23 ಆಗಸ್ಟ್ 2015

ಅಡಿಕೆ ತೋಟಕ್ಕೆ ಔಷಧಿ ಸಿಂಪಡಣೆಗೆ ಕಾರ್ಮಿಕರ ತಂಡ. .

                                         ಔಷಧಿ ಸಿಂಪಡಣೆಗೆ ಕಾರ್ಮಿಕರ ತಂಡ



ಅಡಿಕೆ ಬೆಳೆಗಾರರು  ಕಳೆದ ಹಲವಾರು ಸಮಯಗಳಿಂದ ಸಂಕಟ ಪಡುವುದು  ಕೊಳೆರೋಗಕ್ಕೆ. ಮಳೆಗಾಲ ಶುರುವಾಯಿತು ಅಂದಾಗ ಭಯ ಶುರುವಾಗುತ್ತದೆ.ಕಾರಣ ಇಷ್ಟೇ, ಕೊಳೆರೋಗ ಬಾರದಂತೆ ಔಷಧಿ ಸಿಂಪಡಣೆಯಾಗಬೇಕು, ಆದರೆ ಇದಕ್ಕೆ ಕಾರ್ಮಿಕರ ಕೊರತೆ ಇದೆ.ಇನ್ನು ಕಾರ್ಮಿಕರು ಇದ್ದರೂ ವಿಪರೀತ ಸುಲಿಗೆ, ಕೃಷಿಕರನ್ನೇ ಶೋಷಣೆ. ಇದಕ್ಕೆಲ್ಲಾ ಪರಿಹಾರ ಬೇಕು ಅಂತಲೇ ಯೋಚನೆ ಇತ್ತು.
ಪರಿಸ್ಥಿತಿ ಹೀಗಿರುವಾಗ ನಮ್ಮ ವಾಟ್ಸ್‌ಪ್ ಗ್ರೂಪ್‌ಗೆ ಮಿತ್ರ ಚಿನ್ಮಯ ಒಂದು ಲೈನ್ ಮೆಸೇಜ್ ಪೋಸ್ಟ್ ಮಾಡಿದರು, ಔಷಧಿ ಸಿಂಪಡಣೆಗೆ ಕಾರ್ಮಿಕರ ತಂಡ ಇದೆ ಎಂದು. ಈ ಜಾಡು ಹಿಡಿದು ಪುತ್ತೂರು ತಾಲೂಕಿನ ಪೆರ್ನೆಯ ಕಡೆಗೆ ಹೋದಾಗ ಎಲ್ಲಾ ಸಂಗತಿಯನ್ನು  ಕಾರ್ಮಿಕ ಮುಖಂಡ ಯಶೋಧರ ಬಿಚ್ಚಿಟ್ಟರು. ಆ ಬಳಿಕ ನನಗಂತೂ ದೂರವಾಣಿ ಕರೆಗಳ ಮೇಕೆ ಕರೆಗಳು. ಆಗಲೇ ನನಗೆ ಅನ್ನಿಸಿದ್ದು  ಔಷಧಿ ಸಿಂಪಡಣೆಗೆ ಕಾರ್ಮಿಕರು ಇಷ್ಟೊಂದು ರೀತಿಯಲ್ಲಿ  ಶೋಷಣೆ ಮಾಡುತ್ತಾರಾ ?, ಹೀಗೆಲ್ಲಾ ಹೇಳಲಾಗದ ಸಮಸ್ಯೆಗಳು ಇದೆಯಾ ?.

ಹೀಗಿದೆ ಆ ತಂಡದ ಪರಿಚಯ. .  ..

ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಬಳಿಯ ಪೆರ್ನೆಯ ಯುವಕ ತಂಡ ಗುಂಪಿನ ಮೂಲಕ ಈಗ ಔಷಧಿ ಸಿಂಪಡಣೆಯ ಕೆಲಸ ಮಾಡುತ್ತಿದೆ.ಈ ತಂಡದ ನಾಯಕ ಯಶೋಧರ ನಾಯ್ಕ್.ಇವರು ಕಳೆದ 15 ವರ್ಷಗಳಿಂದ ತೋಟಗಳಿಗೆ ಔಷಧಿ ಸಿಂಪಡಣೆಯ ಕೆಲಸ ಮಾಡುತ್ತಿದ್ದಾರೆ.ಇವರ ಜೊತೆ ಕಳೆದ ಮಾಧವ ನಾಯ್ಕ್ ಕೂಡಾ ಸಾತ್  ನೀಡುತ್ತಿದ್ದರು.ಇದೀಗ 5 ವರ್ಷಗಳಿಂದ 8 ಜನರ ಯುವಕರ ತಂಡ ಕಟ್ಟಿ ಔಷಧಿ ಸಿಂಪಡಣೆಯ ಕೆಲಸ ಮಾಡುತ್ತಿದ್ದಾರೆ.ಈಗ ತಂಡದಲ್ಲಿ  ದೇವಪ್ಪ  ನಾಯ್ಕ್, ಗಂಗಾಧರ ನಾಯ್ಕ್,ರಾಜೇಶ್ ನಾಯ್ಕ್,ವಿಜಯ ನಾಯ್ಕ್,ಪದ್ಮನಾಭ ಪೂಜಾರಿ ಹಾಗೂ ಮಹೇಶ್ ಶೆಟ್ಟಿ ಇದ್ದಾರೆ. ಈಗಾಗಲೇ ಪೆರ್ನೆ, ಸರಪಾಡಿ, ನೆಲ್ಯಾಡಿ,ಮಂಜೇಶ್ವರ ಸೇರಿದಂತೆ 35 ರಿಂದ 40 ತೋಟಗಳಲ್ಲಿ  ಔಷಧಿ ಸಿಂಪಡಣೆ ಹಾಗೂ ಅಡಿಕೆ ಕಟಾವು ಮಾಡುವ ಹೊಣೆಯನ್ನು  ಹೊತ್ತಿದ್ದಾರೆ. ಶನಿವಾರ ಉಪ್ಪಿನಂಗಡಿ ಬಳಿಯ ಪೆರ್ನೆ ಬಿಳಿಯೂರು ಕಟ್ಟೆಯ ಧನ್ಯಕುಮಾರ್ ಅವರ ತೋಟದಲ್ಲಿ  ಔಷಧಿ ಸಿಂಪಡಿಸುವ ಕಾರ್ಯ  ನಡೆಯುತ್ತಿದ್ದರು.
ಅಡಿಕೆ ತೋಟಕ್ಕೆ ಔಷಧಿ ಸಿಂಪಡಣೆಯ ವೇಳೆ, ಮೋಟಾರು ಸಹಿತ 8 ಜನ ಮನೆಗೆ ಆಗಮಿಸುತ್ತಾರೆ, ಮನೆ ಮಂದಿ ಔಷಧಿ ತಯಾರಿಸಿ  ನೀಡಿದರೆ ಮುಗಿಯಿತು. ಇವರ ಜೊತೆ ಔಷಧಿ ತಯಾರಿಗೆ ಜನ ಬೇಕಾದರೆ ಕೂಡಾ ಇವರೇ ಕರೆದುಕೊಂಡು ಬರುತ್ತಾರೆ. 8 ಜನರಿಗೆ ಕನಿಷ್ಟ 3 ಜನ ಸಹಾಯಕರ ಅಗತ್ಯವಿದೆ ಎನ್ನುವ ಯಶೋಧರ , ಈ ಹೊಣೆಯನ್ನೂ ನಾವು ಹೊತ್ತುಕೊಳ್ಳುತ್ತೇವೆ ಎಂದು  ಹೇಳುತ್ತಾರೆ.ಇಷ್ಟೂ ಜನ ಒಂದು ದಿನದಲ್ಲಿ  6 ರಿಂದ 7 ಸಾವಿರ ಅಡಿಕೆ ಮರಗಳಿಗೆ ಔಷಧಿ ಸಿಂಪಡಿಸುತ್ತಾರೆ.ಮೋಟಾರು ಸಹಿತ ಮನೆಗೆ ಮನೆ ಆಗಮಿಸಿ ಔಷಧಿ ಸಿಂಪಡಣೆಯ ಕಾರ್ಯದಲ್ಲಿ  ನಿರತವಾಗುತ್ತದೆ.ಮನೆ ಮಂದಿ ಔಷಧಿ ತಯಾರಿಸಿ  ನೀಡಿದರೆ ಮುಗಿಯಿತು. ಅಡಿಕೆ ಕಟಾವು ವೇಳೆ ಕೂಡಾ ಜನವನ್ನೂ ವ್ಯವಸ್ಥೆ ಮಾಡಿ ಮನೆಗೆ ಬಂದು ಕೆಲಸ ಮಾಡಿ ತೆರಳುತ್ತಾರೆ.ಇಡೀ ವರ್ಷ ಈ ತಂಡ ಇದೇ ಕೆಲಸ ಮಾಡುತ್ತದೆ.ಮೋಟಾರಿಗೆ ಬಾಡಿಗೆ 2 ಸಾವಿರ ರೂಪಾಯಿ ಪಡೆಯುವ ಈ ತಂಡ ತಮ್ಮ ಕೆಲಸ ಕಾರ್ಯಗಳಿಗೆ ದಿನ ಲೆಕ್ಕದಲ್ಲಿ  ಸಂಬಳವನ್ನು  ಪಡೆಯುತ್ತಾರೆ.ಇವರು  ದಿನಕ್ಕೆ 1200 ರೂಪಾಯಿ ಸಂಬಳ ಪಡೆಯುತ್ತಾರೆ.



ಬದಲಾವಣೆ ಬೇಕು.  .
ಈಗ ಇಲ್ಲಿ  ರಚನೆಯಾದ ತಂಡ ಬಹುಶ: ಶಾಶ್ವತವಾಗಬಹುದು.ಏಕೆಂದರೆ ತಂಡದ ಸದಸ್ಯರು ಬಹುತೇಕ ಮಂದಿ ಸಂಬಂಧಿಕರು.ಒಂದೆರಡು ಮಂದಿ ಮಾತ್ರವೇ ಇತರರು. ಹೀಗಾಗಿ ತಂಡ ಒಡೆಯುವ ಸಾಧ್ಯತೆ ಕಡಿಮೆ.ಒಡೆದರೂ ಮತ್ತೊಂದು ಅಂತಹದ್ದೇ ತಂಡ ರಚನೆಯಾಗಬಹುದು.ಇದು ಕೂಡಾ ಕೃಷಿಕರಿಗೆ ಪ್ರಯೋಜನ. ಇದರ ಜೊತೆಗೇ ಸಹಕಾರಿ ಸಂಘಗಳು ಇಂತಹ ತಂಡ ರಚನೆ ಮಾಡುವ ಬಗ್ಗೆ ಯೋಚಿಸಿದರೆ ಹೆಚ್ಚು ಗಟ್ಟಿಯಾಗಬಹುದು. ಏಕೆಂದರೆ ಆಗ ಸಹಕಾರಿ ಸಂಘಕ್ಕೆ ಬದ್ದತೆ ಇರುತ್ತದೆ. ಕೃಷಿಕರಿಗೂ ಹಾಗೆಯೇ. ಇನ್ನು  ಸಂಬಳದ ಬಗ್ಗೆ ಕೃಷಿಕರು  ಹೆಚ್ಚು ತಲೆಕೆಡಿಸಿಕೊಳ್ಳಬೇಕಾಗಿಲ್ಲ, ಏಕೆಂದರೆ ಒಂದೇ ದಿನದಲ್ಲಿ  ತೋಟದ ಔಷಧಿ ಸಿಂಪಡಣೆ ಕೆಲಸ ಮುಗಿಯುತ್ತದೆ, ಎಷ್ಟೇ ಮಳೆ ಇದ್ದರೂ ದಿನದಲ್ಲಿ  ಒಂದೆರಡು ಗಂಟೆ ಮಳೆಗೆ ವಿರಾಮ ಇದ್ದೇ ಇರುತ್ತದೆ.ಆಗ ಬಹುಪಾಲು ಸಿಂಪಡಣೆಯೂ ಆಗುತ್ತದೆ.
ಹೊಸ ಪ್ರಕ್ರಿಯೆಗಳು ಆರಂಭವಾದಾಗ ಕೆಲವೊಂದು ಲೋಪಗಳೂ ಇರುತ್ತದೆ. ಆದರೆ ಕೃಷಿಕರು ಎಲ್ಲವೂ ನಾವು ಅಂದುಕೊಂಡತೇ ಈಗ ಆಗಬೇಕು ಎಂದರೂ ಆಗದು.ಹೀಗಾಗಿ ಬದಲಾವಣೆ ಬೇಕು, ಅದನ್ನು  ಒಪ್ಪಿಕೊಳ್ಳಬೇಕು, ತೀರಾ ನಷ್ಟವಾಗುವುದಾದರೆ ಮಾತ್ರವೇ ಯೋಚಿಸಬೇಕು. ಹೀಗಾದಾಗ ಕೃಷಿ ಉಳಿಯಲು, ಬೆಳೆಯಲು ಸಾಧ್ಯವಿದೆ.
.



ಕಾಮೆಂಟ್‌ಗಳಿಲ್ಲ: