06 ಮೇ 2022

ನುಡಿಯಲ್ಲೂ.... ನಡೆಯಲ್ಲೂ... ಒಂದೇ ಆಗಿರುವುದು ಸುಲಭವಾ ?



ಇವರ ಬಗ್ಗೆ ಬರೆಯಲೇಬೇಕು. ಏಕೆಂದರೆ ಅಪರೂಪದ ವ್ಯಕ್ತಿತ್ವ. ಅದು ಹಿಂದುತ್ವದ ವ್ಯಕ್ತಿತ್ವ.  ಹಿಂದುವಾಗಿ ಕಾಣುತ್ತಾ ಜಾತಿವಾದಿಗಳಾಗುವ  ಕಾಲದಲ್ಲಿ ಇಂತಹವರ ಪರಿಚಯವಾಗಬೇಕು ಹಾಗೂ . ನನ್ನ ಮನಸ್ಸಿನಲ್ಲಿ  ಇದು ದಾಖಲಾದ್ದನ್ನು ಅಕ್ಷರ ರೂಪಕ್ಕೆ ಇಳಿಸಬೇಕು. ಈ ವ್ಯಕ್ತಿತ್ವ ಶ್ರೀನಿವಾಸ ಉಬರಡ್ಕ. 

ಶ್ರೀನಿವಾಸ ಉಬರಡ್ಕ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮೂಲಕ ನನಗೆ ಪರಿಚಯ. ಪರಿಚಯ ಅನೇಕ ಸಮಯಗಳಿಂದ ಇದ್ದರೂ ಬಹಳ ಹತ್ತಿರ ಏನೂ ಇರಲಿಲ್ಲ. ಎಲ್ಲರಂತೆ ಅವರೂ ಒಬ್ಬರು ಪರಿಚಯಸ್ಥರು ಅಷ್ಟೇ. ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ನನ್ನ ಪರಿಚಯಿಸಿದವರು  ಲಕ್ಷ್ಮೀಶ ಗಬ್ಲಡ್ಕ ಹಾಗೂ ವೇಣುಗೋಪಾಲ ಮುರುಳ್ಯ. ಆರ್‌ ಎಸ್‌ ಎಸ್‌ ಪರಿಚಯದ ನಂತರ  ಅವರಿಬ್ಬರೂ ನನಗೆ ಅಂದು ಸ್ಫೂರ್ತಿಯಾದ್ದು ಹಿಂದುತ್ವದ ಕಾರಣಕ್ಕೆ. ಜಾತಿಯ ಗೋಡೆಯನ್ನು ಬಿಟ್ಟು ದಾಟಿರುವುದಕ್ಕೆ. ಆ ಕಾರಣದಿಂದಲೇ ಅನೇಕರ ಮನೆಗೆ ಹಿಂದುವಾಗಿ ಹೋಗಿದ್ದೆ, ನಮ್ಮ ಮನೆಯಲ್ಲೂ ಹಿಂದೂಗಳಾಗಿಯೇ ಎಲ್ಲರೂ ಕಂಡಿದ್ದೆವು.  ಈಗ ಶ್ರೀನಿವಾಸ ಅವರು ಕೂಡಾ ಹಿಂದುತ್ವದ ಕಾರಣದಿಂದ ಹೆಚ್ಚು ಆಪ್ತರಾಗುತ್ತಾ ಹೋದರು. ಅದಕ್ಕೆ ಈಚೆಗಿನ ಅವರ ಮನೆಯ ಖಾಸಗಿ ಕಾರ್ಯಕ್ರಮವೂ ಕಾರಣವಾಯಿತು. ಅದಕ್ಕಿಂತಲೂ ಮೊದಲು ಪರಿಚಯವು ಹೆಚ್ಚು ಪರಿಚಯವಾಗಲು ಕಾರಣವಿದೆ...

ಆಗ ಶ್ರೀನಿವಾಸ ಉಬರಡ್ಕ ಅವರಿಗೆ ಸಂಘದ ಜವಾಬ್ದಾರಿ ಇತ್ತು. ಚುನಾವಣೆಯ ಹೊತ್ತಿನಲ್ಲಿ ಸಂಘವು ಒಂದಿಷ್ಟು ಕೆಲಸ ಮಾಡಬೇಕು ಎಂಬ ಸೂಚನೆ ಇತ್ತು. ಅದನ್ನು ಶಿರಸಾ ಪಾಲಿಸಬೇಕಾಗಿತ್ತು ಅಲ್ಲಿನ ಜವಾಬ್ದಾರಿ ಇದ್ದವರಿಗೆ. 

ಆ ಚುನಾವಣೆಯ ಹೊತ್ತಿನಲ್ಲಿ ನಾವು ನಮ್ಮ ಊರಿನ ಮೂಲಭೂತ ವ್ಯವಸ್ಥೆಗಳ ಬಗ್ಗೆ ಹೋರಾಟ ನಡೆಯುತ್ತಿದ್ದ ಕಾಲ. ಅನೇಕ ಸಮಯಗಳಿಂದ ಓಟು ಮಾಡಿ, ಅವರ ಜೊತೆಗೇ ವಿವಿಧ ಸ್ಥರದಲ್ಲಿ  ಗುಪ್ತವಾಗಿ ಕೆಲಸ ಮಾಡಿಯೂ ನಾವು ಬೇಡಿಕೆಯೇ ಸಲ್ಲಿಸಬಾರದು ಎಂದು ಅರ್ಥವಾಗಿದ್ದ ಸಮಯ ಅದು. ಪತ್ರಿಕೆಯಲ್ಲಿ ಬರೆಯಬಾರದು ಎಂದು ಹೇಳಿದ್ದ ಸಮಯ ಅದು, ಉದ್ಘಾಟನೆಗೆ ಎಂದು ಕರೆಯಿಸಿ ಪರೋಕ್ಷವಾಗಿ ನಮಗೇ ಬೈದ ಸಮಯ ಅದು. ಇದೆಲ್ಲಾ ಆದ ಬಳಿಕ  ಅಷ್ಟೂ ಸಮಯವೂ ಜೊತೆಯಾಗಿದ್ದರೂ ನಾವೆಲ್ಲರೂ ಪರಕೀಯರಂತೆ ಇರಬೇಕಾಗಿ ಬಂದಾಗ ನಾವೆಲ್ಲಾ ಜೊತೆಯಾಗಿ ನಮ್ಮೂರಿನ ಮೂಲಭೂತ ಸಮಸ್ಯೆ ನಿವಾರಣೆಗೆ ಯಾವ ಪಕ್ಷಗಳಿಗೂ ಮತ ನೀಡದೇ ಇರಲು ನಾವು ಒಂದಷ್ಟು ಜನ ಯೋಚನೆ ಮಾಡಿದ್ದೆವು. ಏಕೆಂದರೆ ಅದುವರೆಗೂ ನಾವು ಸಿದ್ಧಾಂತದ ಆಧಾರದಲ್ಲಿಯೇ ಮತ ಚಲಾಯಿಸುತ್ತಿದ್ದ ಹಾಗೂ ಅದೇ ಪಕ್ಷದ ಗಣ್ಯ ವ್ಯಕ್ತಿಗಳು ಆ ಸಿದ್ಧಾಂತಗಳಿಗೆ ಬೆಲೆ ಕೊಡಲಿಲ್ಲ. ಉಳಿದ ಪಕ್ಷಗಳಂತೆಯೇ ಮಾಡಿದ್ದರು ಕೂಡಾ.  ನಮಗೂ ನೈತಿಕವಾಗಿ ಯಾವ ಪಕ್ಷಗಳಲ್ಲೂ ಕೇಳಲು ಆಗದೇ ಇರುವ ಸ್ಥಿತಿ ಇದ್ದುದರಿಂದ   ಎಲ್ಲವೂ ಸಮಾನ ಎಂದು ತಿಳಿದು  ಯಾವ ಸಿದ್ದಾಂತಗಳೂ ಇಲ್ಲವೆಂದು ನಮ್ಮ ನಿರ್ಧಾರ ಬದಲಾಯಿಸಲು ಯೋಚಿಸುತ್ತಿದ್ದೆವು. ಮತ ಬಹಿಷ್ಕಾರ ಅಥವಾ ನೋಟದ ಯೋಚನೆಯಲ್ಲಿ ಇದ್ದೆವು. ಆಗ ಶ್ರೀನಿವಾಸ ಉಬರಡ್ಕ ಅವರು ಮನೆಗೆ ಆಗಮಿಸಿ, ಆ ಪಕ್ಷಕ್ಕೆ ಏಕೆ ಮತ ನೀಡಬೇಕು ಹಾಗೂ ಸಿದ್ಧಾಂತಗಳನ್ನು ಏಕೆ ಬದಲಿಸಬಾರದು ಎಂದು  ಹೇಳಿದ್ದರು. ಅದರ ಜೊತೆಗೆ ನಿಮ್ಮ ಮೂಲಭೂತ ವ್ಯವಸ್ಥೆಯ ಬಗ್ಗೆ ಚುನಾವಣೆಯ ನಂತರ ಮಾತಾಡೋಣ ಎಂದಿದ್ದರು. ಅವರ ಮಾತಿಗೆ ಬೆಲೆ ನೀಡಿದ್ದೆವು, ಏಕೆಂದರೆ ಶ್ರೀನಿವಾಸ ಉಬರಡ್ಕ ಅವರು ನೇರ ನಡೆ ನುಡಿಯವರು. ಅವರು ಪಕ್ಷದ ಹಿಂದೆ ಹೋದವರಲ್ಲ, ಆದರೆ ಸಂಘಟನೆಯ ಸೂಚನೆಯಂತೆ ಪಕ್ಷದ ಹಿನ್ನೆಲೆಯಲ್ಲಿ ಕೆಲಸ ಮಾಡಿದ್ದರು ಎನ್ನುವುದು  ನಮಗೆ ತಿಳಿದಿತ್ತು. 

ಅದಾಗಿ ಚುನಾವಣೆ ಮುಗಿದು ಕೆಲವು ಸಮಯವಾದರೂ ನಮ್ಮ ಬೇಡಿಕೆಗಳಿಗೆ ಯಾವ ಪ್ರತಿಕ್ರಿಯೆಯೂ ಇಲ್ಲದಾಗ ಮತ್ತೆ ಶ್ರೀನಿವಾಸ ಅವರಲ್ಲಿ  ಕೇಳಿದಾಗ ನಾನು ಮಾತು ತಪ್ಪಿದ್ದೇನೆ, ಈಗ ಪಕ್ಷದವರು ಈ ಬಗ್ಗೆ ಮಾತು ಎತ್ತುತ್ತಿಲ್ಲ, ಅಂದು ಗಮನಕ್ಕೆ ತಂದಿದ್ದೇನೆ ಎಂದರು. ಆ ಬಳಿಕ ಶ್ರೀನಿವಾಸ ಉಬರಡ್ಕ ಅವರ ಜೊತೆ ಈ ಬಗ್ಗೆ ಮಾತನಾಡಲಿಲ್ಲ. ಅವರ ಜೊತೆಗಿನ ನನ್ನ ಸ್ನೇಹ ಹೀಗೇ ಮುಂದುವರಿಯುತ್ತದೆ, ಆದರೆ ಇನ್ನು ನೀವು ನಮ್ಮ ಯಾವುದೇ ಹೋರಾಟದಲ್ಲಿ ನಮ್ಮ ರಾಜಿಗೆ ಬರಬಾರದು ಎಂದು ಹೇಳಿದ್ದೆವು. ಮೌನವಾಗಿ ನಗಾಡಿದ ಅವರು ಸುಮ್ಮನಾದರು. ಅದಾದ ಬಳಿಕದ ಯೋಚನೆ ಆರಂಭಿಸುತ್ತಿದ್ದಾಗ ಕೇಂದ್ರ ಸರಕಾರದ ಚುನಾವಣೆ ಬಂದಿತ್ತು. ಮೋದಿ ಅವರ ಹೆಸರಿಗಾಗಿ ಆ ಬಾರಿ ಮೌನ ವಹಿಸಿದೆವು. ಪಂಚಾಯತ್‌ ಚುನಾವಣೆಯ ವೇಳೆಗೆ ಯಾರ ಮಾತನ್ನೂ ಕೇಳದೆ ನಾವು ಹೋರಾಟಕ್ಕೆ ಸಿದ್ಧರಾದೆವು. ಅಂದಿನಿಂದ ಇಂದಿನವರೆಗೆ ಹೀಗೇ ಮಾತುಕತೆಗಳಾದರೂ ನಮ್ಮ ಹೋರಾಟಕ್ಕೂ ಅವರಿಗೂ ವಿರೋಧ ಇದೆ. ಆದರೆ ಇತರ ಸಾಮಾಜಿಕ ಕೆಲಸಗಳ ಬಗ್ಗೆ ಸದಾ ಚರ್ಚೆ ಇದೆ. 

ಅದಾದ ಬಳಿಕ ನನ್ನ ತಂದೆಯವರು ನಿಧನರಾದಾಗ ಕರೆ ಮಾಡಿ ಸಾಂತ್ವನ ಹೇಳಿದ, ಸಹಾಯ ಕೇಳಿದ, ಮನೆಗೆ ಬಂದು ಮಾತುಕತೆ ನಡೆಸಿ ಧೈರ್ಯ ತುಂಬಿದವರಲ್ಲಿ  ಶ್ರೀನಿವಾಸ ಉಬರಡ್ಕ ಹಾಗೂ ತಳೂರು ಚಂದ್ರಣ್ಣನೂ ಇದ್ದರು. 

ಇದೆಲ್ಲಾ ಘಟನೆಗಳ ನಂತರವೂ ಸ್ನೇಹ ಮುಂದುವರಿಯಿತು. ಸಾಮಾಜಿಕ ಸಂಗತಿಯನ್ನು ಬಿಟ್ಟು.

ಈಚೆಗೆ ಶ್ರೀನಿವಾಸ ಉಬರಡ್ಕ ಅವರ ಮಗಳ ವಿವಾಹ ಕಾರ್ಯಕ್ರಮಕ್ಕೆ ಆಹ್ವಾನ ಇತ್ತು. ಸಹಜವಾಗಿಯೇ ನನಗೆ ಕುತೂಹಲ ಇತ್ತು. ಹಿಂದುತ್ವದ ಪ್ರತಿಪಾದಕ, ಜಾತಿ ವ್ಯವಸ್ಥೆಯನ್ನು ಯಾವ ಕಾರ್ಯಕ್ರಮದಲ್ಲೂ ತಾರದ ವ್ಯಕ್ತಿ, ಇಡೀ ಕುಟುಂಬದ ಸದಸ್ಯರ, ಇನ್ನೊಂದು ಕುಟುಂಬದ ಮಂದಿಯನ್ನು ಮನವೊಲಿಸಿ ತಾವು ನಂಬಿದ ಸಿದ್ದಾಂತವನ್ನು  ಹೇಗೆ ಅನುಷ್ಟಾನ ಮಾಡುತ್ತಾರೆ ಎಂದು ಯೋಚಿಸುತ್ತಿದ್ದೆ. ಆದರೆ ನನ್ನ ಯೋಚನೆ, ನಿರೀಕ್ಷೆಗೂ ಮೀರಿ ಅವರು ಕಾರ್ಯಕ್ರಮ ನಡೆಸಿದರು. ಈ ಮೂಲಕ ಅವರ ವ್ಯಕ್ತಿತ್ವವನ್ನು ಇನ್ನಷ್ಟು ಎತ್ತರಕ್ಕೆ ಏರಿಸಿಕೊಂಡರು ಎಂಬುದು ನನ್ನ ಭಾವನೆ. ಹೀಗಾಗಿ ಅಕ್ಷರದ ಮೂಲಕ ದಾಖಲಿಸಬೇಕಾಯಿತು. 

ಈ ವಿವಾಹ ಕಾರ್ಯಕ್ರಮಕ್ಕೆ ಪೂರ್ವಯೋಜಿತವಾಗಿ ಬೆಳಗ್ಗೆಯೇ ಇರಬೇಕಾಗಿತ್ತು. ಆದರೆ ಖಾಸಗಿ ಕಾರಣಗಳಿಂದ ಕೊಂಚ ತಡವಾಗಿ ಭಾಗವಹಿಸಬೇಕಾಯಿತು.  ಜಾತಿಯಲ್ಲಿ ಬ್ರಾಹ್ಮಣ. ಆಚರಣೆಯಲ್ಲಿ ಹಿಂದುವಾಗಿದ್ದ ಶ್ರೀನಿವಾಸ ಅವರು ತಮ್ಮ ಮಗಳ ಮದುವೆಯಲ್ಲೂ ಸಂಪ್ರದಾಯಗಳೊಂದಿಗೆ ಹಿಂದುತ್ವವನ್ನು ಎತ್ತಿ ಹಿಡಿದರು. ಅದು ಸುಲಭದ ಕೆಲಸ ಅಲ್ಲ. ಮಾತು ಹಾಗೂ ಕೃತಿಯಲ್ಲಿ,  ನೇರ ನಡೆನುಡಿ ಇದ್ದರೆ ಮಾತ್ರವೇ ಈ ರೀತಿ ನಡೆಯಲು ಸಾಧ್ಯ. ನನ್ನ ಅಜ್ಜನೂ ಒಬ್ಬರು ಇದ್ದರು. ಅವರಿಗೂ ಈ ರೀತಿ ನಡೆದುಕೊಳ್ಳಲು ಆಗಿತ್ತು. ಉಳಿದ ಎಲ್ಲೆಡೆಯೂ ಆಚರಣೆಯಲ್ಲೂ ವ್ಯತ್ಯಾಸ ಇದ್ದುದನ್ನು ಕಂಡಿದ್ದೇನೆ. 

ಮದುವೆಯಲ್ಲಿ ಎರಡು ಕುಟುಂಬಗಳು, ಅದರಲ್ಲಿ ಇರುವ ಸಂಪ್ರದಾಯವಾದಿಗಳು, ಅವರ  ಮನವೊಲಿಸುವುದು  ಹಾಗೂ ಖಡಕ್‌ ಆಗಿ ಹೇಳುವುದು ಇದೆಲ್ಲಾ ಮದುವೆಯ ಕಾರ್ಯಕ್ರಮದಲ್ಲಿ ಸುಲಭದ ಕೆಲಸ ಅಲ್ಲ. ಸಂಘಟನೆ ಯಾವುದೇ ಇದ್ದರೂ ಅದೆಲ್ಲಾ ಬದಿಗಿರಲಿ ಎಂದು ಪುರೋಹಿತರಿಂದ ತೊಡಗಿ ಎಲ್ಲರೂ ಹೇಳುವ ಕಾಲದಲ್ಲಿ ಶ್ರೀನಿವಾಸರು ಮಗಳ ಮದುವೆಯಲ್ಲಿ  ಸಮಾಜದಲ್ಲಿ ಉಪೇಕ್ಷಿತ ಸಮಾಜ ಎಂದು ಯಾವುದನ್ನು ಗುರುತಿಸುತ್ತದೋ ಅದೇ ಸಮುದಾಯದ ಯುವಕ ವೈಯಕ್ತಿಕ ಗೀತೆ ಹಾಡಿದರು, ಅಕ್ಷತೆ ಹಾಕಿದರು. ಮಂಟಪಕ್ಕೆ ಬಂದರು. ಅಂದರೆ  ಇಡೀ ಹಿಂದೂ ಸಮಾಜವೇ ಬಂದಿದೆ ಎಂದೇ ಅರ್ಥವಾಯಿತು ಇಲ್ಲಿ. ಎಲ್ಲೂ ಯಾವ ತಾರತಮ್ಯ ಇಲ್ಲ. ಹಿಂದುತ್ವ ಎನ್ನುವುದು  ಓಟಿಗಾಗಿಯೋ,  ಉಪದೇಶಕ್ಕಾಗಿಯೋ ಇರುವ ಈ ಕಾಲದಲ್ಲಿ ನಾವೆಲ್ಲಾ ಇಂತಹವರಿಂದ ಪ್ರೇರಣೆಗೆ ಒಳಗಾದವರೇ.  

ಅಂತಹ ಜನರು ಈಗಿಲ್ಲ...  ಮಾತಿಗೂ ಕೃತಿಗೂ ವ್ಯತ್ಯಾಸ ಇದೆ ಎಂದು ಭ್ರಮನಿರಸನಗೊಂಡಿದ್ದೆ. ಓಟಿಗಾಗಿ ಮಾತ್ರವೇ ಹಿಂದುತ್ವ ಎಂದು ಭಾವಿಸಿಕೊಂಡಿದ್ದೆ. ಆದರೆ ಶ್ರೀನಿವಾಸ ಉಬರಡ್ಕ ಅವರ ಮೇಲಿದ್ದ ಗೌರವ ಇಮ್ಮಡಿಯಾಯಿತು. ಅವರ ಹಿಂದುತ್ವದ ಉದ್ದೇಶವೂ ಸಮಾನತೆಯೇ ಆಗಿದೆ ಎಂದು ಭಾವಿಸಿಕೊಂಡೆ. ಇಂತಹವರು ಯಾವತ್ತೂ ಪ್ರೇರಣೆಯೇ. ಇಂದು ನಾನು ಅನೇಕರಿಗೆ ವಿರೋಧಿ ಎಂದು ಅನಿಸಬಹುದು.ಅಭಿವೃದ್ಧಿ ಪರವಾಗಿ ಯೋಚಿಸುವುದು  ನಿರಂತರ.   ಆದರೆ ನಾನು ಇದುವರೆಗೂ ಕಲಿತ ಪಾಠ ಹಾಗೂ ಸ್ಫೂರ್ತಿಯಾದ  ಹಿಂದುತ್ವ ಆಚರಿಸಿದ್ದೇನೆ. ಆದರೆ ಈಗ ಹೊಡಿ, ಬಡಿಯ ಕಡೆಗೆ ಮನಸ್ಸಿಲ್ಲ. ಹಿಂದುವಾಗಿ ದೇಶದ ಕಡೆಗೆ ಸಂಸ್ಕೃತಿ ಉಳಿಸುವ, ಬೆಳೆಸುವ ಯೋಚನೆಯನ್ನು ಎಂದಿಗೂ ಬಿಡದೇ ಇರಲು ಶ್ರೀನಿವಾಸ, ವೇಣುವಣ್ಣ ಅಂತಹವರು ಮುಖ್ಯ ಕಾರಣ. 

ವಧೂವರರಿಗೆ ಶುಭಾಶಯ. ಅವರ ಮಗಳ ಬದುಕು ಸುಂದರವಾಗಲಿ. ಶುಭವಾಗಲಿ.