16 ಜನವರಿ 2011

ಇವನಿಗೆ ಹಳ್ಳಿ ಇಷ್ಟ ಯಾಕಂತೆ ?

ಮೊನ್ನೆ ಪೆಟ್ರೋಲ್ ಬೆಲೆ ಹೆಚ್ಚಾಗುತ್ತೆ ಅಂದಾಗಲೂ ಆತ ಆ ಬಗ್ಗೆ ತಲೆಕೆಡಿಸಿಕೊಂಡಿಲ್ಲ, ಮೊನ್ನೆ ಮೊನ್ನೆ ಹಾಲಿನ ದರ ಸ್ವಲ್ಪ ಏರಿಕೆಯಾಗಿತ್ತು , ಈಗ ಇನ್ನೂ ಏರಿಕೆಯಾಗುತ್ತಂತೆ ಅಂದಾಗಲೂ ಆತ ಆ ಬಗ್ಗೆ ಚಕಾರವನ್ನೇ ಎತ್ತಿಲ್ಲ.ಎಲ್ಲದಕ್ಕೂ ಆತ ಹೇಳುತ್ತಿದ್ದುದು, “ನನ್ನ ಹಳ್ಳಿ ನಂಜೊತೆಗಿದೆ” ಅಂತ.

ಇದು ಏರಿಕೆಯ ಕಾಲಘಟ್ಟ. ಮೊನ್ನೆ ಮೊನ್ನೆ ಹಾಲಿನ ದರ ಏರಿಕೆಯಾಗಿತ್ತು , ಈಗ ಮತ್ತೆ ಪೆಟ್ರೋಲ್ ದರ ಏರಿಕೆಯಾಗಿದೆ , ತರಕಾರಿ ಬೆಲೆ ಬಗ್ಗೆ ಮಾತಾಡೋ ಹಾಗಿಲ್ಲ , ನೀರುಳ್ಳಿ ಕಣ್ಣುರಿ ತರಿಸುತ್ತೆ , ಅಕ್ಕಿ ಬೆಲೆಯೂ ಏರು ಹಾದಿಯಲ್ಲಿದೆ.ಎಲ್ಲವೂ ಕೈಗೆಟಕದ ಹಾಗಿದೆ. ನಗರದಲ್ಲಿ ಸಾಮಾನ್ಯ ಸಂಬಳ ಪಡೆಯೋ ನೌಕರನ ತಲೆಯೂ ಇದೆಲ್ಲದರ ಜೊತೆಗೆ ಬಿಸಿಯಾಗುತ್ತಿದೆ.ತಿಂಗಳ ಅಂತ್ಯಕ್ಕೆ ಲೆಕ್ಕ ಹಾಕಿದಾಗ , ಮನೆ ಬಾಡಿಗೆ ,ಗ್ಯಾಸ್‌ಗೆ ,ತರಕಾರಿ , ದಿನಸಿ , ಇದರ ಜೊತೆಗೆ ದೈನಂದಿನ ಖರ್ಚು ಎಲ್ಲಾ ಲೆಕ್ಕ ಹಾಕಿದಾಗ ಈ ಚಳಿಯಲ್ಲೂ ಮೈ ಬೆವರುತ್ತದೆ. ಯೋಚನೆ ಇನ್ನೂ 5 ವರ್ಷಗಳ ನಂತರಕ್ಕೆ ಓಡುತ್ತದೆ.ಅಷ್ಟು ದೂರಕ್ಕೆ ನೆನಪಿಸಿಕೊಳ್ಳಲಾಗುವುದಿಲ್ಲ ಎನ್ನುತ್ತಾನೆ.ಈ ನಡುವೆ ಇನ್ನೊಮ್ಮೆ ಪೆಟ್ರೋಲ್ ಬೆಲೆ ಏರಿಕೆಯಾಗಿದೆ.ಕಚೇರಿಗೆ ದಿನವೂ ಮೋಟಾರ್ ಬೈಕಲ್ಲೋ , ಕಾರಲ್ಲೋ ಹೋಗಿಯೇ ರೂಢಿ.ಈಗ ಪೆಟ್ರೋಲ್ ಬೆಲೆ ಏರಿದೆ ಅಂತ ಅದನ್ನು ನಿಲ್ಲಿಸಲಾಗುತ್ತೆಯೇ?. ಅದು ಇನ್ನೊಂದು ತಲೆ ಬಿಸಿ. ಈ ನಡುವೆ ಹಾಲಿಗೂ ಇನ್ನೂ ಬೆಲೆ ಏರುತ್ತಂತೆ. ರೈತರಿಗೆ ಕೊಡಲು, ಅಂತಾರೆ ಅವರು.ಅದಕ್ಕೂ ಮೊನ್ನೆ ಟಿವಿ ಚಾನೆಲ್ಲಿನಲ್ಲಿ ಚರ್ಚೆಯಾಗುತ್ತಿತ್ತು.ರೈತರ ಹೆಸರಲ್ಲಿ ಕಂಪನಿ ಹಣ ಮಾಡುತ್ತಿದೆ , ಸರಕಾರ ಏದಾರೂ ರೈತರಿಗೆ ಮಾಡಬೇಕು , ಗ್ರಾಹಕ ವಲಯ ದೊಡ್ಡದಿದೆ ಅವರಿಗೂ ಹೊರೆಯಲ್ಲವೇ ಅಂತ ಹೇಳುತ್ತಿದ್ದರು.ಆದರೆ ಅವರಿಗೇನು ಗೊತ್ತು ಈ ರೈತರ ಕಷ್ಠ.ಒಂದು ದಿನ ಹಾಲು ತಡವಾದರೆ ಬೊಬ್ಬಿಟ್ಟು ಗೊತ್ತೇ ವಿನ: ,ಬೆಳಗ್ಗೆ ನಾಲ್ಕೋ ಐದೋ ಗಂಟೆಗೆ ಎದ್ದು ಹಸುಗಳಿಗೆ ತಿನ್ನಲು ಕೊಟ್ಟು ಹಾಲು ಕರೆದು ಎರಡೋ ಮೂರೋ ಕಿಲೋ ಮೀಟರ್ ದೂರ ನಡೆದು ಹೋಗಿ ಸಹಕಾರ ಸಂಘಗಳಿಗೆ ಹಾಲು ಹಾಕಿ ಅಲ್ಲಿನ ಸಿಬ್ಬಂದಿಯ ಕಿರಿ ಕಿರಿ ಕೇಳಿ ಮನೆಗೆ ಬರೋ ಆ ಹೈನುಗಾರನ ಪಾಡು ಅವನಿಗೇ ಗೊತ್ತು.

ಈಗ ಅದಲ್ಲ , ಅಲ್ಲಿ ಬೆಲೆ ಏರಿಕೆಯ ಬಗ್ಗೆ ತಲೆಗೊಬ್ಬರಂತೆ ಮಾತಾಡೋವಾಗ ಆತ ಇಲ್ಲಿ ಹೇಳುತ್ತಾನೆ , ನನಗೇನು ಬೆಲೆ ಏರಿಕೆಯಾಗಲಿ. ಯಾವುದು ಪೆಟ್ರೋಲ್ ಬೆಲೆ ಏರಿಕೆಯಾ ?. ನನಗೇನು ಚಿಂತೆ , ದಿನಕ್ಕೊಮ್ಮೆ ಸ್ವಲ್ಪ ರಿಲ್ಯಾಕ್ಸ್ ಇರಲಿ ಅಂತ ಪೇಟೆಗೆ ಹೋಗುತ್ತಿದ್ದೆ , ಇನ್ನು ಹೋಗೋದಿಲ್ಲ. ಹೊಲಕ್ಕೆ ಒಂದು ಸುತ್ತು ಹೆಚ್ಚು ಹೊಡೀತೇನೆ. ಇನ್ನು ಹಾಲಿನ ಬಗ್ಗೆ ತಲೇನೇ ಕೆಡಿಸಿಕೊಳ್ಳೋದಿಲ್ಲ , ನನ್ನದೇ ಹಸು ಇದೆ. ನಾನೇ ಇರಿಸಿಕೊಳ್ಳುತ್ತೇನೆ. ಗ್ಯಾಸ್ ನಮಗೆ ಬೇಡವೇ ಬೇಡ ಗೋಬರ್ ಗ್ಯಾಸ್ ಇದೆ. ಬೆಳಗ್ಗೆ ಬಿಸಿ ನೀರು ಸ್ನಾನ ಮಾಡಲು ಗ್ಯಾಸ್ , ಕರೆಂಟ್ ನೋಡೋದೇ ಇಲ್ಲ. ನಮ್ಮ ತೋಟದಲ್ಲಿ ಸಿಗೋ ಕಸ ಕಡ್ಡಿಯೇ ಸಾಕು , ಇನ್ನು ತರಕಾರಿ ಬಗ್ಗೆ ಹೇಳೋದಾದ್ರೆ , ಶುದ್ದವಾದದ್ದು , ರಾಸಾಯನಿಕ ಸಿಂಪಡಿಸದೇ ಇದ್ದದ್ದು ನಾನೇ ನನ್ನ
ಹೊಲದಲ್ಲಿ ಬೆಳೆಯುತ್ತೇನೆ ,ಇನ್ನು ಅಕ್ಕಿಯೂ ನಾನೇ ಬೆಳೀತೇನೆ. ಹಣಕ್ಕಾಗಿ , ರಬ್ಬರ್ ಇದೆ , ಅಡಿಕೆ ಇದೆ.ರಬ್ಬರ್ ರೇಟಂತೂ ೨೦೦ ರ ಗಡಿ ದಾಟಿದೆ.ಯಾರದ್ದೂ ಕಿರಿಕಿರಿ ಇಲ್ಲ. ಈಗ ಬೇಕಾದ್ರೂ ನಾನು ಮಲಗಿ ನಿದ್ರಿಸುತ್ತೇನೆ.ಕೇಳೋರು ಯಾರೂ ಇಲ್ಲ.ಅದೆಲ್ಲದಕ್ಕೂ ಮುಖ್ಯವಾಗಿ ಶುದ್ದ ಗಾಳಿ , ನೀರು ಸಿಗುತ್ತೆ ಅನ್ನೋದೇ ಇವನಿಗೆ ಖುಷಿ.




ಆದ್ರೆ ಇವನಿಗೂ ಒಂದು ಸಮಸ್ಯೆ ಇದೆಯಂತೆ, ತೋಟದ ಕೆಲಸ ಮಾಡೋಕೆ ಜನ ಸಿಕ್ತಾ‌ಇಲ್ಲ , ಆದ್ರೆ ಇದಕ್ಕೆ ಈಗ ಯೋಚನೆ ಮಾಡಿದ್ದಾನೆ , ಎಲ್ಲಕ್ಕೂ ಯಂತ್ರ ಬಳಸಿಕೊಳ್ತಾನೆ. ಇನ್ನೊಂದು ಸಮಸ್ಯೆ ಅಂದ್ರೆ ಕಾಡು ಪ್ರಾಣಿಗಳದ್ದು. ತೋಟಕ್ಕೆ ಬಂದ್ರೆ ಎಲ್ಲವನ್ನೂ ನಾಶ ಮಾಡಿ ಹಾಕುತ್ತದೆ. ಅದಕ್ಕಾಗಿ ಸಾಕಷ್ಟು ಎಚ್ಚರ ವಹಿಸಿಕೊಳ್ತಾನೆ , ಆದ್ರೂ ಮಂಗಗಳು ಮಾತ್ರಾ ಬಂದೇ ಬರ್ತಾವೆ ಅಂತಾನೆ ಆತ.

ಇದೇ ಒಂದೆರಡು ಸಮಸ್ಯೆ ಮಾತ್ರಾ ಇದ್ದು ಅಷ್ಟೂ ಒಳ್ಳೆಯ ವಾತಾವರಣ ಇರುವಾಗ ನಾನ್ಯಾಕೆ ನನ್ನ ಹಳ್ಳಿಯನ್ನು ಹೀಯಾಳಿಸಲಿ , ಅದು ಯಾವತ್ತೂ ನಂಜೊತೆನೇ ಇದೆ.ಅದಕ್ಕಾಗಿ ನಾನೇನಾದರೂ ಮಾಡಬೇಕು.ಇಲ್ಲಿರೋ ಜನರಿಗೆ ಏನಾದರೂ ಮಾಡಬೇಕು. ಅಂತ ಆತ ಯಾವಾಗಲೂ ಹೇಳುತ್ತಾ ಇರುತ್ತಾನೆ. ಈ ಬೆಲೆ ಏರಿಕೆಯ ಮಾತು ಬಂದಾಗಲೆಲ್ಲಾ ಆತ ನಿರುಮ್ಮಲವಾಗಿರುತ್ತಾನೆ.

15 ಜನವರಿ 2011

ಇವನಿಗಾರು ಗತಿ ?

ಏನು ಕತೆ ಸ್ವಾಮಿ?. ಈ ತೆಂಗಿನ ಕಾಯಿಗೆ ರೇಟು?. ನಿನ್ನೆ ಹತ್ತು ರುಪಾಯಿ ಇತ್ತು ಇವತ್ತು ನೋಡಿದ್ರೆ ಹದಿನೈದಾಗಿದೆ. ! ಏನು ಕತೆ ಇದು ? ಅಂತ ಗ್ರಾಹಕ ಬೊಬ್ಬಿಡುತ್ತಾನೆ.

ಇತ್ತ ರೈತ ಹೇಳ್ತಾನೆ ಏನ್ ಸ್ವಾಮಿ ತೆಂಗಿನ ಕಾಯಿಗೆ ರೇಟು ಏರ್ತಾನೆ ಇದೆ.ಆದ್ರೆ ನಮ್ಮಲ್ಲಿ ತೆಂಗಿನ ಕಾಯಿನೇ ಇಲ್ಲ. ಏನು ಅವಸ್ಥೆನೋ ಏನೋ ಮಂಗಗಳೆಲ್ಲಾ ಎಳೆ ಕಾಯನ್ನೇ ತೆಗೆದು ಹಾಳು ಮಾಡ್ತಾವೆ.ಕಾಯಿನೇ ಸಿಗೋದಿಲ್ಲ ಅಂತ ಆತ ತಲೆ ಮೇಲೆ ಕೈ ಹಿಡ್ಕಳ್ತಾನೆ.

ಆಗ ಅಲ್ಲೊಬ್ಬ ಹೇಳ್ತಾನೆ, ನೋಡಣ್ಣ ನೀನ್ ಹಂಗೆ ಕೂತ್ರೆ ಆಗಾಕಿಲ್ಲ , ಮಂಗ ಬರೋ ಹಾದಿಲಿ ಒಂದು ಬಾಳೆ ಗೊನೆ ಇಡು. ಅದ್ಕೆ ಒಂಚೂರು ವಿಷಾನೂ ಹಾಕಿಡು ಅದು ಮತ್ತೆ ಬರೋದೇ ಇಲ್ಲ ಅಂತಾನೆ ಆತ. ವಿಚಾರ ಇರೋದೇ ಇಲ್ಲಿ. ಮಂಗ ಬರುತ್ತೆ ಅಂತ ಆ ರೈತ ವಿಷ ಇಕ್ಕಿ ಆ ಮಂಗಗಳನ್ನು ಕೊಲ್ತಾನೆ. ಆ ನಂತ್ರ ಬೆಳೆನೂ ಸಿಗುತ್ತೆ , ಬೆಲೆನೂ ಇರುತ್ತೆ.

ಮೊನ್ನೆ ಮೊನ್ನೆ ಅಂತಹದ್ದೇ ಇನ್ನೊಂದು ಘಟನೆ ಇತ್ತು ನೋಡಿ ,ಅಲ್ಲೊಂದು ಆನೆ ಕರೆಂಟ್ ಶಾಕ್‌ನಿಂದ ಸತ್ತೇ ಹೋಯಿತಂತೆ.ಎಂತಾ ದುರಂತ ಮಾರಾಯ್ರೆ. ಹೀಗಾಗಬಾರದಿತ್ತು.

ನಿಜಕ್ಕೂ ಹಾಗಾಗಬಾರದಿತ್ತು.ಅದೊಂದು ಕಾಡುಪ್ರಾಣಿ.ಜೀವಜಾಲದ ಕೊಂಡಿಗಳಲ್ಲಿ ಅದೂ ಒಂದು. ಹೀಗೇ ಒಂದೋಂದೇ ಪ್ರಾಣಿ ಸತ್ತರೆ ಜೀವಜಾಲದ ಕೊಂಡಿ ತಪ್ಪೋದ್ರಲ್ಲಿ ಸಂಶಯವೇ ಇಲ್ಲ. ಹೀಗಾಗಿ ಅಲ್ಲಿ ವಿದ್ಯುತ್ ಹರಿಸಿದವನಿಗೆ ಶಿಕ್ಷೆ ಆಗಲೇ ಬೇಕು ಅಂತ ಮನಸ್ಸಿನೊಳಗೇ ಹೇಳಲೇಬೇಕಾಗುತ್ತದೆ.

ಆದರೆ ಇದೆಲ್ಲಾ ಒಂದು ಮುಖ. ಅದರ ಹಿಂದೆ ಇನ್ನೊಂದು ಮುಖ ಇದೆ.

ಅಲ್ಲಿ ಯಾಕಾಗಿ ವಿದ್ಯುತ್ ಹರಿಸಲಾಗಿತ್ತು?.ಅಲ್ಲೂ ಕೂಡಾ ಸಮಸ್ಯೆ ಇದೇ ಆನೆಯದ್ದು. ಹೊಲಗಳಿಗೆ ನುಗ್ಗಿ ಬೆಳೆ ನಾಶ ಮಾಡೋವಾಗ ಅಷ್ಟೂ ಪ್ರೀತಿಯಿಂದ ಬೆಳೆದ ಬೆಳೆ ನಾಶವಾಗೋವಾಗ ಯಾರು ತಾನೆ ಸುಮ್ಮನಿರ್ತಾನೆ ಹೇಳಿ. ಹಾಗೆ ಆತ ಅಲ್ಲೂ ಒಂದು ರಕ್ಷಣೆಗೆ ಮುಂದಾದ. ಆನೆ ಜೀವ ತೆತ್ತಿತು.

ಎಲ್ಲಾ ಕಡೆ ರೈತನಿಗೆ ಇರೋ ಸಮಸ್ಯೆ ಇದೆ.ಸರಕಾರ ಏನೋ ರೈತರ ಪರ ಅಂತೆಲ್ಲಾ ಹೇಳುತ್ತಿದ್ದರೂ ಅವನ ಗೋಳು ಮಾತ್ರಾ ಮುಗಿಯೋದೇ ಇಲ್ಲ.ಒಂದು ಕಡೆ ಬೆಳೆ ಬೆಳೆಯಲು ಅದೆಷ್ಟೋ ವಿಘ್ನಗಳು.ಬೆಳೆ ಬಂದರೆ ಮಾರಾಟದ ಸಮಸ್ಯೆ. ಅದೆಲ್ಲಾ ಆಗೋ ಹೊತ್ತಿಗೆ ಆತ ಸುಸ್ತೋ ಸುಸ್ತು. ಹೊಲದಲ್ಲಿ ಹುಲುಸಾಗಿ ಪೈರು ಬಂದಿದೆ ಅಂದ ಕೂಡಲೇ ಆನೆಗಳ ಹಿಂಡು ಕಾಲಿಡುತ್ತದೆ.ಒಮ್ಮೆ ಆನೆ ನುಗ್ಗಿದರೆ ಅದಷ್ಟೂ ಬೆಳೆಯನ್ನು ಆಪೋಶನ ತೆಗೆದುಕೊಳ್ಳಯುತ್ತದೆ. ಹಾಗಾಗಿ ಆ ಬೆಳೆಯ ರಕ್ಷಣೆ ಆಗಲೇಬೇಕು. ಅದು ಹೇಗೆ?, ಆನೆಗೆ ಸರಿಯಾದ ವ್ಯವಸ್ಥೆ ಮಾಡಿ ಅಂತ ಸರಕಾರಕ್ಕೆ ಹೇಳಿದರೂ ಕೇಳಿಸೋದೇ ಇಲ್ಲ. ಹಾಗಾದ್ರೆ ಇನ್ನೇನು ದಾರಿ ಅಂತ ಯೋಚಿಸುವಾಗ ,ಆತನಿಗೆ ಕಾಣುವ ಸುಲಭ ದಾರಿಯನ್ನು ಆತ ಆಯ್ಕೆ ಮಾಡುತ್ತಾನೆ. ಹಾಗಾಗಿ ಸರಕಾರವೇ ರೈತರ ಇಂತಹ ಸಮಸ್ಯೆ ನಿವಾರಣೆ ವ್ಯವಸ್ಥೆ ಮಾಡಬೇಕೇ ವಿನ: ಇನ್ಯಾವುದೇ ಅನ್ಯ ದಾರಿ ಇಲ್ಲ. ಮಂಗಗಳದ್ದೂ ಅದೇ ಕಾಟ. ಕಾಡಿನ ಆಹಾರವನ್ನು ಬಿಟ್ಟು ನಾಡಿಗೆ ಬಂದದ್ದೇ ತಡ , ಎಳ ತೆಂಗಿನಕಾಯಿ , ಅಡಿಕೆ ಹೀಗೇ ಎಲ್ಲವನ್ನೂ ನಾಶ ಮಾಡಿ ಓಡಿ ಬಿಡುತ್ತದೆ. ಅದನ್ನು ತಡೆಯೋದಾದರೂ ಹೇಗೆ?. ಹಾಗಾಗಿ ರೈತರು ಬೆಳೆ ರಕ್ಷಣೆಗೆ ಏನಾದರೊಂದು ದಾರಿ ನೋಡಬೇಕಾಗುವುದು ಅನಿವಾರ್ಯ. ಆಗ ಇಂತಹ ದುರಂತಗಳು ನಡೆಯುತ್ತದೆ.

02 ಜನವರಿ 2011

ಬಂದಿದೆ 2011

ಇನ್ನೊಂದು ವರ್ಷ ಇದೆ. 2012 ಬರಲು.

ಪ್ರತೀ ವರ್ಷವೂ ಡಿಸೆಂಬರ್ 31 ರ ನಂತರ ಕಾತರದ ಕ್ಷಣ.ಒಂದು ಮೆಸೇಜ್ ಮಾಡಲು , ಒಂದು ಮೈಲ್ ಮಾಡಲು , ಆ ದಿನ ಫೋನು ಮಾಡಿದ ಗೆಳೆಯರಿಗೆ ಶುಭಾಶಯ ಹೇಳಲು.ಇದಿಷ್ಟೇ. ಮರುದಿನ ಯಥಾಪ್ರಕಾರ.ಅದೇ ಸಮಯ , ಅದೇ ಹಗಲು ಅದೇ ರಾತ್ರಿ. ಅದೇ ಟ್ರಾಫಿಕ್ ಅದೇ ಕೆಲಸ . . . ಎಲ್ಲವೂ ಅದೇ.ಹೊಸತು ಏನೂ ಇಲ್ಲ. ಆದರೂ ಮತ್ತೊಂದು ವರ್ಷ ಅಂದಾಗ ಅಲ್ಲೇನೋ ಒಂದು ಹೊಸದು ಹುಡುಕುವ ಕಾಯಕ.

ವರ್ಷ ಮುಗಿದಂತೆ , ಸಮಯ ಕಳೆದಂತೆ ,ನಿಮಿಷ ಮುಗಿದಂತೆ ನಮ್ಮ ಆಯಸ್ಸೂ ಮುಗಿಯುತ್ತಿದೆ. ಸಾವು ಹತ್ತಿರವಾಗುತ್ತದೆ. ಅಂದರೆ ಉಸಿರು ನಿಲ್ಲುವ ಹೊತ್ತು ಹತ್ತಿರವಾಗುತ್ತಿದೆ ಅಂತಾನೇ ಅರ್ಥ.ಹಾಗೆಂದು ಅದರದ್ದೇ ಧ್ಯಾನ ಮಾಡಿಕೊಂಡಿರುವುದಕ್ಕೆ ಆಗುವುದಿಲ್ಲ. ಆ ದಿನ ಬರುವವರೆಗೂ ಸಾಧನೆಗಳನ್ನು ನಿಲ್ಲಿಸಲಾಗುವುದಿಲ್ಲ, ಜವಾಬ್ದಾರಿಯ ಹೊರೆಯನ್ನು ಇಳಿಸುವುದಕ್ಕಾಗುವುದಿಲ್ಲ.ಮಾಡಲೇಬೇಕು. ಸವಾಲುಗಳನ್ನು ಎದುರಿಸಲೇಬೇಕು. ಅದು ನಿರಂತರ.ಹಾಗಿದ್ದರೂ ಎಲ್ಲಾದರೂ ಒಂದು ಕಡೆ ಒಮ್ಮೆ ನಿಂತು ಬಂದ ದಾರಿಯನ್ನು ಒಮ್ಮೆ ಅವಲೋಕಿಸಬೇಡವೇ.ಅದಕ್ಕೆ ಈ ಡಿಸೆಂಬರ್ 31 ಒಂದು ಪಕ್ಷವಾದ ಕಾಲವಾಗುತ್ತದೆ. ಹಾಗೆ ಹಿಂತಿರುಗಿ ನೋಡಿದಾಗ ಅದೆಷ್ಟೂ ಸಿಹಿ ಕಹಿ ಅನುಭಗಳ ಮೂಟೆ ಕಾಣುತ್ತದೆ. ಅದೆಲ್ಲವೂ ಮುಂದಿನ ಕಾಲಕ್ಕೆ ಒಂದು ಪಾಠವಾಗುತ್ತದೆ. ತಪ್ಪುಗಳನ್ನು ತಿದ್ದಿಕೊಳ್ಳುವುದಕ್ಕೆ ಕಾರಣವಾಗುತ್ತದೆ. ಒಂದಷ್ಟು ಹೊಸ ಸಂಕಲ್ಪಗಳನ್ನು ಮಾಡಿಕೊಳ್ಳುವುದಕ್ಕೂ ಅಲ್ಲೊಂದು ಅವಕಾಶ ಸಿಗುತ್ತದೆ. ಹಾಗೇ ಕ್ಯಾಲೆಂಡರ್ ಬದಲಾದಂತೆ ಅನುಭವದ ಮೂಟೆಗಳು ದೊಡ್ಡದಾಗುತ್ತಾ ಹೋಗುತ್ತದೆ. ಬುದ್ದಿ ಮಾಗುತ್ತಾ ಹೋಗುತ್ತದೆ , ದೇಹಕ್ಕೆ ಆಯಸ್ಸು ಹೆಚ್ಚಾಗುತ್ತಾ ಸಾಗುತ್ತದೆ. ಕಾಲಚಕ್ರ ತಿರುಗುತ್ತಲೇ ಸಾಗುತ್ತದೆ.

ಹಾಗಾಗಿ ಹೊಸವರ್ಷ ಅಂದರೆ ಅದೊಂದು ಕ್ಯಾಲೆಂಡರ್ ಬದಲಾವಣೆಯ ಸಮಯ. ಹೊಸ ಭರವಸೆಗಳನ್ನು ನಿರೀಕ್ಷೆಗಳನ್ನು ಇಟ್ಟುಕೊಳ್ಳುವ ಕಾಲ ಅದಲ್ಲ. ಭೂತಕಾಲವನ್ನು , ಅರ್ಥಾತ್ ಇತಿಹಾಸವನ್ನು ಅವಲೋಕಿಸಿ ಭವಿಷ್ಯ ಕಾಲವನ್ನು ನಿರ್ಧರಿಸುವ , ರೂಪಿಸುವ ಕಾಲ ಅದು. ಯಾಕೆಂದರೆ ಪ್ರತೀ ಕ್ಷಣ , ನಿಮಿಷ ನಿಮಿಷವೂ ನಮಗೆ ಹೊಸದೇ. ಮತ್ತೆ ಅದೇ ಸಮಯ ನಮಗೆ ಬೇಕೆಂದರೂ ಸಿಗದು. ಅದು ಯಾವತ್ತೂ ಹೊಸದೇ , ಮತ್ತೆ ಸಿಗದ ವಸ್ತು ಅದು.

ಹಾಗಾಗಿ ಪ್ರತೀ ಕ್ಷಣವೂ ನಮಗೆ ಹ್ಯಾಪೀ ನ್ಯೂ ಇಯರ್.

. . . . . . . . . . . . . . . .. . . . ..