12 ನವೆಂಬರ್ 2011

ಮಾರುಕಟ್ಟೆ ಕತೆ. .

ಕರಾವಳಿ ಜಿಲ್ಲೆಯ ಅಡಿಕೆ ಹಾಗೂ ರಬ್ಬರ್ ಬೆಳೆಗಾರರಿಗೆ ಈಗ ಗೊಂದಲದ ಸಮಯ. ಒಂದು ಕಡೆ ಅಡಿಕೆ ಮಾರುಕಟ್ಟೆಯಲ್ಲೀಗ ವದಂತಿಗಳದ್ದೇ ಸುದ್ದಿಯಾದರೆ ರಬ್ಬರ್ ಮಾರುಕಟ್ಟೆ ಒಂದೇ ದಿನದಲ್ಲಿ 10 ರೂಪಾಯಿ ದಿಢೀರ್ ಕುಸಿತ ಕಂಡು ಆತಂಕ ಸೃಷ್ಟಿಸಿದೆ. ಶುಕ್ರವಾರ ಕೂಡಾ ಅಂತರಾಷ್ಟ್ರೀಯ ರಬ್ಬರ್ ಮಾರುಕಟ್ಟೆ ಕುಸಿತ ಕಂಡರೆ ಭಾರತದ ರಬ್ಬರ್ ಮಾರುಕಟ್ಟೆ ಸ್ಥಿರತೆಯನ್ನು ಕಾಯದುಕೊಂಡಿದೆ. ಅಡಿಕೆ ಹಾಗೂ ರಬ್ಬರ್ ಮಾರುಕಟ್ಟೆಯ ಈ ಏರಿಳಿತಗಳು, ವದಂತಿಗಳು ತಾತ್ಕಲಿಕ ಎಂಬುದನ್ನು ಬೆಳೆಗಾರರು ಗಮನಿಸಿಕೊಳ್ಳಬೇಕಾಗಿದೆ.

ಅಡಿಕೆ ಮಾರುಕಟ್ಟೆಯಲ್ಲಿ ಈಗ ವದಂತಿಗಳು ಓಡಾಡುತ್ತಿವೆ. ಈ ವಾರ ಅಡಿಕೆ ಧಾರಣೆ ಏರಿಕೆಯನ್ನು ನಿರೀಕ್ಷಿಸಲಾಗಿತ್ತು. ಹಳೆ ಅಡಿಕೆ ಧಾರಣೆಯು ೨೦೦ ರೂಪಾಯಿ ದಾಟಿ ಮುಂದಕ್ಕೆ ಹೋಗುತ್ತದೆ ಎನ್ನುವ ನಿರೀಕ್ಷೆ ಇತ್ತು. ಆದರೆ ಈಗ ಗುರುವಾರ ಬಂದರೂ ಧಾರಣೆ ಏರಿಕೆ ಕಾಣದೆ ಕೊಂಚ ಹಿಮ್ಮುಖವಾಗಿ ಕಂಡಿತು. ಇದರ ಬೆನ್ನಲ್ಲೇ ವದಂತಿಗಳು ಅಡಿಕೆ ಮಾರುಕಟ್ಟೆಯಲ್ಲಿ ಓಡಾಡತೊಗಿದೆ. ಹೀಗಾಗಿ ಆತಂಕಿತರಾದ ಬೆಳೆಗಾರರು ಅಡಿಕೆಯನ್ನು ಸಾಕಷ್ಟು ಪ್ರಮಾಣದಲ್ಲಿ ಮಾರುಕಟ್ಟೆಗೆ ಬಿಡುತ್ತಿದ್ದಾರೆ. ಇದೆಲ್ಲವೂ ಧಾರಣೆ ಏರಿಕೆಗೆ ಹಿನ್ನಡೆಯಾಗಿದೆ. ಅಡಿಕೆ ಮಾರುಕಟ್ಟೆಯ ವದಂತಿಗಳ ಪ್ರಕಾರ ಇನ್ನು ಧಾರಣೆ ಏರಿಕೆಯಾಗೋ ಲಕ್ಷಣವೇ ಇಲ್ಲ , ಇನ್ನಷ್ಟು ಕುಸಿತವಾಗುತ್ತದೆ ಎಂಬ ಗುಲ್ಲು ಹರಡುತ್ತಿದೆ. ಇದರ ಜೊತೆಗೆ ಕೇರಳ ಭಾಗದಿಂದ ಹೆಚ್ಚು ಅಡಿಕೆ ಬರುತ್ತಿದೆ ಎಂಬ ಮಾತೂ ಇದೆ. ಆದರೆ ವಾಸ್ತವವಾಗಿ ಇಂದು ಅಡಿಕೆ ಮಾರುಕಟ್ಟೆಯಲ್ಲಿ ಹಣ ಓಡಾಡುತ್ತಿಲ್ಲ. ಈ ಹಿಂದೆ ಕೂಡಾ ಇಂತಹದ್ದೇ ವಾತಾವರಣ ಸೃಷ್ಟಿಯಾಗಿ ಅಡಿಕೆ ಧಾರಣೆ ಕುಸಿತವಾಗಿತ್ತು. ಆ ನಂತರ ಏರಿಕೆ ಕಂಡಿತ್ತು. ಹೀಗಾಗಿ ಉತ್ತರ ಭಾರತ ವ್ಯಾಪಾರಿಗಳತ್ತ ಇಲ್ಲಿನ ವ್ಯಾಪಾರಿಗಳು ದೃಷ್ಟಿ ನೆಟ್ಟಿರುವುದರಿಂದ ಉತ್ತರ ಭಾರತದ ವ್ಯಾಪಾರಿಗಳು ಕೂಡಾ ಈಗ ಮಾರುಕಟ್ಟೆಯಲ್ಲಿ ಅಡಿಕೆ ಇದೆ ಎಂಬ ಲೆಕ್ಕದಲ್ಲಿದ್ದಾರೆ. ಇದನ್ನೇ ಅಸ್ತ್ರವಾಗಿ ಬಳಸಿಕೊಂಡ ಕೆಲವರು ಅಡಿಕೆ ಧಾರಣೆ ಇಳಿಯುತ್ತಿದೆ ಎಂಬ ಸುದ್ದಿ ಹಬ್ಬಿಸುತ್ತಿದ್ದಾರೆ. ಹೀಗಾಗಿ ಬೆಳೆಗಾರರು ಹೆದರಿ ಅಡಿಕೆಯನ್ನು ಮಾರುಕಟ್ಟೆಗೆ ಬಿಡಲು ಆರಂಭಿಸಿದ್ದಾರೆ.

ಈ ನಡುವೆ ಕಳೆದ ವಾರ ಅಡಿಕೆ ಧಾರಣೆ ೨೦೦ ರೂಪಾಯಿಗೆ ತಲಪಿತ್ತು. ಈ ನಡುವೆ ಗುರುವಾರ ಸಂಜೆಯ ವೇಳೆಗೆ ಹಳೆ ಅಡಿಕೆ ಧಾರಣೆಯು 189 , ಡಬ್ಬಲ್ ಚೋಲ್ 196 ಹಾಗೂ ಈಗಿನ ಹೊಸ ಅಡಿಕೆಯು 130 ರೂಪಾಯಿಗೆ ಆವಕಗೊಂಡಿದೆ.ಶುಕ್ರವಾರ ಕೂಡಾ ಇದೇ ಆಸುಪಾಸಿನ ಧಾರಣೆ ಸ್ಥಿರವಾಗಿದೆ.ಹೆಚ್ಚಿನ ವ್ಯತ್ಯಾಸ ಕಂಡುಬಂದಿಲ್ಲ. ಈಗ ರೈತರ ಸಂಸ್ಥೆ ಕ್ಯಾಂಪ್ಕೋ ಬೆಳೆಗಾರರ ಪರವಾಗಿ ನಿಲ್ಲಬೇಕಾದ ಅನಿವಾರ್ಯತೆ ಇದೆ ಎಂಬುದು ಬೆಳೆಗಾರರ ಅನಿಸಿಕೆ.ಕಳೆದ ಹಲವಾರು ಸಮಯಗಳಿಂದಲೂ ಕ್ಯಾಂಪ್ಕೋ ಅಡಿಕೆ ಧಾರಣೆ ಹಿಂದಕ್ಕೆ ಬಾರದಂತೆ ತಡೆದಿದೆ. ಅದೇ ರೀತಿ ಈ ಬಾರಿ ಕೂಡಾ ಯಾವುದೇ ಕಾರಣಕ್ಕೂ ಕ್ಯಾಂಪ್ಕೋ ಅಡಿಕೆ ಧಾರಣೆಯನ್ನು ಇಳಿಸುವುದಿಲ್ಲ ಎಂದು ಹೇಳಿದೆ. ಗುರುವಾರದಂದು ಕ್ಯಾಂಪ್ಕೋದಲ್ಲಿ ೧೮೯ ರೂಪಾಯಿ ಇದ್ದರೆ ಇತರ ಕಡೆಗಳಲ್ಲಿ ಅಷ್ಟು ಧಾರಣೆ ಇಲ್ಲದೇ ಇದ್ದದ್ದು ಇದಕ್ಕೆ ಸಾಕ್ಷಿಯಾಗಿದೆ.ಇದರ ಜೊತೆಗೆ ಅಡಿಕೆ ಬೆಳೆಗಾರರು ಕೂಡಾ ಈಗ ದೃಢ ನಿರ್ಧಾರ ತಳೆಯಲೇಕಾಗಿದೆ.ಧಾರಣೆ ಕುಸಿತದ ವದಂತಿ ಬಂದ ತಕ್ಷಣವೇ ಅಡಿಕೆಯನ್ನು ಒಮ್ಮಲೇ ಮಾರುಕಟ್ಟೆಗೆ ಬಿಡುವುದರಿಂದ ಧಾರಣೆ ಇನ್ನಷ್ಟು ಕುಸಿತವಾಗುವುದು ನಿಶ್ಚಿತ.ಇದಕ್ಕಾಗಿ ಬೆಳೆಗಾರರೇ ಧಾರಣೆಯನ್ನು ಹಿಡಿದಿಟ್ಟುಕೊಳ್ಳಬೇಕಾಗಿದೆ. ಹೀಗಾಗಿ ಎಚ್ಚರಿಕೆ ಅಗತ್ಯ. ವ್ಯಾಪಾರಿಗಳಲ್ಲಿ ಅಡಿಕೆ ದಾಸ್ತಾನು ಇಲ್ಲದೇ ಇದ್ದಾಗಲೂ ಧಾರಣೆ ಇಳಿಕೆಯ ಆಟ ಇದ್ದೇ ಇರುತ್ತದೆ. ಹೀಗೆ ಇಳಿಸುವುದರಿಂದ ವ್ಯಾಪಾರಿಗಳಿಗೆ ನಷ್ಟವಿಲ್ಲ. ಇದೆಲ್ಲವನ್ನೂ ಬೆಳೆಗಾರರು ಎಚ್ಚರಿಕೆಯಿಂದ ಗಮನಿಸಲೇಬೇಕಾಗುತ್ತದೆ.

ಜಾರಿದ ರಬ್ಬರ್ :

ರಬ್ಬರ್ ಧಾರಣೆ ವಿಪರೀತ ಕುಸಿತ ಕಂಡಿದೆ. ಬುಧವಾರದಂದು ಸಂಜೆಯ ವೇಳೆಗೆ ಭಾರತದಲ್ಲಿ ರಬ್ಬರ್‌ಗೆ 196.5 ರೂಪಾಯಿ ಇದ್ದ ಧಾರಣೆ ಗುರುವಾರ ಸಂಜೆಯ ವೇಳೆಗೆ ಭಾರತದಲ್ಲಿ ರಬ್ಬರ್ ಧಾರಣೆಯು 186 ರೂಪಾಯಿ. ಅಂದರೆ ಒಂದೇ ದಿನದಲ್ಲಿ 10 ರೂಪಾಯಿಯಷ್ಟು ಕುಸಿತ ಕಂಡಿದೆ.ಆದರೆ ಬ್ಯಾಂಕಾಂಗ್ ರಬ್ಬರ್ ಧಾರಣೆಯು 165 ರೂಪಾಯಿಗೆ ಇಳಿದಿದೆ.ಅಲ್ಲಿ ಕಳೆದ ಒಂದು ವಾರದಿಂದಲೇ ಕುಸಿತ ಕಂಡಿದೆ. ಇನ್ನು ಕುಲಾಲಾಂಪುರದಲ್ಲಿ 158 ರೂಪಾಯಿಗೆ ಇಳಿದಿದೆ.ಒಂದೇ ದಿನದಲ್ಲಿ 20 ರೂಪಾಯಿಯ ವ್ಯತ್ಯಾಸ ಕಂಡಿದೆ.ಶುಕ್ರವಾರದಂದು ಇನ್ನಷ್ಟು ಕುಸಿತ ಕಂಡಿದೆ.ಬ್ಯಾಂಕಾಂಗ್ ಧಾರಣೆಯು 161 ರೂಪಾಯಿ ಹಾಗೂ ಕುಲಾಲಾಂಪುರ ಧಾರಣೆ 154 ರೂಪಾಯಿಗೆ ಕುಸಿದರೆ ಭಾರತದಲ್ಲಿ ಮಾತ್ರಾ ಸ್ಥಿರತೆ ಕಾಯ್ದುಕೊಂಡಿದೆ. ಶುಕ್ರವಾರ ಕೂಡಾ 186 ರೂಪಾಯಿಯಲ್ಲೇ ರಬ್ಬರ್ ಖರೀದಿಯಾಗಿದೆ.

ಕಳೆದ ಮಾರ್ಚ್ ತಿಂಗಳ ನಂತರ ಇಷ್ಟು ದೊಡ್ಡ ಪ್ರಮಾಣದಲ್ಲಿ ಇದೇ ಮೊದಲ ಬಾರಿಗೆ ರಬ್ಬರ್ ಧಾರಣೆ ಕುಸಿಯುತ್ತಿದೆ. ಇದಕ್ಕೆ ಪ್ರಮುಖ ಕಾರಣ ತೈವಾನ್ ಪ್ರವಾಹ ಕಾರಣವಾಗಿದೆ.ಇದರ ಜೊತೆಗೆ ಚೀನಾದ ಸೇರಿದಂತೆ ಜಾಗತಿಕವಾದ ಆರ್ಥಿಕ ಏರುಪೇರು ಆಗುತ್ತಿರುವ ಕಾರಣದಿಂದಾಗಿ ರಬ್ಬರ್ ಕಂಪನಿಗಳು ಕೊಂಚ ಹಿನ್ನಡೆ ಅನುಭವಿಸಿವೆ. ಹೀಗಾಗಿ ರಬ್ಬರ್ ಬಳಕೆ ಕಡಿಮೆಯಾಗಿದೆ. ಈಗ ರಬ್ಬರ್‌ಗೆ ಅಂತರಾಷ್ಟ್ರೀಯ ಮಾರುಕಟ್ಟೆ ಇರುವುದರಿಂದ ಜಾಗತಿಕ ಮಾರುಕಟ್ಟೆಯ ವ್ಯತ್ಯಾಸ ಕೂಡಾ ರಬ್ಬರ್ ಮೇಲೆ ಪರಿಣಾಮ ಬೀರುತ್ತಿದೆ. ಇತ್ತೀಚೆಗಷ್ಟೇ ಶೇರು ಮಾರುಕಟ್ಟೆ ಕುಸಿತ ಕಂಡಿರುವುದು ಕೂಡಾ ರಬ್ಬರ್ ಧಾರಣೆ ಹಿನ್ನಡೆಗೆ ಒಂದು ಕಾರಣ.ಅದರ ಜೊತೆಗೆ ಈ ವರ್ಷ ವಿವಿದ ಕಾರಣಗಳಿಂದಾಗಿ ಕಾರುಗಳ ಮಾರಾಟ ಕೂಡಾ ಕಡಿಮೆಯಾಗಿದೆ.ಈಗಿನ ಅಂದಾಜು ಪ್ರಕಾರ ದೇಶದಲ್ಲಿ ಸುಮಾರು ಶೇ.೨ ರಷ್ಟು ಕಾರು ಮಾರಾಟ ಕುಸಿತವಾಗಿದೆ. ಇನ್ನು ಟಯರ್ ಕಂಪನಿಗಳು ಕೂಡಾ ಬೇಡಿಕೆಗೆ ತಕ್ಕಷ್ಟೇ ಟಯರ್ ತಯಾರು ಮಾಡುತ್ತಿದ್ದಾರೆ. ಇನ್ನು ಚೀನಾದಂತಹ ದೇಶಗಳು ಈಗಾಗಲೇ ರಬ್ಬರ್ ದಾಸ್ತಾನು ಇರಿಸಿಕೊಂಡಿದೆ.ಇದೆಲ್ಲಾ ರಬ್ಬರ್ ಬೆಲೆ ಇಳಿಕೆಯ ಕಾರಣಗಳು.



ಆದರೆ ಇಡೀ ವಿಶ್ವದ ರಬ್ಬರ್ ಮಾರುಕಟ್ಟೆ ನೋಡಿದರೆ ರಬ್ಬರ್‌ಗೆ ಬೇಡಿಕೆ ಇದ್ದೇ ಇದೆ.ಇದೇ ಕಾರಣಕ್ಕೆ ಹಿಂದೆ ರಬ್ಬರ್ ಮಾರುಕಟ್ಟೆಯು ೨೫೦ ರೂಪಾಯಿವರೆಗೆ ತಲುಪಬಹುದೆಂದು ರಬ್ಬರ್ ಮಾರುಕಟ್ಟೆ ವಿಶ್ಲೇಷಿಸಲಾಗಿತ್ತು. ಏಕೆಂದರೆ ಇಂದು ತೈಲ ಬೆಲೆ ಏರಿಕೆಯಾಗುತ್ತಲೇ ಇರುವ ಕಾರಣದಿಂದಾಗಿ ಸಿಂಥೆಟಿಕ್ ರಬ್ಬರ್ ತೀರಾ ದುಬಾರಿಯಾಗುವ ಕಾರಣದಿಂದಾಗಿ ನೈಸರ್ಗಿಕ ರಬ್ಬರ್‌ಗೆ ಬೇಡಿಕೆ ಇದ್ದೇ ಇದೆ.ಆದರೆ ಈಗಿನ ಕೆಲವು ತಾತ್ಕಾಲಿಕ ಸಮಸ್ಯೆಗಳಿಂದಾಗಿ ಧಾರಣೆ ಇಳಿಕೆಗೊಂಡರೂ ಕೂಡಾ ಮತ್ತೆ ನಿಧಾನವಾಗಿ ಏರಿಕೆಯಾಗುವ ಎಲ್ಲಾ ಲಕ್ಷಣಗಳು ಇವೆ.ಅದುವರೆಗೆ ಬೆಳೆಗಾರರು ಇನ್ನು ಕಾಯಬೇಕು ಅಷ್ಟೇ.

ಕಾಮೆಂಟ್‌ಗಳಿಲ್ಲ: