06 ಡಿಸೆಂಬರ್ 2021

ಒಂದು ಕಣ್ಣೀರು ಕೂಡಾ ಉದ್ಯಮವಾಗಬಹುದಾದರೆ, ನಾವೆಲ್ಲಿದ್ದೇವೆ…..? ಬದಲಾವಣೆ ಹೇಗೆ ?

 ಎಷ್ಟೇ ಹೇಳಿದರೂ ಇಂದು ಜಗತ್ತು ಉದ್ಯಮವಾಗಿ ಬದಲಾಗುತ್ತಿದೆ. ಏನೇ ಮಾತನಾಡಿದರೂ ಕೊನೆಗೆ ಬಂದು ನಿಲ್ಲಿವುದು ನನಗೇನು ಅಥವಾ ನಮಗೇನು ಲಾಭ ಎಂದೇ ? ಇಂತಹ ಕಾಲಘಟ್ಟದಲ್ಲಿ ಮಾನಸಿಕವಾಗಿ ಸ್ವಲ್ಪ ಯೋಚಿಸಬಲ್ಲ ಹಾಗೂ ಅಂತಹ ವಾತಾವರಣವನ್ನು ಸೃಷ್ಟಿ ಮಾಡುವ ಶಕ್ತಿ ಇರುವುದು ಮಾಧ್ಯಮ ಕ್ಷೇತ್ರಕ್ಕೆ. ಹೀಗಾಗಿ ಈಗ ಯೋಚಿಸಬೇಕಾದ ಕಾಲಘಟ್ಟ.

ಈ ಜಗತ್ತಿಗೆ, ಈ ಸಮಾಜಕ್ಕೆ ಕೊಡುಗೆ ಏನು ನೀಡಬಹುದು ? ಎಂಬ ಪ್ರಶ್ನೆಯನ್ನು ಒಬ್ಬರು ಕೇಳಿದರು. ಅನೇಕರು ವಿವಿಧ ರೀತಿಯ ಉತ್ತರ ನೀಡಿದರು. ಅವರವರ ಕ್ಷೇತ್ರಕ್ಕೆ ಸಂಬಂಧಿಸಿ ವಿವಿಧ ಉತ್ತರಗಳನ್ನು ನೀಡಿದರು. ಅದರಲ್ಲಿ ಬಹುಪಾಲು ಈ ಜಗತ್ತಿನಲ್ಲಿ ಸೃಷ್ಟಿಸಿಯಾಗಿದೆ ಕೂಡಾ. ಇನ್ನೇನಿದ್ದರೂ ಅದರದ್ದೇ ಮುಂದಿನ ಭಾಗ ಅಷ್ಟೇ…!. . ಅನೇಕ ಯುವ ಪತ್ರಕರ್ತರನ್ನು ಅದೇ ಪ್ರಶ್ನೆ ಕೇಳಿದಾಗ ಹೇಳುವ ಉತ್ತರ, “ ಈ ಸಮಾಜವನ್ನು ಬದಲಾಯಿಸಲು ನಾನು ಪತ್ರಿಕೋದ್ಯಮ” ಆಯ್ಕೆ ಮಾಡಿಕೊಂಡಿದ್ದೇನೆ ಎಂದೇ. ಇಂತಹ ಉದ್ದೇಶ ಇಟ್ಟುಕೊಂಡಿರುವ ಪತ್ರಕರ್ತರು ನಂತರ ಸೋಲುವುದು ಎಲ್ಲಿ ? ಎಂಬುದೇ ಬಹುದೊಡ್ಡ ಪ್ರಶ್ನೆ. ಈ ಬದಲಾವಣೆ ಆಗಬೇಕಾದ್ದು ಎಲ್ಲಿ ?. ಹಾಗಿರುವ ಬದಲಾವಣೆ ಏನು ? 

ಇಂದಿನ ಕಾಲಘಟ್ಟದಲ್ಲಿ ಈ ದೇಶಕ್ಕೆ, ಸಮಾಜಕ್ಕೆ, ಜಗತ್ತಿಗೆ ನೀಡಬೇಕಾದ ಕೊಡುಗೆಯೇ ನೈತಿಕ ಮೌಲ್ಯಗಳು. ಈ ದೇಶದ ಪರಂಪರೆಯಾದ ನೈಜತೆಯ ಪುನರುತ್ಥಾನ ಅಷ್ಟೇ. ಅದನ್ನು ಚಿಂತಿಸುವ ಹಾಗೆ ಮಾಡಬೇಕಾದ್ದೇ ಪತ್ರಿಕೋದ್ಯಮ ವಿಭಾಗ, ಏಕೆಂದರೆ ಇಂದು ಯೋಚಿಸುವಂತೆ ಹಾಗೂ ಅದನ್ನು ಓದುವಂತೆ ಮಾಡುವು ಶಕ್ತಿ ಇರುವುದು ಮಾಧ್ಯಮ ಕ್ಷೇತ್ರಕ್ಕೆ. ಅದು ಸೋಶಿಯಲ್ ಮೀಡಿಯಾ, ಆನ್ ಲೈನ್ ಮೀಡಿಯಾ, ಪತ್ರಿಕಾ ರಂಗ, ದೃಶ್ಯ ಮಾಧ್ಯಮ. ಇಲ್ಲೆಲ್ಲಾ ಸತ್ಯದ ಯೋಚನೆಯನ್ನು ಯೋಜಿಸುವ ಮನಸ್ಸುಗಳು ಬೆಳೆಯಬೇಕಾದ ಅವಶ್ಯಕತೆ ಇದೆ. ಏಕೆಂದರೆ ಇಂದು ಬಹುತೇಕ ಪತ್ರಿಕೆಗಳಲ್ಲಿ, ಮಾಧ್ಯಮಗಳಲ್ಲಿ ಒಂದು ಕಾಲಂ ಪ್ರಕಟವಾಗುತ್ತಿದೆ, “ಫ್ಯಾಕ್ಟ್ ಚೆಕ್” . ಅಂದರೆ ಅಷ್ಟೂ ಪ್ರಮಾಣದಲ್ಲಿ ಸುಳ್ಳುಗಳು ವಿಜೃಂಭಿಸುತ್ತವೆ, ಎಷ್ಟೆಂದರೆ ಸತ್ಯವೇ ಸುಳ್ಳೆಂದು ಹೇಳುವ ಕಾಲಘಟ್ಟ ಬಂದಾಗಿದೆ. ಹೀಗಾಗಿ ಇಲ್ಲೊಂದು ಬದಲಾವಣೆಯ ಪರ್ವ ಆರಂಭವಾಗಬೇಕಿದೆ. 

ಇಷ್ಟೇ ಇಲ್ಲ, ಅದಾರಾಚೆಗೆ ಬಂದರೆ,ಒಂದು ಕುಟುಂಬದ ಕಣ್ಣೀರು, ಒಂದು ಕುಟುಂಬ ಖಾಸಗಿ ಬದುಕುಗಳೂ ಇಂದು ಉದ್ಯಮವಾಗುತ್ತದೆ. ಎಲ್ಲಾ ಮಾಧ್ಯಮಗಳಲ್ಲಿ ಇದಕ್ಕೇ ಪ್ರಾಶಸ್ತ್ಯ ಎಂದಾದರೆ ಒಂದು ಕಣ್ಣೀರು ಕೂಡಾ ಉದ್ಯಮವಾಗುತ್ತದೆ ಎಂದಾದರೆ ಅಲ್ಲಿ ಮನುಷ್ಯತ್ವ ಸಾಯುತ್ತಿದೆ ಎಂದೇ ಅರ್ಥ. ಒಂದು ಮನೆಯೊಳಗಿನ ಕಣ್ಣೀರಿಗೆ ಇಡೀ ಸಮಾಜವೇ ಬೆಳಕಾಗುತ್ತದೆಯಾದರೆ ಇಂದು ಸಮಾಜದಲ್ಲಿ ಯಾವ ಕುಟುಂಬಗಳೂ ಸಂಕಷ್ಟದಲ್ಲಿ ಇರಬಾರದಾಗಿತ್ತು. ಆದರೆ ಹಾಗಾಗುತ್ತಿಲ್ಲ, ಆ ಕುಟುಂಬದ ಸಂಕಷ್ಟದ ಕಣ್ಣೀರು ನೋಡುತ್ತಾ, ಆನಂದವೋ, ಮತ್ತೆ ಕಣ್ಣೀರೋ.. ? ಏನೋ ಒಂದು ಆಗುತ್ತಿದೆ ಎನ್ನುವುದು ಇಲ್ಲೊಂದು ಬದಲಾವಣೆ ಬೇಕಿದೆ ಎನ್ನುವುದರ ಸೂಚಕವಷ್ಟೇ.

ಇಷ್ಟೇ ಅಲ್ಲ, ನೈತಿಕ ಅಧ:ಪತನಗಳು ಎಲ್ಲಾಗುತ್ತಿವೆ ಎಂದರೆ ಮಾಧ್ಯಮ ರಂಗದಲ್ಲಿಯೇ..!. ಯಾವುದೋ ಖಾಸಗಿ ಕ್ಷಣಗಳು, ನೈತಿಕ ಅಧ:ಪತನದ ವಿಡಿಯೋ ಕೂಡಾ ಉದ್ಯಮವಾಗುತ್ತದೆ. ಸೆಕ್ಸ್ ವಿಡಿಯೋಗಳೂ ಕೂಡಾ ಸೋಶಿಯಲ್ ಮೀಡಿಯಾದಿಂದ ತೊಡಗಿ ದೃಶ್ಯ ಮಾಧ್ಯಮಗಳಲ್ಲಿ ರಾರಾಜಿಸುತ್ತವೆ ಹಾಗೂ ಇಡೀ ದಿನ ಪ್ರಸಾರವಾಗುತ್ತದೆ ಎಂದಾದರೆ ಪ್ರತೀ ವ್ಯಕ್ತಿಯೂ ನೈತಿಕವಾಗಿ ಕುಸಿತವಾಗಿದ್ದಾನೆ ಎಂದೇ ಅರ್ಥ.ಇಲ್ಲೂ ಬದಲಾವಣೆಯ ನಿರೀಕ್ಷೆ ಇದೆ.

ಇಂದು ಪುಟ್ಟ ಪುಟ್ಟ ಮಾಧ್ಯಮ ಗಮನಿಸಿದರೂ, ಸಮಾಜದಲ್ಲಿ ಒಳ್ಳೆಯದನ್ನು ಫೋಕಸ್ ಮಾಡದೆ, ಕೊಲೆ, ಸುಲಿಗೆ, ಸೆಕ್ಸ್, ಸೇರಿದಂತೆ ಋಣಾತ್ಮಕ ಸಂಗತಿಗಳನ್ನೇ ಏಕೆ ಪ್ರಸಾರ ಮಾಡುತ್ತಿವೆ ಎಂಬ ಸಮೀಕ್ಷೆ ಮಾಡಿದರೆ, ಅದೆಲ್ಲವೂ ವ್ಯವಹಾರವಾಗಿದೆ, ಅದೆಲ್ಲಾ ಉದ್ಯಮವಾಗಿದೆ. ಅಂತಹ ಸಂಗತಿಗಳೇ ಓದಿಸುತ್ತವೆ, ಹೀಗೆ ಓದಿಸಿದರೆ ಮಾಧ್ಯಮ ಓಡುತ್ತದೆ, ಮಾಧ್ಯಮ ಓಡಿದರೆ ಹಣ ಬರುತ್ತದೆ…!. ಇಷ್ಟೇ ಇಲ್ಲಿರುವ ಸಂಗತಿಗಳು. 

 ಇಂತಹ ವ್ಯವಸ್ಥೆ ಬದಲಾಯಿಸಲು ತಕ್ಷಣಕ್ಕೆ ಸಾಧ್ಯವೇ ಇಲ್ಲ ಎಂಬುದೂ ವಾಸ್ತವ. ಆದರೆ ಸಣ್ಣ ಪ್ರಯತ್ನವೊಂದು ಆರಂಭವಾಗಬಹುದು ಅಷ್ಟೇ. ನದಿಯ ಮೊದಲ ಹನಿಯಂತೆ ಇದೂ ಒಂದು ಪ್ರಯತ್ನವಷ್ಟೇ. ರಚನಾತ್ಮಕವಾದ ದೃಷ್ಟಿಕೋನದಿಂದಲೇ ಹೆಜ್ಜೆ ಇರಿಸಿಕೊಂಡು ಸಮಾಜಕ್ಕೆ ಯಾವ ಉಪಯೋಗವೂ ಇಲ್ಲದ ಸುದ್ದಿಗಳ ಕಡೆಗೆ ಹೆಚ್ಚು ಫೋಕಸ್ ಮಾಡದೇ ಇರುವುದಷ್ಟೇ ಸದ್ಯದ ಪರಿಹಾರ. ಅಂತಹ ಮನಸ್ಥಿತಿಯನ್ನು ಯುವಪತ್ರಕರ್ತರು ಬೆಳೆಯಿಸಿಕೊಳ್ಳಬೇಕು ಹಾಗೂ ವಿದ್ಯಾರ್ಥಿಗಳ ತರಬೇತಿಯೂ ಆ ನೆಲೆಯಲ್ಲಿಯೇ ನಡೆಯಬೇಕಿದೆ.ಇಂತಹ ನಡೆಯಲ್ಲೂ ಸವಾಲುಗಳು ಇರುತ್ತವೆ.

 ವಾಸ್ತವದಲ್ಲಿ, ಉದ್ಯಮದ ನಡೆಗಿಂತಲೂ ರಚನಾತ್ಮಕವಾದ ನಡೆಗಳು ಯಾವತ್ತೂ ಹೆಚ್ಚು ಸವಾಲುಗಳೇ. ಇಂತಹ ಸಂಗತಿಗಳಲ್ಲಿ ದುಡ್ಡು ಆಗುವುದಿಲ್ಲ,  ಇಂದಿನ ಸಮಾಜದಲ್ಲಿ ದುಡ್ಡ ಕೂಡಾ ಅಗತ್ಯವಾದ ಕಾರಣ ಇಂತಹ ರಚನಾತ್ಮಕ ನಡೆಗಳಲ್ಲಿ ದುಡ್ಡು ಆಗದೇ ಇದ್ದರೆ ಸಮಾಜದಲ್ಲಿ ಸಶಕ್ತವಾಗಿ ಬದುಕು ಹೇಗೆ ? ಎಂಬ ಪ್ರಶ್ನೆ ಬರುತ್ತದೆ. ಇದಕ್ಕಾಗಿ ಒಂದಷ್ಟು ಸಹೃದಯ ಹಾಗೂ ನಿಜವಾಗೂ ಬದಲಾವಣೆಯ ಮನಸ್ಸುಳ್ಳ ಕೂಟಗಳು ಬೇಕಾಗಬಹುದು, ಅಂತಹ ಕೂಟವನ್ನು ಯುವಪತ್ರಕರ್ತರೇ ನಿರ್ಮಾಣ ಮಾಡುತ್ತಾ, ಸಮಾಜದಲ್ಲಿ ಬದಲಾವಣೆ, ಯೋಚಿಸುವ ಬದಲಾವಣೆ, ತರಲು ಸಾಧ್ಯವಿದೆ, ಒಮ್ಮೆ ಯೋಚನೆಗೆ ಬಂದರೆ ಉಳಿದೆಲ್ಲಾ ಬದಲಾವಣೆಗಳೂ ಸಹಜವಾಗಿಯೇ ಆಗುತ್ತದೆ. ಇಂತಹದ್ದೊಂದು ಪ್ರಯತ್ನ ಯುವಪತ್ರಕರ್ತರಿಂದ ನಡೆಯಲು , ಅವರನ್ನು ಮಾನಸಿಕವಾಗಿ ಗಟ್ಟಿಗೊಳಿಸಲು ತರಬೇತಿ ಕೇಂದ್ರಗಳೂ ಗಟ್ಟಿಯಾಗಬೇಕು.


( ವಿವೇಕಾನಂದ ಪತ್ರಿಕೋದ್ಯಮ ಕಾಲೇಜಿನ ವಿಕಸನ ಪತ್ರಿಕೆಗಾಗಿ ಬರೆದದ್ದು )


17 ಅಕ್ಟೋಬರ್ 2021

ದೇಸೀ ಗೋವಿನ ಪ್ರೀತಿ...! ಪಿಕ್‌ ಅಪ್‌ ಗೆ ಬಾಡಿಗೆ ಸಮರ್ಪಣೆಯೂ....!!



ನನಗ್ಯಾಕೋ ಗೋವು ಎಂದರೆ ಒಂಚೂರು ಪ್ರೀತಿ ಹೆಚ್ಚು. ನಮ್ಮನೆಯಲ್ಲಿ ಒಂದು ಹೋರಿ ಸಹಿತ ಒಂದು ದನ ಎರಡು ಕರು ಸಾಕುತ್ತಿದ್ದೇವೆ. ಹೋರಿ ಸಾಕುವುದು  ಕೂಡಾ ಪ್ರೀತಿಯ ಕಾರಣಕ್ಕೆ. ಅನೇಕರು "ಗಿರಾಕಿ"ಗಳು ಬಂದರು. ಹೋರಿ ಕೊಡಲು ಒತ್ತಾಯ ಮಾಡಿದರೂ, ಈಗಲೂ  ಹೋರಿ ಸಾಕುತ್ತಿದ್ದೇವೆ.
ಎಲ್ಲೇ ಹೋದರೂ ಸಂಜೆ ಬಂದು ಮನೆಯಲ್ಲಿ ಹಟ್ಟಿಯೊಳಗೆ ಹೋಗಲೇಬೇಕು. ಹಾಲು ಕರೆಯುವ ಕೆಲಸ ಇದ್ದೇ ಇದೆ. ಬೆಳಗ್ಗೆ 3.30 ಕ್ಕೆ ಹಾಲು ಕರೆದ ದಿನ ಇದೆ ರಾತ್ರಿ 11 ಕ್ಕೂ ಬಂದು ಹಾಲು ಕರೆದು, ಕರುವಿಗೆ ಹಾಲುಣಿಸಿದ ದಿನವೂ ಇದೆ. ಅದು ದೇಸೀ ದನ. ...!.ಇದಿಷ್ಟು ಬೇಸಿಕ್‌ ಹೇಳಲು ಕಾರಣ ಇದೆ. ಗೋವು ಸಾಕಾಣಿಕೆ ಹಾಗೂ ಆರೈಕೆಯ ಭಾಗವನ್ನು ಹೇಳಿಯೇ  ನಮ್ಮ ಗೋವಿನ ಕತೆಯನ್ನು ದಾಖಲಿಸಬೇಕಿತ್ತು.

ಸುಮಾರು ಹದಿನೈದು ವರ್ಷಗಳ ಹಿಂದಿನ ಕತೆ ಇದೆ. ಭಾರತೀಯ ಗೋ ತಳಿಯ ಬಗ್ಗೆ‌ ಎರಡು ಕಾರಣಗಳಿಂದ ಹೆಚ್ಚು ಇಷ್ಟವಾಯಿತು. ಒಂದು ಗೋವಿನ ಮಹತ್ವ, ಇನ್ನೊಂದು ಭೂಮಿಯ ಫಲವತ್ತತೆಯಲ್ಲಿ ದೇಸೀ ಗೋವಿನ ಪಾತ್ರದ ಬಗ್ಗೆ. ಇಲ್ಲೂ ಎರಡು ವಿಚಾರಗಳ ಕಡೆಗೆ ಆಕರ್ಷಿತನಾಗಿದ್ದೆ. ಮೊದಲನೆಯದು ನಾನು ಪಡೆದ  ದೇಸೀಯತೆಯ ಹಾಗೂ ದೇಶದ ಬಗೆಗಿನ ಶಿಕ್ಷಣ. ಇನ್ನೊಂದು ರಾಮಚಂದ್ರಾಪುರ ಮಠದ ಗೋ ತಳಿ ಸಂರಕ್ಷಣೆಯ ಕಾಳಜಿಗೆ ಸಹಕಾರ ನೀಡುವ ಪ್ರೀತಿ.

ಹೀಗಾಗಿ ರಾಮಚಂದ್ರಾಪುರ ಮಠದ ಕಡೆಯಿಂದ ದೇಸೀ  ಗೋ ತಳಿಯನ್ನು ಮನೆಗೆ ತಲುಪಿಸುವ ಯೋಜನೆ ಹಮ್ಮಿಕೊಳ್ಳಲಾಗಿತ್ತು. ನಾವೂ ಈ ಯೋಜನೆಯಲ್ಲಿ ಭಾಗಿಯಾದೆವು. ಅದು ಕಾಂಕ್ರೇಜ್‌ ತಳಿಯ ಗೋವು. ನಮ್ಮೂರಿಗೆ ಹೊಸನಗರದಿಂದ ಒಂದು ಲೋಡ್‌ ಅಂದರೆ 13  ಗೋವುಗಳನ್ನು  ತರುವ ಜವಾಬ್ದಾರಿ ನಮ್ಮ ಮೇಲಾಯಿತು. ಗೋವಿನ ತರುವ ಬಗ್ಗೆ ಅದೊಂದು ತಂಡ ಯೋಜನೆ ಸಿದ್ಧ ಮಾಡಿತು. ಲಾರಿಯಲ್ಲಿ  ಗೋವು ತರುವ ಕೆಲಸ ನಮ್ಮದಾಯಿತು. ನನ್ನ ಜೊತೆ ನನ್ನ ಕುಟುಂಬದ ಸಹೋದರನೂ ಜೊತೆಗಿದ್ದರು.

ಅಂದು ನಾವಿಬ್ಬರೂ ಲಾರಿಯಲ್ಲಿ ಸಂಜೆ ಹೊಸನಗರದಿಂದ ಹೊರಟಾಯಿತು. ಸುಮಾರು ಕುಂದಾಪುರದ ಬಳಿ ತಲುಪಿದಾಗ ತಡರಾತ್ರಿಯಾಯಿತು. ಅಷ್ಟರಲ್ಲಿ ಒಂದು ಜೀಪಲ್ಲಿ ಬಂದ ಬಜರಂಗದಳದ ತಂಡ ಲಾರಿಯನ್ನು ತಡೆಯಿತು. ತಡೆದ ಬಳಿಕ ಗಲಾಟೆಯೋ ಗಲಾಟೆ...! ,ಇದು ಕಸಾಯಿಖಾನೆಗೆ ಹೋಗುತ್ತಿದೆ ಎಂದು ಆ ರಾತ್ರಿಯಲ್ಲಿ ಬೊಬ್ಬಿಟ್ಟರು. ಯಾವ ಉತ್ತರ ನೀಡಿದರೂ ಕೇಳಲಿಲ್ಲ. ನಮಗೆಲ್ಲಾದರೂ ಸಮಸ್ಯೆಯಾದರೆ, ತಡೆಯಾದರೆ ತಿಳಿಸಲು ಮೊಬೈಲ್‌ ನಂಬರ್‌ ನೀಡಿದ್ದರು. ಆದರೆ ನಮ್ಮ ಬಳಿ ಮೊಬೈಲ್‌ ಇರಲಿಲ್ಲ. ಹೀಗಾಗಿ ಅಲ್ಲೇ ಪಕ್ಕದ ಯಾರದೋ ಮೊಬೈಲ್‌ ನಿಂದ ಕರೆ ಮಾಡಲು ಹೇಳಿದೆವು. ಆದರೆ ಆ ಕಡೆಯಿಂದ ಕರೆ ಸ್ವೀಕಾರವಾಗಲಿಲ್ಲ...!. ನಾವಂತೂ ಗಲಿಬಿಲಿಯಾದೆವು. ಅಷ್ಟರಲ್ಲಿ ಬೊಬ್ಬೆಯೂ ಹೆಚ್ಚಾಯಿತು, ಇದು ಕಸಾಯಿಖಾನೆಗೇ ಎಂದರು. ನನ್ನ ಜೊತೆಗಿದ್ದ ಅಣ್ಣನೂ ಹಲವು ಉತ್ತರ ನೀಡಿದರೂ ಒಪ್ಪಲಿಲ್ಲ ಆ ತಂಡ. ಕೊನೆಗೆ ಸಮೀಪದ ಪೊಲೀಸ್‌ ಠಾಣೆಗೆ ತೆರಳುವಂತೆ ಲಾರಿ ಚಾಲಕನಿಗೆ ಹೇಳಿದೆವು. ಲಾರಿ ಚಾಲಕ ಪೊಲೀಸ್‌ ಠಾಣೆಗೆ ತಿರುಗಿಸಿದ. ಅಷ್ಟರಲ್ಲಿ ಪೊಲೀಸರೂ ಸ್ಥಳಕ್ಕೆ ಬಂದರು. ಮೊದಲೇ ಮಾಹಿತಿ ಇದ್ದ ಪೊಲೀಸರು ನಮಗೆ ಸುಗಮವಾಗಿ ಹೋಗಲು ಅವಕಾಶ ಮಾಡಿಕೊಟ್ಟರು. ಹಾಗೆ ಊರಿಗೆ ಬಂದಾಗ ಬೆಳಗ್ಗೆ ಆಗಿತ್ತು.ಇಲ್ಲಿ 13 ಮನೆಗಳಿಗೆ ಕಾಂಕ್ರೇಜ್‌ ತಳಿಯ ಗೋವನ್ನು ತಲುಪಿಸಲಾಯಿತು. 

ಕಾಂಕ್ರೇಜ್‌ ತಳಿಯ ಗೋವು ನಮ್ಮ ಹಟ್ಟಿಯೊಳಗೆ ಬಂದ ಬಳಿಕ ನಿಧಾನವಾಗಿ ಇತರ ತಳಿಯ ಗೋವುಗಳನ್ನು ಮಾರಾಟ ಮಾಡಲಾಯಿತು. ಸವಾಲುಗಳು ಇದ್ದದ್ದು ಆಗಲೇ.ನಿಯಮದ ಪ್ರಕಾರ ಹಾಗೂ ದೇಸೀ ತಳಿಯ ಪ್ಯೂರಿಟಿ ಉಳಿಸಿಕೊಳ್ಳಲು ಸಂಕರ ಮಾಡಬಾರದು,  ಬೆದೆಗೆ ಬಂದಾಗ ಹೋರಿಯ ಬಳಿಯೇ ಕೊಂಡೋಗಬೇಕು. ಈ ಕೆಲಸ ಮಾತ್ರಾ ಸದಾ ನೆನಪಿನಲ್ಲಿ ಉಳಿಯಬೇಕಾದ್ದೇ ಆಗಿದೆ.  ನಮ್ಮ ಮನೆಯ ಕಾಂಕ್ರೇಜ್‌ ತಳಿಯ ಗೋವು ಬೆದೆಗೆ ಬಂದಿತು. ಇದನ್ನು ಸಂಕರಕ್ಕಾಗಿ ಹೋರಿಯ ಬಳಿಗೆ ಕೊಂಡೋದೆವು. ಇಬ್ಬರು ಕೆಲಸಗಾರರು ಹಾಗೂ ಪಿಕ್‌ ಅಪ್‌ ನಲ್ಲಿ ಹಾಕಿಕೊಂಡು ಆರಂಭದಲ್ಲಿ ಸಮೀಪದಲ್ಲೇ ಇದ್ದ ಮೊಗ್ರಕ್ಕೆ ಕೊಂಡೋದೆವು, ಅದಾಗಲಿಲ್ಲ, ನಂತರ ಕಾಂಚೋಡು ಕಡೆಗೆ ಹೋದೆವು , ಅದಾದ ಬಳಿಕ ಕಡಬದ ಬಳಿಯ  ಹೊಸಮಠ ಹತ್ತಿರದ ಕೂಡೂರಿಗೆ , ನಂತರ ಬೆಳ್ಳಾರೆ ಬಳಿಯ ನೆಟ್ಟಾರಿನ ಅರುಣ ಶಂಕರ ಅವರ ಮನೆಗೆ ಹಲವು ಬಾರಿ ಹೋಗಿದ್ದೆವು. ಪ್ರತೀ ಬಾರಿ ಪಿಕ್‌ ಅಪ್‌ ಹಾಗೂ ಇಬ್ಬರು ಕೆಲಸಗಾರರು. ಅಂತೂ ನಮ್ಮ ಹಟ್ಟಿಯಲ್ಲಿ ಕಾಂಕ್ರೇಜ್‌ ತಳಿ ಅಭಿವೃದ್ಧಿಯಾದವು. ಅಷ್ಟರವರೆಗೂ ನೀಡಿದ ಪಿಕ್‌ ಅಪ್ ಬಾಡಿಗೆ ಒಂದು ಸಮರ್ಪಣೆಯೇ ಆಯಿತು...!.‌ ಒಂದು ಉದ್ದೇಶಕ್ಕಾಗಿ ಇದ್ಯಾವುದೂ ಆಗ ಲೆಕ್ಕವೇ ಇರಲಿಲ್ಲ...! , ಲಾಭ-ನಷ್ಟದ ಲೆಕ್ಕವೇ ದಾಖಲಾಗಲಿಲ್ಲ..!. ಕಣ್ಣ ಮುಂದೆ ಇದ್ದದ್ದು ಉದ್ದೇಶ, ಒಂದು ಚಿಂತನೆ.. ಒಂದು ವಿಚಾರ ಅಷ್ಟೇ... ಅದು ದೇಸೀಯತೆ....!. 

ಕೊನೆಗೆ ಬೆಳ್ಳಾರೆ ಬಳಿಯ ಶೇಣಿಯ ಮನೆಗೆ ದನವನ್ನು ಕೊಂಡೋಗಿದ್ದೆವು. ಆ ದಿನ ಭಾರೀ ಮಳೆಯೂ ಬೇರೆ. ಅಲ್ಲಿನ ಹೋರಿ ಸಂಕರದ ಬಳಿಕ ನಾವೆಲ್ಲರೂ ಮನೆಗೆ ಬಂದಾಗಿತ್ತು. ಮರುದಿನ ಆ ಹೋರಿ ಹೃದಯಾಘಾತದಿಂದ ಮೃತಪಟ್ಟಿತ್ತು. ಅಂದಿಗೇ ನಾವು ತೀರ್ಮಾನಿಸಿದೆವು. ಇನ್ನು ದನವನ್ನು ಹೋರಿಯ ಬಳಿಗೆ ಸಂಕರಕ್ಕೆ ಕೊಂಡೊಯ್ಯಲು ಇಲ್ಲವೆಂದು. ಆ ಹೊತ್ತಿಗೆ  2012. ಅದಾಗಿ ಕಾಂಕ್ರೇಜ್‌ ತಳಿಯ ಹೋರಿ ಇಂಜೆಕ್ಷನ್‌ ಲಭ್ಯವಾಯಿತು. ಎಲ್ಲಾ ನಿಯಮವನ್ನು ಬದಿಗೆ ಸರಿಸಿ ಇಂಜೆಕ್ಷನ್‌ ನೀಡಿದೆವು ಕೂಡಾ. ಆದರೆ ನಿಯಮದ ಉಲ್ಲಂಘನೆಯಾಗುತ್ತದೆ ಎಂದು ಕಾಂಕ್ರೇಜ್‌ ತಳಿಯನ್ನು ವಾಪಾಸು ಮಾಡಲು ಮುಂದಾದೆವು. ಕೊನೆಗೆ ವೇಣೂರಿನ ಗೋಶಾಲೆಗೆ ನಮ್ಮೆಲ್ಲಾ ಕಾಂಕ್ರೇಜ್‌ ತಳಿಯನ್ನು ನೀಡಿದ ದಿನ ಮನಸ್ಸಿಗೆ ಬೇಸರವಾಗಿತ್ತು, ತಿಂಗಳ ಕಾಲ ಅದೇ ನೆನಪು ಕಾಡಿತ್ತು. ಆ ಕರುಗಳು ನನ್ನ ತಂದೆಯವರ ಹಾಸಿಗೆಯಲ್ಲಿ ಬಂದು ಮಲಗುತ್ತಿದ್ದುದು, ಪ್ರೀತಿಯ ಆಟ ಆಡುತ್ತಿದ್ದುದು ಎಲ್ಲವೂ ನೆನಪು.

