10 ಅಕ್ಟೋಬರ್ 2021

ಹೇಗೆ ಬದಲಾಯಿತು ವ್ಯವಸ್ಥೆ....! ಏಕೆ ಪಾಸಿವಿಟಿ ಬದಲಾಗುತ್ತಿದೆ...! ವ್ಯಕ್ತಿ ಪ್ರತಿಷ್ಟೆ ಏಕಾಗುತ್ತಿದೆ...!!



ನಿನ್ನೆ ಸಂಘದ "ಪಾಸಿಟಿವ್‌ ಶಕ್ತಿ" ಯ ಬಗ್ಗೆ ನನ್ನ ಅನುಭವ ಹೇಳಿದ್ದೆ. ಅದೊಂದು ಸಮುದ್ರ. ಆ ಸಮುದ್ರವನ್ನು ನೋಡುತ್ತಾ, ಓದುತ್ತಾ ತಿಳಿದದ್ದು ಅದು. ಹಾಗೆಂದು  ಯಾವತ್ತೂ ಆ ಅಗಾಧ ಶಕ್ತಿಯನ್ನು  ಟೀಕಿಸಲು ಸಾಧ್ಯವಿಲ್ಲ. ಏಕೆಂದರೆ ಅಲ್ಲಿ ಲೋಪವೇ ಇಲ್ಲ, ನೆಗೆಟಿವ್‌ ಅಂಶಗಳೇ ಇಲ್ಲ.

ಆದರೆ 2021  ರಲ್ಲಿ  ನಿಂತು ನೋಡಿದಾಗ ಇಪ್ಪತ್ತು ವರ್ಷಗಳಲ್ಲಿನ ಬದಲಾವಣೆ ಮಹತ್ವದ್ದು. ಅದಕ್ಕಿಂತಲೂ ಹಿಂದಿನವರಲ್ಲಿ ಮಾತನಾಡಿದರೆ ಭ್ರಮ ನಿರಸನವಾಗುತ್ತದೆ ಎನ್ನುತ್ತಾರೆ. ಹಾಗೆ ಭ್ರಮ ನಿರಸನವಾಗಲು Update  ಆಗದೇ ಇರುವ ಕೊರತೆಯೋ ಎಂದು ಹಲವು ಬಾರಿ ಅನಿಸುತ್ತದೆ. ಇಂದಿನ ಯುಗ ವೇಗದ್ದು. ಈ ವೇಗದ ಯುಗದಲ್ಲಿ ತಕ್ಷಣವೇ ಅಪ್ಡೇಟ್‌ ಆಗಬೇಕಾಗುತ್ತದೆ. ಈ ವೇಗದ ಪರಿಣಾಮ ಪುಸ್ತಕಗಳಲ್ಲಿ ಕಾಣುವ ಯಾವ ಪಾಸಿಟಿವ್‌ ಶಕ್ತಿಗಳೂ ತಳಮಟ್ಟದಲ್ಲಿ ಕಾಣುತ್ತಿಲ್ಲ. ಹೀಗಾಗಿ ಹಿರಿಯ ಅನೇಕರಿಗೆ ಭ್ರಮನಿರಸನವಾಗುವುದು  ಸಹಜ. ಅವರನ್ನು ಬದಿಗೆ ಸರಿಸುವುದು  ಸಹಜವೇ, ಅವರೇ ಅಡ್ಡಿಯಾಗುವುದು ಸಹಜವೇ. ಏಷ್ಟೆಂದರೆ "ಅವರೇನೂ ಮಾಡಿಲ್ಲ..." ಎನ್ನುವಷ್ಟು ಬದಿಗೆ ತಳ್ಳುವುದು  ಸಹಜ ಪ್ರಕ್ರಿಯೆ. ಅಂತಹ ಮೌಲ್ಯಗಳು ಇಂದು ಬೆಳೆಯುತ್ತಿರುವ ಕಾರಣವೇ ಯಾರು ಟೀಕೆ ಮಾಡಿದರೂ ತಕ್ಷಣವೇ ಯಾರಿದಂಲೋ ಪ್ರತಿಕ್ರಿಯೆ ಕೊಡಿಸಬೇಕಾಗುತ್ತದೆ. ಯಾರಿಂದಲೋ ಮಣಿಸುವ ವ್ಯವಸ್ಥೆ ಮಾಡಬೇಕಾಗುತ್ತದೆ. ಪ್ರತಿಕ್ರಿಯೆ ನೀಡಬೇಡಿ ಎಂದೂ ಹೇಳುವವರೂ ಇಲ್ಲದೇ ಇರುವುದೂ ಅದಕ್ಕೆ . ಏಕೆಂದರೆ ಈಗ ಅಧಿಕಾರ ಅಂದರೆ ಪವರ್‌ ಕೇಂದ್ರಿತ ವ್ಯವಸ್ಥೆ..!. ಇದರರ್ಥ ಆಂತರಿಕವಾದ ಮೌಲ್ಯಗಳ ಕುಸಿತ, ಬೌದ್ಧಿಕ, ವೈಚಾರಿಕ ವಿಷಯಗಳ ಕೊರತೆ, ಅಧಿಕಾರ ಕೇಂದ್ರಿತವಾದ ವ್ಯವಸ್ಥೆ, ಓಲೈಕೆಯ ಭಾಗ ಹೆಚ್ಚಾಗಿದೆ. 

ಈ ಬದಲಾವಣೆಯ ಪರ್ವಗಳು ಆರಂಭವಾಗಿ ಹಲವು ಸಮಯಗಳು ಆದವು. ಈಗ ಅದರ ಪರಮೋಚ್ಛ ಸ್ಥಿತಿಯಷ್ಟೇ. ಸುಮ್ಮನೆ ಗಮನಿಸಿದರೆ ಸಂಘವು ಎಂದೂ ಟೀಕೆಗಳಿಗೆ ಉತ್ತರಿಸುತ್ತಿದ್ದು ಕಡಿಮೆಯೇ. ಟೀಕೆಗಳಿಗೆ ಕಾರ್ಯದ ಮೂಲಕ ಉತ್ತರ ಸಿಗುತ್ತಿತ್ತು ಅಷ್ಟೇ. ಈಗ ಹಾಗಲ್ಲ, ವಿವಿಧ ವಿಭಾಗಗಳು ಇದ್ದರೂ ಅಧಿಕಾರ ಕೇಂದ್ರಿತವಾದ ವ್ಯವಸ್ಥೆಗಳು ಬಲಗೊಂಡಿವೆ. ಸಂಘದ ಅಂಗ ಎನಿಸಿದ ಬಿಜೆಪಿಯೇ ಇಂದು ಸಂಘವಾಗಿ ಕಾಣುತ್ತದೆ. ಸಂಘದ ವಿವಿಧ ಸಂಘಟನೆಗಳು ಇದ್ದರೂ ಸಹಕಾರ ಭಾರತಿ, ಬಿಜೆಪಿ ಮಾತ್ರವೇ ಸಂಘ ಎಂದು ಕಾಣುತ್ತದೆ, ಅಲ್ಲಿ ಅಧಿಕಾರ ಪಡೆಯುವುದೇ ಸರ್ವ ಶ್ರೇಷ್ಟ ಎಂದು ಅನಿಸಿದೆ. ಇದಕ್ಕಾಗಿ ಸಂಘದ ಯಾರನ್ನೋ ಓಲೈಕೆ ಮಾಡಲೇಬೇಕು ಎಂಬುದು ಸರ್ವ ವಿಧಿತವಾಗಿದೆ. ಸಂಘದ ಉಳಿದ ಯಾವ ವಿಭಾಗದಲ್ಲೂ ಕೆಲಸ ಮಾಡುವುದೇ ನಗಣ್ಯವಾಗಿ ಬಿಡುತ್ತಿದೆ. ಬಿಜೆಪಿ, ಸಹಕಾರ ಭಾರತಿಯಲ್ಲಿ ಕೆಲಸ ಮಾಡಿದವನು ಮಾತ್ರವೇ ಕಾರ್ಯಕರ್ತ ಎಂಬ ಮಟ್ಟಿಗೆ ಬಂದಿರುವುದು  ಈಗ ಬಹಿರಂಗ ಸಂಗತಿ. ಈ ಕಾರಣದಿಂದಲೇ ಇಂದು ಸೇವೆಗಿಂತಲೂ ಹೆಚ್ಚು ಓಲೈಕೆ ಎದ್ದು ಕಾಣುತ್ತದೆ. ಇದೆಲ್ಲಾ ಇವತ್ತು ಬಹುದೊಡ್ಡ ಪಾಸಿಟಿವ್‌ ಶಕ್ತಿಯೊಳಗೆ ನೆಗೆಟಿವ್‌ ಚಕ್ರಗಳು ಸುತ್ತುತ್ತಿವೆ.

 ಈ ಕಾರಣದಿಂದಲೇ ಇಂದು ಕುಮಾರಸ್ವಾಮಿಯವರ ಹೇಳಿಕೆಗೆ ಇನ್ನಿಲ್ಲದಂತೆ ಎದ್ದು ಬಿದ್ದು ಹೇಳಿಕೆ ನೀಡಲೇಬೇಕಾಗಿ ಬಂತೇನೋ ಎಂದು ಅನಿಸುತ್ತದೆ. ಹಾಗಿದ್ದರೆ ಮೂಲ ವಿಚಾರದಲ್ಲಿ ಪ.ಪೂ ಗುರೂಜಿ ಅವರು ," ಸಂಘಟನೆಯಲ್ಲಿ  ಅಹಂಕಾರ, ದರ್ಪ, ಒತ್ತಾಯ ಅಥವಾ ವ್ಯಕ್ತಿ ಪ್ರತಿಷ್ಟೆಗೆ ಅವಕಾಶವಿಲ್ಲ ಇವುಗಳಿಂದ ಸಂಘಟನೆಯಾಗುವುದಿಲ್ಲ. ವ್ಯಕ್ತಿಗತ ಅಭಿಮಾನದ ಲವಲೇಶವೂ ಇಲ್ಲದವರಿಂದಲೇ ಸಂಘಟನೆ ಕಟ್ಟಲು ಸಾಧ್ಯವಾಗುತ್ತದೆ" ಎಂದು ಹೇಳಿರುವುದಕ್ಕೆ ಅರ್ಥ ನೀಡಲು ಸಾಧ್ಯವಾಗುತ್ತದೆಯೇ ಎಂಬುದು ಪ್ರಶ್ನೆ. ಯಾವುದೇ ಕಾರ್ಯಕ್ರಮದ ಮೊದಲು ಓದುವ ಸುಭಾಷಿತ ಓದಲು ಮಾತ್ರವೇ ಸೀಮಿತವಾಗಿದೆ ಎನ್ನುವುದು  ಸುಳ್ಳಲ್ಲ.ಇವತ್ತು ಇಂತಹ ಹಲವು ನೆಗೆಟಿವ್‌ ಅಂಶಗಳು ಎದ್ದು ಕಾಣುವ ಕಾರಣದಿಂದಲೇ ತಳಮಟ್ಟದಲ್ಲಿ ಇತರೆಲ್ಲಾ ಸಂಘಟನೆಗಳಂತೆಯೇ ಎಲ್ಲಾ ವಿಭಾಗದಲ್ಲೂ ಒಬ್ಬನೇ ಕಾರ್ಯಕರ್ತ ಓಡಾಟ ಮಾಡುವ ಸ್ಥಿತಿ ಹೆಚ್ಚಾಗಿದೆ. ಅವನು ಭ್ರಷ್ಟಾಚಾರದಲ್ಲೂ, ಜಾತಿ ಸಂಘಟನೆಗಳಲ್ಲೂ , ಪಕ್ಷದಲ್ಲೂ, ಇತರ ಸಂಘಟನೆಯಲ್ಲೂ ಏಕ ವ್ಯಕ್ತಿ..!. ಇದು ಸಂಘಟನೆಯಲ್ಲಿಯೇ ಗೊತ್ತಿಲ್ಲದೆ ಆಗುತ್ತಿರುವ ಬದಲಾವಣೆ. 

ಹೀಗಾಗಿ ಹಿಂದೂ ಸಮಾಜದ ಅಡಿಪಾಯವನ್ನು ಬಲಪಡಿಸುವ ಮತ್ತು ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ, ಧಾರ್ಮಿಕ, ತಾತ್ವಿಕ ಮತ್ತು ರಾಜಕೀಯ  ಸವಾಲುಗಳನ್ನು ಎದುರಿಸುವ ಉದ್ದೇಶದಿಂದ  1925 ರಲ್ಲಿ ಸ್ಥಾಪಿಸಿದ ಆರ್‌ ಎಸ್‌ ಎಸ್‌ ಗೂ 2021 ರಲ್ಲಿ  ಕಾಣುವ ಆರ್‌ ಎಸ್‌ ಎಸ್‌ ಗೂ ಬದಲಾವಣೆ ಕಾಣುತ್ತದೆ. ಅಂದು ಭಗವಾಧ್ವಜದ ಹಿಂದೆ ಸಾಗಿ ವ್ಯಕ್ತಿಗಳು ಬದಲಾಗುತ್ತಾ ಇಂದು ವ್ಯಕ್ತಿಯ ಹಿಂದೆ ಗೊತ್ತಿಲ್ಲದೇ ತೆರಳುವ, ಗುಂಪುಗಳಾಗುವ ಹಂತ ಬಂದಿದೆ.ಇದಕ್ಕೆ ಕಾರಣ ಅಧಿಕಾರ ಹಾಗೂ ವ್ಯಕ್ತಿ ಪ್ರತಿಷ್ಟೆ.ಎಷ್ಟೆಂದರೆ ತಳಮಟ್ಟದಲ್ಲೂ ಜವಾಬ್ದಾರಿಯ ಹಂತಕ್ಕೆ ಬಂದಾಗ "ಅವನನ್ನು ಮಾಡಿ" "ಇವನನ್ನು ಬಿಡಿ" ಎಂದು ಹೇಳುವಷ್ಟು...!. ಹೀಗಾಗಿ ಈಗ ಗುಂಪುಗಳ ಸಂಖ್ಯೆ ಗೊತ್ತಿಲ್ಲದೆಯೇ ಹೆಚ್ಚಾಗಿದೆ.

ಇದರಿಂದಾಚೆ ಬಂದರೆ,

ಅಧಿಕಾರಗಳು ಲಭಿಸಲು ಆರಂಭವಾಯಿತು. ಅಂದಿನಿಂದಲೇ ಅಧಿಕಾರ ಕೇಂದ್ರಿತ ವ್ಯವಸ್ಥೆಗಳಾಗಿ ಮೂಲ ಸಂಗತಿಗಳು ಬದಲಾದವು. ಕೆಲವು ವರ್ಷದ ಹಿಂದೆ ಒಂದು ಪ್ರಮುಖ ದೇವಸ್ಥಾನದ ಆಡಳಿತ ಲಭ್ಯವಾಯಿತು. ಅಲ್ಲಿ ಸ್ವಚ್ಛ ಆಡಳಿತದ ನಿರೀಕ್ಷೆ ಎಲ್ಲರಲ್ಲೂ ಇತ್ತು. ಆದರೆ ಅಲ್ಲೊಂದು ಲೋಪ ಆಗಿತ್ತು. ಅದೊಂದು ಟೆಂಡರ್‌ ಪ್ರಕ್ರಿಯೆಯ ಸಂಗತಿ. ಆಗ ನಾನು ಪತ್ರಿಕೆಯಲ್ಲಿದ್ದೆ. ಪಕ್ಕಾ ಸ್ವಯಂಸೇವಕ. ಇತರ ಭಾಷೆಯಲ್ಲಿ ಹೇಳುವುದಾದರೆ ಚಡ್ಡಿ ಪತ್ರಕರ್ತ. ಒಬ್ಬರು ಕೆಲವು ದಾಖಲೆ ತಂದು ತೋರಿಸಿದರು. ತಕ್ಷಣ ನಾನು ಸುದ್ದಿ ಮಾಡುವ ಬದಲು ಸಂಬಂಧಿತರ ಗಮನಕ್ಕೆ ತಂದು ಸುಮ್ಮನಾದೆ...!. ಆ ಸುದ್ದಿ ಸತ್ತು ಹೋಯಿತು. ಊರಿಗಿಡೀ ತಿಳಿಯಲೂ ಇಲ್ಲ...!. ಎಷ್ಟೆಂದೆರೆ ಆ ದಾಖಲೆ ನಾನು ಇರಿಸಿಕೊಳ್ಳಲೂ ಇಲ್ಲ...!. ಈ ಕಡೆ ಮಾಹಿತಿ ನೀಡಿದ ವ್ಯಕ್ತಿ ನನ್ನ ಮೇಲಿನ ನಂಬಿಕೆ ಕಳೆದುಕೊಂಡರು. 2021 ರಲ್ಲಿ ಇದನ್ನು ನೋಡಿದರೆ ಇಂತಹ ಹಲವು ಸಂಗತಿಗಳು ಕಾಣುತ್ತಿವೆ.....! 

ಇನ್ನೊಂದು ಸಂಗತಿ,  ಒಮ್ಮೆ ಒಬ್ಬರೊಂದಿಗೆ ಮಾತನಾಡುತ್ತಿದ್ದೆ. ಅವರು ನಾನು ಅತ್ಯಂತ ಗೌರವಿಸುವ ವ್ಯಕ್ತಿ. ಹಲವು ಸಂಗತಿಗಳು ಅವರು ಹೇಳಿದರೆ ಮುಗಿಯಿತು. ಏಕೆಂದರೆ ಅದರಲ್ಲಿ ಯಾವುದೇ ಕಲ್ಮಶವಿಲ್ಲ ಹಾಗೂ ಅದು ಸತ್ಯ ಅಂತಲೇ ನಂಬುತ್ತಿದ್ದೆ. ಏಕೆಂದರೆ ಆ ವ್ಯಕ್ತಿ ಅಷ್ಟೊಂದು ಪ್ರಾಮಾಣಿಕ.  ಅದೊಬ್ಬ ವ್ಯಕ್ತಿಯನ್ನು ಉದ್ದೇಶಿಸಿ ಅವರು ಒಮ್ಮೆ ಹೀಗೆ ಮಾತನಾಡುತ್ತಾರೆ, " ಅವನು ನಮ್ಮನ್ನು ಬಿಟ್ಟರೆ ಏನೂ ಇಲ್ಲ. ಸಂಘಟನೆ ಅಂದರೆ ಹಾಗೇ, ಅವನನ್ನು ಯಾರೂ ಸೇರಿಸಿಕೊಳ್ಳುವುದಿಲ್ಲ, ಅವನು ಹಾಗೆ... ನಾವು ಇವನನ್ನು ಹೊರಗೆ ಇರಿಸಿದ್ದೇವೆ, ಇವನು ಅನಗತ್ಯ ಪ್ರಶ್ನೆ ಮಾಡುತ್ತಾನೆ....  ಇತ್ಯಾದಿ ಸಂಗತಿಗಳನ್ನು ಹೇಳಿದರು. ಆ ಕ್ಷಣದಲ್ಲಿ ನಾನು ಹೌದು ಎಂದು ಒಪ್ಪಿಕೊಂಡೆ  ಏಕೆಂದರೆ ಆ ವ್ಯಕ್ತಿ ಅಂದು ಹಾಗೆಯೇ ಇದ್ದ ಕೂಡಾ  ಹಾಗೂ ನಾನೂ ಯಾವುದನ್ನೂ ಯೋಚಿಸದೇ ಅದನ್ನು ಅನುಸರಿಸಿದೆ ಕೂಡಾ. ಏಕೆಂದರೆ ಅವರು ನಿಲ್ಕಷ್ಮಶ ಎಂದು ಅಂದುಕೊಂಡಿದ್ದೆ....!  2021 ರಲ್ಲಿ ನಿಂತು ಆಲೋಚಿಸುವಾಗ , ಚಿಂತನೆಗಳಲ್ಲಿ  ವ್ಯತ್ಯಾಸ ಆದದ್ದು ಅರಿವಾಯಿತು, ಕಲುಷಿತವಾದ್ದು ಎಲ್ಲಿ ಎಂದು ಯೋಚಿಸುವಂತೆ ಮಾಡಿತು ಹಲವು ಸಂಗತಿಗಳು...!. 

 ಅಂತಹ ಹಲವು ಸಂಗತಿಗಳು ಇವೆ ನಾಳೆ ಬರೆಯುತ್ತೇನೆ. .........




 

ಕಾಮೆಂಟ್‌ಗಳಿಲ್ಲ: