31 ಡಿಸೆಂಬರ್ 2011

ಅವಲೋಕನದ ಕಾಲ ಇದು. . .

ಒಂದಿಡೀ ವರ್ಷ ಕಳೆದುಹೋಯಿತು. ಹೆಜ್ಜೆ ಇಡುತ್ತಾ ಬಹುದೂರ ಸಾಗಿಯಾಗಿ ಈಗ ಇನ್ನೊಂದು ಕಾಲಘಟ್ಟದಲ್ಲಿದ್ದೇವೆ. ಈಗ ಕುಂತು ಹಿಂದೆ ತಿರುಗಿ ನೋಡಬೇಕು.ಅಂತ ಅನಿಸುತ್ತೆ.

 ನಮಗೆ ಪ್ರತೀ ದಿನವೂ ಕೂಡಾ ಹೊಸದೇ.ಹಾಗೆಂದು ಪ್ರತಿ ದಿನವೂ ಬದಲಾವಣೆ ಇದ್ದೇ ಇರುತ್ತೆ. ಅದು ನಮಗೆ ಮಾತ್ರವಲ್ಲ ಈ ಪ್ರಕೃತಿಗೂ ಅನ್ವಯಿಸುತ್ತೆ. ಹಾಗಾಗಿ ಹಿಂದಿನ ಅನುಭವಗಳು , ಮುಂದಿನ ದಾರಿಯನ್ನು ಸುಲಭಗೊಳಿಸಬಹುದು. ಹಾಗಾಗಿ ಅವಲೋಕನ ಬೇಕು. ಅದಕ್ಕೆಂದೇ ಒಂದು ದಿನ ಅಂತ ಬೇಡ. ಆದರೆ ಇದೊಂದು ಮುಖ್ಯ ಘಟ್ಟ. ಏಕೆಂದರೆ 11 ಕಳೆದ 12 ಬರುವ ಹೊಸಕಾಲ ಇದು. ಅದರ ಜೊತೆ ಜೊತೆಗೇ ನಮ್ಮ ಸಾಧನೆಯ ಹಿಂದೆ ಅದ್ಯಾರದ್ದೋ ಸಹಕಾರ , ಪ್ರೋತ್ಸಾಹವೂ ಇರಬಹುದು , ಅದನ್ನೆಲ್ಲಾ ಒಮ್ಮೆ ನೆನಯಲೇ ಬೇಕಲ್ಲ.

 ಹಾಗೆ ನೆನೆಯುತ್ತಾ ಹೋದಾಗ , ಕುಂತು ಯೋಚಿಸುತ್ತಾ ಕುಳಿತಾಗ ,2011 ನನಗೇನು ದೊಡ್ಡ ಸಾಧನೆಯ ವರ್ಷವಲ್ಲ. ಆದರೆ ಖುಷಿಯ ವರ್ಷ. ಏಕೆಂದರೆ ಒಬ್ಬ ಪಾಪು ನಮ್ಮ ಮನೆಗೆ ಪ್ರವೇಶಿಸಿದ್ದಾನೆ.ಇಂದಿಗೆ ಆತನಿಗೆ 9 ತಿಂಗಳು ಕಳೆದು 10 ತಿಂಗಳ ಪ್ರಾಯ. ಇನ್ನು ಸಹೋದರಿಯ ವಿವಾಹ ಇದೆಲ್ಲಾ ಪ್ರಮುಖವಾದ ಖುಷಿಯ ಸಂಗತಿಗಳು. ಆದರೆ ಅತ್ತ ಕಡೆ ನೋಡಿದರೆ , ಮಾರ್ಚ್ ನಂತರ ನಾನೀಗ ಸುದ್ದಿ ಮಾಡುತ್ತಿರುವ ಪತ್ರಿಕೆ ಹೊಸದಿಂಗಂತಕ್ಕೆ ಪುತ್ತೂರಿನಿಂದ ಅವಕಾಶ ಸಿಕ್ಕಿದ್ದು ಅನಿರೀಕ್ಷಿತ ಬೆಳವಣಿಗೆಯಲ್ಲಿ.ಒಂದು ಹಂತದಲ್ಲಿ ಮಾಧ್ಯಮ ರಂಗದಿಂದ ದೂರವಿದ್ದು ಕೃಷಿ ಕ್ಷೇತ್ರದಲ್ಲೇ ಮುಂದುವರಿಯುವ ಒಲವು ಹೊಂದಿದ್ದರೂ ಅನಿರಿಕ್ಷಿತವಾಗಿ ಮತ್ತೆ ಆ ಕಡೆ ಸೆಳೆಯಿತು.ಮತ್ತೆ ಮತ್ತೆ ಅಲ್ಲೇ ಅವಕಾಶಗಳು ಸಿಗುತ್ತಿದೆ. ಆದರೆ ಪ್ರತೀದಿನದ ಒಂದು ಸ್ವಲ್ಪ ಭಾಗ ಕೃಷಿಯ ಕಡೆಗೆ ಗಮನಹರಿಸದೇ ಇರುವುದಿಲ್ಲ. ಆದರೆ ನನ್ನ ಪ್ರತೀದಿನದ ಆಗುಹೋಗುಗಳಲ್ಲಿ ನನ್ನ ಮಿತ್ರರ ಸಹಕಾರ ಇದ್ದೇ ಇದೆ.ಏಕೆಂದರೆ ನನ್ನೊಬ್ಬನಿಂದಲೇ ಏನನ್ನೂ ಮಾಡಲು ಸಾಧ್ಯವಿಲ್ಲ. ಅಂತಹ ಅಹಂಕಾರವೂ ನನಗಿಲ್ಲ. ಆದರೆ ಆತ್ಮವಿಶ್ವಾಸ ಇದೆ , ಯಾವುದೇ ಕೆಲಸವನ್ನು ಮಾಡಬಲ್ಲೆನೆಂಬ ವಿಶ್ವಾಸ ಇದೆ ಆದರೆ ಅದಕ್ಕೆ ಮಿತ್ರರ ಸಹಕಾರ ಬೇಕೇ ಬೇಕು. ಇದೆಲ್ಲಾ ಹಿಂದಿನ ಕತೆಯಾಯಿತು. ಆದರೆ ಎಲ್ಲವನ್ನೂ ಬಹಿರಂಗವಾಗಿ ಹೇಳಿಕೊಳ್ಳಲು ಬರುವುದಿಲ್ಲ. ಕೆಲವನ್ನು ಮನದಲ್ಲೇ ನೆನೆಸಿಕೊಂಡು ಅವುಗಳಿಗೆ ಕೃತಜ್ಞತೆ , ತಪ್ಪುಗಳಾಗಿದ್ದರೆ ಮಂಥನ ನಡೆಸುತ್ತಲೇ ಇದ್ದೇನೆ.

 ಇವುಗಳನ್ನೆಲ್ಲಾ ನೆನಪಿಸಿಕೊಂಡು 2012 ಹೇಗಿರಬೇಕು ?, ಇಲ್ಲ ತುಂಬಾ ನಿರೀಕ್ಷೆಗಳಿಲ್ಲ , ಬದುಕನ್ನು ಬಂದ ಹಾಗೆ ಸ್ವೀಕರಿಸುವುದು , ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳುವುದು ಇದೆರಡು ಪ್ರಮುಖವಾಗಿದೆ. ಕಳೆದ ಒಂದೆರಡು ವರ್ಷಗಳಲ್ಲಿ ನನ್ನದೇ ಕೆಲವು ಸಿದ್ದಾಂತಗಳಿಗೆ ಗಂಟುಬಿದ್ದು ಕೊಂಚ ಹಿನ್ನಡೆಯಾಗಿದೆ.ಏಕೆಂದರೆ ನಂಬಿದ ಸಿದ್ದಾಂತಗಳು ಕೆಲವೊಮ್ಮೆ ನಮಗೇ ರಿವರ್ಸ್ ಹೊಡೆದಿದೆ.ಅವಕಾಶಗಳು ತಪ್ಪಿ ಹೋಗಿವೆ. ಹಾಗಾಗಿ ಈ ವರ್ಷ ಸಿಗುವ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು , ಸಿದ್ದಾಂತಗಳಿಗೆ ಗಂಟುಬೀಳದೆ. ಇನ್ನೊಂದು ಬಹುಮುಖ್ಯವಾದ್ದು ಈ ಬಾರಿ ಸೋಲನ್ನು ಒಪ್ಪಿಕೊಳ್ಳಬೇಕು. ಒಂದು ವೇಳೆ ಸೋಲು ಅಂತ ಕಂಡರೆ ಅದರ ಸಮರ್ಥನೆ ಮಾಡದೆ ಆ ಸೋಲನ್ನು ಒಪ್ಪಿಕೊಂಡು ಬಿಡುವುದು. ಏಕೆಂದರೆ ಸೋಲು ಅಂದರೆ ರಾಜಿಯಾಗುವುದು ಅಷ್ಟೇ, ಇದು ಬಹುಮುಖ್ಯ ಅಂತ ಅನಿಸಿದೆ.


17 ಡಿಸೆಂಬರ್ 2011

ಕಾನನದೊಳಗಿನ ಮೌನದ ನಡುವೆ ಕಲ್ಲಿನ ಸದ್ದು. .!

ಅದು ದೊಡ್ಡ ಕಾಡು.ಸುತ್ತಲೂ ಮೌನ ಆವರಿಸಿದೆ.ಹಕ್ಕಿಗಳ ಕಲರವ, ಜೀರುಂಡೆಗಳ ಸದ್ದು ,ನೀರಿನ ಜುಳು ಜುಳು ಬಿಟ್ಟರೆ ಬೇರಾವ ಸದ್ದೂ ಅಲ್ಲಿಲ್ಲ. ಇಂತಹ ಸುಂದರ ಕಾಡಿನ ನಡುವೆ ಈಗ ಕೇಳಿರುವುದು , ಕೇಳುತ್ತಿರುವುದು ಕಲ್ಲು ಒಡೆಯುವ ಸದ್ದು!.ನಿಜ ನಂಬಲೇ ಬೇಕು.ಅದು ಹರಳು ಕಲ್ಲು ದಂಧೆ. .!.ಬಿಸಲೆ ರಕಿತಾರಣ್ಯದ ಒಳಗೆ ಈಗ ಇದು ಸಣ್ಣ ಸದ್ದು. .!. ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಹಾಸನ ಗಡಿಭಾಗದ ಯಸಳೂರು ಅರಣ್ಯ ವಲಯ ವ್ಯಾಪ್ತಿಯ ಹೊಂಗಡಹಳ್ಳ ಹಾಗೂ ಜಗಟ ಸಮೀಪದ ಬಿಸಿಲೆ ರಕ್ಷಿತಾರಣ್ಯದೊಳಗಡೆ ಒಂದು ರೀತಿಯ ಹಸಿರು ಮಿಶ್ರಿತ ಕೆಂಪು ಬಣ್ಣದ ಹರಳು ಕಲ್ಲು ದಂಧೆ ನಡೆಯುತ್ತಿದೆ.ಕಳೆದ ಕೆಲವಾರು ವರ್ಷಗಳಿಂದ ಈ ಂಧೆ ನಡೆಯುತ್ತಿದೆ ಎಂಬ ಅನುಮಾನ ಈಗ ದಟ್ಟವಾಗುತ್ಗೀಗ ಸುಮಾರು 6 ರಿಂದ 8 ಎಕ್ರೆ ಪ್ರದೇಶದಲ್ಲಿ ಈ ಕಲ್ಲು ದಂಧೆ ನಡೆಯುತ್ತಿದೆ.ಹೀಗಾಗಿ ಬಿಸಲೆಯ ಈ ಪ್ರದೇಶದಲ್ಲಿ ಅರಣ್ಯ ನಾಶವಾದರೂ ಅಚ್ಚರಿ ಇಲ್ಲ. ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಕೊಡಗು ಜಿಲ್ಲಾ ಗಡಿ ಪ್ರದೇಶದ ಕೂಜಿಮಲೆ, ಸುಟ್ಟತ್‌ಮಲೆ , ಸೂಳೆಕೇರಿ ಪ್ರದೇಶಗಳಲ್ಲಿ ಭೂಮಿಯಡಿಯಲ್ಲಿ ದೊರಕುವ ನಸು ಕೆಂಪು ಹರಳುಕಲ್ಲುಗಳು ರಾಜ್ಯದಲ್ಲಿ ಪ್ರಸಿದ್ದಿಯಾಗಿತ್ತು.ಇತ್ತೀಚೆಗಿನವರೆಗೂ ಈ ದಂಧೆ ನಡೆಯುತ್ತಲೇ ಇತ್ತು.ಈಗ ಇದೇ ಮಾದರಿಯಲ್ಲಿ ಬಿಸಲೆಯಲ್ಲೂ ಇಂತಹದ್ದೇ ದಂಧೆ ನಡೆಯುತ್ತಿದೆ. ಇಲ್ಲಿ ಹೇಗೆ ನಡೆಯುತ್ತಿದೆ ? : ಬಿಸಿಲೆ ಪ್ರದೇಶದ ರಕ್ಷಿತಾರಣ್ಯವು ಪಶ್ಚಿಮ ಘಟ್ಟದ ಅಪರೂಪದ ಪ್ರದೇಶ.ಈ ಪ್ರದೇಶದಲ್ಲಿ ಸನೇಕ ಬಗೆಯ ಪ್ರಾಣಿಗಳು, ಪಕ್ಷಿಗಳು , ಜೀವಸಂಕುಲಗಳು, ವಿವಿಧ ಜಾತಿಯ ಗಿಡ ಮರಗಳು ಇವೆ.ಆದರೆ ಈಗ ಈ ದಂಧೆಕೋರರ ಧಾಳಿಯಿಂದಾಗಿ ಈ ಪ್ರದೇಶವು ಹಾನಿಯಾಗುತ್ತಿದೆ.ಲಭ್ಯ ಮಾಹಿತಿ ಪ್ರಕಾರ ಈ ದಂದೆಕೋರರು ಹರಳುಕಲ್ಲು ಸಿಗುವ ಜಾಗದಲ್ಲಿ ಒಂದು ವಾರಗಳ ಕಾಲ ಟೆಂಟ್ ಹಾಕುತ್ತಾರೆ.ಬೇಕಾದಷ್ಟು ಕಲ್ಲು ತೆಗೆದ ಬಳಿಕ ಅಲ್ಲೆ ಆಸುಪಾಸಿನಲ್ಲಿ ಮೊಬೈಲ್ ಸಿಗುವ ಕಾರಣ ವ್ಯಾಪಾರಿಗಳಿಗೆ ಹೇಳಿ ಬಿಸಲೆ ರಸ್ತೆ ಬಳಿಗೆ ಬಂದು ಅಲ್ಲೇ ವ್ಯಾಪಾರ ಕುದುರಿಸಿ ಹಣದೊಂದಿಗೆ ಊರಿಗೆ ಹಿಂತಿರುಗುತ್ತಾರೆ ಎಂಬ ಮಾಹಿತಿ ಇದೆ.ಈಗಾಗಲ ಇಲ್ಲಿ ಹರಳುಕಲ್ಲಿಗಾಗಿ ಅಗೆದು ಸುಮಾರು 3 ಮೀಟರ್ ಚೌಕಾಕಾರದ ಗುಂಡಿ ತೋಡಲಾಗಿದೆ.ಇದರ ಜೊತೆಗೆ ಕಾಡಿನಲ್ಲಿರುವ ಕಲ್ಲುಗಳು ಅನೇಕ ಹುಡಿಯಾಗಿದೆ.ಕೆಲವು ಕಲ್ಲುಗಳು ಭೂಮಿಯ ಮೇಲೆಯೇ ಸಿಗುವುದರಿಂದ ಕಲುಗಳನ್ನು ಹುಡಿಮಾಡಿದ ಕುರುಹುಗಳಿವೆ. ಇದೆಲ್ಲಾ ಅತ್ಯಂತ ವ್ಯವಸ್ಥಿತವಾಗಿ ನಡೆಯುತ್ತಿರುವುದು ಗೋಚರಿಸುತ್ತದೆ. ಇದರ ಜೊತೆಗೆ ಇಲ್ಲಿ ಚೌಕಾಕಾರದ ಗುಂಡಿಯಿಂದ ಮಣ್ಣು ತೆಗೆಯಲು ಬೆತ್ತದಿಂದ ತಯಾರಿಸಿದ ರಾಟೆ , ತಿಂಡಿ ತಿನಿಸುಗಳ ಪೊಟ್ಟಣ, ಬಟ್ಟೆ ,ಗುದ್ದಲಿಗಳು ಕೂಡಾ ಇರುವುದು ದಂಧೆಕೋರರ ಇರುವಿಕೆಯನ್ನು ಸೂಚಿಸುತ್ತದೆ. ಮೂಲಗಳ ಪ್ರಕಾರ ಇಲ್ಲಿ ದೊರಕುವ ಹರಳುಕಲ್ಲಿಗೆ ಪ್ರತೀ ಕೆಜಿಗೆ ಸುಮಾರು 2500 ರಿಂದ 5000 ರೂಪಾಯಿವರೆಗೂ ರೇಟು ಇದೆ ಎಂಬ ಮಾಹಿತಿ ಸಿಗುತ್ತದೆ.
ಇಲಾಖೆಗೆ ಗೊತ್ತಿಲ್ಲವೇ ? ಬಿಸಲೆಯ ಈ ಪ್ರದೇಶದಲ್ಲಿ ಆರಂಭವಾಗಿರುವ ಈ ಹರಳು ಕಲ್ಲು ದಂಧೆಯ ಬಗ್ಗೆ ನಮ್ಮ ಕಾಡು ಇಲಾಖೆಗೆ ಗೊತ್ತಿಲ್ಲವೇ ಎಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ.ಹೊರಜಗತ್ತಿಗೆ ಗೊತ್ತಾಗದ ರೀತಿಯಲ್ಲಿ ಈ ದಂಧೆ ನಡೆಯುವುದಾದರೂ ಹೇಗೆ ?. ಇಲ್ಲಿ ಬಹುವಿಸ್ತಾರವಾದ ಈ ಅರಣ್ಯದಲ್ಲಿ ಅದೂ ರಸ್ತೆಯಿಂದ ಸುಮಾರು 7 ರಿಂದ 8 ಕಿಮೀ ದೂರ ನಡೆದುಕೊಂಡು ಹೋಗಿ ಈ ಕೆಲಸ ಮಾಡುವಾಗಲೂ ನಮ್ಮ ಇಲಾಖೆಗೆ ಗೊತ್ತಿಲ್ಲ.ಏಕೆಂದರೆ ಇಲ್ಲಿ ಕಾಡಿನೊಳಗೆ ಇಲಾಖೆಯವರ ಪ್ರವೇಶವೇ ಕಡಿಮೆ ಎನ್ನುವುದು ಇಲ್ಲಿ ತಿಳಿಯುತ್ತದೆ.ಇದನ್ನೇ ದಂಧೆಕೋರರು ತಮ್ಮ ಲಾಭಕ್ಕಾಗಿ ಬಳಸಿಕೊಂಡಿದ್ದಾರೆ ಅಷ್ಟೇ.ಇದರ ಜೊತೆಗೆ ಇಲಾಖೆಯೊಂದಿನ ಒಳ ಒಪ್ಪಂದವೂ ಇದಕ್ಕೆ ಕಾರಣ ಇರಬಹುದು ಎಂಬ ಮಾತುಗಳು ಪರಿಸರ ಪ್ರೇಮಿಗಳಿಂದ ಕೇಳಿಬಂದಿದೆ.ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಈ ಪ್ರದೇಶವೂ ಕೂಡಾ ಕೂಜಿಮಲೆಯಂತೆ ವ್ಯಾಪಕವಾಗಿ ಅರಣ್ಯ ನಾಶವಾಗುವುದು ಖಚಿತ ಎಂದು ಪರಿಸರ ಪ್ರೆಮಿಗಳು ಎಚ್ಚರಿಸಿದ್ದಾರೆ. ಒಂದು ಕಡೆ ಪುಷ್ಟಗಿರಿ ವನ್ಯಧಾಮದ ಬಗ್ಗೆ ಆಸಕ್ತವಾಗಿರುವ ಅರಣ್ಯ ಇಲಾಖೆಗಳು, ಜನರಿಗೆ ಸರಿಯಾದ ಮಾಹಿತಿ ನೀಡದೆ ಇದ್ದರೆ ಇನ್ನೊಂದು ಕಡೆ ಸನಿಜವಾದ ಕಾಡುಗಳು ಈಗ ಯಾವುದಿದೆ ಅದರ ರಕ್ಷಣೆಗೆ ಮುಂದಾಗದೇ ಇರುವುದು ಇನ್ನೊಂದು ದೊಡ್ಡ ವಿಪರ್ಯಾಸ.ಇರುವ ಕಾಡನ್ನೇ ರಕ್ಷಿಸಲಾಗದೆ ಇನ್ನಷ್ಟು ಕಾಡನ್ನು ಸೇರ್ಪಡೆಗೊಳಿಸಿ ಅದೆಲ್ಲವೂ ವಿನಾಶದಂಚಿಗೆ ತರುವುದಕ್ಕೆ ಮುನ್ನ ಇಂತಹ ದಂಧೆಗಳಿಗೆ ಕಡಿವಾಣ ಹಾಕಬೇಕಾಗಿದೆ.

29 ನವೆಂಬರ್ 2011

ಇದು ಭಕ್ತಿ , ನಂಬಿಕೆ ಪ್ಲೀಸ್ ಇದಕ್ಕೆ ಧಕ್ಕೆ ಮಾಡಬೇಡಿ. .

ನಾಡಿನ ಅತ್ಯಂತ ಶ್ರದ್ಧಾ ಭಕ್ತಿಯ ತಾಣ ಕುಕ್ಕೆ ಸುಬ್ರಹ್ಮಣ್ಯ. ಈ ಕ್ಷೇತ್ರಕ್ಕೆ ಹಿಂದೆ ಕ್ರಿಕೆಟ್ ತಾರೆ ಸಚಿನ್ ತೆಂಡೂಲ್ಕರ್ ಭೇಟಿ ನೀಡಿದ್ದರು.ಆಗ ಭುಜ ನೋವಿನಿಂದ ಬಳಲುತ್ತಿದ್ದ ಸಚಿನ್ ಇಂದು ಶತಕದ ಶತಕ ಬಾರಿಸುವ ಹಂತದಲ್ಲಿದ್ದಾರೆ. ಸಚಿನ್ ಬಳಿಕವೂ ಕುಕ್ಕೆಗೆ ವಿವಿ‌ಐಪಿಗಳ ಭೇಟಿಯಿಂದ ಇಡೀ ದೇಶದಲ್ಲಿ ಕುಕ್ಕೆ ಸುಬ್ರಹ್ಮಣ್ಯ ಸುದ್ದಿ ಮಾಡಿತ್ತು.

ಈಗ ಮತ್ತೆ ಇನ್ನೊಂದು ರೀತಿಯಲ್ಲಿ ದೇಶದಾದ್ಯಂತ ಸುದ್ದಿಯಾಗುತ್ತಿದೆ.

ಇದು ಮಾತ್ರಾ ಭಕ್ತಾದಿಗಳ ನಂಬಿಕೆಯ ಮೇಲೆ ನಡೆಯುತ್ತಿರುವ ಮಾನಸಿಕ ಧಾಳಿ ಎಂದರೆ ತಪ್ಪಾಗಲಾರದು.ಯಾಕೆ ಹೀಗೆ ? ಬೇಕಾ ಈ ಚರ್ಚೆ ?. ದೇಶದಲ್ಲಿ ಅದೆಷ್ಟೋ ಸಮಸ್ಯೆಗಳು ತಾಂಡವವಾಡುತ್ತಾ ಇದೆ. ಈ ಬಗ್ಗೆ ಏಕೆ ಇವರೆಲ್ಲಾ ಮಾತನಾಡೊಲ್ಲ ? ಕಳೆದ ವರ್ಷ ನಡೆದ ಚರ್ಚೆಯ ವೇಳೆಯೂ ಇಲ್ಲಿನ ಸತ್ಯಾಂಶವನ್ನು ತಿಳಿಸಲು ಯಾರಿಗೂ ಸಾಧ್ಯ ಆಗಿರಲಿಲ್ಲ.ಈ ಬಾರಿಯೂ ಅದೇ ಆಗುತ್ತಿದೆ.ಈ ಒಟ್ಟಾರೆ ಬೆಳವಣಿಗೆಗಳ ಬಗ್ಗೆ ಇಲ್ಲಿ ನನಗೆ ಅಭಿಪ್ರಾಯ ದಾಖಲಿಸಬೇಕು ಎಂದು ನನಗೆ ಅನ್ನಿಸಿದೆ.

ಈ ದೇಶದ ತುತ್ತ ತುದಿಯಲ್ಲಿ ದಿನವೂ ಜನ ಹೆದರಿಕೆಯಿಂದ ಬದುಕುತ್ತಿದ್ದಾರೆ. ಮನೆಯಿಂದ ಹೊರಗಡೆ ದಿನವೂ ಗುಂಡಿನ ಸದ್ದು ಕೇಳುತ್ತಿದೆ.ಅದೆಷ್ಟೋ ಅಮಾಯಕ ಹೆಣ್ಣು ಮಕ್ಕಳನ್ನು ಅತ್ಯಾಚಾರವೆಸಗಿ ಕೊಲ್ಲುತ್ತಿದ್ದಾರೆ.ಸರಕಾರಗಳು ಇದ್ದೂ ಇಲ್ಲದಂತಗಿದೆ. ನಮ್ಮ ಜವಾನರು ಮೈಯೆಲ್ಲಾ ಕಣ್ಣಾಗಿ ಕಾಯುತ್ತಿದ್ದರೂ ಅವರನ್ನು ತಪ್ಪಿಸಿ ಒಳನುಗ್ಗುತ್ತಲೇ ಇದ್ದಾರೆ ಆ ದ್ರೋಹಿಗಳು. ಇನ್ನೊಂದು ಕಡೆ ದೇಶದ ಒಳಗೆಲ್ಲಾ ಭಯವನ್ನು ಉತ್ಪಾದಿಸಲಾಗುತ್ತಲೇ ಇದೆ.ಅಂತಹವರಲ್ಲೊಬ್ಬ ಅಂದು ಸಿಕ್ಕಿಬಿದ್ದಿದ್ದಾನೆ, ಆತನಿಗೆ ರಾಯಲ್ ಟ್ರೀಟ್‌ಮೆಂಟ್ ಇಂದಿಗೂ ನಮ್ಮ ದೇಶದಿಂದ ಸಿಗುತ್ತಿದೆ, ಮತ್ತೊಂದು ಕಡೆ ನಮ್ಮ ದೇಶದ ಆಡಳಿತ ಸೌಧಕ್ಕೆ ಧಾಳಿ ಮಾಡಿದವರೂ ಇದ್ದಾರೆ. ಇವರೆಲ್ಲಾ ಇಂದಿಗೂ ಇಂಚು ಇಂಚಾಗಿ , ಹೆಜ್ಜೆ ಹೆಜ್ಜೆಗೂ ದೇಶಕ್ಕೆ ಕಾಟ ಕೊಡುತ್ತಲೇ ಇರಬೇಕಾದರೆ ಸರಕಾರಗಳು ಅದೇಕೋ ಏನೋ ಯಾವುದೂ ಕಂಡೂ ಕಾಣದಂತೆ, ಕುಳಿತಿವೆ ಅಂತ ಕಾಣುತ್ತೆ.

ಬಿಡಿ, ಅದೆಲ್ಲಾ ಆಡಳಿತಕ್ಕೆ , ರಾಜಕೀಯಕ್ಕೆ ಸಂಬಂಧಿಸಿದ ವಿಚಾರ. ಪರಿಸ್ಥಿತಿ ಹೀಗೆ ಇರುವಾಗ ಇಲ್ಲಿನ ಜನರಿಗೆ ನೆಮ್ಮದಿ ಬೇಕಲ್ಲಾ , ಅವರು ಎಲ್ಲಿಗೆ ಹೋಗೋದು ಹೇಳಿ ?. ನೆಮ್ಮದಿ ಅರಸಿಕೊಂಡು ಹೋಗಲು ಆಗುತ್ತೆಯೇ ?.ಒಂದು ಕಡೆ ಧಾರ್ಮಿಕ ಕೇಂದ್ರಗಳ ಮೇಲೆ ಧಾಳಿ ನಡೆಯುತ್ತಲೇ ಇರುತ್ತವೆ ಅಲ್ಲೂ ಹೋಗೋದಾದ್ರೂ ಹೇಗೆ?. ಕೆಲವರಿಗೆ ಟೀಕೆ ಮಾಡುವುದರಲ್ಲಿ , ಇನ್ನೂ ಕೆಲವರಿಗೆ ವಿರೋಧಿಸುವುದರಲ್ಲಿ , ಇನ್ನೂ ಕೆಲವರಿಗೆ ರಾಜಕೀಯ ಮಾಡುವುರದಲ್ಲಿ , ಇನ್ನೂ ಅನೇಕರಿಗೆ ವಿವಾದ ಮಾಡುವುದರಲ್ಲಿ ನೆಮ್ಮದಿ ಸಿಗಬಹುದು. ಆದರೆ ಈ ದೇಶದ ಶೇಕಡಾ 80 ರಷ್ಟು ಜನ ಇಲ್ಲಿನ ದೇವರ ಮೊರೆ ಹೋಗಿದ್ದಾರೆ. ಅದು ರಾಮ , ರಹೀಮ, ಏಸು ಇನ್ಯಾವುದೇ ದೇವರ ಮೊರೆ ಹೋಗಿದ್ದಾರೆ,ಹೋಗುತ್ತಿದ್ದರೆ. ಅಲ್ಲಿ ಅದ್ಯಾವುದೋ ಆಚರಣೆಗೋ ನಂಬಿಕೆಗೋ ಒಳಪಟ್ಟು ಬದುಕಿನಲ್ಲಿ ನೆಮ್ಮದಿ ಕಂಡುಕೊಳ್ಳುತ್ತಾನೆ.ತಾನು ಮಾಡಿದ ಸೇವೆಯಲ್ಲಿ ತೃಪ್ತಿಯನ್ನು ಕಾಣುತ್ತಾನೆ.ಇದರಲ್ಲಿ ತಪ್ಪಿಲ್ಲವಲ್ಲ. ಏಕೆಂದರೆ ಶೇ.80 ರಷ್ಟು ಜನರಿಗೆ ಇಂತಹ ಆಚರಣೆಯಲ್ಲಿ ನಂಬಿಕೆ ಇದೆ.ಉಳಿದ ಶೇ.20 ರಷ್ಟು ಜನರಿಗೆ ಇಂತಹ ಸಂಗತಿಗಳಲ್ಲಿ ನಂಬಿಕೆ ಇಲ್ಲ, ಎಂದಾದರೆ ಬಿಡಿ ಒಪ್ಪಿಕೊಳ್ಳೋಣ. ನೀವೂ ಇದನ್ನೇ ಮಾಡಿ ಅಂತ ಯಾರಾದರೂ ಅವರಿಗೆ ಹೇಳಿದ್ದಾರಾ ? ಹೇಳುತ್ತಾರಾ? ಮತ್ಯಾಕೆ ಅವರಿಗೆ ತಲೆನೋವು?. ನಂಬಿಕೆ ಇಲ್ಲದ ಮೇಲೆ ನಾವು ನಿಮ್ಮ ಆಚರಣೆಗೋ ನಂಬಿಕೆಗೋ ಏಕೆ ಅಡ್ಡಿ ಬರಬೇಕು?. ಅದರಿಂದಾಗಿ ಇಡೀ ದೇಶಕ್ಕೋ ಸಮಾಜಕ್ಕೋ ಏನಾದ್ರೂ ತೊಂದರೆ ಇದೆಯೇ ?. ಅಲ್ಲಿನ ಭಯೋತ್ಪಾದಕರಂತೆಯೋ, ಕಾಶ್ಮೀರದ ಸಮಸ್ಯೆಯಂತೆಯೋ ಏನಾದರೂ ಇಡೀ ದೇಶಕ್ಕೆ ತೊಂದರೆಯಾಗುತ್ತೋ?. ಹಾಗಾದ್ರೆ ಸರಿ.ಇಂದೇ ಅದು ಅಂತಹ ಪದ್ಧತಿಗಳು ನಿಲ್ಲಬೇಕು.
ಸರಿ ಇದು ನಾಗರಿಕ ಸಮಾಜಕ್ಕೆ ಅವಮಾನ ಎನ್ನೋಣ , ಶೇ.80 ರಷ್ಟು ಮಂದಿ ಈ ಆಚರಣೆಗಳನ್ನು , ಪದ್ಧತಿಗಳನ್ನು ಒಪ್ಪುವುದಾರೆ ಕೇವಲ ಶೇ.20 ರಷ್ಟು ಮಂದಿಗಾಗಿ ಈ ಆಚರಣೆಯನ್ನು ಏಕೆ ನಿಲ್ಲಿಸಬೇಕು?. ಅಂತಹ ಮಂದಿ ಇದೇ ದೇವಸ್ಥಾನ , ದೇವರನ್ನು ಒಪ್ಪುವವರೂ ಅಲ್ಲ. ಆದರೆ ಈ 80 ಶೇಕಡಾ ಮಂದಿ ಇದೆಲ್ಲವನ್ನೂ ಸಹಿಸಿಕೊಂಡು ಇರೋದ್ರಿಂದಲೇ ಇದೆಲ್ಲಾ ನಡೀತದೆ. ಇನ್ನೊಂದು ನಾನು ಗಮನಿಸಿದಂತೆ ಇದೆಲ್ಲಾ ಹಿಂದೂ ಆಚರಣೆಗಳಲ್ಲಿ ಮಾತ್ರಾ ಅನ್ವಯವಾಗಿದೆ. ಅನ್ವವಾಗುತ್ತಿದೆ. ಯಾರೋಬ್ಬರೂ ಕೂಡಾ ಇತರ ಆಚರಣೆಗಳ ಬಗ್ಗೆ ಮಾತನಾಡಿದ್ದು ನನಗೆ ಗೊತ್ತಿಲ್ಲ.. . !.