ಅದರ ಜೊತೆಗೇ, ಹೀಗೆ ಕಾಂಕ್ರೇಜ್‌ ತಳಿ ಸಾಕುವ ವೇಳೆ  ವ್ಯಂಗ್ಯ ಮಾಡಿದವರು, ಅದಾಗದು ಎಂದವರು, ಅದು ಸುಮ್ಮನೆ...  ಎಂದವರು ಸಾಕಷ್ಟು ಮಂದಿ. ಯಾವುದಕ್ಕೂ, ಯಾವುದನ್ನೂ ಪರಿಗಣನೆಗೆ ತೆಗೆದುಕೊಳ್ಳದೆ. ಇದೊಂದು ಚಿಂತನೆ, ಇದೊಂದು ಬದ್ಧತೆ, ಇದೊಂದು ಸೇವೆ ಎಂದಷ್ಟೆ ನಿರಂತರ ಪ್ರಯತ್ನ ಮಾಡಿದ್ದೆವು. ಅದರ ಪರಿಣಾಮ ಯಶಸ್ಸೂ ಆಗಿತ್ತು, ಹಟ್ಟಿ ತುಂಬಾ ಕಾಂಕ್ರೇಜ್‌ ಗೋವುಗಳು ತುಂಬಿದ್ದವು ಕೂಡಾ.

ಮುಂದೆ, ನಮ್ಮೂರಿನದ್ದೇ ತಳಿ,  ದೇಸೀ ತಳಿ. ಮಲೆನಾಡು ಗಿಡ್ಡ  ಸಾಕಲು ಆರಂಭ ಮಾಡಿದೆವು. ಇಂದಿಗೂ ಆ ತಳಿ ಮುಂದುವರಿದಿದೆ. ಅದರಲ್ಲೂ ಪ್ಯೂರಿಟಿಗಾಗಿ ಹೋರಿಗೇ ಸಂಕರ ಮಾಡಿದೆವು, ಅದಕ್ಕೂ ಪಿಕ್‌ ಅಪ್‌ ಸೇರಿದಂತೆ ಸಾಗಾಟ ಮಾಡಿದೆವು. ಕೊನೆಗೆ ಮನೆಯಲ್ಲಿಯೇ ಹೋರಿ ಕರು ಲಭ್ಯವಾಯಿತು. ಹೋರಿ ದೊಡ್ಡದಾಯಿತು. 

ಅದೊಂದು ದಿನ ಹೋರಿಯ ಸಂಕರಕ್ಕಾಗಿ ಬಿಟ್ಟಿದ್ದೆವು. ನಮ್ಮ ಆಪ್ತ ದನ ಬಿಡುವ ವೇಳೆ ದನ ಕೊಂಬು ಕಣ್ಣಿನ ಬಳಿ ತಾಗಿತು. ಸ್ವಲ್ಪದರಲ್ಲೇ ಕಣ್ಣಿನ ಮೇಲಿನ ಗಾಯ ತಪ್ಪಿತು. ಕಣ್ಣು ವಾರಗಳ ಕಾಲ ಕೆಂಪಾಯಿತು. ಅಪಾಯದಿಂದ ಪಾರಾದರು. ಸೂಕ್ತ ಔಷಧಿ ತೆರಳಿ ವಾರಗಳ ಕಾಲ ವಿಶ್ರಾಂತಿ ಕೂಡಾ ಪಡೆದರು. ಅಂದಿನಿಂದ ಅಗತ್ಯ ಇದ್ದರೆ ಮಾತ್ರಾ ಹೋರಿಯನ್ನು ಸಂಕರಕ್ಕೆ ಬಿಡುತ್ತೇವೆ. ಸಾಧ್ಯವಾಗದೇ ಇದ್ದರೆ ಇಂಜೆಕ್ಷನ್‌ ಗೆ ಬರಲು ಹೇಳುತ್ತೇವೆ. ಹಾಗಿದ್ದರೂ ಹೋರಿಯನ್ನು ಸಾಕುತ್ತಿದ್ದೇನೆ.

ಅನೇಕ ಸಮಯಗಳ ಕಾಲ ನಮ್ಮಲ್ಲಿ ಸ್ಲರಿ ವ್ಯವಸ್ಥೆ, ಕಾಂಪೋಸ್ಟ್‌ ವ್ಯವಸ್ಥೆ ಸರಿ ಇಲ್ಲದ ಕಾರಣದಿಂದ ಗೊಬ್ಬರ ತಯಾರು ಆಗುತ್ತಿರಲಿಲ್ಲ. ಹೊಳೆಗೆ ಸೇರುತ್ತಿತ್ತು. ಈ ಸಮಯದಲ್ಲಿ  ವಳಲಂಬೆ ದೇವಸ್ಥಾನದ ಅರ್ಚಕ ಮಹಾಬಲೇಶ್ವರ ಭಟ್ಟರು ಅದಕ್ಕೊಂದು ಯೋಚನೆ ನೀಡಿದರು. ಅಂದಿನಿಂದ ಉತ್ತಮ ಗೊಬ್ಬರವೂ ಆಗುತ್ತಿದೆ. ಹೀಗಾಗಿ ತೋಟಕ್ಕೂ ಸುಲಭದಲ್ಲಿ ಗೊಬ್ಬರ ತಯಾರಾಗುತ್ತದೆ.

ಸಾದ್ಯವಾದಷ್ಟು ಕಾಲ ಗೋ ತಳಿ ರಕ್ಷಣೆ ಹಾಗೂ ದೇಸೀ ಗೋ ತಳಿಯನ್ನು ಸಾಕಲು ನಿರ್ಧರಿಸಿದ್ದೇನೆ. ಸೆಗಣಿಯಿಂದ ಗೊಬ್ಬರ ಮಾಡುತ್ತೇವೆ. ತೋಟಕ್ಕೂ ಯಥಾ ಸಾಧ್ಯ ಹಾಕುತ್ತೇವೆ. ಎಷ್ಟು ಕಾಲ ಸಾಧ್ಯ ಅಷ್ಟು ಕಾಲ ಗೋ ಸಾಕಾಣಿಗೆ ಇದೆ. 

ನಂಬಿದ ವಿಚಾರ, ಕೃಪಿ ಪ್ರೀತಿ, ಗೋ ಪ್ರೇಮವನ್ನು ಮುಂದುವರಿಸುವುದು. ಗೋವು ಎಂದರೆ ಪ್ರೀತಿಯೇ. ನಮ್ಮ ಮನೆಯ ಹೋರಿ ಈಗಲೂ ಯಾರೇ ಬಂದರೂ ಕೂಗುತ್ತದೆ, ನಮ್ಮನ್ನು ಎಚ್ಚರಿಸುತ್ತದೆ. ಇಂತಹ ಪ್ರೀತಿಯನ್ನು ಹೇಗೆ ಬಿಡಲು ಸಾಧ್ಯವಿದೆ. ದೇಸೀ ಗೋವಿನ ಮಹತ್ವ, ಪ್ರೀತಿ ಅದು ಅನುಭವಿಸಿದವನಿಗೆ ಮಾತ್ರಾ ಗೊತ್ತು. 

ಹಾಗಂತ ನಾವು ದನ ಮಾರಾಟ ಮಾಡಿಲ್ಲ ಅಂತಲೇ ಅಲ್ಲ, ಮಾರಾಟ ಮಾಡಿದ್ದೇವೆ ಕೂಡಾ. ಜರ್ಸಿ ಹೋರಿಯನ್ನು ಮಾರಾಟ ಮಾಡಿದ್ದೇವೆ, ದೇಸೀ ದನವನ್ನೂ ಸಾಕುವವರಿಗೆ ನೀಡಿದ್ದೇವೆ.ಅನೇಕ ಬಾರಿ ಗೋವಿನ ಬಗ್ಗೆ  ಭಯಂಕರ ಚರ್ಚೆ ಮಾಡುವವರನ್ನು ಕಂಡಾಗ ಒಳಗೊಳಗೇ ನಗಬೇಕಾಗುತ್ತದೆ ಕೂಡಾ.... 

ಈಗಲೂ ದೇಸೀ ತಳಿಯ ಗೋವನ್ನು ಸಾಕುತ್ತಿದ್ದೇನೆ. ಮನೆಯಿಂದ ಹೊರಗೆ ಹೋದರೆ ರಾತ್ರಿ 11 ಗಂಟೆಗಾದರೂ ಬಂದು ಹಟ್ಟಿಗೆ  ಹೋಗಲು ಇದೆ. ಬೆಳಗ್ಗೆ ಬೇಗನೆ ಮನೆಯಿಂದ ಹೊರಡುವಾಗಲೂ ಹಟ್ಟಿಗೆ ಹೋಗಲು ಇದೆ. ಈ ಸೇವೆ ಸದ್ಯ ನಡೆಯುತ್ತಿದೆ.










10 ಅಕ್ಟೋಬರ್ 2021

ಹೇಗೆ ಬದಲಾಯಿತು ವ್ಯವಸ್ಥೆ....! ಏಕೆ ಪಾಸಿವಿಟಿ ಬದಲಾಗುತ್ತಿದೆ...! ವ್ಯಕ್ತಿ ಪ್ರತಿಷ್ಟೆ ಏಕಾಗುತ್ತಿದೆ...!!



ನಿನ್ನೆ ಸಂಘದ "ಪಾಸಿಟಿವ್‌ ಶಕ್ತಿ" ಯ ಬಗ್ಗೆ ನನ್ನ ಅನುಭವ ಹೇಳಿದ್ದೆ. ಅದೊಂದು ಸಮುದ್ರ. ಆ ಸಮುದ್ರವನ್ನು ನೋಡುತ್ತಾ, ಓದುತ್ತಾ ತಿಳಿದದ್ದು ಅದು. ಹಾಗೆಂದು  ಯಾವತ್ತೂ ಆ ಅಗಾಧ ಶಕ್ತಿಯನ್ನು  ಟೀಕಿಸಲು ಸಾಧ್ಯವಿಲ್ಲ. ಏಕೆಂದರೆ ಅಲ್ಲಿ ಲೋಪವೇ ಇಲ್ಲ, ನೆಗೆಟಿವ್‌ ಅಂಶಗಳೇ ಇಲ್ಲ.

ಆದರೆ 2021  ರಲ್ಲಿ  ನಿಂತು ನೋಡಿದಾಗ ಇಪ್ಪತ್ತು ವರ್ಷಗಳಲ್ಲಿನ ಬದಲಾವಣೆ ಮಹತ್ವದ್ದು. ಅದಕ್ಕಿಂತಲೂ ಹಿಂದಿನವರಲ್ಲಿ ಮಾತನಾಡಿದರೆ ಭ್ರಮ ನಿರಸನವಾಗುತ್ತದೆ ಎನ್ನುತ್ತಾರೆ. ಹಾಗೆ ಭ್ರಮ ನಿರಸನವಾಗಲು Update  ಆಗದೇ ಇರುವ ಕೊರತೆಯೋ ಎಂದು ಹಲವು ಬಾರಿ ಅನಿಸುತ್ತದೆ. ಇಂದಿನ ಯುಗ ವೇಗದ್ದು. ಈ ವೇಗದ ಯುಗದಲ್ಲಿ ತಕ್ಷಣವೇ ಅಪ್ಡೇಟ್‌ ಆಗಬೇಕಾಗುತ್ತದೆ. ಈ ವೇಗದ ಪರಿಣಾಮ ಪುಸ್ತಕಗಳಲ್ಲಿ ಕಾಣುವ ಯಾವ ಪಾಸಿಟಿವ್‌ ಶಕ್ತಿಗಳೂ ತಳಮಟ್ಟದಲ್ಲಿ ಕಾಣುತ್ತಿಲ್ಲ. ಹೀಗಾಗಿ ಹಿರಿಯ ಅನೇಕರಿಗೆ ಭ್ರಮನಿರಸನವಾಗುವುದು  ಸಹಜ. ಅವರನ್ನು ಬದಿಗೆ ಸರಿಸುವುದು  ಸಹಜವೇ, ಅವರೇ ಅಡ್ಡಿಯಾಗುವುದು ಸಹಜವೇ. ಏಷ್ಟೆಂದರೆ "ಅವರೇನೂ ಮಾಡಿಲ್ಲ..." ಎನ್ನುವಷ್ಟು ಬದಿಗೆ ತಳ್ಳುವುದು  ಸಹಜ ಪ್ರಕ್ರಿಯೆ. ಅಂತಹ ಮೌಲ್ಯಗಳು ಇಂದು ಬೆಳೆಯುತ್ತಿರುವ ಕಾರಣವೇ ಯಾರು ಟೀಕೆ ಮಾಡಿದರೂ ತಕ್ಷಣವೇ ಯಾರಿದಂಲೋ ಪ್ರತಿಕ್ರಿಯೆ ಕೊಡಿಸಬೇಕಾಗುತ್ತದೆ. ಯಾರಿಂದಲೋ ಮಣಿಸುವ ವ್ಯವಸ್ಥೆ ಮಾಡಬೇಕಾಗುತ್ತದೆ. ಪ್ರತಿಕ್ರಿಯೆ ನೀಡಬೇಡಿ ಎಂದೂ ಹೇಳುವವರೂ ಇಲ್ಲದೇ ಇರುವುದೂ ಅದಕ್ಕೆ . ಏಕೆಂದರೆ ಈಗ ಅಧಿಕಾರ ಅಂದರೆ ಪವರ್‌ ಕೇಂದ್ರಿತ ವ್ಯವಸ್ಥೆ..!. ಇದರರ್ಥ ಆಂತರಿಕವಾದ ಮೌಲ್ಯಗಳ ಕುಸಿತ, ಬೌದ್ಧಿಕ, ವೈಚಾರಿಕ ವಿಷಯಗಳ ಕೊರತೆ, ಅಧಿಕಾರ ಕೇಂದ್ರಿತವಾದ ವ್ಯವಸ್ಥೆ, ಓಲೈಕೆಯ ಭಾಗ ಹೆಚ್ಚಾಗಿದೆ. 

ಈ ಬದಲಾವಣೆಯ ಪರ್ವಗಳು ಆರಂಭವಾಗಿ ಹಲವು ಸಮಯಗಳು ಆದವು. ಈಗ ಅದರ ಪರಮೋಚ್ಛ ಸ್ಥಿತಿಯಷ್ಟೇ. ಸುಮ್ಮನೆ ಗಮನಿಸಿದರೆ ಸಂಘವು ಎಂದೂ ಟೀಕೆಗಳಿಗೆ ಉತ್ತರಿಸುತ್ತಿದ್ದು ಕಡಿಮೆಯೇ. ಟೀಕೆಗಳಿಗೆ ಕಾರ್ಯದ ಮೂಲಕ ಉತ್ತರ ಸಿಗುತ್ತಿತ್ತು ಅಷ್ಟೇ. ಈಗ ಹಾಗಲ್ಲ, ವಿವಿಧ ವಿಭಾಗಗಳು ಇದ್ದರೂ ಅಧಿಕಾರ ಕೇಂದ್ರಿತವಾದ ವ್ಯವಸ್ಥೆಗಳು ಬಲಗೊಂಡಿವೆ. ಸಂಘದ ಅಂಗ ಎನಿಸಿದ ಬಿಜೆಪಿಯೇ ಇಂದು ಸಂಘವಾಗಿ ಕಾಣುತ್ತದೆ. ಸಂಘದ ವಿವಿಧ ಸಂಘಟನೆಗಳು ಇದ್ದರೂ ಸಹಕಾರ ಭಾರತಿ, ಬಿಜೆಪಿ ಮಾತ್ರವೇ ಸಂಘ ಎಂದು ಕಾಣುತ್ತದೆ, ಅಲ್ಲಿ ಅಧಿಕಾರ ಪಡೆಯುವುದೇ ಸರ್ವ ಶ್ರೇಷ್ಟ ಎಂದು ಅನಿಸಿದೆ. ಇದಕ್ಕಾಗಿ ಸಂಘದ ಯಾರನ್ನೋ ಓಲೈಕೆ ಮಾಡಲೇಬೇಕು ಎಂಬುದು ಸರ್ವ ವಿಧಿತವಾಗಿದೆ. ಸಂಘದ ಉಳಿದ ಯಾವ ವಿಭಾಗದಲ್ಲೂ ಕೆಲಸ ಮಾಡುವುದೇ ನಗಣ್ಯವಾಗಿ ಬಿಡುತ್ತಿದೆ. ಬಿಜೆಪಿ, ಸಹಕಾರ ಭಾರತಿಯಲ್ಲಿ ಕೆಲಸ ಮಾಡಿದವನು ಮಾತ್ರವೇ ಕಾರ್ಯಕರ್ತ ಎಂಬ ಮಟ್ಟಿಗೆ ಬಂದಿರುವುದು  ಈಗ ಬಹಿರಂಗ ಸಂಗತಿ. ಈ ಕಾರಣದಿಂದಲೇ ಇಂದು ಸೇವೆಗಿಂತಲೂ ಹೆಚ್ಚು ಓಲೈಕೆ ಎದ್ದು ಕಾಣುತ್ತದೆ. ಇದೆಲ್ಲಾ ಇವತ್ತು ಬಹುದೊಡ್ಡ ಪಾಸಿಟಿವ್‌ ಶಕ್ತಿಯೊಳಗೆ ನೆಗೆಟಿವ್‌ ಚಕ್ರಗಳು ಸುತ್ತುತ್ತಿವೆ.

 ಈ ಕಾರಣದಿಂದಲೇ ಇಂದು ಕುಮಾರಸ್ವಾಮಿಯವರ ಹೇಳಿಕೆಗೆ ಇನ್ನಿಲ್ಲದಂತೆ ಎದ್ದು ಬಿದ್ದು ಹೇಳಿಕೆ ನೀಡಲೇಬೇಕಾಗಿ ಬಂತೇನೋ ಎಂದು ಅನಿಸುತ್ತದೆ. ಹಾಗಿದ್ದರೆ ಮೂಲ ವಿಚಾರದಲ್ಲಿ ಪ.ಪೂ ಗುರೂಜಿ ಅವರು ," ಸಂಘಟನೆಯಲ್ಲಿ  ಅಹಂಕಾರ, ದರ್ಪ, ಒತ್ತಾಯ ಅಥವಾ ವ್ಯಕ್ತಿ ಪ್ರತಿಷ್ಟೆಗೆ ಅವಕಾಶವಿಲ್ಲ ಇವುಗಳಿಂದ ಸಂಘಟನೆಯಾಗುವುದಿಲ್ಲ. ವ್ಯಕ್ತಿಗತ ಅಭಿಮಾನದ ಲವಲೇಶವೂ ಇಲ್ಲದವರಿಂದಲೇ ಸಂಘಟನೆ ಕಟ್ಟಲು ಸಾಧ್ಯವಾಗುತ್ತದೆ" ಎಂದು ಹೇಳಿರುವುದಕ್ಕೆ ಅರ್ಥ ನೀಡಲು ಸಾಧ್ಯವಾಗುತ್ತದೆಯೇ ಎಂಬುದು ಪ್ರಶ್ನೆ. ಯಾವುದೇ ಕಾರ್ಯಕ್ರಮದ ಮೊದಲು ಓದುವ ಸುಭಾಷಿತ ಓದಲು ಮಾತ್ರವೇ ಸೀಮಿತವಾಗಿದೆ ಎನ್ನುವುದು  ಸುಳ್ಳಲ್ಲ.ಇವತ್ತು ಇಂತಹ ಹಲವು ನೆಗೆಟಿವ್‌ ಅಂಶಗಳು ಎದ್ದು ಕಾಣುವ ಕಾರಣದಿಂದಲೇ ತಳಮಟ್ಟದಲ್ಲಿ ಇತರೆಲ್ಲಾ ಸಂಘಟನೆಗಳಂತೆಯೇ ಎಲ್ಲಾ ವಿಭಾಗದಲ್ಲೂ ಒಬ್ಬನೇ ಕಾರ್ಯಕರ್ತ ಓಡಾಟ ಮಾಡುವ ಸ್ಥಿತಿ ಹೆಚ್ಚಾಗಿದೆ. ಅವನು ಭ್ರಷ್ಟಾಚಾರದಲ್ಲೂ, ಜಾತಿ ಸಂಘಟನೆಗಳಲ್ಲೂ , ಪಕ್ಷದಲ್ಲೂ, ಇತರ ಸಂಘಟನೆಯಲ್ಲೂ ಏಕ ವ್ಯಕ್ತಿ..!. ಇದು ಸಂಘಟನೆಯಲ್ಲಿಯೇ ಗೊತ್ತಿಲ್ಲದೆ ಆಗುತ್ತಿರುವ ಬದಲಾವಣೆ. 

ಹೀಗಾಗಿ ಹಿಂದೂ ಸಮಾಜದ ಅಡಿಪಾಯವನ್ನು ಬಲಪಡಿಸುವ ಮತ್ತು ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ, ಧಾರ್ಮಿಕ, ತಾತ್ವಿಕ ಮತ್ತು ರಾಜಕೀಯ  ಸವಾಲುಗಳನ್ನು ಎದುರಿಸುವ ಉದ್ದೇಶದಿಂದ  1925 ರಲ್ಲಿ ಸ್ಥಾಪಿಸಿದ ಆರ್‌ ಎಸ್‌ ಎಸ್‌ ಗೂ 2021 ರಲ್ಲಿ  ಕಾಣುವ ಆರ್‌ ಎಸ್‌ ಎಸ್‌ ಗೂ ಬದಲಾವಣೆ ಕಾಣುತ್ತದೆ. ಅಂದು ಭಗವಾಧ್ವಜದ ಹಿಂದೆ ಸಾಗಿ ವ್ಯಕ್ತಿಗಳು ಬದಲಾಗುತ್ತಾ ಇಂದು ವ್ಯಕ್ತಿಯ ಹಿಂದೆ ಗೊತ್ತಿಲ್ಲದೇ ತೆರಳುವ, ಗುಂಪುಗಳಾಗುವ ಹಂತ ಬಂದಿದೆ.ಇದಕ್ಕೆ ಕಾರಣ ಅಧಿಕಾರ ಹಾಗೂ ವ್ಯಕ್ತಿ ಪ್ರತಿಷ್ಟೆ.ಎಷ್ಟೆಂದರೆ ತಳಮಟ್ಟದಲ್ಲೂ ಜವಾಬ್ದಾರಿಯ ಹಂತಕ್ಕೆ ಬಂದಾಗ "ಅವನನ್ನು ಮಾಡಿ" "ಇವನನ್ನು ಬಿಡಿ" ಎಂದು ಹೇಳುವಷ್ಟು...!. ಹೀಗಾಗಿ ಈಗ ಗುಂಪುಗಳ ಸಂಖ್ಯೆ ಗೊತ್ತಿಲ್ಲದೆಯೇ ಹೆಚ್ಚಾಗಿದೆ.

ಇದರಿಂದಾಚೆ ಬಂದರೆ,

ಅಧಿಕಾರಗಳು ಲಭಿಸಲು ಆರಂಭವಾಯಿತು. ಅಂದಿನಿಂದಲೇ ಅಧಿಕಾರ ಕೇಂದ್ರಿತ ವ್ಯವಸ್ಥೆಗಳಾಗಿ ಮೂಲ ಸಂಗತಿಗಳು ಬದಲಾದವು. ಕೆಲವು ವರ್ಷದ ಹಿಂದೆ ಒಂದು ಪ್ರಮುಖ ದೇವಸ್ಥಾನದ ಆಡಳಿತ ಲಭ್ಯವಾಯಿತು. ಅಲ್ಲಿ ಸ್ವಚ್ಛ ಆಡಳಿತದ ನಿರೀಕ್ಷೆ ಎಲ್ಲರಲ್ಲೂ ಇತ್ತು. ಆದರೆ ಅಲ್ಲೊಂದು ಲೋಪ ಆಗಿತ್ತು. ಅದೊಂದು ಟೆಂಡರ್‌ ಪ್ರಕ್ರಿಯೆಯ ಸಂಗತಿ. ಆಗ ನಾನು ಪತ್ರಿಕೆಯಲ್ಲಿದ್ದೆ. ಪಕ್ಕಾ ಸ್ವಯಂಸೇವಕ. ಇತರ ಭಾಷೆಯಲ್ಲಿ ಹೇಳುವುದಾದರೆ ಚಡ್ಡಿ ಪತ್ರಕರ್ತ. ಒಬ್ಬರು ಕೆಲವು ದಾಖಲೆ ತಂದು ತೋರಿಸಿದರು. ತಕ್ಷಣ ನಾನು ಸುದ್ದಿ ಮಾಡುವ ಬದಲು ಸಂಬಂಧಿತರ ಗಮನಕ್ಕೆ ತಂದು ಸುಮ್ಮನಾದೆ...!. ಆ ಸುದ್ದಿ ಸತ್ತು ಹೋಯಿತು. ಊರಿಗಿಡೀ ತಿಳಿಯಲೂ ಇಲ್ಲ...!. ಎಷ್ಟೆಂದೆರೆ ಆ ದಾಖಲೆ ನಾನು ಇರಿಸಿಕೊಳ್ಳಲೂ ಇಲ್ಲ...!. ಈ ಕಡೆ ಮಾಹಿತಿ ನೀಡಿದ ವ್ಯಕ್ತಿ ನನ್ನ ಮೇಲಿನ ನಂಬಿಕೆ ಕಳೆದುಕೊಂಡರು. 2021 ರಲ್ಲಿ ಇದನ್ನು ನೋಡಿದರೆ ಇಂತಹ ಹಲವು ಸಂಗತಿಗಳು ಕಾಣುತ್ತಿವೆ.....! 

ಇನ್ನೊಂದು ಸಂಗತಿ,  ಒಮ್ಮೆ ಒಬ್ಬರೊಂದಿಗೆ ಮಾತನಾಡುತ್ತಿದ್ದೆ. ಅವರು ನಾನು ಅತ್ಯಂತ ಗೌರವಿಸುವ ವ್ಯಕ್ತಿ. ಹಲವು ಸಂಗತಿಗಳು ಅವರು ಹೇಳಿದರೆ ಮುಗಿಯಿತು. ಏಕೆಂದರೆ ಅದರಲ್ಲಿ ಯಾವುದೇ ಕಲ್ಮಶವಿಲ್ಲ ಹಾಗೂ ಅದು ಸತ್ಯ ಅಂತಲೇ ನಂಬುತ್ತಿದ್ದೆ. ಏಕೆಂದರೆ ಆ ವ್ಯಕ್ತಿ ಅಷ್ಟೊಂದು ಪ್ರಾಮಾಣಿಕ.  ಅದೊಬ್ಬ ವ್ಯಕ್ತಿಯನ್ನು ಉದ್ದೇಶಿಸಿ ಅವರು ಒಮ್ಮೆ ಹೀಗೆ ಮಾತನಾಡುತ್ತಾರೆ, " ಅವನು ನಮ್ಮನ್ನು ಬಿಟ್ಟರೆ ಏನೂ ಇಲ್ಲ. ಸಂಘಟನೆ ಅಂದರೆ ಹಾಗೇ, ಅವನನ್ನು ಯಾರೂ ಸೇರಿಸಿಕೊಳ್ಳುವುದಿಲ್ಲ, ಅವನು ಹಾಗೆ... ನಾವು ಇವನನ್ನು ಹೊರಗೆ ಇರಿಸಿದ್ದೇವೆ, ಇವನು ಅನಗತ್ಯ ಪ್ರಶ್ನೆ ಮಾಡುತ್ತಾನೆ....  ಇತ್ಯಾದಿ ಸಂಗತಿಗಳನ್ನು ಹೇಳಿದರು. ಆ ಕ್ಷಣದಲ್ಲಿ ನಾನು ಹೌದು ಎಂದು ಒಪ್ಪಿಕೊಂಡೆ  ಏಕೆಂದರೆ ಆ ವ್ಯಕ್ತಿ ಅಂದು ಹಾಗೆಯೇ ಇದ್ದ ಕೂಡಾ  ಹಾಗೂ ನಾನೂ ಯಾವುದನ್ನೂ ಯೋಚಿಸದೇ ಅದನ್ನು ಅನುಸರಿಸಿದೆ ಕೂಡಾ. ಏಕೆಂದರೆ ಅವರು ನಿಲ್ಕಷ್ಮಶ ಎಂದು ಅಂದುಕೊಂಡಿದ್ದೆ....!  2021 ರಲ್ಲಿ ನಿಂತು ಆಲೋಚಿಸುವಾಗ , ಚಿಂತನೆಗಳಲ್ಲಿ  ವ್ಯತ್ಯಾಸ ಆದದ್ದು ಅರಿವಾಯಿತು, ಕಲುಷಿತವಾದ್ದು ಎಲ್ಲಿ ಎಂದು ಯೋಚಿಸುವಂತೆ ಮಾಡಿತು ಹಲವು ಸಂಗತಿಗಳು...!. 

 ಅಂತಹ ಹಲವು ಸಂಗತಿಗಳು ಇವೆ ನಾಳೆ ಬರೆಯುತ್ತೇನೆ. .........




