17 ಜೂನ್ 2011

ಇವರಿಗೆ ಮಳೆಯೇ ಛಾವಣಿ . . . !




ಇದು ಅಭಿವೃದ್ದಿ ಪಥದಲ್ಲಿ ಸಾಗುತ್ತಿರುವ ದೇಶ . ಆದರೂ ಎಲ್ಲೋ ಒಂದು ಕಡೆ ಮಾತ್ರಾ ಅಭಿವೃದ್ಧಿ ಪಥ ಇದೆ ಅನಿಸುತ್ತಾ ಇದೆ.ಸಮಗ್ರ ಅಭಿವೃದ್ದಿಯ ದಾರಿ ಇಂದಿಗೂ ಆಗಿಲ್ಲ ಅಂತ ಅನ್ನೋದು ಕಾಣ್ತಾ ಇದೆ. ಗ್ರಾಮೀಣ ಭಾರತ ಇನ್ನೂ ಕೂಡಾ ಪ್ರಕಾಶಿಸುತ್ತಿಲ್ಲ ಅಂತ ಈಗೀಗ ಅನಿಸುತ್ತಿದೆ. ಅದಕ್ಕೆ ಕಾರಣಗಳೂ , ಉದಾಹರಣೆಗಳೂ , ಉಪಮೆಗಳೂ ಸಾಕಷ್ಟು ಕಾಣುತ್ತಿದೆ. ಅಂತಹದ್ದೊಂದು ಪುರಾವೆ ಇಲ್ಲಿ ಕಂಡಿದ್ದೇನೆ.

ನೀವು ನಂಬುತ್ತೀರೋ ಬಿಡುತ್ತೀರೋ ಇದುವರೆಗೆ ಇವರು ಓಟು ಹಾಕಿಲ್ಲ , ಗುರುತಪತ್ರ ಇಲ್ಲವೇ ಇಲ್ಲ. ಹೆಚ್ಚೇಕೆ ಒಂದು ವಿಳಾಸವೂ ಇವರಿಗಿಲ್ಲ. ಹಾಕಿದ್ದರೂ ಇವರು ಭಾರತೀಯರು. . .!.

ಇದು ಇವರ ಸ್ಟೋರಿ . . , ಈ ಕೊರಗ ಕುಟುಂಬಗಳಿಗೆ ವಾಸಕ್ಕೊಂದು ತೀರಾ ಗುಡಿಸಲು. ಆದರೆ ಈ ಗುಡಿಸಲಿಗೆ ಆಗಸವೇ ಛಾವಣಿ , ಮಳೆ ಬಂದರೆ ಇಡೀ ರಾತ್ರಿ ಜಾಗರಣೆ. ಮಳೆ ಜೋರು ಸುರಿದರೆ ಕೊಡೆಯೇ ಛಾವಣಿ. ಆದರೂ ಅನಿವಾರ್ಯ, ಅಲ್ಲೇ ವಾಸ. ಇಂತಹ ಸಂಕಷ್ಠದ ಬದುಕಿನಲ್ಲಿರೋ ಜನ ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಗ್ರಾಮದ ಪೇರೋಳ್ತಡ್ಕದಲ್ಲಿ ವಾಸ ಮಾಡ್ತಾ ಇದ್ದಾರೆ ಅಂದರೆ ನಂಬುತ್ತೀರಾ.

ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಗ್ರಾಮದ ಪೆರೋಳ್ತಡ್ಕ ಎಂಬಲ್ಲಿ ಈಗ ಒಟ್ಟು 3 ಕೊರಗ ಕುಟುಂಬಗಳು ವಾಸಿಸುತ್ತಿವೆ. ಈ ಹಿಂದೆ ಇದೇ ಪ್ರದೇಶದಲ್ಲಿ 5 ಕೊರಗ ಕುಟುಂಬಗಳು ವಾಸಿಸುತ್ತಿತ್ತು. ಆದರೆ ಇಲ್ಲಿನ ಸಮಸ್ಯೆ ನೋಡಿ ಆ ಕುಟುಂಬ ಇಲ್ಲಿಂದ ವಲಸೆ ಹೋಗಿದೆ.ಈಗಿರುವ ಕೊರಗ ಕುಟುಂಬವೂ ಇದೇ ಯೋಚನೆಯಲ್ಲಿದೆ. ಆದರೆ ಏನೋ ಸವಲತ್ತು ಸಿಗುತ್ತದೆ , ಸೂರಿನ ವ್ಯವಸ್ಥೆ ಆಗುತ್ತದೆ ಎಂಬ ಆಶಾ ಭಾವನೆಯಲ್ಲಿದೆ. ಇಲ್ಲಿಗೆ 4 ವರ್ಷದ ಹಿಂದೆ ಧೂಮಡ್ಕ ಪ್ರದೇಶದಿಂದ ವಲಸೆ ಬಂದು ಸುಂದರ , ಕಲ್ಯಾಣಿ ಹಾಗೂ ಕಮಲ ಅವರ ಕುಟುಂಬ ಈಗಿನ ಪ್ರದೇಶದಲ್ಲಿ ನೆಲೆಸಿತ್ತು. ಇವರು ಸದ್ಯ ಇರುವ ಸ್ಥಳ ಸಾಮಾಜಿಕ ಅರಣ್ಯ ಪ್ರದೇಶದ ಜಾಗವಾಗಿದೆ. ಇಲ್ಲಿಗೆ ಬಂದು ನೆಲೆಸಿದ ಮೇಲೆ ಈ ಕುಟುಂಬ ಸ್ಥಳೀಯ ಪಂಚಾಯತ್ ಹಾಗೂ ವಿವಿದ ಇಲಾಖೆಗಳಿಗೆ ಮನವಿ ನೀಡಿ ನಿವೇಶನ ಹಾಗೂ ಮೂಲಸೌಕರ್ಯ ಸೇರಿದಂತೆ ಮನೆ ನೀಡುವಂತೆ ಮನವಿ ಮಾಡುತ್ತಾ ಬಂದಿತ್ತು. ಆದರೆ ವಿವಿದ ಕಾರಣಗಿಂದಾಗಿ ಈ ಬೇಡಿಕೆ ಈಡೇರಿಕೆ ಸಾಧ್ಯವಾಗಲೇ ಇಲ್ಲ. ಹೀಗಾಗಿ ಕಳೆದ 4 ವರ್ಷಗಳಿಂದ ಗುಡಿಸಲೇ ಇವರ ಮನೆಯಾಯಿತು. ಬೇಸಗೆಯಲ್ಲಾದರೆ ಪರವಾಗಿಲ್ಲ , ಮಳೆಗಾಲದಲ್ಲಿ ಈ ಕುಟುಂಬಗಳಿಗೆ ತೀರಾ ಸಂಕಷ್ಠದ ಪರಿಸ್ಥಿತಿ. ಹೀಗೇ, ಕಳೆದ ನಾಲ್ಕು ವರ್ಷಗಳಿಂದ ಸಂಕಷ್ಠದ ಬದುಕು ಸಾಗಿಸುತ್ತಿದ್ದಾರೆ. ಬದುಕು ನಿರ್ವಹಣೆಗಾಗಿ ಬುಟ್ಟಿ ಹೆಣೆಯುವುದು ಇವರ ಕಾಯಕ. ಅದೂ ಒಂದು ಬುಟ್ಟಿಗೆ 20 ರಿಂದ 30 ರೂಪಾಯಿ. ಮಳೆಗಾಲ ಇದೂ ಕಷ್ಟ ಎನ್ನುತ್ತಾರೆ ಸುಂದರ.

ಊಟಕ್ಕೆಂದು ಈಗ ಸದ್ಯದ ಮಟ್ಟಿಗೆ ಸರಕಾರದಿಂದ ಸಿಗುವ ರೇಶನ್ ಅಕ್ಕಿ , ಸೀಮೆಣ್ಣೆ ಪಡೆಯಲು ಪುತ್ತೂರು ತಾಲೂಕು ಕೊರಗ ಅಭಿವೃದ್ಧಿ ಸಂಘದಿಂದ ನೀಡಿದ ಒಂದು ಪತ್ರ ಇದೆ. ಅದು ಬಿಟ್ಟು ಇವರಲ್ಲಿ ಇನ್ಯಾವುದೇ ದಾಖಲೆಗಳು ಇಲ್ಲ. ಈಗಂತೂ ಮನೆ ಇಲ್ಲದೆ ಈ ಕುಟುಂಬಗಳು ಮಳೆಯಡಿಯಲ್ಲೆ ಮಲಗಬೇಕಾಗ ಪರಿಸ್ಥಿತಿ ಬಂದಿದೆ.ಇರುವ ಗುಡಿಸಲು ಮಳೆಗೆ ಸೋರುತ್ತಿದೆ. ಮಳೆ ಬಂದರೆ ಸಾಕು ಮನೆಯವರಿಗೆ ಹಗಲಾದರೆ ಕೊಡೆ ಹಿಡಿದು ಜೀವನ ರಾತ್ರಿಯಾದರೆ ಇಡೀ ಜಾಗರಣೆ. ಈಗ ಇರುವ ಗುಡಿಸಲಿಗೆ ಪ್ಲಾಸ್ಟಿಕ್ ಹೊದಿಕೆ ಹಾಕಲಾಗಿದ್ದರೂ ನೀರು ಗುಡಿಸಲೊಳಗೆ ಸರಾಗ ಹರಿದು ಬರುತ್ತಿದೆ. ಇನ್ನು ಮನೆಯೊಳಗೆ ಸರಿಯಾಗಿ ಒಬ್ಬರಿಗೆ ನಿಂತುಕೊಳ್ಳಲಾಗದ ಪರಿಸ್ಥಿತಿ ಈ ಮನೆಯೊಳಗಿದೆ. ಬಾಗಿಲುಗಳು ಇಲ್ಲವೇ ಇಲ್ಲ. ಶೌಚಾಲಯ , ಸ್ನಾನಗೃಹದ ಮಾತೇ ಇಲ್ಲ. ಮನೆ ಇಲ್ಲದ ಮೇಲೆ ಈ ಮಾತು ಎಲ್ಲಿಂದ ಎನ್ನುವುದು ಈ ಕೊರಗ ಕುಟುಂಬದ ಪ್ರಶ್ನೆ. ರಾತ್ರಿಯಾದ ಮೇಲೆ ಅಲ್ಲೇ ದೂರದಲ್ಲೇ ಎಲ್ಲಾದರೂ ಸ್ನಾನ ಮಾಡುವುದು ಎನ್ನುತ್ತಾರೆ ಕಲ್ಯಾಣಿ.ಇನ್ನು ಆರೋಗ್ಯ ಕೆಟ್ಟರೆ ಕೆಲವೊಮ್ಮೆ ಔಷಧಿಗೆ ಹೋಗಲು ಕೂಡಾ ಅಸಾಧ್ಯವಾಗುತ್ತದೆ ಎನ್ನುತ್ತಾರೆ ಕಮಲ. ನಮ್ಮ ದುಸ್ಥಿತಿಯ ಬಗ್ಗೆ ಎಲ್ಲಾ ಕಡೆ ಹೇಳಿಕೊಂಡಿದ್ದೇವೆ ಆದರೂ ಇದುವರೆಗೆ ಪರಿಹಾರ ಸಿಕ್ಕಿಲ್ಲ , ನಮಗೆ ಓಟು ಇಲ್ಲ ಎಂಬ ಕಾರಣಕ್ಕೆ ಈ ರೀತಿ ಆಗುತ್ತಿದೆಯೋ ಎಂದು ಗೊತ್ತಿಲ್ಲ ಎಂದು ಹೇಳುತ್ತಾರೆ ಸುಂದರ. ಪ್ರತೀ ಬಾರಿ ವಿವಿದ ಇಲಾಖೆಯವರು , ಅಧಿಕಾರಿಗಳು ಬರುತ್ತಾರೆ ನಮ್ಮ ಲೆಕ್ಕ ತೆಗೆದು ಹೋಗುತ್ತಾರೆ , ಇದುವರೆಗೆ ಏನೂ ಆಗಿಲ್ಲ ಎನ್ನುವ ಅವರು ಮನೆಯೊಂದು ಸಿಕ್ಕರೆ ನೆಮ್ಮದಿಯಿಂದ ನಾವು ಬದುಕಬಹುದು ಎಂದು ಈ ಕೊರಗ ಕುಟುಂಬ ಹೇಳುತ್ತದೆ.

ಒಟ್ಟಿನಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂದು ೫ ದಶಕಗಳೇ ಕಳೆದರೂ ಇಂದಿಗೂ ಗ್ರಾಮೀಣ ಭಾಗದಲ್ಲಿ ಗುಡಿಸಲು ಇಲ್ಲದ ಮಂದಿ ಇರುವುದು ನಮ್ಮ ಅಭಿವೃದ್ಧಿ ವೇಗಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಅದರಲ್ಲೂ ಮತದಾನ ಮಾಡದ ಮಂದಿ , ಮತದಾನದ ಗುರುತಿನ ಪತ್ರ ಕೂಡಾ ಇಲ್ಲದೇ ಇರುವುದು ಇನ್ನೂ ದುರಂತವೇ ಸರಿ.ಇದಕ್ಕೆಲ್ಲಾ ಏನು ಕಾರಣ ? ಇಷ್ಟಲ್ಲಾ ಇಲಾಖೆಗಳಿದ್ದರೂ ಯಾರು ಹೊಣೆ? ಎಂದು ಪ್ರಶ್ನಿಸಿಕೊಳ್ಳಬೇಕಾಗಿದೆ. ಕೇವಲ ನಗರ ಮಾತ್ರವಲ್ಲ ಗ್ರಾಮೀಣ ಭಾರತವೂ ಬೆಳಗಬೇಕಿದೆ. ಅದಕ್ಕಾಗಿ ಇಂತಹ ಬಡಕುಟುಂಬಗಳ ಮೂಲಭೂತ ಸೌಕರ್ಯವಾದ ಮನೆಯ ಕನಸುಗಳಿಗೆ ಬೆಳಕು ಬೇಕಿದೆ ಅನ್ನೋದು ನನ್ನ ಆಸೆ.

09 ಜೂನ್ 2011

ಕಾಡು ಬಿಟ್ಟು ನಾಡಿಗೆ ಬರೋ ಗಜಪಡೆ . .

ಕಾಡಾನೆ ಕಾಟ ಗ್ರಾಮೀಣ ಭಾಗದ ರೈತರಿಗೆ ಅನೇಕ ವರ್ಷಗಳಿಂದ ತಲೆನೋವಾಗಿ ಪರಿಣಮಿಸಿತ್ತು.ಆದರೆ ಈಗ ರೈತರಿಗೆ ಮಾತ್ರವಲ್ಲ ನಗರಕ್ಕೂ ಬಿಸಿ ಮುಟ್ಟಿಸುವ ವಾತಾವರಣ ಉಂಟಾಗಿದೆ.ಶಾಲೆಗೂ ರಜೆ ನೀಡಬೇಕಾದ ಪರಿಸ್ಥಿತಿ ಬುಧವಾರದಂದು ಮೈಸೂರಿನಲ್ಲಿ ಸೃಷ್ಠಿಯಾಗಿತ್ತು.ಈಗಲಾದರೂ ಎಚ್ಚರವಾದೀತೇ? .

ನಾನಂತೂ ಅನೇಕ ಬಾರಿ ಈ ಸುದ್ದಿಯನ್ನು ಓದಿದ್ದೆ, ಸ್ವತ: ಸುದ್ದಿ ಮಾಡಿದ್ದೆ ಕೂಡಾ. ಅದೆಲ್ಲೂ ಮೂಲೆಯಲ್ಲಿ ಬಂದು ಸುದ್ದಿ ಸದ್ದಿಲ್ಲದೇ ಆರಿ ಹೋಗುತ್ತಿತ್ತು. ಪ್ರತೀ ಬಾರಿಯೂ ಆನೆ ದಾಳಿಯಾದಾಗ ಅಲ್ಲಿನ ಜನ ದೂರವಾಣಿ ಮೂಲಕ ತಿಳಿಸುತ್ತಾರೆ. ಅಂದರೆ ಅದು ರಾತ್ರಿ ವೇಳೆ ಆನೆಗಳ ಹಿಂಡು ಕೃಷಿ ಭೂಮಿಗೆ ನುಗ್ಗಿ ಕೃಷಿಯನ್ನು ನಾಶ ಮಾಡಿ ಬಿಡುತ್ತವೆ. ಮರುದಿನ ಬೆಳಗ್ಗೆ ದೂರವಾಣಿ ಮೂಲಕ ತಮ್ಮ ವೇದನೆಯನ್ನು ರೈತರು ಹೇಳಿಕೊಳ್ಳುತ್ತಾರೆ. ನಮ್ಮ ಕ್ಯಾಮಾರಾದೊಂದಿಗೆ ಇಡೀ ನಮ್ಮ ತಂಡ ಹೋಗಿ ಇಡೀ ಚಿತ್ರಣ ಸಂಗ್ರಹಿಸಿ ಬರುತ್ತದೆ. ಅದೆಲ್ಲೂ ಸುದ್ದಿಯಾಗುತ್ತದೆ.

ಆದರೆ ಆನೆಗಳಿಗೆ ಅದು ಗೊತ್ತಾ ? ಅಂದು ರಾತ್ರಿಯೂ ಹಾಗೇ . . ಇಂದಿಗೂ ಹಾಗೆಯೇ. ನಾವು ಹೋದ ಸಂದರ್ಭದಲ್ಲಿ ಅದೆಷ್ಟೂ ರೈತರು ಕಣ್ಣೀರು ಹಾಕಿದ್ದೂ ಇದೆ. ಕಷ್ಟ ಪಟ್ಟು ಆರೇಳು ವರ್ಷ ಬೆಳೆದ ತೆಂಗು , ಅಡಿಕೆ , ಬಾಳೆ ಎಲ್ಲವೂ ನೆಲಕಚ್ಚಿ ಬಿಡುತ್ತದೆ. ಆದರೆ ಪರಿಹಾರ ಅಂತ ಹೋದರೆ ಸಿಗೋದು ಜುಜುಬಿ. ಅದು ಇಡೀ ಊರೂರು ತಿರುಗಾಡಿದ್ದಕ್ಕೆ ಸಾಲದು. ಹಾಗಾಗಿ ರೈತರು ಅದೆಲ್ಲಾ ಗೊಡವೆಗೇ ಹೋಗಲ್ಲ. ಕೃಷಿ ರಕ್ಷಣೆಗೆ ಬೇಲಿ ಹಾಕಿದರೆ ಅದು ಲೆಕ್ಕಕ್ಕೇ ಇಲ್ಲ. ಅದಕ್ಕೆ ಉದಾಹರಣೆ ಮೊನ್ನೆ ಮೈಸೂರಲ್ಲೇ ಕಂಡಾಯಿತು. ಎಷ್ಟೆತ್ತರ ಆನೆ ಜಿಗಿದಿದೆ ಮತ್ತು ಏನೆಲ್ಲಾ ರಂಪಾಟ ಮಾಡಿದೆ ಅಂತ. ಇನ್ನೂ ಒಂದು ಸಂಗತಿ ಅಂದು ಆ ರೈತರು ಹೇಳಿದ್ದರು, ಇಲ್ಲ ನಾವಿನ್ನು ಇಲ್ಲಿಂದ ಬಿಟ್ಟು ಬೇರೆಡೆ ಹೋಗಬೇಕಷ್ಟೆ ಅಂತಲೂ ಹೇಳಿಕೊಂಡಿದ್ದರು. ಆದರೂ ಹುಟ್ಟಿದ ಮಣ್ಣಿನ ನಂಟು. ಏನೇ ಹೋರಾಟ ಮಾಡಿಯಾದರೂ ಅಲ್ಲೇ ಬದುಕು.ಅದೇ ಭಯಾನಕ ಆನೆಗಳ ಜೊತೆಗೆ.

ಅದೇ ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗದ ಅಂದರೆ ಸುಳ್ಯ ತಾಲೂಕಿನ ಬಾಳುಗೋಡು , ಹರಿಹರ , ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ , ಪುತ್ತೂರು ತಾಲೂಕಿನ ಗುಂಡ್ಯ ಪ್ರದೇಶಗಳಲ್ಲಿ ಇಂದು ನಿನ್ನೆಯದಲ್ಲ.ಕಳೆದ ಅನೇಕ ವರ್ಷಗಳಿಂದ ಇಲ್ಲಿ ಆನೆಗಳ ಕಾಟ ನಿರಂತರ.ಇನ್ನು ಹಾಸನ ಕಡೆಗೆ ಹೋದರಂತೂ ಇನ್ನೂ ವಿಪರೀತ.ಇತ್ತೀಚೆಗಂತೂ ತೀವ್ರ ಬೆಳೆಹಾನಿಯಿಂದಾಗಿ ರೈತರ “ಶಾಪ”ಕ್ಕೆ ಆನೆಗಳ ಸಾವು ಕೂಡಾ ಸಂಭವಿಸಿತ್ತು.

ಕಳೆದ ವರ್ಷ ಚಾರ್ಮಾಡಿಯಲ್ಲಿ ಒಬ್ಬ ವ್ಯಕ್ತಿ ಆನೆ ಧಾಳಿಗೆ ಮೃತನಾದರೆ ಇತ್ತ ಗುಂಡ್ಯದಲ್ಲೂ ಇನ್ನೊಬ್ಬರು ಮೃತರಾಗಿದ್ದಾರೆ.ಬೆಳೆ ಹಾನಿಗೆ ಲೆಕ್ಕವೇ ಇಲ್ಲ. ಬಾಳೆ, ತೆಂಗು , ಅಡಿಕೆ ಮರಗಳು ಅದೆಷ್ಟೋ ನೆಲ ಕಚ್ಚಿವೆ. ಇನ್ನೂ ಕೆಲವು ಕಡೆ ಪಂಪ್‌ಶೆಡ್‌ಗಳು , ಇನ್ನೂ ಕೆಲವು ಕಡೆ ಮನೆಗಳಿಗೂ ಹಾನಿ ಮಾಡಿದ ನಿದರ್ಶನಗಳೂ ಇವೆ.

ಸುಳ್ಯ ತಾಲೂಕಿನ ಬಾಳುಗೋಡು, ಹರಿಹರ ಪ್ರದೇಶದಲ್ಲಿ ಸಂಜೆಯಾಗುತ್ತಿದ್ದಂತೆಯೇ ಆನೆಗಳ ಕಾಟ ಇದ್ದೇ ಇದೆ. ಶಾಲಾ ಮಕ್ಕಳು ಸಂಜೆ ವೇಳೆ ಮನೆಗೆ ಬರುವಾಗ ಭಯಬೀತರಾಗಿಯೇ ಬರಬೇಕಾದ ಪರಿಸ್ಥಿತಿ ಇಲ್ಲಿದೆ. ಹೀಗಾಗಿ ಪ್ರತಿನಿತ್ಯ ಮನೆಯಿಂದ ಮಕ್ಕಳನು ಕರೆದುಕೊಂಡು ಹೋಗಲು ದಾರಿಬದಿಗೆ ಬರುವುದು ಇಲ್ಲಿ ಸಾಮಾನ್ಯ. ಸಂಜೆಯಾಗುತ್ತಲೇ ಇಲ್ಲೂ ಡಾಮರು ರಸ್ತೆ ಬದಿಗೆ ಕಾಡಾನೆಗಳು ಬಂದದ್ದು ಅದೆಷ್ಟೋ ಬಾರಿ. ಕೆಲವರಂತೂ ಬೈಕ್ ಬಿಟ್ಟು ಓಡಿದ್ದೂ ಇದೆ. ಮಳೆಗಾಲದ ಹೊತ್ತಿಗಂತೂ ಇದು ಇನ್ನೂ ಹೆಚ್ಚು.

ಇನ್ನು ಕೃಷಿಕರು ತಮ್ಮ ಬೆಳೆ ರಕ್ಷಣೆಗಾಗಿ ಇನ್ನಿಲ್ಲದ ಪ್ರಯತ್ನ ನಡೆಸುತ್ತಲೇ ಇದ್ದಾರೆ. ಕೆಲವು ಕಡೆ ರಾತ್ರಿ ವೇಳೆಗೆ ಆನಗೆ ತೋಟಕ್ಕೆ ನುಗ್ಗದಂತೆ ಚಿಮಣಿ ದೀಪವನ್ನು ತೋಟದ ಅಂಚಿನಲ್ಲಿಟ್ಟು ಆನೆಯ ದಾರಿ ತಪ್ಪಿಸುತ್ತಿದ್ದರೆ ಇನ್ನೂ ಕೆಲವರು ಆನೆ ಬರುವ ದಾರಿಯಲ್ಲಿ ಮೆಣಸಿನ ಹುಡಿ ಹಾಕಿ ಆನೆ ದಾರಿ ತಪ್ಪಿಸುವುದೂ ಇದೆ. ಹೀಗಿದ್ದರೂ ಆನೆಗಳ ಹಿಂಡು ಒಮ್ಮೊಮ್ಮೆ ತೋಟಕ್ಕೆ ನುಗ್ಗಿದರೆ ಎಲ್ಲವ ಸರ್ವನಾಶ. ಇದು ಇಲ್ಲಿಯ ಪರಿಸ್ಥಿತಿಯಾದರೆ ಕಳೆದ ವರ್ಷ ಗುಂಡ್ಯದಲ್ಲಿ ಡಾಮರು ಹಾಕುತ್ತಿರುವ ಕಾರ್ಮಿಕರು ರಾತ್ರಿ ಮಲಗಿದ್ದ ವೇಳೆ ಅವರನ್ನೇ ಓಡಿಸಿದೆ. ಅತ್ತ ಚಾರ್ಮಾಡಿಯಲ್ಲೂ ಅದೇ ಪರಿಸ್ಥಿತಿ , ಬೆಳೆದ ಕೃಷಿ ರಕ್ಷಣೆಗೆ ರೈತರ ಹರಸಾಹಸ.

ಇತ್ತೀಚೆಗೆ ಆಗುತ್ತಿರುವ ಕಾಡು ನಾಶ , ಅರಣ್ಯ ಪ್ರದೇಶಗಳಲ್ಲಿ ನಡೆಯುತ್ತಿರುವ ಬೃಹತ್ ವಿದ್ಯುತ್ ಯೋಜನೆಗಳಂತಹ ಕಾಮಗಾರಿಗಳಿಂದಾಗಿ ಆನೆಗಳಿಗೆ ತೀರಾ ತೊಂದರೆಯಾಗಿ ನಾಡಿಗೆ ಬರುವ ಸ್ಥಿತಿಯಾಗಿದೆ. ಈ ಯೋಜನೆಗಳಿಂದಾಗಿ ಕಾಡಿನಲ್ಲಿ ಉಂಟಾಗುವ ಬೃಹತ್ ಸದ್ದುಗಳು ಕೂಡಾ ಆನೆಗಳು ಸೇರಿದಂತೆ ಎಲ್ಲಾ ಕಾಡು ಪ್ರಾಣಿಗಳಿಗೆ ಡಿಸ್ಟರ್ಬ್ ಆಗಿದ್ದಂತೂ ಸತ್ಯ. ಪ್ರಶಾಂತವಾದ ಆ ಕಾಡಿನಲ್ಲಿ ಇಂತಹ ಅಶಾಂತಿಗಳು ಉಂಟಾಗುತ್ತಿರುವ ಕಾರಣದಿಂದಾಗಿಯೇ ಇಂದು ನಾಡಿನಲ್ಲಿ ಅಶಾಂತಿಗಳಾಗುತ್ತಿವೆ. ರೈತರು ಇತ್ತೀಚೆಗಿನ ಕೆಲ ವರ್ಷಗಳಿಂದ ನಿದ್ದೆ ಕೆಡುವಂತಾಗಿದೆ. ಹೀಗಾಗಿ ಕಾಡಿನೊಳಗಿನ ಅಶಾಂತಿ ನಿಲ್ಲಿಸಲು ಸರಿಯಾದ ಕ್ರಮ ಇಂದು ಅನಿವಾರ್ಯವಾಗಿದೆ.ಆಗ ನಾಡಿನಲ್ಲೂ ಶಾಂತಿ ಸ್ಥಾಪನೆ ಸಾಧ್ಯ.