28 ಜನವರಿ 2018

ಉದ್ಯೋಗಗಳ ಹುಡುಕಾಟದ ಹುಡುಗರಿಗೆ ಕೃಷಿ ಹುಡುಗಾಟ..!




ಕೃಷಿ ಲಾಭದಾಯಕ ಅಲ್ಲ ಅಂತ ನಾನು ಓದಿದ್ದೆ. ಅನೇಕ ಹಿರಿಯರೂ ಹೇಳುವುದನ್ನು  ಕೇಳಿದ್ದೆ. ಆದರೆ ಈಗ ತಿಳಿಯಿತು, ಕೃಷಿಯೂ ಒಂದು ಲಾಭದಾಯಕ, ಅದಕ್ಕಿಂತಲೂ ಹೆಚ್ಚು ಖುಷಿ ಕೊಡುತ್ತದೆ, ನೆಮ್ಮದಿ ನೀಡುತ್ತದೆ ಎನ್ನುವುದು  ಅರಿಯುವ ಹೊತ್ತು ತಡವಾಯಿತು ಎಂದು ಶ್ಯಾಮ ಪ್ರಕಾಶ್ ಹೇಳುವಾಗ ಇಡೀ ಕೃಷಿ ಬದುಕಿನ , ಕೃಷಿ ಕ್ಷೇತ್ರದ ಕತೆ ತೆರೆದಿಟ್ಟಿತು.
 ಒಂದೇ ಒಂದು ಕಡೆ ಕೃಷಿಯೂ ಒಂದು ಲಾಭದಾಯಕ ಎನ್ನುವುದನ್ನು  ನಿಜಾರ್ಥಲ್ಲಿ ತಿಳಿಸುವ ಕೆಲಸ ಆಗದೇ ಇರುವುದು ಕಂಡಿತು.
ಇದೇ ಕಾರಣದಿಂದ ಬೇಸಾಯ ಲಾಭದಾಯಕ ಅಲ್ಲ ಎನ್ನುವ ತೀರ್ಮಾನಕ್ಕೆ ಬಂದಿರುವ ರೈತರು ಪರ್ಯಾಯ ಉದ್ಯೋಗಗಳ ಹುಡುಕಾಟದಲ್ಲಿದ್ದಾರೆ. ಆದರೆ ಕೆಲವರು ಬೇಸಾಯದಲ್ಲೇ ಬದುಕು ರೂಪಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಅಂತಹವರು ಕೆಲವೇ ಕೆಲವು ಮಂದಿ. ಅವರೂ ಈಗ ಮಾದರಿಯಾಗುತ್ತಿದ್ದಾರೆ. ಈ ಯಶೋಗಾಥೆಗಳ ಕಡೆಗೆ ಬೆಳಕು ಏಕೆ ಚೆಲ್ಲಲಾಗುತ್ತಿಲ್ಲ. ರೈತರ ಯಶೋಗಾಥೆ ಧಾರಾವಾಹಿಗಳು ಏಕೆ ಆಗಬಾರದು ? ಧಾರಾವಾಹಿಗಳ ರೂಪದಲ್ಲಿ ರೈತರ ಯಶೋಗಾಥೆಗಳನ್ನೇ ತೋರಿಸಿ ಅವರಲ್ಲಿ ಸ್ಥೈರ್ಯ ತುಂಬಬಾರದು ಎಂಬ ಪ್ರಶ್ನೆ ಇದೆ. ಏಕೆಂದರೆ ಇಂದಿಗೂ ಉದ್ಯೋಗ ಬಿಟ್ಟು ಕೃಷಿ ಮಾಡುವ ನೂರಾರು ಯುವಕರು ಇದ್ದಾರೆ, ಇವರಿಗೆ ಸ್ಥೈರ್ಯ ತುಂಬುವ ಕೆಲಸವಾಗಬೇಕಿದೆ. ಏಕೆಂದರೆ ರೈತರು ಪತ್ರಿಕೆಗಳಿಂದ, ಟಿ.ವಿ. ವಾಹಿನಿಗಳಿಂದ  ನಿರೀಕ್ಷಿಸುವುದು ಕೂಡಾ ಇದೇ ಸಂಗತಿಯನ್ನು. ಯುವಕರಿಗೆ ಧೈರ್ಯ ಕೊಡಬಲ್ಲ ಅನೇಕ ಘಟನೆಗಳು ಇವೆ ಅಂತಹವುಗಳು ಸ್ಫೂರ್ತಿಯಾಗಬೇಕಿದೆ.

ಹಾವೇರಿ ಜಿಲ್ಲೆ ಹಾನಗಲ್ಲ ತಾಲೂಕಿನ ಕಾಮನಹಳ್ಳಿಯ ಯುವ ರೈತ ಮುತ್ತಣ್ಣ ಅವರೂ ಒಬ್ಬರು. ಇವರ ಕೃಷಿ ಯಶೋಗಾಥೆ ಎಲ್ಲಾ ರೈತರಿಗೂ ಮಾದರಿ. ಕುರಿ ಕಾಯುತ್ತಾ ನೂರಾರು ಕಿಮೀ ಸುತ್ತುತ್ತಿದ್ದ ಇವರು ಕುರಿ ಮಾರಾಟ ಮಾಡುತ್ತಾ ಉಳಿತಾಯ ಮಾಡುತ್ತಾ ಬಂಜರು ಭೂಮಿಯನ್ನು ಖರೀದಿಸಿದರು. ಬಳಿಕ ಈ ಭೂಮಿಯಲ್ಲಿ ಗೋವಿನಜೋಳ, ಹಲಸಂದಿ, ರಾಗಿ, ಉದ್ದು ಮುಂತಾದ ಬೆಳೆಗಳನ್ನು ಬೆಳೆದರು. ಧೈರ್ಯ ತಂದುಕೊಂಡರು. ಬಂಜರು ಭೂಮಿ ಹದವಾದ ಬಳಿಕ ಮಾವಿನ ಕೃಷಿ ಮಾಡಿದರು. ಅಲ್ಲಿಂದ ತನ್ನ ಆದಾಯವನ್ನು ಹೆಚ್ಚಿಸಿಕೊಳ್ಳುತ್ತಾ ಸಾಗಿದರು. ಬಂಜರು ಭೂಮಿ ಬಂಗಾರದ ಭೂಮಿಯಾಯಿತು. ಅಲ್ಲಿಂದ ಕೃಷಿಯನ್ನು ಬದಲಾಯಿಸುತ್ತಾ, ಇದ್ದ ಕೃಷಿ ಬೆಳೆಸಿಕೊಳ್ಳುತ್ತಾ ಸಾಗಿದ ಮುತ್ತಣ್ಣ ಇಂದು ಲಕ್ಷ ಸಂಪಾದನೆ ಮಾಡುತ್ತಾರೆ. ಅಂದರೆ ಕುರಿ ಕಾಯುವಲ್ಲಿಂದ ತನ್ನ ಧೈರ್ಯ ಹಾಗೂ ಪ್ರೋತ್ಸಾಹದಿಂದ ಯಶಸ್ಸು ಕಂಡರು.
28 ವರ್ಷದ ಸಾಫ್ಟ್‍ವೇರ್ ಉದ್ಯೋಗಿ ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ನಂದಿಗುಡಿ ಗ್ರಾಮದ ಸೌರಭ, ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಸತ್ತಿಗೇರಿ ಗ್ರಾಮದ ಹೊಲವೊಂದನ್ನು ಬಾಡಿಗೆಗೆ ಪಡೆದು ಅಲ್ಲಿ ಸಾವಯವ ಕೃಷಿಯಲ್ಲಿ ತೊಡಗಿಕೊಂಡು ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಅಂದು ಎಳವೆಯಲ್ಲಿ ಹಿರಿಯರ ಜೊತೆ ಹೊಲದಲ್ಲಿ ಓಡಾಡಿದ ನೆನಪು ತ್ತೆ ಮಣ್ಣಿನ ಕಡೆಗೆ ಸೆಳೆಯಿತು. ಹಣಕ್ಕಾಗಿ ಕೃಷಿಯಲ್ಲ, ಬದುಕಿಗಾಗಿ ಕೃಷಿ ಎನ್ನುವುದನ್ನು ರೈತರಿಗೆ ಮನದಟ್ಟು ಮಾಡಬೇಕೆಂದು ನಿಶ್ಚಿಯಿಸಿಯೇ ಕೃಷಿ ಆರಂಭಿಸಿ ಯಶಸ್ಸು ಕಂಡರು.

ಕೃಷಿಯಿಂದ ಯುವ ಸಮೂಹ ವಿಮುಖವಾಗುತ್ತಿದೆ ಎನ್ನುವ ಸಾರ್ವತ್ರಿಕ ಅಭಿಪ್ರಾಯ ಅನೇಕ ಬಾರಿ ಸುಳ್ಳೂ ಆದದ್ದಿದೆ. ಬಹುತೇಕ ಸಂದರ್ಭ ಕೃಷಿಯೇ ಕಷ್ಟ ಎನ್ನುವ ಸಾರ್ವತ್ರಿಕ ಅಭಿಪ್ರಾಯವೇ ಉದ್ಯೋಗದ ಹುಡುಕಾಟದಲ್ಲಿ ನಮ್ಮೂರಿನ ಹುಡುಗರಿಗೆ ಕೃಷಿ ಉದ್ಯೋಗವೇ ಅಲ್ಲ ಎನಿಸಿಬಿಡುತ್ತದೆ. ಇತ್ತೀಚೆಗೆ ಕೃಷಿ ಕಡೆಗೆ ಆಸಕ್ತಿ ಹೆಚ್ಚಾಗುತ್ತಿದೆ. ಮೊನ್ನೆ ಮೊನ್ನೆ ನಡೆಸಿದ ಸಮೀಕ್ಷೆ ಒಂದರಲ್ಲಿ ಸುಮಾರು 1200 ಮಂದಿ ಸಾಫ್ಟ್ ವೇರ್ ಉದ್ಯೋಗ ಬಿಟ್ಟು ಕೃಷಿ ಕಡೆಗೆ ಬಂದವರಿದ್ದಾರೆ. ಇನ್ನೂ ಹಲವಾರು ಆಸಕ್ತರಿದ್ದಾರೆ. ಓದಿದ ಅನೇಕರು ಈಗಲೂ ಕೃಷಿ ಕಡೆಗೆ ಆಸಕ್ತರಾಗಿದ್ದಾರೆ. ಇದು ಕೃಷಿಗೆ ಮತ್ತೊಂದು ಮೆಟ್ಟಿಲಾಗುತ್ತಿದೆ. ಈಗ ಕೃಷಿ ಒಂದು ಉದ್ಯೋಗ, ಖುಷಿ ನೀಡುವ ಕಾಯಕ ಎಂದು ಮನವರಿಕೆ ಮಾಡುವ ಕೆಲಸ ಆಗಬೇಕಿದೆ. ಇದಕ್ಕಾಗಿ ಶ್ಯಾಮ ಪ್ರಕಾಶ್ ಹೇಳುವ ಮಾತು ಮತ್ತೆ ಮತ್ತೆ ನೆನಪಾಗುತ್ತದೆ.

( ಹೊಸದಿಗಂತ - ಮಣ್ಣಿಗೆ ಮೆಟ್ಟಿಲು )

04 ಜನವರಿ 2018

ಬತ್ತಿ ಹೋದ ನದಿ ಮತ್ತೆ ಹರಿದ ಕತೆ....