 

09 ಅಕ್ಟೋಬರ್ 2021

ಆರ್‌ ಎಸ್‌ ಎಸ್‌ ಎನ್ನುವ ವ್ಯಕ್ತಿತ್ವ ವಿಕಸನ ಕೇಂದ್ರ | ಅದೊಂದು ಪಾಸಿಟಿವ್‌ ಕೇಂದ್ರ |


 ಕಳೆದ ಒಂದು ವಾರದಿಂದ ಪತ್ರಿಕೆ ತೆರೆದರೆ ಅಲ್ಲಲ್ಲಿ ಆರ್‌ ಎಸ್‌ ಎಸ್‌ ಬಗ್ಗೆ ಹೊಗಳಿಕೆ ಹಾಗೂ ಟೀಕೆಗಳು ಕಾಣುತ್ತಿವೆ. ಆರ್‌ ಎಸ್‌ ಎಸ್‌ ಒಳ ಹೋದರೆ ತಿಳಿಯುವುದು ಅದೊಂದು ವ್ಯಕ್ತಿತ್ವ ವಿಕಸನದ ಕೇಂದ್ರ. ಅದೊಂದು ಸಮಾಜಕ್ಕೂ, ವ್ಯಕ್ತಿಗೂ ಪಾಸಿಟಿವ್‌ ಶಕ್ತಿ ನೀಡುವ ಸಂಘಟನೆ. 

ಯಾವತ್ತೂ ಒಂದು ಸಂಘಟನೆಯ, ಒಂದು ವ್ಯಕ್ತಿಯ ಬಗ್ಗೆ ಯಾವುದೇ ಕಾರಣ ಇಲ್ಲದೆ  ಟೀಕೆ ಬರುವುದು  ಎರಡು ಕಾರಣಗಳಿಗೆ, ಒಂದೋ ಆ ಸಂಘಟನೆ ಅಥವಾ ವ್ಯಕ್ತಿ ಬಲಿಷ್ಟವಾಗಿ ಬೆಳೆಯುತ್ತಿದ್ದಾನೆ ಅಥವಾ ಬೆಳೆದಿದ್ದಾನೆ ಎಂದರ್ಥ. ಇದು  ದ್ವೇಷ ಭಾವನೆ ಕಾರಣ, ಈ ಕಾರಣದಿಂದ ಅನಗತ್ಯವಾಗಿ ಹಾಗೂ ಯಾವುದೇ ಕಾರಣ ಇಲ್ಲದೆ, ರಚನಾತ್ಮಕವಲ್ಲದೆಯೂ ಟೀಕೆಗಳು ಬರುತ್ತವೆ. ಆರ್‌ ಎಸ್‌ ಎಸ್‌ ಗೆ ಅಂತಹ ಯಾವ ಟೀಕೆಗಳ, ಹೊಗಳಿಕೆಗಳ ಅಗತ್ಯವೂ ಇಲ್ಲ. ಆ ಚಿಂತನೆಗಳು ಹಾಗೆಯೇ. ಯಾವ ಟೀಕೆಗೂ, ಯಾವ ತೆಗಳಿಕೆಗೂ ಬಗ್ಗೆಯೇ ಒಂದು ಸಂಘಟನೆ ಇಷ್ಟು ವರ್ಷಗಳ ಕಾಲ ಬೆಳೆದಿದೆ ಎಂದರೆ ಅದು ನಿರ್ಮಿಸಿದ ಸೇತುವೆ ಅಂತಹದ್ದೇ. ಯಾವ ಫಲಾಪೇಕ್ಷೆಯೂ ಇಲ್ಲದೆಯೇ ಅನೇಕರು ದುಡಿದಿದ್ದಾರೆ, ಬೆವರು ಹರಿಸಿದ್ದಾರೆ, ಮನೆ ಮಠ ತೊರೆದಿದ್ದಾರೆ. ಅನೇಕರು ಇದೇ ಸಂಘಟನೆಯಲ್ಲಿ  ದುಡಿಯುತ್ತಾ ಸ್ವಂತದ್ದೆಲ್ಲವೂ ಕಳೆದುಕೊಂಡಿದ್ದಾರೆ. ಹೀಗಾಗಿ ಈ ಸಂಘಟನೆಯ ಹಿಂದೆ ಅಪಾರ ಪರಿಶ್ರಮ ಇದೆ.

 ಟೀಕೆಗಳಿಗೆ, ನಮ್ಮನ್ನು  ನಿರ್ಲಕ್ಷ್ಯ ಮಾಡುವವರಿಗೆ  ಏನು ಮಾಡಬೇಕು ಎಂದು ಸಂಘದ ಹಿರಿಯರು ಅಂದೇ ಹೇಳಿದ್ದರು, ಯಾವುದೇ ಸುಳ್ಳು ಟೀಕೆಗಳಿಗೆ, ಅಪಪ್ರಚಾರಗಳಿಗೆ ಉತ್ತರ ನೀಡಬಾರದು. ಏಕೆಂದರೆ ಅಂತಹ ಟೀಕೆಗಳು ನಿಮ್ಮ ಸಾಧನೆಗಳನ್ನು ಅಡ್ಡಿ ಮಾಡಲೇ ಇರುವಂತಹದ್ದು. ಈಗ ನೀವು ಮಾಡಬೇಕಾದ್ದು ಎರಡು ಹೆಜ್ಜೆ ಮುಂದಿನ ಕೆಲಸ. ಇನ್ನಷ್ಟು ಕೆಲಸ ಮಾಡಿ ಅಷ್ಟೇ ಸಾಕು. ಟೀಕೆ ಮಾಡುವವನು ನಮಗೆ ಇನ್ನಷ್ಟು ಸಹಾಯ ಮಾಡುತ್ತಾನೆ, ಆತ ನಮ್ಮ ಹುಳುಕು ತೋರಿಸುವ ಕೆಲಸ ಮಾಡಲಿ. ನಾವು ಅದನ್ನೆಲ್ಲಾ ಸರಿ ಮಾಡೋಣ. ನಾವು ಇನ್ನಷ್ಟು ಪರಿಪೂರ್ಣ ವ್ಯಕ್ತಿಯಾಗೋಣ ಎನ್ನುವುದನ್ನು  ನಾನು ಕೇಳಿದ್ದೇನೆ. ನಮ್ಮನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದರೆ ನಾವು ಇನ್ನೂ ಪರಿಪೂರ್ಣರಾಗಬೇಕಿದೆ ಎಂದರ್ಥ, ಅದಕ್ಕಾಗಿ ಇನ್ನಷ್ಟು ಸಾಧನೆ ಮಾಡಿ ತೋರಿಸಬೇಕು. ಅದನ್ನು ಸದ್ದಿಲ್ಲದೆ ಮಾಡಿ, ಸಂಘಟನೆ ಮಾಡಿ ಎಂದಿದ್ದರು. ಆಗ ಇಡೀ ಸಮಾಜವೇ ಗಮನಿಸುತ್ತದೆ, ನಿಮ್ಮ ಶಕ್ತಿಯ , ಶ್ರಮದ ಪರಿಚಯವಾಗುತ್ತದೆ. ವಿರೋಧಿಗಳು ಇರಲಿ, ಮೌನವಾಗಿ ಎದುರಿಸಿ ಎಂದು ಧೈರ್ಯ ತುಂಬುವ, ಮನಸ್ಸಿಗೆ ಶಕ್ತಿ ನೀಡುವ, ಮನೋಬಲದ, ಆತ್ಮವಿಶ್ವಾಸ ಮಾತುಗಳು ಅಲ್ಲಿ ಸಿಗುತ್ತಿತ್ತು. ಈ ಕಾರಣಗಳಿಂದಲೇ ಸಂಘ, ನಿಜವಾದ ಸಂಘದ ಕಾರ್ಯಕರ್ತ ಎಲ್ಲಾ ಟೀಕೆಗಳಿಗೂ ಕಾರ್ಯದ ಮೂಲಕವೇ ಉತ್ತರಿಸುತ್ತಾರೆ.  ಹಾಗಂತ ಸುಳ್ಳುಗಳನ್ನು ಹೇಳಬೇಡಿ, ಅನ್ಯಾಯ, ಅನಾಚಾರ ಮಾಡಬೇಡಿ, ಸತ್ಯದ ದಾರಿಯಲ್ಲಿ  ನಡೆಯಿರಿ, ಗೆಲವು ನಮ್ಮದೇ, ಅದು ನಿಶ್ಚಿತ ಎಂದು ಹೇಳುತ್ತಿದ್ದರು.ಸತ್ಯ ಯಾವತ್ತೂ ಸೋಲುವುದಿಲ್ಲ, ಸುಳ್ಳುಗಳು ಹೆಚ್ಚು ಕಾಲ ಬದುಕುವುದಿಲ್ಲ, ಹೀಗಾಗಿ ಚಿಂತೆ ಬೇಡವೇ ಎಂದು ಭರವಸೆಯ ಮಾತುಗಳು ಸಂಘದಲ್ಲಿತ್ತು.  ಸಂಘದ ಒಂದು ಗಂಟೆಯ ಬೈಠಕ್‌ ಎಂದರೆ, ಸಂಘದ ಅಭ್ಯಾಸ ವರ್ಗ ಎಂದರೆ, ಸಂಘದ ಒಂದು ಗಂಟೆಯ ಚಟುವಟಿಕೆ ಎಂದರೆ ಅಲ್ಲಿ ರೀಫ್ರೆಶ್‌ ಮೆಂಟ್‌ ಖಚಿತ. ಆರಂಭದ ಒಂದು ಹಾಡು ಇಡೀ ದಿನ ಲೈವ್‌ ಇಡುತ್ತದೆ.  ಇಂತಹದ್ದರಿಂದಲೇ ಸಂಘ ಬೆಳೆದಿದೆ.

ಇಂದು ಯಾವುದೇ ಸಂಘಟನೆಗಳನ್ನು ಗಮನಿಸಿದರೂ ಒಂದೆರಡು ವರ್ಷದಲ್ಲಿ ಯಾವುದೋ ಇಗೋಗಳಿಗೆ ಬಲಿಯಾಗುತ್ತವೆ. ಹುಟ್ಟಿ ಸಾಯುತ್ತದೆ. ಕಾರಣ ಆ ಸಂಘಟನೆಯಲ್ಲಿ ಒಂದೇ ಮನಸ್ಥಿತಿಯಲ್ಲಿ ಕೆಲಸ ಮಾಡುವ ಮಂದಿ ಕಾಣದಾಗುತ್ತಾರೆ. ಈ ಎಲ್ಲಾ ಅಡೆ ತಡೆಗಳನ್ನೂ ದಾಟಿ ಈ ಸಂಘವು ಇಷ್ಟು ವರ್ಷಗಳ ಕಾಲ ಬೆಳೆದಿದೆ. ಇದಕ್ಕೆ ಮೂಲ ಕಾರಣ, ಆರಂಭದ ಆ ಚಿಂತನೆಗಳು. ಈ ಸಂಘಟನೆ ಯಾವತ್ತೂ ವ್ಯಕ್ತಿಯ ಹಿಂದೆ ಹೋಗಿ ಬೆಳೆದಿಲ್ಲ. ವ್ಯಕ್ತಿ ಶಾಶ್ವತವಲ್ಲ ಎಂದು ಇಂದಿಗೂ ಸಾರುವ ಆ ಚಿಂತನೆಗಳು ಸಾರ್ವಕಾಲಿಕ ಸತ್ಯ. ವ್ಯಕ್ತಿಯ ಹಿಂದೆ ಬೆಳೆಯುವ ಸಂಘಟನೆಗಳು ಶಾಶ್ವತವೂ ಅಲ್ಲ ಎನ್ನುವುದೂ ಸತ್ಯ. ಏಕೆಂದರೆ ಆರ್‌ ಎಸ್‌ ಎಸ್‌ ನಂತಹ ಇನ್ನೊಂದು ಸಂಘಟನೆ ಈ ದೇಶಲ್ಲಿ ಇನ್ನೊಂದು ಬೆಳೆದಿಲ್ಲ, ಬೆಳೆಯಲು ಸಾಧ್ಯವೂ ಆಗಿಲ್ಲ.  

ಇಲ್ಲಿ ಭಗವಾಧ್ವಜವೇ ಗುರು, ಅದುವೇ ಸಾರ್ವಕಾಲಿಕ ನಾಯಕ. ಆ ತತ್ತ್ವದ ಅಡಿಯಲ್ಲಿಯೇ ಬೆಳೆದ ಸಂಘವು  ಸಮಾಜ, ಸೇವೆ, ಸಹಬಾಳ್ವೆ, ಸಮಾನತೆ, ವ್ಯಕ್ತಿತ್ವ ವಿಕಸನ , ಆತ್ಮಸ್ಥೈರ್ಯ, ಪೂರ್ವ ಚಿಂತನೆ, ಪ್ಲಾನ್‌ , ವೈಚಾರಿಕ ಚಿಂತನೆ ಇತ್ಯಾದಿಗಳೇ ಈ ಸಂಘಟನೆ ಬೆಳೆಯಲು ಪ್ರಮುಖ ಕಾರಣ. 

ಆರ್‌ ಎಸ್‌ ಎಸ್‌ ಶಾಖೆಗಳಿಗೆ ಹೋದಾಗಲೇ ಅಲ್ಲಿ ಇರುವ ವೈಚಾರಿಕ ಚಿಂತನೆ, ವ್ಯಕ್ತಿತ್ವ ವಿಕಸನದ ಚಿಂತನೆಗಳು ಕಾಣುತ್ತವೆ. ಎಲ್ಲರೂ ಜೊತೆಯಾಗುತ್ತಾ ಪರಸ್ಪರ ಸಹಕಾರಗಳು ವ್ಯಕ್ತಿಗೆ ಮಾನಸಿಕ ಧೈರ್ಯ ಹಾಗೂ ಶಕ್ತಿ ನೀಡುತ್ತವೆ. ಅನೇಕರು ಜಾತಿ ಆಧಾರಿತ ವ್ಯವಸ್ಥೆ ಎಂದು ಟೀಕಿಸುತ್ತಾರೆ, ಅಂತಹ ಜಾತಿಯ ವ್ಯವಸ್ಥೆ ಅದರೊಳಗೆ ಕಾಣುವುದಿಲ್ಲ. ಸಹಜವಾಗಿಯೇ ಚಿಂತನೆಯ ಆಧಾರಿತವಾಗಿ ಬೆಳೆಯುವ ಕಾರಣದಿಂದ ಚಿಂತಕರಿಂದಲೇ ಸಂಘಟನೆ ಮುಂದುವರಿಯುತ್ತದೆ. ಹಾಗಾಗಿ ಚಿಂತಕರ ಕೂಟ ಹೆಚ್ಚು ಗಟ್ಟಿಯಾಗುತ್ತಾ ಸಾಗುತ್ತದೆ ಇಲ್ಲಿ.

ಆರ್‌ ಎಸ್‌ ಎಸ್‌ ವ್ಯಕ್ತಿ ನಿರ್ಮಾಣದ ಸಂಘಟನೆ. ಇಲ್ಲಿಗೆ ಯಾರೇ, ಯಾವುದೇ ವ್ಯಕ್ತಿ ಬರಲಿ. ಅವನಿಗೆ ಬೆಳೆಯುವ ಹಾಗೂ ಕಲಿಯುವ ಆಸಕ್ತಿ ಇದ್ದರೆ ಆತ ಸಹಜವಾಗಿಯೇ ಬೆಳೆಯುತ್ತಾ ಸಾಗುತ್ತಾನೆ, ಅನುಭವದ ಮಂಟಪವನ್ನು ಕಟ್ಟಿಕೊಳ್ಳುತ್ತಾನೆ. ವ್ಯಕ್ತಿತ್ವ ವಿಕಾಸಗೊಳ್ಳುತ್ತದೆ. ನನ್ನ ಮನೆ, ನನ್ನ ಕುಟುಂಬ,ನನ್ನ ಗ್ರಾಮ, ನನ್ನ ರಾಜ್ಯ, ನನ್ನ ದೇಶದವರೆಗೆ ಚಿಂತನೆಗಳು ವಿಸ್ತಾರವಾಗುತ್ತದೆ. ಯಾರಿಗೇ ನೋವಾದರೂ ತಮಗೇ ನೋವಾದಷ್ಟು ಆ ಚಿಂತನೆಗಳು ಇದೆ. ನನ್ನ ಗ್ರಾಮ ಬೆಳವಣಿಗೆಗೆ ಏನೆಲ್ಲಾ ಮಾಡಬೇಕು ಎಂಬುದೂ ಕಲ್ಪನೆಯ ಆಧಾರದಲ್ಲಿ ಬೆಳೆಯುತ್ತದೆ.

ನನ್ನ ದೇಶದ ಕಲ್ಪನೆಯನ್ನು ನನ್ನೊಳಗೇ ಬಿತ್ತುವ ಆರ್‌ ಎಸ್‌ ಎಸ್‌ ಮೊದಲು ಕಲಿಸುವುದು ಯಾವುದೇ ಒಂದು ನಾಯಕತ್ವ ವಹಿಸುವಾಗ ಅದರ ಕನಸುಗಳನ್ನು. ನಾನು ಆ ಸಂಘಟನೆಯ ನಾಯಕತ್ವ ವಹಿಸಿಕೊಂಡರೆ ಏನು ಮಾಡಬೇಕು ಹಾಗೂ ಮಾಡಬಹುದು  ಎನ್ನುವುದನ್ನು  ಆರ್‌ ಎಸ್‌ ಎಸ್‌ ಮೂಲ ಚಿಂತನೆ ತಿಳಿಸಿಕೊಡುತ್ತದೆ. ಹೀಗಾಗಿಯೇ ಅಲ್ಲಿ ನಾಯಕರಿಗೆ ಕೊರತೆ ಇಲ್ಲ. ಪ್ರತೀ ವ್ಯಕ್ತಿಯೂ ಯಾವಾಗ ಬೇಕಾದರೂ, ಯಾವ ಸಂಘಟನೆಯಲ್ಲೂ ನಾಯಕತ್ವ ವಹಿಸಿಕೊಂಡರೆ ಅವರು ಸಮರ್ಥವಾಗಿ ವಿಚಾರ ಮಂಡಿಸಬಲ್ಲರು, ಮಾತನಾಡಬಲ್ಲರು ಕೂಡಾ. ಇದಕ್ಕಾಗಿಯೇ ಆರ್‌ ಎಸ್‌ ಎಸ್‌ ವ್ಯಕ್ತಿ ನಿರ್ಮಾಣದ ಕೇಂದ್ರ ಮಾತ್ರವಲ್ಲ ವ್ಯಕ್ತಿತ್ವ ರೂಪಿಸುವ ಕೇಂದ್ರ, ವ್ಯಕ್ತಿತ್ವ ವಿಕಸನದ ಕೇಂದ್ರ.

ಅನೇಕ ವರ್ಷಗಳ ಕಾಲ ವ್ಯಕ್ತಿತ್ವ ವಿಕಸನ, ವ್ಯಕ್ತಿ ನಿರ್ಮಾಣ ಮಾಡಿರುವ ಆರ್‌ ಎಸ್‌ ಎಸ್‌ ಇಂದು ಸಮಾಜದ ಎಲ್ಲಾ ಕ್ಷೇತ್ರಗಳಲ್ಲೂ , ಎಲ್ಲಾ ವಿಭಾಗದಲ್ಲೂ, ಎಲ್ಲಾ ಆಯಾಮದಲ್ಲೂ  ಬೆಳೆದಿದೆ. ಹೀಗಾಗಿ ಅದೊಂದು ಶಕ್ತಿ. 

ಅಂತಹ ಸಂಘಟನೆಯಲ್ಲಿ ಪ್ರಚಾರಕ್‌ ಆಗಿ ಸೇವೆ ಮಾಡುವ ಹಂತಕ್ಕೆ ತಲುಪಿ ನಂತರ ನನ್ನ ಅನಿವಾರ್ಯತೆಯಿಂದ ಹಿಂದೆ ಸರಿದ ಒಂದು  ಸಂದರ್ಭದಲ್ಲಿ ಸಂಘಟನೆಯ  ಹಿರಿಯರೊಬ್ಬರು ಅಂದು  ಹೇಳಿದ್ದರು, " ನೋಡು ಮಾರಾಯ, ನೀನು ಎಲ್ಲಾದರೂ ಇರು, ಒಮ್ಮೆ ಧ್ವಜ ಪ್ರಣಾಮ್‌ ಮಾಡಿದ ಮೇಲೆ ನೀನು ಸಂಘದ ಸ್ವಯಂ ಸೇವಕ. ನೀನು ಯಾವ ಕ್ಷೇತ್ರದಲ್ಲಿ ಇದ್ದಿಯೋ ಅಲ್ಲಿಯೇ ಕೆಲಸ ಮಾಡು, ಆದರೆ ಅದು ದೇಶಕ್ಕೆ, ನಿನ್ನ ಗ್ರಾಮದ ಅಭಿವೃದ್ಧಿ ದೃಷ್ಟಿ ಇರಲಿ ಅಷ್ಟೇ " ಎಂದು  ಎರಡು ಬಾರಿ ಹೇಳಿದ್ದರು. 

 ಇಂದು ಈ ಮೇಲಿನ ಸಾಲುಗಳೇ  ಹೆಚ್ಚು ಚರ್ಚೆಯಾಗುತ್ತಿರುವುದು. ಅನೇಕ ಅಧಿಕಾರಿಗಳು ಸಂಘಿಯ ಹಾಗೆ ಕಾಣುವುದು, ಅನೇಕ ಪತ್ರಕರ್ತರು ಬಲಪಂಥೀಯರ ಹಾಗೆ ಕಾಣುವುದು, ಅನೇಕ ಜನರು ಆರ್‌ ಎಸ್‌ ಎಸ್‌ ಎಂದು ಕಾಣುವುದು  ಇದೇ ಕಾರಣಕ್ಕೆ. ಹಾಗೆಂದು ಆ ಪಾಸಿಟಿವಿಟಿಯನ್ನು  ಬೆಳೆಸುವುದು ತಪ್ಪೋ ? ಸರಿಯೋ ಕಾಲದ ಚರ್ಚೆ. ಆದರೆ ಧ್ವಜ ಪ್ರಣಾಮ್‌ ಮಾಡಿದ ವ್ಯಕ್ತಿ, ತನಗೆ ಪಾಸಿಟಿವ್‌ ಚಿಂತನೆಗಳನ್ನು ಬಿತ್ತಿದ ಸಂಘಟನೆಯ ಬಗ್ಗೆ ಮಾತನಾಡುವುದು , ಅದರ ಪರವಾಗಿ ಒಂದು ಕ್ಷಣ ಯೋಚಿಸುವುದು ತಪ್ಪೋ ಸರಿಯೋ ಎಂಬುದೂ ಕಾಲಚ ಚರ್ಚೆ. ಆದರೆ ಆ  ಸಂಘಟನೆಯ ಮೂಲ ಚಿಂತನೆ ಎಂದಿಗೂ ತಪ್ಪಾಗಿಲ್ಲ, ಅದರಲ್ಲಿ ಲೋಪವಿದ್ದರೆ ಇಷ್ಟು ಎತ್ತರಕ್ಕೆ ಬೆಳೆಯುತ್ತಿರಲಿಲ್ಲ. ಹಾಗಾಗಿಯೇ ಈ ಕಾಲದ ಚರ್ಚೆಗೆ ಉತ್ತರವಿಲ್ಲ.

ಸಂಘದ ಸುತ್ತಲಿನ ನನ್ನ ಅನುಭವದ ಬಗ್ಗೆ, ನಂಬರ್‌ ಬ್ಲಾಕ್‌ ಮಾಡಿದ ಬಗ್ಗೆ ನಾಳೆ ಬರೆಯುತ್ತೇನೆ......

17 ಸೆಪ್ಟೆಂಬರ್ 2021

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾರ್ಯದ ಮೂಲಕ ಶುಭಾಶಯ ತಿಳಿಸುವ ಕಾಲ ಇದು...!

  



ಈ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜನ್ಮ ದಿನದ ಶುಭಾಶಯ. 

ಹಲವು ಕಾರಣಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಹೆಮ್ಮೆ ಇರಬಹುದು. ಆದರೆ ಪ್ರಮುಖವಾದ ಎರಡು ಕಾರಣಗಳು, ಅಂತರಾಷ್ಟ್ರೀಯ ಮಟ್ಟದಲ್ಲಿ  ಭಾರತದ ಕೀರ್ತಿಯನ್ನು  ಏರಿಸಿದ್ದು, ಕನಿಷ್ಟ ತಮ್ಮ ಸಂಪುಟ ಸಚಿವರಲ್ಲಿ  ಭ್ರಷ್ಟಾಚಾರ ನುಸುಳದಂತೆ ಮಾಡಿರುವುದು. ಭ್ರಷ್ಟಾಚಾರದಲ್ಲಿ  ಹಿಡಿತ ಸಾಧಿಸುವುದು ಅಷ್ಟು ಸುಲಭವಲ್ಲ. ತಾಂಡವಾಡುತ್ತಿದ್ದ ಭ್ರಷ್ಟಾಚಾರವನ್ನು ನಿಯಂತ್ರಣ ಮಾಡುವುದೂ  ಸುಲಭದ ಮಾತಲ್ಲ. ಆರಂಭವಾದ ಹೆಜ್ಜೆ ಮುಂದುವರಿಯಬಹುದು.

ಸರಿ ಸುಮಾರು 8 ವರ್ಷಗಳ ಹಿಂದೆ, ಕಾರ್ಯಕ್ರಮವೊಂದರಲ್ಲಿ ಭಾರೀ ಚರ್ಚೆ ಆಗುತ್ತಿತ್ತು. ಈ ದೇಶದ ಪ್ರಧಾನಿ ನರೇಂದ್ರ ಮೋದಿ ಆಗಲೇಬೇಕು, ಎಂದಲ್ಲ, ಆದರೆ ಅವರ ಇಮೇಜ್‌ ಉಳಿಯಬಹುದಾ ? ಈ ದೇಶದಲ್ಲಿ ಇದೆಲ್ಲಾ ಸಾದ್ಯ ಇದೆಯಾ? ಮೋದಿ ಅವರ ಕನಸು ಈಡೇರಬಹುದಾ ? ಗುಜರಾತ್‌ ಒಂದು ರಾಜ್ಯ, ಭಾರತದ ಒಂದು ದೇಶ. ಇಲ್ಲಿ ಒಮ್ಮೆಲೇ ಎಲ್ಲವೂ ಸಾಧ್ಯವೇ ಇಲ್ಲ. ತಾಂಡವಾಡುತ್ತಿರುವ ಭ್ರಷ್ಟಾಚಾರ ಒಂದು ಕಡೆ, ಅಭಿವೃದ್ಧಿಯ ಲಿಸ್ಟ್‌ ಇನ್ನೊಂದು ಕಡೆ . ಗುಜರಾತ್‌ ಮಾದರಿಯ ಅಭಿವೃದ್ಧಿ ಇಡೀ ದೇಶಕ್ಕೆ ಸಾಧ್ಯವೇ ಎಂಬುದು  ಅಲ್ಲಿ ನಡೆಯುತ್ತಿದ್ದ ಚರ್ಚೆ. ನರೇಂದ್ರ ಮೋದಿ ಅವರ ಬಗ್ಗೆ ಅಂದು ಆ ಮಾದರಿಯ ಚರ್ಚೆ ಹಳ್ಳಿ ಹಳ್ಳಿಯಲ್ಲಿ  ನಡೆಯುತ್ತಿತ್ತು. ಕೊನೆಗೆ ಬಂದ ಅಭಿಪ್ರಾಯ, ಎಲ್ಲಾ ಡೆವಲೆಪ್ಮೆಂಟ್‌ ಸಾಧ್ಯವಿದೆ. ಎಲ್ಲವೂ ಸರಕಾರದ ಪಾಲಿಸಿಯಿಂದ ಸಾಧ್ಯವಿದೆ, ನರೇಂದ್ರ ಮೋದಿ ಅವರು ಅದನ್ನು ಮಾಡುತ್ತಾರೆ , ಅವರಿಗೆ ಸಾತ್‌  ನೀಡುವ ದೊಡ್ಡ ಕಾರ್ಯಕರ್ತರ ಪಡೆ ಇದೆ, ಅದು ಹಳ್ಳಿ ಹಳ್ಳಿಯವರೆಗೂ ಇದೆ. ಅವರೊಂದು ಟೀಂ ಮಾಡಿದ್ದಾರೆ, ಆ ಟೀಂ ಸೈಲೆಂಟಾಗಿ ಹಳ್ಳಿಯವರೆಗೂ ಇದೆ. ಅವರು ಎಲ್ಲಾ ಫೀಡ್‌ ಬ್ಯಾಕ್‌ ಕೊಡುತ್ತಾರೆ. ಅವರು ಯಾರು ಅಂತಲೇ ಗೊತ್ತಿಲ್ಲ...! ಹೀಗೆಲ್ಲಾ ಚರ್ಚೆ ನಡೆಯಿತು. ಅಂದರೆ ಅಷ್ಟೂ ಪ್ರಮಾಣದ ವಿಶ್ವಾಸ ನರೇಂದ್ರ ಮೋದಿ ಅವರಿಂದ ತೊಡಗಿ ಹಳ್ಳಿ ಆ "ಅನಾಮಧೇಯ" ಕಾರ್ಯಕರ್ತನವರೆಗೂ ಇತ್ತು.

ಮುಂದೆ ಹಳ್ಳಿ ಹಳ್ಳಿ ಮುಂದಿನ ಪ್ರಧಾನಿ ನರೇಂದ್ರ ಮೋದಿ ಎಂಬ ಬ್ಯಾನರ್‌ ರಾರಾಜಿಸಿತು, ಸೋಶಿಯಲ್‌ ಮೀಡಿಯಾದಲ್ಲಿ ಹಲವು ಪೋಸ್ಟ್‌ ಗಳು ಬಂದವು. ಚುನಾವಣೆ ಕಳೆದಾಗ ಇತಿಹಾಸದಲ್ಲಿ  ಮೊದಲ ಬಾರಿ ಬಿಜೆಪಿ ಮೆಜಾರಿಟಿ ಪಕ್ಷವಾಯಿತು. ವ್ಯಕ್ತಿ ಆಧಾರಿತವಾಗಿ ಮೊದಲ ಬಾರಿಗೆ "ಬಿಜೆಪಿ" ಗೆದ್ದಿತು.  ಆ ಬಳಿಕ ವಿವಿಧ ಸವಾಲುಗಳನ್ನು ಉತ್ಯುತ್ಸಾಹದಿಂದ ಪ್ರಧಾನಿಗಳು ಮೆಟ್ಟಿ ನಿಂತರು. ದೇಶಕ್ಕೆ ದೇಶವೇ ಬೆರಗಾಯಿತು. ಒಂದು ಕಾಲದಲ್ಲಿ  ಅಮೇರಿಕಾ ತಮ್ಮ ದೇಶಕ್ಕೆ ಮೋದಿ ಬರುವುದು  ಬೇಡ ಎಂದಿದ್ದ ದೇಶವೇ ರೆಡ್‌ ಕಾರ್ಪೆಟ್‌ ಹಾಸಿತು. ಯಾವಾಗ ಬರುತ್ತೀರಿ ಎಂದು ಕರೆಯಿತು. 

ಎಲ್ಲಾ ದೇಶಗಳನ್ನೂ ಸುತ್ತಾಡಿದ ಮೋದಿ ಅವರು ವಿಶ್ವ ಮಟ್ಟದಲ್ಲಿ ದೇಶವನ್ನು  ಗಮನಸೆಳೆದರು. ಭಾರತ ವಿಶ್ವಗುರುವತ್ತ ಸಾಗಿತು.  ಮೋದಿ ಅವರ ಕನಸಿನ ಬಗ್ಗೆ ಒಂದು ಕಡೆ ದಾಖಲಾಯಿತು, ಭಾರತ ವಿಶ್ವಗುರುವಾಗಬೇಕು, ಪ್ರತೀ ಹಳ್ಳಿಯೂ ವಿಶ್ವಗುರುವಾಗಬೇಕು ". ಅಂದರೆ ಇದರ ಅರ್ಥ ಈ ದೇಶದ ಪ್ರತೀ ವ್ಯಕ್ತಿಯೂ ಸ್ವಾವಲಂಬನೆಯ ಹಾದಿಯಲ್ಲಿ ಸಾಗಬೇಕು.

ಜೊತೆಗೇ ಭ್ರಷ್ಟಾಚಾರ ಮುಕ್ತವಾಗಲು ಪಣ ತೊಟ್ಟರು, ತನ್ನ ಸಂಪುಟದಿಂದಲೇ ಇದನ್ನು ಆರಂಭ ಮಾಡಿದರು, ಭ್ರಷ್ಟಾಚಾರ ಇರುವ ಮಂದಿಯನ್ನು ಹತ್ತಿರ ಸುಳಿಯಲು ಬಿಡಲಿಲ್ಲ, ಈ ಮೂಲಕ ಇಡೀ ದೇಶಕ್ಕೆ ಸಂದೇಶ ನೀಡಿದರು, ಪ್ರತೀ ವ್ಯಕ್ತಿಯೂ ಭ್ರಷ್ಟಾಚಾರ ಮುಕ್ತವಾಗಲಿ ಎಂದರು. 

ಪ್ರತೀ ಹಂತದಲ್ಲೂ ದೇಶದ ಪ್ರತೀ ವ್ಯಕ್ತಿಗೂ ಸಂದೇಶ ನೀಡುತ್ತಲೇ ಹೋದ ಪ್ರಧಾನಿ ನರೇಂದ್ರ ಮೋದಿ ಇಡೀ ದೇಶದ ನಂಬರ್‌ ವನ್‌ ನಾಯಕ ಎನಿಸಿದರು. ದೇಶಕ್ಕೆ ದೇಶವೇ ಕೊಂಡಾಡಿತು.

ಅನೇಕ ಕಂಪನಿಗಳಿಗೆ ಮನೆ ಹಾಕಿದರು ಎಂದು ಟೀಕೆಗಳು ಬಂದಿತು. ಈ ದೇಶದ ಆರ್ಥಿಕ ಪರಿಸ್ಥಿತಿ ಆ ಮಟ್ಟಕ್ಕೆ ಇರುವಾಗ ಸಹಜವಾಗಿಯೇ ಪರ್ಯಾಯ ವ್ಯವಸ್ಥೆ ಅಗತ್ಯವಿದೆ. ಇದೇ ದೇಶದ ಮಂದಿಯ ಸಹಕಾರ ಪಡೆಯುವುದರಲ್ಲಿ  ತಪ್ಪಿಲ್ಲ ಅಂತಲೇ ಭಾವಿಸಲಾಯಿತು. ಇಷ್ಟೂ ವರ್ಷದ ವ್ಯವಸ್ಥೆಯನ್ನು ಕೇವಲ  5  ವರ್ಷದಲ್ಲಿ ಸರಿಪಡಿಸಲು ಸಾಧ್ಯವಿಲ್ಲ ಎಂಬುದೂ ವಾಸ್ತವ ಸಂಗತಿಯೇ ಹೌದು. ಅದನ್ನೂ ಒಪ್ಪಿಕೊಳ್ಳಬೇಕಾದ್ದೇ. 

ಎರಡನೇ ಚುನಾವಣೆಯೂ ಹತ್ತಿರ ಬಂತು. ಈ ಬಾರಿ ದೇಶದ ಜನಕ್ಕೆ ಕರೆ ನೀಡಿದರು, ಪ್ರತೀ ವ್ಯಕ್ತಿಯೂ ಚೌಕೀದಾರ್‌ ಆಗಿ ಎಂದರು. ಗ್ರಾಮೀಣ ಅಭಿವೃದ್ಧಿ, ಸ್ವಾವಲಂಬನೆ ಅಗತ್ಯ ಅದಕ್ಕಾಗಿ ಆತ್ಮನಿರ್ಭರ ಭಾರತ ಎಂದರು, ಕೃಷಿ ಆದಾಯ ದ್ವಿಗುಣ ಆಗಬೇಕು ಎಂದರು.. ಹೀಗೇ ಒಂದಷ್ಟು ಕನಸುಗಳನ್ನು ಎರಡನೇ ಬಾರಿ ಬಿತ್ತಿದರು.

ಆದರೆ ಈ ಬಾರಿ ಮಾತ್ರಾ ಆಶಾದಾಯಕ ಬೆಳವಣಿಗೆಗಳು ನಿಧಾನವಾದವು.

ಚೌಕೀದಾರ್‌ ಎಂದು ಗ್ರಾಮೀಣ ಭಾಗಗಳಲ್ಲಿ ನಡೆದ ಭ್ರಷ್ಟಾಚಾರಗಳನ್ನು  ವಿರೋಧ ಮಾಡಿದರೆ ಅವರದೇ ಪಕ್ಷದ ಮಂದಿ ವಿರೋಧಿ ಎಂದು ಕರೆಯುವುದು  ಮಾತ್ರವಲ್ಲ, ಕೇಸು ಹಾಕಿಸಿದರು..!. ಗ್ರಾಮೀಣ ರಸ್ತೆಯೊಂದು ಕಳಪೆಯಾದ್ದಕ್ಕೆ ಅದೇ ಪಕ್ಷದ ಕಾರ್ಯಕರ್ತ ವಿರೋಧ ಮಾಡಿದರು, ಆಗ ಅವರದೇ ಪಕ್ಷದ ಮುಖಂಡರು ಗುತ್ತಿಗೆದಾರನ ಪರ ನಿಂತರು..!

ಆತ್ಮನಿರ್ಭರ ಭಾರತ ಎನ್ನುತ್ತಾ ಕೆಲವು ಕಾರ್ಯಗಳ ಮೂಲಕ ದಾಖಲೆಗಳನ್ನು ಸೃಷ್ಟಿಸಿದರು, ಜನಸಾಮಾನ್ಯನಿಗೆ ಬಹುಪಾಲು ಯೋಜನೆಗಳು ಸಿಗದಾಯಿತು. ಗ್ರಾಮೀಣ ಭಾಗದ ರಸ್ತೆ, ಸೇತುವೆ, ನೆಟ್ವರ್ಕ್‌ ಇತ್ಯಾದಿಗಳು ಇಂದಿಗೂ ಪ್ರಧಾನಿಗಳ ಕನಸಿನ ಮಾತಾಯಿತು. ಕೇಳಿದರೆ, ಇಷ್ಟೂ ವರ್ಷಗಳಲ್ಲಿ ಆಗದ್ದು 8 ವರ್ಷಗಳಲ್ಲಿ ಆದೀತಾ ಎಂದರು...!. 

ಕೇಳಿದರೆ, ಕೃಷಿ ಆದಾಯ ದ್ವಿಗುಣ ಎಂದರು, ಕೃಷಿ ಅಭಿವೃದ್ಧಿ ಬಗ್ಗೆ ಮಾತನಾಡಿದರೆ, ಅದು ಸಾಧ್ಯವಿಲ್ಲ ಎಂದರು.

ಇದೆಲ್ಲಾ ಸಂಗತಿಗಳು ಪ್ರಧಾನಿಗಳು ತಲುಪುತ್ತಾ ಇಲ್ಲವೋ ಗೊತ್ತಿಲ್ಲ. ಆದರೆ ಈಚೆಗೆ ಆ ಬೆಳವಣಿಗೆ ಅಪಾಯಕಾರಿಯಾಗಿ ಸಾಗುತ್ತಿದೆ. ಇದಕ್ಕೆ ಸರಿಯಾಗಿಯೇ ಈಡೀ ದೇಶದಲ್ಲಿ ಸರಿಯಾದ, ರಚನಾತ್ಮಕವಾಗಿ ಮಾತನಾಡುವ ವಿರೋಧ ಪಕ್ಷವೂ ಕಾಣುತ್ತಿಲ್ಲ. ಇದೆಲ್ಲಾ ಈಚೆಗೆ ಈ ದೇಶದ ಜನರಿಗೇ ಸಮಸ್ಯೆಯಾಗುತ್ತಿರುವುದು  ಸುಳ್ಳಲ್ಲ.

ಈಚೆಗೆ ಗ್ರಾಪಂ ಚುನಾವಣೆ, ಸಹಕಾರಿ ಸಂಘದ ಚುನಾವಣೆಗಳಲ್ಲೂ ಪ್ರಧಾನಿ ನರೇಂದ್ರ ಮೋದಿ ಅವರ ಸಾಧನೆ, ಅವರ ಹೆಸರೇ ಮಾತನಾಡುತ್ತದೆ. ಆಯಾ ಪಂಚಾಯತ್‌ ಮಟ್ಟದಲ್ಲಿನ ಒಬ್ಬನೇ ಒಬ್ಬ ಅವರದೇ ಪಕ್ಷದ ನಾಯಕನ ಕೆಲಸ ಸದ್ದು ಮಾಡುವುದಿಲ್ಲ. ಅದರ ಬದಲಿಗೆ ಗುತ್ತಿಗೆಗಳು ಮಾತನಾಡುತ್ತವೆ, ಭ್ರಷ್ಟಾಚಾರಗಳು ಸದ್ದು ಮಾಡುತ್ತವೆ, ಪಕ್ಷದೊಳಗಿನ ಅಸಮಾಧಾನಗಳು, ಜಾತಿಗಳು ಮಾತನಾಡುತ್ತವೆ. ಇದು ತಪ್ಪಾಗುತ್ತಿದೆ ಎಂದು ಹೇಳುತ್ತಲೇ ಅಂತಹವರ ನಂಬರ್‌ ಗಳು ಬ್ಲಾಕ್‌ ಆಗುತ್ತವೆ. ಗ್ರಾಮೀಣಾಭಿವೃದ್ಧಿ ಬಗ್ಗೆ ಮಾತನಾಡುತ್ತಲೇ ವಿರೋಧಿಗಳಾಗುವುದು  ಮಾತ್ರವಲ್ಲ ಅಂತಹವರ ಬಗ್ಗೆಯೇ ನೆಗೆಟಿವ್‌ ಅಭಿಪ್ರಾಯ ಸೃಷ್ಟಿ ಮಾಡಲಾಗುತ್ತದೆ. ವ್ಯಕ್ತಿ ಆಧಾರಿತವಾಗಿ ಯಾವುದೇ ವ್ಯವಸ್ಥೆ ಇರುವಾಗ ಎಲ್ಲಿ ಮಾತನಾಡಿದರೂ ಪರಿಹಾರ ಕಾಣದು. ಅದು ತಲುಪಬೇಕಾದಲ್ಲಿ ತಲುಪಿದರೂ ಪರಿಹಾರ ಕಾಣುವುದಿಲ್ಲ. ಏಕೆಂದರೆ ವ್ಯವಸ್ಥೆ ಶಿಥಿಲದ ಭಾಗ ಅದು.

ಇಂದು ಪ್ರಧಾನಿಗಳ ಹುಟ್ಟುಹಬ್ಬ, ಅವರಿಗೆ ಶುಭಾಶಯದ ಸುರಿಮಳೆಯೇ ಕಾಣುತ್ತದೆ. ಈ ಶುಭಾಶಯಗಳು ಗ್ರಾಮಮಟ್ಟದಲ್ಲಿ  ಕೆಲಸವಾಗಿ ಕಾಣಬಹುದೇ ? ಗ್ರಾಮಮಟ್ಟದಲ್ಲಿ  ಒಬ್ಬ ಅಂತಹ ನಾಯಕ ಸೃಷ್ಟಿಯಾಗಬಲ್ಲನೇ ? ಭ್ರಷ್ಟಾಚಾರದ ಸುಳಿವೇ ಇರದ ವ್ಯಕ್ತಿ ಕಾಣಬಲ್ಲನೇ ? ಹೀಗಾದರೆ ಪ್ರಧಾನಿಗಳಿಗೆ ಸಲ್ಲಿಸುವ ಶುಭಾಶಯ ಹೆಚ್ಚು ಪವರ್‌ ಫುಲ್‌ ಆಗಿರುತ್ತದೆ. ಇಲ್ಲವಾದರೆ ಬಾಯಿ ಮಾತಿನ ಶುಭಾಶಯವಷ್ಟೇ...!. 




09 ಏಪ್ರಿಲ್ 2021

3 ಸಾವಿರ ರೂಪಾಯಿಗೆ ಬೆಂಗಳೂರಿಗೆ ಹೋಗಬೇಕಾಗಿಲ್ಲ , ಭೂಮಿ ಇದೆ ಎಂದರು ಅಪ್ಪ

 


ಸುಮಾರು  20  ವರ್ಷದ ಹಿಂದಿನ ಮೊದಲ ಹೆಜ್ಜೆ ಅದು.

ಆಗ ತಾನೆ ‌ ಇಲೆಕ್ಟ್ರೋನಿಕ್ಸ್‌& ಕಮ್ಯುನಿಕೇಶನ್ ಡಿಪ್ಲೊಮಾ ಮುಗಿಸಿ ಇಂಜಿನಿಯರಿಂಗ್‌ ಮಾಡುವ ಹಂಬಲ ಒಂದು ಕಡೆ ಇದ್ದರೆ ಇನ್ನೊಂದು ಕಡೆ ಕೆಲಸಕ್ಕೆ ಹೋಗುವ ಮನಸ್ಸು. ಯಾವ ಆಯ್ಕೆ ಎಂದು ಅಪ್ಪನ ಮುಂದೆ ಬಂದು ನಿಂತೆ. 

ಅಪ್ಪ ಹೇಳಿದ್ದು ಹೀಗೆ ,"‌ ಯಾವುದೇ ಕೋಟ ಇಲ್ಲದ ನಮಗೆ ಮೆರಿಟಲ್ಲಿ ಇಂಜಿನಿಯರಿಂಗ್ ಸೀಟು ಸಿಕ್ಕಿದರೆ ಹೋಗು, ಯಾರಲ್ಲೂ ಸೀಟಿಗಾಗಿ ಕೇಳಲು ಹೋಗುವುದಿಲ್ಲ, ದಮ್ಮಯ್ಯ ಹಾಕಲು ಹೋಗುವುದಿಲ್ಲ. ನನಗೆ ಕಲಿಸಿದ ಪಾಠ ಅದು. ಒಂದು ವೇಳೆ ಸಿಕ್ಕಿದರೆ ಎಷ್ಟು ಖರ್ಚಾದರೂ ಸರಿ ಕಲಿಸುವೆ. ಇಲ್ಲದೇ ಇದ್ದರೆ ಕೆಲಸ ನೋಡು" ಎಂದರು.  ನಾಳೆಯೇ ಹೋಗುವ ಬೇಕಾದರೆ ಬೆಂಗಳೂರು ಹೋಗುವ, ನನ್ನ ಚಿಕ್ಕಯ್ಯನಲ್ಲಿ ಮಾತನಾಡುವೆ ಎಂದರು. ತಕ್ಷಣವೇ ಅರ್ಜಿ ಹಾಕಿದೆ. ಡಿಪ್ಲೊಮಾದಲ್ಲಿ ಫಸ್ಟ್‌ ಕ್ಲಾಸ್‌ ಮಾರ್ಕ್‌ ಇತ್ತು. ಇಂಜಿನಿಯರಿಂಗ್‌ ಗೆ ಸೀಟು ಸಿಗಬಹುದೆಂದ ಆಶಾವಾದಲ್ಲಿದ್ದೆ. ಕೌನ್ಸಿಲಿಂಗ್‌ ಗೆ ಬೆಂಗಳೂರಿಗೆ ಅಪ್ಪನ ಜೊತೆ ಹೋದೆ. ಮೀಸಲಾತಿ ಇಲ್ಲದ ನನಗೆ ಸೀಟು ಸಿಗಲಿಲ್ಲ.ಅಪ್ಪನೂ ಏನೂ ಹೇಳಲಿಲ್ಲ. ಬೆಂಗಳೂರಲ್ಲಿ ಅಪ್ಪನ ಚಿಕ್ಕಯ್ಯನ ಜೊತೆ ಮಾತನಾಡಿದ್ದಾಯಿತು. ಯಾವುದೇ ದು:ಖ ಇಲ್ಲದೆ ಬೆಂಗಳೂರಿನಿಂದ ವಾಪಾಸ್‌ ಮನೆಗೆ ಬಂದಾಗ ನನ್ನ ವಯಸ್ಸು 22. 

ಹುಚ್ಚು ಮನಸ್ಸು. ಏನಾದರೂ ಮಾಡಲೇಬೇಕು. ಮಿತ್ರರೆಲ್ಲರೂ ಒಬ್ಬೊಬ್ಬರು ಒಂದೊಂದು ಯೋಚನೆಯಲ್ಲಿದ್ದರು. ಜೊತೆಯಲ್ಲಿದ್ದ ಒಂದಿಬ್ಬರು ಇಂಜಿನಿಯರಿಂಗ್‌ ಮಾಡಿದರೆ ಇನ್ನೂ ಕೆಲವರು ಕೆಲಸದ ನಿಮಿತ್ತ ಬೆಂಗಳೂರು ಬಸ್ಸು ಹತ್ತಿದರು.  ನಾನೂ ಬೆಂಗಳೂರು ಬಸ್ಸು ಹತ್ತಿದೆ. ಅಪ್ಪನ ಕೈಯಿಂದ ಹಣ ಪಡೆದು ಉದ್ಯೋಗದ ಕನಸಿನಲ್ಲಿ ಬೆಂಗಳೂರು ಬಸ್ಸಿಗೆ ಹತ್ತಿದ ನಾನು ಬಸ್ಸು ಇಳಿಯುವಾಗ ಮುಂಜಾನೆ. ಬೆಳಕು ಹರಿಯಲಿಲ್ಲ. ಮಿತ್ರರೆಲ್ಲಾ ಸೇರಿ ಬಸ್‌ ಸ್ಟ್ಯಾಂಡ್‌ ಬಳಿ ಗಂಟೆ ಲೆಕ್ಕದಲ್ಲಿ ಸಿಗುತ್ತಿದ್ದ ಅತಿಥಿ ಗೃಹದಲ್ಲಿ ಕೊಠಡಿ ಮಾಡಿ ಇಂಟರ್‌ ವ್ಯೂ ಗೆ ತೆರಳಿದ್ದಾಯಿತು. ಅದು ಆಗಿನ ಬಿಪಿಎಲ್‌ ಕಂಪನಿ. ಇಂಟರ್‌ ವ್ಯೂನಲ್ಲಿ ಪಾಸಾದಾ ನಮ್ಮ ಕೆಲವು ಮಿತ್ರರಲ್ಲಿ ನಾನೂ ಒಬ್ಬ. ಸಂಬಳ ಕೇಳಿದಾಗ ಆಗಿನ ದಿನದಲ್ಲಿ 3000  ರೂಪಾಯಿ..!. 6  ತಿಂಗಳ ಬಳಿಕ ವೇತನ ಏರಿಕೆ ಬಗ್ಗೆ ಹೇಳಿದ್ದರು.  15  ದಿನಗಳ ನಂತರ ಕಂಪನಿಗೆ ಸೇರಲು ಹೇಳಿದ್ದರು. 

ಎಲ್ಲಿಗೂ ಹೋಗದೆ ಮನೆಗೆ ಬಂದು ಅಪ್ಪನ ಜೊತೆ ವಿಷಯ ಹೇಳಿದಾಗ ಅಪ್ಪ ಹೇಳಿದ್ದು," 3000  ರೂಪಾಯಿ ಸಂಬಳಕ್ಕೆ ಬೆಂಗಳೂರು ಹೋಗಬೇಕಾಗಿಲ್ಲ, ಭೂಮಿ ಇದೆ. ಅದನ್ನೇ ನೋಡಿಕೊಂಡರೆ ಸಾಕು. ಇದೆಲ್ಲಾ ಮತ್ಯಾರಿಗೆ. ಕೃಷಿ ಆಗಿದೆ, ಇನ್ನೂ ಸ್ವಲ್ಪ ಕೃಷಿ ಮಾಡಲು ಇದೆ." ಎಂದರು. ನನ್ನ ಅಪ್ಪ ಹಾಗೆಯೇ, ಒಂದೇ ಮಾತು. ಆ ನಿಲುವಿನಲ್ಲಿ ಯಾವತ್ತೂ ಬದಲಾವಣೆ ಇರದು. ಮತ್ತೆ ಮತ್ತೆ ಕೇಳಿದಾಗಲೂ ಅದನ್ನೇ ಹೇಳಿದರು. ಕೊನೆಗೆ ಹೇಳಿದರೂ, ಎಷ್ಟಾದರೂ ಕೊನೆಗೆ ಬರಬೇಕಾದ್ದು ಕೃಷಿಗೇ, ವಯಸ್ಸಾದ ಮೇಲೆ ಬಂದು ಏನು ಮಾಡುವಿ ? ಈ ಭೂಮಿ ಮಾರುವುದಾ ಎಂದು ಕೇಳಿದರು. ಉತ್ತರವಿಲ್ಲದ ಪ್ರಶ್ನೆಗಳೊಂದಿಗೆ ಆಗ ಒಳಗೊಳಗೇ ಸಿಟ್ಟಾಗುತ್ತಾ ಸುಮ್ಮನೆ ಕುಳಿತೆ. ಅಂದಿನಿಂದ ಯಾವತ್ತೂ ಅಪ್ಪ ನನಗೆ ಖರ್ಚಿಗೆ ಹಣ ಇಲ್ಲ ಎಂದದ್ದೇ ಇಲ್ಲ. ಏನೇ ಖರ್ಚು ಮಾಡಿದರೂ ತೆಗೆದು ತೆಗೆದು ಕೊಡುತ್ತಿದ್ದರು. ಅವರಲ್ಲಿ ಇದೆಯೋ ಇಲ್ಲವೋ ಗೊತ್ತಿಲ್ಲ,  ನನಗೆ ಎಲ್ಲೂ ಯಾವುದೇ ತೊಂದರೆ ಆಗದಂತೆ ಅವರ ಜೀವಿತದ ಕೊನೆಯವರೆಗೂ ನೋಡಿಕೊಂಡಿದ್ದರು. ಅನೇಕ ಬಾರಿ ಸ್ವತ: ಕಲಿಯುವಿಕೆಗೇ ಅವಕಾಶ ಕೊಟ್ಟಿದ್ದರು. ಆಗಾಗ ಹೇಳುತ್ತಿದ್ದೆ, ನನ್ನ ಜೊತೆಗೆ ಇದ್ದವರಿಗೆ ಈಗ ಸಂಬಳ ಇಷ್ಟಂತೆ.. ಇಷ್ಟಂತೆ ಎಂದು. (ಈಗ ನನ್ನ ಜೊತೆ ಸೇರಿದವರಿಗೆ 1.5 ಲಕ್ಷ ಸಂಬಳವಂತೆ). ಅಪ್ಪ ಹೇಳಿದ್ದು, ಅಷ್ಟು ಸಂಬಳದಲ್ಲಿ  ಖರ್ಚಾಗಿ ಎಷ್ಟು ಉಳಿಯುತ್ತದೆಯಂತೆ..? ಅದು ನಾನು ನಿನಗೆ ಕೊಡುತ್ತೇನೆ ಎನ್ನುತ್ತಿದ್ದರು. ಅದನ್ನು ಮಾಡುತ್ತಿದ್ದರು ಕೂಡಾ. ಈಗ ಅನಿಸುತ್ತದೆ, ಅವರು ಕೃಷಿಯಿಂದ ಅದನ್ನೆಲ್ಲಾ ಹೇಗೆ ನಿಭಾಯಿಸುತ್ತಿದ್ದರು...?. ಭೂಮಿಗಾಗಿ ಹಾಗೂ ಭೂಮಿ ಉಳಿಯಲು ಎನ್ನುವುದು  ಈಗೀಗ ಅರ್ಥವಾಯಿತು. ಆ ಜವಾಬ್ದಾರಿ ಈಗ ಹೆಚ್ಚಾಗಿದೆ ಹಾಗೂ ಅವರಂತೆಯೇ ಮುಂದೆ ದಾಟಿಸಬೇಕು ಎಂಬ ಅರಿವು ಹೆಚ್ಚಾಯಿತು.

ಆದರೆ ಈ ನಡುವೆ ಕಾಲೇಜು  ದಿನಗಳಲ್ಲೇ  ರಾಷ್ಟ್ರೀಯ ಸ್ವಯಂ ಸೇವಕ ಸಂಘ ಪರಿಚಯವಾಗಿತ್ತು. ಹೀಗಾಗಿ ಸಾಮಾಜಿಕ ಕೆಲಸ ಕಾರ್ಯಗಳತ್ತ ಮನಸ್ಸಾಗಿತ್ತು. ಅಂದು ಸಾಮಾಜಿಕವಾಗಿ ನನ್ನನ್ನು ತೆರೆದುಕೊಳ್ಳಲು ಅವಕಾಶ ನೀಡಿತ್ತು. ಅದಕ್ಕೂ ಮುನ್ನ ಬರೆಯುವ ಹವ್ಯಾಸಕ್ಕೆ ವೇದಿಕೆ ನೀಡಿದ್ದು ಬಾಳಿಲದ ವಿದ್ಯಾಬೋಧಿನೀ ಪ್ರೌಢಶಾಲೆ. ಬಾಳಿಲ ಶಾಲೆ ನನ್ನನ್ನು ಬರೆಯುವ ಹವ್ಯಾಸಕ್ಕೆ ತೆರೆಸಿ ಇಂದಿಗೂ ಗಟ್ಟಿ ಮಾಡಿಸಿದ್ದಕ್ಕೆ ಋಣಿಯಾಗಿದ್ದೇನೆ. ಸಾಮಾಜಿಕವಾಗಿ ಹೆಸರು ಮಾಡುವುದಕ್ಕೆ ಅವಕಾಶ ಮಾಡಿಸಿದ ಹಾಗೂ ಬೆಳೆಸಿದ ಸಂಘಕ್ಕೆ ನಾನು ಋಣಿ. 

ಬರೆಯುವ ಹವ್ಯಾಸ ನನಗೆ ಇಂದಿಗೂ ಮನಸ್ಸಿಗೆ ಖುಷಿ ನೀಡಿದೆ. ಸಾಮಾಜಿಕ ಕೆಲಸಗಳಿಗೆ ಈಗ ಸ್ವಲ್ಪ ವಿರಾಮ ನೀಡುತ್ತಿದ್ದೇನೆ. ಇಷ್ಟೂ ಸಮಯ ಅಪ್ಪ ದುಡಿದ ಹಣವನ್ನು ಸಮಾಜದ ಕೆಲಸಗಳಿಗೆ ಖರ್ಚು ಮಾಡಿದ್ದೇನೆ ಎನ್ನುವಾಗ  ವಿಷಾದ ಮೂಡಿಸುತ್ತದೆ. ನನ್ನ ದುಡಿಮೆಯ ಹಣವೂ  ಸಮಾಜಕ್ಕಾಗಿ ವ್ಯಯ ಮಾಡಿದ್ದೇನೆ ಎನ್ನುವ ತೃಪ್ತಿ ಇದೆ. ಈಚೆಗೆ ಒಂದು ಸಭೆಯಲ್ಲಿ ನನ್ನ ಹೆಸರು ಪ್ರಸ್ತಾಪ ಮಾಡುತ್ತಾ ಒಬ್ಬರು ಹೇಳಿದರು," ಅವನು ಬದಲಾಗಿದ್ದಾನೆ, ಈಗ ಮೊದಲಿನ ಹಾಗಿಲ್ಲ ಎಂದರು.ಅದಕ್ಕಾಗಿ ನನಗೆ ಬೇಸರವಿಲ್ಲ. ಅಪ್ಪ ದುಡಿದ ಹಣದ ಭಾಗವನ್ನು ಸಮಾಜದ ಕೆಲವು ಕೆಲಸಗಳಿಗೆ ಖರ್ಚು ಮಾಡಿದ್ದೇನೆ ಎನ್ನುವ ಆತ್ಮತೃಪ್ತಿ ಇದೆ. ಅಪ್ಪನಿಗೂ ಬೇಸರ ಇರಲಿಲ್ಲ. ಅಜ್ಜನ ಹಾಗೆ ಪುಳ್ಳಿಯೂ ಎನ್ನುತ್ತಿದ್ದರು. ಆದರೆ ಆಗಾಗ ಎಚ್ಚರಿಸುತ್ತಿದ್ದರು. ಅಜ್ಜನ ಕೊನೆಯ ಕಾಲದ ಪರಿಸ್ಥಿತಿಗಳನ್ನು. ಹೀಗಾಗಿ ಆ ಸಭೆಯಲ್ಲಿ ಪ್ರಸ್ತಾಪವಾದ ನನ್ನ ಹೆಸರು ಅಪ್ಪ ಹೇಳಿದ ಸಂಗತಿಗಳು ತಾಳೆಯಾಯಿತು. ಈ ಕಾರಣದಿಂದಲೇ ಸಾಮಾಜಿಕ ಕೆಲಸಗಳಿಗೆ ವಿರಾಮ ನೀಡುತ್ತಿದ್ದೇನೆ.

ಆ ದಿನಗಳಲ್ಲಿ  ಸಾಮಾಜಿಕ ಕೆಲಸಗಳ ಕಡೆಗೆ ಹೆಜ್ಜೆ ಹೇಗಾಯಿತು ಹೇಳುತ್ತೇನೆ, ನನ್ನನ್ನುಅಲ್ಲಿಗೆ ಎಳೆದವರು ಯಾರು ?, ಏನೇನು ಆಗಿತ್ತು, ಏನೇನು ಮಾಡಿದೆ, ನನ್ನನ್ನು ಸಮಾಜದಲ್ಲಿ ವ್ಯಕ್ತಿಯಾಗಿ ರೂಪಿಸಿದ್ದು ಹೇಗೆ ? ಯಾರು?  ಹೇಳುತ್ತೇನೆ.