02 ನವೆಂಬರ್ 2022

100 ಕಿಮೀ ದೂರದಿಂದ "ಪ್ರೀತಿ"ಯ ಹೋಳಿಗೆ ಬಂತು...!

 

ಸುಮಾರು 100 ಕಿಮೀ ದೂರದಿಂದ ನಮ್ಮ ಮನೆಗೆ 20 ಹೋಳಿಗೆ ಹಾಗೂ 4 ತಿರುಪತಿ ಲಾಡು ಬಂತು..!.‌ , ವಿಷಯ ಹೋಳಿಗೆಯದ್ದು ಅಲ್ಲ ಲಾಡಿನದ್ದೂ ಅಲ್ಲ. ಅದು ಪ್ರೀತಿಯದ್ದು, ಸ್ನೇಹದ್ದು. ಹೀಗಾಗಿ ಈ ಸಂಬಂಧಗಳನ್ನು, ಸ್ನೇಹವನ್ನು ನಾವು ಯಾವ ಲೆಕ್ಕದಲ್ಲಿಯೂ ಅಳೆಯುವುದಕ್ಕೆ ಸಾಧ್ಯವಿಲ್ಲ.

ವಿಷಯ ಇಷ್ಟು....., ಇಂದು ಪತ್ನಿಯ ತವರು ಮನೆಯಿಂದ ಮಾವ ಹೋಳಿಗೆಯನ್ನು ಪ್ಯಾಕ್‌ ಮಾಡಿ ಕಳುಹಿಸಿದರು. ಇದು ವಿಷಯ ಅಲ್ಲ. ಎಲ್ಲರಿಗೂ ಇಂತಹ ಅನುಭವವಿದೆ. ನಾವೂ ಕೂಡಾ ಇದನ್ನೇ ಮಾಡುತ್ತೇವೆ, ಮಾಡಿದ್ದೇವೆ ಕೂಡಾ. ನನ್ನ ಅಮ್ಮನಿಗೂ ಇದೆಲ್ಲಾ ಬಹಳ ಅಚ್ಚುಮೆಚ್ಚು.  ಬಂದವರಿಗೆ ಹಪ್ಪಳ, ಜೇನು, ಹಲಸಿನ ಹಣ್ಣು, ರಂಬುಟಾನ್‌.... ಹೀಗೇ....!. ಮನೆಯಲ್ಲಿ ಏನಿದೆಯೋ ಅದು ಕೊಡುತ್ತಿದ್ದರು. ಕೆಲವು ಸಲ 4 ರಂಬುಟಾನ್‌ ನನ್ನ ತಂಗಿಯ ಮನೆಗೆ ನನ್ನ ಬಳಿ ಕೊಟ್ಟು ಕಳುಹಿಸಿದ್ದೂ ಇದೆ. ಅದು ಪ್ರೀತಿ ಅಷ್ಟೇ. ಇದರ ಹಿಂದಿರುವ ಭಾವದ ಬಗ್ಗೆ ಧ್ವನಿಸಬೇಕು.

ಇಲ್ಲಿ ಒಂದು ಸಂಬಂಧ, ಒಂದು ಪ್ರೀತಿ, ಒಂದು ಸ್ನೇಹದ‌  ವಿಷಯಗಳು ಹೆಚ್ಚು ಮಹತ್ವ ಪಡೆಯುತ್ತವೆ. ಇಲ್ಲಿ ಹೋಳಿಗೆ ದುಡ್ಡು ಕೊಟ್ಟರೆ ಖರೀದಿ ಮಾಡಬಹುದು, ಆದರೆ ಪ್ರೀತಿಯನ್ನು, ಸ್ನೇಹವನ್ನು ಖರೀದಿಸಲು ಸಾಧ್ಯವಿಲ್ಲ ಎಂಬುದು ಅರ್ಥವಾಗಬೇಕಾದ ವಿಷಯ ಅಷ್ಟೇ. 

ಕಳೆದ ಬಾರಿ ಪುತ್ತೂರಿಗೆ ಹೋಳಿಗೆಯನ್ನು ಮಾವ  ಕಳುಹಿಸಿದ್ದರು, ನಾನು  ಆ ದಿನ ಪುತ್ತೂರಿನಲ್ಲಿ ಯಾವ ಕೆಲಸ ಇಲ್ಲದಿದ್ದರೂ ಕಾರಿನಲ್ಲಿ ಹೋಗಿ 15 ಹೋಳಿಗೆಯ ಪಾರ್ಸೆಲ್ ಪಡೆದು ಹೋಟೆಲ್‌ನಲ್ಲಿ ಚಹಾ ಕುಡಿದು ವಾಪಾಸ್‌ ಮನೆಗೆ ಬಂದು ಹೋಳಿಗೆ ಸವಿದಿದ್ದೆವು. ಇದರ ಖರ್ಚು ಲೆಕ್ಕ ಹಾಕಿದರೆ ಒಂದು ಹೋಳಿಗೆಯ ಅಸಲು 50 ರೂಪಾಯಿಗಿಂತ ಹೆಚ್ಚು ಆದೀತು. ಆದರೆ ಆ ಹೋಳಿಗೆಯ ಹಿಂದೆ ಇರುವ ಭಾವ ಹಾಗೂ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. 

ಅನೇಕ ಸಲ ಇಂತಹದ್ದಕ್ಕೆಲ್ಲಾ ಬೆಲೆ ಇಲ್ಲದೆಯೇ ಕೇವಲ ಹಣ ಹಾಗೂ ಹಣದ ಹಿಂದಿನ ದಾರಿಗಳ ಬಗ್ಗೆ ಮಾತ್ರವೇ ಯೋಚನೆ ಮಾಡಿದರೆ, ಯಾವ ಭಾವವೂ ಇಲ್ಲದೆ ಶುಷ್ಕವಾಗಿರಬೇಕಾಗುತ್ತದೆ. ಇದು ಇಡೀ ಸಂಬಂಧದಲ್ಲಿ ಸೃಷ್ಟಿ ಮಾಡುವ ತಲ್ಲಣ ಬಹುದೊಡ್ಡದು. ‌ಅನೇಕ ಸಲ ಈ ತಲ್ಲಣಗಳನ್ನು ಮೌನವಾಗಿ ಎದುರಿಸಬೇಕಾಗುತ್ತದೆ. ಏಕೆಂದರೆ ಭಾವವೇ ಇಲ್ಲದ ಶುಷ್ಕದ ಜೊತೆ ಗುದ್ದಾಡಿ ಏನು ಪ್ರಯೋಜನ?. 

ಅತೀ ಹತ್ತಿರದವರಿಂದ ಎಲ್ಲರೂ ಬಯಸುವುದು  ಸ್ನೇಹ ಹಾಗೂ ಪ್ರೀತಿ ಅಷ್ಟೇ. ಅದು ಶುಷ್ಕವಾಗುತ್ತಾ ಹೋದಂತೆಯೇ ಬದುಕು ಸಡಿಲವಾಗುತ್ತದೆ. ಒಂಟಿಯಾಗಬೇಕಾಗುತ್ತದೆ. ಸ್ನೇಹ, ಸಂಬಂಧ ಎಂಬುದು  ದಿನವೂ ಮಾತನಾಡಿಕೊಳ್ಳುವ ವಿಷಯವೂ ಅಲ್ಲ, ಆದರೆ ಆಪತ್ಕಾಲದಲ್ಲಿ ನೆರವಾಗುವ, ನೆರವಿಗೆ ಧ್ವನಿಯಾಗುವ , ಪ್ರತಿಧ್ವನಿಯಾಗುವ ವಿಷಯ ಅಷ್ಟೇ. ಎಲ್ಲಾ ಬಾರಿಯೂ ಎಲ್ಲಾ ಸಂದರ್ಭದಲ್ಲಿಯೂ ನೆರವಿಗೆ ಬಯಸುವುದೂ ಸರಿಯಲ್ಲ. ಅದು ಸಾಧ್ಯವೂ ಇಲ್ಲ. ಇದುವೇ ಪ್ರೀತಿ. ಪ್ರೀತಿ, ಸಂಬಂಧ ಎಂದರೆ ಅಧಿಕಾರವೂ ಅಲ್ಲ, ದುರ್ಬಳಕೆಯೂ ಅಲ್ಲ, ಬಳಕೆಯೂ ಅಲ್ಲ.

ಸ್ನೇಹ ಎಂದರೆ ಹೀಗೆ ಎಂದೂ ವಿವರಿಸುವುದು  ಕಷ್ಟ. ಆದರೆ ಹಣದ ನಡುವೆ, ಲೆಕ್ಕಾಚಾರದ ನಡುವೆ ಸಂಬಂಧ ಬೆಸೆಯದೆ ಎನ್ನುವುದನ್ನು  ಹೇಳಬಹುದು. ಯಾವ ಎಣಿಕೆಯೂ ಇಲ್ಲದೆಯೇ ಹೋಳಿಗೆ ತಲುಪಿಸಲೇ ಪುತ್ತೂರಿಗೆ ಬಂದ ಮಾವ, ಹೋಳಿಗೆ ತಲುಪಿಸಲು ಪಟ್ಟ ಸಾಹಸ... ಮನೆಯಲ್ಲಿ ಕಾತರದಿಂದ ಕಾಯುವ ಅವರ ಮಗಳು...ನನ್ನ ಪತ್ನಿ.....!  ಇದೆರಡೂ ಇರುವುದು  ಹಣದ ಮೇಲಲ್ಲ, ಪ್ರೀತಿಯ ಮೇಲೆ.... , ಮಗಳ ಮೇಲಿನ ಅವರ ಪ್ರೀತಿಗೆ ನಾನ್ಯಾಕೆ ಕೊಂಕು, ಅಡ್ಡಿ ಮಾಡಲಿ, ನಾನೂ ಸಹಕಾರಿಯಾದೆ. ಹೋಳಿಗೆಗೆ ಆಗುವ ಖರ್ಚು ನೋಡಲಿಲ್ಲ, ಪ್ರೀತಿಯನ್ನು ದಾಟಿಸಿದೆ ಅಷ್ಟೇ.

ಈ ಬಾರಿ 50 ಕಿಮೀ ದೂರ ಬಂದ ಮಾವ ಪುತ್ತೂರಿನಿಂದ ಪ್ಯಾಕ್‌ ಮಾಡಿ ಪಾರ್ಸೆಲ್‌ ಹಾಕಿದರು, ನಾನು ಬಸ್ಸಿನಿಂದ ಪಡೆದುಕೊಂಡೆ. ಈ ಹೋಳಿಗೆ ಒಂದು ಸಂಬಂಧ ಸ್ಥರವನ್ನು ಎತ್ತಿ ತೋರಿಸಿತು ಅಷ್ಟೇ. ಮನುಷ್ಯ ಬದುಕಿನಲ್ಲಿ ಬೇಕಾದ್ದು ಹಾಗೂ ಉಳಿಯುವುದು ಇದೇ ತಾನೆ..

ಪರಮಮಿತ್ರ ವೇಣುಗೋಪಾಲ ಶೇರ ಹೇಳುತ್ತಾರೆ, ಮಾರಾಯ  ಸ್ನೇಹ ಎನ್ನುವುದು ಬಳಕೆಗೂ ಅಲ್ಲ, ದುರ್ಬಳಕೆಗೂ ಅಲ್ಲ.. ಅದು ಅನುಭವಿಸಲು ಬದುಕಿನ ಸಂತಸ ಹೆಚ್ಚಿಸಲು...

 

ಕಾಮೆಂಟ್‌ಗಳಿಲ್ಲ: