಳ ದಿನಾಚರಣೆಗೆ ವಿರೋಧ ವ್ಯಕ್ತಪಡಿಸಿದ್ದರು.ಈ ಬಾರಿಯೂ ಅದೇ ಹೇಳಿಕೆ.. ಆದರೆ ಈಗಿನ ಹೇಳಿಕೆಯಲ್ಲಿ ಕೊಂಚ ಬದಲಾವಣೆಯಿತ್ತು ಪ್ರೇಮಿಗಳು ನಮಗೆ ಸಿಕ್ಕರೆ ತಾಳಿ ಕಟ್ಟಿಸುತ್ತೇವೆ ಅಂತಾರೆ.. ಹಾಗಾಗಿ ಸುದ್ದಿಯಾಯಿತು ಅಂತ ಹೇಳಲು ಸಾಧ್ಯವಿಲ್ಲ. ಏಕೆಂದರೆ ಅವರ ಅಂತಹ ಹೇಳಿಕೆಗಳಿಗೆ ಅಂದು ಅಷ್ಟು ಮಹತ್ವವೇ ಇದ್ದಿರಲಿಲ್ಲ ಮಾತ್ರವಲ್ಲ ಸುದ್ದಿಯಾಗುತ್ತಿರಲಿಲ್ಲ. ಯಾವಾಗ ಅದೇ ಸೇನೆಯ ಮುಖ್ಯಸ್ಥರು ಎರಡೆರಡು ಬಾರಿ ಬಂಧನವಾಗಿ ಮೂರ್‍ನಾಕು ಘಟನೆಗಳು ದೇಶ ಮಟ್ಟದಲ್ಲಿ ಪ್ರಚಾರ ಪಡೆದ ನಂತರ ಆ ಸೇನೆಯು ದೇಶದ ಗಮನ ಸೆಳೆಯಿತು.ಅಷ್ಟು ದೊಡ್ಡ ಮಟ್ಟದ ಪ್ರಚಾರ ಈ ಸೇನೆಗೆ ಸಿಕ್ಕಿದೆ.ಹಾಗಾಗಿ ಇಂದು ಆ ಸಂಘಟನೆಯ ಹೇಳಿಕೆಯೂ ಅಷ್ಟೇ ಸೀರಿಯಸ್ಸಾಗಿ ಕಂಡಿದೆ. ಆದುದರಿಂದ ಮಂಗಳೂರಿನಲ್ಲಿ ಜೈಲಿನಿಂದ ಹೊರಬಂದ ಸಂಘಟನೆಯ ನಾಯಕನೊಬ್ಬ ಹೇಳಿದ್ದು ಮಾಧ್ಯಮಗಳಿಗೆ ಕೃತಜ್ಞತೆ ಎಂದು.ಆದರೆ ಅದು ಎಂತಹ ಪ್ರಚಾರ ಎಂದು ಎಲ್ಲರಿಗೂ ತಿಳಿದಿದೆ. ಅದಲ್ಲ ಪ್ರಚಾರ ಎಂತಹುದೇ ಇರಲಿ ಇಂದು ಆ ಸಂಘಟನೆ ಪತ್ರಿಕಾಗೋಷ್ಠಿ ಕರೆದು ಪ್ರೇಮಿಗಳ ದಿನಾಚರಣೆಗೆ ನಮ್ಮ ವಿರೋಧವಿದೆ ಎಂದ ಹೇಳಿಕೆಗೆ ದೇಶದ ಮಧ್ಯ ಭಾಗದಿಂದಲೇ ಪ್ರತಿಕ್ರಿಯೆ ಬರುತ್ತದೆ ಎಂದಾದರೆ ಆ ಸಂಘಟನೆಗೆ ಸಿಕ್ಕ ಪ್ರಚಾರದ ಮತ್ತು ಪವರ್ ಬಗ್ಗೆ ಆಲೋಚನೆ ಮಾಡಬೇಕು. ಕಳೆದ ವರ್ಷ ಇದೇ ಸಮಯದಲ್ಲಿ ಹಾಗೆಯೇ ಪತ್ರಿಕಾಗೋಷ್ಠಿಯಲ್ಲಿ ಹೇಳಿದ ಮಾತು ಆಚರಣೆ ಬಂದಿರಲಿಲ್ಲ.