06 ಡಿಸೆಂಬರ್ 2021

ಒಂದು ಕಣ್ಣೀರು ಕೂಡಾ ಉದ್ಯಮವಾಗಬಹುದಾದರೆ, ನಾವೆಲ್ಲಿದ್ದೇವೆ…..? ಬದಲಾವಣೆ ಹೇಗೆ ?

 ಎಷ್ಟೇ ಹೇಳಿದರೂ ಇಂದು ಜಗತ್ತು ಉದ್ಯಮವಾಗಿ ಬದಲಾಗುತ್ತಿದೆ. ಏನೇ ಮಾತನಾಡಿದರೂ ಕೊನೆಗೆ ಬಂದು ನಿಲ್ಲಿವುದು ನನಗೇನು ಅಥವಾ ನಮಗೇನು ಲಾಭ ಎಂದೇ ? ಇಂತಹ ಕಾಲಘಟ್ಟದಲ್ಲಿ ಮಾನಸಿಕವಾಗಿ ಸ್ವಲ್ಪ ಯೋಚಿಸಬಲ್ಲ ಹಾಗೂ ಅಂತಹ ವಾತಾವರಣವನ್ನು ಸೃಷ್ಟಿ ಮಾಡುವ ಶಕ್ತಿ ಇರುವುದು ಮಾಧ್ಯಮ ಕ್ಷೇತ್ರಕ್ಕೆ. ಹೀಗಾಗಿ ಈಗ ಯೋಚಿಸಬೇಕಾದ ಕಾಲಘಟ್ಟ.

ಈ ಜಗತ್ತಿಗೆ, ಈ ಸಮಾಜಕ್ಕೆ ಕೊಡುಗೆ ಏನು ನೀಡಬಹುದು ? ಎಂಬ ಪ್ರಶ್ನೆಯನ್ನು ಒಬ್ಬರು ಕೇಳಿದರು. ಅನೇಕರು ವಿವಿಧ ರೀತಿಯ ಉತ್ತರ ನೀಡಿದರು. ಅವರವರ ಕ್ಷೇತ್ರಕ್ಕೆ ಸಂಬಂಧಿಸಿ ವಿವಿಧ ಉತ್ತರಗಳನ್ನು ನೀಡಿದರು. ಅದರಲ್ಲಿ ಬಹುಪಾಲು ಈ ಜಗತ್ತಿನಲ್ಲಿ ಸೃಷ್ಟಿಸಿಯಾಗಿದೆ ಕೂಡಾ. ಇನ್ನೇನಿದ್ದರೂ ಅದರದ್ದೇ ಮುಂದಿನ ಭಾಗ ಅಷ್ಟೇ…!. . ಅನೇಕ ಯುವ ಪತ್ರಕರ್ತರನ್ನು ಅದೇ ಪ್ರಶ್ನೆ ಕೇಳಿದಾಗ ಹೇಳುವ ಉತ್ತರ, “ ಈ ಸಮಾಜವನ್ನು ಬದಲಾಯಿಸಲು ನಾನು ಪತ್ರಿಕೋದ್ಯಮ” ಆಯ್ಕೆ ಮಾಡಿಕೊಂಡಿದ್ದೇನೆ ಎಂದೇ. ಇಂತಹ ಉದ್ದೇಶ ಇಟ್ಟುಕೊಂಡಿರುವ ಪತ್ರಕರ್ತರು ನಂತರ ಸೋಲುವುದು ಎಲ್ಲಿ ? ಎಂಬುದೇ ಬಹುದೊಡ್ಡ ಪ್ರಶ್ನೆ. ಈ ಬದಲಾವಣೆ ಆಗಬೇಕಾದ್ದು ಎಲ್ಲಿ ?. ಹಾಗಿರುವ ಬದಲಾವಣೆ ಏನು ? 

ಇಂದಿನ ಕಾಲಘಟ್ಟದಲ್ಲಿ ಈ ದೇಶಕ್ಕೆ, ಸಮಾಜಕ್ಕೆ, ಜಗತ್ತಿಗೆ ನೀಡಬೇಕಾದ ಕೊಡುಗೆಯೇ ನೈತಿಕ ಮೌಲ್ಯಗಳು. ಈ ದೇಶದ ಪರಂಪರೆಯಾದ ನೈಜತೆಯ ಪುನರುತ್ಥಾನ ಅಷ್ಟೇ. ಅದನ್ನು ಚಿಂತಿಸುವ ಹಾಗೆ ಮಾಡಬೇಕಾದ್ದೇ ಪತ್ರಿಕೋದ್ಯಮ ವಿಭಾಗ, ಏಕೆಂದರೆ ಇಂದು ಯೋಚಿಸುವಂತೆ ಹಾಗೂ ಅದನ್ನು ಓದುವಂತೆ ಮಾಡುವು ಶಕ್ತಿ ಇರುವುದು ಮಾಧ್ಯಮ ಕ್ಷೇತ್ರಕ್ಕೆ. ಅದು ಸೋಶಿಯಲ್ ಮೀಡಿಯಾ, ಆನ್ ಲೈನ್ ಮೀಡಿಯಾ, ಪತ್ರಿಕಾ ರಂಗ, ದೃಶ್ಯ ಮಾಧ್ಯಮ. ಇಲ್ಲೆಲ್ಲಾ ಸತ್ಯದ ಯೋಚನೆಯನ್ನು ಯೋಜಿಸುವ ಮನಸ್ಸುಗಳು ಬೆಳೆಯಬೇಕಾದ ಅವಶ್ಯಕತೆ ಇದೆ. ಏಕೆಂದರೆ ಇಂದು ಬಹುತೇಕ ಪತ್ರಿಕೆಗಳಲ್ಲಿ, ಮಾಧ್ಯಮಗಳಲ್ಲಿ ಒಂದು ಕಾಲಂ ಪ್ರಕಟವಾಗುತ್ತಿದೆ, “ಫ್ಯಾಕ್ಟ್ ಚೆಕ್” . ಅಂದರೆ ಅಷ್ಟೂ ಪ್ರಮಾಣದಲ್ಲಿ ಸುಳ್ಳುಗಳು ವಿಜೃಂಭಿಸುತ್ತವೆ, ಎಷ್ಟೆಂದರೆ ಸತ್ಯವೇ ಸುಳ್ಳೆಂದು ಹೇಳುವ ಕಾಲಘಟ್ಟ ಬಂದಾಗಿದೆ. ಹೀಗಾಗಿ ಇಲ್ಲೊಂದು ಬದಲಾವಣೆಯ ಪರ್ವ ಆರಂಭವಾಗಬೇಕಿದೆ. 

ಇಷ್ಟೇ ಇಲ್ಲ, ಅದಾರಾಚೆಗೆ ಬಂದರೆ,ಒಂದು ಕುಟುಂಬದ ಕಣ್ಣೀರು, ಒಂದು ಕುಟುಂಬ ಖಾಸಗಿ ಬದುಕುಗಳೂ ಇಂದು ಉದ್ಯಮವಾಗುತ್ತದೆ. ಎಲ್ಲಾ ಮಾಧ್ಯಮಗಳಲ್ಲಿ ಇದಕ್ಕೇ ಪ್ರಾಶಸ್ತ್ಯ ಎಂದಾದರೆ ಒಂದು ಕಣ್ಣೀರು ಕೂಡಾ ಉದ್ಯಮವಾಗುತ್ತದೆ ಎಂದಾದರೆ ಅಲ್ಲಿ ಮನುಷ್ಯತ್ವ ಸಾಯುತ್ತಿದೆ ಎಂದೇ ಅರ್ಥ. ಒಂದು ಮನೆಯೊಳಗಿನ ಕಣ್ಣೀರಿಗೆ ಇಡೀ ಸಮಾಜವೇ ಬೆಳಕಾಗುತ್ತದೆಯಾದರೆ ಇಂದು ಸಮಾಜದಲ್ಲಿ ಯಾವ ಕುಟುಂಬಗಳೂ ಸಂಕಷ್ಟದಲ್ಲಿ ಇರಬಾರದಾಗಿತ್ತು. ಆದರೆ ಹಾಗಾಗುತ್ತಿಲ್ಲ, ಆ ಕುಟುಂಬದ ಸಂಕಷ್ಟದ ಕಣ್ಣೀರು ನೋಡುತ್ತಾ, ಆನಂದವೋ, ಮತ್ತೆ ಕಣ್ಣೀರೋ.. ? ಏನೋ ಒಂದು ಆಗುತ್ತಿದೆ ಎನ್ನುವುದು ಇಲ್ಲೊಂದು ಬದಲಾವಣೆ ಬೇಕಿದೆ ಎನ್ನುವುದರ ಸೂಚಕವಷ್ಟೇ.

ಇಷ್ಟೇ ಅಲ್ಲ, ನೈತಿಕ ಅಧ:ಪತನಗಳು ಎಲ್ಲಾಗುತ್ತಿವೆ ಎಂದರೆ ಮಾಧ್ಯಮ ರಂಗದಲ್ಲಿಯೇ..!. ಯಾವುದೋ ಖಾಸಗಿ ಕ್ಷಣಗಳು, ನೈತಿಕ ಅಧ:ಪತನದ ವಿಡಿಯೋ ಕೂಡಾ ಉದ್ಯಮವಾಗುತ್ತದೆ. ಸೆಕ್ಸ್ ವಿಡಿಯೋಗಳೂ ಕೂಡಾ ಸೋಶಿಯಲ್ ಮೀಡಿಯಾದಿಂದ ತೊಡಗಿ ದೃಶ್ಯ ಮಾಧ್ಯಮಗಳಲ್ಲಿ ರಾರಾಜಿಸುತ್ತವೆ ಹಾಗೂ ಇಡೀ ದಿನ ಪ್ರಸಾರವಾಗುತ್ತದೆ ಎಂದಾದರೆ ಪ್ರತೀ ವ್ಯಕ್ತಿಯೂ ನೈತಿಕವಾಗಿ ಕುಸಿತವಾಗಿದ್ದಾನೆ ಎಂದೇ ಅರ್ಥ.ಇಲ್ಲೂ ಬದಲಾವಣೆಯ ನಿರೀಕ್ಷೆ ಇದೆ.

ಇಂದು ಪುಟ್ಟ ಪುಟ್ಟ ಮಾಧ್ಯಮ ಗಮನಿಸಿದರೂ, ಸಮಾಜದಲ್ಲಿ ಒಳ್ಳೆಯದನ್ನು ಫೋಕಸ್ ಮಾಡದೆ, ಕೊಲೆ, ಸುಲಿಗೆ, ಸೆಕ್ಸ್, ಸೇರಿದಂತೆ ಋಣಾತ್ಮಕ ಸಂಗತಿಗಳನ್ನೇ ಏಕೆ ಪ್ರಸಾರ ಮಾಡುತ್ತಿವೆ ಎಂಬ ಸಮೀಕ್ಷೆ ಮಾಡಿದರೆ, ಅದೆಲ್ಲವೂ ವ್ಯವಹಾರವಾಗಿದೆ, ಅದೆಲ್ಲಾ ಉದ್ಯಮವಾಗಿದೆ. ಅಂತಹ ಸಂಗತಿಗಳೇ ಓದಿಸುತ್ತವೆ, ಹೀಗೆ ಓದಿಸಿದರೆ ಮಾಧ್ಯಮ ಓಡುತ್ತದೆ, ಮಾಧ್ಯಮ ಓಡಿದರೆ ಹಣ ಬರುತ್ತದೆ…!. ಇಷ್ಟೇ ಇಲ್ಲಿರುವ ಸಂಗತಿಗಳು. 

 ಇಂತಹ ವ್ಯವಸ್ಥೆ ಬದಲಾಯಿಸಲು ತಕ್ಷಣಕ್ಕೆ ಸಾಧ್ಯವೇ ಇಲ್ಲ ಎಂಬುದೂ ವಾಸ್ತವ. ಆದರೆ ಸಣ್ಣ ಪ್ರಯತ್ನವೊಂದು ಆರಂಭವಾಗಬಹುದು ಅಷ್ಟೇ. ನದಿಯ ಮೊದಲ ಹನಿಯಂತೆ ಇದೂ ಒಂದು ಪ್ರಯತ್ನವಷ್ಟೇ. ರಚನಾತ್ಮಕವಾದ ದೃಷ್ಟಿಕೋನದಿಂದಲೇ ಹೆಜ್ಜೆ ಇರಿಸಿಕೊಂಡು ಸಮಾಜಕ್ಕೆ ಯಾವ ಉಪಯೋಗವೂ ಇಲ್ಲದ ಸುದ್ದಿಗಳ ಕಡೆಗೆ ಹೆಚ್ಚು ಫೋಕಸ್ ಮಾಡದೇ ಇರುವುದಷ್ಟೇ ಸದ್ಯದ ಪರಿಹಾರ. ಅಂತಹ ಮನಸ್ಥಿತಿಯನ್ನು ಯುವಪತ್ರಕರ್ತರು ಬೆಳೆಯಿಸಿಕೊಳ್ಳಬೇಕು ಹಾಗೂ ವಿದ್ಯಾರ್ಥಿಗಳ ತರಬೇತಿಯೂ ಆ ನೆಲೆಯಲ್ಲಿಯೇ ನಡೆಯಬೇಕಿದೆ.ಇಂತಹ ನಡೆಯಲ್ಲೂ ಸವಾಲುಗಳು ಇರುತ್ತವೆ.

 ವಾಸ್ತವದಲ್ಲಿ, ಉದ್ಯಮದ ನಡೆಗಿಂತಲೂ ರಚನಾತ್ಮಕವಾದ ನಡೆಗಳು ಯಾವತ್ತೂ ಹೆಚ್ಚು ಸವಾಲುಗಳೇ. ಇಂತಹ ಸಂಗತಿಗಳಲ್ಲಿ ದುಡ್ಡು ಆಗುವುದಿಲ್ಲ,  ಇಂದಿನ ಸಮಾಜದಲ್ಲಿ ದುಡ್ಡ ಕೂಡಾ ಅಗತ್ಯವಾದ ಕಾರಣ ಇಂತಹ ರಚನಾತ್ಮಕ ನಡೆಗಳಲ್ಲಿ ದುಡ್ಡು ಆಗದೇ ಇದ್ದರೆ ಸಮಾಜದಲ್ಲಿ ಸಶಕ್ತವಾಗಿ ಬದುಕು ಹೇಗೆ ? ಎಂಬ ಪ್ರಶ್ನೆ ಬರುತ್ತದೆ. ಇದಕ್ಕಾಗಿ ಒಂದಷ್ಟು ಸಹೃದಯ ಹಾಗೂ ನಿಜವಾಗೂ ಬದಲಾವಣೆಯ ಮನಸ್ಸುಳ್ಳ ಕೂಟಗಳು ಬೇಕಾಗಬಹುದು, ಅಂತಹ ಕೂಟವನ್ನು ಯುವಪತ್ರಕರ್ತರೇ ನಿರ್ಮಾಣ ಮಾಡುತ್ತಾ, ಸಮಾಜದಲ್ಲಿ ಬದಲಾವಣೆ, ಯೋಚಿಸುವ ಬದಲಾವಣೆ, ತರಲು ಸಾಧ್ಯವಿದೆ, ಒಮ್ಮೆ ಯೋಚನೆಗೆ ಬಂದರೆ ಉಳಿದೆಲ್ಲಾ ಬದಲಾವಣೆಗಳೂ ಸಹಜವಾಗಿಯೇ ಆಗುತ್ತದೆ. ಇಂತಹದ್ದೊಂದು ಪ್ರಯತ್ನ ಯುವಪತ್ರಕರ್ತರಿಂದ ನಡೆಯಲು , ಅವರನ್ನು ಮಾನಸಿಕವಾಗಿ ಗಟ್ಟಿಗೊಳಿಸಲು ತರಬೇತಿ ಕೇಂದ್ರಗಳೂ ಗಟ್ಟಿಯಾಗಬೇಕು.


( ವಿವೇಕಾನಂದ ಪತ್ರಿಕೋದ್ಯಮ ಕಾಲೇಜಿನ ವಿಕಸನ ಪತ್ರಿಕೆಗಾಗಿ ಬರೆದದ್ದು )