11 ಫೆಬ್ರವರಿ 2011

ಭೂಮಿ ಈಗ ರಜಸ್ವಲೆ. .

ಸೃಷ್ಠಿಯ ಮೂಲ ಹೆಣ್ಣು. ಹೆಣ್ಣನ್ನು ಭೂಮಿ, ಪ್ರಕೃತಿ ಹೀಗೆ ವಿವಿದ ರೂಪದಲ್ಲಿ ಕಂಡವರು ನಮ್ಮ ಪೂರ್ವಜರು.ಇದಕ್ಕೂ ಕಾರಣವಿದೆ, ಒಂದು ಸೃಷ್ಠಿಯು ಹಿಂದೆ ಹೆಣ್ಣು ಇದ್ದೇ ಇರುತ್ತಾಳೆ. ಇರಲೇಬೇಕು.ಈ ಪ್ರಕೃತಿ, ಭೂಮಿಯೂ ಕೂಡಾ ಹಾಗೆಯೇ.ಯಾವುದೇ ಬೆಳೆಗಳ ಸೃಷ್ಠಿಗೆ ಭೂಮಿ ಮತ್ತು ಈ ಪ್ರಕೃತಿ ಬೇಕೇ ಬೇಕು.ಇಂತಹ ಸೃಷ್ಠಿಯಾಗುವುದಕ್ಕೆ ಮೊದಲು ಅವಳು ಪ್ರಬುದ್ದಳಾಗಬೇಕು , ರಜಸ್ವಲೆಯಾಗಬೇಕು.ಇದು ಪ್ರಕೃತಿ ನಿಯಮವೂ ಹೌದು. ಅದರಂತೆ ಈಗ ಭೂದೇವಿಯು ರಜಸ್ವಲೆಯಾಗಿದ್ದಾಳೆ. ಸೃಷ್ಠಿಗೆ ತಯಾರಾಗಿದ್ದಾಳೆ. ಹಾಗಾಗಿ
ಎಲ್ಲೆಡೆ ಮೌನ ಆವರಿಸಿದೆ. ಭೂಮಿಗೆ ಕಾಲಿಡುವುದಕ್ಕೂ ಈಗ ಹಿಂಜರಿಕೆ.ಎಲ್ಲಿ ಅವಳಿಗೆ ನೋವಾಗುತ್ತದೋ ಅನ್ನೋ ಭಾವ.ಎಂತಹ ಪ್ರೀತಿಯ ಭಾವ ಅದು !.

ಈಗ ಭೂಮಿಯ ಕಡೆಗೆ ಒಮ್ಮೆ ನೋಡಿ. ಮೊನ್ನೆ ಮೊನ್ನೆ ಬರಡು ಬರಡಾಗಿದ್ದ ಮರಗಳೆಲ್ಲಾ ಮತ್ತೆ ಚಿಗುರಿ ನಿಂತಿದೆ.ಮಾಮರವೆಲ್ಲಾ ಹೂ ಬಿಟ್ಟು ಕಾಯಿ ಕಟ್ಟಿಕೊಳ್ಳುವುದಕ್ಕೆ ಸಿದ್ದವಾಗುತ್ತಿದೆ , ಅಂದರೆ ಗರ್ಭವತಿಯಾಗುವುದಕ್ಕೆ ಅಣಿಯಾಗುತ್ತಿದೆ , ಇತ್ತ ಕೃಷಿಯೂ ಹಾಗೇ ಅಡಿಕೆಯಲ್ಲಾದರೆ ಹಿಂಗಾರ ಬಿಟ್ಟು ಸುವಾಸನೆ ಬೀರುತ್ತಿದೆ , ದುಂಬಿಗಳನ್ನು ಪರಾಗಸ್ಪರ್ಶಕ್ಕೆ ಆಕರ್ಷಿಸುತ್ತಿದೆ , ಇಲ್ಲಿ ಗದ್ದೆ ನೋಡಿ ಎಲ್ಲವೂ ಸಿದ್ದವಾಗಿದೆ ಕಟಾವಾಗುವುದಕ್ಕೆ ಕಾದುನಿಂತಿದೆ, ಇದೆಲ್ಲದರ ಜೊತೆಗೆ ಚಳಿಯೂ ಸಾತ್ ನೀಡುತ್ತದೆ. ಈ ನಡುವೆ ಬೀಸುವ ತಂಗಾಳಿ. ಇದನ್ನು ನಮ್ಮೂರ ಜನ ಫಲ ಗಾಳಿ ಅಂತಾನೇ ಕರೀತಾರೆ.ಯಾಕಂದ್ರೆ ಇದರಿಂದಾಗಿಯೇ ಕಾಯಿ ಕಟ್ಟುವುದೂ ಇದೆ.ಹೀಗೇ ಭುವಿಯ ಒಡಲೊಳಗೆ ಅದರದ್ದೇ ಆದ ಸೃಷ್ಠಿಯ ತತ್ವಗಳು ಕಾಣಿಸುತ್ತವೆ. ಆದರೆ ಮಾನವರಾದ ನಾವು ಈ ಪ್ರಕೃತಿಯೊಂದಿಗೆ ಎಷ್ಟೇ ಬಡಿದಾಡಿದರೂ ಅವಳು ಮಾತ್ರಾ ಸಹಿಸಿಕೊಂಡಾದ್ದಾಳೆ. ಯಾಕೆಂದರೆ ಅವಳು ಮಾತೆ. .!. ಈ ಮಾತೆಯೊಂದಿಗೆ ಜಗಳವಾಡುವುದನ್ನು ಕೆಲ ದಿನವಾದರೂ ನಿಲ್ಲಿಸಬೇಡವೇ.ಹಾಗಾದರೆ ಯಾವಾಗ. ಅವಳು ರಜಸ್ವಲೆಯಾದ ದಿನ. ಈಗ ಅವಳು ರಜಸ್ವಲೆ. ತಿಂಗಳ ಮುಟ್ಟು. ಹಾಗಾಗಿ ಅವಳಿಗೆ ವಿಶ್ರಾಂತಿ ಬೇಕು.ನಾವು ಜಗಳವನ್ನು ಈ 3 ದಿನ ನಿಲ್ಲಿಸಲೇಬೇಕು. ಅದಕ್ಕಾಗಿ ನಮ್ಮೂರಿನ ಜನ ಇದನ್ನು ಕೆಡ್ಡಾಸ ಎಂಬ ಆಚರಣೆಯ ಮೂಲಕ ಮೂರು ದಿನ ಭೂಮಾತೆಯ ಪೂಜೆ ಮಾಡುತ್ತಾರೆ.ಯಾವೊಂದು ಕೆಲಸವೂ ಮಾಡುವುದಿಲ್ಲ.

ವರ್ಷ ಪೂರ್ತಿ ಭೂಮಿಯೊಂದಿಗೆ ದುಡಿದು,ಸರಸವಾಡಿ ಈಗ ಭೂಮಿಯನ್ನು ಅರಾಧಿಸುವ ಒಂದು ವಿಶಿಷ್ಠ ಆಚರಣೆಯೇ ಈ ಕೆಡ್ಡಾಸ.ಈ ತುಳುನಾಡು ತನ್ನದೇ ಆದ ಸಂಪ್ರದಾಯವನ್ನು ಬೆಳೆಸಿಕೊಂಡು ಬಂದಿದೆ.ಇಲ್ಲಿನ ಆಚರಣೆಗಳೆಲ್ಲವೂ ವಿಶಿಷ್ಠವಾಗಿದೆ ಮತ್ತು
ಅದರ ಹಿಂದೆ ಒಂದು ವೈಜ್ಞಾನಿಕ,ಭಾವನಾತ್ಮಕ ಸಂಬಂಧಗಳೂ ಇರುತ್ತದೆ.ಇಲ್ಲಿ ಸಾಮಾನ್ಯವಾಗಿ ಸಾಮೂಹಿಕವಾದ ಹಬ್ಬಗಳ ಆಚರಣೆಗಳೇ ಹೆಚ್ಚು ಪ್ರತಿಬಿಂಬಿತವಾಗುತ್ತದೆ.ಹೆಚ್ಚ ಆಪ್ಯಾಯಮಾನವಾಗುತ್ತದೆ. ಮಾತ್ರವಲ್ಲ ಎಲ್ಲಾ ಆಚರಣೆಗಳೂ ಕೃಷಿ ಹಾಗೂ ಬೇಸಾಯದ ಮತ್ತು ಪ್ರಕೃತಿ ಮೂಲದಿಂದ ಬಂದ ಆಚರಣೆಗಳೇ ಆಗಿದೆ.ಭೂಮಿಯನ್ನು ಹೆಣ್ಣೆಂದು ಕಂಡು ಅವಳಿಗೆ ಪೂಜೆ ಮಾಡುವ ಸಂಪ್ರದಾಯ ಇಲ್ಲೂ ಇದೆ. ಈಗ ಅವಳು ಋತುಮತಿಯಾಗುತ್ತಾಳೆ ಅದಾದ ಬಳಿಕ 3 ಅಥವಾ 4 ದಿನಗಳ ಕಾಲ ಅವಳು ಮೈಲಿಗೆಯಲ್ಲಿರುತ್ತಾಳೆ ನಂತರ ಪರಿಶುದ್ಧಳಾಗುತ್ತಾಳೆ ಎಂಬುದನ್ನು ಈ ಆಚರಣೆ ಪ್ರತಿಬಿಂಬಿಸುತ್ತದೆ. ಹೆಣ್ಣು ಋತುಮತಿಯಾಗುವುದು ಎಂದರೆ ಸೃಷ್ಠಿ ಕ್ರಿಯೆಗೆ ಅಣಿಯಾಗುವುದು ಎಂದಾದರೆ ಭೂಮಿ ಯಾವ ಸೃಷ್ಠಿ ಕ್ರಿಯೆಗೆ ಅಣಿಯಾಗುತ್ತಾಳೆ ಎಂಬುದು ಕೂಡಾ ಈ ಆಚರಣೆಯಿಂದ ತಿಳಿಯುತ್ತದೆ.ಶರದೃತುವಿನಲ್ಲಿ ಸಸ್ಯಶ್ಯಾಮಲೆಯಾಗಿ ಕಾಣುವ ಇಳೆ ನಂತರ ಮಾಸದಲ್ಲಿ ತನ್ನೆಲ್ಲಾ ಎಲೆಗಳನ್ನು ಉದುರಿಸಿ ಕೊಂಡು ಬೋಳು ಬೋಳಾಗಿ ಪ್ರಕೃತಿ ಕಾಣುತ್ತದೆ ನೋಡುವುದಕ್ಕೆ ಬಂಜೆಯಾಗುತ್ತಾಳೆ. ಮತ್ತೆ ವಸಂತ ಮಾಸ ಬಂದಾಗ ಹಸಿರು ಹಸಿರಾಗಿ ಭೂಮಿ ಸೊಂಪಾಗಿ ಕಾಣುತ್ತದೆ.ಅನೇಕ ಬದಲಾವಣೆಗಳು ಆಗುತ್ತವೆ.ಈ ವೈಜ್ಞಾನಿಕ ಬದಲಾವಣೆಗಳನ್ನು ತನಗೆ ಬದಲಾಯಿಸಲು ಆಗದೆ ,ವಿಚಿತ್ರವನ್ನು ಅರಿಯಲು ಸಾಧ್ಯವಾಗದೇ ಇದ್ದಾಗ ತನ್ನದೇ ಆದ ರೀತಿಯಲ್ಲಿ ಕಲ್ಪಸಿಕೊಂಡ ಮನುಷ್ಯ ಭೂಮಿಗೂ ಕಲ್ಪನೆಗಳನ್ನು ಮಾಡಿಕೊಂಡ. ಅದಕ್ಕನುಗುಣವಾಗಿ ಋತುಶಾಂತಿ ಇತ್ಯಾದಿಗಳು ನಡೆಯಬೇಕು ಎಂದು ಕಲ್ಪಸಿಕೊಂಡು ಇಂತಹ ಆಚರಣೆಗಳನ್ನು ಬೆಳೆಸಿಕೊಂಡು ಬಂದಿದೆ.




ಜನವರಿ - ಫೆಬ್ರವರಿ ತಿಂಗಳಲ್ಲಿ ಗಿಡಮರಗಳು ಎಲೆಗಳನು ಉದುರಿಸಿ ಬೋಳಾಗಿ ಕಾಣುತ್ತದೆ.ಇದು ಭೂಮಿ ತಾಯಿಯ ಮುಟ್ಟಿನ ದಿನ ಎಂದು ನಂಬಿದ ಜನ ಈ ಅವಧಿಯಲ್ಲಿ ಲೆಕ್ಕ ಹಾಕಿ ಸಂಕ್ರಮಣದ ಸಮೀಪದ 3 ಅಥವಾ 4 ದಿನಗಳ ಕಾಲ ಮುಟ್ಟಿನ ದಿನವೆಂದು ತುಳುವರು ಕರೆದರು. ಈ ಕಾಲವನ್ನು ಕೆಡ್ಡಾಸ ಎಂಬುದಾಗಿ ಕರೆದರು.ಈ ದಿನಗಳಲ್ಲಿ ಭೂಮಿ ಅದುರಬಾರದು, ಹಸಿ ಗಿಡಗಳನ್ನು ಕಡಿಯಬಾರದು ಒಣ ಮರಗಳನ್ನು ತುಂಡರಿಸಬಾರದು , ಬೇಟೆಗೆ ಹೋಗಬೇಕು. ಒಟ್ಟಿನಲ್ಲಿ ಭೂಮಿಯನ್ನು ಯಾವುದೇ ರೀತಿಯಿಂದ ಹಾನಿ ಮಾಡಬಾರದು ಎನ್ನವುದು ಇವರ ಸಾರಾಂಶ. ಕೆಡ್ಡಾಸದ ಒಂದನೇ ದಿನದಂದು ಮನೆ ಆವರಣಗಳನು ಸ್ವಚ್ಚಗೊಳಿಸಿ ಅಕ್ಕಿಯಿಂದ ಮಾಡಿದ ತಿಂಡಿಯನ್ನು ತಯಾರಿಸುತ್ತಾರೆ.ಇದಕ್ಕೆ 7 ಬಗೆಯ ಧಾನ್ಯವನ್ನು ಬೆರೆಸಲಾಗುತ್ತದೆ.ಈ ತಿಂಡಿಯನನು ನನ್ಯರಿ ಅಥವಾ ತಂಬಿಟ್ಟು ಎಂದು ಕೆರೆಯಲಾಗುತ್ತದೆ. ಏಕೆಂದರೆ ಹೆಣ್ಣು ರಜಸ್ವಲೆಯಾದಾಗ ಅವಳಗೆ ಪೌಷ್ಠಿಕಾಂಶವುಳ್ಳ ಆಹಾರ ಬೇಕು ಎನ್ನುವುದರ ಸಂಕೇತವಿದು.

ಕೆಡ್ಡಸದ 3 ಅಥವಾ 4ನೇ ದಿನ ಭೂಮಿ ತಾಯಿಯ ಆರಾಧನೆಗೆ ಮೀಸಲಿಟ್ಟ ಜಾಗದಲ್ಲಿ ಅಂದರೆ ತುಳಸಿ ಕಟ್ಟೆಯ ಬಳಿಯಲ್ಲಿ ವಿವಿಧ ಜಾತಿಯ ಮರಗಳ 7 ಎಲೆಗಳನ್ನು ಇರಿಸಿ ಭೂಮಿ ತಾಯಿ ಪರಿಶುದ್ದಳಾಗಲು ಅರಶಿನ , ಕುಂಕುಮ, ಹಾಲು,ಇತ್ಯಾದಿಗಳನ್ನು 5 ಅಥವಾ 7 ಮಂದಿ ಮುತ್ತೈದೆಯರು ಭೂಮಿಗೆ ಪ್ರೋಕ್ಷಣೆ ಮಾಡುತ್ತಾರೆ.ನಂತರ ನಮಸ್ಕರಿಸಿ ಎಲ್ಲರೂ ಒಟ್ಟಿಗೆ ಸೇರಿ ಊಟ ಉಪಹಾರಗಳನ್ನು ಮಾಡುತ್ತಾರೆ.

ಹೀಗೆ ಒಂದು ಸೃಷ್ಠಿ ಕ್ರಿಯೆಯ ಮೊದಲ ಭಾಗವನ್ನು ಭುವಿಯಲ್ಲೂ ಕಾಣುವ ಈ ಸಂಪ್ರದಾಯವು ಅತ್ಯಂತ ವಿಶಿಷ್ಠವಾಗಿ ಕಾಣುತ್ತದೆ.ತುಳು ನಾಡಿನ ಬಹುತೇಕ ಆಚರಣೆಗಳೆಲ್ಲವೂ ಕೃಷಿಯನ್ನು ಅವಲಂಬಿಸಿಕೊಂಡೇ ಇರುತ್ತದೆ.ಅಂದರೆ ಭೂಮಿ ವರ್ಷಕ್ಕೊಮ್ಮೆ ಋತುಮತಿಯಾದರೆ ಪ್ರಕೃತಿಗೆ ವರ್ಷಕ್ಕೊಮ್ಮೆ ಹಸಿರು ಜೀವ.

ಈಗ ಮತ್ತೆ ಪ್ರಕೃತಿ ಹಸಿರು ಹಸಿರಾಗಿ, ಮುಂಜಾನೆಯ ಮುಂಜಾವಿಗೆ ಮೈಯೊಡ್ಡಿ ನಿಂತಿದ್ದಾಳೆ .ಈ ಸೊಬಗ ಆಸ್ವಾದಿಸಲು , ಅದನ್ನು ಸ್ವಾಗತಿಸಲು ಮಂದಿಯೆಲ್ಲ ಕಾತರರಾಗಿದ್ದಾರೆ ಎನ್ನಬಹುದು. ಇನ್ನೊಂದೆಡ ಮುಂದಿನ ತಿಂಗಳು ರೈತನ ಬೆಳೆಗಳೆಲ್ಲಾ ಕಟಾವಿಗೆ ಸಿದ್ದವಾಗುತ್ತದೆ. ಮಾತ್ರವಲ್ಲ ವರ್ಷಪೂರ್ತಿ ಭೂಮಿಗೆ ನೋವು ಕೊಡುತ್ತಿದ್ದರೆ ಈ ೪ ದಿನಗಳ ಕಾಲ ಭೂಮಿಯನ್ನು ನೆನೆಯಲು ಈ ಆಚರಣೆ ಎನ್ನಬಹುದು. ರಾಜ್ಯದ ವಿವಿದೆಡೆ ಇಂತಹ ಆಚರಣೆಯಿದೆ.. ಇದೆಲ್ಲವೂ ಕೂಡಾ ಪ್ರಕೃತಿ ಮತ್ತು ಕೃಷಿಯನ್ನು ಅವಲಂಬಿಸಿಕೊಂಡಿದೆ ಎಂಬುದು ಗಮನಾರ್ಹ. ಆದರೆ ಇಂದು ಅಂತಹ ಶ್ರೇಷ್ಠವಾದ ಕೃಷಿಯ ಏನಾಗಿದೆ.? ರೈತರ ಸ್ಥಿತಿ ಏನಾಗಿದೆ.? ಬೇಸಾಯ ಇತ್ಯಾದಿಗಳ ಬದಲು ವಾಣಿಜ್ಯ ಬೆಳೆಗಳು ಬಂದಿದೆ.

ಇದರ ಜೊತೆ ಜೊತೆಗೇ ಈ ಬಾರಿ ಕೃಷಿ ಬಜೆಟ್ ಕೂಡಾ ಇದೆಯಂತೆ. ಹಾಗಾಗಿ ಈ ಬಾರಿ ಭುವಿಗೆ ಗರ್ಭಪಾತವಾಗುತ್ತೋ , ಗಂಡು ಮಗುವಾಗುತ್ತೋ , ಹೆಣ್ಣು ಮಗುವಾಗುತ್ತೋ ಅಥವಾ ಬಂಜೆಯಾಗುತ್ತೋ ನೋಡಬೇಕು.

04 ಫೆಬ್ರವರಿ 2011

ಪವರ್ ಫುಲ್ ಕರ್ನಾಟಕ

ಗ್ರಾಮೀಣ ಕರ್ನಾಟಕ ಈಗ “ಪವರ್” ಫುಲ್.. !, ಆದರೆ ಯಾರೊಬ್ಬರೂ ಈ ಬಗ್ಗೆ ಮಾತನಾಡುತ್ತಿಲ್ಲ. ಈ ಶಕ್ತಿ ಹೇಗೆ ಬಂತು ಅಂತ ಗ್ರಾಮೀಣ ಜನ ಮಾತನಾಡುತ್ತಿದ್ದಾರೆ. ಅಷ್ಟಕ್ಕೂ ಗ್ರಾಮೀಣ ಕರ್ನಾಟಕ ಹೇಗೆ ಪವರ್ ಫುಲ್ ಅಂತೀರಾ. ಇಲ್ಲಿ ಈಗ ನಿರಂತರ ಪವರ್ ಇದೆ. ಹಳ್ಳಿ ಜನರಿಗೆ ಖುಷಿ ಇದೆ.

ಗ್ರಾಮೀಣ ಕರ್ನಾಟಕದಲ್ಲಿ ಒಂದು ಕಾಲವಿತ್ತು. ಬೆಳಗ್ಗೆ ಹೋದ ಪವರ್ ಬರೋದೇ ಸಂಜೆ ಇನ್ನೆಷ್ಟೊತ್ತಿಗೋ. ಶಾಲಾ ಮಕ್ಕಳಿಗೆ , ಗೃಹಿಣಿಯರಿಗೆ ತಲೆನೋವೇ ತಲೆ ನೋವು.ಆದ್ರೆ ಹೇಳೋದು ಯಾರಲ್ಲಿ. ಒಂದಷ್ಟು ಪತ್ರಿಕೆಗಳಲ್ಲಿ ವರದಿಗಳೂ , ಇನ್ನೊಂದಿಷ್ಟು ಪ್ರತಿಭಟನೆಗಳು ನಡೆದರೆ ಮುಗೀತು.ಪವರ್ ಪ್ರೋಬ್ಲೆಮ್ ಮುಗೀಲೇ ಇಲ್ಲ. ಅದಕ್ಕಿಂತಲೂ ಹೆಚ್ಚು ಕೃಷಿಕರು ಪಡೋ ಸಂಕಷ್ಠ ಒಂದಲ್ಲ ಹಲವಾರು. ತೋಟಕ್ಕೆ ನೀರುಣಿಸಲು ರಾತ್ರಿ ಹಗಲು ಶ್ರಮ ಪಡಬೇಕು. ಪವರ್ ಬಂದರೂ ಪಂಪ್ ಚಾಲೂ ಆಗೋದಿಲ್ಲ.ಆದರೂ ವಿಧಿಯಿಲ್ಲ ಕಾದು ಕುಳಿತಾದರೂ ಚಾಲೂ ಮಾಡಲೇ ಬೇಕು.ಅಲ್ಲೂ ಕಾಂಪಿಟೀಶನ್ ಇರ್‍ತಿತ್ತು. ಪವರ್ ಬಂದಾಗಲೇ ಪಂಪ್ ಚಾಲೂ ಆದರೆ ಮುಗೀತು . ಇಲ್ಲಾಂದ್ರೆ ವೋಲ್ಟೇಜ್ ಪ್ರಾಬ್ಲಂನಿಂದಾಗಿ ಚಾಲೂ ಆಗೋದಿಲ್ಲ. ತುಂಬಾ ವೋಲ್ಟೇಜ್ ಕಡಿಮೆ ಆದ್ರೆ ಲೈನ್ ಟ್ರಿಪ್ ಆಗುತ್ತೆ. ಮತ್ತೆ ಐದೋ ಹತ್ತೋ ನಿಮಿಷ ಕಳೆದು ಪವರ್ ಬರೋದು. ಆಗಲೂ ಇದೇ ಸಮಸ್ಯೆ. ಹೀಗೆ ಒಂದೇ ಎರಡೇ ಹತ್ತಾರು ಸಮಸ್ಯೆ ಗ್ರಾಮೀಣ ಕರ್ನಾಟಕದಲ್ಲಿ.

ಆದರೆ ಈ ಬಾರಿ ಸ್ವಲ್ಪ ಸುಧಾರಿಸಿದಂತೆ ಕಾಣುತ್ತೆ. ಯಾಕೆಂದರೆ ಅಂದೆಲ್ಲಾ ನವೆಂಬರ್ ಅಂತ್ಯ , ಡಿಸೆಂಬರ್‌ನಲ್ಲಿಯೇ ಪವರ್ ಕಟ್ ಶುರುವಾಗುತ್ತಿತ್ತು. ಹೀಗಾಗಿ ಮಾರ್ಚ್ ವೇಳೆಗೆ ಪರಿಸ್ಥಿತಿ ತೀರಾ ಕಠಿಣವಾಗುತ್ತಿತ್ತು.ಆದರೆ ಈ ಬಾರಿ ಹಾಗೆ ಕಾಣುತ್ತಿಲ್ಲ. ಫೆಬ್ರವರಿ ಆರಂಭವಾದರೂ ದಿನ ಪೂರ್ತಿ ಪವರ್ ಇದೆ. ಅದರಲ್ಲಿ 12 ಗಂಟೆ ಕೃಷಿಕರಿಗಾಗಿ ತ್ರೀ ಫೇಸ್ ಇದೆ. ಉಳಿದಂತೆ 12 ಗಂಟೆ ಮನೆ ಬಳಕೆಗೆ ಪವರ್ ಇದೆ. ಹೀಗಾಗಿ ನಿರಂತರ 24 ಗಂಟೆ ಮನೆಗೆ ಪವರ್ ಇದ್ದೇ ಇದೆ. ಆದರೆ ಇದು ಎಷ್ಟು ದಿನ ಅಂತ ಗೊತ್ತಿಲ್ಲ. ಒಂದಂತೂ ಸತ್ಯ ಇಷ್ಟು ದಿನ ಪವರ್ ನೀಡಿದ್ದಾರಲ್ಲಾ ಮುಂದಿನ ಬಾರಿ ಇನ್ನೂ ಸರಿಯಾಗಬಹುದು ಅನ್ನೋ ಆಶಾವಾದ ಗ್ರಾಮೀಣರಲ್ಲಿದೆ.ಅಂತೂ ಯಾವುದೇ ತೊಂದರೆ ಇಲ್ಲದೆ ಈಗ , ಇದುವರೆಗೆ ಪವರ್ ನೀಡಿದ್ದಾರಲ್ಲಾ ಅಂತ ಕೃಷಿಕರೆಲ್ಲಾ ಈಗ ನೆನಪಿಸಿಕೊಳ್ಳುತ್ತಾರೆ. ಅದರಲ್ಲೂ ಉಚಿತ ವಿದ್ಯುತ್ ಕೂಡಾ ಕೊಟ್ಟಿದ್ದಾರಲ್ಲಾ ಅದು ಇನ್ನಷ್ಡು ಖುಷಿ. ಆವತ್ತು ಮಾತನಾಡಿಕೊಳ್ಳುತ್ತಿದ್ದರು , ಹೇಗೂ ಫ್ರೀ ಕರೆಂಟ್ ಅಲ್ವಾ ಬರುವ ವರ್ಷದಿಂದ ಪವರೇ ಇರಲಿಕ್ಕಿಲ್ಲ ಅಂತ ಮಾತನಾಡಿಕೊಳ್ಳುತ್ತಿದ್ದರು. ಆದರೆ ಈಗ ಆ ನಿಲುವಿನಿಂದ ಬದಲಾಗಿದ್ದಾರೆ ಗ್ರಾಮೀಣ ಜನ. ಹೀಗೇ ಮುಂದುವರಿಯಲಿ ಅನ್ನೋದೇ ಕೃಷಿಕರ ಒತ್ತಾಸೆ.

02 ಫೆಬ್ರವರಿ 2011

ಕಾಡುವ ಜಾತ್ರೆ. . !

ಕನ್ನಡ ಹಬ್ಬ ಈಗ ಆರಂಭವಾಗತೊಡಗಿದೆ.ಪ್ರತೀ ತಾಲೂಕುಗಳಲ್ಲೂ ಕನ್ನಡದ ಜಾತ್ರೆ ನಡೆದಿದೆ , ನಡೆಯುತ್ತಿದೆ. ಈಗ ನಾಡಿನ ದೊಡ್ಡ ಹಬ್ಬಕ್ಕೆ ಸಿದ್ದತೆ ನಡೆಯುತ್ತಲೇ ಇದೆ. ಪ್ರತೀ ಬಾರಿಯಂತೆ ಈ ಬಾರಿಯೂ ಕನ್ನಡದ ಜಾತ್ರೆಯ ವೇಳೆಗೆ ಏನಾದರೊಂದು ಅವಸ್ವರ ಇದ್ದೇ ಇರುತ್ತದೆ ಎಂದು ಮೊನ್ನೆ ನಾವು ಮಾತನಾಡುತ್ತಿದ್ದೆವು. ಇದುವರೆಗಿನ ಒಂದೇ ಒಂದು ಕನ್ನಡ ಜಾತ್ರೆಯಲ್ಲಿ ನೆಗೆಟಿವ್ ಅಂಶಗಳು ಹೆಚ್ಚು ಹೈಲೈಟ್ ಆಗದೇ ಇದ್ದದ್ದು ಇದೆಯಾ?. ಬಹುಶ: ಇಲ್ಲ. ಇದ್ಯಾಕೆ ಹೀಗೆ?. ಯಾಕೆ ಅದೇ ಅಂಶಗಳು ಹೆಚ್ಚು ಫೋಕಸ್ ಆಗುತ್ತೆ?. ಬಹುಶ: ನಮ್ಮ ಮನಸ್ಥಿತಿಯೇ ಇದಕ್ಕೆ ಕಾರಣ ಅನ್ನೋ ದಾರಿಯ ಕಡೆಗೆ ಕೊನೆಗೆ ಹೆಜ್ಜೆ ಹಾಕಿದೆವು.

ತಾಲೂಕು ಮಟ್ಟದ ಕನ್ನಡ ಜಾತ್ರೆಯಲ್ಲೂ ಇದೇ ಕಾಣುತ್ತದೆ. ಇಲ್ಲೂ ವರ್ಗ , ಜಾತಿ , ಅಂತಸ್ತು, ವೈಯಕ್ತಿಕ ವರ್ಚಸ್ಸು ಇದೆಲ್ಲಾ ಪರಿಗಣನೆಯಾಗುವುದರ ಜೊತೆಗೆ ಗ್ರೂಪಿಸಂ ಕೂಡಾ ಇದೆ. ಇಲ್ಲೇ ಇಷ್ಟು ಗುಂಪುಗಾರಿಕೆ ನಡೀತಿರಬೇಕಾದರೆ ರಾಜ್ಯಮಟ್ಟದಲ್ಲಿ ಇದೆಲ್ಲಾ ಇಲ್ಲದೇ ಇರೋದಿಕ್ಕಾಗುತ್ತಾ ಅಂತ ನಮ್ಮಲ್ಲೇ ಇನ್ನೊಂದು ಪ್ರಶ್ನೆ ಎದ್ದಿತು.ಅದೂ ಹೌದು ಬಿಡಿ. ಅದಲ್ಲಾ ಇರಲಿ ಇನ್ನೂ ಇದೆ , ಅಲ್ಲಿ ಊಟ ಸರಿ ಇಲ್ಲ , ಮಲಕ್ಕೊಳ್ಳೋಕೆ ಹಾಸಿಗೆ ಇಲ್ಲ , ಇಂತಹದ್ದೆಲ್ಲಾ ಚಿಕ್ಕ ಚಿಕ್ಕ ವಿಷಯಗಳೂ ಕೆಲವೊಮ್ಮೆ ಫೋಕಸ್ ಆಗುವುದೂ ಇದೆ.ಅದೇ ವೇಳೆ ಅಲ್ಲೇ ಆ ಕಡೆಗಿನ ವೇದಿಕೆಯಲ್ಲಿ ಒಂದೊಳ್ಳೆ ವಿಚಾರ ಇರುತ್ತೆ ಅದಕ್ಕೆ ಬೆಳಕೇ ಬರೋದಿಲ್ಲ. ಒಂದರ್ಥದಲ್ಲಿ ನಮಗೆ ಅದೇ ವಿಚಾರಗಳು ಇಷ್ಟವಾಗುತ್ತೆ.ಅದಕ್ಕಾಗೇ ಅಲ್ಲವೇ ನಮ್ಮಲ್ಲಿ ಬರೋ ಕನ್ನಡ ಧಾರವಾಹಿಗಳ ಪೈಕಿ ಹುಳುಕು , ಹಲ್ಲೆ ,ಮನೆಯೊಳಗಿನ ಕದನ ಇಷ್ಟವಾಗೋದು. ಅಂದರೆ ನಮ್ಮ ಮನಸ್ಥಿತಿ ಅಲ್ಲಿನ ನೆಗೆಟಿವ್ ಅಂಶಗಳತ್ತಲೇ ಸೆಳೆದುಕೊಳ್ಳುತ್ತೆ.ಹಾಗಾಗೇ ಕನ್ನಡ ಜಾತ್ರೆಗಳ ನೆಗೆಟಿವ್ ಅಂಶಗಳೇ ಹೆಚ್ಚು ಪ್ರತಿಫಲನವಾಗುತ್ತೆ.

ಆದರೆ ಇದು ನಮ್ಮಲ್ಲಿ ಮಾತ್ರಾ. ಅದೇ ಪಕ್ಕದ ಕೇರಳದಲ್ಲಿ ಹಾಗಿಲ್ಲ.ಅಲ್ಲಿನ ಜನ ಇಂತಹ ಸಾಂಸ್ಕೃತಿಕ ಉತ್ಸವಗಳು, ಕಲಾಪ್ರಾಕಾರಗಳು, ಸಾಹಿತ್ಯ ವಿವಾರಗಳಲ್ಲಿ ಗುಂಪುಗಾರಿಕೆ ಮಾಡೋಲ್ಲ.ಆತ ಯಾರೇ ಇರಲಿ ರಾಜಕೀಯ ರಹಿತವಾಗಿ ಎಲ್ಲರೂ ದುಡಿಯುತ್ತಾರೆ. ಹೇಗೆ ಬೇಕೋ ಹಾಗೆ ಆ ಕಾರ್ಯಕ್ರಮವನ್ನು ನಡೆಸಿಕೊಂಡು ಹೋಗುತ್ತಾರೆ. ಅದು ಮಾತ್ರಾ ಅಲ್ಲ, ನೋಡಿ ನಮ್ಮಲ್ಲಿ ಎಷ್ಟು ಗಡಿ ಸಮಸ್ಯೆಗಳು ಅತ್ತ ಬೆಳಗಾವಿ , ಇತ್ತ ಕಾಸರಗೋಡು , ಅಲ್ಲಿ ಕಾವೇರಿ ಇಲ್ಲಿ ಕೃಷ್ಣಾ . . . ಹೀಗೇ ಒಂದೇ ದೇಶ , ಹಲವು ರಾಜ್ಯ ನೂರಾರು ಸಮಸ್ಯೆ. ಅದಕ್ಕಾಗಿ ಹೀಗೇ ಭಾಷಾವಾರು ಪ್ರಾಂತ ಮಾಡುವ ಬದಲು ಇಡೀ ದೇಶ ೪ ಭಾಗಗಳಾಗಿ ಆಡಳಿತ ನಡೆಸಿದ್ದರೆ ಚೆನ್ನಾಗಿತ್ತು.ಯಾವುದೇ ಭಾಷೆ , ರಾಜ್ಯಕ್ಕಾಗಿ ಜಗಳವೇ ಇರುತ್ತಿರಲಿಲ್ಲ. ಹಾಗೊಂದು ಅಂಬೋಣ ಬಿಡಿ.

ಅಷ್ಟಕ್ಕೂ ಈ ಬಾರಿಯ ಸಾಹಿತ್ಯ ಜಾತ್ರೆಯಲ್ಲಿ ಏನೇನೆಲ್ಲಾ ಅಸಮಾಧನಗಳು ಹೊರಬರುತ್ತೋ , ಯಾವ್ಯಾವ ಚಾನೆಲ್ಲಿನವರು , ಯಾವ್ಯಾವ ಪೇಪರಿನವರು ಹೇಗೆ ಕವರೇಜ್ ಮಾಡುತ್ತಾರೋ , ಯಾರ್‍ಯಾರು ಬಂಡಾಯ ಏಳೂತ್ತಾರೋ , ಯಾರ್‍ಯಾರ ಅಪಸ್ವರಕ್ಕೆ ಬೆಲೆ ಬರುತ್ತೋ ನೋಡಬೇಕು. ಅಷ್ಟಕ್ಕೂ ಈ ಅಪಸ್ವರ ತೆಗೆಯೋದು ಪ್ರಚಾರಕ್ಕಾಗಿಯೋ ಏನೋ?. ಅದನ್ನು ಪ್ರಚಾರ ಮಾಡೋವವರು ನೋಡಿಕೊಳ್ಳಬೇಕು.

ಯಾಕಂದ್ರೆ ಇತ್ತೀಚೆಗೆ ಮೂಡಬಿದ್ರೆಯ ಸಾಹಿತ್ಯ ಜಾತ್ರೆಯಲ್ಲಿ ಅಂತಹದ್ದೇ ಒಂದು ಇಶ್ಯೂ ಮಾಡಲು ಪ್ರಯತ್ನ ಪಟ್ಟಿದ್ದರು. ಯಾರು ಗೊತ್ತಾ?. ಪ್ರಚಾರ ಮಾಡುವವರೇ..!, ಕಾರಣ ಗೊತ್ತಾ? ಮೂರು ದಿನ ಸುಮ್ಮನೆ ಕುಳಿತುಕೊಳ್ಳಬೇಕಲ್ಲ ಅಂತ, ಮತ್ತೆ ನಾಲ್ಕು ದಿನಕ್ಕೆ ಇದೇ ಇಶ್ಯೂ ಆಗುತ್ತಲ್ಲಾ ಅಂತ . ! ಅನ್ನೋದು ಹಲವರ ಅಭಿಮತ. ಕನ್ನಡಕ್ಕಾಗಿ ಒಂದೇ ಒಂದು ರೀತಿಯಲ್ಲೂ ದುಡಿಯದ ಜನ ಕನ್ನಡಕ್ಕಾಗಿ ದುಡಿಯುವ ಜನರ ಬಗ್ಗೆ ಯಾಕೆ ಹಾಗೆ ಮಾಡುತ್ತಾರೆ ಗೊತ್ತಿಲ್ಲ. ಹುಳುಕುಗಳು ಇರಬಹುದು ಇಲ್ಲಾ ಅಂತಲ್ಲ , ಆದರೆ ಹಾಗೆ ದುಡಿಯುವುದು ಕೂಡಾ ದೊಡ್ಡ ಕೆಲಸವೇ.

ಈ ಬಾರಿ ಒಳ್ಳೆಯದನ್ನೇ ಕೇಳೋಣ , ಒಳ್ಳೆಯದನ್ನೇ ಓದೋಣ. ಸಾಹಿತ್ಯಕ್ಕಾಗಿ , ಕನ್ನಡಕ್ಕಾಗಿ ಈ ಅಕ್ಷರಕ್ಕಾಗಿ.