17 ಜೂನ್ 2011

ಇವರಿಗೆ ಮಳೆಯೇ ಛಾವಣಿ . . . !




ಇದು ಅಭಿವೃದ್ದಿ ಪಥದಲ್ಲಿ ಸಾಗುತ್ತಿರುವ ದೇಶ . ಆದರೂ ಎಲ್ಲೋ ಒಂದು ಕಡೆ ಮಾತ್ರಾ ಅಭಿವೃದ್ಧಿ ಪಥ ಇದೆ ಅನಿಸುತ್ತಾ ಇದೆ.ಸಮಗ್ರ ಅಭಿವೃದ್ದಿಯ ದಾರಿ ಇಂದಿಗೂ ಆಗಿಲ್ಲ ಅಂತ ಅನ್ನೋದು ಕಾಣ್ತಾ ಇದೆ. ಗ್ರಾಮೀಣ ಭಾರತ ಇನ್ನೂ ಕೂಡಾ ಪ್ರಕಾಶಿಸುತ್ತಿಲ್ಲ ಅಂತ ಈಗೀಗ ಅನಿಸುತ್ತಿದೆ. ಅದಕ್ಕೆ ಕಾರಣಗಳೂ , ಉದಾಹರಣೆಗಳೂ , ಉಪಮೆಗಳೂ ಸಾಕಷ್ಟು ಕಾಣುತ್ತಿದೆ. ಅಂತಹದ್ದೊಂದು ಪುರಾವೆ ಇಲ್ಲಿ ಕಂಡಿದ್ದೇನೆ.

ನೀವು ನಂಬುತ್ತೀರೋ ಬಿಡುತ್ತೀರೋ ಇದುವರೆಗೆ ಇವರು ಓಟು ಹಾಕಿಲ್ಲ , ಗುರುತಪತ್ರ ಇಲ್ಲವೇ ಇಲ್ಲ. ಹೆಚ್ಚೇಕೆ ಒಂದು ವಿಳಾಸವೂ ಇವರಿಗಿಲ್ಲ. ಹಾಕಿದ್ದರೂ ಇವರು ಭಾರತೀಯರು. . .!.

ಇದು ಇವರ ಸ್ಟೋರಿ . . , ಈ ಕೊರಗ ಕುಟುಂಬಗಳಿಗೆ ವಾಸಕ್ಕೊಂದು ತೀರಾ ಗುಡಿಸಲು. ಆದರೆ ಈ ಗುಡಿಸಲಿಗೆ ಆಗಸವೇ ಛಾವಣಿ , ಮಳೆ ಬಂದರೆ ಇಡೀ ರಾತ್ರಿ ಜಾಗರಣೆ. ಮಳೆ ಜೋರು ಸುರಿದರೆ ಕೊಡೆಯೇ ಛಾವಣಿ. ಆದರೂ ಅನಿವಾರ್ಯ, ಅಲ್ಲೇ ವಾಸ. ಇಂತಹ ಸಂಕಷ್ಠದ ಬದುಕಿನಲ್ಲಿರೋ ಜನ ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಗ್ರಾಮದ ಪೇರೋಳ್ತಡ್ಕದಲ್ಲಿ ವಾಸ ಮಾಡ್ತಾ ಇದ್ದಾರೆ ಅಂದರೆ ನಂಬುತ್ತೀರಾ.

ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಗ್ರಾಮದ ಪೆರೋಳ್ತಡ್ಕ ಎಂಬಲ್ಲಿ ಈಗ ಒಟ್ಟು 3 ಕೊರಗ ಕುಟುಂಬಗಳು ವಾಸಿಸುತ್ತಿವೆ. ಈ ಹಿಂದೆ ಇದೇ ಪ್ರದೇಶದಲ್ಲಿ 5 ಕೊರಗ ಕುಟುಂಬಗಳು ವಾಸಿಸುತ್ತಿತ್ತು. ಆದರೆ ಇಲ್ಲಿನ ಸಮಸ್ಯೆ ನೋಡಿ ಆ ಕುಟುಂಬ ಇಲ್ಲಿಂದ ವಲಸೆ ಹೋಗಿದೆ.ಈಗಿರುವ ಕೊರಗ ಕುಟುಂಬವೂ ಇದೇ ಯೋಚನೆಯಲ್ಲಿದೆ. ಆದರೆ ಏನೋ ಸವಲತ್ತು ಸಿಗುತ್ತದೆ , ಸೂರಿನ ವ್ಯವಸ್ಥೆ ಆಗುತ್ತದೆ ಎಂಬ ಆಶಾ ಭಾವನೆಯಲ್ಲಿದೆ. ಇಲ್ಲಿಗೆ 4 ವರ್ಷದ ಹಿಂದೆ ಧೂಮಡ್ಕ ಪ್ರದೇಶದಿಂದ ವಲಸೆ ಬಂದು ಸುಂದರ , ಕಲ್ಯಾಣಿ ಹಾಗೂ ಕಮಲ ಅವರ ಕುಟುಂಬ ಈಗಿನ ಪ್ರದೇಶದಲ್ಲಿ ನೆಲೆಸಿತ್ತು. ಇವರು ಸದ್ಯ ಇರುವ ಸ್ಥಳ ಸಾಮಾಜಿಕ ಅರಣ್ಯ ಪ್ರದೇಶದ ಜಾಗವಾಗಿದೆ. ಇಲ್ಲಿಗೆ ಬಂದು ನೆಲೆಸಿದ ಮೇಲೆ ಈ ಕುಟುಂಬ ಸ್ಥಳೀಯ ಪಂಚಾಯತ್ ಹಾಗೂ ವಿವಿದ ಇಲಾಖೆಗಳಿಗೆ ಮನವಿ ನೀಡಿ ನಿವೇಶನ ಹಾಗೂ ಮೂಲಸೌಕರ್ಯ ಸೇರಿದಂತೆ ಮನೆ ನೀಡುವಂತೆ ಮನವಿ ಮಾಡುತ್ತಾ ಬಂದಿತ್ತು. ಆದರೆ ವಿವಿದ ಕಾರಣಗಿಂದಾಗಿ ಈ ಬೇಡಿಕೆ ಈಡೇರಿಕೆ ಸಾಧ್ಯವಾಗಲೇ ಇಲ್ಲ. ಹೀಗಾಗಿ ಕಳೆದ 4 ವರ್ಷಗಳಿಂದ ಗುಡಿಸಲೇ ಇವರ ಮನೆಯಾಯಿತು. ಬೇಸಗೆಯಲ್ಲಾದರೆ ಪರವಾಗಿಲ್ಲ , ಮಳೆಗಾಲದಲ್ಲಿ ಈ ಕುಟುಂಬಗಳಿಗೆ ತೀರಾ ಸಂಕಷ್ಠದ ಪರಿಸ್ಥಿತಿ. ಹೀಗೇ, ಕಳೆದ ನಾಲ್ಕು ವರ್ಷಗಳಿಂದ ಸಂಕಷ್ಠದ ಬದುಕು ಸಾಗಿಸುತ್ತಿದ್ದಾರೆ. ಬದುಕು ನಿರ್ವಹಣೆಗಾಗಿ ಬುಟ್ಟಿ ಹೆಣೆಯುವುದು ಇವರ ಕಾಯಕ. ಅದೂ ಒಂದು ಬುಟ್ಟಿಗೆ 20 ರಿಂದ 30 ರೂಪಾಯಿ. ಮಳೆಗಾಲ ಇದೂ ಕಷ್ಟ ಎನ್ನುತ್ತಾರೆ ಸುಂದರ.

ಊಟಕ್ಕೆಂದು ಈಗ ಸದ್ಯದ ಮಟ್ಟಿಗೆ ಸರಕಾರದಿಂದ ಸಿಗುವ ರೇಶನ್ ಅಕ್ಕಿ , ಸೀಮೆಣ್ಣೆ ಪಡೆಯಲು ಪುತ್ತೂರು ತಾಲೂಕು ಕೊರಗ ಅಭಿವೃದ್ಧಿ ಸಂಘದಿಂದ ನೀಡಿದ ಒಂದು ಪತ್ರ ಇದೆ. ಅದು ಬಿಟ್ಟು ಇವರಲ್ಲಿ ಇನ್ಯಾವುದೇ ದಾಖಲೆಗಳು ಇಲ್ಲ. ಈಗಂತೂ ಮನೆ ಇಲ್ಲದೆ ಈ ಕುಟುಂಬಗಳು ಮಳೆಯಡಿಯಲ್ಲೆ ಮಲಗಬೇಕಾಗ ಪರಿಸ್ಥಿತಿ ಬಂದಿದೆ.ಇರುವ ಗುಡಿಸಲು ಮಳೆಗೆ ಸೋರುತ್ತಿದೆ. ಮಳೆ ಬಂದರೆ ಸಾಕು ಮನೆಯವರಿಗೆ ಹಗಲಾದರೆ ಕೊಡೆ ಹಿಡಿದು ಜೀವನ ರಾತ್ರಿಯಾದರೆ ಇಡೀ ಜಾಗರಣೆ. ಈಗ ಇರುವ ಗುಡಿಸಲಿಗೆ ಪ್ಲಾಸ್ಟಿಕ್ ಹೊದಿಕೆ ಹಾಕಲಾಗಿದ್ದರೂ ನೀರು ಗುಡಿಸಲೊಳಗೆ ಸರಾಗ ಹರಿದು ಬರುತ್ತಿದೆ. ಇನ್ನು ಮನೆಯೊಳಗೆ ಸರಿಯಾಗಿ ಒಬ್ಬರಿಗೆ ನಿಂತುಕೊಳ್ಳಲಾಗದ ಪರಿಸ್ಥಿತಿ ಈ ಮನೆಯೊಳಗಿದೆ. ಬಾಗಿಲುಗಳು ಇಲ್ಲವೇ ಇಲ್ಲ. ಶೌಚಾಲಯ , ಸ್ನಾನಗೃಹದ ಮಾತೇ ಇಲ್ಲ. ಮನೆ ಇಲ್ಲದ ಮೇಲೆ ಈ ಮಾತು ಎಲ್ಲಿಂದ ಎನ್ನುವುದು ಈ ಕೊರಗ ಕುಟುಂಬದ ಪ್ರಶ್ನೆ. ರಾತ್ರಿಯಾದ ಮೇಲೆ ಅಲ್ಲೇ ದೂರದಲ್ಲೇ ಎಲ್ಲಾದರೂ ಸ್ನಾನ ಮಾಡುವುದು ಎನ್ನುತ್ತಾರೆ ಕಲ್ಯಾಣಿ.ಇನ್ನು ಆರೋಗ್ಯ ಕೆಟ್ಟರೆ ಕೆಲವೊಮ್ಮೆ ಔಷಧಿಗೆ ಹೋಗಲು ಕೂಡಾ ಅಸಾಧ್ಯವಾಗುತ್ತದೆ ಎನ್ನುತ್ತಾರೆ ಕಮಲ. ನಮ್ಮ ದುಸ್ಥಿತಿಯ ಬಗ್ಗೆ ಎಲ್ಲಾ ಕಡೆ ಹೇಳಿಕೊಂಡಿದ್ದೇವೆ ಆದರೂ ಇದುವರೆಗೆ ಪರಿಹಾರ ಸಿಕ್ಕಿಲ್ಲ , ನಮಗೆ ಓಟು ಇಲ್ಲ ಎಂಬ ಕಾರಣಕ್ಕೆ ಈ ರೀತಿ ಆಗುತ್ತಿದೆಯೋ ಎಂದು ಗೊತ್ತಿಲ್ಲ ಎಂದು ಹೇಳುತ್ತಾರೆ ಸುಂದರ. ಪ್ರತೀ ಬಾರಿ ವಿವಿದ ಇಲಾಖೆಯವರು , ಅಧಿಕಾರಿಗಳು ಬರುತ್ತಾರೆ ನಮ್ಮ ಲೆಕ್ಕ ತೆಗೆದು ಹೋಗುತ್ತಾರೆ , ಇದುವರೆಗೆ ಏನೂ ಆಗಿಲ್ಲ ಎನ್ನುವ ಅವರು ಮನೆಯೊಂದು ಸಿಕ್ಕರೆ ನೆಮ್ಮದಿಯಿಂದ ನಾವು ಬದುಕಬಹುದು ಎಂದು ಈ ಕೊರಗ ಕುಟುಂಬ ಹೇಳುತ್ತದೆ.

ಒಟ್ಟಿನಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂದು ೫ ದಶಕಗಳೇ ಕಳೆದರೂ ಇಂದಿಗೂ ಗ್ರಾಮೀಣ ಭಾಗದಲ್ಲಿ ಗುಡಿಸಲು ಇಲ್ಲದ ಮಂದಿ ಇರುವುದು ನಮ್ಮ ಅಭಿವೃದ್ಧಿ ವೇಗಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಅದರಲ್ಲೂ ಮತದಾನ ಮಾಡದ ಮಂದಿ , ಮತದಾನದ ಗುರುತಿನ ಪತ್ರ ಕೂಡಾ ಇಲ್ಲದೇ ಇರುವುದು ಇನ್ನೂ ದುರಂತವೇ ಸರಿ.ಇದಕ್ಕೆಲ್ಲಾ ಏನು ಕಾರಣ ? ಇಷ್ಟಲ್ಲಾ ಇಲಾಖೆಗಳಿದ್ದರೂ ಯಾರು ಹೊಣೆ? ಎಂದು ಪ್ರಶ್ನಿಸಿಕೊಳ್ಳಬೇಕಾಗಿದೆ. ಕೇವಲ ನಗರ ಮಾತ್ರವಲ್ಲ ಗ್ರಾಮೀಣ ಭಾರತವೂ ಬೆಳಗಬೇಕಿದೆ. ಅದಕ್ಕಾಗಿ ಇಂತಹ ಬಡಕುಟುಂಬಗಳ ಮೂಲಭೂತ ಸೌಕರ್ಯವಾದ ಮನೆಯ ಕನಸುಗಳಿಗೆ ಬೆಳಕು ಬೇಕಿದೆ ಅನ್ನೋದು ನನ್ನ ಆಸೆ.

ಕಾಮೆಂಟ್‌ಗಳಿಲ್ಲ: