21 ನವೆಂಬರ್ 2008

ಚಳಿ ಚಳಿ ಚಳಿ .. ಆಹಾ .. ಏನು ಚಳಿ...


ಚಳಿ... ಇದು ಮೌನ ಧ್ಯಾನ...

ಸೂರ್ಯ ಮೂಡಣದಿ ಕೆಂಪಾಗಿ ಕಾಣುತ್ತಲೇ ಹಾಸಿಗೆಯು ಯಥಾಸ್ಥಾನವನ್ನು ಪಡೆಯುತ್ತದೆ.ರಗ್ಗು ಕಂಬಳಿಗಳು ಮಡಚಿಕೊಳ್ಳುತ್ತವೆ.ಅಬ್ಬಾ ಏನು ಚಳಿ... ಆದರೂ ಬೆಳಗ್ಗೆ 6 ರಿಂದ 7 ರ ನಡುವೆ ಉತ್ಥಾನವಾಗದೆ ವಿಧಿಯಿಲ್ಲ.ಇನ್ನೆರಡು ತಿಂಗಳುಗಳ ಕಾಲ ಈ ಚಳಿಯು ಹೊಸ ಲೋಕವನ್ನು ಸೃಷ್ಠಿಸಿಬಿಡುತ್ತದೆ.

ಬೆಳ್ಳಂಬೆಳಗ್ಗೆ ಸೊಂಯ್ ಬೀಸುವ ಗಾಳಿ... ತೆಂಗಿನ ಗರಿಯಿಂದ ಟಪ್.. ಟಪ್ ಬೀಳುವ ಮಂಜಿನ ಹನಿ.. ಈ ಹನಿಗಳ ನಡುವೆ ಹರಿದು ಬರುವ ಸೂರ್ಯನ ಕಿರಣ... ಅಲ್ಲಲ್ಲಿ ಎಳೆಯ ಬಿಸಿಲಿಗೆ ಮೈಯೊಡ್ಡಿ ನಿಲ್ಲುತ್ತಾ ಹರಟೆಯನ್ನು ಹೊಡೆಯುವ ತಂಡಗಳು... ಹೀಗೆ ಚಳಿ ಹತ್ತು ಹಲವು ಮಜಲಿನಲ್ಲಿ ತನ್ನದೇ ಆದ ಬೇರನ್ನು ಇಳಿಗೊಳಿಸುತ್ತದೆ.ನೋಡುಗನಿಗೆ ಒಂದೊಂದು ರೂಪದಲ್ಲಿ ಕಾಣಿಸುತ್ತದೆ. ದೂರದ ಅಲ್ಲೆಲ್ಲೋ ಅನುದಿನವೂ ಏನೊಂದು ಚಳಿ.. 0 ಡಿಗ್ರಿಗಿಂತ ಕಡಿಮೆಗೆ ಕೆಲವೊಮ್ಮೆ ಇಳಿದಿರುತ್ತದೆ ಆದರೆ ಅವರು ಹೇಗಪ್ಪಾ ಸಹಿಸುತ್ತಾರೆ..?? ಇಲ್ಲಿ ಒಂದು ದಿನ ಚಳಿ ಜೋರಾದರೆ ಬೆಚ್ಚನೆ ಮಲಗಿದರೆ ಏಳುವಾಗಲೇ ತಡವಾಗಿ ಬಿಡುತ್ತದೆ. ಆದರೆ ಅವರು ಹೇಗೆ ........... ?. ನಿಜಕ್ಕೂ ಅಚ್ಚರಿ. ಆದರೆ ಅದು ಅಲ್ಲಿನ ವಾತಾವರಣ ಬಿಡಿ. ನಾವಲ್ಲಿದ್ದರೂ ಸೆಟ್ ಆಗುತ್ತಿದೆವು ಅನ್ನಿ. ಹಾ.. ಅದೆಲ್ಲಾ ಬಿಡಿ ನಮ್ಮಲ್ಲಿದ್ದಷ್ಟು ಚಳಿ ಇಲ್ಲಿನ ಆಸುಪಾಸಿನಲ್ಲೆಲ್ಲೂ ಇಲ್ಲ. ಹಾಗಾಗಿ ನಮ್ಮೂರು ಬೆಳಗಿನ ಜಾವ ಈಗ ಕೊಂಚ ಸ್ಥಬ್ಧ. ಮೊನ್ನೆ ಮೊನ್ನೆ ಹಸಿರು ಹಸಿರಾಗಿದ್ದ ಗಿಡ ಗಂಟಿಗಳು ಇನ್ನು ಒಣಗಲು ಶುರುವಾಗುತ್ತವೆ. ಹೊಸ ಜೀವನಕ್ಕೆ ಅವುಗಳೂ ನಾಂದಿಯನ್ನು ಹಾಡುತ್ತವೆ. ಹಾಗೆಯೆ ಇತ್ತ ಚಳಿಯೂ ಮುದ ನೀಡುತ್ತದೆ. ಬೆಳಗ್ಗೆ ಆಗಿನ್ನೂ ಸೊಂಯ್ ಗಾಳಿ ಸುಳಿದಾಡುತ್ತಿರುವಾಗ ಎರಡೆರಡು ರಗ್ಗು ಹೊದ್ದಲ್ಲಿಂದ ಎದ್ದು ಹಾಗೆಯೇ ಬಂದು ಇಣುಕಿದಾಗ ಮನೆಯೆದುರು ಬೊಗ್ಗ ಕುಟುರು ಹಾಕುತ್ತಿರುತ್ತದೆ. ನಮ್ಮನ್ನು ಕಂಡಾಗ ಬಾಲವನ್ನು ಅಲ್ಲಾಡಿಸಿ ಟಪ ಟಪ್ ಎಂದು ಮೈಯ ಕೊಡವಿ ಎಲ್ಲೋ ಮಾಯವಾಗಿ ಬಿಡುತ್ತದೆ. ಅಲ್ಲಿ ಹಿರಿಯಜ್ಜಂದಿರು ಆಗಲೇ ಗದ್ದೆಯ ಕಡೆಗೆ ತೆರಳಿ ಒಂದು ಸುತ್ತು ಹಾಕಿ ಗಿಡಗಳಿಗೆ ನೀರು ಹಾಕಿ ಬಂದು ಬಿಸಿ ನೀರಿನ ಸ್ನಾನದಲ್ಲಿ ತೊಡಗುತ್ತಾರೆ. ಆ ನಂತರ ಬಿಸಿ ಬಿಸಿ ಚಾ... ಅಂಗಳದಲ್ಲಿ ಅಗ್ನಿಷ್ಠಿಕೆಯ ಮಜಾ... ಮಕ್ಕಳೆಲ್ಲಾ ಸೇರಿ ಆ ಅಗ್ನಿಷ್ಠಿಕೆ ಸುತ್ತಾ ಕುಟು ಕುಟು ಎನ್ನುತ್ತಾ ಕತೆಯ ಜ್ಞಾಪನ. ಹೋ ಅದು ಕತೆ, ಕೇಳಲು ಹೇಳಲು ಎಂಥ ಸುಂದರ ಜಾಗ. ಅಜ್ಜನಿಗೆ ಬೀಡಿ ಸೇದಲು ಎಂಥ್ ಆಒಳ್ಳೆ ಸಮಯ ಅದು. ಸ್ಪಕ್ಕದ ಮಬೆಯಾತನ ಬಗ್ಗೆ ಕಮೆಂಟ್ ಹೇಳಲು ಉತ್ತಮ ಅವಕಾಶ... ಹೀಗೆ ಎಲ್ಲರಿಗೂ ಆ ಚಳಿ ಆಪ್ಯಾಯಮಾನ... ಹೊಸದಾದ ಜೋಡಿಗಂತೂ ಹೇಳಿ ಮಾಡಿಸಿದ ಸಮಯವಂತೆ... ಅಜ್ಜಂದಿಗೆ ನೆನಪುಗಳನ್ನು ಕೆದಕುವ ಸಮಯವಂತೆ... ನಮ್ಮಂಥವರಿಗೆ ಚಳಿಯನ್ನು ಆಸ್ವಾದಿಸುವ ಸುಂದರ ಸಮಯ...

ಆಹಾ ಏನು ಚಳಿ... ಏನು ಚಳಿ... ಏನು ಖುಷಿ... ಕುಟು .. ಕುಟು.. ಕುಟು...

18 ನವೆಂಬರ್ 2008

ಹಳ್ಳಿಗಳನ್ನು ಬೆಸೆಯುವ ಸರದಾರ....




ಹಳ್ಳಿಗಳು ಸಂಪರ್ಕ ಪಡೆದರೆ ಮಾತ್ರಾ ಈ ದೇಶದ ಅಭಿವೃದ್ಧಿ ಸಾಧ್ಯ ಎಂಬುದು ನಗ್ನ ಸತ್ಯ. ಹಾಗಾದರೆ ಇಂದು ಎಷ್ಟು ಹಳ್ಳಿಗಳು ಮುಕ್ತವಾಗಿ ವರ್ಷ ಪೂರ್ತಿ ನಗರವನ್ನು ಸಂಪರ್ಕಿಸುತ್ತದೆ. ಅಲ್ಲಿನ ಜನ ನೆಮ್ಮದಿಯ ಬದುಕು ಕಟ್ಟಿಕೊಳ್ಳುತ್ತಾರೆ ಎನ್ನುವುದನ್ನು ನಾವು ಅನುದಿನವೂ ಗಮನಿಸುತ್ತಲೇ ಇರುತ್ತೇವೆ. ಅಂತಹ ಒಂದು ಅನುಭವ ಹಿಂದೊಮ್ಮೆ ಆಗಿತ್ತು.ಇತ್ತಿಚೆಗೆ ಹಳ್ಳಿಯೊಂದಕ್ಕೆ ಹೋಗಿದ್ದಾಗ ಅಲ್ಲಿನ ಜನರು ಹಲವು ವರ್ಷಗಳಿಂದ ಅನುಭವಿಸುತ್ತಿದ್ದ ಸಮಸ್ಯೆಯನ್ನು ವರದಿ ಮಾಡಲಾಗಿತ್ತು.ಇಲ್ಲೂ ದಾಖಲಿಸಿದ್ದೆ.ಅಂತಹ ಪರಿಸ್ಥಿತಿಯಲ್ಲಿ ಹಳ್ಳಿಗರಿಗೆ ಸಂಪರ್ಕ ಸೇತುವಾಗಿ ಕಂಡುಬರುವವರು ಸುಳ್ಯದ ಗಿರೀಶ್ ಭಾರದ್ವಾಜ್. ಅವರ ಕುರಿತು ನಮ್ಮ ಚಾನೆಲ್ ಫೋಕಸ್ ನಲ್ಲಿ ಗುರುತಿಸಿತ್ತು. ಹಳ್ಳಿಗಳಿಂದ ಉತ್ತಮವಾದ ಅಭಿಪ್ರಾಯ ಬಂದಿತ್ತು. ಪತ್ರಕರ್ತ ವಲಯದಿಂದ ಮಿಶ್ರ ಪ್ರತಿಕ್ರಿಯೆ ಬಂದಿತ್ತು. ಆದರೆ ಅವರ ಕುರಿತು ಮಾಡಿದ ಸುದ್ದಿಯಿಂದ ರಾಜ್ಯದ ಹಲವಾರು ಗ್ರಾಮಿಣ ಪ್ರದೇಶದ ಜನರಿಗೆ ಇಂತಹದ್ದೊಂದು ಸಂಪರ್ಕ ಸೇತು ನಮಗೂ ಆದೀತು ಎನ್ನುವ ಭಾವನೆ ಮೂಡಿದ್ದಂತೂ ಸತ್ಯ.ಇನ್ನು ಏನಿದ್ದರೂ ಜನ ಮತ್ತು ಸರಕಾರದ ಕೆಲಸ. ಗಿರೀಶರ ಸಹಕಾರ. ಆದುದರಿಂದ ಗಿರೀಶರ ಬಗ್ಗೆ ಇಲ್ಲಿ ಒಂದಿಷ್ಟು....

ಇಂದು ಬಹುತೇಕ ಹಳ್ಳಿಗಳು ಮಳೆಗಾಲದ 6 ತಿಂಗಳುಗಳ ಕಾಲ ನಗರದ ಸಂಪರ್ಕವನ್ನೇ ಕಡಿದುಕೊಂಡಿರುತ್ತದೆ. ಕಾರಣ ಆ ಊರಿನಲ್ಲಿ ಹರಿಯುವ ನದಿ. ಹೀಗಾಗಿ ಅಲ್ಲಿನ ಜನ ಅತ್ಯಂತ ಬವಣೆಪಡುತ್ತಿರುತ್ತಾರ್. ಇಂತಹ ಪರಿಸ್ಥಿತಿಯಲ್ಲಿ ಅಲ್ಲಿನ ಜನರ ಬದುಕಿಗೆ ಆಶಾಕಿರಣವಾಗಿ ಮೂಡಿಬರುವುದು ತೂಗುಸೇತುವೆಗಳು.ಸುಳ್ಯದ ಗಿರೀಶ್ ಭಾರಧ್ವಾಜರು ಅಂತಹ ತೂಗು ಸೇತುವೆಗಳ ನಿರ್ಮಾಣದ ಸರದಾರ ಎನಿಸಿಕೊಂಡಿದ್ದಾರೆ.

ಹಳ್ಳಿಯ ಬದುಕೆಂದರೆ ಗುಡ್ಡ, ಹೊಳೆ, ಹಳ್ಳಗಳಿಂದ ಕೂಡಿರುತ್ತದೆ.ಅಲ್ಲಿನ ಕೃಷಿಕರಿಗೆ ಇಂತಹ ಹೊಳೆಗಳು ಬೇಸಗೆಯ ಕಾಲದಲ್ಲಿ ವರದಾನವಾದರೆ ಮಳೆಗಾಲದ ಅವಧಿಯಲ್ಲಿ ಸಂಕಷ್ಟವನ್ನು ನೀಡುತ್ತದೆ.ನಗರವನ್ನು ಸಂಪರ್ಕಿಸದಂತೆ ಮಾಡಿಬಿಡುತ್ತದೆ.ಒಂದೇ ಸಮನೆ ಮಳೆಸುರಿದರೆ ನದಿಗಳು ತುಂಬಿಹರಿದು ತಿಂಗಳುಗಟ್ಟಲೆ ದ್ವೀಪದಂತಾಗುತ್ತದೆ.ಸರಕಾರಗಳು ಉದ್ದದ ನದಿಗಳಿಗೆ ಸೇತುವೆಯನ್ನು ನಿರ್ಮಿಸುವ ಗೋಜಿಗೆ ಹೋಗುವುದಿಲ್ಲ. ಹಾಗೊಂದು ವೇಳೆ ಹೇಳಿದರೂ ಅದು ಭರವಸೆಯಾಗಿಯೇ ಉಳಿದಿರುತ್ತದೆ. ಹಾಗಾಗಿ ಹಳ್ಳಿಗರಿಗೆ ತಾವು ಬೆಳೆದ ಕೃಷಿಯುತ್ಪನ್ನಗಳನ್ನು ಸಕಾಲದಲ್ಲಿ ಮಾರುಕಟ್ಟೆಗೆ ತಲಪಿಸಲು ಸಾಧ್ಯವಾಗುವುದಿಲ್ಲ.ಹೀಗಾಗಿ ರೈತರು ಸಹಜವಾಗಿಯೇ ಹಿನ್ನಡೆಯನ್ನು ಅನುಭವಿಸುತ್ತಾರೆ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಹಳ್ಳಿಗರಿಗೆ ವರದಾನವಾಗುವುದು ಕಡಿಮೆ ಖರ್ಚಿನ, ತಾವು ನಡೆದಾಡಿಕೊಂಡು ಸಾಗಬಹುದಾದ ತೂಗುಸೇತುವೆಗಳು.ಇದನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿದವರು , ನಿರ್ಮಾಣ ಮಾಡಿದವರು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಗಿರೀಶ್ ಭಾರದ್ವಾಜ್. ಇವರು ಇದುವರೆಗೆ ನಿರ್ಮಿಸಿದ ತೂಗು ಸೇತುವೆಗಳು 75 ...





ಗಿರೀಶ್ ಭಾರಧ್ವಾಜರು ಸುಳ್ಯದ ಅರಂಬೂರಿನ ನಿವಾಸಿ.1975ರಲ್ಲಿ ಇಂಜಿನಿಯರಿಂಗ್ ಪದವಿಯನ್ನು ಪಡೆದ ಬಳಿಕ ಸುಳ್ಯದಲ್ಲಿ ಆಯಶ್ಶಿಲ್ಪವೆಂಬ ಇಂಜಿನಿಯರಿಂಗ್ ವರ್ಕ್ ಶಾಪನ್ನು ತೆರೆದರು.ನಂತರ 1988 ರ ವೇಳೆಗೆ ಊರವರ ಬೇಡಿಕೆಯಂತೆ ಅವರು ಉಚಿತ ಶ್ರಮದ ಮೂಲಕ ಪ್ರಥಮವಾದ ತೂಗು ಸೇತುವೆಯನ್ನು ನಿರ್ಮಿಸಿದರು. ನಂತರ ವಿವಿಧ ಹಳ್ಳಿಗಳಿಂದ ಅಂತಹ ತೂಗು ಸೇತುವೆಗಳಿಗೆ ಬೇಡಿಕೆ ಬಂದಿತು. ಕರ್ನಾಟಕದ ವಿವಿದೆಡೆ ಇಂತಹ ತೂಗುಸೇತುವೆಗಳನು ಮಾಡಿದ ಇವರು ಆಂದ್ರ ಪ್ರದೇಶ, ಕೇರಳ, ಮೊದಲಾದೆಡೆ ಇಂತಹ ಸೇತುವೆಗಳನ್ನು ನಿರ್ಮಿಸಿರುವ ಗಿರೀಶರು ಬೆಳಗಾವಿ ಜಿಲ್ಲೆಯ ಹುಕ್ಕೇರಿಯಲ್ಲಿ ಅವರಗೋಳ ಮತ್ತು ಘಟಗೇರಿ ಎಂಬ ಎರಡು ಹಳ್ಳಿಯನ್ನು ಸಂಪರ್ಕಿಸಲು ಘಟಪ್ರಭಾ ನದಿಗೆ 290 ಮೀಟರ್ ಉದ್ದದ ಸೇತುವೆಯನ್ನು ನಿರ್ಮಿಸಿದ್ದಾರೆ. ಈ ತೂಗು ಸೇತುವೆಯ ನಿರ್ಮಾಣದ ಮೊದಲು ವಿವಿಧ ಹಂತಗಳಿವೆ. ಎಲ್ಲಾ ಹಂತಗಳಲ್ಲೂ ಜಾಗ್ರತೆ ಅಗತ್ಯವಾಗಿದೆ. ಕೊನೆಯ ಹಂತದಲ್ಲಿ ಕಾರ್ಮಿಕರು ಅತ್ಯಂತ ಸಾಹಸದಿಂದ ಕೆಲಸ ನಿರ್ವಹಿಸುತ್ತಿರುತ್ತಾರೆ.ಇದೆಲ್ಲಾ ಶ್ರಮದ ಬಳಿಕ ಸಾರ್ವಜನಿಕರಿಗೆ ನಡೆದಾಡಲು ವ್ಯವಸ್ಥಿತವಾದ ಸೇತುವೆಯೊಂದು ಲೋಕಾರ್ಪಣಗೊಳ್ಳುತ್ತದೆ. ಇಂತಹ ತೂಗುಸೇತುವೆಗಳನ್ನು ನಿರ್ಮಿಸಲು ಅನೇಕ ಮಂದಿ ಪ್ರಯತ್ನಿಸಿದ್ದರು.ಆದರೆ ಗಿರೀಶರಷ್ಟು ಯಶಸ್ವಿಯಾಗಿ ಯಾರು ಕೂಡಾ ಮುಂದುವರಿದಿಲ್ಲ. ಈ ಕೆಲಸದಲ್ಲಿ ನೆಮ್ಮದಿಯನ್ನು ಕಾಣುತ್ತಿದ್ದೇನೆ ಎನ್ನುವ ಗಿರೀಶರು ಡಾಅಬ್ದುಲ್ ಕಲಾಮ್ ಅವರ ಚಿಂತನೆಯೇ ನನಗೆಸ್ಫೂರ್ತಿ ಎನ್ನುವ ಇವರು ಎರಡು ಹಳ್ಳಿಗಳನ್ನು ಸೇರಿಸಿದಾಗ ಸಿಗುವ ನೆಮ್ಮದಿಯೇ ಬೇರೆ ಎನ್ನುತ್ತಾರೆ. ಈ ನನ್ನ ವಿದ್ಯೆಯನ್ನು ಯಾರಿಗೆ ಬೇಕಾದರೂ ಧಾರೆ ಎರೆಯಬಲ್ಲೆ ಉರುವ ಆಸಕ್ತ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಬಲ್ಲೆ ಎನ್ನುತ್ತಾರೆ ಗಿರೀಶ್. ಆದರೆ ಆ ವಿದ್ಯಾರ್ಥಿಗಳೆಲ್ಲರೂ ನಿಸ್ವಾರ್ಥ ಸೇವೆ ಮಾದಬೇಕು ಎಂಬುದು ಇವರ ಅಭಿಲಾಷೆ.

ಹಳ್ಳಿಗಳನ್ನು ಬೆಸೆಯುವ ಇಂತಹ ಸೇತುವೆಗಳು ನಿರ್ಮಾಣವಾದರೆ ಜನ ಅತ್ಯಂತ ಸಂತಸ ಪಡುತ್ತಾರೆ. ಅದಾದ ಬಳಿಕ ತಮ್ಮ ಕೃಷಿ ಉತ್ಪನ್ನಗಳಿಗೆ ಸೂಕ್ತ ದರ ಸಿಕ್ಕಿದೆ , ಮನೆಯ ಅವಶ್ಯಕ ವಸ್ತುಗಳನ್ನು ತರಲು ಅನುಕೂಲವಾಗುತ್ತದೆ ಎಂದು ಪ್ರತಿಯೊಬ್ಬರೂ ಹೇಳುತ್ತಾರೆ.ಇನ್ನೂ ಅನೇಕರು ಹೊಸತಾದ ತೂಗು ಸೇತುವೆಗಳ ನಿರ್ಮಾಣಕ್ಕೆ ಒತ್ತಡ ಹಾಕುತ್ತಾರ್. ಸರಕಾರವು ಇಂತಹ ಜನರಿಗೆ ಸಹಾಯವನ್ನು ನೀಡಬೇಕಾಗಿದೆ.

ಒಟ್ಟಿನಲ್ಲಿ ಇಂದು ಹಳ್ಳಿಗಳು ನಗರದ ಸಂಪರ್ಕವನ್ನು ನದಿಗಳು ಕಾಟಕೊಡುತ್ತವೆ ಎನ್ನುವ ಒಂದೇ ಕಾರಣಕ್ಕೆ ದೂರವಾಗಿ ಬೀಡುತ್ತವೆ.ಅಲ್ಲಿನ ಜನರ ಬದುಕೇ ಕಷ್ಟವಾಗಿ ಬೀಡುತ್ತದೆ.ಇಂತಹ ಪರಿಸ್ಥಿತಿಯಲ್ಲಿ ತೂಗು ಸೇತುವೆಗಳು ವರದಾನವಾಗಿದೆ.

11 ನವೆಂಬರ್ 2008

ಒಂದು ನಿಧಿಯ ಸುತ್ತ...



ಜೀವನದಲ್ಲಿ ಹೇಗಾದ್ರೂ ಸರಿ ಶ್ರೀಮಂತರಾಗಬೇಕು ಎನ್ನುವ ಯೋಚನೆ ಯಾವ ಮನುಷ್ಯನ ತಲೆಯೊಳಗೆ ಇಲ್ಲ ಹೇಳಿ. ಆ ಯೋಚನೆಯ ಹಿಂದೆ ಹಲವಾರು ದಾರಿಗಳು ಕಾಣಿಸಿಕೊಳ್ಳುತ್ತವೆ. ಹಾಗಾಗಿ ಆ ಹಾದಿಯಲ್ಲಿ ಸಾಗಲು ಮನಸ್ಸು ಪ್ರೇರೇಪಿಸುತ್ತಲೆ ಇರುತ್ತದೆ. ಅದು ನ್ಯಾಯವಾ ...ಅನ್ಯಾಯವಾ... ಧರ್ಮವಾ....ಅಧರ್ಮವ... ಸರಿಯಾ ... ತಪ್ಪಾ.... ಅಂತೆಲ್ಲಾ ಯೋಚಿಸುವ ತಾಳ್ಮೆಯನ್ನು ಮನಸ್ಸು ಮಾಡುವುದಿಲ್ಲ. ಕೊನ್ಗೆ ಮಾನ ಹರಾಜಾಗುತ್ತದೆ ಎನ್ನುವ ಜ್ಞಾನವೂ ಬಾರದೆ. ಕೆಲಸಕ್ಕೆ ಇಳಿದೇ ಬಿಡುತ್ತದೆ.. ಅದರ ಪರಿಣಾಮ ಗೊತ್ತಾದಾಗ ಅಯ್ಯೋ ದುಡ್ಡೇ.... ನೀ ಹೀಂಗೇನಾ ... ಅಂಥ ಪರಿತಪಿಸುವುದು ಇದ್ದದ್ದೇ... ಅಂತಹ ದುಡ್ಡು ಮಾಡುವ ಕೆಲಸವೊಂದಕ್ಕೆ, ಸುಬ್ರಹ್ಮಣ್ಯದ ಬಳಿಯಲ್ಲಿ ಒಂದೈದು ಮಂದಿ ಇಳಿದಿದ್ದರು. ಆದರೆ ಮತ್ತೆ ಸುದ್ದಿಯಾದದ್ದು ಇನ್ನೊಂದು ಬ್ರೇಕಿಂಗ್ ನ್ಯೂಸ್....!!. ಮೂಢತನವೇ..?? ಎಂದು ಯಾರಾದರೂ ಹೇಳಿಯಾರು.

ಕುಕ್ಕೆ ಸುಬ್ರಹ್ಮಣ್ಯದ ಬಳಿಯಲ್ಲಿ ಕುಲ್ಕುಂದ ಎನ್ನುವ ಹೆಸರಿನ ಚಿಕ್ಕ ಊರಿದೆ. ಊರು ಎನ್ನುವುದಕ್ಕಿಂತಲೂ ಐತಿಹಾಸಿಕ ಪ್ರದೆಶ. ಇಲ್ಲಿ ಇದ್ದಕ್ಕಿದ್ದಂತೆಯೇ ಒಂದು ಸುದ್ದಿ ಬಂದಿತ್ತು. ಆಗ ತಾನೆ ಕೋಳಿ ಕೂಗಿರಬಹುದು. ಫೋನು ರಿಂಗಾಯಿತು. ಶಿರಾಡಿಯ ರಾಡಿಯಲ್ಲಿ ಒಂದು ಗಂಟೆಗಳ ಟ್ರಾಫಿಕ್ ಜಾಮ್ ನಿಂದ ತತ್ತರಿಸಿ ಹೋಗಿ ಬೆಂಗಳುರಿನಿಂದ ಆಗ ತಾನೆ ಬಂದಿಳಿದದ್ದಷ್ಟೇ..! ಆದರೂ ಸುದ್ದಿಯ ವಾಸನೆ ಬಡಿದದ್ದೇ ಹೊರಡಬೇಕಾಯಿತು. ಬರೀ ಫೋನು ರಿಂಗಾದರೆ ಯಾರು ಹೋಗ್ತಾರೆ??. ನಾನು ಹೇಗೂ....... ಅಲ್ಲ. ಆ ಫೋನಲ್ಲಿ ಬಂದ ವಿಷ್ಯ ಕುಲ್ಕುಂದದಲ್ಲಿ ನಿಧಿ ತೆಗೆಯಲು ಬಂದಿದ್ದಾರೆ.. ಇಬ್ಬರನ್ನು ಹಿಡಿಯಲಾಗಿದೆ... ಈಗ ಅಲ್ಲಿ ಕಾಳಿಂಗ ಸರ್ಪ ಇದೆ. ಅಲ್ಲೆ ಸುತ್ತಾಡುತ್ತಲೇ ಇದೆ... ಎಂದಿತು ಮಾಹಿತಿ. ಆದರೆ ಅಲ್ಲಿ ಹಾವು [ಕಾಳಿಂಗ] ಇದೆ ಎಂದರೆ ಸ್ವಲ್ಪ ಕುತೂಹಲವೇ..! ಹೀಗೂ ಉಂಟೇ..!! ಎಂದೆಲ್ಲಾ ಯೋಚನೆಯ ಹಿನ್ನೆಲೆಯಲ್ಲಿ ಬೈಕ್ ಸ್ಟಾರ್ಟ್ ಆಯಿತು. ಹೋದಾಗ ಜನ ಸೇರಿದ್ದರು. ನನ್ನ ಮಿತ್ರ ಇದ್ದ. ಕ್ಯಾಮಾರ ಆನ್ ಆಯಿತು.ಸುತ್ತ ಮುಳ್ಳು ಗಂಟಿಗಳ ಪ್ರದೇಶ. ಅದರ ನಡುವೆ ಇದೆ ಎನ್ನಲಾಗುವ ನಿಧಿ. ಆ ನಿಧಿಯಲ್ಲಿ ಏನಿದೆ ಎನ್ನುವುದು ಯಾರಿಗೂ ಗೊತ್ತಿಲ್ಲ.ಆದರೆ ಯಾರು ತೆಗೆಯುತ್ತಾರೆ ಅವರಿಗೇ ಗೊತ್ತು..!?. ಹಾಗೆ ಆ ಪೊದೆಯ ನಡುವೆ ಹಾವಿನ ಕೊಂಚ ಬಾಲ ಕಾಣುತ್ತದೆ. ಕ್ಯಾಮಾರ ಕಣ್ಣಲ್ಲಿ ಸೆರೆ ಹಿಡಿಯುವುದು ಅಸಾಧ್ಯವಾಗಿತ್ತು. ಆದರೂ ವಿಚಿತ್ರದ ಬಗ್ಗೆ ಇನ್ನೂ ಆಸಕ್ತಿ. ಈ ನಡುವೆ ಊಹಾ ಪೂಹಗಳು. ಇಲ್ಲಿ ಸ್ವಲ್ಪ ಸಮಯದ ಹಿ0ದೆ ಹೀಗೆಯೆ ಬಂದಿದ್ದರು, ಅದನ್ನು ಎಳ್ಳಲು ನೋಡಿದ್ದರು..ಆಗ ಅವರನ್ನು ಹಾವು ಓಡಿಸಿತ್ತು...ಹೀಗೆ ನಿಧಿ ಇರುವ ಜಾಗದಲ್ಲಿ ಕಾಳಿಂಗ ಸರ್ಪ ಇದ್ದೇ ಇರುತ್ತದೆ... ಕಳ್ಳರು ಇಲ್ಲಿಗೆ ಬಂದಿದ್ದಾಗ ನಾವು ಕೂಡಾ ಓಡಿಸಿದ್ದೆವು... ಅಲ್ಲಿ ಚಪ್ಪಲಿ ಹಾಕಬಾರದು... ಹಾವನ್ನು ನೋಡಬಾರದು... ಇಲ್ಲಿಗೆ ಬಂದವರು ಮಂತ್ರವಾದಿಗಳು ಅವರು ಹಾವನ್ನು ಮಂತ್ರದ ಮೂಲಕ ಕಟ್ಟಿ ಹಾಕಿದ್ದಾರೆ ಹಾಗೆ ಹಾವು ಓಡುವುದೇ ಇಲ್ಲ ಅಲ್ಲೇ ಇದೆ ಎನ್ನುವ ಮಾತುಗಳಿಗೆ ಕೊರತೆಯಿರಲಿಲ್ಲ. ಆದರೆ ಬಿಸಿಲಿನ ಪೆಟ್ಟು ಬೀಳುತ್ತಿದ್ದಂತೆಯೇ ಹಾವಿನ ಮಿಸುಕಾಟ ಆರಂಭವಾಯಿತು. ಹಾವು ಅತ್ತಿಂದಿತ್ತ ಚಲಿಸಿತು. ಕ್ಯಾಮಾರಕ್ಕೆ ಕಂಡಿತು.... ಅದು ಹೆಬ್ಬಾವು.....!!!. ಆದರೆ ಜನ ಅಲ್ಲ ಮಾರಾಯರ್ರೇ ಅದು ಕಾಳಿಂಗ ಸರ್ಪ... ಇಲ್ಲಿಗೆ ಹೆಬ್ಬಾವು ಬರಲು ಸಾಧ್ಯನೇ ಇಲ್ಲ. ಆಗ ಅದು ಕಾಳಿಂಗವಾಗಿತ್ತು.. ಈಗ ಅದುವೇ ಹೆಬ್ಬಾವಾಗಿದೆ.. ಅಲ್ಲ ಇನ್ನೊಂದು ಹಾವೂ ಇದೆ... ಅಂತೆಲ್ಲಾ ಮತ್ತೆ ಕಂತೆಗಳನ್ನು ಪೋಣಿಸಿದರು. ಆದರೆ ನಮಗೆ ನಗಬೇಕೋ ಅಳಬೇಕೋ ತಿಳಿಯಲಿಲ್ಲ. ಅಂತೂ ನಿಧಿ ಅಗೆಯಲು ಬಂದವರಲ್ಲಿ ಇಬ್ಬರಿಗೆ ಸಿಕ್ಕಿದ್ದು ಎರಡೆರಡು ಗೂಸಾ... ಮತ್ತೆ ಮೂವರು ಪರಾರಿ.

ಜನರಿಗೆ ನಂಬಿಕೆ ಅಲ್ಲಿ ನಿಧಿ ಇದೆ... ಕಾಳಿಂಗವಿದೆ... ಇಲ್ಲ ಅಲ್ಲಿ ಕಾಳಿಂಗವಿಲ್ಲ.. ಎಂದರೆ ಇದೆ ... ಎಂದು ವಾದಿಸುವಷ್ಟರ ಮಟ್ಟಿಗೆ ತಲೆಯೊಳಗೆ ತುಂಬಿಸಿಕೊಂದಿದ್ದಾರ್. ಕೊನೆಗೆ ಒಬ್ಬರು ಹೇಳಿದರು ಇದು ನಾಗ ನಿಧಿ ಇದನ್ನು ಬಲ್ಲಾಳ ಅರಸ ಹುಗಿದಿಟ್ಟದ್ದು ಹಾಗಾಗಿ ಇದು ಕಾರಣಿಕ. ಯಾವ ಬಲ್ಲಾಳ ಗೊತ್ತಿದೆಯೇ ಅಂತ ಮಿತ್ರ ಕೇಳಿದ.. ಇಲ್ಲ ಅದು ಬಲ್ಲಾಳ ಎಂದೇ ಪ್ರತ್ಯುತ್ತರ. ಆ ನಿಧಿಯಲ್ಲಿ ವಿಪರೀತ ಒಡವೆಗಳು , ಹಣ ಇರುತ್ತದೆ. ಹಾಗಾಗಿ ಕಳ್ಳರು ಅದನ್ನು ಎಳ್ಳಲು ಬರುತ್ತಾರೆ ಎನ್ನುತ್ತವೆ ಆಧ್ಯಾತ್ಮದ ಮನಸ್ಸುಗಳು.ಹಾಗಾಗಿ ಹಣ ಮಾಡುವ ಉದ್ದೇಶದಿಂದ ಎಳ್ಳುವ ಪ್ರಯತ್ನಕ್ಕೆ ಕೈಹಾಕಿದರು ಕಳ್ಳರು.

ಅತ್ಯಂತ ಸ್ವಾರಸ್ಯಕರ ಹಾಗೂ ತಿರುವು ಪಡೆಯಲಿದ್ದ ಸುದ್ದಿಯೊಂದು ಇನ್ನೊಂದು ರೂಪ ಪಡೆದುಕೊಂದಿತು.

06 ನವೆಂಬರ್ 2008

ಕಾನೂನು ..

ಎಲ್ಲವೂ ಇರುವುದು ಪರರಿಗಾಗಿ. ನನಗಿರುವುದು ಏನೂ ಇಲ್ಲ. ಯಾವುದೂ ಇಲ್ಲ, ಯಾವುದೂ ಅಲ್ಲ.ಇದೇನೂ ಆಧ್ಯಾತ್ಮವೂ ಅಲ್ಲ, ವೈರಾಗ್ಯವೂ ಅಲ್ಲ. ಒಂದು ಮಾಮೂಲು ಡೈಲಾಗ್. ಇದೆಲ್ಲವೂ ಹೇಳುವುದಕ್ಕೆ ಮಾತ್ರಾ ಅನುಸರಿಸಲು ಅಲ್ಲ ಎನ್ನುವ ಸತ್ಯ ಎಲ್ಲರಿಗೂ ಗೊತ್ತಿದೆ. ಹಾಗಾಗಿ ,ಹೇಗೆ ಬೇಕಾದರೂ ಹೇಳಬಹುದು.

ಮೊನ್ನೆ ಇಂತಹುದ್ದೇ ಒಂದು ಕತೆ ನಡೆದಿತ್ತು. ಲಾರಿಯೊಂದರ ಹಿಂದೆ ದಾರಿಗಾಗಿ "ಧ್ವನಿ ಮಾಡಿ" ಎಂದು ಬರೆದಿತ್ತು. ಆದರೆ ದಾರಿ ಬೇಕೆಂದು ಧ್ವನಿ ಮಾಡಿದರೆ ದಾರಿಯೇ ಸಿಗಲ್ಲ. ಇನ್ನೊಂದು "ಅತಿ ವೇಗ ಆಪಘಾತಕ್ಕೆ ಕಾರಣ" ಎಂದಿರುತ್ತದೆ. ಆದರೆ ಆ ವಾಹನದ ವೇಗ ಅದಕ್ಕಿಂತಲೂ ಹೆಚ್ಚಿರುತ್ತದೆ. ಅಂದರೆ ಆ ವಾಕ್ಯಗಳೆಲ್ಲೆವೂ ನನಗಲ್ಲ ನನ್ನ ಹಿಂದಿನವರಿಗೆ ಎಂಬುದನ್ನು ಇನ್ನೂ ಸಾರಿ ಹೇಳಬೇಕೆಂದೇನೂ ಇಲ್ಲವಲ್ಲ. ಇಂದಿನ ಪರಿಸ್ಥಿತಿಯೂ ಅದೇ. ನಾನು ಏನು ಮಾಡಿದರೂ ಸರಿ. ಆಗ ಕಾನೂನುಗಳಾವುದೂ ಅನ್ವಯಿಸುವುದಿಲ್ಲ. ಅದೇ ಇನ್ನೊಬ್ಬನ ಬಗ್ಗೆಯಾದರೆ ತಪ್ಪಿ ನಡೆದಿದ್ದಾನೆ ಎನ್ನುವ ಬೊಟ್ಟು..! ಹಾಗಾಗಿ ಕಾನೂನುಗಳೆಲ್ಲವೂ ಇರುವುದು, ಇನ್ನೊಬ್ಬರಿಗೆ ಹೇಳಲು ಹೊರತು ಅನುಸರಿಸಲ್ಲ ಎನ್ನುವ ಹೊಸತೊಂದು ಮಾತು ಹುಟ್ಟಿಕೊಳ್ಳಬೇಕಾಗಿದೆ.
ಅನೇಕ ಸಂದರ್ಭಗಳಲ್ಲಿ ನಡೆದಿರುತ್ತದೆ ..ನಡೆಯುತ್ತದೆ .. ಮತ್ತು ನಡೆಯುತ್ತಲೇ ಇರುತ್ತದೆ... ನಾವು ಇನ್ನೊಬ್ಬರನ್ನು ಅದು ತಪ್ಪು ಅಂತ ಹೇಳಿರುತ್ತೇವೆ. ಆದರೆ ಮತ್ತೆ ಹೇಗೆ ಮಾಡಬೇಕಿತ್ತು ಅಂತ ನಮ್ಮ ಮನಸ್ಸಿನೊಳಗಾದರೂ ಒಮ್ಮೆಯಾದರೂ ಯೋಚಿಸಿದ್ದೇವಾ? ಖಂಡಿತಾ ಇಲ್ಲ. [ಇದರಲ್ಲಿ ನಾನೂ ಸೇರಿಕೊಂಡಿದ್ದೇನೆ].ಇವತ್ತು ನೋಡಿ ಎಲ್ಲೆಲ್ಲೂ ನಮ್ಮ ಯುವಕರು ದಾರಿ ತಪ್ಪಿದ್ದಾರೆ .. ಅದು ಸರಿಯಾದ ದಾರಿಯಲ್ಲ.. ಎಂದು ಬೊಬ್ಬಿಡುತ್ತಲೇ ಇದ್ದಾರೆ. ಆದರೆ ಯಾವುದು ಸರಿಯಾದ ಹಾದಿ..? ಎನ್ನುವುದಕ್ಕೆ ಎಲ್ಲಿದೆ ಉತ್ತರ?. ಅವರು ನಿಮಗೆ ಮಾದರಿ ಎನ್ನುವ ಜನ ಯಾರಿದ್ದಾರ್ ನಮ್ಮ ಮುಂದೆ.?. ಯಾರೋ 50 - 60 ವರ್ಷಗಳ ಹಿಂದಿನ ಜನರನ್ನು ನಮಗೆ ಅವರು ಮಾದರಿ ಎನ್ನುವುದಕ್ಕಿಂತ, ಈಗ ಬದುಕಿ ನಮಗೆ ಹತ್ತಿರವಾದರು ಮಾದರಿ ಎನ್ನುವುದು ಹೆಚ್ಚು ಸೂಕ್ತ. ಹಾಗಾಗಿ ಇಂದು ಎಲ್ಲವೂ , ಕಾನೂನು ಇರಬಹುದು,ನಮ್ಮ ನಡುವೆ ಪ್ರತಿದಿನ ನಡೆಯುವ ಘಟನೆಗಳಿರಬಹುದು , ನಮಗಾಗುವ ಅನುಕ್ಷಣದ ಅನುಭವಗಳಿರಬಹುದು, ಹೇಳುವ ವಿಚಾರಗಳಿರಬಹುದು ಅದು ಹೇಳುವುದಕ್ಕೆ ಮಾತ್ರಾ ಅನುಸರಿಸುವುದಕ್ಕಲ್ಲ..... ಎಂದು ಇಂದು ದಾಖಲಿಸಿದರೆ ತಪ್ಪಾಗಲಾರದು ಅಲ್ವೇ...?