28 ನವೆಂಬರ್ 2010

ದೇವಸ್ಥಾನವೂ ಉದ್ಯೋಗವೂ. . !

ಮೊನ್ನೆ ಯಾವುದೋ ಕೆಲಸದ ನಿಮಿತ್ತ ಪ್ರಮುಖ ದೇವಸ್ಥಾನಕ್ಕೆ ಹೋಗಿದ್ದೆ. ಹೀಗೇ ರಥಬೀದಿಯಲ್ಲಿ ನನ್ನ ಒಂದೆರಡು ಪರಿಚಿತರೊಂದಿಗೆ ಮಾತನಾಡುತ್ತಾ ಇದ್ದೆ. ಆಗ ಬೈಕ್‌ನಲ್ಲೊಬ್ಬ ಬಂದು ಅದೇನು ಅಂಗಡಿಯಿಂದ ಖರೀದಿಸುತ್ತಿದ್ದ. ಆತನನ್ನು ನಾನು ಮೊದಲೇ ನೋಡಿದ್ದೆ ಆತನ ಪರಿಚಯವೂ ಇತ್ತು. ನನ್ನ ಪರಿಚಿತರಲ್ಲಿ ಆತನ ಕೆಲಸ ಏನು ಎಂದಾಗ ಅವರು ಈಗ ಆತ ಬ್ಯಸಿನೆಸ್ ಮ್ಯಾನ್ ಅಂದ್ರ.ಅಲ್ಲಾ ಇದೊಂದು ದೊಡ್ಡ ಬ್ಯುಸಿನೆಸ್ ಸೆಂಟರ್ ಮಾರಾಯ ಅಂದ್ರು.

ಹೌದು.ದೇವಸ್ಥಾನವೊಂದು ನಂಬಿಕೆಯ ತಾಣವೂ ಹೌದು ಜೊತೆಗೆ ಉದ್ಯೋಗ ನೀಡೋ ಕಂಪನಿಯೂ ಆಗಿದೆ !.

ಆ ವ್ಯಕ್ತಿ ಈ ಊರವನೇ ಅಲ್ಲ.ದೂರದ ಅದ್ಯಾವುದೋ ಊರಿನಿಂದ ಖಾಲಿ ಕೈಯಲ್ಲಿ ಬಂದವನು. ದೇವಸ್ಥಾನದ ಈ ವಠಾರಕ್ಕೆ ಬಂದು ಹತ್ತಿಪ್ಪತ್ತು ವರ್ಷ ಆಗಿರಬಹುದು.ಈಗ ಆತನಿಗೆ ಸ್ವಂತದ್ದೊದು ಸೈಟು ಅಲ್ಲಿದೆ ,ಒಳ್ಳೆಯ ಮನೆ ಕಟ್ಟಿದ್ದಾನೆ ,ಎರಡು ಬೈಕ್ ಇದೆ.ನೆಮ್ಮದಿಯ ಬದುಕು. ಹಿಂದೆ ಪೇಪರ್ ಹಾಕಲೆಂದು ಆತ ಈ ದೇವಸ್ಥಾನದ ಊರಲ್ಲಿರೋ ಅಂಗಡಿಗೆ ಬಂದದ್ದು.ಇವತ್ತು ಈ ಮಟ್ಟಕ್ಕೆ ಬಂದಿದ್ದಾನೆ ಎಂದು ಅಲ್ಲಿನ ಪರಿಸ್ಥಿತಿ ವಿವರಿಸುತ್ತಾ ಹೋಗ್ತಿದ್ದರು ನನ್ನ ಪರಿಚಯಸ್ಥರು. ಎಂತ ಮಾರಾಯ ಇವತ್ತು ಇಲ್ಲಿನ ಅರ್ಚಕರು ತಿಂಗಳಿಗೆ ಲಕ್ಷ ಎಣಿಸುತ್ತಾರೆ , ಇನ್ನು ರೂಂ ಕರೆಯುವವರೂ ಕೂಡಾ ಕನಿಷ್ಠ 3 ಸಾವಿರ ಎಣಿಸುತ್ತಾರೆ ಅಂದ್ರು ಅವರು . . ಇದು ಹತಾಶೆಯಲ್ಲ.ಸತ್ಯದ ಮಾತು.

ಅದೊಂದು ಪ್ರಸಿದ್ದ ದೇವಸ್ಥಾನ ಅಂತಂದ್ರೆ ಅಲ್ಲಿ ಎಷ್ಟು ಜನರಿಗೆ ಉದ್ಯೋಗವಾಗುತ್ತೆ ಅಂತ ಲೆಕ್ಕ ಹಾಕಿ. ಒಂದು ಹತ್ತು ಐವತ್ತು ಜನ ಬ್ರಾಹ್ಮಣರಿಗೆ ಕೆಲಸ. ಇನ್ನು ಒಂದು ಐವತ್ತು ನೂರು ಜನರಿಗೆ ಕ್ಲೀನಿಂಗ್ , ರಶೀದಿ ಕೊಡಲು , ಆಫೀಸು ಕೆಲಸ , ಚಪ್ಪಲು ಸ್ಟಾಂಡ್ , ಅದೂ ಇದೂ ಅಂತ ದೇವಸ್ಥಾನದಲ್ಲಿ ಕೆಲಸ. ಇನ್ನು ಒಂದಷ್ಟು ಜನರಿಗೆ ಅಲ್ಲೇ ಎಲ್ಲಾದರೂ ಅಂಗಡಿ ಇರಿಸಿದರೆ ಅಲ್ಲೂ ಕೆಲಸ , ಆ ಅಂಗಡಿಯಲ್ಲಿ ಕೆಲಸ ಮಾಡೋರು ಇನ್ನೂ ಅನೇಕ ಮಂದಿ.ಇನ್ನು ವಸತಿ ವ್ಯವಸ್ಥೆಗೆ ಬಂದರೆ ರೂಂ ಕಟ್ಟಿದರೆ ಅಲ್ಲೂ ಕೆಲಸ , ಇನ್ನು ರೂಂಗೆ ಜನ ಮಾಡೋ ಕೆಲಸ ಮಾಡಿಕೊಂಡರೂ ಅಲ್ಲೂ ಉದ್ಯೋಗ . . .ಹೀಗೇ ಮುಂದುವರಿಯುತ್ತಲೇ ಹೋಗುತ್ತದೆ ಕೆಲಸಗಳ ಪಟ್ಟಿ.ಇದೆಲ್ಲವೂ ಒಂದು ದೇವಸ್ಥಾನದಲ್ಲಿ ಸಿಗೋ ಉದ್ಯೋಗಾವಕಾಶ..!.

ಆವತ್ತೊಂದು ದಿನ ಹಾಗೇ ಆಗಿತ್ತು.

ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಾಗದೋಷ ನಿವಾರಣೆಗೆ ಹೆಚ್ಚಿನ ಮಹತ್ವ. ಹೀಗಾಗಿ ಮಾತು ಮಾತಿಗೂ ನಾಗದೋಷ, ಎಲ್ಲಾ ಜಾತಕದಲ್ಲೂ ನಾಗದೋಷ. ಇದನ್ನೇ ಒಂದು ಬ್ಯುಸಿನೆಸ್ ಮಾಡಿಕೊಂಡವರು ಹಲವಾರು ಜನ. ಕೊನೆ ಕೊನೆಗೆ ನದಿ ಪಕ್ಕದಲ್ಲಿ ಅದ್ಯಾರೋ ಎಲ್ಲಾ ನಗರದಿಂದ ಭಕ್ತರನ್ನು ಕರಕೊಂಡು ಬಂದು ಹದಿನೈದೋ ಇಪ್ಪತ್ತೋ ಸಾವಿರ ಪಡೆದು ಅದೇನೋ ಹೋಮ ಶಾಂತಿ ಅಂತ ಮಾಡಿಸಿದರು. ಹೀಗೆಲ್ಲಾ ದುಡ್ಡು ಮಾಡೋದು ದೇವರಿಗೂ ಸರಿಕಂಡಿಲ್ಲ ಅಂತ ಅನಿಸುತ್ತೆ.ಊರ ಜನರೆಲ್ಲಾ ಇದಕ್ಕೆ ಆಕ್ಷೇಪಿಸಿದರು. ನಂತರ ಈ ಪದ್ದತಿ ನಿಂತೇ ಹೋಯಿತು.ಮತ್ತೆ ಇನ್ನೊಂದು ಹೊಸ ಅವತಾರ ಪಡಕೊಂಡರು. ಹೀಗೇ ಒಂದಲ್ಲ. . ಇನ್ನೊಂದು . .!. ಯಾಕಂದ್ರೆ ಅದೆಲ್ಲಾ ನಾಗದೋಷದ ಎಫೆಕ್ಟ್ . .!.

ಹೀಗೇ ಇಂತಹದ್ದೆಲ್ಲಾ ಕಾರಣಕ್ಕೆ ದೇವಸ್ಥಾನದಲ್ಲಿ ಇದೆಲ್ಲಾ ಸ್ಟ್ರಿಕ್ಟ್ ಆಯಿತು.ಆಗ ಗೊತ್ತಾಯಿತು ಅಲ್ಲಿ ಎಷ್ಟು ಜನರಿಗೆ ಉದ್ಯೋಗ ಸಿಕ್ಕಿತ್ತು ಅಂತ. ಈಗ ಸರಿಸುಮಾರು 130 ಜನ ಬ್ರಾಹ್ಮಣರಿಗೆ ಈ ನಾಗದೋಷ ನಿವಾರಣೆಯ ವಿಧಿವಿಧಾನ ಮಾಡೋ ಕೆಲಸ ಇದೆ. ಹತ್ತು ಐವತ್ತು ಜನರಿಗೆ ಅಲ್ಲಿ ಕ್ಲೀನಿಂಗ್ ಮಾಡುವ ಐದಾರು ಜನರಿಗೆ ಮಾರ್ಗದರ್ಶನ ಮಾಡೋ ಕೆಲಸ ಇದೆಯಂತೆ ಈಗ. ಇನ್ನು ಇನ್‌ಕಂ ಲೆಕ್ಕಾಚಾರ ಬೇಡ.


ದೇವರೆಂದರೆ ಬಹುಶ: ಇದೆ. ಜನರಿಗೆ ಒಳ್ಳೆಯದು ಮಾಡುವುದೇ ಅವನ ದಿನಿತ್ಯದ ಕೆಲಸ. ಪಾಪ ತೊಳೆಯೋದು , ಪುಣ್ಯ ಕೊಡೋದೇ ಅವನ ಕೆಲಸ. ಅಂದರೆ ದಾನ ಮಾಡುವುದೇ ದೇವರ ಸಮೀಪಕ್ಕೆ ಹೋಗೋ ದಾರಿ. ಹಾಗಾಗಿಯೇ ದೇವಸ್ಥಾನಕ್ಕೆ ಹೋದಾಗ ಅಲ್ಲಿನ ಅಂಗಡಿಗಳಿಂದ ಏನಾದರೊಂದು ನಾವು ಖರೀದಿಸದೇ ಹೋಗೋದಿಲ್ಲ. ಅಲ್ಲಿ ಖರೀದಿಸುವ ವಸ್ತುಗಳಿಗೆ ಚರ್ಚೆಯೂ ಮಾಡೋಲ್ಲ.ಹೇಳಿದಷ್ಟು ರೇಟು ಕೊಟ್ಟು ರೈಟ್ ಹೇಳೋದೇ. ಅದಕ್ಕೊಂದು ಎಕ್ಸಾಂಪಲ್ , ಇತ್ತೀಚೆಗೆ ನನ್ನ ಸಂಬಂಧಿಕರೊಬ್ಬರು ದೇವಸ್ಥಾನದ ಅಂಗಡಿಯಿಂದ ಆಟಿಕೆ ಖರೀದಿಸಿದ್ದರು.ಅದರಲ್ಲಿ ಎಂಆರ್ಪಿ ರೇಟ್ 40 ರುಪಾಯಿ ಇತ್ತು. ಆದರೆ ಅವರು ಕೊಟ್ಟ ರೇಟು ಬರೋಬ್ಬರಿ 170 ರುಪಾಯಿ. ನೋ ಚರ್ಚೆ. ದೇವಸ್ಥಾನದಲ್ಲಲ್ಲಾ ಹೋಗಲಿ , ದೇವರಿದ್ದಾನಲ್ಲ, ಎಲ್ಲಾದ್ರೂ ಕೊಡ್ತಾನೆ ,ಅಂತಾರೆ ಅವರು. ಅಂದರೆ ಆ ವಠಾರದಲ್ಲಿ ಇರೋವರಿಗೆ ಅದೆಲ್ಲಾ ದೇವರ ವರ ಅಷ್ಟೆ. ತಪ್ಪೇನಿಲ್ಲ. ಅಧರ್ಮದ ದುಡ್ಡು ಅದಲ್ಲ. ಯಾಕೆಂದರೆ ದೇವಸ್ಥಾನಕ್ಕೆ ಬರೋದು ಪಾಪ ಕಳೆಯೋದಿಕ್ಕಲ್ಲಾ , ಹಾಗಾಗಿ ದುಡ್ಡಿಗೆ ಲೆಕ್ಕ ಮಾಡೋದಿಲ್ಲ ಅಂದ್ರು ನನ್ನ ಆ ಸಂಬಂಧಿಕರು.


ಅಬ್ಬಾ . !. ದೇವಸ್ಥಾನ ಊರಿಗೊಂದು ಇದ್ದರೆ ಆ ಊರು ಎಷ್ಟು ಡೆವಲೆಪ್‌ಮೆಂಟ್ ಆಗಬಹುದಲ್ಲಾ . !. ಊರಿನ ಜನರೆಲ್ಲಾ ಈ ಕೃಷಿ , ಈ ಆಫೀಸು ಅಂತೆಲ್ಲಾ ಓಡಾಡ್ಬೇಕಾ?. ಅದಕ್ಕೇ ಹೇಳಿರಬೇಕು ಊರಿಗೊಂದು ದೇವಸ್ಥಾನವಿದ್ದರೆ ಅದೊಂದು ನಂದನವನ ಅಂತ . .!.

ಓ ದೇವರೇ ನೀನೆಷ್ಟು ಕರುಣಾಮಯಿ . . ನೀನೆಷ್ಟು ಬುದ್ದಿವಂತ . . ಅದಕ್ಕೇ ನೀನು ದೊಡ್ಡವನು . .

ಕಾಮೆಂಟ್‌ಗಳಿಲ್ಲ: