04 ಮಾರ್ಚ್ 2018

ಅಸಹಾಯಕತೆಯಲ್ಲ....... ನೋವೂ ಅಲ್ಲ...... ಭರವಸೆಯ ಪ್ರಶ್ನೆ.....!



ಸುಮಾರು 4 ವರ್ಷಗಳ ಹಿಂದೆ.
 ಯಾವುದೋ ವಿಡಿಯೋ ಹೀಗೇ ಗಮನಿಸುತ್ತಿದೆ, ಮಾತು ಕೇಳಿಸುತ್ತಿದ್ದಂತೆಯೇ ಆಸಕ್ತಿ ಮೂಡಿತು. ಮತ್ತೊಮ್ಮೆ ಕೇಳಿದೆ. ಅದು ಇಂದಿನ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣ. ಈ ದೇಶ ಹೇಗೆ ಬದಲಾಗಬೇಕು, ನಾವು ಹೇಗೆ ಅದರ ಭಾಗವಾಗಬೇಕು ಎಂಬುದರ ಸಂಕ್ಷಿಪ್ತ ರೂಪ ಅಷ್ಟೇ. ಅದರ ಜೊತೆಗೆ ಈ ದೇಶ ವಿಶ್ವದಲ್ಲೇ ನಂಬರ್1 ಆಗುವ ಕನಸು ಸೇರಿದಂತೆ ವಿವಿಧ ವಿಚಾರಗಳು ಇದ್ದವು. ಮತ್ತೊಮ್ಮೆ ಆಲಿಸಿದೆ.. ಮಗದೊಮ್ಮೆ ಕೇಳಿದೆ... ಆಗಾಗ ಕೇಳಿದೆ. ಭರವಸೆ ಮೂಡಿತು.





ಹೌದು ಈ ದೇಶ ಬದಲಾಗಬೇಕು.
ಈ ದೇಶದಲ್ಲಿ ಅದೆಷ್ಟೋ ಸಮಸ್ಯೆಗಳು ಇವೆ... ಎಲ್ಲಾ ಸಮಸ್ಯೆಗಳೂ ಒಂದೇ ಕ್ಷಣದಲ್ಲಿ , ಒಮ್ಮೆಲೇ ಬದಲಾಗಲು ಸಾಧ್ಯವೇ ಇಲ್ಲ. ಹೀಗಾಗಿ ನಾವು ನಮ್ಮೂರಿನಲ್ಲಿ ಏನು ಮಾಡಬಹುದು ಮತ್ತು ಏನು ಮಾಡಬೇಕು ಎಂಬುದರ ಕಡೆಗೆ ಯೋಚನೆ ಮಾಡುತ್ತಿದ್ದೆ, ಅದಕ್ಕೂ ಅವರೇ ಹೇಳಿದ್ದರು.
ನಮ್ಮೂರಿನ ಸಮಸ್ಯೆಗೆ ನಾವೇ ಪರಿಹಾರ ಕಂಡುಕೊಳ್ಳುವುದು, ಸರಕಾರದ ಯೋಜನೆಗಳನ್ನು ಸರಿಯಾಗಿ ಅನುಷ್ಠಾನ ಮಾಡಲು ಪ್ರಯತ್ನ ಮಾಡುವುದು, ಆಗದೇ ಇದ್ದರೆ ಮಾಡಿಸುವುದು. ಜನನಾಯಕರು ಭ್ರಷ್ಟರಾಗದಂತೆ ಆಗಾಗ ಎಚ್ಚರಿಸುವುದು, ಊರಿನ ಸಮಗ್ರ ಅಭಿವೃದ್ಧಿಗೆ ಕಾರ್ಯಯೋಜನೆ ಹಾಕಿಕೊಳ್ಳುವುದು  ಸೇರಿದಂತೆ ಹತ್ತಾರು ಸಂಗತಿಗಳನ್ನು ಅಂದು ಗಮನಿಸಿದ್ದೆ.

ಅದಾದ ಬಳಿಕ ಆ ಮಾತು ಕೃತಿಗೆ ಇಳಿದಾಗಲೇ ತಿಳಿದದ್ದು, ಅನೇಕ ಸತ್ಯಗಳು...!
ಈ ಭ್ರಷ್ಟ ವ್ಯವಸ್ಥೆಯಲ್ಲಿ ಸತ್ಯವೂ ಸುಳ್ಳಾಗುತ್ತದೆ.... ಸುಳ್ಳು ಸತ್ಯವಾಗುತ್ತದೆ.  ಸತ್ಯ ಹೇಳಿದಾಗ ವಿರೋಧ ಹೆಚ್ಚಾಗುತ್ತದೆ. ಗುಂಪುಗಾರಿಕೆ ಶುರುವಾಗುತ್ತದೆ, ಕೊನೆ ಕೊನೆಗೆ ಇದೊಂದು ಕಾಟ ಎನ್ನುವುದು  ಶುರುವಾಗುತ್ತದೆ. ಅಪಪ್ರಚಾರ ಶುರುವಾಗುತ್ತದೆ....!. ಕನಸು ನನಸಾಗುವುದು ಇಷ್ಟವಿಲ್ಲವಾಗುತ್ತದೆ....!




ಹೀಗೆ ಆರಂಭವಾಗುತ್ತದೆ.......

 ಒಂದು ಗ್ರಾಮೀಣ ರಸ್ತೆ. ಕಳೆದ ಅನೇಕ ವರ್ಷಗಳಿಂದ ಇದು ದುರಸ್ತಿಯಲ್ಲಿ ಇಲ್ಲ. ಎಲ್ಲರಿಗೂ ಪತ್ರ ಬರೆದು, ಪದೇ ಪದೇ ಸಂಬಂಧಿತರಿಗೆ ಮನವಿ ಮಾಡಿಯೂ ಆಗಿತ್ತು. ರಸ್ತೆ ಮಾತ್ರಾ ಸರಿಯಾಗಲೇ ಇಲ್ಲ. ಈಗ ಸ್ವಲ್ಪ ಸ್ವಲ್ಪ ದುರಸ್ತಿಯಾಗುತ್ತಿದೆ. ಕಳೆದ ಬಾರಿ ಒಂಚೂರು ದುರಸ್ತಿ ಮಾಡಿದ್ದರೆ ,  ಈ ಬಾರಿ ಇನ್ನೊಂದು ಚೂರು ದುರಸ್ತಿಯಾಗುತ್ತಿದೆ. ಕಳೆದ ಬಾರಿ ಮಾಡಿರುವ ರಸ್ತೆ ಕಾಮಗಾರಿಯಲ್ಲಿ ಅಲ್ಲಲ್ಲಿ ಹೊಂಡ ಗುಂಡಿ...!. ತೇಪೆಯೂ ಈಗಿಲ್ಲ. ಮತ್ತೆ ಯಥಾ ಸ್ಥಿತಿಯ ರಸ್ತೆ. ಈ ಬಾರಿ ಹಾಗಾಗಬಾರದು ಎಂದು ಎಚ್ಚರಿಕೆ ವಹಿಸಲಾಯಿತು.  ಅದು ಸಾಮಾನ್ಯ ಜನರ ಕೆಲಸ ಅಲ್ಲದೇ ಇದ್ದರೂ ಅಂದು ಪ್ರಧಾನಿಗಳು ಹೇಳಿದ ಮಾತು ಇಲ್ಲಿ ಕಾರ್ಯರೂಪಕ್ಕೆ ಬಂದಿತ್ತು.  ಕಾಮಗಾರಿ ಮೇಲೆ ನಿಗಾ ಇರಿಸಲಾಗಿತ್ತು.

ಕಳೆದ 4 ವರ್ಷಗಳಿಂದ ಅಂದರೆ ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಸಾರ್ವಜನಿಕ ದೂರುಗಳಿಗೆ ತಕ್ಷಣ ಸ್ಪಂದನೆ ಬರುತ್ತದೆ, ಪ್ರತ್ರಿಕ್ರಿಯೆ ಬರುತ್ತದೆ. ಏನಿಲ್ಲ ಎಂದರೂ ದೂರುಗಳ ವಿಚಾರಣೆಯಾಗುತ್ತದೆ, ಸಮಸ್ಯೆ ಇತ್ಯರ್ಥಕ್ಕೆ ಕ್ರಮವಾಗುತ್ತದೆ. ಯಾವಾಗಲೋ ಶಿರಾಡಿ ಘಾಟಿ ಬಗ್ಗೆ ಆನ್ ಲೈನ್ ನಲ್ಲಿ ನೀಡಿರುವ ದೂರಿಗೆ  ಉತ್ತರ  ಬಂದದ್ದು ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ...!

ಹಾಗೆಯೇ ಈ ಗ್ರಾಮೀಣ ರಸ್ತೆಯ ಕಾಮಗಾರಿಯಲ್ಲಿ  ಯಾಕೋ ಸ್ವಲ್ಪ ಸಂದೇಹ ಬಂತು. ಇಲ್ಲಿ ಯಾರೊಬ್ಬರೂ ಮಾತನಾಡುವುದು ಕಂಡಿಲ್ಲ. ಅಧಿಕಾರಿಗಳು ನೋಡೋಣ ನೋಡೋಣ ಎಂದರು. ಆದರೆ ಕಾಲ ಮಿಂಚುವ ಮುನ್ನ ಎಚ್ಚೆತ್ತುಕೊಂಡಾಗ ಮಾಧ್ಯಮಗಳು ಸಹಕಾರ ನೀಡಿದವು. ಅದರ ಜೊತೆಗೇ ಪ್ರಧಾನಿಗಳ ಕಾರ್ಯಾಲಯಕ್ಕೂ ಮಾಹಿತಿ ನೀಡಲಾಯಿತು. ಆ ಬಳಿಕದ ಸಂಗತಿ ನಿಜಕ್ಕೂ ಅಚ್ಚರಿ ತಂದಿದೆ. ಹೀಗೂ ನಡೆಯುತ್ತಾ ಅಂತ ಅನಿಸಿತು...!.

ಸ್ಥಳೀಯ ಜನನಾಯಕರಿಂದ ಉತ್ತರ, ಪ್ರತಿಕ್ರಿಯೆ ಬಾರದೇ ಇದ್ದರೂ ಪ್ರಧಾನಿ ಕಾರ್ಯಾಲಯದಿಂದ ತಕ್ಷಣದ ಪ್ರತಿಕ್ರಿಯೆ ಬಂತು. ರಾಜ್ಯ ಸರಕಾರದಿಂದ ಪ್ರತಿಕ್ರಿಯೆ ಬಂತು. ಈ ಬಗ್ಗೆ ರಾಜ್ಯದ ಇಲಾಖೆಗೂ ಮಾಹಿತಿ ಬಂತು. ತನಿಖೆಗೆ ನಡೆಸಿ ಸಮಂಜಸ ಉತ್ತರ ನೀಡುವಂತೆಯೂ ಸೂಚನೆ ಬಂತು.
ಆಗ ಅನೇಕರು ಮಾತನಾಡಿದ್ದು...  ಕಾಮಗಾರಿ ಇಷ್ಟಾದರೂ ಆಗುತ್ತಲ್ಲ...!, ಹೀಗೇ ಮಾತನಾಡಿದರೆ ಮುಂದೆ ಯಾವುದೇ ಗುತ್ತಿಗೆದಾರ ಸಿಗಲಾರ..!, ಗುತ್ತಿಗೆದಾರನಿಗೆ ತೀರಾ ಬೇಸರವಾಗಿದೆ...!, ಇವರು ಯಾವಾಗಲೂ ಕಾಟ ಕೊಡುತ್ತಾರೆ...! ಎಂದು. ಯಾರೊಬ್ಬರೂ ಸರಿಯಾದ ಕೆಲಸ ಮಾಡಬೇಕು, ನಮ್ಮದೇ ಹಣದಲ್ಲಿ ನಡೆಯುವ ನಮ್ಮೂರಿನ ಕೆಲಸ ಚೆನ್ನಾಗಿ ಆಗಬೇಕೆಂದು ಮಾತನಾಡಿದ್ದು ಕೇಳಿಸಲಿಲ್ಲ..!. ಯಾವುದೇ ಪೂರ್ವಾಗ್ರಹ ಇಲ್ಲದೆ ಈ ಮಾತು ಆಡಿದ್ದು ಕೇಳಿಸಲಿಲ್ಲ...!. ಮುಂದೆ 5 ವರ್ಷಗಳ ಕಾಲ ಈ ರಸ್ತೆಯ ನಿರ್ವಹಣೆ ಇದೆ. ಹೀಗಾಗಿ ತೊಂದರೆ ಇಲ್ಲ ಎನ್ನುವುದು ಸಮಜಾಯಿಷಿಕೆ. ಸರಿಯಾದ ಕೆಲಸ ಆಗದೇ ಇದ್ದರೆ 5 ವರ್ಷದ ನಂತರ ಯಾರು ಎಂಬ ಪ್ರಶ್ನೆ ಈಗಲೂ ಉಳಿದುಕೊಂಡಿದೆ. ಊರಿನ ಕಾಮಗಾರಿ ಸರಿಯಾಗಿ ನಡೆಯಬೇಕು ಎಂಬ ಧ್ವನಿ ಅಡಗಿಸುವ ಪ್ರಯತ್ನ ನಡೆಯಿತು ಎನ್ನುವುದು ವಿಷಾದ.

ಇದಾದ ನಂತರ ಮತ್ತಷ್ಟು ಆಸಕ್ತಿ ಇದೆ...
ಪ್ರಧಾನಿ ಕಾರ್ಯಾಲಯಕ್ಕೆ ಉತ್ತರ ನೀಡಬೇಕಾದ ಅನಿವಾರ್ಯತೆ. ಹೀಗಾಗಿ ಕಾಮಗಾರಿಯಲ್ಲಿ ಯಾವುದೇ ಲೋಪ ಇಲ್ಲ ಎಂಬ ವರದಿ ಸಿದ್ಧ ಮಾಡಿ ಅದಕ್ಕೆ ಬೇಕಾದ ತಾಂತ್ರಿಕವಾದ ವರದಿಯೂ ಸಿದ್ದವಾಗಿ ಕಳುಹಿಸಿ ಕೊಡಲಾಗುತ್ತದೆ. ಅಲ್ಲಿಗೆ ಇಡೀ ಘಟನೆ ಮುಗಿಯುತ್ತದೆ. ಈ ಕಡೆ ಅಲ್ಲಲ್ಲಿ ಡಾಮರು ಏಳುವುದು, ಬಿರುಕುಗಳು ಕಂಡುಬರುತ್ತದೆ...!. 5 ವರ್ಷಗಳ ನಂತರ ಏನು ಎಂಬ ಪ್ರಶ್ನೆ ಮತ್ತೆ ಮತ್ತೆ ಕಾಡುತ್ತದೆ....!.

ಈ ದೇಶ ಬದಲಾಗಲು ಇಷ್ಟು ಸಾಕು....!

ಇಲ್ಲಿ ಪ್ರಾಮಾಣಿಕವಾದ ಗುತ್ತಿಗೆದಾರನಿಗೂ ತೀರಾ ಮುಜುಗರ ಹಾಗೂ ನೋವಾಗುತ್ತದೆ ನಿಜ.  ಆ ಪ್ರಾಮಾಣಿಕತೆಗೆ ಬೆಲೆ ಇಲ್ಲದಂತಾಗಲು ಕಾರಣ ಏನು ? ಪಾರದರ್ಶಕತೆ ಏಕೆ ಇಲ್ಲವಾಗಿದ್ದು ಏಕೆ ?   ಏಕೆ ಯಾವುದೋ ಜನನಾಯಕರ ಹಿಂದೆ ಅಲೆದಾಟ ಮಾಡುತ್ತಾರೆ ? ಎಂಬಿತ್ಯಾದಿ ಪ್ರಶ್ನೆಗಳಿಗೂ ಉತ್ತರ ಇಲ್ಲವಾಗುತ್ತದೆ.

ಇದೆಲ್ಲಾ ಆದ ಬಳಿಕ ಅನಿಸಿದ್ದು ಇಷ್ಟು,
ಈ ದೇಶದಲ್ಲಿ ಬದಲಾವಣೆ ಬೇಕು ನಿಜ. ಆದರೆ ಆ ಬದಲಾವಣೆಗೆ ನಾವು ಒಗ್ಗಿಕೊಳ್ಳಲು ತಯಾರಿಲ್ಲ. ಸರಕಾರ ಬದಲಾವಣೆಯಾಗಬೇಕು ಎನ್ನುತ್ತಾರೆ , ಆದರೆ ಆ ಬದಲಾವಣೆಯ ಜೊತೆಗೆ ಜನಪರವಾದ, ಜನರೊಂದಿಗೆ ಸಂವಹನ ಮಾಡುವುದಕ್ಕೆ , ನಿಜವಾದ ಸಮಸ್ಯೆ ಏನು ಎಂದು ತಿಳಿದುಕೊಳ್ಳುವುದಕ್ಕೆ ಮುಂದಾಗದೇ ಇರುವುದು ಇನ್ನೊಂದು ವಿಪರ್ಯಾಸ.
 ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಹೆಸರಿನ ಮೂಲಕ ಇಡೀ ದೇಶದಲ್ಲಿ ಬದಲಾವಣೆಯಾಗಬೇಕಾದರೆ ಅವರ ಆಶಯದಂತೆಯೇ ಗ್ರಾಮೀಣ ಭಾಗದಲ್ಲಿಯೂ ಕನಿಷ್ಟ ಶೇ.50 ರಷ್ಟಾದರೂ ಬದಲಾಗುವ ಮನಸ್ಥಿತಿ ಆ ಬದಲಾವಣೆ ಬಯಸುವ ಮಂದಿಯಲ್ಲೂ ಇರಬೇಕು. ಆಧುನಿಕ ವ್ಯವಸ್ಥೆಗೆ ಒಗ್ಗಿಕೊಳ್ಳುವ ಮನಸ್ಥಿತಿ ಬೇಕು. ಗ್ರಾಮಿಣ ಭಾಗದ ಅಭಿವೃದ್ಧಿಯ, ಜನರ ಸಮಸ್ಯೆಗೆ ಸ್ಪಂದಿಸುವ ಮನಸ್ಥಿತಿ ಇರಬೇಕು. ಕನಿಷ್ಟ , ಸಮಸ್ಯೆಯನ್ನು ಹೊತ್ತು ತರುವ ಜನರಿಗೆ ಸ್ಪಂದಿಸುವ, ಪ್ರತಿಕ್ರಿಯೆ ನೀಡುವ ಮನಸ್ಥಿತಿಯಾದರೂ ಇರಬೇಕು. ಅಲ್ಲದೇ ಇದ್ದರೆ ಆ ಹೆಸರಿನ ಮೂಲಕ ನಡೆಯುವ ಬದಲಾವಣೆಯೂ ಫಲ ನೀಡದು. ಇನ್ನೊಮ್ಮೆ ಇಡೀ ಜನರಿಗೆ ಭ್ರಮನಿರಸನವಷ್ಟೇ....!.





ಹೀಗಾದರೂ, ಇಷ್ಟಾದರೂ...

 "ಈ ದೇಶ ಬದಲಾಗುತ್ತದೆ, ಬದಲಾಗಲಿದೆ " ಎನ್ನುವ ಭರವಸೆ ಯಾವತ್ತೂ ಕಳೆದುಕೊಳ್ಳಬಾರದು ಎನ್ನುವ ಭಾಷಣ ಮತ್ತೆ ಮತ್ತೆ ಕೇಳುತ್ತಿದೆ....!. ಅಸಹಾಯಕತೆ ಇಲ್ಲ. ನೋವೂ ಇಲ್ಲ....
ಈಗಲೂ ಭರವಸೆ ಇದೆ..  ಕಾದು ನೋಡಬೇಕು...!.





2 ಕಾಮೆಂಟ್‌ಗಳು:

lokesh ಹೇಳಿದರು...

ಒಳ್ಳೆಯ ಬರವಣಿಗೆ .... ದೇಶಾ ಬದಲಾಗಬೇಕು ��

Dhananjaya Wagle ಹೇಳಿದರು...

ವ್ಯಕ್ತಿ ವ್ಯಕ್ತಿ ಗಳಬದಲಾವಣೆಯಿಂದ ದೇಶಬದಲಾದೀತು