23 ಜುಲೈ 2011

ಈತ ನಮ್ಮೂರಿನ ಮಿತ್ರ . .

ನಮ್ಮ ಊರಿನಲ್ಲಿ ಈಗ ಈತ ಅತಿಥಿಯಲ್ಲ.ನಮ್ಮೂರಿನ ಜನರಿಗೆ ರಕ್ಷಣೆಯ ನೀಡುವ ಆಪ್ತ ಮಿತ್ರ. ಈತ ಮನೆ ಮನೆಗೆ ಹೋಗುತ್ತಾ ಜನರಿಗೆ , ಬೆಳೆಗಳಿಗೆ ರಕ್ಷಣೆ ನೀಡುವ ಅಭಯದಾತ. ಈತ ಬೇರೆ ಯಾರೂ ಅಲ್ಲ ಆಟಿ ಕಳೆಂಜ. . .!




ನಮ್ಮಲ್ಲೀಗ ಆಟಿ ತಿಂಗಳು.

ಮಳೆ ಜೋರಾಗೇ ಬರ್ತಾ ಇದೆ. ಮಳೆಯ ಹಾಡಿನ ಜೊತೆಗೆ ಮಳೆಯೊಂದಿಗೆ ಹೆಜ್ಜೆ ಹೆಜ್ಜೆ ಹಾಕುತ್ತಾ ಕುಣಿದಾಡುತ್ತಾ ಕೆಲವರಿಗೆ ಸುಸ್ತಾಯಿತು.ಮಳೆಯೂ ಹಾಗೆ ಇಲ್ಲಿ ಹೆಜ್ಜೆ ಹಾಕುವವರ ಖುಷಿ ನೋಡಿ ಜೋರಾಗಿ ಸುರೀತಾ ಇದೆ. ಇದು ಇಂದಲ್ಲ ಹಿಂದಿನಿಂದಲೂ ಹೀಗೆಯೇ. ಅದಕ್ಕೆ ಈ ಜೋರಾಗಿ ಮಳೆ ಸುರಿಯುವ ಕಾಲವನ್ನು ಆಟಿ ಅಂತ ಕರೆದರು ಹಿರಿಯರು. ಹೀಗಾಗಿ ಆಟಿ ಅಂದ್ರೆ ಅನೇಕರಿಗೆ ಭಯ. ಮಳೆ ಏನಾದ್ರೂ ತೊಂದರೆ ಕೊಟ್ರೆ ಅಂತ ಭಯ. ಈ ಭಯ ಹೋಗಲಾಡಿಸಲು ಬರುತ್ತಿದ್ದಾನೆ ಈ ಆಟಿ ಕಳೆಂಜ. . .!

ನಮ್ಮಲ್ಲೆಲ್ಲಾ ಆಟಿ . . ಅಲ್ಲೆಲ್ಲಾ ಹೇಳುವ ಆಷಾಡ ಮಾಸ.

ಇಲ್ಲಿ ಆಟಿ ತಿಂಗಳು ಅಂದ್ರೆ ಎಲ್ಲದಕ್ಕೂ ರೆಸ್ಟ್.

ಆಟಿ ಅಂದ್ರೆ ತಂಗಳು ಅನ್ನಕ್ಕೂ ತತ್ತ್ವಾರದ ಸಮಯ. ಅಂದ್ರೆ ಅಷ್ಟೂ ಕಷ್ಟದ ಸಮಯ ಅಂತ ಹಿಂದೊಂದು ಕಾಲದಲ್ಲಿ ವಾಡಿಕೆ ಇತ್ತಂತೆ. ಹಿರಿಯರು ಆ ಬಗ್ಗೆ ಒಂದೊಂದು ಕತೆ ಹೇಳ್ತಾರೆ. ಕೆಲವು ಕಡೆ ಊಟ ಮಾಡದೇ ಕಾಡಲ್ಲಿ ಸಿಗೋ ವಸ್ತುಗಳಲ್ಲೇ ಕಾಲ ಕಳೆದವ್ರೂ ಇದ್ರಂತೆ.ಇದ್ರ ಜತೆಗೆ ರೋಗಗಳ ಭಯ ಬೇರೆ.ಹೀಗಾಗಿ ಜನ ಹೆದರುವ ಕಾಲವಂತೆ ಅದು.ಅದಕ್ಕಾಗಿ ಈ ಆಟಿ ತಿಂಗಳಿನಲ್ಲಿ ವಿವಿದ ಆಚರಣೆಗಳು ಇರುತ್ತದೆ. ಒಂದು ಕಡೆ ಧೋ... ಸುರಿಯುವ ಮಳೆ ಇನ್ನೊಂದು ಕಡೆ ಸುಡು ಬಿಸಿಲು. ಇಂತಹ ಸಮಯದಲ್ಲಿ ಸಹಜವಾಗಿಯೇ ರೋಗಗಳು ಬಾಧಿಸುತ್ತದೆ. ಅದಕ್ಕಾಗಿ ಊರ ಮಾರಿ ಓಡಿಸುವುದು ಮತ್ತು ಊರಿನ ಮಾರಿ ಕಳೆಯಲು ಆಟಿ ಕಳೆಂಜ ಬರುತ್ತಾನೆ.ಈ ಮೂಲಕ ಮಾನಸಿಕ ನೆಮ್ಮದಿಯನ್ನು ಕಂಡುಕೊಳ್ಳಲಾಗುತ್ತಿತ್ತು.


ಮಳೆಗಾಲದಲ್ಲಿ ಸುರಿಯುವ ಅಗಾಧವಾದ ಮಳೆಯಿಂದ ಜನ ಮಾನಸಿಕವಾಗಿ ನೊಂದುಕೊಳ್ಳುವ ಈ ಸಮಯದಲ್ಲಿ ತುಳುನಾಡಿನಲ್ಲಿ ಆಟಿ ಕಳೆಂಜ ಮನೆ ಮನೆಗೆ ತೆರಳಿ ಜನರ ಭಯವನ್ನು ನಿವಾರಿಸುತ್ತಾನೆ. ತುಳು ನಾಡಿನಲ್ಲಿ ಮಳೆಗಾಲದಲ್ಲಿ ಎಡೆಬಿಡದೆ ಸುರಿಯುವ ಮಳೆಗೆ ಕೂಲಿಕಾರರಿಗೆ , ಕೃಷಿಕರಿಗೆ ಯಾವುದೇ ಕೆಲಸ ಮಾಡಲಾಗದೇ ಸಂಪಾದಿಸಲೂ ಸಾದ್ಯವಾಗದೇ ಇರುವ ಸಂದರ್ಭದಲ್ಲಿ ಬೇಸಗೆಯಲ್ಲಿ ಕೂಡಿಟ್ಟ ಆಹಾರ, ಧವಸ ಧಾನ್ಯಗಳೇ ಹೊಟ್ಟೆ ಹೊರೆಯಲು ಜೀವನಾಧಾರ.ಆದರೆ ಅದು ಕೂಡಾ ಈ ಆಟಿಯ ಸಮಯದಲ್ಲಿ ಮುಗಿಯಲು ಆರಂಭವಾಗುತ್ತದೆ. ಇದೇ ವೇಳೆ ಊರಿನಲ್ಲಿ ರೋಗರುಜಿನಗಳು ಕಾಣಿಸಿಕೊಳ್ಳುತ್ತವೆ.ಜನ ಭಯಭೀತರಾಗುತ್ತಾರೆ.ಒಟ್ಟಿನಲ್ಲಿ ಪ್ರಕೃತಿ ವಿಕೋಪದಿಂದಾಗಿ ಊರಿನಲ್ಲೆಲ್ಲಾ ಕಂಗಾಲಾಗಿರುವ ಈ ಸಮಯದಲ್ಲಿ ಜನರ ಕಷ್ಟವನ್ನು ನಿವಾರಿಸಲು ಜಾನಪದ ಆಚರಣೆಯ ಮೂಲಕ ಆಟಿ ಕಳೆಂಜ ಮನೆ ಮನೆಗೆ ಬಂದು ಮನೆಯಂಗಳದಲ್ಲಿ ಕುಣಿದು ಮನೆ ಒಡತಿ ನೀಡುವ ಹುಳಿ, ತೆಂಗಿನಕಾಯಿ, ಬಟ್ಟೆ, ತೆಂಗಿನ ಎಣ್ಣೆ ಇತ್ಯಾದಿಗಳನ್ನು ಪಡೆದು ತೋಟದಿಂದ ಫಲವಸ್ತುವನ್ನು ಪಡೆದು ಮನೆಗೆ ಬಂದ ಮಾರಿಯನ್ನು ಕಳೆಂಜ ಕಳೆಯುತ್ತಾನೆ ಎಂಬ ನಂಬಿಕೆಯಿದೆ.ಆಟಿ ಕಳೆಂಜಕ್ಕೆ ಕಿನ್ನಿ ಎಂಬ ಇನ್ನೊಂದು ವೇಷವೂ ಸಾಥಿಯಾಗುತ್ತದೆ. ಊರಿನಲ್ಲಿ ಭೂತ ನರ್ತನ ಮಾಡುವ ಕಲಾವಿದರು ಈ ಕಳೆಂಜ ವೇಷವನ್ನು ಹಾಕುತ್ತಾರೆ. ತೆಂಗಿನ ಸಿರಿ , ಸುಣ್ಣ , ಬಣ್ಣಗಳಿಂದ ಅಲಂಕಾರಗೊಂಡ ಬಳಿಕ ಊರಿನ ಮನೆ ಮನೆಗಳಿಗೆ ತೆರಳುತ್ತಾರೆ. ತೆಂಬರೆಯ ಹಿಮ್ಮೇಳಕ್ಕೆ ಆಟಿ ಕಳೆಂಜನು ಮನೆಯಂಗಳದಲ್ಲಿ ಛತ್ರಿಯನ್ನು ಕೈಯಲ್ಲಿ ಹಿಡಿದುಕೊಂಡು ತಿರುಗಿಸುತ್ತಾ ಕುಣಿಯುತ್ತಾನೆ.ಹಿಮ್ಮೇಳದವರು ಜಾನಪದ ಪಾಡ್ಡನವನ್ನು ಹೇಳುತ್ತಾ ಕಳೆಂಜನ ಇತಿಹಾಸವನ್ನು ವಿವರಿಸುತ್ತಾರೆ. ಕೊನೆಗೆ ತೋಟಕ್ಕೆ ತೆರಳಿ ಫಲ ವಸ್ತುವನ್ನು ಕೊಂಡೊಯ್ಯುವ ಪದ್ದತಿ ಇದೆ.ಇದರಿಂದಾಗಿ ಕೃಷಿಗೆ ತಟ್ಟಿದ ರೋಗಗಳೂ ಹೋಗುತ್ತವೆ ಎನ್ನುವ ನಂಬಿಕೆ ಇದೆ.ಇದೆಲ್ಲಾ ಒಂದು ಕತೆ

ನಮ್ಮೂರಲ್ಲಿ ಇಂದಿಗೂ ಈ ಆಚರಣೆ ಇದೆ ಎಂಬ ಖುಷಿ ನನಗೆ. ಆಚರಣೆ , ನಂಬಿಕೆ ಇರುವ ಊರಲ್ಲಿ ಮನುಷ್ಯರ ನಡುವಿನ ಸಂಬಂಧವೂ ಚೆನ್ನಾಗಿರುತ್ತೆ ಅಂತಾರಲ್ಲ.. ..!.

ಕಾಮೆಂಟ್‌ಗಳಿಲ್ಲ: