28 ಜನವರಿ 2018

ಉದ್ಯೋಗಗಳ ಹುಡುಕಾಟದ ಹುಡುಗರಿಗೆ ಕೃಷಿ ಹುಡುಗಾಟ..!




ಕೃಷಿ ಲಾಭದಾಯಕ ಅಲ್ಲ ಅಂತ ನಾನು ಓದಿದ್ದೆ. ಅನೇಕ ಹಿರಿಯರೂ ಹೇಳುವುದನ್ನು  ಕೇಳಿದ್ದೆ. ಆದರೆ ಈಗ ತಿಳಿಯಿತು, ಕೃಷಿಯೂ ಒಂದು ಲಾಭದಾಯಕ, ಅದಕ್ಕಿಂತಲೂ ಹೆಚ್ಚು ಖುಷಿ ಕೊಡುತ್ತದೆ, ನೆಮ್ಮದಿ ನೀಡುತ್ತದೆ ಎನ್ನುವುದು  ಅರಿಯುವ ಹೊತ್ತು ತಡವಾಯಿತು ಎಂದು ಶ್ಯಾಮ ಪ್ರಕಾಶ್ ಹೇಳುವಾಗ ಇಡೀ ಕೃಷಿ ಬದುಕಿನ , ಕೃಷಿ ಕ್ಷೇತ್ರದ ಕತೆ ತೆರೆದಿಟ್ಟಿತು.
 ಒಂದೇ ಒಂದು ಕಡೆ ಕೃಷಿಯೂ ಒಂದು ಲಾಭದಾಯಕ ಎನ್ನುವುದನ್ನು  ನಿಜಾರ್ಥಲ್ಲಿ ತಿಳಿಸುವ ಕೆಲಸ ಆಗದೇ ಇರುವುದು ಕಂಡಿತು.
ಇದೇ ಕಾರಣದಿಂದ ಬೇಸಾಯ ಲಾಭದಾಯಕ ಅಲ್ಲ ಎನ್ನುವ ತೀರ್ಮಾನಕ್ಕೆ ಬಂದಿರುವ ರೈತರು ಪರ್ಯಾಯ ಉದ್ಯೋಗಗಳ ಹುಡುಕಾಟದಲ್ಲಿದ್ದಾರೆ. ಆದರೆ ಕೆಲವರು ಬೇಸಾಯದಲ್ಲೇ ಬದುಕು ರೂಪಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಅಂತಹವರು ಕೆಲವೇ ಕೆಲವು ಮಂದಿ. ಅವರೂ ಈಗ ಮಾದರಿಯಾಗುತ್ತಿದ್ದಾರೆ. ಈ ಯಶೋಗಾಥೆಗಳ ಕಡೆಗೆ ಬೆಳಕು ಏಕೆ ಚೆಲ್ಲಲಾಗುತ್ತಿಲ್ಲ. ರೈತರ ಯಶೋಗಾಥೆ ಧಾರಾವಾಹಿಗಳು ಏಕೆ ಆಗಬಾರದು ? ಧಾರಾವಾಹಿಗಳ ರೂಪದಲ್ಲಿ ರೈತರ ಯಶೋಗಾಥೆಗಳನ್ನೇ ತೋರಿಸಿ ಅವರಲ್ಲಿ ಸ್ಥೈರ್ಯ ತುಂಬಬಾರದು ಎಂಬ ಪ್ರಶ್ನೆ ಇದೆ. ಏಕೆಂದರೆ ಇಂದಿಗೂ ಉದ್ಯೋಗ ಬಿಟ್ಟು ಕೃಷಿ ಮಾಡುವ ನೂರಾರು ಯುವಕರು ಇದ್ದಾರೆ, ಇವರಿಗೆ ಸ್ಥೈರ್ಯ ತುಂಬುವ ಕೆಲಸವಾಗಬೇಕಿದೆ. ಏಕೆಂದರೆ ರೈತರು ಪತ್ರಿಕೆಗಳಿಂದ, ಟಿ.ವಿ. ವಾಹಿನಿಗಳಿಂದ  ನಿರೀಕ್ಷಿಸುವುದು ಕೂಡಾ ಇದೇ ಸಂಗತಿಯನ್ನು. ಯುವಕರಿಗೆ ಧೈರ್ಯ ಕೊಡಬಲ್ಲ ಅನೇಕ ಘಟನೆಗಳು ಇವೆ ಅಂತಹವುಗಳು ಸ್ಫೂರ್ತಿಯಾಗಬೇಕಿದೆ.

ಹಾವೇರಿ ಜಿಲ್ಲೆ ಹಾನಗಲ್ಲ ತಾಲೂಕಿನ ಕಾಮನಹಳ್ಳಿಯ ಯುವ ರೈತ ಮುತ್ತಣ್ಣ ಅವರೂ ಒಬ್ಬರು. ಇವರ ಕೃಷಿ ಯಶೋಗಾಥೆ ಎಲ್ಲಾ ರೈತರಿಗೂ ಮಾದರಿ. ಕುರಿ ಕಾಯುತ್ತಾ ನೂರಾರು ಕಿಮೀ ಸುತ್ತುತ್ತಿದ್ದ ಇವರು ಕುರಿ ಮಾರಾಟ ಮಾಡುತ್ತಾ ಉಳಿತಾಯ ಮಾಡುತ್ತಾ ಬಂಜರು ಭೂಮಿಯನ್ನು ಖರೀದಿಸಿದರು. ಬಳಿಕ ಈ ಭೂಮಿಯಲ್ಲಿ ಗೋವಿನಜೋಳ, ಹಲಸಂದಿ, ರಾಗಿ, ಉದ್ದು ಮುಂತಾದ ಬೆಳೆಗಳನ್ನು ಬೆಳೆದರು. ಧೈರ್ಯ ತಂದುಕೊಂಡರು. ಬಂಜರು ಭೂಮಿ ಹದವಾದ ಬಳಿಕ ಮಾವಿನ ಕೃಷಿ ಮಾಡಿದರು. ಅಲ್ಲಿಂದ ತನ್ನ ಆದಾಯವನ್ನು ಹೆಚ್ಚಿಸಿಕೊಳ್ಳುತ್ತಾ ಸಾಗಿದರು. ಬಂಜರು ಭೂಮಿ ಬಂಗಾರದ ಭೂಮಿಯಾಯಿತು. ಅಲ್ಲಿಂದ ಕೃಷಿಯನ್ನು ಬದಲಾಯಿಸುತ್ತಾ, ಇದ್ದ ಕೃಷಿ ಬೆಳೆಸಿಕೊಳ್ಳುತ್ತಾ ಸಾಗಿದ ಮುತ್ತಣ್ಣ ಇಂದು ಲಕ್ಷ ಸಂಪಾದನೆ ಮಾಡುತ್ತಾರೆ. ಅಂದರೆ ಕುರಿ ಕಾಯುವಲ್ಲಿಂದ ತನ್ನ ಧೈರ್ಯ ಹಾಗೂ ಪ್ರೋತ್ಸಾಹದಿಂದ ಯಶಸ್ಸು ಕಂಡರು.
28 ವರ್ಷದ ಸಾಫ್ಟ್‍ವೇರ್ ಉದ್ಯೋಗಿ ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ನಂದಿಗುಡಿ ಗ್ರಾಮದ ಸೌರಭ, ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಸತ್ತಿಗೇರಿ ಗ್ರಾಮದ ಹೊಲವೊಂದನ್ನು ಬಾಡಿಗೆಗೆ ಪಡೆದು ಅಲ್ಲಿ ಸಾವಯವ ಕೃಷಿಯಲ್ಲಿ ತೊಡಗಿಕೊಂಡು ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಅಂದು ಎಳವೆಯಲ್ಲಿ ಹಿರಿಯರ ಜೊತೆ ಹೊಲದಲ್ಲಿ ಓಡಾಡಿದ ನೆನಪು ತ್ತೆ ಮಣ್ಣಿನ ಕಡೆಗೆ ಸೆಳೆಯಿತು. ಹಣಕ್ಕಾಗಿ ಕೃಷಿಯಲ್ಲ, ಬದುಕಿಗಾಗಿ ಕೃಷಿ ಎನ್ನುವುದನ್ನು ರೈತರಿಗೆ ಮನದಟ್ಟು ಮಾಡಬೇಕೆಂದು ನಿಶ್ಚಿಯಿಸಿಯೇ ಕೃಷಿ ಆರಂಭಿಸಿ ಯಶಸ್ಸು ಕಂಡರು.

ಕೃಷಿಯಿಂದ ಯುವ ಸಮೂಹ ವಿಮುಖವಾಗುತ್ತಿದೆ ಎನ್ನುವ ಸಾರ್ವತ್ರಿಕ ಅಭಿಪ್ರಾಯ ಅನೇಕ ಬಾರಿ ಸುಳ್ಳೂ ಆದದ್ದಿದೆ. ಬಹುತೇಕ ಸಂದರ್ಭ ಕೃಷಿಯೇ ಕಷ್ಟ ಎನ್ನುವ ಸಾರ್ವತ್ರಿಕ ಅಭಿಪ್ರಾಯವೇ ಉದ್ಯೋಗದ ಹುಡುಕಾಟದಲ್ಲಿ ನಮ್ಮೂರಿನ ಹುಡುಗರಿಗೆ ಕೃಷಿ ಉದ್ಯೋಗವೇ ಅಲ್ಲ ಎನಿಸಿಬಿಡುತ್ತದೆ. ಇತ್ತೀಚೆಗೆ ಕೃಷಿ ಕಡೆಗೆ ಆಸಕ್ತಿ ಹೆಚ್ಚಾಗುತ್ತಿದೆ. ಮೊನ್ನೆ ಮೊನ್ನೆ ನಡೆಸಿದ ಸಮೀಕ್ಷೆ ಒಂದರಲ್ಲಿ ಸುಮಾರು 1200 ಮಂದಿ ಸಾಫ್ಟ್ ವೇರ್ ಉದ್ಯೋಗ ಬಿಟ್ಟು ಕೃಷಿ ಕಡೆಗೆ ಬಂದವರಿದ್ದಾರೆ. ಇನ್ನೂ ಹಲವಾರು ಆಸಕ್ತರಿದ್ದಾರೆ. ಓದಿದ ಅನೇಕರು ಈಗಲೂ ಕೃಷಿ ಕಡೆಗೆ ಆಸಕ್ತರಾಗಿದ್ದಾರೆ. ಇದು ಕೃಷಿಗೆ ಮತ್ತೊಂದು ಮೆಟ್ಟಿಲಾಗುತ್ತಿದೆ. ಈಗ ಕೃಷಿ ಒಂದು ಉದ್ಯೋಗ, ಖುಷಿ ನೀಡುವ ಕಾಯಕ ಎಂದು ಮನವರಿಕೆ ಮಾಡುವ ಕೆಲಸ ಆಗಬೇಕಿದೆ. ಇದಕ್ಕಾಗಿ ಶ್ಯಾಮ ಪ್ರಕಾಶ್ ಹೇಳುವ ಮಾತು ಮತ್ತೆ ಮತ್ತೆ ನೆನಪಾಗುತ್ತದೆ.

( ಹೊಸದಿಗಂತ - ಮಣ್ಣಿಗೆ ಮೆಟ್ಟಿಲು )

ಕಾಮೆಂಟ್‌ಗಳಿಲ್ಲ: