26 ಏಪ್ರಿಲ್ 2008

ಹತ್ತೂರು ಮರೆತರೂ ಹುಟ್ಟೂರು ಮರೆಯಲ್ಲ...





ಇದು ಮಣ್ಣಿನ ಋಣ.. ಎಲ್ಲಿಯ ಉಡುಪಿ...ಎಲ್ಲಿಯ ಪಂಜ....! ಸರಿ ಸುಮಾರು 200 ಕಿಲೋಮೀಟರ್ ಅಂತರ.

ಇದು ಮಣ್ಣಿನ ಸಂಬಂಧ.ದೂರದೂರಿಗೆ ಹೊರಟು ಹೋದರೂ ಹುಟ್ಟಿದ ಮಣ್ಣಿನ ಋಣ ತೀರಿಸಲು ಅಸಾಧ್ಯ.ಇದು ಹಳ್ಳಿಹಳ್ಳಿಯೊಳಗಿನ ರೈತರ ಬಹು ದಿನದ ಸತ್ಯದ ಮಾತು.ಆದರೆ ರಾಜಕಾರಣಿಗಳ ಬದುಕಿನಲ್ಲೂ ಈಗ ಅದು "ಸತ್ಯ"ವಾಗಿದೆ.ಹತ್ತೂರು ಸುತ್ತಿದರೂ ಮತ್ತೆ ಹುಟ್ಟಿದೂರಿಗೆ ಬರುವಂತೆ ಮಾಡಿದೆ.ಹಾಗಾಗಿ ಉಡುಪಿಯಿಂದ ಪಂಜದವರೆಗೆ ಬರಲೇಬೇಕಾಯಿತು.ಅದಕ್ಕೆ ಕಾರಣವಾದದು ಮಣ್ಣು.[ಇದು ಚುನಾವಣೆಯ ಕಾಲವಾದ್ದರಿಂದಲೂ ಇರಬಹುದು.]

ಉಡುಪಿಯ ಮಾಜಿ ಶಾಸಕ ಬಿಜೆಪಿಯ ಅಭ್ಯರ್ಥಿ ರಘುಪತಿ ಭಟ್ ಸದ್ಯ ಉಡುಪಿಯಲ್ಲಿ ವಿರಾಜಮಾನರಾಗಿದ್ದಾರೆ.ಅವರ ಮೂಲ ಮನೆತನ ಇದ್ದದ್ದು ಸುಳ್ಯ ತಾಲೂಕಿನ ಪಂಜ ಬಳಿಯ ಕೂತ್ಕುಂಜ ಗ್ರಾಮದ ಕರ್ಮಜೆ.ಹಾಗಾಗಿ "ಕರ್ಮಜೆ ರಘಪತಿ ಭಟ್ "ಮತ್ತೆ ಕರ್ಮಜೆಯನ್ನು ಅರಸಿಕೊಂಡು ಬರಬೇಕಾಯಿತು. ಭಟ್ ಅವರ ಹಿರಿಯರು ಮೂಲ ಮನೆ ಹಾಗೂ ಭೂಮಿಯನ್ನು ಸುಮಾರು 60 ವರ್ಷಗಳ ಹಿಂದೆಯೇ ಮಾರಾಟ ಮಾಡಿ ಉಡುಪಿಯಲ್ಲಿ ಜೀವನ ಮಾಡುತ್ತಿದ್ದರು.ಆದರೆ ಈಗ ಮತ್ತೆ ಮೂಲಮನೆತನದ ಭೂಮಿಯಲ್ಲಿರುವ ನಾಗ ಸಾನಿಧ್ಯದ ಆರಾಧನೆಯ ಕಾರಣದಿಂದ ಸುಮಾರು 60 ವರ್ಷಗಳ ಬಳಿಕ ಬಂದಿದ್ದಾರೆ.ಹಾಗಾಗಿ ಅವರು ಮತ್ತೆ ಪಂಜದ ಸಂಪರ್ಕಕ್ಕೆ ಬರುವಂತೆ ಮಾಡಿದ್ದು ಮೂಲ ಮಣ್ಣು.

ಸರಿಸುಮಾರು 60 ವರ್ಷಗಳ ಹಿಂದೆ ರಘುಪತಿ ಭಟ್ಟರ ತಂದೆ ಶ್ರೀನಿವಾಸ ಬಾರಿತ್ತಾಯರ ತಾಯಿಯವರ ಹೆಸರಿದ್ದ ಅಡಿಕೆ ಹಾಗೂ ಬೇಸಾಯದಿಂದ ತುಂಬಿದ್ದ ಸುಮಾರು 5-6 ಎಕ್ರೆ ಭೂಮಿಯನ್ನು ಹಾಸನಡ್ಕ ತಿಮ್ಮಪ್ಪಯ್ಯ ಎಂಬರಿಗೆ ಮಾರಾಟ ಮಾಡಿದ್ದರು.ಆ ಬಳಿಕ ಅವರ ಮಗ ವೆಂಕಪ್ಪಯ್ಯನವರು ಸಂಪದ್ಭರಿತ ಕೃಷಿಯನ್ನು ಬೆಳೆಸಿಕೊಂಡು ಬಂದು ಈಗ ಅವರ ಪುತ್ರ ಶಿವರಾಮಯ್ಯನವರು ಮುಂದುವರಿಸಿಕೊಂಡು ಬರುತ್ತಿದ್ದಾರೆ.

ಇತ್ತೀಚೆಗೆ, 13 ವರ್ಷದ ಹಿಂದೆ ರಘುಪತಿ ಭಟ್ಟರ ತಂದೆ,ಸಹೋದರರ ಸಹಿತ ಇದೇ ಕರ್ಮಜೆಗೆ ಆಗಮಿಸಿ ದೈವಜ್ಞರು ತಿಳಿಸಿದಂತೆ ಕರ್ಮಜೆಯಲ್ಲಿರುವ ನಾಗ ಸಾನಿಧ್ಯದಲ್ಲಿ ಪೂಜೆ ನಡೆಸಿ ಅಲ್ಲಿಂದ ಒಂದು ಹಿಡಿ ,ತುಳಸಿಕಟ್ಟೆಯಿಂದ ಒಂದು ಹಿಡಿ ಮಣ್ಣನ್ನು ತೆಗೆದುಕೊಂಡು ಉಡುಪಿಯಲ್ಲಿ ಅವರು ಖರೀದಿಸಿರುವ ಭೂಮಿಯಲ್ಲಿರಿಸಿದ ನಂತರ ಅವರ ಕುಟುಂಬ ಏಳಿಗೆಯನ್ನು ಕಂಡಿತು ಎಂದು ಹೇಳಲಾಗುತ್ತಿದೆ.ಅದಾದ ಬಳಿಕ ಪ್ರತೀ ವರ್ಷ ಇವರ ಕುಟುಂಬವು ಇದೇ ನಾಗಬನದಲ್ಲಿ ಪೂಜೆ ಸಲ್ಲಿಸಿ ಪ್ರಸಾದವನ್ನು ತರಿಸಿಕೊಳ್ಳುತ್ತಿದೆ.

ಆದರೆ ಈಗ ರಘುಪತಿ ಭಟ್ಟರು ೨ನೇ ಬಾರಿ ಚುನಾವಣೆಗೆ ಸ್ಫರ್ಧಿಸಿದ್ದಾರೆ.ಹಾಗಾಗಿ ಮಣ್ಣಿನ ಋಣ ಭಾರ ತೀರಿಸಲು ಮತ್ತೆ ಹುಟ್ಟೂರ "ನೆಲ" ನೆನಪಾಯಿತು. "ದೈವಜ್ಞರೂ" ತಿಳಿಸಿದರು.ಹಾಗಾಗಿ ಇತ್ತೀಚೆಗೆ ಕರ್ಮಜೆಗೆ ಆಗಮಿಸಿ ಅವರ ಕುಟುಂಬ ಸೇವೆ ನಡೆಸಿತು.ಆರಂಭದಲ್ಲಿ ಭಟ್ಟರ ಅಣ್ಣ ಆಗಮಿಸಿದ್ದರು.ಮರುದಿನ ರಘುಪತಿ ಭಟ್ಟರು ಆಗಮಿಸಿ ಪ್ರಾರ್ಥಿಸಿದರು.ಜೊತೆಗೆ ಹಿಡಿ ಮಣ್ಣನ್ನೂ ಜೊತೆಯಲ್ಲಿರಿಸಿಕೊಂಡರು.ಇನ್ನೊಂದು ಅಚ್ಚರಿಯೆಂದರೆ ರಘುಪತಿ ಭಟ್ಟರ ತಂದೆಯವರಿಗೆ ಇತ್ತೀಚೆಗೆ ಅಸೌಖ್ಯವಿದ್ದಾಗ ಇದೇ ನಾಗಬನದಲ್ಲಿ ಪೂಜೆ ಸಲ್ಲಿಸಿದಾಗ ಆರೋಗ್ಯ ಸುಧಾರಿಸಿದೆಯಂತೆ.

ಇದೆಲ್ಲವೂ ಮಣ್ಣಿನ ಋಣಭಾರ ಎಂದರೆ ತಪ್ಪಾದೀತೇ? ಇಂದು ಹಳ್ಳಿಯಿಂದ ರೈತರು ಭೂಮಿ ಮಾರಾಟ ಮಾಡಿ ನಗರದತ್ತ ಸಾಗುತ್ತಿರುವ ವೇಳೆ ಇಂತಹ ಭಾವನಾತ್ಮಕ ಸಂಬಂಧಗಳು ಮತ್ತೆ ಮತ್ತೆ ಹಳ್ಳಿಯ ಕಡೆಗೆ ಒಯ್ಯುತ್ತವೆ.ಆದರೆ ಒಂದು ವೇಳೆ ಅಂತಹ ಭೂಮಿಯನ್ನು ಅನ್ಯಮತೀಯರಿಗೆ ಅಥವಾ ಧಾರ್ಮಿಕ ಪ್ರಜ್ಞೆಯಿಲ್ಲದ ವ್ಯಕ್ತಿಗಳಿಗೆ ಮಾರಾಟ ಮಾಡಿದರೆ..?.ಆ ಭಾವನಾತ್ಮಕ ಸಂಬಂಧಗಳಿಗೆ ನೆಲೆಯಿರುತ್ತಿತ್ತೇ?.ಹಾಗಾಗಿ ಮಣ್ಣಿನ ಋಣ ಭಾರ ಎಂದೆಂದಿಗೂ ತೀರಿಸಲು ಅಸಾಧ್ಯ ಎಂಬುದಂತೂ ಮತ್ತೆ ಮತ್ತೆ ನೆನಪಾಗಿಸುತ್ತದೆ.





ಕರ್ಮಜೆಯ ಮನೆಯ ಒಂದು ನೋಟ.

23 ಏಪ್ರಿಲ್ 2008

"ಗುರು" ಚರಣಕೆ ತಲೆಬಾಗಿ...



ಸುಳ್ಯದ ಮಾಜಿ ಶಾಸಕ ಬಿ ಜೆ ಪಿ ಅಭ್ಯರ್ಥಿ ಎಸ್.ಅಂಗಾರ ಮಂಗಳವಾರದಂದು ಸುಳ್ಯ ತಾಲೂಕಿನ ಪಂಜ ಬಳಿಯ ಕರಿಕಳದ ಪೆರಿಯಪ್ಪು ರಾಮ ಭಟ್ಟರ ಮನೆಯಲ್ಲಿ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದರು.ಇವರೊಂದಿಗೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ನ.ಸೀತಾರಾಮ, ಸುಳ್ಯ ವಿಹಿಂಪ ಅಧ್ಯಕ್ಷ ಕೃಷ್ಣ ಪ್ರಸಾದ ಮಡ್ತಿಲ ಉಪಸ್ಥಿತರಿದ್ದರು.

ಫೋಟೋ ನಾನೇ ತೆಗೆದದ್ದು.

ಪ್ರಶಸ್ತಿ ಪ್ರದಾನ ....




ಜೀವನದಲ್ಲಿ ನಿರಾಸೆ,ಹತಾಶೆಗಳು ತುಂಬಿಕೊಂಡಾಗ ಕವಿತೆ ,ವಚನ,ಕಾವ್ಯಗಳು ಬದುಕಿಗೆ ನವಚೈತನ್ಯ,ಸ್ಫೂರ್ತಿ ತಂದುಕೊಡಬಲ್ಲವು ಆದುದರಿಂದ ಕವಿಗಳಾದವರಿಗೆ ಎಲ್ಲರ ಬದುಕಿನಲ್ಲಿ ಹುಮ್ಮಸ್ಸು ತರಬಲ್ಲ ಶಕ್ತಿಯಿದೆ ಎಂದು ಹೊಸನಗರದ ಶ್ರೀ ರಾಮಚಂದ್ರಾಪುರ ಮಠದ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.

ಅವರು ಸುಳ್ಯ ತಾಲೂಕಿನ ಕರಿಕಳದ ಪೆರಿಯಪ್ಪುವಿನಲ್ಲಿ ನಡೆದ ಪಂಜ ಸೀಮಾ ಸಮ್ಮಿಲನ ಮತ್ತು ವೇ|ಮೂ|ಲಷ್ಕರಿ ಕೇಶವ ಭಟ್ಟ ಜನ್ಮಶತಮಾನೋತ್ಸವ ಪ್ರಶಸ್ತಿ - 2007 ಪ್ರದಾನ ಸಮಾರಂಭದಲ್ಲಿ ಕವಿ ಕೆ.ಪರಮೇಶ್ವರ ಭಟ್ಟ ಬಾಳಿಲ ಇವರಿಗೆ ಪ್ರದಾನ ಮಾಡಿದ ಬಳಿಕ ಆಶೀರ್ವಚನ ನೀಡುತ್ತಿದ್ದರು.

ಸಮಾಜದಲ್ಲಿ ಬದಲಾವಣೆಗಳು ಸಕಾರಾತ್ಮಕವಾಗಿರಬೇಕು ಬದಲಾವಣೆಗಳಿಗಾಗಿ ಬದಲಾವಣೆಗಳು ಬೇಡ ಎಂದ ಶ್ರೀಗಳು ಎಲ್ಲರ ಗುರಿ ರಾಮರಾಜ್ಯವಾಗಿರಲಿ ಅದಕ್ಕಾಗಿ ಸಾತ್ವಿಕತೆಯ ಶಕ್ತಿಯ ಸಂಚಾರ ಎಲ್ಲೆಡೆಯಾಗಲಿ ಎಂದು ಶ್ರೀಗಳು ಹೇಳಿದರು.

ಸಮಾರಂಭದಲ್ಲಿ ಅಭಿನಂದನಾ ಮಾತುಗಳನ್ನಾಡಿದ ಮೂಡಬಿದರೆಯ ಆಳ್ವಾಸ್ ಕಾಲೇಜಿನ ಕನ್ನಡ ಉಪನ್ಯಾಸಕ ರಾಮಪ್ರಸಾದ ಕಾಂಚೋಡು ಭಾಷಾರಕ್ಷಣೆಯ ಉದ್ದೇಶದಿಂದ ಮಾತ್ರಾ ಪರಮೇಶ್ವರ ಭಟ್ಟರು ಮಹಾಕಾವ್ಯಗಳನ್ನು ಬರೆದರೆಂದು ಯಾರೂ ಪಕ್ಕನೆ ಭಾವಿಸಬಾರದು ಇದು ಅನನ್ಯ ಸುಂದರ ಸಂಸ್ಕೃತಿಯೊಂದರ ಉಳಿವಿಗಾಗಿ ಕೈಗೊಂಡಿರುವ ಮಹಾಕಾಯಕ ಎಂದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಹಿತ್ಯ - ಸುಬ್ರಾಯ ಚೊಕ್ಕಾಡಿ, ಯಕ್ಷಗಾನ-ಪದ್ಯಾಣ ಗಣಪತಿ ಭಟ್, ವೇದ- ಪುರೋಹಿತ ನಾಗರಾಜ ಭಟ್, ಶಿಲ್ಪಶಾಸ್ತ್ರ - ಮಹೇಶ ಮುನಿಯಂಗಳ ಹಾಗೂ ಎಸ್.ಎಂ.ಪ್ರಸಾದ ಮುನಿಯಂಗಳ, ಕಲೆ-ಬೇರ್ಯ ನಾರಾಯಣ ಭಟ್ಟ, ಸಾಮಾಜಿಕ - ಎನ್.ಎಸ್.ಸುವರ್ಣಿನಿಯವರನ್ನು ಗುರುತಿಸಲಾಯಿತು.ನಂತರ ಆತ್ರತ್ರಾಣ ನಿಧಿಯನ್ನು ಬಾಳಿಲದ ಕೃಷ್ಣಪ್ಪ ಮೂಲ್ಯರ ಪುತ್ರ ಪ್ರತಿಭಾವಂತ ವಿದ್ಯಾರ್ಥಿ ಅಮಿತ್ ನಿಗೆ ನೀಡಲಾಯಿತು.

ಸನ್ಮಾನಿತರ ಪರವಾಗಿ ಪರಮೇಶ್ವರ ಭಟ್ಟ ಬಾಳಿಲ ಹಾಗೂ ಸುಬ್ರಾಯ ಚೊಕ್ಕಾಡಿ ಮಾತನಾಡಿದರು.

ಪಂಜ ಸೀಮಾ ಪರಿಷತ್ ಅಧ್ಯಕ್ಷ ರಾಧಾಕೃಷ್ಣ ಕೋಟೆ ಸ್ವಾಗತಿಸಿ ಸೀಮಾ ಕಾರ್ಯದರ್ಶಿ ಸುರೇಶ್ಚಂದ್ರ ವರದಿ ವಾಚಿಸಿದರು.ವಸಂತ ಭೀಮಗುಳಿ ವಂದಿಸಿದರು.ಮುರಳೀಕೃಷ್ಣ ಚಳ್ಳಂಗಾರು ಕಾರ್ಯಕ್ರಮ ನಿರ್ವಹಿಸಿದರು.

ಫೋಟೋ - ನಾನೇ ತೆಗೆದದ್ದು.

21 ಏಪ್ರಿಲ್ 2008

ಆಹಾರದ ಕೊರತೆ....



ಈಗ ವಿಶ್ವ ಸಂಸ್ಥೆಯೇ ಎಚ್ಚರಿಕೆ ನೀಡಿದೆ..!!.

ಇನ್ನೊಮ್ಮೆ ಈ ಆತಂಕಕಾರಿ ಸುದ್ದಿಗೆ ಮರು ಜೀವಬಂತು.ಅನೇಕ ದಿನಗಳಿಂದ ಮಾತನಾಡುತ್ತಿದ್ದ ಸಂಗತಿಯನ್ನು ಈಗ ವಿಶ್ವಸಂಸ್ಥೆಯೂ ಹೇಳಿದೆ.ಅದು ನೀಡಿದ ಎಚ್ಚರಿಕೆ ಹೀಗಿದೆ "ಆಹಾರ ಕ್ಷಾಮವು ಜಗತ್ತಿನಾದ್ಯಂತ ವ್ಯಾಪಿಸುತ್ತಿದೆ. ಆಹಾರ ಧಾನ್ಯಗಳ ಕೊರತೆ ಮತ್ತು ಇದರಿಂದಾಗಿ ಉಂಟಾಗಿರುವ ವಿಪರೀತ ಬೆಲೆಯೇರಿಕೆಯಿಂದಾಗಿ ವಿಶ್ವದ ಹಲವಾರು ಬಡ ಮತ್ತು ಅಭಿವೃದ್ಧಿಶೀಲ ದೇಶಗಳು ಆಂತರಿಕ ಕ್ಷೋಭೆ ಎದುರಿಸಬೇಕಾಗಿದೆ" ಎಂದು ಸಾರಿ ಹೇಳಿದೆ.

ಆದರೆ ನಮಗೆ ಅರ್ಥವಾಗಬೇಕಲ್ಲ..?.ಈಗಾಗಲೇ ಬೆಲೆಯೇರಿಕೆ ಸಮಸ್ಯೆ ತಲೆನೋವಾಗಿದೆ.ಇನ್ನು ಆಹಾರ ಧಾನ್ಯದ ಸಮಸ್ಯೆಯೂ ಬಂದರೆ ಮುಂದಿನ ಗತಿಯೇನು?.ಈಗಾಗಲೇ ವರದಿಯಾಗಿರುವಂತೆ ಇಂತಹ ಸಮಸ್ಯೆಗಳಿಂದಾಗಿ ಈಜಿಪ್ಟ್ ,ಇಂಡೋನೇಷಿಯಾ,ಫಿಲಿಫೈನ್ಸ್ ಮೊದಲಾದ ದೇಶಗಳಲ್ಲಿ ಆಹಾರಕ್ಕಾಗಿ ಹಿಂಸಾಚಾರಗಳೂ ನಡೆದಿದೆ.ಇದಕ್ಕೆ ಕಾರಣವೂ ಇದೆ.ಭಾರತ ಸೇರಿದಂತೆ ಚೀನಾ ಮೊದಲಾದ ದೇಶಗಳು ಪ್ರಮುಖ ಅಕ್ಕಿ ರಪ್ತು ಮಾಡುವ ದೇಶಗಳು ಈಗ ಆಂತರಿಕವಾಗಿ ಅಕ್ಕಿ ಪೂರೈಕೆಗೆ ಸಾಧ್ಯವಾಗುತ್ತಿಲ್ಲವಾದ ಕಾರಣ ರಪ್ತು ನಿಲ್ಲಿಸಿದೆ.ಹೀಗಾಗಿ ಅಲ್ಲಿನ ದೇಶದ ಜನರಿಗೆ ಆಹಾರದ ಸಮಸ್ಯೆ ಕಾಡುತ್ತಿದೆ. ಆದರೆ ಭಾರತಕ್ಕೂ ತನ್ನ ದೇಶದ ಜನರಿಗೂ ಈಗ ಪೂರ್ಣ ಪ್ರಮಾಣದಲ್ಲಿ ಅಕ್ಕಿ ,ಗೋಧಿ ಪೂರೈಕೆ ಸಾಧ್ಯವಾಗುತ್ತಿಲ್ಲ.ಗೋಧಿ ದಾಸ್ತಾನು ಕುಂಠಿತಗೊಂಡಿದೆ.ಮುಂದೆ ಭಾರತವೂ ಆಹಾರದ ಕ್ಷಾಮಕ್ಕೆಸಿಲುಕಿದರೆ ಅಚ್ಚರಿಯಿಲ್ಲ.

ಭಾರತವು ಕೃಷಿ ಪ್ರದಾನವಾದ ದೇಶ.ಇಲ್ಲಿ ಅಂತಹ ಕ್ಷಾಮ ಬಿಡಿ, ಚಿಂತನೆಯೂ ಬರಲೇ ಬಾರದಾಗಿತ್ತು.ಹಿಂದೆ ಅಂತಹ ಶೇಖರಣೆ ಭಾರತದಲ್ಲಿತ್ತು.ಆದರೆ ಇಂದು...?. ಇದು ಏಕೆ ಹೀಗೆ..?. ಮತ್ತೆ ಮತ್ತೆ ಅದೇ ರಾಗ ಅಗತ್ಯವಿಲ್ಲ. ಈ ಕೃಷಿ ಪ್ರದಾನವಾದ ದೇಶದೊಳಗೆ ಇನ್ನೂ ಅನೇಕ IT ಕಂಪನಿಗಳು ಬಂದು ರೈತರ ಜಮೀನನ್ನು ಖರೀದಿಸ ಹೊರಟರೆ ಇಂತಹ ಸಮಸ್ಯೆಯಾಗದೇ ಉಳಿದೀತೇ?.ಹಳ್ಳಿಯಲ್ಲಿ ರೈತ ದಿನನಿತ್ಯ ಅನುಭವಿಸುವ ವೇದನೆಯ ಒಂದು ಭಾಗವೇ ಆಹಾರದ ಕ್ಷಾಮ. ಇನ್ನೊಂದು ಗಮನಿಸಬೇಕಾದ ಸಂಗತಿಯೆಂದರೆ ಇಷ್ಟೆಲ್ಲಾ ಬೆಲೆಯೇರಿಕೆಯಾದಾಗಲೂ ರೈತರಿಗೆ ಹೇಳುವಷ್ಟು ಅದರ ಪ್ರಯೋಜನವಾಗುತ್ತಿಲ್ಲ.

ಈಗಾಗಲೇ ಅನೇಕ ಹೊಲಗಳು ಉದ್ಯಮವಾಗಿ ,ಕಟ್ಟಡಗಳಾಗಿ ಬದಲಾಗಿದೆ.ರೈತರು ಮತ್ತು ಅವರ ಮಕ್ಕಳು ನಗರ ಸೇರಿದ್ದಾರೆ.ಈಗ ಮತ್ತೆ ಅವರಿಗೆ ಸಮಸ್ಯೆಯಾಗಿದೆ. ಬೆಲೆಯೇರಿಕೆಯಿಂದಾಗಿ ಕಂಪನಿಗಳಲ್ಲಿ ಸಿಗುವ ಸಂಬಳ "ಊಟ"ಕ್ಕೆ ಸರಿಯಾದೀತು.ಕೆಲವರಿಗೆ ಅದೂ ಸಾಲುವುದಿಲ್ಲವಂತೆ.ಆದರೆ ಹಳ್ಳಿಯಲ್ಲಿ ಈಗಲೂ ಇರುವ ರೈತ ತನಗೆ ಅಗತ್ಯವಾದ ಅಕ್ಕಿ,ತರಕಾರಿ ,ಇನ್ನಿತರ ಧಾನ್ಯಗಳನ್ನು ಆತನೆ ಬೆಳೆದು ತನ್ನ ಹೊಟ್ಟೆಯನ್ನು ತುಂಬಿಸಿ ಆರಾಮದ ಬದುಕು ಸಾಗಿಸುತ್ತಿದ್ದಾನೆ.ಇದುವರೆಗೆ ಆತ್ಮಹತ್ಯೆಯ ಸರದಿ ರೈತರದ್ದಾಗಿತ್ತು..... ಮುಂದೆ...?. ಹಾಗಾಗಿ ಇನ್ನು ರೈತನ ಕಾಲಿಗೆ ಬೀಳಲೇ ಬೇಕಾದ ಅನಿವಾರ್ಯತೆಯಿದೆ.ಎಷ್ಟೇ ಆಹಾರ ಧಾನ್ಯಗಳನ್ನು ಆಮದು ಮಾಡಿಕೊಂಡರೂ ನಮ್ಮ ರೈತರು ಮನಸ್ಸು ಮಾಡದೇ ಹೋದರೆ ದೇಶಕ್ಕೆ ಮುಂದೆ ಭವಿಷ್ಯವಿರದು ಎನ್ನುವುದು ಸಾರ್ವಕಾಲಿಕ ಸತ್ಯ.


ಕೊನೆಯ ಮಾತು : ಇನ್ನು ಸರಕಾರಗಳು ರೈತರಿಗೆ ಬಡ್ಡಿ ರಹಿತ ಸಾಲ ನೀಡುವ ಯೋಜನೆಯನ್ನು ಜಾರಿಗೆ ತರುವ ದಿನ ದೂರವಿರದು.

19 ಏಪ್ರಿಲ್ 2008

ದೇವರ "ಪ್ರತಿಷ್ಠೆ" - ಸ್ವ"ಪತಿಷ್ಠೆ"ಯೇ...?



ಏನೇಕಲ್ ಬ್ರಹ್ಮಕಲಶೋತ್ಸವದ 4 ನೇ ದಿನ.ಧಾರ್ಮಿಕ ಸಭೆಯಲ್ಲಿ ಒಡಿಯೂರು ಶ್ರೀಗಳು ಆಶೀರ್ವಚನ ನೀಡುತ್ತಿದ್ದರು.

ಅವರು ತಮ್ಮ ಆಶೀರ್ವಚನದಲ್ಲಿ ಒಂದು ಮಾತನ್ನು ಉಲ್ಲೇಖಿಸಿದರು."ಧರ್ಮವೆಂದರೆ ಸ್ವಚ್ಚ ನಡೆ-ನುಡಿ.ಆದರೆ ಇಂದು ಅದರ ಕೊರತೆ ಕಂಡುಬಂದು ಸಮಾಜದಲ್ಲಿ ಭಗವಂತನ ಅನುಗ್ರಹ ಸಿಗುತ್ತಿಲ್ಲ,ಧರ್ಮವೂ ಜಾಗೃತಿಯಾಗುತ್ತಿಲ್ಲ ಎನ್ನುತ್ತಾ ,ಇಂದು ದೇವಾಲಯಗಳಲ್ಲಿ ಬ್ರಹ್ಮಕಲಶೋತ್ಸವಗಳು ನಡೆದಂತೆ ಅಂತರಂಗದಲ್ಲೂ ತನು-ಮನ ಶುದ್ಧದ ಕೆಲಸ ನಡೆಯಬೇಕು ಎಂದರು.

ಎಂತಹ ಸತ್ಯವಾದ ಮಾತು...

ಯಾವುದೇ ದೇವಸ್ಥಾನವಿರಲಿ ನೀವು ಗಮನಿಸಿ ನೋಡಿ. ದೇವಸ್ಥಾನದಲ್ಲಿ ದೇವರ ಬಿಂಬ ಪ್ರತಿಷ್ಠೆಯಾದಂತೆ ಇಲ್ಲಿ ಆಡಳಿತ ಮಂಡಳಿ ಇರಬಹುದು ಆಥವಾ ಅದಕ್ಕೆ ಸಂಬಂಧಿಸಿದವರ ಮನದಲ್ಲೂ ಒಂದು "ಪ್ರತಿಷ್ಥೆ" ನಡೆಯುತ್ತದೆ.ಕೊನೆಗೆ ಅದು "ರಾಜಕೀಯ" ತಿರುವು ಪಡೆಯುತ್ತದೆ. ಯಾವ ದೇವಸ್ಥಾನವನ್ನು ಊರಿನ ನೆಮ್ಮದಿ,ಶಾಂತಿಗಾಗಿ ಜೀರ್ಣೋದ್ಧಾರ ಮಾಡಲಾಯಿತೋ ಅದರಿಂದಲೇ ಮತ್ತೆ ಅಶಾಂತಿ ಶುರುವಾದ ಸಂಗತಿಗಳು ನಮ್ಮ ಮುಂದೆ ಎಷ್ಠಿಲ್ಲ? ಊರಿಗೆ ಒಂದು ಉತ್ತಮ ಸಂದೇಶ ನೀಡಬೇಕಾದ ಕೇಂದ್ರದಿಂದಲೇ ಅನಾಗರೀಕ ಸಂದೇಶ ಬರುತ್ತದೆ.ಅದು ನಂತರ ಜಾತಿ-ಮತದ ರೂಪವೂ ಪಡೆಯುತ್ತದೆ. ಹೀಗಾದಾಗ ಅದು ಮತ್ತೆ ಅದೇ ದೇವಸ್ಥಾನ ಅಜೀರ್ಣಕ್ಕೆ ಬಂದು ನಿಲ್ಲುತ್ತದೆ.ಮತ್ತೆ ಹೊಸ ಬ್ರಹ್ಮಕಲಶ ಶುರುವಾಗುತ್ತದೆ.....!

ಇಂತಹ ಒಂದು ಸಂದರ್ಭದಲ್ಲಿ ಇನ್ನೊಬ್ಬ ಸ್ವಾಮೀಜಿ ಹೇಳುತ್ತಾರೆ ದೇವಸ್ಥಾನದಲ್ಲಿ ದೇವರ ಪ್ರತಿಷ್ಠೆಯಾದ ನಂತರ ನಮ್ಮ ಪ್ರತಿಷ್ಠೆಯನ್ನು ಬಿಡಬೇಕು ಆಗ ಮಾತ್ರಾ ಆ ದೇವಾಲಯ, ಅಂತಹ ದೇವಾಲಯಗಳು ಊರಿಗಿಡೀ ನೆಮ್ಮದಿ ನೀಡಲು ಸಾಧ್ಯ ಎನ್ನುವ ಮಾತು ಇನ್ನೊಂದು ಕಟುಸತ್ಯ.ಆದರೆ ಏನೇಕಲ್ 2 ನೇ ವರ್ಗಕ್ಕೆ ಸೇರಿರುತ್ತದೆ ಅಲ್ಲಿನ ದೇವರ ಪ್ರತಿಷ್ಠೆ ಮಾತ್ರಾ ನಡೆದಿದೆ ಎಂಬ ನಂಬಿಕೆ ಮತ್ತು ವಿಶ್ವಾಸ ನಮ್ಮದು.

ಇಂದು ಅಂದರೆ ಶುಕ್ರವಾರ ದೈವಗಳ ಪ್ರತಿಷ್ಠೆಯು ನಡೆಯಿತು

16 ಏಪ್ರಿಲ್ 2008

ಬ್ರಹ್ಮಕಲಶದ ಸಂಭ್ರಮ...



"ಬ್ರಹ್ಮಕಲಶೋತ್ಸವ"..... ಇದು "ಬ್ರಹ್ಮ"ಕಲಶೋತ್ಸವ... ಭಕ್ತರಿಗೆ ಸಂಭ್ರಮದ ಕ್ಷಣ.....ಅವಿ"ಸ್ಮರಣೀಯ" ಕ್ಷಣ....,

ಸುಳ್ಯ ತಾಲೂಕಿನ ಏನೇಕಲ್ ಗ್ರಾಮದಲ್ಲಿರುವ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನ ಮತ್ತು ಬಚ್ಚನಾಯಕ ದೈವಸ್ಥಾನದ ನವೀಕರಣ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಕ್ಷಣ.ಕುಕ್ಕೆ ಸುಬ್ರಹ್ಮಣ್ಯದಿಂದ 9 ಕಿಮೀ ದೂರದಲ್ಲಿ ಈ ಕ್ಷೇತ್ರವಿದೆ.ಅತ್ಯಂತ ಪ್ರಸಿದ್ಧಿಯನ್ನು ಹೊಂದಿದ ಸ್ಥಳ.ಇಲ್ಲಿ ದೇವರು ಸ್ವಯಂಭೂ ಸ್ಥಿತಿಯಲ್ಲಿ ಕಾಣಿಸಿಕೊಂಡಿದ್ದಾನೆ ಎಂಬ ನಂಬಿಕೆಯಿದೆ.ಅಲ್ಲದೆ ಇಲ್ಲಿ ಹುತ್ತಕ್ಕೆ ಪೂಜೆ ಸಲ್ಲಿಸಲಾಗುತ್ತದೆ.ಹಾಗೆಯೇ ಬಚ್ಚನಾಯಕ ದೈವಸ್ಥಾನದ ಬಗ್ಗೆಯೂ ವಿವಿಧ ವ್ಯಾಖ್ಯಾನಗಳಿವೆ.ಗಟ್ಟ ಪ್ರದೇಶದಿಂದ ಇಳಿದು ಬಂದು ಏನೇಕಲ್ಲಿನಲ್ಲಿ ಮಾನುಷದಿಂದ ಅತಿಮಾನುಷಕ್ಕೇರಿದ ಸ್ಥಳ ಅಂತ ಸುಲಭದಲ್ಲಿ ಹೇಳಬಹುದು.ಈ ದೈವವು ಅತ್ಯಂತ ಪ್ರಸಿದ್ಧಿಯನ್ನು ಹೊಂದಿದೆ.ಇಲ್ಲಿ ಉದ್ಯೋಗ ಸೇರಿದಂತೆ ಇನ್ನಿತರ ಯಾವುದೇ ಸಮಸ್ಯೆಗಳಿಗೆ ಹರಿಕೆ ಹೇಳಿಕೊಂಡರೆ ಈಡೇರುತ್ತದೆ ಅಂತ ಭಕ್ತರು ಹೇಳುತ್ತಾರೆ.ಇನ್ನೊಂದು ಇಲ್ಲಿಯ ವಿಶೇಷತೆಯೆಂದರೆ "ಕಾಪುಕಯ".ಅಂದರೆ ದೇವರ ಮೀನಿನ ಪ್ರದೇಶ.ಇಲ್ಲಿ ಸಾವಿರಾರು ವಿವಿಧ ಬಗೆಯ ಮೀಗುಗಳು ಇವೆ.ಇದು ಅನೇಕರನ್ನು ಆಕರ್ಷಿಸುತ್ತದೆ.

ಈ ಎಲ್ಲಾ ವಿಶೇಷತೆಯನ್ನು ಹೊಂದಿರುವ ಪ್ರದೇಶದಲ್ಲಿ ದೇವಸ್ಥಾನ ಹಾಗೂ ದೈವಸ್ಥಾನಗಳೆರಡೂ ಜೀರ್ಣೋದ್ಧಾರಗೊಂಡು ಬ್ರಹ್ಮಕಲಶೋತ್ಸವದ ಸಂಭ್ರಮದಲ್ಲಿದೆ.

