05 ನವೆಂಬರ್ 2022

ಅಡಿಕೆ ಹಳದಿ ಎಲೆರೋಗದ ಸಭೆ | ಕಾರಣಗಳನ್ನು ಹುಡುಕುತ್ತಲೇ ಹೋದರೆ ಹೇಗೆ ? | ಒಂದು ಹೆಜ್ಜೆ ಮುಂದೆ ಹೋಗುವುದು ಯಾವಾಗ ? |

 


ಕ್ಯಾಂಪ್ಕೋ ನೇತೃತ್ವದಲ್ಲಿ ನಡೆದ ಅಡಿಕೆ ಹಳದಿ ಎಲೆರೋಗ ಹಾಗೂ ಎಲೆಚುಕ್ಕೆ ರೋಗದ ಬಗ್ಗೆ ನಡೆದ ಸೆಮಿನಾರ್‌ನಲ್ಲಿ ಅಡಿಕೆ ಬೆಳೆಗಾರರ ಸಂಘದ ಕಾರ್ಯದರ್ಶಿ ನೆಲೆಯಲ್ಲಿ ಭಾಗವಹಿಸಿದೆ. ಮೊದಲ ಬಾರಿಗೆ ಈ ವಿಷಯಕ್ಕೆ ಸಂಬಂಧಿಸಿ ಕೃಷಿ ತಜ್ಞರು, ಎಲ್ಲಾ ಇಲಾಖೆಯ ವಿಜ್ಞಾನಿಗಳು ಜೊತೆಯಾದರು. ಕೆಲವು ವಿಭಾಗವು ಹಳದಿ ಎಲೆರೋಗಕ್ಕೆ ಪೈಟೋಪ್ಲಾಸ್ಮಾ ಎಂಬ ವೈರಸ್‌ ಕಾರಣ ಎಂದಿದ್ದರು, ಅದನ್ನೇ ಈಗಲೂ ಹೇಳಲಾಗುತ್ತಿದೆ. ಈ ನಡುವೆಯೇ ಫೈಟೋಪ್ಲಾಸ್ಮಾ ಒಂದೇ ಕಾರಣವಲ್ಲ, ಗೊಬ್ಬರ ನಿರ್ವಹಣೆ, ಕೃಷಿ ನಿರ್ವಹಣೆಯೂ ಕಾರಣವಾಗುತ್ತದೆ ಎಂಬ ಅಭಿಪ್ರಾಯವೂ ವ್ಯಕ್ತವಾಯಿತು. ಇದೆರಡೂ ಅಭಿಪ್ರಾಯಗಳು ಇನ್ನು ಒಂದಾಗಿ ಮುಂದೆ ಸಾಗಬೇಕಿದೆ. ಈ ಕೆಲಸ ಎಂದೋ ಆಗಬೇಕಿತ್ತು. ಫೈಟೋಪ್ಲಾಸ್ಮಾಕ್ಕೆ ಪರಿಹಾರ ರೋಗ ನಿರೋಧಕ ತಳಿ ಅಭಿವೃದ್ಧಿ ಮಾತ್ರಾ. ಇದರ ಜೊತೆಗೆ ಗೊಬ್ಬರ ನಿರ್ವಹಣೆಯೂ ಅಗತ್ಯವಾಗಿದೆ.  ಈ ದಿಕ್ಕಿನಲ್ಲಿ ಎಲ್ಲಾ ಚಿಂತನೆಗಳು ಒಂದೇ ವೇದಿಕೆ ಅಡಿಗೆ ಈಗ ಬಂದವು. ಇದಕ್ಕಾಗಿ ಕ್ಯಾಂಪ್ಕೋಗೆ ಧನ್ಯವಾದ ಹೇಳಬೇಕು.

ಈಗ ಇರುವ ಪ್ರಶ್ನೆ ಎಂದರೆ, ಅಡಿಕೆ ಎಲೆಚುಕ್ಕಿ ರೋಗದಲ್ಲಿಯೂ ವಿಜ್ಞಾನಿಗಳು ಕಾರಣ ಪತ್ತೆ ಮಾಡಿದ್ದಾರೆ, ಅದಕ್ಕೆ ಬೇಕಾದ ಔಷಧಿಯನ್ನೂ ಹೇಳಿದ್ದಾರೆ. ಹಳದಿ ಎಲೆರೋಗದಲ್ಲಿಯೂ ಈಗ ಕಾರಣ ಸಿಕ್ಕಿದೆ, ಅದಕ್ಕೆ ಬೇಕಾದ ಪರಿಹಾರ ಮಾರ್ಗಗಳು ಇನ್ನೂ ಸಿಕ್ಕಿಲ್ಲ. ದಾರಿಗಳು ಇದೆ, ಅವು ದೀರ್ಘ ಕಾಲಿಕ.  ಆದರೆ ಇದುವರೆಗೂ ಈ ದಾರಿ ಚಾಲನೆಗೆ ಬಂದಿಲ್ಲ. ವಿಜ್ಞಾನಿಗಳ ಕೆಲಸ ರೋಗದ ಪತ್ತೆ ಹಾಗೂ ಅದಕ್ಕೆ ಪರಿಹಾರ ಮಾರ್ಗ. ಪರಿಹಾರಗಳನ್ನು ಅನುಷ್ಟಾನ ಮಾಡುವ ಕೆಲಸ ಸಂಸ್ಥೆಗಳಿಗೆ, ಸರ್ಕಾರಗಳಿಗೆ, ಆಡಳಿತಕ್ಕೆ.

ಅಡಿಕೆ ಬೆಳೆಗಾರರಿಗೆ ಈಗ ಬೇಕಾದ್ದು ಅಡಿಕೆ ಹಳದಿರೋಗಕ್ಕೆ ಪರಿಹಾರ ಇದೆಯೋ ಇಲ್ಲವೋ ? ಇದ್ದರೆ ಏನು ಮಾಡಬಹುದು ? ಇಲ್ಲದೇ ಇದ್ದರೆ ಬದುಕಿಗೆ ಪರ್ಯಾಯ ಏನು ? ಇದಿಷ್ಟೇ ಈಗ ರೈತರು ಬಯಸುವುದು. ಇದರಲ್ಲಿ ವಿಳಂಬ ಆದಷ್ಟು ಕೃಷಿಕರಿಗೇ ಸಮಸ್ಯೆಯಾಗುತ್ತದೆ. ಹೀಗಾಗಿ ಯಾವ ಸಭೆಗಳು ನಡೆದರೂ ಅತಿ ಶೀಘ್ರದಲ್ಲಿಯೇ ಉತ್ತರವೂ ಸಿಗಬೇಕಿದೆ. ಮುಂದೆ ಅಡಿಕೆ ಸಮಸ್ಯೆಯ ಬಗ್ಗೆ ಇಷ್ಟರಲ್ಲೇ ಚರ್ಚಿಸುತ್ತಾ, ಸಂಶೋಧನೆ ಮಾಡುತ್ತಾ ಕೂತರೆ ಹೇಗೆ ? ಅಡಿಕೆ ಹಾನಿಕಾರಕ, ಅಡಿಕೆ ಆಮದು, ಅಡಿಕೆ ಬೆಳೆ ವಿಸ್ತರಣೆ, ಅಡಿಕೆ ಭವಿಷ್ಯ ಹೀಗೇ ಹಲವಾರು ಸಂಗತಿಗಳು ಮುಂದಿನ ದಿನಗಳಲ್ಲಿ ಚರ್ಚೆಯ ವಿಷಯ ಆಗಲಿದೆ. ಈ ಬಗ್ಗೆ ಸಾಮಾಹಿಕ ಚಿಂತನೆ, ಚರ್ಚೆ ನಡೆಯಬೇಕಾಗುತ್ತದೆ. ಇದರ ಜೊತೆಗೇ ಅಡಿಕೆ ಭವಿಷ್ಯದ ಬಗ್ಗೆಯೇ ಗಂಭೀರವಾದ ಚಿಂತನೆ ಅಗತ್ಯ ಇದೆ. 

ನಾವು ಅನೇಕ ಕಾರ್ಯಕ್ರಮದಲ್ಲಿ ಭಾಗವಹಿಸಿದಾಗಲೂ ಇದೆಲ್ಲಾ ಪಿಪಿಟಿ ನೋಡಿ, ಕೇಳಿ ಸಾಕಾಗಿದೆ. ಆದರೆ ಅದಕ್ಕಿಂತ ಆಚೆಗೆ ಯಾವ ಫಲಿತಾಂಶವೂ, ಪ್ರಯೋಗದ ಫಲಿತಾಂಶವೂ ಲಭ್ಯವಾಗುತ್ತಿಲ್ಲ. ಇನ್ನೂ ಸಂಶೋಧನೆಯ ಹಾದಿಯಲ್ಲಿಯೇ ಉಳಿದುಕೊಂಡರೆ ಹೇಗೆ? ಹಳದಿ ಎಲೆರೋಗ ಕಾಣಿಸಿಕೊಂಡು ವರ್ಷಗಳು ಅನೇಕ ಉರುಳಿದರೂ ಪರಿಹಾರ ಕಾಣದೇ ಇರುವುದು  ಈ ದೇಶ ಗಂಭೀರ ವಿಷಯ ಆಗಬೇಕು. ಪ್ರತೀ ಬಾರಿಯೂ ನಾವು ಹಳದಿ ಎಲೆರೋಗದ ಪಿಪಿಟಿ ನೋಡಿ, ಕಾರಣ ಪೈಟೋಪ್ಲಾಸ್ಮಾ ಎಂದು ತಿಳಿದುಕೊಂಡು ಬಂದರೆ ಹೇಗೆ? ಇನ್ನು ಒಂದು ಹೆಜ್ಜೆಯಾದರೂ ಮುಂದೆ ಹೋಗಬೇಕು. ನಿನ್ನೆಯ ಸಭೆಯಲ್ಲೂ ಕಾರಣಗಳನ್ನು ಎಲ್ಲರೂ ಹೇಳಿದರು. ಪರಿಹಾರದ ಕಡೆಗೆ ಬರುವಾಗ ಮೌನವಾಗುತ್ತದೆ, ಚರ್ಚೆ ಹೆಚ್ಚಾಗುತ್ತದೆ, ಟೀಕೆ, ವಿರೋಧ, ಅಸಮಾಧಾನಗಳು ಕಾಣುತ್ತದೆ. ಇನ್ನು ಅನುದಾನಗಳು ಸಿಗುತ್ತವೆ ಎಂದಾಗ ಇನ್ನೊಂದಿಷ್ಟು ಪ್ರಾಜೆಕ್ಟ್‌ ಗಳು ತಯಾರು ಮಾಡುವವರು ಇದ್ದಾರೆ. ಇದರಿಂದ ಕೃಷಿಕರಿಗೇ ಸಮಸ್ಯೆ ಹೊರತು ಬೇರೆ ಪ್ರಯೋಜನವೇ ಇಲ್ಲ. ಎಲ್ಲಾ ಪರಿಹಾರ ಮಾರ್ಗಗಳೂ ದೀರ್ಘ ಕಾಲಿಕ, ಕೊರೋನಾ ಮಾದರಿಯಲ್ಲಿ ತಕ್ಷಣದ ಪರಿಹಾರಗಳು ಇಲ್ಲವೇ ಇಲ್ಲ.  

ಅಡಿಕೆಯ ಹಳದಿ ಎಲೆರೋಗದ ಬಗ್ಗೆ 2000 ಇಸವಿಯ ನಂತರ ಯಾವ ಸಂಶೋಧನೆಗಳು ನಡೆದಿಲ್ಲ ಎನ್ನುವುದು ನಿನ್ನೆಯ ಸಭೆಯಲ್ಲಿ ಕೊಟ್ಟ ಮಾಹಿತಿ ಪತ್ರದಲ್ಲಿ ಉಲ್ಲೇಖ ಇತ್ತು. ಈಚೆಗೆ ಸರ್ಕಾರವೂ ಅಡಿಕೆ ಎಂದರೆ ಕಡತಗಳನ್ನು ಬದಿಗೆ ಸರಿಸುತ್ತಿದೆ.ಏಕೆಂದರೆ ಅಡಿಕೆ ಹಾನಿಕಾರಕ ಎಂಬ ಕಾರಣದಿಂದ. 

ಈಗ ನಡೆದ ಸಭೆಯಲ್ಲೂ ಎಲ್ಲಾ ವಿಜ್ಞಾನಿಗಳು ಪಿಪಿಟಿ ಮೂಲಕ ಮಾಹಿತಿ ಕೊಟ್ಟಿದ್ದಾರೆ. ಇದುವರೆಗೆ ನೀಡಿದ ಎಲ್ಲಾ ಮಾಹಿತಿಗಳನ್ನೂ ಮತ್ತೆ ಹೇಳಿದ್ದಾರೆ.   ಇನ್ನು ಅದರ ಫಾಲೋಅಪ್‌ ಮಾಡುವ ಕೆಲಸ ಮಾತ್ರಾ. ಅದರ ನೇತೃತ್ವ ಇರುವುದು ಈಗ ಅಷ್ಟೇ.

ಇದರ ಜೊತೆಗೆ ಈಚೆಗೆ ನನಗೆ ಅನಿಸುತ್ತಿದೆ, ಅಡಿಕೆ ಹಳದಿ ಎಲೆರೋಗ, ಅಡಿಕೆ ಎಲೆಚುಕ್ಕಿ ರೋಗ ಸೇರಿದಂತೆ ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ಕೃಷಿಕರೆಲ್ಲಾ ಸಂಘಟಿತರಾಗಲೇಬೇಕಿದೆ. ಇಲ್ಲದಿದ್ದರೆ ಇನ್ನೂ ಈ ಸಮಸ್ಯೆಗೆ ಪರಿಹಾರ ಸಾಧ್ಯವಿಲ್ಲ. ಈಗಾಗಲೇ ಸಂಘಟನೆಯ ನೆಲೆಯಲ್ಲಿ ನಾವೂ ಒಂದು ಹೆಜ್ಜೆ ಮುಂದಕ್ಕೆ ಯೋಚಿಸುತ್ತಿದ್ದೇವೆ. ಎಲ್ಲರೂ ಜೊತೆಯಾದರೆ ಪರಿಹಾರ ಬೇಗನೆ ಸಾಧ್ಯವಿದೆ. ಚಿಂತನೆಗಳಲ್ಲಿ ವ್ಯತ್ಯಾಸ ಇರಬಹುದು, ಟೀಕೆಗಳು ಇರಬಹುದು, ಖಾರವಾಗಿ ಹೇಳುವವರೂ ಇದ್ದಾರೆ, ವಿಷಾದಿಸುವವರೂ ಇರುತ್ತಾರೆ, ಹತಾಶೆಗೆ ಒಳಗಾದವರೂ ಇದ್ದಾರೆ. ಇವರೆಲ್ಲರೂ ಜೊತೆ ಇದ್ದರೆ ಮಾತ್ರವೇ ಬಹುಬೇಗನೆ ಪರಿಹಾರದ ಮಾರ್ಗ ಸಾಧ್ಯವಿದೆ.




ಕಾಮೆಂಟ್‌ಗಳಿಲ್ಲ: