17 ಮಾರ್ಚ್ 2018

ಕೃಷಿಕರೇ ಕಂಡುಹಿಡಿಯಬೇಕಾದ "ಇ" ಕೃಷಿ ಮಾರುಕಟ್ಟೆ ವ್ಯವಸ್ಥೆ







ಕಳೆದ ಕೆಲವು ದಿನಗಳ ಹಿಂದೆ ಕಾಳುಮೆಣಸು ದರ ಇಳಿಕೆಯ ಹಾದಿಯಲ್ಲಿತ್ತು. ಹಾಗಿದ್ದರೂ ಕೃಷಿಕ ಶಂಕರ ಭಟ್ ಈ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಜೊತೆಗೆ ಮಾತನಾಡುತ್ತಾ, "ಇಂದಿಗೂ ನಾನು ಕಾಳುಮೆಣಸನ್ನು ಕನಿಷ್ಠ 800 ರೂಪಾಯಿಗೆ ಮಾರಾಟ ಮಾಡುತ್ತಿದ್ದೇನೆ" ಎನ್ನುತ್ತಿದ್ದರು. ಅದು ಹೇಗೆ ಎಂದು ಕೇಳಿದಾಗ ಅವರು ಹೇಳಿದ್ದು "ಆನ್‍ಲೈನ್" ಮಾರುಕಟ್ಟೆ, ಇ ಮಾರುಕಟ್ಟೆಯ ಹೆಸರು. ಹಾಗಿದ್ದರೆ, ಕೃಷಿಕರಿಗೂ ಆನ್‍ಲೈನ್ ಮೂಲಕ ತಾವೇ ಬೆಳೆಯುವ ಕೃಷಿ ವಸ್ತುಗಳ ಮಾರಾಟ ಸಾಧ್ಯವೇ ಎಂಬ ಪ್ರಶ್ನೆ ಬಂದಾಗ, ಬಹುತೇಕ ಕೃಷಿಕರ ಮಕ್ಕಳು ಇರುವುದು ನಗರದಲ್ಲಿ. ಹಾಗಿದ್ದರೆ ಏಕೆ ಕಷ್ಟ ಎಂಬ ಮರುಪ್ರಶ್ನೆ...!.

ಭಾರತ ಕೃಷಿ ದೇಶ, ಭಾರತದ ಆರ್ಥಿಕ ವ್ಯವಸ್ಥೆ ನಿಂತಿರುವುದೇ ಕೃಷಿ ಮೇಲೆಯೇ. ಹೀಗಿರುವಾಗ ಕೃಷಿಯ ಲೆಕ್ಕಾಚಾರ , ಕೃಷಿ ಉತ್ಪಾದನೆಯ ವ್ಯವಹಾರ, ಕೃಷಿ ಮಾರುಕಟ್ಟೆಯನ್ನು ಲೆಕ್ಕ ಹಾಕುವುದು ಅನಿವಾರ್ಯವಾಗಿದೆ. ಇದಕ್ಕಾಗಿಯೇ ಇಂದು ವಿಶೇಷ ಕೋರ್ಸ್‍ಗಳೂ ಆರಂಭವಾಗುತ್ತಿದೆ. ಕೃಷಿಗೆ ಬೇಕಾದ ಎಲ್ಲಾ ಸವಲತ್ತು, ಬೆಂಬಲ ಬೆಲೆ, ಸಬ್ಸೀಡಿ ಎಲ್ಲವೂ ಸಿಗುತ್ತಿದ್ದರೂ ಮತ್ತೆ ಮತ್ತೆ ಚರ್ಚೆಯಾಗುವುದು ಕೃಷಿ ಮಾರುಕಟ್ಟೆ ವ್ಯವಸ್ಥೆ. ಕೃಷಿಕ ತಾನೇ ಬೆಳೆದ ಟೊಮೊಟೋ ರಸ್ತೆ ಬದಿ ಚೆಲ್ಲಿದಾಗ ದೂರದ ಎಲ್ಲೋ ಇರುವ ಕೃಷಿಕನಿಗೂ ನೋವಾಗುತ್ತದೆ. ಎಲ್ಲೋ ಜೋಳದ ಬೆಲೆ ಕುಸಿತವಾದಾಗ ಇನ್ನೆಲ್ಲೋ ಇರುವ ಕೃಷಿಕನಿಗೂ ಬೇಸರವಾಗುತ್ತದೆ. ಒಂದು ಕಡೆ ರೈತ ಟೊಮೊಟೋ ರಸ್ತೆ ಬದಿ ಎಸೆದರೆ ಇನ್ನೊಂದು ಕಡೆ ಟೊಮೊಟೋಗೆ 15 ರೂಪಾಯಿ ಕೊಟ್ಟು ಖರೀದಿ ಮಾಡುವ ಸ್ಥಿತಿ ಇರುತ್ತದೆ. ಹೀಗಿರುವಾಗಲೂ ರೈತ ಟೊಮೊಟೋ ಏಕೆ ರಸ್ತೆ ಬದಿ ಚೆಲ್ಲುತ್ತಾನೆ ಎಂಬ ಪ್ರಶ್ನೆಗೆ ಉತ್ತರ "ಮಾರುಕಟ್ಟೆ ವ್ಯವಸ್ಥೆ". ಹೀಗಾಗಿ ಕೃಷಿ ಮಾರುಕಟ್ಟೆಯ ವ್ಯವಸ್ಥೆ ಸುಧಾರಣೆ ಹೇಗೆ ಎಂಬ ಬಗ್ಗೆ ಮತ್ತೆ ಮತ್ತೆ ಚರ್ಚೆಯಾಗುತ್ತದೆ. ಈಗ ಕೃಷಿ ಆರ್ಥಿಕತೆ ಬಗ್ಗೆ ಸಾಕಷ್ಟು ಅಧ್ಯಯನವಾಗಬೇಕು. ಈ ಮೊದಲು ನಡೆಸಿದ ಸಮೀಕ್ಷೆ ಹಾಗೂ ಕೃಷಿ ಕ್ಷೇತ್ರದಲ್ಲಿ ಆರ್ಥಿಕತೆಯ ನಿರ್ವಹಣೆಯ ಸಿದ್ಧಾಂತಗಳ ಅಳವಡಿಕೆಯನ್ನು ಅಧ್ಯಯನ ಮಾಡಿದಾಗ ಭವಿಷ್ಯದಲ್ಲಿ ಇ- ಬಿಸಿನೆಸ್ ಅಥವಾ ಇ ಕೃಷಿ ಮಾರುಕಟ್ಟೆ ಎನ್ನುವ ಪರಿಕಲ್ಪನೆಗೆ ಹೆಚ್ಚು ಅವಕಾಶ ತೆರೆದುಕೊಂಡಿದೆ.
ಭಾರತದ ಆರ್ಥಿಕ ತಜ್ಞರು ಕೃಷಿ ಕಡೆಗೆ ಹೆಚ್ಚಿನ ಗಮಹರಿಸುತ್ತಿದ್ದಾರೆ. ಕೃಷಿ ಮಾರುಕಟ್ಟೆಗಾಗಿಯೇ ವಿಶೇಷ ಕೋರ್ಸ್ ರಚನೆಯಾದರೆ ಅದರಲ್ಲಿ ಏನೇನು ಇರಬೇಕು ಎಂಬ ಬಗ್ಗೆಯೂ ಚರ್ಚೆಯಾಗಿದೆ. ಆಹಾರದ ಉತ್ಪಾದನೆ, ಸರಬರಾಜು ಮತ್ತು ಬಳಕೆಯ ಬಗ್ಗೆ, ಕೃಷಿ ಸರಕುಗಳು ಮತ್ತು ಸೇವೆಗಳ ಬಗ್ಗೆ ವಿಶೇಷ ತರಬೇತಿ ಅಗತ್ಯವಾಗುತ್ತದೆ. ಹಾಗೂ ಅಂಗಡಿ ಮಾಲಕರು ಯಾವ ರೀತಿಯ ಆಹಾರವನ್ನು ಖರೀದಿ ಮಾಡುತ್ತಾರೆ. ಪ್ರಸಕ್ತ ಜನರ ಆಹಾರ ಪದ್ಧತಿಯಲ್ಲಾದ ಬದಲಾವಣೆ, ಡಯೆಟ್, ಮಾರುಕಟ್ಟೆ ಅವಶ್ಯಕತೆಗಿಂತ ಹೆಚ್ಚುವರಿ ಬೆಳೆ ಬೆಳೆಯಲಾಗುತ್ತದೆಯೇ ಇತ್ಯಾದಿ ವಿವರಗಳನ್ನು ಅಧ್ಯಯನ ಬೇಕಾಗುತ್ತದೆ ಎಂಬ ಸಲಹೆ ಬಂದಿದೆ. ಈ ಟ್ರೆಂಡ್ ಈಗಾಗಲೇ ಶುರುವಾಗುತ್ತಿದ್ದು ಪೇಸ್‍ಬುಕ್‍ನಂತಹ ಜಾಲತಾಣಗಳಲ್ಲಿ ಕೃಷಿಕರು ತಾವೇ ಬೆಳೆದ ವಸ್ತುಗಳನ್ನು  ಮಾರಾಟ ಮಾಡುತ್ತಿದ್ದಾರೆ, ಈ ಬಗ್ಗೆ ಆಸಕ್ತ ವಿದ್ಯಾರ್ಥಿಗಳು ಅಧ್ಯಯನ ಆರಂಭಿಸಿದ್ದಾರೆ. ಕೃಷಿ ಗ್ರೂಪುಗಳಲ್ಲಿ 2.5 ಲಕ್ಷಕ್ಕೂ ಅಧಿಕ ಮಂದಿ ಇದ್ದರೆ ಅದರಲ್ಲಿ ಶೇ.50 ಕ್ಕಿಂತ ಹೆಚ್ಚು ಕೃಷಿಕರು ಇರುವುದು  ಕೃಷಿಕರೂ ಸಾಮಾಜಿಕ ತಾಲತಾಣಗಳ ಬಳಕೆಯ ಅಭ್ಯಾಸವನ್ನು ಕೃಷಿಗೆ ಸಹಕಾರಿಯಾಗುವಂತೆ ಮಾಡಬಹುದಾಗಿದೆ.
ಪುತ್ತೂರು ಕಬಕ ಬಳಿಯ ಕೃಷಿಕ ಶಂಕರ ಭಟ್ ವಡ್ಯ ಇ ಮಾರುಕಟ್ಟೆಯಲ್ಲಿ ತಕ್ಕಮಟ್ಟಿಗೆ ಯಶಸ್ಸು ಕಂಡಿದ್ದಾರೆ. ರಾಜ್ಯದ ವಿವಿದೆಡೆ ಕೃಷಿಕರು, ಯುವಕೃಷಿಕರು ಈ ತಂತ್ರವನ್ನು ಬಳಕೆ ಮಾಡುತ್ತಿದ್ದಾರೆ. ಶಂಕರ ಭಟ್ ಅವರು ಕೆಲ ವರ್ಷದ ಹಿಂದೆ ಬಾಳೆ ಬೆಳೆದಾಗ ಧಾರಣೆ ಕುಸಿತ ಕಂಡಿತು. 1 ಕೆಜಿ ಬಾಳೆಗೆ 8 ರೂಪಾಯಿಗೆ ಮಾರಾಟ ಮಾಡಬೇಕಾದ ಸಂದರ್ಭ ಬಂತು. ಹಾಗೆಂದು ಮಾರುಕಟ್ಟೆ ಧಾರಣೆ ಗಮನಿಸಿದರೆ 20 ರೂಪಾಯಿ ಇತ್ತು. ಈ ವ್ಯತ್ಯಾಸ ಗಮನಿಸಿದ ಶಂಕರ್ ಭಟ್ ತಾವೇ ಬೆಳೆದ ಬಾಳೆಯನ್ನು ಮೌಲ್ಯವರ್ಧನೆ ಮಾಡಬೇಕು ಎಂದು ನಿರ್ಧರಿಸಿದ್ದರು. ಇದಕ್ಕಾಗಿ ಬಾಳೆಹಣ್ಣು ಹಲ್ವ ಮಾಡಲು ನಿರ್ಧರಿಸಿದರು. ಬಳಿಕ ಮಾರುಕಟ್ಟೆಗೆ ತಂದಾಗ ಕೆಜಿಗೆ 120 ರೂಪಾಯಿ ಲಭ್ಯವಾಯಿತು. ಬಳಿಕ ಬಾಳೆಗೊನೆ ಮಾರಾಟದ ಬದಲಾಗಿ ಮೌಲ್ಯವರ್ಧನೆ ಮಾಡಿಯೇ ಮಾರಾಟ ಮಾಡುವ ಪ್ರಕ್ರಿಯೆ ನಡೆಸಿದರು. ನಿಧಾನವಾಗಿ ಪೇಸ್‍ಬುಕ್, ವ್ಯಾಟ್ಸಪ್ ಸೇರಿದಂತೆ ಇತರ ಮಾಧ್ಯಮ ಉಪಯೋಗಿಸಿ ಇ ಮಾರುಕಟ್ಟೆಗೆ ಇಳಿದರು. ಈಗ ಮನೆಯಿಂದಲೇ ನೇರವಾಗಿ ಗ್ರಾಹಕರ ಕೈಗೆ ಕೃಷಿ ವಸ್ತುಗಳು ಸಿಗುತ್ತಿದೆ. ಇತ್ತೀಚೆಗೆ ಕಾಳುಮೆಣಸು ಧಾರಣೆ ಕುಸಿತವಾದ ಸಂದರ್ಭದಲ್ಲೂ ಶಂಕರ ಭಟ್ ಅವರಿಗೆ ಸುಮಾರು 800 ರೂಪಾಯಿಯಿಂದ 1000 ರೂಪಾಯಿವರೆಗ ಲಭ್ಯವಾಗಿದೆ. ಇ ಮಾರುಕಟ್ಟೆ ಮೂಲಕ ಗ್ರಾಹಕರ ಕೈಗೆ ತಲಪಿದೆ. ಈಗ ಅಡಿಕೆ, ರುದ್ರಾಕ್ಷಿ, ಕಾಳುಮೆಣಸು, ಬಾಳೆಹಣ್ಣು ಹಲ್ವ ಇತ್ಯಾದಿಗಳ ಮಾರಾಟ ಆನ್ ಲೈನ್‍ನಲ್ಲಿ. ಇಲ್ಲಿ ಅತ್ಯಂತ ಪ್ರಮುಖವಾದ ಅಂಶವೆಂದರೆ ಕೃಷಿಕ ಬೆಳೆದ ವಸ್ತುಗಳ ಮೇಲೆ ಆತನಿಗೆ ಮೊದಲಾಗಿ ನಂಬಿಕೆ ಇರಬೇಕು ಎನ್ನುವುದು  ಶಂಕರ ಭಟ್ ಅವರ ಅಭಿಮತ. ಮಾರಾಟದ ಸಂದರ್ಭ ಅದರಲ್ಲಿ ಕಲಬೆರಕೆ ಇತ್ಯಾದಿಗಳು ನಡೆದರೆ ವಿಶ್ವಾಸಾರ್ಹತೆ ಕಡಿಮೆಯಾಗಿ ಮಾರುಕಟ್ಟೆ ಕುಸಿತವಾಗಬಹುದು ಎನ್ನುವ ಸತ್ಯ ಅರಿತಿರಬೇಕು.
ಹಾಗಿದ್ದರೆ ಈಗ ಪ್ರಶ್ನೆ ಇರುವುದು, ಸಾಮಾನ್ಯ ಅದರಲ್ಲೂ ಗ್ರಾಮೀಣ ಭಾಗದ ಅದರಲ್ಲೂ ಇ ಮಾರುಕಟ್ಟೆ ವ್ಯವಸ್ಥೆ ಅರಿಯದ ಕೃಷಿಕರಿಗೆ ಇದೆಲ್ಲಾ ಸಾಧ್ಯವೇ ಎಂಬುದು. ಇಂದು ಬಹುತೇಕ ಕೃಷಿಕರ ಮಕ್ಕಳು ಪೇಸ್‍ಬುಕ್, ವ್ಯಾಟ್ಸಪ್‍ಗಳಲ್ಲಿ ಸಕ್ರಿಯ. ಅದರ ಜೊತೆಗೆ ಇನ್ನೂ ಹಲವಾರು ಮಂದಿ ನಗರ ಪ್ರದೇಶದಲ್ಲೇ ಉದ್ಯೋಗ ಮಾಡುವವರು. ಹೀಗಾಗಿ ಇಂದಲ್ಲ ನಾಳೆಯಾದರೂ ಹಂತ ಹಂತವಾಗಿ ಅನುಷ್ಠಾನ ಸಾಧ್ಯವಿದೆ ಎಂಬುದು ಅಭಿಮತ. ಆದರೆ ಎಲ್ಲಾ ಕೃಷಿ ವಸ್ತುಗಳನ್ನು ಇ ಮಾರುಕಟ್ಟೆ ಮೂಲಕ ಅಸಾಧ್ಯ. ಅದಕ್ಕಾಗಿ ಮತ್ತೊಂದು ದಾರಿ ಕಂಡುಹಿಡಿಯಬೇಕಾಗುತ್ತದೆ. ಕೃಷಿಕರು ಬೆಳೆದ ವಸ್ತುಗಳಿಗೆ ಕೃಷಿಕರೇ ಮಾರುಕಟ್ಟೆ ಹುಡುಕಿಕೊಂಡರೆ ಕೃಷಿ ಕ್ಷೇತ್ರದಲ್ಲಿನ ಬದಲಾವಣೆಗೆ ದೂರವಿಲ್ಲ. 2020 ರ ಹೊತ್ತಿಗೆ ಕೃಷಿಕರ ಆದಾಯವನ್ನು ದ್ವಿಗುಣಗೊಳಿಸುವ ಯೋಜನೆಗೆ ಇದೂ ಸಹಕಾರಿಯಾಗಬಲ್ಲುದು. ರಾಷ್ಟ್ರದ ಆಹಾರ ಭದ್ರತೆಯ ಜೊತೆಗೆ ಕೃಷಿಕರ ಆದಾಯದ ಭದ್ರತೆಯಾಗಬಹುದು.