ಬೆಂಗಳೂರಿನ ಆ ಪ್ರದೇಶದ ಕೊಳವೆಬಾವಿಯಲ್ಲಿ 200 ಅಡಿಯಲ್ಲಿದ್ದ ನೀರು ಬರಿದಾಗಿದೆ. ಈಗ 1 ಸಾವಿರ ಅಡಿ ಕೊರೆದರೂ ನೀರು ಅಷ್ಟಕ್ಕಷ್ಟೆ....!, ಎಂದು ರಜನಿ ಹೇಳುವಾಗ ಮನಸ್ಸಿನಲ್ಲಿ ಆತಂಕ ಇತ್ತು. ಅನೇಕ ವರ್ಷಗಳಿಂದ ಕೊಳವೆಬಾವಿಯಿಂದ ನೀರು ತೆಗೆದಿದ್ದೇ ಹೊರತು ತುಂಬಿಸಿ ಗೊತ್ತಿರಲಿಲ್ಲ ಎನ್ನುವಾಗ ವಿಷಾದ ಇತ್ತು.

ದಕ್ಷಿಣ ಕನ್ನಡ ಜಿಲ್ಲೆಯ ತಾಲೂಕು ಕೇಂದ್ರದ ಅಧಿಕಾರಿಯೊಬ್ಬರು, "ನದಿ ನೀರು ಬರಿದಾದರೆ ಭಯ ಇಲ್ಲ, ನಮ್ಮಲ್ಲಿ 700 ಕೊಳವೆಬಾವಿ ಇದೆ" ಎನ್ನುವಾಗ ಧೈರ್ಯ ಇತ್ತು. ಆದರೆ ನಗರದ ಪ್ರತೀ ಮನೆಯಲ್ಲೂ ಇರುವ ಕೊಳವೆಬಾವಿಗೆ, ಬಾವಿ ಜಲಮರುಪೂರಣ ಕಡ್ಡಾಯ ಮಾಡುತ್ತೇವೆ ಎನ್ನುವ ಒಂದೇ ಒಂದು ಮಾತೂ ಹೊರಡಲಿಲ್ಲ..!. ಇಂದಿನ ವಾಸ್ತವ ಸ್ಥಿತಿ ಇದು. ಮಣ್ಣಿನಲ್ಲಿರುವ ನೀರು ಬರಿದಾಗಿ, ಆಳಕ್ಕೆ ಬಗೆದು ತೆಗೆಯುವ ಕೆಲಸದ ನಡುವೆಯೂ ಎಲ್ಲೋ ಅಲ್ಲಿ ಇಲ್ಲಿ ನೀರು ಉಳಿಸುವ, ಭೂಮಿ ಹಸನು ಮಾಡುವ  ಕಾರ್ಯವಾಗುತ್ತದೆ. ಅಂತಹ ಯಶೋಗಾಥೆಯೇ ಇಲ್ಲಿ ಮಾದರಿಯಾಗಬೇಕು. ನೀರಿಗಾಗಿ ನಡೆಯುವ, ಕೃಷಿ ಉಳಿಸಲು ನಡೆಯುವ ಕದನ ನಿಲ್ಲಬೇಕು.

ವಿಶ್ವದ ಒಟ್ಟು ಜನಸಂಖ್ಯೆಯಲ್ಲಿ ಶೇ.18 ರಷ್ಟು ಮಂದಿ ಭಾರತದಲ್ಲಿದ್ದಾರೆ. ಆದರೆ ಜಗತ್ತಿನಲ್ಲಿ ಒಟ್ಟು ಲಭ್ಯವಿರುವ ಜಲ ಸಂಪನ್ಮೂಲಗಳಲ್ಲಿ ಭಾರತ ಹೊಂದಿರುವ ಪಾಲು ಕೇವಲ ಶೇಕಡಾ 4 ಮಾತ್ರಾ. ಹೀಗಿರುವಾಗ ನೀರು ಉಳಿಸಲೇಬೇಕಿದೆ. ಏಕೆಂದರೆ ಭಾರತದ ಆರ್ಥಿಕತೆ ಕೃಷಿಯನ್ನೇ ಅವಲಂಬಿಸಿದೆ. ಈಗ ಕಾಡುವ ನೀರಿನ ಕೊರತೆ, ಹಾಗೂ ಕಾಡುವ ಬರಗಾಲ, ಇಂದು ಪರಿಸ್ಥಿತಿಯನ್ನು ವಿಕೋಪಕ್ಕೆ ತಂದು ನಿಲ್ಲಿಸಿದೆ. ಇದು ದೇಶದ ಆರ್ಥಿಕ ಪ್ರಗತಿ ಮೇಲೆ ದೊಡ್ಡ ಪರಿಣಾಮ ಬೀರುತ್ತಿದೆ. ರಾಜ್ಯದಲ್ಲೇ ಗಮನಿಸಿದರೆ ಸುಮಾರು 2500 ಕ್ಕೂ ಹೆಚ್ಚು ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಇದೆ. ಅದರಲ್ಲಿ ಸುಮಾರು 300 ಕ್ಕೂ ಹೆಚ್ಚು ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಆಗುತ್ತಿದೆ. ಇಂತಹ ಸಮಸ್ಯೆ ಗಮನಿಸಿಯೇ ದೇಶದ ಕೆಲವು ಸ್ವಯಂಸೇವಾ ಸಂಘಟನೆಗಳು ನೀರು ಉಳಿಸುವ ಕಾರ್ಯಕ್ಕೆ, ಇಡೀ ಗ್ರಾಮವನ್ನು ಜಾಗೃತಿ ಮಾಡುವ ಕೆಲಸ ಮಾಡುತ್ತಿದೆ. ಇಂತಹ ಕಾರ್ಯದಲ್ಲಿ ರಾಜಸ್ತಾನದ ಹಳ್ಳಿಯೊಂದು ನಮಗೂ ಮಾದರಿ ಎನಿಸಿದೆ.

ರಾಜಸ್ತಾನದ ಸಣ್ಣ ಗ್ರಾಮ ನಾಂಡೂ. ಕೃಷಿ ಇಲ್ಲಿನ ಜನರಿಗೆ ಪ್ರಧಾನ ಕಸುಬು. ಈ ಗ್ರಾಮದಲ್ಲಿ ಹರಿಯುವ ನಾಂಡೂವಾಲೀ ಎಂಬ ನದಿಯೊಂದು ಬತ್ತಿಹೋಗಿತ್ತು. ಹೀಗಾಗಿ ಇಲ್ಲಿನ ಕೃಷಿಕರಿಗೆ ಕೃಷಿಯೇ ಕಷ್ಟವಾಯಿತು. ನೀರಿಗಾಗಿ ಪರದಾಟ ನಡೆಸಬೇಕಾದ ಸ್ಥಿತಿ ನಿರ್ಮಾಣವಾಯಿತು. ಕೆಲವು ಮಂದಿ ಕೃಷಿ ಬಿಟ್ಟು ಬದುಕಿಗಾಗಿ ಬೇರೆ ಕಡೆಗೆ ತೆರಳಬೇಕಾಯಿತು. ಆದರೆ ಅಲ್ಲಿದ್ದ ಕೆಲವು ಕೃಷಿಕರು ಸರಕಾರದ ಸಹಾಯಕ್ಕೆ ಕಾಯದೆ ತಾವೇ ಪ್ರಯತ್ನ ನಡೆಸಿದರು, ನದಿ ಮತ್ತೆ ಹರಿಯುವಂತೆ ಮಾಡಲು ಪ್ರಯತ್ನ ಆರಂಭಿಸಿದರು. ಇದರ ಫಲವಾಗಿ ನದಿ ಮತ್ತೆ ಹರಿಯಿತು, ಕೆರೆ, ಬಾವಿ ತುಂಬಿದವು ಸಮೃದ್ಧ ಕೃಷಿ ಸಾಧ್ಯವಾಯಿತು. ನೀರಿಗಾಗಿ ಗಲಾಟೆಗಳೂ ಕಡಿಮೆಯಾದರೂ. ದೂರ ಹೋಗಿದ್ದ ಕೃಷಿಕರು ಮತ್ತೆ ಮಣ್ಣಿಗೆ ಬಂದರು. ರಾಜಸ್ತಾನದಲ್ಲಿ ಲಾಪೆÇೀಡಿಯಾ ಎಂಬ ಹಳ್ಳಿಯಿದೆ. ಇಲ್ಲಿ ಮೂರ್ನಾಲ್ಕು ವರ್ಷ 400 ಮಿ.ಮೀ. ಗಿಂತಲೂ ಕಡಿಮೆ ಮಳೆ ಸುರಿದ ಉದಾಹರಣೆ ಇದೆ. ಹಾಗಿದ್ದರೂ ಅಲ್ಲಿನ ಕೃಷಿಕರು ಭಯಗೊಂಡಿಲ್ಲ.

ಇಷ್ಟಕ್ಕೂ ಅಲ್ಲಿ ಆದದ್ದು ಏನು ? ಪ್ರಶ್ನೆ ಸಹಜ. ನಾಂಡೂ ಪ್ರದೇಶದಲ್ಲಿದ್ದ ಕಾಡನ್ನು ಜನರು ಸ್ವಂತ ಲಾಭಕ್ಕಾಗಿ ನಾಶ ಮಾಡಿದ ಪರಿಣಾಮ ಮಳೆ ಕಡಿಮೆಯಾಯಿತು, ನೀರಿನ ಒರತೆ ಕಡಿಮೆಯಾಯಿತು. ನದಿ ಬರಿದಾಯಿತು..!. ಇಂತಹ ಸಂದರ್ಭದಲ್ಲಿ ಅಲ್ಲಿನ ಪ್ರತಿಷ್ಠಾನವೊಂದು ಜನರನ್ನು ಪ್ರೇರೇಪಣೆ ಮಾಡಿ ಜನರನ್ನು ಒಂದು ಸೇರಿಸಿ ನಾಯಕತ್ವ ನೀಡಿ ಗ್ರಾಮದ ಅಂಚಿನಲ್ಲಿ ಅರಣ್ಯ  ಬೆಳೆಸಲಾಯಿತು. ನದಿಯ ಉಗಮ ಸ್ಥಳದಲ್ಲೂ ಕಾಡು ಬೆಳೆಯಿತು. ಜಲಸಂರಕ್ಷಣೆಯಲ್ಲಿ ಅರಣ್ಯದ ಪಾತ್ರ ಅತಿ ಮಹತ್ವದ್ದು ಎಂಬ ಅರಿವು ಜನರಿಗೆ ಮೂಡಿಸಲಾಯಿತು. ಇದಕ್ಕಾಗಿ ಜನರೇ ಸ್ವಯಂ ನಿಯಂತ್ರಣ ಮಾಡಿಕೊಂಡು ಅರಣ್ಯ ಕಡಿದವರಿಗೆ ಊರವರೇ ಶಿಕ್ಷೆ, ದಂಡ ವಿಧಿಸುವ ನಿರ್ಧಾರ ಮಾಡಿದರು. ಇದರ ಜೊತೆಗೇ ಮಳೆ ಬರುವಾಗ ನೀರು ಇಂಗಲು ಕೆರೆಗಳ ನಿರ್ಮಾಣ, ನೀರು ಇಂಗಲು ವ್ಯವಸ್ಥೆ, ಮದಕಗಳ ನಿರ್ಮಾಣ ಸೇರಿದಂತೆ ನೀರು ಅಲ್ಲಲ್ಲಿ ಇಂಗಲು ವಿವಿಧ ಪ್ರಯತ್ನ ಮಾಡಿದರು. ಇದರ ಪರಿಣಾಮವಾಗಿ ನದಿ ಮತ್ತೆ ಪುನರ್ ಜನ್ಮ ತಾಳಿತು, ನಿಧಾನವಾಗಿ ಮತ್ತೆ ಹರಿಯಲು ಆರಂಭಿಸಿತು. ಹೀಗಾಗಿ ನಾಂಡೂ ಗ್ರಾಮದ ಜನತೆಯ ಒಗ್ಗಟ್ಟಾದ ಪ್ರಯತ್ನ ಇತರ ಊರುಗಳಿಗೂ ಮಾದರಿಯಾಯಿತು. ಇದರ ಪರಿಣಾಮ ರಾಜಸ್ತಾನದ ಕೆಲವು ಹಳ್ಳಿಗಳಲ್ಲಿ ಬತ್ತಿದ ನದಿ ಮತ್ತೆ ಪುನರುಜ್ಜೀವಗೊಂಡಿತು. ಹಾಗೆ ನೋಡಿದರೆ ರಾಜಸ್ತಾನದಲ್ಲಿ ಇತ್ತೀಚೆಗಿನವರೆಗೆ ಸುಮಾರು 7 ಸಾವಿರ ಕೆರೆಗೆಳು ಮರುಜೀವಗೊಂಡಿದೆ. ಇದರಿಂದ ವಿವಿಧ ಗ್ರಾಮಗಳಲ್ಲಿ ನೀರಿನ ಮಟ್ಟವೂ ಏರಿದೆ. ಎಲ್ಲಾ ಕಡೆ ಗ್ರಾಮದ ಜನರ ಸಹಭಾಗಿತ್ವ, ಆಸಕ್ತಿ ಕಂಡಿದೆ.

ಹಾಗೆ ನೋಡಿದರೆ ಮಹಾರಾಷ್ಟ್ರದಲ್ಲಿರುವ ವನರಾಯ್ ಎನ್ನುವ ಟ್ರಸ್ಟ್ ಕಳೆದೆರಡು ದಶಕದಲ್ಲಿ ಮಹಾರಾಷ್ಟ್ರದಲ್ಲಿ ಅನೇಕ ಕಟ್ಟಗಳನ್ನು ಮರಳಿನಲ್ಲಿ ನಿರ್ಮಿಸಿ ಅಲ್ಲಿನ ಜನರ ಮನಗೆದ್ದಿವೆ. ಹೀಗಾಗಿ ಅಲ್ಲಿನ ಸರಕಾರವೂ ಈ ರಚನೆಯನ್ನು ಅಂಗೀಕರಿಸಿದೆ. ಹೀಗೆ ಕಟ್ಟಗಳನ್ನು ನಿರ್ಮಿಸುವುದರಿಂದ ಭೂಮಿಯಲ್ಲಿ ನೀರು ಇಂಗಿ ಅಂತರ್ಜಲ ಮಟ್ಟವು ಸೇರುವುದಲ್ಲದೆ ನೀರು ರಿಸರ್ವ್ ಆಗಿಯೇ ಇರುತ್ತದೆ ಎಂಬುದನ್ನೂ ಜನರಿಗೆ ಮನವರಿಕೆ ಮಾಡಿದೆ. ಚೆನ್ನೈನಲ್ಲಿ ಮಳೆ ನೀರಿಂಗಿಸುವುದು ಕಡ್ಡಾಯ ಮಾಡಲಾಗಿದೆ. ಆ ಬಳಿಕ ಗಮನಿಸಿದರೆ ಅಲ್ಲಿನ ಜಲಮಟ್ಟ ಏರಿಕೆ ಕಂಡಿದೆ.

ರಾಜ್ಯದಲ್ಲಿರುವ ಕೆರೆಗಳ ಹೂಳೆತ್ತುವ ಹಾಗೂ ಒತ್ತುವರಿಯಾದ ಕೆರೆಗಳು ಪುನರುಜ್ಜೀವನಗೊಂಡರೆ ರಾಜ್ಯದ ವಿವಿಧ ಹಳ್ಳಿಗಳಲ್ಲಿನ ನೀರಿನ ಸಮಸ್ಯೆ ಪರಿಹಾರದ ಆಶಾಭಾವನೆ ಇದೆ. ಅದರ ಜೊತೆಗೆ ಅಲ್ಲಲ್ಲಿ ಕಾಡು ಬೆಳೆಸುವ ಪ್ರವೃತ್ತಿಯೂ ನಡೆಯಬೇಕಿದೆ. ರಾಜ್ಯದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಂತಹ ಸಂಘಟನೆಗಳು ಸಮಾಜಮುಖಿಯಾಗಿ ಚಿಂತಿಸುತ್ತಾ ಕೆರೆಗಳ ಹೂಳೆತ್ತುವಿಕೆ ಸೇರಿದಂತೆ ಜಲಸಂರಕ್ಷಣೆಯತ್ತ ಕಾಳಜಿ ವಹಿಸುತ್ತಿದೆ. ಇದು ಇನ್ನು ಸಾಮೂಹಿಕ ಆಂದೋಲನವಾಗಬೇಕಿದೆ. ಇದಕ್ಕಾಗಿ ಸರಕಾರವನ್ನು ಕಾಯುವ ಬದಲು ಜನರೇ ಆಸಕ್ತಿ ವಹಿಸಬೇಕಾಗುತ್ತದೆ. ಕರ್ನಾಟಕದಲ್ಲಿ ಇಂದು ನೀರ ಉಳಿವಿಗೆ ಕಿಂಡಿ ಅಣೆಕಟ್ಟನ್ನು ನಿರ್ಮಿಸಲಾಗುತ್ತದೆ. ಅದರ ಜೊತೆಗೆ ಜನ ಸಾಂಪ್ರದಾಯಿಕ ಕಟ್ಟಗಳತ್ತವಾದರೂ ಯೋಚಿಸಬೇಕಾದ ಅನಿವಾರ್ಯತೆಯಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕೆದಿಲದಂತಹ ಪುಟ್ಟ ಗ್ರಾಮದಲ್ಲಿ ಸಾಮೂಹಿಕ ಕಟ್ಟಗಳನ್ನು ಜನರೇ ಆಸಕ್ತಿಯಿಂದ ನಿರ್ಮಾಣ ಮಾಡುವ ಮೂಲಕ ನೀರನ್ನು ಉಳಿಸುವ ಹಾಗೂ ಇಂಗಿಸುವ ಕೆಲಸ ಮಾಡುತ್ತಿದ್ದಾರೆ. ಕಾಸರಗೋಡು ಜಿಲ್ಲೆಯ ಏತಡ್ಕ ಪ್ರದೇಶದಲ್ಲಿ ದಶಕಗಳ ಹಿಂದಿನಿಂದಲೇ ಸಾಮೂಹಿಕ ಕಟ್ಟಗಳನ್ನು ಜನರೇ ಉತ್ಸಾಹದಿಂದ ನಿರ್ಮಾಣ ಮಾಡಿದ್ದರ ಫಲವಾಗಿ ಜನವರಿಯಲ್ಲಿಯೇ ಬತ್ತಿಹೋಗುತ್ತಿದ್ದ ನದಿ, ಕೆರೆ ಈಗ ಮಾರ್ಚ್-ಎಪ್ರಿಲ್‍ವರೆಗೆ ಜೀವಕಳೆಯಿಂದ ಕೂಡಿರುತ್ತದೆ. ಇದೆಲ್ಲಾ ನಾಳೆಯ ನೀರಿನ ನೆಮ್ಮದಿಗೆ ಮೆಟ್ಟಿಲುಗಳೇ ಆಗಿವೆ.

ಹಳ್ಳಿಯ ಮಂದಿ ನಾಳೆಯ ನೀರಿನ ನೆಮ್ಮದಿಗೆ ನಡೆಸುವ ಪ್ರಯತ್ನದ ಸಣ್ಣ ಪಾಲು ನಗರದ ಕೊಳವೆಬಾವಿಗಳಿಗೂ ನಡೆದರೆ , ಅದು ಕಡ್ಡಾಯವಾದರೆ, ಅಧಿಕಾರಿಗಳು ಆಸಕ್ತರಾದರೆ ನಾಳೆಗಳು ಸುಂದರವಾಗುವುರದಲ್ಲಿ ಸಂದೇಹವಿಲ್ಲ. ಇಲ್ಲದೇ ಇದ್ದರೆ ನೀರಿಗಾಗಿ ನಡೆಯುವ ಹೋರಾಟವೂ ತಾರ್ಕಿಕ ಅಂತ್ಯ ಕಾಣದು.

( ಹೊಸದಿಗಂತ - ಮಣ್ಣಿಗೆಮೆಟ್ಟಿಲು )