ನಿನ್ನೆಯಿಂದ ಅಂದರೆ ಏ.15 ರಿಂದ "ಬ್ರಹ್ಮ"ಕಲಶ ಕಾರ್ಯಕ್ರಮ ಆರಂಭಗೊಂಡಿದ್ದು ಏ.20 ರಂದು "ಬ್ರಹ್ಮ"ಕಲಶಾಭಿಷೇಕ ನಡೆಯಲಿದೆ.ಈ ಅಂಗವಾಗಿ ಪ್ರತಿದಿನ [ಏ.19] "ಧಾರ್ಮಿಕ" ಸಭಾಕಾರ್ಯಕ್ರಮ ನಡೆಯುತ್ತದೆ.ಹಾಗಾಗಿ ಇಂದು ಅಂದರೆ ಬುಧವಾರದಂದು ಕೂಡಾ ಸಭಾಕಾರ್ಯಕ್ರಮ ನಡೆಯಿತು.
ಧಾರ್ಮಿಕ ಭಾಷಣ ಮಾಡಿದ ವೇದಮೂರ್ತಿ ಶ್ರೀವತ್ಸ ಶಿಬರ ಬ್ರಹ್ಮಕಲಶೋತ್ಸವದ ಬಗ್ಗೆ ಮಾಹಿತಿ ನೀಡಿ ,ಅದು ಏಕೆ ಮತ್ತು ಏನು ಎಂದು ವಿವರಿಸುತ್ತಾ ಹೇಳಿದ್ದು ಇದು.....ಮಾನವನಾಗಿ ಹುಟ್ಟಿದವರೆಲ್ಲಾ ಧರ್ಮಕಾರ್ಯ ಮಾಡಲೇಬೇಕು.ಧರ್ಮ,ಜನನಿ,ಜನ್ಮಭೂಮಿಯ ರಕ್ಷಣೆ ಪ್ರತಿಯೊಬ್ಬನ ಕರ್ತವ್ಯವಾಗಿದೆ.ದೈವೀ ಶಕ್ತಿಯಿಂದ ಈ ದೇಹ ಪ್ರಕೃತಿಗೆ ಬಂದದ್ದೇ ಧರ್ಮ ರಕ್ಷಣೆ ಮಾಡಲು.ಹಾಗೆ ಧರ್ಮಕಾರ್ಯ ಮಾಡಿದರೆ ಮಾತ್ರಾ ಬದುಕು ಪರಿಪೂರ್ಣವಾಗಲು ಸಾಧ್ಯ.ಜೀವನ ಶೈಲಿ ಬದಲಾದಂತೆ ಧಾರ್ಮಿಕ ನಂಬಿಕೆಯೂ ಇಂದು ಬದಲಾಗಿದೆ.ಆದರೆ ಇತ್ತೀಚೆಗೆ ಹಿಂದುಗಳೆನಿಸಿಕೊಂಡವರಿಂದಲೇ ಧರ್ಮಕ್ಕೆ ಅಪಚಾರವಾಗುತ್ತಿದೆ ಎಂದು "ಒತ್ತಿ" ಹೇಳಿದರು.ಸಾರ್ವಜನಿಕರೆಲ್ಲರಿಗೂ ಭಗವಂತನನ್ನು ಪೂಜಿಸಲು ಅವಕಾಶ ಕಲ್ಪಿಸುವ ವಿಜ್ಞಾನವೇ ದೇವಾಲಯ.ಅದರ ವಿನ್ಯಾಸವು ವೈಜ್ಞಾನಿಕವಾಗಿಯೇ ಇರುತ್ತದೆ.ದೇವರ ಗರ್ಭ ಗುಡಿಯಲ್ಲಿ "ಶಿಖರ"[ಮುಗುಳಿ]ದ ಮೂಲಕ ಸಂಗ್ರಹವಾಗುವ ಶಕ್ತಿಯು ವಿಗ್ರಹದ ಮೂಲಕ ದೈವೀ ಶಕಿಯಾಗಿ ಭಕ್ತರಿಗೆ ಲಭ್ಯವಾಗುತ್ತದೆ .ಹಾಗಾಗಿಯೆ ಅಂತಹ ಶಕ್ತಿ ನಮ್ಮೊಳಗೆ ಸೇರಿಕೊಳ್ಳಲು ದೇವಸ್ಥಾನಕ್ಕೆ "ಶರ್ಟು ತೆಗೆದು" ಹೋಗಬೇಕೆಂಬ ನಿಯಮವಿರುತ್ತದೆ ಎಂದರು.

ಸಭಾಧ್ಯಕ್ಷತೆಯನ್ನು ಸುಬ್ರಹ್ಮಣ್ಯ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಚಂದ್ರಕಲಾ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ದೈವಜ್ಞ ಚೇಕೋಟು ಸುಬ್ರಹ್ಮಣ್ಯ ಭಟ್ , ಸುಬ್ರಹ್ಮಣ್ಯ ಗ್ರಾಮ ಪಂಚಾಯ್ತಿ ಸದಸ್ಯ ಕೃಷ್ಣಕುಮಾರ್ ರುದ್ರಪಾದ,ಧಾರ್ಮಿಕ "ಚಿಂತಕ" ಗೋಪಾಲ ರಾವ್ ಬಿಳಿನೆಲೆ,ದೇವಸ್ಥಾನದ ಆಡಳಿತ ಮೊಕ್ತೇಸರ ಮನೋಹರ್,ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ವೆಂಕಟ್ರಾಜ್,ದೇವಳದ ಅರ್ಚಕ ಸುಬ್ರಾಯ ಆಸ್ರಣ್ಣ ಭಾಗವಹಿಸಿದ್ದರು.

ಒಟ್ಟಿನಲ್ಲಿ ಊರಿನಲ್ಲೊಂದು ದೇವಾಲಯಕ್ಕೆ ಬ್ರಹ್ಮಕಲಶ.... ಊರಿಗೂ ಹೊಸ ಚೈತನ್ಯ.... ಅದು ಮತ್ತೊಂದು ರೀತಿಯ "ಬ್ರಹ್ಮಕಲಶ"


ಗರ್ಭಗುಡಿಯಲ್ಲಿರುವ ಹುತ್ತ...






ಗರ್ಭಗುಡಿಯ ಹೊರನೋಟ

13 ಏಪ್ರಿಲ್ 2008

ಅದೇ ಖುಷಿ..... ಅದೇ ನೋವು....



ನಾಳೆ ಸೌರಮಾನ ಯುಗಾದಿ.

ಹಳ್ಳಿಗಳಲ್ಲಿ ಸಂಭ್ರಮದ ದಿನ.ಸಸ್ಯಶ್ಯಾಮಲೆಯನ್ನು ಮಗದೊಮ್ಮೆ ಪೂಜಿಸುವ ಸುಂದರ ಕ್ಷಣ.ತನ್ನ ಒಡೆಯನ ಮನೆಗೆ ಧಾನ್ಯ ,ತರಕಾರಿಗಳನ್ನು ತಂದೊಪ್ಪಿಸುವ ದಿನ.ಭಗವಂತನಿಗೆ ತನ್ನ ಭುವಿಯಲ್ಲಿ ಬೆಳೆದ ಹಣ್ಣು ಹಂಪಲುಗಳು,ತರಕಾರಿಗಳನ್ನು ಸಮರ್ಪಿಸಿ ಎಲ್ಲರೂ ಹಂಚಿ ತಿನ್ನುವ ಸಂಭ್ರಮದ ಕ್ಷಣ...... ಆದರೆ ಈಗ ಈ ಎಲ್ಲಾ ಸಂಭ್ರಮ ಇದೆಯಾ..?.

ಚಾಂದ್ರಮಾನ ಯುಗಾದಿಯಂದು ಬೇವು-ಬೆಲ್ಲ ಮೆಲ್ಲುತ್ತಾ ಹೊಸವರ್ಷವನ್ನು ಸ್ವಾಗತಿಸಿ ಮುಂದಿನ ಸಿಹಿ-ಕಹಿಗಳನ್ನು ಸಮವಾಗಿ ಹಂಚಿಕೊಂಡು ನೂತನ ಸಂವತ್ಸರವನ್ನು ಬರಮಾಡಿಕೊಂಡರೆ, ಸೌರಮಾನ ಯುಗಾದಿಯಂದು ಭುವಿಯಲ್ಲಿ ಬೆಳೆದ ಹಸಿರನ್ನು ಸಮರ್ಪಿಸುವ ಕಾಲ.ಅಂದಿನಿಂದ ತುಳು ತಿಂಗಳು ಅಥವಾ ಮೇಷ ತಿಂಗಳು ಆರಂಭವಾಗುತ್ತದೆ.ಇದನ್ನು "ವಿಷು" ಅಂತಲೂ ಕರೆಯಲಾಗುತ್ತದೆ.ತುಳು ನಾಡಿನಲ್ಲಿ ಈ ವಿಷುವಿಗೆ ಅತ್ಯಂತ ಮಹತ್ವವಿದೆ.
ಹಿಂದಿನ ಒಕ್ಕಲು ಪದ್ದತಿಯಲ್ಲಿ ತಾನು ಭುವಿಯಲ್ಲಿ ಬೆಳೆದ ಹಸಿರು ತರಕಾರಿಗಳನ್ನು ಒಡೆಯನಿಗೆ ಸಮರ್ಪಿಸಿ ಅವರ ಆಶೀರ್ವಾದವನ್ನು ಪಡೆಯುವ ರೂಢಿಯಿತ್ತು. ಭೂಮಾಲಿಕ ಅದೆಲ್ಲವನ್ನು ದೇವರಿಗೆ ಸಮರ್ಪಿಸಿ ಎಲ್ಲರೊಂದಿಗೆ ಹಂಚಿ ತಿನ್ನುತ್ತಿದ್ದ. ಆದರೆ ಇಂದು ಅಂತಹ ಸಂಬಂಧವನ್ನು ಕೃಷಿಯಲ್ಲಿ ಕಾಣಲು ಸಾಧ್ಯವಿಲ್ಲ. ಹಾಗೆ ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ.ಏಕೆಂದರೆ ಇಂದು ಕೃಷಿಯಲ್ಲಿ ಕಾರ್ಮಿಕರ ಕೊರತೆಯೂ ಒಂದೆಡೆ ಕಾಡುತ್ತಿದ್ದರೆ ಇನ್ನೊಂದೆಡೆ ಕೃಷಿಯೆಂಬುದು ಯಾರಿಗೂ ಬೇಡವಾದ ಉದ್ಯೋಗವಾಗುತ್ತಿದೆ.ಆ ಕಾರಣಗಳಿಂದಾಗಿ ಇಂದು ತಲೆತಲಾಂತರಗಳಿಂದ ನಡೆದುಕೊಂಡು ಬಂದ "ವಿಷು"ವಿನಂತಹ ಆಚರಣೆಗಳು ಎಲ್ಲೋ ಒಂದು ಕಡೆ ಅರ್ಥವನ್ನು ಕಳೆದುಕೊಳ್ಳುತ್ತಿವೆ.ಅದು ವಿಷು ಮಾತ್ರವಲ್ಲ ಅನೇಕ ಪ್ರಕೃತಿ ಸಂಬಂಧಿತ ಆಚರಣೆಗಳು ಮೂಲೆಗುಂಪಾಗುತ್ತಿವೆ.ಕೆಲವೊಮ್ಮೆ ಅಂತಹ ದಿನ ಇದೆಯೆಂದು ತಿಳಿಯುವುದೇ ಇಲ್ಲ.ಹಾಗಾಗಿ ರೈತನೇ ಎಲ್ಲಾ ಆಚರಣೆಗಳ ಮೂಲ.ಆತನು ಸಂಕಷ್ಟದಲ್ಲಿ ಸಿಲುಕಿದರೆ?.ಈಗಿನ ಪರಿಸ್ಥಿತಿಯನ್ನೇ ನೋಡಿದರೆ ಅರ್ಥವಾಗುತ್ತದೆ.ಅಕ್ಕಿಯ ಬೆಲೆ 20 ರ ಗಡಿದಾಟುತ್ತಿದೆ ,ಇತರ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ ,ಹಣದುಬ್ಬರದ ಮಾತು ಬರುತ್ತದೆ.ಇಲ್ಲಿ ಆಹಾರ ಧಾನ್ಯಗಳ ದಾಸ್ತಾನು ಕುಂಠಿತವಾದ ಬಗ್ಗೆ ಏನಾದರೂ ಚರ್ಚೆ ನಡೆಯುತ್ತದಾ?.ರೈತರಿಗೆ ಆಹಾರಧಾನ್ಯ ಬೆಳೆಯಲು ಪ್ರೋತ್ಸಾಹಿಸುವ ಏನಾದರೂ ಕಾರ್ಯಕ್ರಮ ನಡೆಯುತ್ತದಾ?.

ಈ ದೇಶವನ್ನು ಕೃಷಿಪ್ರದಾನವಾದ ದೇಶವೆಂದೂ ,ರೈತನೇ ಈ ದೇಶದ ಬೆನ್ನೆಲುಬು ಎಂತಲೂ ಹೇಳಿದ ಮಂದಿಗೆ ಆತನ ಸಂಕಷ್ಟಗಳ ಅರಿವಾಗುವುದೇ ಇಲ್ಲ. ಹಲವು ಬಾರಿ ತನ್ನ ಸಮಸ್ಯೆಗಳ ಬಗ್ಗೆ ರೈತ ಹೇಳಿಕೊಂಡರೂ ಅದಕ್ಕೆ ಪರಿಹಾರವೇ ಸಿಗುವುದಿಲ್ಲ.ಚುನಾವಣೆ ಬಂದಾಗ ಶೇ 4 ಕ್ಕೆ ಬಡ್ಡಿ ಅಂತ ಒಂದು ಪಕ್ಷ ಹೇಳಿದರೆ ಇನ್ನೊಂದು ತಾನು ಶೇ 3 ಕ್ಕೆ ಕೊಡುತ್ತೇನೆ ಎನ್ನುತ್ತದೆ.ಅಂತಹ ಮಂದಿ ಇದುವರೆಗೆ ಏನು ಮಾಡಿದ್ದಾರೆ ಅಂತ ರೈತರು ಯೋಚಿಸಲೇಬೇಕು.
ದೇಶದಲ್ಲಿಂದು ಕೃಷಿಯ ಕಡೆಗಿನ ನೋಟ ಕಡಿಮೆಯಾಗಿರುವುದಕ್ಕೆ ಒಂದು ಉದಾಹರಣೆ -- ಅಂದು ವಿದರ್ಭದಲ್ಲಿ ರೈತರ ಆತ್ಮಹತ್ಯೆಯಾಗುತ್ತಿದ್ದ ಸಮಯ. ಸರಕಾರ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ.ಆಗ ಒಬ್ಬ ಪತ್ರಕರ್ತ ಆ ಸಮಸ್ಯೆಗಳ ಬಗ್ಗೆ ವರದಿಯೊಂದನ್ನು ತಯಾರಿಸಿದ.ಅದು ಸರಕಾರದ ಕಣ್ಣು ತೆರೆಯಿಸಿತು.ನಂತರ ಸರಕಾರವೇ ದೇಶದ ವಿವಿಧ ಪತ್ರಕತ್ರರನ್ನು ವಿದರ್ಭಕ್ಕೆ ಆಹ್ವಾನಿಸಿ ಸಮಸ್ಯೆಗಳ ಬಗ್ಗೆ ವಿಶ್ಲೇಷಿಸಲು ಕರೆ ನೀಡಿತು.ಇದೇ ಸಂದರ್ಭದಲ್ಲಿ ದೆಹಲಿಯಲ್ಲಿ ಫ್ಯಾಷನ್ ಶೋ ನಡೆಯುತ್ತಲಿತ್ತು.ಎಲ್ಲರ ಚಿತ್ತ ಅತ್ತ ಕಡೆಯಿತ್ತು.ದುರಂತವೆಂದರೆ ವಿದರ್ಭಕ್ಕೆ ಆಗಮಿಸಿದ ಪತ್ರಕರ್ತರು ಕೇವಲ ಬೆರಳೆಣೆಕೆಯಷ್ಟು ಮಾತ್ರಾ.ಫ್ಯಾಷನ್ ಶೋದಲ್ಲಿದ್ದ ಪತ್ರಕರ್ತರು ಸುಮಾರು 3000...!.ಯಾಕೆಂದರೆ ಅದು ಪತ್ರಕರ್ತರಿಗೂ ಇಕ್ಕಟ್ಟಿನ ಸ್ಥಿತಿ.ಫ್ಯಾಷನ್ ಶೋನ ಸುದ್ದಿಗಳು ಮರುದಿನ ಪತ್ರಿಕೆಯಲ್ಲಿ ಬಾರದೇ ಇದ್ದರೆ ಓದುಗರು ಪತ್ರಿಕಾ ಕಚೇರಿಯನ್ನು ವಿಚಾರಿಸುತ್ತಾರೆ,ಟಿ.ವಿ ಚಾನೆಲ್ಲಿನ ವೀಕ್ಷಕರ ಸಂಖ್ಯೆ ಇಳಿಯುತ್ತದೆ...!. ಅದೇ ರೀತಿ ಚಲನಚಿತ್ರ ನಟ-ನಟಿಯರ ವಿವಾಹವೂ ಕೂಡಾ..!.ಅದು ದೊಡ್ಡ ಸುದ್ದಿಯಾಗಲೇ ಬೇಕು..!. ಇಂತಹ ಸಂದರ್ಭದಲ್ಲಿ ದೇಶದ ಹೊಟ್ಟೆ ಹೊರೆಯುವ ರೈತನ ಸಮಸ್ಯೆಗಳು ಯಾರಿಗೂ ಬೇಡವಾಗಿದೆ.ಹೀಗಾದರೆ ದೇಶದಲ್ಲಿ ಕೃಷಿ ಉಳಿದೀತೇ? ಮುಂದೆ ರೈತರದ್ದೇ ಆದ ಹಬ್ಬಗಳು ಕಾಣಸಿಕ್ಕಾವೇ? ಹೀಗಾಗಿ ಮುಂದೆ ನಗರದವರು ಹೊಟ್ಟೆ ಹೊರೆಯಲು ಅಕ್ಕಿಗೆ 50 ರೂ ನೀಡಿದರೂ ಅಚ್ಚರಿಯಿಲ್ಲ.

12 ಏಪ್ರಿಲ್ 2008

ಒಂದು "ಬದುಕಿ"ನ ಕತೆ....



ಆತನಿಗೆ ಕನಸುಗಳಿದ್ದಿದ್ದರೆ ಅದೆಲ್ಲವೂ ನುಚ್ಚು ನೂರು.... ಆತನಿಗೂ ಅದರ ಅರಿವಿದ್ದಿರಲಿಕ್ಕಿಲ್ಲ.... ಆತನ ಬದುಕು ದುರಂತ ಅಂತ್ಯ ಕಂಡು ಇಂದಿಗೆ ಸರಿಯಾಗಿ ಒಂದು ವಾರ ಸಂದಿದೆ .ಕಾರಣ ನೋಡಿದರೆ ಅಷ್ಟೊಂದು ಕಾಣುತ್ತಿಲ್ಲ.ಆದರೂ ಒಂದು ಬದುಕು ಅಂತ್ಯ ಕಂಡಿದೆ.ಹಾಗೆ ಸೂಕ್ಷ್ಮವಾಗಿ ವಿವಿಧ ಆಯಾಮಗಳ ಮೂಲಕ ನೋಡಿದರೆ ಹಲವು ವಿಚಾರಗಳಿರಬಹುದು.

ಮೊನ್ನೆ ಕಾಡಿನ ಮಧ್ಯೆ ರುಂಡವಿಲ್ಲದ ದೇಹವೊಂದು ಸಿಕ್ಕಿತು.ನಂತರ ಅದರ ಬೆನ್ನ ಹಿಂದೆ ಬಿದ್ದ ಪೊಲೀಸರಿಗೆ ಕೊಲೆಯ ಪ್ರಕರಣ ಕಂಡಿತು.ಆರೋಪಿಗಳನ್ನು ಬಂಧಿಸಿದರು.ಇಷ್ಟಕ್ಕೂ ಇದೊಂದು ಯಾಕೆ ಸುದ್ದಿ ಅಂತೀರಾ?.ಮತ್ತೇನಲ್ಲ ಕೊಲ್ಲಿಸಿದ್ದು "ಸ್ವಂತ" ಪತ್ನಿಯೇ..!!.ಹಾಗಾಗಿ ಈ ಸುದ್ದಿ ಶಾಂತ - ನೆಮ್ಮದಿಯ ಊರಿನಲ್ಲಿ ಕ್ರೂರತೆಯ ಲವಲೇಶವೂ ಇಲ್ಲದ ಊರಿನಲ್ಲಿ ಇದು ದೊಡ್ಡ ಸುದ್ದಿಯಾಯಿತು.ಇಂದದ್ದೊಂದು ಕಲ್ಪನೆಯೇ ಬರಲು ಸಾಧ್ಯವಿಲ್ಲದ ಮನಸ್ಸುಗಳ ಪರಿಸ್ಥಿತಿ ಹೇಗಾಗಬೇಡ..?. ಪಾಪ ಆ ಮುಗ್ದ ಜನರಿಗೇನು ಗೊತ್ತು ಇಡೀ ಜಗತ್ತಿನ ಕತೆ.?.

ಅನೇಕ ಕಡೆಗಳಲ್ಲಿ ನಡೆಯುತ್ತದೆ...ಪತಿಯಿಂದಲೇ ಪತ್ನಿಯ ಕೊಲೆ ಅಥವಾ ಪತ್ನಿಯಿಂದಲೇ ಪತಿಯ ಕೊಲೆ.ಅಂತಹ ಘಟನೆಗಳನ್ನೆಲ್ಲಾ ಒಮ್ಮೆ ನೋಡಿದರೆ ಕಾರಣವೆಲ್ಲಾ ಅತ್ಯಂತ ಕ್ಷುಲ್ಲಕ.ಇಲ್ಲಿನ ಪ್ರಕರಣವೂ ಹಾಗೆ.ಗಂಡ -ಹೆಂಡತಿ ನಡುವಿನ ಜಗಳ.

ಇಲ್ಲಿಯೂ ತನಿಖೆಯಿಂದ ಬಂದ ಸಂಗತಿಯೆಂದರೆ ಗಂಡ-ಹೆಂಡತಿ ಮಧ್ಯೆ ಜಗಳ ನಡೆಯುತ್ತಿತ್ತಂತೆ ಹಾಗಾಗಿ ಪತ್ನಿಯಾದವಳು ತನ್ನ ಸಂಬಂಧಿಕರಿಗೆ ದೂರು ನೀಡಿದಳು.ಪತ್ನಿ ಕಡೆಯವರು ಬಂದು ವಿಚಾರಿಸಿದಾಗ ಮಾತು ಬೆಳೆಯಿತು.ಅಲ್ಲಿಗೆ ಒಂದು ಬದುಕು ಅಂತ್ಯ ಕಂಡಿತು.ಹೀಗಾಗಿ ಗಂಡ - ಹೆಂಡತಿಯರ ಸಾಮಾನ್ಯ ಜಗಳ ಒಂದು ಬದುಕನ್ನು ಕಸಿದುಕೊಳ್ಳುವ ಮೂಲಕ ಕೊನೆಗೊಂಡಿತು.ಹೀಗೆ ಅಂತ್ಯಗೊಂಡ ಮೇಲೆಯೇ ಅವರಿಗೆ ಭಯ ಶುರುವಾಯಿತು.ನಂತರ ಮತ್ತೂ ಭೀಭತ್ಸಕ್ಕೆ ಕೈ ಹಾಕಿದರು.ದೇಹವನ್ನು ರುಂಡದಿಂದ ಬೇರ್ಪಡಿಸಿ ಕಾಡಿನಲ್ಲಿ ತಂದು ಹಾಕಿದರೆ ರುಂಡವನ್ನು 10 ಕಿಮೀ ದೂರದ ಇನ್ನೊಂದು ಕಾಡಿನಲ್ಲಿ ಬೀಸಾಡಿದ್ದರು. ದೇಹದಲ್ಲಿ ದೊರೆತ ಒಂದು ವಿಳಾಸದಿಂದ ಕೊಲೆ ಪ್ರಕರಣ ಹೊರಬಂತು.ಆರೋಪಿಗಳ ಬಂಧನವೂ ಆಯಿತು.ಮುಂದೆ ನಮಗೆಲ್ಲಾ ಗೊತ್ತೇ ಇದೆ ಅವರಿಗೆ ಜಾಮೀನು ಸಿಗಲಿದೆ.ಹೊರಬಂದು ರಾಜಾರೋಷವಾಗಿ ಸುತ್ತಾಡುತ್ತಾರೆ.

ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ಕೇವಲ ಗಂಡ - ಹೆಂಡತಿ ನಡುವೆ ನಡೆಯುವ ಸಾಮಾನ್ಯವಾದ ಜಗಳವು ಒಂದು ಕೊಲೆಯಲ್ಲಿ ಅಂತ್ಯವಾಯಿತಲ್ಲಾ?ಅದು ಅತ್ಯಂತ ಭಯಾನಕ. ಈ ದೇಶ "ಪತಿವೃತೆ"ಯ ಕತೆಯನ್ನು ಹೇಳುತ್ತದೆ.ಶ್ರೀ ರಾಮನ "ಆದರ್ಶ"ವನ್ನು ಹೇಳುತ್ತದೆ. ಆದರೆ ಇವೆಲ್ಲಾ ಇದ್ದರೂ ನಮ್ಮಲ್ಲಿ ನಡೆಯುತ್ತಿರುವ ಸಂಗತಿಯನ್ನು ನೋಡಿದರೆ ನಮ್ಮೊಳಗಿನ "ಭಯಾನಕ" ಮನಸ್ಸುಗಳ ರೂಪವು ಗೋಚರವಾಗುತ್ತದೆ.ಇವೆಲ್ಲವೂ ರಿಪೇರಿಯಾಗಬಹುದಾ?.

ಮೊನ್ನೆ ಮೊನ್ನೆ ನಡೆದ ಒಂದು ಕಾರ್ಯಕ್ರಮದಲ್ಲಿ ಕುಟುಂಬದ ಸಂಬಂಧದ ಬಗ್ಗೆ ಸಂವಾದ ಏರ್ಪಡಿಸಲಾಗಿತ್ತು.ಹೆಚ್ಚು ಜನ ಭಾಗವಹಿಸಿರಲಿಲ್ಲ.ಅಲ್ಲಿ ಒಂದು ಪ್ರಶ್ನೆ ಕೇಳಲಾಯಿತು.ಕುಟುಂಬದಲ್ಲಿ ಗಂಡ- ಹೆಂಡತಿ ನಡುವಿನ ಜಗಳಕ್ಕೆ ವಿಶೇಷವಾದ ಅರ್ಥ ಬೇಕಾ?.ಅಲ್ಲಿದ್ದವರೆಲ್ಲಾ ಒಂದೊಂದು ಉತ್ತರ ನೀಡಿದ್ದರು. ಕೊನೆಗೆ ಇಂತಹ ವಿಚಾರಗಳೆಲ್ಲಾ ಸಾಮಾನ್ಯ.ಅದು ಇದ್ದರೇನೇ ಕುಟುಂಬ ಖುಶಿಯಾಗಿರುತ್ತೆ ಅಂತ ಮಹಿಳೆಯೊಬ್ಬರು ಹೇಳಿದ್ದು ಈಗ ಮತ್ತೊಮ್ಮೆ ನೆನಪಿಸಿತು. ಗಮನಿಸಿ ನೋಡಿ ಮನೆಯಲ್ಲಿ ಪ್ರತಿಯೊಬ್ಬ ಗಂಡಸು ತನ್ನ ಕಚೇರಿಗೆ ಹೋಗುವ ವೇಳೆ "ಎಲ್ಲಿ ನನ್ನ ಶೂ.." 'ಎಲ್ಲಿ ನನ್ನ ಫೈಲ್".... ಅದು ಎಲ್ಲಿ.... ಇದು ಎಲ್ಲಿ.... ಅಂತ ತನ್ನ ಹೆಂಡತಿಯನ್ನು ಬೈದು ... ನೀನು ಹಾಗೇ.... ಬೇಜವಾಬ್ದಾರಿ ಅಂತೆಲ್ಲಾ ಬೈದು ಹೋಗುತ್ತಾನೆ. ಸಂಜೆ ಬಂದು ಮತ್ತೆ ಹೆಂದತಿಯಲ್ಲಿ ಆ ವಿಚಾರಗಳನ್ನು ನೆನಪಿಸದೇ ಕಾಫಿಯನ್ನು ಜೊತೆಯಾಗೇ ಕುಡಿಯುತ್ತಾನೆ. ಒಂದು ವೇಳೆ ಅಲ್ಲಿ ಇಬ್ಬರೂ ಜಗಳಕ್ಕಿಳಿದರೆ ಸಂಜೆಯೂ ಅದೇ ಚಾಳಿ ಮುಂದುವರಿಸಿದರೆ ಕುಟುಂಬ ಹೇಗಿದ್ದೀತು..?. ಹಾಗಾಗಿ ಕುಟುಂಬದಲ್ಲಿ "ಜಗಳ" ಸಾಮಾನ್ಯ. ಆದರೆ ಅದು ತಾರಕಕ್ಕೇರಿದರೆ ಮಾತ್ರಾ ಅಪಾಯ. ಹಾಗಾದರೆ ಅದು ಕೊಲೆಯಲ್ಲೋ ಅಥವಾ ಇನ್ನಾವುದೋ ವಿಚಾರದಲ್ಲಿ ಅಂತ್ಯವಾಗುತ್ತದೆ.ಒಂದು ಸುಂದರ ಬದುಕು ದುರಂತ ಅಂತ್ಯಕ್ಕೂ ಕಾರಣವಾಗಬಹುದು. ಹಾಗಾಗಿ ನಮ್ಮ ಬದುಕನ್ನು ಹೇಗೆ ಸುಂದರಗೊಳಿಸಬಹುದು ಅಂತ ಚಿ0ತಿಸಬೇಕೇ ಹೊರತು ಕತ್ತಲೆಗೆ ದೂಡದಿರುವುದು ಒಳಿತಲ್ಲವೇ?

ಕೊನೆಯ ಮಾತು ;ಬದುಕಿದ್ದಷ್ಟು ಸಮಯ ಖುಷಿಯಲ್ಲಿ, ಪರರಿಗೆ ಕಿರುಕುಳ ನೀಡದೇ ,ಇನ್ನೊಂದು ಬದುಕಿಗೆ ನೋವು ಮಾಡದೇ ಬದುಕಿದರೆ ಅದಕ್ಕಿಂತ ಕೋಟಿ"ಪುಣ್ಯ" ಇನ್ನೊಂದಿರದು......

08 ಏಪ್ರಿಲ್ 2008

ಎಟಿಎಂ ಮತ್ತು "ಖುರ್ಚಿ"...!



ಕುಕ್ಕೆ ಸುಬ್ರಹ್ಮಣ್ಯದಲ್ಲಿ ATM ಸೌಲಭ್ಯ ಶುರುವಾಗಿದೆ.

ಇದು ಇಂದು ಅವಶ್ಯಕ ಸೇವೆ ಅಂತ ಹೇಳಿದರೆ ತಪ್ಪಲ್ಲ.ಕುಕ್ಕೆಗೆ ಸಾವಿರಾರು ಅಲ್ಲ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ.ಆದರೆ ದೂರದಿಂದ ಬರುವ ಭಕ್ತರಲ್ಲಿ ಖಾತೆಯಲ್ಲಿ ಎಷ್ಟು ಹಣವಿದ್ದರೂ ಇಲ್ಲಿ ತುರ್ತಾಗಿ ಹಣ ಬೇಕಾದರೆ ವ್ಯವಸ್ಥೆ ಇದ್ದಿರಲಿಲ್ಲ.ಒಮ್ಮೆ ಈ ಬಗ್ಗೆ ಬ್ಯಾಂಕ್ ಪ್ರಬಂಧಕರೊಬ್ಬರಲ್ಲಿ ಮಾತನಾಡಿದಾಗ "ಅಲ್ಲಿ ಅಸಲಾಗದು" ಅಂತ ಹೇಳಿದ್ದರು.ಆದರೆ ಇಂದು Corporation ಬ್ಯಾಂಕಿನವರು ಸೌಲಭ್ಯವನ್ನು ಉದ್ಘಾಟಿಸಿಯೇಬಿಟ್ಟರು.ಇನ್ನು ಭಕ್ತರಿಗೆ ತೊಂದರೆಯಿಲ್ಲ.ಇದಕ್ಕೆ ಉದಾಹರಣೆ ಎಂಬಂತೆ ಇನ್ನೇನು ATM ಉದ್ಘಾಟನೆಗೊಂಡಿತ್ತು ಚೆನ್ನೈ ಮೂಲದ ವ್ಯಕ್ತಿಯೊಬ್ಬರಿಗೆ ಹಣದ ಅಗತ್ಯ ಬಂದು ಕೂಡಲೇ ಎಟಿಎಂಗೆ ಬಂದು ಹಣ ಡ್ರಾ ಮಾಡಿಕೊಂಡರು. ಈ ಮೊದಲು 30-40 ಕಿಮೀ ಹೋಗಬೇಕಿತ್ತು.

ಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯ ಸಂಪುಟ ನರಸಿಂಹ ಸ್ವಾಮಿ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಭಾಗವಹಿಸಿದ್ದರು.ಬ್ಯಾಂಕಿನ ಅಧಿಕಾರಿಗಳು ಸಿಬ್ಬಂದಿಗಳು ಇದ್ದರು.

ಇನ್ನೊಂದು ವಿಷ್ಯ "ಇದು ಖುರ್ಚಿ ಮಹಿಮೆ"........

ಯಾವಾಗಲೂ ಖುರ್ಚಿಯ ವಿಷ್ಯ ಬಂದಾಗಲೆಲ್ಲಾ ರಾಜಕೀಯ ನೆನಪಾಗುತ್ತದೆ. ಆದರೆ ಇದು ರಾಜಕೀಯದ ಖುರ್ಚಿ ಅಲ್ಲ. ಉದ್ಘಾಟನಾ ಕಾರ್ಯಕ್ರಮದಲ್ಲಿನ ಖುರ್ಚಿ ಮಹಿಮೆ.ಸ್ವಾಮೀಜಿಯವರು ATMನ್ನು ಉದ್ಘಾಟಿಸಿ ಆಶೀರ್ವಚನಕ್ಕೆ ಆಗಮಿಸಿ ಖುರ್ಚಿಯಲ್ಲಿ ಆಸೀನರಾದರು.ತಕ್ಷಣ ಖುರ್ಚಿಯ ಆಸನ ಬಿತ್ತು. ನೋಡಿದರೆ ಸ್ವಾಮೀಜಿ ಬಿದ್ದು ಮೇಲೆದ್ದರು.ನಂತರ ಖುರ್ಚಿ ಸರಿಪಡಿಸಲಾಯಿತು.ಮತ್ತೆ ಕಾರಣ ನೋಡಿದರೆ, ಅದು ಬೇರೆ ಬೇರೆ ಸೇರಿಸುವ ಖುರ್ಚಿಯಾಗಿತ್ತು.ಹಾಗಾಗಿ ಆ ಖುರ್ಚಿಯನ್ನು ಸೇರಿಸಿದ್ದು ಸರಿಯಾಗಿರಲಿಲ್ಲ. ಸಂಘಟಕರು ಅದನ್ನು ಸರಿಯಾಗಿ ನೋಡಿರಲೂ ಇಲ್ಲ. ಆದರೆ ಸ್ವಾಮೀಜಿ ಪರವಾಗಿಲ್ಲ... ಪರವಾಗಿಲ್ಲ ಅಂದರು ಬಿಡಿ..! ನಂತರ ಆಶೀರ್ವಚನದಲ್ಲೂ ಶುಭ ಹಾರೈಸಿದರು.

ಆದರೆ ಮುಂದೆ ಒಂದು ಎಚ್ಚರಿಕೆ !.ಯಾವಾಗಲಾದರೂ ನೀವು ಯಾರೇ ಸ್ವಾಮೀಜಿಗಳನ್ನು ಬಹಿರಂಗ ಸಭೆಗೆ ಕರೆದರೆ ಮೊದಲು ಖುರ್ಚಿ ಸರಿಯಾಗಿದೆಯೇ ಗಮನಿಸಿ... ಯಾರಾದ್ರೂ ಸಿಟ್ಟಿನ ಸ್ವಾಮೀಜಿಗಳು ಕಾರ್ಯಕ್ರಮಕ್ಕೆ ಬಂದ್ರೆ ನಿಮಗೆ ಬಹಿರಂಗವಾಗಿ "ಸನ್ಮಾನ" ಗ್ಯಾರಂಟಿ....!!!!

ಇದು ಖುರ್ಚಿ ಪುರಾಣ.....



ಇನ್ನು ಖುರ್ಚಿ ಪುರಾಣ ನೆನಪಾಗದೇ ಇದ್ದೀತೇ..?

ಖುರ್ಚಿ ಯಾರಿಗೆ ಬೇಡಹೇಳಿ ? ರಾಜಕಾರಣಿಗಳನ್ನು ಬಿಡಿ.

ನಮ್ಮನ್ನೇ ನೋಡಿದರೆ ಯಾವುದೇ ಕಾರ್ಯಕ್ರಮಕ್ಕೆ ಹೋಗಲಿ ಖುರ್ಚಿ ಇಲ್ಲದೇ ಕುಳಿತಿಕೊಳ್ಳಲು ಸಾಧ್ಯವೇ?.ಅದನ್ನು ಕಲ್ಪಿಸಿಕೊಳ್ಳಲೂ ಸಾಧ್ಯನಾ? ಕೆಲವು ಕಡೆ ಈ ಖುರ್ಚಿಗಾಗಿಯೆ ಹೊಂಚು ಹಾಕುವವರೂ ಇರುತ್ತಾರೆ.ಈಗೀಗ ಮನುಷ್ಯರು ಬಿಡಿ "ಅತಿಮಾನುಷರು" ,ತಮ್ಮ ಜೀವಿತದ "ಕರ್ಮ" ಫಲವನ್ನು ಮುಗಿಸಿದವರಿಗೂ ಅದರ ಮೇಲೆ ಒಂದು ಕಣ್ಣಿರುತ್ತದೆ.ತಮ್ಮದೇ ಪ್ರಾಬಲ್ಯವನ್ನು ಮೆರೆಯಲು ಪ್ರಯತ್ನಿಸುತ್ತಾರೆ.ಇನ್ನು ಹೇಗೂ ಈಗ ಚುನಾವಣಾ ಸಮಯವಲ್ಲ. ನನಗೆ ಅರ್ಥವಾಗದ ಒಂದು ಸಂಗತಿಯೆಂದರೆ ಈ ಮಠ-ಮಂದಿರಗಳ ಪ್ರಮುಖರು ಏಕೆ "ರಾಜಕೀಯ"ದ ಖುರ್ಚಿಯ ಮೇಲೆ ಕಣ್ಣಿಟ್ಟಿರುತ್ತಾರೆ.ಅಲ್ಲಿಗೆ ಬರುವವರು ತಮ್ಮರಾಗಬೇಕೆಂಬ ಮಹದಾಸೆಯನ್ನು "ಕಾವಿಗಳು-ವಿರಾಗಿಗಳು" ಇಟ್ಟುಕೊಳ್ಳುತ್ತಾರೆ? ಮಾತ್ರವಲ್ಲ ಅವರು ಧರ್ಮವನ್ನು ರಕ್ಷಿಸಬೇಕಾದವರಲ್ಲವೇ? ಅದಕ್ಕೆ ರಾಜಕೀಯದ ಅಗತ್ಯವಿದೆಯೇ?.

ಇನ್ನು ಈ ಖುರ್ಚಿಯು ಹಲವೆಡೆ ಜನರನ್ನು "ಲೆಕ್ಕ" ಹಾಕಲೂ ಕಾರಣವಾಗುತ್ತದೆ.

ಇನ್ನು ರಾಜಕೀಯದಲ್ಲಿ ಖುರ್ಚಿಯ ಸಂಗತಿಯನ್ನು ಬಿಡಿ.ಅದರಲ್ಲಿ ಬಗ್ಗೆ ವಿಸ್ತಾರವಾದ "ಕಿತ್ತಾಟ-ಅಲುಗಾಟ-ಕಂದಕ"ಗಳು ಕಂಡುಬರುತ್ತವೆ. ಮಾತ್ರವಲ್ಲ ಜಾತಿಯ ಖುರ್ಚಿಗಳೂ ಅಲ್ಲಿ ಪ್ರಮುಖವೆನಿಸಿಬಿಡುತ್ತವೆ.ಮೊನ್ನೆ ಮೊನ್ನೆ ನೋಡಿ ನಮ್ಮ "ದೊಡ್ಡ" ಖುರ್ಚಿ [ಮುಖ್ಯಮಂತ್ರಿ] ಹೇಗೆಲ್ಲಾ ಅಲುಗಾಡಿತು. ಸಂಗೀತ ಖುರ್ಚಿಯಂತೆ ಅವರಿವರಿಗೆ ಸಿಕ್ಕಿತು.ಕೆಲವರು ಒಂದು ವಾರಕ್ಕಾದರೂ ಹೇಗೆ ತಮ್ಮದಾಗಿಸಿಕೊಂಡರು.!?.ಅದಕ್ಕಾಗಿ ಏನೆಲ್ಲಾ "ನಾಟಕ"ಗಳು ನಡೆಯಿತು?. ಮತ್ತೆ ಹೇಗೆ ವಿರಸವಾಯಿತು.? ಯಾತ್ರೆಗಳು ನಡೆದವು?. ಈಗ ಮತ್ತೆ ಅದೇ ಖುರ್ಚಿಗಾಗಿ "ಹೋರಾಟ" ಶುರುವಾಗಿದೆ.

ಯಾರ ಪಾಲಾಗುತ್ತೋ ಈಗಲೇ ಹೇಳೋಕಾಗಲ್ಲ. ಅದಕ್ಕೆ ಈಗಲೇ ಆರಂಭವಾಗಿದೆ ಪೈಪೋಟಿ....!.ಹಾಗಾಗಿ ಖುರ್ಚಿಗೆ ತಾತ್ಕಾಲಿಕವಾಗಿ ಯಾವಾಗಲೂ ಒಂದು ಸ್ಥಾನ "ಮಾನ" ಇದ್ದೇ ಇದೆ. ಇವೆಲ್ಲಕ್ಕಿಂತ ಮುಖ್ಯವಾಗಿ ಆ ಖುರ್ಚಿಗಾಗಿ ಬಿಡುವ ಭಾಷಣವು " ಮಂಗಳೂರು - ಬೆಂಗಳೂರು" ಪಟ್ಟಿಯಲ್ಲಿ ಸಂಚರಿಸುವುದಕ್ಕಿಂತಲೂ ವೇಗವಾಗಿರುತ್ತದೆ.ಹಾಗೆ ಖುರ್ಚಿಗಾಗಿ "ವೇಗ"ದಿಂದ ಸಾಗುವ ಮಂದಿ ಅಚಾನಕ್ ಖುರ್ಚಿ ಸಿಗದೆ ಸೋತು ಬಿಡುತ್ತಾರೆ.ಹಾಗಾಗಿ ಯಾವತ್ತೂ "ಖುರ್ಚಿ"ಗಳು ಶಾಶ್ವತವಲ್ಲ...... ಅವುಗಳನ್ನು ನಂಬಿ ಧೈರ್ಯವಾಗಿ ಕುಳಿತರೆ ಒಂದಿಲ್ಲೊಂದು ದಿನ ಬೀಳುವುದುದು ಗ್ಯಾರಂಟಿ.....!!!!

03 ಏಪ್ರಿಲ್ 2008

ದೇವರ "ಧ್ಯಾನ"ದಲ್ಲಿ.....



"ದೇವರು"......!!. ಇದು ಕಾಣದ ಸತ್ಯ...!?

ಈ ಜಗತ್ತಿನ ಪ್ರತಿಯೊಬ್ಬ ಕೂಡಾ ಮಾನಸಿಕ ನೆಮ್ಮದಿಗಾಗಿ ಒಂದಿಲ್ಲೊಂದು ಕೆಲಸವನ್ನು ಮಾಡುತ್ತಾನೆ. ಅದು ಭಕ್ತಿಯ ರೂಪದಲ್ಲಿ , ಕಾಯಕದ ರೂಪದಲ್ಲಿ , ಪ್ರೀತಿಯ ರೂಪದಲ್ಲಿ ಹೀಗೆ ಒಂದಿಲ್ಲೊಂದು ರೂಪದಲ್ಲಿ ಹೊರಹೊಮ್ಮುತ್ತದೆ.

ಸಂಕಟ ಬಂದಾಗ,ಮಾನಸಿಕವಾಗಿ ಬಳಲಿದಾಗ ಯಾವಾಗಲೂ ನೆನಪಾಗುವುದು "ದೇವರು" ಎಂಬ ಕಣ್ಣಿಗೆ ಕಾಣದ ಸತ್ಯ [ಮಾಯೆ] ಮತ್ತು ಆತನ "ಗುಡಿ". ಹೀಗಾಗಿ ಅನೇಕ ಮಂದಿ ನೆಮ್ಮದಿಯ ಅರಸುತ್ತಾ ದೇವಾಲಯಗಳಿಗೆ ಸಾಗುತ್ತಾರೆ ಅಲ್ಲಿ ವಿವಿಧ ಸೇವೆಗಳನ್ನು ಮಾಡಿಸುತ್ತಾರೆ. ಅದಕ್ಕೆ ತಕ್ಕಂತೆ ದೇವಾಲಯಗಳಲ್ಲಿ ಜನವೂ ಇರುತ್ತಾರೆ. ಅವರ "ಸೇವೆ"ಗಳನ್ನೂ ಮಾಡುತ್ತಾರೆ. ಕೊನೆಗೆ ಮಾನಸಿಕ ನೆಮ್ಮದಿಗಾಗಿ ಬಂದ ವ್ಯಕ್ತಿ ಮತ್ತೆ ಅಲ್ಲಿಂದ ಹಿಂದಿರುಗುವಾಗ ಮಾನಸಿಕ "ಭಾರ"ವನ್ನು ಹೊತ್ತುಕೊಂಡೇ ಹೋಗುತ್ತಾನೆ. ಇದ್ಯಾಕೆ ಹೀಗೆ? ಉತ್ತರ ಹುಡುಕಹೊರಟರೆ ಅದು ಕೈಗೆ ನಿಲುಕದು ತುಂಬಾ ದೂರದಲ್ಲಿದೆ.

ಅನೇಕ ಬಾರಿ ನನಗೆ ಅನ್ನಿಸಿದ್ದಿದೆ. ದೇವರು ನಿಜಕ್ಕೂ ಇದ್ದಾನಾ?.

ಈ ಸಮಾಜದಲ್ಲಿ ಎಷ್ಟು ಅನಾಚಾರ , ಮೋಸ, ವಂಚನೆ, ಕೊಲೆ, ಸುಲಿಗೆ,...... ಹೀಗೆ ನಡೆಯುತ್ತಲೇ ಇರುತ್ತದೆ. ಅನ್ಯಾಯ ಮಾಡಿದ ವ್ಯಕ್ತಿ ಮತ್ತೆ ಮರುದಿನ ರಾಜಾರೋಷವಾಗಿ ಸುತ್ತಾಡುತ್ತಾನೆ. ಇನ್ನೊಂದೆಡೆ ಯಾವುದೇ ಅನ್ಯಾಯವನ್ನು ಮಾಡದ ವ್ಯಕ್ತಿ ಕಷ್ಟದ ಬದುಕನ್ನು ಸಾಗಿಸುತ್ತಾನೆ. ದೇವರು ಇದ್ದಿದ್ದರೆ ಆ ಅನ್ಯಾಯಗಳಿಗೆ ಯಾಕೆ ಶಿಕ್ಷೆ ನೀಡುತ್ತಿಲ್ಲ?. ಮತ್ತೆ ನನ್ನೊಳಗೆ ಅಂದುಕೊಂಡೆ ನಾನು ಯಾವುದು ಅನ್ಯಾಯವೆಂದು ತಿಳಿದುಕೊಂಡಿದ್ದೇನೆ ಅದು ಇಂದು ಅನ್ಯಾಯವಲ್ಲವೇನೋ?. ಹಾಗಾಗಿ ಭಗವಂತ ಅವರಿಗೆಲ್ಲ ಸುಖವನ್ನೇ ಕರುಣಿಸಿದ್ದಾನೆ ಎಂದು ನನ್ನೊಳಗೇ ಮತ್ತೆ ಮತ್ತೆ ಸಮಾಧಾನಿಸಿಕೊಳ್ಳುತ್ತೇನೆ.

ಹಾಗಂತ ನನಗೆ ದೇವರಿಲ್ಲ ಅಂತ ಸಂಪೂರ್ಣವಾಗಿ ಹೇಳಲು ಧೈರ್ಯವಿಲ್ಲ.ದ್ವಂದದಲ್ಲಿದ್ದೇನೆ.!! ಅದೂ ಅಲ್ಲದೆ ನಮ್ಮದು "ದೇವರನ್ನು" ಆರಾಧಿಸುವ ಕುಟುಂಬ. ನನ್ನ ಮಿತ್ರರೊದಿಗೆ ಯಾವಾಗಲೂ ನಾನು ಅಂದುಕೊಳ್ಳುತ್ತೇನೆ "ಎಲ್ಲಾದರೂ ದೇವರಿದ್ದರೆ.."!?. ಈ ಪ್ರಕೃತಿಯಲ್ಲಿ ಮನುಷ್ಯ ಏನೇ ವಿಜ್ಞಾನದ ತಂತ್ರ ಮಾಡಿದರೂ ಅದೊಂದು ಶಕ್ತಿಯ ಪರಿಣಾಮವಾಗಿ ಎಲ್ಲಾ ವಿಚಾರಗಳು ತಲೆಕೆಳಗಾಗುತ್ತವೆ. ಹಾಗಾಗಿ ಒಂದು ಶಕ್ತಿಯಿದೆ ಅದು ಮಾತ್ರಾ ಕಣ್ಣಿಗೆ ಕಾಣದ್ದು , ವಿವರಿಸಲಾಗದ್ದು ಅಂತ ನನಗೆ ಅನಿಸಿತು.ಹಾಗಾಗಿ ಮತ್ತೆ ದೇವರ ಮೊರೆ ಹೋಗಬೇಕಾಗುತ್ತದೆ.

ನನಗನ್ನಿಸುವ ಇನ್ನೊಂದು ಸಂಗತಿಯೆಂದರೆ ದೇವಸ್ಥಾನಗಳಲ್ಲಿ , ಮನೆಗಳಲ್ಲಿ ಸಾವಿರ , ಲಕ್ಷ ರೂಪಾಯಿಗಳನ್ನು ವ್ಯಯಿಸಿ ಸೇವೆಗಳನ್ನು ಮಾಡಿಸಿಕೊಳ್ಳುವ ಅನೇಕ ಭಕ್ತರಿರುತ್ತಾರೆ.ಆದರೆ ದುರಂತವೆಂದರೆ ಅವರು ಅದೇ ಕಾರ್ಯದಿಂದ ಹೊರಬಂದು ಅಲ್ಲೇ ಸಾಗುವ ಬಡವ, ಆರ್ತನಿಗೆ ಒಂದು ಕಿಂಚಿತ್ ಕೂಡಾ ಸಹಾಯ ಮಾಡುವ ಮನಸ್ಸು ಬರುವುದಿಲ್ಲ , ಯಾರನ್ನು ಎಲ್ಲಿ ಹೇಗೆ ಸೋಲಿಸುವುದು, "ಗುಂಡಿ"ಗೆ ಇಳಿಸುವುದು ಎಂಬುದೇ ಚಿಂತೆಯಾಗಿರುತ್ತದೆ.ಅಲ್ಲಿ ಸೇವೆಯ ಹೆಸರಲ್ಲಿ ಎಷ್ಟು ಬೇಕಾದರೂ ಸುರಿಯಲು ತಯಾರಿರುವ ಜನ ಆರ್ತನಿಗೆ ಸಹಾಯ ಮಾಡುವಲ್ಲಿ ನೆಮ್ಮದಿಯನ್ನು ಕಾಣುವುದಿಲ್ಲ,ಒಂದು ಒಳ್ಳೆಯ ಚಿಂತನೆಯನ್ನು ತಲೆಯಲ್ಲಿ ಹಾಕಿಕೊಳ್ಳುವುದಿಲ್ಲ. ನಿಜವಾಗೂ ಭಗವಂತನಿಗೆ ಅಂತಹ ಸೇವೆಗಳಲ್ಲಿ,ಚಿಂತನೆಗಳಲ್ಲಿ ತೃಪ್ತಿಯೆನಿಸಿತೇನೋ.?.ಇದೇ ವೇಳೆ ಮನುಷ್ಯನು ತನ್ನ ಕಾರ್ಯದಲ್ಲಿ , ಸೇವೆಗಳಲ್ಲಿ ಭಗವಂತನನ್ನು ಕಾಣಬೇಕು ಅಂತ ಸ್ವಾಮೀಜಿಯೊಬ್ಬರು ಹೇಳಿದ್ದು ನನಗೆ ಅತ್ಯಂತ ಆಪ್ಯಾಯಮಾನವಾದ ವಿಚಾರವಾಗಿತ್ತು. ಅದನ್ನು ಇಲ್ಲಿ ಹಂಚಿಕೊಂಡಿದ್ದೇನೆ.

ಈ ಎಲ್ಲಾ ಸಂಗತಿಗಳು ನೆನಪಾದದ್ದು ಹೇಗೆಂದರೆ ಇತ್ತೀಚೆಗೆ ದೇವಸ್ಥಾನಗಳಲ್ಲಿ ಸೇವೆಯ ಹೆಸರಲ್ಲಿ ನಡೆಯುತ್ತಿರುವ ಸುಲಿಗೆ , ಭಕ್ತರನ್ನು ವಂಚಿಸುವ ಪರಿಯನ್ನು ನಾನು ಹತ್ತಿರದಿಂದ ಕಂಡು ದಂಗಾಗಿ ಹೋಗಿದ್ದೆ. ಆಗ ನನಗನ್ನಿಸಿದ್ದು ದೇವಸ್ಥಾನಗಳಲ್ಲೇ ಹೀಗೆ ನಡೆದರೆ ಹೇಗೆ?. ನಮ್ಮನ್ನು ಮಾನಸಿಕವಾಗಿ ಉದ್ದೀಪನಗೊಳಿಸುವ ಕೇಂದ್ರಗಳಲ್ಲವೇ?ಅದು.

ಈ ಸಂಗತಿಗಳು ಗೊತ್ತಿದ್ದರೂ ನಾನೂ ದೇವರಿಗೆ ಇನ್ನೊಮ್ಮೆ ನಮಸ್ಕರಿಸುತ್ತೇನೆ...... ಭಗವಂತ ಅವರಿಗೆಲ್ಲಾ ಒಳ್ಳೆಯದನ್ನೇ ಮಾಡು.......

01 ಏಪ್ರಿಲ್ 2008

ದೇವನಿಗೆ "ಕೋಟಿ" ನಮನ...



ಕುಕ್ಕೆಯ ದೇವನಿಗೆ "ಕೋಟಿ" ನಮನ...!.

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆದಾಯ ಈಗ 24 ಕೋಟಿ ರೂಪಾಯಿ ಮೀರುತ್ತಿದೆ.ರಾಜ್ಯದ ಅತ್ಯಂತ ಶ್ರೀಮಂತ ದೇವಾಲಯಗಳಲ್ಲಿ ಕುಕ್ಕೆಯು ಮೊದಲನೇ ಸಾಲಿನಲ್ಲಿ ಈಗ ನಿಲ್ಲಲು ಸಿದ್ಧವಾಗುತ್ತಿದೆ.ಅದಕ್ಕೆ ತಕ್ಕಂತೆ ಇಲ್ಲಿನ ವ್ಯವಸ್ಥೆಗಳು ಸಾಗುತ್ತಿವೆ.ಆದರೂ ಇನ್ನೂ ಹಲವಾರು ಲೋಪಗಳು ಕಂಡುಬರುತ್ತಿವೆ.ಅವೆಲ್ಲವೂ ಸಹಜವೇ ಎಂದು ಅಂದುಕೊಂಡರೂ ಪರವಾಗಿಲ್ಲ.

ಈಗ ದೇವಸ್ಥಾನದ ವಿಷಯಕ್ಕೆ ಬಂದರೆ ಇಲ್ಲಿನ ಆದಾಯ 2006-07 ರಲ್ಲಿ 19.76 ಕೋಟಿ ರೂಪಾಯಿಇದ್ದರೆ 2007-08 ರಲ್ಲಿ ಈಗಾಗಲೇ 23 ಕೋಟಿ ರೂಪಾಯಿ ದಾಟಿದೆ.ಮುಂದೆ ಈ ವರ್ಷದ ಅಂತ್ಯಕ್ಕೆ ಕಳೆದ ವರ್ಷದಿಂದ 4 ಕೋಟಿ ರೂ ಹೆಚ್ಚಿನ ಆದಾಯವನ್ನು ನಿರೀಕ್ಷಿಸಲಾಗಿದೆ.

ಇದಕ್ಕೆ ಸರಿಯಾಗಿ ಇಲ್ಲಿನ ಅಭಿವೃದ್ಧಿಗೆ 100 ಕೋಟಿ ರೂಪಾಯಿ ಗಳ ಮಾಸ್ಟರ್ ಪ್ಲಾನ್ ಯೋಜನೆಯನ್ನು ಇಲ್ಲಿನ ಆಡಳಿತವು ತಯಾರಿಸಿ ಸರಕಾರಕ್ಕೆ ಕಳುಹಿಸಿದೆ.ಅದಕ್ಕೆ ಈವರೆಗೆ ಅನುಮೋದನೆ ದೊರೆತಿಲ್ಲ. ಹಾಗೆಂದು ಸರಕಾರವು ಈ ರಾಜ್ಯದ ಕೆಲವೇ ಕೆಲವು ದೇವಸ್ಥಾನಗಳಿಗೆ ಮಾತ್ರಾ ಇಂತಹ ಯೋಜನೆಗಳಿಗೆ ಅನುಮೋದನೆ ನೀಡಿದ ಉದಾಹರಣೆ ಇದೆ.ಹಾಗಾಗಿ ಕುಕ್ಕೆಗೆ ಮಾಸ್ಟರ್ ಪ್ಲಾನ್ ಅನುಷ್ಠಾನಗೊಳಿಸುವ ಯೋಗವಿದೆಯೇ ಎಂದು ಕಾದು ನೋಡಬೇಕಾಗಿದೆ.

ಹಾಗೆ ನೋಡಿದರೆ ಇಲ್ಲಿನ ಆದಾಯಗಳೆಲ್ಲ ಈಗ ಸರಕಾರದ ಪಾಲಾಗುತ್ತಿಲ್ಲ.ಬಹುತೇಕ ಆದಾಯವನ್ನು ತಾಲೂಕಿನ ಬ್ಯಾಂಕುಗಳಲ್ಲಿ ಠೇವಣಿಯಾಗಿ ಇರಿಸಬೇಕಾಗಿದೆ. ಇಲ್ಲಿ ಸರಕಾರಕ್ಕೆ ತೆರಿಗೆಯನ್ನು ಮಾತ್ರಾ ಪಾವತಿಸುವ ವ್ಯವಸ್ಥೆಯಿದೆ. ದೇವಸ್ಥಾನವು ಇರಿಸಿದ ಠೇವಣಿಯನ್ನು ಸರಕಾರದ ಅನುಮತಿ ಪಡೆದು ದೇವಸ್ಥಾನದ ಆಸುಪಾಸಿನ ಅಭಿವೃದ್ಧಿಗೆ ಬಳಸಬಹುದಾಗಿದೆ.ಇನ್ನೊಂದು ಅಂಶವೆಂದರೆ ಕೇಂದ್ರ ಸರಕಾರದಿಂದ ಹಿಂದೂಗಳಿಗೂ [ಹಜ್ ಯಾತ್ರೆಗಿದ್ದಂತೆ] ಯಾತ್ರೆಗೆಂದು ಸಬ್ಸೀಡಿ ನೀಡುತ್ತದೆ.ಆಸಕ್ತರು ಸಂಬಂಧಿತ ಇಲಾಖೆಯನ್ನು ಸಂಪರ್ಕಿಸಿ ಈ ಸೌಲಭ್ಯವನ್ನು ಪಡೆಯಬಹುದಾಗಿದೆ. ಆದುದರಿಂದ ಈಗ ಹಿಂದೂಗಳಿಗೆ ಆತಂಕದ ಅಗತ್ಯವಿಲ್ಲ.ತಾವು ದೇವಸ್ಥಾನಗಳಿಗೆ ಹಾಕಿದ ಕಾಣಿಕೆಯು ಇಲ್ಲಿಯೆ ಸದ್ವಿನಿಯೋಗವಾಗಬಲ್ಲುದು ಎಂಬ ಧೈರ್ಯವಿದೆ.

ಧರ್ಮ ಧಾರ್ಮಿಕತೆ ಬಗ್ಗೆ....

ಯಾವುದೇ ಪ್ರಾರ್ಥನಾ ಮಂದಿರಗಳು ಆ ಧರ್ಮದ ಜನರಿಗೆ ಶ್ರದ್ಧೆಯ ಕೇಂದ್ರ. ಅರ್ಥಾತ್ ನೆಮ್ಮದಿ ನೀಡುವ ಕೇಂದ್ರಗಳು.ಅಲ್ಲಿ ಶುಭ್ರವಾದ ವಾತಾವರಣ ಇದ್ದರೆ ಮಾತ್ರಾ ಅದರಿಂದ ನೆಮ್ಮದಿ ಸಿಗಲು ಸಾಧ್ಯ. ಅಲ್ಲಿನ ತೀರ್ಮಾನವೇ ಅಂತಿಮವಾಗಲು ಸಾಧ್ಯ. ಆದರೆ ಇಂದು ಹಾಗಾಗುತ್ತಾ.? ದೇವಸ್ಥಾನದ ಒಳಗಡೆ ಕಚ್ಚಾಟ, ಮಸೀದಿಯೊಳಗೆ ಹೊಡೆದಾಟ...... ಹೀಗೆಯೇ ಸಮಾಜದ ವ್ಯವಸ್ಥೆಯು ಇಂದು ಹಾಳಾಗುತ್ತಾ ಸಾಗುತ್ತಿದೆ. ಇಂತಹ ಸಂದರ್ಭದಲ್ಲಿ ದೂರದ ಜನ ಭಾರತದ ಒಳಗೆ ಶಾಂತಿಯನ್ನು,ನೆಮ್ಮದಿಯನ್ನು ಕಾಣುತ್ತಾರೆ.ಇಲ್ಲಿನ ಆಚರಣೆಯಲ್ಲಿ ನೆಮ್ಮದಿ ತುಂಬುತ್ತವೆ.ಅದಕ್ಕೆ ಸಾಕ್ಷಿ ಎಂಬಂತೆ ವಿದೇಶೀ ಜೋಡಿಗಳಿಬ್ಬರು ಪ್ರೀತಿಸಿ ಭಾರತೀಯ ಸಂಪ್ರದಾಯದಂತೆ ವಿವಾಹವಾಗಲು ಹಿಂದೂಗಳಾಗಿ ಹಿಂದೂ ಸಂಪ್ರದಾಯದಂತೆ ಧರ್ಮಸ್ಥಳದಲ್ಲಿ ಇತ್ತೀಚೆಗೆ ಮದುವೆಯಾದರು. ಇಂತಹ ಘಟನೆಗಳು ಮತ್ತೆ ಭಾರತೀಯ ಸಂಪ್ರದಾಯಗಳನ್ನು "ನಮ್ಮವರಿಗೆ" ನೆನಪಿಸುತ್ತದೆ ಶಾಂತಿ, ನೆಮ್ಮದಿ ಇಲ್ಲೇ ಇದೆ ಅಂತ ಮತ್ತೆ ಪ್ರತಿಪಾದಿಸುತ್ತದೆ.ಅದು ಅರ್ಥವಾದರೆ "ಈ" ಹುಡುಕಾಟವೆಲ್ಲಾ ನಿಲ್ಲಬಹುದಲ್ವೇ....?

ಹಾಗಾಗಿ ನಮ್ಮ ಧರ್ಮ ,ಸಂಪ್ರದಾಯಗಳೊಂದಿಗೆ " ಮಾನವ ಧರ್ಮವೂ" ಬೆಳೆಯಲಿ, ಅದರಿಂದ ದೇವಾಲಗಳೂ ವಿಶಾಲವಾಗಲಿ , ಹೃದಯವು ಕೂಡಾ....





ಈ ಚಿತ್ರ ಟಿ.ವಿಯಿಂದ ಕದ್ದದ್ದು...