( ಮಣ್ಣಿಗೆ ಮೆಟ್ಟಿಲು - ಹೊಸದಿಗಂತ)


04 ಮಾರ್ಚ್ 2018

ಅಸಹಾಯಕತೆಯಲ್ಲ....... ನೋವೂ ಅಲ್ಲ...... ಭರವಸೆಯ ಪ್ರಶ್ನೆ.....!



ಸುಮಾರು 4 ವರ್ಷಗಳ ಹಿಂದೆ.
 ಯಾವುದೋ ವಿಡಿಯೋ ಹೀಗೇ ಗಮನಿಸುತ್ತಿದೆ, ಮಾತು ಕೇಳಿಸುತ್ತಿದ್ದಂತೆಯೇ ಆಸಕ್ತಿ ಮೂಡಿತು. ಮತ್ತೊಮ್ಮೆ ಕೇಳಿದೆ. ಅದು ಇಂದಿನ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣ. ಈ ದೇಶ ಹೇಗೆ ಬದಲಾಗಬೇಕು, ನಾವು ಹೇಗೆ ಅದರ ಭಾಗವಾಗಬೇಕು ಎಂಬುದರ ಸಂಕ್ಷಿಪ್ತ ರೂಪ ಅಷ್ಟೇ. ಅದರ ಜೊತೆಗೆ ಈ ದೇಶ ವಿಶ್ವದಲ್ಲೇ ನಂಬರ್1 ಆಗುವ ಕನಸು ಸೇರಿದಂತೆ ವಿವಿಧ ವಿಚಾರಗಳು ಇದ್ದವು. ಮತ್ತೊಮ್ಮೆ ಆಲಿಸಿದೆ.. ಮಗದೊಮ್ಮೆ ಕೇಳಿದೆ... ಆಗಾಗ ಕೇಳಿದೆ. ಭರವಸೆ ಮೂಡಿತು.





ಹೌದು ಈ ದೇಶ ಬದಲಾಗಬೇಕು.
ಈ ದೇಶದಲ್ಲಿ ಅದೆಷ್ಟೋ ಸಮಸ್ಯೆಗಳು ಇವೆ... ಎಲ್ಲಾ ಸಮಸ್ಯೆಗಳೂ ಒಂದೇ ಕ್ಷಣದಲ್ಲಿ , ಒಮ್ಮೆಲೇ ಬದಲಾಗಲು ಸಾಧ್ಯವೇ ಇಲ್ಲ. ಹೀಗಾಗಿ ನಾವು ನಮ್ಮೂರಿನಲ್ಲಿ ಏನು ಮಾಡಬಹುದು ಮತ್ತು ಏನು ಮಾಡಬೇಕು ಎಂಬುದರ ಕಡೆಗೆ ಯೋಚನೆ ಮಾಡುತ್ತಿದ್ದೆ, ಅದಕ್ಕೂ ಅವರೇ ಹೇಳಿದ್ದರು.
ನಮ್ಮೂರಿನ ಸಮಸ್ಯೆಗೆ ನಾವೇ ಪರಿಹಾರ ಕಂಡುಕೊಳ್ಳುವುದು, ಸರಕಾರದ ಯೋಜನೆಗಳನ್ನು ಸರಿಯಾಗಿ ಅನುಷ್ಠಾನ ಮಾಡಲು ಪ್ರಯತ್ನ ಮಾಡುವುದು, ಆಗದೇ ಇದ್ದರೆ ಮಾಡಿಸುವುದು. ಜನನಾಯಕರು ಭ್ರಷ್ಟರಾಗದಂತೆ ಆಗಾಗ ಎಚ್ಚರಿಸುವುದು, ಊರಿನ ಸಮಗ್ರ ಅಭಿವೃದ್ಧಿಗೆ ಕಾರ್ಯಯೋಜನೆ ಹಾಕಿಕೊಳ್ಳುವುದು  ಸೇರಿದಂತೆ ಹತ್ತಾರು ಸಂಗತಿಗಳನ್ನು ಅಂದು ಗಮನಿಸಿದ್ದೆ.

ಅದಾದ ಬಳಿಕ ಆ ಮಾತು ಕೃತಿಗೆ ಇಳಿದಾಗಲೇ ತಿಳಿದದ್ದು, ಅನೇಕ ಸತ್ಯಗಳು...!
ಈ ಭ್ರಷ್ಟ ವ್ಯವಸ್ಥೆಯಲ್ಲಿ ಸತ್ಯವೂ ಸುಳ್ಳಾಗುತ್ತದೆ.... ಸುಳ್ಳು ಸತ್ಯವಾಗುತ್ತದೆ.  ಸತ್ಯ ಹೇಳಿದಾಗ ವಿರೋಧ ಹೆಚ್ಚಾಗುತ್ತದೆ. ಗುಂಪುಗಾರಿಕೆ ಶುರುವಾಗುತ್ತದೆ, ಕೊನೆ ಕೊನೆಗೆ ಇದೊಂದು ಕಾಟ ಎನ್ನುವುದು  ಶುರುವಾಗುತ್ತದೆ. ಅಪಪ್ರಚಾರ ಶುರುವಾಗುತ್ತದೆ....!. ಕನಸು ನನಸಾಗುವುದು ಇಷ್ಟವಿಲ್ಲವಾಗುತ್ತದೆ....!




ಹೀಗೆ ಆರಂಭವಾಗುತ್ತದೆ.......

 ಒಂದು ಗ್ರಾಮೀಣ ರಸ್ತೆ. ಕಳೆದ ಅನೇಕ ವರ್ಷಗಳಿಂದ ಇದು ದುರಸ್ತಿಯಲ್ಲಿ ಇಲ್ಲ. ಎಲ್ಲರಿಗೂ ಪತ್ರ ಬರೆದು, ಪದೇ ಪದೇ ಸಂಬಂಧಿತರಿಗೆ ಮನವಿ ಮಾಡಿಯೂ ಆಗಿತ್ತು. ರಸ್ತೆ ಮಾತ್ರಾ ಸರಿಯಾಗಲೇ ಇಲ್ಲ. ಈಗ ಸ್ವಲ್ಪ ಸ್ವಲ್ಪ ದುರಸ್ತಿಯಾಗುತ್ತಿದೆ. ಕಳೆದ ಬಾರಿ ಒಂಚೂರು ದುರಸ್ತಿ ಮಾಡಿದ್ದರೆ ,  ಈ ಬಾರಿ ಇನ್ನೊಂದು ಚೂರು ದುರಸ್ತಿಯಾಗುತ್ತಿದೆ. ಕಳೆದ ಬಾರಿ ಮಾಡಿರುವ ರಸ್ತೆ ಕಾಮಗಾರಿಯಲ್ಲಿ ಅಲ್ಲಲ್ಲಿ ಹೊಂಡ ಗುಂಡಿ...!. ತೇಪೆಯೂ ಈಗಿಲ್ಲ. ಮತ್ತೆ ಯಥಾ ಸ್ಥಿತಿಯ ರಸ್ತೆ. ಈ ಬಾರಿ ಹಾಗಾಗಬಾರದು ಎಂದು ಎಚ್ಚರಿಕೆ ವಹಿಸಲಾಯಿತು.  ಅದು ಸಾಮಾನ್ಯ ಜನರ ಕೆಲಸ ಅಲ್ಲದೇ ಇದ್ದರೂ ಅಂದು ಪ್ರಧಾನಿಗಳು ಹೇಳಿದ ಮಾತು ಇಲ್ಲಿ ಕಾರ್ಯರೂಪಕ್ಕೆ ಬಂದಿತ್ತು.  ಕಾಮಗಾರಿ ಮೇಲೆ ನಿಗಾ ಇರಿಸಲಾಗಿತ್ತು.

ಕಳೆದ 4 ವರ್ಷಗಳಿಂದ ಅಂದರೆ ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಸಾರ್ವಜನಿಕ ದೂರುಗಳಿಗೆ ತಕ್ಷಣ ಸ್ಪಂದನೆ ಬರುತ್ತದೆ, ಪ್ರತ್ರಿಕ್ರಿಯೆ ಬರುತ್ತದೆ. ಏನಿಲ್ಲ ಎಂದರೂ ದೂರುಗಳ ವಿಚಾರಣೆಯಾಗುತ್ತದೆ, ಸಮಸ್ಯೆ ಇತ್ಯರ್ಥಕ್ಕೆ ಕ್ರಮವಾಗುತ್ತದೆ. ಯಾವಾಗಲೋ ಶಿರಾಡಿ ಘಾಟಿ ಬಗ್ಗೆ ಆನ್ ಲೈನ್ ನಲ್ಲಿ ನೀಡಿರುವ ದೂರಿಗೆ  ಉತ್ತರ  ಬಂದದ್ದು ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ...!

ಹಾಗೆಯೇ ಈ ಗ್ರಾಮೀಣ ರಸ್ತೆಯ ಕಾಮಗಾರಿಯಲ್ಲಿ  ಯಾಕೋ ಸ್ವಲ್ಪ ಸಂದೇಹ ಬಂತು. ಇಲ್ಲಿ ಯಾರೊಬ್ಬರೂ ಮಾತನಾಡುವುದು ಕಂಡಿಲ್ಲ. ಅಧಿಕಾರಿಗಳು ನೋಡೋಣ ನೋಡೋಣ ಎಂದರು. ಆದರೆ ಕಾಲ ಮಿಂಚುವ ಮುನ್ನ ಎಚ್ಚೆತ್ತುಕೊಂಡಾಗ ಮಾಧ್ಯಮಗಳು ಸಹಕಾರ ನೀಡಿದವು. ಅದರ ಜೊತೆಗೇ ಪ್ರಧಾನಿಗಳ ಕಾರ್ಯಾಲಯಕ್ಕೂ ಮಾಹಿತಿ ನೀಡಲಾಯಿತು. ಆ ಬಳಿಕದ ಸಂಗತಿ ನಿಜಕ್ಕೂ ಅಚ್ಚರಿ ತಂದಿದೆ. ಹೀಗೂ ನಡೆಯುತ್ತಾ ಅಂತ ಅನಿಸಿತು...!.

ಸ್ಥಳೀಯ ಜನನಾಯಕರಿಂದ ಉತ್ತರ, ಪ್ರತಿಕ್ರಿಯೆ ಬಾರದೇ ಇದ್ದರೂ ಪ್ರಧಾನಿ ಕಾರ್ಯಾಲಯದಿಂದ ತಕ್ಷಣದ ಪ್ರತಿಕ್ರಿಯೆ ಬಂತು. ರಾಜ್ಯ ಸರಕಾರದಿಂದ ಪ್ರತಿಕ್ರಿಯೆ ಬಂತು. ಈ ಬಗ್ಗೆ ರಾಜ್ಯದ ಇಲಾಖೆಗೂ ಮಾಹಿತಿ ಬಂತು. ತನಿಖೆಗೆ ನಡೆಸಿ ಸಮಂಜಸ ಉತ್ತರ ನೀಡುವಂತೆಯೂ ಸೂಚನೆ ಬಂತು.
ಆಗ ಅನೇಕರು ಮಾತನಾಡಿದ್ದು...  ಕಾಮಗಾರಿ ಇಷ್ಟಾದರೂ ಆಗುತ್ತಲ್ಲ...!, ಹೀಗೇ ಮಾತನಾಡಿದರೆ ಮುಂದೆ ಯಾವುದೇ ಗುತ್ತಿಗೆದಾರ ಸಿಗಲಾರ..!, ಗುತ್ತಿಗೆದಾರನಿಗೆ ತೀರಾ ಬೇಸರವಾಗಿದೆ...!, ಇವರು ಯಾವಾಗಲೂ ಕಾಟ ಕೊಡುತ್ತಾರೆ...! ಎಂದು. ಯಾರೊಬ್ಬರೂ ಸರಿಯಾದ ಕೆಲಸ ಮಾಡಬೇಕು, ನಮ್ಮದೇ ಹಣದಲ್ಲಿ ನಡೆಯುವ ನಮ್ಮೂರಿನ ಕೆಲಸ ಚೆನ್ನಾಗಿ ಆಗಬೇಕೆಂದು ಮಾತನಾಡಿದ್ದು ಕೇಳಿಸಲಿಲ್ಲ..!. ಯಾವುದೇ ಪೂರ್ವಾಗ್ರಹ ಇಲ್ಲದೆ ಈ ಮಾತು ಆಡಿದ್ದು ಕೇಳಿಸಲಿಲ್ಲ...!. ಮುಂದೆ 5 ವರ್ಷಗಳ ಕಾಲ ಈ ರಸ್ತೆಯ ನಿರ್ವಹಣೆ ಇದೆ. ಹೀಗಾಗಿ ತೊಂದರೆ ಇಲ್ಲ ಎನ್ನುವುದು ಸಮಜಾಯಿಷಿಕೆ. ಸರಿಯಾದ ಕೆಲಸ ಆಗದೇ ಇದ್ದರೆ 5 ವರ್ಷದ ನಂತರ ಯಾರು ಎಂಬ ಪ್ರಶ್ನೆ ಈಗಲೂ ಉಳಿದುಕೊಂಡಿದೆ. ಊರಿನ ಕಾಮಗಾರಿ ಸರಿಯಾಗಿ ನಡೆಯಬೇಕು ಎಂಬ ಧ್ವನಿ ಅಡಗಿಸುವ ಪ್ರಯತ್ನ ನಡೆಯಿತು ಎನ್ನುವುದು ವಿಷಾದ.

ಇದಾದ ನಂತರ ಮತ್ತಷ್ಟು ಆಸಕ್ತಿ ಇದೆ...
ಪ್ರಧಾನಿ ಕಾರ್ಯಾಲಯಕ್ಕೆ ಉತ್ತರ ನೀಡಬೇಕಾದ ಅನಿವಾರ್ಯತೆ. ಹೀಗಾಗಿ ಕಾಮಗಾರಿಯಲ್ಲಿ ಯಾವುದೇ ಲೋಪ ಇಲ್ಲ ಎಂಬ ವರದಿ ಸಿದ್ಧ ಮಾಡಿ ಅದಕ್ಕೆ ಬೇಕಾದ ತಾಂತ್ರಿಕವಾದ ವರದಿಯೂ ಸಿದ್ದವಾಗಿ ಕಳುಹಿಸಿ ಕೊಡಲಾಗುತ್ತದೆ. ಅಲ್ಲಿಗೆ ಇಡೀ ಘಟನೆ ಮುಗಿಯುತ್ತದೆ. ಈ ಕಡೆ ಅಲ್ಲಲ್ಲಿ ಡಾಮರು ಏಳುವುದು, ಬಿರುಕುಗಳು ಕಂಡುಬರುತ್ತದೆ...!. 5 ವರ್ಷಗಳ ನಂತರ ಏನು ಎಂಬ ಪ್ರಶ್ನೆ ಮತ್ತೆ ಮತ್ತೆ ಕಾಡುತ್ತದೆ....!.

ಈ ದೇಶ ಬದಲಾಗಲು ಇಷ್ಟು ಸಾಕು....!

ಇಲ್ಲಿ ಪ್ರಾಮಾಣಿಕವಾದ ಗುತ್ತಿಗೆದಾರನಿಗೂ ತೀರಾ ಮುಜುಗರ ಹಾಗೂ ನೋವಾಗುತ್ತದೆ ನಿಜ.  ಆ ಪ್ರಾಮಾಣಿಕತೆಗೆ ಬೆಲೆ ಇಲ್ಲದಂತಾಗಲು ಕಾರಣ ಏನು ? ಪಾರದರ್ಶಕತೆ ಏಕೆ ಇಲ್ಲವಾಗಿದ್ದು ಏಕೆ ?   ಏಕೆ ಯಾವುದೋ ಜನನಾಯಕರ ಹಿಂದೆ ಅಲೆದಾಟ ಮಾಡುತ್ತಾರೆ ? ಎಂಬಿತ್ಯಾದಿ ಪ್ರಶ್ನೆಗಳಿಗೂ ಉತ್ತರ ಇಲ್ಲವಾಗುತ್ತದೆ.

ಇದೆಲ್ಲಾ ಆದ ಬಳಿಕ ಅನಿಸಿದ್ದು ಇಷ್ಟು,
ಈ ದೇಶದಲ್ಲಿ ಬದಲಾವಣೆ ಬೇಕು ನಿಜ. ಆದರೆ ಆ ಬದಲಾವಣೆಗೆ ನಾವು ಒಗ್ಗಿಕೊಳ್ಳಲು ತಯಾರಿಲ್ಲ. ಸರಕಾರ ಬದಲಾವಣೆಯಾಗಬೇಕು ಎನ್ನುತ್ತಾರೆ , ಆದರೆ ಆ ಬದಲಾವಣೆಯ ಜೊತೆಗೆ ಜನಪರವಾದ, ಜನರೊಂದಿಗೆ ಸಂವಹನ ಮಾಡುವುದಕ್ಕೆ , ನಿಜವಾದ ಸಮಸ್ಯೆ ಏನು ಎಂದು ತಿಳಿದುಕೊಳ್ಳುವುದಕ್ಕೆ ಮುಂದಾಗದೇ ಇರುವುದು ಇನ್ನೊಂದು ವಿಪರ್ಯಾಸ.
 ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಹೆಸರಿನ ಮೂಲಕ ಇಡೀ ದೇಶದಲ್ಲಿ ಬದಲಾವಣೆಯಾಗಬೇಕಾದರೆ ಅವರ ಆಶಯದಂತೆಯೇ ಗ್ರಾಮೀಣ ಭಾಗದಲ್ಲಿಯೂ ಕನಿಷ್ಟ ಶೇ.50 ರಷ್ಟಾದರೂ ಬದಲಾಗುವ ಮನಸ್ಥಿತಿ ಆ ಬದಲಾವಣೆ ಬಯಸುವ ಮಂದಿಯಲ್ಲೂ ಇರಬೇಕು. ಆಧುನಿಕ ವ್ಯವಸ್ಥೆಗೆ ಒಗ್ಗಿಕೊಳ್ಳುವ ಮನಸ್ಥಿತಿ ಬೇಕು. ಗ್ರಾಮಿಣ ಭಾಗದ ಅಭಿವೃದ್ಧಿಯ, ಜನರ ಸಮಸ್ಯೆಗೆ ಸ್ಪಂದಿಸುವ ಮನಸ್ಥಿತಿ ಇರಬೇಕು. ಕನಿಷ್ಟ , ಸಮಸ್ಯೆಯನ್ನು ಹೊತ್ತು ತರುವ ಜನರಿಗೆ ಸ್ಪಂದಿಸುವ, ಪ್ರತಿಕ್ರಿಯೆ ನೀಡುವ ಮನಸ್ಥಿತಿಯಾದರೂ ಇರಬೇಕು. ಅಲ್ಲದೇ ಇದ್ದರೆ ಆ ಹೆಸರಿನ ಮೂಲಕ ನಡೆಯುವ ಬದಲಾವಣೆಯೂ ಫಲ ನೀಡದು. ಇನ್ನೊಮ್ಮೆ ಇಡೀ ಜನರಿಗೆ ಭ್ರಮನಿರಸನವಷ್ಟೇ....!.





ಹೀಗಾದರೂ, ಇಷ್ಟಾದರೂ...

 "ಈ ದೇಶ ಬದಲಾಗುತ್ತದೆ, ಬದಲಾಗಲಿದೆ " ಎನ್ನುವ ಭರವಸೆ ಯಾವತ್ತೂ ಕಳೆದುಕೊಳ್ಳಬಾರದು ಎನ್ನುವ ಭಾಷಣ ಮತ್ತೆ ಮತ್ತೆ ಕೇಳುತ್ತಿದೆ....!. ಅಸಹಾಯಕತೆ ಇಲ್ಲ. ನೋವೂ ಇಲ್ಲ....
ಈಗಲೂ ಭರವಸೆ ಇದೆ..  ಕಾದು ನೋಡಬೇಕು...!.





ಹಳ್ಳಿಯಲ್ಲೇ ಆರಂಭವಾದ ಕೃಷಿ ವಸ್ತುಗಳ ಮೌಲ್ಯವರ್ಧನೆ.....


ಇತ್ತೀಚೆಗೆ ದಕ್ಷಿಣ ಕನ್ನಡ ಸೇರಿದಂತೆ ಸುಮಾರು 5 ಜಿಲ್ಲೆಗಳಲ್ಲಿ ಸಂಚಲನ ಮೂಡಿತು. ಕಾರಣ ಇಷ್ಟೇ, ಅಡಿಕೆಯನ್ನು ನಿಷೇಧ ಮಾಡಲಾಗುತ್ತದೆ ಎಂಬ ಗುಲ್ಲು. ಬಹುತೇಕ ಅಡಿಕೆ ಬೆಳೆಗಾರರು ಇದೇ ಸತ್ಯ ಎಂದು ನಂಬಿದರು. ಅದರಾಚೆಗೆ ಎಲ್ಲೂ ನೋಡಿಲ್ಲ. ವಾಸ್ತವವಾಗಿ ಅಡಿಕೆ ಬೆಳೆಯನ್ನು ನಿಷೇಧ ಮಾಡುವುದಕ್ಕೆ ಅಷ್ಟು ಸುಲಭ ಇಲ್ಲ. ಹಾಗೆಂದು ಸುಮ್ಮನೆ ಕೂರುವ ಸ್ಥಿತಿಯೂ ಇಲ್ಲ. ಆದರೆ ಅಡಿಕೆಯ ಮೌಲ್ಯವರ್ಧನೆಯ ಬಗ್ಗೆ ಇಂದಿಗೂ ಹೆಚ್ಚಾಗಿ ಯೋಚನೆ ನಡೆಯಬೇಕಿದೆ. ಅಡಿಕೆ ಪರ್ಯಾಯ ಬಳಕೆಯತ್ತ ಚಿತ್ತ ಮಾಡಬೇಕಿದೆ. ಅದರ ಜೊತೆಗೆ ಉಪಬೆಳೆಯತ್ತಲೂ ಗಮನಹರಿಸಬೇಕಿದೆ.

ಹಾಗೆ ನೋಡಿದರೆ ರಾಜ್ಯದ ವಿವಿಧ ಜಿಲ್ಲೆಗಳಲ್ಲೂ ಇದೇ ಸಮಸ್ಯೆ. ಅಡಿಕೆಗೆ ನಿಷೇಧದ ಭೀತಿಯಾದರೆ ಉಳಿದ ಜಿಲ್ಲೆಗಳಲ್ಲಿ ರೈತರು ಬೆಳೆದ ಬೆಳೆಗೆ ಧಾರಣೆ ಕುಸಿತ. ಇದೇ ಕಾರಣದಿಂದ ಮಾನಸಿಕ ಧೈರ್ಯ ಕಳೆದುಕೊಂಡು ರೈತರು ಕಾಣದ ಲೋಕಕ್ಕೆ ಸಾಗುತ್ತಿದ್ದಾರೆ. ಸುಮಾರು 3000 ಕ್ಕೂ ಅಧಿಕ ಸಂಖ್ಯೆಯ ಪಟ್ಟಿ ಈಗ ಇದೆ. ಇದಕ್ಕೆಲ್ಲಾ ಕಾರಣ ಕೇಳಿದರೆ ಹತ್ತಾರು ಪಟ್ಟಿ. ಇದೆಲ್ಲಾ ಸರಕಾರಗಳಿಗೆ ಅರ್ಥವೇ ಆಗುವುದಿಲ್ಲ. ರಾಜಕೀಯವೇ ಮೇಳೈಸುವ ಈ ಕಾಲದಲ್ಲಿ ರೈತನ ಭಾಷೆ ಅರ್ಥವಾಗದು.ರೈತನ ಬೆಳೆಗೆ ಧಾರಣೆಯೂ ಏರದು, ಆತನ ಸ್ಥಿತಿಯೂ ಉತ್ತಮವಾಗದು. ಅನ್ನ ನೀಡುವ ಮಣ್ಣು ಕೈಕೊಟ್ಟಾಗ ರೈತನಿಗೆ ನಿರಾಸೆ ಸಹಜ. ಬೆಳೆಸಿದ ಬೆಳೆಗೆ ಧಾರಣೆ ಸಿಗದೇ ಇದ್ದಾಗ, ಬೆಳೆದ ಬೆಳೆಯೇ ನಿಷೇಧವಾಗುವ ಸಂದರ್ಭ ಬಂದಾಗ ಆಕ್ರೋಶ, ಅಸಮಾಧಾನ ಸಹಜ. ಹಾಗಾಗಿ ಈಗ ನಡೆಯಬೇಕಿರುವುದು ಸಮಾಧಾನದಿಂದ ಭವಿಷ್ಯದ ಚಿಂತನೆ. ಪರ್ಯಾಯದ ಆಲೋಚನೆ, ಮೌಲ್ಯವರ್ಧನೆಯ ಯೋಚನೆ. ಅನೇಕ ವರ್ಷಗಳಿಂದ ಬೆಳೆದ ಬೆಳೆಯನ್ನು ಏಕಾಏಕಿ ಬದಲಾಯಿಸುವುದು ಕಷ್ಟದ ಮಾತು. ಹಾಗಿದ್ದರೂ ಮಾನಸಿಕ ಸ್ಥಿತಿ ಬದಲಾಯಿಸಬೇಕಿದೆ. ಆ ಮಣ್ಣಿಗೆ ಹೊಂದುವ ಬೆಳೆಯತ್ತ ಮನಸ್ಸು ಮಾಡಬೇಕಾಗುತ್ತದೆ. ಈ ಬಗ್ಗೆ ಯೋಚನೆ ಮಾಡಿ ಕಾರ್ಯಗತ ಮಾಡಿದ ದಕ್ಷಿಣ ಕನ್ನಡ ಜಿಲ್ಲೆಯ ಕೃಷಿಕರೊಬ್ಬರ ಕತೆ ಇಲ್ಲಿದೆ...




ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾಣಿಜ್ಯ ಬೆಳೆಯೇ ಪ್ರಮುಖ.ಅದರಲ್ಲೂ ಅಡಿಕೆ ,ರಬ್ಬರ್, ಕಾಳುಮೆಣಸು ಕೃಷಿಯ ಭರಾಟೆ.ಆದರೆ ಧಾರಣೆಯಲ್ಲಿ  ಸದಾ ಏರುಪೇರು  ಮಾಮೂಲು.ಈ ಹಂತದಲ್ಲಿ ಪುತ್ತೂರಿನ ಬಲ್ನಾಡಿನ ಕೃಷಿಕ ವೆಂಕಟಕೃಷ್ಣ ಮನಸ್ಸು ಮಾಡಿದ್ದು ಗೇರುಕೃಷಿಯತ್ತ.ಈಗ ಇಳುವರಿ ಆರಂಭವಾಗಿದೆ.ಯಶಸ್ಸು ನೋಡಿ ಈಗ ಗೇರುಕೃಷಿಯನ್ನು ವಿಸ್ತರಣೆಯೂ ಮಾಡಿದ್ದಾರೆ. ಪುತ್ತೂರು ತಾಲೂಕಿನ ಕಾವಿನಲ್ಲಿರುವ ಮಧುಮಲ್ಟಿಪಲ್ಸ್ ಎಂಬ ಸಂಸ್ಥೆಯ ಮಾಲಕರೂ ಆಗಿರುವ ವೆಂಕಟಕೃಷ್ಣ ಅವರು ಪುತ್ತೂರಿನ ಬಲ್ನಾಡಿನಲ್ಲಿರುವ ತಮ್ಮ ಕೃಷಿ ಭೂಮಿಯಲ್ಲಿ ಸುಮಾರು 600 ಗೇರು ಗಿಡಗಳನ್ನು  ನೆಟ್ಟಿದ್ದರು.ಮನೆಯ ಹಿಂಬದಿಯ ಗುಡ್ಡದಲ್ಲಿ  ರಬ್ಬರ್ ಮಾತ್ರವೇ ಬೆಳೆಯಬಹುದಾದ ಪ್ರದೇಶ ಅದಾಗಿತ್ತು. ಒಂದಷ್ಟು ಭಾಗದಲ್ಲಿ  ರಬ್ಬರ್ ಕೂಡಾ ನಾಟಿ ಮಾಡಿದ್ದರು. ಅದರ ಜೊತೆಗೆ ಗೇರು ಗಿಡಗಳನ್ನೂ ಆಸಕ್ತಿಯಿಂದ ಕೃಷಿ ಮಾಡಿದ್ದರು. ಮಿಶ್ರ ಬೆಳೆಯ ಕಲ್ಪನೆಯನ್ನು  ಹೊಂದಿದ್ದ ವೆಂಕಟಕೃಷ್ಣ ಆರಂಭದಲ್ಲಿ  600 ಗೇರುಗಿಡಗಳನ್ನು  ಆಧುನಿಕ ರೀತಿಯಲ್ಲಿ 10 ಅಡಿ ಅಂತರದಲ್ಲಿ ಅಂದರೆ ಅಲ್ಟ್ರಾ ಡೆನ್ಸಿಟಿಯಲ್ಲಿ  ಗಿಡ ನೆಟ್ಟಿದ್ದರು. ಗಿಡದ ಬೆಳವಣಿಗೆ ನೋಡಿ ಖುಷಿಯಾದ ಬಳಿಕ ಮುಂದಿನ ವರ್ಷ ಮತ್ತೆ 300 ಗೇರು ಗಿಡಗಳನ್ನು  ಈ ವರ್ಷ 200 ಗೇರು ಗಿಡಗಳನ್ನು  ನೆಟ್ಟಿದ್ದಾರೆ.ಅಂದರೆ ಈಗ ಒಟ್ಟು 1100 ಗೇರು ಗಿಡಗಳು ಅವರ ತೋಟದಲ್ಲಿ  ಇದೆ. ಇಳುವರಿ ಆರಂಭವಾಗಿದೆ. ರಬ್ಬರ್, ಅಡಿಕೆ ಧಾರಣೆ ಕುಸಿತವಾದಾಗಲೂ ವೆಂಕಟಕೃಷ್ಣ ಅವರಿಗೆ ಕೃಷಿ ನಷ್ಟ ಎಂದೆನಿಸಲಿಲ್ಲ. ಗೇರು ಅವರಿಗೆ ಆಧಾರವಾಯಿತು.
ಇಲ್ಲಿ ಗಮನಿಸಬೇಕಾದ್ದು ಎಂದರೆ ವೆಂಕಟಕೃಷ್ಣ ಅವರು ತಮ್ಮದೇ ಉದ್ಯಮ ಹೊಂದಿದ್ದಾರೆ. ಅಲ್ಲಿ ಅವರು ಹೊಸ ಪ್ರಯೋಗ ಮಾಡಿದರು. ಗೇರು ಹಣ್ಣಿನ ಸೋಡಾ ತಯಾರು ಮಾಡಿದರು. ಗೇರು ಹಣ್ಣನ್ನು ಸಂಸ್ಕರಣೆ ಮಾಡಿ ಅದನ್ನು ಪೇಯವಾಗಿ ಬಳಸಿದರು.  ಈಗಾಗಲೇ ರಾಜ್ಯದ ವಿವಿದೆಡೆಯಿಂದ ಉತ್ತಮ ಬೇಡಿಕೆ ವ್ಯಕ್ತವಾಗಿದೆ.ಕಳೆದ ವರ್ಷ ಆಸುಪಾಸಿನ ತೋಟಗಳಿಂದ ಗೇರು ಹಣ್ಣುಗಳನ್ನು ಖರೀದಿ ಮಾಡುತ್ತಿದ್ದರು.ಈ ವರ್ಷವೂ ತಮ್ಮದೇ ಜಮೀನಿನ ಗೇರು ಹಣ್ಣನ್ನು  ಬಳಕೆ ಮಾಡುವುದರ ಜೊತೆಗೆ ಖರೀದಿ ಕೂಡಾ ಮಾಡಿದ್ದಾರೆ. ಈಗ ಗೇರು ಹಣ್ಣು ಕೂಡಾ ಮೌಲ್ಯವರ್ಧನೆಯಾಗುತ್ತಿದೆ. ಈ ಮೂಲಕ ರೈತನಿಗೆ ಆದಾಯವೂ ಹೆಚ್ಚಾಗುತ್ತದೆ.
ಒಂದು ಪುಟ್ಟ ಹಳ್ಳಿಯನ್ನು ಗೇರುಹಣ್ಣಿನ ಸೋಡಾ ತಯಾರು ಆದಾಗ ಆ ಊರಿನ ಒಂದಷ್ಟು ಕೃಷಿಕರ ತೋಟದ ಹಣ್ಣುಗಳೂ ಖರೀದಿಯಾದವು. ಮಾರುಕಟ್ಟೆಯೂ ಉತ್ತಮವಾಯಿತು. ರೈತನ ಬದುಕಿಗೆ ಆಧಾರವಾಯಿತು.
ಬಿಜಾಪುರ ಜಿಲ್ಲೆಗೆ ಪ್ರವಾಸ ಹೋಗಿದ್ದಾಗ ಕೃಷಿಕರೊಬ್ಬರು ತಮ್ಮ ಅನುಭವ ಬಿಚ್ಚಿಡುತ್ತಾ ಅಲ್ಲಿನ 5 ಎಕರೆ ಜಾಗದಲ್ಲಿ ನಿಂಬೆ, ಮಾವು, ಚಿಕ್ಕು, ಬೆಟ್ಟದ ನೆಲ್ಲಿ, ತೆಂಗು, ಅಂಜೂರ, ಬಳವಕಾಯಿ, ಹಲಸು, ಸರ್ವಋತು ಮಾವು, ಜೋಳ ಮೊದಲಾದ ಕೃಷಿ ವೈವಿಧ್ಯಗಳಿವೆ. ಎಪ್ಪತ್ತು ನಿಂಬೆ ಮರಗಳಲ್ಲಿ ನಿರಂತರ ಇಳುವರಿಯೂ ಇದೆ ಅಂದರೆ ಆದಾಯವೂ ನಿರಂತರ.
ಇಂದು ಬಹುಪಾಲು ಕಡೆಯೂ ಆಗಬೇಕಾಗಿರುವುದು, ರೈತನ ಬದುಕಿಗೆ ಆಧಾರವಾಗಬೇಕಾದ್ದು ಇಂತಹ ಪುಟ್ಟ ಪುಟ್ಟ ದಾರಿಯ ಮೌಲ್ಯವರ್ಧನೆಗಳು, ಉಪಬೆಳೆಗಳು.  ಇತ್ತೀಚೆಗೆ ದಕ್ಷಿಣ ಕನ್ನಡ ಸೇರಿದಂತೆ ಸುಮಾರು 5 ಜಿಲ್ಲೆಗಳ ಕೃಷಿಕರ ಆತಂಕಕ್ಕೂ ಪರಿಹಾರವೂ ಇದೆ. ಅಡಿಕೆಯ ಮೌಲ್ಯವರ್ಧನೆಯ ಜೊತೆಗೆ ಉಪಬೆಳೆಯತ್ತ ದೃಷ್ಟಿ. ಈ ಕ್ಷಣವೇ ಬರುವ ಪ್ರಶ್ನೆ ಅಡಿಕೆ ಮೌಲ್ಯವರ್ಧನೆ ಹೇಗೆ?. ಇದಕ್ಕೆ ವಿಟ್ಲ ಬಳಿಯ ಬದನಾಜೆ ಶಂಕರ ಭಟ್ ಅವರು ದಾರಿ ತೋರುತ್ತಾರೆ, ಶಿವಮೊಗ್ಗದ ನಿವೇದನ್ ಪರಿಹಾರ ಸೂಚಿಸುತ್ತಾರೆ. ಬೆಳ್ತಂಗಡಿಯಲ್ಲಿ ತಯಾರಾಗುವ ಅಡಿಕೆ ಸಿಪ್ಪೆಯ ಹೊಗೆಬತ್ತಿ ಮಾದರಿಯಾಗುತ್ತದೆ. ಹೀಗಾಗಿ ದಾರಿ ಕಾಣದೇ ಇರುವ ಪ್ರಮೇಯ ಈಗಿಲ್ಲ. ಹಾಗೆಂದು ಅಡಿಕೆ ಏಕಾಏಕಿ ನಿಷೇಧವಾಗದು, ನಿಷೇಧದ ಭೀತಿಯೂ ಇಲ್ಲ. ಸರಕಾರವೂ ನಿಷೇಧ ಮಾಡುತ್ತದೆ ಎಂದೂ ಹೇಳಿಲ್ಲ ಎಂದು ಸುಮ್ಮನೆ ಕೂರುವ ಹಾಗಿಲ್ಲ. ಹುಡುಕಾಟ, ಪರ್ಯಾಯದ ಬಗ್ಗೆ ನಿರಂತರ ಚರ್ಚೆಯಾಗಲೇಬೇಕಿದೆ.


( ಹೊಸದಿಗಂತ - ಮಣ್ಣಿಗೆ ಮೆಟ್ಟಿಲು )