03 ಸೆಪ್ಟೆಂಬರ್ 2009

ಇದು ಪಶ್ಚಿಮದ ಸ್ವರ್ಗ . . . .




ಇಲ್ಲಿ ಬೆಟ್ಟಗಳು ಅಣಕಿಸುತ್ತವೆ , ನಾನೇರಿದೆತ್ತರಕ್ಕೆ ನೀನೇರಬಲ್ಲೆಯಾ ..? ಜಲಪಾತಗಳು ಹೇಳುತ್ತವೆ ನೀನಿಲ್ಲಿಗೆ ಬರಬಲ್ಲೆಯಾ..? ಮಂಜು ಕೇಳುತ್ತದೆ ನೀ ನನ್ನೊಂದಿಗೆ ಬರಬಲ್ಲೆಯಾ..?.ಹೀಗೆ ಇಲ್ಲಿ ಎಲ್ಲವೂ ಸವಾಲುಗಳೇ..ಪ್ರಶ್ನೆಗಳೇ ಅಂಟಿಕೊಂಡಿವೆ.. ಇಂತಹ ಸವಾಲುಗಳನ್ನು ದಾಟುತ್ತಾ ನಮ್ಮೊಳಗಿನ ಎಲ್ಲಾ ಇಗೋಗಳಿಗೆ ಉತ್ತರ ಹುಡುಕುವ ಈ ದಾರಿ ಯಾವುದಯ್ಯಾ ಅಂತ ಯೋಚಿಸುತ್ತಿದ್ದರೆ, ಅದಕ್ಕೆಲ್ಲಾ ಇಲ್ಲಿದೆ ದಾರಿ. ರೋಚಕತೆಯ ದಾರಿಯಿದು .. ಇದು ಕಾಣುವ ಸ್ವರ್ಗದ ದಾರಿ...

ಅಬ್ಬಾ ಈಗ ವನವಾಸ ಮುಗಿದಿದೆ. ಹಾಗಾಗಿ ನಾವೀಗ ವನದ ನಡುವಿನ ಸೀಳು ಹಾದಿಯಲ್ಲಿ ಗಿರಿಶಿಖರಗಳನ್ನು ಸೀಳಿಕೊಂಡು ಪ್ರವಾಸ ಮಾಡಬಹುದಾಗಿದೆ.ಅಂದರೆ ಮಂಗಳೂರಿನಿಂದ ಬೆಂಗಳೂರಿಗೆ ಹಗಲು ವೇಳೆ ಪ್ರಯಾಣಿಸಬಹುದಾಗಿದೆ.ಇಲ್ಲಿ ಗಗನವೇ ಹತ್ತಿರ ಬಂದಂತೆ . . ದೂರದ ಬೆಟ್ಟದ ತುಂಬೆಲ್ಲಾ ಮಂಜು ಮುತ್ತಿಕ್ಕಿದಂತೆ . . ಹಾಲ್ನೊರೆಯಂತೆ ಧುಮ್ಮುಕಿ ಹರಿಯುವ ಜಲಪಾತ... ಹಚ್ಚ ಹಸಿರಿನ ಸೀರೆಯನ್ನುಟ್ಟ ಆ ಪ್ರಕೃತಿ ಸೊಬಗು . . ಹೌದು ಈ ಸೊಬಗನ್ನು ವರ್ಣನೆ ಮಾಡುತ್ತಾ ಹೋದರೆ ದೂರದ ಅದೆಲ್ಲೋ ಇರುವ ಊಟಿ , ಕೊಡೈಕಾನಲ್‌ನಂತಹ ಪ್ರದೇಶದ ವರ್ಣನೆಯಂತೆ ಭಾಸವಾಗುತ್ತದೆ. ಅಲ್ಲವೇ ಅಲ್ಲ. ನಮ್ಮದೇ ಕರುನಾಡಿನ ಹೆಮ್ಮೆಯ ಪ್ರದೇಶದ ಅದ್ಭುತ ಮೈಮಾಟದ ಸಿರಿಬಾಗಿಲಿನಿಂದ ಎಡಕುಮೇರಿ - ಸಕಲೇಶಪುರದವರೆಗಿನ ಪ್ರದೇಶ. ಈ ಸುಂದರ ಸೊಬಗನ್ನು ನೋಡುವುದಕ್ಕೆ ನಮಗೆ 14 ವರ್ಷ ಬೇಕಾದುವಾ..? ಎನ್ನುವ ಪ್ರಶ್ನೆ ಮನದೊಳಗೆ ಮೂಡಿಯೇ ಮೂಡುತ್ತೆ . ಹೌದು ಈಗ ಹಗಲು ರೈಲು ಓಡಾಟ ಶುರುವಾಗಿದೆ.

ಸುಬ್ರಹ್ಮಣ್ಯದಿಂದ ಸಕಲೇಶಪುರವರೆಗಿನ ಸುಮಾರು 2 ರಿಂದ 3 ಗಂಟೆಯ ಈ ಪ್ರಯಾಣ ಅವಿಸ್ಮರಣೀಯ. ಪ್ರಕೃತಿ ಪ್ರಿಯರ ಸ್ವರ್ಗ.ಅಲ್ಲಿ ಸಾಗುತ್ತಿದ್ದಂತೆಯೇ ಉದ್ಗಾರಗಳು ಕೇಳತೊಡಗುತ್ತದೆ.. ಅದೋ . . ಅಲ್ಲಿ ಗಿರಿ ಶಿಖರಗಳಿಗೆ ಮುತ್ತಿಕ್ಕುವ ಹಿಮರಾಶಿಗಳು , ಸ್ವಲ್ಪ ಆಚೆ ನೋಡಿದರೆ ಗಗನಕ್ಕೆ ಚುಂಬಿಸ ಹೊರಟ ಹಸಿರು ಹಾಸಿದ ಶಿಖರಗಳು .. ಇಲ್ಲಿ ನೋಡಿ ಹಾಲ್ನೊರೆಯಂತೆ ಧುಮ್ಮಿಕ್ಕುವ ಜಲಪಾತ.. ಅಗೋ ಕೆಳಗಡೆ ತಿರುಗಿ ... ಭಾರೀ ಪ್ರಪಾತ... ಅಷ್ಟೇ ಅಲ್ಲ ಆಗಾಗ ಕೈಗೆ ಸಿಕ್ಕು ಮಾಯವಾಗಿವ ಬೆಳ್ಳಿ ಮೋಡಗಳು.. ಅಬ್ಬಾ ಅದೇನು ಸುರಂಗದೊಳಗೆ ನುಸುಳಿ ಹೊರಡುವ ಬೋಗಿಗಳು .... ಅಯ್ಯೋ.. ಸಮಯ ಮುಗಿದೇ ಹೋಯಿತು. ಇಲ್ಲ ಸಾಲದು.. ಇನ್ನೂ ಈ ರೈಲು ಇಲ್ಲೇ ಸಾಗಲಿ ಎಂದು ಭಾವಿಸುವಷ್ಟರಲ್ಲೇ ಅದು ಸಕಲೇಶಪುರ ತಲಪಿ ಬಿಡುತ್ತದೆ. ಈ ಅನುಭವನ್ನು ಪ್ರಯಾಣಿಕರು ಹೇಳುವುದು ಹೀಗೆ .

ಹಲವು ವರ್ಷದ ಹೋರಾಟದ ಬಳಿಕ ಮತ್ತೆ ಹಗಲು ರೈಲು ಓಡಾಟ ಕಂಡಿದೆ. ಈಗ ಪ್ರಕೃತಿ ಪ್ರಿಯರಿಗೆ ಸಂತಸದ ಹೊನಲೇ ಹರಿದಿದೆ. ಮಂಗಳೂರಿನ ಅಡಿಕೆ . ಗದ್ದೆಗಳ ಸಂದಿನಿಂದ ಹೊರಡುವ ಈ ರೈಲು ಹಾಗೆಯೇ ಸಾಗುತ್ತಾ ಸುಬ್ರಹ್ಮಣ್ಯ , ಧರ್ಮಸ್ಥಳಕ್ಕೆ ಬಂದ ಭಕ್ತಾದಿಗಳನ್ನು ಹೊತ್ತೊಯ್ಯುತ್ತಾ ಸಾಗಿ ಸಿರಿಬಾಗಿಲು, ಎಡಕುಮೇರಿಯತ್ತ ಸಾಗುವಾಗ ಪ್ರಕೃತಿಯ ರಮಣೀಯತೆ ಗೋಚರಿಸಲು ತೊಡಗುತ್ತದೆ.ಗುಪ್ತಗಾಮಿನಿಯಾಗಿ ಹರಿಯುವ ನದಿಗಳ ಭೋರ್ಗರೆತ , ಕಿವಿಕಡಚಿಕ್ಕುವ ರೈಲು ಹಾರ್ನ್‌ಗೆ ಸಾತ್ ನೀಡುವ ಜೀರುಂಡೆಗಳ ಸದ್ದು , ಹಾಗೆಯೇ ಸುರಂಗದೊಳಗೆ ಪ್ರಯಾಣಿಸುವ ವೇಳೆ ಪ್ರಯಾಣಿಕರ ಸಂತಸದ ಕಿರುಚಾಟ ಹೀಗೆ ನಿಗೂಢವಾಗಿ ಕಾನನವನ್ನು ಸೀಳುತ್ತಾ ಸಾಗುವ ರೈಲಿನ 12 ಬೋಗಿಗಳು ಎಡಕುಮೇರಿ ನಂತರ ಅಲ್ಲಿನ ಕಾಫಿ ತೋಟ , ಗದ್ದೆಗಳ ಸವಿಯನ್ನು ಉಣ ಬಡಿಸುತ್ತಾ ಸಕಲೇಶಪುರ ತಲಪುವ ವೇಳೆ 57 ಸುರಂಗಗಳು , 110 ತಿರುವುಗಳು , ಹಾಗೂ 241 ಸೇತುವೆಗಳನ್ನು ದಾಟಿ ಬಂದಿರುತ್ತದೆ. ಈ ಅನುಭವವನ್ನು ಪ್ರತಿಯೊಬ್ಬ ಕನ್ನಡಿಗನೂ ಅನುಭವಿಸಲೇ ಬೇಕು.





ಹಾಗೆ ನೋಡಿದರೆ ಮಂಗಳೂರಿಗೆ ಮೊದಲು 1907 ರ ಸುಮಾರಿಗೆ 6 ಬೋಗಿಗಳ ಉಗಿಬಂಡಿ ಆರಂಭವಾಗಿತ್ತು. ಮಂಗಳೂರು - ಬೆಂಗಳೂರು ರೈಲನ್ನು ಗಮನಿಸಿದರೆ 1962 ರಲ್ಲಿ ಮೀಟರ್ ಗೇಜ್ ಕಾರ್ಯ ಆರಂಭಗೊಂಡು ,1979 ರಲ್ಲಿ ಮಂಗಳೂರು- ಬೆಂಗಳೂರು ನಡುವೆ ಮೀಟರ್‌ಗೇಜ್ ರೈಲು ಸಂಚಾರ ಆರಂಭವಾಗಿ 1996 ರಿಂದ ಗೇಜ್ ಪರಿವರ್ತನೆಯ ಕಾರಣಕ್ಕಾಗಿ ಬಂದ್ ಆಗಿದ್ದ ರೈಲು ಹಗಲು ರೈಲು ನಂತರ 2003 ರಲ್ಲಿ ಬ್ರಾಡ್ ಗೇಜ್ ಕಾರ್ಯ ಮುಗಿದಿದ್ದರೂ ಬೆಂಗಳೂರಿಗೆ ರೈಲು ಸಂಚಾರ ಆರಂಭವಾಗಿರಲಿಲ್ಲ. ಆದರೆ 2007 ರಲ್ಲಿ ರಾತ್ರಿ ವೇಳೆ ರೈಲು ಆರಂಭಗೊಂಡಿದ್ದರೂ ಹಗಲು ರೈಲಿನ ಬೇಡಿಕೆ ಹಾಗೆಯೇ ಉಳಿದುಕೊಂಡಿತ್ತು. ಈಗ ವನವಾಸ ಮುಗಿದಿದೆ.ಕನಸೂ ಈಡೇರಿದೆ. ಆದರೆ ಸದ್ಯ ವಾರಕ್ಕೆ 3 ದಿನ ಮಾತ್ರಾ. ಅದಲ್ಲ ವಾರದ ಎಲ್ಲಾ ದಿನ ಓಡಾಡ ಬೇಕು, ಕರ್ನಾಟಕದ ಹೆಮ್ಮೆಯ ಈ ಸುಂದರ ಪ್ರಕೃತಿಯ ಸೊಬಗು ಎಲ್ಲರಿಗೂ ಕಾಣಸಿಗಲು ಪ್ರತೀ ದಿನ ಓಡಾಡಬೇಕು ಎಂಬದು ಎಲ್ಲರ ಬೇಡಿಕೆಯಾಗಿದೆ.


ಇಲ್ಲಿನ ರೈಲು ಯಾನವು ಉಳಿದ ಎಲ್ಲಾ ರೈಲು ಯಾನಕ್ಕಿಂತ ಭಿನ್ನ. ಏಕೆಂದರೆ ಪ್ರಕೃತಿಯ ರುದ್ರತೆಯನ್ನು ಪ್ರದರ್ಶಿಸುತ್ತಾ ಸುಮಾರು 1.5 ಕಿ ಮೀ ದೂರದ ಸುರಂಗದ ಒಳಹೊಕ್ಕು ಹೊರಬರುತ್ತದೆ. ಅತ್ಯಂತ ಕಡಿದಾದ ಬಂಡೆಗಳನ್ನು ಸೀಳಿಹೋಗಿರುವ ಇಲ್ಲಿನ ರೈಲು ಹಳಿ ನಿರ್ಮಾಣ ಕಾರ್ಯವೇ ಎಲ್ಲರಿಗೆ ಅಚ್ಚರಿಗೆ ತರುವಂತಾಗುತ್ತದೆ. ಇಂತಹ ಗಿರಿಶಿಖರದ ಮಧ್ಯೆಯೇ ರೈಲು ಓಡಾಡುತ್ತಿದೆ. ಈ ಘಾಟಿ ಪ್ರದೇಶದಲ್ಲಿ ರೈಲು ಸುಮಾರು 15 ರಿಂದ 20 ಕಿಲೋಮೀಟರ್ ವೇಗದಲ್ಲಷ್ಟೇ ಸಾಗುತ್ತದೆ, ಮಾತ್ರರವಲ್ಲ ಅಲ್ಲಿಲ್ಲಿ ನಿಲ್ಲಿಸುತ್ತಾ ಭದ್ರತೆಯನ್ನು ಪರಿಶೀಲಿಸುತ್ತಾ ಸಾಗುತ್ತದೆ. ಹೀಗಾಗಿ ಇಲ್ಲಿನ ರೋಚಕತೆ ಎಲ್ಲರಿಗೂ ಖುಷಿಕೊಡುತ್ತದೆ.


ಒಟ್ಟಿನಲ್ಲಿ ಕವಿ ಅಂದು ಹೇಳಿದ್ದರು ಜೀವನದಲ್ಲಿ ಒಮ್ಮೆಯಾದರೂ ಜೋಗದ ಗುಂಡಿಯನ್ನು ನೋಡಬೇಕು ಎಂದು. ಇದನ್ನೇ ಕೊಂಚ ಬದಲಾಯಿಸಿ ಜೀವನದಲ್ಲಿ ಒಮ್ಮೆಯಾದರೂ ಕನಾಟಕದ ಈ ಸೊಬಗನ್ನು ನೋಡಲೇಬೇಕು. ರೈಲು ಕೂಡಾ ಅದನ್ನೇ ಹೇಳುತ್ತಾ ಸಾಗಿದರೆ ಬೆಟ್ಟಗಳು ನಾನೇರಿದೆತ್ತರಕ್ಕೆ ನೀನೇರಬಲ್ಲೇಯಾ ಎಂದು ಮತ್ತೂ ಅಣಕಿಸುತ್ತಲೇ ಇರುತ್ತವೆ. ಇಂತಹ ಸವಾಲುಗಳಿಗೆ ಉತ್ತರ ಹುಡುಕ ಹೊರಟ ತಂತ್ರಜ್ಞರಿಗೆ ಹ್ಯಾಟ್ಸ್ ಆಫ್ ಹೇಳಲೇಬೇಕು. ಅದಕ್ಕೂ ಮುನ್ನ ನೀವೂ ಒಮ್ಮೆ ಈ ರೈಲ್ಲಿ ಹೋಗಿ ಬನ್ನಿ ಹಸಿರಿನ ಗಿರಿಗಳ ಮಾಲೆಯನ್ನು ತೊಟ್ಟಿರುವ ಪ್ರಕೃತಿಯನ್ನೊಮ್ಮೆ ನೋಡಿ ಬನ್ನಿ.....

ಕಾಮೆಂಟ್‌ಗಳಿಲ್ಲ: