04 ಡಿಸೆಂಬರ್ 2008

ನಡೆದ ಹಾದಿಯ ನೆನಪು...



ನನ್ನ ಅಜ್ಜಿ ಇತ್ತೀಚೆಗೆ ತೀರಿಕೊಂಡರು.ಅವರಿಗೆ 83 ವರ್ಷ ಪ್ರಾಯವಾಗಿತ್ತು.ಸಾಯುವ ಪ್ರಾಯ ಅಂತ ಹೇಳಲಾಗದು. ಏಕೆಂದರೆ ಅವರು ಸಾಯುವ ಒಂದು ಕ್ಷಣ ಮುಂದೆ ಚೆನ್ನಾಗೇ ಇದ್ದರು. ಆರೋಗ್ಯವಾಗಿಯೇ ಇದ್ದರು. ಆದರೂ ಜವರಾಯ ಅಲ್ಲೆ ಬಂದು ಕಾದುಕುಳಿತಂತಿತ್ತು.

ಇರಲಿ ಸಾವು ನಿಶ್ಚಿತ. ಬದುಕು ಎಂದಾದರೂ ಒಂದು ದಿನ ಸ್ಕೊನೆ ಕಾಣಲೇಬೇಕು. ಇರುವಷ್ಟು ದಿನ ಹೇಗಿರುತ್ತೇವೋ ಅದು ಸ್ನಮ್ಮನ್ನು ಮತ್ತೆ ಜೀವಂತವಾಘಿರುಸುತ್ತದೆ.ಇಲ್ಲವಾದರೆ ಹತ್ತರಲ್ಲಿ ಒಬ್ಬ.ಅಥವಾ ಹನ್ನೊಂದನೆಯ ವ್ಯಕ್ತಿ. ಬದುಕಿನಲ್ಲಿ ಒಂದಿಷ್ಟಾದರೂ ಸೊಳ್ಳೆಯದನ್ನು ಮಾಡಿದರೆ ಜನ ನೆನಪಿಸಿಕೊಳ್ಳುತ್ಟಾರೆ. ಕೇವಲ ಹಣದ ಹಿಂದಿನ ಓಟವಾದರೆ ಉಸಿರು ನಿಂತ ಮೇಲೆ ಅದೆಲ್ಲವೂ ಮಾತಿಗೆ ಬರದು.ಹಾಗಾಗಿ ನಾವು ಇತರರಿಗೆ ಮಾದರಿಯಾಗಿ ಬದುಕ ಬೇಕೆಂದೇನೂ ಇಲ್ಲ ಆದರೆ ಬದುಕಿದ್ದಷ್ಟು ಕಾಲ ಇನ್ನೊಬರಿಗೆ ನೋವನ್ನು ಕೊಡದೆ ಹೀಯಾಳಿಸದೆ, ಅಹಂ ಪ್ರದರ್ಶಿಸದೆ ಬದುಕುವುದು ಮೇಲೆಂದು ನಾನಂದುಕೊಂಡಿದೇನೆ. ಈ ನನ್ನ ಚಿಂತನೆಗೆ ಮಾದರಿ ಎನಿಸಿದವರು ಅಜ್ಜಿ.ಮತ್ತು ಈ ವಿಚಾರದಲ್ಲಿ ನಾನು ಅಜ್ಜಿಯನ್ನು ಗೌರವಿಸುತ್ತಿದ್ದೆ. ಹಾಗಾಗಿ ನನಗೆ ಅಜ್ಜಿ ಸತ್ತಾಗ ತಕ್ಷಣ ಅವರ ವಿಚಾರಗಳು ಮೂದಿಬಂದಿತ್ತು. ಅವರ ಬದುಕಿನ ಹಾದಿ ಹೀಗಿತ್ತು ಅಂತ ಯೋಚಿಸಿದೆ......

ಅಜ್ಜ ಸಾಮಾಜಿಕ ಮುಂದಾಳುತ್ವ ವಹಿಸಿದವರು. ಆಗ ಮನೆಯ ಸ್ಥಿತಿ ಅಷ್ಟು ಚೆನ್ನಾಗಿದ್ದಿರಲಿಲ್ಲವಂತೆ. ಆರ್ಥಿಕವಾಗಿ ನಮ್ಮ ಕುಟುಂಬ ತೀರಾ ಸಂಕಷ್ಟದಲ್ಲಿತ್ತಂತೆ. ಈ ಸಂದರ್ಭದಲ್ಲಿ ಅಜ್ಜನಿಗೆ ಸಾಮಾಜಿಕವಾದ ಕಾರ್ಯದಲ್ಲಿ ಅನಿವಾರ್ಯವಾಗಿ ಕೈಜೋಡಿಸಬೇಕಾದ ಅನಿವಾರ್ಯತೆ ಇತ್ತು. ಆದರೆ ಇಂದಿನಂತೆ ಆಗ ಪ್ರಚಾರದ ಹುಚ್ಚು ಇದ್ದಿರಲಿಲ್ಲ. ಅಂತಹ ಸೇವೆಯಿಂದ ಅದೇನೋ ಮಾನಸಿಕ ನೆಮ್ಮದಿ ಇತ್ತು.ಇತ್ತ ನಮ್ಮದು ಕೃಷಿ ಕುಟುಂಬ. ಒಂದಷ್ಟು ಎಕ್ರೆ ಭೂಮಿ.ಇಲ್ಲಿ ಮನೆಯ ಸಂಪೂರ್ಣ ಜವಾಬ್ದಾರಿಯನ್ನು ಅಜ್ಜಿ ನಿಭಾಯಿಸಬೇಕಿತ್ತು. ಆ ಕಾಲದ ದಿನಗಳನ್ನು ಒಮ್ಮೆ ಅಜ್ಜಿ ಹೇಳುತ್ತಿದ್ದರು, ಕೈಯಲ್ಲಿ ಕಾಸಿಲ್ಲ.. ಸ್ವಂತ ದುಡಿಮೆ .., ಹುಲ್ಲಿನ ಹರಕಲು ಮನೆ... ದೂರದ ಊರಿಗೆ ಕಾಲ್ನಡಿಗೆಯ ಯಾತ್ರೆ... ಹೀಗೆ ಹಲವು ಸಮಸ್ಯೆಗಳು. ಇಂದು ನೋಡಿದರೆ ಇದೆಲ್ಲವೂ ಸಮಸ್ಯೆಯೆ ಅಲ್ಲ ಬಿಡಿ.. ಅಂದಿನ ಕಾಲದ ಸಂಗತಿಗಳೊಂದಿಗೆ ತಾಳೆ ಹಾಕುತ್ತಾ ಸಾಗಿದರೆ ನಾವಿಂದು ದೇವಲೋಕದಲ್ಲಿದ್ದೇವೆ. ತೀವ್ರ ಸಂಕಷ್ಟದ ದಿನಗಳ ನಂತರ ಇಡೀ ನಮ್ಮ ಕುಟುಂಬ ಚೇತರಿಕೆ ಕಂಡಿತು. ಅಂದರೆ ಆ ಹುಲ್ಲಿನ ಮನೆಗಳು,.. ಹಣಕ್ಕಾಗಿ ಪರದಾಟ.. ಇದೆಲ್ಲವೂ ನನಗೆ ನೆನಪು ಬರುವವ ಸಮಯದಲ್ಲೇ ನಡೆದೇ ಇತ್ತು. ಆದರೆ ಇಂದು ನಾವು ಮತ್ತು ನಮ್ಮ ಕುಟುಂಬ ಆ ಪರಿಸ್ಥಿತಿಯಲ್ಲಿಲ್ಲ. ಇದಕ್ಕೆಲ್ಲಾ ಕಾರಣ ನನ್ನ ಅಜ್ಜಿ , ಅಜ್ಜ ಹಾಗೂ ನಮ್ಮ ಹಿರಿಯರ, ಹೆತ್ತವರ ಶ್ರಮ.ಹಾಗಾಗಿ ನಾವಿಂದು ಈ ಪರದೆಯ ಮೇಲೆ ನೆಲೆ ಕಂಡುಕೊಳ್ಳಲು ಸಾಧ್ಯವಾಯಿತು. ಅದಕ್ಕಾಗಿ ನಾನು ಇನ್ನೊಮ್ಮೆ ಅಜ್ಜಿಯನ್ನು ನೆನಪಿಸುತ್ತೇನೆ. ಹಿರಿಯರನ್ನು , ಹೆತ್ತವರು ನಡೆದ ದಾರಿಯನ್ನು ಗಮನಿಸುತ್ತೇನೆ.

ಯಾಕೆಂದರೆ ಇತ್ತೀಚೆಗೆ ಧರ್ಮಸ್ಥಳದಲ್ಲಿ ಮಿತ್ರರೊಂದಿಗೆ ಹೋಟೇಲ್ ಒಂದರಲ್ಲಿ ಬೆಳಗಿನ ಕಾಫಿ ಕುಡಿಯಲು ಕುಳಿತಿದ್ದೆವು.ಅಲ್ಲೆ ನಮ್ಮ ಪಕ್ಕದ ಇನ್ನೊಂದು ಟೇಬಲ್ ನಲ್ಲಿ 2 ಮಹಿಳೆಯರು ಮತ್ತು ಒಂದು ಚಿಕ್ಕ ಮಗು ಕುಳಿತಿತ್ತು. ಸಪ್ಲಯರ್ ಬಂದಾಗ ಆ ಮಹಿಳೆ ಕೇಳಿತು ನೋಡಣ್ಣಾ ನಮ್ಮಲ್ಲಿ ಹಣವಿರುವುದು ಇಷ್ಟು ಇದಕ್ಕಾಗುವ ಇಡ್ಲಿ ಕೊಡಿ ಅಂದಿತು. ಪಾಪ ಮತ್ತೆ ಲೆಕ್ಕ ಹಾಕುತ್ತಿತ್ತು ಆ ಹೆಂಗಸು ಇನ್ನು ಬಸ್ಸಿಗೆ ಇಷ್ಟು ಹಣಬೇಕು..... ಆದರೆ ಅವರ ಹೊಟ್ಟೆ ..???.
ಇಂತಹ ಬಡತನವೂ ಇಲ್ಲಿದೆ.ಅಂತಹುದರಲ್ಲಿ ನಾವೆಷ್ಟು ಸುಖಿಗಳು..? . ಬೆಳಗ್ಗಿನಿಂದ ಹಿಡಿದು ಸಂಜೆಯವರೆಗೆ ಏನು ಮಜಾ...? ಸಮಾಜದಲ್ಲಿ ಇನ್ನೊಂದು ಮುಖವಿರುತ್ತದೆ. ಅಂತಹ ಮುಖವನ್ನು ನನ್ನ ಅಜ್ಜಿ ನನ್ನ ಹಿರಿಯರು ಅನುಭವಿಸಿದ್ದರು. ಆದರೆ ಅವರು ಆ ನೋವುಗಳನ್ನು ಮರೆತು ಇಂದಿನ ಹೊಸ ಬದುಕಿನಲ್ಲಿದ್ದಾರೆ. ಕಾರು ಚಲಾಯಿಸಬಲ್ಲರು.. ಮೊಬೈಲ್ ನಲ್ಲಿ ಗಂಟೆಗಟ್ಟಲೆ ಮಾತನಾಡಬಲ್ಲರು... ಅದು ಬದಲಾವಣೆ...
ಆ ಎಲ್ಲಾ ಬದಲಾವಣೆಗಳ ಹಿಂದೆ ... ಇನ್ನೊಂದು ಕತೆಯಿರುತ್ತದೆ.

ಹಾಗಾಗಿ ನನಗೆ ಅಜ್ಜಿಯ ನಿಧನದ ಸುದ್ದಿ ದೂರದಲ್ಲಿದ್ದ ನನಗೆ ಕೇಳಿದ ನಂತರ ಮನೆಗೆ ಬರುವಾಗ ಈ ಎಲ್ಲಾ ನೋಟಗಳನ್ನು ತಿರುವುತ್ತಾ ಬಂದೆ. ಬದುಕಿನ ಮಜಲುಗಳನ್ನು ಅವಲೋಕಿಸುತ್ತಾ ಸಾಗಿದೆ. ಮನೆ ತಲಪಿತು... ಅಜ್ಜಿ ನೆನಪಾಗಿ ಉಳಿದರು... ದೇಹ ಮಣ್ಣಿನಲ್ಲಿ ಲೀನವಾಯಿತು.....

ಅಜ್ಜಿಯ ಬಗ್ಗೆ ಮಾತ್ರಾ ದಾಖಲಿಸಬೇಕು ಅಂದುಕೊಂಡಿದ್ದೆ ಆದರೆ ಎಲ್ಲೆಲ್ಲಿಗೋ ಹೋಗಿ ಬಂದಿತು

1 ಕಾಮೆಂಟ್‌:

shivu.k ಹೇಳಿದರು...

ನಿಮ್ಮ ಅಜ್ಜಿ ಕತೆ ಓದಿ ನನ್ನ ಅಜ್ಜಿಯ ನೆನಪಾಯಿತು. ಅವರು ೮೦ ವರ್ಷ ಇದ್ದರು.