17 ಸೆಪ್ಟೆಂಬರ್ 2021

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾರ್ಯದ ಮೂಲಕ ಶುಭಾಶಯ ತಿಳಿಸುವ ಕಾಲ ಇದು...!

  



ಈ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜನ್ಮ ದಿನದ ಶುಭಾಶಯ. 

ಹಲವು ಕಾರಣಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಹೆಮ್ಮೆ ಇರಬಹುದು. ಆದರೆ ಪ್ರಮುಖವಾದ ಎರಡು ಕಾರಣಗಳು, ಅಂತರಾಷ್ಟ್ರೀಯ ಮಟ್ಟದಲ್ಲಿ  ಭಾರತದ ಕೀರ್ತಿಯನ್ನು  ಏರಿಸಿದ್ದು, ಕನಿಷ್ಟ ತಮ್ಮ ಸಂಪುಟ ಸಚಿವರಲ್ಲಿ  ಭ್ರಷ್ಟಾಚಾರ ನುಸುಳದಂತೆ ಮಾಡಿರುವುದು. ಭ್ರಷ್ಟಾಚಾರದಲ್ಲಿ  ಹಿಡಿತ ಸಾಧಿಸುವುದು ಅಷ್ಟು ಸುಲಭವಲ್ಲ. ತಾಂಡವಾಡುತ್ತಿದ್ದ ಭ್ರಷ್ಟಾಚಾರವನ್ನು ನಿಯಂತ್ರಣ ಮಾಡುವುದೂ  ಸುಲಭದ ಮಾತಲ್ಲ. ಆರಂಭವಾದ ಹೆಜ್ಜೆ ಮುಂದುವರಿಯಬಹುದು.

ಸರಿ ಸುಮಾರು 8 ವರ್ಷಗಳ ಹಿಂದೆ, ಕಾರ್ಯಕ್ರಮವೊಂದರಲ್ಲಿ ಭಾರೀ ಚರ್ಚೆ ಆಗುತ್ತಿತ್ತು. ಈ ದೇಶದ ಪ್ರಧಾನಿ ನರೇಂದ್ರ ಮೋದಿ ಆಗಲೇಬೇಕು, ಎಂದಲ್ಲ, ಆದರೆ ಅವರ ಇಮೇಜ್‌ ಉಳಿಯಬಹುದಾ ? ಈ ದೇಶದಲ್ಲಿ ಇದೆಲ್ಲಾ ಸಾದ್ಯ ಇದೆಯಾ? ಮೋದಿ ಅವರ ಕನಸು ಈಡೇರಬಹುದಾ ? ಗುಜರಾತ್‌ ಒಂದು ರಾಜ್ಯ, ಭಾರತದ ಒಂದು ದೇಶ. ಇಲ್ಲಿ ಒಮ್ಮೆಲೇ ಎಲ್ಲವೂ ಸಾಧ್ಯವೇ ಇಲ್ಲ. ತಾಂಡವಾಡುತ್ತಿರುವ ಭ್ರಷ್ಟಾಚಾರ ಒಂದು ಕಡೆ, ಅಭಿವೃದ್ಧಿಯ ಲಿಸ್ಟ್‌ ಇನ್ನೊಂದು ಕಡೆ . ಗುಜರಾತ್‌ ಮಾದರಿಯ ಅಭಿವೃದ್ಧಿ ಇಡೀ ದೇಶಕ್ಕೆ ಸಾಧ್ಯವೇ ಎಂಬುದು  ಅಲ್ಲಿ ನಡೆಯುತ್ತಿದ್ದ ಚರ್ಚೆ. ನರೇಂದ್ರ ಮೋದಿ ಅವರ ಬಗ್ಗೆ ಅಂದು ಆ ಮಾದರಿಯ ಚರ್ಚೆ ಹಳ್ಳಿ ಹಳ್ಳಿಯಲ್ಲಿ  ನಡೆಯುತ್ತಿತ್ತು. ಕೊನೆಗೆ ಬಂದ ಅಭಿಪ್ರಾಯ, ಎಲ್ಲಾ ಡೆವಲೆಪ್ಮೆಂಟ್‌ ಸಾಧ್ಯವಿದೆ. ಎಲ್ಲವೂ ಸರಕಾರದ ಪಾಲಿಸಿಯಿಂದ ಸಾಧ್ಯವಿದೆ, ನರೇಂದ್ರ ಮೋದಿ ಅವರು ಅದನ್ನು ಮಾಡುತ್ತಾರೆ , ಅವರಿಗೆ ಸಾತ್‌  ನೀಡುವ ದೊಡ್ಡ ಕಾರ್ಯಕರ್ತರ ಪಡೆ ಇದೆ, ಅದು ಹಳ್ಳಿ ಹಳ್ಳಿಯವರೆಗೂ ಇದೆ. ಅವರೊಂದು ಟೀಂ ಮಾಡಿದ್ದಾರೆ, ಆ ಟೀಂ ಸೈಲೆಂಟಾಗಿ ಹಳ್ಳಿಯವರೆಗೂ ಇದೆ. ಅವರು ಎಲ್ಲಾ ಫೀಡ್‌ ಬ್ಯಾಕ್‌ ಕೊಡುತ್ತಾರೆ. ಅವರು ಯಾರು ಅಂತಲೇ ಗೊತ್ತಿಲ್ಲ...! ಹೀಗೆಲ್ಲಾ ಚರ್ಚೆ ನಡೆಯಿತು. ಅಂದರೆ ಅಷ್ಟೂ ಪ್ರಮಾಣದ ವಿಶ್ವಾಸ ನರೇಂದ್ರ ಮೋದಿ ಅವರಿಂದ ತೊಡಗಿ ಹಳ್ಳಿ ಆ "ಅನಾಮಧೇಯ" ಕಾರ್ಯಕರ್ತನವರೆಗೂ ಇತ್ತು.

ಮುಂದೆ ಹಳ್ಳಿ ಹಳ್ಳಿ ಮುಂದಿನ ಪ್ರಧಾನಿ ನರೇಂದ್ರ ಮೋದಿ ಎಂಬ ಬ್ಯಾನರ್‌ ರಾರಾಜಿಸಿತು, ಸೋಶಿಯಲ್‌ ಮೀಡಿಯಾದಲ್ಲಿ ಹಲವು ಪೋಸ್ಟ್‌ ಗಳು ಬಂದವು. ಚುನಾವಣೆ ಕಳೆದಾಗ ಇತಿಹಾಸದಲ್ಲಿ  ಮೊದಲ ಬಾರಿ ಬಿಜೆಪಿ ಮೆಜಾರಿಟಿ ಪಕ್ಷವಾಯಿತು. ವ್ಯಕ್ತಿ ಆಧಾರಿತವಾಗಿ ಮೊದಲ ಬಾರಿಗೆ "ಬಿಜೆಪಿ" ಗೆದ್ದಿತು.  ಆ ಬಳಿಕ ವಿವಿಧ ಸವಾಲುಗಳನ್ನು ಉತ್ಯುತ್ಸಾಹದಿಂದ ಪ್ರಧಾನಿಗಳು ಮೆಟ್ಟಿ ನಿಂತರು. ದೇಶಕ್ಕೆ ದೇಶವೇ ಬೆರಗಾಯಿತು. ಒಂದು ಕಾಲದಲ್ಲಿ  ಅಮೇರಿಕಾ ತಮ್ಮ ದೇಶಕ್ಕೆ ಮೋದಿ ಬರುವುದು  ಬೇಡ ಎಂದಿದ್ದ ದೇಶವೇ ರೆಡ್‌ ಕಾರ್ಪೆಟ್‌ ಹಾಸಿತು. ಯಾವಾಗ ಬರುತ್ತೀರಿ ಎಂದು ಕರೆಯಿತು. 

ಎಲ್ಲಾ ದೇಶಗಳನ್ನೂ ಸುತ್ತಾಡಿದ ಮೋದಿ ಅವರು ವಿಶ್ವ ಮಟ್ಟದಲ್ಲಿ ದೇಶವನ್ನು  ಗಮನಸೆಳೆದರು. ಭಾರತ ವಿಶ್ವಗುರುವತ್ತ ಸಾಗಿತು.  ಮೋದಿ ಅವರ ಕನಸಿನ ಬಗ್ಗೆ ಒಂದು ಕಡೆ ದಾಖಲಾಯಿತು, ಭಾರತ ವಿಶ್ವಗುರುವಾಗಬೇಕು, ಪ್ರತೀ ಹಳ್ಳಿಯೂ ವಿಶ್ವಗುರುವಾಗಬೇಕು ". ಅಂದರೆ ಇದರ ಅರ್ಥ ಈ ದೇಶದ ಪ್ರತೀ ವ್ಯಕ್ತಿಯೂ ಸ್ವಾವಲಂಬನೆಯ ಹಾದಿಯಲ್ಲಿ ಸಾಗಬೇಕು.

ಜೊತೆಗೇ ಭ್ರಷ್ಟಾಚಾರ ಮುಕ್ತವಾಗಲು ಪಣ ತೊಟ್ಟರು, ತನ್ನ ಸಂಪುಟದಿಂದಲೇ ಇದನ್ನು ಆರಂಭ ಮಾಡಿದರು, ಭ್ರಷ್ಟಾಚಾರ ಇರುವ ಮಂದಿಯನ್ನು ಹತ್ತಿರ ಸುಳಿಯಲು ಬಿಡಲಿಲ್ಲ, ಈ ಮೂಲಕ ಇಡೀ ದೇಶಕ್ಕೆ ಸಂದೇಶ ನೀಡಿದರು, ಪ್ರತೀ ವ್ಯಕ್ತಿಯೂ ಭ್ರಷ್ಟಾಚಾರ ಮುಕ್ತವಾಗಲಿ ಎಂದರು. 

ಪ್ರತೀ ಹಂತದಲ್ಲೂ ದೇಶದ ಪ್ರತೀ ವ್ಯಕ್ತಿಗೂ ಸಂದೇಶ ನೀಡುತ್ತಲೇ ಹೋದ ಪ್ರಧಾನಿ ನರೇಂದ್ರ ಮೋದಿ ಇಡೀ ದೇಶದ ನಂಬರ್‌ ವನ್‌ ನಾಯಕ ಎನಿಸಿದರು. ದೇಶಕ್ಕೆ ದೇಶವೇ ಕೊಂಡಾಡಿತು.

ಅನೇಕ ಕಂಪನಿಗಳಿಗೆ ಮನೆ ಹಾಕಿದರು ಎಂದು ಟೀಕೆಗಳು ಬಂದಿತು. ಈ ದೇಶದ ಆರ್ಥಿಕ ಪರಿಸ್ಥಿತಿ ಆ ಮಟ್ಟಕ್ಕೆ ಇರುವಾಗ ಸಹಜವಾಗಿಯೇ ಪರ್ಯಾಯ ವ್ಯವಸ್ಥೆ ಅಗತ್ಯವಿದೆ. ಇದೇ ದೇಶದ ಮಂದಿಯ ಸಹಕಾರ ಪಡೆಯುವುದರಲ್ಲಿ  ತಪ್ಪಿಲ್ಲ ಅಂತಲೇ ಭಾವಿಸಲಾಯಿತು. ಇಷ್ಟೂ ವರ್ಷದ ವ್ಯವಸ್ಥೆಯನ್ನು ಕೇವಲ  5  ವರ್ಷದಲ್ಲಿ ಸರಿಪಡಿಸಲು ಸಾಧ್ಯವಿಲ್ಲ ಎಂಬುದೂ ವಾಸ್ತವ ಸಂಗತಿಯೇ ಹೌದು. ಅದನ್ನೂ ಒಪ್ಪಿಕೊಳ್ಳಬೇಕಾದ್ದೇ. 

ಎರಡನೇ ಚುನಾವಣೆಯೂ ಹತ್ತಿರ ಬಂತು. ಈ ಬಾರಿ ದೇಶದ ಜನಕ್ಕೆ ಕರೆ ನೀಡಿದರು, ಪ್ರತೀ ವ್ಯಕ್ತಿಯೂ ಚೌಕೀದಾರ್‌ ಆಗಿ ಎಂದರು. ಗ್ರಾಮೀಣ ಅಭಿವೃದ್ಧಿ, ಸ್ವಾವಲಂಬನೆ ಅಗತ್ಯ ಅದಕ್ಕಾಗಿ ಆತ್ಮನಿರ್ಭರ ಭಾರತ ಎಂದರು, ಕೃಷಿ ಆದಾಯ ದ್ವಿಗುಣ ಆಗಬೇಕು ಎಂದರು.. ಹೀಗೇ ಒಂದಷ್ಟು ಕನಸುಗಳನ್ನು ಎರಡನೇ ಬಾರಿ ಬಿತ್ತಿದರು.

ಆದರೆ ಈ ಬಾರಿ ಮಾತ್ರಾ ಆಶಾದಾಯಕ ಬೆಳವಣಿಗೆಗಳು ನಿಧಾನವಾದವು.

ಚೌಕೀದಾರ್‌ ಎಂದು ಗ್ರಾಮೀಣ ಭಾಗಗಳಲ್ಲಿ ನಡೆದ ಭ್ರಷ್ಟಾಚಾರಗಳನ್ನು  ವಿರೋಧ ಮಾಡಿದರೆ ಅವರದೇ ಪಕ್ಷದ ಮಂದಿ ವಿರೋಧಿ ಎಂದು ಕರೆಯುವುದು  ಮಾತ್ರವಲ್ಲ, ಕೇಸು ಹಾಕಿಸಿದರು..!. ಗ್ರಾಮೀಣ ರಸ್ತೆಯೊಂದು ಕಳಪೆಯಾದ್ದಕ್ಕೆ ಅದೇ ಪಕ್ಷದ ಕಾರ್ಯಕರ್ತ ವಿರೋಧ ಮಾಡಿದರು, ಆಗ ಅವರದೇ ಪಕ್ಷದ ಮುಖಂಡರು ಗುತ್ತಿಗೆದಾರನ ಪರ ನಿಂತರು..!

ಆತ್ಮನಿರ್ಭರ ಭಾರತ ಎನ್ನುತ್ತಾ ಕೆಲವು ಕಾರ್ಯಗಳ ಮೂಲಕ ದಾಖಲೆಗಳನ್ನು ಸೃಷ್ಟಿಸಿದರು, ಜನಸಾಮಾನ್ಯನಿಗೆ ಬಹುಪಾಲು ಯೋಜನೆಗಳು ಸಿಗದಾಯಿತು. ಗ್ರಾಮೀಣ ಭಾಗದ ರಸ್ತೆ, ಸೇತುವೆ, ನೆಟ್ವರ್ಕ್‌ ಇತ್ಯಾದಿಗಳು ಇಂದಿಗೂ ಪ್ರಧಾನಿಗಳ ಕನಸಿನ ಮಾತಾಯಿತು. ಕೇಳಿದರೆ, ಇಷ್ಟೂ ವರ್ಷಗಳಲ್ಲಿ ಆಗದ್ದು 8 ವರ್ಷಗಳಲ್ಲಿ ಆದೀತಾ ಎಂದರು...!. 

ಕೇಳಿದರೆ, ಕೃಷಿ ಆದಾಯ ದ್ವಿಗುಣ ಎಂದರು, ಕೃಷಿ ಅಭಿವೃದ್ಧಿ ಬಗ್ಗೆ ಮಾತನಾಡಿದರೆ, ಅದು ಸಾಧ್ಯವಿಲ್ಲ ಎಂದರು.

ಇದೆಲ್ಲಾ ಸಂಗತಿಗಳು ಪ್ರಧಾನಿಗಳು ತಲುಪುತ್ತಾ ಇಲ್ಲವೋ ಗೊತ್ತಿಲ್ಲ. ಆದರೆ ಈಚೆಗೆ ಆ ಬೆಳವಣಿಗೆ ಅಪಾಯಕಾರಿಯಾಗಿ ಸಾಗುತ್ತಿದೆ. ಇದಕ್ಕೆ ಸರಿಯಾಗಿಯೇ ಈಡೀ ದೇಶದಲ್ಲಿ ಸರಿಯಾದ, ರಚನಾತ್ಮಕವಾಗಿ ಮಾತನಾಡುವ ವಿರೋಧ ಪಕ್ಷವೂ ಕಾಣುತ್ತಿಲ್ಲ. ಇದೆಲ್ಲಾ ಈಚೆಗೆ ಈ ದೇಶದ ಜನರಿಗೇ ಸಮಸ್ಯೆಯಾಗುತ್ತಿರುವುದು  ಸುಳ್ಳಲ್ಲ.

ಈಚೆಗೆ ಗ್ರಾಪಂ ಚುನಾವಣೆ, ಸಹಕಾರಿ ಸಂಘದ ಚುನಾವಣೆಗಳಲ್ಲೂ ಪ್ರಧಾನಿ ನರೇಂದ್ರ ಮೋದಿ ಅವರ ಸಾಧನೆ, ಅವರ ಹೆಸರೇ ಮಾತನಾಡುತ್ತದೆ. ಆಯಾ ಪಂಚಾಯತ್‌ ಮಟ್ಟದಲ್ಲಿನ ಒಬ್ಬನೇ ಒಬ್ಬ ಅವರದೇ ಪಕ್ಷದ ನಾಯಕನ ಕೆಲಸ ಸದ್ದು ಮಾಡುವುದಿಲ್ಲ. ಅದರ ಬದಲಿಗೆ ಗುತ್ತಿಗೆಗಳು ಮಾತನಾಡುತ್ತವೆ, ಭ್ರಷ್ಟಾಚಾರಗಳು ಸದ್ದು ಮಾಡುತ್ತವೆ, ಪಕ್ಷದೊಳಗಿನ ಅಸಮಾಧಾನಗಳು, ಜಾತಿಗಳು ಮಾತನಾಡುತ್ತವೆ. ಇದು ತಪ್ಪಾಗುತ್ತಿದೆ ಎಂದು ಹೇಳುತ್ತಲೇ ಅಂತಹವರ ನಂಬರ್‌ ಗಳು ಬ್ಲಾಕ್‌ ಆಗುತ್ತವೆ. ಗ್ರಾಮೀಣಾಭಿವೃದ್ಧಿ ಬಗ್ಗೆ ಮಾತನಾಡುತ್ತಲೇ ವಿರೋಧಿಗಳಾಗುವುದು  ಮಾತ್ರವಲ್ಲ ಅಂತಹವರ ಬಗ್ಗೆಯೇ ನೆಗೆಟಿವ್‌ ಅಭಿಪ್ರಾಯ ಸೃಷ್ಟಿ ಮಾಡಲಾಗುತ್ತದೆ. ವ್ಯಕ್ತಿ ಆಧಾರಿತವಾಗಿ ಯಾವುದೇ ವ್ಯವಸ್ಥೆ ಇರುವಾಗ ಎಲ್ಲಿ ಮಾತನಾಡಿದರೂ ಪರಿಹಾರ ಕಾಣದು. ಅದು ತಲುಪಬೇಕಾದಲ್ಲಿ ತಲುಪಿದರೂ ಪರಿಹಾರ ಕಾಣುವುದಿಲ್ಲ. ಏಕೆಂದರೆ ವ್ಯವಸ್ಥೆ ಶಿಥಿಲದ ಭಾಗ ಅದು.

ಇಂದು ಪ್ರಧಾನಿಗಳ ಹುಟ್ಟುಹಬ್ಬ, ಅವರಿಗೆ ಶುಭಾಶಯದ ಸುರಿಮಳೆಯೇ ಕಾಣುತ್ತದೆ. ಈ ಶುಭಾಶಯಗಳು ಗ್ರಾಮಮಟ್ಟದಲ್ಲಿ  ಕೆಲಸವಾಗಿ ಕಾಣಬಹುದೇ ? ಗ್ರಾಮಮಟ್ಟದಲ್ಲಿ  ಒಬ್ಬ ಅಂತಹ ನಾಯಕ ಸೃಷ್ಟಿಯಾಗಬಲ್ಲನೇ ? ಭ್ರಷ್ಟಾಚಾರದ ಸುಳಿವೇ ಇರದ ವ್ಯಕ್ತಿ ಕಾಣಬಲ್ಲನೇ ? ಹೀಗಾದರೆ ಪ್ರಧಾನಿಗಳಿಗೆ ಸಲ್ಲಿಸುವ ಶುಭಾಶಯ ಹೆಚ್ಚು ಪವರ್‌ ಫುಲ್‌ ಆಗಿರುತ್ತದೆ. ಇಲ್ಲವಾದರೆ ಬಾಯಿ ಮಾತಿನ ಶುಭಾಶಯವಷ್ಟೇ...!.