15 ನವೆಂಬರ್ 2011

ಆತನೂ ಅನಿವಾರ್ಯ. . .

ನನಗೆ ಅನೇಕ ಬಾರಿ ಅನಿಸಿದ್ದಿದೆ,

ಈ ವಿಶಾಲವಾದ ಜಗತ್ತಿನಲ್ಲಿ ನಾವೆಲ್ಲಾ ಎಷ್ಟು ಸಣ್ಣವರು.ಆದರೂ ಎಂತಹ ಅಹಂಕಾರ ನಮಗೆ.ಒಂದು ಕ್ಷಣವೂ ಪೂರ್ವಾಗ್ರಹವಿಲ್ಲದ ಮನಸ್ಸಿನಿಂದ ನಾವು ಯೋಚಿಸಿದ್ದೇ ಇಲ್ಲ.ಏನೇ ಮಾತನಾಡಲಿ , ಯಾರೇ ಮಾತನಾಡಲಿ ಅದರಲ್ಲೊಂದು ಕುಹಕ, ಆ ಸಂಗತಿಯನ್ನು ಪೂರ್ಣ ಮನಸ್ಸಿನಿಂದ ಮೌನವಾಗಿ ಆಲಿಸಿ ಆ ಬಳಿಕ ಪ್ರತಿಕ್ರಿಯಿಸಲು ಹೋಗುವುದೇ ಇಲ್ಲ , ಅದಕ್ಕೂ ಮುನ್ನ ನಮ್ಮದೇ ಆದ ತೀರ್ಮಾನ ಮಾಡಿಯೇ ಬಿಡುತ್ತೇವೆ.ಹೀಗಾಗಿ ಅನೇಕ ಸಂಗತಿಗಳು ನಮಗೆ ಅರಿವೇ ಆಗುವುದಿಲ್ಲ. ನನಗೂ ಅನೇಕ ಬಾರಿ ಇಂತಹದ್ದೇ ಅನೇಕ ಸಂಗತಿಗಳು ಆಗಿವೆ. ಇದರಿಂದಾಗಿ ನನಗೇ ಮಾಹಿತಿಯ ಕೊರತೆ ಆದದ್ದಿದೆ.ಇದಕ್ಕೆ ಮೌನವಾಗಿ ಕೇಳದೇ ಇದ್ದದ್ದು ಕೂಡಾ ಕಾರಣ.ಮೌನವಾಗಿ ಯಾರು ಕೇಳುತ್ತಾರೆ ಅವರಿಗೆ ಹೆಚ್ಚು ಹೆಚ್ಚು ಮಾಹಿತಿಗಳು ಸಿಗುತ್ತವೆ ಅಂದುಕೊಳ್ಳುತ್ತೇನೆ. ಆ ಬಳಿಕವೇ ಮಾತನಾಡಬೇಕು ಎನ್ನವುದನ್ನು ನಾನು ಈಗೀಗ ಅರ್ಥ ಮಾಡಿಕೊಳ್ಳುತ್ತಿದ್ದೇನೆ.

ಅದರ ಜೊತೆಗೆ ಅನೇಕರಿಗೆ ಅವರ ಉದ್ಯೋಗದಲ್ಲಿ ಕೀಳರಿಮೆ.ಮೊನ್ನೆ ಒಂದು ಘಟನೆ ನಡೆಯಿತು. ನನ್ನ ವಾಹದ ಟಯರ್ ಪಂಕ್ಚರ್ ಆಯಿತು.ಅಂದು ಭಾನುವಾರ ಬೇರೆ.ನನಗಂತೂ ಅದು ತೀರಾ ಅಗತ್ಯ, ಅನಿವಾರ್ಯ ಕೂಡಾ. ನನ್ನ ಪರಿಚಯದವರಿಗೆ ಫೋನು ಮಾಡಿ ವಿಚಾರಿಸಿದಾಗ ಇಂದು ಯಾರೊಬ್ಬರೂ ಇಲ್ಲ ಎಂದರು.ಕೊನೆಗೆ ಸ್ವಲ್ಪ ದೂರದಲ್ಲಿ ಒಬ್ಬರು ಇದ್ದಾರೆ ಅವರ ಮನೆ ಅಲ್ಲೇ ಎಂದು ಹೇಳಿದ ಕಾರಣ ಆ ಜಾಗಕ್ಕೆ ಬೇರೆ ವಾಹನದಲ್ಲಿ ಹೋದೆ. ಆ ಗ್ಯಾರೇಜ್ ಮಾಲಕ ಅಂತೂ ಕೆಲಸ ಮಾಡಿಕೊಟ್ಟ. ಆ ಬಳಿಕ ಆತ ಹೇಳಿದ, ತನ್ನ ಸಂಕಷ್ಟ ಹೇಳಿಕೊಳ್ಳುತ್ತಾ, ನಮ್ಮ ಕೆಲಸ ಇದೇ ಅಲ್ಲವಾ , ಯಾರ‍್ಯಾರದ್ದಾರೂ ಕಾರು ಟಯರ್ ಬಿಚ್ಚಿ ಕೂಡಿಸುವುದಲ್ವಾ ? ಅಂತ ಹೇಳಿದ.
ಇದರಲ್ಲಿ ಆತನ ಒಳಗಿದ್ದ ಕೀಳರಿಮೆ ಅರಿವಾಯಿತು.

ನನಗನ್ನಿಸಿದ್ದು ಈ ಕೀಳರಿಮೆ ಏಕೆ ಅಂತ?. ಆತನ ಉದ್ಯೋಗ ಯಾವುದೇ ಇರಲಿ , ಆತ ಅನಿವಾರ್ಯವೇ. ಒಬ್ಬ ಟಯರ್ ಪಂಕ್ಚರ್ ಹಾಕುವವನು ಇಲ್ಲಿ ಇಲ್ಲ ಅಂತಾಗಿದ್ರೆ ಎಷ್ಟು ವಾಹನಗಳು ರಸ್ತೆಯಲ್ಲೇ ಉಳಿದುಕೊಳ್ಳುತ್ತಿತ್ತು?. ಒಬ್ಬ ಮೆಕ್ಯ್ಯಾನಿಕ್ ಇಲ್ಲಾ ಅಂದ್ರೆ ಎಷ್ಟು ಕಷ್ಟ ?. ಹೀಗೇ ಎಲ್ಲಾ ಕೆಲಸದವರೂ ಇಲ್ಲಿ ಅನಿವಾರ್ಯವೇ . ಹಾಗಾಗಿ ಅವನ ಆತ್ಮಗೌರವ ಇದ್ದೇ ಇರುತ್ತದೆ. ಆದರೆ ಅಲ್ಲಿ ಇರಬೇಕಾದದ್ದು ಪ್ರಾಮಾಣಿಕತೆ ಮಾತ್ರಾ ಅಲ್ಲವೇ?. ಹಾಗಾಗಿ ನನಗನ್ನಿಸುವುದು ಇಲ್ಲಿ ವೃತ್ತಿಗಿಂತ ಪ್ರೀತಿ ಮುಖ್ಯ ಅಂತ. ಈ ಜಗತ್ತಿನಲ್ಲಿ ಒಬ್ಬನಿಂಗ ಮತ್ತೊಬ್ಬ ಪ್ರತಿಭಾವಂತ ಇದ್ದೇ ಇರುತ್ತಾನೆ.ಹಾಗಾಗಿ ಈ ಜಗತ್ತಿನಲ್ಲಿ ನಾವೇ ಸರ್ವಶ್ರೇಷ್ಠ ಅಂತ ಅಂದುಕೊಳ್ಳುವುದಾದರೂ ಹೇಗೆ ?. ಎಷ್ಟೇ ಶ್ರೀಮಂತನಾಗಿರಲಿ ಆ ಕ್ಷಣದಲ್ಲಿ ಕಾರು ರಿಪೇರಿ ಮಾಡುವ ಮೆಕ್ಯಾನಿಕ್ ಇಲ್ಲಾಂದ್ರೆ ರಸ್ತೆಯಲ್ಲೇ ನಿಲ್ಲಬೇಕಲ್ಲಾ . . !.

ಕಾಮೆಂಟ್‌ಗಳಿಲ್ಲ: