17 ಮಾರ್ಚ್ 2018

ಕೃಷಿಕರೇ ಕಂಡುಹಿಡಿಯಬೇಕಾದ "ಇ" ಕೃಷಿ ಮಾರುಕಟ್ಟೆ ವ್ಯವಸ್ಥೆ







ಕಳೆದ ಕೆಲವು ದಿನಗಳ ಹಿಂದೆ ಕಾಳುಮೆಣಸು ದರ ಇಳಿಕೆಯ ಹಾದಿಯಲ್ಲಿತ್ತು. ಹಾಗಿದ್ದರೂ ಕೃಷಿಕ ಶಂಕರ ಭಟ್ ಈ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಜೊತೆಗೆ ಮಾತನಾಡುತ್ತಾ, "ಇಂದಿಗೂ ನಾನು ಕಾಳುಮೆಣಸನ್ನು ಕನಿಷ್ಠ 800 ರೂಪಾಯಿಗೆ ಮಾರಾಟ ಮಾಡುತ್ತಿದ್ದೇನೆ" ಎನ್ನುತ್ತಿದ್ದರು. ಅದು ಹೇಗೆ ಎಂದು ಕೇಳಿದಾಗ ಅವರು ಹೇಳಿದ್ದು "ಆನ್‍ಲೈನ್" ಮಾರುಕಟ್ಟೆ, ಇ ಮಾರುಕಟ್ಟೆಯ ಹೆಸರು. ಹಾಗಿದ್ದರೆ, ಕೃಷಿಕರಿಗೂ ಆನ್‍ಲೈನ್ ಮೂಲಕ ತಾವೇ ಬೆಳೆಯುವ ಕೃಷಿ ವಸ್ತುಗಳ ಮಾರಾಟ ಸಾಧ್ಯವೇ ಎಂಬ ಪ್ರಶ್ನೆ ಬಂದಾಗ, ಬಹುತೇಕ ಕೃಷಿಕರ ಮಕ್ಕಳು ಇರುವುದು ನಗರದಲ್ಲಿ. ಹಾಗಿದ್ದರೆ ಏಕೆ ಕಷ್ಟ ಎಂಬ ಮರುಪ್ರಶ್ನೆ...!.

ಭಾರತ ಕೃಷಿ ದೇಶ, ಭಾರತದ ಆರ್ಥಿಕ ವ್ಯವಸ್ಥೆ ನಿಂತಿರುವುದೇ ಕೃಷಿ ಮೇಲೆಯೇ. ಹೀಗಿರುವಾಗ ಕೃಷಿಯ ಲೆಕ್ಕಾಚಾರ , ಕೃಷಿ ಉತ್ಪಾದನೆಯ ವ್ಯವಹಾರ, ಕೃಷಿ ಮಾರುಕಟ್ಟೆಯನ್ನು ಲೆಕ್ಕ ಹಾಕುವುದು ಅನಿವಾರ್ಯವಾಗಿದೆ. ಇದಕ್ಕಾಗಿಯೇ ಇಂದು ವಿಶೇಷ ಕೋರ್ಸ್‍ಗಳೂ ಆರಂಭವಾಗುತ್ತಿದೆ. ಕೃಷಿಗೆ ಬೇಕಾದ ಎಲ್ಲಾ ಸವಲತ್ತು, ಬೆಂಬಲ ಬೆಲೆ, ಸಬ್ಸೀಡಿ ಎಲ್ಲವೂ ಸಿಗುತ್ತಿದ್ದರೂ ಮತ್ತೆ ಮತ್ತೆ ಚರ್ಚೆಯಾಗುವುದು ಕೃಷಿ ಮಾರುಕಟ್ಟೆ ವ್ಯವಸ್ಥೆ. ಕೃಷಿಕ ತಾನೇ ಬೆಳೆದ ಟೊಮೊಟೋ ರಸ್ತೆ ಬದಿ ಚೆಲ್ಲಿದಾಗ ದೂರದ ಎಲ್ಲೋ ಇರುವ ಕೃಷಿಕನಿಗೂ ನೋವಾಗುತ್ತದೆ. ಎಲ್ಲೋ ಜೋಳದ ಬೆಲೆ ಕುಸಿತವಾದಾಗ ಇನ್ನೆಲ್ಲೋ ಇರುವ ಕೃಷಿಕನಿಗೂ ಬೇಸರವಾಗುತ್ತದೆ. ಒಂದು ಕಡೆ ರೈತ ಟೊಮೊಟೋ ರಸ್ತೆ ಬದಿ ಎಸೆದರೆ ಇನ್ನೊಂದು ಕಡೆ ಟೊಮೊಟೋಗೆ 15 ರೂಪಾಯಿ ಕೊಟ್ಟು ಖರೀದಿ ಮಾಡುವ ಸ್ಥಿತಿ ಇರುತ್ತದೆ. ಹೀಗಿರುವಾಗಲೂ ರೈತ ಟೊಮೊಟೋ ಏಕೆ ರಸ್ತೆ ಬದಿ ಚೆಲ್ಲುತ್ತಾನೆ ಎಂಬ ಪ್ರಶ್ನೆಗೆ ಉತ್ತರ "ಮಾರುಕಟ್ಟೆ ವ್ಯವಸ್ಥೆ". ಹೀಗಾಗಿ ಕೃಷಿ ಮಾರುಕಟ್ಟೆಯ ವ್ಯವಸ್ಥೆ ಸುಧಾರಣೆ ಹೇಗೆ ಎಂಬ ಬಗ್ಗೆ ಮತ್ತೆ ಮತ್ತೆ ಚರ್ಚೆಯಾಗುತ್ತದೆ. ಈಗ ಕೃಷಿ ಆರ್ಥಿಕತೆ ಬಗ್ಗೆ ಸಾಕಷ್ಟು ಅಧ್ಯಯನವಾಗಬೇಕು. ಈ ಮೊದಲು ನಡೆಸಿದ ಸಮೀಕ್ಷೆ ಹಾಗೂ ಕೃಷಿ ಕ್ಷೇತ್ರದಲ್ಲಿ ಆರ್ಥಿಕತೆಯ ನಿರ್ವಹಣೆಯ ಸಿದ್ಧಾಂತಗಳ ಅಳವಡಿಕೆಯನ್ನು ಅಧ್ಯಯನ ಮಾಡಿದಾಗ ಭವಿಷ್ಯದಲ್ಲಿ ಇ- ಬಿಸಿನೆಸ್ ಅಥವಾ ಇ ಕೃಷಿ ಮಾರುಕಟ್ಟೆ ಎನ್ನುವ ಪರಿಕಲ್ಪನೆಗೆ ಹೆಚ್ಚು ಅವಕಾಶ ತೆರೆದುಕೊಂಡಿದೆ.
ಭಾರತದ ಆರ್ಥಿಕ ತಜ್ಞರು ಕೃಷಿ ಕಡೆಗೆ ಹೆಚ್ಚಿನ ಗಮಹರಿಸುತ್ತಿದ್ದಾರೆ. ಕೃಷಿ ಮಾರುಕಟ್ಟೆಗಾಗಿಯೇ ವಿಶೇಷ ಕೋರ್ಸ್ ರಚನೆಯಾದರೆ ಅದರಲ್ಲಿ ಏನೇನು ಇರಬೇಕು ಎಂಬ ಬಗ್ಗೆಯೂ ಚರ್ಚೆಯಾಗಿದೆ. ಆಹಾರದ ಉತ್ಪಾದನೆ, ಸರಬರಾಜು ಮತ್ತು ಬಳಕೆಯ ಬಗ್ಗೆ, ಕೃಷಿ ಸರಕುಗಳು ಮತ್ತು ಸೇವೆಗಳ ಬಗ್ಗೆ ವಿಶೇಷ ತರಬೇತಿ ಅಗತ್ಯವಾಗುತ್ತದೆ. ಹಾಗೂ ಅಂಗಡಿ ಮಾಲಕರು ಯಾವ ರೀತಿಯ ಆಹಾರವನ್ನು ಖರೀದಿ ಮಾಡುತ್ತಾರೆ. ಪ್ರಸಕ್ತ ಜನರ ಆಹಾರ ಪದ್ಧತಿಯಲ್ಲಾದ ಬದಲಾವಣೆ, ಡಯೆಟ್, ಮಾರುಕಟ್ಟೆ ಅವಶ್ಯಕತೆಗಿಂತ ಹೆಚ್ಚುವರಿ ಬೆಳೆ ಬೆಳೆಯಲಾಗುತ್ತದೆಯೇ ಇತ್ಯಾದಿ ವಿವರಗಳನ್ನು ಅಧ್ಯಯನ ಬೇಕಾಗುತ್ತದೆ ಎಂಬ ಸಲಹೆ ಬಂದಿದೆ. ಈ ಟ್ರೆಂಡ್ ಈಗಾಗಲೇ ಶುರುವಾಗುತ್ತಿದ್ದು ಪೇಸ್‍ಬುಕ್‍ನಂತಹ ಜಾಲತಾಣಗಳಲ್ಲಿ ಕೃಷಿಕರು ತಾವೇ ಬೆಳೆದ ವಸ್ತುಗಳನ್ನು  ಮಾರಾಟ ಮಾಡುತ್ತಿದ್ದಾರೆ, ಈ ಬಗ್ಗೆ ಆಸಕ್ತ ವಿದ್ಯಾರ್ಥಿಗಳು ಅಧ್ಯಯನ ಆರಂಭಿಸಿದ್ದಾರೆ. ಕೃಷಿ ಗ್ರೂಪುಗಳಲ್ಲಿ 2.5 ಲಕ್ಷಕ್ಕೂ ಅಧಿಕ ಮಂದಿ ಇದ್ದರೆ ಅದರಲ್ಲಿ ಶೇ.50 ಕ್ಕಿಂತ ಹೆಚ್ಚು ಕೃಷಿಕರು ಇರುವುದು  ಕೃಷಿಕರೂ ಸಾಮಾಜಿಕ ತಾಲತಾಣಗಳ ಬಳಕೆಯ ಅಭ್ಯಾಸವನ್ನು ಕೃಷಿಗೆ ಸಹಕಾರಿಯಾಗುವಂತೆ ಮಾಡಬಹುದಾಗಿದೆ.
ಪುತ್ತೂರು ಕಬಕ ಬಳಿಯ ಕೃಷಿಕ ಶಂಕರ ಭಟ್ ವಡ್ಯ ಇ ಮಾರುಕಟ್ಟೆಯಲ್ಲಿ ತಕ್ಕಮಟ್ಟಿಗೆ ಯಶಸ್ಸು ಕಂಡಿದ್ದಾರೆ. ರಾಜ್ಯದ ವಿವಿದೆಡೆ ಕೃಷಿಕರು, ಯುವಕೃಷಿಕರು ಈ ತಂತ್ರವನ್ನು ಬಳಕೆ ಮಾಡುತ್ತಿದ್ದಾರೆ. ಶಂಕರ ಭಟ್ ಅವರು ಕೆಲ ವರ್ಷದ ಹಿಂದೆ ಬಾಳೆ ಬೆಳೆದಾಗ ಧಾರಣೆ ಕುಸಿತ ಕಂಡಿತು. 1 ಕೆಜಿ ಬಾಳೆಗೆ 8 ರೂಪಾಯಿಗೆ ಮಾರಾಟ ಮಾಡಬೇಕಾದ ಸಂದರ್ಭ ಬಂತು. ಹಾಗೆಂದು ಮಾರುಕಟ್ಟೆ ಧಾರಣೆ ಗಮನಿಸಿದರೆ 20 ರೂಪಾಯಿ ಇತ್ತು. ಈ ವ್ಯತ್ಯಾಸ ಗಮನಿಸಿದ ಶಂಕರ್ ಭಟ್ ತಾವೇ ಬೆಳೆದ ಬಾಳೆಯನ್ನು ಮೌಲ್ಯವರ್ಧನೆ ಮಾಡಬೇಕು ಎಂದು ನಿರ್ಧರಿಸಿದ್ದರು. ಇದಕ್ಕಾಗಿ ಬಾಳೆಹಣ್ಣು ಹಲ್ವ ಮಾಡಲು ನಿರ್ಧರಿಸಿದರು. ಬಳಿಕ ಮಾರುಕಟ್ಟೆಗೆ ತಂದಾಗ ಕೆಜಿಗೆ 120 ರೂಪಾಯಿ ಲಭ್ಯವಾಯಿತು. ಬಳಿಕ ಬಾಳೆಗೊನೆ ಮಾರಾಟದ ಬದಲಾಗಿ ಮೌಲ್ಯವರ್ಧನೆ ಮಾಡಿಯೇ ಮಾರಾಟ ಮಾಡುವ ಪ್ರಕ್ರಿಯೆ ನಡೆಸಿದರು. ನಿಧಾನವಾಗಿ ಪೇಸ್‍ಬುಕ್, ವ್ಯಾಟ್ಸಪ್ ಸೇರಿದಂತೆ ಇತರ ಮಾಧ್ಯಮ ಉಪಯೋಗಿಸಿ ಇ ಮಾರುಕಟ್ಟೆಗೆ ಇಳಿದರು. ಈಗ ಮನೆಯಿಂದಲೇ ನೇರವಾಗಿ ಗ್ರಾಹಕರ ಕೈಗೆ ಕೃಷಿ ವಸ್ತುಗಳು ಸಿಗುತ್ತಿದೆ. ಇತ್ತೀಚೆಗೆ ಕಾಳುಮೆಣಸು ಧಾರಣೆ ಕುಸಿತವಾದ ಸಂದರ್ಭದಲ್ಲೂ ಶಂಕರ ಭಟ್ ಅವರಿಗೆ ಸುಮಾರು 800 ರೂಪಾಯಿಯಿಂದ 1000 ರೂಪಾಯಿವರೆಗ ಲಭ್ಯವಾಗಿದೆ. ಇ ಮಾರುಕಟ್ಟೆ ಮೂಲಕ ಗ್ರಾಹಕರ ಕೈಗೆ ತಲಪಿದೆ. ಈಗ ಅಡಿಕೆ, ರುದ್ರಾಕ್ಷಿ, ಕಾಳುಮೆಣಸು, ಬಾಳೆಹಣ್ಣು ಹಲ್ವ ಇತ್ಯಾದಿಗಳ ಮಾರಾಟ ಆನ್ ಲೈನ್‍ನಲ್ಲಿ. ಇಲ್ಲಿ ಅತ್ಯಂತ ಪ್ರಮುಖವಾದ ಅಂಶವೆಂದರೆ ಕೃಷಿಕ ಬೆಳೆದ ವಸ್ತುಗಳ ಮೇಲೆ ಆತನಿಗೆ ಮೊದಲಾಗಿ ನಂಬಿಕೆ ಇರಬೇಕು ಎನ್ನುವುದು  ಶಂಕರ ಭಟ್ ಅವರ ಅಭಿಮತ. ಮಾರಾಟದ ಸಂದರ್ಭ ಅದರಲ್ಲಿ ಕಲಬೆರಕೆ ಇತ್ಯಾದಿಗಳು ನಡೆದರೆ ವಿಶ್ವಾಸಾರ್ಹತೆ ಕಡಿಮೆಯಾಗಿ ಮಾರುಕಟ್ಟೆ ಕುಸಿತವಾಗಬಹುದು ಎನ್ನುವ ಸತ್ಯ ಅರಿತಿರಬೇಕು.
ಹಾಗಿದ್ದರೆ ಈಗ ಪ್ರಶ್ನೆ ಇರುವುದು, ಸಾಮಾನ್ಯ ಅದರಲ್ಲೂ ಗ್ರಾಮೀಣ ಭಾಗದ ಅದರಲ್ಲೂ ಇ ಮಾರುಕಟ್ಟೆ ವ್ಯವಸ್ಥೆ ಅರಿಯದ ಕೃಷಿಕರಿಗೆ ಇದೆಲ್ಲಾ ಸಾಧ್ಯವೇ ಎಂಬುದು. ಇಂದು ಬಹುತೇಕ ಕೃಷಿಕರ ಮಕ್ಕಳು ಪೇಸ್‍ಬುಕ್, ವ್ಯಾಟ್ಸಪ್‍ಗಳಲ್ಲಿ ಸಕ್ರಿಯ. ಅದರ ಜೊತೆಗೆ ಇನ್ನೂ ಹಲವಾರು ಮಂದಿ ನಗರ ಪ್ರದೇಶದಲ್ಲೇ ಉದ್ಯೋಗ ಮಾಡುವವರು. ಹೀಗಾಗಿ ಇಂದಲ್ಲ ನಾಳೆಯಾದರೂ ಹಂತ ಹಂತವಾಗಿ ಅನುಷ್ಠಾನ ಸಾಧ್ಯವಿದೆ ಎಂಬುದು ಅಭಿಮತ. ಆದರೆ ಎಲ್ಲಾ ಕೃಷಿ ವಸ್ತುಗಳನ್ನು ಇ ಮಾರುಕಟ್ಟೆ ಮೂಲಕ ಅಸಾಧ್ಯ. ಅದಕ್ಕಾಗಿ ಮತ್ತೊಂದು ದಾರಿ ಕಂಡುಹಿಡಿಯಬೇಕಾಗುತ್ತದೆ. ಕೃಷಿಕರು ಬೆಳೆದ ವಸ್ತುಗಳಿಗೆ ಕೃಷಿಕರೇ ಮಾರುಕಟ್ಟೆ ಹುಡುಕಿಕೊಂಡರೆ ಕೃಷಿ ಕ್ಷೇತ್ರದಲ್ಲಿನ ಬದಲಾವಣೆಗೆ ದೂರವಿಲ್ಲ. 2020 ರ ಹೊತ್ತಿಗೆ ಕೃಷಿಕರ ಆದಾಯವನ್ನು ದ್ವಿಗುಣಗೊಳಿಸುವ ಯೋಜನೆಗೆ ಇದೂ ಸಹಕಾರಿಯಾಗಬಲ್ಲುದು. ರಾಷ್ಟ್ರದ ಆಹಾರ ಭದ್ರತೆಯ ಜೊತೆಗೆ ಕೃಷಿಕರ ಆದಾಯದ ಭದ್ರತೆಯಾಗಬಹುದು.


( ಮಣ್ಣಿಗೆ ಮೆಟ್ಟಿಲು - ಹೊಸದಿಗಂತ)