ಸರಿ ಈಗ ಕುಕ್ಕೆಯ ವಿಚಾರವನ್ನು ನೋಡುವುದಾದರೆ , ಇಲ್ಲಿ ಸಮಸ್ಯೆ ಬಂದಿರೋದು ಬ್ರಾಹ್ಮಣರ ಎಂಜಲೆಲೆಯ ಮೇಲೆ ಶೂದ್ರರು ಮಾತ್ರಾ ಉರುಳಾಡುತ್ತಾರೆ ಅಂತ. ಇದು ಪೂರ್ವಾಗ್ರಹ ಪೀಡಿತ ಕೆಲವು ಮಾಧ್ಯಮಗಳ ಕತೆ. ಇಲ್ಲಿ ಬ್ರಾಹ್ಮಣರಿಂದ ತೊಡಗಿ ಎಲ್ಲರೂ ಈ ಎಂಜಲೆಲೆಯ ಮೇಲೆ ಉರುಳುತ್ತಾರೆ ಅನ್ನೊಂದು ಪ್ರಥಮ ವಿಚಾರ. ಕಳೆದ ವರ್ಷವೂ ಈ ಆಚರಣೆಗೆ ವಿರೋಧ ಬಂದಿತ್ತು. ಕುಕ್ಕೆಗೆ ಬಂದ ಇವರು ಇಲ್ಲಿನ ವಾಸ್ತವ ಅರಿತು ಹೇಳಿದರು , “ಇಲ್ಲಿ ಬ್ರಾಹ್ಮಣರೂ ಉರುಳುತ್ತಾರೆ ಎಂತ ಗೊತ್ತಿರಲಿಲ್ಲ ,ಕೇವಲ ಶೂದ್ರರು ಮಾತ್ರಾ ಉರುಳುತ್ತಾರೆ ಎಂದು ತಿಳಿದಿದ್ದೆವು” ಎಂದಿದ್ದರು. ಆದರೆ ಇಲ್ಲಿನ ಒಬ್ಬರು ಪತ್ರಕರ್ತರು ಅವರಿಗೆ ತಪ್ಪು ಮಾಹಿತಿ ನೀಡಿದ್ದರು ಎಂದು ಅವರಲ್ಲೊಬ್ಬರು ಹೇಳಿದ್ದರು. ಆ ಪತ್ರಕರ್ತರೇ ನಂತರ ಪೊಲೀಸ್ ರಕ್ಷಣೆಯೊಂದಿಗೆ ಅವರನ್ನು ಕುಕ್ಕೆಯಿಂದ ಕಳುಹಿಸಿದ್ದರು ಎಂಬುದು ಬೇರೆ ಮಾತು.

ಇಲ್ಲಿ ನಾನು ನೋಡಿದ ಪ್ರಕಾರ ಹೀಗೆ ನಡೆಯುತ್ತದೆ , ಕುಕ್ಕೆ ದೇವಸ್ಥಾನದಲ್ಲಿ ಚಂಪಾಷಷ್ಠಿಯ 3 ದಿನಗಳ ಕಾಲ ಅತ್ಯಂತ ಮಹತ್ವದ ಕಾಲ. ಈ ಬಗ್ಗೆ ಪುರಾಣಗಳಲ್ಲೂ ಉಲ್ಲೇಖ ಇದೆ. ಈ 3 ದಿನಗಳ ಕಾಲ ದೇವರಿಗೆ ಪೂಜೆಯಾದ ಬಳಿಕ ಕೊಪ್ಪರಿಗೆ ಅನ್ನಕ್ಕೆ ಪೂಜೆ ಇರುತ್ತದೆ.ಇದು ಪಲ್ಲ ಪೂಜೆ. ಪೂಜೆಯ ನಂತರ ಈ ಅನ್ನವನ್ನು ದೇವಸ್ಥಾನತದಲ್ಲಿ ಸಂತರ್ಪಣೆ ಮಾಡುವ ಎಲ್ಲಾ ಕಡೆ ಪ್ರದೇಶಗಳಿಗೆ ಅನ್ನವನ್ನು ಕೊಂಡೋಗಿ ಅಲ್ಲಿ ತಯಾರು ಮಾಡಿದ ಅನ್ನಕ್ಕೆ ಹಾಕುತ್ತಾರೆ. ಈ ಎಲ್ಲಾ ಕಾರ್ಯಕ್ರಮದ ಬಳಿಕ ದೇವಸ್ಥಾನದ ಹೊರಾಂಗಣದಲ್ಲಿ ಬ್ರಾಹ್ಮಣ ಸಂತರ್ಪಣೆ ಇರುತ್ತದೆ. ಎಲ್ಲರೂ ಕುಳಿತುಕೊಂಡ ಬಳಿಕ ದೇವರಿಗೆ ಅರ್ಚನೆ, ಬ್ರಾಹ್ಮಣ ಅರ್ಚನೆ ನಡೆದು ಸುಬ್ರಹ್ಮಣ್ಯನ ಹೆಸರಲ್ಲಿ ಸಂಕಲ್ಪ ನಡೆದು ಊಟ ಶುರುವಾಗುತ್ತದೆ. ಊಟದ ನಂತರ ಮತ್ತೆ ಸಂಕಲ್ಪ ನಡೆದು ದೇವರಿಗೆ ಗಂಟೆ ಬಡೆಯಲಾಗುತ್ತದೆ. ಇದಾದ ನಂತರ ಎಲ್ಲರೂ ಬಂದು ಈ ಎಲೆಯ ಮೇಲೆ ಉರುಳುತ್ತಾರೆ. ಇದರಲ್ಲಿ ಜಾತಿ ಎಂಬುದೇ ಇಲ್ಲ. ಕೆಲವೊಮ್ಮೆ 2000 ಜನ ಇರುತ್ತಾರೆ. ಇಲ್ಲಿ ಬಹುತೇಕ ಮಂದಿ ಈ ಸೇವೆ ಮಾಡಿದವರು ಒಂದಿಲ್ಲೊಂದು ಸಮಸ್ಯೆಯಿಂದ ಮುಕ್ತಿ ಪಡೆದವರೇ ಹೆಚ್ಚು. ಅದರಲ್ಲಿ ನಿವೃತ್ತ ನ್ಯಾಯಧೀಶರೂ ಕೆಲವೊಮ್ಮೆ ಇರುತ್ತಾರೆ ಎಂಬುದು ಕೂಡಾ ಗಮನಾರ್ಹ. ಹೀಗೆ ಈ ಸೇವೆಯ ಹೇಳಿಕೊಂಡದ್ದರಿಂದ ಅನೇಕರಿಗೆ ಮಾನಸಿಕವಾದ ನೆಮ್ಮದಿ ಸಿಕ್ಕಿದೆ. ಆ ನೆಮ್ಮದಿಯನ್ನು ತಡೆಯಲು ನಾವ್ಯಾರು ?. ಅವರ ಮಾನಸಿಕ ನೆಮ್ಮದಿ ಕಿತ್ತುಕೊಳ್ಳುವ ಹಕ್ಕು ನಮಗಿದೆಯೇ ?.





ಅದೇ ರೀತಿ ಇಲ್ಲಿ ಇನ್ನೊಂದು ಸೇವೆ ಇದೆ, ಕುಮಾರಧಾರಾ ನದಿಯಿಂದ ಸುಮಾರು 2.5 ಕಿಮೀ ದೂರ ಡಾಮರು ರಸ್ತೆಯಲ್ಲಿ ಉರುಳಿಕೊಂಡು, ಎಲ್ಲರೂ ರಸ್ತೆಯಲ್ಲಿ ಉಗುಳಿದ , ವಾಹನಗಳಿಂದ ಸುರಿದ ಎಣ್ಣೆಯ , ಚಪ್ಪಲಿಯಿಂದ ಮೆಟ್ಟಿದ ಡಾಮರು ರಸ್ತೆಯ ಮೇಲೆ ಉರುಳಿಕೊಂಡು ಬರುತ್ತಾರೆ. ಕೆಲವರಿಗೆ ಸುಮಾರು ೪ ಗಂಟೆ ಕಾಲ ತಗುಲುತ್ತದೆ ದೇವಸ್ಥಾನ ತಲುಪಲು.ಇದರಲ್ಲೂ ಮಾನಸಿಕ ನೆಮ್ಮದಿ ಸಿಗುತ್ತದೆ ಭಕ್ತರಿಗೆ.

ಹೀಗೆ ಸುಖಾಸುಮ್ಮನೆ ಒಂದು ನಂಬಿಕೆಯ ವಿರುದ್ದ ಮಾತನಾಡುತ್ತಾ, ಮಾನಸಿಕ ನೆಮ್ಮದಿಯನ್ನು ಕೆಡವಿ ಹಾಕಬಾರದು ಎನ್ನುವುದು ನನ್ನ ನಂಬಿಕೆ. ಏಕೆಂದರೆ ಇದೆಲ್ಲಾ ಸ್ವಯಂ ಪ್ರೇರಣೆಯಿಂದಲೇ ಆಗಬೇಕು.ಒತ್ತಾಯ ಬೇಕಿಲ್ಲ.ಮಾಡುವುದೂ ತರವಲ್ಲ.

ಹೀಗೆ ಮಾತನಾಡುವುದಾದರೆ ಅದ್ಯಾವುದೋ ಮಸೀದಿಯಲ್ಲಿ ನೀರಿಗೆ ಉಗುಳಿ ಅಲ್ಲಿನ ಮೌಲ್ವಿ ಕೊಡುತ್ತಾರೆ. ಇದನ್ನೇ ತೀರ್ಥ ಅಂತ ಲೀಟರ್ ಲೀಟರ್ ಕ್ಯಾನ್‌ಗಳಲ್ಲಿ ತುಂಬಿಕೊಂಡು ಹೋಗಿ ಕುಡಿಯುತ್ತಾರೆ, ರೋಗ ಮುಕ್ತರಾಗುತ್ತಾರೆ. ಮತ್ತೊಂದು ಕಡೆ ಸೈತಾನನ್ನು ಬಿಡಿಸುತ್ತಾರೆ, ಪಾಪ ಕಳೆಯಲಿ ಎಂದು ಪ್ರಾಣಿ ಬಲಿ ನಡೆಸುತ್ತಾರೆ, ಕೋಳಿ ಬಲಿ ನಡೆಯುತ್ತದೆ ಇದಕ್ಕೆಲ್ಲಾ ಏನೆನ್ನವುದು?

ಹಾಗೆ ನೋಡುತ್ತಾ ಹೋದರೆ ತುಳುನಾಡಿನ ಎಲ್ಲಾ ಆಚರಣೆಗಳೂ ಕೂಡಾ ಶೋಷಣೆ ಮುಕ್ತ ಎನ್ನಲು ಆಗುತ್ತಾ ?. ದೈವಾರಾಧನೆಯಲ್ಲಿ ಕೂಡಾ ದೈವ ಪಾತ್ರಿ ಯಾರು ?.ಇಲ್ಲಿ ಶೋಷಣೆ ಅನ್ನೋದಕ್ಕಿಂತಲೂ ಹೆಚ್ಚು ಅದರಿಂದಾಗಿ ಜನರಿಗೆ ನೆಮ್ಮದಿ ಸಿಗುತ್ತಿದೆ, ಖುಷಿ ಪಡುತ್ತ್ತಾರೆ ಅಷ್ಟೇ. ಅಂತಹ ಶಕ್ತಿಯೊಂದು ಇನ್ನೂ ಹತ್ತಾರು ವರ್ಷಗಳ ಕಾಲ ರೋಗಮುಕ್ತ ಜೀವನ ನಡೆಸಲು ಅವರಿಗೆ ಸಹಕಾರಿಯಾಗುತ್ತದೆ. ಒಂದು ನಂಬಿಕೆ , ಆಚರಣೆಯ ಹಿಂದೆ ಇಂತಹದ್ದೆಲ್ಲಾ ಇರುತ್ತದೆ.ಇದನ್ನೆಲ್ಲಾ ಅಷ್ಟು ಸುಲಭವಾಗಿ ತೊಡೆದು ಹಾಕುವುದು , ಇದೆಲ್ಲಾ ಪುರೋಹಿತ ಶಾಹಿ ಎಂದೆಲ್ಲಾ ಅನಾವಶ್ಯಕ ವಿವಾದ ಎಬ್ಬಿಸುವುದರ ಬದಲು ಸಮಾಜವನ್ನು ಒಂದುಗೂಡಿಸುತ್ತಾ ಮಾನಸಿಕ ಪರಿವರ್ತನೆ ಮಾಡಬೇಕಾಗಿದೆ ಅಂತ ನನಗೆ ಅನಿಸುತ್ತದೆ.

15 ನವೆಂಬರ್ 2011

ಆತನೂ ಅನಿವಾರ್ಯ. . .

ನನಗೆ ಅನೇಕ ಬಾರಿ ಅನಿಸಿದ್ದಿದೆ,

ಈ ವಿಶಾಲವಾದ ಜಗತ್ತಿನಲ್ಲಿ ನಾವೆಲ್ಲಾ ಎಷ್ಟು ಸಣ್ಣವರು.ಆದರೂ ಎಂತಹ ಅಹಂಕಾರ ನಮಗೆ.ಒಂದು ಕ್ಷಣವೂ ಪೂರ್ವಾಗ್ರಹವಿಲ್ಲದ ಮನಸ್ಸಿನಿಂದ ನಾವು ಯೋಚಿಸಿದ್ದೇ ಇಲ್ಲ.ಏನೇ ಮಾತನಾಡಲಿ , ಯಾರೇ ಮಾತನಾಡಲಿ ಅದರಲ್ಲೊಂದು ಕುಹಕ, ಆ ಸಂಗತಿಯನ್ನು ಪೂರ್ಣ ಮನಸ್ಸಿನಿಂದ ಮೌನವಾಗಿ ಆಲಿಸಿ ಆ ಬಳಿಕ ಪ್ರತಿಕ್ರಿಯಿಸಲು ಹೋಗುವುದೇ ಇಲ್ಲ , ಅದಕ್ಕೂ ಮುನ್ನ ನಮ್ಮದೇ ಆದ ತೀರ್ಮಾನ ಮಾಡಿಯೇ ಬಿಡುತ್ತೇವೆ.ಹೀಗಾಗಿ ಅನೇಕ ಸಂಗತಿಗಳು ನಮಗೆ ಅರಿವೇ ಆಗುವುದಿಲ್ಲ. ನನಗೂ ಅನೇಕ ಬಾರಿ ಇಂತಹದ್ದೇ ಅನೇಕ ಸಂಗತಿಗಳು ಆಗಿವೆ. ಇದರಿಂದಾಗಿ ನನಗೇ ಮಾಹಿತಿಯ ಕೊರತೆ ಆದದ್ದಿದೆ.ಇದಕ್ಕೆ ಮೌನವಾಗಿ ಕೇಳದೇ ಇದ್ದದ್ದು ಕೂಡಾ ಕಾರಣ.ಮೌನವಾಗಿ ಯಾರು ಕೇಳುತ್ತಾರೆ ಅವರಿಗೆ ಹೆಚ್ಚು ಹೆಚ್ಚು ಮಾಹಿತಿಗಳು ಸಿಗುತ್ತವೆ ಅಂದುಕೊಳ್ಳುತ್ತೇನೆ. ಆ ಬಳಿಕವೇ ಮಾತನಾಡಬೇಕು ಎನ್ನವುದನ್ನು ನಾನು ಈಗೀಗ ಅರ್ಥ ಮಾಡಿಕೊಳ್ಳುತ್ತಿದ್ದೇನೆ.

ಅದರ ಜೊತೆಗೆ ಅನೇಕರಿಗೆ ಅವರ ಉದ್ಯೋಗದಲ್ಲಿ ಕೀಳರಿಮೆ.ಮೊನ್ನೆ ಒಂದು ಘಟನೆ ನಡೆಯಿತು. ನನ್ನ ವಾಹದ ಟಯರ್ ಪಂಕ್ಚರ್ ಆಯಿತು.ಅಂದು ಭಾನುವಾರ ಬೇರೆ.ನನಗಂತೂ ಅದು ತೀರಾ ಅಗತ್ಯ, ಅನಿವಾರ್ಯ ಕೂಡಾ. ನನ್ನ ಪರಿಚಯದವರಿಗೆ ಫೋನು ಮಾಡಿ ವಿಚಾರಿಸಿದಾಗ ಇಂದು ಯಾರೊಬ್ಬರೂ ಇಲ್ಲ ಎಂದರು.ಕೊನೆಗೆ ಸ್ವಲ್ಪ ದೂರದಲ್ಲಿ ಒಬ್ಬರು ಇದ್ದಾರೆ ಅವರ ಮನೆ ಅಲ್ಲೇ ಎಂದು ಹೇಳಿದ ಕಾರಣ ಆ ಜಾಗಕ್ಕೆ ಬೇರೆ ವಾಹನದಲ್ಲಿ ಹೋದೆ. ಆ ಗ್ಯಾರೇಜ್ ಮಾಲಕ ಅಂತೂ ಕೆಲಸ ಮಾಡಿಕೊಟ್ಟ. ಆ ಬಳಿಕ ಆತ ಹೇಳಿದ, ತನ್ನ ಸಂಕಷ್ಟ ಹೇಳಿಕೊಳ್ಳುತ್ತಾ, ನಮ್ಮ ಕೆಲಸ ಇದೇ ಅಲ್ಲವಾ , ಯಾರ‍್ಯಾರದ್ದಾರೂ ಕಾರು ಟಯರ್ ಬಿಚ್ಚಿ ಕೂಡಿಸುವುದಲ್ವಾ ? ಅಂತ ಹೇಳಿದ.
ಇದರಲ್ಲಿ ಆತನ ಒಳಗಿದ್ದ ಕೀಳರಿಮೆ ಅರಿವಾಯಿತು.

ನನಗನ್ನಿಸಿದ್ದು ಈ ಕೀಳರಿಮೆ ಏಕೆ ಅಂತ?. ಆತನ ಉದ್ಯೋಗ ಯಾವುದೇ ಇರಲಿ , ಆತ ಅನಿವಾರ್ಯವೇ. ಒಬ್ಬ ಟಯರ್ ಪಂಕ್ಚರ್ ಹಾಕುವವನು ಇಲ್ಲಿ ಇಲ್ಲ ಅಂತಾಗಿದ್ರೆ ಎಷ್ಟು ವಾಹನಗಳು ರಸ್ತೆಯಲ್ಲೇ ಉಳಿದುಕೊಳ್ಳುತ್ತಿತ್ತು?. ಒಬ್ಬ ಮೆಕ್ಯ್ಯಾನಿಕ್ ಇಲ್ಲಾ ಅಂದ್ರೆ ಎಷ್ಟು ಕಷ್ಟ ?. ಹೀಗೇ ಎಲ್ಲಾ ಕೆಲಸದವರೂ ಇಲ್ಲಿ ಅನಿವಾರ್ಯವೇ . ಹಾಗಾಗಿ ಅವನ ಆತ್ಮಗೌರವ ಇದ್ದೇ ಇರುತ್ತದೆ. ಆದರೆ ಅಲ್ಲಿ ಇರಬೇಕಾದದ್ದು ಪ್ರಾಮಾಣಿಕತೆ ಮಾತ್ರಾ ಅಲ್ಲವೇ?. ಹಾಗಾಗಿ ನನಗನ್ನಿಸುವುದು ಇಲ್ಲಿ ವೃತ್ತಿಗಿಂತ ಪ್ರೀತಿ ಮುಖ್ಯ ಅಂತ. ಈ ಜಗತ್ತಿನಲ್ಲಿ ಒಬ್ಬನಿಂಗ ಮತ್ತೊಬ್ಬ ಪ್ರತಿಭಾವಂತ ಇದ್ದೇ ಇರುತ್ತಾನೆ.ಹಾಗಾಗಿ ಈ ಜಗತ್ತಿನಲ್ಲಿ ನಾವೇ ಸರ್ವಶ್ರೇಷ್ಠ ಅಂತ ಅಂದುಕೊಳ್ಳುವುದಾದರೂ ಹೇಗೆ ?. ಎಷ್ಟೇ ಶ್ರೀಮಂತನಾಗಿರಲಿ ಆ ಕ್ಷಣದಲ್ಲಿ ಕಾರು ರಿಪೇರಿ ಮಾಡುವ ಮೆಕ್ಯಾನಿಕ್ ಇಲ್ಲಾಂದ್ರೆ ರಸ್ತೆಯಲ್ಲೇ ನಿಲ್ಲಬೇಕಲ್ಲಾ . . !.

12 ನವೆಂಬರ್ 2011

ಮಾರುಕಟ್ಟೆ ಕತೆ. .

ಕರಾವಳಿ ಜಿಲ್ಲೆಯ ಅಡಿಕೆ ಹಾಗೂ ರಬ್ಬರ್ ಬೆಳೆಗಾರರಿಗೆ ಈಗ ಗೊಂದಲದ ಸಮಯ. ಒಂದು ಕಡೆ ಅಡಿಕೆ ಮಾರುಕಟ್ಟೆಯಲ್ಲೀಗ ವದಂತಿಗಳದ್ದೇ ಸುದ್ದಿಯಾದರೆ ರಬ್ಬರ್ ಮಾರುಕಟ್ಟೆ ಒಂದೇ ದಿನದಲ್ಲಿ 10 ರೂಪಾಯಿ ದಿಢೀರ್ ಕುಸಿತ ಕಂಡು ಆತಂಕ ಸೃಷ್ಟಿಸಿದೆ. ಶುಕ್ರವಾರ ಕೂಡಾ ಅಂತರಾಷ್ಟ್ರೀಯ ರಬ್ಬರ್ ಮಾರುಕಟ್ಟೆ ಕುಸಿತ ಕಂಡರೆ ಭಾರತದ ರಬ್ಬರ್ ಮಾರುಕಟ್ಟೆ ಸ್ಥಿರತೆಯನ್ನು ಕಾಯದುಕೊಂಡಿದೆ. ಅಡಿಕೆ ಹಾಗೂ ರಬ್ಬರ್ ಮಾರುಕಟ್ಟೆಯ ಈ ಏರಿಳಿತಗಳು, ವದಂತಿಗಳು ತಾತ್ಕಲಿಕ ಎಂಬುದನ್ನು ಬೆಳೆಗಾರರು ಗಮನಿಸಿಕೊಳ್ಳಬೇಕಾಗಿದೆ.

ಅಡಿಕೆ ಮಾರುಕಟ್ಟೆಯಲ್ಲಿ ಈಗ ವದಂತಿಗಳು ಓಡಾಡುತ್ತಿವೆ. ಈ ವಾರ ಅಡಿಕೆ ಧಾರಣೆ ಏರಿಕೆಯನ್ನು ನಿರೀಕ್ಷಿಸಲಾಗಿತ್ತು. ಹಳೆ ಅಡಿಕೆ ಧಾರಣೆಯು ೨೦೦ ರೂಪಾಯಿ ದಾಟಿ ಮುಂದಕ್ಕೆ ಹೋಗುತ್ತದೆ ಎನ್ನುವ ನಿರೀಕ್ಷೆ ಇತ್ತು. ಆದರೆ ಈಗ ಗುರುವಾರ ಬಂದರೂ ಧಾರಣೆ ಏರಿಕೆ ಕಾಣದೆ ಕೊಂಚ ಹಿಮ್ಮುಖವಾಗಿ ಕಂಡಿತು. ಇದರ ಬೆನ್ನಲ್ಲೇ ವದಂತಿಗಳು ಅಡಿಕೆ ಮಾರುಕಟ್ಟೆಯಲ್ಲಿ ಓಡಾಡತೊಗಿದೆ. ಹೀಗಾಗಿ ಆತಂಕಿತರಾದ ಬೆಳೆಗಾರರು ಅಡಿಕೆಯನ್ನು ಸಾಕಷ್ಟು ಪ್ರಮಾಣದಲ್ಲಿ ಮಾರುಕಟ್ಟೆಗೆ ಬಿಡುತ್ತಿದ್ದಾರೆ. ಇದೆಲ್ಲವೂ ಧಾರಣೆ ಏರಿಕೆಗೆ ಹಿನ್ನಡೆಯಾಗಿದೆ. ಅಡಿಕೆ ಮಾರುಕಟ್ಟೆಯ ವದಂತಿಗಳ ಪ್ರಕಾರ ಇನ್ನು ಧಾರಣೆ ಏರಿಕೆಯಾಗೋ ಲಕ್ಷಣವೇ ಇಲ್ಲ , ಇನ್ನಷ್ಟು ಕುಸಿತವಾಗುತ್ತದೆ ಎಂಬ ಗುಲ್ಲು ಹರಡುತ್ತಿದೆ. ಇದರ ಜೊತೆಗೆ ಕೇರಳ ಭಾಗದಿಂದ ಹೆಚ್ಚು ಅಡಿಕೆ ಬರುತ್ತಿದೆ ಎಂಬ ಮಾತೂ ಇದೆ. ಆದರೆ ವಾಸ್ತವವಾಗಿ ಇಂದು ಅಡಿಕೆ ಮಾರುಕಟ್ಟೆಯಲ್ಲಿ ಹಣ ಓಡಾಡುತ್ತಿಲ್ಲ. ಈ ಹಿಂದೆ ಕೂಡಾ ಇಂತಹದ್ದೇ ವಾತಾವರಣ ಸೃಷ್ಟಿಯಾಗಿ ಅಡಿಕೆ ಧಾರಣೆ ಕುಸಿತವಾಗಿತ್ತು. ಆ ನಂತರ ಏರಿಕೆ ಕಂಡಿತ್ತು. ಹೀಗಾಗಿ ಉತ್ತರ ಭಾರತ ವ್ಯಾಪಾರಿಗಳತ್ತ ಇಲ್ಲಿನ ವ್ಯಾಪಾರಿಗಳು ದೃಷ್ಟಿ ನೆಟ್ಟಿರುವುದರಿಂದ ಉತ್ತರ ಭಾರತದ ವ್ಯಾಪಾರಿಗಳು ಕೂಡಾ ಈಗ ಮಾರುಕಟ್ಟೆಯಲ್ಲಿ ಅಡಿಕೆ ಇದೆ ಎಂಬ ಲೆಕ್ಕದಲ್ಲಿದ್ದಾರೆ. ಇದನ್ನೇ ಅಸ್ತ್ರವಾಗಿ ಬಳಸಿಕೊಂಡ ಕೆಲವರು ಅಡಿಕೆ ಧಾರಣೆ ಇಳಿಯುತ್ತಿದೆ ಎಂಬ ಸುದ್ದಿ ಹಬ್ಬಿಸುತ್ತಿದ್ದಾರೆ. ಹೀಗಾಗಿ ಬೆಳೆಗಾರರು ಹೆದರಿ ಅಡಿಕೆಯನ್ನು ಮಾರುಕಟ್ಟೆಗೆ ಬಿಡಲು ಆರಂಭಿಸಿದ್ದಾರೆ.

ಈ ನಡುವೆ ಕಳೆದ ವಾರ ಅಡಿಕೆ ಧಾರಣೆ ೨೦೦ ರೂಪಾಯಿಗೆ ತಲಪಿತ್ತು. ಈ ನಡುವೆ ಗುರುವಾರ ಸಂಜೆಯ ವೇಳೆಗೆ ಹಳೆ ಅಡಿಕೆ ಧಾರಣೆಯು 189 , ಡಬ್ಬಲ್ ಚೋಲ್ 196 ಹಾಗೂ ಈಗಿನ ಹೊಸ ಅಡಿಕೆಯು 130 ರೂಪಾಯಿಗೆ ಆವಕಗೊಂಡಿದೆ.ಶುಕ್ರವಾರ ಕೂಡಾ ಇದೇ ಆಸುಪಾಸಿನ ಧಾರಣೆ ಸ್ಥಿರವಾಗಿದೆ.ಹೆಚ್ಚಿನ ವ್ಯತ್ಯಾಸ ಕಂಡುಬಂದಿಲ್ಲ. ಈಗ ರೈತರ ಸಂಸ್ಥೆ ಕ್ಯಾಂಪ್ಕೋ ಬೆಳೆಗಾರರ ಪರವಾಗಿ ನಿಲ್ಲಬೇಕಾದ ಅನಿವಾರ್ಯತೆ ಇದೆ ಎಂಬುದು ಬೆಳೆಗಾರರ ಅನಿಸಿಕೆ.ಕಳೆದ ಹಲವಾರು ಸಮಯಗಳಿಂದಲೂ ಕ್ಯಾಂಪ್ಕೋ ಅಡಿಕೆ ಧಾರಣೆ ಹಿಂದಕ್ಕೆ ಬಾರದಂತೆ ತಡೆದಿದೆ. ಅದೇ ರೀತಿ ಈ ಬಾರಿ ಕೂಡಾ ಯಾವುದೇ ಕಾರಣಕ್ಕೂ ಕ್ಯಾಂಪ್ಕೋ ಅಡಿಕೆ ಧಾರಣೆಯನ್ನು ಇಳಿಸುವುದಿಲ್ಲ ಎಂದು ಹೇಳಿದೆ. ಗುರುವಾರದಂದು ಕ್ಯಾಂಪ್ಕೋದಲ್ಲಿ ೧೮೯ ರೂಪಾಯಿ ಇದ್ದರೆ ಇತರ ಕಡೆಗಳಲ್ಲಿ ಅಷ್ಟು ಧಾರಣೆ ಇಲ್ಲದೇ ಇದ್ದದ್ದು ಇದಕ್ಕೆ ಸಾಕ್ಷಿಯಾಗಿದೆ.ಇದರ ಜೊತೆಗೆ ಅಡಿಕೆ ಬೆಳೆಗಾರರು ಕೂಡಾ ಈಗ ದೃಢ ನಿರ್ಧಾರ ತಳೆಯಲೇಕಾಗಿದೆ.ಧಾರಣೆ ಕುಸಿತದ ವದಂತಿ ಬಂದ ತಕ್ಷಣವೇ ಅಡಿಕೆಯನ್ನು ಒಮ್ಮಲೇ ಮಾರುಕಟ್ಟೆಗೆ ಬಿಡುವುದರಿಂದ ಧಾರಣೆ ಇನ್ನಷ್ಟು ಕುಸಿತವಾಗುವುದು ನಿಶ್ಚಿತ.ಇದಕ್ಕಾಗಿ ಬೆಳೆಗಾರರೇ ಧಾರಣೆಯನ್ನು ಹಿಡಿದಿಟ್ಟುಕೊಳ್ಳಬೇಕಾಗಿದೆ. ಹೀಗಾಗಿ ಎಚ್ಚರಿಕೆ ಅಗತ್ಯ. ವ್ಯಾಪಾರಿಗಳಲ್ಲಿ ಅಡಿಕೆ ದಾಸ್ತಾನು ಇಲ್ಲದೇ ಇದ್ದಾಗಲೂ ಧಾರಣೆ ಇಳಿಕೆಯ ಆಟ ಇದ್ದೇ ಇರುತ್ತದೆ. ಹೀಗೆ ಇಳಿಸುವುದರಿಂದ ವ್ಯಾಪಾರಿಗಳಿಗೆ ನಷ್ಟವಿಲ್ಲ. ಇದೆಲ್ಲವನ್ನೂ ಬೆಳೆಗಾರರು ಎಚ್ಚರಿಕೆಯಿಂದ ಗಮನಿಸಲೇಬೇಕಾಗುತ್ತದೆ.

ಜಾರಿದ ರಬ್ಬರ್ :

ರಬ್ಬರ್ ಧಾರಣೆ ವಿಪರೀತ ಕುಸಿತ ಕಂಡಿದೆ. ಬುಧವಾರದಂದು ಸಂಜೆಯ ವೇಳೆಗೆ ಭಾರತದಲ್ಲಿ ರಬ್ಬರ್‌ಗೆ 196.5 ರೂಪಾಯಿ ಇದ್ದ ಧಾರಣೆ ಗುರುವಾರ ಸಂಜೆಯ ವೇಳೆಗೆ ಭಾರತದಲ್ಲಿ ರಬ್ಬರ್ ಧಾರಣೆಯು 186 ರೂಪಾಯಿ. ಅಂದರೆ ಒಂದೇ ದಿನದಲ್ಲಿ 10 ರೂಪಾಯಿಯಷ್ಟು ಕುಸಿತ ಕಂಡಿದೆ.ಆದರೆ ಬ್ಯಾಂಕಾಂಗ್ ರಬ್ಬರ್ ಧಾರಣೆಯು 165 ರೂಪಾಯಿಗೆ ಇಳಿದಿದೆ.ಅಲ್ಲಿ ಕಳೆದ ಒಂದು ವಾರದಿಂದಲೇ ಕುಸಿತ ಕಂಡಿದೆ. ಇನ್ನು ಕುಲಾಲಾಂಪುರದಲ್ಲಿ 158 ರೂಪಾಯಿಗೆ ಇಳಿದಿದೆ.ಒಂದೇ ದಿನದಲ್ಲಿ 20 ರೂಪಾಯಿಯ ವ್ಯತ್ಯಾಸ ಕಂಡಿದೆ.ಶುಕ್ರವಾರದಂದು ಇನ್ನಷ್ಟು ಕುಸಿತ ಕಂಡಿದೆ.ಬ್ಯಾಂಕಾಂಗ್ ಧಾರಣೆಯು 161 ರೂಪಾಯಿ ಹಾಗೂ ಕುಲಾಲಾಂಪುರ ಧಾರಣೆ 154 ರೂಪಾಯಿಗೆ ಕುಸಿದರೆ ಭಾರತದಲ್ಲಿ ಮಾತ್ರಾ ಸ್ಥಿರತೆ ಕಾಯ್ದುಕೊಂಡಿದೆ. ಶುಕ್ರವಾರ ಕೂಡಾ 186 ರೂಪಾಯಿಯಲ್ಲೇ ರಬ್ಬರ್ ಖರೀದಿಯಾಗಿದೆ.

ಕಳೆದ ಮಾರ್ಚ್ ತಿಂಗಳ ನಂತರ ಇಷ್ಟು ದೊಡ್ಡ ಪ್ರಮಾಣದಲ್ಲಿ ಇದೇ ಮೊದಲ ಬಾರಿಗೆ ರಬ್ಬರ್ ಧಾರಣೆ ಕುಸಿಯುತ್ತಿದೆ. ಇದಕ್ಕೆ ಪ್ರಮುಖ ಕಾರಣ ತೈವಾನ್ ಪ್ರವಾಹ ಕಾರಣವಾಗಿದೆ.ಇದರ ಜೊತೆಗೆ ಚೀನಾದ ಸೇರಿದಂತೆ ಜಾಗತಿಕವಾದ ಆರ್ಥಿಕ ಏರುಪೇರು ಆಗುತ್ತಿರುವ ಕಾರಣದಿಂದಾಗಿ ರಬ್ಬರ್ ಕಂಪನಿಗಳು ಕೊಂಚ ಹಿನ್ನಡೆ ಅನುಭವಿಸಿವೆ. ಹೀಗಾಗಿ ರಬ್ಬರ್ ಬಳಕೆ ಕಡಿಮೆಯಾಗಿದೆ. ಈಗ ರಬ್ಬರ್‌ಗೆ ಅಂತರಾಷ್ಟ್ರೀಯ ಮಾರುಕಟ್ಟೆ ಇರುವುದರಿಂದ ಜಾಗತಿಕ ಮಾರುಕಟ್ಟೆಯ ವ್ಯತ್ಯಾಸ ಕೂಡಾ ರಬ್ಬರ್ ಮೇಲೆ ಪರಿಣಾಮ ಬೀರುತ್ತಿದೆ. ಇತ್ತೀಚೆಗಷ್ಟೇ ಶೇರು ಮಾರುಕಟ್ಟೆ ಕುಸಿತ ಕಂಡಿರುವುದು ಕೂಡಾ ರಬ್ಬರ್ ಧಾರಣೆ ಹಿನ್ನಡೆಗೆ ಒಂದು ಕಾರಣ.ಅದರ ಜೊತೆಗೆ ಈ ವರ್ಷ ವಿವಿದ ಕಾರಣಗಳಿಂದಾಗಿ ಕಾರುಗಳ ಮಾರಾಟ ಕೂಡಾ ಕಡಿಮೆಯಾಗಿದೆ.ಈಗಿನ ಅಂದಾಜು ಪ್ರಕಾರ ದೇಶದಲ್ಲಿ ಸುಮಾರು ಶೇ.೨ ರಷ್ಟು ಕಾರು ಮಾರಾಟ ಕುಸಿತವಾಗಿದೆ. ಇನ್ನು ಟಯರ್ ಕಂಪನಿಗಳು ಕೂಡಾ ಬೇಡಿಕೆಗೆ ತಕ್ಕಷ್ಟೇ ಟಯರ್ ತಯಾರು ಮಾಡುತ್ತಿದ್ದಾರೆ. ಇನ್ನು ಚೀನಾದಂತಹ ದೇಶಗಳು ಈಗಾಗಲೇ ರಬ್ಬರ್ ದಾಸ್ತಾನು ಇರಿಸಿಕೊಂಡಿದೆ.ಇದೆಲ್ಲಾ ರಬ್ಬರ್ ಬೆಲೆ ಇಳಿಕೆಯ ಕಾರಣಗಳು.



ಆದರೆ ಇಡೀ ವಿಶ್ವದ ರಬ್ಬರ್ ಮಾರುಕಟ್ಟೆ ನೋಡಿದರೆ ರಬ್ಬರ್‌ಗೆ ಬೇಡಿಕೆ ಇದ್ದೇ ಇದೆ.ಇದೇ ಕಾರಣಕ್ಕೆ ಹಿಂದೆ ರಬ್ಬರ್ ಮಾರುಕಟ್ಟೆಯು ೨೫೦ ರೂಪಾಯಿವರೆಗೆ ತಲುಪಬಹುದೆಂದು ರಬ್ಬರ್ ಮಾರುಕಟ್ಟೆ ವಿಶ್ಲೇಷಿಸಲಾಗಿತ್ತು. ಏಕೆಂದರೆ ಇಂದು ತೈಲ ಬೆಲೆ ಏರಿಕೆಯಾಗುತ್ತಲೇ ಇರುವ ಕಾರಣದಿಂದಾಗಿ ಸಿಂಥೆಟಿಕ್ ರಬ್ಬರ್ ತೀರಾ ದುಬಾರಿಯಾಗುವ ಕಾರಣದಿಂದಾಗಿ ನೈಸರ್ಗಿಕ ರಬ್ಬರ್‌ಗೆ ಬೇಡಿಕೆ ಇದ್ದೇ ಇದೆ.ಆದರೆ ಈಗಿನ ಕೆಲವು ತಾತ್ಕಾಲಿಕ ಸಮಸ್ಯೆಗಳಿಂದಾಗಿ ಧಾರಣೆ ಇಳಿಕೆಗೊಂಡರೂ ಕೂಡಾ ಮತ್ತೆ ನಿಧಾನವಾಗಿ ಏರಿಕೆಯಾಗುವ ಎಲ್ಲಾ ಲಕ್ಷಣಗಳು ಇವೆ.ಅದುವರೆಗೆ ಬೆಳೆಗಾರರು ಇನ್ನು ಕಾಯಬೇಕು ಅಷ್ಟೇ.

02 ಅಕ್ಟೋಬರ್ 2011

ಬರಲಿದೆ ರಬ್ಬರ್ ಟ್ಯಾಪರ್ಸ್ ಬ್ಯಾಂಕ್


ರಬ್ಬರ್ ಬೆಳೆಗಾರಿಗೆ ಟ್ಯಾಪಿಂಗ್ ಬಗ್ಗೆ ಇನ್ನು ಆತಂಕ ಬೇಡ.ಅದಕ್ಕಾಗಿಯೇ ಸಹಕಾರಿ ಚಿಂತನೆಯಡಿಯಲ್ಲಿ ಒಂದು ಹೆಲ್ಪ್ ಲೈನ್ ನಡೆಯುತ್ತಿದೆ. ಹಾಗೆಂದು ಇದು ಬ್ಯಾಂಕ್ ಅಲ್ಲ. ಆದರೆ ನಾವು ಇದನ್ನು ಬ್ಯಾಂಕ್ ಅಂತಲೇ ಕರೆಯಬಹುದು.ಏಕೆಂದರೆ ಟ್ಯಾಪರ‍್ಸ್ ಸಮಸ್ಯೆ ಯಾರೇ ಇದ್ದರೂ ಅವರು ನೇರವಾಗಿ ಸಂಪರ್ಕಿಸಿದರೆ ಅವರ ಸಮಸ್ಯೆ ಪರಿಹಾರ ನಿಶ್ಚಿತ.

ಇಂದು ಚಿನ್ನದ ಬೆಳೆಯಾಗಿಯೇ ಮೂಡಿಬಂದ ರಬ್ಬರ್ ಬೆಳೆಯತ್ತ ಜಿಲ್ಲೆಯ ರೈತರು ಮನಸ್ಸು ಹೊರಳಿಸಿದ್ದರು. ಆದರೆ ಈಗ ಎಲ್ಲರಿಗೂ ಒಂದು ಚಿಂತೆ ಆರಂಭವಾದದ್ದು ರಬ್ಬರ್ ಟ್ಯಾಪಿಂಗ್‌ನದ್ದು. ಇಲ್ಲಿ ರಬ್ಬರ್ ಟ್ಯಾಪಿಂಗ್‌ಗೆ ತಮಿಳು ಮೂಲ ನಿವಾಸಿಗಳು ಹಾಗೂ ಶ್ರೀಲಂಕಾದಿಂದ ಆಗಮಿಸಿದ ತಮಿಳು ಭಾಷಿಕರು ಬಹುತೇಕ ಮಂದಿ ಇದ್ದಾರೆ. ಆದರೆ ಇತ್ತೀಚೆಗೆ ಈ ಕಾರ್ಮಿಕರೂ ಸಾಕಾಗದೆ ಕೇರಳದ ಕಾರ್ಮಿಕರೂ ರಬ್ಬರ್ ತೋಟಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗಂತೂ ಇವರದೂ ಕೊರೆತ ಕಾಡಿ ಸ್ಥಳೀಯರೂ ಕೂಡಾ ಟ್ಯಾಪಿಂಗ್ ಮಾಡುತ್ತಿದ್ದಾರೆ. ಆದರೂ ಸಮಸ್ಯೆಗೆ ಪರಿಹಾರ ಸಿಕ್ಕಿರಲಿಲ್ಲ. ಈ ನಡುವೆ ಎಲ್ಲೆಡೆ ರಬ್ಬರ್ ಬೆಳೆ ಬೆಳೆದರೆ ಟ್ಯಾಪಿಂಗ್‌ಗೆ ಕಾರ್ಮಿಕರು ಎಲ್ಲಿಂದ ಅನ್ನೋದೇ ಸಮಸ್ಯೆಯಾಗಿತ್ತು. ಈಗ ಈ ಸಮಸ್ಯೆಗೆ ಬಹುತೇಕ ಪರಿಹಾರ ಸಿಕ್ಕಿದೆ. ಅದಕ್ಕಾಗಿ ಸಹಕಾರಿ ತತ್ತ್ವದಲ್ಲಿ ಕಾರ್ಮಿಕರ ಬ್ಯಾಂಕ್ ಆರಂಭಗೊಳ್ಳುತ್ತಿದೆ.ಅದಕ್ಕಾಗಿ ಚಿಕ್ಕ ಪ್ರಯತ್ನವೊಂದು ನಡೆಯುತ್ತಿದೆ. ಈಗಾಗಲೇ ಈ ವ್ಯವಸ್ಥೆ ಬಳಸಿಕೊಂಡವರು ಖುಷಿ ಪಟ್ಟಿದ್ದಾರೆ.





ಇಂತಹ ಹೊಸ ಕಲ್ಪನೆಗೆ ಮುಂದಾದವರು ಸುಳ್ಯ ತಾಲೂಕಿನ ಪ್ರದೀಪ್ ಚಿಲ್ಪಾರ್. ಇವರು ಸೌತ್ ಇಂಡಿಯಾ ಎಗ್ರಿ ಸಪೋರ್ಟರ‍್ಸ್ ವಿಶನ್ ಎನ್ನುವ ಚಿಕ್ಕ ಸಹಕಾರಿ ಸಂಘಟನೆಯ ಮೂಲಕ ರೈತರಿಗೆ ಸಹಾಯ ಮಾಡುತ್ತಿದ್ದಾರೆ.ಇದಕ್ಕಾಗಿ ಇವರು ಕಳೆದ ಒಂದು ವರ್ಷದಿಂದ ಶ್ರಮ ವಹಿಸಿ ಇಂದು ಸುಳ್ಯ ತಾಲೂಕಿನಲ್ಲಿ ಸುಮಾರು 60 ಜನ ಕಾರ್ಮಿಕರು ವಿವಿದೆಡೆ ರಬ್ಬರ್ ತೋಟಗಳಲ್ಲಿ ದುಡಿಯುತ್ತಿದ್ದಾರೆ. ಆದರೆ ಕಾರ್ಮಿಕರು ಎಲ್ಲಿಂದ ಎಂಬ ಪ್ರಶ್ನೆ ಮೂಡಬಹುದು. ಪ್ರದೀಪ್ ಅವರ ಸಂಪರ್ಕದ ಮೂಲಕ ಒರಿಸ್ಸಾ , ಜಾರ್ಖಂಡ್ ಹಾಗೂ ಬಿಹಾರ ಪ್ರದೇಶದ ಜನರು ಇಲ್ಲಿ ರಬ್ಬರ್ ಕಾರ್ಮಿಕರು.

ಕಾರ್ಮಿಕರು ಎಲ್ಲಿಂದ ಮತ್ತು ಹೇಗೆ ?

ಇಲ್ಲಿ ರಬ್ಬರ್ ಕಾರ್ಮಿಕರ ಅಭಾವ ತೋರಿದಾಗ ತನ್ನ ಸಂಪರ್ಕದ ಮೂಲಕ ಕಾರ್ಮಿಕರನ್ನು ಹುಡುಕುವ ಪ್ರಯತ್ನವನ್ನು ಪ್ರದೀಪ್ ಮಾಡಿದರು. ಆಗ ಅವರಿಗೆ ಹೊಳೆದದ್ದು ಒರಿಸ್ಸಾ. ಅಲ್ಲಿನ ಬಹುಜನರಿಗೆ ಕೆಲಸವೇ ಇಲ್ಲ. ಅಂತಹ ಜನರಿಗೆ ಅಲ್ಲೇ ರಬ್ಬರ್ ಬಗ್ಗೆ ತರಬೇತಿ ನೀಡಿ ಇಲ್ಲಿಯೂ ವಿಶೇಷ ತರಬೇತಿ ನೀಡಿ ರಬ್ಬರ್ ಟ್ಯಾಪಿಂಗ್‌ಗೆ ಬಳಸಿಕೊಳ್ಳಲಾಯಿತು. ಬಹುಬೇಗನೆ ರಬ್ಬರ್ ಸಂಬಂಧಿತ ಕೆಲಸಗಳನ್ನು ಕಲಿತುಕೊಂಡ ಕಾರ್ಮಿಕರು ಈಗ ನುರಿತವರಾಗಿದ್ದಾರೆ. ಸದ್ಯಕ್ಕೆ ಒರಿಸ್ಸಾದ ಸಂಬಲ್‌ಪುರ್ ಸೇರಿದಂತೆ ಜಾರ್ಖಂಡ್‌ನ ಗಡಿಭಾಗದ ಜನರು ಈ ಕೆಲಸಕ್ಕೆ ಬರುತ್ತಿದ್ದಾರೆ. ಈಗ ಸುಳ್ಯ ತಾಲೂಕಿನ ವಿವಿಧ ರಬ್ಬರ್ ತೋಟಗಳಲ್ಲಿ 60 ಜನ ಕಾರ್ಮಿಕರು ಇದ್ದಾರೆ. ಇನ್ನಷ್ಟು ಬೇಡಿಕೆ ಇದ್ದು ಸದ್ಯದಲ್ಲೇ 300 ಜನರಾಗುವ ನಿರೀಕ್ಷೆ ಇದೆ ಎನ್ನುತ್ತಾರೆ ಪ್ರದೀಪ್.

ಹೇಗೆ ಇವರು ಕೆಲಸ ಮಾಡುತ್ತಾರೆ ?

ಇಲ್ಲಿ ರಬ್ಬರ್ ಬೆಳೆಗಾರ ಸಂಪರ್ಕಿಸಬೇಕಾದ್ದು ಸೌತ್ ಇಂಡಿಯಾ ಎಗ್ರಿ ಸಪೋರ್ಟರ‍್ಸ್ ವಿಶನ್ ಎನ್ನುವ ಸಹಕಾರಿ ಗೆಳೆಯ ಪ್ರದೀಪ್ ಅವರನ್ನು. ಆದರೆ ಇಲ್ಲಿ ಒಂದು ಬೇಡಿಕೆ ಇದೆ. ಏನೆಂದರೆ ಒಬ್ಬ ಕಾರ್ಮಿಕನಿಗೆ ದಿನಕ್ಕೆ 300 ರಬ್ಬರ್ ಮರ ಬೇಕು. ಅಂದರೆ ಒಂದು ತೋಟದಲ್ಲಿ 2 ಜನ ಕಾರ್ಮಿಕರನ್ನು ಬಿಡಲೇಬೇಕಾಗುತ್ತದೆ. ಏಕೆಂದರೆ ಅವರು ಈ ಊರಿಗೆ ಹೊಸಬರು. ಹೀಗಾಗಿ ದಿನಕ್ಕೆ ಕನಿಷ್ಟ 600 ಮರ ಅಂದರೆ ಒಟ್ಟು 1200 ರಬ್ಬರ್ ಮರಗಳು ಇರುವ ಬೆಳೆಗಾರರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಈ ಕಾರ್ಮಿಕರು ತೋಟದಲ್ಲಿ ಟ್ಯಾಪಿಂಗ್‌ನಿಂದ ತೊಡಗಿ ರಬ್ಬರ್ ಶೀಟ್ ಮಾಡುವುದು , ರಬ್ಬರ್ ರೋಗಗಳನ್ನು ಪತ್ತೆ ಮಾಡುವುದು , ಅವುಗಳ ಆರೈಕೆ ಹೀಗೆ ಎಲ್ಲವನ್ನೂ ಅವರೇ ಮಾಡುತ್ತಾರೆ. ಇವರನ್ನು ನೋಡಿಕೊಳ್ಳಲು ಎರಡು ಅಥವಾ ಮೂರು ದಿನಕ್ಕೊಮ್ಮೆ ಪ್ರದೀಪ್ ಅಥವಾ ಅವರ ಸೂಪರ್‌ವೈಸರ್‌ಗಳು ಆಗಮಿಸುತ್ತಾರೆ.15 ರಿಂದ 20 ಜನರಿಗೆ ಒಬ್ಬರಂತೆ ಸೂಪರ್‌ವೈಸರ್‌ಗಳು ಇದ್ದಾರೆ. ಆದರೆ ಕಾರ್ಮಿಕರ ಬಗ್ಗೆ ಸಮಾಧಾನ ಇಲ್ಲದೇ ಇದ್ದರೆ ಬೇರೆ ಕಾರ್ಮಿಕರನ್ನು ವ್ಯವಸ್ಥೆ ಮಾಡುತ್ತಾರೆ.ಹಾಗೆಂದು ಬೆಳೆಗಾರರು ಕೂಡಾ ಅವರತ್ತ ಲಕ್ಷ್ಯ ನೀಡಬೇಕಾಗುತ್ತದೆ. ಏಕೆಂದರೆ ಯಾವುದೋ ಊರಿನಿಂದ ಬಂದವರು ಎಂಬ ಧೋರಣೆಯ ಬದಲು ನಮ್ಮವರೇ ಎಂಬ ಭಾವನೆ ಬೆಳೆಸಬೇಕಾಗುತ್ತದೆ. ಕಳೆದ ಒಂದು ವರ್ಷದಿಂದ ಕೆಲ ಕಾರ್ಮಿಕರು ಕನ್ನಡ , ತುಳು ಭಾಷೆಯನ್ನೂ ಕಲಿತಿದ್ದಾರೆ. ಈ ಕಾರ್ಮಿಕರ ವೇತನ ಎಲ್ಲವನ್ನೂ ಕೂಡಾ ಸೌತ್ ಇಂಡಿಯಾ ಎಗ್ರಿ ಸಪೋರ್ಟರ‍್ಸ್ ವಿಶನ್‌ನ ಮೂಲಕವೇ ನೀಡಲಾಗುತ್ತದೆ.

ಬೆಳೆಗಾರರು ಏನು ಹೇಳುತ್ತಾರೆ ?

ಈಗಾಗಲೇ ಸುಳ್ಯ ತಾಲೂಕಿನಲ್ಲಿ ಇದೇ ಚಿಂತನೆಯಡಿಯಲ್ಲಿ ಸುಮಾರು ೨೦ ರಿಂದ ೩೦ ಕಡೆಗಳಲ್ಲಿ ಬೆಳೆಗಾರರು ರಬ್ಬರ್ ಟ್ಯಾಪಿಂಗ್ ಸಮಸ್ಯೆ ಪರಿಹರಿಸಿಕೊಂಡಿದ್ದಾರೆ.ಎಲ್ಲರೂ ಕೂಡಾ ಖುಷಿ ಪಟ್ಟಿದ್ದಾರೆ. ಮರ್ಕಂಜದ ರಬ್ಬರ್ ಬೆಳೆಗಾರ ರಮೇಶ್ ಕಾಟೂರಾಯ ಪ್ರಕಾರ , ಇದೊಂದು ಉತ್ತಮ ಪ್ರಯತ್ನ.ಈ ಮೂಲಕ ರಬ್ಬರ್ ಕಾರ್ಮಿಕರ ಸಮಸ್ಯೆಗೆ ಪರಿಹಾರ ಸಿಕ್ಕಂತಾಗಿದೆ. ಬೆಳೆಗಾರರಿಗೂ ಇದರಿಂದ ಪ್ರಯೋಜನವಾಗಿದೆ ಎನ್ನುತ್ತಾರೆ.ಇನ್ನೊಬ್ಬ ರಬ್ಬರ್ ಬೆಳೆಗಾರರ ಮರ್ಕಂಜದ ಮಾಪಲತೋಟ ಕೃಷ್ಣ ಭಟ್ , ಈ ಕಾರ್ಮಿಕರದ್ದು ಉತ್ತಮವಾದ ಕೆಲಸವಾಗಿರುತ್ತದೆ. ಊರಿನ ಕಾರ್ಮಿಕರಷ್ಟೇ ಗುಣಮಟ್ಟದ ಕೆಲಸ. ತಿಂಗಳಿಗೆ ಒಂದೇ ಒಂದು ರಜೆ ಮಾಡದೆ ಕೆಲಸ ಮಾಡುತ್ತಾರೆ. ಆದರೆ ಭಾಷೆಯದ್ದು ಮಾತ್ರಾ ಈಗ ಸಮಸ್ಯೆ.ಇದೊಂದು ಸಮಸ್ಯೆ ಹೊರತುಪಡಿಸಿದರೆ ಯಾವುದೇ ತೊಂದರೆ ಇಲ್ಲ ಎನ್ನುತ್ತಾರೆ ಕೃಷ್ಣ ಭಟ್.

ಕೇರಳದಲ್ಲಿ ಇದೆ ರಬ್ಬರ್ ಬ್ಯಾಂಕ್ :

ಇಲ್ಲಿ ಸೌತ್ ಇಂಡಿಯಾ ಎಗ್ರಿ ಸಪೋರ್ಟರ‍್ಸ್ ವಿಶನ್‌ನ ಪ್ರದೀಪ್ ಅವರು ಬೆಳೆಗಾರರ ಅನುಕೂಲಕ್ಕಾಗಿ ಸಹಕಾರಿ ಮನೋಭಾವದಿಂದ ಈ ವ್ಯವಸ್ಥೆಯ ಮೂಲಕ ಕಾರ್ಮಿಕರ ಕೊರತೆ ನೀಗುವ ಪ್ರಯತ್ನ ಮಾಡಿದ್ದಾರೆ.
ಆದರೆ ಕೇರಳದಲ್ಲಿ ಈಗಾಗಲೇ ಇಂತಹದ್ದೇ ಬ್ಯಾಂಕ್ ರಚನೆಯಾಗಿದೆ. ಅಲ್ಲಿ ರಬ್ಬರ್ ಬೋರ್ಡ್‌ನ ಬೆಳೆಗಾರರ ಸಂಘದ ಮೂಲಕ ಕಾರ್ಮಿಕರ ಬ್ಯಾಂಕ್ ರಚನೆಯಾಗಿದೆ. ಅದಕ್ಕೆ ಬೋರ್ಡ್‌ನಿಂದಲೂ ಸೌಲಭ್ಯ ದೊರೆಯುತ್ತದೆ. ಕರ್ನಾಟಕದಲ್ಲಿ ಸದ್ಯ ಯಾವುದೇ ಬ್ಯಾಂಕ್ ರಬ್ಬರ್ ಬೋರ್ಡ್ ಮೂಲಕ ರಚನೆಯಾಗಿಲ್ಲ. ಇದರಿಂದ ಕೇರಳದಲ್ಲಿ ಸಾಕಷ್ಟು ಪ್ರಯೋಜನವಾಗಿದೆ ಎಂದು ರಬ್ಬರ್ ಬೋರ್ಡ್ ಅಧಿಕಾರಿ ಬಾಲಕೃಷ್ಣ ಹೇಳುತ್ತಾರೆ.

ಮುಂದೆ ಗದ್ದೆ ಬೇಸಾಯಕ್ಕೂ ವಿಸ್ತರಿಸುವ ಚಿಂತನೆ :

ಇದ ರೀತಿಯ ವ್ಯವಸ್ಥೆಯನ್ನು ಮುಂದೆ ಗದ್ದೆ ಬೇಸಾಯಕ್ಕೂ ವಿಸ್ತರಿಸುವ ಚಿಂತನೆ ಇದೆ ಎಂಬುದು ಪ್ರದೀಪ್ ಮಾತು. ಮೂಲತ: ಈ ಕಾರ್ಮಿಕರು ಗದ್ದೆಯ ಕೆಲಸಗಾರರು. ಸ‌ಅದಕ್ಕಾಗಿ ಅವರಿಗೆ ವಿಶೇಷ ತರಬೇತಿಯ ಅವಶ್ಯಕತೆ ಇರುವುದಿಲ್ಲ. ಇದಕ್ಕಾಗಿ ಸುಳ್ಯ ತಾಲೂಕಿನ ಬೆಳ್ಳಾರೆ ಬಳಿ ಪ್ರಯೋಗಿಕವಾಗಿ ಗದ್ದೆಯೊಂದರಲ್ಲಿ ಸದ್ಯದಲ್ಲೇ ಈ ಕಾರ್ಮಿಕರು ಕೆಲಸ ಮಾಡುತ್ತಾರೆ. ಆ ಬಳಿಕ ಮುಂದೆ ಆಸಕ್ತ ರೈತರಲ್ಲಿಗೆ ಕಳುಹಿಸಬಹುದಾಗಿದೆ. ಮುಂಬರುವ ದಿನಗಳಲ್ಲಿ 3000 ಕಾರ್ಮಿಕರನ್ನು ಈ ಕಡೆ ತರಿಸಿ “ನಮ್ಮ ಗದ್ದೆ , ನಮ್ಮ ಅಕ್ಕಿ” ಎನ್ನುವ ಚಿಂತನೆಯ ಮೂಲಕ ತಾಲೂಕಿನಲ್ಲೂ ಭತ್ತ ಬೆಳೆಯಲು ಪ್ರೋತ್ಸಾಹಿಸುವ ಕೆಲಸ ನಡೆಸಲಾಗುವುದು ಎಂಬುದು ಪ್ರದೀಪ್ ಕನಸು. ಆದರೆ ಈ ಕಾರ್ಮಿಕರು ಅಡಿಕೆ ತೋಟಕ್ಕೆ ಒಗ್ಗಿಕೊಳ್ಳುವುದು ಕೊಂಚ ಕಷ್ಟವೇ ಆಗಿದೆ. ಏಕೆಂದರೆ ತೋಟದ ಕೆಲಸವು ದಿನದಿಂದ ದಿನಕ್ಕೆ ಬದಲಾಗುತ್ತಾ ಇರುತ್ತದೆ. ಹೀಗಾಗಿ ಇದೆಲ್ಲವೂ ತರಬೇತಿಯಿಂದ ಅಸಾಧ್ಯ.

ಒಟ್ಟಿನಲ್ಲಿ ಕಾರ್ಮಿಕರ ಕೊರತೆಯಿಂದ ಚಿಂತಿತರಾಗಿದ್ದ ರಬ್ಬರ್ ಬೆಳೆಗಾರರಿಗೆ ಇಂದೊಂದು ಬೆಳವಣಿಗೆ ಆಶಾದಾಯಕವಾಗಿದೆ.ಕಾರ್ಮಿಕರಿಗಾಗಿ ಪರಿತಪಿಸುತ್ತಿದ್ದ ಬೆಳೆಗಾರರಿಗೆ ಕೊಂಚ ರಿಲೀಫ್ ಸಿಕ್ಕಂತಾಯಿತು. ಸಹಕಾರಿ ಮನೋಭಾವದ ಮೂಲಕ ಬೆಳೆಗಾರರಿಗೆ ಇನ್ನಷ್ಟು ಹೊಸ ನಿರೀಕ್ಷೆಗಳು ಚಿಗುರಿದಂತಾಗಿದೆ.


(ಈ ಸುದ್ದಿಯ ಇಂದಿನ ಹೊಸದಿಗಂತ ದಿನಪತ್ರಿಕೆಯಲ್ಲಿ ಪ್ರಕಟವಾಗಿದೆ. )

01 ಅಕ್ಟೋಬರ್ 2011

ಆತ ಹೇಳಿದ ಕತೆ. .

ನನ್ನ ಸ್ನೇಹಿತನೊಬ್ಬ ಒಂದು ಕತೆ ಬಿಡಿಸಿಟ್ಟ. ಅದು ನಮ್ಮ ಊರ ಭಾಷೆಯಲ್ಲಿ ಹೇಳುವುದಾದರೆ ಮಾತನಾಡಲೇಬಾರದು.ಮಾತನಾಡಿದರೆ ಆತ ಕೆಟ್ಟವನು. ಆದರೆ ಇಂದು ಅಂತಹ ಪರಿಸ್ಥಿತಿ ಇಲ್ಲ ಅಂತ ನಾನು ಅಂದುಕೊಂಡಿದ್ದೇನೆ.

ಆತ ಹೇಳಿದ ಸಂಗತಿ , ಅವರಿಗೆ ಮದುವೆಯಾಗಿ 15 ವರ್ಷಗಳಾಗಿವೆ. ಆದರೆ ಇನ್ನೂ ಮಕ್ಕಳಾಗಿಲ್ಲ. ಅದಕ್ಕಾಗಿ ದೇವರು , ಮಂತ್ರ , ಪೂಜೆ , ಹರಕೆ ಹೀಗೆ ಎಲ್ಲವೂ ಆಗಿತ್ತು. ಆದರೆ ಮತ್ತೂ ಮಕ್ಕಳಾಗಿಲ್ಲ. ಕಾರಣ ಏನು ಎಂದು ವೈಜ್ಞಾನಿಕವಾಗಿ ಕಂಡುಹುಡುಕುವ ಕೆಲಸವನ್ನೂ ಮಾಡಿಲ್ಲ. ಇತ್ತೀಚೆಗೆ ಅವರು ದೇವಸ್ಥಾನವೊಂದರಲ್ಲಿ ಪೂಜೆ ಮಾಡಿಸಲು ಬಂದಿದ್ದರಂತೆ. ಅಲ್ಲಿ ಅಂತಹ ಜನರನ್ನೇ ಮೋಸ ಮಾಡುವ ಗುಂಪೊಂದು ಇತ್ತು. ಆಸೆ ಹುಟ್ಟಿತು ಮತ್ತೂ ಒಂದಿಪ್ಪತ್ತು ಸಾವಿರ ಖರ್ಚು ಮಾಡಿದರು. ಆದರೂ ಪ್ರಯೋಜನವಿಲ್ಲ. ಕೊನೆಗೆ ಯಾರೋ ಹೇಳಿದಂತೆ ಸರಿಯಾದ ವೈದ್ಯರಲ್ಲಿ ಗುಪ್ತವಾಗಿ ಮಾತನಾಡಿ , ಆಪ್ತ ಸಮಾಲೋಚನೆ ಮಾಡಿ ಎಂದು ಸಲಹೆ ನೀಡದರಂತೆ. ಅಂತೂ ಹೆಂಡತಿಯ ಒತ್ತಾಯಕ್ಕೆ ಆಪ್ತ ಸಮಾಲೋಚನೆಗೆ ಹೋದರಂತೆ. ಆಗ ತಿಳಿಯಿತು ಅವನಿಗೇ ಚಿಕ್ಕದೊಂದು ಸಮಸ್ಯೆ.ಅದಕ್ಕಾಗಿ ಇಷ್ಟು ವರ್ಷ ಕಾಯಲೇ ಬೇಡವಿತ್ತು. ಚಿಕ್ಕದೊಂದು ಸರ್ಜರಿ ಮಾಡಿಸಿದರೆ ಮುಗೀತು ಎಂದರಂತೆ ವೈದ್ಯರು. ಒಂದು ವಾರದ ನಂತರ ಅದೂ ಆಯಿತು. ಆ ಬಳಿಕ ಅವಳು ಮಗುವನ್ನೂ ಪಡೆದಳು. ಇದು ಅವರೊಬ್ಬರ ಕತೆ ಅಲ್ಲ. ಅದೆಷ್ಟೋ ಜನರ ಕತೆ.

ಆದರೆ ಇಲ್ಲಿ ವಿಷಯ ಏನು ಗೊತ್ತಾ ? ಆಪ್ತ ಸಮಾಲೋಚಕರದ್ದೇ. ಅವನು ಅಂತಾನೆ ಈ ಸಮಾಲೋಚಕರು ಯಾರು ಎಲ್ಲಿರುತ್ತಾರೆ ಅಂತಾನೆ ಹಲವರಿಗೆ ಗೊತ್ತೇ ಇರುವುದಿಲ್ಲ. ಅವರಲ್ಲಿ ಕೆಲವರು ಸಮಾಲೋಚನೆಗಾಗಿ ಶುಲ್ಕವನ್ನೂ ವಿಧಿಸುತ್ತಾರೆ. ಅದೂ ಪರವಾಗಿಲ್ಲ. ಆತ ಹೇಳಿದ ಈಗ ಅದಕ್ಕಾಗಿಯೇ ಕೆಲವು ಬ್ಲಾಗ್‌ಗಳು ಶುರುವಾಗಿದೆ.ಅವೂ ಕೂಡಾ ಪ್ರಯೋಜನವಾದೀತು ಅಂತಾನೆ ಆತ.ಅದರ ಲಿಂಕ್ ಇಲ್ಲಿದೆ (http://www.dehaveene.blogspot.com/) ಬೇಕಾದವರು ನೋಡಬಹುದು. ಅದರ ಜೊತೆಗೆ ಆತ ಹೇಳಿದ ಈ ಸಮಾಲೋಚಕರಲ್ಲಿ ಕೆಲವರು ಗಂಟೆಗೆ 1 ಸಾವಿರ ರೂಪಯಿ ಶುಲ್ಕ ವಿಧಿಸುತ್ತಾರೆ ಅಂತೆ. .!.

ಇದು ಅಸಹ್ಯ ಅಂತ ಭಾವಿಸಬಾರದು. ಏಕೆಂದರೆ ಬದುಕು ಪೂರ್ತಿಯಾಗಬೇಕಾದರೆ ಅದೂ ಬೇಕು. ಅದೇ ಬದುಕು ಆಗಬಾರದು ಅಷ್ಟೆ. ಅದಿಲ್ಲದೇ ಇದ್ದಿದ್ದರೆ ಜಗತ್ತು ಯಾವಾಗಲೋ ಮುಗಿದುಹೋಗುತ್ತಿತ್ತು ಅಲ್ಲವೇ. ಅನಾದಿ ಕಾಲದ ದೇವಸ್ಥಾನದ ಕೆತ್ತನೆಗಳಲ್ಲೂ ಅದ್ಭುತವಾಗಿ ಹೇಳಲಾಗುತ್ತಿತ್ತು.


20 ಆಗಸ್ಟ್ 2011

ಯಾರು ಭ್ರಷ್ಟಾಚಾರಿ . . ?


ಆತನೊಬ್ಬ ಪದವೀಧರ. ಸಣ್ಣ ನೌಕರಿಯಲ್ಲೂ ಇದ್ದಾನೆ. ಭ್ರಷ್ಟಾಚಾರ ನಿರ್ಮೂಲನೆಯಾಗಬೆಕು ಅಂತಾನೆ.ಅದರ ಬಗ್ಗೆ ಪ್ರತಿ ದಿನವೂ ಮಾತನಾಡುತ್ತಾನೆ. ಈಗಂತೂ ಯಾವಾಗಲೂ ಅದೇ ಮಾತು. ಆದರೆ . . ಆತನೇ ಹೇಳಿದ ಸಂಗತಿಯೊಂದು,

ಇತ್ತೀಚೆಗೆ ಒಂದು ಘಟನೆ ನಡೆಯಿತು. ಆತನಿಗೊಂದು ಜನ್ಮ ದಿನಾಂಕದ ದೃಢೀಕರಣ ಪತ್ರ ಬೇಕಾಯಿತು. ಅದಕ್ಕಾಗಿ ಆತ ಸುಮಾರು 60 ಕಿಲೋಮೀಟರ್ ಹೋಗಬೇಕು. ಬೆಳಗ್ಗೆ ಬಸ್ಸಲ್ಲಿ ಹೋದರೆ ಆತ ಬರುವಾಗ ಹೆಚ್ಚೂಕಮ್ಮಿ ಸಂಜೆಯಾಗುತ್ತದೆ. ಅದೂ ಅಲ್ಲದೆ ಆತನ ಒಂದು ದಿನ ರಜೆಯೂ ಹಾಕಬೇಕಾಗುತ್ತದೆ.

ಹಾಗೇ ಆತ ಅಂದೊಂದು ದಿನ ಹೊರಟೇ ಬಿಟ್ಟ. ಅದು ಪುರಸಭೆ. ಹೋದವನೇ ತನ್ನ ದಾಖಲೆ ಬೇಕೆಂದು ಕೇಳಿದ. ಕುಳಿತುಕೊಳ್ಳಿ ಸ್ವಲ್ಪ, ಎಂಬ ಉತ್ತರ ಆ ಅಧಿಕಾರಿಯದ್ದು. ಸ್ವಲ್ಪ ಹೊತ್ತಾದ ಮೇಲೆ ಒಂದು ಅರ್ಜಿ ಕೊಡಿ ಎಂದು ಹೇಳಿದ ಅಧಿಕಾರಿ. ಅದನ್ನೂ ಬರೆದುಕೊಟ್ಟಾಯಿತು. ಎರಡು ದಿನ ಬಿಟ್ಟು ಬನ್ನಿ ಎಂದು ಹೇಳಿದ ಅಧಿಕಾರಿ. ಇವತ್ತಿಗೆ ಆಗೋದಿಲ್ಲ ಎಂದ.

ಸ್ವಲ್ಪ ಯೋಚಿಸಿದ , ಇವತ್ತೇ ಕೊಟ್ಟರೆ ಒಳ್ಳೆಯದು ಎಂದು ಮತ್ತೆ ವಿನಂತಿಸಿದಾಗ . . ಇಲ್ಲ ಎನ್ನುವ ಉತ್ತರ.

ಇನ್ನೂಮ್ಮೆ, ಸ್ವಲ್ಪ ಇವತ್ತೇ.. . ಅಂತ ಕಿಸೆಗೆ ಕೈ ಹಾಕಿದಾಗ, ಅತ್ತ ಕಡೆಯಿಂದ ಡ್ರಾವರ್ ಹಿಂದಕ್ಕೆ ಬಂತು. ಈತನಿಂದ 100 ರೂಪಾಯಿ ತಟ್ಟೆಗೆ ಬಿತ್ತು.

ತಕ್ಷಣವೇ ಪ್ಲೇಟು ಬದಲಾಯಿತು. ಈಗಲೇ ಕೊಡುತ್ತೇನೆ . .!.

ಅಂತೂ 10 ನಿಮಿಷದಲ್ಲಿ ಸಿಕ್ಕೇಬಿಟ್ಟಿತು ಇವನಿಗೆ ಬೇಕಾದ ದಾಖಲೆ.

***************

ಈ ಘಟನೆಯ ನಂತರ ಆತ ಹೇಳುತ್ತಾನೆ ,

ನನಗೆ 100 ರೂಪಾಯಿ ಪ್ರಶ್ನೆ ಅಲ್ಲ. ನೋಡಿ ನನಗೆ ಬಸ್ಸಿಗೆ ಹೋಗಿ ಬರಲು 70 ರೂಪಾಯಿ ಬೇಕು. ಅದರ ಜೊತೆಗೆ ಇತರ ಖರ್ಚು ಅಂತ 30 ರೂಪಾಯಿ ಆಗುತ್ತೆ. ಇನ್ನು ಒಂದು ದಿನ ರಜೆ ಬೇರೆ ಅದಕ್ಕೆ ಕನಿಷ್ಟ 230 ರೂಪಾಯಿ ಲಾಸ್ ಆಗುತ್ತದೆ. ಹಾಗಿರುವಾಗ ನಾನು 100 ರೂಪಾಯಿ ಆತನಿಗೆ ಕೊಟ್ಟರೆ ಏನಾಯಿತು. ಇನ್ನೊಮ್ಮೆ ಹೋಗಲು ಉಳಿಯಿತಲ್ಲಾ , ಹಣವೂ, ಶ್ರಮವೂ ಉಳಿಯತಲ್ಲಾ ಅಂತ ಹೇಳುತ್ತಾನೆ ಆತ.

ಈಗ ಭ್ರಷ್ಟಾಚಾರಿ ಯಾರು ?.ಇದೆಲ್ಲವನ್ನೂ ತೊಡೆದು ಹಾಕೋದೆ ಹೇಗೆ?.

ಈಗ ನನಗೆ ನೆನೆಪಾಗುತ್ತದೆ , ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿಗಳು ಇತ್ತೀಚೆಗೆ ಹೇಳಿದರು , ಕೊಡುವ ಕೈಗಳು ಕಡಿಮೆಯಾದಾಗ ಕೊಳ್ಳುವ ಕೈಗಳು ಕಡಿಮೆಯಾಗುತ್ತದೆ. ಕೊನೆಗೇ ಅದೇ ಇಲ್ಲವಾಗುತ್ತದೆ. ಹಾಗಾಗಿ ಇಂದು ಎಲ್ಲೆಡೆ ನಡೆಯುತ್ತಿರುವ ಧರಣಿ ಜೊತೆಗೆ ನಮ್ಮೊಳಗೇ ಕೂಡಾ ಧರಣಿಯಾಗಬೇಕು ಎಂದು ಹೇಳಿದ್ದು ಅನುರಣಿಸುತ್ತಲೇ ಇದೆ.



31 ಜುಲೈ 2011

ರಾಜಕೀಯ ತಳಮಳ - ಶಿಸ್ತಿನ ಪಕ್ಶದಲ್ಲಿ ಅಶಿಸ್ತು . .?

ಇಂದಿನ ರಾಜಕೀಯ ಸನ್ನಿವೇಶ ನೋಡಿದಾಗ ಮನಸ್ಸಿನ ಭಾವನೆಗಳನ್ನು ಹೊರಹಾಕಲೇ ಬೇಕೆನಿಸಿತು.

ಮೊನ್ನೆ ರಾಜ್ಯದಲ್ಲಿ ಬಿಜೆಪಿ ಸರಕಾರದಲ್ಲಿ ರಾಜಕೀಯದ ಬಿಸಿ ಬಿಸಿ ಚರ್ಚೆಗಳು ನಡೆಯುತ್ತಿತು. ಕರ್ನಾಟಕದ ಬಿಜೆಪಿಗೆ ಇದು ಹೊಸದಲ್ಲ ಬಿಡಿ.ಇಲ್ಲಿ ಶಿಸ್ತಿನ ಪಕ್ಷಕ್ಕೆ ಇದೆಲ್ಲಾ ಮಾಮೂಲು ಅಂತಾಗಿದೆ. ಹಾಗಿದ್ದರೂ ಈ ಬಾರಿ ಮಾತ್ರಾ ಗಂಭೀರ ವಿಚಾರ ಇದು. ಲೋಕಾಯುಕ್ತರು ಸಲ್ಲಿಸಿದ್ದ ಗಣಿ ವರದಿಯಲ್ಲಿ ಮುಖ್ಯಮಂತ್ರಿಗಳ ಹೆಸರೂ ಇದೆ. ಹಾಗಾಗಿ ಈಗಂತೂ ನೈತಿಕತೆಯ ಪ್ರಶ್ನೆ. ಇದುವರೆಗೆ ಕರ್ನಾಟಕದ ಬಿಜೆಪಿಯಲ್ಲಿ ಇದು ಇದ್ದಂತೆ ಕಂಡುಬಂದಿರಲಿಲ್ಲ. ಆದರೆ ಈಗ ಇಡೀ ದೇಶದ ಜನ ನೋಡುತ್ತಿದ್ದಾರೆ ಈ ವರದಿಯನ್ನು ಅದರ ಜೊತೆಗೆ ಭ್ರಷ್ಠಾಚಾರದ ಬಗ್ಗೆ ಸಾಮಾನ್ಯ ಮನುಷ್ಯನೂ ಮಾತನಾಡುತ್ತಿದ್ದಾನೆ ಹಾಗಾಗಿ ಸರಕಾರಕ್ಕೆ ಅದಕ್ಕಿಂತಲೂ ಹೆಚ್ಚು ದೇಶದ ಬಿಜೆಪಿಗೆ ಇದೊಂದು ಮುಖ್ಯ ವಿಷಯ. ಹಾಗಾಗಿ ಇದು ತೀವ್ರ ಸ್ವರೂಪ ಪಡೆದುಕೊಂಡಿತು ಎನ್ನಿ.

ವಿಷಯ ಅದಲ್ಲ.
ಕರ್ನಾಟಕದಲ್ಲಿ ಮಾತ್ರವಲ್ಲ ಇಡೀ ದಕ್ಷಿಣ ಭಾರತದ ಮೊದಲ ಬಿಜೆಪಿ ಸರಕಾರ ಎಂಬ ಖ್ಯಾತಿಗೂ ಬಂದಿತು. ಆಗ ಎಷ್ಟು ಜನ ಸಂತಸ ಪಟ್ಟವರು. ಮೊನ್ನೆ ನನಗೊಬ್ಬರು ಹಿರಿಯರು ಹೇಳಿದರು , ಅಂದು 1978 - 80 ರ ಸುಮಾರಿಗೆ ಒಂದೇ ಒಂದು ಸೀಟು ಇದ್ದಿರಲಿಲ್ಲ ಬಿಜೆಪಿಗೆ , ಜನಸಂಘಕ್ಕೆ , ಆಗ ನಾವು ನಮ್ಮ ತೋಟ ಮಾರಿ ಪಾರ್ಟಿಗಾಗಿ ಕೆಲಸ ಮಾಡಿದ್ದೆವು. ಅದು ಮಾತ್ರವಲ್ಲ ಎಷ್ಟು ಜನ ಇದರಲ್ಲಿ ಹೋರಾಡಿದ್ದರು , ಆಗ ಅಧಿಕಾರ ಎಂಬುದು ನಮಗೆ ಕನಸಾಗಿತ್ತು ಎಂದು ಅವರು ವಿವರಿಸುತ್ತಿದ್ದರು , ಅದೆಷ್ಟೂ ಜನ ನ್ಯಾಯಕ್ಕಾಗಿ ಹೋರಾಡಿದ್ದಾರೆ ಇದೇ ಇಂದಿನ ಬಿಜೆಪಿಯಲ್ಲಿ, ಆದರೆ ಅದು ಅಧಿಕಾರಕ್ಕೆ ಅಲ್ಲ , ಊರ ಜನರಿಗಾಗಿ. ಹೀಗಿದ್ದ ಪಕ್ಷ ಇವತ್ತು ನೋಡಿದರೆ ಅಧಿಕಾರಕ್ಕಾಗಿಯೇ ಉಳಿದುಕೊಂಡಂತಿದೆ ಎನ್ನುತ್ತಾರೆ ಅವರು.ಆಗ ಇದೇ ಪಾರ್ಟಿಯಲ್ಲಿ ಜಾತಿ ಎಂಬುದು ಇದ್ದೇ ಇರಲಿಲ್ಲ.ಎಲ್ಲರೂ ಸಮಾನರು. ಒಬ್ಬ ನಾಯಕ.ಅವನ ಮಾತೇ ಅಂತಿಮ. ಆದರೆ ಎಲ್ಲರೂ ಜೊತೆಯಾಗಿ ಕೂತು ಚರ್ಚಿಸಿ ಮುಂದಿನ ನಡೆ ಇತ್ತು. ಆ ಬಳಿಕ ಎಲ್ಲವೂ ನಾಯಕ ಹೇಳಿದಂತೆ.ನಾಯಕನೇ ಮುಂದೆ.ಸುಳಿದವರು ಆತನ ಹಿಂದೆ. ಆದರೆ ಇವತ್ತು ನೋಡಿ ಎಲ್ಲರೂ ನಾಯಕರೇ , ಜಾತಿ ಜಾತಿ ಅಂತ ಪಕ್ಷದೊಳಗ ಜಾತಿ ನಾಯಕರು ಆಗಿ ಬಿಟ್ಟಿದ್ದಾರೆ.

ಇದೆಲ್ಲಾ ನೋಡುವಾಗ ನನಗನ್ನಿಸುತ್ತದೆ ನಾವು ಇದಕ್ಕೆನಾ ಕೆಲಸ ಮಾಡಿದ್ದು ಅಂತ ಅವರು ನೊಂದುಕೊಂಡು ಹೇಳುತಿದ್ದರು.

ಅವರು ಹೇಳಿದ್ದು ನಿಜ ಅನ್ನಿ.

ಹಿಂದೆಲ್ಲಾ ಬಿಜೆಪಿಯಲ್ಲಿ ಓಟಿಗೆ ನೋಟು ಕೊಡುತ್ತಿರಲಿಲ್ಲ. ಕಾರ್ಯಕರ್ತರೆಲ್ಲರೂ ಅವರೇ ಕೈಯಿಂದ ದುಡ್ಡು ಹಾಕಿ ಚುನಾವಣೆಗೆ ಶ್ರಮಿಸುತ್ತಿದ್ದರು. ಆದರೆ ಇಂದು ಅದೇ ಬಿಜೆಪಿಯಲ್ಲಿ ದುಡ್ಡು ಕೊಡದೆ ಚುನಾವಣೆಯಲ್ಲಿ ಯಾವೊಬ್ಬ ಕಾರ್ಯಕರ್ತನೂ ಇಳಿಯುವುದಿಲ್ಲ. ಅದು ಬಿಡಿ ಅಂದು ಒಂದು ವಾರ್ಡ್‌ನಲ್ಲಿ ಇಷ್ಟೇ ಓಟು ಬಿಜೆಪಿಗೆ ಅಂತ ಲೆಕ್ಕ ಮಾಡಿ ಹೇಳುತ್ತಿದ್ದರು ಕಾರ್ಯಕರ್ತರು , ಆದರೆ ಇಂದು ಈ ಲೆಕ್ಕ ಎಲ್ಲಾ ತಲೆಕೆಳಗಾಗಿದೆ. ಹಾಗೆ ಲೆಕ್ಕ ಮಾಡುವವರೂ ಇಲ್ಲ , ಕೇಳುವವರೂ ಇಲ್ಲ.

ಇನ್ನೊಂದು ಈಗಿನ ರಾಜಕೀಯದಲ್ಲಿ ನನಗೆ ಅನ್ನಿಸಿದ್ದು , ಬಿಜೆಪಿ ಹೈಕಮಾಂಡ್ ದುರ್ಬಲವೆ ಅಂತ?. ಯಾಕೆಂದರೆ ಇಷ್ಟಲ್ಲಾ ರಾಜಕೀಯ ಪ್ರಹಸನಗಳು ನಡೆಯುತ್ತಿದ್ದರೂ ಹೈಕಮಾಂಡ್ ಯಾಕೆ ಸುಮ್ಮನೆ ಇತು. ನೋಡಿ ಆಂಧ್ರಪ್ರದೇಶದಲ್ಲಿ ಜಗನ್‌ಮೋಹನ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಏನು ಮಾಡಿತು? , ಇತ್ತ ನೋಡಿ ಕೇರಳದಲ್ಲಿ ಅಚ್ಯುತಾನಂದನ್ ಹಾಗೂ ಪಿಣರಾಯಿ ನಡುವಿನ ಜಗಳದಲ್ಲಿ ಏನು ಮಾಡಿತು ಅವರ ಹೈಕಮಾಂಡ್ ? ಅವುಗಳೆಲ್ಲಾ ಅಷ್ಟು ಬಲಾಡ್ಯವಾಗಿದ್ದರೆ ಬಿಜೆಪಿ ಹೈಕಮಾಂಡ್ ಯಾಕೆ ದುರ್ಬಲವಾಗಿದೆ ಅನ್ನೋದೇ ವಿಶೇಷ. . !

ಏನೇ ಇರಲಿ. ಶಿಸ್ತಿನ ಪಕ್ಷ , ಸಂಘಪರಿವಾರದ ಮಾರ್ಗದರ್ಶನದಲ್ಲಿ ಬೆಳೆಯುವ ಪಕ್ಷದಲಿ ಹೀಗೆ ಆಗಬಾರದಿತ್ತು.ಈಗ ಆದದ್ದಕ್ಕೆ ಮುಂದೆ ಪ್ರಾಯಶ್ಚಿತ್ತ ಇದ್ದೇ ಇದೆ ಬಿಡಿ.

23 ಜುಲೈ 2011

ಈತ ನಮ್ಮೂರಿನ ಮಿತ್ರ . .

ನಮ್ಮ ಊರಿನಲ್ಲಿ ಈಗ ಈತ ಅತಿಥಿಯಲ್ಲ.ನಮ್ಮೂರಿನ ಜನರಿಗೆ ರಕ್ಷಣೆಯ ನೀಡುವ ಆಪ್ತ ಮಿತ್ರ. ಈತ ಮನೆ ಮನೆಗೆ ಹೋಗುತ್ತಾ ಜನರಿಗೆ , ಬೆಳೆಗಳಿಗೆ ರಕ್ಷಣೆ ನೀಡುವ ಅಭಯದಾತ. ಈತ ಬೇರೆ ಯಾರೂ ಅಲ್ಲ ಆಟಿ ಕಳೆಂಜ. . .!




ನಮ್ಮಲ್ಲೀಗ ಆಟಿ ತಿಂಗಳು.

ಮಳೆ ಜೋರಾಗೇ ಬರ್ತಾ ಇದೆ. ಮಳೆಯ ಹಾಡಿನ ಜೊತೆಗೆ ಮಳೆಯೊಂದಿಗೆ ಹೆಜ್ಜೆ ಹೆಜ್ಜೆ ಹಾಕುತ್ತಾ ಕುಣಿದಾಡುತ್ತಾ ಕೆಲವರಿಗೆ ಸುಸ್ತಾಯಿತು.ಮಳೆಯೂ ಹಾಗೆ ಇಲ್ಲಿ ಹೆಜ್ಜೆ ಹಾಕುವವರ ಖುಷಿ ನೋಡಿ ಜೋರಾಗಿ ಸುರೀತಾ ಇದೆ. ಇದು ಇಂದಲ್ಲ ಹಿಂದಿನಿಂದಲೂ ಹೀಗೆಯೇ. ಅದಕ್ಕೆ ಈ ಜೋರಾಗಿ ಮಳೆ ಸುರಿಯುವ ಕಾಲವನ್ನು ಆಟಿ ಅಂತ ಕರೆದರು ಹಿರಿಯರು. ಹೀಗಾಗಿ ಆಟಿ ಅಂದ್ರೆ ಅನೇಕರಿಗೆ ಭಯ. ಮಳೆ ಏನಾದ್ರೂ ತೊಂದರೆ ಕೊಟ್ರೆ ಅಂತ ಭಯ. ಈ ಭಯ ಹೋಗಲಾಡಿಸಲು ಬರುತ್ತಿದ್ದಾನೆ ಈ ಆಟಿ ಕಳೆಂಜ. . .!

ನಮ್ಮಲ್ಲೆಲ್ಲಾ ಆಟಿ . . ಅಲ್ಲೆಲ್ಲಾ ಹೇಳುವ ಆಷಾಡ ಮಾಸ.

ಇಲ್ಲಿ ಆಟಿ ತಿಂಗಳು ಅಂದ್ರೆ ಎಲ್ಲದಕ್ಕೂ ರೆಸ್ಟ್.

ಆಟಿ ಅಂದ್ರೆ ತಂಗಳು ಅನ್ನಕ್ಕೂ ತತ್ತ್ವಾರದ ಸಮಯ. ಅಂದ್ರೆ ಅಷ್ಟೂ ಕಷ್ಟದ ಸಮಯ ಅಂತ ಹಿಂದೊಂದು ಕಾಲದಲ್ಲಿ ವಾಡಿಕೆ ಇತ್ತಂತೆ. ಹಿರಿಯರು ಆ ಬಗ್ಗೆ ಒಂದೊಂದು ಕತೆ ಹೇಳ್ತಾರೆ. ಕೆಲವು ಕಡೆ ಊಟ ಮಾಡದೇ ಕಾಡಲ್ಲಿ ಸಿಗೋ ವಸ್ತುಗಳಲ್ಲೇ ಕಾಲ ಕಳೆದವ್ರೂ ಇದ್ರಂತೆ.ಇದ್ರ ಜತೆಗೆ ರೋಗಗಳ ಭಯ ಬೇರೆ.ಹೀಗಾಗಿ ಜನ ಹೆದರುವ ಕಾಲವಂತೆ ಅದು.ಅದಕ್ಕಾಗಿ ಈ ಆಟಿ ತಿಂಗಳಿನಲ್ಲಿ ವಿವಿದ ಆಚರಣೆಗಳು ಇರುತ್ತದೆ. ಒಂದು ಕಡೆ ಧೋ... ಸುರಿಯುವ ಮಳೆ ಇನ್ನೊಂದು ಕಡೆ ಸುಡು ಬಿಸಿಲು. ಇಂತಹ ಸಮಯದಲ್ಲಿ ಸಹಜವಾಗಿಯೇ ರೋಗಗಳು ಬಾಧಿಸುತ್ತದೆ. ಅದಕ್ಕಾಗಿ ಊರ ಮಾರಿ ಓಡಿಸುವುದು ಮತ್ತು ಊರಿನ ಮಾರಿ ಕಳೆಯಲು ಆಟಿ ಕಳೆಂಜ ಬರುತ್ತಾನೆ.ಈ ಮೂಲಕ ಮಾನಸಿಕ ನೆಮ್ಮದಿಯನ್ನು ಕಂಡುಕೊಳ್ಳಲಾಗುತ್ತಿತ್ತು.


ಮಳೆಗಾಲದಲ್ಲಿ ಸುರಿಯುವ ಅಗಾಧವಾದ ಮಳೆಯಿಂದ ಜನ ಮಾನಸಿಕವಾಗಿ ನೊಂದುಕೊಳ್ಳುವ ಈ ಸಮಯದಲ್ಲಿ ತುಳುನಾಡಿನಲ್ಲಿ ಆಟಿ ಕಳೆಂಜ ಮನೆ ಮನೆಗೆ ತೆರಳಿ ಜನರ ಭಯವನ್ನು ನಿವಾರಿಸುತ್ತಾನೆ. ತುಳು ನಾಡಿನಲ್ಲಿ ಮಳೆಗಾಲದಲ್ಲಿ ಎಡೆಬಿಡದೆ ಸುರಿಯುವ ಮಳೆಗೆ ಕೂಲಿಕಾರರಿಗೆ , ಕೃಷಿಕರಿಗೆ ಯಾವುದೇ ಕೆಲಸ ಮಾಡಲಾಗದೇ ಸಂಪಾದಿಸಲೂ ಸಾದ್ಯವಾಗದೇ ಇರುವ ಸಂದರ್ಭದಲ್ಲಿ ಬೇಸಗೆಯಲ್ಲಿ ಕೂಡಿಟ್ಟ ಆಹಾರ, ಧವಸ ಧಾನ್ಯಗಳೇ ಹೊಟ್ಟೆ ಹೊರೆಯಲು ಜೀವನಾಧಾರ.ಆದರೆ ಅದು ಕೂಡಾ ಈ ಆಟಿಯ ಸಮಯದಲ್ಲಿ ಮುಗಿಯಲು ಆರಂಭವಾಗುತ್ತದೆ. ಇದೇ ವೇಳೆ ಊರಿನಲ್ಲಿ ರೋಗರುಜಿನಗಳು ಕಾಣಿಸಿಕೊಳ್ಳುತ್ತವೆ.ಜನ ಭಯಭೀತರಾಗುತ್ತಾರೆ.ಒಟ್ಟಿನಲ್ಲಿ ಪ್ರಕೃತಿ ವಿಕೋಪದಿಂದಾಗಿ ಊರಿನಲ್ಲೆಲ್ಲಾ ಕಂಗಾಲಾಗಿರುವ ಈ ಸಮಯದಲ್ಲಿ ಜನರ ಕಷ್ಟವನ್ನು ನಿವಾರಿಸಲು ಜಾನಪದ ಆಚರಣೆಯ ಮೂಲಕ ಆಟಿ ಕಳೆಂಜ ಮನೆ ಮನೆಗೆ ಬಂದು ಮನೆಯಂಗಳದಲ್ಲಿ ಕುಣಿದು ಮನೆ ಒಡತಿ ನೀಡುವ ಹುಳಿ, ತೆಂಗಿನಕಾಯಿ, ಬಟ್ಟೆ, ತೆಂಗಿನ ಎಣ್ಣೆ ಇತ್ಯಾದಿಗಳನ್ನು ಪಡೆದು ತೋಟದಿಂದ ಫಲವಸ್ತುವನ್ನು ಪಡೆದು ಮನೆಗೆ ಬಂದ ಮಾರಿಯನ್ನು ಕಳೆಂಜ ಕಳೆಯುತ್ತಾನೆ ಎಂಬ ನಂಬಿಕೆಯಿದೆ.ಆಟಿ ಕಳೆಂಜಕ್ಕೆ ಕಿನ್ನಿ ಎಂಬ ಇನ್ನೊಂದು ವೇಷವೂ ಸಾಥಿಯಾಗುತ್ತದೆ. ಊರಿನಲ್ಲಿ ಭೂತ ನರ್ತನ ಮಾಡುವ ಕಲಾವಿದರು ಈ ಕಳೆಂಜ ವೇಷವನ್ನು ಹಾಕುತ್ತಾರೆ. ತೆಂಗಿನ ಸಿರಿ , ಸುಣ್ಣ , ಬಣ್ಣಗಳಿಂದ ಅಲಂಕಾರಗೊಂಡ ಬಳಿಕ ಊರಿನ ಮನೆ ಮನೆಗಳಿಗೆ ತೆರಳುತ್ತಾರೆ. ತೆಂಬರೆಯ ಹಿಮ್ಮೇಳಕ್ಕೆ ಆಟಿ ಕಳೆಂಜನು ಮನೆಯಂಗಳದಲ್ಲಿ ಛತ್ರಿಯನ್ನು ಕೈಯಲ್ಲಿ ಹಿಡಿದುಕೊಂಡು ತಿರುಗಿಸುತ್ತಾ ಕುಣಿಯುತ್ತಾನೆ.ಹಿಮ್ಮೇಳದವರು ಜಾನಪದ ಪಾಡ್ಡನವನ್ನು ಹೇಳುತ್ತಾ ಕಳೆಂಜನ ಇತಿಹಾಸವನ್ನು ವಿವರಿಸುತ್ತಾರೆ. ಕೊನೆಗೆ ತೋಟಕ್ಕೆ ತೆರಳಿ ಫಲ ವಸ್ತುವನ್ನು ಕೊಂಡೊಯ್ಯುವ ಪದ್ದತಿ ಇದೆ.ಇದರಿಂದಾಗಿ ಕೃಷಿಗೆ ತಟ್ಟಿದ ರೋಗಗಳೂ ಹೋಗುತ್ತವೆ ಎನ್ನುವ ನಂಬಿಕೆ ಇದೆ.ಇದೆಲ್ಲಾ ಒಂದು ಕತೆ

ನಮ್ಮೂರಲ್ಲಿ ಇಂದಿಗೂ ಈ ಆಚರಣೆ ಇದೆ ಎಂಬ ಖುಷಿ ನನಗೆ. ಆಚರಣೆ , ನಂಬಿಕೆ ಇರುವ ಊರಲ್ಲಿ ಮನುಷ್ಯರ ನಡುವಿನ ಸಂಬಂಧವೂ ಚೆನ್ನಾಗಿರುತ್ತೆ ಅಂತಾರಲ್ಲ.. ..!.

17 ಜೂನ್ 2011

ಇವರಿಗೆ ಮಳೆಯೇ ಛಾವಣಿ . . . !




ಇದು ಅಭಿವೃದ್ದಿ ಪಥದಲ್ಲಿ ಸಾಗುತ್ತಿರುವ ದೇಶ . ಆದರೂ ಎಲ್ಲೋ ಒಂದು ಕಡೆ ಮಾತ್ರಾ ಅಭಿವೃದ್ಧಿ ಪಥ ಇದೆ ಅನಿಸುತ್ತಾ ಇದೆ.ಸಮಗ್ರ ಅಭಿವೃದ್ದಿಯ ದಾರಿ ಇಂದಿಗೂ ಆಗಿಲ್ಲ ಅಂತ ಅನ್ನೋದು ಕಾಣ್ತಾ ಇದೆ. ಗ್ರಾಮೀಣ ಭಾರತ ಇನ್ನೂ ಕೂಡಾ ಪ್ರಕಾಶಿಸುತ್ತಿಲ್ಲ ಅಂತ ಈಗೀಗ ಅನಿಸುತ್ತಿದೆ. ಅದಕ್ಕೆ ಕಾರಣಗಳೂ , ಉದಾಹರಣೆಗಳೂ , ಉಪಮೆಗಳೂ ಸಾಕಷ್ಟು ಕಾಣುತ್ತಿದೆ. ಅಂತಹದ್ದೊಂದು ಪುರಾವೆ ಇಲ್ಲಿ ಕಂಡಿದ್ದೇನೆ.

ನೀವು ನಂಬುತ್ತೀರೋ ಬಿಡುತ್ತೀರೋ ಇದುವರೆಗೆ ಇವರು ಓಟು ಹಾಕಿಲ್ಲ , ಗುರುತಪತ್ರ ಇಲ್ಲವೇ ಇಲ್ಲ. ಹೆಚ್ಚೇಕೆ ಒಂದು ವಿಳಾಸವೂ ಇವರಿಗಿಲ್ಲ. ಹಾಕಿದ್ದರೂ ಇವರು ಭಾರತೀಯರು. . .!.

ಇದು ಇವರ ಸ್ಟೋರಿ . . , ಈ ಕೊರಗ ಕುಟುಂಬಗಳಿಗೆ ವಾಸಕ್ಕೊಂದು ತೀರಾ ಗುಡಿಸಲು. ಆದರೆ ಈ ಗುಡಿಸಲಿಗೆ ಆಗಸವೇ ಛಾವಣಿ , ಮಳೆ ಬಂದರೆ ಇಡೀ ರಾತ್ರಿ ಜಾಗರಣೆ. ಮಳೆ ಜೋರು ಸುರಿದರೆ ಕೊಡೆಯೇ ಛಾವಣಿ. ಆದರೂ ಅನಿವಾರ್ಯ, ಅಲ್ಲೇ ವಾಸ. ಇಂತಹ ಸಂಕಷ್ಠದ ಬದುಕಿನಲ್ಲಿರೋ ಜನ ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಗ್ರಾಮದ ಪೇರೋಳ್ತಡ್ಕದಲ್ಲಿ ವಾಸ ಮಾಡ್ತಾ ಇದ್ದಾರೆ ಅಂದರೆ ನಂಬುತ್ತೀರಾ.

ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಗ್ರಾಮದ ಪೆರೋಳ್ತಡ್ಕ ಎಂಬಲ್ಲಿ ಈಗ ಒಟ್ಟು 3 ಕೊರಗ ಕುಟುಂಬಗಳು ವಾಸಿಸುತ್ತಿವೆ. ಈ ಹಿಂದೆ ಇದೇ ಪ್ರದೇಶದಲ್ಲಿ 5 ಕೊರಗ ಕುಟುಂಬಗಳು ವಾಸಿಸುತ್ತಿತ್ತು. ಆದರೆ ಇಲ್ಲಿನ ಸಮಸ್ಯೆ ನೋಡಿ ಆ ಕುಟುಂಬ ಇಲ್ಲಿಂದ ವಲಸೆ ಹೋಗಿದೆ.ಈಗಿರುವ ಕೊರಗ ಕುಟುಂಬವೂ ಇದೇ ಯೋಚನೆಯಲ್ಲಿದೆ. ಆದರೆ ಏನೋ ಸವಲತ್ತು ಸಿಗುತ್ತದೆ , ಸೂರಿನ ವ್ಯವಸ್ಥೆ ಆಗುತ್ತದೆ ಎಂಬ ಆಶಾ ಭಾವನೆಯಲ್ಲಿದೆ. ಇಲ್ಲಿಗೆ 4 ವರ್ಷದ ಹಿಂದೆ ಧೂಮಡ್ಕ ಪ್ರದೇಶದಿಂದ ವಲಸೆ ಬಂದು ಸುಂದರ , ಕಲ್ಯಾಣಿ ಹಾಗೂ ಕಮಲ ಅವರ ಕುಟುಂಬ ಈಗಿನ ಪ್ರದೇಶದಲ್ಲಿ ನೆಲೆಸಿತ್ತು. ಇವರು ಸದ್ಯ ಇರುವ ಸ್ಥಳ ಸಾಮಾಜಿಕ ಅರಣ್ಯ ಪ್ರದೇಶದ ಜಾಗವಾಗಿದೆ. ಇಲ್ಲಿಗೆ ಬಂದು ನೆಲೆಸಿದ ಮೇಲೆ ಈ ಕುಟುಂಬ ಸ್ಥಳೀಯ ಪಂಚಾಯತ್ ಹಾಗೂ ವಿವಿದ ಇಲಾಖೆಗಳಿಗೆ ಮನವಿ ನೀಡಿ ನಿವೇಶನ ಹಾಗೂ ಮೂಲಸೌಕರ್ಯ ಸೇರಿದಂತೆ ಮನೆ ನೀಡುವಂತೆ ಮನವಿ ಮಾಡುತ್ತಾ ಬಂದಿತ್ತು. ಆದರೆ ವಿವಿದ ಕಾರಣಗಿಂದಾಗಿ ಈ ಬೇಡಿಕೆ ಈಡೇರಿಕೆ ಸಾಧ್ಯವಾಗಲೇ ಇಲ್ಲ. ಹೀಗಾಗಿ ಕಳೆದ 4 ವರ್ಷಗಳಿಂದ ಗುಡಿಸಲೇ ಇವರ ಮನೆಯಾಯಿತು. ಬೇಸಗೆಯಲ್ಲಾದರೆ ಪರವಾಗಿಲ್ಲ , ಮಳೆಗಾಲದಲ್ಲಿ ಈ ಕುಟುಂಬಗಳಿಗೆ ತೀರಾ ಸಂಕಷ್ಠದ ಪರಿಸ್ಥಿತಿ. ಹೀಗೇ, ಕಳೆದ ನಾಲ್ಕು ವರ್ಷಗಳಿಂದ ಸಂಕಷ್ಠದ ಬದುಕು ಸಾಗಿಸುತ್ತಿದ್ದಾರೆ. ಬದುಕು ನಿರ್ವಹಣೆಗಾಗಿ ಬುಟ್ಟಿ ಹೆಣೆಯುವುದು ಇವರ ಕಾಯಕ. ಅದೂ ಒಂದು ಬುಟ್ಟಿಗೆ 20 ರಿಂದ 30 ರೂಪಾಯಿ. ಮಳೆಗಾಲ ಇದೂ ಕಷ್ಟ ಎನ್ನುತ್ತಾರೆ ಸುಂದರ.

ಊಟಕ್ಕೆಂದು ಈಗ ಸದ್ಯದ ಮಟ್ಟಿಗೆ ಸರಕಾರದಿಂದ ಸಿಗುವ ರೇಶನ್ ಅಕ್ಕಿ , ಸೀಮೆಣ್ಣೆ ಪಡೆಯಲು ಪುತ್ತೂರು ತಾಲೂಕು ಕೊರಗ ಅಭಿವೃದ್ಧಿ ಸಂಘದಿಂದ ನೀಡಿದ ಒಂದು ಪತ್ರ ಇದೆ. ಅದು ಬಿಟ್ಟು ಇವರಲ್ಲಿ ಇನ್ಯಾವುದೇ ದಾಖಲೆಗಳು ಇಲ್ಲ. ಈಗಂತೂ ಮನೆ ಇಲ್ಲದೆ ಈ ಕುಟುಂಬಗಳು ಮಳೆಯಡಿಯಲ್ಲೆ ಮಲಗಬೇಕಾಗ ಪರಿಸ್ಥಿತಿ ಬಂದಿದೆ.ಇರುವ ಗುಡಿಸಲು ಮಳೆಗೆ ಸೋರುತ್ತಿದೆ. ಮಳೆ ಬಂದರೆ ಸಾಕು ಮನೆಯವರಿಗೆ ಹಗಲಾದರೆ ಕೊಡೆ ಹಿಡಿದು ಜೀವನ ರಾತ್ರಿಯಾದರೆ ಇಡೀ ಜಾಗರಣೆ. ಈಗ ಇರುವ ಗುಡಿಸಲಿಗೆ ಪ್ಲಾಸ್ಟಿಕ್ ಹೊದಿಕೆ ಹಾಕಲಾಗಿದ್ದರೂ ನೀರು ಗುಡಿಸಲೊಳಗೆ ಸರಾಗ ಹರಿದು ಬರುತ್ತಿದೆ. ಇನ್ನು ಮನೆಯೊಳಗೆ ಸರಿಯಾಗಿ ಒಬ್ಬರಿಗೆ ನಿಂತುಕೊಳ್ಳಲಾಗದ ಪರಿಸ್ಥಿತಿ ಈ ಮನೆಯೊಳಗಿದೆ. ಬಾಗಿಲುಗಳು ಇಲ್ಲವೇ ಇಲ್ಲ. ಶೌಚಾಲಯ , ಸ್ನಾನಗೃಹದ ಮಾತೇ ಇಲ್ಲ. ಮನೆ ಇಲ್ಲದ ಮೇಲೆ ಈ ಮಾತು ಎಲ್ಲಿಂದ ಎನ್ನುವುದು ಈ ಕೊರಗ ಕುಟುಂಬದ ಪ್ರಶ್ನೆ. ರಾತ್ರಿಯಾದ ಮೇಲೆ ಅಲ್ಲೇ ದೂರದಲ್ಲೇ ಎಲ್ಲಾದರೂ ಸ್ನಾನ ಮಾಡುವುದು ಎನ್ನುತ್ತಾರೆ ಕಲ್ಯಾಣಿ.ಇನ್ನು ಆರೋಗ್ಯ ಕೆಟ್ಟರೆ ಕೆಲವೊಮ್ಮೆ ಔಷಧಿಗೆ ಹೋಗಲು ಕೂಡಾ ಅಸಾಧ್ಯವಾಗುತ್ತದೆ ಎನ್ನುತ್ತಾರೆ ಕಮಲ. ನಮ್ಮ ದುಸ್ಥಿತಿಯ ಬಗ್ಗೆ ಎಲ್ಲಾ ಕಡೆ ಹೇಳಿಕೊಂಡಿದ್ದೇವೆ ಆದರೂ ಇದುವರೆಗೆ ಪರಿಹಾರ ಸಿಕ್ಕಿಲ್ಲ , ನಮಗೆ ಓಟು ಇಲ್ಲ ಎಂಬ ಕಾರಣಕ್ಕೆ ಈ ರೀತಿ ಆಗುತ್ತಿದೆಯೋ ಎಂದು ಗೊತ್ತಿಲ್ಲ ಎಂದು ಹೇಳುತ್ತಾರೆ ಸುಂದರ. ಪ್ರತೀ ಬಾರಿ ವಿವಿದ ಇಲಾಖೆಯವರು , ಅಧಿಕಾರಿಗಳು ಬರುತ್ತಾರೆ ನಮ್ಮ ಲೆಕ್ಕ ತೆಗೆದು ಹೋಗುತ್ತಾರೆ , ಇದುವರೆಗೆ ಏನೂ ಆಗಿಲ್ಲ ಎನ್ನುವ ಅವರು ಮನೆಯೊಂದು ಸಿಕ್ಕರೆ ನೆಮ್ಮದಿಯಿಂದ ನಾವು ಬದುಕಬಹುದು ಎಂದು ಈ ಕೊರಗ ಕುಟುಂಬ ಹೇಳುತ್ತದೆ.

ಒಟ್ಟಿನಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂದು ೫ ದಶಕಗಳೇ ಕಳೆದರೂ ಇಂದಿಗೂ ಗ್ರಾಮೀಣ ಭಾಗದಲ್ಲಿ ಗುಡಿಸಲು ಇಲ್ಲದ ಮಂದಿ ಇರುವುದು ನಮ್ಮ ಅಭಿವೃದ್ಧಿ ವೇಗಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಅದರಲ್ಲೂ ಮತದಾನ ಮಾಡದ ಮಂದಿ , ಮತದಾನದ ಗುರುತಿನ ಪತ್ರ ಕೂಡಾ ಇಲ್ಲದೇ ಇರುವುದು ಇನ್ನೂ ದುರಂತವೇ ಸರಿ.ಇದಕ್ಕೆಲ್ಲಾ ಏನು ಕಾರಣ ? ಇಷ್ಟಲ್ಲಾ ಇಲಾಖೆಗಳಿದ್ದರೂ ಯಾರು ಹೊಣೆ? ಎಂದು ಪ್ರಶ್ನಿಸಿಕೊಳ್ಳಬೇಕಾಗಿದೆ. ಕೇವಲ ನಗರ ಮಾತ್ರವಲ್ಲ ಗ್ರಾಮೀಣ ಭಾರತವೂ ಬೆಳಗಬೇಕಿದೆ. ಅದಕ್ಕಾಗಿ ಇಂತಹ ಬಡಕುಟುಂಬಗಳ ಮೂಲಭೂತ ಸೌಕರ್ಯವಾದ ಮನೆಯ ಕನಸುಗಳಿಗೆ ಬೆಳಕು ಬೇಕಿದೆ ಅನ್ನೋದು ನನ್ನ ಆಸೆ.

09 ಜೂನ್ 2011

ಕಾಡು ಬಿಟ್ಟು ನಾಡಿಗೆ ಬರೋ ಗಜಪಡೆ . .

ಕಾಡಾನೆ ಕಾಟ ಗ್ರಾಮೀಣ ಭಾಗದ ರೈತರಿಗೆ ಅನೇಕ ವರ್ಷಗಳಿಂದ ತಲೆನೋವಾಗಿ ಪರಿಣಮಿಸಿತ್ತು.ಆದರೆ ಈಗ ರೈತರಿಗೆ ಮಾತ್ರವಲ್ಲ ನಗರಕ್ಕೂ ಬಿಸಿ ಮುಟ್ಟಿಸುವ ವಾತಾವರಣ ಉಂಟಾಗಿದೆ.ಶಾಲೆಗೂ ರಜೆ ನೀಡಬೇಕಾದ ಪರಿಸ್ಥಿತಿ ಬುಧವಾರದಂದು ಮೈಸೂರಿನಲ್ಲಿ ಸೃಷ್ಠಿಯಾಗಿತ್ತು.ಈಗಲಾದರೂ ಎಚ್ಚರವಾದೀತೇ? .

ನಾನಂತೂ ಅನೇಕ ಬಾರಿ ಈ ಸುದ್ದಿಯನ್ನು ಓದಿದ್ದೆ, ಸ್ವತ: ಸುದ್ದಿ ಮಾಡಿದ್ದೆ ಕೂಡಾ. ಅದೆಲ್ಲೂ ಮೂಲೆಯಲ್ಲಿ ಬಂದು ಸುದ್ದಿ ಸದ್ದಿಲ್ಲದೇ ಆರಿ ಹೋಗುತ್ತಿತ್ತು. ಪ್ರತೀ ಬಾರಿಯೂ ಆನೆ ದಾಳಿಯಾದಾಗ ಅಲ್ಲಿನ ಜನ ದೂರವಾಣಿ ಮೂಲಕ ತಿಳಿಸುತ್ತಾರೆ. ಅಂದರೆ ಅದು ರಾತ್ರಿ ವೇಳೆ ಆನೆಗಳ ಹಿಂಡು ಕೃಷಿ ಭೂಮಿಗೆ ನುಗ್ಗಿ ಕೃಷಿಯನ್ನು ನಾಶ ಮಾಡಿ ಬಿಡುತ್ತವೆ. ಮರುದಿನ ಬೆಳಗ್ಗೆ ದೂರವಾಣಿ ಮೂಲಕ ತಮ್ಮ ವೇದನೆಯನ್ನು ರೈತರು ಹೇಳಿಕೊಳ್ಳುತ್ತಾರೆ. ನಮ್ಮ ಕ್ಯಾಮಾರಾದೊಂದಿಗೆ ಇಡೀ ನಮ್ಮ ತಂಡ ಹೋಗಿ ಇಡೀ ಚಿತ್ರಣ ಸಂಗ್ರಹಿಸಿ ಬರುತ್ತದೆ. ಅದೆಲ್ಲೂ ಸುದ್ದಿಯಾಗುತ್ತದೆ.

ಆದರೆ ಆನೆಗಳಿಗೆ ಅದು ಗೊತ್ತಾ ? ಅಂದು ರಾತ್ರಿಯೂ ಹಾಗೇ . . ಇಂದಿಗೂ ಹಾಗೆಯೇ. ನಾವು ಹೋದ ಸಂದರ್ಭದಲ್ಲಿ ಅದೆಷ್ಟೂ ರೈತರು ಕಣ್ಣೀರು ಹಾಕಿದ್ದೂ ಇದೆ. ಕಷ್ಟ ಪಟ್ಟು ಆರೇಳು ವರ್ಷ ಬೆಳೆದ ತೆಂಗು , ಅಡಿಕೆ , ಬಾಳೆ ಎಲ್ಲವೂ ನೆಲಕಚ್ಚಿ ಬಿಡುತ್ತದೆ. ಆದರೆ ಪರಿಹಾರ ಅಂತ ಹೋದರೆ ಸಿಗೋದು ಜುಜುಬಿ. ಅದು ಇಡೀ ಊರೂರು ತಿರುಗಾಡಿದ್ದಕ್ಕೆ ಸಾಲದು. ಹಾಗಾಗಿ ರೈತರು ಅದೆಲ್ಲಾ ಗೊಡವೆಗೇ ಹೋಗಲ್ಲ. ಕೃಷಿ ರಕ್ಷಣೆಗೆ ಬೇಲಿ ಹಾಕಿದರೆ ಅದು ಲೆಕ್ಕಕ್ಕೇ ಇಲ್ಲ. ಅದಕ್ಕೆ ಉದಾಹರಣೆ ಮೊನ್ನೆ ಮೈಸೂರಲ್ಲೇ ಕಂಡಾಯಿತು. ಎಷ್ಟೆತ್ತರ ಆನೆ ಜಿಗಿದಿದೆ ಮತ್ತು ಏನೆಲ್ಲಾ ರಂಪಾಟ ಮಾಡಿದೆ ಅಂತ. ಇನ್ನೂ ಒಂದು ಸಂಗತಿ ಅಂದು ಆ ರೈತರು ಹೇಳಿದ್ದರು, ಇಲ್ಲ ನಾವಿನ್ನು ಇಲ್ಲಿಂದ ಬಿಟ್ಟು ಬೇರೆಡೆ ಹೋಗಬೇಕಷ್ಟೆ ಅಂತಲೂ ಹೇಳಿಕೊಂಡಿದ್ದರು. ಆದರೂ ಹುಟ್ಟಿದ ಮಣ್ಣಿನ ನಂಟು. ಏನೇ ಹೋರಾಟ ಮಾಡಿಯಾದರೂ ಅಲ್ಲೇ ಬದುಕು.ಅದೇ ಭಯಾನಕ ಆನೆಗಳ ಜೊತೆಗೆ.

ಅದೇ ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗದ ಅಂದರೆ ಸುಳ್ಯ ತಾಲೂಕಿನ ಬಾಳುಗೋಡು , ಹರಿಹರ , ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ , ಪುತ್ತೂರು ತಾಲೂಕಿನ ಗುಂಡ್ಯ ಪ್ರದೇಶಗಳಲ್ಲಿ ಇಂದು ನಿನ್ನೆಯದಲ್ಲ.ಕಳೆದ ಅನೇಕ ವರ್ಷಗಳಿಂದ ಇಲ್ಲಿ ಆನೆಗಳ ಕಾಟ ನಿರಂತರ.ಇನ್ನು ಹಾಸನ ಕಡೆಗೆ ಹೋದರಂತೂ ಇನ್ನೂ ವಿಪರೀತ.ಇತ್ತೀಚೆಗಂತೂ ತೀವ್ರ ಬೆಳೆಹಾನಿಯಿಂದಾಗಿ ರೈತರ “ಶಾಪ”ಕ್ಕೆ ಆನೆಗಳ ಸಾವು ಕೂಡಾ ಸಂಭವಿಸಿತ್ತು.

ಕಳೆದ ವರ್ಷ ಚಾರ್ಮಾಡಿಯಲ್ಲಿ ಒಬ್ಬ ವ್ಯಕ್ತಿ ಆನೆ ಧಾಳಿಗೆ ಮೃತನಾದರೆ ಇತ್ತ ಗುಂಡ್ಯದಲ್ಲೂ ಇನ್ನೊಬ್ಬರು ಮೃತರಾಗಿದ್ದಾರೆ.ಬೆಳೆ ಹಾನಿಗೆ ಲೆಕ್ಕವೇ ಇಲ್ಲ. ಬಾಳೆ, ತೆಂಗು , ಅಡಿಕೆ ಮರಗಳು ಅದೆಷ್ಟೋ ನೆಲ ಕಚ್ಚಿವೆ. ಇನ್ನೂ ಕೆಲವು ಕಡೆ ಪಂಪ್‌ಶೆಡ್‌ಗಳು , ಇನ್ನೂ ಕೆಲವು ಕಡೆ ಮನೆಗಳಿಗೂ ಹಾನಿ ಮಾಡಿದ ನಿದರ್ಶನಗಳೂ ಇವೆ.

ಸುಳ್ಯ ತಾಲೂಕಿನ ಬಾಳುಗೋಡು, ಹರಿಹರ ಪ್ರದೇಶದಲ್ಲಿ ಸಂಜೆಯಾಗುತ್ತಿದ್ದಂತೆಯೇ ಆನೆಗಳ ಕಾಟ ಇದ್ದೇ ಇದೆ. ಶಾಲಾ ಮಕ್ಕಳು ಸಂಜೆ ವೇಳೆ ಮನೆಗೆ ಬರುವಾಗ ಭಯಬೀತರಾಗಿಯೇ ಬರಬೇಕಾದ ಪರಿಸ್ಥಿತಿ ಇಲ್ಲಿದೆ. ಹೀಗಾಗಿ ಪ್ರತಿನಿತ್ಯ ಮನೆಯಿಂದ ಮಕ್ಕಳನು ಕರೆದುಕೊಂಡು ಹೋಗಲು ದಾರಿಬದಿಗೆ ಬರುವುದು ಇಲ್ಲಿ ಸಾಮಾನ್ಯ. ಸಂಜೆಯಾಗುತ್ತಲೇ ಇಲ್ಲೂ ಡಾಮರು ರಸ್ತೆ ಬದಿಗೆ ಕಾಡಾನೆಗಳು ಬಂದದ್ದು ಅದೆಷ್ಟೋ ಬಾರಿ. ಕೆಲವರಂತೂ ಬೈಕ್ ಬಿಟ್ಟು ಓಡಿದ್ದೂ ಇದೆ. ಮಳೆಗಾಲದ ಹೊತ್ತಿಗಂತೂ ಇದು ಇನ್ನೂ ಹೆಚ್ಚು.

ಇನ್ನು ಕೃಷಿಕರು ತಮ್ಮ ಬೆಳೆ ರಕ್ಷಣೆಗಾಗಿ ಇನ್ನಿಲ್ಲದ ಪ್ರಯತ್ನ ನಡೆಸುತ್ತಲೇ ಇದ್ದಾರೆ. ಕೆಲವು ಕಡೆ ರಾತ್ರಿ ವೇಳೆಗೆ ಆನಗೆ ತೋಟಕ್ಕೆ ನುಗ್ಗದಂತೆ ಚಿಮಣಿ ದೀಪವನ್ನು ತೋಟದ ಅಂಚಿನಲ್ಲಿಟ್ಟು ಆನೆಯ ದಾರಿ ತಪ್ಪಿಸುತ್ತಿದ್ದರೆ ಇನ್ನೂ ಕೆಲವರು ಆನೆ ಬರುವ ದಾರಿಯಲ್ಲಿ ಮೆಣಸಿನ ಹುಡಿ ಹಾಕಿ ಆನೆ ದಾರಿ ತಪ್ಪಿಸುವುದೂ ಇದೆ. ಹೀಗಿದ್ದರೂ ಆನೆಗಳ ಹಿಂಡು ಒಮ್ಮೊಮ್ಮೆ ತೋಟಕ್ಕೆ ನುಗ್ಗಿದರೆ ಎಲ್ಲವ ಸರ್ವನಾಶ. ಇದು ಇಲ್ಲಿಯ ಪರಿಸ್ಥಿತಿಯಾದರೆ ಕಳೆದ ವರ್ಷ ಗುಂಡ್ಯದಲ್ಲಿ ಡಾಮರು ಹಾಕುತ್ತಿರುವ ಕಾರ್ಮಿಕರು ರಾತ್ರಿ ಮಲಗಿದ್ದ ವೇಳೆ ಅವರನ್ನೇ ಓಡಿಸಿದೆ. ಅತ್ತ ಚಾರ್ಮಾಡಿಯಲ್ಲೂ ಅದೇ ಪರಿಸ್ಥಿತಿ , ಬೆಳೆದ ಕೃಷಿ ರಕ್ಷಣೆಗೆ ರೈತರ ಹರಸಾಹಸ.

ಇತ್ತೀಚೆಗೆ ಆಗುತ್ತಿರುವ ಕಾಡು ನಾಶ , ಅರಣ್ಯ ಪ್ರದೇಶಗಳಲ್ಲಿ ನಡೆಯುತ್ತಿರುವ ಬೃಹತ್ ವಿದ್ಯುತ್ ಯೋಜನೆಗಳಂತಹ ಕಾಮಗಾರಿಗಳಿಂದಾಗಿ ಆನೆಗಳಿಗೆ ತೀರಾ ತೊಂದರೆಯಾಗಿ ನಾಡಿಗೆ ಬರುವ ಸ್ಥಿತಿಯಾಗಿದೆ. ಈ ಯೋಜನೆಗಳಿಂದಾಗಿ ಕಾಡಿನಲ್ಲಿ ಉಂಟಾಗುವ ಬೃಹತ್ ಸದ್ದುಗಳು ಕೂಡಾ ಆನೆಗಳು ಸೇರಿದಂತೆ ಎಲ್ಲಾ ಕಾಡು ಪ್ರಾಣಿಗಳಿಗೆ ಡಿಸ್ಟರ್ಬ್ ಆಗಿದ್ದಂತೂ ಸತ್ಯ. ಪ್ರಶಾಂತವಾದ ಆ ಕಾಡಿನಲ್ಲಿ ಇಂತಹ ಅಶಾಂತಿಗಳು ಉಂಟಾಗುತ್ತಿರುವ ಕಾರಣದಿಂದಾಗಿಯೇ ಇಂದು ನಾಡಿನಲ್ಲಿ ಅಶಾಂತಿಗಳಾಗುತ್ತಿವೆ. ರೈತರು ಇತ್ತೀಚೆಗಿನ ಕೆಲ ವರ್ಷಗಳಿಂದ ನಿದ್ದೆ ಕೆಡುವಂತಾಗಿದೆ. ಹೀಗಾಗಿ ಕಾಡಿನೊಳಗಿನ ಅಶಾಂತಿ ನಿಲ್ಲಿಸಲು ಸರಿಯಾದ ಕ್ರಮ ಇಂದು ಅನಿವಾರ್ಯವಾಗಿದೆ.ಆಗ ನಾಡಿನಲ್ಲೂ ಶಾಂತಿ ಸ್ಥಾಪನೆ ಸಾಧ್ಯ.

10 ಮೇ 2011

ಈ ದಾರಿ .

ಅವನು ಸುಮಾರು 3 ವರ್ಷದ ಬಾಲಕ. ಆ ಮನೆಗೆ ನಾನು ಖಾಯಂ ಅತಿಥಿ. ನನ್ನಲ್ಲಿ ಅತ್ಯಂತ ಸಲಿಗೆಯಿಂದ ಆತ್ಮೀಯತೆಯಿಂದ ಮಾತನಾಡುವ ಆ ಹುಡುಗ ನನಗೆ ಏನಿದ್ದರೂ ಮೊದಲ ಪ್ರಾಶಸ್ತ್ಯ ಕೊಡುತ್ತಿದ್ದ. ತನ್ನೆಲ್ಲಾ ವಸ್ತುಗಳನ್ನು ಬಿಡಿ ಬಿಡಿಯಾಗಿ ತೋರಿಸಿ ಖುಶಿ ಪಡುತ್ತಿದ್ದ.

ಮೊನ್ನೆ ಯಾಕೋ ಅವನ ಮನೆಗೆ ಹೋಗಿದ್ದಾಗ , ಸ್ನಾನ ಮಾಡುವ ಹೊತ್ತಿಗೆ ಬಚ್ಚಲು ಮನೆಗೆ ಬಂದು , ನೋಡು ನೀನು ಲೈಫ್ಬಾಯಿ ಸೋಪನ್ನೇ ಹಾಕು. ಇದು ಕೆಂಪಗಿನದ್ದು , ಇದನ್ನು ಹಾಕಿದರೆ ಏನಾಗುತ್ತೆ ಗೊತ್ತಾ ? ಅಂತ ಕೇಳಿದ ಆ ೩ ವರ್ಷದ ಬಾಲಕ ಮತ್ತೆ ಹೇಳುತ್ತಾನೆ , ನೋಡು ಇದನ್ನು ಹಾಕಿ ಸ್ನಾನ ಮಾಡಿದರೆ ರೋಗ ಬರೋದಿಲ್ಲ , ಮೈಯಲ್ಲಿರುವ ಹುಳ ಸಾಯುತ್ತೆ , ಗಟ್ಟಿ ಮುಟ್ಟಾದ ದೇಹ ಇರುತ್ತೆ ಅಂತೆಲ್ಲ ಹೇಳಿದ. ಇದನ್ನು ಯಾರು ಹೇಳಿದ್ದು ನಿನಗೆ ಅಂತ ಕೇಳಿದರೆ ಆತ ಹೇಳುತ್ತಾನೆ , ಟಿವಿಯಲ್ಲಿ ಬರುತ್ತಲ್ಲಾ ಅಂತಾನೆ. ಇದಿಷ್ಟೇ ವಿಷಯ.

ಇದು ಒಂದಲ್ಲ ಪ್ರಕರಣ, ಇಂತಹ ಅನೇಕ ಅನುಭವ ಹಲವರಿಗಾಗಿದೆ.ಆಗುತ್ತಲೇ ಇದೆ.ಇದೆಲ್ಲಾ ಟಿವಿ ಪರಿಣಾಮ ಅಂತ ನಾವು ನೇರವಾಗಿ ಹೇಳಿಬಿಡಬಹುದು. ಆದ್ರೆ ಟಿವಿ ನೋಡೋದಿಕ್ಕೆ ನಾವ್ಯಾಕೆ ಬಿಡಬೇಕು ಅಂತ ಇನ್ನೊಂದು ಪ್ರಶ್ನೆಯೂ ಜೊತೆಗೆ ಹುಟ್ಟಿಕೊಳ್ಳುತ್ತದೆ. ಇಂದು ಟಿವಿ ನೋಡಿದ್ದರ ಪರಿಣಾಮವಾಗಿ ಅನೇಕ ಸಂಗತಿಗಳು ಮಕ್ಕಳ ಮನಸ್ಸನ್ನು ಬಹುಬೇಗನೆ ತಲಪುತ್ತದೆ. ಅದರ ಜೊತೆಗೆ ದುಷ್ಪರಿಣಾಮಗಳು ಕೂಡಾ. ಒಂದು ಪರಿಣಾಮದ ಜೊತೆಗೇ ಇದೂ ಕೂಡಾ ಹುಟ್ಟಿಕೊಳ್ಳುತ್ತದೆ. ಹಾಗಾಗಿ ಇಂದು ವ್ಯವಸ್ಥೆಯನ್ನು ಹಳಿದು ಪ್ರಯೋಜನ ಇಲ್ಲ. ಒಂದರ ಜೊತೆಗೆ ಇನ್ನೊಂದು ಇದ್ದೇ ಇದೆ. ಆದರೆ ನಮ್ಮ ದೃಷ್ಠಿ ಯಾವುದು ಎನ್ನುವುದರ ಮೇಲೆ ಇಡೀ ದಾರಿ ಕಾಣಿಸುತ್ತದೆ.

ಇದೇ ನೋಡಿ ,
ಇಂದು ಒಂದು ರಾಮಾಯಣದ್ದೋ , ಅಥವಾ ಸಾಮಾಜಿಕ , ವ್ಯಾವಹಾರಿಕ ಸಂಗತಿಯನ್ನೋ ಇದೇ ದೃಶ್ಯದ ಮೂಲಕ ಆ ಮಗು ನೋಡಿದ ತಕ್ಷಣವೇ ಅದು ಗ್ರಹಿಸಿಕೊಳ್ಳುತ್ತದೆ. ಮರುದಿನವೇ ಅದರ ಅನುಷ್ಠಾನದಲ್ಲಿ ಅದು ತೊಡಗಿಕೊಳ್ಳುತ್ತದೆ. ಆ ವಿಚಾರವನ್ನು ಆ ಮಗು ಮತ್ಯಾರಲ್ಲೋ ಕೇಳಿ ಇನ್ನಷ್ಟು ಗಟ್ಟಿ ಮಾಡುತ್ತದೆ. ಎಲ್ಲೂ ಉತ್ತರ ಸಿಕ್ಕಿಲ್ಲ ಅಂದಾಕ್ಷಣ ಅದಕ್ಕೆ ತನ್ನದೇ ನಿರ್ಧಾರಕ್ಕೆ ಬರುತ್ತೆ ಅದು.
ಹಾಗಾಗಿ ಅದ್ಯಾವುದೇ ಹೊಸದು ಬರಲಿ ಅದನ್ನು ಮಗು ಬಲು ಬೇಗನೆ ಕಲಿತು ಬಿಡುತ್ತದೆ. ಈ ಗುಣ ಮಕ್ಕಳಲ್ಲಿ ಬೆಳೆಯಬೇಕು. ಆದರೆ ಅದಕ್ಕೆ ಸರಿಯಾದ ದಾರಿಯನ್ನು ಮಾತ್ರಾ ಜವಾಬ್ದಾರಿಯುತರು ತೋರಿಸಬೇಕಾಗುತ್ತದೆ ಅಷ್ಟೇ.

ಅದಿಲ್ಲದೇ ಹೋದಲ್ಲಿ ಮೊನ್ನೆ ಯಾರೋ ಹೇಳುತ್ತಿದ್ದರು , ಇಂದು ಮೊಬೈಲ್ , ಕಂಪ್ಯೂಟರ್ ಮಕ್ಕಳನ್ನು ಹಾಳು ಮಾಡಿದೆ ಅಂತ. ಅದಲ್ಲ , ಮಕ್ಕಳು ಹಾಳಾಗದಂತೆ ಅಲ್ಲಿ ಎಚ್ಚರ ವಹಿಸಬೇಕಾದ್ದು ಆಯಾ ಘಟ್ಟದ ಜವಾಬ್ದಾರಿಯುತರು. ಮನೆಯಲ್ಲಾದರೆ ಹೆತ್ತವರು , ಹಾಸ್ಟೆಲ್‌ನಲ್ಲಾದರೆ ವಾರ್ಡನ್ , ಶಾಲೆಯಲ್ಲಾದರೆ ಪ್ರಾಂಶುಪಾಲರು ಅಷ್ಟೇ. ಇದು ಮೂರು ಸಂದರ್ಭದಲ್ಲಿ ಎಚ್ಚರವಾಗಿದ್ದರೆ ಎಚ್ಚರ ತಪ್ಪುವವರು ಯಾರು ಹೇಳಿ ?.

24 ಏಪ್ರಿಲ್ 2011

ಕೊನೆಗೂ ಉಳಿಯುವುದು ಇದೇ. .

ಸಾಯಿಬಾಬಾ ತೀರಿಕೊಂಡರು.

ಎಷ್ಟೋ ಜೀವಗಳಿಗೆ ಸ್ಫೂರ್ತಿಯಾಗಿದ್ದ ಸಾಯಿಬಾಬಾ ತೀರಿಕೊಂಡರು ಎಂದಾಕ್ಷಣ ಅಲ್ಲೆಲ್ಲಾ ಮತ್ತೆ ನಿರಾಸೆಗಳು ತುಂಬಿಕೊಂಡವು. ಆದರೆ ಮತ್ತೆ ಅದೇ ಜೀವಗಳು ಯೋಚಿಸುತ್ತವೆ ಇನ್ನೊಂದು ಅವತಾರದಲ್ಲಿ ಈ ಮಹಾಪುರುಷ ಬಂದೇ ಬರುತ್ತಾನೆ ಅಂತ ಸಮಾಧಾನ ಪಟ್ಟುಕೊಳ್ಳುತ್ತವೆ. ಏನಿದ್ದರೂ ಈಗ ಸಾಯಿಬಾಬಾ ಇಲ್ಲ , ಮುಂದಿನದ್ದು ಗೊತ್ತಿಲ್ಲ.

ಸತ್ಯಸಾಯಿ ಬಾಬಾರನ್ನು ನಾನಂತೂ ಕಾಣುವುದು ಒಬ್ಬ ಸಮಾಜ ಸೇವಕನಾಗಿ , ಸುಧಾರಕನಾಗಿ. ಒಂದು ಸರಕಾರಕ್ಕೆ ಮಾಡಲಾಗದ ಕೆಲಸವನ್ನು , ಒಂದು ಆಡಳಿತಕ್ಕೆ ಕಲ್ಪಿಸಲೂ ಸಾಧ್ಯವಾಗದ ಕೆಲಸವನ್ನು ಅವರು ಮಾಡಿ ತೋರಿಸಿದ್ದಾರೆ. ಹಾಗಾಗಿ ಅವರು ದೇವತಾ ಮನುಷ್ಯ. ಆರಾಧನೆಗೆ ಯೋಗ್ಯರೇ ಆಗಿದ್ದರು. ಹಾಗಾಗಿ ಅವರ ಬಗ್ಗೆ ಇದುವರೆಗೆ ಯಾವುದೇ ಟೀಕೆಗಳು ಬಂದರೂ ಆ ಬಗ್ಗೆ ಯೋಚಿಸುವುದಕ್ಕೂ ಹೋಗದೇ ಬಾಬಾ ಕೆಲಸಗಳನ್ನು ಒಪಿಕೊಂಡು ಬಿಡುವುದು ಹೆಚ್ಚು ಸೂಕ್ತ ಅಂತ ನಾನು ನಂಬಿದ್ದೆ. ಹೀಗೆ ಟೀಕೆಗಳು ಬರುತ್ತಿದ್ದಾಗ ಬಾಬಾ ಸಹೇಳುತ್ತಿದ್ದ ಮಾತುಗಳನ್ನು ಎಲ್ಲೋ ಓದಿದ್ದು ನೆನಪಿದೆ , “ಸಿಹಿ ಇದ್ದಲ್ಲಿಗೇ ಇರುವೆಗಳು ಬರುವುದಲ್ಲವೇ , ಸಿಹಿ ಇಲ್ಲದಲ್ಲಿ ಇರುವೆಗಳು ಇರೋದಿಲ್ಲ ಅಲ್ವಾ” ಅಂತ ಒಂದೇ ಮಾತಿನಲ್ಲಿ ಹೇಳಿದ್ದು ಅಲ್ಲಿ ದಾಖಲಾಗಿತ್ತು. ಅಂದರೆ ಟೀಕೆಗಳಿಗೆ ಉತ್ತರ ಇಲ್ಲ. ಕಾಯಕವೇ ಅದಕ್ಕೆ ಉತ್ತರ. ನಿಜವಾಗಿಯೂ ಈ ಮಾತು ನಮಗೂ ಅನ್ವಯ ಅಲ್ಲವೇ. ಟೀಕೆಗಳಿಗೆ ಉತ್ತರ ನೀಡುತ್ತಾ ಹೋಗುತ್ತಿದ್ದಂತೆಯೇ ಅ ಬೆಳೆಯುತ್ತಾ ಸಾಗುತ್ತೆ. ಹಾಂಗತ ಅದುವೇ ದೌರ್ಬಲ್ಯ ಅಂತ ಟೀಕಾಕಾರರು ಭಾವಿಸಿದರೆ ಅದಕ್ಕಿಂತ ದೊಡ್ಡ ಮೂರ್ಖತನ ಇನ್ನೊಂದಿಲ್ಲ.

ಅದಲ್ಲ , ಬಾಬಾ ಮಾಡಿದ ಕ್ರಾಂತಿ ನಿಜಕ್ಕೂ ಅದ್ಭುತ. ಉಚಿತ ವೈದ್ಯಕೀಯ ಸೇವೆ , ಶಿಕ್ಷಣ , ಡಿಯುವ ನೀರು , ಶಿಸ್ತು , ಸಾಮರಸ್ಯ , ಮಾನಸಿಕ ಧೈರ್ಯ ,. . ಹೀಗೇ ಒಂದೇ ಎರಡೇ. ಸಾಲು ಸಾಲು ಪಟ್ಟಿ ಬೆಳೆಯುತ್ತಾ ಸಾಗುತ್ತದೆ. ಇದೆಲ್ಲಾ ಸಾಮಾನ್ಯ ಒಬ್ಬ ಸ್ವಾಮಿಗೆ ಮಾಡಲು ಆಗದ ಕೆಲಸವೇ ಸರಿ.

ಇದಕ್ಕೆಲ್ಲಾ ದಾನಿಗಳೂ ಇದ್ದಾರೆ ಅನ್ನಿ. ದಾನ ಮಾಡುವವನೂ ಅಲ್ಲಿ ಭ್ರಷ್ಠಾಚಾರ , ಅವ್ಯಹಾರ ಇಲ್ಲ ಎಂದೇ ಅಲ್ಲವೇ ದಾನ ಮಾಡುವುದು. ಒಂದು ವೇಳೆ ಎಲ್ಲೆಲ್ಲಾ ಅವ್ಯಹಾರ ತಾಂಡವವಾಡುತ್ತಿದ್ದರೆ ಅಷ್ಟು ಪ್ರಮಾಣದ ದಾನ ಹರಿದುಬರಲು ಸಾಧ್ಯವಿತ್ತೇ?. ಅದೂ ಅಲ್ಲ ಸೇವಾಕರ್ತರಾಗಿ ವಿಧೇಶಗಳಿಂದಲೂ ವೈದ್ಯರು ಆಗಮಿಸುತ್ತಿದ್ದರೇ?. ಖಂಡಿತಾ ಇಲ್ಲ. ಹೀಗಾಗಿ ಬಾಬಾ ನಿಜಕೂ ಒಬ್ಬ ಶ್ರೇಷ್ಠ ಪುರುಷ.
ಬಾಬಾ ಎಂದೂ ನನ್ನನ್ನು ಪೂಜೆ ಮಾಡಿ ಎಂತ ಎಲ್ಲೂ ಹೇಳಿಲ್ಲ , ಭಕ್ತರೇ ಪೂಜಿಸುವಾಗ ಅವರು ಹೇಳಿದ್ದು , ನಿಮ್ಮ ತಂದೆ ತಾಯಿಯನ್ನು ಪೂಜಿಸಿ , ಕುಲದೇವರನ್ನು ಪೂಜಿಸಿ ಎಂದರೇ ವಿನಹ: ನಾನೇ ದೇವರು ಎಂದು ಹೇಳಿಲ್ಲ. ಆದರೂ ಭಜನೆ ಇತ್ಯಾದಿಗಳ ಮೂಲಕ ಮಾನಸಿಕವಾದ ನೆಮ್ಮದಿಗೆ ನಾಂದಿ ಹಾಡಿದರು. ಆನ ಬಂದು ಸೇರಿದರು. ಏನೋ ಶಕ್ತಿ ಕಂಡುಕೊಂಡರು. ಲಕ್ಷ ಲಕ್ಷ ಜನ ಅವರತ್ತ ಹೋದರು.
ಇಂದು ಯಾವುದೇ ಒಬ್ಬ ಸ್ವಾಮೀಜಿಯಾಗಲಿ , ಅಥವಾ ಇನ್ಯಾರೇ ಆಗಲಿ ಮಾಡದ ಕೆಲಸವನ್ನು ಬಾಬಾ ಮಾಡಿದ್ದಾರೆ. ಅಷ್ಟೋ ಜನರಿಗೆ ಆರೋಗ್ಯ , ಶಿಕ್ಷಣ ಒದಗಿಸಿದ್ದಾರೆ. ಹೀಗಾಗಿ ಅವರು ಗ್ರೇಟ್. ಅವರ ನಿಧನಕ್ಕೆ ಹನಿ ಹನಿ ಕಂಬನಿ.

ಹುಟ್ಟು ಸಾವಿನ ಮಧ್ಯೆ ಇರುವ ಬದುಕಿನಲ್ಲಿ ನಾವು ಮಾಡಿದ ಸಾಧನೆಗಳು , ಸಮಾಜಕ್ಕೆ ನೀಡಿದ ಕೊಡುಗೆಗಳು ಉಳಿದುಕೊಳ್ಳುವುದೇ ವಿನಹ, ಈ ದೇಹವಲ್ಲ ಅಲ್ವೇ. ಹಾಗೇ ಇಂದು ಬಾಬಾ ನಿಧನರಾದ ತಕ್ಷಣ ಅವರ ಸಮಾಜ ಕಾರ್ಯಗಳು ಕಾಣಿಸಿಕೊಳ್ಳುತ್ತವೆ.ಆ ಮೂಲಕ ಅವರು ಶಾಶ್ವತರಾಗುತ್ತಾರೆ.

ನಾವೂ ಹಾಗೆಯೇ ಟೀಕೆಗಳಿಗೆ ಕಡಿವಾಣ ಹಾಕಿ ಅವರ ಹಾದಿಯಲ್ಲೇ ಮುಂದುವರಿದರೆ ಒಳ್ಳೆಯದಲ್ವೇ. ಸಮಾಜಕ್ಕೆ ಕಿರು ಕಾಣಿಕೆ ನೀಡುವತ್ತ ಚಿಂತಿಸುವುದು ಒಳ್ಳೆಯದಲ್ವೇ.

12 ಏಪ್ರಿಲ್ 2011

ಸಂಬಂಧಗಳ ಹುಟ್ಟು . .

ಸಂಬಂಧಗಳು,
ಅದೊಂದು ಅದ್ಭುತ ಸೃಷ್ಠಿ. ಒಮ್ಮೆ ಅದರ ಜನನವಾದರೆ ಮುಗಿಯಿತು. ಅದಕ್ಕೆ ಮತ್ತೆ ಸಾವು ಎಂಬುದಿಲ್ಲ. ಆ ಸಂಬಂದಗಳು ಹಾಗೇ ಉಳಿದಕೊಂಡು ಬಿಡುತ್ತದೆ. ಅದಕ್ಕೆ ಎಷ್ಟೇ ಸರ್ಜರಿಗಳು ಮಾಡಿದರೂ ಮೊದಲಿನ ಸಂಬಂಧಗಳಿಂದ ಹೊಕ್ಕುಳ ಬಳ್ಳಿ ಬಿಡಿಸಿಕೊಳ್ಳುವುದೇ ಇಲ್ಲ. ಎಂತಹ ಒಂದು ಒಳ್ಳೆಯ ಲೋಕ ಇದು ಅಂತ ಅನಿಸಿಬಿಡುತ್ತದೆ ನನಗೆ.

ಒಂದು ಮಗು ಹುಟ್ಟಿಕೊಂಡಿತು ಅಂದಾಕ್ಷಣ ಅಲೊಬ್ಬಳು ಅಮ್ಮನೂ ಹುಟ್ಟಿಕೊಳ್ಳುತ್ತಾಳೆ. ಅಪ್ಪನೂ ಜನನವಾಗುತ್ತಾನೆ. ಆಗಲೇ ಹೊಸ ಅಜ್ಜ , ಅಜ್ಜಿ , ಸೋದರ‌ ಅತ್ತೆ , ಭಾವ , ಸೋದರಮಾವ , ಅಣ್ಣ , ತಮ್ಮ , ತಂಗಿ , ಅಕ್ಕ, ಚಿಕ್ಕಪ್ಪ , ಚಿಕ್ಕಮ್ಮ , ಮತ್ತಾತ , ಮತ್ತಜ್ಜಿ . . . . . . ಅಬ್ಬಾ ಎಷ್ಟೆಲ್ಲಾ ಸಂಬಂಧಗಳ ಹುಟ್ಟು ಇಲ್ಲಿ ಆಗಿಬಿಡುತ್ತದೆ. ಎಷ್ಟು ಜನರಿಗೆ ಸಂಭ್ರಮ. ನಾನು ಅಮ್ಮನಾದೆ ಎನ್ನವುಷ್ಟೇ ಖುಷಿ ಈ ಎಲ್ಲಾ ಸಂಬಂಧಗಳಲ್ಲೂ ಕಾಣುತ್ತದೆ.ಇಲ್ಲಿ ಆ ಸಂಬಂಧಗಳಿಗಿಂತ ದೊಡ್ಡದು ಯಾವುದೂ ಅಲ್ಲ. ಎಲ್ಲರಿಗೂ ಈ ಸಂಬಂಧಗಳ ನಡುವೆ ಬದುಕಬೇಕು ಅನ್ನೋ ಹಂಬಲ ಇದ್ದೇ ಇರುತ್ತದೆ. ಆತ ಎಷ್ಟೇ ದೊಡ್ಡ ವ್ಯಕ್ತಿಯಾಗಿರಲಿ ಈ ಸಂಬಂಧಗಳಲ್ಲಿ ಅನವಿಗೆ ಪ್ರೀತಿ , ಮಮತೆ ಇದ್ದೇ ಇರುತ್ತದೆ. ಎಲ್ಲಾದರು ಒಂದು ಹೊಕ್ಕುಳ ಬಳ್ಳಿಯ ಸಂಬಂಧ ಸೃಷ್ಠಿಯಾಗಿಲ್ಲ ಎಂದಾದರೆ ಎಂತಹ ಕೊರಗು ಇರುತ್ತದೆ ಅನ್ನೋದು ಅನುಭವಿಸಿದವರಿಗೆ ಮಾತ್ರಾ ತಿಳಿಯುವುದು.

ಈ ಸಂಬಂಧಗಳಿಗೆ ನಮ್ಮ ಪುಣ್ಯ ಭೂಮಿಯಲ್ಲಿ ಇರುವಷ್ಟು ಮಹತ್ವ ಬೇರೆ ಕಡೆ ಕಾಣಿಸದು. ಇಂದು ಇವನ ಹೆಂಡತಿಯಾದರೆ , ನಾಳೆ ಅವನ ಹೆಂಡತಿಯಾಗಿ ಬಿಡುವುದು ಸುಲಭ ಮತ್ತು ಅದು ಸಾಮಾನ್ಯ ಕೂಡಾ. ಆದರೆ ಈ ಸಂಬಂಧವನ್ನು ಹೊರತುಪಡಿಸಿ ಉಳಿದ ಎಲ್ಲವೂ ಕೂಡಾ ಅಳಿಸಲು ಸಾಧ್ಯವೇ ಇಲ್ಲ.

ಒಂದು ವೇಳೆ ವ್ಯಕ್ತಿ ಇಲ್ಲವಾದರೂ ಆ ಸಂಬಂಧಗಳು ಹಾಗೇ ಉಳಿದುಕೊಳ್ಳುತ್ತವೆ. ಈಗ ಇಲ್ಲವಾದ ಅವರು ನನಗೆ ಮಾವನ , ಅಣ್ಣನೋ , ಭಾವನೋ ಆಗಿದ್ದ ಎನ್ನುವುದು ಉಳಿದುಕೊಳ್ಳುತ್ತದೆ. ಹಾಗಾಗಿ ಈ ಸಂಬಂಧಗಳಿಗೆ ಸಾವಿಲ್ಲ.

ನಿಜಕ್ಕೂ ಈ ಸಂಬಂಧಗಳ ನಡುವೆ ಪಯಣಿಸೋದೇ ಒಂದು ಖುಷಿ.

12 ಮಾರ್ಚ್ 2011

ಸುನಾಮಿ ಎಂದರೆ ಇವರು ನಡುಗುತ್ತಾರೆ

ಮತ್ತೆ ನೆನಪಾಯಿತು 2004 ಡಿಸೆಂಬರ್ 26.




ಅನೇಕ ಘಟನೆಗಳು ಓಡೋಡಿ ಬಂದವು. ಅಂದು ಸುನಾಮಿಯನ್ನು ಗೆದ್ದವರು ಯಾರಿದ್ದಾರೆ ಎಂದು ನೋಡಿದಾಗ ಅವರು ಸಿಕ್ಕಿದರು. ಮನೆಗೆ ಹೋದಾಗ ಅವರು ವಿವರಿಸಿದ್ದು ಹೀಗೆ. .

“ಅಲ್ಲಿ ನಾನು ಹೆಣಗಳ ರಾಶಿಯಲ್ಲಿ ಜೀವಚ್ಚವವಾಗಿ ಬಿದ್ದಿದ್ದೆ.ಯಾರೂ ಒಬ್ಬ ಪುಣ್ಯಾತ್ಮ ನನ್ನನ್ನು ಗಮನಿಸಿ ಬದುಕಿಸಿದ , ಅಬ್ಬಾ . . ಬದುಕೇ ಮುಗಿದು ಹೋಯಿತು ಅಂದುಕೊಂಡಿದ್ದ ನಾನೀಗ ಮತ್ತೆ ಬದುಕು ಕಟ್ಟಿಕೊಂಡಿದ್ದೇನೆ . .” ಇದು ಪುತ್ತೂರಿನ ಹಾರಾಡಿಯ ನಂಜಮ್ಮ ಸುನಾಮಿ ಬಗ್ಗೆ ಹೇಳುವ ಭಯ ಮಿಶ್ರಿತ ಮಾತು. ಉತ್ತರ ಜಪಾನ್‌ನಲ್ಲಿ ಸಂಭವಿಸಿದ ಘೋರ ಘಟನೆಯನ್ನು ದೃಶ್ಯ ಮಾಧ್ಯಮದಲ್ಲಿ ವೀಕ್ಷಿಸುತ್ತಾ ನಂಜಮ್ಮಳ ಕಣ್ಣಂಚಿನಲ್ಲಿ ಈಗಲೂ ನೀರು ಹರಿಯುತ್ತದೆ.

ನಿನ್ನೆ ಉತ್ತರ ಜಪಾನ್ ಮತ್ತು ಆಸುಪಾಸಿನ ದೇಶಗಳು ಸುನಾಮಿ ಹಾಗೂ ಭೂಕಂಪದಿಂದ ತತ್ತರಿಸಿ ಅದೆಷ್ಟೋ ಜನರನ್ನು ಆಪೋಶನ ತೆಗೆದುಕೊಂಡಿದ್ದರೆ , ಅಂದು 26 ಡಿಸೆಂಬರ್ 2004 ಭಾನುವಾರ. ಬೆಂಗಳೂರಿನಂತಹ ನಗರದಲ್ಲಿ ಕೆಲ ಜನರೆಲ್ಲಾ ವೀಕೆಂಡ್ ಮಜಾದಲ್ಲಿದ್ದರೆ , ಇನ್ನೂ ಕೆಲವರು ನಗರ ಪ್ರದಕ್ಷಿಣೆ , ಪ್ರವಾಸಕ್ಕೆ ಹೋಗಿದ್ದರು , ಕ್ರಿಸ್‌ಮಸ್ ರಜಾವೂ ಇದ್ದರಿಂದ ಬೇರೆ ಬೇರೆ ಕಡೆ ಜನ ಪ್ರವಾಸ ಹೋಗಿದ್ದರು.ಆದರೆ ಅಂದು ಸಂಜೆಯ ಹೊತ್ತಿಗೆ ತಮಿಳುನಾಡು ಸೇರಿದಂತೆ ದೇಶದ ಕರಾವಳಿ ತೀರಕ್ಕೆ ಹೋದ ಜನರಿಗೆ ಅದೊಂದು ದುರ್ದಿನ.ಈ ಘಟನೆಯಿಂದ ಮಾನಸಿಕವಾಗಿ ನೊಂದವರು ಅದೆಷ್ಟೋ ಜನ. ಈ ಎಲ್ಲಾ ಘಟನೆಯನ್ನು ಕಂಡಾರೆ ಕಂಡು ಸ್ವತ: ನೋವು ಅನುಭವಿಸಿ ಮರುಜನ್ಮ ಪಡೆದ ಪುತ್ತೂರಿನ ಹಾರಾಡಿಯ ನಂಜಮ್ಮ ಇಂದಿಗೂ ಸುನಾಮಿ ಎಂಬ ಹೆಸರು ಕೇಳಿದೊಡನೆಯೇ ಎಲ್ಲಾ ಭಯಾನಕ ನೆನಪುಗಳನ್ನು ಹೀಗೆ ಬಿಚ್ಚಿಡುತ್ತಾರೆ. .

ಪುತ್ತೂರಿನ ಮೆಸ್ಕಾಂನಲ್ಲಿ ಗುಮಾಸ್ತೆಯಾಗಿರುವ ನಂಜಮ್ಮ ಅಂದು ತನ್ನ ಕುಟುಂಬದವರೊಂದಿಗೆ ತಮಿಳುನಾಡಿನ ದೇವಿ ದೇವಸ್ಥಾನಕ್ಕೆ ಹೋಗಿದ್ದರು. ಬಸ್ಸಿನಿಂದ ಇಳಿದು ಎರಡೇ ಎರಡು ಹೆಜ್ಜೆ ಹಾಕಿದ್ದರು. ಅಷ್ಟರಲ್ಲಿ ಹಿಂದಿನಿಂದ ಏನೋ ಹೊಡೆದಂತಾಯಿತು. ಅಲ್ಲೇ ಕುಸಿದು ಬಿದ್ದು ಅದೆಷ್ಟೂ ದೂರ ನೀರಲ್ಲಿ ಹೋಗಿದ್ದಾರೆ. ಆಗ ಯಾರೋ ಪುಣ್ಯಾತ್ಮರು ಬಂದು ನಂಜಮ್ಮರನ್ನು ಎತ್ತಿ ಕೂರಿಸಿ ವಾಹನ ತರುವುದಾಗಿ ಹೋಗಿದ್ದಾರೆ.ಅಷ್ಟರಲ್ಲಿ ಎರಡನೇ ಬಾರಿ ನೀರಿನ ಅಲೆ ಬಂದು ನಂಜಮ್ಮ ಮತ್ತೆ ಒಂದಷ್ಟು ದೂರ ನೀರಲ್ಲಿ ಸಾಗಿ ಅದ್ಯಾವುದೋ ಮರದ ಕೊಂಬೆಯಲ್ಲಿ ಸಿಕ್ಕಿಹಾಕಿಕೊಂಡಿದ್ದರು. ಆಗ ಸೃತಿಯೂ ತಪ್ಪಿತ್ತು. ಮತ್ತೆ ಎಚ್ಚರವಾದಾಗ ಎಲ್ಲೆಲ್ಲೂ ದೇಹಗಳು ಕಾಣುತ್ತಿವೆ , ಮಕ್ಕಳು , ವೃದ್ದರು ಹೀಗೆ ಅತ್ಯಂತ ವಿಕಾರವಾದ ದೇಹಗಳ ನಡುವೆ ಬಿದ್ದರುವ ನಂಜಮ್ಮಗೆ ಬದುಕೇ ಮುಗಿದುಹೋಯಿತು ಅಂತ ಅನ್ನಿಸಿತ್ತಂತೆ ಅತ್ತಿತ್ತ ಕಣ್ಣು ಹಾಯಿಸಿದರೆ ತನ್ನೊಂದಿಗೆ ಬಂದ ಯಾರನ್ನೂ ಕಾಣುತ್ತಿಲ್ಲ.ಏಕಾಂಗಿಯಾಗಿದ್ದರು ಆಗ. ಆದರೆ ಅಲ್ಲಿ ಮಿಸುಕಾಡುತ್ತಿರುವ ನಂಜಮ್ಮರನ್ನು ಯಾರೋ ಪುಣ್ಯಾತ್ಮರು ನೋಡಿದರು , ಹೀಗಾಗಿ ಮತ್ತೆ ಬದುಕುವ ಆಸೆಗೆ ಜೀವ ಸಿಕ್ಕಿತು.ಇವರನ್ನು ಆಸ್ಪತ್ರೆಗೆ ಸೇರಿಸಿದರಂತೆ.ಆಗಲೇ ನಂಜಮ್ಮ ದೇಹ ಜರ್ಝರಿತವಾಗಿತ್ತು , ದೇಹದಲ್ಲೆಲ್ಲಾ ಗಾಯಗಳಾಗಿತ್ತು ಆಸ್ಪತ್ರೆ ನಂಜಮ್ಮರನ್ನು ಸಾಗಿಸಿದಾ ಇಲ್ಲಾಗುವುದಿಲ್ಲ ಎಂದು ಹೇಳಿದ್ದಾರೆ.ಹೀಗೆ 3 ಆಸ್ಪತ್ರೆಗೆ ತೆರಳಿದ ಅವರಿಗೆ ಭಾಷಾ ಸಮಸ್ಯೆಯೂ ಕಾಡಿತು.ನಂತರ ಕನ್ನಡ ಬಲ್ಲವರನ್ನು ಕರೆತಂದು ನಂಜಮ್ಮರನ್ನು ಪುತ್ತೂರು ಕಡೆಗೆ ಕಳುಹಿಸಿದರು. ಅದ್ಯಾವುದೋ ಒಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದರು.ಆದರೆ ಹಣವಿಲ್ಲದ ಕಾರಣ ಅವರನ್ನು ಪುತ್ತೂರಿಗೆ ಕರೆತರಲು ಅಸಾಧ್ಯ ಎಂದು ಅವರ ಕಾರಿನ ಚಾಲಕರು ಹೇಳಿದಾಗ ತನ್ನ ಕೈಯಲ್ಲಿದ್ದ ಚಿನ್ನದ ಬಳೆಗಳನ್ನು ಅವರಿಗೆ ನೀಡಿ ಪುತ್ತೂರಿಗೆ ಬಿಡುವಂತೆ ಮನವಿ ಮಾಡಿದರು. ಆ ಚಿನ್ನದ ಬಳೆಯನ್ನು ಮಾರಾಟ ಮಾಡಿ ಪುತ್ತೂರಿಗೆ ಬಂದರು. ಆ ಬಳಿಕ ಪುತ್ತೂರಿನ ವೈದ್ಯರು ಚಿಕಿತ್ಸೆ ನೀಡಿ ಗುಣಮುಖವಾಗಿದ್ದಾರೆ. ಆದರೆ ದೇಹದ ಮೇಲಿನ ಗಾಯಗಳು ಇಂದೂ ಕಾಣುತ್ತಿವೆ. ಈ ಸಂದರ್ಭಲ್ಲಿ ಇವರಿಗೆ ಪರಿಹಾರ ನೀಡುತ್ತೇವೆ ಎಂದು ಬಂದವರು ಮತ್ತೆ ಈ ಕಡೆ ತಿರುಗಿ ನೋಡಿಲ್ಲ ಅಂತಾರೆ ನಂಜಮ್ಮ.

ನಿನ್ನೆ ಉತ್ತರ ಜಪಾನ್‌ನಲ್ಲಿ ಸಂಭವಿಸಿದ ಭೂಕಂಪ ಹಾಗೂ ಸುನಾಮಿಯ ತೀವ್ರತೆ ಹಾಗೂ ಅಲ್ಲಿನ ಸಾವು ನೋವುಗಳನ್ನು ಕಂಡ ನಂಜಮ್ಮರಿಗೆ ಈ ಎಲ್ಲಾ ಘಟನೆಗಳನ್ನು ನೆನಪಿಸುವಂತೆ ಮಾಡಿತ್ತು. ಇದು ನಿಜಕ್ಕೂ ಒಂದು ಭಯಾನಕ ಸನ್ನಿವೇಶ ಎಂದು ನೆನಪಿಸಿಕೊಳ್ಳುತ್ತಾರೆ ನಂಜಮ್ಮ.

ಒಂದು ಸುನಾಮಿಯ ಹೊಡೆತಕ್ಕೆ ಸಿಕ್ಕಿ ಬದುಕೇ ಮುಗಿದುಹೋಯಿತು ಅಂದುಕೊಂಡಿದ್ದ ನಂಜಮ್ಮ ಸಾವು-ಬದುಕಿನ ನಡುವೆ ಹೋರಾಡಿ ಕೊನೆಗೂ ಸಾವೆಂಬ ಸುನಾಮಿಯನ್ನೂ ಗೆದ್ದಿದ್ದಾರೆ.ನಿನ್ನೆಯೂ ಸಂಭವಿಸಿದ ಘಟನೆಯಲ್ಲಿ ನಂಜಮ್ಮರಂತೆ ಸಾವು-ಬದುಕಿನ ನಡುವೆ ಹೋರಾಡುತ್ತಿರುವವರು ಗೆದ್ದುಬರಲಿ ಎಂದು ಆಶಿಸೋಣ.

01 ಮಾರ್ಚ್ 2011

ಇದೇನು ಹಗರಣವಾ ?

ಸುಳ್ಯದಲ್ಲಿ ಮೊನ್ನೆ ಇದ್ದಕ್ಕಿದ್ದಂತೆಯೇ ಇ ಸ್ಟಾಂಪ್ ಪಡೆಯಲು ತೀರಾ ರಶ್. ಇಂದು ಕೊಟ್ಟರೆ ನಾಳೆಯೋ ನಾಡಿದ್ದೋ ಸಿಗುತ್ತಿತ್ತು.ಇದ್ಯಾಕೆ ಅಂತ ಯಾರಿಗೂ ಗೊತ್ತಿಲ್ಲ.ಇದರ ಬೆನ್ನಿಗೇ ಒಂದೊಂದು ಸಂಗತಿ ಬಿಚ್ಚತೊಡಗಿತು. ಸ್ವಲ್ಪ ಹುಡುಕಾಡಿದಾಗ ಸಿಕ್ಕಿದ್ದು ಹೀಗೆ . .


ತೆಲಗಿ ಹಗರಣದ ನಂತರ ಛಾಪಾ ಕಾಗದ ವಿತರಣೆಯಲ್ಲಿ ಭಾರೀ ಎಚ್ಚರಿಕೆಯನ್ನು ಸರಕಾರ ವಹಿಸಿತ್ತು. ಅದಕ್ಕಾಗಿ ವಿವಿದ ರೀತಿಯ ಕ್ರಮ ಕೈಗೊಂಡಿತ್ತು. ಈಗ ಇ ಸ್ಟಾಂಪಿಗ್ ವ್ಯವಸ್ಥೆ ಮಾಡಿದೆ.ಅದರೊಂದಿಗೆ ರಿಜಿಸ್ಟ್ರಾರ್ ಕಚೇರಿಯಲ್ಲಿ ಎಂಬ್ರೋಸಿಂಗ್ ಮತ್ತು ಪ್ರಾಂಕ್ಲಿನ್ ವ್ಯವಸ್ಥೆಯನ್ನು ಜನಸಾಮಾನ್ಯರಿಗೆ ಮಾಡಿಕೊಟ್ಟಿದೆ.

ಸುಳ್ಯದಲ್ಲಿ ಮೊನ್ನೆ ಇದ್ದಕ್ಕಿದ್ದಂತೆಯೇ ಇ ಸ್ಟಾಂಪ್ ಪೇಪರ್ ಪಡೆಯಲು ತೀರಾ ರಶ್. ಇಂದು ಕೊಟ್ಟರೆ ನಾಳೆಯೋ ನಾಡಿದ್ದೋ ಇ ಸ್ಟಾಂಪ್ ಸಿಗುತ್ತಿತ್ತು. ಎಂಬ್ರೋಸಿಂಗ್ , ಪ್ರಾಂಕ್ಲಿನ್ ವ್ಯವಸ್ಥೆ ಸುಳ್ಯದಲ್ಲಿ ಈಗ ಇಲ್ಲವೆಂದು ಜನ ಹೇಳುತ್ತಿದ್ದರು. ಆದರೆ ಇದು ಯಾಕೆ ಎಂದು ಯಾರಿಗೂ ಗೊತ್ತಿಲ್ಲ. ಆದರೆ ಈ ವಿಚಾರದ ಬೆನ್ನ ಹಿಂದೆ ಹೋದರೆ ಕಳೆದ ಎರಡು ಮೂರು ವರ್ಷದಿಂದ ನಡೆಯುತ್ತಿದ್ದ ದೊಡ್ಡ ವಂಚನೆ ಬೆಳಕಿಗೆ ಬರುತ್ತದೆ. ಸರಕಾರಕ್ಕೆ ಸಾವಿರಾರು ರುಪಾಯಿ ವಂಚಿಸಿದ ಸಂಗತಿ ಹೊರಬರುತ್ತದೆ.ಆದರೆ ಈಗ ಇದೆಲ್ಲವೂ ಮುಚ್ಚಿ ಹೋಗುವ ಹಂತದಲ್ಲಿದೆ.

ಏನಿದು ?

ಛಾಪಾ ಕಾಗದದ ಬದಲಾಗಿ ರಿಜಿಸ್ಟ್ರಾರ್ ಕಚೇರಿಯಲ್ಲಿ ಎಂಬ್ರೋಸಿಂಗ್ ಮಾಡುವ ಪದ್ದತಿಯನ್ನು ಸರಕಾರ ಜಾರಿಗೊಳಿಸಿತ್ತು. ಇದರ ಪ್ರಕಾರ ನಾವು ಖಾಲಿ ಹಾಳೆ ಅಥವಾ ಹಳೆಯ ಸ್ಟಾಂಪ್ ಪೇಪರನ್ನು ತೆಗೆದುಕೊಂಡು ಹೋದರೆ ಅಲ್ಲಿ ಒಂದು ಸೀಲ್ ಹಾಕಿ ಸರಕಾರಕ್ಕೆ ನೂರು ರುಪಾಯಿ ಕಟ್ಟಬೇಕು. ಅಂದರೆ ಆ ಎಂಬ್ರೋಸಿಂಗ್ ಮಾಡಿದ ಹಾಳೆಯಲ್ಲಿ ಒಂದು ಸೀರಿಯಲ್ ನಂಬರನ್ನು ಬರೆಯಬೇಕು.ಇದೇ ಸಂಖ್ಯೆಯನ್ನು ನಮೂದಿಸಿ , ರಿಜಿಸ್ಟ್ರಾರ್ ಕಚೇರಿಯಲ್ಲಿ ರೆಕಾರ್ಡ್ ಮೈಂಟೈನ್ ಮಾಡಬೇಕು. ಇದರ ಪ್ರಕಾರ ಸರಕಾರಕ್ಕೆ ಹಣ ಸಂದಾಯ ಮಾಡಬೇಕು. ಆದರೆ ಇಲ್ಲಿ ಆಗಿರುವುದೇ ಬೇರೆ. ಆ ಸೀರಿಯಲ್ ನಂಬರೇ ಇಲ್ಲ. ಈ ನಂಬರೇ ಇಲ್ಲದ ಮೇಲೆ ಸರಕಾರಕ್ಕೆ ಹಣ ಕೊಡುವುದು ಹೇಗೆ ಮತ್ತು ಯಾರು. ಹಾಗಂತ ಸಾರ್ವಜನಿಕರಿಂದ ಹಣ ವಸೂಲು ಮಾಡಲಾಗುತ್ತದೆ. ಇಂತಹ ಅದೆಷ್ಟೋ ಛಾಪಾ ಕಾಗದ 2 ವರ್ಷದಿಂದ ಬಳಕೆಯಾಗುತ್ತಾ ಇದೆ. ಎಂಗ್ರಿಮೆಂಟ್‌ಗಳು ನಡೆಯುತ್ತಾ ಇದೆ.




ಇತ್ತೀಚೆಗೆ ಕೃಷಿಕರೊಬ್ಬರು ಬ್ಯಾಂಕೊಂದಕ್ಕೆ ವಿವಿದ ದಾಖಲೆಗಳನ್ನು ನೀಡಿದರಂತೆ , ಆಗ ಬೆಳಕಿಗೆ ಬಂದದ್ದು ಈ ನಕಲಿ ಸ್ಟ್ಯಾಂಪ್ ಪೇಪರ್. ಈ ಬಗ್ಗೆ ರಿಜಿಸ್ಟ್ರಾರ್ ಕಚೇರಿಯಲ್ಲೂ ವಿಚಾರಿಸದಾಗ ಎಲ್ಲಾ ಪ್ರಮಾದಗಳು ಬೆಳಕಿಗೆ ಬಂದಿದೆ. ಅದಾದ ಬಳಿಕ ಕೆಲ ದಿನದ ನಂತರ ಮರಳು ಸಾಗಾಟ ಪ್ರಕರಣವನ್ನು ಕೇರಳ ಪೊಲೀಸರು ಬೇಧಿಸಿದಾಗ ಅದರಲ್ಲಿ ಕಂಡು ಬಂದದ್ದೂ ಇಂತಹದ್ದೇ ನಕಲಿ ಸ್ಟ್ಯಾಂಪ್ ಪೇಪರ್. ಆದರೆ ಎರಡೂ ಪ್ರಕರಣದಲ್ಲಿ ಈ ಬಗ್ಗೆ ದೂರುಗಳು ದಾಖಲಾಗಿಲ್ಲ. ಎಲ್ಲವೂ ಅಲ್ಲಿಗೇ ಮುಚ್ಚಿಹೋಗಿದೆ.

ಇದೆಲ್ಲಾ ಬೆಳಕಿಗೆ ಬಂದಾಗುವ ವೇಳೆ ಕೂಡಲೇ ಎಂಬ್ರೋಸಿಂಗ್ ಪದ್ದತಿಯನ್ನು ನಿಲ್ಲಿಸಿ , ಕೇವಲ ಇ ಸ್ಟ್ಯಾಂಪಿಂಗ್ ವ್ಯವಸ್ಥೆ ಮಾತ್ರಾ ಬಳಕೆಯಾಗಬೇಕು ಎಂಬ ಸುಳ್ಯದಲ್ಲಿ ರೂಲ್ ಬಂತು. ಹೀಗಾಗಿ ಈಗ ಜನರಿಗೆ ಸಂಕಷ್ಠ.

ಅಷ್ಟಕ್ಕೂ ಈ ಹಗರಣ ಮಾಡಿದವರು ಯಾರು ?. ಹೇಗೆ ಆಯಿತು ? ಇಲಾಖೆಗಳು ಈ ಬಗ್ಗೆ ಯಾಕೆ ತನಿಖೆ ಮಾಡುತ್ತಿಲ್ಲ ಎಂಬುದು ಇನ್ನೂ ನಿಗೂಢವಾಗಿಯೇ ಉಳಿದಿದೆ.ಕಳೆದ 2 ವರ್ಷದಿಂದ ನಡೆದ ಈ ಅವ್ಯಹಾರ ಎಷ್ಟಾಗಿದೆ ಎಂಬುದೂ ಗೊತ್ತಾಗಿಲ್ಲ.ಇದರ ಬಗ್ಗೆ ಸಮಗ್ರ ತನಿಖೆ ಆಗಬೇಕಾಗಿದೆ.

11 ಫೆಬ್ರವರಿ 2011

ಭೂಮಿ ಈಗ ರಜಸ್ವಲೆ. .

ಸೃಷ್ಠಿಯ ಮೂಲ ಹೆಣ್ಣು. ಹೆಣ್ಣನ್ನು ಭೂಮಿ, ಪ್ರಕೃತಿ ಹೀಗೆ ವಿವಿದ ರೂಪದಲ್ಲಿ ಕಂಡವರು ನಮ್ಮ ಪೂರ್ವಜರು.ಇದಕ್ಕೂ ಕಾರಣವಿದೆ, ಒಂದು ಸೃಷ್ಠಿಯು ಹಿಂದೆ ಹೆಣ್ಣು ಇದ್ದೇ ಇರುತ್ತಾಳೆ. ಇರಲೇಬೇಕು.ಈ ಪ್ರಕೃತಿ, ಭೂಮಿಯೂ ಕೂಡಾ ಹಾಗೆಯೇ.ಯಾವುದೇ ಬೆಳೆಗಳ ಸೃಷ್ಠಿಗೆ ಭೂಮಿ ಮತ್ತು ಈ ಪ್ರಕೃತಿ ಬೇಕೇ ಬೇಕು.ಇಂತಹ ಸೃಷ್ಠಿಯಾಗುವುದಕ್ಕೆ ಮೊದಲು ಅವಳು ಪ್ರಬುದ್ದಳಾಗಬೇಕು , ರಜಸ್ವಲೆಯಾಗಬೇಕು.ಇದು ಪ್ರಕೃತಿ ನಿಯಮವೂ ಹೌದು. ಅದರಂತೆ ಈಗ ಭೂದೇವಿಯು ರಜಸ್ವಲೆಯಾಗಿದ್ದಾಳೆ. ಸೃಷ್ಠಿಗೆ ತಯಾರಾಗಿದ್ದಾಳೆ. ಹಾಗಾಗಿ
ಎಲ್ಲೆಡೆ ಮೌನ ಆವರಿಸಿದೆ. ಭೂಮಿಗೆ ಕಾಲಿಡುವುದಕ್ಕೂ ಈಗ ಹಿಂಜರಿಕೆ.ಎಲ್ಲಿ ಅವಳಿಗೆ ನೋವಾಗುತ್ತದೋ ಅನ್ನೋ ಭಾವ.ಎಂತಹ ಪ್ರೀತಿಯ ಭಾವ ಅದು !.

ಈಗ ಭೂಮಿಯ ಕಡೆಗೆ ಒಮ್ಮೆ ನೋಡಿ. ಮೊನ್ನೆ ಮೊನ್ನೆ ಬರಡು ಬರಡಾಗಿದ್ದ ಮರಗಳೆಲ್ಲಾ ಮತ್ತೆ ಚಿಗುರಿ ನಿಂತಿದೆ.ಮಾಮರವೆಲ್ಲಾ ಹೂ ಬಿಟ್ಟು ಕಾಯಿ ಕಟ್ಟಿಕೊಳ್ಳುವುದಕ್ಕೆ ಸಿದ್ದವಾಗುತ್ತಿದೆ , ಅಂದರೆ ಗರ್ಭವತಿಯಾಗುವುದಕ್ಕೆ ಅಣಿಯಾಗುತ್ತಿದೆ , ಇತ್ತ ಕೃಷಿಯೂ ಹಾಗೇ ಅಡಿಕೆಯಲ್ಲಾದರೆ ಹಿಂಗಾರ ಬಿಟ್ಟು ಸುವಾಸನೆ ಬೀರುತ್ತಿದೆ , ದುಂಬಿಗಳನ್ನು ಪರಾಗಸ್ಪರ್ಶಕ್ಕೆ ಆಕರ್ಷಿಸುತ್ತಿದೆ , ಇಲ್ಲಿ ಗದ್ದೆ ನೋಡಿ ಎಲ್ಲವೂ ಸಿದ್ದವಾಗಿದೆ ಕಟಾವಾಗುವುದಕ್ಕೆ ಕಾದುನಿಂತಿದೆ, ಇದೆಲ್ಲದರ ಜೊತೆಗೆ ಚಳಿಯೂ ಸಾತ್ ನೀಡುತ್ತದೆ. ಈ ನಡುವೆ ಬೀಸುವ ತಂಗಾಳಿ. ಇದನ್ನು ನಮ್ಮೂರ ಜನ ಫಲ ಗಾಳಿ ಅಂತಾನೇ ಕರೀತಾರೆ.ಯಾಕಂದ್ರೆ ಇದರಿಂದಾಗಿಯೇ ಕಾಯಿ ಕಟ್ಟುವುದೂ ಇದೆ.ಹೀಗೇ ಭುವಿಯ ಒಡಲೊಳಗೆ ಅದರದ್ದೇ ಆದ ಸೃಷ್ಠಿಯ ತತ್ವಗಳು ಕಾಣಿಸುತ್ತವೆ. ಆದರೆ ಮಾನವರಾದ ನಾವು ಈ ಪ್ರಕೃತಿಯೊಂದಿಗೆ ಎಷ್ಟೇ ಬಡಿದಾಡಿದರೂ ಅವಳು ಮಾತ್ರಾ ಸಹಿಸಿಕೊಂಡಾದ್ದಾಳೆ. ಯಾಕೆಂದರೆ ಅವಳು ಮಾತೆ. .!. ಈ ಮಾತೆಯೊಂದಿಗೆ ಜಗಳವಾಡುವುದನ್ನು ಕೆಲ ದಿನವಾದರೂ ನಿಲ್ಲಿಸಬೇಡವೇ.ಹಾಗಾದರೆ ಯಾವಾಗ. ಅವಳು ರಜಸ್ವಲೆಯಾದ ದಿನ. ಈಗ ಅವಳು ರಜಸ್ವಲೆ. ತಿಂಗಳ ಮುಟ್ಟು. ಹಾಗಾಗಿ ಅವಳಿಗೆ ವಿಶ್ರಾಂತಿ ಬೇಕು.ನಾವು ಜಗಳವನ್ನು ಈ 3 ದಿನ ನಿಲ್ಲಿಸಲೇಬೇಕು. ಅದಕ್ಕಾಗಿ ನಮ್ಮೂರಿನ ಜನ ಇದನ್ನು ಕೆಡ್ಡಾಸ ಎಂಬ ಆಚರಣೆಯ ಮೂಲಕ ಮೂರು ದಿನ ಭೂಮಾತೆಯ ಪೂಜೆ ಮಾಡುತ್ತಾರೆ.ಯಾವೊಂದು ಕೆಲಸವೂ ಮಾಡುವುದಿಲ್ಲ.

ವರ್ಷ ಪೂರ್ತಿ ಭೂಮಿಯೊಂದಿಗೆ ದುಡಿದು,ಸರಸವಾಡಿ ಈಗ ಭೂಮಿಯನ್ನು ಅರಾಧಿಸುವ ಒಂದು ವಿಶಿಷ್ಠ ಆಚರಣೆಯೇ ಈ ಕೆಡ್ಡಾಸ.ಈ ತುಳುನಾಡು ತನ್ನದೇ ಆದ ಸಂಪ್ರದಾಯವನ್ನು ಬೆಳೆಸಿಕೊಂಡು ಬಂದಿದೆ.ಇಲ್ಲಿನ ಆಚರಣೆಗಳೆಲ್ಲವೂ ವಿಶಿಷ್ಠವಾಗಿದೆ ಮತ್ತು
ಅದರ ಹಿಂದೆ ಒಂದು ವೈಜ್ಞಾನಿಕ,ಭಾವನಾತ್ಮಕ ಸಂಬಂಧಗಳೂ ಇರುತ್ತದೆ.ಇಲ್ಲಿ ಸಾಮಾನ್ಯವಾಗಿ ಸಾಮೂಹಿಕವಾದ ಹಬ್ಬಗಳ ಆಚರಣೆಗಳೇ ಹೆಚ್ಚು ಪ್ರತಿಬಿಂಬಿತವಾಗುತ್ತದೆ.ಹೆಚ್ಚ ಆಪ್ಯಾಯಮಾನವಾಗುತ್ತದೆ. ಮಾತ್ರವಲ್ಲ ಎಲ್ಲಾ ಆಚರಣೆಗಳೂ ಕೃಷಿ ಹಾಗೂ ಬೇಸಾಯದ ಮತ್ತು ಪ್ರಕೃತಿ ಮೂಲದಿಂದ ಬಂದ ಆಚರಣೆಗಳೇ ಆಗಿದೆ.ಭೂಮಿಯನ್ನು ಹೆಣ್ಣೆಂದು ಕಂಡು ಅವಳಿಗೆ ಪೂಜೆ ಮಾಡುವ ಸಂಪ್ರದಾಯ ಇಲ್ಲೂ ಇದೆ. ಈಗ ಅವಳು ಋತುಮತಿಯಾಗುತ್ತಾಳೆ ಅದಾದ ಬಳಿಕ 3 ಅಥವಾ 4 ದಿನಗಳ ಕಾಲ ಅವಳು ಮೈಲಿಗೆಯಲ್ಲಿರುತ್ತಾಳೆ ನಂತರ ಪರಿಶುದ್ಧಳಾಗುತ್ತಾಳೆ ಎಂಬುದನ್ನು ಈ ಆಚರಣೆ ಪ್ರತಿಬಿಂಬಿಸುತ್ತದೆ. ಹೆಣ್ಣು ಋತುಮತಿಯಾಗುವುದು ಎಂದರೆ ಸೃಷ್ಠಿ ಕ್ರಿಯೆಗೆ ಅಣಿಯಾಗುವುದು ಎಂದಾದರೆ ಭೂಮಿ ಯಾವ ಸೃಷ್ಠಿ ಕ್ರಿಯೆಗೆ ಅಣಿಯಾಗುತ್ತಾಳೆ ಎಂಬುದು ಕೂಡಾ ಈ ಆಚರಣೆಯಿಂದ ತಿಳಿಯುತ್ತದೆ.ಶರದೃತುವಿನಲ್ಲಿ ಸಸ್ಯಶ್ಯಾಮಲೆಯಾಗಿ ಕಾಣುವ ಇಳೆ ನಂತರ ಮಾಸದಲ್ಲಿ ತನ್ನೆಲ್ಲಾ ಎಲೆಗಳನ್ನು ಉದುರಿಸಿ ಕೊಂಡು ಬೋಳು ಬೋಳಾಗಿ ಪ್ರಕೃತಿ ಕಾಣುತ್ತದೆ ನೋಡುವುದಕ್ಕೆ ಬಂಜೆಯಾಗುತ್ತಾಳೆ. ಮತ್ತೆ ವಸಂತ ಮಾಸ ಬಂದಾಗ ಹಸಿರು ಹಸಿರಾಗಿ ಭೂಮಿ ಸೊಂಪಾಗಿ ಕಾಣುತ್ತದೆ.ಅನೇಕ ಬದಲಾವಣೆಗಳು ಆಗುತ್ತವೆ.ಈ ವೈಜ್ಞಾನಿಕ ಬದಲಾವಣೆಗಳನ್ನು ತನಗೆ ಬದಲಾಯಿಸಲು ಆಗದೆ ,ವಿಚಿತ್ರವನ್ನು ಅರಿಯಲು ಸಾಧ್ಯವಾಗದೇ ಇದ್ದಾಗ ತನ್ನದೇ ಆದ ರೀತಿಯಲ್ಲಿ ಕಲ್ಪಸಿಕೊಂಡ ಮನುಷ್ಯ ಭೂಮಿಗೂ ಕಲ್ಪನೆಗಳನ್ನು ಮಾಡಿಕೊಂಡ. ಅದಕ್ಕನುಗುಣವಾಗಿ ಋತುಶಾಂತಿ ಇತ್ಯಾದಿಗಳು ನಡೆಯಬೇಕು ಎಂದು ಕಲ್ಪಸಿಕೊಂಡು ಇಂತಹ ಆಚರಣೆಗಳನ್ನು ಬೆಳೆಸಿಕೊಂಡು ಬಂದಿದೆ.




ಜನವರಿ - ಫೆಬ್ರವರಿ ತಿಂಗಳಲ್ಲಿ ಗಿಡಮರಗಳು ಎಲೆಗಳನು ಉದುರಿಸಿ ಬೋಳಾಗಿ ಕಾಣುತ್ತದೆ.ಇದು ಭೂಮಿ ತಾಯಿಯ ಮುಟ್ಟಿನ ದಿನ ಎಂದು ನಂಬಿದ ಜನ ಈ ಅವಧಿಯಲ್ಲಿ ಲೆಕ್ಕ ಹಾಕಿ ಸಂಕ್ರಮಣದ ಸಮೀಪದ 3 ಅಥವಾ 4 ದಿನಗಳ ಕಾಲ ಮುಟ್ಟಿನ ದಿನವೆಂದು ತುಳುವರು ಕರೆದರು. ಈ ಕಾಲವನ್ನು ಕೆಡ್ಡಾಸ ಎಂಬುದಾಗಿ ಕರೆದರು.ಈ ದಿನಗಳಲ್ಲಿ ಭೂಮಿ ಅದುರಬಾರದು, ಹಸಿ ಗಿಡಗಳನ್ನು ಕಡಿಯಬಾರದು ಒಣ ಮರಗಳನ್ನು ತುಂಡರಿಸಬಾರದು , ಬೇಟೆಗೆ ಹೋಗಬೇಕು. ಒಟ್ಟಿನಲ್ಲಿ ಭೂಮಿಯನ್ನು ಯಾವುದೇ ರೀತಿಯಿಂದ ಹಾನಿ ಮಾಡಬಾರದು ಎನ್ನವುದು ಇವರ ಸಾರಾಂಶ. ಕೆಡ್ಡಾಸದ ಒಂದನೇ ದಿನದಂದು ಮನೆ ಆವರಣಗಳನು ಸ್ವಚ್ಚಗೊಳಿಸಿ ಅಕ್ಕಿಯಿಂದ ಮಾಡಿದ ತಿಂಡಿಯನ್ನು ತಯಾರಿಸುತ್ತಾರೆ.ಇದಕ್ಕೆ 7 ಬಗೆಯ ಧಾನ್ಯವನ್ನು ಬೆರೆಸಲಾಗುತ್ತದೆ.ಈ ತಿಂಡಿಯನನು ನನ್ಯರಿ ಅಥವಾ ತಂಬಿಟ್ಟು ಎಂದು ಕೆರೆಯಲಾಗುತ್ತದೆ. ಏಕೆಂದರೆ ಹೆಣ್ಣು ರಜಸ್ವಲೆಯಾದಾಗ ಅವಳಗೆ ಪೌಷ್ಠಿಕಾಂಶವುಳ್ಳ ಆಹಾರ ಬೇಕು ಎನ್ನುವುದರ ಸಂಕೇತವಿದು.

ಕೆಡ್ಡಸದ 3 ಅಥವಾ 4ನೇ ದಿನ ಭೂಮಿ ತಾಯಿಯ ಆರಾಧನೆಗೆ ಮೀಸಲಿಟ್ಟ ಜಾಗದಲ್ಲಿ ಅಂದರೆ ತುಳಸಿ ಕಟ್ಟೆಯ ಬಳಿಯಲ್ಲಿ ವಿವಿಧ ಜಾತಿಯ ಮರಗಳ 7 ಎಲೆಗಳನ್ನು ಇರಿಸಿ ಭೂಮಿ ತಾಯಿ ಪರಿಶುದ್ದಳಾಗಲು ಅರಶಿನ , ಕುಂಕುಮ, ಹಾಲು,ಇತ್ಯಾದಿಗಳನ್ನು 5 ಅಥವಾ 7 ಮಂದಿ ಮುತ್ತೈದೆಯರು ಭೂಮಿಗೆ ಪ್ರೋಕ್ಷಣೆ ಮಾಡುತ್ತಾರೆ.ನಂತರ ನಮಸ್ಕರಿಸಿ ಎಲ್ಲರೂ ಒಟ್ಟಿಗೆ ಸೇರಿ ಊಟ ಉಪಹಾರಗಳನ್ನು ಮಾಡುತ್ತಾರೆ.

ಹೀಗೆ ಒಂದು ಸೃಷ್ಠಿ ಕ್ರಿಯೆಯ ಮೊದಲ ಭಾಗವನ್ನು ಭುವಿಯಲ್ಲೂ ಕಾಣುವ ಈ ಸಂಪ್ರದಾಯವು ಅತ್ಯಂತ ವಿಶಿಷ್ಠವಾಗಿ ಕಾಣುತ್ತದೆ.ತುಳು ನಾಡಿನ ಬಹುತೇಕ ಆಚರಣೆಗಳೆಲ್ಲವೂ ಕೃಷಿಯನ್ನು ಅವಲಂಬಿಸಿಕೊಂಡೇ ಇರುತ್ತದೆ.ಅಂದರೆ ಭೂಮಿ ವರ್ಷಕ್ಕೊಮ್ಮೆ ಋತುಮತಿಯಾದರೆ ಪ್ರಕೃತಿಗೆ ವರ್ಷಕ್ಕೊಮ್ಮೆ ಹಸಿರು ಜೀವ.

ಈಗ ಮತ್ತೆ ಪ್ರಕೃತಿ ಹಸಿರು ಹಸಿರಾಗಿ, ಮುಂಜಾನೆಯ ಮುಂಜಾವಿಗೆ ಮೈಯೊಡ್ಡಿ ನಿಂತಿದ್ದಾಳೆ .ಈ ಸೊಬಗ ಆಸ್ವಾದಿಸಲು , ಅದನ್ನು ಸ್ವಾಗತಿಸಲು ಮಂದಿಯೆಲ್ಲ ಕಾತರರಾಗಿದ್ದಾರೆ ಎನ್ನಬಹುದು. ಇನ್ನೊಂದೆಡ ಮುಂದಿನ ತಿಂಗಳು ರೈತನ ಬೆಳೆಗಳೆಲ್ಲಾ ಕಟಾವಿಗೆ ಸಿದ್ದವಾಗುತ್ತದೆ. ಮಾತ್ರವಲ್ಲ ವರ್ಷಪೂರ್ತಿ ಭೂಮಿಗೆ ನೋವು ಕೊಡುತ್ತಿದ್ದರೆ ಈ ೪ ದಿನಗಳ ಕಾಲ ಭೂಮಿಯನ್ನು ನೆನೆಯಲು ಈ ಆಚರಣೆ ಎನ್ನಬಹುದು. ರಾಜ್ಯದ ವಿವಿದೆಡೆ ಇಂತಹ ಆಚರಣೆಯಿದೆ.. ಇದೆಲ್ಲವೂ ಕೂಡಾ ಪ್ರಕೃತಿ ಮತ್ತು ಕೃಷಿಯನ್ನು ಅವಲಂಬಿಸಿಕೊಂಡಿದೆ ಎಂಬುದು ಗಮನಾರ್ಹ. ಆದರೆ ಇಂದು ಅಂತಹ ಶ್ರೇಷ್ಠವಾದ ಕೃಷಿಯ ಏನಾಗಿದೆ.? ರೈತರ ಸ್ಥಿತಿ ಏನಾಗಿದೆ.? ಬೇಸಾಯ ಇತ್ಯಾದಿಗಳ ಬದಲು ವಾಣಿಜ್ಯ ಬೆಳೆಗಳು ಬಂದಿದೆ.

ಇದರ ಜೊತೆ ಜೊತೆಗೇ ಈ ಬಾರಿ ಕೃಷಿ ಬಜೆಟ್ ಕೂಡಾ ಇದೆಯಂತೆ. ಹಾಗಾಗಿ ಈ ಬಾರಿ ಭುವಿಗೆ ಗರ್ಭಪಾತವಾಗುತ್ತೋ , ಗಂಡು ಮಗುವಾಗುತ್ತೋ , ಹೆಣ್ಣು ಮಗುವಾಗುತ್ತೋ ಅಥವಾ ಬಂಜೆಯಾಗುತ್ತೋ ನೋಡಬೇಕು.

04 ಫೆಬ್ರವರಿ 2011

ಪವರ್ ಫುಲ್ ಕರ್ನಾಟಕ

ಗ್ರಾಮೀಣ ಕರ್ನಾಟಕ ಈಗ “ಪವರ್” ಫುಲ್.. !, ಆದರೆ ಯಾರೊಬ್ಬರೂ ಈ ಬಗ್ಗೆ ಮಾತನಾಡುತ್ತಿಲ್ಲ. ಈ ಶಕ್ತಿ ಹೇಗೆ ಬಂತು ಅಂತ ಗ್ರಾಮೀಣ ಜನ ಮಾತನಾಡುತ್ತಿದ್ದಾರೆ. ಅಷ್ಟಕ್ಕೂ ಗ್ರಾಮೀಣ ಕರ್ನಾಟಕ ಹೇಗೆ ಪವರ್ ಫುಲ್ ಅಂತೀರಾ. ಇಲ್ಲಿ ಈಗ ನಿರಂತರ ಪವರ್ ಇದೆ. ಹಳ್ಳಿ ಜನರಿಗೆ ಖುಷಿ ಇದೆ.

ಗ್ರಾಮೀಣ ಕರ್ನಾಟಕದಲ್ಲಿ ಒಂದು ಕಾಲವಿತ್ತು. ಬೆಳಗ್ಗೆ ಹೋದ ಪವರ್ ಬರೋದೇ ಸಂಜೆ ಇನ್ನೆಷ್ಟೊತ್ತಿಗೋ. ಶಾಲಾ ಮಕ್ಕಳಿಗೆ , ಗೃಹಿಣಿಯರಿಗೆ ತಲೆನೋವೇ ತಲೆ ನೋವು.ಆದ್ರೆ ಹೇಳೋದು ಯಾರಲ್ಲಿ. ಒಂದಷ್ಟು ಪತ್ರಿಕೆಗಳಲ್ಲಿ ವರದಿಗಳೂ , ಇನ್ನೊಂದಿಷ್ಟು ಪ್ರತಿಭಟನೆಗಳು ನಡೆದರೆ ಮುಗೀತು.ಪವರ್ ಪ್ರೋಬ್ಲೆಮ್ ಮುಗೀಲೇ ಇಲ್ಲ. ಅದಕ್ಕಿಂತಲೂ ಹೆಚ್ಚು ಕೃಷಿಕರು ಪಡೋ ಸಂಕಷ್ಠ ಒಂದಲ್ಲ ಹಲವಾರು. ತೋಟಕ್ಕೆ ನೀರುಣಿಸಲು ರಾತ್ರಿ ಹಗಲು ಶ್ರಮ ಪಡಬೇಕು. ಪವರ್ ಬಂದರೂ ಪಂಪ್ ಚಾಲೂ ಆಗೋದಿಲ್ಲ.ಆದರೂ ವಿಧಿಯಿಲ್ಲ ಕಾದು ಕುಳಿತಾದರೂ ಚಾಲೂ ಮಾಡಲೇ ಬೇಕು.ಅಲ್ಲೂ ಕಾಂಪಿಟೀಶನ್ ಇರ್‍ತಿತ್ತು. ಪವರ್ ಬಂದಾಗಲೇ ಪಂಪ್ ಚಾಲೂ ಆದರೆ ಮುಗೀತು . ಇಲ್ಲಾಂದ್ರೆ ವೋಲ್ಟೇಜ್ ಪ್ರಾಬ್ಲಂನಿಂದಾಗಿ ಚಾಲೂ ಆಗೋದಿಲ್ಲ. ತುಂಬಾ ವೋಲ್ಟೇಜ್ ಕಡಿಮೆ ಆದ್ರೆ ಲೈನ್ ಟ್ರಿಪ್ ಆಗುತ್ತೆ. ಮತ್ತೆ ಐದೋ ಹತ್ತೋ ನಿಮಿಷ ಕಳೆದು ಪವರ್ ಬರೋದು. ಆಗಲೂ ಇದೇ ಸಮಸ್ಯೆ. ಹೀಗೆ ಒಂದೇ ಎರಡೇ ಹತ್ತಾರು ಸಮಸ್ಯೆ ಗ್ರಾಮೀಣ ಕರ್ನಾಟಕದಲ್ಲಿ.

ಆದರೆ ಈ ಬಾರಿ ಸ್ವಲ್ಪ ಸುಧಾರಿಸಿದಂತೆ ಕಾಣುತ್ತೆ. ಯಾಕೆಂದರೆ ಅಂದೆಲ್ಲಾ ನವೆಂಬರ್ ಅಂತ್ಯ , ಡಿಸೆಂಬರ್‌ನಲ್ಲಿಯೇ ಪವರ್ ಕಟ್ ಶುರುವಾಗುತ್ತಿತ್ತು. ಹೀಗಾಗಿ ಮಾರ್ಚ್ ವೇಳೆಗೆ ಪರಿಸ್ಥಿತಿ ತೀರಾ ಕಠಿಣವಾಗುತ್ತಿತ್ತು.ಆದರೆ ಈ ಬಾರಿ ಹಾಗೆ ಕಾಣುತ್ತಿಲ್ಲ. ಫೆಬ್ರವರಿ ಆರಂಭವಾದರೂ ದಿನ ಪೂರ್ತಿ ಪವರ್ ಇದೆ. ಅದರಲ್ಲಿ 12 ಗಂಟೆ ಕೃಷಿಕರಿಗಾಗಿ ತ್ರೀ ಫೇಸ್ ಇದೆ. ಉಳಿದಂತೆ 12 ಗಂಟೆ ಮನೆ ಬಳಕೆಗೆ ಪವರ್ ಇದೆ. ಹೀಗಾಗಿ ನಿರಂತರ 24 ಗಂಟೆ ಮನೆಗೆ ಪವರ್ ಇದ್ದೇ ಇದೆ. ಆದರೆ ಇದು ಎಷ್ಟು ದಿನ ಅಂತ ಗೊತ್ತಿಲ್ಲ. ಒಂದಂತೂ ಸತ್ಯ ಇಷ್ಟು ದಿನ ಪವರ್ ನೀಡಿದ್ದಾರಲ್ಲಾ ಮುಂದಿನ ಬಾರಿ ಇನ್ನೂ ಸರಿಯಾಗಬಹುದು ಅನ್ನೋ ಆಶಾವಾದ ಗ್ರಾಮೀಣರಲ್ಲಿದೆ.ಅಂತೂ ಯಾವುದೇ ತೊಂದರೆ ಇಲ್ಲದೆ ಈಗ , ಇದುವರೆಗೆ ಪವರ್ ನೀಡಿದ್ದಾರಲ್ಲಾ ಅಂತ ಕೃಷಿಕರೆಲ್ಲಾ ಈಗ ನೆನಪಿಸಿಕೊಳ್ಳುತ್ತಾರೆ. ಅದರಲ್ಲೂ ಉಚಿತ ವಿದ್ಯುತ್ ಕೂಡಾ ಕೊಟ್ಟಿದ್ದಾರಲ್ಲಾ ಅದು ಇನ್ನಷ್ಡು ಖುಷಿ. ಆವತ್ತು ಮಾತನಾಡಿಕೊಳ್ಳುತ್ತಿದ್ದರು , ಹೇಗೂ ಫ್ರೀ ಕರೆಂಟ್ ಅಲ್ವಾ ಬರುವ ವರ್ಷದಿಂದ ಪವರೇ ಇರಲಿಕ್ಕಿಲ್ಲ ಅಂತ ಮಾತನಾಡಿಕೊಳ್ಳುತ್ತಿದ್ದರು. ಆದರೆ ಈಗ ಆ ನಿಲುವಿನಿಂದ ಬದಲಾಗಿದ್ದಾರೆ ಗ್ರಾಮೀಣ ಜನ. ಹೀಗೇ ಮುಂದುವರಿಯಲಿ ಅನ್ನೋದೇ ಕೃಷಿಕರ ಒತ್ತಾಸೆ.

02 ಫೆಬ್ರವರಿ 2011

ಕಾಡುವ ಜಾತ್ರೆ. . !

ಕನ್ನಡ ಹಬ್ಬ ಈಗ ಆರಂಭವಾಗತೊಡಗಿದೆ.ಪ್ರತೀ ತಾಲೂಕುಗಳಲ್ಲೂ ಕನ್ನಡದ ಜಾತ್ರೆ ನಡೆದಿದೆ , ನಡೆಯುತ್ತಿದೆ. ಈಗ ನಾಡಿನ ದೊಡ್ಡ ಹಬ್ಬಕ್ಕೆ ಸಿದ್ದತೆ ನಡೆಯುತ್ತಲೇ ಇದೆ. ಪ್ರತೀ ಬಾರಿಯಂತೆ ಈ ಬಾರಿಯೂ ಕನ್ನಡದ ಜಾತ್ರೆಯ ವೇಳೆಗೆ ಏನಾದರೊಂದು ಅವಸ್ವರ ಇದ್ದೇ ಇರುತ್ತದೆ ಎಂದು ಮೊನ್ನೆ ನಾವು ಮಾತನಾಡುತ್ತಿದ್ದೆವು. ಇದುವರೆಗಿನ ಒಂದೇ ಒಂದು ಕನ್ನಡ ಜಾತ್ರೆಯಲ್ಲಿ ನೆಗೆಟಿವ್ ಅಂಶಗಳು ಹೆಚ್ಚು ಹೈಲೈಟ್ ಆಗದೇ ಇದ್ದದ್ದು ಇದೆಯಾ?. ಬಹುಶ: ಇಲ್ಲ. ಇದ್ಯಾಕೆ ಹೀಗೆ?. ಯಾಕೆ ಅದೇ ಅಂಶಗಳು ಹೆಚ್ಚು ಫೋಕಸ್ ಆಗುತ್ತೆ?. ಬಹುಶ: ನಮ್ಮ ಮನಸ್ಥಿತಿಯೇ ಇದಕ್ಕೆ ಕಾರಣ ಅನ್ನೋ ದಾರಿಯ ಕಡೆಗೆ ಕೊನೆಗೆ ಹೆಜ್ಜೆ ಹಾಕಿದೆವು.

ತಾಲೂಕು ಮಟ್ಟದ ಕನ್ನಡ ಜಾತ್ರೆಯಲ್ಲೂ ಇದೇ ಕಾಣುತ್ತದೆ. ಇಲ್ಲೂ ವರ್ಗ , ಜಾತಿ , ಅಂತಸ್ತು, ವೈಯಕ್ತಿಕ ವರ್ಚಸ್ಸು ಇದೆಲ್ಲಾ ಪರಿಗಣನೆಯಾಗುವುದರ ಜೊತೆಗೆ ಗ್ರೂಪಿಸಂ ಕೂಡಾ ಇದೆ. ಇಲ್ಲೇ ಇಷ್ಟು ಗುಂಪುಗಾರಿಕೆ ನಡೀತಿರಬೇಕಾದರೆ ರಾಜ್ಯಮಟ್ಟದಲ್ಲಿ ಇದೆಲ್ಲಾ ಇಲ್ಲದೇ ಇರೋದಿಕ್ಕಾಗುತ್ತಾ ಅಂತ ನಮ್ಮಲ್ಲೇ ಇನ್ನೊಂದು ಪ್ರಶ್ನೆ ಎದ್ದಿತು.ಅದೂ ಹೌದು ಬಿಡಿ. ಅದಲ್ಲಾ ಇರಲಿ ಇನ್ನೂ ಇದೆ , ಅಲ್ಲಿ ಊಟ ಸರಿ ಇಲ್ಲ , ಮಲಕ್ಕೊಳ್ಳೋಕೆ ಹಾಸಿಗೆ ಇಲ್ಲ , ಇಂತಹದ್ದೆಲ್ಲಾ ಚಿಕ್ಕ ಚಿಕ್ಕ ವಿಷಯಗಳೂ ಕೆಲವೊಮ್ಮೆ ಫೋಕಸ್ ಆಗುವುದೂ ಇದೆ.ಅದೇ ವೇಳೆ ಅಲ್ಲೇ ಆ ಕಡೆಗಿನ ವೇದಿಕೆಯಲ್ಲಿ ಒಂದೊಳ್ಳೆ ವಿಚಾರ ಇರುತ್ತೆ ಅದಕ್ಕೆ ಬೆಳಕೇ ಬರೋದಿಲ್ಲ. ಒಂದರ್ಥದಲ್ಲಿ ನಮಗೆ ಅದೇ ವಿಚಾರಗಳು ಇಷ್ಟವಾಗುತ್ತೆ.ಅದಕ್ಕಾಗೇ ಅಲ್ಲವೇ ನಮ್ಮಲ್ಲಿ ಬರೋ ಕನ್ನಡ ಧಾರವಾಹಿಗಳ ಪೈಕಿ ಹುಳುಕು , ಹಲ್ಲೆ ,ಮನೆಯೊಳಗಿನ ಕದನ ಇಷ್ಟವಾಗೋದು. ಅಂದರೆ ನಮ್ಮ ಮನಸ್ಥಿತಿ ಅಲ್ಲಿನ ನೆಗೆಟಿವ್ ಅಂಶಗಳತ್ತಲೇ ಸೆಳೆದುಕೊಳ್ಳುತ್ತೆ.ಹಾಗಾಗೇ ಕನ್ನಡ ಜಾತ್ರೆಗಳ ನೆಗೆಟಿವ್ ಅಂಶಗಳೇ ಹೆಚ್ಚು ಪ್ರತಿಫಲನವಾಗುತ್ತೆ.

ಆದರೆ ಇದು ನಮ್ಮಲ್ಲಿ ಮಾತ್ರಾ. ಅದೇ ಪಕ್ಕದ ಕೇರಳದಲ್ಲಿ ಹಾಗಿಲ್ಲ.ಅಲ್ಲಿನ ಜನ ಇಂತಹ ಸಾಂಸ್ಕೃತಿಕ ಉತ್ಸವಗಳು, ಕಲಾಪ್ರಾಕಾರಗಳು, ಸಾಹಿತ್ಯ ವಿವಾರಗಳಲ್ಲಿ ಗುಂಪುಗಾರಿಕೆ ಮಾಡೋಲ್ಲ.ಆತ ಯಾರೇ ಇರಲಿ ರಾಜಕೀಯ ರಹಿತವಾಗಿ ಎಲ್ಲರೂ ದುಡಿಯುತ್ತಾರೆ. ಹೇಗೆ ಬೇಕೋ ಹಾಗೆ ಆ ಕಾರ್ಯಕ್ರಮವನ್ನು ನಡೆಸಿಕೊಂಡು ಹೋಗುತ್ತಾರೆ. ಅದು ಮಾತ್ರಾ ಅಲ್ಲ, ನೋಡಿ ನಮ್ಮಲ್ಲಿ ಎಷ್ಟು ಗಡಿ ಸಮಸ್ಯೆಗಳು ಅತ್ತ ಬೆಳಗಾವಿ , ಇತ್ತ ಕಾಸರಗೋಡು , ಅಲ್ಲಿ ಕಾವೇರಿ ಇಲ್ಲಿ ಕೃಷ್ಣಾ . . . ಹೀಗೇ ಒಂದೇ ದೇಶ , ಹಲವು ರಾಜ್ಯ ನೂರಾರು ಸಮಸ್ಯೆ. ಅದಕ್ಕಾಗಿ ಹೀಗೇ ಭಾಷಾವಾರು ಪ್ರಾಂತ ಮಾಡುವ ಬದಲು ಇಡೀ ದೇಶ ೪ ಭಾಗಗಳಾಗಿ ಆಡಳಿತ ನಡೆಸಿದ್ದರೆ ಚೆನ್ನಾಗಿತ್ತು.ಯಾವುದೇ ಭಾಷೆ , ರಾಜ್ಯಕ್ಕಾಗಿ ಜಗಳವೇ ಇರುತ್ತಿರಲಿಲ್ಲ. ಹಾಗೊಂದು ಅಂಬೋಣ ಬಿಡಿ.

ಅಷ್ಟಕ್ಕೂ ಈ ಬಾರಿಯ ಸಾಹಿತ್ಯ ಜಾತ್ರೆಯಲ್ಲಿ ಏನೇನೆಲ್ಲಾ ಅಸಮಾಧನಗಳು ಹೊರಬರುತ್ತೋ , ಯಾವ್ಯಾವ ಚಾನೆಲ್ಲಿನವರು , ಯಾವ್ಯಾವ ಪೇಪರಿನವರು ಹೇಗೆ ಕವರೇಜ್ ಮಾಡುತ್ತಾರೋ , ಯಾರ್‍ಯಾರು ಬಂಡಾಯ ಏಳೂತ್ತಾರೋ , ಯಾರ್‍ಯಾರ ಅಪಸ್ವರಕ್ಕೆ ಬೆಲೆ ಬರುತ್ತೋ ನೋಡಬೇಕು. ಅಷ್ಟಕ್ಕೂ ಈ ಅಪಸ್ವರ ತೆಗೆಯೋದು ಪ್ರಚಾರಕ್ಕಾಗಿಯೋ ಏನೋ?. ಅದನ್ನು ಪ್ರಚಾರ ಮಾಡೋವವರು ನೋಡಿಕೊಳ್ಳಬೇಕು.

ಯಾಕಂದ್ರೆ ಇತ್ತೀಚೆಗೆ ಮೂಡಬಿದ್ರೆಯ ಸಾಹಿತ್ಯ ಜಾತ್ರೆಯಲ್ಲಿ ಅಂತಹದ್ದೇ ಒಂದು ಇಶ್ಯೂ ಮಾಡಲು ಪ್ರಯತ್ನ ಪಟ್ಟಿದ್ದರು. ಯಾರು ಗೊತ್ತಾ?. ಪ್ರಚಾರ ಮಾಡುವವರೇ..!, ಕಾರಣ ಗೊತ್ತಾ? ಮೂರು ದಿನ ಸುಮ್ಮನೆ ಕುಳಿತುಕೊಳ್ಳಬೇಕಲ್ಲ ಅಂತ, ಮತ್ತೆ ನಾಲ್ಕು ದಿನಕ್ಕೆ ಇದೇ ಇಶ್ಯೂ ಆಗುತ್ತಲ್ಲಾ ಅಂತ . ! ಅನ್ನೋದು ಹಲವರ ಅಭಿಮತ. ಕನ್ನಡಕ್ಕಾಗಿ ಒಂದೇ ಒಂದು ರೀತಿಯಲ್ಲೂ ದುಡಿಯದ ಜನ ಕನ್ನಡಕ್ಕಾಗಿ ದುಡಿಯುವ ಜನರ ಬಗ್ಗೆ ಯಾಕೆ ಹಾಗೆ ಮಾಡುತ್ತಾರೆ ಗೊತ್ತಿಲ್ಲ. ಹುಳುಕುಗಳು ಇರಬಹುದು ಇಲ್ಲಾ ಅಂತಲ್ಲ , ಆದರೆ ಹಾಗೆ ದುಡಿಯುವುದು ಕೂಡಾ ದೊಡ್ಡ ಕೆಲಸವೇ.

ಈ ಬಾರಿ ಒಳ್ಳೆಯದನ್ನೇ ಕೇಳೋಣ , ಒಳ್ಳೆಯದನ್ನೇ ಓದೋಣ. ಸಾಹಿತ್ಯಕ್ಕಾಗಿ , ಕನ್ನಡಕ್ಕಾಗಿ ಈ ಅಕ್ಷರಕ್ಕಾಗಿ.

16 ಜನವರಿ 2011

ಇವನಿಗೆ ಹಳ್ಳಿ ಇಷ್ಟ ಯಾಕಂತೆ ?

ಮೊನ್ನೆ ಪೆಟ್ರೋಲ್ ಬೆಲೆ ಹೆಚ್ಚಾಗುತ್ತೆ ಅಂದಾಗಲೂ ಆತ ಆ ಬಗ್ಗೆ ತಲೆಕೆಡಿಸಿಕೊಂಡಿಲ್ಲ, ಮೊನ್ನೆ ಮೊನ್ನೆ ಹಾಲಿನ ದರ ಸ್ವಲ್ಪ ಏರಿಕೆಯಾಗಿತ್ತು , ಈಗ ಇನ್ನೂ ಏರಿಕೆಯಾಗುತ್ತಂತೆ ಅಂದಾಗಲೂ ಆತ ಆ ಬಗ್ಗೆ ಚಕಾರವನ್ನೇ ಎತ್ತಿಲ್ಲ.ಎಲ್ಲದಕ್ಕೂ ಆತ ಹೇಳುತ್ತಿದ್ದುದು, “ನನ್ನ ಹಳ್ಳಿ ನಂಜೊತೆಗಿದೆ” ಅಂತ.

ಇದು ಏರಿಕೆಯ ಕಾಲಘಟ್ಟ. ಮೊನ್ನೆ ಮೊನ್ನೆ ಹಾಲಿನ ದರ ಏರಿಕೆಯಾಗಿತ್ತು , ಈಗ ಮತ್ತೆ ಪೆಟ್ರೋಲ್ ದರ ಏರಿಕೆಯಾಗಿದೆ , ತರಕಾರಿ ಬೆಲೆ ಬಗ್ಗೆ ಮಾತಾಡೋ ಹಾಗಿಲ್ಲ , ನೀರುಳ್ಳಿ ಕಣ್ಣುರಿ ತರಿಸುತ್ತೆ , ಅಕ್ಕಿ ಬೆಲೆಯೂ ಏರು ಹಾದಿಯಲ್ಲಿದೆ.ಎಲ್ಲವೂ ಕೈಗೆಟಕದ ಹಾಗಿದೆ. ನಗರದಲ್ಲಿ ಸಾಮಾನ್ಯ ಸಂಬಳ ಪಡೆಯೋ ನೌಕರನ ತಲೆಯೂ ಇದೆಲ್ಲದರ ಜೊತೆಗೆ ಬಿಸಿಯಾಗುತ್ತಿದೆ.ತಿಂಗಳ ಅಂತ್ಯಕ್ಕೆ ಲೆಕ್ಕ ಹಾಕಿದಾಗ , ಮನೆ ಬಾಡಿಗೆ ,ಗ್ಯಾಸ್‌ಗೆ ,ತರಕಾರಿ , ದಿನಸಿ , ಇದರ ಜೊತೆಗೆ ದೈನಂದಿನ ಖರ್ಚು ಎಲ್ಲಾ ಲೆಕ್ಕ ಹಾಕಿದಾಗ ಈ ಚಳಿಯಲ್ಲೂ ಮೈ ಬೆವರುತ್ತದೆ. ಯೋಚನೆ ಇನ್ನೂ 5 ವರ್ಷಗಳ ನಂತರಕ್ಕೆ ಓಡುತ್ತದೆ.ಅಷ್ಟು ದೂರಕ್ಕೆ ನೆನಪಿಸಿಕೊಳ್ಳಲಾಗುವುದಿಲ್ಲ ಎನ್ನುತ್ತಾನೆ.ಈ ನಡುವೆ ಇನ್ನೊಮ್ಮೆ ಪೆಟ್ರೋಲ್ ಬೆಲೆ ಏರಿಕೆಯಾಗಿದೆ.ಕಚೇರಿಗೆ ದಿನವೂ ಮೋಟಾರ್ ಬೈಕಲ್ಲೋ , ಕಾರಲ್ಲೋ ಹೋಗಿಯೇ ರೂಢಿ.ಈಗ ಪೆಟ್ರೋಲ್ ಬೆಲೆ ಏರಿದೆ ಅಂತ ಅದನ್ನು ನಿಲ್ಲಿಸಲಾಗುತ್ತೆಯೇ?. ಅದು ಇನ್ನೊಂದು ತಲೆ ಬಿಸಿ. ಈ ನಡುವೆ ಹಾಲಿಗೂ ಇನ್ನೂ ಬೆಲೆ ಏರುತ್ತಂತೆ. ರೈತರಿಗೆ ಕೊಡಲು, ಅಂತಾರೆ ಅವರು.ಅದಕ್ಕೂ ಮೊನ್ನೆ ಟಿವಿ ಚಾನೆಲ್ಲಿನಲ್ಲಿ ಚರ್ಚೆಯಾಗುತ್ತಿತ್ತು.ರೈತರ ಹೆಸರಲ್ಲಿ ಕಂಪನಿ ಹಣ ಮಾಡುತ್ತಿದೆ , ಸರಕಾರ ಏದಾರೂ ರೈತರಿಗೆ ಮಾಡಬೇಕು , ಗ್ರಾಹಕ ವಲಯ ದೊಡ್ಡದಿದೆ ಅವರಿಗೂ ಹೊರೆಯಲ್ಲವೇ ಅಂತ ಹೇಳುತ್ತಿದ್ದರು.ಆದರೆ ಅವರಿಗೇನು ಗೊತ್ತು ಈ ರೈತರ ಕಷ್ಠ.ಒಂದು ದಿನ ಹಾಲು ತಡವಾದರೆ ಬೊಬ್ಬಿಟ್ಟು ಗೊತ್ತೇ ವಿನ: ,ಬೆಳಗ್ಗೆ ನಾಲ್ಕೋ ಐದೋ ಗಂಟೆಗೆ ಎದ್ದು ಹಸುಗಳಿಗೆ ತಿನ್ನಲು ಕೊಟ್ಟು ಹಾಲು ಕರೆದು ಎರಡೋ ಮೂರೋ ಕಿಲೋ ಮೀಟರ್ ದೂರ ನಡೆದು ಹೋಗಿ ಸಹಕಾರ ಸಂಘಗಳಿಗೆ ಹಾಲು ಹಾಕಿ ಅಲ್ಲಿನ ಸಿಬ್ಬಂದಿಯ ಕಿರಿ ಕಿರಿ ಕೇಳಿ ಮನೆಗೆ ಬರೋ ಆ ಹೈನುಗಾರನ ಪಾಡು ಅವನಿಗೇ ಗೊತ್ತು.

ಈಗ ಅದಲ್ಲ , ಅಲ್ಲಿ ಬೆಲೆ ಏರಿಕೆಯ ಬಗ್ಗೆ ತಲೆಗೊಬ್ಬರಂತೆ ಮಾತಾಡೋವಾಗ ಆತ ಇಲ್ಲಿ ಹೇಳುತ್ತಾನೆ , ನನಗೇನು ಬೆಲೆ ಏರಿಕೆಯಾಗಲಿ. ಯಾವುದು ಪೆಟ್ರೋಲ್ ಬೆಲೆ ಏರಿಕೆಯಾ ?. ನನಗೇನು ಚಿಂತೆ , ದಿನಕ್ಕೊಮ್ಮೆ ಸ್ವಲ್ಪ ರಿಲ್ಯಾಕ್ಸ್ ಇರಲಿ ಅಂತ ಪೇಟೆಗೆ ಹೋಗುತ್ತಿದ್ದೆ , ಇನ್ನು ಹೋಗೋದಿಲ್ಲ. ಹೊಲಕ್ಕೆ ಒಂದು ಸುತ್ತು ಹೆಚ್ಚು ಹೊಡೀತೇನೆ. ಇನ್ನು ಹಾಲಿನ ಬಗ್ಗೆ ತಲೇನೇ ಕೆಡಿಸಿಕೊಳ್ಳೋದಿಲ್ಲ , ನನ್ನದೇ ಹಸು ಇದೆ. ನಾನೇ ಇರಿಸಿಕೊಳ್ಳುತ್ತೇನೆ. ಗ್ಯಾಸ್ ನಮಗೆ ಬೇಡವೇ ಬೇಡ ಗೋಬರ್ ಗ್ಯಾಸ್ ಇದೆ. ಬೆಳಗ್ಗೆ ಬಿಸಿ ನೀರು ಸ್ನಾನ ಮಾಡಲು ಗ್ಯಾಸ್ , ಕರೆಂಟ್ ನೋಡೋದೇ ಇಲ್ಲ. ನಮ್ಮ ತೋಟದಲ್ಲಿ ಸಿಗೋ ಕಸ ಕಡ್ಡಿಯೇ ಸಾಕು , ಇನ್ನು ತರಕಾರಿ ಬಗ್ಗೆ ಹೇಳೋದಾದ್ರೆ , ಶುದ್ದವಾದದ್ದು , ರಾಸಾಯನಿಕ ಸಿಂಪಡಿಸದೇ ಇದ್ದದ್ದು ನಾನೇ ನನ್ನ
ಹೊಲದಲ್ಲಿ ಬೆಳೆಯುತ್ತೇನೆ ,ಇನ್ನು ಅಕ್ಕಿಯೂ ನಾನೇ ಬೆಳೀತೇನೆ. ಹಣಕ್ಕಾಗಿ , ರಬ್ಬರ್ ಇದೆ , ಅಡಿಕೆ ಇದೆ.ರಬ್ಬರ್ ರೇಟಂತೂ ೨೦೦ ರ ಗಡಿ ದಾಟಿದೆ.ಯಾರದ್ದೂ ಕಿರಿಕಿರಿ ಇಲ್ಲ. ಈಗ ಬೇಕಾದ್ರೂ ನಾನು ಮಲಗಿ ನಿದ್ರಿಸುತ್ತೇನೆ.ಕೇಳೋರು ಯಾರೂ ಇಲ್ಲ.ಅದೆಲ್ಲದಕ್ಕೂ ಮುಖ್ಯವಾಗಿ ಶುದ್ದ ಗಾಳಿ , ನೀರು ಸಿಗುತ್ತೆ ಅನ್ನೋದೇ ಇವನಿಗೆ ಖುಷಿ.




ಆದ್ರೆ ಇವನಿಗೂ ಒಂದು ಸಮಸ್ಯೆ ಇದೆಯಂತೆ, ತೋಟದ ಕೆಲಸ ಮಾಡೋಕೆ ಜನ ಸಿಕ್ತಾ‌ಇಲ್ಲ , ಆದ್ರೆ ಇದಕ್ಕೆ ಈಗ ಯೋಚನೆ ಮಾಡಿದ್ದಾನೆ , ಎಲ್ಲಕ್ಕೂ ಯಂತ್ರ ಬಳಸಿಕೊಳ್ತಾನೆ. ಇನ್ನೊಂದು ಸಮಸ್ಯೆ ಅಂದ್ರೆ ಕಾಡು ಪ್ರಾಣಿಗಳದ್ದು. ತೋಟಕ್ಕೆ ಬಂದ್ರೆ ಎಲ್ಲವನ್ನೂ ನಾಶ ಮಾಡಿ ಹಾಕುತ್ತದೆ. ಅದಕ್ಕಾಗಿ ಸಾಕಷ್ಟು ಎಚ್ಚರ ವಹಿಸಿಕೊಳ್ತಾನೆ , ಆದ್ರೂ ಮಂಗಗಳು ಮಾತ್ರಾ ಬಂದೇ ಬರ್ತಾವೆ ಅಂತಾನೆ ಆತ.

ಇದೇ ಒಂದೆರಡು ಸಮಸ್ಯೆ ಮಾತ್ರಾ ಇದ್ದು ಅಷ್ಟೂ ಒಳ್ಳೆಯ ವಾತಾವರಣ ಇರುವಾಗ ನಾನ್ಯಾಕೆ ನನ್ನ ಹಳ್ಳಿಯನ್ನು ಹೀಯಾಳಿಸಲಿ , ಅದು ಯಾವತ್ತೂ ನಂಜೊತೆನೇ ಇದೆ.ಅದಕ್ಕಾಗಿ ನಾನೇನಾದರೂ ಮಾಡಬೇಕು.ಇಲ್ಲಿರೋ ಜನರಿಗೆ ಏನಾದರೂ ಮಾಡಬೇಕು. ಅಂತ ಆತ ಯಾವಾಗಲೂ ಹೇಳುತ್ತಾ ಇರುತ್ತಾನೆ. ಈ ಬೆಲೆ ಏರಿಕೆಯ ಮಾತು ಬಂದಾಗಲೆಲ್ಲಾ ಆತ ನಿರುಮ್ಮಲವಾಗಿರುತ್ತಾನೆ.

15 ಜನವರಿ 2011

ಇವನಿಗಾರು ಗತಿ ?

ಏನು ಕತೆ ಸ್ವಾಮಿ?. ಈ ತೆಂಗಿನ ಕಾಯಿಗೆ ರೇಟು?. ನಿನ್ನೆ ಹತ್ತು ರುಪಾಯಿ ಇತ್ತು ಇವತ್ತು ನೋಡಿದ್ರೆ ಹದಿನೈದಾಗಿದೆ. ! ಏನು ಕತೆ ಇದು ? ಅಂತ ಗ್ರಾಹಕ ಬೊಬ್ಬಿಡುತ್ತಾನೆ.

ಇತ್ತ ರೈತ ಹೇಳ್ತಾನೆ ಏನ್ ಸ್ವಾಮಿ ತೆಂಗಿನ ಕಾಯಿಗೆ ರೇಟು ಏರ್ತಾನೆ ಇದೆ.ಆದ್ರೆ ನಮ್ಮಲ್ಲಿ ತೆಂಗಿನ ಕಾಯಿನೇ ಇಲ್ಲ. ಏನು ಅವಸ್ಥೆನೋ ಏನೋ ಮಂಗಗಳೆಲ್ಲಾ ಎಳೆ ಕಾಯನ್ನೇ ತೆಗೆದು ಹಾಳು ಮಾಡ್ತಾವೆ.ಕಾಯಿನೇ ಸಿಗೋದಿಲ್ಲ ಅಂತ ಆತ ತಲೆ ಮೇಲೆ ಕೈ ಹಿಡ್ಕಳ್ತಾನೆ.

ಆಗ ಅಲ್ಲೊಬ್ಬ ಹೇಳ್ತಾನೆ, ನೋಡಣ್ಣ ನೀನ್ ಹಂಗೆ ಕೂತ್ರೆ ಆಗಾಕಿಲ್ಲ , ಮಂಗ ಬರೋ ಹಾದಿಲಿ ಒಂದು ಬಾಳೆ ಗೊನೆ ಇಡು. ಅದ್ಕೆ ಒಂಚೂರು ವಿಷಾನೂ ಹಾಕಿಡು ಅದು ಮತ್ತೆ ಬರೋದೇ ಇಲ್ಲ ಅಂತಾನೆ ಆತ. ವಿಚಾರ ಇರೋದೇ ಇಲ್ಲಿ. ಮಂಗ ಬರುತ್ತೆ ಅಂತ ಆ ರೈತ ವಿಷ ಇಕ್ಕಿ ಆ ಮಂಗಗಳನ್ನು ಕೊಲ್ತಾನೆ. ಆ ನಂತ್ರ ಬೆಳೆನೂ ಸಿಗುತ್ತೆ , ಬೆಲೆನೂ ಇರುತ್ತೆ.

ಮೊನ್ನೆ ಮೊನ್ನೆ ಅಂತಹದ್ದೇ ಇನ್ನೊಂದು ಘಟನೆ ಇತ್ತು ನೋಡಿ ,ಅಲ್ಲೊಂದು ಆನೆ ಕರೆಂಟ್ ಶಾಕ್‌ನಿಂದ ಸತ್ತೇ ಹೋಯಿತಂತೆ.ಎಂತಾ ದುರಂತ ಮಾರಾಯ್ರೆ. ಹೀಗಾಗಬಾರದಿತ್ತು.

ನಿಜಕ್ಕೂ ಹಾಗಾಗಬಾರದಿತ್ತು.ಅದೊಂದು ಕಾಡುಪ್ರಾಣಿ.ಜೀವಜಾಲದ ಕೊಂಡಿಗಳಲ್ಲಿ ಅದೂ ಒಂದು. ಹೀಗೇ ಒಂದೋಂದೇ ಪ್ರಾಣಿ ಸತ್ತರೆ ಜೀವಜಾಲದ ಕೊಂಡಿ ತಪ್ಪೋದ್ರಲ್ಲಿ ಸಂಶಯವೇ ಇಲ್ಲ. ಹೀಗಾಗಿ ಅಲ್ಲಿ ವಿದ್ಯುತ್ ಹರಿಸಿದವನಿಗೆ ಶಿಕ್ಷೆ ಆಗಲೇ ಬೇಕು ಅಂತ ಮನಸ್ಸಿನೊಳಗೇ ಹೇಳಲೇಬೇಕಾಗುತ್ತದೆ.

ಆದರೆ ಇದೆಲ್ಲಾ ಒಂದು ಮುಖ. ಅದರ ಹಿಂದೆ ಇನ್ನೊಂದು ಮುಖ ಇದೆ.

ಅಲ್ಲಿ ಯಾಕಾಗಿ ವಿದ್ಯುತ್ ಹರಿಸಲಾಗಿತ್ತು?.ಅಲ್ಲೂ ಕೂಡಾ ಸಮಸ್ಯೆ ಇದೇ ಆನೆಯದ್ದು. ಹೊಲಗಳಿಗೆ ನುಗ್ಗಿ ಬೆಳೆ ನಾಶ ಮಾಡೋವಾಗ ಅಷ್ಟೂ ಪ್ರೀತಿಯಿಂದ ಬೆಳೆದ ಬೆಳೆ ನಾಶವಾಗೋವಾಗ ಯಾರು ತಾನೆ ಸುಮ್ಮನಿರ್ತಾನೆ ಹೇಳಿ. ಹಾಗೆ ಆತ ಅಲ್ಲೂ ಒಂದು ರಕ್ಷಣೆಗೆ ಮುಂದಾದ. ಆನೆ ಜೀವ ತೆತ್ತಿತು.

ಎಲ್ಲಾ ಕಡೆ ರೈತನಿಗೆ ಇರೋ ಸಮಸ್ಯೆ ಇದೆ.ಸರಕಾರ ಏನೋ ರೈತರ ಪರ ಅಂತೆಲ್ಲಾ ಹೇಳುತ್ತಿದ್ದರೂ ಅವನ ಗೋಳು ಮಾತ್ರಾ ಮುಗಿಯೋದೇ ಇಲ್ಲ.ಒಂದು ಕಡೆ ಬೆಳೆ ಬೆಳೆಯಲು ಅದೆಷ್ಟೋ ವಿಘ್ನಗಳು.ಬೆಳೆ ಬಂದರೆ ಮಾರಾಟದ ಸಮಸ್ಯೆ. ಅದೆಲ್ಲಾ ಆಗೋ ಹೊತ್ತಿಗೆ ಆತ ಸುಸ್ತೋ ಸುಸ್ತು. ಹೊಲದಲ್ಲಿ ಹುಲುಸಾಗಿ ಪೈರು ಬಂದಿದೆ ಅಂದ ಕೂಡಲೇ ಆನೆಗಳ ಹಿಂಡು ಕಾಲಿಡುತ್ತದೆ.ಒಮ್ಮೆ ಆನೆ ನುಗ್ಗಿದರೆ ಅದಷ್ಟೂ ಬೆಳೆಯನ್ನು ಆಪೋಶನ ತೆಗೆದುಕೊಳ್ಳಯುತ್ತದೆ. ಹಾಗಾಗಿ ಆ ಬೆಳೆಯ ರಕ್ಷಣೆ ಆಗಲೇಬೇಕು. ಅದು ಹೇಗೆ?, ಆನೆಗೆ ಸರಿಯಾದ ವ್ಯವಸ್ಥೆ ಮಾಡಿ ಅಂತ ಸರಕಾರಕ್ಕೆ ಹೇಳಿದರೂ ಕೇಳಿಸೋದೇ ಇಲ್ಲ. ಹಾಗಾದ್ರೆ ಇನ್ನೇನು ದಾರಿ ಅಂತ ಯೋಚಿಸುವಾಗ ,ಆತನಿಗೆ ಕಾಣುವ ಸುಲಭ ದಾರಿಯನ್ನು ಆತ ಆಯ್ಕೆ ಮಾಡುತ್ತಾನೆ. ಹಾಗಾಗಿ ಸರಕಾರವೇ ರೈತರ ಇಂತಹ ಸಮಸ್ಯೆ ನಿವಾರಣೆ ವ್ಯವಸ್ಥೆ ಮಾಡಬೇಕೇ ವಿನ: ಇನ್ಯಾವುದೇ ಅನ್ಯ ದಾರಿ ಇಲ್ಲ. ಮಂಗಗಳದ್ದೂ ಅದೇ ಕಾಟ. ಕಾಡಿನ ಆಹಾರವನ್ನು ಬಿಟ್ಟು ನಾಡಿಗೆ ಬಂದದ್ದೇ ತಡ , ಎಳ ತೆಂಗಿನಕಾಯಿ , ಅಡಿಕೆ ಹೀಗೇ ಎಲ್ಲವನ್ನೂ ನಾಶ ಮಾಡಿ ಓಡಿ ಬಿಡುತ್ತದೆ. ಅದನ್ನು ತಡೆಯೋದಾದರೂ ಹೇಗೆ?. ಹಾಗಾಗಿ ರೈತರು ಬೆಳೆ ರಕ್ಷಣೆಗೆ ಏನಾದರೊಂದು ದಾರಿ ನೋಡಬೇಕಾಗುವುದು ಅನಿವಾರ್ಯ. ಆಗ ಇಂತಹ ದುರಂತಗಳು ನಡೆಯುತ್ತದೆ.

02 ಜನವರಿ 2011

ಬಂದಿದೆ 2011

ಇನ್ನೊಂದು ವರ್ಷ ಇದೆ. 2012 ಬರಲು.

ಪ್ರತೀ ವರ್ಷವೂ ಡಿಸೆಂಬರ್ 31 ರ ನಂತರ ಕಾತರದ ಕ್ಷಣ.ಒಂದು ಮೆಸೇಜ್ ಮಾಡಲು , ಒಂದು ಮೈಲ್ ಮಾಡಲು , ಆ ದಿನ ಫೋನು ಮಾಡಿದ ಗೆಳೆಯರಿಗೆ ಶುಭಾಶಯ ಹೇಳಲು.ಇದಿಷ್ಟೇ. ಮರುದಿನ ಯಥಾಪ್ರಕಾರ.ಅದೇ ಸಮಯ , ಅದೇ ಹಗಲು ಅದೇ ರಾತ್ರಿ. ಅದೇ ಟ್ರಾಫಿಕ್ ಅದೇ ಕೆಲಸ . . . ಎಲ್ಲವೂ ಅದೇ.ಹೊಸತು ಏನೂ ಇಲ್ಲ. ಆದರೂ ಮತ್ತೊಂದು ವರ್ಷ ಅಂದಾಗ ಅಲ್ಲೇನೋ ಒಂದು ಹೊಸದು ಹುಡುಕುವ ಕಾಯಕ.

ವರ್ಷ ಮುಗಿದಂತೆ , ಸಮಯ ಕಳೆದಂತೆ ,ನಿಮಿಷ ಮುಗಿದಂತೆ ನಮ್ಮ ಆಯಸ್ಸೂ ಮುಗಿಯುತ್ತಿದೆ. ಸಾವು ಹತ್ತಿರವಾಗುತ್ತದೆ. ಅಂದರೆ ಉಸಿರು ನಿಲ್ಲುವ ಹೊತ್ತು ಹತ್ತಿರವಾಗುತ್ತಿದೆ ಅಂತಾನೇ ಅರ್ಥ.ಹಾಗೆಂದು ಅದರದ್ದೇ ಧ್ಯಾನ ಮಾಡಿಕೊಂಡಿರುವುದಕ್ಕೆ ಆಗುವುದಿಲ್ಲ. ಆ ದಿನ ಬರುವವರೆಗೂ ಸಾಧನೆಗಳನ್ನು ನಿಲ್ಲಿಸಲಾಗುವುದಿಲ್ಲ, ಜವಾಬ್ದಾರಿಯ ಹೊರೆಯನ್ನು ಇಳಿಸುವುದಕ್ಕಾಗುವುದಿಲ್ಲ.ಮಾಡಲೇಬೇಕು. ಸವಾಲುಗಳನ್ನು ಎದುರಿಸಲೇಬೇಕು. ಅದು ನಿರಂತರ.ಹಾಗಿದ್ದರೂ ಎಲ್ಲಾದರೂ ಒಂದು ಕಡೆ ಒಮ್ಮೆ ನಿಂತು ಬಂದ ದಾರಿಯನ್ನು ಒಮ್ಮೆ ಅವಲೋಕಿಸಬೇಡವೇ.ಅದಕ್ಕೆ ಈ ಡಿಸೆಂಬರ್ 31 ಒಂದು ಪಕ್ಷವಾದ ಕಾಲವಾಗುತ್ತದೆ. ಹಾಗೆ ಹಿಂತಿರುಗಿ ನೋಡಿದಾಗ ಅದೆಷ್ಟೂ ಸಿಹಿ ಕಹಿ ಅನುಭಗಳ ಮೂಟೆ ಕಾಣುತ್ತದೆ. ಅದೆಲ್ಲವೂ ಮುಂದಿನ ಕಾಲಕ್ಕೆ ಒಂದು ಪಾಠವಾಗುತ್ತದೆ. ತಪ್ಪುಗಳನ್ನು ತಿದ್ದಿಕೊಳ್ಳುವುದಕ್ಕೆ ಕಾರಣವಾಗುತ್ತದೆ. ಒಂದಷ್ಟು ಹೊಸ ಸಂಕಲ್ಪಗಳನ್ನು ಮಾಡಿಕೊಳ್ಳುವುದಕ್ಕೂ ಅಲ್ಲೊಂದು ಅವಕಾಶ ಸಿಗುತ್ತದೆ. ಹಾಗೇ ಕ್ಯಾಲೆಂಡರ್ ಬದಲಾದಂತೆ ಅನುಭವದ ಮೂಟೆಗಳು ದೊಡ್ಡದಾಗುತ್ತಾ ಹೋಗುತ್ತದೆ. ಬುದ್ದಿ ಮಾಗುತ್ತಾ ಹೋಗುತ್ತದೆ , ದೇಹಕ್ಕೆ ಆಯಸ್ಸು ಹೆಚ್ಚಾಗುತ್ತಾ ಸಾಗುತ್ತದೆ. ಕಾಲಚಕ್ರ ತಿರುಗುತ್ತಲೇ ಸಾಗುತ್ತದೆ.

ಹಾಗಾಗಿ ಹೊಸವರ್ಷ ಅಂದರೆ ಅದೊಂದು ಕ್ಯಾಲೆಂಡರ್ ಬದಲಾವಣೆಯ ಸಮಯ. ಹೊಸ ಭರವಸೆಗಳನ್ನು ನಿರೀಕ್ಷೆಗಳನ್ನು ಇಟ್ಟುಕೊಳ್ಳುವ ಕಾಲ ಅದಲ್ಲ. ಭೂತಕಾಲವನ್ನು , ಅರ್ಥಾತ್ ಇತಿಹಾಸವನ್ನು ಅವಲೋಕಿಸಿ ಭವಿಷ್ಯ ಕಾಲವನ್ನು ನಿರ್ಧರಿಸುವ , ರೂಪಿಸುವ ಕಾಲ ಅದು. ಯಾಕೆಂದರೆ ಪ್ರತೀ ಕ್ಷಣ , ನಿಮಿಷ ನಿಮಿಷವೂ ನಮಗೆ ಹೊಸದೇ. ಮತ್ತೆ ಅದೇ ಸಮಯ ನಮಗೆ ಬೇಕೆಂದರೂ ಸಿಗದು. ಅದು ಯಾವತ್ತೂ ಹೊಸದೇ , ಮತ್ತೆ ಸಿಗದ ವಸ್ತು ಅದು.

ಹಾಗಾಗಿ ಪ್ರತೀ ಕ್ಷಣವೂ ನಮಗೆ ಹ್ಯಾಪೀ ನ್ಯೂ ಇಯರ್.

. . . . . . . . . . . . . . . .. . . . ..