09 ಅಕ್ಟೋಬರ್ 2021

ಆರ್‌ ಎಸ್‌ ಎಸ್‌ ಎನ್ನುವ ವ್ಯಕ್ತಿತ್ವ ವಿಕಸನ ಕೇಂದ್ರ | ಅದೊಂದು ಪಾಸಿಟಿವ್‌ ಕೇಂದ್ರ |


 ಕಳೆದ ಒಂದು ವಾರದಿಂದ ಪತ್ರಿಕೆ ತೆರೆದರೆ ಅಲ್ಲಲ್ಲಿ ಆರ್‌ ಎಸ್‌ ಎಸ್‌ ಬಗ್ಗೆ ಹೊಗಳಿಕೆ ಹಾಗೂ ಟೀಕೆಗಳು ಕಾಣುತ್ತಿವೆ. ಆರ್‌ ಎಸ್‌ ಎಸ್‌ ಒಳ ಹೋದರೆ ತಿಳಿಯುವುದು ಅದೊಂದು ವ್ಯಕ್ತಿತ್ವ ವಿಕಸನದ ಕೇಂದ್ರ. ಅದೊಂದು ಸಮಾಜಕ್ಕೂ, ವ್ಯಕ್ತಿಗೂ ಪಾಸಿಟಿವ್‌ ಶಕ್ತಿ ನೀಡುವ ಸಂಘಟನೆ. 

ಯಾವತ್ತೂ ಒಂದು ಸಂಘಟನೆಯ, ಒಂದು ವ್ಯಕ್ತಿಯ ಬಗ್ಗೆ ಯಾವುದೇ ಕಾರಣ ಇಲ್ಲದೆ  ಟೀಕೆ ಬರುವುದು  ಎರಡು ಕಾರಣಗಳಿಗೆ, ಒಂದೋ ಆ ಸಂಘಟನೆ ಅಥವಾ ವ್ಯಕ್ತಿ ಬಲಿಷ್ಟವಾಗಿ ಬೆಳೆಯುತ್ತಿದ್ದಾನೆ ಅಥವಾ ಬೆಳೆದಿದ್ದಾನೆ ಎಂದರ್ಥ. ಇದು  ದ್ವೇಷ ಭಾವನೆ ಕಾರಣ, ಈ ಕಾರಣದಿಂದ ಅನಗತ್ಯವಾಗಿ ಹಾಗೂ ಯಾವುದೇ ಕಾರಣ ಇಲ್ಲದೆ, ರಚನಾತ್ಮಕವಲ್ಲದೆಯೂ ಟೀಕೆಗಳು ಬರುತ್ತವೆ. ಆರ್‌ ಎಸ್‌ ಎಸ್‌ ಗೆ ಅಂತಹ ಯಾವ ಟೀಕೆಗಳ, ಹೊಗಳಿಕೆಗಳ ಅಗತ್ಯವೂ ಇಲ್ಲ. ಆ ಚಿಂತನೆಗಳು ಹಾಗೆಯೇ. ಯಾವ ಟೀಕೆಗೂ, ಯಾವ ತೆಗಳಿಕೆಗೂ ಬಗ್ಗೆಯೇ ಒಂದು ಸಂಘಟನೆ ಇಷ್ಟು ವರ್ಷಗಳ ಕಾಲ ಬೆಳೆದಿದೆ ಎಂದರೆ ಅದು ನಿರ್ಮಿಸಿದ ಸೇತುವೆ ಅಂತಹದ್ದೇ. ಯಾವ ಫಲಾಪೇಕ್ಷೆಯೂ ಇಲ್ಲದೆಯೇ ಅನೇಕರು ದುಡಿದಿದ್ದಾರೆ, ಬೆವರು ಹರಿಸಿದ್ದಾರೆ, ಮನೆ ಮಠ ತೊರೆದಿದ್ದಾರೆ. ಅನೇಕರು ಇದೇ ಸಂಘಟನೆಯಲ್ಲಿ  ದುಡಿಯುತ್ತಾ ಸ್ವಂತದ್ದೆಲ್ಲವೂ ಕಳೆದುಕೊಂಡಿದ್ದಾರೆ. ಹೀಗಾಗಿ ಈ ಸಂಘಟನೆಯ ಹಿಂದೆ ಅಪಾರ ಪರಿಶ್ರಮ ಇದೆ.

 ಟೀಕೆಗಳಿಗೆ, ನಮ್ಮನ್ನು  ನಿರ್ಲಕ್ಷ್ಯ ಮಾಡುವವರಿಗೆ  ಏನು ಮಾಡಬೇಕು ಎಂದು ಸಂಘದ ಹಿರಿಯರು ಅಂದೇ ಹೇಳಿದ್ದರು, ಯಾವುದೇ ಸುಳ್ಳು ಟೀಕೆಗಳಿಗೆ, ಅಪಪ್ರಚಾರಗಳಿಗೆ ಉತ್ತರ ನೀಡಬಾರದು. ಏಕೆಂದರೆ ಅಂತಹ ಟೀಕೆಗಳು ನಿಮ್ಮ ಸಾಧನೆಗಳನ್ನು ಅಡ್ಡಿ ಮಾಡಲೇ ಇರುವಂತಹದ್ದು. ಈಗ ನೀವು ಮಾಡಬೇಕಾದ್ದು ಎರಡು ಹೆಜ್ಜೆ ಮುಂದಿನ ಕೆಲಸ. ಇನ್ನಷ್ಟು ಕೆಲಸ ಮಾಡಿ ಅಷ್ಟೇ ಸಾಕು. ಟೀಕೆ ಮಾಡುವವನು ನಮಗೆ ಇನ್ನಷ್ಟು ಸಹಾಯ ಮಾಡುತ್ತಾನೆ, ಆತ ನಮ್ಮ ಹುಳುಕು ತೋರಿಸುವ ಕೆಲಸ ಮಾಡಲಿ. ನಾವು ಅದನ್ನೆಲ್ಲಾ ಸರಿ ಮಾಡೋಣ. ನಾವು ಇನ್ನಷ್ಟು ಪರಿಪೂರ್ಣ ವ್ಯಕ್ತಿಯಾಗೋಣ ಎನ್ನುವುದನ್ನು  ನಾನು ಕೇಳಿದ್ದೇನೆ. ನಮ್ಮನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದರೆ ನಾವು ಇನ್ನೂ ಪರಿಪೂರ್ಣರಾಗಬೇಕಿದೆ ಎಂದರ್ಥ, ಅದಕ್ಕಾಗಿ ಇನ್ನಷ್ಟು ಸಾಧನೆ ಮಾಡಿ ತೋರಿಸಬೇಕು. ಅದನ್ನು ಸದ್ದಿಲ್ಲದೆ ಮಾಡಿ, ಸಂಘಟನೆ ಮಾಡಿ ಎಂದಿದ್ದರು. ಆಗ ಇಡೀ ಸಮಾಜವೇ ಗಮನಿಸುತ್ತದೆ, ನಿಮ್ಮ ಶಕ್ತಿಯ , ಶ್ರಮದ ಪರಿಚಯವಾಗುತ್ತದೆ. ವಿರೋಧಿಗಳು ಇರಲಿ, ಮೌನವಾಗಿ ಎದುರಿಸಿ ಎಂದು ಧೈರ್ಯ ತುಂಬುವ, ಮನಸ್ಸಿಗೆ ಶಕ್ತಿ ನೀಡುವ, ಮನೋಬಲದ, ಆತ್ಮವಿಶ್ವಾಸ ಮಾತುಗಳು ಅಲ್ಲಿ ಸಿಗುತ್ತಿತ್ತು. ಈ ಕಾರಣಗಳಿಂದಲೇ ಸಂಘ, ನಿಜವಾದ ಸಂಘದ ಕಾರ್ಯಕರ್ತ ಎಲ್ಲಾ ಟೀಕೆಗಳಿಗೂ ಕಾರ್ಯದ ಮೂಲಕವೇ ಉತ್ತರಿಸುತ್ತಾರೆ.  ಹಾಗಂತ ಸುಳ್ಳುಗಳನ್ನು ಹೇಳಬೇಡಿ, ಅನ್ಯಾಯ, ಅನಾಚಾರ ಮಾಡಬೇಡಿ, ಸತ್ಯದ ದಾರಿಯಲ್ಲಿ  ನಡೆಯಿರಿ, ಗೆಲವು ನಮ್ಮದೇ, ಅದು ನಿಶ್ಚಿತ ಎಂದು ಹೇಳುತ್ತಿದ್ದರು.ಸತ್ಯ ಯಾವತ್ತೂ ಸೋಲುವುದಿಲ್ಲ, ಸುಳ್ಳುಗಳು ಹೆಚ್ಚು ಕಾಲ ಬದುಕುವುದಿಲ್ಲ, ಹೀಗಾಗಿ ಚಿಂತೆ ಬೇಡವೇ ಎಂದು ಭರವಸೆಯ ಮಾತುಗಳು ಸಂಘದಲ್ಲಿತ್ತು.  ಸಂಘದ ಒಂದು ಗಂಟೆಯ ಬೈಠಕ್‌ ಎಂದರೆ, ಸಂಘದ ಅಭ್ಯಾಸ ವರ್ಗ ಎಂದರೆ, ಸಂಘದ ಒಂದು ಗಂಟೆಯ ಚಟುವಟಿಕೆ ಎಂದರೆ ಅಲ್ಲಿ ರೀಫ್ರೆಶ್‌ ಮೆಂಟ್‌ ಖಚಿತ. ಆರಂಭದ ಒಂದು ಹಾಡು ಇಡೀ ದಿನ ಲೈವ್‌ ಇಡುತ್ತದೆ.  ಇಂತಹದ್ದರಿಂದಲೇ ಸಂಘ ಬೆಳೆದಿದೆ.

ಇಂದು ಯಾವುದೇ ಸಂಘಟನೆಗಳನ್ನು ಗಮನಿಸಿದರೂ ಒಂದೆರಡು ವರ್ಷದಲ್ಲಿ ಯಾವುದೋ ಇಗೋಗಳಿಗೆ ಬಲಿಯಾಗುತ್ತವೆ. ಹುಟ್ಟಿ ಸಾಯುತ್ತದೆ. ಕಾರಣ ಆ ಸಂಘಟನೆಯಲ್ಲಿ ಒಂದೇ ಮನಸ್ಥಿತಿಯಲ್ಲಿ ಕೆಲಸ ಮಾಡುವ ಮಂದಿ ಕಾಣದಾಗುತ್ತಾರೆ. ಈ ಎಲ್ಲಾ ಅಡೆ ತಡೆಗಳನ್ನೂ ದಾಟಿ ಈ ಸಂಘವು ಇಷ್ಟು ವರ್ಷಗಳ ಕಾಲ ಬೆಳೆದಿದೆ. ಇದಕ್ಕೆ ಮೂಲ ಕಾರಣ, ಆರಂಭದ ಆ ಚಿಂತನೆಗಳು. ಈ ಸಂಘಟನೆ ಯಾವತ್ತೂ ವ್ಯಕ್ತಿಯ ಹಿಂದೆ ಹೋಗಿ ಬೆಳೆದಿಲ್ಲ. ವ್ಯಕ್ತಿ ಶಾಶ್ವತವಲ್ಲ ಎಂದು ಇಂದಿಗೂ ಸಾರುವ ಆ ಚಿಂತನೆಗಳು ಸಾರ್ವಕಾಲಿಕ ಸತ್ಯ. ವ್ಯಕ್ತಿಯ ಹಿಂದೆ ಬೆಳೆಯುವ ಸಂಘಟನೆಗಳು ಶಾಶ್ವತವೂ ಅಲ್ಲ ಎನ್ನುವುದೂ ಸತ್ಯ. ಏಕೆಂದರೆ ಆರ್‌ ಎಸ್‌ ಎಸ್‌ ನಂತಹ ಇನ್ನೊಂದು ಸಂಘಟನೆ ಈ ದೇಶಲ್ಲಿ ಇನ್ನೊಂದು ಬೆಳೆದಿಲ್ಲ, ಬೆಳೆಯಲು ಸಾಧ್ಯವೂ ಆಗಿಲ್ಲ.  

ಇಲ್ಲಿ ಭಗವಾಧ್ವಜವೇ ಗುರು, ಅದುವೇ ಸಾರ್ವಕಾಲಿಕ ನಾಯಕ. ಆ ತತ್ತ್ವದ ಅಡಿಯಲ್ಲಿಯೇ ಬೆಳೆದ ಸಂಘವು  ಸಮಾಜ, ಸೇವೆ, ಸಹಬಾಳ್ವೆ, ಸಮಾನತೆ, ವ್ಯಕ್ತಿತ್ವ ವಿಕಸನ , ಆತ್ಮಸ್ಥೈರ್ಯ, ಪೂರ್ವ ಚಿಂತನೆ, ಪ್ಲಾನ್‌ , ವೈಚಾರಿಕ ಚಿಂತನೆ ಇತ್ಯಾದಿಗಳೇ ಈ ಸಂಘಟನೆ ಬೆಳೆಯಲು ಪ್ರಮುಖ ಕಾರಣ. 

ಆರ್‌ ಎಸ್‌ ಎಸ್‌ ಶಾಖೆಗಳಿಗೆ ಹೋದಾಗಲೇ ಅಲ್ಲಿ ಇರುವ ವೈಚಾರಿಕ ಚಿಂತನೆ, ವ್ಯಕ್ತಿತ್ವ ವಿಕಸನದ ಚಿಂತನೆಗಳು ಕಾಣುತ್ತವೆ. ಎಲ್ಲರೂ ಜೊತೆಯಾಗುತ್ತಾ ಪರಸ್ಪರ ಸಹಕಾರಗಳು ವ್ಯಕ್ತಿಗೆ ಮಾನಸಿಕ ಧೈರ್ಯ ಹಾಗೂ ಶಕ್ತಿ ನೀಡುತ್ತವೆ. ಅನೇಕರು ಜಾತಿ ಆಧಾರಿತ ವ್ಯವಸ್ಥೆ ಎಂದು ಟೀಕಿಸುತ್ತಾರೆ, ಅಂತಹ ಜಾತಿಯ ವ್ಯವಸ್ಥೆ ಅದರೊಳಗೆ ಕಾಣುವುದಿಲ್ಲ. ಸಹಜವಾಗಿಯೇ ಚಿಂತನೆಯ ಆಧಾರಿತವಾಗಿ ಬೆಳೆಯುವ ಕಾರಣದಿಂದ ಚಿಂತಕರಿಂದಲೇ ಸಂಘಟನೆ ಮುಂದುವರಿಯುತ್ತದೆ. ಹಾಗಾಗಿ ಚಿಂತಕರ ಕೂಟ ಹೆಚ್ಚು ಗಟ್ಟಿಯಾಗುತ್ತಾ ಸಾಗುತ್ತದೆ ಇಲ್ಲಿ.

ಆರ್‌ ಎಸ್‌ ಎಸ್‌ ವ್ಯಕ್ತಿ ನಿರ್ಮಾಣದ ಸಂಘಟನೆ. ಇಲ್ಲಿಗೆ ಯಾರೇ, ಯಾವುದೇ ವ್ಯಕ್ತಿ ಬರಲಿ. ಅವನಿಗೆ ಬೆಳೆಯುವ ಹಾಗೂ ಕಲಿಯುವ ಆಸಕ್ತಿ ಇದ್ದರೆ ಆತ ಸಹಜವಾಗಿಯೇ ಬೆಳೆಯುತ್ತಾ ಸಾಗುತ್ತಾನೆ, ಅನುಭವದ ಮಂಟಪವನ್ನು ಕಟ್ಟಿಕೊಳ್ಳುತ್ತಾನೆ. ವ್ಯಕ್ತಿತ್ವ ವಿಕಾಸಗೊಳ್ಳುತ್ತದೆ. ನನ್ನ ಮನೆ, ನನ್ನ ಕುಟುಂಬ,ನನ್ನ ಗ್ರಾಮ, ನನ್ನ ರಾಜ್ಯ, ನನ್ನ ದೇಶದವರೆಗೆ ಚಿಂತನೆಗಳು ವಿಸ್ತಾರವಾಗುತ್ತದೆ. ಯಾರಿಗೇ ನೋವಾದರೂ ತಮಗೇ ನೋವಾದಷ್ಟು ಆ ಚಿಂತನೆಗಳು ಇದೆ. ನನ್ನ ಗ್ರಾಮ ಬೆಳವಣಿಗೆಗೆ ಏನೆಲ್ಲಾ ಮಾಡಬೇಕು ಎಂಬುದೂ ಕಲ್ಪನೆಯ ಆಧಾರದಲ್ಲಿ ಬೆಳೆಯುತ್ತದೆ.

ನನ್ನ ದೇಶದ ಕಲ್ಪನೆಯನ್ನು ನನ್ನೊಳಗೇ ಬಿತ್ತುವ ಆರ್‌ ಎಸ್‌ ಎಸ್‌ ಮೊದಲು ಕಲಿಸುವುದು ಯಾವುದೇ ಒಂದು ನಾಯಕತ್ವ ವಹಿಸುವಾಗ ಅದರ ಕನಸುಗಳನ್ನು. ನಾನು ಆ ಸಂಘಟನೆಯ ನಾಯಕತ್ವ ವಹಿಸಿಕೊಂಡರೆ ಏನು ಮಾಡಬೇಕು ಹಾಗೂ ಮಾಡಬಹುದು  ಎನ್ನುವುದನ್ನು  ಆರ್‌ ಎಸ್‌ ಎಸ್‌ ಮೂಲ ಚಿಂತನೆ ತಿಳಿಸಿಕೊಡುತ್ತದೆ. ಹೀಗಾಗಿಯೇ ಅಲ್ಲಿ ನಾಯಕರಿಗೆ ಕೊರತೆ ಇಲ್ಲ. ಪ್ರತೀ ವ್ಯಕ್ತಿಯೂ ಯಾವಾಗ ಬೇಕಾದರೂ, ಯಾವ ಸಂಘಟನೆಯಲ್ಲೂ ನಾಯಕತ್ವ ವಹಿಸಿಕೊಂಡರೆ ಅವರು ಸಮರ್ಥವಾಗಿ ವಿಚಾರ ಮಂಡಿಸಬಲ್ಲರು, ಮಾತನಾಡಬಲ್ಲರು ಕೂಡಾ. ಇದಕ್ಕಾಗಿಯೇ ಆರ್‌ ಎಸ್‌ ಎಸ್‌ ವ್ಯಕ್ತಿ ನಿರ್ಮಾಣದ ಕೇಂದ್ರ ಮಾತ್ರವಲ್ಲ ವ್ಯಕ್ತಿತ್ವ ರೂಪಿಸುವ ಕೇಂದ್ರ, ವ್ಯಕ್ತಿತ್ವ ವಿಕಸನದ ಕೇಂದ್ರ.

ಅನೇಕ ವರ್ಷಗಳ ಕಾಲ ವ್ಯಕ್ತಿತ್ವ ವಿಕಸನ, ವ್ಯಕ್ತಿ ನಿರ್ಮಾಣ ಮಾಡಿರುವ ಆರ್‌ ಎಸ್‌ ಎಸ್‌ ಇಂದು ಸಮಾಜದ ಎಲ್ಲಾ ಕ್ಷೇತ್ರಗಳಲ್ಲೂ , ಎಲ್ಲಾ ವಿಭಾಗದಲ್ಲೂ, ಎಲ್ಲಾ ಆಯಾಮದಲ್ಲೂ  ಬೆಳೆದಿದೆ. ಹೀಗಾಗಿ ಅದೊಂದು ಶಕ್ತಿ. 

ಅಂತಹ ಸಂಘಟನೆಯಲ್ಲಿ ಪ್ರಚಾರಕ್‌ ಆಗಿ ಸೇವೆ ಮಾಡುವ ಹಂತಕ್ಕೆ ತಲುಪಿ ನಂತರ ನನ್ನ ಅನಿವಾರ್ಯತೆಯಿಂದ ಹಿಂದೆ ಸರಿದ ಒಂದು  ಸಂದರ್ಭದಲ್ಲಿ ಸಂಘಟನೆಯ  ಹಿರಿಯರೊಬ್ಬರು ಅಂದು  ಹೇಳಿದ್ದರು, " ನೋಡು ಮಾರಾಯ, ನೀನು ಎಲ್ಲಾದರೂ ಇರು, ಒಮ್ಮೆ ಧ್ವಜ ಪ್ರಣಾಮ್‌ ಮಾಡಿದ ಮೇಲೆ ನೀನು ಸಂಘದ ಸ್ವಯಂ ಸೇವಕ. ನೀನು ಯಾವ ಕ್ಷೇತ್ರದಲ್ಲಿ ಇದ್ದಿಯೋ ಅಲ್ಲಿಯೇ ಕೆಲಸ ಮಾಡು, ಆದರೆ ಅದು ದೇಶಕ್ಕೆ, ನಿನ್ನ ಗ್ರಾಮದ ಅಭಿವೃದ್ಧಿ ದೃಷ್ಟಿ ಇರಲಿ ಅಷ್ಟೇ " ಎಂದು  ಎರಡು ಬಾರಿ ಹೇಳಿದ್ದರು. 

 ಇಂದು ಈ ಮೇಲಿನ ಸಾಲುಗಳೇ  ಹೆಚ್ಚು ಚರ್ಚೆಯಾಗುತ್ತಿರುವುದು. ಅನೇಕ ಅಧಿಕಾರಿಗಳು ಸಂಘಿಯ ಹಾಗೆ ಕಾಣುವುದು, ಅನೇಕ ಪತ್ರಕರ್ತರು ಬಲಪಂಥೀಯರ ಹಾಗೆ ಕಾಣುವುದು, ಅನೇಕ ಜನರು ಆರ್‌ ಎಸ್‌ ಎಸ್‌ ಎಂದು ಕಾಣುವುದು  ಇದೇ ಕಾರಣಕ್ಕೆ. ಹಾಗೆಂದು ಆ ಪಾಸಿಟಿವಿಟಿಯನ್ನು  ಬೆಳೆಸುವುದು ತಪ್ಪೋ ? ಸರಿಯೋ ಕಾಲದ ಚರ್ಚೆ. ಆದರೆ ಧ್ವಜ ಪ್ರಣಾಮ್‌ ಮಾಡಿದ ವ್ಯಕ್ತಿ, ತನಗೆ ಪಾಸಿಟಿವ್‌ ಚಿಂತನೆಗಳನ್ನು ಬಿತ್ತಿದ ಸಂಘಟನೆಯ ಬಗ್ಗೆ ಮಾತನಾಡುವುದು , ಅದರ ಪರವಾಗಿ ಒಂದು ಕ್ಷಣ ಯೋಚಿಸುವುದು ತಪ್ಪೋ ಸರಿಯೋ ಎಂಬುದೂ ಕಾಲಚ ಚರ್ಚೆ. ಆದರೆ ಆ  ಸಂಘಟನೆಯ ಮೂಲ ಚಿಂತನೆ ಎಂದಿಗೂ ತಪ್ಪಾಗಿಲ್ಲ, ಅದರಲ್ಲಿ ಲೋಪವಿದ್ದರೆ ಇಷ್ಟು ಎತ್ತರಕ್ಕೆ ಬೆಳೆಯುತ್ತಿರಲಿಲ್ಲ. ಹಾಗಾಗಿಯೇ ಈ ಕಾಲದ ಚರ್ಚೆಗೆ ಉತ್ತರವಿಲ್ಲ.

ಸಂಘದ ಸುತ್ತಲಿನ ನನ್ನ ಅನುಭವದ ಬಗ್ಗೆ, ನಂಬರ್‌ ಬ್ಲಾಕ್‌ ಮಾಡಿದ ಬಗ್ಗೆ ನಾಳೆ ಬರೆಯುತ್ತೇನೆ......

2 ಕಾಮೆಂಟ್‌ಗಳು:

Unknown ಹೇಳಿದರು...

ಸರಿಯಾಗಿದೆ ಚಿಂತನೆ

Chiನ್ಮya kriಷ್ಣ ಹೇಳಿದರು...

ಸಂಘದ ಚಿಂತನೆಗಳು ಯಾವತ್ತೂ ತಪ್ಪಿಲ್ಲ.. ತಪ್ಪುವುದೂ ಇಲ್ಲ. ಅಲ್ಲೂ ಕೆಲ ಸ್ವಾರ್ಥ ಸಾಧಕರು ಸ್ಥಾಪನೆ ಆದದ್ದು ಕಷ್ಟ ಆದದ್ದು.. ಕಾಲ ಅದನ್ನೂ ಸರಿ ಮಾಡೀತು ಅನ್ನುವ ನಂಬಿಕೆ ನನ್ನದು.