21 ಮಾರ್ಚ್ 2013

ಏಕಾಂಗಿ ವ್ಯಕ್ತಿಗೆ ಹತ್ತು ಮನಸ್ಸು . . .!

ನನ್ನೂರಿನ ದೇವಸ್ಥಾನಕ್ಕೆ ಹೋಗಿದ್ದೆ.

ಅಪರಿಚಿತ ವ್ಯಕ್ತಿ ಅಲ್ಲಿದ್ದರು. ದೇವಸ್ಥಾನದ ಅರ್ಚಕರು ಹೇಳಿದರು , ಇವರು  ಪಾದಯಾತ್ರೆ ಮಾಡುತ್ತಿದ್ದಾರೆ ಕನ್ಯಾಕುಮಾರಿಗೆ ಎಂದರು. ಸಹಜವಾಗಿಯೇ ಅದೊಂದು ಮಾಮೂಲಿ ನಡಿಗೆ ಅಂದುಕೊಂಡಿದ್ದೆ , ಆದರೆ ನಂತರ ಮಾತನಾಡುತ್ತಾ , ಅವರೊಳಗಿನ ಸಂಗತಿ  ಅರಿವಾಯಿತು. .  .

ಅವರು  ಕಿರಣ್. ವಿದೇಶಿ ಕಂಪನಿಯೊಂದರಲ್ಲಿ ಕೈತುಂಬಾ ಸಂಬಳ ಎಣಿಸುತ್ತಿದ್ದರು , ಪ್ರತಿಭಾವಂತ ಎಂಜಿನಿಯರ್ ಕೂಡಾ ಆಗಿದ್ದರು. ಆದರೆ ಆಕಸ್ಮಿಕ ಘಟನೆಯೊಂದು  ಅವರ ಬದುಕಿನಲ್ಲಿ ನಡೆಯಿತು. ಅವರ ಕುಟುಂಬದ ಎಲ್ಲರೂ ಅಪಘಾತದಲ್ಲಿ ತೀರಿಕೊಂಡರು. ಉಳಿದದ್ದು ಏಕಾಂಕಿ. ಅದಾಗಲೇ ವಿವಿಧ ಕಡೆ ಆಸ್ಥಿ ಹೊಂದಿದ್ದ ಅವರಿಗೆ ವಿವಿಧ ಸಂಬಂಧಿಕರು  ಹತ್ತಿರವಾದರು .. ಆಸ್ಥಿ ಪ್ರೀತಿ  ಹೆಚ್ಚಿತು. ಪೀಡೆ ಹೆಚ್ಚಾದಾಗ . . ನೇರವಾಗಿ ಹಿಮಾಲಯದ ಕಡೆಗೆ ತೆರಳಿದರು.ಆಧ್ಯಾತ್ಮದ ಮಾರ್ಗ ಹಿಡಿದರು.

ನಗರದಲ್ಲಿದ್ದ ಸುಮಾರು  ಆರು  ಎಕ್ರೆ ಭೂಮಿಯನ್ನು ಅನಾಥಾಶ್ರಮಕ್ಕೆ ಧಾರೆ ಎರೆದರು.ಸ್ವಂತಕ್ಕೆ ಅಂತ ಒಂಚೂರು  ಇರಿಸಿಕೊಂಡರು.ಬಳಿಕ ಯಾತ್ರೆ ನಡೆಸಿದರು , ಇಡೀ ದೇಶವನ್ನು ಕಾಲು ನಡಿಗೆಯಲ್ಲೇ ಪರಿಕ್ರಮ ಮಾಡುವ ಉದ್ದೇಶ, ಇನ್ನು  ಸುಮಾರು  ೫೦  ದಿನದಲ್ಲಿ ಕನ್ಯಾಕುಮಾರಿ  ತಲುಪುತ್ತಾರೆ. ಅಂದರೆ ಕಾಲುನಡಿಗೆ ಶುರುಮಾಡಿ ಅದಾಗಲೇ ವರ್ಷ  ಅನೇಕ ಉರುಳಿ ಹೋಗಿದೆ. ಅಲ್ಲಿಂದ ಮತ್ತೆ ಮುಂದಿನ ದಾರಿ  ಯೋಚಿಸಬೇಕು ಎನ್ನುತ್ತಾರೆ.

ಇಡೀ ನಡಿಗೆಗೆ ಯಾವ ಪ್ಲಾನೂ ಇಲ್ಲ ಅವರಲ್ಲಿ , ಎಲ್ಲಿ ಇರುತ್ತೇನೆ ಗೊತ್ತಿಲ್ಲ , ಯಾರು ಊಟ ಕೊಡುತ್ತಾರೆ ಗೊತ್ತಿಲ್ಲ , ಎಲ್ಲಿ ಮಲಗುತ್ತೇನೆ ಗೊತ್ತಿಲ್ಲ. . .. !. ಅದೆಲ್ಲಾ ಬಿಡಿ ಕೈಯಲ್ಲಿ ಒಂದು  ರೂಪಾಯಿ ಹಣವೂ ಇಲ್ಲ , ಹಣ ಇದ್ದರೆ ಅದು  ಟೂರ್ ಆಗುತ್ತದೆ , ಯಾತ್ರೆ ಆಗಲ್ಲ ಅಂತಾರೆ ಅವರು. ಇನ್ನು ಮೊಬೈಲ್ ಇದೆ ಉಪಯೋಗಿಸೋದೇ ಇಲ್ಲ.  ಯಾರಿಗೂ ನಂಬರೂ ಕೊಡಲ್ಲ. ಇಡೀ ದಿನದಲ್ಲಿ ರಾತ್ರಿ ಮಾತ್ರಾ ಊಟ. ದಿನಕ್ಕೆ ೬ ರಿಂದ ೭ ಲೀಟರ್ ನೀರು , ಇದಿಷ್ಟೇ ಆಹಾರ.

ಇದೆಲ್ಲಾ ಮಾತನಾಡುವ ಹೊತಿಗೆ ಅವರು  ವೈದ್ಯರ ಬಗ್ಗೆ ಕೇಳಿದರು , ಕಾಲುಗಳ ಮಾಂಸ ಖಂಡ ನೋಡಿದರೆ ತೀರಾ ಗಟ್ಟಿಯಾಗಿತ್ತು , ಇದು  ಸರಿಯಾಗಲು ಇನ್ನು ಒಂದು  ತಿಂಗಳ ಚಿಕಿತ್ಸೆ ಬೇಕಾಗುತ್ತದೆ ಎನ್ನುವ ಮಾನಸಿಕವಾದ ಸಿದ್ದತೆಯೂ ಇದೆ. ಇವರಲ್ಲಿ.

ಇಷ್ಟೆಲ್ಲಾ ದೈಹಿಕ ಶ್ರಮದ ನದುವೆಯೂ ಮಾನಸಿಕವಾದ ಸಂತಸ ಕಾಣುವ ಈ ವ್ಯಕ್ತಿ ಏಕಾಂಕಿ. ಆದರೆ ಬೆಂಬಲಿಸುವ , ಜೊತೆಯಾಗುವ ಮನಸ್ಸುಗಳು ಹತ್ತಾರು. ಇದೆಲ್ಲಾ ಪ್ರಚಾರ ಮಾಡುವುದೇ ಇಲ್ಲ ,ಪ್ರಚಾರಾ ಮಾಡಿದರೆ ಮರುದಿನ ಆ ಶರ್ಟೇ ಹಾಕೋದಿಲ್ಲವಂತೆ , ಏಕೆಂದರೆ ಜನ ಗುರುತಿಸುತ್ತಾರೆ ,ಅದು  ಪ್ರಚಾರ ಪಡೆಯುತ್ತೆ , ಅದೆಲ್ಲಾ ಇಲ್ಲವೇ ಇಲ್ಲ ಎನ್ನುವ ಕಿರಣ್ ಗೆ ಸುಮಾರು ೪೫ ವರ್ಷ ಆಗಬಹುದು.

ಅಂತಿಮವಾಗಿ ಏನು ಎಂದು ಕೇಳಿದರೆ ಮಾನಸಿಕವಾದ ಶಾಂತಿ. .  ಗುರುಗಳ ಮಾರ್ಗದರ್ಶನ.