13 ಏಪ್ರಿಲ್ 2018

ಈ ಸಂಘರ್ಷ ಭವಿಷ್ಯದ ಅಪಾಯ...




                                                                 ( ಅಂತರ್ಜಾಲ ಚಿತ್ರ )

ಇತ್ತೀಚೆಗೆ ಯಾಕೋ ಭಯ ಶುರುವಾಗಿದೆ. ಹೀಗಿರಲಿಲ್ಲ ಈ ವ್ಯವಸ್ಥೆ. ಜಾತಿ ಮೂಲಕ ಗುರುತಿಸದೇ ಇದ್ದರೂ ಅದರೊಳಗೇ ತಂದು ದೂಡುವ ಸ್ಥಿತಿ ಬಂದಿದೆ. ಯಾವುದೋ ಒಂದು ಆದರ್ಶ, ಸಿದ್ಧಾಂತ , ತತ್ತ್ವ ನಂಬಿ ಬಹುದೂರ ಬಂದ ಬಳಿಕ ಈ ಆತಂಕ ಶುರುವಾಗುತ್ತಿದೆ. ಅದೂ ಈ ಚುನಾವಣೆಗೇ ಮುಗಿದರೆ ಅಡ್ಡಿ ಇಲ್ಲ, ಅಲ್ಲದೇ ಇದ್ದರೆ ಭವಿಷ್ಯದಲ್ಲಿ ಧರ್ಮ ಸಂಘರ್ಷದ ಜೊತೆಗೆ ಜಾತಿ ಸಂಘರ್ಷದ ಭಯ ಕಾಡಿದೆ.
ಕಳೆದ ಅನೇಕ ವರ್ಷಗಳಿಂದ ಚುನಾವಣೆಯ ನೋಡುವ, ಮತ ಚಲಾವಣೆ ಮಾಡುವ ಅವಕಾಶ ಸಿಕ್ಕಿದೆ. ಆದರೆ ಈ ಬಾರಿಯ ಚುನಾವಣೆ ಹೊಸತೊಂದು ಸಂಘರ್ಷದ ವಾತಾವರಣವನ್ನು ಸದ್ದು ಗದ್ದಲವಿಲ್ಲದೆ  ತೆರೆದಿಟ್ಟಿದೆ. ಇದು ಅತ್ಯಂತ ಅಪಾಯಕಾರಿ ಎಂದು ಭಾವಿಸಲೇಬೇಕಾಗುತ್ತದೆ. ಇಂತಹ ಸಂಘರ್ಷ ಇಲ್ಲವೆಂದು ಮಾತಿನ ನಡುವೆ ಹೇಳಿಕೊಳ್ಳಬಹುದು. ಆದರೆ ಅಂತರ್ಯದಲ್ಲಿ ಚರ್ಚೆ ಶುರುವಾಗಿದೆ.
ವಿಶೇಷವಾಗಿ ಕರಾವಳಿ ಜಿಲ್ಲೆಯಲ್ಲಿ ಧರ್ಮ-ಮತ ಸಂಘರ್ಷ ಹಾಗೂ ಇದೇ ಸೂಕ್ಷ್ಮ ಸಂಗತಿಯಾಗಿ ಚುನಾವಣೆಯಲ್ಲಿ ಕಂಡುಬಂದು ಮತ ಗಳಿಕೆಯ ದಾರಿಯೂ ಆಗಿದ್ದರೆ ಈ ಬಾರಿ ಜಾತಿಯೂ ಸೇರಿಕೊಂಡಿದೆ. ಇತ್ತೀಚೆಗಂತೂ ಇದು ವಿಪರೀತವಾಗುತ್ತಿದೆ. ಭವಿಷ್ಯದಲ್ಲಿ ಈ ರಾಜಕೀಯ ವ್ಯವಸ್ಥೆ ಧರ್ಮ ಸಂಘರ್ಷದ ಜೊತೆಗೆ ಜಾತಿ ಸಂಘರ್ಷವನ್ನೂ ತಂದಿಡುವುದು ನಿಶ್ಚಿತ. ಇದ್ದಂತಹ ಕೆಲವು ಆಶಾಕಿರಣಗಳು, ಸಮಾಜವನ್ನು ಸುಧಾರಣೆ ಮಾಡುವ ಬೆಳ್ಳಿ ರೇಖೆಗಳೂ ಮಸುಕಾಗುತ್ತದೆ. ಎಲ್ಲೇ ಸುತ್ತಾಡಿದರೂ ಅದು ಕೊನೆಗೆ ಬಂದು ನಿಲ್ಲುವುದು , ನಿಲ್ಲಿಸುವುದು  ಅದೇ ಜಾತಿ ವ್ಯವಸ್ಥೆ ಸುತ್ತ. ಹೀಗಾಗಿ ಈ ಜಾತಿ ಸಂಘರ್ಷ  ಭವಿಷ್ಯದಲ್ಲಿ ಸಣ್ಣ ಸಣ್ಣ ಜಾತಿಗಳು ತಮ್ಮ ಅಸ್ತಿತ್ವಕ್ಕಾಗಿ ಹೋರಾಟ ಮಾಡಲೇಬೇಕಾದ ಅನಿವಾರ್ಯತೆ ಬಂದಬಹುದು. ಇಂತಹ ಸನ್ನಿವೇಶ ರಾಜ್ಯದ ಬೇರೆ ಕಡೆಗಳಲ್ಲಿ ಕಂಡುಬಂದಿತ್ತು. ಆದರೆ ಇದೀಗ ಕರಾವಳಿ ಜಿಲ್ಲೆಯಲ್ಲೂ ಕಾಣುತ್ತಿದೆ.

ಕೆಲವು ಸಮಯಗಳ ಹಿಂದೆ ರಾಜ್ಯದಲ್ಲಿ ಲಿಂಗಾಯತ ಧರ್ಮದ ಬಗ್ಗೆ ಪರ-ವಿರೋಧ ಅಭಿಪ್ರಾಯ ಬಂದಾಗ  ಧರ್ಮವನ್ನು ವಿಭಜನೆ ಮಾಡಲಾಗುತ್ತಿದೆ, ಈ ಸರಕಾರ ಹಿಂದೂ ವಿರೋಧಿ ಎಂಬೆಲ್ಲಾ ಅಭಿಪ್ರಾಯ ಬಂದವು. ಈ ಅಭಿಪ್ರಾಯ ಸತ್ಯವಾಗಿಯೂ ಕಂಡಿತ್ತು. ಹಾಗೆ ನೋಡಿದರೆ ಧರ್ಮ, ಮತ ಸಂಘರ್ಷ ಈ ಹಿಂದೆಯೂ ಇತ್ತು. ಆದರೆ ಈಗ ಜಾತಿ ಸಂಘರ್ಷದ ಜೊತೆಗೆ ಜಾತಿಯ ಒಳಗೆ ಸಂಘರ್ಷ ಉಂಟು ಮಾಡಿರುವುದು  ಈ ರಾಜಕೀಯ ವ್ಯವಸ್ಥೆ.  ಇಡೀ ರಾಜ್ಯದಲ್ಲಿಯೇ ಜಾತಿ ರಾಜಕಾರಣ ಹೆಚ್ಚುತ್ತಲೇ ಇದೆ. ಒಂದು ಧರ್ಮ ಅದರೊಳಗೆ ಇರುವ ಜಾತಿ ವ್ಯವಸ್ಥೆ ಹೊಗಲಾಡಿಸಬೇಕು ಎಂದು ಒಂದು ಕಡೆ ಜಾಗೃತಿ ಮೂಡಿಸುತ್ತಿದ್ದರೆ ಈ ಕಡೆಗೆ ಅದಕ್ಕಿಂತ 10 ಪಟ್ಟು ವೇಗದಲ್ಲಿ ಜಾತಿ ಆಧಾರಿತ ಟಿಕೆಟ್ ಕೊಡಲಾಗುತ್ತಿದೆ.

ಹೀಗಾಗಿ ಒಂದು ಸಿದ್ದಾಂತದ ಮೂಲಕ ರಾಜಕೀಯ ವ್ಯವಸ್ಥೆ ಶುದ್ದೀಕರಣವಾಗುತ್ತದೆ ಎಂಬ ಭಾವ ಇತ್ತು. ಅದೀಗ ಮರೆಯಾಗುತ್ತಿದೆ.  ರಾಜಕೀಯ ಕ್ಷೇತ್ರ ಏಕೆ  ಶುದ್ದೀಕರಣವಾಗಬೇಕು ಎಂದರೆ , ಮುಂದೆ ಆಳುವ ಮಂದಿ ಅದೇ ಜಾತಿ ವ್ಯವಸ್ಥೆಯಿಂದ ದೂರವಾಗಲೇಬೇಕಾದರೆ ಬಿತ್ತುವ  ಬೀಜವೇ ಶುದ್ದವಾಗಬೇಡವೇ ? ಧರ್ಮ - ಜಾತಿಯ ವಿಷ ಬೀಜವೇ ಬಿತ್ತಿದರೆ ಫಲವೂ ಅದೇ ಸಿಗುವುದು ಖಚಿತ. ಹೀಗಾಗಿ ರಾಜಕೀಯ ಕ್ಷೇತ್ರದ ಶುದ್ದೀಕರಣದ ಹಂತದಲ್ಲಿ ಗೆಲುವೇ ಮುಖ್ಯವೆಂದು ಮತ್ತೆ ಜಾತಿಯ ನಡುವೆ ಬಿದ್ದರೆ ಈ ಸಮಾಜದ ಉಳಿವು ಹೇಗೆ ಎಂಬ ಪ್ರಶ್ನೆ ಕಾಡುತ್ತಿದೆ. ಹೀಗಾಗಿ ಭವಿಷ್ಯದಲ್ಲಿ ಆತಂಕ ಇದೆ. ಈ ಸಂಘರ್ಷ , ಈ ಕಂದಕ ಇನ್ನಷ್ಟು ಹೆಚ್ಚಾಗುವುದು ನಿಶ್ಚಿತ.

ಕೆಲವು ಸಮಯದ ಹಿಂದೆ ಮನಸ್ಸು ಓಡುತ್ತದೆ.
ಒಂದು ಚಿಂತನೆಯ ಅಡಿಯಲ್ಲಿ ಬೆಳೆಯುತ್ತಾ ಅದೇ ಸತ್ಯವೆಂದು ನಂಬಿದ್ದಾಯಿತು. ಅದೇ ಕಾರಣದಿಂದ ಪ್ರಮುಖವಾದ ಮೆಟ್ಟಿಲಿನಿಂದ ಇಳಿದದ್ದೂ ಆಯಿತು. ಸಂಘರ್ಷ ಮಾಡಿದ್ದೂ ಆಯಿತು. ಅನೇಕರಿಂದ ಕೇಳಿಸಿಕೊಂಡದ್ದೂ ಆಯ್ತು. ಮಗುವಿನ ಓದಿಗೂ ಅದೇ ಚಿಂತನೆಯ ದಾರಿ ಹಿಡಿದದ್ದೂ ಆಯಿತು. ಸಾಮಾಜಿಕ ಕೆಲಸದಲ್ಲೂ ಅದೇ ದಾರಿಯನ್ನೂ ಹಿಡಿದಾಯಿತು. ಎಲ್ಲಾ ಆಗಿ ಕೊನೆಗೆ ಬಂದು ನಿಂತಿರುವುದು ದೂರದಲ್ಲಿ. ಮಾತನಾಡಿದ್ದೇ ತಪ್ಪಾಯ್ತೇ ಎಂಬಷ್ಟರ ಮಟ್ಟಿಗೆ ವ್ಯವಸ್ಥೆ ಬಂದು ನಿಂತಿತು. ಯಾವುದು ಸತ್ಯವೆಂದು ಭಾವಿಸಿದ್ದೆವೋ ಅದೇ ನಾವಾಗಲಿಲ್ಲ...!. ನಾವು ನಾವಾಗಲೂ ಇಲ್ಲ...!. ಅವಕಾಶವಾದಿಗಳು ಮೇಲೆದ್ದು ಬಿಟ್ಟರು, ಜಾತಿ ಹಿಡಿದರು ಗೆದ್ದರು..!. ಸತ್ಯ ಸೋತಿತು....!.




ಕಾಮೆಂಟ್‌ಗಳಿಲ್ಲ: