27 ಅಕ್ಟೋಬರ್ 2022

ಅಮ್ಮನಿಲ್ಲದ ದೀಪಾವಳಿ |

 


ಈ ಬಾರಿ ನಮಗೆ ದೀಪಾವಳಿ ಇಲ್ಲ. ಅಮ್ಮನಿಲ್ಲದ ಈ ದೀಪಾವಳಿ ಆಚರಿಸುವುದಾದರೂ ಹೇಗೆ? ಹಾಗಿದ್ದರೂ ಕೆಲವು ಜವಾಬ್ದಾರಿಗಳ ದೀಪ ಬೆಳಗಬೇಕಿತ್ತು. 

ಪ್ರತೀ ವರ್ಷ ಅಮ್ಮನೇ ನನಗೆ ದೀಪಾವಳಿ. ಅಮ್ಮನೇ ನನಗೆ ಬೆಳಕು. ದೀಪಾವಳಿ ಹಾಗೂ ಇತರ ಎಲ್ಲಾ ಹಬ್ಬಗಳಲ್ಲೂ ಅಮ್ಮನೇ ಹಾಗೆ ಮಾಡು, ಹೀಗೆ ಮಾಡು ಎನ್ನುತ್ತಿದ್ದರು. ಈ ಬಾರಿ ಹಾಗೆ ಮಾಡು .. ಹೀಗೆ ಮಾಡು ಎಂದು ಹೇಳುವ ಮಾತುಗಳಿಲ್ಲ.ಅಮ್ಮನಿಲ್ಲ ದೀಪಾವಳಿ ಮಾತ್ರವಲ್ಲ ಯಾವ ಹಬ್ಬವೂ ಈ ವರ್ಷ ನನಗಿಲ್ಲ.

ಮಕ್ಕಳಿಗೆ ದೀಪಾವಳಿ ಖುಷಿ. ಈ ಖುಷಿಗೆ ಬೆಳಕಾಗಬೇಕಲ್ಲ. ಅಪ್ಪನೂ ಇಲ್ಲದ .. ಅಮ್ಮನೂ ಇಲ್ಲದ ದೀಪಾವಳಿ ನನಗೆ. ಆದರೆ ಮಕ್ಕಳಿಗೆ ಕತ್ತಲು ಕಳೆದು ಬೆಳಕಾಗುವ ದೀಪಾವಳಿ. ಪಟಾಕಿ ಸಿಡಿಸುವ ದೀಪಾವಳಿ....  ನನಗಿಲ್ಲದ ದೀಪಾವಳಿ,.... ಮಕ್ಕಳಿಗೆ ಸಂಭ್ರಮದ ದೀಪಾವಳಿ.... ಈ ಎರಡನ್ನೂ ಹೊಂದಿಸಿಕೊಳ್ಳುವುದು ಹೇಗೆ?. ಒಂದು ಇಡೀ ಕೊಂಡಿ ಕಳಚಿ ಇನ್ನೊಂದು ಕೊಂಡಿಯನ್ನು ಹಿಡಿಯುವ , ಮುನ್ನಡೆಸುವ ಜವಾಬ್ದಾರಿ. ಹೇಳಿದಷ್ಟು, ಬರೆದಷ್ಟು ಸುಲಭವಲ್ಲ. ಎಚ್ಚರಿಸುವವ ಇಲ್ಲದೆಯೇ ಎಚ್ಚರವಾಗಿರಬೇಕು. ಎಚ್ಚರಿಸುವವನು ಇಲ್ಲದೆ ಬಾಳ ನೌಕೆಯ ಸಾರಥಿಯಾಗಬೇಕು.

ಅಪ್ಪನೂ ಇಲ್ಲದ ಮೇಲೆ ದೀಪಾವಳಿ ಇತ್ತು. ಆದರೆ ಎಚ್ಚರಿಸುವ ಅಮ್ಮ ಇದ್ದರು. ಆಗಾಗ ಎಚ್ಚರಿಸುತ್ತಿದ್ದರು. ಎಲ್ಲಿ ಹಳಿ ತಪ್ಪುತ್ತದೋ ನೋಡಿ ಎಚ್ಚರಿಸುತ್ತಿದ್ದರು. ಹೆಚ್ಚು ಬರೆದರೂ ಅದೇನು ಅಂತ ಕೇಳುತ್ತಿದ್ದರು.  ಆಗಾಗ ನನ್ನ ಲೆಕ್ಕ ಪುಸ್ತಕವನ್ನು ನೋಡಿ ಹೇಳುತ್ತಿದ್ದರು.. ಕೇಳುತ್ತಿದ್ದರು. "ಈ ಲೋಕದಲ್ಲಿ ಇರುವುದೆಲ್ಲಾ ಉಪಯೋಗಕ್ಕೆ ಇರುವುದು , ಆದರೆ ನಮಗೆ ಯಾವುದು ಅಗತ್ಯ ಎನ್ನುವುದು ನಮಗೆ ತಿಳಿದಿರಬೇಕು" ಎಂದು ಆಗಾಗ ಎಚ್ಚರಿಸುತ್ತಿದ್ದರು. ದೀಪಾವಳಿಯ ಪಟಾಕಿಯ ಭರಾಟೆಗೆ ನನಗೆ ನೆನಪಾದ್ದು ಈ ಮಾತು. ಇದೇ ಪಾಠ ಮಕ್ಕಳಿಗೂ ಹೇಳಿದೆ, ಪಟಾಕಿ ಬೇಕು.. ಸಂಭ್ರಮಕ್ಕೆ, ಆದರೆ ಎಷ್ಟು ಬೇಕು... ಅಂತ ಅಮ್ಮನ ಮಾತನ್ನು ಸ್ವಲ್ಪ ಡೈಲ್ಯೂಟ್‌ ಮಾಡಿ ಹೇಳುತ್ತಿದ್ದೆ. ಈಗ ನನಗೆ ಹೇಳುವವರು ಯಾರು ? ಕೇಳುವವರು ಯಾರು ?. ಅಮ್ಮ ಇಲ್ಲದ ಮೇಲೆ  ಮನಸ್ಸಿನ ಓಟದಲ್ಲಿ ಅನೇಕ ಬಾರಿ ಎಡವಿದ್ದೇನೆ,  ನಿಧಾನವಾಗಿ ಕುಳಿತು, ಅಮ್ಮ ಹೇಳಿದ್ದು ನೆನಪಿಸಿಕೊಳ್ಳುತ್ತಾ ಸಾವರಿಸಿಕೊಂಡು ತಪ್ಪನ್ನು ಸರಿ ಮಾಡುತ್ತೇನೆ. 

ಈಚೆಗೆ ಯಾರಿಗೂ ಹೆಚ್ಚು ಕರೆ ಮಾಡುತ್ತಿಲ್ಲ, ಆದರೂ ಆಗಾಗ ವಾಟ್ಸಪ್‌ ನನ್ನನ್ನು ಕೆಣಕಿಸುತ್ತದೆ, ಯಾವುದೋ ಪೋಸ್ಟ್‌ ನೋಡಿದಾಗ ಕೆರಳಿಸುತ್ತದೆ, ವಿಷಾದವಾಗುತ್ತದೆ, ಪ್ರತಿಕ್ರಿಯೆ ನೀಡಲೇಬೇಕು ಎಂದು ಅನಿಸಿ ಬಿಡುತ್ತದೆ. ಅದನ್ನು ಹಾಕಿಯೂ ಆದ ಮೇಲೆ ಚರ್ಚೆಯೂ ಆಗುತ್ತದೆ... ಇದೆಲ್ಲಾ ಬೇಕಿತ್ತಾ ಅಂತ ಅಮ್ಮನ ಮಾತುಗಳು ನೆನಪಾಗುತ್ತದೆ, "ಜಗಳ ಯಾಕೆ, ಚರ್ಚೆ ಯಾಕೆ, ಆಗದಿದ್ದರೆ ಸುಮ್ಮನೆ ಇದ್ದು ಬಿಡು. "

ಅಮ್ಮನ ನೆನಪುಗಳು ಸದಾ ಕಾಡುತ್ತದೆ. ಅಪ್ಪನೂ ಆಗಾಗ ಎಚ್ಚರಿಸುತ್ತಾರೆ. ಅಪ್ಪ ಇಲ್ಲವಾದ ಮೇಲೆ ಅಮ್ಮ ಹಾಗಲ್ಲ ಹೀಗೆ ಎಂದರು. ಅನೇಕ ಬಾರಿ ನಮಗೆಷ್ಟೇ ಮಾಹಿತಿ ಇದ್ದರೂ ಅದರ ಪ್ರಾಕ್ಟಿಕಲ್‌ ಅನುಭವ ಬೇರೆಯೇ. ಅದು ಅಮ್ಮನೇ ಕೊಡುತ್ತಿದ್ದರು.

ಈಗೀಗ ಕೆಲವು ಸಮಯ ತಲೆಯೊಳಗೆ ಖಾಲಿಯಾಗಿ ಬಿಡುತ್ತದೆ, ಬ್ಲಾಂಕ್‌ ಆಗಿಬಿಡುತ್ತದೆ. ಕೃಷಿಯಲ್ಲಿ ಸಾಕಷ್ಟು ಕೆಲಸ ಇದ್ದರೂ ಮುಂದೆ ಯಾವುದು ಅಂತ ತಿಳಿದಿದ್ದರೂ ತಕ್ಷಣಕ್ಕೆ ಖಾಲಿಯಾಗಿಬಿಡುತ್ತದೆ. ಈಗ ಅದೆಲ್ಲಾ ಸುಧಾರಿಸುವ ಹಂತಕ್ಕೆ ಬಂದಿದೆ. ದೀಪಾವಳಿಯ ಸಮಯದಲ್ಲಿ ಅಮ್ಮ ನೆನಪಾದರು.

ದೀಪಾವಳಿಯ ಸಡಗರ ಎಲ್ಲೆಡೆಯೂ ಕೇಳಿತ್ತು. ಮಕ್ಕಳಿಗೂ ಖುಷಿಯಾಗಿತ್ತು. ಸದ್ದಿಲ್ಲದೆ ಮಧ್ಯಾಹ್ನ ಪತ್ನಿ, ಮಕ್ಕಳ ಜೊತೆ ತಂಗಿಯ ಮನೆಗೆ ಹೋದೆ, ಊಟ ಮಾಡಿದೆ, ನಿದ್ದೆ ಮಾಡಿದೆ ಸುಖಾ ಸುಮ್ಮನೆ ಬಂದೆ. ಮಕ್ಕಳು ಆಟವಾಡಿದರು, ಖುಷಿ ಪಟ್ಟರು. ಎಲ್ಲಾ ಕೆಲಸಗಳ ನಡುವೆಯೇ ಖಾಲಿಯಾಗುವ ಮನಸ್ಸುಗಳನ್ನು ಮರುಭರ್ತಿ ಹೇಗೆ ? ಎಂದು ಯೋಚಿಸುವ ಕಾಲ ಇದಲ್ಲ. ಮುಂದಿನ ಕೊಂಡಿಗಳಿಗೆ ದಾರಿದೀಪವಾಗಬೇಕು. ಅದು ಈ ಬಾರಿ ಆಚರಣೆಯೇ ಇಲ್ಲದ ದೀಪಾವಳಿಯ ನಡುವೆ ದೀಪವಾಗಬೇಕು. ಸುಲಭ ಇಲ್ಲ........

ಕಾಮೆಂಟ್‌ಗಳಿಲ್ಲ: