30 ಡಿಸೆಂಬರ್ 2009

ಸಾವಲ್ಲ ಅದು ಹುಟ್ಟು . . .



ಅನೇಕರಿಗೆ ಸಾವೆಂದರೆ ಅದು ಬದುಕಿನ ಸಾವು. ಆ ನಂತರ ಅಲ್ಲಿ ಉಳಿಯುವಂತಹದ್ದು ಏನೂ ಇಲ್ಲ.ಆದರೆ ಇನ್ನೂ ಕೆಲವರಿಗೆ ಸಾವೆಂದರೆ ಅದು ಇನ್ನೊಂದು ಹುಟ್ಟು.ಹೊಸತರ ಆರಂಭ. ಆ ಬಳಿಕ ಅವರ ಸಾಧನೆಗಳೆಲ್ಲವೂ ನೆನಪಾಗುತ್ತದೆ.ಅತಹ ಎರಡು ಸಾವುಗಳು ಎರಡು ದಿನ ಕಂಡಿದೆ.ಖ್ಯಾತ ಗಾಯಕ ಅಶ್ವತ್ಥ್ , ಇನ್ನೊಬ್ಬ ಹಿರಿಯ ನಟ ವಿಷ್ಣುವರ್ಧನ್. ಇವರ ಬದುಕಿನ ಎಲ್ಲಾ ಸಾಧನೆಗಳು ಈ ಮೊದಲು ಅದೆಲ್ಲೋ ದಾಖಲಾಗುತ್ತಲೇ ಬಂದಿತ್ತು.ಇಂದು ಅದೆಲ್ಲವೂ ತೆರೆದಿದೆ. ಈ ಎರಡು ಸಾವುಗಳನು ನೋಡಿದಾಗ ನಿಜಕ್ಕೂ ಮನುಷ್ಯನ ಸಾವೆಂದರೆ ಅದು ಹೀಗಿರಬೇಕು ಅಂತ ಅನ್ಸುತ್ತೆ.ಅದೆರಡೂ ಸಾವು ಕನ್ನಡ ನಾಡಿಗೆ ತುಂಬಲಾರದ ನಷ್ಟ ಅಂದಂತೂ ಒಪ್ಪಿಕೊಳ್ಳಲೇ ಬೇಕು. ಆದರೆ ಅದರ ಹೊರ ಬಂದು ನೋಡಿದಾಗ ಆ ಸಾವು ನೆನಪುಗಳ ಹುಟ್ಟಿಗೆ ಕಾರಣವಾಗಿದೆ.ಇದುವರೆಗೆ ಅವರ ಎಲ್ಲಾ ಸಾಧೆನೆಗಳು ಒಂದೆಡೆ ಶೇಖರಣೆಯಾಗಿತ್ತು.ಈಗ ಅದು ಮತ್ತೆ ಮತ್ತೆ ನೆನಪಾಗುತ್ತಲೇ ಇದೆ. ಅವರ ಹಾಡುಗಳು , ಚಿತ್ರಗಳು ಇಂದಿಗೂ ನಮ್ಮ ಮುಂದೆ ಕಾಣುತ್ತಲೇ ಇದೆ.ಸತ್ರೂ ಅವರು ಜೀವಂತವಿದ್ದಂತೆ.

ಆದರೆ ಅದು ಯಾರಿಗೆ ಸಾಧ್ಯ. ರಾಜಕಾರಣಿಗಳಿಗೆ...? ಇಲ್ಲ ಅಂತಹ ರಾಜಕಾರಣಿಗಳು ನಮ್ಮಲ್ಲಿ ಯಾರಿದ್ದಾರೆ..?. ಸಮಾಜ ಸೇವಕರಿಗೆ....? ಇಲ್ಲ ಅದೂ ಕಾಣುತ್ತಿಲ್ಲ. ನನ್ನ ಪ್ರಕಾರ ಅದು ಕಲಾವಿದರಿಗೆ ಮಾತ್ರಾ ಸಾಧ್ಯ.ಅವರ ಬದುಕಿಗೆ ಮಾತ್ರಾ ಅಂತಹ ಅಭಿಮಾನಿಗಳು, ಪ್ರೇಮಿಗಳು ಮುತ್ತಿಕೊಳ್ಳಲು ಸಾಧ್ಯ. ನಮಗೂ ಒಮ್ಮೊಮ್ಮೆ ಅನಿಸುವುದಿದೆ. ಸುಮ್ಮನೆ ಬ್ಲಾಂಕ್ ಆಗಿ ನಮ್ಮ ಸಾಧನೆಯಯ ಬಗ್ಗೆ ಯೋಚಿಸುತ್ತಾ ಹಿಂದೆ ಹೋದರೆ ಏನೇನೂ ಕಾಣಿಸುತ್ತಿಲ್ಲ.ಅದೇನೋ ಒಂದಷ್ಟು ಕೆಲಸ ಮಾಡುತ್ತೇವೆ.ಸಮಾಜದ ಡೊಂಕನ್ನು ಸರಿಪಡಿಸುತ್ತೇವೆ ಎಂಬ ಭಾವನೆ ಇದೆ.( ಒಂದರ್ಥದಲ್ಲಿ ಅಹಂ) ಆದರೆ ಈಗೀಗ ಅನಿಸುತ್ತಿದೆ ಅದೆಲ್ಲವೂ ನಮ್ಮ ಭ್ರಮೆಯೋ ಏನೋ ಎಂದು. ಹಾಗಾಗಿ ಮುಂದೆಯೂ ಅದೇನೋ ಸಾಧನೆಯ ಗುರಿ ಹಾಕಿಕೊಂಡಾಗಿದೆ.ಜೀವಿತದ ಕೊನೆಯಲ್ಲಾದರೂ ಅಲ್ಲಿಗೆ ತಲಪಿಬಿಡಬೇಕು ಎಂಬ ಇಚ್ಚೆ ಇದೆ. ಹೀಗಾಗಿ ನಮ್ಮ ಜೀವಿತದ ಅದೆಷ್ಟೋ ದಿನಗಳು ಇದುವರೆಗೆ ಕಳೆದುಹೋಗಿದೆ. ಮತ್ತೆಂದೂ ಬಾರದ ಸಮಯ ಅದಾಗಿದೆ ಪ್ರತಿಕ್ಷಣವೂ ಹೊಸದಿನವಾಗಿದೆ..ಹಾಗಾಗಿ ಅಂತಹ ಎಲ್ಲಾ ಸಮಯಗಳನ್ನು ಕಳೆದುಕೊಂಡು ಮುಂದೆ ಸಾವಿನ ನಂತರದ ಹುಟ್ಟು ನಮ್ಮದಾಗಬೇಕು ಎಂಬ ಇಚ್ಚೆಯೊಂದಿದೆ.ಹಾಗಾಗಿ ಈ ಬದುಕಿನಲ್ಲಿ ಉಳಿದುಕೊಳ್ಳುವುದು ಅದೇ ಪ್ರೀತಿ, ಸ್ನೇಹ, ಮತ್ತು ಇಂತಹ ಸಾಧನೆಗಳು ಅಲ್ವೇ.?.ಹಾಗಾಗಿ ಅದರ ನಡುವೆಯೇ ಸಾಧನೆಯ ಶಿಖರವನ್ನೂ ಏರಬೇಕಾಗಿದೆ.