28 ಜನವರಿ 2009

ಬದುಕಿನ ದಾಳಿಗಳು...



ನಿನ್ನೆ ಮಿತ್ರನೊಂದಿಗೆ ಮಾತನಾಡುತ್ತಿದ್ದಾಗ ಆತ ಹೇಳಿದ ವಿಚಾರವೊಂದು ನನ್ನ ತಲೆಯಲ್ಲಿ ಸುತ್ತಾಡುತ್ತಲೇ ಇತ್ತು. ಒಂದರ್ಥದಲ್ಲಿ ಆ ವಿಷಯ ಗಂಭಿರವಲ್ಲ, ಆದರೆ ಇಂದಿನ ವಿದ್ಯಮಾನಕ್ಕೆ ಅದನ್ನು ತಾಳೆ ಮಾಡಿದರೆ..... ಗಂಭೀರ ಎನಿಸುತ್ತದೆ. ಅಷ್ಟಕ್ಕೂ ಅದೊಂದು ಆತ್ಯಹತ್ಯೆ ಪ್ರಕರಣ... ದೇಶದಲ್ಲಿ ದಿನವೊಂದಕ್ಕೆ ನಡೆಯುವ 100 ಆತ್ಯಹತ್ಯೆ ಪ್ರಕರಣಗಳಲ್ಲಿ ಇದು 101 ನೆಯದ್ದು ಅಷ್ಟೇ. ಆದರೆ ಈ 101 ನೇ ಪ್ರಕರಣದ ಒಳಗೆ ಇಣುಕಿದಾಗ ... , ಆತ ವಿದೇಶದಲ್ಲಿ ಉದ್ಯೋಗದಲ್ಲಿದ್ದ... ಆ ಕಂಪನಿಯವರು ಇಂದಿನ ಆರ್ಥಿಕ ಮುಗ್ಗಟ್ಟಿನ ಕಾರಣ ಕೆಲಸದಿಂದ ವಜಾಗೊಳಿಸಿದರು. ಹೀಗಾಗಿ ಭಾರತದ ವಿಮಾನವೇರಿ ಕೇರಳದ ತನ್ನೂರಿಗೆ ಬಂದಿಳಿದು ವಾರವಾಗಿತ್ತು. ಇಲ್ಲೇನಾದರೂ ಇನ್ನೊಂದು ಉದ್ಯೋಗ ಅಂತ ಅರಸುತ್ತಿರಬೇಕಾದರೆ ಆತನಿಗೆ ಇಲ್ಲಿನ ಕೆಲ ವಿದ್ಯಮಾನಗಳನ್ನು ಗಮನಿಸಿ ಇಲ್ಲಿ ಉದ್ಯೋಗ ಲಭ್ಯವಾಗಬಹುದೇ ಅಂತ ಭಯ ಕಾಡಿತ್ತು.. ಹಾಗೆಂದು ಆತ ಆಪ್ತರಲ್ಲಿ ಹೇಳಿದ್ದನಂತೆ. ಅದಾಗಿ 2 ದಿನ ಆತ ನಾಪತ್ತೆ. ಮತ್ತೆ ಪತ್ತೆಯಾಗಿದ್ದೇ ಆತನ ಶವ.. ಆತನಿಗಿನ್ನೂ ವರ್ಷ 28...!!.

ಪೀಠಿಕೆ ಯಾಕೆ ಹೇಳಬೇಕೆಂದರೆ , ಇಂದು ನಡೆಯುತ್ತಿರುವ ವಿದ್ಯಮಾನಗಳು ಯುವಕರಿಗೆ ಯಾವ ದಾರಿಯನ್ನು,ದಿಕ್ಕನ್ನು ತೋರಿಸುತ್ತದೆ ಎನ್ನುವುದು ಗಮನಿಸಬೇಕು.ಮೊನ್ನೆಯ ಸುದ್ದಿಯನ್ನೇ ಗಮನಿಸಿ.. ಅದರ ಸುತ್ತ ಒಂದು ಗಿರಕಿ ಹೊಡೆದರೆ ಅರಿವಾಗುತ್ತದೆ. ಏನೋ ಬಂದರು ನಗರಿಯಲ್ಲಿ ಕೆಲ ಪುಂಡಾಟಿಕೆಯ ಹುಡುಗರಿಂದ ಸಂಸ್ಕೃತಿಯ ರಕ್ಷಣೆಯ ಹೆಸರಿನಲ್ಲಿ ದಾಳಿ ನಡೆಯಿತು. ನಿಜ.ಅಲ್ಲಿ ತಪ್ಪಾಗಿದೆ ಅಂತ ಒಪ್ಪಿಕೊಳ್ಳೋಣ. ತಪ್ಪಾಗಿದೆ ಅಂದರೆ ಎಲ್ಲರದ್ದೂ.... ಮದ್ಯ ಸೇವಿಸಿ ಕುಣಿದು ಕುಪ್ಪಳಿಸುವ ಸಂಸ್ಕೃತಿಯಿಂದ ಹಿಡಿದು, ಕಾನೂನು ಕೈಗೆತ್ತಿಕೊಂಡವರವರೆಗೆ ಹಾಗೂ ಮಹಿಳೆಯರಿಗೆ ದೌರ್ಜನ್ಯ ಮಾಡಿದ್ದರೆ ಅದೂ ಸೇರಿಸಿ ಎಲ್ಲವೂ ತಪ್ಪಾಗಿದೆ. ಮಾಧ್ಯಮಗಳ ಪಾಲೂ ಇದೆ ಅಂತಲೂ ಮಾತಿದೆ. ಇರಲಿ. ಎಲ್ಲವೂ ತಪ್ಪಾಗಿದೆ ಅಂತ ಅರಿವಾಗಿ ಮರುದಿನ ಮಧ್ಯಾಹ್ನದವರೆಗೆ ಸದ್ದಿಲ್ಲದ ಆ ಸುದ್ದಿ ಇದ್ದಕ್ಕಿದ್ದಂತೆ ಮತ್ತೆ ಜೀವ ತಳೆಯಿತು.ಮತ್ತೆ ಆದ ತಪ್ಪು ಮರುಕಳಿಸಿತು.ಮಂಗಳೂರು ತಾಲಿಬಾನ್ ... ಆಗಿ ಬಿಟ್ಟಿತು. ........ ಅವರಿಗೆಲ್ಲಾ 5 ಸ್ಟಾರ್ ಹೋಟೇಲ್‌ಗಳೂ ಸಿಕ್ಕವು... ಸದ್ದಿಲ್ಲದೆ ದೇಶದ ಸುದ್ದಿಯಾಯಿತು. ಆಗ ಮತ್ತೆ ಮಾತನಾಡಲು ಆರಂಭಿಸಿದರು. ವಿಷಯವೇ ಗೊತ್ತಿಲ್ಲದ ಅನೆಕ ಯುವಕ ಮಿತ್ರರು ಫೋನ್ ಮಾಡಿ ವಿಚಾರ ಕೇಳಿದರು.... ಕೆಲವರಂತೂ ಹೊತ್ತಿ ಉರಿಯುತ್ತಿದೆಯೇ ಅಂತ ದೂರದೂರಿನಿಂದ ಕೇಳಿದರು... ಅವರಿಗೆ ಉತ್ತರ ಏನು ಹೇಳಲಿ ಅಂತ ತಡಕಾಡಬೇಕಾಯಿತು. ವಾಸ್ತವ ವಿವರಿಸಬೇಕಾಯಿತು. ಈಗಷ್ಟೇ ಬೆಳೆಯುತ್ತಿರುವ ಈ ನಗರಕ್ಕೆ ಇದೆಲ್ಲಾ ಬೇಕಿತ್ತಾ.. ಹುಡುಗರು ಇದೇ ನಗರಕ್ಕೆ ಉದ್ಯೋಗ ಅರಸಿ ಒಳಗೆ ಕಾಲಿಡುವ ವೇಳೆ ಇಂತಹ ಘಟನೆ ಭಯ ಹುಟ್ಟಿಸಿದ್ದಂತೂ ಸತ್ಯ.

ಆದರೆ ನನಗೆ ಅನ್ನಿಸಿದ್ದು ಅದಲ್ಲ.
ಇಂದು ನಡೆದ ದಾಳಿಯ ಬಗ್ಗೆ ರಾಜ್ಯ ಮಾತ್ರವಲ್ಲ ದೇಶದಲ್ಲಿ ಮಾತುಗಳು , ಪ್ರತಿಭಟನೆಗಳು ಕೇಳಿಬರುತ್ತಿವೆ... ನಿಮಗೆ ಹೊಡೆಯಲು ಅಧಿಕಾರ ನೀಡಿದವರು ಯಾರು..? ಎಂಬ ಬೋರ್ಡ್‌ನೊಂದಿಗೆ ಪ್ರತಿಭಟನೆ ಮಾಡಲಾಗುತ್ತದೆ. ಒಂದೆರಡು ವರ್ಷದ ಹಿಂದೆ ಇದೇ ಬಂದರು ನಗರಿಯಲ್ಲಿ ಅಕ್ಷತಾ ಎನ್ನುವ ಯುವತಿ ಕೊಲೆಯಾಗಿದ್ದಳು, ಸೌಮ್ಯ ಕೊಲೆಯಾಗಿದ್ದಳು, ಬಂಟ್ವಾಳದಲ್ಲಿ ಇನ್ನೊಬ್ಬಳು ಕೊಲೆಯಾಗಿದ್ದಳು, ಮುಸ್ಲಿಂ ಹೆಣ್ಣು ಮಗಳೊಬ್ಬಳು ಅಮಾನುಷವಾಗಿ ಬಲಿಯಾಗಿದ್ದಳು,ಉಡುಪಿಯಲ್ಲಿ ವಂಶಿ ಕೊಲೆಯಾಗಿದ್ದಳು ........... ಹೀಗೆ ಇಲ್ಲಿ ಹತ್ತಾರು ಅಮಾಯಕ ಹೆಣ್ಣು ಜೀವಗಳು ಬಲಿಯಾಗಿವೆ . ಅದು ಎಲ್ಲವೂ ಸಂಸ್ಕೃತಿಯ ಹೆಸರಿಗಾಗಿ ನಡೆದಿಲ್ಲ..... ಕಾಮದ ಹೆಸರಿನಲಿ ನಡೆದಿವೆ. ಆಗ ಯಾವುದೇ ಸಂಘಟನೆಗಳಾಗಲಿ , ಮಾದ್ಯಮಗಳು ಈ ಕಡೆ ಗಮನಹರಿಸಿರಲೇ [ಒಂದೆರಡನ್ನು ಹೊರತುಪಡಿಸಿ] ಇಲ್ಲ .. ತಾಲೀಬಾನೀಕರಣವಾಗಿದೆ ಎಂದು ಬೊಬ್ಬಿಡಲಿಲ್ಲ..... ಕೊಲೆ ಮಾಡಲು ಅಧಿಕಾರ ನೀಡಿದವರು ಯಾರು ಎಂದು ಪ್ರಶ್ನಿಸಲಿಲ್ಲ.. .ಇಂದಿಗೂ ಈ ಎಲ್ಲಾ ಪ್ರಕರಣಗಳ ಆರೋಪಿಗಳಿಗೆ ಶಿಕ್ಷೆಯೂ ಆಗಿಲ್ಲ.ರಾಜಕಾರಣಿಗಳಂತೂ ಹಾಗೆ... ಹೀಗೆ... ಅಂತ ಬೊಬ್ಬೆ ಹೊಡೆದಿದ್ದರು.. ಅಷ್ಟು ಮಾತ್ರಾ ಆಗಿತ್ತು. ಆದರೆ ಈಗ ಇದೊಂದು ಏನು...? ಅಂತ ಪ್ರಶ್ನಿಸಬೇಕಾಗುತ್ತದೆ. ಇದಕ್ಕೆ ಕಾರಣರು ಯಾರು..?.ಹಾಗಾದರೆ ಒಂದು ಜೀವಕ್ಕಿಂತ ಚಿಕ್ಕ ಹಲ್ಲೆ ದೊಡ್ದದಾಗಿ ಬಿಟ್ಟಿತಾ..?? ಆಗ ಕಾಣದ ದೌರ್ಜನ್ಯ ಈಗ ಎಲ್ಲಿಂದ ಬಂತು..?

ಇಂತಹ ಘಟನೆಗಳು , ತಾರತಮ್ಯಗಳು, ನಮ್ಮ ಹುಡುಗರಿಗೆ , ಇನ್ನೂ ಬೆಳೆಯಬೇಕಾಗಿರುವವರಿಗೆ [ನನ್ನನ್ನೂ ಸೇರಿಸಿ] ಯಾವ ಸಂದೇಶ ಸಿಗುತ್ತಿದೆ ಎಂಬುದೇ ಅರ್ಥವಾಗುತ್ತಿಲ್ಲ.ಎಲ್ಲವೂ ರಾಜಕೀಯ ಮಯವೇ..? ಹಾಗಾದರೆ ಅದು ಎಂತಹ ರಾಜಕೀಯ ಮಾರಾಯ್ರೆ..??

ಇದು ನನ್ನ ವೈಯಕ್ತಿಕ ಭಾವನೆ... ಅದನ್ನು ಎಲ್ಲರೂ ಒಪ್ಪಬೇಕು ಎಂದಿಲ್ಲ. ಒಪ್ಪಬೇಕು ಎಂಬ ಕಾರಣಕ್ಕಾಗಿಯೂ ನಾನಿಲ್ಲ ದಾಖಲಿಸಿಟ್ಟಿಲ್ಲ.

3 ಕಾಮೆಂಟ್‌ಗಳು:

ಹರೀಶ ಮಾಂಬಾಡಿ ಹೇಳಿದರು...

ಎಲ್ಲವೂ ಸಂಸ್ಕೃತಿಯ ಹೆಸರಿಗಾಗಿ ನಡೆದಿಲ್ಲ.....ಮಹೇಶ್, ಸರಿಯಾಗಿ ಬರೆದಿದೀರಿ. ಆದರೆ ಕಾಮಾಲೆ ಕಣ್ಣಿಗೆ...
ಕೆಲವರಿಗೆ ಕಾನೂನು, ಸಭ್ಯತೆಗಳ ಅರಿವೇ ಇರುವುದಿಲ್ಲ. ಸ್ವಾತಂತ್ರ್ಯ ಎಂಬುದು ಸ್ವೇಚ್ಹಾಚಾರ ಆಗಿಬಿಟ್ಟಿದೆ.
ಕೆಲವು ಮಾಧ್ಯಮಗಳೂ ಅಸ್ಟೇ.. ಶನಿವಾರ ನಡೆದ ಘಟನೆಯನ್ನು ಭಾನುವಾರ ಎಂದು ಸತ್ಯದ ತಲೆಗೆ ಹೊಡೆದಂತೆ ಹೇಳುತ್ತವೆ.

VENU VINOD ಹೇಳಿದರು...

ಇಲೈಟ್ ಮಾಧ್ಯಮಗಳಿಗೆ ಸ್ಯೂಡೋಸೆಕ್ಯುಲರಿಸಂ, ಹುಸಿ ಫೆಮಿನಿಸಮ್ಮುಗಳೇ ಸರಕು ಅನ್ನೋದು ಮತ್ತೊಮ್ಮೆ ಪ್ರೂವ್ ಆಗಿದೆ ಅಷ್ಟೇ...ಸದ್ಯ ನ್ಯಾಷನಲ್ ಮೀಡಿಯಾದವರಿಗೆ ತಮಿಳುನಾಡಿನ self immolation ಪ್ರಕರಣ ಸಿಕ್ಕಿದೆ..ಇಲ್ಲವಾದರೆ ಪಬ್ ವಿಷಯ ಇನ್ನೂ ಜಗಿಯುತ್ತಿದ್ದರೇನೋ

ಸಿರಿರಮಣ ಹೇಳಿದರು...

ಪುಚ್ಚಪ್ಪಾಡಿ, ಯತ್ರ ನರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ || ಎಂದು ಹೆಳಿದ್ದಾರೆ. ಇಲ್ಲಿ ನಾರೀ ಎಂಬ ಪದ ವಿದೆಯೇ ಹೊರತು, ಮಹಿಲಾ, ಸ್ತ್ರೀ, ಯೋಷಿತ್, ಕಾಮಿನೀ, ವನಿತಾ... ಇತ್ಯಾದಿ ಪದಗಳನ್ನು ಬಳಸಿಲ್ಲ. ಅಂಥವಳಿಗೆ ಗೌರವ ಸಲ್ಲಬೇಕು ಎಂಬುದು ತಾತ್ಪರ್ಯ ಹೆಣ್ತನದ ಶರೀರ ಇರುವುವರೆಲ್ಲ ನಾರಿಯರಲ್ಲ. ಸಂಘಟನೆಗಳ ಕೆಲವು ಹೆಮ್ಮಾರಿಗಳು ಸ್ತ್ರೀಕುಲಕ್ಕೇ ಬೆಂಕಿ ಬಿದ್ದಂಗೆ ಆಡುತ್ತಿವೆ. ಪಬ್ ಗಳಲ್ಲಿ ಕೆಲಸ ಮಾಡುವ ವಾರಾಂಗನೆಯರು ಸ್ತ್ರೀಕುಲಕ್ಕೆ ಕಳಂಕ ಅಂತವರ ಕುರಿತು ಈ ಸ್ತ್ರೀ ಸಂಘಟನೆಗಳು, ಈ ಹೈ ಫೈ ಮಾನಿನಿ (?!) ಯರು ಧ್ವನಿಯೆತ್ತುತ್ತಿದ್ದಾರೋ ನಾನರಿಯೆ.