ಸಿಂಗಲ್ ಕಾಲಂನಲ್ಲಿ ಮುಗಿದಿತ್ತು. ಆದರೆ ಈಗಂತೂ ಭಾರೀ ಸುದ್ದಿಯಾಗಿದೆ.ಇದರ ಅರ್ಥ 2 ರೀತಿಯಲ್ಲಿದೆ.ಒಂದು ಅದೇ ಸೇನೆ ಮಂಗಳೂರಿನಲ್ಲಿ ಮಾಡಿದ ದಾಳಿಯಿಂದ ಜನ ಹೆದರಿ ಹೋಗಿದ್ದಾರೆ. ಅಥವಾ ಆ ಸೇನೆಯ ಹೇಳಿಕೆಗಳಿಗೆ ಈಗ ಮಹತ್ವ ಬಂದಿದೆ, ಬೆಲೆ ಬಂದಿದೆ ಅದರ ಹಿಂದೆ ಜನ ಬೆಂಬಲವಿದೆ.... ಇದರಲ್ಲಿ ಯಾವುದು ಸರಿ ಎಂಬುದನ್ನು ನಾವು ವಿಮರ್ಶಿಸಿಕೊಂಡರಾಯಿತು.

ಅದು ಮಾತ್ರವಲ್ಲ ಈ ಎಲ್ಲಾ ಘಟನೆಗಳಿಂದ ಪ್ರೇಮಿಗಳಂತೂ ಹೆದರಿದ್ದು ನಿಜ.ಅವರು ಈ ದಿನವನ್ನು ಬೇರೆ ದಿನಕ್ಕೆ ವರ್ಗಾಯಿಸಿದರೆ ಹೇಗೆ ಅಂತ ಯೋಚಿಸುತ್ತಿದ್ದಾರಂತೆ. ಈ ಗಲಾಟೆಯ ಉಸಾಬರಿಯೇ ಬೇಡ ಮೌನವಗಿ ಬೇರೆ ದಿನ ನಿಗದಿ ಮಾಡೋಣ ಅಂತ ಗುಸುಗುಸು ಶುರುವಾಗಿದೆ.

ಈಗ ನೋಡಿ ಅಂದು ಅದು ನಮ್ಮ ಸಂಘಟನೆ ಅಂತಿದ್ದವರೆಲ್ಲಾ ಈಗ ಅದು ನಮ್ಮದಲ್ಲ... ನಮ್ಮದಲ್ಲ ಅಂತಾರೆ. ಅದು ಬಿಡಿ ಮಂಗಳೂರು ತಾಲಿಬಾನ್ ಆಗಿದೆ ಎಂದು ಸಚಿವೆ ನೀಡಿದ ಹೇಳಿಕೆಗೆ ಪ್ರತಿಭಟನೆ ಮಾಡಲೂ “ಹಿಂದು” ಮುಂದು ನೋಡುತ್ತಿದ್ದಾರೆ. ಒಂದು ವೇಳೆ ಪ್ರತಿಭಟನೆ ಮಾಡಿದರೆ ನಾವು ಸೇನೆ ಸಪೋರ್ಟ್ ಇದ್ದೇವೆ ಎಂದಾಗುತ್ತದೆ... ಅವರವರಿಗೆ ಸ್ವಾತಂತ್ರ್ಯವಿದೆ ಎಂಬ ರಾಗ, ಸೇನೆಯ ಸಹ ಸಂಘಟನೆಗಳಿಂದ ಈಗ ಬರುತ್ತಿದೆ.