31 ಜುಲೈ 2011

ರಾಜಕೀಯ ತಳಮಳ - ಶಿಸ್ತಿನ ಪಕ್ಶದಲ್ಲಿ ಅಶಿಸ್ತು . .?

ಇಂದಿನ ರಾಜಕೀಯ ಸನ್ನಿವೇಶ ನೋಡಿದಾಗ ಮನಸ್ಸಿನ ಭಾವನೆಗಳನ್ನು ಹೊರಹಾಕಲೇ ಬೇಕೆನಿಸಿತು.

ಮೊನ್ನೆ ರಾಜ್ಯದಲ್ಲಿ ಬಿಜೆಪಿ ಸರಕಾರದಲ್ಲಿ ರಾಜಕೀಯದ ಬಿಸಿ ಬಿಸಿ ಚರ್ಚೆಗಳು ನಡೆಯುತ್ತಿತು. ಕರ್ನಾಟಕದ ಬಿಜೆಪಿಗೆ ಇದು ಹೊಸದಲ್ಲ ಬಿಡಿ.ಇಲ್ಲಿ ಶಿಸ್ತಿನ ಪಕ್ಷಕ್ಕೆ ಇದೆಲ್ಲಾ ಮಾಮೂಲು ಅಂತಾಗಿದೆ. ಹಾಗಿದ್ದರೂ ಈ ಬಾರಿ ಮಾತ್ರಾ ಗಂಭೀರ ವಿಚಾರ ಇದು. ಲೋಕಾಯುಕ್ತರು ಸಲ್ಲಿಸಿದ್ದ ಗಣಿ ವರದಿಯಲ್ಲಿ ಮುಖ್ಯಮಂತ್ರಿಗಳ ಹೆಸರೂ ಇದೆ. ಹಾಗಾಗಿ ಈಗಂತೂ ನೈತಿಕತೆಯ ಪ್ರಶ್ನೆ. ಇದುವರೆಗೆ ಕರ್ನಾಟಕದ ಬಿಜೆಪಿಯಲ್ಲಿ ಇದು ಇದ್ದಂತೆ ಕಂಡುಬಂದಿರಲಿಲ್ಲ. ಆದರೆ ಈಗ ಇಡೀ ದೇಶದ ಜನ ನೋಡುತ್ತಿದ್ದಾರೆ ಈ ವರದಿಯನ್ನು ಅದರ ಜೊತೆಗೆ ಭ್ರಷ್ಠಾಚಾರದ ಬಗ್ಗೆ ಸಾಮಾನ್ಯ ಮನುಷ್ಯನೂ ಮಾತನಾಡುತ್ತಿದ್ದಾನೆ ಹಾಗಾಗಿ ಸರಕಾರಕ್ಕೆ ಅದಕ್ಕಿಂತಲೂ ಹೆಚ್ಚು ದೇಶದ ಬಿಜೆಪಿಗೆ ಇದೊಂದು ಮುಖ್ಯ ವಿಷಯ. ಹಾಗಾಗಿ ಇದು ತೀವ್ರ ಸ್ವರೂಪ ಪಡೆದುಕೊಂಡಿತು ಎನ್ನಿ.

ವಿಷಯ ಅದಲ್ಲ.
ಕರ್ನಾಟಕದಲ್ಲಿ ಮಾತ್ರವಲ್ಲ ಇಡೀ ದಕ್ಷಿಣ ಭಾರತದ ಮೊದಲ ಬಿಜೆಪಿ ಸರಕಾರ ಎಂಬ ಖ್ಯಾತಿಗೂ ಬಂದಿತು. ಆಗ ಎಷ್ಟು ಜನ ಸಂತಸ ಪಟ್ಟವರು. ಮೊನ್ನೆ ನನಗೊಬ್ಬರು ಹಿರಿಯರು ಹೇಳಿದರು , ಅಂದು 1978 - 80 ರ ಸುಮಾರಿಗೆ ಒಂದೇ ಒಂದು ಸೀಟು ಇದ್ದಿರಲಿಲ್ಲ ಬಿಜೆಪಿಗೆ , ಜನಸಂಘಕ್ಕೆ , ಆಗ ನಾವು ನಮ್ಮ ತೋಟ ಮಾರಿ ಪಾರ್ಟಿಗಾಗಿ ಕೆಲಸ ಮಾಡಿದ್ದೆವು. ಅದು ಮಾತ್ರವಲ್ಲ ಎಷ್ಟು ಜನ ಇದರಲ್ಲಿ ಹೋರಾಡಿದ್ದರು , ಆಗ ಅಧಿಕಾರ ಎಂಬುದು ನಮಗೆ ಕನಸಾಗಿತ್ತು ಎಂದು ಅವರು ವಿವರಿಸುತ್ತಿದ್ದರು , ಅದೆಷ್ಟೂ ಜನ ನ್ಯಾಯಕ್ಕಾಗಿ ಹೋರಾಡಿದ್ದಾರೆ ಇದೇ ಇಂದಿನ ಬಿಜೆಪಿಯಲ್ಲಿ, ಆದರೆ ಅದು ಅಧಿಕಾರಕ್ಕೆ ಅಲ್ಲ , ಊರ ಜನರಿಗಾಗಿ. ಹೀಗಿದ್ದ ಪಕ್ಷ ಇವತ್ತು ನೋಡಿದರೆ ಅಧಿಕಾರಕ್ಕಾಗಿಯೇ ಉಳಿದುಕೊಂಡಂತಿದೆ ಎನ್ನುತ್ತಾರೆ ಅವರು.ಆಗ ಇದೇ ಪಾರ್ಟಿಯಲ್ಲಿ ಜಾತಿ ಎಂಬುದು ಇದ್ದೇ ಇರಲಿಲ್ಲ.ಎಲ್ಲರೂ ಸಮಾನರು. ಒಬ್ಬ ನಾಯಕ.ಅವನ ಮಾತೇ ಅಂತಿಮ. ಆದರೆ ಎಲ್ಲರೂ ಜೊತೆಯಾಗಿ ಕೂತು ಚರ್ಚಿಸಿ ಮುಂದಿನ ನಡೆ ಇತ್ತು. ಆ ಬಳಿಕ ಎಲ್ಲವೂ ನಾಯಕ ಹೇಳಿದಂತೆ.ನಾಯಕನೇ ಮುಂದೆ.ಸುಳಿದವರು ಆತನ ಹಿಂದೆ. ಆದರೆ ಇವತ್ತು ನೋಡಿ ಎಲ್ಲರೂ ನಾಯಕರೇ , ಜಾತಿ ಜಾತಿ ಅಂತ ಪಕ್ಷದೊಳಗ ಜಾತಿ ನಾಯಕರು ಆಗಿ ಬಿಟ್ಟಿದ್ದಾರೆ.

ಇದೆಲ್ಲಾ ನೋಡುವಾಗ ನನಗನ್ನಿಸುತ್ತದೆ ನಾವು ಇದಕ್ಕೆನಾ ಕೆಲಸ ಮಾಡಿದ್ದು ಅಂತ ಅವರು ನೊಂದುಕೊಂಡು ಹೇಳುತಿದ್ದರು.

ಅವರು ಹೇಳಿದ್ದು ನಿಜ ಅನ್ನಿ.

ಹಿಂದೆಲ್ಲಾ ಬಿಜೆಪಿಯಲ್ಲಿ ಓಟಿಗೆ ನೋಟು ಕೊಡುತ್ತಿರಲಿಲ್ಲ. ಕಾರ್ಯಕರ್ತರೆಲ್ಲರೂ ಅವರೇ ಕೈಯಿಂದ ದುಡ್ಡು ಹಾಕಿ ಚುನಾವಣೆಗೆ ಶ್ರಮಿಸುತ್ತಿದ್ದರು. ಆದರೆ ಇಂದು ಅದೇ ಬಿಜೆಪಿಯಲ್ಲಿ ದುಡ್ಡು ಕೊಡದೆ ಚುನಾವಣೆಯಲ್ಲಿ ಯಾವೊಬ್ಬ ಕಾರ್ಯಕರ್ತನೂ ಇಳಿಯುವುದಿಲ್ಲ. ಅದು ಬಿಡಿ ಅಂದು ಒಂದು ವಾರ್ಡ್‌ನಲ್ಲಿ ಇಷ್ಟೇ ಓಟು ಬಿಜೆಪಿಗೆ ಅಂತ ಲೆಕ್ಕ ಮಾಡಿ ಹೇಳುತ್ತಿದ್ದರು ಕಾರ್ಯಕರ್ತರು , ಆದರೆ ಇಂದು ಈ ಲೆಕ್ಕ ಎಲ್ಲಾ ತಲೆಕೆಳಗಾಗಿದೆ. ಹಾಗೆ ಲೆಕ್ಕ ಮಾಡುವವರೂ ಇಲ್ಲ , ಕೇಳುವವರೂ ಇಲ್ಲ.

ಇನ್ನೊಂದು ಈಗಿನ ರಾಜಕೀಯದಲ್ಲಿ ನನಗೆ ಅನ್ನಿಸಿದ್ದು , ಬಿಜೆಪಿ ಹೈಕಮಾಂಡ್ ದುರ್ಬಲವೆ ಅಂತ?. ಯಾಕೆಂದರೆ ಇಷ್ಟಲ್ಲಾ ರಾಜಕೀಯ ಪ್ರಹಸನಗಳು ನಡೆಯುತ್ತಿದ್ದರೂ ಹೈಕಮಾಂಡ್ ಯಾಕೆ ಸುಮ್ಮನೆ ಇತು. ನೋಡಿ ಆಂಧ್ರಪ್ರದೇಶದಲ್ಲಿ ಜಗನ್‌ಮೋಹನ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಏನು ಮಾಡಿತು? , ಇತ್ತ ನೋಡಿ ಕೇರಳದಲ್ಲಿ ಅಚ್ಯುತಾನಂದನ್ ಹಾಗೂ ಪಿಣರಾಯಿ ನಡುವಿನ ಜಗಳದಲ್ಲಿ ಏನು ಮಾಡಿತು ಅವರ ಹೈಕಮಾಂಡ್ ? ಅವುಗಳೆಲ್ಲಾ ಅಷ್ಟು ಬಲಾಡ್ಯವಾಗಿದ್ದರೆ ಬಿಜೆಪಿ ಹೈಕಮಾಂಡ್ ಯಾಕೆ ದುರ್ಬಲವಾಗಿದೆ ಅನ್ನೋದೇ ವಿಶೇಷ. . !

ಏನೇ ಇರಲಿ. ಶಿಸ್ತಿನ ಪಕ್ಷ , ಸಂಘಪರಿವಾರದ ಮಾರ್ಗದರ್ಶನದಲ್ಲಿ ಬೆಳೆಯುವ ಪಕ್ಷದಲಿ ಹೀಗೆ ಆಗಬಾರದಿತ್ತು.ಈಗ ಆದದ್ದಕ್ಕೆ ಮುಂದೆ ಪ್ರಾಯಶ್ಚಿತ್ತ ಇದ್ದೇ ಇದೆ ಬಿಡಿ.

23 ಜುಲೈ 2011

ಈತ ನಮ್ಮೂರಿನ ಮಿತ್ರ . .

ನಮ್ಮ ಊರಿನಲ್ಲಿ ಈಗ ಈತ ಅತಿಥಿಯಲ್ಲ.ನಮ್ಮೂರಿನ ಜನರಿಗೆ ರಕ್ಷಣೆಯ ನೀಡುವ ಆಪ್ತ ಮಿತ್ರ. ಈತ ಮನೆ ಮನೆಗೆ ಹೋಗುತ್ತಾ ಜನರಿಗೆ , ಬೆಳೆಗಳಿಗೆ ರಕ್ಷಣೆ ನೀಡುವ ಅಭಯದಾತ. ಈತ ಬೇರೆ ಯಾರೂ ಅಲ್ಲ ಆಟಿ ಕಳೆಂಜ. . .!




ನಮ್ಮಲ್ಲೀಗ ಆಟಿ ತಿಂಗಳು.

ಮಳೆ ಜೋರಾಗೇ ಬರ್ತಾ ಇದೆ. ಮಳೆಯ ಹಾಡಿನ ಜೊತೆಗೆ ಮಳೆಯೊಂದಿಗೆ ಹೆಜ್ಜೆ ಹೆಜ್ಜೆ ಹಾಕುತ್ತಾ ಕುಣಿದಾಡುತ್ತಾ ಕೆಲವರಿಗೆ ಸುಸ್ತಾಯಿತು.ಮಳೆಯೂ ಹಾಗೆ ಇಲ್ಲಿ ಹೆಜ್ಜೆ ಹಾಕುವವರ ಖುಷಿ ನೋಡಿ ಜೋರಾಗಿ ಸುರೀತಾ ಇದೆ. ಇದು ಇಂದಲ್ಲ ಹಿಂದಿನಿಂದಲೂ ಹೀಗೆಯೇ. ಅದಕ್ಕೆ ಈ ಜೋರಾಗಿ ಮಳೆ ಸುರಿಯುವ ಕಾಲವನ್ನು ಆಟಿ ಅಂತ ಕರೆದರು ಹಿರಿಯರು. ಹೀಗಾಗಿ ಆಟಿ ಅಂದ್ರೆ ಅನೇಕರಿಗೆ ಭಯ. ಮಳೆ ಏನಾದ್ರೂ ತೊಂದರೆ ಕೊಟ್ರೆ ಅಂತ ಭಯ. ಈ ಭಯ ಹೋಗಲಾಡಿಸಲು ಬರುತ್ತಿದ್ದಾನೆ ಈ ಆಟಿ ಕಳೆಂಜ. . .!

ನಮ್ಮಲ್ಲೆಲ್ಲಾ ಆಟಿ . . ಅಲ್ಲೆಲ್ಲಾ ಹೇಳುವ ಆಷಾಡ ಮಾಸ.

ಇಲ್ಲಿ ಆಟಿ ತಿಂಗಳು ಅಂದ್ರೆ ಎಲ್ಲದಕ್ಕೂ ರೆಸ್ಟ್.

ಆಟಿ ಅಂದ್ರೆ ತಂಗಳು ಅನ್ನಕ್ಕೂ ತತ್ತ್ವಾರದ ಸಮಯ. ಅಂದ್ರೆ ಅಷ್ಟೂ ಕಷ್ಟದ ಸಮಯ ಅಂತ ಹಿಂದೊಂದು ಕಾಲದಲ್ಲಿ ವಾಡಿಕೆ ಇತ್ತಂತೆ. ಹಿರಿಯರು ಆ ಬಗ್ಗೆ ಒಂದೊಂದು ಕತೆ ಹೇಳ್ತಾರೆ. ಕೆಲವು ಕಡೆ ಊಟ ಮಾಡದೇ ಕಾಡಲ್ಲಿ ಸಿಗೋ ವಸ್ತುಗಳಲ್ಲೇ ಕಾಲ ಕಳೆದವ್ರೂ ಇದ್ರಂತೆ.ಇದ್ರ ಜತೆಗೆ ರೋಗಗಳ ಭಯ ಬೇರೆ.ಹೀಗಾಗಿ ಜನ ಹೆದರುವ ಕಾಲವಂತೆ ಅದು.ಅದಕ್ಕಾಗಿ ಈ ಆಟಿ ತಿಂಗಳಿನಲ್ಲಿ ವಿವಿದ ಆಚರಣೆಗಳು ಇರುತ್ತದೆ. ಒಂದು ಕಡೆ ಧೋ... ಸುರಿಯುವ ಮಳೆ ಇನ್ನೊಂದು ಕಡೆ ಸುಡು ಬಿಸಿಲು. ಇಂತಹ ಸಮಯದಲ್ಲಿ ಸಹಜವಾಗಿಯೇ ರೋಗಗಳು ಬಾಧಿಸುತ್ತದೆ. ಅದಕ್ಕಾಗಿ ಊರ ಮಾರಿ ಓಡಿಸುವುದು ಮತ್ತು ಊರಿನ ಮಾರಿ ಕಳೆಯಲು ಆಟಿ ಕಳೆಂಜ ಬರುತ್ತಾನೆ.ಈ ಮೂಲಕ ಮಾನಸಿಕ ನೆಮ್ಮದಿಯನ್ನು ಕಂಡುಕೊಳ್ಳಲಾಗುತ್ತಿತ್ತು.


ಮಳೆಗಾಲದಲ್ಲಿ ಸುರಿಯುವ ಅಗಾಧವಾದ ಮಳೆಯಿಂದ ಜನ ಮಾನಸಿಕವಾಗಿ ನೊಂದುಕೊಳ್ಳುವ ಈ ಸಮಯದಲ್ಲಿ ತುಳುನಾಡಿನಲ್ಲಿ ಆಟಿ ಕಳೆಂಜ ಮನೆ ಮನೆಗೆ ತೆರಳಿ ಜನರ ಭಯವನ್ನು ನಿವಾರಿಸುತ್ತಾನೆ. ತುಳು ನಾಡಿನಲ್ಲಿ ಮಳೆಗಾಲದಲ್ಲಿ ಎಡೆಬಿಡದೆ ಸುರಿಯುವ ಮಳೆಗೆ ಕೂಲಿಕಾರರಿಗೆ , ಕೃಷಿಕರಿಗೆ ಯಾವುದೇ ಕೆಲಸ ಮಾಡಲಾಗದೇ ಸಂಪಾದಿಸಲೂ ಸಾದ್ಯವಾಗದೇ ಇರುವ ಸಂದರ್ಭದಲ್ಲಿ ಬೇಸಗೆಯಲ್ಲಿ ಕೂಡಿಟ್ಟ ಆಹಾರ, ಧವಸ ಧಾನ್ಯಗಳೇ ಹೊಟ್ಟೆ ಹೊರೆಯಲು ಜೀವನಾಧಾರ.ಆದರೆ ಅದು ಕೂಡಾ ಈ ಆಟಿಯ ಸಮಯದಲ್ಲಿ ಮುಗಿಯಲು ಆರಂಭವಾಗುತ್ತದೆ. ಇದೇ ವೇಳೆ ಊರಿನಲ್ಲಿ ರೋಗರುಜಿನಗಳು ಕಾಣಿಸಿಕೊಳ್ಳುತ್ತವೆ.ಜನ ಭಯಭೀತರಾಗುತ್ತಾರೆ.ಒಟ್ಟಿನಲ್ಲಿ ಪ್ರಕೃತಿ ವಿಕೋಪದಿಂದಾಗಿ ಊರಿನಲ್ಲೆಲ್ಲಾ ಕಂಗಾಲಾಗಿರುವ ಈ ಸಮಯದಲ್ಲಿ ಜನರ ಕಷ್ಟವನ್ನು ನಿವಾರಿಸಲು ಜಾನಪದ ಆಚರಣೆಯ ಮೂಲಕ ಆಟಿ ಕಳೆಂಜ ಮನೆ ಮನೆಗೆ ಬಂದು ಮನೆಯಂಗಳದಲ್ಲಿ ಕುಣಿದು ಮನೆ ಒಡತಿ ನೀಡುವ ಹುಳಿ, ತೆಂಗಿನಕಾಯಿ, ಬಟ್ಟೆ, ತೆಂಗಿನ ಎಣ್ಣೆ ಇತ್ಯಾದಿಗಳನ್ನು ಪಡೆದು ತೋಟದಿಂದ ಫಲವಸ್ತುವನ್ನು ಪಡೆದು ಮನೆಗೆ ಬಂದ ಮಾರಿಯನ್ನು ಕಳೆಂಜ ಕಳೆಯುತ್ತಾನೆ ಎಂಬ ನಂಬಿಕೆಯಿದೆ.ಆಟಿ ಕಳೆಂಜಕ್ಕೆ ಕಿನ್ನಿ ಎಂಬ ಇನ್ನೊಂದು ವೇಷವೂ ಸಾಥಿಯಾಗುತ್ತದೆ. ಊರಿನಲ್ಲಿ ಭೂತ ನರ್ತನ ಮಾಡುವ ಕಲಾವಿದರು ಈ ಕಳೆಂಜ ವೇಷವನ್ನು ಹಾಕುತ್ತಾರೆ. ತೆಂಗಿನ ಸಿರಿ , ಸುಣ್ಣ , ಬಣ್ಣಗಳಿಂದ ಅಲಂಕಾರಗೊಂಡ ಬಳಿಕ ಊರಿನ ಮನೆ ಮನೆಗಳಿಗೆ ತೆರಳುತ್ತಾರೆ. ತೆಂಬರೆಯ ಹಿಮ್ಮೇಳಕ್ಕೆ ಆಟಿ ಕಳೆಂಜನು ಮನೆಯಂಗಳದಲ್ಲಿ ಛತ್ರಿಯನ್ನು ಕೈಯಲ್ಲಿ ಹಿಡಿದುಕೊಂಡು ತಿರುಗಿಸುತ್ತಾ ಕುಣಿಯುತ್ತಾನೆ.ಹಿಮ್ಮೇಳದವರು ಜಾನಪದ ಪಾಡ್ಡನವನ್ನು ಹೇಳುತ್ತಾ ಕಳೆಂಜನ ಇತಿಹಾಸವನ್ನು ವಿವರಿಸುತ್ತಾರೆ. ಕೊನೆಗೆ ತೋಟಕ್ಕೆ ತೆರಳಿ ಫಲ ವಸ್ತುವನ್ನು ಕೊಂಡೊಯ್ಯುವ ಪದ್ದತಿ ಇದೆ.ಇದರಿಂದಾಗಿ ಕೃಷಿಗೆ ತಟ್ಟಿದ ರೋಗಗಳೂ ಹೋಗುತ್ತವೆ ಎನ್ನುವ ನಂಬಿಕೆ ಇದೆ.ಇದೆಲ್ಲಾ ಒಂದು ಕತೆ

ನಮ್ಮೂರಲ್ಲಿ ಇಂದಿಗೂ ಈ ಆಚರಣೆ ಇದೆ ಎಂಬ ಖುಷಿ ನನಗೆ. ಆಚರಣೆ , ನಂಬಿಕೆ ಇರುವ ಊರಲ್ಲಿ ಮನುಷ್ಯರ ನಡುವಿನ ಸಂಬಂಧವೂ ಚೆನ್ನಾಗಿರುತ್ತೆ ಅಂತಾರಲ್ಲ.. ..!.