13 ಏಪ್ರಿಲ್ 2018

“ಹಲಸು” ಕೇರಳ ರಾಜ್ಯದ ಹಣ್ಣು. . . ರೈತನಿಗೆ ಸಂದ ಗೌರವ !





ರಾಜ್ಯದಲ್ಲಿ ರೈತರ ಸರಣಿ ಆತ್ಮಹತ್ಯೆ ನಡೆಯುತ್ತಿದ್ದರೆ, ಎಲ್ಲಾ ರಾಜಕೀಯ ಪಕ್ಷಗಳು, ಆತ್ಮಹತ್ಯೆಯ ಹಿಂದೆ ಬಿದ್ದಿದ್ದರು. ದೂರದ ಇಸ್ರೇಲ್‍ನಲ್ಲಿ ಅದರ ತದ್ವಿರುದ್ಧ. ಎಲ್ಲರೂ ಯಶೋಗಾಥೆಯ ಹಿಂದೆ ಬಿದ್ದರು. ಆತ್ಮಹತ್ಯೆ ತಡೆಗೆ ಏನು ಮಾಡಬಹುದು ಎಂದು  ತಂಡ ರಚನೆ ಮಾಡಿದರು. ರೈತರು ಬೆಳೆಯುವ ಕೆಲವು ಉತ್ಪನ್ನಗಳನ್ನು ಕಡ್ಡಾಯ ಬಳಕೆ ಮಾಡಬೇಕು ಎಂದರು. ರೈತರೂ ಗೆದ್ದರು, ಆತ್ಮಹತ್ಯೆಯೂ ಕಡಿಮೆಯಾಯಿತು. ಪಕ್ಕದ ಕೇರಳವೂ ಅದೇ ಹಾದಿಯಲ್ಲಿದೆ. ಹಲಸು ತನ್ನ ರಾಜ್ಯದ ಹಣ್ಣು ಎಂದು ಘೋಷಿಸಿದರು. ರೈತರೂ ಈ ಹಣ್ಣಿನ ಮೂಲಕ ಆದಾಯ ಸೃಷ್ಠಿ ಮಾಡಿಕೊಂಡರು.
ಇಡೀ ದೇಶದಲ್ಲಿ ಆಗಾಗ ಸುದ್ದಿಯಾಗುವ ಸಂಗತಿ ರೈತರ ಆತ್ಮಹತ್ಯೆ. ಆದರೆ ಪಕ್ಕದ ಕೇರಳದಲ್ಲಿ ಇಂತಹ ಸುದ್ದಿಗಳೇ ಅಪರೂಪ. ಇಲ್ಲವೇ ಇಲ್ಲ ಎಂದಲ್ಲ. ರೈತರ ಆತ್ಮಹತ್ಯೆಯ ಸರಾಸರಿ ತೆಗೆದರೆ ತೀರಾ ಕಡಿಮೆ. ಏಕೆ ಹೀಗೆ ಎಂದು ಪಾಸಿಟಿವ್ ಆಗಿ ಯೋಚಿಸಿದರೆ ಇಲ್ಲಿನ ಸರಕಾರಗಳು ಯಾವುದೇ ಬರಲಿ ರೈತರ ಬೇಡಿಕೆಗೆ ತಕ್ಷಣವೇ ಸ್ಪಂದಿಸುತ್ತವೆ, ರೈತ ಪರವಾದ ಯಾವುದೇ ಹೋರಾಟಕ್ಕೆ, ನ್ಯಾಯಯುತ ಬೇಡಿಕೆಗೆ ಪಕ್ಷಬೇಧವಿಲ್ಲದೆ ಹೋರಾಟ ನಡೆಯುತ್ತದೆ, ಸರಕಾರ ಸ್ಪಂದಿಸುತ್ತದೆ. ಅದರ ಜೊತೆಗೆ ಹೊಸ ಸಾಧ್ಯತೆಯತ್ತಲೂ ಸರಕಾರ ಹೇಳುತ್ತದೆ. ಈಗಲೂ ಅಂತಹದ್ದೇ ಪ್ರಯತ್ನ ಕೇರಳದಲ್ಲಾಗಿದೆ. ಹಲಸಿನ ಹಣ್ಣನ್ನು ರಾಜ್ಯದ ಹಣ್ಣು ಎಂದು ಸರಕಾರ ಘೋಷಿಸಿದೆ. ಅನೇಕ ಸಮಯಗಳಿಂದ ಹಲಸಿನ ಬಗ್ಗೆ ಕೇರಳದಲ್ಲಿ ಆಂದೋಲನ, ಚಳುವಳಿಯೇ  ನಡೆಯುತ್ತಿತ್ತು. ರಬ್ಬರ್, ತೆಂಗು ಮೊದಲಾದ ಕೃಷಿಯಿಂದಲೇ ಕಂಗೊಳಿಸುತ್ತಿದ್ದ ಕೇರಳದಲ್ಲಿ ಹಲಸಿನ ಆಂದೋಲನ ಶುರುವಾಗಿ ಸುಮಾರು 10 ವರ್ಷಗಳಾಗಿದೆ. ಹಲಸು ಮೇಳದಿಂದ ತೊಡಗಿ ವಿವಿಧ ಚಳುವಳಿ ನಡೆಯಿತು. ಇದರ ಪರಿಣಾಮ ವಿವಿಧ ಸಣ್ಣ ಸಣ್ಣ ಉದ್ಯಮಗಳು ಹುಟ್ಟಿಕೊಂಡಿದೆ.ಈಗ ಹಲಸು ಬೆಳೆಸುವ ಮೂಲಕ ರೈತನಿಗೆ ಆದಾಯ ತರಲು ಸಾಧ್ಯವಿದೆ ಎಂದು ಅನಿಸಿದೆ. ಹೀಗಾಗಿ ಕೇರಳದ ಸರಕಾರವೇ ರೈತರ ನೆರವಿಗೆ ಬಂದಿದೆ. ಕೇರಳದ ಕೃಷಿ ಸಚಿವರು ಈ ಬಗ್ಗೆ ಕಳೆದ ಕೆಲವು ಸಮಯಗಳಿಂದ ಅಧ್ಯಯನ ಮಾಡಿದರು, ಸಾಧ್ಯತೆ ಹಾಗೂ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿದರು. ಇಡೀ ರಾಜ್ಯದಲ್ಲಿ ಸರಕಾರದ ವತಿಯಿಂದ ಹಲಸಿನ ವಾಹನ ಓಡಿಸಿದರು. ಜನರಲ್ಲಿ, ಕೃಷಿಕರಲ್ಲಿ ಜಾಗೃತಿ ಮೂಡಿಸಿದರು. ಹೊಸ ಹೊಸ ತಳಿಯ ಹಲಸನ್ನು ಪರಿಚಯಿಸಿದರು. ಇದೀಗ ಹಲಸು ರಾಜ್ಯದ ಹಣ್ಣು ಎಂಬ ಘೋಷಣೆ ಮಾಡಿದರು. ಇಡೀ ಕೇರಳದ ರೈತರಿಗೆ ಇಷ್ಟು ಸಾಕು. ಈಗ ಹಲಸಿನ ಮೂಲಕವೂ ಆದಾಯವನ್ನು ಹೆಚ್ಚಿಸಿಕೊಳ್ಳಲು, ಉಪಬೆಳೆಯಾಗಿ ಬೆಳೆಯಲೂ, ಉದ್ಯಮಗಳು ಬೆಳೆಯಲು ಸಾಧ್ಯವಾಯಿತು.
ಹಾಗೆ ನೋಡಿದರೆ ಕೇರಳ ಮಾತ್ರವಲ್ಲ ಕರ್ನಾಟಕದಲ್ಲೂ ಹಣ್ಣು ಬೆಳೆಯುವ ಅನೇಕ ಕೃಷಿಕರು ಇದ್ದಾರೆ. ಆದರೆ ಮಾರುಕಟ್ಟೆ ಸಮಸ್ಯೆಯ ಕಾರಣದಿಂದ , ಈ ಬಗ್ಗೆ ಸಾಕಷ್ಟು ಜಾಗೃತಿ ಅರಿವು ಇಲ್ಲದ ಕಾರಣದಿಂದ ಸರಕಾರದ ಸಹಾಯವೇ ಇಲ್ಲದ ಕಾರಣದಿಂದ ಸೊರಗುತ್ತಿರುವುದು  ಕಂಡುಬರುತ್ತದೆ. ಮೂಲತ: ಕೇರಳದವರಾಗಿ ಪುತ್ತೂರು ತಾಲೂಕಿನ ಕಬಕ ಬಳಿಯ ನರ್ಸರಿ ನಡೆಸುತ್ತಿರುವ ಅನಿಲ್ ಪ್ರತೀ ವರ್ಷ ಸುಮಾರು 75 ಸಾವಿರದಿಂದ 1 ಲಕ್ಷ ಹಲಸು ಗಿಡವನ್ನು ಮಾಡಿ ದೇಶದ ವಿವಿದೆಡೆಗೆ ಮಾರಾಟ ಮಾಡುತ್ತಾರೆ.ಕೇರಳದಲ್ಲಿ ಹಲಸಿನ ಜಾಗೃತಿ ಆರಂಭವಾದ ಬಳಿಕ ಪ್ರತೀ ವರ್ಷ ಗಿಡಗಳಿಗೆ ಬೇಡಿಕೆ ವ್ಯಕ್ತವಾಯಿತು. ಇಂದಿಗೂ ಈ ಬೇಡಿಕೆ ಕಡಿಮೆಯಾಗಿಲ್ಲ. ಇದರ ಪ್ರಭಾವ ಪಕ್ಕದ ತಮಿಳುನಾಡಿನಲ್ಲೂ ಕಂಡಿತು. ಹೀಗಾಗಿ ಹಲಸಿನ ಗಿಡಕ್ಕೆ ಬೇಡಿಕೆ ಹೆಚ್ಚಾದಾಗ ಹೊಸತಂತ್ರವನ್ನು ಅನಿಲ್ ಕಂಡುಕೊಂಡರು. ಈಗ ಸಾಕಷ್ಟು ಗಿಡ ಮಾರಾಟಕ್ಕೂ ಅನಿಲ್ ಶಕ್ತವಾದರು. ಇದು ಅನಿಲ್ ಒಬ್ಬರ ಕತೆಯಲ್ಲ ಕೇರಳದಲ್ಲಿ ಸಾಕಷ್ಟು ನರ್ಸರಿಗಳಲ್ಲಿ ಇಂದು ಹಲಸಿನ ಗಿಡಕ್ಕೆ, ಹೊಸ ಹೊಸ ತಳಿಯ ಗಿಡಕ್ಕೆ ಬೇಡಿಕೆ ವ್ಯಕ್ತವಾಗುತ್ತಲೇ ಇದೆ.
 ಕೇರಳದ ಮೂಲದಿಂದ ಆಗಮಿಸಿ ಸುಮಾರು 5 ಎಕ್ರೆಯಲ್ಲಿ ಜಾರ್ಜ್ ಎಂಬ ಕೃಷಿಕ ರಂಬುಟಾನ್ ಹಣ್ಣಿನ ತೋಟ ಮಾಡುತ್ತಾರೆ. ರಂಬುಟಾನ್ ಬೇಡಿಕೆಯನ್ನು ಗಮನಿಸಿ 5 ಎಕ್ರೆ ಜಾಗ ಖರೀದಿ ಮಾಡಿ ಅಲ್ಲಿ ಸಂಪೂರ್ಣವಾಗಿ ಹಣ್ಣಿನ ಗಿಡವನ್ನು  ಬೆಳೆಸಿದರು. ಈಗ ಹಣ್ಣು ಕಟಾವು ಮಾಡುತ್ತಿದ್ದಾರೆ. ಹೀಗೆ ಹತ್ತಾರು ಮಂದಿ ಹಣ್ಣಿನ ತೋಟ ಮಾಡಿ ಕೇರಳದಲ್ಲೇ ಮಾರುಕಟ್ಟೆ ಹುಡುಕುತ್ತಾರೆ.
ಕರ್ನಾಟಕದಲ್ಲೇ ಇರುವ ಅನೇಕರು ಹಣ್ಣಿನ ತೋಟ ಮಾಡಿ ಮಾರುಕಟ್ಟೆಗಾಗಿ ಪರದಾಟ ಮಾಡುತ್ತಾರೆ. ಎಲ್ಲೋ ಕೆಲವರು ಸಾಹಸಪಟ್ಟು ಮಾರುಕಟ್ಟೆ ಸೃಷ್ಟಿಸಿಕೊಳ್ಳುತ್ತಾರೆ. ಹಣ್ಣಿನ ತೋಟವೂ ಆದಾಯ ತರಬಲ್ಲುದು ಎಂಬ ಕಲ್ಪನೆ ಇದ್ದರೂ ಇಂದಿಗೂ ತೋಟಗಾರಿಕಾ ಬೆಳೆಯಾಗಿ ಸಾಕಷ್ಟು ಪ್ರೋತ್ಸಾಹ ರಾಜ್ಯದಲ್ಲಿ ಸಿಗುವುದಿಲ್ಲ. ಮಾವು ಸೇರಿದಂತೆ ಇನ್ನಿತರ ತೋಟಗಾರಿಕಾ ಬೆಳೆಗಳೂ ಸಾಕಷ್ಟು ಇದ್ದರೂ ರಾಜ್ಯದ ಹಣ್ಣು ಎಂಬ ಘೋಷಣೆ ಇಲ್ಲಿಲ್ಲ. ಇದ್ದರೂ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಾಣುತ್ತಿಲ್ಲ. ಹೀಗಾಗಿ ರೈತನಿಗೆ ಆದಾಯ ಹೆಚ್ಚುವುದು ಕೂಡಾ ಕಷ್ಟವಾಗಿದೆ, ಯಶೋಗಾಥೆಗಳು ಕಾಣಿಸುತ್ತಿಲ್ಲ. ರಾಜ್ಯದಲ್ಲಿ ವಿವಿಧ ತಳಿಯ ಮಾವು ಬೆಳೆಯಲಾಗುತ್ತದೆ, ಹೊಸ ಬಗೆಯ ಕಲ್ಲಂಗಡಿ ಬೆಳೆಯಲಾಗುತ್ತದೆ. ರೈತನಿಗೆ ಯಾವತ್ತೂ ಉಪಬೆಳೆಗಳು ಆದಾಯ ದ್ವಿಗುಣಕ್ಕೆ ಕಾರಣವಾದರೆ, ಸರಕಾರದ ಸಣ್ಣ ಪ್ರೋತ್ಸಾಹ ಕೂಡಾ ದೊಡ್ಡದಾಗಿ ಕಾಣುತ್ತದೆ. ರಾಜ್ಯದಲ್ಲೂ ಯಾವುದಾದರೊಂದು ಹಣ್ಣನ್ನು ರಾಜ್ಯದ ಹಣ್ಣು ಎಂದು ಘೋಷಿಸಿದರೆ ಸಹಜವಾಗಿಯೇ ಮಾರುಕಟ್ಟೆ ಹೆಚ್ಚುತ್ತದೆ, ಹೊಸ ಮಾರುಕಟ್ಟೆ ಸೃಷ್ಟಿಯಾಗುತ್ತದೆ, ರೈತನಿಗೂ ಆದಾಯ ಹೆಚ್ಚಾಗುತ್ತದೆ. ಸರಕಾರಗಳು ಈ ದಿಸೆಯಲ್ಲಿ ಏಕೆ ಆಲೋಚಿಸಬಾರದು ಇಲ್ಲಿ ?. ಇಂತಹ ಸಣ್ಣ ಸಣ್ಣ ಮೆಟ್ಟಿಲುಗಳೇ ರೈತನ ಆದಾಯಕ್ಕೆ ದೊಡ್ಡ ಮೆಟ್ಟಿಲುಗಳೇ ಆಗುತ್ತದೆ.

ಕಾಮೆಂಟ್‌ಗಳಿಲ್ಲ: