21 ಡಿಸೆಂಬರ್ 2017

ಹೊಲದಲ್ಲಿ ಟ್ರಾಕ್ಟರ್ ಓಡಿಸುವುದು ಕೀಳಲ್ಲ...!




ಅನೇಕರು ಅಂದುಕೊಳ್ಳುತ್ತಾರೆ, ಹೊಲದಲ್ಲಿ ಮಣ್ಣು ಮೆತ್ತಿಸಿಕೊಂಡು ಟ್ರಾಕ್ಟರ್ ಓಡಿಸುವುದು ಬದುಕಿನ ಸೋಲು, ಇದು ಸೋಲಿನ ಜೀವನ ಎಂದು ಬಿಂಬಿಸುತ್ತಾರೆ. ಈ ಮನಸ್ಥಿತಿಯಿಂದ ಹುಡುಗರು ಹೊರಬರಬೇಕು ಎಂದು ಕೃಷಿಕ ಲಕ್ಷ್ಮಣ ದೇವಸ್ಯ ಹೇಳುತ್ತಿರುವಾಗ ಅವರ ಮನಸ್ಸಿನಲ್ಲಿ ಉತ್ಸಾಹ ಕಂಡುಬರುತ್ತಿತ್ತು.ಕಾರಣ ಇಷ್ಟೇ, ಅವರು ಇಂಜಿನಿಯರ್ ಆಗಿ ಅನೇಕ ವರ್ಷಗಳ ಕಾಲ ಕೆಲಸ ಮಾಡಿ ವಿದೇಶದಲ್ಲೂ ಇದ್ದು ಈಗ ತೋಟದಲ್ಲಿ ಕೆಲಸ ಮಾಡುತ್ತಿದ್ದಾರೆ. ಯಶಸ್ವೀ ಬದುಕು ಸಾಗಿಸುತ್ತಿದ್ದಾರೆ.

ಹಳ್ಳಿಯಿಂದ ಬೆಂಗಳೂರು ಬಸ್ಸು ಹತ್ತುವ ಹುಡುಗನ ಮನಸ್ಸಿನಲ್ಲಿರುವ ಯೋಚನೆ ಒಂದೇ, ಲಕ್ಷ ಹಣ ಎಣಿಸಬೇಕು, ಸುಂದರವಾದ ಮನೆಯೊಂದನ್ನು ನಗರದ ನಡುವೆ ಕಟ್ಟಬೇಕು..!. ಅದರಾಚೆಗಿನ ಬದುಕು ಆಗ ಕಾಣಿಸುವುದಿಲ್ಲ. ದಿನ ಕಳೆದಂತೆ, ಇದೆಲ್ಲಾ ಕನಸು ಈಡೇರಿದ ನಂತರ ಏನು ಎಂಬ ಪ್ರಶ್ನೆ ಉಳಿದು ಬಿಡುತ್ತದೆ. ಹೊಸತೊಂದು ಸಾಧನೆ ಇಲ್ಲವಾಗುತ್ತದೆ. ಇದಕ್ಕಾಗಿಯೇ ದೊಡ್ಡ ಉದ್ಯೋಗ ಬಿಟ್ಟು ಹಳ್ಳಿಗೆ ಬಂದ ಯುವಕ ಲಕ್ಷ್ಮಣ ದೇವಸ್ಯ ಎಲ್ಲಾ ಯುವಕರಿಗೂ ಮಾದರಿಯಾಗುತ್ತಾರೆ.
ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ದೇವಸ್ಯ ಎಂಬಲ್ಲಿ ಕೃಷಿ ಭೂಮಿ ಹೊಂದಿರುವ ಲಕ್ಷ್ಮಣ, ಬೆಂಗಳೂರಿನಲ್ಲಿ ಎಚ್‍ಎಎಲ್‍ನಲ್ಲಿ ಇಂಜಿನಿಯರ್ ಆಗಿದ್ದರು. ನಂತರ ಕೆನಡಾದಲ್ಲಿ ಉದ್ಯೋಗ ಮಾಡಿಕೊಂಡಿದ್ದರು. ಇದೆಲ್ಲಾ ಬದುಕು ಕೆಲವೇ ದಿನ ಎಂದು ಆವಾಗ ಅನಿಸಿತೋ, ಅಂದೇ ಹಳ್ಳಿಯ ತಮ್ಮ ಕೃಷಿ ಭೂಮಿಗೆ ಕುಟುಂಬ ಸಮೇತರಾಗಿ ಬರಲು ನಿರ್ಧರಿಸಿ  ಕೃಷಿಯಲ್ಲಿ ತೊಡಗಿಸಿಕೊಂಡರು. ಆದರೆ ಮತ್ತೆ ಒಂದು ವರ್ಷದ ಬಳಿಕ ಅಮೇರಿಕಾದಲ್ಲಿ ಕೆಲಸ ಮಾಡಿದರು, ಈಗ ಮತ್ತೆ ಹಳ್ಳಿಯ ಕೃಷಿ ಭೂಮಿಯಲ್ಲಿ ಟ್ರಾಕ್ಟರ್ ಓಡಿಸುತ್ತಿದ್ದಾರೆ.

ಕೃಷಿಗೆ ಇಳಿದು ಒಂದು ವರ್ಷದ ಬಳಿಕ ಮತ್ತೆ ಅಮೇರಿಕಾದಲ್ಲಿ ಕೆಲಸ ಮಾಡಿದ ಅನುಭವವೂ ಲಕ್ಷ್ಮಣ ಚೆನ್ನಾಗಿ ವಿವರಿಸುತ್ತಾರೆ. ರಾಜಧಾನಿಯಿಂದ ಕೃಷಿಗೆ ಬಂದಾಗ ಅನೇಕ ಕೃಷಿಕರು ನೆಗೆಟಿವ್ ಆಗಿಯೇ ಮಾತನಾಡಿದರು. ಕೃಷಿ ಯಶಸ್ಸಿನ ಬಗ್ಗೆ ದಾರಿ ತೊರಿಸಲಿಲ್ಲ, ಬದಲಾಗಿ ಮಣ್ಣು ಮೆತ್ತಿಸಿಕೊಳ್ಳುವುದೇ ಸೋಲು ಎಂದೇ ಆಗಾಗ ಹೇಳಿದರು. ಈ ಎಲ್ಲದರೂ ನಡುವೆಯೂ ತಾನು ನಂಬಿದ ಬದುಕನ್ನು ಬಿಡದೆ ನಡೆದು ಬಂದ ಛಲಗಾರ. ಹೊಸ ಮಾದರಿಯ ಹಟ್ಟಿಯೊಂದನ್ನು ನಿರ್ಮಾಣ ಮಾಡಿದರು, ದೊಡ್ಡ ದೊಡ್ಡ ಕನಸು ಇಟ್ಟುಕೊಂಡರೂ ಕೃಷಿಯ ಆರ್ಥಿಕ ನೆರವು ಸಾಕಾಗಾದಾಗ ಮತ್ತೆ ಕುಟುಂಬ ಸಮೇತರಾಗಿ ಅಮೇರಿಕಾಕ್ಕೆ ತೆರಳಿ ಇನ್ನೊಂದು ಕಂಪನಿಯಲ್ಲಿ ಕೆಲಸ ಮಾಡಿ ಒಂದಷ್ಟು ಆದಾಯ ಗಳಿಸಿ ಈಗ ಮತ್ತೆ ಕೃಷಿ ಭೂಮಿಗೆ ಇಳಿದಿದ್ದಾರೆ. ಈಗ ಹಳೆಯ ಎಲ್ಲಾ ಸೋಲುಗಳನ್ನೂ ಎದುರಿಸಿ ಸಮರ್ಥವಾಗಿ ಕೃಷಿ ಮಾಡುತ್ತಿದ್ದಾರೆ. ಯಶಸ್ಸು ಕಾಣುತ್ತಿದ್ದಾರೆ. ಹಾಗಂತ ಸಾಫ್ಟ್‍ವೇರ್ ಬದುಕು ಬದುಕೇ ಅಲ್ಲ ಎಂದು ಎಲ್ಲೂ ಲಕ್ಷ್ಮಣ ಹೇಳುತ್ತಿಲ್ಲ. ದೇಶದ ಪ್ರಗತಿಗೆ, ಕೃಷಿ ಪ್ರಗತಿಗೆ ಅದೂ ಬೇಕು. ಆದರೆ ಹೊಲ ಬಿಟ್ಟು, ಕೃಷಿ ಬಿಟ್ಟು ಕಷ್ಟ ಎನ್ನುವುದಷ್ಟೇ ನನ್ನ ಉದ್ದೇಶ ಎನ್ನುತ್ತಾರೆ.
ಮುಂದೇನು ಎಂಬ ಕಲ್ಪನೆಯನ್ನೂ ಚೆನ್ನಾಗಿ ಇರಿಸಿಕೊಂಡಿದ್ದಾರೆ.  ಕೃಷಿಕರದ್ದೇ ನೆಗೆಟಿವ್ ಸಂಗತಿಗಳಿಗೆ ಬೆಲೆ ಕೊಡದೇ ತನ್ನದೇ ಮಾದರಿಯಲ್ಲಿ ಕೃಷಿ ನಡೆಸಿ ಮಾದರಿಯಾಗುತ್ತಿದ್ದಾರೆ. ಇಬ್ಬರು ಮಕ್ಕಳನ್ನು ಕೃಷಿ ಜೊತೆಗೆ ಆಟವಾಡುತ್ತಾ ಪಾಠ ಕಲಿಯುವ ಮತ್ತು ಪರೀಕ್ಷೆ ಬರೆಸುವ ಉದ್ದೇಶ ಹೊಂದಿದ್ದಾರೆ. ನಗರದಲ್ಲಿದ್ದ ಅವರ ಪತ್ನಿಯೂ ಕೃಷಿಯ ಕೆಲಸಕ್ಕೆ ಸಹಕಾರ ನೀಡುತ್ತಿದ್ದಾರೆ.
ಮುಂದೇನು ಎಂಬ ಯೋಚನೆಗೆ ಉತ್ತರ "ವಿಗತಂ ವಿನೋದಂ" ಎಂಬ ಫ್ಯಾಕ್ಟರಿ ನಿರ್ಮಾಣ. ಈ ಕಂಪನಿಯನ್ನು ತನ್ನ ಕೃಷಿ ಭೂಮಿಯಲ್ಲಿ ನಿರ್ಮಾಣ ಮಾಡಲು ಭೂಮಿಕೆ ಸಿದ್ದ ಪಡಿಸಿದ್ದಾರೆ. ಇದರ ಉದ್ದೇಶ ಸ್ಪಷ್ಟವಾಗಿದೆ, ವಿಜ್ಞಾನ-ಗಣಿತ-ತಂತ್ರಜ್ಞಾನದ ಸಹಕಾರದಿಂದ ವಿನೋದವಾಗಿ ಮಕ್ಕಳಿಗೆ ಪಾಠ ಹೇಳಿಕೊಡುವ ವಿವಿಧ ವಸ್ತುಗಳ ತಯಾರಿ, ಮಕ್ಕಳನ್ನು  ಕ್ರಿಯೇಟಿವ್ ಆಗಿ ಬೆಳೆಸುತ್ತಾ ಹಳ್ಳಿಯ ಬದುಕಿಗೆ ಆದ್ಯತೆ ನೀಡುವುದರ ಜೊತೆಗೆ ಮಣ್ಣು ಮೆತ್ತಿಸಿಕೊಳ್ಳುವುದು ಸೋಲಿನ ಬದುಕಲ್ಲ, ಅದುವೇ ಮನುಷ್ಯ ಬದುಕಿನ ಮೊದಲ ಮೆಟ್ಟಿಲು ಎಂಬ ಪಾಠ ಮಾಡಲು ಸಿದ್ದ ಮಾಡಿಕೊಂಡಿದ್ದಾರೆ. ಇದೆಲ್ಲಾ ಈ ಬಾರಿ ಮಾಡಿಯೇ ತೀರುತ್ತೇನೆ ಎಂದು ಲಕ್ಷ್ಮಣ ಜಿದ್ದಿಗೆ ಬಿದ್ದಿದ್ದಾರೆ.
ಅನೇಕ ಯುವಕರು ಕೃಷಿ ಭೂಮಿ ಬಿಟ್ಟು ನಗರದ ವಾಸನೆ ಹಿಡಿದಾಗಲೇ ಹಳ್ಳಿ ವೃದ್ಧಾಶ್ರಮವಾಗುವ ಈ ಹೊತ್ತಿನಲ್ಲಿ, ವಿವಿಧ ಸವಾಲುಗಳನ್ನು  ಎದುರಿಸಲಾಗದೆ ಕೃಷಿಕರೇ  ತಮ್ಮ ಮಕ್ಕಳಿಗೆ ಮಣ್ಣಿನ ಬದುಕೇ ಬೇಡವೆನ್ನುವ ಮನೋಸ್ಥಿತಿ ಬೆಳೆಸುವ ಈ ಕಾಲದಲ್ಲಿ ಮಣ್ಣಿನ ಬಗ್ಗೆ, ಕೃಷಿ ಬದುಕಿನ ಬಗ್ಗೆ ಪಾಠ ಮಾಡುವ ಇಂತಹ ಮನಸ್ಸುಗಳಿಗೆ ಬೆಂಬಲ ನೀಡದೇ ಇದ್ದರೂ ನೆಗೆಟಿವ್ ಹೇಳದಿದ್ದರೆ ಸಾಕು ಅಷ್ಟೆ...!. ಅಮೇರಿಕಾದಲ್ಲಿ ಉದ್ಯೋಗದಲ್ಲಿರುವ ವ್ಯಕ್ತಿಯೊಂದಿಗೂ, ನಮ್ಮದೇ ಭೂಮಿಯಲ್ಲಿ ಕೃಷಿ ಮಾಡಿ ಬದುಕುವ ವ್ಯಕ್ತಿಯೊಂದಿಗೂ ಇಲ್ಲಿರುವ ಮಂದಿ ಮಾತನಾಡಿಸುವ ಶೈಲಿ ಸಮಾನವಾಗಿದ್ದರೆ ಸಾಕು.
ಕೃಷಿಯ ಬಗ್ಗೆ ಅನಾದಾರ ತೋರುವ ಮಂದಿ , ಕೃಷಿ ವೃತ್ತಿಪರತೆಯ ಬಗ್ಗೆಯೂ ಅದೇ ದಾಟಿಯಲ್ಲಿ ಮಾತನಾಡಲಾರರು. ವಿದೇಶದ ಕೃಷಿಯಲ್ಲಿ ಕಾಣುವ ವೃತ್ತಿಪರತೆ, ದಕ್ಷತೆ ಇಲ್ಲಿ ಕಾಣದು. ಅನೇಕ ಬಾರಿ ಈ ಬಗ್ಗೆ ಬೇಸರ ತಂದಿದೆ. ಕ್ವಾಲಿಟಿ, ಬದ್ಧತೆಯಲ್ಲಿ ವಿದೇಶಗಳಿಂದ ನಾವು ತುಂಬಾ ಹಿಂದಿದ್ದೇವೆ. ಕೃಷಿ ಮಾತ್ರಾ ಬೇಡ ಎನ್ನುವ ನಾವು, ಕೃಷಿ ಬದ್ಧತೆಯ ಬಗ್ಗೆ ಮಾತನಾಡುವುದಿಲ್ಲ ಎಂದು ಲಕ್ಷ್ಮಣ ಹೇಳುವಾಗ ಕೃಷಿ ಇಲ್ಲಿ ಏಕೆ ಸೋಲುತ್ತಿದೆ ಎನ್ನುವುದು  ಸ್ಪಷ್ಟವಾಗುತ್ತದೆ. ಇದಕ್ಕಾಗಿಯೇ ಹಳ್ಳಿಯ ಮಣ್ಣಿನಲ್ಲಿ ಯಶಸ್ಸು ಕಾಣಲು ಯುವ ಮನಸ್ಸುಗಳು ಕಾಣಬೇಕು, ಕೃಷಿ ಬದ್ಧತೆ ಹೆಚ್ಚಾಗಬೇಕು.

( ಹೊಸದಿಗಂತ - ಭೂಮಿಗೀತ - ಮಣ್ಣಿಗೆ ಮೆಟ್ಟಿಲು - 20 -12 - 2017 )


ಕಾಮೆಂಟ್‌ಗಳಿಲ್ಲ: