16 ಸೆಪ್ಟೆಂಬರ್ 2015

ಗಣೇಶ ಬರುತ್ತಾನೆ. . . ಸಿದ್ದವಾಗು ಮನಸ್ಸೇ. .


                                                             (ಚಿತ್ರ- ಇಂಟರ್ನೆಟ್)

ನಾಡಿನೆಲ್ಲೆಡೆಗೆ ಗಣೇಶ ಬಂದೇ ಬಿಟ್ಟ.. . . .
ಜನರೆಲ್ಲಾ ಪೂಜೆ ಮಾಡಿದರು,ಸಂಭ್ರಮದಿಂದ ಓಡಾಡಿದರು.ಸಿಹಿ ಹಂಚಿದರು. .. .
ಮತ್ತೆ ನೀರೊಳಗೆ ಸೇರಿ ಮರೆಯಾಗಿಯೇ ಬಿಟ್ಟ.  .!.
ನಮ್ಮ ಬದುಕಿನೊಳಗೆ ಆತ ಪ್ರವೇಶಿಸಲೇ ಇಲ್ಲ. . !.

ಗಣೇಶನ ಹಬ್ಬ ಬಂದಾಗ ನನಗೆ ಯಾವಾಗಲೂ ಕಾಡುತ್ತಿದ್ದ ಮತ್ತು ಕಾಡುವ ಪ್ರಶ್ನೆ ಅದೇ , ಆತ ಏಕೆ ನಮ್ಮ ಬದುಕಿನ ಒಳಗೆ ಪ್ರವೇಶಿಸಲಿಲ್ಲ ?. ಒಂದು. . ಎರಡು. . ಮೂರು. . .ನಾಲ್ಕು. . . . ,ವಾರಗಳ ಕಾಲ ಆತನಿಗೆ ಪೂಜೆ ನಡೆಯುತ್ತದೆ,  ಜನ ಓಡಾಡುತ್ತಾರೆ, ಸಂಭ್ರಮಿಸುತ್ತಾರೆ. ಆದರೆ ಆತ ಬದುಕಿನೊಳಗೆ ಪ್ರವೇಶಿಸುವುದೇ ಇಲ್ಲ..  .!.

ಅಂದು ಲೋಕಮಾನ್ಯ ತಿಲಕರು ಸ್ವಾತಂತ್ರ್ಯ ಸಂಗ್ರಾಮದಲ್ಲಿ  ಗಣೇಶ ಉತ್ಸವವನ್ನು  ಸಂಘಟನೆಗಾಗಿ ಬಳಸಿಕೊಂಡರು, ಉತ್ಸವದ ಮೂಲಕ ಸಮಾಜದ ಸಾಮರಸ್ಯದ ಕಡೆಗೆ   ಗಮನಹರಿಸಿದರು, ಬದುಕಿಗೆ ಅರ್ಥ ಕೊಡುವ ರೀತಿಯಲ್ಲಿ  ಯೋಜಿಸಿದರು. ಅಂದು ಯಶಸ್ವಿಯಾಯಿತು. ಆ ಬಳಿಕವೂ  ನಡೆದು ಬಂತು. ಇತ್ತೀಚೆಗೆ ಕೆಲವು ಸಮಯಗಳಿಂದ ಅಲ್ಲಲ್ಲಿ  ಗಣೇಶ ಬರುತ್ತಾನೆ. ಪೂಜೆ ನಡೆಯುತ್ತದೆ. ನಂತರ ಅದೇ ಜಾಗದಲ್ಲಿ  ನೋಡಿದರೆ ಸಾಮರಸ್ಯವೂ ಇಲ್ಲ, ಸಂಘಟನೆಯೂ ಇಲ್ಲ. . .!. ಆತ ಏಕೆ ಹೀಗೆ ಮಾಡಿದ?.ಅಥವಾ ಆಚರಣೆಯ ಹಿಂದೆ ಲೋಪ ಇದೆಯಾ ?.

ಗಣೇಶನ ಪ್ರತಿಷ್ಟಾಪನೆಯಾದ ಬಳಿಕ ಅಲ್ಲಿ ಅನೇಕ ಪೂಜೆ, ಆಚರಣೆ, ಕಾರ್ಯಕ್ರಮಗಳು ನಡೆಯುತ್ತದೆ, ಕೊನೆಗೆ ಗಣೇಶನ ಶೋಭಾಯಾತ್ರೆ ನಡೆಯುವ ವೇಳೆ ಅಬ್ಬರ ಶುರುವಾಗುತ್ತದೆ. ಆ ಅಬ್ಬರ ಅಗತ್ಯವೂ ಸಕಾಲಿಕವೂ ಹೌದಾದರೂ ಕೆಲವೊಮ್ಮೆ ಅಲ್ಲಿಂದಲೇ ಅಶಾಂತಿ ಉಂಟಾಗುತ್ತದೆ, ಅಂದೊಂದು  ಮೆರವಣಿಗೆ ನೋಡಿದ್ದೆ, ಅಲ್ಲಿ  ಓಡಿದ ಸ್ಥಭ್ತ ಚಿತ್ರವೊಂದು ಸಮಾಜದ ನಡುವೆಯೇ ಬಿರುಕು ಮೂಡಲು ಕಾರಣವಾಯಿತು, ಮತ್ತೊಂದು ಮೆರವಣಿಗೆಯಲ್ಲಿ  ನಡೆದ ಸಣ್ಣ ವಿಚಾರ ಇಡೀ ಊರಿನಲ್ಲಿ  ಅನೇಕ ದಿನಗಳ ಕಾಲ ಚರ್ಚೆಯಾಯಿತು, ಪೊಲೀಸ್ ಠಾಣೆಯವರೆಗೂ ಸಾಗಿತು. ಹೀಗಾಗಿ ಗಣೇಶನ ಆಚರಣೆಯನ್ನು  ಈಗ ಬದುಕಿಗೆ ಸಮೀಕರಿಸುವ ಕೆಲಸ ಮಾಡಬೇಕು.

ಗಣೇಶನ ಬಗ್ಗೆ ಆತನ ಮೊಗದ ಬಗ್ಗೆ ಪುರಾಣಗಳಲ್ಲಿ ಸ್ಪಷ್ಟ ಉಲ್ಲೇಖ ಇದೆ.ಗಣೇಶನ ದೇಹದ ಆಕಾರವೇ ಅತ್ಯಂತ ವಿಕಾರ. ನಾವು ಈಗ ನಮ್ಮ ಬದುಕಿಗೆ ಹೊಂದಿಸಿಕೊಂಡು ನೋಡಿದರೆ, ನಮ್ಮೊಳಗೂ ವಿವಿಧ ವಿಕಾರಗಳು ಇರುತ್ತವೆ, ಭಾವನೆಗಳಲ್ಲಿ  ಶುದ್ದತೆ ಇಲ್ಲ, ಮಾತುಗಳಲ್ಲಿ ವಿಶ್ವಾಸಾರ್ಹತೆ ಇಲ್ಲ, ಅಂತರಾತ್ಮದಲ್ಲಿ ಕಶ್ಮಲಗಳು ಇವೆ, ಇದೆಲ್ಲಾ ನಮ್ಮ ಆಕಾರ.ಈ ವಿಕಾರಗಳು ನಮ್ಮಿಂದ ದೂರವಾಗುವ ಹೊತ್ತಿಗೆ ಆತ್ಮಶುದ್ದತೆ, ಪರಿಪೂರ್ಣತೆ ಒದಗುತ್ತದೆ ಎಂದು ನಾನು ನಂಬಿದ್ದೇನೆ. ಹೀಗಾಗಿ ಈ ಆಕಾರಕ್ಕೆ ಶಾಂತತೆಯಿಂದ ಪೂಜೆ ನಡೆದು ,ಅಂದರೆ ಇದೆಲ್ಲಾ ವಿಕಾರಗಳ ಸಂಗ್ರಹ ಮಾಡಿ ಗಣೇಶನ ಪೂಜೆಯ ಬಳಿಕ ಮೂರ್ತಿ ವಿಸರ್ಜನೆ ಕಾರ್ಯ ನಡೆದಂತೆ , ನಮ್ಮೊಳಗಿನ ಎಲ್ಲಾ ವಿಕಾರಗಳೂ ಇದರ ಜೊತೆಗೇ ತೊಲಗಬೇಕು.ಆಗ ಬದುಕು ಪರಿಪೂರ್ಣವಾಗುತ್ತದೆ ಎಂಬುದು ಇದರ ಸಂದೇಶ ಎಂದು ನಾನು ನಂಬಿದ್ದೇನೆ.ಇನ್ನು ಗಣೇಶನ ಮೂರ್ತಿಯನ್ನು ನಮ್ಮ ಶರೀರ ಎಂದು ತಿಳಿದುಕೊಂಡರೆ. ಅದಕ್ಕೆ ಪೂಜೆ ನಡೆದು  , ಆರಾಧನೆ ನಡೆದರೂ ಅದುವೇ ಶಾಶ್ವತವಲ್ಲ, ಅದರೊಳಗೆ ಇರುವ ತತ್ತ್ವ, ಉತ್ತಮ ಕಾರ್ಯಗಳೇ ಶಾಶ್ವತ ಎನ್ನುವುದು  ಮತ್ತೊಂದು ಸಂದೇಶ. ಆಧ್ಯಾತ್ಮಿಕವಾಗಿ ತೆಗೆದುಕೊಂಡರೆ, ಕಾಲ ಉರುಳಿದಂತೆ ಮನುಷ್ಯ ರೂಪ ಬದಲಾಗುತ್ತದೆ, ಹಳೆಯ ಶರೀರ ವಿಸರ್ಜನೆಯಾಗುತ್ತದೆ, ಕೊನೆಗೆ ಉಳಿಯುವುದು  ಚೇತನ, ಜೀವಾತ್ಮ ಮಾತ್ರಾ ಎಂದು ನಾನು ನಂಬಿದ್ದೇನೆ.
ಮೌನವಾಗಿ ಯೋಚಿಸಿದಾದ,ನಾನೂ ಸೇರಿದಂತೆ ಎಲ್ಲೂ ಕೂಡಾ ಶುದ್ದತೆ ಕಾಣಿಸುತ್ತಿಲ್ಲ, ಹೀಗಾಗಿ ಗಣೇಶ ಈ ಬಾರಿ ನನ್ನ ಬದುಕಿನೊಳಗೆ ಪ್ರವೇಶಿಸಲಿ, ಎಲ್ಲರಿಗೂ ಶುಭ ಸಂದೇಶವನ್ನೇ ನೀಡುವಂತಾಗಲಿ.


07 ಸೆಪ್ಟೆಂಬರ್ 2015

ಮೆಸೇಜ್ ಮಾತಿಗೆ ಜಗಳ ಏಕೆ. .?


                                                                ( Net Photo )
ಅವರಿಬ್ಬರೊಳಗೆ ಮಾತುಕತೆಯೇ ನಿಂತು ವಾರಗಳೇ ಕಳೆದುಹೋಗಿತ್ತು, ಕಾರಣ ಕೇಳಿದರೇ ಇಬ್ಬರದೂ ಉತ್ತರ ಇಲ್ಲ.  .!. ಬಳಿಕ ತಿಳಿಯಿತು, ಅದೊಂದು ಮೆಸೇಜ್‍ನಿಂದ ಮನಸ್ಸು ಒಡೆಯಿತು. . !. ಆದರೆ ಇಬ್ಬರೂ ನಂತರ ಹೇಳುತ್ತಾರೆ. ನಾನು ಹೇಳಿದ್ದು ಒಂದು ಆತ ಅರ್ಥೈಸಿದ್ದು ಇನ್ನೊಂದು. . !. ವಿಷಯ ತಿಳಿಯಾದಾಗ ಇಬ್ಬರೂ ಮತ್ತೆ ಒಂದಾದರು.
ಅಲ್ಲಿ  ಇಬ್ಬರೂ ಚರ್ಚೆ ಮಾಡುತ್ತಿದ್ದರು, ಆ ಘಟನೆಗೆ ಹೇಗೆ ಸಹಾಯ ಮಾಡುವುದು? , ಇದು ಕೂಡಾ ಒಂದು ಮೆಸೇಜ್ ಬಗ್ಗೆ ನಡದ ಚರ್ಚೆ. ಒಂದು ಗಲಾಟೆಗೆ ಕಾರಣವಾದರೆ ಮತ್ತೊಂದು ಒಂದಾಗಿ ಸಾಗುವ ಬಗ್ಗೆ ಮಾತುಕತೆ.
ಇಂದು ಹೆಚ್ಚಿನ ಸಂದರ್ಭ ನಡೆಯುವುದೇ ಇದೇ. ಒಳ್ಳೆಯ ಉದ್ದೇಶದಿಂದ ಒಂದು ಮೆಸೇಜ್ ಕಳುಹಿಸಿದರೆ ಅದು ಮತ್ತೊಂದು ರೂಪ ಪಡೆದುಕೊಳ್ಳುತ್ತದೆ. ಆಗ ಮನಸ್ಸುಗಳು ಒಡೆಯುತ್ತದೆ. ಈಗಂತೂ ವಾಟ್ಸಪ್‍ನಲ್ಲಿ ಮೆಸೇಜ್ ಫಾರ್ವರ್ಡ್ ಕೂಡಾ ಮಾಡುತ್ತೇವೆ, ಅದು ಇನ್ನೊಂದು ಅವಾಂತರವನ್ನೇ ಸೃಷ್ಟಿಸುತ್ತದೆ. ಮೊನ್ನೆ ನನ್ನ ಮಿತ್ರ ಹೇಳುತ್ತಿದ್ದ , ಅದ್ಯಾವುದೋ ಮೆಸೇಜ್ ಫಾರ್ವರ್ಡ್ ಮಾಡಿದ್ದನಂತೆ, ಅದೇ ವಿಷಯದಿಂದ ಎರಡು ಮನೆಯವರು  ಹೊಡೆದಾಟ ಮಾಡುವ ಸ್ಥಿತಿಗೆ ಬಂದಿದ್ದರಂತೆ. ವಾಸ್ತವವಾಗಿ ಈ ಮೆಸೇಜ್ ಏನು ಎಂದು  ಓದದೇ ಫಾರ್ವರ್ಡ್ ಮಾಡಿದ್ದ. .!, ಅದೇ ದೊಡ್ಡ ಗಲಾಟೆಗೂ ಕಾರಣವಾಯಿತು. ಆದರೆ ಆ ಬಳಿಕ ನೋಡಿಲ್ಲ ಎನ್ನುವುದು ಉತ್ತರವಾಗುವುದಿಲ್ಲ, ಉದ್ದೇಶಪೂರ್ವಕವಾಗಿಯೇ ಎಂಬುದು  ಗಟ್ಟಿಯಾಗುತ್ತದೆ.ಹೀಗಾಗಿ ಈಗ ಮೆಸೇಜ್ ಮಾಡುವಾಗಲೂ ಎಚ್ಚರಿಕೆ ಬೇಕು.ಕೆಲವೊಮ್ಮೆ ನಮ್ಮ ನಿಲುವಿಗೂ, ಆ ಮೆಸೇಜ್‍ಗೂ ಯಾವುದೇ ಸಂಬಂಧ ಇರುವುದೇ ಇಲ್ಲ, ಹಾಗಿದ್ದರೂ ಮೆಸೇಜ್ ಫಾರ್ವರ್ಡ್ ಮಾಡುತ್ತೇವೆ, ಅದೊಂದು ಖುಷಿ ಅಷ್ಟೇ.
ಮೊನ್ನೆ ಹೀಗೆಯೇ ಆಯಿತು, ಅದ್ಯಾವುದೋ ವಾಟ್ಸಪ್ ಗುಂಪಿನಲ್ಲಿ  ಚರ್ಚೆ ನಡೆಯುತ್ತಿತ್ತು, ಅದನ್ನು  ಮತ್ತೊಬ್ಬ ಫೋಟೊ ತೆಗೆದು ಇನ್ನೂ ಹಲವರಿಗೆ ಕಳುಹಿಸಿದ, ತಮಾಷೆಗಾಗಿ ಗುಂಪಿನಲ್ಲಿ  ಮಾಡಿದ ಚರ್ಚೆ ಗಂಭೀರ ಸ್ವರೂಪ ಪಡೆಯಿತು. ಮಿತ್ರರೊಳಗೇ ಅಪನಂಬಿಕೆ ಶುರುವಾಯಿತು.ಹೀಗಾಗಿ ಗುಂಪು ಚರ್ಚೆ ಕೂಡ ಕಷ್ಟ, ಇನ್ನೊಂದು ಕಡೆ ಗುಂಪು ಚರ್ಚೆ ನಡೆಯುವ ವೇಳೆ ಒಬ್ಬನಿಗೆ ಕಿರಿಕಿರಿಯಾಯಿತು, ಆತ ಎಲ್ಲರಿಗೂ ಕಿರಿಕಿರಿ ನೀಡಿದ, ಬೇಕಾದು ಬೇಡದ್ದು ಎಲ್ಲವನ್ನೂ ಗುಂಪಿಗೆ ಹಾಕಿದ ಅಲ್ಲೂ ಒಡಕು ಶುರುವಾಯಿತು.. .!.
ಹೀಗೇ.  . ಈಗ ಸಮಾಜದ ಎಲ್ಲೇ ಹೋಗಲಿ ಬಿರುಕುಗಳು. ಒಬ್ಬನ ತಪ್ಪುಗಳು ಬೇಡವೆನಿಸಿದರೂ ಬೇಗ ಸಿಕ್ಕಿಬಿಡುತ್ತದೆ, ಅದಕ್ಕೆ ತೀರ್ಮಾನ ಕೂಡಾ ಆಗಿ ಬಿಡುತ್ತದೆ.ಆದರೆ ವಾಸ್ತವದಲ್ಲಿ  ಆತನ ಉದ್ದೇಶವೇ ಬೇರೆಯದೇ ಇರುತ್ತದೆ, ಮಿತ್ರನೇ ಆಗಿರುತ್ತಾನೆ, ಆದರೆ ವೇಗದ ತಂತ್ರಜ್ಞಾನ ಆತನದೇ ತಪ್ಪು  ಅಂತ ಅಂತ ಹೇಳುತ್ತದೆ, ಮನಸ್ಸು ಒಪ್ಪಿಕೊಳ್ಳುತ್ತದೆ. ವಿಶ್ಲೇಷಿಸುವ ಹಾಗೂ ಮತ್ತೆ ಪರಾಮರ್ಶಿಸುವ ಬಗ್ಗೆ ಯೋಚಿಸುವುದಿಲ್ಲ ಈಗ ಮನಸ್ಸು. . .!

03 ಸೆಪ್ಟೆಂಬರ್ 2015

ಸಂದೇಶ ಕೃಷಿ ಪರವೂ ಇರಲಿ. .



ಪಕ್ಕದ ಮನೆಯಲ್ಲಿ  ಈರುಳ್ಳಿ ದಾಸ್ತಾನು,ತೆರಿಗೆ ಇಲಾಖೆ ಧಾಳಿ. .  ., ಈರುಳ್ಳಿಯೇ ಸ್ಪರ್ಧೆಗೆ ಬಹುಮಾನ. . . , ಈರುಳ್ಳಿ ಮಾಲೆಗೆ ಡಿಮ್ಯಾಂಡ್ . . .. ಹೀಗೇ ವಿವಿಧ ಮೆಸೇಜ್ ನಮಗೆಲ್ಲಾ ಬಂದೇ ಇದೆ. ಮೊನ್ನೆ ಮೊನ್ನೆ ಈರುಳ್ಳಿ ರೇಟ್ ಸಿಕ್ಕಾಪಟ್ಟೆ ಏರಿಕೆಯಾಯಿತು.ಎಲ್ಲರ ಮೊಬೈಲ್‍ಗೂ ಒಂದೊಂದು ಥರದ ಮೆಸೇಜ್, ವಿವಿಧ ಕಾರ್ಟೂನ್. ಎಲ್ಲವೂ ಧಾರಣೆ ಏರಿಕೆಯಾದ ಬಗ್ಗೆಯೇ ಇತ್ತು, ಅದರೊಳಗೆ ಒಂದು ವ್ಯಂಗ್ಯ, ತಮಾಷೆ ಅಷ್ಟೇ. ಆದರೆ ಅದರಾಚೆಗೆ ಸ್ವಲ್ಪ ಇಣುಕಿ. .  ಇದೆಲ್ಲಾ ಗ್ರಾಹಕ ಪರವಾಗಿಯೇ ಇದೆ. ರೈತರ ಪರವಾದ ಒಂದೇ ಒಂದು ಮೆಸೇಜ್ ಇತ್ತಾ. . ?.ನನ್ನೊಳಗೇ ನಾನು ಪ್ರಶ್ನೆ ಮಾಡುತ್ತಾ ಸಾಗಿದಾಗ ಕೆಲವು ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ.

ಈರುಳ್ಳಿ ಧಾರಣೆ ಏರಿಕೆಯಾದಾಗಂತೂ ಕೆಲವರು  ಹೇಳಿದರು , ಖರೀದಿಯೇ ಮಾಡಬೇಡಿ.. ವಿದೇಶದಲ್ಲಿ  ಹೀಗೆಯೇ ಮಾಡಿ ಧಾರಣೆ ಇಳಿಕೆ ಮಾಡಿದ್ದಾರೆ ಎಂದೂ ಹೇಳಿದ್ದರು.ಒಂದು ಕಡೆ  ನಾವು ವಿದೇಶದ ವ್ಯವಸ್ಥೆಯನ್ನು ವಿರೋಧಿಸಿತ್ತೇವೆ, ಮೋದಿ ಸರ್ಕಾರದ ನಡೆಯನ್ನು  , ರಾಜ್ಯ ಸರ್ಕಾರದ ನೀರಿಉನ್ನು ಖಂಡಿಸುತ್ತೇವೆ. ಮತ್ತೊಂದು ಕಡೆ ಅದೇ ವಿದೇಶಿ ನೀತಿ ಜಾರಿ ಮಾಡೋಣ ಅನ್ನುತ್ತೇವೆ.ಒಂದು ಕಡೆ 10 ರೂಪಾಯಿಗೆ 3 ಕೆಜಿ ಟೊಮೊಟೋ ಬೇಕು ಅನ್ನುತ್ತೇವೆ, ಇನ್ನೊಂದು ಕಡೆ ನಾವು ಬೆಳೆಯುವ ಅದ್ಯಾವುದೋ ವಸ್ತುವಿಗೆ ಎಷ್ಟೇ ರೂಪಾಯಿ ಸಿಕ್ಕರೂ ಸಾಲದು ಅನ್ನುತ್ತೇವೆ. ರೈತ ಬದುಕುಬೇಕು, ಬೆಳೆಯಬೇಕು ಅಂತ ಹೇಳುತ್ತೇವೆ , ಈ ಕಡೆ ರೇಟು ಸಿಕ್ಕಾಪಟ್ಟೆ ಅನ್ನುತ್ತೇವೆ. ಹಾಗಿದ್ದರೆ ನಮ್ಮ  ಕಾಳಜಿ ಯಾವುದು ?.

ಮೊನ್ನೆ ಈರುಳ್ಳಿ ರೇಟು ಹೆಚ್ಚಾದಾಗ ಅದನ್ನು  ಬೆಳೆಯುವ ರೈತನಿಗೆ ಇದೆಲ್ಲಾ ದಕ್ಕಿರಲಾರದು , ಆದರೆ ಕೊಂಚ ರೇಟು ಹೆಚ್ಚು ಸಿಕ್ಕಿರಬಹುದು. ಇಲ್ಲಿ ಏನನ್ನೂ ಬೆಳೆಯದ , ಕೇವಲ ಮದ್ಯವರ್ತಿಯಾದ ವ್ಯಕ್ತಿ ಸಾಕಷ್ಟು ಲಾಭ ಮಾಡಿದ್ದಾನೆ. ಇದಕ್ಕೆ ನಾವು ಈರುಳ್ಳಿ ಖರೀದಿ ಮಾಡುವುದಿಲ್ಲ ಎಂದರೆ ರೈತನಿಗೆ ಈ ರೇಟೂ ದಕ್ಕದು. ಆ ಬಳಿಕ ಸರ್ಕಾರವು  ಈ ವಿಚಾರದಲ್ಲಿ ಭಾರೀ ಕ್ರಮಕೈಗೊಂಡಂತೆ ಕಾಣಲಿಲ್ಲ.ಎಲ್ಲೇ ಆದರೂ ಮದ್ಯವರ್ತಿಗಳಿಗೆ ಲಾಭ ಮಾಡುವುದು ಇರುವುದೇ. ಆದರೆ ಅದರಲ್ಲಿ ನೇರ ಮಾರಾಟದ ವ್ಯವಸ್ಥೆ ಬಂದರೆ ಇದೆಲ್ಲಾ ಸಮಸ್ಯೆಗೆ ಪರಿಹಾರ ಸಿಕ್ಕೀತು, ಅದುವರೆಗೆ ಕಾಯೋಣ.
ಅಂದು ನನಗೂ ಹಾಗೆಯೇ ಆಗಿತ್ತು, ನಾನು ಬಾಳೆಗೊನೆ ಮಾರಾಟ ಮಾಡುತ್ತಿದೆ, ಅದೊಂದು ವ್ಯಾಪಾರಿಗೆ, ಅದೇ ವೇಳೆಗೆ ಖರೀದಿ ಮಾಡಲು ಒಬ್ಬರು ಬಂದರು, ನನ್ನೆದುರೇ ವ್ಯಾಪಾರವೂ ನಡೆಯಿತು. ನನ್ನ  ವಾಹನದಿಂದ ಖರೀದಿ ಮಾಡಿದ ವ್ಯಕ್ತಿಯ ವಾಹನಕ್ಕೇ ನೇರವಾಗಿ ಲೋಡ್ ಮಾಡಲಾಯಿತು. ಕೊನೆಗೆ ಎಲ್ಲಾ ವ್ಯವಹಾರ ಮುಗಿದ ಬಳಿಕ ಮತ್ತೊಂದು ಕಡೆ ಆತ ಸಿಕ್ಕಾಗ ಕೇಳಿದೆ, ಆಗ ತಿಳಿಯಿತು ಅಲ್ಲಿ  ವ್ಯಾಪಾರಿಗೆ ಸಿಕ್ಕಿದ್ದು  8 ರೂಪಾಯಿ.ಆದರೆ ನನಗೆ ನಷ್ಟವಾಗಿರಲಿಲ್ಲ.ಹೀಗಾಗಿ ಸಮಧಾನವಿತ್ತು. ಹಾಗಿದ್ದರೂ ನಾವು ಬೆಳೆದು ಕಷ್ಟಪಟ್ಟದ್ದು  ,ಆತ ಮದ್ಯವರ್ತಿಯಾಗಿದ್ದಕ್ಕೆ 8 ರೂಪಾಯಿ. ಮುಂದಿನ ಬಾರಿ ನಾನು ಈ ಬಗ್ಗೆ ಕೇಳಿದಾಗ ಆತ ಹೇಳಿದ್ದು, ನನಗೆ ಬಾಳೆಗೊನೆ ಬೇಡ. . !. ಅಂದರೆ ಮದ್ಯವರ್ತಿಗಳ ಶೋಷಣೆ ಇದ್ದದ್ದೆ.ಹಾಗೆಂದು  ಕೃಷಿಕನಿಗೆ ತಾನು ಬೆಳೆದ ಉತ್ಪನ್ನದ ಖರ್ಚು ಹಾಗೂ ಲಾಭಾಂಶ ಸಿಕ್ಕರೆ ಸಾಕು ಎಂದಷ್ಟೇ ಯೋಚಿಸಬೇಕಷ್ಟೇ.

ಧಾರಣೆ ಏರಿಕೆಯಾದಾಗ ಅದರ ಪಾಲು ಕೃಷಿಕನಿಗೂ ಲಭ್ಯವಾಗುತ್ತದೆ ನಿಜ. ಗ್ರಾಹಕರಿಗೆ ತೀರಾ ಹೊರೆಯಾಗುತ್ತದೆ ನಿಜ. ಆದರೆ ಖರೀದಿಯೇ ಮಾಡದೇ ಇದ್ದರೆ ಕೃಷಿಕನಿಗೆ ಕಹಿಯೇ. ಹಾಗಾಗಿ ನಮ್ಮ  ಸಂದೇಶ ಗ್ರಾಹಕರ ಪರ ಮಾತ್ರವಲ್ಲ  ಕೃಷಿಕರ ಪರವೂ ಇರಲಿ ಅಷ್ಟೇ.

28 ಆಗಸ್ಟ್ 2015

ಸ್ವಲ್ಪ ನೆಮ್ಮದಿಯಾಗಿರೋಣ. . . ಅದಕ್ಕಾಗಿ ಪ್ರಯತ್ನಿಸೋಣ. .


                                            (Photo from net)
ಆ ವಿಡಿಯೋ ದೇಶದಲ್ಲೆಲ್ಲಾ ಹರಿದಾಡಿತು. .  ನೋಡಿದ ಜನ ಹೀಗೂ ಆಗುತ್ತಲ್ಲಾ ಅಂದರು. .  ಅದೇ ಘಟನೆಗಾಗಿ ಭಾರೀ ಚರ್ಚೆಯಾಯಿತು,. . ಆದರೆ ಯಾರೊಬ್ಬರೂ ಅದಕ್ಕೆ ಪರಿಹಾರ ಏನು ಎಂಬ ಬಗ್ಗೆ ಹೇಳಿಲ್ಲ, ಸಮಸ್ಯೆಯ ಮೂಲದ ಬಗ್ಗೆ ಮಾತಾಡಿಲ್ಲ. . ಈಗ ಬೇಕಿರುವುದು  ರೋಗಕ್ಕೆ ಮದ್ದೇ ಹೊರತು  ಬ್ಯಾಂಡೇಜ್ ಅಲ್ಲ, ರೋಗದ ಬಗ್ಗೆಯೇ ವೈಭವ ಅಲ್ಲ. .
ನಾನು ಯೋಚಿಸಿದ್ದು ಮಂಗಳೂರಿನ ಅತ್ತಾವರದ ಬಳಿ ನಡೆದ ಹಲ್ಲೆ ಪ್ರಕರಣ. ಒಂದಷ್ಟು ಹುಡುಗರು ಸೇರಿ ಇನ್ನೊಬ್ಬ ಹುಡುಗನಿಗೆ ಹೊಡೆಯುತ್ತಿದ್ದರು, ಮತ್ತೊಬ್ಬ ಹುಡುಗ ಅದನ್ನೆಲ್ಲಾ ವಿಡಿಯೋ, ಫೋಟೊ ತೆಗೆದ ವಾಟ್ಸ್‍ಪ್‍ನಲ್ಲಿ  ಶೇರ್ ಮಾಡಿದ. ಅಷ್ಟೇ ಸಾಕಾಯಿತು.. ಇಂದು ಇಡೀ ಚೆರ್ಚ ಶುರುವಾಗಿದೆ. ಈ ವಿಡಿಯೋ ದಾಖಲಾಗದೆ ಮತ್ತೆಷ್ಟೋ ಘಟನೆಗಳು ನಮ್ಮಲ್ಲಿ  ನಡೆಯುತ್ತದೆ, ಚರ್ಚೆಯಾಗೋಲ್ಲ, ದೇಶದವರೆಗೆ ಹೋಗೋಲ್ಲ. ಇದು  ವಿಡಿಯೋ ಸಹಿತ ಸಾಕ್ಷಿ ಸಿಕ್ಕಿದೆ ಎಂಬ ಕಾರಣಕ್ಕೆ ದೊಡ್ಡ ಸುದ್ದಿಯಾಯಿತು. ಸುದ್ದಿಯಾಗಿದೆ . . . ಸುದ್ದಿಯಾಗಬೇಕು, ಹಲ್ಲೆ ಮಾಡುವ ಹಕ್ಕು ಯಾರಿಯೂ ಇಲ್ಲ, ಅದಕ್ಕೇ ಕಾನೂನು ಇದೆ, ಅನುಷ್ಟಾನ ಮಾಡಲು ಪೊಲೀಸರು ಇದ್ದಾರೆ. ಆದರೆ. .  . . .?
ಈ ಎಲ್ಲಾ ಪ್ರಕರಣ ಏಕೆ ನಡೆಯುತ್ತದೆ ಎಂದು  ಸುಮ್ಮನೆ ಯೋಚಿಸಿದಾಗ, ಕಾನೂನು ಇದೆ ನಿಜ ಇದೆ , ಅದು ಪಾಲನೆಯಾಗುತ್ತಿಲ್ಲ , ಹೀಗಾಗಿಯೇ ಆಕ್ರೋಶ ಹೆಚ್ಚಾಗಿ ಇಂತಹ ಪ್ರಕರಣಗಳೂ ಹೆಚ್ಚಾಗುತ್ತಿದೆ. ಸಿಕ್ಕಿದವನು ಯಾರೇ ಇರಲಿ, ಪೆಟ್ಟು ತಿನ್ನಲು ಸಿದ್ದವಾಗಿರಬೇಕು. ಈ ಪ್ರಕರಣದಲ್ಲಿ  ಮೇಲ್ನೋಟಕ್ಕೆ ಯುವತಿಯೊಬ್ಬಳು ಅನ್ಯಧರ್ಮದ ಯುವಕನೊಬ್ಬನೊಂದಿಗೆ ಮಾತನಾಡುತ್ತಿದ್ದಳು, ಅವನದೇ ಕಾರಿನಲ್ಲಿ  ಹೋಗುತ್ತಿದ್ದಳು ಎಂಬ ಕಾರಣಕ್ಕೆ ಹಲ್ಲೆ ನಡೆದಿದೆ ಎಂದು  ಈಗ ನಾವು ಮಾತನಾಡುತ್ತೇವೆ. ಇದು  ಸಾಂಕೇತಿಕವಾಗಿರಬಹುದು , ಹುಡುಗನೊಬ್ಬ ಹುಡುಗಿಯೊಂದಿಗೆ ಮಾತನಾಡುವುದು ತಪ್ಪಲ್ಲ  ನಿಜ, ಇಬ್ಬರೂ ಒಪ್ಪಿ ಮಾತನಾಡುವ, ಸುತ್ತಾಡುವ ಅಥವಾ ಇನ್ಯಾವುದೇ ಸಂಗತಿಗಳಿಗೆ ಯಾರೂ ತಲೆಕೆಡಿಸಿಕೊಳ್ಳಬೇಕಾಗಿಲ್ಲ.  ಆದರೆ ಆ ನಂತರ ಮುಂದೆ ಆಗುವ ಅನಾಹುತಗಳ ಬಗ್ಗೆ ನಮ್ಮಲ್ಲಿ ಎಷ್ಟು ಪ್ರಕರಣಗಳಲ್ಲಿ ಕ್ರಮವಾಗಿದೆ ?. ಕಾನೂನು ಕ್ರಮ ಎಲ್ಲಾಗಿದೆ ?. ಎಲ್ಲೋ ಒಂದೆರಡು  ಪ್ರಕರಣದಲ್ಲಿ ಕಾನೂನು ಪ್ರಕಾರ ಶಿಕ್ಷೆ ಆಗಿರಬಹುದು , ಆದರೆ ಬಹುತೇಕ ಪ್ರಕರಣಗಳಲ್ಲಿ  ಶಿಕ್ಷೆಯಾಗಿಲ್ಲ, ದೊಡ್ಡಮಟ್ಟದಲ್ಲಿ  ಸುದ್ದ್ದಿಯಾದ ಪ್ರಕರಣಗಳಲ್ಲಿ  ಮಾತ್ರವೇ ಶಿಕ್ಷೆಯಾಗಿದೆ.
ನಮ್ಮೂರಲ್ಲೇ ನೋಡುವುದಾದರೆ ತೀರಾ ಹಳೆಯದು ಎಂದರೆ ಪುತ್ತೂರಿನ ಸೌಮ್ಯ ಭಟ್ ಕೊಲೆ ಪ್ರಕರಣದಲ್ಲಿ  ಗಮನಿಸಿ  ಆರೋಪಿಗೆ ಶಿಕ್ಷೆಯಾಗಿದೆಯೇ ,ಆ ಆರೋಪಿ ಈಗಲೂ ನಾಪತ್ತೆ. .?, ಇನ್ನೂ ಅಲ್ಲೇ ಹತ್ತಿರದ ಮತ್ತೊಬ್ಬ ವಿದ್ಯಾರ್ಥಿನಿಯ ಮೇಲೆ ನಡೆದ ಪ್ರಕರಣದಲ್ಲಿ  ಶಿಕ್ಷೆಯಾಗಿದೆಯೇ,ಉಜಿರೆಯ ವಿದ್ಯಾರ್ಥಿನಿಯ ಕತೆ ಏನಾಯಿತು.  .?, ಕೊಣಾಜೆಯಲ್ಲಿ  ನಡೆದ ಪ್ರಕರಣದಲ್ಲಿ  ಏನಾಗಿದೆ. . ?,ಮಂಗಳೂರಿನಲ್ಲಿ  ಗಾಂಜಾ ಮಾರಾಟ ಪ್ರಕರಣ ಏನಾಯಿತು ?,ಕುಂದಾಪುರದಲ್ಲಿ  ಬಾಲಕಿ ಕೊಲೆ ಪ್ರಕರಣದ ಮುಂದಿನ ಬೆಳವಣಿಗೆ ಏನು ?,  ವಿದ್ಯಾರ್ಥಿನಿಯರ ವಿಡಿಯೋ ಹರಿದಾಡಿದ ಕೇಸ್‍ಗಳು ಏನಾದವು . .?, ಮೊನ್ನೆ ಮೊನ್ನೆ ಹೇಳುವ ಪುತ್ತೂರಿನ ವಿದ್ಯಾರ್ಥಿನಿಯ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ  ಆರೋಪಿ ಬಾಲಾಪರಾಧಿ ಎಂದು ಹೇಳಿಲ್ಲವೇ .  .?.. .  . . . . ಹೀಗೇ ಒಂದೆರಡಲ್ಲ ಹಲವಾರು ಪ್ರರಕಣಗಳು ನಮ್ಮಲ್ಲಿದೆ. ಯಾವುದರಲ್ಲೂ ಸರಿಯಾದ ನ್ಯಾಯ ಸಿಕ್ಕಿಲ್ಲ.ಒಂದು ವೇಳೆ ಈ ಎಲ್ಲಾ ಪ್ರಕರಣಗಳಿಗೆ ನ್ಯಾಯ ಸಿಗುತ್ತಿದ್ದರೆ. ಈ ಹುಡುಗರು  ಹಲ್ಲೆ ಮಾಡುತ್ತಿದ್ದರೇ. .?, ಯೋಚಿಸಬೇಕು.
ನ್ಯಾಯ ಸಿಗದೇ ಇರುವ ಕಾರಣದಿಂದಲೇ ಇಂದು ಪೊಲೀಸ್ ಇಲಾಖೆ ಹೋಗುವ ಮೊದಲೇ ಹಲ್ಲೆ ನಡೆಯುತ್ತದೆ. ಇದನ್ನೇ ನೈತಿಕ ಪೊಲೀಸ್‍ಗಿರಿ ಎನ್ನುತ್ತೇವೆ.ಈಗ ಒಬ್ಬ ಹುಡುಗ ಇನ್ನೊಂದು ಹುಡುಗಿಯ ಜೊತೆ ಮಾತನಾಡಲಾಗದ ಸ್ಥಿತಿ ನಿರ್ಮಾಣವಾಗಿ ಬಿಟ್ಟಿದೆ. ಜೊತೆಯಲ್ಲಿ ಹೋದರೇ ಪೆಟ್ಟು ತಿನ್ನುವ ಸಂದರ್ಭ ಒದಗಿದೆ.ಇದಕ್ಕೆ ಹೊಣೆ ಯಾರು ?, ಹೊಣೆಗಾರರನ್ನಾಗಿಸುವುದು  ಯಾರನ್ನು.  .?.
ಮೊನ್ನೆ ಪುತ್ತೂರಿನ ತಾಲೂಕು ಪಂಚಾಯತ್ ಸಭೆಯಲ್ಲಿ  ಜನಪ್ರತಿನಿಧಿಗಳು ಮಾತನಾಡಿದರು, ಯಾವುದೇ ಪ್ರರಕಣದಲ್ಲಿ  ಅನ್ಯಾಯವಾದರೆ, ನಾವು ನ್ಯಾಯದ ಪರ ನಿಲ್ಲುತ್ತೇವೆ, ಪೊಲೀಸರಿಗೆ ಒತ್ತಡ ತಾರದೆ ಸ್ವತಂತ್ರವಾಗಿ ಅವರು ತನಿಖೆ ಮಾಡುವಂತೆ ಸೂಚನೆ ನೀಡವ ಬಗ್ಗೆ ಮಾತನಾಡಿದರು.ನಿರ್ಣಯ ಮಾಡೋಣ ಎಂದೂ ಹೇಳಿದರು.ಇಂತಹ ಬೆಳವಣಿಗೆ ದೈನಂದಿನ ಜೀವನದಲ್ಲೂ ನಡೆಯಬೇಕು, ಸಭೆಗೆ ಮಾತ್ರವೇ ಸೀಮಿತವಾಗಬಾರದು, ಆಗ ನೈತಿಕ ಪೊಲೀಸ್‍ಗಿರಿ ಸಹಜವಾಗಿಯೇ ಕಡಿವಾಣ ಬೀಳುತ್ತದೆ.ನಿಜವಾದ ಆರೋಪಿಗೆ ಶಿಕ್ಷೆಯಾಗುತ್ತದೆ. ಕಾನೂನು ಸರಿಯಾಗಿ ಪಾಲನೆಯಾಗುತ್ತದೆ. ಸಮಾಜವೂ ನೆಮ್ಮದಿಯಾಗುತ್ತದೆ.

23 ಆಗಸ್ಟ್ 2015

ಅಡಿಕೆ ತೋಟಕ್ಕೆ ಔಷಧಿ ಸಿಂಪಡಣೆಗೆ ಕಾರ್ಮಿಕರ ತಂಡ. .

                                         ಔಷಧಿ ಸಿಂಪಡಣೆಗೆ ಕಾರ್ಮಿಕರ ತಂಡ



ಅಡಿಕೆ ಬೆಳೆಗಾರರು  ಕಳೆದ ಹಲವಾರು ಸಮಯಗಳಿಂದ ಸಂಕಟ ಪಡುವುದು  ಕೊಳೆರೋಗಕ್ಕೆ. ಮಳೆಗಾಲ ಶುರುವಾಯಿತು ಅಂದಾಗ ಭಯ ಶುರುವಾಗುತ್ತದೆ.ಕಾರಣ ಇಷ್ಟೇ, ಕೊಳೆರೋಗ ಬಾರದಂತೆ ಔಷಧಿ ಸಿಂಪಡಣೆಯಾಗಬೇಕು, ಆದರೆ ಇದಕ್ಕೆ ಕಾರ್ಮಿಕರ ಕೊರತೆ ಇದೆ.ಇನ್ನು ಕಾರ್ಮಿಕರು ಇದ್ದರೂ ವಿಪರೀತ ಸುಲಿಗೆ, ಕೃಷಿಕರನ್ನೇ ಶೋಷಣೆ. ಇದಕ್ಕೆಲ್ಲಾ ಪರಿಹಾರ ಬೇಕು ಅಂತಲೇ ಯೋಚನೆ ಇತ್ತು.
ಪರಿಸ್ಥಿತಿ ಹೀಗಿರುವಾಗ ನಮ್ಮ ವಾಟ್ಸ್‌ಪ್ ಗ್ರೂಪ್‌ಗೆ ಮಿತ್ರ ಚಿನ್ಮಯ ಒಂದು ಲೈನ್ ಮೆಸೇಜ್ ಪೋಸ್ಟ್ ಮಾಡಿದರು, ಔಷಧಿ ಸಿಂಪಡಣೆಗೆ ಕಾರ್ಮಿಕರ ತಂಡ ಇದೆ ಎಂದು. ಈ ಜಾಡು ಹಿಡಿದು ಪುತ್ತೂರು ತಾಲೂಕಿನ ಪೆರ್ನೆಯ ಕಡೆಗೆ ಹೋದಾಗ ಎಲ್ಲಾ ಸಂಗತಿಯನ್ನು  ಕಾರ್ಮಿಕ ಮುಖಂಡ ಯಶೋಧರ ಬಿಚ್ಚಿಟ್ಟರು. ಆ ಬಳಿಕ ನನಗಂತೂ ದೂರವಾಣಿ ಕರೆಗಳ ಮೇಕೆ ಕರೆಗಳು. ಆಗಲೇ ನನಗೆ ಅನ್ನಿಸಿದ್ದು  ಔಷಧಿ ಸಿಂಪಡಣೆಗೆ ಕಾರ್ಮಿಕರು ಇಷ್ಟೊಂದು ರೀತಿಯಲ್ಲಿ  ಶೋಷಣೆ ಮಾಡುತ್ತಾರಾ ?, ಹೀಗೆಲ್ಲಾ ಹೇಳಲಾಗದ ಸಮಸ್ಯೆಗಳು ಇದೆಯಾ ?.

ಹೀಗಿದೆ ಆ ತಂಡದ ಪರಿಚಯ. .  ..

ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಬಳಿಯ ಪೆರ್ನೆಯ ಯುವಕ ತಂಡ ಗುಂಪಿನ ಮೂಲಕ ಈಗ ಔಷಧಿ ಸಿಂಪಡಣೆಯ ಕೆಲಸ ಮಾಡುತ್ತಿದೆ.ಈ ತಂಡದ ನಾಯಕ ಯಶೋಧರ ನಾಯ್ಕ್.ಇವರು ಕಳೆದ 15 ವರ್ಷಗಳಿಂದ ತೋಟಗಳಿಗೆ ಔಷಧಿ ಸಿಂಪಡಣೆಯ ಕೆಲಸ ಮಾಡುತ್ತಿದ್ದಾರೆ.ಇವರ ಜೊತೆ ಕಳೆದ ಮಾಧವ ನಾಯ್ಕ್ ಕೂಡಾ ಸಾತ್  ನೀಡುತ್ತಿದ್ದರು.ಇದೀಗ 5 ವರ್ಷಗಳಿಂದ 8 ಜನರ ಯುವಕರ ತಂಡ ಕಟ್ಟಿ ಔಷಧಿ ಸಿಂಪಡಣೆಯ ಕೆಲಸ ಮಾಡುತ್ತಿದ್ದಾರೆ.ಈಗ ತಂಡದಲ್ಲಿ  ದೇವಪ್ಪ  ನಾಯ್ಕ್, ಗಂಗಾಧರ ನಾಯ್ಕ್,ರಾಜೇಶ್ ನಾಯ್ಕ್,ವಿಜಯ ನಾಯ್ಕ್,ಪದ್ಮನಾಭ ಪೂಜಾರಿ ಹಾಗೂ ಮಹೇಶ್ ಶೆಟ್ಟಿ ಇದ್ದಾರೆ. ಈಗಾಗಲೇ ಪೆರ್ನೆ, ಸರಪಾಡಿ, ನೆಲ್ಯಾಡಿ,ಮಂಜೇಶ್ವರ ಸೇರಿದಂತೆ 35 ರಿಂದ 40 ತೋಟಗಳಲ್ಲಿ  ಔಷಧಿ ಸಿಂಪಡಣೆ ಹಾಗೂ ಅಡಿಕೆ ಕಟಾವು ಮಾಡುವ ಹೊಣೆಯನ್ನು  ಹೊತ್ತಿದ್ದಾರೆ. ಶನಿವಾರ ಉಪ್ಪಿನಂಗಡಿ ಬಳಿಯ ಪೆರ್ನೆ ಬಿಳಿಯೂರು ಕಟ್ಟೆಯ ಧನ್ಯಕುಮಾರ್ ಅವರ ತೋಟದಲ್ಲಿ  ಔಷಧಿ ಸಿಂಪಡಿಸುವ ಕಾರ್ಯ  ನಡೆಯುತ್ತಿದ್ದರು.
ಅಡಿಕೆ ತೋಟಕ್ಕೆ ಔಷಧಿ ಸಿಂಪಡಣೆಯ ವೇಳೆ, ಮೋಟಾರು ಸಹಿತ 8 ಜನ ಮನೆಗೆ ಆಗಮಿಸುತ್ತಾರೆ, ಮನೆ ಮಂದಿ ಔಷಧಿ ತಯಾರಿಸಿ  ನೀಡಿದರೆ ಮುಗಿಯಿತು. ಇವರ ಜೊತೆ ಔಷಧಿ ತಯಾರಿಗೆ ಜನ ಬೇಕಾದರೆ ಕೂಡಾ ಇವರೇ ಕರೆದುಕೊಂಡು ಬರುತ್ತಾರೆ. 8 ಜನರಿಗೆ ಕನಿಷ್ಟ 3 ಜನ ಸಹಾಯಕರ ಅಗತ್ಯವಿದೆ ಎನ್ನುವ ಯಶೋಧರ , ಈ ಹೊಣೆಯನ್ನೂ ನಾವು ಹೊತ್ತುಕೊಳ್ಳುತ್ತೇವೆ ಎಂದು  ಹೇಳುತ್ತಾರೆ.ಇಷ್ಟೂ ಜನ ಒಂದು ದಿನದಲ್ಲಿ  6 ರಿಂದ 7 ಸಾವಿರ ಅಡಿಕೆ ಮರಗಳಿಗೆ ಔಷಧಿ ಸಿಂಪಡಿಸುತ್ತಾರೆ.ಮೋಟಾರು ಸಹಿತ ಮನೆಗೆ ಮನೆ ಆಗಮಿಸಿ ಔಷಧಿ ಸಿಂಪಡಣೆಯ ಕಾರ್ಯದಲ್ಲಿ  ನಿರತವಾಗುತ್ತದೆ.ಮನೆ ಮಂದಿ ಔಷಧಿ ತಯಾರಿಸಿ  ನೀಡಿದರೆ ಮುಗಿಯಿತು. ಅಡಿಕೆ ಕಟಾವು ವೇಳೆ ಕೂಡಾ ಜನವನ್ನೂ ವ್ಯವಸ್ಥೆ ಮಾಡಿ ಮನೆಗೆ ಬಂದು ಕೆಲಸ ಮಾಡಿ ತೆರಳುತ್ತಾರೆ.ಇಡೀ ವರ್ಷ ಈ ತಂಡ ಇದೇ ಕೆಲಸ ಮಾಡುತ್ತದೆ.ಮೋಟಾರಿಗೆ ಬಾಡಿಗೆ 2 ಸಾವಿರ ರೂಪಾಯಿ ಪಡೆಯುವ ಈ ತಂಡ ತಮ್ಮ ಕೆಲಸ ಕಾರ್ಯಗಳಿಗೆ ದಿನ ಲೆಕ್ಕದಲ್ಲಿ  ಸಂಬಳವನ್ನು  ಪಡೆಯುತ್ತಾರೆ.ಇವರು  ದಿನಕ್ಕೆ 1200 ರೂಪಾಯಿ ಸಂಬಳ ಪಡೆಯುತ್ತಾರೆ.



ಬದಲಾವಣೆ ಬೇಕು.  .
ಈಗ ಇಲ್ಲಿ  ರಚನೆಯಾದ ತಂಡ ಬಹುಶ: ಶಾಶ್ವತವಾಗಬಹುದು.ಏಕೆಂದರೆ ತಂಡದ ಸದಸ್ಯರು ಬಹುತೇಕ ಮಂದಿ ಸಂಬಂಧಿಕರು.ಒಂದೆರಡು ಮಂದಿ ಮಾತ್ರವೇ ಇತರರು. ಹೀಗಾಗಿ ತಂಡ ಒಡೆಯುವ ಸಾಧ್ಯತೆ ಕಡಿಮೆ.ಒಡೆದರೂ ಮತ್ತೊಂದು ಅಂತಹದ್ದೇ ತಂಡ ರಚನೆಯಾಗಬಹುದು.ಇದು ಕೂಡಾ ಕೃಷಿಕರಿಗೆ ಪ್ರಯೋಜನ. ಇದರ ಜೊತೆಗೇ ಸಹಕಾರಿ ಸಂಘಗಳು ಇಂತಹ ತಂಡ ರಚನೆ ಮಾಡುವ ಬಗ್ಗೆ ಯೋಚಿಸಿದರೆ ಹೆಚ್ಚು ಗಟ್ಟಿಯಾಗಬಹುದು. ಏಕೆಂದರೆ ಆಗ ಸಹಕಾರಿ ಸಂಘಕ್ಕೆ ಬದ್ದತೆ ಇರುತ್ತದೆ. ಕೃಷಿಕರಿಗೂ ಹಾಗೆಯೇ. ಇನ್ನು  ಸಂಬಳದ ಬಗ್ಗೆ ಕೃಷಿಕರು  ಹೆಚ್ಚು ತಲೆಕೆಡಿಸಿಕೊಳ್ಳಬೇಕಾಗಿಲ್ಲ, ಏಕೆಂದರೆ ಒಂದೇ ದಿನದಲ್ಲಿ  ತೋಟದ ಔಷಧಿ ಸಿಂಪಡಣೆ ಕೆಲಸ ಮುಗಿಯುತ್ತದೆ, ಎಷ್ಟೇ ಮಳೆ ಇದ್ದರೂ ದಿನದಲ್ಲಿ  ಒಂದೆರಡು ಗಂಟೆ ಮಳೆಗೆ ವಿರಾಮ ಇದ್ದೇ ಇರುತ್ತದೆ.ಆಗ ಬಹುಪಾಲು ಸಿಂಪಡಣೆಯೂ ಆಗುತ್ತದೆ.
ಹೊಸ ಪ್ರಕ್ರಿಯೆಗಳು ಆರಂಭವಾದಾಗ ಕೆಲವೊಂದು ಲೋಪಗಳೂ ಇರುತ್ತದೆ. ಆದರೆ ಕೃಷಿಕರು ಎಲ್ಲವೂ ನಾವು ಅಂದುಕೊಂಡತೇ ಈಗ ಆಗಬೇಕು ಎಂದರೂ ಆಗದು.ಹೀಗಾಗಿ ಬದಲಾವಣೆ ಬೇಕು, ಅದನ್ನು  ಒಪ್ಪಿಕೊಳ್ಳಬೇಕು, ತೀರಾ ನಷ್ಟವಾಗುವುದಾದರೆ ಮಾತ್ರವೇ ಯೋಚಿಸಬೇಕು. ಹೀಗಾದಾಗ ಕೃಷಿ ಉಳಿಯಲು, ಬೆಳೆಯಲು ಸಾಧ್ಯವಿದೆ.
.



ಮನಸ್ಸೇ ಬೀಗ ತೆಗೆ. . .


ಅನೇಕ ದಿನಗಳಿಂದ ಈ ಕಡೆಗೆ ಬರಲು ಸಾದ್ಯವೇ ಆಗಿರಲಿಲ್ಲ.ಮನಸ್ಸು ಸದಾ ಇತ್ತ ಹೊರಳುತ್ತಲೇ ಇತ್ತು.ಆದರೆ ಸಾಧ್ಯವಾಗುತ್ತಿರಲಿಲ್ಲ, ಅದಕ್ಕೊಂದು ಬೀಗ ಇತ್ತು.ಈಗಂತೂ ಆ ಬೀಗ ಕಳಚಿ ಬಂದಿದ್ದೇನೆ. .

ಅಂದು ಒಂದು ದಿನ ನಾನು ಮನಸ್ಸಿನ ಸಂಗತಿಗಳನ್ನು  ಮೌನವಾಗಿ ಹೇಳುತ್ತಿದೆ, ಇದೆಲ್ಲವೂ ಇಲ್ಲಿ ದಾಖಲಿಸುತ್ತಲೇ ಇದ್ದೆ.ಅನೇಕ ರೀತಿಯಿಂದ ಸ್ಪೂರ್ತಿ, ಪ್ರೋತ್ಸಾಹ ಇತ್ತು. ಒಂದು ದಿನ ಇದ್ದಕ್ಕಿದ್ದಂತೆ ನನಗೆ ಒತ್ತಡ ಬಂದಿತ್ತು, ಹಿತವಚನ, ಸಲಹೆ ಬಂತು. ಕೊನೆಗೆ ಈ ವೇಗಕ್ಕೆ ಕಡಿವಾಣ ಹಾಕಿದೆ.ಮನಸ್ಸಿನ ಮಾತಿಗೆ ಬೀಗ ಜಡಿದೆ. ಆದರೆ ನನಗೆ ಈಗಲೂ ನೆನಪಿದೆ, ಅಂದು ನನ್ನ ಮನಸ್ಸಿನ ಮೂಲಕ ಬಂದ ಮೌನದ ಮಾತುಗಳು ಇಂದು ದೊಡ್ಡ ಸುದ್ದಿಯಾಗಿದೆ. ಚರ್ಚೆಯಾಗುತ್ತಲೇ ಇದೆ. ಇರಲಿ ನನಗೆ ಅದು ಸಂಬಂಧಪಟ್ಟದ್ದಲ್ಲ. ನನಗೆ ಯಾರ ಬಳಿಯೂ ಬೇಸರವಿಲ್ಲ, ನೋವುಗಳೂ ಇಲ್ಲ. ಯಾರ ವಿರೋಧಿಯಂತೂ ಅಲ್ಲವೇ ಅಲ್ಲ. ಎಲ್ಲರೂ ನನ್ನವರೇ, ನಮ್ಮವರೇ. ಅಂದು ಮನಸ್ಸು ಕೊಂಚ ಮೌನವಾಗಿತ್ತು, ಮೌನಿಯಾಗಿತ್ತು. ಆದರೆ ಈಗ ಹಾಗಿಲ್ಲ. ಎಲ್ಲವೂ ರೈಟ್, ಎಲ್ಲದಕ್ಕೂ ರೈಟ್. ಹಾಗಿದ್ದರೂ ಈ ಬೀಗ ತೆರವು ಮಾಡಲು ಆಗಿರಲಿಲ್ಲ. ಈಗ ತೆರೆದಿದ್ದೇನೆ.
ಇಂದಿನಿಂದಲೇ ಇಲ್ಲಿ  ಶುರು.  ..

13 ಜೂನ್ 2014

ಇದೆಲ್ಲದರ ನಡುವೆ ನಮ್ಮೊಳಗೊಬ್ಬ ಮೋದಿ ಬೆಳೆಯದಿದ್ದರೆ ಹೇಗೆ ?


ಕಳೆದ ಅನೇಕ ದಿನಗಳಿಂದ ನನ್ನನ್ನು  ಕಾಡುತ್ತಲೇ ಇತ್ತು. ಇಂದು ಇಡೀ ದೇಶಕ್ಕೆ ದೇಶವೇ ನರೇಂದ್ರ ಮೋದಿ ಅವರ ಕಾರ್ಯವೈಖರಿಯನ್ನು  ಹೊಗಳುತ್ತಿದೆ. ಇಷ್ಟೇ ಆದರೆ ಸಾಕೇ ? ದೇಶ ನಂ.1 ಆಗಲು ಸಮರ್ಥವಾಗಿ ತಲೆ ಎತ್ತಲು ಮೋದಿ ಅವರ ಶ್ರಮ ಮಾತ್ರಾ ಸಾಕಾ ? ನಾವು ದಿನವೂ ಮೋದಿ ಅವರನ್ನು  ಹೊಗಳಿಕೊಂಡೇ ಇದ್ದರೆ ಸಾಕೇ ?, ಅಂತ ಅನಿಸುತ್ತಲೇ ಇದೆ.ಹಾಗಾದರೆ ನಾನೇನು ಮಾಡಬಹುದು ?, ನಾನೇಕು ಮಾಡಬೇಕು ಎಂದು  ಯೋಚಿಸಿದಾಗ ನನಗನ್ನಿಸಿದ್ದು , ಮೋದಿ ಅವರ ದಿನ ಚಟುವಟಿಕೆಗೆ ಶೇ.30 ರಷ್ಟು ನನ್ನ  ಬದುಕಿನಲ್ಲೂ ಅಳವಡಿಸಿಕೊಳ್ಳಬೇಕು. ಅಷ್ಟು ಸಾಕು. .

                                                                                                    (ಚಿತ್ರ - ಅಂತರ್ಜಾಲ )
                                                     
ಮೋದಿ ಅವರು ಎಷ್ಟು ಪ್ರಭಾವಿಯಾಗಿ ಬೆಳೆದರು ಎಂದರೆ ಪ್ರತಿಯೊಬ್ಬರಲ್ಲೂ ಅವರಿಗೆ ತಿಳಿಯಂದಂತೆಯೇ ಸೇರಿಕೊಂಡಿದ್ದರು,
ಆತ ಅನೇಕ ವರ್ಷಗಳಿಂದ ಮನೆಗೆ ಬಂದಿರಲಿಲ್ಲ, ತನ್ನ ಬೆಳವಣಿಗೆಯ ನಡುವೆ ತಾಯಿಯ ಆಶೀರ್ವಾದ ಪಡೆಯಲೇ ಇಲ್ಲ.ಆದರೆ ಇದ್ದಕ್ಕಿದ್ದಂತೆಯೇ ಆತ ಮನೆಗೆ ಬಂದು ತಾಯಿಯ ಆಶೀರ್ವಾದ ಪಡೆದ.ನಂತರ ಹೇಳಿದ ದೇಶದ ಪ್ರಧಾನಿ ನರೇಂದ್ರ ಮೋದಿ ಪಕ್ಷದ ಗೆಲುವು, ತನ್ನ ಅಭೂತಪೂರ್ವ ಗೆಲುವಿನ ನಂತರ ತನ್ನ ತಾಯಿಯ ಆಶೀರ್ವಾದ ಪಡೆದರು, ಆದರೆ ನಾನು ಇದೆಲ್ಲಾ ಮರೆತೇ ಹೋಗಿದ್ದೆ, ಈಗ ಮೋದಿ ಪ್ರೇರಣೆಯಾದರು ಎಂದು ಭಾವಪರವಶನಾದ. .!. ಟೀಕೆಗಳೂ ಏನೇ ಇರಲಿ, ಒಬ್ಬ ವ್ಯಕ್ತಿಯನ್ನು ಧನಾತ್ಮಕವಾಗಿ ಬದಲಿಸಲು ಸಾಧ್ಯವಾಗಿದೆ ಎಂದರೆ ಇಡೀ ದೇಶದ ಮಟ್ಟಿಗೆ ಅದೊಂದು ಒಳ್ಳೆಯ ಬೆಳವಣಿಗೆ.ದೇಶದ ಪ್ರಧಾನಿ ನರೇಂದ್ರ ಮೋದಿ ಕೇವಲ ಪ್ರಧಾನಿಯಾಗಿಲ್ಲ, ಪ್ರತಿಯೊಬ್ಬರ ಬದುಕಿಗೆ ಪ್ರೇರಣೆಯನ್ನೂ ನೀಡುವವರಾಗಿದ್ದಾರೆ.ಬಹುಶ: ದೇಶದ ಇತಿಹಾಸದಲ್ಲೇ ಇದು ಮೊದಲು.

ದೇಶದ ಚುನಾವಣೆ ಮುಗಿದು ಅಭೂತಪೂರ್ವ ಗೆಲುವು ಬಿಜೆಪಿ ಪಡೆದುಕೊಂಡಿತು.ಇದರ ಹಿಂದಿನ ಶಕ್ತಿಯಾಗಿ ನರೇಂದ್ರ ಮೋದಿ ಕಾಣಿಸಿಕೊಂಡರು. ದೇಶದ ಪ್ರಧಾನಿಯಾಗಿಯೂ ಆಯ್ಕೆಯಾದರು.ಚುನಾವಣಾ ಪೂರ್ವದಿಂದಲೇ ಸಾಕಷ್ಟು ನಿರೀಕ್ಷೆ ಇರಿಸಿಕೊಂಡೇ ಬಂದಿದ್ದ ನರೇಂದ್ರ ಮೋದಿ ಸೋಶಿಯಲ್ ಮೀಡಿಯಾದ ಮೂಲಕವೂ ತನ್ನ ಛಾಪನ್ನು  ಬೆಳೆಸಿದರು.ಅಲ್ಲಿ ಜನರ ಸಲಹೆ, ಚರ್ಚೆಯಲ್ಲೂ ಭಾಗವಹಿಸಿದರು.ಹೀಗಾಗಿ ಯುವ ಸಮೂಹವನ್ನು  ತನ್ನೆಡೆಗೆ ಸೆಳೆದುಕೊಂಡರು.ಪರಿಣಾಮ ಇಡೀ ದೇಶದಲ್ಲಿ ಮೋದಿ ಹವಾ ಹೆಚ್ಚಾಯಿತು.ಇಂದು  ಪ್ರತೀ ಉತ್ಪನ್ನದ ಹಿಂದೆಯೂ ಮೋದಿ ಬ್ರಾಂಡ್ ಶುರುವಾಗಿದೆ.ಒಬ್ಬ  ವರ್ತಕರು ಇತ್ತೀಚೆಗೆ ಹೇಳುತ್ತಿದ್ದರು, ಮೋದಿ ಹೆಸರಿನ ಸೋಪು ಅನೇಕ ವರ್ಷಗಳಿಂದ ಹಿಂದಿನಿಂದಲೇ ಇತ್ತು, ಆದರೆ ಇದೀಗ ಈ ಸೋಪಿಗೆ ತೀರಾ ಬೇಡಿಕೆ ಬಂದಿದೆ ಎಂದು.ಅದರ ಜೊತೆಗೆ ಪೇಸ್ಟ್‌ಗಳು, ಬಟ್ಟೆಗಳು, ದೇಶೀ ಉಡುಪು, ಆಹಾರ ಕ್ರಮಗಳು ಸೇರಿದಂತೆ ವಿವಿಧ ರೀತಿಯಲ್ಲಿ ಮೋದಿ, ಬದುಕಿನ ಭಾಗವಾಗಿದ್ದಾರೆ.ಅಂದರೆ ಪ್ರತೀ ವ್ಯಕ್ತಿಯ ಒಳಗಡೆ ಮೋದಿ ಸೇರಿಕೊಂಡಿದ್ದಾರೆ.ಬಹುಶ: ದೇಶದ ಪ್ರಧಾನಿಯೊಬ್ಬ ಇಷ್ಟೊಂದು ಪ್ರಭಾವಿಯಾಗಿ ಬೆಳೆದದ್ದು ಇದೇ ಮೊದಲು.ದೇಶದ ಪ್ರಧಾನಿ ಬಗ್ಗೆ ಮಾಧ್ಯಮಗಳೂ ಈಗ ಅತ್ಯಂತ ಎಚ್ಚರಿಕೆಯಿಂದ ಗಮನಹರಿಸುತ್ತಿವೆ, ದಿನಕ್ಕೆ ಕನಿಷ್ಟ ೫೦ ರಿಂದ ೧೦೦ ಸುದ್ದಿಗಳು ನರೇಂದ್ರ ಮೋದಿ ಅವರಿಗೆ ನೇರವಾಗಿ ಹಾಗೂ ಪರೋಕ್ಷವಾಗಿ ಸಂಬಂಧಿಸಿದ್ದು  ಇದ್ದೇ ಇರುತ್ತವೆ.ಅಂದರೆ ಮೋದಿ ಅವರು  ಅಷ್ಟು ಕ್ರಿಯಾತ್ಮಕವಾಗಿ ಕೆಲಸ ಮಾಡುತ್ತಿದ್ದಾರೆ, ಘಟನೆಯ ಬಗ್ಗೆ ತಕ್ಷಣ ಟ್ವೀಟ್, ಪೇಸ್‌ಬುಕ್ ಮೂಲಕ ಪ್ರತಿಕ್ರಿಯೆ ನೀಡುತ್ತಾರೆ.ಹೀಗಾಗಿ ಮಾಧ್ಯಮಗಳೂ ಸದಾ ಕ್ರಿಯಾಶೀಲವಾಗಿರಬೇಕಾಗಿದೆ,ಸುದ್ದಿಗಳನ್ನು  ಅನಿವಾರ್ಯವಾಗಿ ನೀಡಬೇಕಾಗಿದೆ.ಅಧಿಕಾರಿಗಳೂ ಕೆಲಸ ಮಾಡಲೇಬೇಕಾಗುತ್ತದೆ.ಹಿಂದಿನ ಪ್ರಧಾನಿ ಅತ್ಯಂತ ಮೌನವಾಗಿದ್ದರಿಂದ ಇದೆಲ್ಲಾ ಸಮಸ್ಯೆಯೇ ಇದ್ದಿರಲಿಲ್ಲ.. .!.ಹೀಗಾಗಿ ಮಾಧ್ಯಮ ವಲಯದ ಪ್ರತಿಯೊಬ್ಬನಲ್ಲೂ ಮೋದಿ ಅವರ ಕ್ರಿಯಾಶೀಲತೆ ಬೆಳೆಯಬೇಕಾಗುತ್ತಿದೆ, ಫಾಲೋ ಮಾಡಲೇಬೇಕಾಗಿದೆ.

ನರೇಂದ್ರ ಮೋದಿ ಅವರು ಗೆಲುವು ಕಂಡ ತಕ್ಷಣವೇ ಮೊದಲು  ಆಶೀರ್ವಾದ ಪಡೆಯುವುದು ಮತ್ತು  ಪಡೆದದ್ದು  ಅವರ ತಾಯಿ ಹಿರಾಬೆನ್ ಅವರದ್ದು. ಇದಕ್ಕೆ ಕೂಡಾ ಕೆಲವರು ಟೀಕೆ ಮಾಡಿದರು, ಈ ಹಿಂದೆ ಯಾವಾಗ ಭೇಟಿ ನೀಡಿದ್ದಾರೆ ಮತ್ತು  ಇನ್ನು ಯಾವಾಗ ಭೇಟಿ ನೀಡುತ್ತಾರೆ ಎಂದು  ಚುಚ್ಚಿದರು.ಇರಲಿ, ಟೀಕೆಗೆ ಮೋದಿ ಅವರು  ಉತ್ತರಿಸುವುದಿಲ್ಲ,ಉತ್ತರಿಸಬೇಕಾಗಿಯೂ ಇಲ್ಲ. ಆದರೆ ಇಲ್ಲಿ  ಗಮನಿಸಬೇಕು, ಇಂದಿಗೂ ತಾಯಿಯ ಆಶೀರ್ವಾದ ಪಡೆಯದೇ ಎಷ್ಟೋ ಮಂದಿ ಇದ್ದಾರೆ, ತಾಯಿಯನ್ನು  ಮನೆಯಿಂದ ದೂಡಿದವರು ಸೇರಿದಂತೆ ಅನೇಕರಿಗೆ ಮೋದಿ ಸ್ಫೂರ್ತಿಯಾದರು.ಈ ಆ ಚಿತ್ರ ನೋಡಿದ ಅನೇಕರು  ತಾಯಿಯ ಭೇಟಿಗೆ ಉತ್ಸುಕರಾದರು.ಸ್ವತ: ಪಾಕಿಸ್ತಾನದ ಪ್ರಧಾನಿ ಕೂಡಾ ಭಾವಪರವಶರಾದರು.ಇಂದು ಇದೇ ಒಂದು ಘಟನೆಯಿಂದಾಗಿ  ತಾಯಿಯ ಮಹತ್ವವನ್ನು  ಇಡೀ ಜಗತ್ತಿಗೆ ಸಾರಿದ ಮೊದಲ ಪ್ರಧಾನಿಯಾದರು , ಅನೇಕರ ಮೇಲೂ ಪ್ರಭಾವ ಬೀರಿದರು.ಒಬ್ಬ ಜನನಾಯಕನಿಂದ ಸಮಾಜಕ್ಕೆ ಆಗಬೇಕಾಗಿರುವುದು ಇಂತಹ ಧನಾತ್ಮಕ ಪ್ರಭಾವ ಅಲ್ಲದೇ ಮತ್ತಿನ್ನೇನು.?.

ಪ್ರತಿಯೊಬ್ಬನ ಬದುಕಿಗೂ ,ಪ್ರತೀ ವಿಚಾರದಲ್ಲೂ ಪ್ರಭಾವ ಬೀರುವ, ಸಂದೇಶವನ್ನೂ ನೀಡುವ ಮೋದಿ ನಮಗರಿವಿಲ್ಲದೆಯೇ ನಮ್ಮೊಳಗೆ ಬೆಳೆಯಬೇಕು, ಬೆಳೆಯುತ್ತಿದ್ದಾನೆ. ನರೇಂದ್ರ ಮೋದಿ ಅವರ ದಿನಚರಿ ಅನೇಕರ ಮೇಲೆ ಪ್ರಭಾವ ಬೀರಿದೆ.ಬೆಳಗ್ಗೆ 4.30 ರಿಂದ ರಾತ್ರಿ 11 ಗಂಟೆಯವರೆಗೆ ಬಿಡುವಿಲ್ಲದ ಕೆಲಸ ದಿನಚರಿ  ಪ್ರತೀ ವ್ಯಕ್ತಿಯ ಬದುಕಿನ ಭಾಗವಾಗಬೇಕು, ಮೋದಿ ಬ್ರಾಂಡ್ ಖರೀದಿ ಮಾಡಿದಂತೆಯೇ ಅವರ ಜೀವನ ಕ್ರಮವೂ ಬದುಕಿನ ಜೊತೆ ಸೇರಿಕೊಳ್ಳಬೇಕು. ಸಾಮಾಜಿಕವಾಗಿ ಕೆಲಸ ಮಾಡುವ ಪ್ರಮುಖರು ಹೇಗೆ ಮಾಡೆಲ್ ಆಗಿರಬೇಕು ಎಂಬುದಕ್ಕೆ ನರೇಂದ್ರ ಮೋದಿ ಸಾಕ್ಷಿ.ಸಾರ್ವಜನಿಕ ಬದುಕಿನಲ್ಲಿ ಭ್ರಷ್ಟಾಚಾರ ರಹಿತ ಆಡಳಿತ ನಡೆಸುವುದಕ್ಕೆ ಮೋದಿ ಅವರೇ ಆದರ್ಶ. ಗುಜರಾತ್‌ನಿಂದ ದೆಹಲಿಗೆ ತೆರಳುವ ವೇಳೆ ತನ್ನಲ್ಲಿದ್ದ ಹಣವನ್ನು ವಾಹನ ಚಾಲಕರ ಮಕ್ಕಳ ವಿಧ್ಯಾಭ್ಯಾಸಕ್ಕೆ ನೀಡಿದ್ದಾರೆ, ಭ್ರಷ್ಟಾಚಾರದ ಸೋಂಕಿಲ್ಲ, ಇಲ್ಲಿ  ಮೋದಿ ಬಗ್ಗೆ ಭಾಷಣ ಮಾಡುವ ಎಲ್ಲಾ ರಾಜಕಾರಣಿಗಳೂ ಸೇರಿದಂತೆ ಪ್ರತಿಯೊಬ್ಬರ ಬದುಕಿನಲ್ಲೂ ಮೋದಿ ಪ್ರಭಾವ ಅಳವಡಿಸಿಕೊಳ್ಳಬೇಕು, ಆಗ ಭ್ರಷ್ಟಾಚಾರ ರಹಿತ ದೇಶ ನಿರ್ಮಾಣ ಸಾಧ್ಯ.ಇದಕ್ಕಾಗಿ ಇನ್ನೊಂದು ಪಕ್ಷದ ಅಗತ್ಯವೇ ಇಲ್ಲ.ಅಧಿಕಾರಿಗಳಿಗೆ ನಿಜವಾದ ಅಧಿಕಾರ ನೀಡಬೇಕು, ಜನರಿಗೆ ಮತ್ತು  ಅಧಿಕಾರಿಗಳ ನಡುವೆ ಜನಪ್ರತಿನಿಧಿಗಳು ಸಂಪರ್ಕ ಸೇತುವಾಗಬೇಕು. ಅಧಿಕಾರ ಪಡೆದ ನಂತರ ಇತರ ಪಕ್ಷಗಳನ್ನು  ಅನಗತ್ಯವಾಗಿ ಟೀಕೆ ಮಾಡದೆ  ಅಭಿವೃಧ್ಧಿ, ಸೇವೆ ಬಗ್ಗೆಯೇ ಮಾತನಾಡಬೇಕು ಎಂಬ ಮೋದಿ ಅವರ ನಿಲುವು ಎಲ್ಲರಲ್ಲೂ ಬೆಳೆಯಬೇಕು. ಇದೆಲ್ಲಾ ಕನಿಷ್ಟ ಅಂಶಗಳು ನಮ್ಮೊಳಗೆ ಬೆಳೆಯುತ್ತಾ ಸಾಗಿದಂತೆ ನಮ್ಮೊಳಗೇ ಒಬ್ಬ ಮೋದಿ ಬೆಳೆಯುತ್ತಾ ಸಾಗುತ್ತಾನೆ, ದೇಶ 5 ವರ್ಷದಲ್ಲೇ ವಿಶ್ವಮಟ್ಟದಲ್ಲಿ  ಪ್ರಭಾವಿಯಾಗಿ ಬೆಳೆದು ವಿಶ್ವವಂದ್ಯವಾಗಬಹುದು.ಇದಕ್ಕೆ ನಾವು ಸಜ್ಜಾಗೋಣ. ನಮ್ಮೊಳಗೊಬ್ಬ ಮೋದಿಯನ್ನು ಇಲ್ಲಿ ಬೆಳೆಸೋಣ.ಪ್ರಧಾನಿ ನರೇಂದ್ರ ಮೋದಿ ಅಭಿಮಾನದ ಜೊತೆಗೆ ಅವರ ಆಡಳಿತಕ್ಕೆ ಈ ಮೂಲಕ ಸಹಕಾರ ನೀಡೋಣ.

ಇಂತಹ ದೊಡ್ಡ ಸಹಕಾರ ಇಲ್ಲದೇ ಹೋದರೆ ಮೋದಿ ಅವರನ್ನು ಹೊಗಳುತ್ತಾ, ಸಂಸತ್ತಿನಲ್ಲಿ  ಅತ್ಯಂತ ಕನಸಿನ ಭಾರತ , ದೇಶದ ಗುರಿಯ ಬಗ್ಗೆ ಮೋದಿ ಅವರು ಮಾತನಾಡುವ ವೇಳೆ ಹಿಂದಿನ ಸಾಲಿನಲ್ಲಿ  ಮಲಗಿದರೆ ಏನು ಪ್ರಯೋಜನ ?

---------------






16 ಮಾರ್ಚ್ 2014

ಅಲ್ಲೇ ಕೂತು ಇಲ್ಲಿಯ ಮಾತು. .!


ನನಗೆ ಪ್ರತೀ ಬಾರಿಯೂ ಕಾಡುವ ಪ್ರಶ್ನೆ ಮತ್ತು  ಉತ್ತರ ಸಿಗದ ಪ್ರಶ್ನೆಯೂ ಇದೇ.

ದೂರದ ನಗರದಲ್ಲಿ  ಕುಳಿತು ಹಳ್ಳಿಯ ಸುಖವನ್ನು  ವರ್ಣಿಸುವುದರಲ್ಲೇ ಕಾಲವನ್ನು  ಏಕೆ ಕಳೆಯುತ್ತಾರೆ ? ಮೂಲಭೂತವಾಗಿ ಆನನೋ. . ಅವಳೋ. .  ಹಳ್ಳಿಯಿಂದಲೇ ಹೋದವರು.ಹಾಗಿದ್ದರೆ ಮತ್ಯಾಕೆ ಈ ಸುಖವನ್ನು  ಬಿಟ್ಟು ಹೋದ ?.ನನ್ನ ಪ್ರಶ್ನೆಗೆ ಉತ್ತರವೇ ಇಲ್ಲ. .!.



ಅಲ್ಲಿ ನಡೆಯುತ್ತಾ ಇದ್ದದ್ದು ತಾಲೂಕಿನ ಸಾಹಿತ್ಯ ಸಮ್ಮೇಳನ.

ಸಾಹಿತ್ಯದ ಸಮ್ಮೇಳನ ಎಂದಾಗ ವಿವಿಧ ಕಾರ್ಯಕ್ರಮಗಳು ಇದ್ದೇ ಇರುತ್ತದೆ.ನಾನು ಗಮನಿಸಿದ, ಕೇಳಿದ ಅಷ್ಟೂ ಗೋಷ್ಟಿಗಳಲ್ಲಿ  ಈ ಮಣ್ಣಿನ ಸ್ಪರ್ಶ ಇತ್ತು.ಆದರೆ ಕೊನೆಗೆ ಎಲ್ಲೋ ಒಂದು ಕಡೆ ಅದು ಮತ್ತೆ ಬರುತ್ತಿದ್ದದ್ದು ವಾಸ್ತವಿಕತೆಗಿಂತಲೂ ಹೆಚ್ಚಾಗಿ ವೈಭವೀಕರಣದ ಕಡೆಗೇ. ಹಳ್ಳಿಯಿಂದ “ನಗರದ ಕಾಂಕ್ರೀಟು” ಕಾಡಿಗೆ ತೆರಳಿದ ಆತನೋ. .  ಅವಳೋ. . ಇಂದು ಹಳ್ಳಿಯೇ ಅಂದ. .  ಇಲ್ಲಿಯ ಸುಖ ಅಲ್ಲಿಲ್ಲ ಎನ್ನುತ್ತಾನೆ. ಹಾಗೆ  ಹೇಳುವುದರ ಜೊತೆಗೇ ಹಳ್ಳಿಗೇ ಮತ್ತೆ ಬರುತ್ತೇನೆ ಎಂಬ ಮನಸ್ಥಿತಿ ಏಕೆ ಬರುವುದಿಲ್ಲ.ಬದುಕಿಗೆ . ಜೀವನೋಪಾಯಕ್ಕಾಗಿ  ನಗರವೇ ಆಗಬೇಕು ಏಕೆ.ಗ್ರಾಮೀಣ ಭಾರತ ಅಂತ ಒಂದಿಗೆ. .  ಹಳ್ಳಿ ಎಂಬ ಸುಂದರ ನಾಡಿದೆ ಇಲ್ಲಿಯೂ ಕೃಷಿ ಮಾಡಿಯೋ. . ಇತರ ಉದ್ಯೋಗ ಮಾಡಿಯೋ ಏಕೆ ಬದುಕು ಕಟ್ಟಿಕೊಳ್ಳಬಾರದು ?. ಭಾಷಣದಲ್ಲೋ. .  ಗೋಷ್ಟಿಯಲ್ಲೋ ಹೇಳುವ ಹಾಗೆ ಇದು ಸುಂದರ ನಾಡು ಆದರೆ.ಹಳ್ಳಿಯಲ್ಲಿ  ಮತ್ತೊಂದು ಸುಂದರ ಲೋಕ ಸೃಷ್ಟಿ ಮಾಡಬಹುದಲ್ಲಾ ?.

ಮೊನ್ನೆ ನಾನು ಕವಿಗೋಷ್ಟಿ ಕೇಳುತ್ತಿದ್ದೆ, ಅಲ್ಲಿ ನಾಲ್ಕು ಗೋಡೆಯ ನಡುವಿನ ಕುಟುಂಬದ ಕತೆ. .  ಮಕ್ಕಳ ಬದುಕಿನ ಬಗ್ಗೆ ಕೇಳಿದ್ದೆ. ಇಷ್ಟಕ್ಕೂ ಮತ್ತೆ ಮತ್ತೆ ಅದೇ ಮಕ್ಕಳು ಸಣ್ಣ ನಗರದಿಂದ ದೊಡ್ಡ ನಗರಕ್ಕೆ ವಲಸೆ ಹೋಗುತ್ತಾರೆ . ಅವರದೇ ಮಿತ್ರರು  ಹೋಗುತ್ತಾರೆ.ಕನಿಷ್ಟ ಹಳ್ಳಿಯ ಸುಂದರ ಬದುಕನ್ನು ಉಳಿಸಿಕೊಳ್ಳಲು ಒಬ್ಬನನ್ನಾದರೂ ಇಲ್ಲಿಯೇ ಉಳಿಸಿಕೊಳ್ಳಬಹುದಲ್ಲಾ ?, ಉಳಿದುಕೊಳ್ಲಬುದಲ್ಲಾ ?. ಅದು ಯಾಕೆ ಆಗುವುದಿಲ್ಲ. ಅಂದರೆ ಇದು  ಸಾಹಿತ್ಯಕ್ಕಾಗಿ , ತನ್ನ ವೈಭವೀಕರಣಕ್ಕೆ ಮಾತ್ರಾ ಅಂತ ಅರ್ಥವೇ?..

ಇದೆಲ್ಲಾ ಯೋಚಿಸುತ್ತಿದ್ದ ನನಗೆ ಅನಿಸಿದ್ದು,

ಅಲ್ಲಿ ನಿಜವಾದ ಆತ್ಮಾನುಭವ . .ಹಳ್ಳಿಯ , ಕೃಷಿ ಗ್ರಾಮೀಣ ಬದುಕನ್ನು ಉಳಿಸುವುದು, ಕಟ್ಟಿಡುವುದು ಉದ್ದೇಶವೇ ಅಲ್ಲ. ಅದೊಂದು  ಪಾಸಿಂಗ್. .  ಸುಮ್ಮನೇ ಹರಟೆಯ ಹೊತ್ತು  ಮಾತ್ರಾ .ಏಕೆಂದರೆ ಸಾಹಿತ್ಯ ಕಾರ್ಯಕ್ರಮ ಅಂದಾಕ್ಷಣ ಅಲ್ಲಿ ಒಂದಷ್ಟು ವಿವಾದ, ವಿಷಾದಗಳು,ಅನಗತ್ಯ ಸಂಗತಿಗಳು ಬೇಕೇ ಬೇಕು.ಹಾಗಾಗಿ ಹಾಗೇ ಸುಮ್ಮನೆ ಕುಳಿತು ಹೋಗುವುದೇ ಒಳ್ಳೆಯದೋ ಏನೋ ಅಂತ ಅನಿಸುತ್ತಿದೆ ಈಗೀಗ.

18 ಡಿಸೆಂಬರ್ 2013

ಗಿಡ ಮಾತಾಡಿತು. . !


ಅನೇಕ ದಿನಗಳ ಬಳಿಕ ಬ್ಲಾಗಿಲು ತೆಗೆಯಿತು. .!, ಹಾಗೆಯೇ ಒಳಗೆ ಹೋದಾಗ ಖುಷಿಯಾಯಿತು. .!
ಮನಸ್ಸು ಈಗ ನಿರಾಳವಾಗಿದೆ. ಮೌನ ಮಾತಾಗಿದೆ.

ಕಳೆದ ಕೆಲವು ದಿನಗಳಿಂದ ಮನಸ್ಸು ಓಡುತ್ತಲೇ ಇತ್ತು,ಯೋಚಿಸುತ್ತಲೇ ಇತ್ತು.ಆದರೆ ದೇಹ ಇದು ಯಾವುದಕ್ಕೂ ಸ್ಪಂದಿಸುತ್ತಲೇ ಇರಲಿಲ್ಲ.ಹಾಗೆಂದು  ಮನಸ್ಸು ದೇಹ ಎರಡಕ್ಕೂ ತಾಳ-ಮೇಳವೇ ಇಲ್ಲ ಎಂದಲ್ಲ, ಅನಗತ್ಯ ಯೋಚನೆ, ಓಡುವ ಮನಸ್ಸಿನ ಕಡೆಗೆ ಲಕ್ಷ್ಯ ಬೇಡ ಎನ್ನುತ್ತಿತ್ತು ಅಷ್ಟೇ.

ಕಳೆದ ಸುಮಾರು ಒಂದೂವರೆ ವರ್ಷಗಳಿಂದ ಮನೆಯ ಸುತ್ತಲೂ ಇರುವ ತೋಟದ ಕಡೆಗೆ ,ಗಿಡಗಳ ಕಡೆಗೆ ಲಕ್ಷ್ಯ ಕೊಟ್ಟು ಹೋದದ್ದೇ ಕಡಿಮೆ.ಅದೇನೇ ಇದ್ದರೂ ಒಂದಷ್ಟು ಕೆಲಸ ಮಾಡಿ ಕೂಡಲೇ ಬೇರೆ ಕಡೆ ತೆರಳಬೇಕಾಗಿತ್ತು. ಅನಿವಾರ್ಯ ಕೂಡಾ ಆಗಿತ್ತು ಅದು.ಈಗ ಕೊಂಚ ಬಿಡುವು. ಇಡೀ ತೋಟದ ಕಡೆಗೆ ಹೋದಾಗ ಗಿಡಗಳೆಲ್ಲಾ ಸಿಟ್ಟಾಗಿದ್ದುವೋ ಏನೋ , ಮಾತನಾಡುತ್ತಿರಲಿಲ್ಲ , ಎಲ್ಲಾ ಗಿಡಗಳು ಕೂಡಾ ದುರುಗುಟ್ಟಿ ನೋಡಿದಂತೆ ಅನಿಸಿತೊಡಗಿತು.ಪ್ರತೀ ಗಿಡ ನನ್ನನ್ನು ಅಣಕಿಸುತ್ತಿತ್ತು, ಕೊನೆಗೂ ನಮ್ಮ ಪಾದದ ಕಡೆಗೆ ಬಂದೆಯಾ ಎಂಬಂತೆ ಭಾಸವಾಯಿತು. .!.ಮತ್ತೆ ಮತ್ತೆ ತೋಟದ ಕಡೆಗೆ ಹೆಜ್ಜೆ ಹಾಕಿದೆ , ಗಿಡಗಿಗೂ ಖಷಿಯಾಯಿತು , ಈಗ ಪ್ರೀತಿಯಿಂದ ಸ್ವಾಗತಿಸಿದೆ , ಮಾತನಾಡಿತು. . !, ಅಕ್ಕರೆಯಿಂದ ಗಾಳಿಯ ನೀಡಿ ತಂಪು ನೀಡಿತು.


ಈಗ ನನಗನಿಸಿತು ,ಒಳಗೊಳಗೇ ಪ್ರಶ್ನೆ ಮೂಡಿತು ಅಷ್ಟೂ ದಿನಗಳ ಕಾಲ ನಾನು ಓಡಡಿದ ಆ ಊರು , ಆ ಜನ ಈಗ ಎಲ್ಲಿದ್ದಾರೆ ?, ಮಾಡಿದ ಅಷ್ಟೂ ಕೆಲಸಗಳು ಏನಾದವು ?, ಇಲ್ಲ ಉತ್ತರವೇ ಇಲ್ಲ.ಆದರೆ ಒಂದಂತೂ ಸತ್ಯ ,ಒಂದಷ್ಟು ಜನ ಗುರುತಿಸಿದ್ದಾರೆ , ಎಲ್ಲೋ ಒಮ್ಮೊಮ್ಮೆ ನೆನಪಾಗುತ್ತದೆ, ಆದರೆ ಅದೆಲ್ಲಾ ಕ್ಷಣಿಕ. . !.ಹಾಗಿದ್ದರೆ ಏನು ಸಾರ್ಧಕ ? ಎಂಬ ನನ್ನ ಪ್ರಶ್ನೆಗೆ ಉತ್ತರ ಆಳದಲ್ಲಿದೆ. ಹೆಕ್ಕಿ ತೆಗೆಯಬೇಕು.

ಆದರೆ ನಾನು ಆ ನನ್ನ ಗಿಡಗಳ ಬಳಿಗೆ ಹೋಗಿ ಪ್ರೀತಿಯಿಂದ ಮಾತನಾಡಿದೇ ಹೋದರೂ ಕೂಡಾ ಇಂದು ಮತ್ತೆ ನನ್ನನ್ನು ಸ್ವಾಗತಿಸಿದೆ , ಅದೂ ಅಣಕಿಸುತ್ತಾ ಕೇಳಿದೆ ,"ಎಲ್ಲೆಲ್ಲೋ ಸುತ್ತಾಡಿದೆ, ಸುಮಾರು 10 ವರ್ಷಗಳಿಂದ ಊರು ಊರು ಅಲೆದಾಟ ಮಾಡಿದೆ , ಯಾರ್ಯಾರನ್ನೋ ಮಾತನಾಡಿಸಿದೆ , ಸಹಾಯ ಮಾಡಿದೆ, ಈಗ ಏನಾಯಿತು ?" 

ಇದಕ್ಕೆ ಮೌನವೇ ಉತ್ತರ. . !

ಗಿಡದ ಹತ್ತಿರ ಮತ್ತೆ ಮತ್ತೆ ಮಾತಾಡಿದೆ,ಸಂಜೆಯವರೆಗೆ ಗಿಡಗಳ ಬಳಿಯೇ ಓಡಾಡಿದೆ.
ಅದಕ್ಕೂ ಖುಷಿಯಾಯಿತು , ನನಗೂ ಮತ್ತೆ ಹೊಸಹುರುಪು ಬಂತು, ಮನಸ್ಸು ಉಲ್ಲಾಸದಿಂದ ಕುಣಿಯಿತು.
 ಈ ಹಿಂದೆ ಯಾರ್ಯಾರಲ್ಲೋ ನನ್ನ ಬಗ್ಗೆ ವಿಚಾರಿಸುತ್ತಾ, ದಿನವಿಡೀ ಓಡಾಡಿದರೂ ಕಚೇರಿಗೇ ಬಂದೇ ಇಲ್ಲ ಎಂಬ ಮಾತುಗಳು ಈಗ ಕೇಳಲೇ ಬೇಕಿಲ್ಲ , ಏಕೆಂದರೆ ಈಗ ಗಿಡಗಳೇ ನನ್ನ ಹಾಜರಿಯನ್ನು ಖಚಿತ ಪಡಿಸುತ್ತಿವೆ.!.

ಆದರೂ ಮತ್ತೆ ಮತ್ತೆ ಅದೇ ಕಾಡುತ್ತದೆ , 10 ವರ್ಷ ವ್ಯರ್ಥವಾಯಿತಾ ? ,ವ್ಯರ್ಥವಾದ 10 ವರ್ಷಗಳ ನಂತರ ಹೊಸತೊಂದು "ಸೇವೆ"ಗೆ ಅವಕಾಶವಾಯಿತಾ ?. 

ಈಗ ಮತ್ತೆ ಅದೇ ಸುದ್ದಿ ಬಂದಾಗ ಗಿಡಗಳು ನನ್ನನ್ನು ದುರುಗುಟ್ಟಿ ನೋಡುತ್ತಿದೆ. . ! ಏನೆಂದು  ಹೇಳಲಿ ಅವುಗಳಿಗೆ ?.
ಅವುಗಳ ಪ್ರೀತಿಯಿಂದ ಹೊರಬರಲು ಆಗುತ್ತಲೇ ಇಲ್ಲ.



21 ಮಾರ್ಚ್ 2013

ಏಕಾಂಗಿ ವ್ಯಕ್ತಿಗೆ ಹತ್ತು ಮನಸ್ಸು . . .!

ನನ್ನೂರಿನ ದೇವಸ್ಥಾನಕ್ಕೆ ಹೋಗಿದ್ದೆ.

ಅಪರಿಚಿತ ವ್ಯಕ್ತಿ ಅಲ್ಲಿದ್ದರು. ದೇವಸ್ಥಾನದ ಅರ್ಚಕರು ಹೇಳಿದರು , ಇವರು  ಪಾದಯಾತ್ರೆ ಮಾಡುತ್ತಿದ್ದಾರೆ ಕನ್ಯಾಕುಮಾರಿಗೆ ಎಂದರು. ಸಹಜವಾಗಿಯೇ ಅದೊಂದು ಮಾಮೂಲಿ ನಡಿಗೆ ಅಂದುಕೊಂಡಿದ್ದೆ , ಆದರೆ ನಂತರ ಮಾತನಾಡುತ್ತಾ , ಅವರೊಳಗಿನ ಸಂಗತಿ  ಅರಿವಾಯಿತು. .  .

ಅವರು  ಕಿರಣ್. ವಿದೇಶಿ ಕಂಪನಿಯೊಂದರಲ್ಲಿ ಕೈತುಂಬಾ ಸಂಬಳ ಎಣಿಸುತ್ತಿದ್ದರು , ಪ್ರತಿಭಾವಂತ ಎಂಜಿನಿಯರ್ ಕೂಡಾ ಆಗಿದ್ದರು. ಆದರೆ ಆಕಸ್ಮಿಕ ಘಟನೆಯೊಂದು  ಅವರ ಬದುಕಿನಲ್ಲಿ ನಡೆಯಿತು. ಅವರ ಕುಟುಂಬದ ಎಲ್ಲರೂ ಅಪಘಾತದಲ್ಲಿ ತೀರಿಕೊಂಡರು. ಉಳಿದದ್ದು ಏಕಾಂಕಿ. ಅದಾಗಲೇ ವಿವಿಧ ಕಡೆ ಆಸ್ಥಿ ಹೊಂದಿದ್ದ ಅವರಿಗೆ ವಿವಿಧ ಸಂಬಂಧಿಕರು  ಹತ್ತಿರವಾದರು .. ಆಸ್ಥಿ ಪ್ರೀತಿ  ಹೆಚ್ಚಿತು. ಪೀಡೆ ಹೆಚ್ಚಾದಾಗ . . ನೇರವಾಗಿ ಹಿಮಾಲಯದ ಕಡೆಗೆ ತೆರಳಿದರು.ಆಧ್ಯಾತ್ಮದ ಮಾರ್ಗ ಹಿಡಿದರು.

ನಗರದಲ್ಲಿದ್ದ ಸುಮಾರು  ಆರು  ಎಕ್ರೆ ಭೂಮಿಯನ್ನು ಅನಾಥಾಶ್ರಮಕ್ಕೆ ಧಾರೆ ಎರೆದರು.ಸ್ವಂತಕ್ಕೆ ಅಂತ ಒಂಚೂರು  ಇರಿಸಿಕೊಂಡರು.ಬಳಿಕ ಯಾತ್ರೆ ನಡೆಸಿದರು , ಇಡೀ ದೇಶವನ್ನು ಕಾಲು ನಡಿಗೆಯಲ್ಲೇ ಪರಿಕ್ರಮ ಮಾಡುವ ಉದ್ದೇಶ, ಇನ್ನು  ಸುಮಾರು  ೫೦  ದಿನದಲ್ಲಿ ಕನ್ಯಾಕುಮಾರಿ  ತಲುಪುತ್ತಾರೆ. ಅಂದರೆ ಕಾಲುನಡಿಗೆ ಶುರುಮಾಡಿ ಅದಾಗಲೇ ವರ್ಷ  ಅನೇಕ ಉರುಳಿ ಹೋಗಿದೆ. ಅಲ್ಲಿಂದ ಮತ್ತೆ ಮುಂದಿನ ದಾರಿ  ಯೋಚಿಸಬೇಕು ಎನ್ನುತ್ತಾರೆ.

ಇಡೀ ನಡಿಗೆಗೆ ಯಾವ ಪ್ಲಾನೂ ಇಲ್ಲ ಅವರಲ್ಲಿ , ಎಲ್ಲಿ ಇರುತ್ತೇನೆ ಗೊತ್ತಿಲ್ಲ , ಯಾರು ಊಟ ಕೊಡುತ್ತಾರೆ ಗೊತ್ತಿಲ್ಲ , ಎಲ್ಲಿ ಮಲಗುತ್ತೇನೆ ಗೊತ್ತಿಲ್ಲ. . .. !. ಅದೆಲ್ಲಾ ಬಿಡಿ ಕೈಯಲ್ಲಿ ಒಂದು  ರೂಪಾಯಿ ಹಣವೂ ಇಲ್ಲ , ಹಣ ಇದ್ದರೆ ಅದು  ಟೂರ್ ಆಗುತ್ತದೆ , ಯಾತ್ರೆ ಆಗಲ್ಲ ಅಂತಾರೆ ಅವರು. ಇನ್ನು ಮೊಬೈಲ್ ಇದೆ ಉಪಯೋಗಿಸೋದೇ ಇಲ್ಲ.  ಯಾರಿಗೂ ನಂಬರೂ ಕೊಡಲ್ಲ. ಇಡೀ ದಿನದಲ್ಲಿ ರಾತ್ರಿ ಮಾತ್ರಾ ಊಟ. ದಿನಕ್ಕೆ ೬ ರಿಂದ ೭ ಲೀಟರ್ ನೀರು , ಇದಿಷ್ಟೇ ಆಹಾರ.

ಇದೆಲ್ಲಾ ಮಾತನಾಡುವ ಹೊತಿಗೆ ಅವರು  ವೈದ್ಯರ ಬಗ್ಗೆ ಕೇಳಿದರು , ಕಾಲುಗಳ ಮಾಂಸ ಖಂಡ ನೋಡಿದರೆ ತೀರಾ ಗಟ್ಟಿಯಾಗಿತ್ತು , ಇದು  ಸರಿಯಾಗಲು ಇನ್ನು ಒಂದು  ತಿಂಗಳ ಚಿಕಿತ್ಸೆ ಬೇಕಾಗುತ್ತದೆ ಎನ್ನುವ ಮಾನಸಿಕವಾದ ಸಿದ್ದತೆಯೂ ಇದೆ. ಇವರಲ್ಲಿ.

ಇಷ್ಟೆಲ್ಲಾ ದೈಹಿಕ ಶ್ರಮದ ನದುವೆಯೂ ಮಾನಸಿಕವಾದ ಸಂತಸ ಕಾಣುವ ಈ ವ್ಯಕ್ತಿ ಏಕಾಂಕಿ. ಆದರೆ ಬೆಂಬಲಿಸುವ , ಜೊತೆಯಾಗುವ ಮನಸ್ಸುಗಳು ಹತ್ತಾರು. ಇದೆಲ್ಲಾ ಪ್ರಚಾರ ಮಾಡುವುದೇ ಇಲ್ಲ ,ಪ್ರಚಾರಾ ಮಾಡಿದರೆ ಮರುದಿನ ಆ ಶರ್ಟೇ ಹಾಕೋದಿಲ್ಲವಂತೆ , ಏಕೆಂದರೆ ಜನ ಗುರುತಿಸುತ್ತಾರೆ ,ಅದು  ಪ್ರಚಾರ ಪಡೆಯುತ್ತೆ , ಅದೆಲ್ಲಾ ಇಲ್ಲವೇ ಇಲ್ಲ ಎನ್ನುವ ಕಿರಣ್ ಗೆ ಸುಮಾರು ೪೫ ವರ್ಷ ಆಗಬಹುದು.

ಅಂತಿಮವಾಗಿ ಏನು ಎಂದು ಕೇಳಿದರೆ ಮಾನಸಿಕವಾದ ಶಾಂತಿ. .  ಗುರುಗಳ ಮಾರ್ಗದರ್ಶನ.