18 ಡಿಸೆಂಬರ್ 2013

ಗಿಡ ಮಾತಾಡಿತು. . !


ಅನೇಕ ದಿನಗಳ ಬಳಿಕ ಬ್ಲಾಗಿಲು ತೆಗೆಯಿತು. .!, ಹಾಗೆಯೇ ಒಳಗೆ ಹೋದಾಗ ಖುಷಿಯಾಯಿತು. .!
ಮನಸ್ಸು ಈಗ ನಿರಾಳವಾಗಿದೆ. ಮೌನ ಮಾತಾಗಿದೆ.

ಕಳೆದ ಕೆಲವು ದಿನಗಳಿಂದ ಮನಸ್ಸು ಓಡುತ್ತಲೇ ಇತ್ತು,ಯೋಚಿಸುತ್ತಲೇ ಇತ್ತು.ಆದರೆ ದೇಹ ಇದು ಯಾವುದಕ್ಕೂ ಸ್ಪಂದಿಸುತ್ತಲೇ ಇರಲಿಲ್ಲ.ಹಾಗೆಂದು  ಮನಸ್ಸು ದೇಹ ಎರಡಕ್ಕೂ ತಾಳ-ಮೇಳವೇ ಇಲ್ಲ ಎಂದಲ್ಲ, ಅನಗತ್ಯ ಯೋಚನೆ, ಓಡುವ ಮನಸ್ಸಿನ ಕಡೆಗೆ ಲಕ್ಷ್ಯ ಬೇಡ ಎನ್ನುತ್ತಿತ್ತು ಅಷ್ಟೇ.

ಕಳೆದ ಸುಮಾರು ಒಂದೂವರೆ ವರ್ಷಗಳಿಂದ ಮನೆಯ ಸುತ್ತಲೂ ಇರುವ ತೋಟದ ಕಡೆಗೆ ,ಗಿಡಗಳ ಕಡೆಗೆ ಲಕ್ಷ್ಯ ಕೊಟ್ಟು ಹೋದದ್ದೇ ಕಡಿಮೆ.ಅದೇನೇ ಇದ್ದರೂ ಒಂದಷ್ಟು ಕೆಲಸ ಮಾಡಿ ಕೂಡಲೇ ಬೇರೆ ಕಡೆ ತೆರಳಬೇಕಾಗಿತ್ತು. ಅನಿವಾರ್ಯ ಕೂಡಾ ಆಗಿತ್ತು ಅದು.ಈಗ ಕೊಂಚ ಬಿಡುವು. ಇಡೀ ತೋಟದ ಕಡೆಗೆ ಹೋದಾಗ ಗಿಡಗಳೆಲ್ಲಾ ಸಿಟ್ಟಾಗಿದ್ದುವೋ ಏನೋ , ಮಾತನಾಡುತ್ತಿರಲಿಲ್ಲ , ಎಲ್ಲಾ ಗಿಡಗಳು ಕೂಡಾ ದುರುಗುಟ್ಟಿ ನೋಡಿದಂತೆ ಅನಿಸಿತೊಡಗಿತು.ಪ್ರತೀ ಗಿಡ ನನ್ನನ್ನು ಅಣಕಿಸುತ್ತಿತ್ತು, ಕೊನೆಗೂ ನಮ್ಮ ಪಾದದ ಕಡೆಗೆ ಬಂದೆಯಾ ಎಂಬಂತೆ ಭಾಸವಾಯಿತು. .!.ಮತ್ತೆ ಮತ್ತೆ ತೋಟದ ಕಡೆಗೆ ಹೆಜ್ಜೆ ಹಾಕಿದೆ , ಗಿಡಗಿಗೂ ಖಷಿಯಾಯಿತು , ಈಗ ಪ್ರೀತಿಯಿಂದ ಸ್ವಾಗತಿಸಿದೆ , ಮಾತನಾಡಿತು. . !, ಅಕ್ಕರೆಯಿಂದ ಗಾಳಿಯ ನೀಡಿ ತಂಪು ನೀಡಿತು.


ಈಗ ನನಗನಿಸಿತು ,ಒಳಗೊಳಗೇ ಪ್ರಶ್ನೆ ಮೂಡಿತು ಅಷ್ಟೂ ದಿನಗಳ ಕಾಲ ನಾನು ಓಡಡಿದ ಆ ಊರು , ಆ ಜನ ಈಗ ಎಲ್ಲಿದ್ದಾರೆ ?, ಮಾಡಿದ ಅಷ್ಟೂ ಕೆಲಸಗಳು ಏನಾದವು ?, ಇಲ್ಲ ಉತ್ತರವೇ ಇಲ್ಲ.ಆದರೆ ಒಂದಂತೂ ಸತ್ಯ ,ಒಂದಷ್ಟು ಜನ ಗುರುತಿಸಿದ್ದಾರೆ , ಎಲ್ಲೋ ಒಮ್ಮೊಮ್ಮೆ ನೆನಪಾಗುತ್ತದೆ, ಆದರೆ ಅದೆಲ್ಲಾ ಕ್ಷಣಿಕ. . !.ಹಾಗಿದ್ದರೆ ಏನು ಸಾರ್ಧಕ ? ಎಂಬ ನನ್ನ ಪ್ರಶ್ನೆಗೆ ಉತ್ತರ ಆಳದಲ್ಲಿದೆ. ಹೆಕ್ಕಿ ತೆಗೆಯಬೇಕು.

ಆದರೆ ನಾನು ಆ ನನ್ನ ಗಿಡಗಳ ಬಳಿಗೆ ಹೋಗಿ ಪ್ರೀತಿಯಿಂದ ಮಾತನಾಡಿದೇ ಹೋದರೂ ಕೂಡಾ ಇಂದು ಮತ್ತೆ ನನ್ನನ್ನು ಸ್ವಾಗತಿಸಿದೆ , ಅದೂ ಅಣಕಿಸುತ್ತಾ ಕೇಳಿದೆ ,"ಎಲ್ಲೆಲ್ಲೋ ಸುತ್ತಾಡಿದೆ, ಸುಮಾರು 10 ವರ್ಷಗಳಿಂದ ಊರು ಊರು ಅಲೆದಾಟ ಮಾಡಿದೆ , ಯಾರ್ಯಾರನ್ನೋ ಮಾತನಾಡಿಸಿದೆ , ಸಹಾಯ ಮಾಡಿದೆ, ಈಗ ಏನಾಯಿತು ?" 

ಇದಕ್ಕೆ ಮೌನವೇ ಉತ್ತರ. . !

ಗಿಡದ ಹತ್ತಿರ ಮತ್ತೆ ಮತ್ತೆ ಮಾತಾಡಿದೆ,ಸಂಜೆಯವರೆಗೆ ಗಿಡಗಳ ಬಳಿಯೇ ಓಡಾಡಿದೆ.
ಅದಕ್ಕೂ ಖುಷಿಯಾಯಿತು , ನನಗೂ ಮತ್ತೆ ಹೊಸಹುರುಪು ಬಂತು, ಮನಸ್ಸು ಉಲ್ಲಾಸದಿಂದ ಕುಣಿಯಿತು.
 ಈ ಹಿಂದೆ ಯಾರ್ಯಾರಲ್ಲೋ ನನ್ನ ಬಗ್ಗೆ ವಿಚಾರಿಸುತ್ತಾ, ದಿನವಿಡೀ ಓಡಾಡಿದರೂ ಕಚೇರಿಗೇ ಬಂದೇ ಇಲ್ಲ ಎಂಬ ಮಾತುಗಳು ಈಗ ಕೇಳಲೇ ಬೇಕಿಲ್ಲ , ಏಕೆಂದರೆ ಈಗ ಗಿಡಗಳೇ ನನ್ನ ಹಾಜರಿಯನ್ನು ಖಚಿತ ಪಡಿಸುತ್ತಿವೆ.!.

ಆದರೂ ಮತ್ತೆ ಮತ್ತೆ ಅದೇ ಕಾಡುತ್ತದೆ , 10 ವರ್ಷ ವ್ಯರ್ಥವಾಯಿತಾ ? ,ವ್ಯರ್ಥವಾದ 10 ವರ್ಷಗಳ ನಂತರ ಹೊಸತೊಂದು "ಸೇವೆ"ಗೆ ಅವಕಾಶವಾಯಿತಾ ?. 

ಈಗ ಮತ್ತೆ ಅದೇ ಸುದ್ದಿ ಬಂದಾಗ ಗಿಡಗಳು ನನ್ನನ್ನು ದುರುಗುಟ್ಟಿ ನೋಡುತ್ತಿದೆ. . ! ಏನೆಂದು  ಹೇಳಲಿ ಅವುಗಳಿಗೆ ?.
ಅವುಗಳ ಪ್ರೀತಿಯಿಂದ ಹೊರಬರಲು ಆಗುತ್ತಲೇ ಇಲ್ಲ.



21 ಮಾರ್ಚ್ 2013

ಏಕಾಂಗಿ ವ್ಯಕ್ತಿಗೆ ಹತ್ತು ಮನಸ್ಸು . . .!

ನನ್ನೂರಿನ ದೇವಸ್ಥಾನಕ್ಕೆ ಹೋಗಿದ್ದೆ.

ಅಪರಿಚಿತ ವ್ಯಕ್ತಿ ಅಲ್ಲಿದ್ದರು. ದೇವಸ್ಥಾನದ ಅರ್ಚಕರು ಹೇಳಿದರು , ಇವರು  ಪಾದಯಾತ್ರೆ ಮಾಡುತ್ತಿದ್ದಾರೆ ಕನ್ಯಾಕುಮಾರಿಗೆ ಎಂದರು. ಸಹಜವಾಗಿಯೇ ಅದೊಂದು ಮಾಮೂಲಿ ನಡಿಗೆ ಅಂದುಕೊಂಡಿದ್ದೆ , ಆದರೆ ನಂತರ ಮಾತನಾಡುತ್ತಾ , ಅವರೊಳಗಿನ ಸಂಗತಿ  ಅರಿವಾಯಿತು. .  .

ಅವರು  ಕಿರಣ್. ವಿದೇಶಿ ಕಂಪನಿಯೊಂದರಲ್ಲಿ ಕೈತುಂಬಾ ಸಂಬಳ ಎಣಿಸುತ್ತಿದ್ದರು , ಪ್ರತಿಭಾವಂತ ಎಂಜಿನಿಯರ್ ಕೂಡಾ ಆಗಿದ್ದರು. ಆದರೆ ಆಕಸ್ಮಿಕ ಘಟನೆಯೊಂದು  ಅವರ ಬದುಕಿನಲ್ಲಿ ನಡೆಯಿತು. ಅವರ ಕುಟುಂಬದ ಎಲ್ಲರೂ ಅಪಘಾತದಲ್ಲಿ ತೀರಿಕೊಂಡರು. ಉಳಿದದ್ದು ಏಕಾಂಕಿ. ಅದಾಗಲೇ ವಿವಿಧ ಕಡೆ ಆಸ್ಥಿ ಹೊಂದಿದ್ದ ಅವರಿಗೆ ವಿವಿಧ ಸಂಬಂಧಿಕರು  ಹತ್ತಿರವಾದರು .. ಆಸ್ಥಿ ಪ್ರೀತಿ  ಹೆಚ್ಚಿತು. ಪೀಡೆ ಹೆಚ್ಚಾದಾಗ . . ನೇರವಾಗಿ ಹಿಮಾಲಯದ ಕಡೆಗೆ ತೆರಳಿದರು.ಆಧ್ಯಾತ್ಮದ ಮಾರ್ಗ ಹಿಡಿದರು.

ನಗರದಲ್ಲಿದ್ದ ಸುಮಾರು  ಆರು  ಎಕ್ರೆ ಭೂಮಿಯನ್ನು ಅನಾಥಾಶ್ರಮಕ್ಕೆ ಧಾರೆ ಎರೆದರು.ಸ್ವಂತಕ್ಕೆ ಅಂತ ಒಂಚೂರು  ಇರಿಸಿಕೊಂಡರು.ಬಳಿಕ ಯಾತ್ರೆ ನಡೆಸಿದರು , ಇಡೀ ದೇಶವನ್ನು ಕಾಲು ನಡಿಗೆಯಲ್ಲೇ ಪರಿಕ್ರಮ ಮಾಡುವ ಉದ್ದೇಶ, ಇನ್ನು  ಸುಮಾರು  ೫೦  ದಿನದಲ್ಲಿ ಕನ್ಯಾಕುಮಾರಿ  ತಲುಪುತ್ತಾರೆ. ಅಂದರೆ ಕಾಲುನಡಿಗೆ ಶುರುಮಾಡಿ ಅದಾಗಲೇ ವರ್ಷ  ಅನೇಕ ಉರುಳಿ ಹೋಗಿದೆ. ಅಲ್ಲಿಂದ ಮತ್ತೆ ಮುಂದಿನ ದಾರಿ  ಯೋಚಿಸಬೇಕು ಎನ್ನುತ್ತಾರೆ.

ಇಡೀ ನಡಿಗೆಗೆ ಯಾವ ಪ್ಲಾನೂ ಇಲ್ಲ ಅವರಲ್ಲಿ , ಎಲ್ಲಿ ಇರುತ್ತೇನೆ ಗೊತ್ತಿಲ್ಲ , ಯಾರು ಊಟ ಕೊಡುತ್ತಾರೆ ಗೊತ್ತಿಲ್ಲ , ಎಲ್ಲಿ ಮಲಗುತ್ತೇನೆ ಗೊತ್ತಿಲ್ಲ. . .. !. ಅದೆಲ್ಲಾ ಬಿಡಿ ಕೈಯಲ್ಲಿ ಒಂದು  ರೂಪಾಯಿ ಹಣವೂ ಇಲ್ಲ , ಹಣ ಇದ್ದರೆ ಅದು  ಟೂರ್ ಆಗುತ್ತದೆ , ಯಾತ್ರೆ ಆಗಲ್ಲ ಅಂತಾರೆ ಅವರು. ಇನ್ನು ಮೊಬೈಲ್ ಇದೆ ಉಪಯೋಗಿಸೋದೇ ಇಲ್ಲ.  ಯಾರಿಗೂ ನಂಬರೂ ಕೊಡಲ್ಲ. ಇಡೀ ದಿನದಲ್ಲಿ ರಾತ್ರಿ ಮಾತ್ರಾ ಊಟ. ದಿನಕ್ಕೆ ೬ ರಿಂದ ೭ ಲೀಟರ್ ನೀರು , ಇದಿಷ್ಟೇ ಆಹಾರ.

ಇದೆಲ್ಲಾ ಮಾತನಾಡುವ ಹೊತಿಗೆ ಅವರು  ವೈದ್ಯರ ಬಗ್ಗೆ ಕೇಳಿದರು , ಕಾಲುಗಳ ಮಾಂಸ ಖಂಡ ನೋಡಿದರೆ ತೀರಾ ಗಟ್ಟಿಯಾಗಿತ್ತು , ಇದು  ಸರಿಯಾಗಲು ಇನ್ನು ಒಂದು  ತಿಂಗಳ ಚಿಕಿತ್ಸೆ ಬೇಕಾಗುತ್ತದೆ ಎನ್ನುವ ಮಾನಸಿಕವಾದ ಸಿದ್ದತೆಯೂ ಇದೆ. ಇವರಲ್ಲಿ.

ಇಷ್ಟೆಲ್ಲಾ ದೈಹಿಕ ಶ್ರಮದ ನದುವೆಯೂ ಮಾನಸಿಕವಾದ ಸಂತಸ ಕಾಣುವ ಈ ವ್ಯಕ್ತಿ ಏಕಾಂಕಿ. ಆದರೆ ಬೆಂಬಲಿಸುವ , ಜೊತೆಯಾಗುವ ಮನಸ್ಸುಗಳು ಹತ್ತಾರು. ಇದೆಲ್ಲಾ ಪ್ರಚಾರ ಮಾಡುವುದೇ ಇಲ್ಲ ,ಪ್ರಚಾರಾ ಮಾಡಿದರೆ ಮರುದಿನ ಆ ಶರ್ಟೇ ಹಾಕೋದಿಲ್ಲವಂತೆ , ಏಕೆಂದರೆ ಜನ ಗುರುತಿಸುತ್ತಾರೆ ,ಅದು  ಪ್ರಚಾರ ಪಡೆಯುತ್ತೆ , ಅದೆಲ್ಲಾ ಇಲ್ಲವೇ ಇಲ್ಲ ಎನ್ನುವ ಕಿರಣ್ ಗೆ ಸುಮಾರು ೪೫ ವರ್ಷ ಆಗಬಹುದು.

ಅಂತಿಮವಾಗಿ ಏನು ಎಂದು ಕೇಳಿದರೆ ಮಾನಸಿಕವಾದ ಶಾಂತಿ. .  ಗುರುಗಳ ಮಾರ್ಗದರ್ಶನ.



14 ಜನವರಿ 2013

ತಂತ್ರಜ್ಞಾನ : ಅಂತರ-ಜ್ಞಾನ. . .




ನನ್ನ ಮಿತ್ರನೊಬ್ಬ  ಇಂದು ಸಿಕ್ಕಿದ.  ಆತ ಮಾತನಾಡುತ್ತಾ ಹೇಳುತ್ತಿದ್ದ , ಈ ಮೊಬೈಲ್‌ಗೆ ಈಗ 10 ಸಾವಿರ. ವರ್ಷದ ಹಿಂದೆ ಇದೇ ಸೌಲಭ್ಯ ಇದ್ದ  ಬೇರೆ ಕಂಪನಿಯ ಮೊಬೈಲ್‌ಗೆ 35 ಸಾವಿರ  ಬೆಲೆ ಇತ್ತು. ಈಗ ತೀರಾ ಅಗ್ಗ ಎಂದು  ಹೇಳುತ್ತಿದ್ದ. ಅದು  ನಿಜವೂ ಹೌದು.
ಚಿತ್ರ - ನೆಟ್

ಕಾಲ ಬದಲಾಗಿದೆ.

ಅಂದೆಲ್ಲಾ ಒಂದು  ಮೊಬೈಲ್ ಕೊಳ್ಳುವುದು ಇರಲಿ , ನೋಡಿದರೇ ಅದೊಂದು ಅಚ್ಚರಿ. ನನಗೆ ಈಗಲೂ ನೆನಪಿದೆ , ಮೊಬೈಲ್ ಕೈಯಲ್ಲಿ  ಹಿಡಿಯುವುದಕ್ಕಾಗಿ , ಸಿಮ್ ಪಡೆಯುವುದಕ್ಕಾಗಿ  ಕ್ಯೂನಲ್ಲಿ  ಇಡೀ ದಿನ ನಿಂತು , ಅದಕ್ಕಾಗಿ  ವಿವಿಧ ಅಧಿಕಾರಿಗಳೊಂದಿಗೆ ಮಾತನಾಡಿ , ಅಂತೂ ಸಿಮ್ ಸಿಕ್ಕಾಗ ಮೊಬೈಲ್ ಬಂತು  ಎನ್ನುವ ಸಂದರ್ಭ. . . !. ಈಗ ಹಾಗಿಲ್ಲ , ಸಿಂ ಬೇಕಾ ಸಿಂ . .  ಎಂದು  ಕಂಪನಿಯೇ ಮನೆ ಬಾಗಿಲಿಗೆ ತಂದು ಕೊಡುತ್ತಿದೆ.

ಅದಕ್ಕಿಂತಲೂ ಹಿಂದೆ ನೋಡಿದರೆ. . .  , ಇನ್ನೂ ಅಚ್ಚರಿಯಾಗುತ್ತದೆ.

ಆಗ ಟಿವಿ ಇಲ್ಲವೇ ಇಲ್ಲ. ಎಲ್ಲೋ ಊರಲ್ಲಿ  ಒಂದೂ ಎರಡೋ ಮನೆಯಲ್ಲಿ  ಮಾತ್ರಾ. ಅದಕ್ಕೊಂದು  ಏಂಟೆನಾ. ಅದನ್ನು  ತಿರುಗಿಸಿ  , ನೋಡಬೇಕು, ಸಣ್ಣ ಗಾಳಿ ಬಂದರೆ ಮತ್ತೆ ಮರದ ತುದಿಗೆ ಏರಲೇ ಬೇಕು. ಆ ಬಳಿಕ ದೊಡ್ಡ ಡಿಶ್ ವ್ಯವಸ್ಥೆ ಬಂದಾಗ ಒಟ್ಟು  ಟಿವಿ ಡಿಶ್‌ಗೆ 40  ಸಾವಿರ ರೂಪಾಯಿವರೆಗೆ ಆಗುತ್ತಿತ್ತು. ಆಗ ಸಿನಿಮಾ ನೋಡಲು , ಕ್ರಿಕೆಟ್‌ನೋಡಲು  ಟಿವಿ ಇದ್ದವರ ಮನೆಗೆ ಎಲ್ಲರೂ ಹಾಜರ್. ಕೆಲವು ಕಡೆ ಟಿಕೆಟ್ ನೀಡಿ  ಟಿವಿ ನೋಡಿದ್ದೂ ಇದೆ. ಈಗ ಆ ಕಾಲ ಇಲ್ಲವೇ ಇಲ್ಲ, ಎಲ್ಲಾಮನೆಯಲ್ಲೂ  ಡಿಶ್ ಟಿವಿ.

ಮತ್ತೂ ಹಿಂದಕ್ಕೆ ಹೋದರೆ , ರೇಡಿಯೋ ಕಾಲ ಅದು. ಕ್ರಿಕೆಟ್ ಕಮೆಂಟರಿ ಕೇಳಲು ಪಕ್ಕದ ಮನೆಗೆ ಹೋಗಬೇಕಾದ ಕಾಲ ಅದು. ಊರಲ್ಲಿ  ಒಂದೋ ಎರಡೋ ರೇಡಿಯೋ. ಕ್ರಿಕೆಟ್ ಸಂದರ್ಭದಲ್ಲಿ  ಕಾಮೆಂಟರಿ ಕೇಳಲು ರೇಡಿಯೋ ಮುಂದೆ ಕೂತು  ಹರಟುತ್ತಿದ್ದರು.ಈಗ ಅಂತಹ ರೇಡಿಯೋ ಇಲ್ಲವೇ ಇಲ್ಲ.

ಈಗ ಇದಾವುದೂ ಇಲ್ಲ. ಕಾಲ ಬದಲಾಗಿದೆ.

ತಂತ್ರಜ್ಞಾನಗಳು  ಕ್ಷಣದಿಂದ ಕ್ಷಣಕ್ಕೆ ಬದಲಾಗುತ್ತಲೇ ಹೋಗುತ್ತಿದೆ. ನಾವು ನೋಡುವ ಒಳ್ಳೆಯ  ಸನ್ನಿವೇಶವನ್ನು  ಮನೆಯಲ್ಲಿರುವ ಹೆಂಡತಿಗೋ , ಅಮ್ಮನಿಗೋ , ಮಗುವಿಗೋ ತಕ್ಷಣವೇ ನೇರಪ್ರಸಾರವಾಗಿ ತೋರಿಸಬಹುದು. ಅದಕ್ಕಾಗಿ 3ಜಿ ಸೇವೆ ಇದೆ.  ಈಗ ಅದೂ ಬದಲಾಗಿ 4 ಜಿ ವ್ಯವಸ್ಥೆ ಹತ್ತಿರವಾಗುತ್ತಿದೆ.  ಗ್ರಾಮೀಣ ಪ್ರದೇಶದಲ್ಲಿ  ಇಂಟರ್‌ನೆಟ್ ಇಲ್ಲವೇ ಇಲ್ಲ , ಸಾಧ್ಯವೇ ಇಲ್ಲ  ಎನ್ನುವ ಕಾಲವೇ ಈಗಿಲ್ಲ. ಯಾವುದೇ ಹಳ್ಳಿಯ ಮೂಲೆಯಲ್ಲಿ  ಕೂತು ಕೂಡಾ ಪ್ರಪಂಚವನ್ನು ಇಂಟರ್‌ನೆಟ್ ಮೂಲಕ ಸುತ್ತಾಡುವ ವ್ಯವಸ್ಥೆ ಈಗ ಬರುತ್ತಿದೆ.

ಹೀಗಿದ್ದರೂ ಕೂಡಾ ನಾವು  ಇವುಗಳ ಸರಿಯಾದ ಬಳೆಕೆಯಲ್ಲಿ  ಮಾತ್ರಾ ಇನ್ನೂ  ಮುಂದುವರಿದಿಲ್ಲ ಅಂತ ನನಗನ್ನಿಸುತ್ತದೆ. ಮೊನ್ನೆ ಮೊನ್ನೆ ನಮ್ಮ ದೇಶದ ಸೈನಿಕರನ್ನು  ಪಾಕ್‌ನ ದ್ರೋಹಿಗಳು ಅಮಾನುಷವಾಗಿ ಹತ್ಯೆ ಮಾಡಿದರು. ಇಲ್ಯಾಕೆ ಹೀಗಾಯಿತು. ಇಂದು ಮೊಬೈಲ್ ಕ್ಷೆತ್ರದಲ್ಲಿ  ಆದ ಪ್ರಗತಿಯ ಒಂಚೂರು ಭಾಗವನ್ನಾದರೂ ರಕ್ಷಣಾ ಕ್ಷೇತ್ರದಲ್ಲಿ ಮಾಡುತ್ತಿದ್ದರೆ , ಇದಕ್ಕಾಗಿ  ಯಾವುದಾದರೂ ಕಂಪನಿ ಪೈಪೋಟಿ ಮಾಡುತ್ತಿದ್ದರೆ ಸಾಕಾಗಿತ್ತು.  ದೇಶವನ್ನು  ಕಾಪಾಡುವ ಯೋಧರಿಗೂ  ಉಪಕಾರವಾಗುತ್ತಿತ್ತು  ಅಂತ ನಾನು ಯೋಚಿಸುತ್ತಿದೆ.





13 ಜನವರಿ 2013

ಕೈ ಮೀರಿದ ಆ ಕ್ಷಣ. . .



ಆನೆಯನ್ನೂ ನಿಯಂತ್ರಿಸುವ ಮನುಷ್ಯ ಆ ಕ್ಷಣ ಭಯಭೀತಗೊಂಡಿದ್ದ .ದೂರದಲ್ಲೆಲ್ಲೋ ಅಂದು ನಡೆದ ಘಟನೆ ಈಗ ಇಲ್ಲಿ ನಡೆದಿದೆ.

 ಅಂಗಡಿ ಬಾಗಿಲು ಹಾಕಿ ಮಹಡಿಯ ಮೇಲೆ ನಿಂತು  ಮೂಕಪ್ರೆಕ್ಷಕನಾಗಿ  ನೋಡುವುದು ಅಷ್ಟೇ ಆತನ ಕೆಲಸವಾಗಿತ್ತು ಆಗ. ಹೀಗಾಗಿ ಈ ಸಂಕಟದ ನಡುವೆಯೇ ಅಲ್ಲೊಂದು ಇಲ್ಲೊಂದು ಸಲಹೆ ಹೇಳುವಾಗಲೂ ನಂಬಿಕೆ ಇಲ್ಲ. ಎಲ್ಲೋ ಓದಿದ , ಕೇಳಿದ ಮಾತುಗಳೇ ಆಗ ಸಲಹೆ. ಬೇರೇನೂ ಹೇಳಲಾರ , ಹೇಳುವುದೂ ಇಲ್ಲ. . .!.

ಆನೆಯನ್ನೇ ಪಳಗಿಸಿದ ಮನುಷ್ಯ, ಆನೆ ಸಿಟ್ಟಾದಾಗ ಏನು ಮಾಡಬಹುದು  ಎನ್ನುವುದರ ಸಣ್ಣ ಪರಿಚಯ ಇದು. ಇತ್ತೀಚೆಗೆ ಪುತ್ತೂರಿನಲ್ಲೇ ಅಂತಹ ಘಟನೆಯೊಂದು ನಡೆಯಿತು. ದೂರ ತ್ರಿಶೂರ್ ನಲ್ಲೋ , ಮೈಸೂರಿನಲ್ಲೋ ಆನೆ ದಾಳಿಯ ಘಟನೆ ನಡೆದಾಗ ಇಲ್ಲಿ ಕೂತು , ಹೀಗೆ ಮಾಡಬಹುದಿತ್ತು ಎಂತ ಪ್ರತಿಕ್ರಿಯೆ ನೀಡುವ ಮನುಷ್ಯ, ನಮ್ಮೆದುರೇ ಆನೆ ಬಂದಾಗ ನಿಜಕ್ಕೂ ಉತ್ತರ ನೀಡುವುದು ಬಿಡಿ , ಬದುಕಿಗಾಗಿ , ಜೀವಕ್ಕಾಗಿ  ದಾರಿ ಹುಡುಕುವ ಸಂದರ್ಭವೇ ಹೆಚ್ಚು. ಸೂಕ್ತ ಸ್ಥಳ ಸಿಕ್ಕ ನಂತರವೇ ಉಳಿದ ಸಲಹೆಗಳು.

 ಸುಮಾರು  3 ದಿನಗಳ ಕಾಲ ಆನೆ ರಾದ್ದಾಂತವೇ ಎಬ್ಬಿಸಿತು. ಲಾರಿಯಲ್ಲಿ ಸಾಗಾಟ ಮಾಡುವಾಗ ಆದ ಸಣ್ಣ ನೋವು , ಇಡೀ ನಗರಕ್ಕೆ , ನಗರದ ಜನರಿಗೇ 3 ದಿನಗಳ ಕಾಲ ನೋವು ಕೊಟ್ಟಿತು. ಇದೆಲ್ಲಾ ಒಂದು ಉಲ್ಲೇಖ ಮಾತ್ರಾ.  ಅದರ ಸೂಕ್ಷ್ಮಗಳು , ಹಾಗೂ ಆ ಕ್ಷಣ ಮನುಷ್ಯ ಮಾಡುವ ರೀತಿ ನಿಜಕ್ಕೂ ಒಂದು  ಸ್ಟೋರಿಯೇ ಸರಿ.

ಒಂದು ಕುತೂಹಲ. ಆ ಕುತೂಹಲದೊಳಗೆ ಹಲವಾರು ಪ್ರಶ್ನೆಗಳು , ಅಲ್ಲೇ ಒಂದು ಸಲಹೆ , ಅದಕ್ಕೊಂದು  ಉಪಮೆ. ಇದೆಲ್ಲಾ ಕೇಳುತ್ತಾ ನಿಂತಾಗ ಈ ಬದುಕೇ ಹೀಗಲ್ಲಾ .....! ಅಂತ ಅನಿಸಿಬಿಡುತ್ತದೆ. ಯಾವುದೇ ರೀತಿಯಿಂದಲೂ ಸಂಬಂಧ ಪಡದ ಸಂಗತಿ ಅದು , ಆದರೂ ಒಂದು ಕುತೂಹಲ.  ಅಲ್ಲೇನಾಗಿದೆ ಎಂಬ ಉತ್ಸಾಹ. ಅಲ್ಲಿ ಗೆಲುವಾದರೆ ಅಷ್ಟೇ.. , ಸೋಲಾದರೆ ಮತ್ತಷ್ಟು ಕುತೂಹಲ ,ಆ ಕುತೂಹಲವೇ  ಪ್ರಶ್ನೆಯಾಗಿ ಮತ್ತಷ್ಟು ಜನರಿಗೆ "ಪದ"ಬಂಧ. . .!.

ಇದೇ ಅಲ್ಲವೇ ಬದುಕು. .  , ಕೈಮೀರಿದ ಆ ಹೊತ್ತು ಯಾವುದೂ ನಮ್ಮ ಕೈಯಲ್ಲಿಲ್ಲ , ಆಗಲೇ ಬಳಕೆಯಾಗಬೇಕು ವಿವೇಕ.